ಹಲಸು ನಾ ನಿನ್ನ ಮರೆಯಲಾರೆ
ಹಲಸು ( ಪಿಲಕ್ಕಯಿ ) ತುಳುನಾಡಿನ ಸಂಸ್ಕೃತಿ, ಪರಂಪರೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ತುಳುನಾಡಿನಲ್ಲಿ ಹಲಸು ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಬಡವರಿಗೆ ಅದು ಸ್ವರ್ಗ ಸೋಪಾನವಾಗಿತ್ತು, ಜೀವನಧಾರವಾಗಿತ್ತು. ಆದರಿಂದು ಆಧುನಿಕ ಬದುಕಿನ ಓಟದಲ್ಲಿ ಹಲಸು ನಮಗೆ ಬೇಡವೆನಿಸುತ್ತಿದೆ. ಅಂದು ನಾವು ಚಿಕ್ಕವರಿದ್ದಾಗ ಹೊಟ್ಟೆ ಬಟ್ಟೆಗೆ ಬಹಳ ಬರವಿತ್ತು. ಮಕ್ಕಳಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಹೊಟ್ಟೆ ತುಂಬಬೇಕು, ಆಟ ಆಡಬೇಕು ಅಷ್ಟೇ. ಮನೆಯ ಕಷ್ಟ ತಂದೆ ತಾಯಿಗಳಿಗೆ ಗೊತ್ತಿರೋದು. ಲೋಕದಲ್ಲಿರುವ ಸಮಸ್ಯೆ ನಮ್ಮ ಮನೆಯಲ್ಲೂ ಇತ್ತು. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು ಹೊಟ್ಟೆಯ ದಾಹ ಜಾಸ್ತಿಯಾಗುವುದು. 0.38 ಎಕರೆ ಅಂದರೆ 38 ಸೆನ್ಸ್ ಗದ್ದೆ ಇರುವ ನಮ್ಮಲ್ಲಿ ಎಂಟು ಜನರಿಗೆ ಉಣ್ಣಲು ಅಕ್ಕಿ ಸಾಲುತ್ತಿರಲಿಲ್ಲ. ತಂದೆ ಹೊರಗಡೆ ಹೋಗಿ ದುಡಿದು ತಂದರೂ ಹೊಟ್ಟೆ ತುಂಬುವ ಪರಿಸ್ಥಿತಿ ಇರಲಿಲ್ಲ. ಆಗ ನಮ್ಮ ಅಪ್ಪಾಜಿ ಕಂಡುಕೊಂಡ ದಾರಿಯೇನೆಂದರೆ ಹಲಸಿನಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗ. ಹಲಸು ಪ್ರಾರಂಭವಾದ ದಿನದಿಂದ ಹಿಡಿದು ಹಲಸು ಮುಗಿಯುವವರೆಗೆ ನಮಗೆ ಮುಖ್ಯ ಆಹಾರಗಳಲ್ಲಿ ಹಲಸೂ ಕೂಡ ಆಗಿತ್ತು. ಕಾಯಿ ಹಲಸಿನ ಉಪ್ಪುಕಾರಿ ಅಂದರೆ ಹಲಸನ್ನು ಬೇಯಿಸಿ ತಿನ್ನುವುದು, ರಾಶಿ ರಾಶಿ ಹಪ್ಪಳ ಹಾಕುವುದು ನಮ್ಮ ಮನೆಯಲ್ಲಿ ಖಾಯಂ. ನಮಗೂ ಅನ್ನದ ಬದಲಿಗೆ ಹಲಸಿನ ಉಪ್ಪುಕಾರಿ ( ಉರುವೆಲ್ ) ಬಹಳ ಅಪ್ಯಾಯಮಾನವಾಗುತ್ತಿತ್ತು. ಒಮ್ಮೊಮ್ಮೆ ಮೂರು ಹೊತ್ತೂ ಇದೇ ಇರುತ್ತಿತ್ತು. ಆದರೆ ಅಮ್ಮ ಬಯ್ಯುತ್ತಿದ್ದರು ಮೂರೂ ಹೊತ್ತೂ ಇದನ್ನೇ ತಿಂದರೆ ಮಕ್ಕಳ ಆರೋಗ್ಯ ಏನಾಗಬಹುದು ಎಂಬುದು ಅವರ ಕಳವಳ. ನಮ್ಮ ಮನೆಯ ಹಪ್ಪಳವಂತೂ ನಮಗೆ ಪಂಚ ಪ್ರಾಣ. ಹಪ್ಪಳವೇ ಮನೆಗೆ ಬರುವ ನೆಂಟರಿಗೆ ಅತಿಥಿ ಸತ್ಕಾರ. ಧೋ.. ಎಂದು ಸುರಿಯವ ಜಡಿ ಮಳೆಗೆ ಜಿಗಿಜಿಗಿ ಕೆಂಡದಲ್ಲಿ ಹಾಕಿ ಬೇಯಿಸಿದ ಹಪ್ಪಳ ಮತ್ತು ತೆಂಗಿನಕಾಯಿ ಚೂರುಗಳು ಆಹಾ ಜಗತ್ತಿನಲ್ಲಿ ಇದಕ್ಕಿಂತ ರುಚಿಯಾದ ತಿನಿಸೇ ಇಲ್ಲವಾಗಿತ್ತು ನಮಗೆ. ಯಾವಾಗ ನೋಡಿದರೂ ಹಲಸಿನ ಪಲ್ಯ, ಊಟಕ್ಕಿಂತ ಎರಡು ಪಾಲು ಜಾಸ್ತಿ ಹಾಕಿಸಿಕೊಳ್ಳುವ ಪಲ್ಯ, ಕಾಯಿ ಹಲಸನ್ನು ಉಪ್ಪಿನ ದ್ರಾವಣದಲ್ಲಿ ಹಾಕಿಟ್ಟರೆ ಆವಾಗವಾಗ ಬೇಕದಾಗ ಖಾರ ಪಲ್ಯ ಹೊಟ್ಟೆಯೂ ತುಂಬುತ್ತಿತ್ತು ಅಕ್ಕಿಯ ಸಮಸ್ಯೆಯೂ ನೀಗುತ್ತಿತ್ತು. ಹಲಸು ಹಣ್ಣಾದ ಮೇಲೆ ಮತ್ತೊಂದು ರೀತಿಯ ಸಂಭ್ರಮ. ಹಲಸಿನ ಹಣ್ಣಿನ ಕಡುಬು ( ಗಟ್ಟಿ ) , ದೋಸೆ ( ಗಾರಿಯಾ ), ಹಂಗುಲಿ, ಹಲಸು ಹಣ್ಣಿನ ಉಪ್ಪುಕಾರಿ ವಾಹ್ ಎಂತೆಂತಾ ತಿಂಡಿಗಳು ನಮಗೆಲ್ಲರಿಗೂ ಅದು ಅಂದು ದೇವಲೋಕದ ಆಹಾರದಂತೆ ಆಗಿತ್ತು. ಇನ್ನು ಹಲಸಿನ ಬೀಜ ಅದನ್ನು ಮಣ್ಣಿನ ನೆಲದಲ್ಲಿ ಬತ್ತದ ಹೊಟ್ಟಿನ ಜೊತೆ ಶೇಖರಣೆ ಮಾಡುತ್ತಾರೆ. ಬಿಸಿಲು ಇಲ್ಲದ ಕಾರಣ ಹಲಸಿನ ಬೀಜವನ್ನು ಒಣಗಿಸುವ ವಿಧಾನ ಹಾಗೂ ಇದರಿಂದ ಹಲಸಿನ ಬೀಜ ಸಂರಕ್ಷಿತವಾಗಿರುತ್ತದೆ. ಒಣಗಿದ ಹಲಸಿನ ಬೀಜವನ್ನು ನಿಗಿ ನಿಗಿ ಕೆಂಡದಲ್ಲಿ ಹದವಾಗಿ ಬೇಯಿಸಿ ತಿನ್ನುವುದೆಂದರೆ ಈಗಿನ ಯಾವ ವಿಷಕಾರಿ ಚಾಕಲೇಟ್ ಮುಂತಾದ ಆಧುನಿಕ ತಿಂಡಿಗೂ ಸರಿ ಬರುವುದಿಲ್ಲ. ಹಲಸಿನ ಬೀಜದ ಪಲ್ಯ, ಉಪ್ಪಕಾರಿ ( ಉಪ್ಪಿಟ್ಟು ), ಹಲಸಿನ ಬೀಜದ ರೊಟ್ಟಿ, ವಡೆ ಇತ್ಯಾದಿ ಒಂದೇ ಎರಡೇ ಬಗೆಬಗೆ ತಿಂಡಿಗಳು ಆರೋಗ್ಯಕ್ಕೂ, ದೇಹಕ್ಕೂ, ಮನಸ್ಸಿಗೂ ಅದರಲ್ಲೂ ಮುಖ್ಯವಾಗಿ ಇದು ಬಡವರ ಪಾಲಿನ ಕಾಮಧೇನುವಾಗಿತ್ತು. ಮಳೆಗಾಲದಲ್ಲಿ ನಮ್ಮ ಅಪ್ಪಾಜಿಗೆ ಹಲಸು ಒಟ್ಟು ಮಾಡುವುದೇ ಕೆಲಸ. ಭೋರ್ಗರೆಯು ನದಿಯನ್ನು ದಾಟಿ ಕುದ್ಯಾಡಿ ಕೃಷ್ಣ ಭಟ್ಟರ ಮನೆಯಿಂದ, ಕೊಕ್ರಾಡಿ ಕಜಂಗೆಯಿಂದ ಹಲಸು ಹೊತ್ತು ತರುವುದು ಅವರ ಸಾಹಸಮಯ ವೀರೋಚಿತ ಗಾಥೆಯಾಗಿದೆ. ಪ್ರಾಕೃತಿಕವಾಗಿ ಬೆಳೆಯುವ ಹಲಸು ಪೋಷಕಾಂಶಗಳ ಆಗರವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮತ್ತು ಹೃದಯದ ಆರೋಗ್ಯಕ್ಕೆ, ಕಣ್ಣು ಹಾಗೂ ಚರ್ಮದ ಕಾಂತಿಗೆ ತುಂಬಾ ಒಳ್ಳೆಯದು. ಇದು ನಾರಿನಂಶ, ವಿಟಮಿನ್ ಸಿ, ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿದೆ. ಆದರಿಂದು ಹಲಸು ಬಹುತೇಕರಿಗೆ ಅಪಥ್ಯವಾಗುತ್ತಿದೆ. ನಮ್ಮ ಮನೆಯಲ್ಲೂ ಹಲಸು ಬಳಕೆ ಕಮ್ಮಿಯಾಗುತ್ತಿದೆ. ಗ್ರಾಮೀಣ ಪ್ರದೇಶದವರೂ ಕೂಡ ಈಗ ತಿನ್ನುವುದನ್ನು ಕಡಿಮೆ ಮಾಡಿದ್ದಾರೆ. ಹಲಸು ದೂರವಾಗುತ್ತಿದೆ. ಹಲಸು ತಿಂದರೆ ಅಜೀರ್ಣ, ಗ್ಯಾಷ್ಟ್ರಿಕ್ ಸಮಸ್ಯೆ ಬರುತ್ತಿದೆ ಎಂದು ಅನ್ನುತ್ತಿದ್ದಾರೆ. ರಾಸಾಯನಿಕಗಳನ್ನು ಬಳಸಿ ಬೆಳೆಸಿದ ತರಕಾರಿಯೇ ಆಗಬಹುದು ಅನ್ನುತ್ತಿದ್ದಾರೆ. ಅಮೃತದ ಬದಲು ವಿಷವೇ ಪ್ರಿಯವಾಗುತ್ತಿದೆ. ಹಣ್ಣಾದ ಹಲಸುಗಳನ್ನು ಇಂದು ಪ್ರಾಣಿ ಪಕ್ಷಿಗಳು ಬಂದು ತಿನ್ನುವುದು ನೋಡಿ ಅವುಗಳಾದರೂ ತಿಂದವಲ್ಲ ಎಂದು ಮನಸಿಗೆ ಸಮಾಧಾನವಾಗುತ್ತದೆ. ಆದರೆ ನನಗಂತೂ ಹಲಸು ಇಂದಿಗೂ ಪ್ರಿಯವೇ ಇದೆ. ಹಲಸು ನಾ ನಿನ್ನ ಎಂದೂ ಮರೆಯಲಾರೆ ..... ನಿರಂಜನ್ ಜೈನ್ ಕುದ್ಯಾಡಿ
