ನಾರಾವಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ
Published Date: 05-Nov-2025 Link-Copied
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ನ. 11 ರಂದು ಮಂಗಳವಾರ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪೂಜೆ, ಆರಾಧನೆಯೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಸಮಿತಿಯವರು ತಿಳಿಸಿದ್ದಾರೆ. ಮಂಗಳವಾರ ಅಪರಾಹ್ನ 2.00 ಗಂಟೆಯಿಂದ ನಿತ್ಯವಿಧಿ ಸಹಿತ ದೇವಿ ಪದ್ಮಾವತಿ ಅಮ್ಮನವರ ಆರಾಧನೆ 6.00 ಗಂಟೆಗೆ ಉಯ್ಯಾಲೆ ಸೇವೆ, ಭಗವಾನ್ ಧರ್ಮನಾಥ ಸ್ವಾಮಿಗೆ 24 ಕಲಶ ಅಭಿಷೇಕ ಹಾಗೂ ದೇವರ ಉತ್ಸವದ ಬಳಿಕ ದೀಪೋತ್ಸವ ನಡೆಯಲಿದೆ. ಹೊರನಾಡು ಜಯಶ್ರೀ ಜೈನ್ ಸಂಗೀತ ಪೂಜಾಷ್ಟಕ ಹಾಡುವರು. ರಾತ್ರಿ 11.00 ಗಂಟೆಯಿಂದ ಇಡೀ ರಾತ್ರಿ ನಾರಾವಿಯ ಭಾರತೀಯ ಜೈನ್ಮಿಲನ್ ಆಶ್ರಯದಲ್ಲಿ ಜಿನಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕಕರು ತಿಳಿಸಿದ್ದಾರೆ. ಮಾನಸಿ ಮಹಿಳಾ ಸಂಘ ಉದ್ಘಾಟನೆ: ಸಂಜೆ 5 ಗಂಟೆಗೆ ಮಾನಸಿ ಮಹಿಳಾ ಸಂಘವನ್ನು ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಉದ್ಘಾಟಿಸುವರು. ಬಿ. ನಿರಂಜನ ಅಜ್ರಿ ರಾಮೆರಗುತ್ತು ಅಧ್ಯಕ್ಷತೆ ವಹಿಸುವರು. ಮೂಡಬಿದ್ರೆ ನೋಟರಿ ವಕೀಲರಾದ ಶ್ವೇತಾ ಜೈನ್ ಶುಭಾಶಂಸನೆ ಮಾಡುವರು.