ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ
ಕಾಗವಾಡ: ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಸಂಪತ್ತಿಗಿಂತ ಸತ್ಯ ಮುಖ್ಯ ಇಂಥಹ ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಿದಲ್ಲಿ ಸಮೃದ್ಧವಾದ ದೇಶ ನಿರ್ಮಾಣವಾಗಲು ಸಾಧ್ಯ ಅಂಥ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಅವರು ಕಾಗವಾಡ ತಾಲೂಕಿನ ಸುಕ್ಷೇತ್ರ ಉಗಾರ ಬುದ್ರುಕ್ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ, ಭೋಜನ ಶಾಲೆ, ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಭಾಷೆಯ ಶಿಕ್ಷಣ ಕೊಡಿಸಿದರೂ ಕೂಡ ಜೈನ ಧರ್ಮದ ಆಚಾರ, ವಿಚಾರಗಳನ್ನು ಪ್ರತಿದಿನ ಮಕ್ಕಳಿಗೆ ಬೋದಿಸುವುದರ ಜೊತೆಗೆ ತಾವೂ ಕೂಡ ಅಹಿಂಸಾ ಪರಮೋಧರ್ಮದ ತತ್ವಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ತಾವೆಲ್ಲರು ಭಕ್ತಿ ಮಾರ್ಗದಲ್ಲಿ ನಡೆಯಿರಿ, ಆ ತಾಯಿ ಪದ್ಮಾವತಿ ನಿಮಗೆ ಆಶೀರ್ವದಿಸುತ್ತಾಳೆ. ಯಾರ ಬಳಿ ಭಕ್ತಿ ಇದೇಯೋ ಅಲ್ಲಿ ಶಕ್ತಿ ಇದೆ ಎಂದರು.
ಪರಮಪೂಜ್ಯ ಜಗದ್ಗುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯಮಹಾಸ್ವಾಮಿಗಳು ಮಾತನಾಡುತ್ತ ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಯುಕ್ತಿ, ಸಂಪಾದಿಸಿದರೆ ಪದ್ಮಾವತಿ ದೇವಿ ತಮಗೆ ಖಂಡಿತವಾಗಿಯೂ ಒಲಿದು ತಮಗೆ ಬಂದಂತಾ ಕಷ್ಟಗಳನ್ನು ದೂರವಾಡುವ ಶಕ್ತಿ ಆ ತಾಯಿಗಿದೆ ಎಂದರು. ರಾಜ್ಯಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಹೊಂದಿರುವ ಉಗಾರ ಶ್ರೀ ಪದ್ಮಾವತಿ ದೇವಿಯ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಇಲ್ಲಿ ಬಂದು ಹೋಗುವ ಶ್ರಾವಕ,ಶ್ರಾವಕಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಾತ್ರಿ ನಿವಾಸ, ಭವನ ನಿರ್ಮಿಸಿರುವ ಧರ್ಮದರ್ಶಿ ಶೀತಲಗೌಡ ಪಾಟೀಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಸೌಂದಾಮ ಹುಮಜಾ ಮಠಗಳ ವಾತಾವರಣ ಈಗ ಉಗಾರ ಪದ್ಮಾವತಿ ಮಂದಿರದಲ್ಲಿ ನಿರ್ಮಾಣವಾಗಿದೆ. ಧಾರ್ಮಿಕ ಕಾರ್ಯದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ಕೆ.ಎ ವನಜೋಳ ಅವರ ಹಾಗೆ ಧರ್ಮ ಕಾರ್ಯದಲ್ಲಿ ಕೈ ಜೋಡಿಸಬೇಕಾಗುತ್ತದೆ. ನಾನು ಮತ್ತು ಶಾಸಕ ಅಭಯ ಪಾಟೀಲರು ಕೂಡ ಧರ್ಮದ ಕೆಲಸದಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ದೇವಸ್ಥಾನದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ವಿವರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮುಗೆಣ್ಣವರ, ಮೋಹನರಾವ್ ಶಹಾ, ಸಂಜಯ ಪಾಟೀಲ, ಮಹಾವೀರ ನಿಲಜಗಿ, ಡಾ.ಮಹಾವೀರ ದಾನಿಗೊಂಡ, ಬಾಹುಬಲಿ ನಾಗನೂರಿ, ಸುನೀಲ ಪಾಟೀಲ, ಮಹಾವೀರ ಕಾತ್ತಾಳೆ, ಸಂಜಯ ನಾಡಗೌಡ, ಅಭಯಕುಮಾರ ಅಕಿವಾಟೆ, ಅಶೋಕ ಚೌಗುಲೆ, ಕಲ್ಲಪ್ಪ ವನಜೋಳ, ಎಮ್.ಎಚ್.ನಂದಗಾಂವ, ಸಂಜಯ ಕುಚನೂರೆ, ಮಹೇಂದ್ರ ಖೇಮಲಾಪೂರೆ, ಡಾ.ನೀರಜಾ ನಾಗೇಂದ್ರಕುಮಾರ, ಬಮ್ಮಣ್ಣ ಚೌಗಲೆ, ವರ್ಧಮಾನ ಕೋರಿ, ಪ್ರದೀಪ ಚಿಂಚವಾಡೆ, ಆದಿನಾಥ ವಸವಾಡೆ ಉಪಸ್ಥಿತರಿದ್ದರು. ಈ ವೇಳೆ ಮಹಾದಾನಿಗಳನ್ನು ಸನ್ಮಾನಿಸಲಾಯಿತು.
ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಜ್ರಕುಮಾರ ಮಗದುಮ್ ಸ್ವಾಗತಿಸಿ ವಂದಿಸಿದರು.