ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು
ಭಾರತೀಯ ಜೈನ್ ಮಿಲನ್ ವಲಯ - 8 ಬೆಂಗಳೂರು, ಮಲೆನಾಡು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಗಳು ಸೀಸನ್- 9, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು ದಿನಾಂಕ 16 -11- 2025ರಂದು ಭಾನುವಾರ ಶಿವಮೊಗ್ಗದ ಹೊಂಬುಜ ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ನಡೆದವು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ರವರು ಜಿನ ಭಜನಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕೇಂದ್ರ ಸಮಿತಿಯ ಪಿ .ಅಜಿತ್ ಕುಮಾರ್, ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣವರ್, ಮಲೆನಾಡು ವಿಭಾಗದ ಉಪಾಧ್ಯಕ್ಷರಾದ ಯಶೋಧರ ಹೆಗ್ಡೆ ಕೆ. ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಾನಿಧ್ಯ ಮತ್ತು ಆಶೀರ್ವಚನ ನೀಡಿದರು. ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಭಾರತೀಯ ಆಧ್ಯಾತ್ಮ 14ನೆಯ ಶತಮಾನದವರೆಗೆ ಜ್ಞಾನಮಾರ್ಗದಲ್ಲಿ ಕಠಿಣವಾದ ತಪಸ್ಸುಗಳು, ವ್ರತಗಳು, ನಿಯಮಗಳ ಮೂಲಕ ಭಗವಂತನನ್ನು ತಲುಪುವ ಮಾರ್ಗವಾಗಿತ್ತು. ಹದಿನಾಲ್ಕನೆಯ ಶತಮಾನದ ನಂತರದಲ್ಲಿ ಭಗವಂತನ ಭಜನೆ ಕೀರ್ತನೆ ಮುಂತಾದ ಎಲ್ಲರಿಗೂ ಸುಲಭವಾದ ಭಕ್ತಿ ಮಾರ್ಗದಲ್ಲಿ ಸಾಗುತ್ತಾ ಬಂದಿದೆ. ಮಹಾಕವಿ ರತ್ನಾಕರವರ್ಣಿ ಮುಂತಾದ ಅನೇಕ ಕವಿಗಳು ಜೈನ ಆಧ್ಯಾತ್ಮ ಗೀತೆಗಳನ್ನು ರಚಿಸಿದ್ದಾರೆ. ಶತಮಾನಗಳಿಂದ ಭಜನೆ ಮತ್ತು ಭಕ್ತಿಗೀತೆಗಳು ಸ್ತೋತ್ರಗಳು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ದೈನಂದಿನ ಅವಿಭಾಜ್ಯ ಅಂಗಗಳಾಗಿದ್ದವು. ಆದರೆ ಪ್ರಸ್ತುತದಲ್ಲಿ ಮಕ್ಕಳಿಗೆ ಲೌಕಿಕ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಆದ್ದರಿಂದ ತಂದೆ - ತಾಯಿಯರು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆ ಜೊತೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಸಹ ನೀಡಬೇಕು, ಇಲ್ಲದಿದ್ದರೆ ಮಕ್ಕಳ ಶಿಕ್ಷಣ ಅಪೂರ್ಣವಾಗುತ್ತದೆ. ಪ್ರತಿದಿನ ಅರ್ಧ ಗಂಟೆಯಾದರೂ ಮಕ್ಕಳಿಗೆ ಜೈನ ಧರ್ಮದ ಮೂಲ ಗುಣಗಳು ಮತ್ತು ಆಚಾರ ವಿಚಾರಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ತಿಳಿಸಿಕೊಡಬೇಕು. ಮನೆಗಳಲ್ಲಿ ಹಿರಿಯರು ಮಕ್ಕಳನ್ನು ಸೇರಿಕೊಂಡು ಜಿನ ಭಜನೆಗಳನ್ನು ಮಾಡುವುದು ಮತ್ತು ಮನೆಯಲ್ಲಿಯೇ ಧಾರ್ಮಿಕ ಸಂಸ್ಕಾರ ನಿಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಜೈನ ಪೂರ್ವಾಚಾರ್ಯರು ಉಪಸರ್ಗಗಳು ಉಂಟಾದಾಗ ಜಿನ ಭಗವಂತರ ಧ್ಯಾನದಲ್ಲಿ ತಲ್ಲೀನರಾಗಿ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಆಚಾರ್ಯ ಸಮಂತಭದ್ರಸ್ವಾಮಿವರ ಸ್ವಯಂಭೂಸ್ತೋತ್ರ, ಮಾನತುಂಗಾಚಾರ್ಯರ ಭಕ್ತಾಮರ ಸ್ತೋತ್ರ, ಧನಂಜಯ ಕವಿಯ ವಿಷಾಪಹಾರ ಸ್ತೋತ್ರ ಇಂತಹ ಅನೇಕ ಸ್ತೋತ್ರಗಳಿಂದ ಜಿನ ಭಕ್ತಿಯ ಮಹಿಮೆಯಿಂದ ಉಪಸರ್ಗಗಳನ್ನು ನಿವಾರಣೆ ಮಾಡಿಕೊಂಡರು. ದೈಹಿಕ ಆರೋಗ್ಯಕ್ಕೆ ಭೋಜನ ಹೇಗೆ ಅಗತ್ಯವಿದೆಯೋ ಅದೇ ರೀತಿಯಲ್ಲಿ ಮಾನಸಿಕ ಆರೋಗ್ಯಕ್ಕೆ ಭಜನೆ ಅಷ್ಟೇ ಅಗತ್ಯವಾಗಿದೆ. ಜಿನಭಜನೆಯನ್ನು ಸ್ಪರ್ಧೆಗಾಗಿ ಮಾತ್ರವಲ್ಲದೆ ಜಿನ ಭಗವಂತರ ಭಕ್ತಿಯನ್ನು ಪ್ರತಿದಿನವೂ ಮಾಡುವುದರಿಂದ ಇಹ ಪರದಲ್ಲಿ ಶಾಂತಿ ನೆಮ್ಮದಿ ಪಡೆಯಬಹುದು ಎಂದು ಹೇಳಿದರು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಮನದಾಳದ ಮಾತುಗಳನ್ನು ಹೇಳುತ್ತಾ, ಕಳೆದ ಒಂಭತ್ತು ವರ್ಷಗಳಿಂದ ಜಿನ ಭಜನಾ ವೇದಿಕೆಯಿಂದ ಸಮಾಜದಲ್ಲಿ ಅನೇಕ ಉತ್ತಮವಾದ ಬೆಳವಣಿಗೆಗಳು ಆಗಿರುತ್ತವೆ. ಜಿನ ಭಜನಾ ಸ್ಪರ್ಧೆಗಳ ಫಲವಾಗಿ ಈಗ ಜೈನ ಸಮಾಜದಲ್ಲಿ ಜಿನ ಭಕ್ತಿ ಗೀತೆಗಳ ಹಾಡುಗಾರು, ಸಾಹಿತ್ಯ ರಚನೆಕಾರರು, ತೀರ್ಪುಗಾರರು, ಸಂಯೋಜಕರು ಮುಂತಾದ ಅನೇಕ ಪ್ರತಿಭೆಗಳು ಮುನ್ನೆಲೆಗೆ ಬಂದಿದ್ದಾರೆ ಎಂದು ಹೇಳಿದರು. ಸಮಾಜದ ಅನೇಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಿದೆ ಎಂಬ ಸಂತಸವನ್ನು ಹಂಚಿಕೊಂಡರು. ಸ್ಪರ್ಧೆಗಳು ಬಹುಮಾನ ಗಳಿಸಲು ಮಾತ್ರವಲ್ಲದೆ ಭಗವಂತರ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಮುಂದಿನ ವರ್ಷದ ದಶಮಾನೋತ್ಸವದ ಯೋಜನೆಗಳ ಕುರಿತು ತಮ್ಮ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ರವರು, ಜೈನ್ ಮಿಲನ್ ಸಂಘಟನೆಯು ರಾಷ್ಟ್ರ ಮತ್ತು ರಾಜ್ಯ ವ್ಯಾಪ್ತಿಯ ಸಂಘಟನೆಯಾಗಿದೆ ಎಂದು ಹೇಳಿದರು. ವಿದೇಶಗಳಲ್ಲಿ ಸಹ ಅನಿವಾಸಿ ಭಾರತೀಯ ಜೈನರು ಪ್ರತಿ ಭಾನುವಾರ ಜೈನ ಧರ್ಮದ ಆಚಾರ ವಿಚಾರಗಳನ್ನು ತಮ್ಮ ಮಕ್ಕಳಿಗೆ ಕಲಿಸಿ ಕೊಡುತ್ತಿದ್ದಾರೆ ಎಂದು ಹೇಳಿದರು. ಮುನಿರಾಜ ರೆಂಜಾಳ ಮತ್ತು ಕಾವ್ಯ ಬೆಂಗಳೂರುರವರು ತೀರ್ಪುಗಾರರಾಗಿ ಪ್ರತಿಯೊಂದು ತಂಡದ ಸ್ಪರ್ಧಿಗಳಿಗೆ ಉತ್ತಮವಾದ ವಿಮರ್ಶೆಗಳನ್ನು ಮತ್ತು ಸಲಹೆಗಳನ್ನು ನೀಡಿದರು.
ಹಿರಿಯರ ವಿಭಾಗದಲ್ಲಿ ಓಂಕಾರ್ ಜಿನ ಭಜನಾ ತಂಡ ಹೊರನಾಡು ಪ್ರಥಮ ಸ್ಥಾನ, ಸುಸ್ವರ ಜಿನ ಭಜನಾ ತಂಡ ಹೊರನಾಡು ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನವನ್ನು ಶ್ರೀ ಶಾಂತಿನಾಥ ಜಿನ ಭಜನಾ ತಂಡ ಮೇಗುಂದ ಹಾಗೂ ದಿವ್ಯ ದ್ವನಿ ಜಿನ ಭಜನಾ ತಂಡ ಹೊರನಾಡು ಎರಡೂ ತಂಡಗಳು ಪಡೆದವು. ಕಿರಿಯರ ವಿಭಾಗದಲ್ಲಿ ಪಾರಸ್ ಜಿನ ಭಜನಾ ತಂಡ ಮಂಡವಳ್ಳಿ ಪ್ರಥಮ ಸ್ಥಾನ, ಶುಭಸ್ವರ ಜಿನ ಭಜನಾ ತಂಡ ಹೊರನಾಡು ದ್ವೀತೀಯ ಸ್ಥಾನ ಮತ್ತು ತೃತೀಯ ಸ್ಥಾನವನ್ನು ಸಿದ್ಧಿ ಪದ್ಮಾವತಿ ಜಿನ ಭಜನಾ ತಂಡ ಹೊರನಾಡು ಹಾಗೂ ಸರ್ವತೋಭದ್ರ ಜಿನ ಭಜನಾ ತಂಡ ಸಾಗರ ಎರಡೂ ತಂಡಗಳು ಹಂಚಿಕೊಂಡವು. ವಿಜೇತ ತಂಡಗಳಿಗೆ ನಗದು ಪುರಸ್ಕಾರ ಮತ್ತು ಟ್ರೊಫಿಗಳನ್ನು ನೀಡಲಾಯಿತು. ಹಿರಿಯರ ವಿಭಾಗದಲ್ಲಿ - 28 ಮತ್ತು ಕಿರಿಯರ ವಿಭಾಗದಲ್ಲಿ - 13 ತಂಡಗಳು ಭಾಗವಹಿಸಿದ್ದವು .
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೈನ್ ಮಿಲನ್ ಜಿನ ಭಜನಾ ಕೇಂದ್ರ ಸಮಿತಿಯ ಪಿ. ಅಜಿತ್ ಕುಮಾರ್ , ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣವರ್, ಶಿವಮೊಗ್ಗ ದಿಗಂಬರ ಸಂಘದ ಅಧ್ಯಕ್ಷರಾದ ಜಯರಾಜ ಬಿ. ಪಾಂಡಿ, ಪ್ರಿಯಕಾರಿಣಿ ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಸಿರಸಪ್ಪ ಗೋಗಿ, ತೀರ್ಥಹಳ್ಳಿಯ ಡಾ. ಜೀವಂಧರ ಜೈನ್, ಮಲೆನಾಡು ವಿಭಾಗದ ಉಪಾಧ್ಯಕ್ಷ ಯಶೋಧರ ಹೆಗ್ಡೆ. ಕೆ., ಕಾರ್ಯದರ್ಶಿ ಡಿ .ಪೂರ್ಣಿಮಾ ಅಶೋಕ್ ಕುಮಾರ್, ನಿರ್ದೇಶಕರಾದ ಬಿ.ಡಿ. ಧರ್ಮಪಾಲ್, ದೇವರಾಜ್ ಜೈನ್ ಕುಪ್ಪಡಿ ವಗೆಕೆರೆ ಇವರುಗಳು ಉಪಸ್ಥಿತರಿದ್ದರು. ಶಿವಮೊಗ್ಗ ಜೈನ್ ಮಿಲನ್ ಅಧ್ಯಕ್ಷರಾದ ಅಪ್ಪಣ್ಣಜ್ಜ ಎ.ಪಿ ಇವರು ಅಧ್ಯಕ್ಷತೆ ವಹಿಸಿದ್ದರು. ಪೂರ್ಣಿಮಾ ಅಶೋಕ್ ಕುಮಾರ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ರೋಹಿಣಿ ಪ್ರಶಾಂತ ಪ್ರಾರ್ಥನೆ ಮಾಡಿದರು. ಸುಜಾತಾ ಪ್ರಶಾಂತ್ ವಂದಿಸಿದರು .