ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ
ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಬಸದಿಗೆ ಹೋಗಿ ಅಷ್ಟದ್ರವ್ಯಗಳಿಂದ ಅಷ್ಟವಿಧಾರ್ಚನೆ ಪೂಜೆ ಮಾಡಿದಾಗ ಅಷ್ಟಕರ್ಮಗಳ ನಾಶವಾಗುತ್ತದೆ. ಸಕಲಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆಯಲ್ಲಿ ಭಾಗವಹಿಸಿ ಮಂಗಲ ಪ್ರವಚನ ನೀಡಿದರು. ದಾನ ಮತ್ತು ದೇವರ ಪೂಜೆ ಶ್ರಾವಕರ ಧರ್ಮವಾಗಿದೆ. ಗೃಹಸ್ಥರು ದಾನ, ಧರ್ಮಾದಿ ಸತ್ಕಾರ್ಯಗಳಿಂದ ಶೋಭಿಸುತ್ತಾರೆ. ದಾನದಿಂದ ದುರ್ಗತಿಯ ನಾಶವಾಗಿ ಸದ್ಗತಿ ಪ್ರಾಪ್ತವಾಗುತ್ತದೆ. ಪೂಜೆಯಲ್ಲಿ ದ್ರವ್ಯಪೂಜೆ ಮತ್ತು ಭಾವಪೂಜೆ ಎಂಬ ಎರಡು ವಿಧಗಳಿದ್ದು ದ್ರವ್ಯಪೂಜೆಯು ಭಾವಪೂಜೆಗೆ ನಾಂದಿಯಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ಮೂಲಕ ದಾನವೇ ಧರ್ಮವಾಗಿ ಧರ್ಮಸ್ಥಳದಲ್ಲಿ ನೆಲೆನಿಂತಿದೆ. ತೀರ್ಥಂಕರರು ತಮ್ಮ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಮಾಡಿದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೂಡಾ ತಮ್ಮ ಅವಿರತ ಸೇವಾಕಾಯಕ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ತೀರ್ಥಂಕರರಾಗುವ ಎಲ್ಲಾ ಯೋಗ್ಯತೆ ಹಾಗೂ ಮಾನ್ಯತೆ ಹೊಂದಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು. ಧರ್ಮಸ್ಥಳಕ್ಕೆ ಬಂದಾಗ ತವರು ಮನೆಗೆ ಬಂದ ಅನುಭವ ತಮಗಾಗಿದೆ. ಹೆಗ್ಗಡೆಯವರು ಮತ್ತು ಕುಟುಂಬದವರ ಸೇವಾವೈಖರಿ ಶ್ಲಾಘಿಸಿ ಅಭಿನಂದಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯೆಯೊಂದಿಗೆ ತಮಗೆ ದೊರೆತ ಸಂಸ್ಕಾರ, ಶಿಸ್ತು ಮತ್ತು ಮಾರ್ಗದರ್ಶನದಿಂದ ತಮ್ಮ ಇಂದಿನ ಸ್ಥಾನಕ್ಕೆ ಶೋಭೆ ತಂದಿದೆ ಎಂದರು. ಸಿದ್ಧವನ ಗುರುಕುಲದಲ್ಲಿ ತಮ್ಮ ಮುತ್ತಜ್ಜ ನೇಮಿಸಾಗರವರ್ಣೀಜಿಯವರ ಸ್ಮಾರಕವನ್ನು ನಿರ್ಮಿಸಬೇಕೆಂದು ಸ್ವಾಮೀಜಿ ಹೆಗ್ಗಡೆಯವರಿಗೆ ಸಲಹೆ ನೀಡಿದರು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪಂಚನಮಸ್ಕಾರ ಮಂತ್ರ ಪಠಣದಿಂದ ಅಪಾರ ಶಕ್ತಿ ದೊರಕಿ ನಮಗೆ ಪುಣ್ಯ ಸಂಚಯವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಂಚನಮಸ್ಕಾರ ಮಂತ್ರ ಪಠಣದ ಬಗ್ಗೆ ವಿಶೇಷ ಉಪನ್ಯಾಸ ನೀಡಿರುವುದನ್ನು ಅವರು ಧನ್ಯತೆಯಿಂದ ಸ್ಮರಿಸಿದರು. ಉಭಯ ಸ್ವಾಮೀಜಿಯವರ ಪಾದಪೂಜೆ ಮಾಡಿ, ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು. ಹೇಮಾವತಿ ವೀ. ಹೆಗ್ಗಡೆಯವರು, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್, ಸೋನಿಯಾವರ್ಮ ಉಪಸ್ಥಿತರಿದ್ದರು. ಪ್ರಥಮ ಬಾರಿ ಧರ್ಮಸ್ಥಳ ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಪೂಜ್ಯ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಬೆಳಗೊಳದ ಸ್ವಾಮೀಜಿಯವರು ಸಿದ್ಧವನ ಗುರುಕುಲಕ್ಕೂ ಭೇಟಿ ನೀಡಿದರು.