Article Image

ಶಿಕ್ಷಕ ಕೌಶಲ್ಯ ವರ್ಧನಾ ತರಬೇತಿ ಕಾರ್ಯಗಾರ

Article Image

ಶಿಕ್ಷಕ ಕೌಶಲ್ಯ ವರ್ಧನಾ ತರಬೇತಿ ಕಾರ್ಯಗಾರ

ದಿಗಂಬರ ಜೈನ ವಿದ್ಯಾವರ್ಧಕ ಸಂಘ(ರಿ.)ಮೂಡಬಿದ್ರೆ ಇದರ ಆಶ್ರಿತ ಸಂಸ್ಥೆಗಳಾದ ಜೈನ ಪ್ರೌಢಶಾಲೆ, ಡಿ.ಜೆ ಆಂಗ್ಲ ಮಾಧ್ಯಮ ಶಾಲೆ ಮತ್ತು ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಒಂದು ದಿನದ ‘ಶಿಕ್ಷಕ ಕೌಶಲ್ಯ ವರ್ಧನಾ’ ತರಬೇತಿ ಕಾರ್ಯಕ್ರಮವನ್ನು (Teacher’s skill Enhancement training program) ಜೈನ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ಕೆ. ಹೇಮರಾಜ್ ರವರು ನೆರವೇರಿಸಿದರು. ತರಬೇತುದಾರರಾಗಿ ರಾಷ್ಟ್ರೀಯ ತರಬೇತುದಾರರಾದ ಬಾಸುಮ ಕೊಡಗು ಆಗಮಿಸಿದ್ದರು. ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆಯವರೆಗೆ ನಡೆದ ಈ ತರಬೇತಿ ಕಾರ್ಯಗಾರದಲ್ಲಿ ಶಿಕ್ಷಕರ ಅವಲೋಕನ, ವಿದ್ಯಾರ್ಥಿ-ಶಿಕ್ಷಕ ಸಂಬಂಧ, ಸಂವಹನ ಮಾಧ್ಯಮ, ಅಂತರ್ಜಾಲ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಪ್ರಭಾವ ಇತ್ಯಾದಿ ವಿಷಯಗಳನ್ನು ತರಬೇತುದಾರರು ಗುಂಪು ಚರ್ಚೆಗಳ ಮೂಲಕ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಶ್ಯಾಮ್ ಪ್ರಸಾದ್, ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ, ಡಿ.ಜೆ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಹಾಗೂ 3 ವಿದ್ಯಾಸಂಸ್ಥೆಗಳ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರಾದ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸುಧಾ ಕೆ. ತರಬೇತುದಾರರನ್ನು ಪರಿಚಯಿಸಿದರು.

ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ

Article Image

ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಕಾರ್ಕಳದ ಪರಮಪೂಜ್ಯ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾನುವಾರ ಅಷ್ಟಾಹ್ನಿಕ ಪೂಜೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಗುಣ ಎಸ್.ಡಿ. ಶೆಟ್ಟಿ ಉಜಿರೆ ಅವರ ಮಗಳು ಪ್ರಗತಿ ರಾಜಿತ್ ಶೆಟ್ಟಿ, ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು, ಕೊಲ್ಲಾಪುರ ಸಮೀಪ ಉದ್ಗಾವ್‌ನಲ್ಲಿ ಆಚಾರ್ಯ ಶ್ರೀ 108 ವಿಶುದ್ದ ಸಾಗರಮುನಿ ಮಹಾರಾಜರಿಂದ ನಂದೀಶ್ವರ ಮಂಟಪಕ್ಕೆ ಲಘು ಪಂಚ ಕಲ್ಯಾಣ ನಡೆಯಿತು. ಆಷಾಢ ಮಾಸದ ಅಷ್ಟಾಹ್ನಿಕ ಪರ್ವದ ಮೊದಲ ಅಷ್ಟಮಿಯ ದಿನದಂದು ಬೆಳಗ್ಗೆ 10.30ಕ್ಕೆ ಜಿನ ಮಂದಿರದಲ್ಲಿ ವಿಶೇಷ ಆರಾಧನೆ ಹಾಗೂ ವಿಶೇಷ ಪೂಜೆಗಳು ನೆರವೇರಿದ ನಂತರ ವಿರಾಜಮಾನಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದರು. ಉಜಿರೆ ಎಸ್.ಡಿ. ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಧರ್ಮಸ್ಥಳದಲ್ಲಿ 53ನೆ ವರ್ಷದ ಪುರಾಣ ಕಾವ್ಯ ವಾಚನ - ಪ್ರವಚನ ಉದ್ಘಾಟನೆ

Article Image

ಧರ್ಮಸ್ಥಳದಲ್ಲಿ 53ನೆ ವರ್ಷದ ಪುರಾಣ ಕಾವ್ಯ ವಾಚನ - ಪ್ರವಚನ ಉದ್ಘಾಟನೆ

ಉಜಿರೆ: ಪುರಾಣಕ್ಕೆ ಹಲವಾರು ಅರ್ಥಗಳಿವೆ. ಭಾರತ ಮತ್ತು ಚೀನಾ ದೇಶದಲ್ಲಿ ಅತೀ ಹೆಚ್ಚು ಪುರಾಣಗಳಿದ್ದು ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ಪುರಾಣ ವಾಚನ - ಪ್ರವಚನದಿಂದ ಪ್ರತಿ ಕಲೆಯೂ, ಕಲಾವಿದರೂ ಬೆಳೆಯಬೇಕು ಎಂದು ಹಿರಿಯ ವಿದ್ವಾಂಸ ಪ್ರೊ. ಎಮ್. ಪ್ರಭಾಕರ ಜೋಶಿ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಜು. 16 ರಿಂದ ಆಗೋಸ್ಟ್ 17 ರ ವರೆಗೆ ಪ್ರತಿ ದಿನ ಸಂಜೆ ಗಂಟೆ 6.30 ರಿಂದ 8.00 ರ ವರೆಗೆ ನಡೆಯಲಿರುವ 53ನೆ ವರ್ಷದ “ಜೈಮಿನಿ ಭಾರತ” ಮತ್ತು “ತುರಂಗ ಭಾರತ” ಪುರಾಣ ಕಾವ್ಯ ವಾಚನ - ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವರ ಕಲ್ಪನೆಯನ್ನು ಜನಮನಕ್ಕೆ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ವಿಷ್ಣುಪುರಾಣ, ಭಾಗವತ, ರಾಮಾಯಣ, ಮಹಾಭಾರತ ಮೊದಲಾದ ಅನೇಕ ಪುರಾಣಗಳಿವೆ. ರಾಮಾಯಣದಲ್ಲಿಯೂ ಬೇರೆ ಬೇರೆ ಭಾಷೆಗಳಲ್ಲಿ ಹಲವು ರೀತಿಯ ರಾಮಾಯಣಗಳು ರಚನೆಯಾಗಿವೆ. ನಮ್ಮ ಸನಾತನ ಧಾರ್ಮಿಕ ಪರಂಪರೆಯನ್ನು ವಿಸ್ತರಿಸಿ ಸೃಜನಶೀಲತೆಯೊಂದಿಗೆ ಜನರಿಗೆ ತಲುಪಿಸುವ ಕಾಯಕವನ್ನು ಪುರಾಣಗಳು ಮಾಡುತ್ತವೆ. ಪುರಾಣಗಳಲ್ಲಿ ಜ್ಞಾನ, ವಿಜ್ಞಾನ, ಸಾಹಿತ್ಯ, ಕಲೆ, ಸಂಗೀತ, ಮಾನವೀಯ ಮೌಲ್ಯಗಳು – ಎಲ್ಲವೂ ಅಡಕವಾಗಿವೆ ಎಂದು ಪ್ರೊ. ಎಮ್. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪುರಾಣ ವಾಚನ - ಪ್ರವಚನದಿಂದ ಸಮಯದ ಸದುಪಯೋಗದೊಂದಿಗೆ ವಿಶಿಷ್ಟ ಮಾಹಿತಿ, ಮಾರ್ಗದರ್ಶನ ದೊರಕುತ್ತದೆ. ನಮ್ಮ ಜ್ಞಾನ ಕ್ಷಿತಿಜ ವಿಸ್ತರಣೆಯಾಗುತ್ತದೆ ಎಂದು ಹೇಳಿದರು. ಪ್ರಸ್ತುತ ಜನರಲ್ಲಿ ಮಾತನಾಡುವ ಚಟ ಹೆಚ್ಚಾಗಿದೆ. ಕೇಳುವ ವ್ಯವಧಾನ ಯಾರಲ್ಲೂ ಇರುವುದಿಲ್ಲ. ಎಲ್ಲರೂ ಉತ್ತಮ ಶ್ರೋತೃಗಳಾಗಿ ಜೀವನಶೈಲಿ ಸುಧಾರಣೆ ಮಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಕೊನೆಯಲ್ಲಿ ಧನ್ಯವಾದವಿತ್ತರು.

ಉಜಿರೆ: ಸ್ನೇಹಕೂಟ

Article Image

ಉಜಿರೆ: ಸ್ನೇಹಕೂಟ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ವಿದ್ಯಾರ್ಥಿ ಕ್ಷೇಮಪಾಲನ ಮುಖ್ಯ ಅಧಿಕಾರಿಯಾಗಿ ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಿ. ಸೋಮಶೇಖರ ಶೆಟ್ಟಿಯವರು ಏರ್ಪಡಿಸಿದ ಸ್ನೇಹಕೂಟದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಸತೀಶ್ಚಂದ್ರ ಎಸ್. ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಬಿ. ಸೋಮಶೇಖರ ಶೆಟ್ಟಿಯವರು ದಣಿವರಿಯದ ದುಡಿಮೆಗಾರ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುವ ಪರಿಯಿಂದ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದವರು. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ರಚಿಸಿದ ಪ್ರಗತಿ ಪರಿಶೀಲನ ತಂಡದ ಸಂಚಾಲಕರಾಗಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದಿಂದ ಶಾಲಾ ಫಲಿತಾಂಶದಲ್ಲಿ ವಿಶೇಷ ಸಾಧನೆಗಳ ಮೂಲಕ ಎಸ್.ಡಿ.ಎಂ. ನ ಎಲ್ಲಾ ಪ್ರೌಢ ಶಾಲೆಗಳಲ್ಲಿಯೂ ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸುವಲ್ಲಿ ಇವರ ಪ್ರಯತ್ನ ಗಮನಾರ್ಹವಾದುದು. ಶಿಕ್ಷಣ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿದ್ದು, ಪ್ರಾರಂಭದ ವರ್ಷದಲ್ಲಿ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಣೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಸಂಸ್ಥೆಯ ಸಹೋದ್ಯೋಗಿಗಳ ಜೊತೆ ಆತ್ಮೀಯರಾಗಿದ್ದು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ನಿಷ್ಠುರವಾದಿ. ಎಸ್.ಡಿ.ಎಂ. ಕಲಾ ಕೇಂದ್ರದಲ್ಲಿ ಕಲಾ ವೈಭವ ತಂಡ ಕಟ್ಟುವಲ್ಲಿ ವಿಶೇಷ ಶ್ರಮವಹಿಸಿದ್ದರು ಎಂದು ತಿಳಿಸಿದರು. ಕಾರ್ಯಕ್ರಮ ಸಂಘಟಕರೂ, ಉತ್ತಮ ತರಬೇತುದಾರರೂ, ವಾಗ್ಮಿಗಳೂ ಆಗಿರುವ ಬಿ. ಸೋಮಶೇಖರ ಶೆಟ್ಟಿ ಹಾಗೂ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಜಯಭಾರತಿ ಇವರನ್ನು ಗೌರವಿಸಿ ನಿವೃತ್ತ ಜೀವಕ್ಕೆ ಶುಭ ಹಾರೈಸಿದರು. ಬಿ. ಸೋಮಶೇಖರ ಶೆಟ್ಟಿಯವರು ಮಾತನಾಡಿ, ಶ್ರೀ ಕ್ಷೇತ್ರ ದರ್ಮಸ್ಥಳದ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರು ಶಿಕ್ಷಣದ ಜೊತೆಗೆ ಉದ್ಯೋಗ ನೀಡಿ ಬದುಕಿಗೆ ಆಶ್ರಯ ನೀಡಿದವರು ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸುವ ವಿಶೇಷ ಅವಕಾಶದ ಜೊತೆಗೆ, ಶ್ರೀ ಕ್ಷೇತ್ರದ ಅನೇಕ ಸಮಾರಂಭಗಳಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಒದಗಿಸಿದ್ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ, ಆಧುನಿಕತೆ, ಮೌಲ್ಯ ಶಿಕ್ಷಣ, ಭೌತಿಕ ಸೌಲಭ್ಯಗಳ ಮೂಲಕ, ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡುವಲ್ಲಿ ನಿರಂತರ ಮಾರ್ಗದರ್ಶನ ಮಾಡಿದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ ಡಿ. ಹರ್ಷೇಂದ್ರ ಕುಮಾರ್‌ರವರ ಆಶಯದಂತೆ ಕರ್ತವ್ಯ ನಿರ್ವಹಿಸಿದ ಬಗ್ಗೆ ತೃಪ್ತಿಯ ಮಾತುಗಳನ್ನಾಡಿದರು. ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರೀಯ ಹರ್ಷೇಂದ್ರ ಕುಮಾರ್‌ರವರ ಹಾಗೂ ಕೀರ್ತಿ ಶೇಷ ಡಾ| ಬಿ. ಯಶೋವರ್ಮರ ಮಾರ್ಗದರ್ಶನ, ಸಹಕಾರವನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಕಾರ್ಯದರ್ಶಿಯಾಗಿ, ನಿರಂತರ ಮಾರ್ಗದರ್ಶನ ಮಾಡಿದ ಡಾ| ಸತೀಶ್ಚಂದ್ರ ಎಸ್. ಇವರ ನೇತೃತ್ವದಲ್ಲಿ ಯಶಸ್ವೀ ಕರ್ತವ್ಯ ನಿರ್ವಹಿಸಿದ ಸಂತೋಷವನ್ನು ವ್ಯಕ್ತಪಡಿಸಿ ವಂದಿಸಿದರು. ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ CEO ಪೂರಣ್ ವರ್ಮ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ಮುಖ್ಯ ಶಿಕ್ಷಕರೂ, ಶಾರೀರಿಕ ನಿರ್ದೇಶಕರು, ಬಂಧು ಬಳಗ, ಸ್ನೇಹಿತರು ಸ್ನೇಹಕೂಟದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಪತ್ನಿ ಜಯಭಾರತಿ, ಪುತ್ರ ಬಿ. ಮಿಥುನ್ ಕುಮಾರ್, ಅಪೂರ್ವ ಮಿಥುನ್ ಕುಮಾರ್ ಕಾರ್ಯಕ್ರಮ ಆಯೋಜಿಸಿದ್ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪುನೀತ್ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯ ಕುಮಾರ್ ಎಂ. ಇವರು ವಂದಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನವೀಕೃತ ಸಭಾಂಗಣ ಲೋಕಾರ್ಪಣೆ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನವೀಕೃತ ಸಭಾಂಗಣ ಲೋಕಾರ್ಪಣೆ

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಸೇರಿದಂತೆ ಮಹತ್ವದ ಬೃಹತ್ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿಕೊಡುವ ಬಹುಉದ್ದೇಶಿತ ಸುಸಜ್ಜಿತ ನವೀಕೃತ ಇಂದ್ರಪಸ್ಥ ಒಳಾಂಗಣ ಸಭಾಂಗಣವನ್ನು ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಶೈಕ್ಷಣಿಕ ಕಲಿಕೆಯೊಂದಿಗೆ ಸಂಸ್ಕೃತಿನಿಷ್ಠ ವಿವೇಕವನ್ನು ಯುವಪೀಳಿಗೆಗೆ ದಾಟಿಸುವುದಕ್ಕೆ ಆದ್ಯತೆ ನೀಡುವ ಎಸ್.ಡಿ.ಎಂ ಕಾಲೇಜಿನ ಉದಾತ್ತ ಆಶಯಕ್ಕೆ ಅನುಗುಣವಾಗಿ ಇಂದ್ರಪ್ರಸ್ಥ ಸಭಾಂಗಣ ರೂಪುಗೊಂಡಿದೆ ಎಂದರು. ಶೈಕ್ಷಣಿಕ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಬಹುಮುಖೀ ವ್ಯಕ್ತಿತ್ವದೊಂದಿಗೆ ಬೆಳಗಬೇಕೆಂಬುದು ಸಂಸ್ಥೆಯ ಆಶಯವಾಗಿದ್ದು, ಅದಕ್ಕೆ ಪೂರಕವಾಗಿ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳೊಂದಿಗಿನ ಇಂದ್ರಪ್ರಸ್ಥ ಸಭಾಂಗಣ ವೇದಿಕೆ ಒದಗಿಸಿಕೊಡುತ್ತದೆ ಎಂದು ಹೇಳಿದರು. ಕರಾವಳಿ ಭಾಗದಲ್ಲಿ ನಾಲ್ಕು ತಿಂಗಳ ಕಾಲವೂ ನಿರಂತರ ಮಳೆ ಇರುತ್ತದೆ. ಇದರ ಮಧ್ಯೆಯೂ ನಾಟಕ, ನೃತ್ಯ, ಮನರಂಜನೆ ಹಾಗೂ ಕ್ರೀಡಾ ಚಟುವಟಿಕೆಗಳು ಮಳೆಗಾಲದಲ್ಲಿಯೂ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶ ಇಂದ್ರಪ್ರಸ್ಥ ಸಭಾಂಗಣದ ನವೀಕರಣದ ಹಿಂದಿದೆ. ಕಾಲಕ್ಕನುಗುಣವಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಇಲ್ಲಿ ಅಳವಡಿಕೆಯಾಗಿರುವುದು ಸಂತಸದ ವಿಚಾರ ಎಂದರು. ಇಂದ್ರಪ್ರಸ್ತ ಸಭಾಂಗಣದ ನವೀಕರಣದ ಸಂಪೂರ್ಣ ನಿರ್ವಹಣಾ ಜವಾಬ್ದಾರಿ ಹೊಂದಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರು ಮಾತನಾಡಿ ಸಭಾಂಗಣದ ವೈಶಿಷ್ಟ್ಯತೆಯ ಸಂಪೂರ್ಣ ವಿವರ ನೀಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಸಭಾಂಗಣಕ್ಕೆ ವಿಶೇಷ ಮಹತ್ವವಿದೆ ಎಂದರು. 1991ರಲ್ಲಿ ಕಾಲೇಜಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಭಾಂಗಣದ ಪರಿಕಲ್ಪನೆ ಹುಟ್ಟಿಕೊಂಡಿತು. 1994ರಲ್ಲಿ ಸಭಾಂಗಣ ಉದ್ಘಾಟನೆಗೊಂಡಿತ್ತು. ಪ್ರಸ್ತುತ ಕಾಲಘಟ್ಟದ ಅವಶ್ಯಕತೆಗೆ ಅನುಗುಣವಾಗಿ ಸಭಾಂಗಣವನ್ನು ನವೀಕರಿಸಲಾಗಿದೆ. ಕಾರ್ಯಕ್ರಮಗಳು ಆಯೋಜಿತವಾದಾಗ ಕಾಂಕ್ರೀಟ್ ಗೋಡೆ ಇದ್ದಕಾರಣದ ಪ್ರತಿಧ್ವನಿಯ ಸಮಸ್ಯೆ ಇತ್ತು. ಇದರೊಂದಿಗೆ ಇತರೆ ತಾಂತ್ರಿಕ ನ್ಯೂನತೆಗಳು ಮತ್ತು ಸವಾಲುಗಳೂ ಇದ್ದವು. ಈಗ ಪುನರ್ನಿರ್ಮಾಣದ ಹಂತದಲ್ಲಿ ಇವೆಲ್ಲಾ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಹೊಸ ಆಯಾಮ ನೀಡಲಾಗಿದೆ. ಪ್ರೇಕ್ಷಕರ ಸಾಲುಗಳನ್ನೂ ಸುವ್ಯವಸ್ಥಿತಗೊಳಿಸಲಾಗಿದೆ. ವೇದಿಕೆಯು ಹಿಂದಿಗಿಂತಲೂ ಈಗ ಇನ್ನಷ್ಟು ವಿಸ್ತಾರಗೊಂಡಿದೆ. ಗ್ರೀನ್ ರೂಮ್‌ನಲ್ಲೂ ಕೂಡಾ ಅತ್ಯಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ತುಂಬಾ ಅತ್ಯಾಕರ್ಷಕವಾಗಿ ರೂಪುಗೊಂಡಿರುವ ಈ ಸಭಾಂಗಣವು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಸದ್ಬಳಕೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಪ್ರಿಯಾ ಹರ್ಷೇಂದ್ರಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ.ಕುಮಾರ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐಟಿ ವಿಭಾಗದ ಸಿಇಓ ಪೂರಣ್ ವರ್ಮಾ, ಸೋನಿಯಾ ವರ್ಮಾ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ಟ್ರಸ್ಟ್ ಸದಸ್ಯರು ಹಾಗೂ ಉದ್ಯೋಗಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಸುಶ್ರಾವ್ಯ ಪ್ರಾರ್ಥನೆ ಹಾಗೂ ಗೀತೆಗಳಿಂದ ಮನಸೆಳೆದರು.

ಬೀಜ ಬಿತ್ತನೆ ಹಾಗೂ ಗಿಡ ನೆಡುವ ಕಾರ್ಯಕ್ರಮ

Article Image

ಬೀಜ ಬಿತ್ತನೆ ಹಾಗೂ ಗಿಡ ನೆಡುವ ಕಾರ್ಯಕ್ರಮ

ದಕ್ಷಿಣಕನ್ನಡ ಜಿಲ್ಲಾ ಬಸದಿ ಸ್ವಚ್ಛತಾ ತಂಡ ಬಸದಿಯ ಸ್ವಚ್ಛತೆಯ ಜೊತೆಗೆ ಸಮಾಜಮುಖಿ ಕೆಲಸಕಾರ್ಯಗಳತ್ತ ಹೆಜ್ಜೆ ಇಟ್ಟಿತ್ತು . ಇದೀಗ ಪರಿಸರ ಸಂರಕ್ಷಣೆಯ ಕೆಲಸದತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ, ಮಂಗಳೂರು ವಿಭಾಗ ಮತ್ತು ಬಂಟ್ವಾಳ ವಲಯದ ಸಹಯೋಗದಲ್ಲಿ ಬಸದಿ ಸ್ವಚ್ಛತಾ ತಂಡವು ಕಾರಿಂಜದ ಕುಂಟರ ಪಲ್ಕೆ ಕೊಡ್ಯಾ ಮಲೆ ಎಂಬಲ್ಲಿ ವನಮಹೋತ್ಸವದ ಅಂಗವಾಗಿ ಪಕ್ಷಿ ಸಂಕುಲದ ರಕ್ಷಣೆಗಾಗಿ ಬೀಜಬಿತ್ತನೆ ಹಾಗೂ ಹಸಿರಿಗಾಗಿ ಮಾವು ಹಲಸು ಪೇರಳೆ ಪುನರ್ಪುಳಿ ಹುಣಸೆ ಹುಳಿ, ಕೊಕ್ಕೋ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದರು. ಊರ ಪರಿಸರ ಪ್ರೇಮಿಗಳು ಕೈ ಜೋಡಿಸಿದರು. ಇದೀಗ ಬಸದಿ ಸ್ವಚ್ಛತಾ ತಂಡದವರ ಮರ ಗಿಡಗಳನ್ನು ಬೆಳೆಸಿ ಪ್ರಾಣಿ ಪಕ್ಷಿ ಸಂಕುಲ ಉಳಿಸಿ, ಪ್ರಕೃತಿಯನ್ನು ಪ್ರೀತಿಸಿ ಎಂಬ ಧ್ಯೇಯದ ಪ್ರಾಮಾಣಿಕ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಮೂಡಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

Article Image

ಮೂಡಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

ಕೊಡುಗೈ ದಾನಿಗಳು ಶಾಲಾ ಹಿತೈಶಿಗಳು ಹಾಗೂ ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಎಂ. ವಿ. ಶೆಟ್ಟಿಯವರು ಜುಲೈ 8ರಂದು ಮೂಡಬಿದಿರೆಯ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಅರ್ಹ ಬಡ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಜೈನ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ. ಇವರು ಉಪಸ್ಥಿತರಿದ್ದರು.

ಎಕ್ಸಲೆಂಟ್: ವನಮಹೋತ್ಸವ ಆಚರಣೆ

Article Image

ಎಕ್ಸಲೆಂಟ್: ವನಮಹೋತ್ಸವ ಆಚರಣೆ

ಕಲ್ಲಬೆಟ್ಟು ವ್ಯಾಪ್ತಿಯ ಗಂಟಾಲ್‌ಕಟ್ಟೆ ಹಾಗೂ ಮಹಾವೀರ ಕಾಲೇಜು ಪರಿಸರದ ವ್ಯಾಪ್ತಿಯ ಜನತೆಗೆ ಪರಿಸರದ ಬಗ್ಗೆ, ಗಿಡ ಮರ, ಸಸಿಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಲು ಗಿಡ ವಿತರಣಾ ಕಾರ್ಯಕ್ರಮವನ್ನು ಎಕ್ಸಲೆಂಟ್ ಸಂಸ್ಥೆಯು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಲೆಕ್ಕಪರಿಶೋಧಕ ಮೊಹಮ್ಮದ್ ಯಾಸಿರ್ ಉಪಸ್ಥಿತರಿದ್ದು, ಪರಿಸರದ ಜಾಗೃತಿಯ ಕನಸನ್ನು ಎಕ್ಸಲೆಂಟ್ ಸಂಸ್ಥೆಯು ಹೊಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎನ್ನುವುದನ್ನು ತಿಳಿಸಿದರು. ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್‌ರವರು ಮಾತನಾಡಿ ಪರಿಸರವನ್ನು ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಲ್ಲಬೆಟ್ಟು ವ್ಯಾಪ್ತಿಯಿಂದ ವೇಣೂರು ಪರಿಸರದ ವ್ಯಾಪ್ತಿಯವರೆಗೂ ಒಂದು ಸಾವಿರದಷ್ಟು ಹಸಿರು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಈ ಸುಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್‌ನ ಮ್ಯಾನೇಜರ್ ಆಗಿರುವ ರಕ್ಷಿತ್ ಹಾಗೂ ಕರ್ನಾಟಕ ಬ್ಯಾಂಕ್‌ನ ಸಿಬ್ಬಂದಿವರ್ಗದವರು, ರೊಟೇರಿಯನ್ ಆಗಿರುವ ಉದಯ್ ಕುಮಾರ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಶೈಕ್ಷಣಿಕ ಸಂಯೋಜಕರಾದ ಶ್ರೀಪ್ರಸಾದ್‌ರವರು ನೆರವೇರಿಸಿ ವಂದಿಸಿದರು.

ಬೆಳ್ತಂಗಡಿ : ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

Article Image

ಬೆಳ್ತಂಗಡಿ : ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ರೋಟರಿ ಕ್ಲಬ್‌ನ ಸದಸ್ಯರೆಲ್ಲ ಹೃದಯ ಶ್ರೀಮಂತಿಕೆಯನ್ನು ಹೊಂದಿದವರಾಗಿದ್ದು, ನಿಸ್ವಾರ್ಥ ಸೇವೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿ ಬದುಕಿನಲ್ಲಿ ಪರಿವರ್ತನೆ ಮಾಡುವುದೇ ರೋಟರಿ ಕ್ಲಬ್‌ನ ಉದ್ದೇಶವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಉಜಿರೆಯ ಪೂರನ್‌ವರ್ಮ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮಾತನಾಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷನಾಗಿ ತಾನು ಆಯ್ಕೆಯಾಗಿರುವುದು ದೇವರು ಸಮಾಜಸೇವೆ ಮಾಡಲು ಕೊಟ್ಟ ವಿಶೇಷ ಅವಕಾಶ ಎಂದು ಭಾವಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಶಿಸ್ತಿನ ಚೌಕಟ್ಟಿನೊಳಗೆ ಎಲ್ಲಾ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ತಾಯಿ ಸೋನಿಯಾವರ್ಮ ಮತ್ತು ತಮ್ಮ ಕೆಯೂರ್‌ವರ್ಮ ಅವರ ಬಲವೂ, ಬೆಂಬಲವೂ ಇದೆ ಎಂದರು. ರೋಟರಿ ಕ್ಲಬ್‌ನಲ್ಲಿ ಎಲ್ಲರಿಗೂ ಸೇವೆ ಮೂಲಕ ಕಲಿಯುವ ಅವಕಾಶಗಳಿವೆ. ಎಲ್ಲಾ ಸದಸ್ಯರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ತಮ್ಮ ಕುಟುಂಬದ ಕಾರ್ಯಕ್ರಮದಂತೆ ಎಲ್ಲಾ ಸೇವಾಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಹೊಸ ಸೇವಾ ಕಾರ್ಯಗಳು: ಸೌರಶಕ್ತಿ ಬಳಕೆ, ಕನ್ನಡ ಶಾಲೆಗಳಿಗೆ ಕಾಯಕಲ್ಪ, ರಸ್ತೆ ಸುರಕ್ಷತೆ, ಹಿರಿಯ ನಾರಿಕರ ಆರೋಗ್ಯ ರಕ್ಷಣೆ, ಹೃದಯರೋಗಿಗಳ ಚಿಕಿತ್ಸೆಗೆ ನೆರವು ಮೊದಲಾದ ಸೇವಾಕಾರ್ಯಗಳನ್ನು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಡುವುದಾಗಿ ಪ್ರಕಟಿಸಿದರು. ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಮಾತನಾಡಿ, ನಮ್ಮಲ್ಲಿ ಮೊದಲು ಪರಿವರ್ತನೆ ಮಾಡಿಕೊಂಡು ನಂತರ ಸಮಾಜದಲ್ಲಿಯೂ ಧನಾತ್ಮಕ ಸುಧಾರಣೆ ಮಾಡಬೇಕು. ಬೆಳ್ತಂಗಡಿ ರೋಟರಿ ಕ್ಲಬ್‌ನ ಸೇವೆ-ಸಾಧನೆಗೆ ಅಭಿನಂದಿಸಿ ರೋಟರಿ ಜಾಗತಿಕ ಅನುದಾನದ ಮೂಲಕ ಇನ್ನೂ ಹೆಚ್ಚಿನ ಸೇವೆ ಮಾಡಬೇಕೆಂದು ಸಲಹೆ ನೀಡಿದರು. ರೋಟರಿ ಜಿಲ್ಲಾ ಉಪರಾಜ್ಯಪಾಲ ಮೊಹಮ್ಮದ್ ವೊಳವೂರು “ರೋಟರ್” ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವಿದ್ಯಾಕುಮಾರ್ ಕಾಂಚೋಡು ವರದಿ ಸಾದರ ಪಡಿಸಿದರು. ನೂತನ ಸದಸ್ಯರು: ಸೋನಿಯಾವರ್ಮ, ಪ್ರವೀಣ್ ಗೋರೆ, ಸುವೀರ್ ಜೈನ್, ಪ್ರಶಾಂತ್ ಜೈನ್ ಮತ್ತು ಆದರ್ಶ ಕಾರಂತ ಅವರನ್ನು ರೋಟರಿ ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಸಂದೇಶ್ ರಾವ್ ಧನ್ಯವಾದವಿತ್ತರು. ಡಾ. ಎ. ಜಯಕುಮಾರ ಶೆಟ್ಟಿ ಮತ್ತು ವಕೀಲ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಶಟಲ್ ಬ್ಯಾಡ್ಮಿಂಟನ್: ವಿನೀತ್ ಪ್ರಥಮ ಸ್ಥಾನ

Article Image

ಶಟಲ್ ಬ್ಯಾಡ್ಮಿಂಟನ್: ವಿನೀತ್ ಪ್ರಥಮ ಸ್ಥಾನ

ಉಜಿರೆ: ನೆಲ್ಯಾಡಿಯಲ್ಲಿ ಪ್ರೀಮಿಯರ್ ಲೀಗ್ 2024 ಆಶ್ರಯದಲ್ಲಿ ಇತ್ತೀಚೆಗೆ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಎಸ್.ಎಂ. ಸ್ಮಾಟರ್ಸ್ ತಂಡವನ್ನು ಪ್ರತಿನಿಧಿಸಿದ ಧರ್ಮಸ್ಥಳದ ವಿನೀತ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ತರಗತಿಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವಿ. ಶೆಟ್ಟಿ ಮತ್ತು ಅರುಣಾ ದಂಪತಿಗಳ ಪುತ್ರರಾಗಿರುತ್ತಾರೆ. ಇವರಿಗೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ತರಬೇತಿ ನೀಡಿರುತ್ತಾರೆ.

ಹುಬ್ಬಳ್ಳಿ: ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಅಸ್ತಿತ್ವಕ್ಕೆ

Article Image

ಹುಬ್ಬಳ್ಳಿ: ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಅಸ್ತಿತ್ವಕ್ಕೆ

ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಿಯ ಸಮಾನ ಮನಸ್ಕರು ಕೂಡಿ ಸಂಘಟಿಸಿರುವ "ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ (ರಿ.) ಜೂನ್ 26 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿತ ನಾನಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶ ಹೊಂದಿರುವ ಟ್ರಸ್ಟಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಗೌರವ ಅಧ್ಯಕ್ಷರಾಗಿದ್ದು ಇತರ ಪದಾಧಿಕಾರಿಗಳು ಈ ಮುಂದಿನವರಾಗಿದ್ದಾರೆ. ಡಾ. ಜಿನದತ್ತ ಹಡಗಲಿ(ಅಧ್ಯಕ್ಷರು), ಡಾ. ಭರಮಪ್ಪ ಭಾವಿ(ಉಪಾಧ್ಯಕ್ಷರು), ಶಾಂತಿನಾಥ ಕೆ. ಹೋತಪೇಟಿ(ಪ್ರಧಾನ ಕಾರ್ಯದರ್ಶಿ), ಶಾಂತರಾಜ ಮಲ್ಲಸಮುದ್ರ(ಕಾರ್ಯದರ್ಶಿ), ಮಂಜುನಾಥ ಚವಡಣ್ಣವರ(ಖಜಾಂಚಿ), ಧರಣೇಂದ್ರ ಜವಳಿ, ರಾಯಪ್ಪ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಶ್ರೀಧರ ಬಸ್ತಿ, ಪ್ರತಿಭಾ ಕಾಗೆ, ತನುಜಾ ರೋಖಡೆ(ಕಾರ್ಯಕಾರಿಣಿ ಸದಸ್ಯರು). ಹೆಚ್ಚಿನ ಮಾಹಿತಿಗೆ: 9945719235, 9980897979, 8762235112ಗಳಿಗೆ ಸಂಪರ್ಕಿಸಬಹುದು. ಶಾಂತಿನಾಥ ಕೆ. ಹೋತಪೇಟಿ (ಪ್ರಧಾನ ಕಾರ್ಯದರ್ಶಿ): 9980897979

ಮಂಗಳೂರು ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮಂಗಳೂರು ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಮಿತವಾದ ವ್ಯಾಯಾಮ, ಮಿತವಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡಾಗ ಉತ್ತಮ ಆರೋಗ್ಯ ಪಡೆಯಬಹುದು ಎಂದು ಕೆ. ಎಂ.ಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ದಿತೇಶ್ ಎಂ. ಅವರು ಹೇಳಿದರು. ಇವರು ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಶಾಲೆಯ ವರ್ಧಮಾನ ಸಿದ್ದಾರ್ಥ ಸಭಾಂಗಣದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ಇದರ ಮಾಸಿಕ ಸಭೆಯ ಸಂದರ್ಭದಲ್ಲಿ ಹೃದಯದ ಆರೋಗ್ಯ ಕಾಪಾಡುವುದು ಹೇಗೆ? ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಎನ್. ಜಗತ್ಪಾಲ್, ಸುಮತಿ ದಂಪತಿಯನ್ನು ಸಮ್ಮಾನಿಸಲಾಯಿತು. ದ.ಕ. ಜೈನ್ ಮಿಲನ್ ನಿರ್ದೇಶಕ ಸುಕುಮಾರ ಬಳ್ಳಾಲ್, ಸುರೇಶ್ ಬಳ್ಳಾಲ್, ಪುಷ್ಪರಾಜ್ ಜೈನ್, ಕಾರ್ಯದರ್ಶಿ ವೈಶಾಲಿ ಪಡಿವಾಲ್, ಪ್ರಮುಖರಾದ ನಿರ್ಮಲ್ ಕುಮಾರ್, ಮಹಾವೀರ ಪ್ರಸಾದ್, ಸನತ್ ಕುಮಾರ್ ಜೈನ್, ಸಂತೋಷ್ ಕುಮಾರ್ ಜೈನ್ ಉಪಸ್ಥಿತರಿದ್ದರು ಮಂಗಳೂರು ಭಾರತೀಯ ಜೈನ್ ಮಿಲನ್ ಅಧ್ಯಕ್ಷರಾದ ರತ್ನಾಕರ್ ಜೈನ್ ಸ್ವಾಗತಿಸಿದರು. ರಾಜೇಶ್ ಎಂ. ಸಮ್ಮಾನಿತರನ್ನು ಪರಿಚಯಿಸಿದರು. ಪ್ರಿಯಾ ಸುದೇಶ್ ನಿರೂಪಿಸಿ, ವಂದಿಸಿದರು.

ಬೆಂಗಳೂರು: ಪೂಜಾ ಕಾರ್ಯಕ್ರಮ

Article Image

ಬೆಂಗಳೂರು: ಪೂಜಾ ಕಾರ್ಯಕ್ರಮ

ನೆಲಮಂಗಲ ತಾಲೂಕಿನ, ಸೋಂಪುರ ಹೋಬಳಿ ಎಲೇಕ್ಯಾತನಹಳ್ಳಿಯ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಯ ಬಿಂಬಸ್ಥಾಪನೆ ಮಾನ ಸ್ಥಂಬೋಪರಿ ಚತುರ್ಮುಖ ಜಿನಬಿಂಬ ಸ್ಥಾಪನೆ ಮತ್ತು ನಾಗದೇವರ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮವು ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಜೈನ ಆಗಮೋಕ್ತ ವಿದಿವಿಧಾನಗಳೊಂದಿಗೆ ಜೂ. 29ರಿಂದ ಜೂ. 30ರವರೆಗೆ ಜರುಗಲಿದೆ.

ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ

Article Image

ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ

ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದ್ರೆ ಇದರ 2024-25 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಅಮೃತಮಹೋತ್ಸವ ಕಟ್ಟಡದಲ್ಲಿ ನೆರವೇರಿತು. ಈ ಸಭೆಯ ಅಧ್ಯಕ್ಷ ಸ್ಥಾನವನ್ನು ಗೌರವಾನ್ವಿತ ಶಾಲಾ ಸಂಚಾಲಕರಾದ ಕೆ.ಹೇಮರಾಜ್ ಇವರು ವಹಿಸಿದ್ದರು. ಇದರ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ವೀರ ಮಾರುತಿ ಎಂಟರ್ ಪ್ರೈಸಸ್ ಕಲ್ಸಂಕ ಇದರ ಮಾಲಕರಾದ ವೆಂಕಟೇಶ್ ಪ್ರಭು ನೆರವೇರಿಸಿದರು. ವಿವಿಧ ಸಂಘಗಳ ಕಡತಗಳನ್ನು ಅನಾವರಣಗೊಳಿಸಿ ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪದಕ ಧಾರಣೆಯನ್ನು ಮಾಡಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಈ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿ ತಮ್ಮ ಬಾಲ್ಯ ಜೀವನವನ್ನು ಮೆಲುಕು ಹಾಕುತ್ತಾ ಶಾಲೆಗೆ ವಿದ್ಯಾರ್ಥಿ ಸಂಘದ ಅವಶ್ಯಕತೆಗಳನ್ನು ತಿಳಿಸುತ್ತಾ ಮಕ್ಕಳಿಗೆ ತಮ್ಮ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ತಿಳಿಸಿದರು. ಶಿಸ್ತು ಬದ್ಧ ಹಾಗೂ ಸಂಸ್ಕಾರಯುತ ಶಿಕ್ಷಣವು ಮಕ್ಕಳನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಕಾರಣವಾಗುತ್ತದೆ ಎಂದು ಹೇಳಿ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮಾಡಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನಮ್ಮ ಶಾಲೆಯಲ್ಲಿ ಆಧುನಿಕ ತಂತಜ್ಞಾನವನ್ನು ಬಳಸಿ ನಡೆಸಿದ ಚುಣಾವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಜ್ಞಾ ವಿಧಿಯನ್ನು ವಿಧಿಸಿ ತಮ್ಮ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು. ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ತಾಯಂದಿರ ಸಮಿತಿಯ ಅಧ್ಯಕ್ಷರು ಚುನಾಯಿತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಸಂಚಾಲಕರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಈ ಸಂಸ್ಥೆಯ ಯಶಸ್ವಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ತನ್ನ ಕೃತಜ್ಞತೆಯನ್ನು ಸಲ್ಲಿಸಿ ಶಾಲಾ ದಾಖಲಾತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಾಗೂ ವೆಂಕಟೇಶ್ ಪ್ರಭು ಇವರು ವೇದಿಕೆಯಲ್ಲಿ ದೇಣಿಗೆಯಾಗಿ ನೀಡಿದ 10,000 ರೂಪಾಯಿಗಳನ್ನು ಶಾಲಾ ಬ್ಯಾಂಡ್ ಸೆಟ್‌ನ ಸಮವಸ್ತ್ರಕ್ಕಾಗಿ ಉಪಯೋಗಿಸಿಕೊಳ್ಳುವುದಾಗಿ ಭರವಸೆ ನೀಡಿ ಕೃತಜ್ಞತೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಆಯ್ಕೆಯಾದ ಶ್ರೇಯಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದ ತನ್ವಿ ಇವರು ತಮ್ಮ ಭಾಷಣದಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ತನ್ನ ಜವಾಬ್ದಾರಿಯ ಬಗ್ಗೆ ಮಾತನಾಡಿ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಿ ಗೆಲ್ಲಿಸಿದ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು. ಮಂಜುಳಾ ಜೈನ್ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ದಿವ್ಯಶ್ರೀ ಧನ್ಯವಾದಗೈದರು. ಮಂಜುಳಾ ಪಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ನಾರಾವಿಯಲ್ಲಿ ಮಂಡಲ ಪೂಜೆ

Article Image

ನಾರಾವಿಯಲ್ಲಿ ಮಂಡಲ ಪೂಜೆ

ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬಗಳ ಪ್ರತಿಷ್ಠಾ ಮಹೋತ್ಸವ ನಡೆದು 48 ದಿನಗಳ ಬಳಿಕ ಶನಿವಾರ ಬಸದಿಯಲ್ಲಿ ಮಂಡಲ ಪೂಜೆ ನಡೆಯಿತು. ಕಾರ್ಕಳ ಜೈನಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಆರ್ಯಿಕಾ ಮುಕ್ತಿಶ್ರೀ ಮಾತಾಜಿ ಉಪಸ್ಥಿತರಿದ್ದರು. ಪೂರ್ವಾಹ್ನ ತೋರಣಮುಹೂರ್ತ, ವಿಮಾನಶುದ್ಧಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಸಾಮೂಹಿಕ ಜಿನಾಭಿಷೇಕ ಮತ್ತು ಋಷಿಮಂಡಲ ಆರಾಧನೆ ನಡೆಯಿತು. ಊರಿನ ಶ್ರಾವಕರು-ಶ್ರಾವಕಿಯರು ಮಂಗಲದ್ರವ್ಯಗಳಿಂದ ಅಭಿಷೇಕ ಮತ್ತು ಆರಾಧನೆಯಲ್ಲಿ ಭಾಗವಹಿಸಿ ಧನ್ಯತೆಯನ್ನು ಹೊಂದಿದರು. ಹೊರನಾಡು ಜಯಶ್ರೀ ಧರಣೇಂದ್ರ ಕುಮಾರ್ ಮತ್ತು ಬಳಗದವರ ಸುಶ್ರಾವ್ಯ ಸಂಗೀತ ಪೂಜಾಷ್ಟಕ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಪದ್ಮಾವತಿ ದೇವಿ ಆರಾಧನೆ, ನೂತನ ಉಯ್ಯಾಲೆ ಸಮರ್ಪಣೆ, ಅಷ್ಟಾವಧಾನ ಪೂಜೆ ನಡೆಯಿತು. ಊರಿನ-ಪರವೂರಿನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.

ನಾರಾವಿ: ಮಂಡಲ ಪೂಜೆ

Article Image

ನಾರಾವಿ: ಮಂಡಲ ಪೂಜೆ

ನಾರಾವಿ ಮಾಗಣೆ ಭ| ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬಗಳ ಪ್ರತಿಷ್ಠಾ ಮಹೋತ್ಸವದ 48ನೇ ದಿನದ ಮಂಡಲ ಪೂಜೆಯು ಕಾರ್ಕಳ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಉಪಸ್ಥಿತಿ ಮತ್ತು ಆಶೀರ್ವಚನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಜೂನ್ 22ರಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಲಿರುವುದು.

ಮಂಡಲ ಪೂಜಾ ಕಾರ್ಯಕ್ರಮ

Article Image

ಮಂಡಲ ಪೂಜಾ ಕಾರ್ಯಕ್ರಮ

ಹುಬ್ಬಳ್ಳಿ-ಧಾರವಾಡದ ನವನಗರ ಬಡಾವಣೆ ಪಂಚಾಕ್ಷರಿ ನಗರದ ಭ| ಶ್ರೀ ೧೦೦೮ ಮುನಿಸುರತ ತೀರ್ಥಂಕರರ ಜೈನ ಮಂದಿರದ ನೂತನ ಮಾನಸ್ಥಂಭದ ಚತುರ್ಮುಖ ಜಿನಬಿಂಬದ ಪಂಚಕಲ್ಯಾಣ ಪೂಜಾ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮವು ಪ. ಪೂ. ಅಭಿಕ್ಷಣ ಜ್ಞಾನ ವಾತ್ಸಲ್ಯಮೂರ್ತಿ ೧೦೮ ಪುಣ್ಯ ಸಾಗರ ಮುನಿ ಮಹಾರಾಜರ ಪಾವನ ಸಾನ್ನಿಧ್ಯ ಮತ್ತು ಆಶೀರ್ವಾದದೊಂದಿಗೆ ಹಾಗೂ ಸೋಂದ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಮತ್ತು ವರೂರು ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜೂ. 23 ರಂದು ನೆರವೇರಲಿದೆ.

ಜೈನ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ

Article Image

ಜೈನ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ

ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ ಇಂದು ಸಂಚಾಲಕರಾದ ಕೆ. ಹೇಮರಾಜ್ ಇವರು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ಕಾಲೇಜಿನ ಪ್ರಾಂಶುಪಾಲರಾದ ಮತ್ತು ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಸೀತಾರಾಮ ಕೇವಳ ಇವರು ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಮತ್ತು ಎಲ್ಲ ಉಪನ್ಯಾಸಕ ವೃಂದದವರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ನಿಧನ

Article Image

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕರಿಮಣೇಲು ಮಾಗಣೆಗುತ್ತು ನಿವಾಸಿ, ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ (71ವ) ಇವರು ಹೃದಯಾಘಾತದಿಂದ ಇಂದು(ಜೂ. 12) ಮುಂಜಾನೆ ನಿಧನ ಹೊಂದಿದರು. ಇವರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ. ಇವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ವೇಣೂರು ಮಹಾಮಸ್ತಕಾಭಿಷೇಕದ ಮಾಧ್ಯಮ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ 2000 ಇಸವಿಯ ವೇಣೂರು ಮಹಾಮಸ್ತಕಾಭಿಷೇಕದಲ್ಲಿ ಮಸ್ತಕಾಭಿಷೇಕದ ದೃಶ್ಯಗಳನ್ನು ವಿದ್ಯುನ್ಮಾನಗಳ ಮೂಲಕ ಪ್ರಚಾರ ಪಡಿಸುವ ವಿಧಾನವನ್ನು ಮೊತ್ತಮೊದಲಿಗೆ ಈ ಪರಿಸರದಲ್ಲಿ ಪ್ರಚಾರ ಪಡಿಸಿದ ಹೆಗ್ಗಳಿಕೆ ಇವರದು. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಶಿಶಿಲ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ

Article Image

ಶಿಶಿಲ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ

ಶಿಶಿಲ ಗ್ರಾಮದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಲೋಕಾಕಲ್ಯಾಣಕ್ಕಾಗಿ ಕಲ್ಯಾಣ ಮಂದಿರ ಆರಾಧನೆ ಹಾಗೂ ಪದ್ಮಾವತಿ ಅಮ್ಮನವರ ವಿಶೇಷ ಪೂಜೆಯು ಪ್ರತಿಷ್ಠಾಚಾರ್ಯ ಜಯರಾಜ ಇಂದ್ರ ಹಾಗೂ ಸಹಪುರೋಹಿತರ ಸಹಕಾರದಲ್ಲಿ ನಡೆಯಿತು. ದಾನಿಗಳಾದ ವಿಜಯಕುಮಾರ್, ಕಣಿಯೂರು, ಸುರೇಂದ್ರ ಹೆಗ್ಡೆ ಮತ್ತು ಉಜಿರೆಯ ಶಶಿಪ್ರಭಾ ಅವರನ್ನು ಗೌರವಿಸಲಾಯಿತು. ಬಸದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜದ ಸದಸ್ಯರು ಸಕ್ರಿಯ ಸಹಕಾರ ನೀಡಿದರು.

ಧಾರವಾಡ: ಹೊರ ರೋಗಿ ವಿಭಾಗದ ನೊಂದಣಿ ಆ್ಯಪ್ ಉದ್ಘಾಟನೆ

Article Image

ಧಾರವಾಡ: ಹೊರ ರೋಗಿ ವಿಭಾಗದ ನೊಂದಣಿ ಆ್ಯಪ್ ಉದ್ಘಾಟನೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇತ್ತೀಚಿಗೆ ಹೊರ ರೋಗಿಗಳ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ನೊಂದಣಿ ಮಾಡಲು ಮಾದರಿ(ಆ್ಯಪ್)ಅನ್ನು ಉದ್ಘಾಟಿಸಿದರು. ಈ ಮಾದರಿಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಪಾಲಿಕ್ಲಿನಿಕ್‌ಗಳಲ್ಲಿ ವೈದ್ಯರ ಲಭ್ಯತೆಯ ಬಗ್ಗೆ ಮಾಹಿತಿ ಮತ್ತು ರೋಗಿಗಳು ತಮಗೆ ಅನುಕೂಲದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಇದು ಶೀಘ್ರದಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಎಸ್.ಡಿ.ಎಂ. ಪಾಲಿಕ್ಲಿನಿಕ್ ಧಾರವಾಡದಲ್ಲಿ ಜುಬಲಿ ಸರ್ಕಲ್ ಬಳಿಯ ವಿ.ಜೆ.ಹೌಸ್‌ನಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಎಸ್.ಡಿ.ಎಂ. ಪಾಲಿಕ್ಲಿನಿಕ್ ವಿದ್ಯಾನಗರದ, ಗುರುದತ್ತ ಭವನದ ಹತ್ತಿರ ಕಾರ್ಯನಿರ್ವಹಿಸುತ್ತದೆ. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಖ್ದೂಮ್ ಕಿಲ್ಲೆದಾರ ಅವರು ಪ್ರಾತ್ಯಕ್ಷಿಕೆಯೊಂದಿಗೆ ಆ್ಯಪ್ ಕುರಿತು ಕುಲಪತಿಗಳಿಗೆ ಮಾಹಿತಿ ನೀಡಿದರು. ಎಸ್.ಡಿ.ಎಂ. ಆಸ್ಪತ್ರೆಯ ಯುರಾಲಜಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಥುಲಿಯಮ್ ಲೇಸರ 60 ವ್ಯಾಟ್ ಯಂತ್ರ ಮತ್ತು ಫ್ಲೆಕ್ಸಿಬಲ್ ಯುರೆಟೆರೊಸ್ಕೋಪ್‌ಅನ್ನು ಉದ್ಘಾಟಿಸಿದರು. ಇದು ಪ್ರಸ್ತುತ ವಿಶ್ವದ ಆಧುನಿಕ ಲೇಸರ್ ತಂತ್ರಜ್ಞಾನವಾಗಿದ್ದು ಇದರ ಸಹಾಯದಿಂದ ಮೂತ್ರಪಿಂಡ ಕಲ್ಲುಗಳು, ಮೂತ್ರನಾಳದ ಕಲ್ಲುಗಳು, ಮೂತ್ರಪಿಂಡದ ಕ್ಯಾನ್ಸರ್, ವಿವಿಧ ಮೂತ್ರಶಾಶಸ್ತ್ರದ ಸಮಸ್ಯೆಗಳಿಗೆ ರಕ್ತಸ್ರಾವವಿಲ್ಲದೆ, ಕಡಿಮೆ ನೋವು, ಶಸ್ತ್ರ ಚಿಕಿತ್ಸೆಯ ನಂತರದ ಗಾಯಗಳಿಲ್ಲದೇ ಚಿಕಿತ್ಸೆ ನೀಡಬಹುದಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಈ ಯಂತ್ರವನ್ನು ಬಳಸಬಹುದು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ, ಕಾರ್ಯನಿರ್ವಾಹಕ ನಿದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ, ಉಪಸ್ಥಿತರಿದ್ದರು. ಯುರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಕಲಭಾವಿ ಅವರು ಉಪಕರಣಗಳ ಕಾರ್ಯನಿರ್ವಹಿಸುವ ಕುರಿತು ಪ್ರಾತ್ಯಕ್ಷಿತೆ ನೀಡಿದರು.

ಮೂಡುಬಿದಿರೆ ಜೈನ್ ಮಿಲನ್ ಮಾಸಿಕ ಸಭೆ, ಸನ್ಮಾನ

Article Image

ಮೂಡುಬಿದಿರೆ ಜೈನ್ ಮಿಲನ್ ಮಾಸಿಕ ಸಭೆ, ಸನ್ಮಾನ

ಮೂಡುಬಿದಿರೆ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಘಟಕದ ಮಾಸಿಕ ಸಭೆಯು ಇಲ್ಲಿನ ಎಂ. ಸಿ. ಎಸ್. ಬ್ಯಾಂಕ್ ಸಭಾಭವನದಲ್ಲಿ ಜೈನ್ ಮಿಲನ್ ಅಧ್ಯಕ್ಷ ಆನಡ್ಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭಾ ಕಾಯ೯ಕ್ರಮಕ್ಕೂ ಮೊದಲು ಹೃದ್ರೋಗ ಸಂಬಂಧಿ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆಯ ಹೃದ್ರೋಗ ತಜ್ಞ ಡಾ. ದಿತೇಶ್ ಹೃದ್ರೋಗಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ರವಿರಾಜ್ ಎಂ. ಮತ್ತು ಕೊಡುಗೈ ದಾನಿ ನಿವೃತ್ತ ಟೆಲಿಕಾಂ ಇಂಜಿನಿಯರ್ ಎಂ. ವಿ. ಶೆಟ್ಟಿ ಅವರನ್ನು ಮಿಲನ್ ವತಿಯಿಂದ ಸನ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ವಲಯ ನಿದೇ೯ಶಕರಾದ ಪಿ. ಜಯರಾಜ್ ಕಂಬಳಿ, ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ವೇತಾ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಸಿಕ ಸಭಾ ಕಾರ್ಯಕ್ರಮದ ಪ್ರಾಯೋಜಕರಾದ ಎಂ. ಸಿ. ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನೇಮಿರಾಜ್, ಜೈನ್ ಮಿಲನ್ ಪದಾಧಿಕಾರಿಗಳಾದ ರಾಜೇಶ್, ಪುಷ್ಪರಾಜ್ ಜೈನ್, ಅನಂತವೀರ್ ಜೈನ್ ಉಪಸ್ಥಿತರಿದ್ದರು. ಸುರೇಖಾ ವಿ. ಹೆಗ್ಡೆ ಪ್ರಾಥಿ೯ಸಿದರು. ಪ್ರಶಾಂತ್ ಜೈನ್ ಮತ್ತು ಸಂಪತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ದಿನೇಶ್ ಚೌಟ ಸ್ವಾಗತಿಸಿದರು. ಡಾ. ಕ್ಷಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಮಲೆನಾಡು ಜೈನ್ ಮಿಲನ್

Article Image

ಮಲೆನಾಡು ಜೈನ್ ಮಿಲನ್

ಕೊಪ್ಪ, ಶೃಂಗೇರಿ: ಇಲ್ಲಿನ ಮಲೆನಾಡು ಜೈನ್ ಮಿಲನ್ ವತಿಯಿಂದ ಜಯಪುರದ ಶಾಂತ ಕುಮಾರ್ ದಂಪತಿಗಳ ಶಿಕ್ಷಣ ಪ್ರೇಮವನ್ನು ಗುರುತಿಸಿ ಸನ್ಮಾನಿಸಲಾಯಿತು.

ಶ್ರುತ ಪಂಚಮಿ

Article Image

ಶ್ರುತ ಪಂಚಮಿ

ಮೂಡುಬಿದಿರೆ ಶ್ರೀ ಜೈನ ಮಠದಲ್ಲಿ ಶ್ರುತ ಪಂಚಮಿ ನಿಮಿತ್ತ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾ‌ಯ೯ವಯ೯ ಮಹಾಸ್ವಾಮೀಜಿಗಳವರ ಮಾಗ೯ದಶ೯ನ, ನೇತೃತ್ವ ಮತ್ತು ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 9-6-2024 ರಿಂದ 11-6-2024ರವರೆಗೆ ಸಾಮೂಹಿಕ ಸರಸ್ವತಿ ಶತಾಷ್ಠ ನಾಮಾವಳಿ ಹಾಗೂ ಶ್ರುತ ಸ್ಕಂದ ಆರಾಧನೆ ಜರುಗಲಿರುವುದು.

ಗೀತಾ ಅಜೀತ್ ಹವಳಣ್ಣವರ ಇವರಿಗೆ ಭಾರತೀಯ ಜೀವ ವಿಮಾ ನಿಗಮದ 'ಶ್ರೇಷ್ಠತಾ ಪ್ರಶಸ್ತಿ'

Article Image

ಗೀತಾ ಅಜೀತ್ ಹವಳಣ್ಣವರ ಇವರಿಗೆ ಭಾರತೀಯ ಜೀವ ವಿಮಾ ನಿಗಮದ 'ಶ್ರೇಷ್ಠತಾ ಪ್ರಶಸ್ತಿ'

ಸುಮಾರು ಎರಡು ದಶಕಗಳಿಂದ ಎಲ್.ಐ.ಸಿ ಯಲ್ಲಿ ಸಲಹೆಗಾರರಾಗಿ ಮತ್ತು ಸಲಹೆಗಾರರಿಗೆ ತರಬೇತುಗಾರರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಗೀತಾ ಅಜಿತ್ ಹವಳಣ್ಣವರ ಇವರಿಗೆ ಭಾರತೀಯ ಜೀವ ವಿಮಾ ನಿಗಮದ ಧಾರವಾಡ ವಿಭಾಗದ ಶ್ರೇಷ್ಠತಾ ಪ್ರಶಸ್ತಿ( Excellence Award ) ದೊರೆಕಿದೆ. ಹೈದ್ರಾಬಾದ್ ನ ಹಿರಿಯ ವಿಭಾಗೀಯ ಅಧಿಕಾರಿ ಜಯಸಿಂಹನ್, ಧಾರವಾಡದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಬಿ.ಎಸ್ ಚಕ್ರವರ್ತಿ, ಮಾರ್ಕೆಟಿಂಗ್ ಮ್ಯಾನೇಜರ್ ಪದ್ಮಪ್ರಭಾ ಶಂಕರ ಮತ್ತು ಮಹೇಶ್ ಹುನ್ಸವಾಡಕರ್ ಇವರೆಲ್ಲರ ಸಮ್ಮುಖದಲ್ಲಿ ಜೂ. 6ರಂದು ಪ್ರಶಸ್ತಿ ಪ್ರದಾನ ಮಾಡಿದರು.

ಸಾಹಿತಿ ರವಿರಾಜ್‌ರವರಿಗೆ ಸನ್ಮಾನ

Article Image

ಸಾಹಿತಿ ರವಿರಾಜ್‌ರವರಿಗೆ ಸನ್ಮಾನ

ಭಾರತೀಯ ಜೈನ್ ಮಿಲನ್ ಮೂಡಬಿದ್ರೆ ಶಾಖೆಯ ಮಾಸಿಕ ಸಭೆಯಲ್ಲಿ ಸಾಹಿತಿ, ಕವಿ, ಸಂಗೀತಗಾರ “ಕಲಾಭೂಷಣ” ಎಂ. ರವಿರಾಜ್ ಅವರನ್ನು ಸನ್ಮಾನಿಸಲಾಯಿತು. ಮೂಡಬಿದ್ರೆಯ ಎಂ.ಸಿ.ಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಜರುಗಿದ ಸಮಾರಂಭದಲ್ಲಿ ಶಾಖಾ ಅಧ್ಯಕ್ಷರಾದ ಆನಡ್ಕ ದಿನೇಶ್ ಕುಮಾರ್, ವಲಯಾಧಿಕಾರಿಗಳಾದ ಜಯರಾಜ್ ಕಂಬಳಿ, ವಕೀಲರಾದ ಎಂ. ಬಾಹುಬಲಿ ಪ್ರಸಾದ್, ವಕೀಲೆ ಶ್ವೇತಾ ಜೈನ್ ಮತ್ತಿತರರು ಹಾಜರಿದ್ದರು. ಸನ್ಮಾನ ಸ್ವೀಕರಿಸಿದ ರವಿರಾಜ್‌ರವರು ತಾನು 52 ವರ್ಷಗಳ ಹಿಂದೆ ರಚಿಸಿದ “ಮಹಾವೀರ ವಿದ್ಯಾಲಯ ಚರಿತೆ” ಎಂಬ ಕಥನ ಕಾವ್ಯವನ್ನು ವಾಚಿಸಿದರು.

ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು. ಜನರೆಲ್ಲ ಜಿನರಾಗಬೇಕು

Article Image

ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು. ಜನರೆಲ್ಲ ಜಿನರಾಗಬೇಕು

ಶ್ರಾವಕರ ಷಟ್ಕರ್ಮಗಳಾದ ದೇವರಪೂಜೆ, ಆರಾಧನೆ, ಗುರುಗಳಸೇವೆ, ಸ್ವಾಧ್ಯಾಯ ಮೊದಲಾದವುಗಳನ್ನು ಪರಿಶುದ್ಧ ಮನಸ್ಸಿನಿಂದ ನಿತ್ಯವೂ ಮಾಡಿದಾಗ, ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ. ಜನರೆಲ್ಲ ಜಿನರಾಗಬೇಕು. ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು ಎಂದು ಮೂಡಬಿದ್ರೆ ಜೈನಮಠದ ಪರಮ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಪುಂಜಾಲಕಟ್ಟೆ ಕಟ್ಟೆಮನೆ ಗುತ್ತು ದಿವಂಗತ ಉದಯಕುಮಾರ್ ಅವರ ಸ್ಮರಣಾರ್ಥ ಶಾಸ್ತ್ರದಾನಕ್ಕಾಗಿ ಪ್ರಕಟಿಸಿದ “ಸೂರ್ಯೋದಯ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕ್ರೋಧಾದಿ ಮಾನಕಷಾಯಗಳನ್ನು ತೊರೆದು ನಮ್ಮೊಳಗಿರುವ ವೀತರಾಗ ಸ್ವರೂಪಿ ಆತ್ಮನನ್ನು ಗುರುತಿಸಿಕೊಂಡು ಮೋಕ್ಷಪ್ರಾಪ್ತಿಗೆ ನಿರಂತರ ಪ್ರಯತ್ನಿಸಬೇಕು. ಮೋಹನೀಯ ಕರ್ಮ ಎಲ್ಲಾ ಕರ್ಮಗಳ ರಾಜ. ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವವನ್ನು ಹೊಂದಿಕೊಂಡು ಚಾಕಚಕ್ಯತೆಯಿಂದ ಬದುಕಿನ ಎಲ್ಲಾ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿ ಕರ್ಮ ಬಂಧವನ್ನು ತಡೆದು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿಗಳವರು ಸಲಹೆ ನೀಡಿದರು. ಇವರು ಕಟ್ಟೆಮನೆ ಉದಯಕುಮಾರರ ಸೇವಾ ಮನೋಭಾವ, ಆದರ್ಶ ನಾಯಕತ್ವ, ಶ್ರಾವಕ ಧರ್ಮದ ಪರಿಪಾಲನೆಯನ್ನು ಶ್ಲಾಘಿಸಿದರು. ಭಗವಾನ್ ಶಾಂತಿನಾಥ ಸ್ವಾಮಿಗೆ ೫೦೪ ಕಲಶ ಅಭಿಷೇಕ, ಮೂರೂ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವರಹ ಪೂಜೆ ನಡೆಯಿತು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ ಮತ್ತು ಅಭಯಚಂದ್ರ ಜೈನ್, ಕೆ. ಪ್ರಸನ್ನ ಕುಮಾರ್ ಬೆಳ್ತಂಗಡಿ, ಎಸ್.ಡಿ. ಸಂಪತ್‌ಸಾಮ್ರಾಜ್ಯ ಶಿರ್ತಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಪ್ರಬಂಧಕರುಗಳಾದ ಎಂ. ಜಿನರಾಜ ಶೆಟ್ಟಿ ಮತ್ತು ಮೋಹನ ಪಡಿವಾಳ್, ಕೆ.ಪಿ. ಜಗದೀಶ ಅಧಿಕಾರಿ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಧರಣೇಂದ್ರ ಕುಮಾರ್ ಸಭಾಕಾರ್ಯಕ್ರಮ ನಿರ್ವಹಣೆ ಮಾಡಿದರು.

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವ

Article Image

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವ

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವವು ಜೂನ್ 3ರಂದು ಶಾಲಾ ಆವರಣದಲ್ಲಿ ನೆರವೇರಿತು. ಕಾರ್ಯಕ್ರಮದ ಉದ್ಘಾಟಕರಾಗಿ ಮೂಡುಬಿದಿರೆಯ ಖ್ಯಾತ ಲೆಕ್ಕ ಪರಿಶೋಧಕರಾದ ಉಮೇಶ್ ರಾವ್ ಮಿಜಾರುರವರು ಉಪಸ್ಥಿತರಿದ್ದು, ಕಷ್ಟವನ್ನು ಎದುರಿಸುವ ಸಾಮರ್ಥ್ಯ, ಸಮಯಪ್ರಜ್ಞೆ ಹಾಗೂ ಶಾಲಾ ನಿಯಮಗಳನ್ನು ಸರಿಯಾಗಿ ವಿದ್ಯಾರ್ಥಿಗಳು ಪಾಲಿಸಿದರೆ ಗೆಲುವು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್‌ರವರು ಶಾಲೆಯಲ್ಲಿ ಪೂರಕವಾದ ಕಲಿಕಾ ವಾತಾವರಣ ಇದ್ದಾಗ ಮಕ್ಕಳು ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಹತ್ತನೆಯ ತರಗತಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಸುವಿತ್ ಭಂಡಾರಿ, ಸುಯೋಗ್ ಅಂಚನ್, ಪೃಥ್ವಿ ಪ್ರಕಾಶ್ ಭಂಡಾರಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇಸ್ರೋ ‘ಯುವಿಕ’ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ, ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯಾಗಿರುವ ಮೌಲ್ಯ ವೈ. ಆರ್. ಜೈನ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಶಾಲಾ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಪುಪ್ಪರಾಜ್ ಬಿ., ಶಾಲಾ ಪ್ರಾಂಶುಪಾಲರಾದ ಸುರೇಶ ಹಾಗೂ ಶೈಕ್ಷಣಿಕ ಸಂಯೋಜಕರಾದ ಶ್ರೀಪ್ರಸಾದ್‌ರವರು ಉಪಸ್ಥಿತರಿದ್ದರು. ವಿಮಲಾ ಶೆಟ್ಟಿಯವರು ಕಾರ್ಯಕ್ರಮದ ನಿರೂಪಿಸಿ, ಪದ್ಮಾವತಿಯವರು ವಂದಿಸಿದರು.

ಸತ್ತೂರು, ಧಾರವಾಡ: “ನೆನಪು ಮತ್ತು ಮರೆವು” ಕಾರ್ಯಾಗಾರ

Article Image

ಸತ್ತೂರು, ಧಾರವಾಡ: “ನೆನಪು ಮತ್ತು ಮರೆವು” ಕಾರ್ಯಾಗಾರ

ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಶರೀರ ಕ್ರೀಯಾ ಶಾಸ್ತ್ರ ವಿಭಾಗದಿಂದ “ನೆನಪು ಮತ್ತು ಮರೆವು” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು ಜೂ. 1ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಅತಿಥಿಗಳಾದ ಡಾ. ರತ್ನಮಾಲಾ ಎಂ. ದೇಸಾಯಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ನೆನಪು ಮಾನವನಿಗೆ ಅತೀ ಮೌಲ್ಯವಾದ ಆಯುಧವಾಗಿದೆ. ಕಹಿ ನೆನಪುಗಳನ್ನು ಮರೆಯುವುದು ಒಂದು ವರದಾನವಾಗಿದೆ. ಗೊಂದಲಗಳು ಹೆಚ್ಚಾಗುವುದು ಮತ್ತು ಏಕಾಗ್ರತೆ ಕಡಿಮೆಯಾಗುವುದು ಒಳ್ಳೆಯ ಲಕ್ಷಣವಲ್ಲಾ. ಉತ್ತಮ ಶಿಕ್ಷಣ ನೀಡುವುದಕ್ಕೆ ಶಿಕ್ಷಕರು ಒಳ್ಳೆಯ ನೆನಪಿನ ಶಕ್ತಿ ಹೊಂದಿರಬೇಕು. ಉತ್ತಮ ನೆನಪು ಮತು ಒಳ್ಳೆಯ ಜ್ಞಾನವು ಜೀವನದಲ್ಲಿ ಮರುಕಳಿಸುತ್ತಿರಬೇಕು ಎಂದು ಹೇಳಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಕಾರ್ಯಾಗಾರದ ಸಂಘಟನಾ ಅಧ್ಯಕ್ಷರು ಮತ್ತು ಶರೀರ ಕ್ರೀಯಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗಲಕ್ಷ್ಮೀ ಉಪಸ್ಥಿತರಿದ್ದರು. ಡಾ. ಗ್ರಾಮೋಪಾಧ್ಯಾಯ ಭೂಷಣ, ಡಾ. ನಾಗಲಕ್ಷ್ಮೀ , ಡಾ. ಸಚಿನ್ ಬಿ.ಎಸ್., ಡಾ. ಮಲ್ಲಿಕಾರ್ಜುನಗೌಡರ ಅವರು ವಿಷಯದ ಕುರಿತು ತಜ್ಞ ಉಪನ್ಯಾಸವನ್ನು ನೀಡಿದರು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ಸುಮಾರು 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಘಟನಾ ಕಾರ್ಯದರ್ಶಿಗಳಾದ ಡಾ. ಶ್ವೇತಾ ಗೌಡಪ್ಪಣ್ಣವರ ಸ್ವಾಗತಿಸಿದರು. ವೈಷ್ಣವಿ ಕುಲಕರ್ಣಿ ಮತ್ತು ವೇಣು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಸಂಘಟನಾ ಕಾರ್ಯದರ್ಶಿಗಳಾದ ಡಾ. ವಿದ್ಯಾ ನಾಡಗೇರ ಅವರು ವಂದನಾರ್ಪಣೆ ಸಲ್ಲಿಸಿದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಉದ್ಘಾಟನೆ

Article Image

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಉದ್ಘಾಟನೆ

ಧರ್ಮಸ್ಥಳ: ಮಹಿಳೆಯರು ಬುದ್ಧಿವಂತರಾಗಿದ್ದು, ಸದಾ ಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೇ ಇಂದು ಅವರು ತಮಗೆ ಸಿಗುವ ಎಲ್ಲಾ ಅವಕಾಶ, ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಗುರುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಪುರುಷರಿಂದ ಆಶ್ರಯ ಬೇಕಾಗಿಲ್ಲ. ಸದಾ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯವಾಗಿದೆ. ಕುಟುಂಬ ಮತ್ತು ಸಮಾಜದ ಸುಗಮ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಲ್ಯದಿಂದಲೆ ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವುದು ಮಾತೆಯರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಆದುದರಿಂದಲೆ ಧರ್ಮಸ್ಥಳದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವಾಗ ಪೋಷಕರಿಗೂ ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಎಲ್ಲಾ ಶಾಖೆಗಳ ಕಾರ್ಯನಿರ್ವಹಣೆಯನ್ನು ಏಕಸೂತ್ರದಲ್ಲಿ ಪೋಣಿಸಿ ಸಂದರ್ಭೋಚಿತವಾಗಿ ಮಾಹಿತಿ, ಮಾರ್ಗದರ್ಶನ ನೀಡುವುದು ಒಕ್ಕೂಟದ ಜವಾಬ್ದಾರಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ-ಸಹಾಯ ಸಂಘಗಳಿಗೆ ಒಕ್ಕೂಟದ ನೇತೃತ್ವದಲ್ಲಿ ಸದಾ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಕಾಲಕ್ಕೆ ತಕ್ಕಂತೆ ಅವರವರ ಪ್ರಾಯಕ್ಕೆ ಅನುಗುಣವಾಗಿ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಂದಿನ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಾಧನೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಹೇಮಾವತಿ ಹೆಗ್ಗಡೆಯವರು ಬರೆದ “ಗೆಳತಿ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಚಲನಚಿತ್ರ ನಟಿ ಪದ್ಮಜಾ ರಾವ್ ಮಾತನಾಡಿ ಧರ್ಮಸ್ಥಳದಲ್ಲಿ ತಮಗೆಲ್ಲ ದೊರೆತ ರಾಜಮರ್ಯಾದೆಯೊಂದಿಗೆ ಗೌರವಪೂರ್ವಕ ಆತಿಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿಗಳಾದರೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿ ಬರುತ್ತದೆ. ಮಹಿಳಾ ಸಬಲೀಕರಣವೂ ಆಗುತ್ತದೆ ಎಂದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಸಂಚಿಕೆ ಬಿಡುಗಡೆಗೊಳಿಸಿದ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ದಾನ ಚಿಂತಾಮಣಿ ಅತ್ತಿಮಬ್ಬೆ, ಉಳ್ಳಾಲದ ರಾಣಿ ಅಬ್ಬಕ್ಕ, ಮೊದಲಾದವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮಹಿಳೆಯರು ಸದಾ ಮಾತನಾಡುವ ಮಾತೆಯರಾಗದೆ, ಚಿಂತೆಯನ್ನು ಬಿಟ್ಟು ಸದಾಚಿಂತನೆಯನ್ನು ಮಾಡುವ ಚಿಂತಾಮಣಿಗಳಾಗಬೇಕು. ಮಹಿಳೆಯರು ಸಮರ್ಪಣಾ ಮನೋಭಾವದಿಂದ ಆರೋಗ್ಯಪೂರ್ಣ, ಕುಟುಂಬ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಬೇಕು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಅವರು ಕಿವಿಮಾತು ಹೇಳಿದರು. ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುಶೀಮಾ ಯಶವಂತ್, ಛಾಯಾಚಿತ್ರಗ್ರಾಹಕಿ ಹುಣಸೂರಿನ ಛಾಯಾ ಸುನಿಲ್ ಮತ್ತು ಮೈಸೂರಿನ ಕುಮಾರಿ ಅನನ್ಯ ಜೈನ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷರಾದ ಹೇಮಾವತಿ ಹೆಗ್ಗಡೆಯವರು ಮಾತನಾಡಿ, ಜೈನಧರ್ಮದಲ್ಲಿ ತ್ಯಾಗ, ಅಹಿಂಸೆ ಮತ್ತು ವಿರಕ್ತಿಗೆ ಪ್ರಾಶಸ್ತ್ಯವಿದೆ. ಮಹಿಳೆಯರು ಕುಟುಂಬದ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಬಿಂದುವಾಗಿ ಮಾತ್ರವಲ್ಲದೆ ಸಿಂಧುವಾಗಿಯೂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ನಿರಂತರ ಪ್ರಗತಿಗೆ ಸಹಕರಿಸಬೇಕು. ಮಹಿಳೆಯರಿಗೆ ಮಂದಿರಗಳು ಪಾಠಶಾಲೆಯಾದರೆ, ಸಮಾಜ ಪ್ರಯೋಗ ಶಾಲೆಯಾಗಬೇಕು. ಮಹಿಳೆಯರ ತ್ಯಾಗ, ಸೇವೆ, ಪ್ರೀತಿ-ವಿಶ್ವಾಸಕ್ಕೆ, ಸಮಾಜಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸೇವೆಯಿಂದ ಸಿಗುವ ತೃಪ್ತಿ, ಸಂತೋಷ ಮತ್ತು ನೆಮ್ಮದಿಯೇ ಮಹಿಳೆಯರಿಗೆ ದೊರಕುವ ನಿಜವಾದ ಪ್ರಶಸ್ತಿ ಎಂದು ಅಭಿಪ್ರಾಯಪಟ್ಟರು. ಮಹಿಳೆಯರು ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರವಂತರಾಗಿ ರೂಪಿಸಬೇಕು ಎಂದು ಅವರು ಹೇಳಿದರು. ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮಿನಿ ಪದ್ಮರಾಜ್ ಸ್ವಾಗತಿಸಿದರು. ಜಯಶ್ರೀ ಧನ್ಯವಾದವಿತ್ತರು. ಕುಮುದಾ ನಾಗಭೂಷಣ್ ಕಾರ್ಯಕ್ರಮ ನಿರ್ವಹಿಸಿದರು.

First Previous

Showing 3 of 8 pages

Next Last