ಗದಗ:- ಶ್ರೀ ಶಾಂತಿನಾಥ ವಿಧಾನ
ಜೈನ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಮತ್ತು ಕರ್ಮಗಳ ವಿನಾಶಕ್ಕೆ ಅತ್ಯಂತ ಮಹತ್ವದ ಸಾಧನಗಳಾಗಿದ್ದು, ‘ಶಾಂತಿನಾಥ ವಿಧಾನ’ವು ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ ವಿದಿತಸಾಗರ ಮಹಾರಾಜರು ಉಪದೇಶಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಜೈನ ಪರಂಪರೆಯಲ್ಲಿ 16ನೆಯ ತೀರ್ಥಂಕರ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ.
ಈ ವಿಧಾನವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯಗಳು ದೂರವಾಗಿ ಇಡೀ ವಿಶ್ವದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಎದುರಾಗುವ ಕಷ್ಟಗಳು, ವಿಘ್ನಗಳು ಮತ್ತು ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗುತ್ತವೆ. ಈ ವಿಧಿಯಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ, ಅರ್ಘ್ಯ ಎಂಬ ಅಷ್ಟದ್ರವ್ಯಗಳನ್ನು ಮಂತ್ರಘೋಷಗಳೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಸಮರ್ಪಿಸಲಾಗುತ್ತದೆ. ಈ ವಿಧಾನದಲ್ಲಿ ಭಾಗಿಯಾಗಿರುವ ತಾವೆಲ್ಲರೂ ಪುಣ್ಯಶಾಲಿಗಳಾಗಿದ್ದು, ಈ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಶ್ರಾವಕರು ನಗರದಲ್ಲಿ ಬಸದಿ, ಸಭಾಭವನ ನಿರ್ಮಿಸಲು ಉದಾರವಾಗಿ ಸಹಾಯ-ಸಹಕಾರ ನೀಡಬೇಕೆಂದು ಕೋರಿದರು.
ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗದಗ ಜಿಲ್ಲೆಯ ಪ್ರದೇಶದಲ್ಲಿ 7ನೆಯ
ಶತಮಾನದಿಂದಲೂ ಅನೇಕ ಜೈನ ಮುನಿಗಳು, ಆರ್ಯಿಕೆಯರು ವಿಹಾರ ಕೈಗೊಂಡು ಧರ್ಮಪ್ರಭಾವನೆ ಮೂಲಕ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, ಆ ಪರಂಪರೆ ಮುನಿಶ್ರೀ ವಿದಿತಸಾಗರ ಮಹಾರಾಜರಿಂದಲೂ ಮುಂದುವರೆದಿರುವುದು ಇಲ್ಲಿಯ ಜೈನ ಸಮಾಜದ ಸೌಭಾಗ್ಯವಾಗಿದೆ ಎಂದು ಹೇಳಿದರು.
ವಿಧಾನದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಟಿವಿ-9 ವರದಿಗಾರ ಸಂಜಯ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ
ತುಕೋಳ, ಯಶವಂತ ಸಿದ್ದಣ್ಣವರ, ಸುಭಾಸ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವಾಯ್. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಹಿರಿಯರು, ಶ್ರಾವಕ- ಶ್ರಾವಿಕೆಯರು ಭಾಗವಹಿಸಿ ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು.
ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಮುನಿಶ್ರೀ ಅವರು ಗದಗ ನಗರಕ್ಕೆ ಆಗಮಿಸಿ ಧರ್ಮಪ್ರಭಾವನೆ ಕೈಗೊಂಡು ಶಾಂತಿನಾಥ ವಿಧಾನ ಆಚರಣೆಗೆ ಮಾರ್ಗದರ್ಶನದೊಂದಿಗೆ ಸಾನ್ನಿಧ್ಯ ವಹಿಸಿರುವುದು ಸದಾಕಾಲ ಸ್ಮರಣೀಯವಾಗಿದ್ದು, ಎಚ್.ಕೆ. ಪಾಟೀಲ ಅವರು ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಮತ್ತು ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಜಿಲ್ಲೆಯ ಜೈನ ಸಮಾಜಕ್ಕೆ ಭರವಸೆ ನೀಡಿದ್ದಾರೆ. ಅವರ ಸಹಾಯ-ಸಹಕಾರದಿಂದ ನಗರದಲ್ಲಿ ಬಸದಿ ನಿರ್ಮಿಸಿ ಲೋಕಕಲ್ಯಾಣ ಚಟುವಟಿಕೆಗಳನ್ನು ಸಾಂಗವಾಗಿ ಮುಂದುವರೆಸಲಾಗುವುದೆಂದು ಹೇಳಿದರು.
ಡಾ| ಅಪ್ಪಣ್ಣ ಹಂಜೆರವರು ಸ್ವಾಗತಿಸಿದರು. ಪ್ರಕಾಶ ಮುತ್ತಿನ ವಂದಾರ್ಪಣೆಗೈದರು. ಶಾಂತಿನಾಥ ತೀರ್ಥಂಕರರಿಗೆ ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.