ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ
ಪ್ರಾಚೀನ ಜೈನ ಕ್ಷೇತ್ರ ಹಾಗೂ ಅಮೂಲ್ಯವಾದ ಪಚ್ಚೆ ಪಾರ್ಶನಾಥ ಸ್ವಾಮಿಯ ಮತ್ತು ಮಹಾಮಾತೆ ಪದ್ಮಾವತಿ ದೇವಿಯ ಪರಿವಾರ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಯಾಗಿರುವ ಬಸದಿಯಲ್ಲಿ ತಾ. 25-01-2026 ರಂದು ವಾರ್ಷಿಕ ಪೂಜಾ ಮಹೋತ್ಸವವು ತುಂಬಾ ವೈಭವದಿಂದ ನೆರವೇರಿತು. ಸಿಂಹನಗದ್ದೆಯ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು. ಸಾನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಜೈನ ಪರಂಪರೆಯು ರಾಷ್ಟ್ರೀಯ ಚಿನ್ನೆಗಳ ಆಯ್ಕೆಯ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿ, ನಾವು ಜೈನರು ಎಂಬದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಕರೆ ನೀಡಿದರು. ಅಲ್ಲದೆ ಪೂಜ್ಯ ಶಾಂತಿಸಾಗರರು ಹೇಳಿದ ಮಾರ್ಗದಲ್ಲಿ ಬಸದಿಯಲ್ಲಿ ಪೂಜೆಗಳನ್ನು ನಡೆಸುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಮಾತನಾಡಿ ಪೆನುಕೊಂಡ ಕ್ಷೇತ್ರದ ಜೈನ ಇತಿಹಾಸದ ಮಹತ್ವವನ್ನು ವಿವರಿಸಿ ಹೇಳಿದರು. ಅವರನ್ನು ಬಸದಿ ಟ್ರಸ್ಟ್ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೆನುಕೊಂಡ ತಾಲ್ಲೂಕಿನ ತಹಶೀಲ್ದಾರ್ ಸ್ವಾತಿರವರನ್ನು ಹಾಗೂ ಮುಖಂಡರಾದ ವೆಂಕಟೇಶ್ವರಲು ರಾವ್ ಮತ್ತು ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಅಭಿಯಂತರರಾದ ಹೆಚ್.ಡಿ. ಪಾರ್ಶ್ವನಾಥರವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಬಸದಿ ಸಮಿತಿಯ ಪದಾಧಿಕಾರಿಗಳು, ಸ್ವಾಮೀಜಿಯವರ ಸಮ್ಮುಖದಲ್ಲಿ ತಾವು ಬಸದಿ ಅಭಿವೃದ್ಧಿಗೆ ತ್ರಿಕರಣಪೂರ್ವಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಕೈಗೊಂಡರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಆರ್.ಎ. ಸುರೇಶ್ ಕುಮಾರ್ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 108 ಕಳಶಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳ ಮೂಲಕ ವಾರ್ಷಿಕೋತ್ಸವ ಪೂಜೆಯು ಎಲ್ಲರೂ ಮೆಚ್ಚುವಂತೆ ನಡೆಯಿತು. ಆಗಮಿಸಿದ್ದ ಭಕ್ತರಿಗೆ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಸಮರ್ಪಕವಾಗಿ ಏರ್ಪಡಿಸಲಾಗಿತ್ತು.
