"ಮಾನವೀಯ ಮೌಲ್ಯಗಳು ಪಸರಿಸಬೇಕು : ಅನಿತಾ ಸುರೇಂದ್ರ ಕುಮಾರ್"
ಬೆಂಗಳೂರು: ಮಾನವನಲ್ಲಿರುವ ಮಾನವೀಯ ಮೌಲ್ಯಗಳು ನಿಂತ ನೀರಾಗದೆ ಸದಾ ಹರಿಯುವ ನೀರಿನಂತೆ ಪಸರಿಸಬೇಕು ಇದರಿಂದ ಜನ ಮಾನವೀಯ ಮೌಲ್ಯಗಳು ರೂಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು. ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂದಿರದಲ್ಲಿ ನಡೆದ ಬೆಂಗಳೂರು ವಿಭಾಗೀಯ ಹೊಂಗಸಂದ್ರದ ಶ್ರೀ ಶಾಂತಿನಾಥ ಜೈನ್ ಮಿಲನ್ , ವಿಲ್ಸನ್ ಗಾರ್ಡನ್ ರತ್ನತ್ರೆಯ ಜೈನ್ ಮಿಲನ್ ಹಾಗೂ ಬನಶಂಕರಿ ಜೈನ್ ಮಿಲನ್ ಗಳ ಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು.
ಧಾರ್ಮಿಕವಾಗಿ ನಾವು ಹಿಂದೆ ಬಿದ್ದಿಲ್ಲ, ಇಂದು ಕರ್ಮ ಸಿದ್ದಾಂತದಿಂದ ಎಲ್ಲರೂ ಸೇರಿದ್ದೇವೆ ನಮ್ಮಲ್ಲಿರುವ ಸಿದ್ಧಾಂತ ತತ್ವ ನೀತಿಗಳು ಮಾನವೀಯ ಮೌಲ್ಯಗಳು ಇತರರಿಗೆ ತಿಳಿಯಬೇಕಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಂಚಕಲ್ಯಾಣಗಳಲ್ಲಿ ಜಿನ ಭಜನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ತಿರಸ್ಕರಕೊಂಡಿದ್ದ ಜಿನಭಜನೆಗೆ ಇಂದು ಹೆಚ್ಚಿನ ಬೇಡಿಕೆ ಬಂದಿದೆ , ಉತ್ತಮ ಗುಣಗಳನ್ನು ಪಸರಿಸಿದಾಗ ಸಮಾಜದಲ್ಲಿ ಉತ್ತಮ ಕರ್ಮಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಾವು ಮಾಡುವ ಕೆಲಸ ಶಾಶ್ವತವಾಗಿರಬೇಕು, ಸಮಾಜದ ಋಣ ತೀರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಸಹಕಾರ್ಯದರ್ಶಿಗಳಾದ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ, ಮನಸ್ಸನ್ನು ನಿಗ್ರಹಿಸಲು ಧ್ಯಾನ ,ಯೋಗ ಅಗತ್ಯ. ಜೈನ ತತ್ವ ,ವಿದ್ಯೆಗಳು, ಕನ್ನಡದಲ್ಲಿ ಅನುವಾದವಾಗಿವೆ. ಧರ್ಮ ಬದುಕುವ ರೀತಿ ,ಇದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು. ಅರ್ದ್ಯ ಧ್ಯಾನ , ರೋದ್ರ ಧ್ಯಾನ, ಧರ್ಮ ಧ್ಯಾನ, ಶುಕ್ಲ ಧ್ಯಾನ, ಇವು ಸೌಖ್ಯ ವಾಗಿದ್ದರೆ ಜೀವನದ ಪ್ರಸಂಗಗಳು ದುಃಖಕ್ಕೆ ದೂಡುತ್ತವೆ ,ಇಷ್ಟ -ಅನಿಷ್ಟಗಳನ್ನು ಮೀರಿ ಸಲ್ಲಬೇಕು ಎಂದರು. ಮಾನಸಿಕವಾಗಿ ಯಾವುದನ್ನು ಚಿಂತಿಸಬಾರದು ಎಂದವರು, ಹೆಚ್ಚು ಯೋಚನೆ ಮಾಡಬಾರದು. ಅನುಮಾನಾಸ್ಪದವಾಗಿ ಚಿಂತಿಸಬಾರದು ಎಂದರು,
ಯಾವುದೇ ಕಾರ್ಯದಲ್ಲಿ ಚಿಂತನೆಗಳ ಅಗತ್ಯವಿಲ್ಲ, ನಿಧಾನವು ಇರಬಾರದು, ಮನಸ್ಸಿನಲ್ಲಿ ಯಾವುದೇ ಆಸೆ ಆಕಾಂಕ್ಷೆಗಳಿರಬಾರದು ಎಂದರು. ನಾವು ಹೆಚ್ಚು ಪ್ರೀತಿ ಮಾಡುವವರೇ ನಮಗೆ ಕಷ್ಟ ನೀಡುತ್ತಾರೆ, ಅತಿ ಪ್ರೀತಿಸಲ್ಲದು ಎಂದರು. ಕ್ರೂರ -ಕ್ರೌರ್ಯ ಭಾವನೆ ಹಿಂಸಾತ್ಮಕವಾದದ್ದು ಇದನ್ನು ನೋಡಿ ಕೆಲ ಜನ ಸಂತೋಷ ಪಡುತ್ತಾರೆ ,ನಾಲಿಗೆ ರುಚಿಗೆ ಪ್ರಾಣಿಗೆ ಹಿಂಸೆ ನೀಡಿ ಸಂತಸ ಅನುಭವಿಸುವವರು ಇದ್ದಾರೆ ಎಂದರು. ಕಳ್ಳತನದಿಂದ ಆನಂದ ಪಡುವವರಿದ್ದಾರೆ ಎಲ್ಲವೂ ಇದ್ದರೂ ಕಳ್ಳತನವನ್ನು ಹವ್ಯಾಸ ಮಾಡಿಕೊಂಡಿರುವವರು ಇದ್ದಾರೆ ,ಕೆಲ ಜನ ವಸ್ತುಗಳನ್ನು ಸಂಗ್ರಹಿಸಿ ಇಡುತ್ತಾರೆ ಬೇಡ ಎಂದರು ಖರೀದಿಸಿ ಸಂಗ್ರಹಿಸುತ್ತಾರೆ ಇದನ್ನು ಅನುಭವಿಸಲು ಸಮಯವಿರುವುದಿಲ್ಲ ಇದರಿಂದ ದುಶ್ಚಟಗಳಿಗೆ ಬಲಿಯಾಗಲಿದ್ದಾರೆ ಎಂದರು. ಎಲ್ಲಾ ಕಷ್ಟ ಮತ್ತು ನಷ್ಟಗಳ ನಿವಾರಣೆಗೆ ಧರ್ಮಧ್ಯಾನ ಅಗತ್ಯ ಎಂದರು. ಕೆಲ ಜನ ಆಟ, ಪಾಠ, ವಿನೋದ, ನೋಟ ಗಳಲ್ಲಿ ಕಾಲ ಕಳೆಯುತ್ತಾರೆ ,ವ್ಯಸನಗಳ ಮೂಲಕ ಕಾಲ ಕಳೆಯುತ್ತಾರೆ, ಕೆಲವರು ಕಲಹ ನಿದ್ರೆಗಳಿಂದ ಸಂತಸ ಪಡುತ್ತಾರೆ ಎಂದು ಅವರು, ಈ ವಿಚಾರಗಳಿಗೆ ಧರ್ಮದಲ್ಲಿ ಪರಿಹಾರವಿದೆ ಎಂದರು.
ಧರ್ಮ ಧ್ಯಾನದಿಂದ ಶಾಂತಿ ದೊರೆಯಲಿದ್ದು ಯಾವುದೇ ವಿಚಾರವನ್ನು ಅರ್ಥ ಮಾಡಿಕೊಂಡು ನಡೆದಾಗ ಸ್ವಾಧ್ಯಾಯದಿಂದ ಸಾಧ್ಯವಾಗಲಿದೆ ಇದರಿಂದ ನಮಗೆ ಉಚ್ಚಗತಿಗಳು ಪ್ರಾಪ್ತಿಯಾಗಲಿವೆ ತೀರ್ಥಂಕರರ ದಿವ್ಯ ಧ್ಯಾನದಿಂದ ಎಲ್ಲವೂ ಲಿಪಿ ಬದ್ಧವಾಗಿ ದೊರೆಯಲಿದೆ ಎಂದರು. ಕುಟುಂಬವೇ ಮೋಹದ ಜಾಲದಲ್ಲಿ ಬಿದ್ದರೆ ಇಂತಹ ಅನಾಹುತಗಳ ಬಗ್ಗೆ ಚಿಂತನೆ ಅಗತ್ಯ ರಾಗ ದ್ವೇಷ ತರವಲ್ಲ ಎಂದರು. ಕಾಲ ಸಿದ್ದಾಂತ ಕರ್ಮ ಪ್ರಕೃತಿಗಳ ಬಗ್ಗೆ ತಿಳಿದಾಗ ನಿಜವಾದ ಜ್ಞಾನಿಯಾಗಲು ಸಾಧ್ಯ. ಶುಕ್ಲಜ್ಞಾನ ಮನಸ್ಸು ನಿರ್ಮಲವಾದಾಗ ಸಾಧ್ಯ ಇದರಿಂದ ಯಾವುದೇ ಕಷ್ಟಗಳು ಬರುವುದಿಲ್ಲ ಯೋಗಕ್ಕೆ ಇವೆಲ್ಲ ಸಹಕಾರಿಯಾಗಲಿವೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮದನ ಪಂಡಿತ್ ಮಾನವ ಮುನಿಗಳಿಗೆ ಆಹಾರ ಸ್ವಾಧ್ಯಾಯ ಮಾಡುವುದರಿಂದ ಸೌಮ್ಯ, ಶಾಂತಿ ,ಭಕ್ತಿ ಹೆಚ್ಚಾಗಲಿದೆ ಧ್ಯಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು.
ಭಾರತೀಯ ಜೈನ್ ಮಿಲನ್ ವಲಯ - 8 ರ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ಮಾತನಾಡಿ ಇಂತಹ ವೇದಿಕೆಗಳನ್ನು ಸಂಘಗಳು ಬಳಸಿಕೊಂಡು ಸಂಘಟಿತರಾಗಬಹುದು ಯಾವುದೇ ವ್ಯಕ್ತಿ ಗಟ್ಟಿಯಾಗಿ ನಿಂತಾಗ ಜೀವನ ಸಾಧ್ಯವಾಗಲಿದೆ, ಸಿರಿವಂತರಾದ ಜೈನ ಧರ್ಮೀಯರು, ಜನಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದು ಕನಿಷ್ಠ ಕುಟುಂಬಕ್ಕೆ ಮೂರು ಮಕ್ಕಳನ್ನು ಪಡೆದು ಜೈನ ಧರ್ಮ ಉಳಿಸಿ, ಬೆಳೆಸಿ, ಸಂಘಟಿತರಾಗಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಭರತೇಶ್ ಜಗ ಶೆಟ್ಟಿ ಮಾತನಾಡಿ ನಮ್ಮ ಜನಸಂಖ್ಯೆ ಕುಂಠಿತವಾಗುತ್ತಿದ್ದು ,ಮುಂದಿನ ಪೀಳಿಗೆಗೆ ಬಗ್ಗೆ ಚಿಂತಿಸಬೇಕಿದೆ. ಧರ್ಮ, ಜನಸಂಖ್ಯೆಯ ಬೆಳವಣಿಗೆ ಪ್ರತಿ ಕುಟುಂಬ ಮೂರು ಮಕ್ಕಳ ಅಗತ್ಯವಿದೆ ಎಂದರು. ಪ್ರತಿ ಮಿಲನ್ ಗಳು ಸರಿಯಾದ ಮೀಟಿಂಗ್ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಪ್ರತಿ ತಿಂಗಳು ವರದಿ ನೀಡುವಂತೆ ತಿಳಿಸಿದರು. ಪ್ರತಿ ಜೈನ್ ಮಿಲನ್ ಗೆ 25 ಜನರನ್ನು ನೇಮಿಸಿ ಹೆಚ್ಚು ಹೆಚ್ಚು ಮಿಲನ್ ಗಳನ್ನು ಪ್ರಾರಂಭಿಸುವಂತೆ ತಿಳಿಸಿದರು. ಮಿಲನ್ ನಿಂದ ಒಂದು ವರ್ಷ ಕಾರ್ಯಕ್ರಮಗಳ ಯೋಜನೆಯನ್ನ ಸಿದ್ಧಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು ,ಯಾವುದಕ್ಕೂ ಸಮಯಪ್ರಜ್ಞೆ ಅಗತ್ಯ ಎಂದರು. ಸಭೆಯ ಪ್ರಾರಂಭದಲ್ಲಿ ಧ್ಯೇಯಗೀತೆ ಆಡಬೇಕು ಎಂದು ಸಲಹೆ ನೀಡಿದರು. ಸಾಮೂಹಿಕ ದೀಪ ಪ್ರಜ್ವಲನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಜಯ್ ರವಿರಾಜ್ ಹಿಂದಿನ ಸಾಲಿನ ವರದಿ ಮಂಡಿಸಿದರು. ರಾಣಿ ಪ್ರಫುಲ್ಲ ರತ್ನತ್ರೆಯ ಜೈನ್ ಮಿಲನ ವರದಿ ಮಂಡಿಸಿದರು. ಅನಂತ ಕುಮಾರಿ ಮಕರ ಸಂಕ್ರಮಣದ ಬಗ್ಗೆ ತಿಳಿಸಿದರು. ಶ್ವೇತ ನವೀನ ರತ್ನತ್ರೆಯ ಜೈನ್ ಮಿಲನ ಬಗ್ಗೆ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಮೂರು ಜೈನ್ ಮಿಲನ್ ಸದಸ್ಯರುಗಳು ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವಗಳನ್ನು ಆಚರಿಸಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕಲಾವಿದ ಚಿತ್ತಾ. ಎಂ. ಜಿನೇಂದ್ರ, ಕೋಮಲ ಬ್ರಹ್ಮದೇವಯ್ಯ, ಡಾ.ನಾಗೇಂದ್ರ ಕುಮಾರ್, ಪ್ರೀತಮ್ ಹರ್ಷ, ಡಾ. ನವೀನ್ ಕುಮಾರ್ ಜೈನ್ ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ಆಯ್ಕೆಯಾದ ಗಣ್ಯರನ್ನು ಸನ್ಮಾನಿಸಲಾಯಿತು. ಅವನಿ ಜೈನ್ ಪ್ರಾರ್ಥಿಸಿದರು. ಸುಧ ಸುರೇಶ್ ಸ್ವಾಗತಿಸಿದರು. ಸುಖಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೇಮಾ ಸುಖಾನಂದ ಕಾರ್ಯಕ್ರಮ ನಿರೂಪಿಸಿದರು. ವಾಣಿ ಭರತ್ ವಂದಿಸಿದರು.
ವರದಿ - ಜೆ ರಂಗನಾಥ, ತುಮಕೂರು