Article Image

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Article Image

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಅ. 24 ರಂದು ಶುಕ್ರವಾರ ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳು ಪೂಜ್ಯ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು. ಸಭಾಕಾರ್ಯಕ್ರಮ: ಅಪರಾಹ್ನ ನಾಲ್ಕು ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ತುಮಕೂರಿನ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು. ಹಿರಿಯ ನೌಕರರ ಸನ್ಮಾನ ಹಾಗೂ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸುವರು. ಹಬ್ಬದ ವಾತಾವರಣ: ದೀಪಾವಳಿ ಹಬ್ಬದ ಜೊತೆಗೆ ಧರ್ಮಸ್ಥಳದಲ್ಲಿ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಅಂಗವಾಗಿ ಎಲ್ಲೆಲ್ಲೂ ಸಂಭ್ರಮ- ಸಡಗರದ ವಾತಾವರಣವಿದೆ. ಬಸದಿ, ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ ಹಾಗೂ ವಸತಿಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳು ಮತ್ತು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಿದ್ದು, ಕಣ್ಮನ ಸೆಳೆಯುತ್ತಿವೆ. 1968ರ ಅಕ್ಟೋಬರ್ 24 ರಂದು ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಸಂಸ್ಥೆಗಳು, ಕೆರೆಗಳಿಗೆ ಕಾಯಕಲ್ಪ, ಉಚಿತ ಸಾಮೂಹಿಕ ವಿವಾಹ ಸಮಾರಂಭ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಆಯುರ್ವೇದಕ್ಕೆ ಪ್ರೋತ್ಸಾಹ, ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ, ರುದ್ರಭೂಮಿ ಮೊದಲಾದ ವಿನೂತನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಮೂಲಕ ಉನ್ನತ ಸೇವೆ-ಸಾಧನೆ ಮಾಡಿ ಎಲ್ಲರ ಪ್ರೀತಿ-ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಹಾಸನದ ಶ್ರೀ ಮಹಾವೀರ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ

Article Image

ಹಾಸನದ ಶ್ರೀ ಮಹಾವೀರ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ

ಹೊಂಬುಜ, ಶ್ರೀ ಜೈನ ಮಠದ ಪೀಠಾಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀಮದ್ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮಿಗಳು, ಟ್ರಸ್ಟಿನ ಗೌರವಾನ್ವಿತ ಪರಮ ಸಂರಕ್ಷಕರು ಹಾಗೂ ಅಧ್ಯಕ್ಷರು ಆಗಿರುವ ಹಾಸನದ ಶ್ರೀ ಮಹಾವೀರ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ವರ್ಷವೂ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕ ರಾಜ್ಯ ಜೈನ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿ ವೇತನಕ್ಕೋಸ್ಕರ ಅರ್ಜಿ ಆಹ್ವಾನಿಸಿದೆ. ಇದು ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ಇಂಜಿನಿಯರಿಂಗ್, ಡಿಪ್ಲೋಮೋ ಮತ್ತು ಜೈನಾಲಜಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವುದು. ಅರ್ಹ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಿಂದಿನ ಪರೀಕ್ಷೆಯಲ್ಲಿ ಗಳಿಸಿರುವ ಅಂಕಪಟ್ಟಿ ನಕಲು, ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರವೇಶ ಪತ್ರದ ನಕಲು ಹಾಗೂ ಆಧಾರ್‌ಕಾರ್ಡನ ಪ್ರತಿ ಹಾಗೂ ತಮ್ಮ ಬ್ಯಾಂಕಿನ ವಿವರದೊಂದಿಗೆ ಅರ್ಜಿಯನ್ನು P.D.F Formatನಲ್ಲಿ ಈ ಇಮೇಲ್ ವಿಳಾಸ mahaveeraeducationaltrust@gmail.com ವಾಟ್ಸಾಪ್ ನಂ-9448544333 ಗೆ ದಿನಾಂಕ 15/11/2025ರ ಒಳಗಾಗಿ ಕಳುಹಿಸುವುದು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಅಕ್ಟೋಬರ್ 24 ಶುಕ್ರವಾರ) ಇಂದು ಮತ್ತು 25 ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ರವರೆಗೆ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ| ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್, ಡಾ| ದೇವೇಂದ್ರ ಕುಮಾರ್. ಪಿ, ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ ಭಾಗವಹಿಸಲಿದ್ದಾರೆ. ಮೂಳೆಗಳ ತಪಾಸಣೆ, ಸಂಧಿವಾತ ಆರೈಕೆ, ಮೊಣಕಾಲಿನ ಆಥ್ರೋಸ್ಕೋಪಿಕ್ ಲಿಗಮೆಂಟ್‌ಗಳ ತಪಾಸಣೆ, ಬೆನ್ನುಮೂಳೆ ಮತ್ತು ಕುತ್ತಿಗೆ ನೋವಿನ ತಪಾಸಣೆ, ಭುಜದ ನೋವಿನ ತಪಾಸಣೆ, ಶಸ್ತ್ರಚಿಕಿತ್ಸೆ ರಹಿತ ಮೂಳೆಯ ಆರೈಕೆ, ಮೊಣಗಂಟು ಮತ್ತು ಸೊಂಟ ನೋವಿನ ತಪಾಸಣೆ, ಪಾದ ಮತ್ತು ಮೊಣಕಾಲಿನ ತಪಾಸಣೆ, ಸ್ಪೋರ್ಟ್ಸ್ ಇಂಜುರಿ ತಪಾಸಣೆಗಳನ್ನು ನಡೆಸಲಾಗುವುದು. ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್ರೇ, ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ 10% ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, ಔಷಧದಲ್ಲಿ 10% ರಿಯಾಯಿತಿ ದೊರೆಯಲಿದೆ. ಕೀಹೋಲ್ ಸರ್ಜರಿ, ಪಾದದ ಸರ್ಜರಿ, ಎಂಡೋಸ್ಕೋಪಿ ಸರ್ಜರಿ, ಲೇಸರ್ ಸರ್ಜರಿ, ಎಲ್ಲಾ ತರಹದ ಆರ್ಥೋಸ್ಕೋಪಿಕ್ ಲಿಗ್‌ಮೆಂಟ್ ಸರ್ಜರಿ, ಸಂಪೂರ್ಣ ಮಂಡಿ ಮತ್ತು ಸೊಂಟದ ಬದಲಾವಣೆ ಮತ್ತು ಡಿಸ್ಕ್ ಸರ್ಜರಿಯಲ್ಲಿ ವಿಶೇಷ ರಿಯಾಯಿತಿ ದೊರೆಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು 7760397878 ಅಥವಾ 8073349216 ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.

ಮೈಸೂರು: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರ ಭೇಟಿ

Article Image

ಮೈಸೂರು: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರ ಭೇಟಿ

ಮೈಸೂರು, ಅ.10: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಬಸದಿಗಳ ಸಂರಕ್ಷಣೆಯ ಬಗ್ಗೆ ವಿವರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಆಯುಕ್ತರು ಬಸದಿಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ಮಾಡುವುದಿಲ್ಲ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಒಂದೆರಡು ದಿನದಲ್ಲಿ ಲಿಖಿತವಾಗಿ ಉತ್ತರ ನೀಡುವುದಾಗಿ ಭರವಸೆ ನೀಡಿದರು. ಎಲ್ಲಾ ಬಸದಿಗಳನ್ನು ಸಂರಕ್ಷಣೆ ಮಾಡಲು ಇಲಾಖೆ ಒತ್ತು ನೀಡಲಿದೆ ಎಂಬುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಕೆ ಜಯಕೀರ್ತಿ ಜೈನ್, ವಿಜಯಕುಮಾರ್. H, ಸುರೇಂದ್ರ ಕುಮಾರ್ ಜೈನ್, ಅಜಿತ್ ಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು

ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ

Article Image

ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ

ಭಕ್ತಾಮರವಾಲೆ ಬಾಬಾ ಖ್ಯಾತಿಯ ಪರಮಪೂಜ್ಯ ಮುನಿಶ್ರೀ ಪ್ರಣಾಮಸಾಗರ ಮಹಾರಾಜರ ಕರೆಯ ಮೇರೆಗೆ ದೇಶದ ಬಹುಪಾಲು ಜಿನಮಂದಿರಗಳಲ್ಲಿ ಜೈನ ಜಗತ್ತಿನ ಜನಪ್ರಿಯ ಸ್ತೋತ್ರ ಭಕ್ತಾಮರ ಏಕಕಾಲಕ್ಕೆ ಗುಂಜಾಯಮಾನಗೊಳ್ಳುವ ಮೂಲಕ ಸುಖ ಶಾಂತಿ ನೆಮ್ಮದಿ ಸಂತೋಷಗಳ ಹಿತಾನುಭವ ನೀಡಿತು. ವಿಶ್ವಶಾಂತಿಯ ಭಾವನೆಯೊಂದಿಗೆ "ಭಕ್ತಾಮರ ಉತ್ಸವ " ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಿನಿಂದ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಶ್ರಾವಕ ಶ್ರಾವಕಿಯರು ಸಂಭ್ರಮದಿಂದ ಪಾಲ್ಗೊಂಡರು. ಹುಬ್ಬಳ್ಳಿಯ ಎಲ್ಲ ಬಸದಿಗಳಲ್ಲೂ ಭಕ್ತಾಮರ ಉತ್ಸವ ವರ್ಣರಂಜಿತವಾಗಿ ನಡೆಯಿತು. ನಗರದ ವಿವಿಧ ಮಹಿಳಾ ಸಮಾಜಗಳ ನೇತೃತ್ವದಲ್ಲಿ ವಿವಿಧ ಬಸದಿಗಳಲ್ಲಿ ವೈವಿಧ್ಯಮಯ ಅಲಂಕಾರ ಸಹಿತ ಭಕ್ತಾಮರ ಪಾಠ ನಡೆಯಿತು. ಭಕ್ತಾಮರ ನಾಯಕ ಭಗವಾನ್ ಆದಿನಾಥರೇ ಮೂಲನಾಯಕರಾಗಿರುವ, ಭಿತ್ತಿಗಳಲ್ಲಿ ಭಕ್ತಾಮರ ಚಿತ್ತಾರವನ್ನು ಹೊಂದಿರುವ ಭಗವಾನ್ ಶ್ರೀ ಆದಿನಾಥ ಬಸದಿ, ಭಗವಾನ್ ಶ್ರೀ ಶಾಂತಿನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಅನಂತನಾಥಬಸದಿ, ಭಗವಾನ್ ಶ್ರೀ ಪಾರ್ಶ್ಶ್ವನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಆದಿನಾಥರ ಸಮವಸರಣವನ್ನೇ ಹೊಂದಿರುವ ತ್ರಿಕೂಟ ಬಸದಿಗಳಲ್ಲಿ ನಡೆದ ಸಾಮೂಹಿಕ ಭಕ್ತಾಮರ ಪಾಠ ನೆರೆದ ಜನರಿಗೆ ವಿಶಿಷ್ಟ, ಅನುಪಮ ಆನಂದವನ್ನು ನೀಡಿತು.. ಪ್ರತಿ ಒಂದು ಶ್ಲೋಕ ಪಾಠದ ನಂತರ ದೀಪ ಬೆಳಗಿ ಭಗವಂತನ ಸನ್ನಿಧಿಗೆ ಅರ್ಪಿಸಿ ಭಕ್ತಿ ಮಾಡಲಾಯಿತು. ದೀಪಾವಳಿಗೆ ಮುನ್ನ ಒಂದು ಕಿರು ದೀಪೋತ್ಸವ ನಡೆಯಿತು. ಭಗವಾನ್ ಶ್ರೀ ಆದಿನಾಥ ಸ್ವಾಮಿ, ಆಚಾರ್ಯ ಶ್ರೀಮಾನತುಂಗರು, ಭಕ್ತಾಮರ ಸ್ತೋತ್ರ, ಭಕ್ತಾಮರವಾಲೇ ಬಾಬಾರ ಜಯಘೋಷಗಳು ಮೊಳಗಿದವು.

ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ

Article Image

ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ

ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್. ಎನ್. ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಭಾನುವಾರ ಹಮ್ಮಿಕೊಂಡಿದ್ದ 24ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು. ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ ಸೇರಿದಂತೆ ಹಲವು ಜೈನ ಸಾಹಿತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಈ ಪರಂಪರೆ ಹಾಗೆಯೇ ಮುಂದುವರಿದಿದೆ. ಸಂವಿಧಾನದಲ್ಲಿರುವ ಜಾತ್ಯಾತೀತ ತತ್ವವನ್ನು ಮೊದಲು ಸಾರಿದವನು ಜೈನ ಕವಿ ಪಂಪ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಮನುಷ್ಯ ಜಾತಿ ಒಂದೇ ಎಂದು ಸಾರಿದ್ದ ಎಂದು ಮುಕುಂದರಾಜ್ ಸ್ಮರಿಸಿದರು. 11ನೇ ಶತಮಾನಕ್ಕೂ ಮೊದಲು ಈ ನಾಡಿನ ಒಕ್ಕಲಿಗರೆಲ್ಲರೂ ಜೈನ ಸಮುದಾಯಕ್ಕೆ ಸೇರಿದ್ದರು. ಆದರೆ ಹೊಯ್ಸಳ ದೊರೆ ಜೈನ ಸಮುದಾಯ ಪರಂಪರೆಗೆ ಸೇರಿದ ಬಿಟ್ಟಿದೇವ (ವಿಷ್ಣುವರ್ಧನ) ರಾಮಾನುಜಚಾರ್ಯರಿಂದಾಗಿ ವೈಷ್ಣವ ದೀಕ್ಷೆ ಪಡೆಯುತ್ತಾನೆ. ಆತ ಮುಂದೆ ಹಲವು ಜೈನರನ್ನು ವೈಷ್ಣವ ಪರಂಪರೆಗೆ ಮತಾಂತರಿಸುತ್ತಾನೆ. ಹೀಗೆ ಮತಾಂತರರಾದವರು ಈಗ ಒಕ್ಕಲಿಗರಾಗಿದ್ದಾರೆ ಎಂದರು. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಎರಡು ಪ್ರಮುಖ ಸಾಲಿಗ್ರಾಮಗಳಿವೆ. ಒಂದು ಶಿವರಾಮ ಕಾರಂತರ ಸಾಲಿಗ್ರಾಮ ಇನ್ನೊಂದು ನಟ ರಾಜಕುಮಾರ್ ಅವರ ಪತ್ನಿ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಊರು, ಆ ಸಾಲಿಗ್ರಾಮದವರು ನಾವು. ರಾಜಕುಮಾರ ನಮ್ಮೂರಿನ ಅಳಿಯ ಎನ್ನಲು ನಮಗೆ ಹೆಮ್ಮೆ ಆಗುತ್ತಿದೆ. ಮುಂದಿನ ವರ್ಷ ಸಂಘದ ಬೆಳ್ಳಿ ಹಬ್ಬ ಆಚರಿಸಲಾಗುವುದು ಎಂದರು. ಈ ವೇಳೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರಿಗೆ ಸುಮಾ ವಂಸತ ಪ್ರಶಸ್ತಿ ಮತ್ತು ಶಿಲ್ಪ ಕಲಾವಿದ ಚಿತ್ತ ಜಿನೇಂದ್ರ ಅವರಿಗೆ ಶ್ರೇಯೋಭದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಅಧ್ಯಕ್ಷೆ ಡಾ.ನೀರಜಾ ನಾಗೇಂದ್ರಕುಮಾರ್ ಅಜಿತ್ ಮುರುಗುಂಡೆ ಹಾಗೂ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್

Article Image

ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್

ಅಶೋಕನಗರ (ಮಧ್ಯ ಪ್ರದೇಶ )- ಆತ 24ರ ಹರಯದ ಯುವಕ, ಹೆಸರು ಪಿಯುಷ್ ಜೈನ, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯನಿರತ. ತಂದೆ ತಾಯಿಗಳು ಬಹು ಕನಸು ಹೊತ್ತು ಮಗನ ಭವಿಷ್ಯ ಉಜ್ವಲವಾಗಲಿ ಎಂದು ಆತನನ್ನು ಈ ಹಂತಕ್ಕೆ ಬೆಳೆಸಿದ್ದರು. ಮಗನಿಗೆ ಮದುವೆ ಮಾಡುವುದು ಎಂದು ಯೋಚಿಸಿದ ತಾಯಿ ಸೀಮಾ ಜೈನ್ ಹೆಣ್ಣನ್ನು ಕೂಡ ನೋಡಿ ಮಗನಿಗೆ ತಿಳಿಸಿದ್ದರು. ಬಾಲ್ಯದಿಂದ ಧಾರ್ಮಿಕ ಪರಿಸರ, ಜಿನ ಮುನಿಗಳ ಸಂಪರ್ಕದಲ್ಲಿ ಬೆಳೆದಿದ್ದ ಪಿಯುಷ್ ಮನಸ್ಸು ವೈರಾಗ್ಯದ ಕಡೆ ಮುಖ ಮಾಡಿತ್ತು. ಮಧ್ಯಪ್ರದೇಶದ ಅಶೋಕನಗರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಶ್ರಮಣ ಶಿರೋಮಣಿ, ಮುನಿಪುಂಗವ ಸುಧಾಸಾಗರರ ಕಡೆಗೆ ಆತನ ಮನಸ್ಸು ಓಡುತ್ತಿತ್ತು. ಹೆಣ್ಣು ನೋಡಲು ಬರುವಂತೆ ತಾಯಿ ಕರೆ ಮಾಡಿದಾಗ ಮಗ ಹೇಳಿದ - ಅಮ್ಮ ನಾನು ನಿಮ್ಮ ಮಗನಾಗಿ ಇನ್ನು ಮುಂದೆ ನಿಮ್ಮ ಎದುರು ಬರಲಾರೆ, ಆದರೆ ಶ್ರಮಣ ಜೀವನದ ಪಥಿಕನಾಗಿ ನಿಮಗೆ ಕಾಣಿಸಿಕೊಳ್ಳುತ್ತೇನೆ. ಹೀಗೆ ಹೇಳಿದ ಪಿಯೂಷ್ ತನ್ನ 54 ಲಕ್ಷದ ಪ್ಯಾಕೇಜ್‌ಗೆ ವಿದಾಯ ಹೇಳಿ ನೇರವಾಗಿ ಮುನಿಗಳ ಚಾತುರ್ಮಾಸ ಸ್ಥಾನಕ್ಕೆ ತೆರಳಿ ತನಗೆ ಸನ್ಯಾಸ ಮಾರ್ಗದ ಮೊದಲ ಹೆಜ್ಜೆ ಬ್ರಹ್ಮಚರ್ಯ ವ್ರತವನ್ನು ನೀಡುವಂತೆ ನಿವೇದಿಸಿಕೊಂಡ. ಮುನಿಗಳು ಆತನನ್ನು ಪರಾಮರ್ಶೆಸಿ, ಚರ್ಚಿಸಿ ವ್ರತ ನೀಡಲು ಒಪ್ಪಿದರು. ವಿಜಯದಶಮಿಯ ಶುಭದಿನ, ಚಾತುರ್ಮಾಸ ಕಾರ್ಯಕ್ರಮಗಳಿಗಾಗಿ ಹಾಕಿದ್ದ ವಿಶಾಲ ಪೆಂಡಾಲನಲ್ಲಿ ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಪಿಯುಷನ ತಂದೆ ತಾಯಿಗಳನ್ನೂ ಕರೆಸಲಾಗಿತ್ತು. ಪಿಯುಷನಿಗೆ ಸನ್ಯಾಸ ನೀಡುವ ಬಗ್ಗೆ ಅವರ ಅನುಮತಿಯನ್ನೂ ಪಡೆಯಲಾಗಿತ್ತು. ವೇದಿಕೆಗೆ ಬರುತ್ತಿದ್ದಂತೆ ತಂದೆ ತಾಯಿಯರ ಕಣ್ಣೀರ ಕಟ್ಟೆ ಒಡೆಯಿತು. ಮಗನಿಗೆ ವಿದಾಯ ಹೇಳಬೇಕಾದ ಹೃದಯದ ತಾಪ ಅಶ್ರುವಿನ ರೂಪದಲ್ಲಿ ಧಾರೆಯಾಗಿ ಹರಿಯಿತು. ಈ ಅಶೃಧಾರೆ ಸಂಪೂರ್ಣ ಸಭೆಯನ್ನು ವ್ಯಾಪಿಸಿತು. ನೆರೆದ ಸಭಿಕರೆಲ್ಲರ ಕಣ್ಣುಗಳಿಂದ ಅಶ್ರು ಸುರಿಯುವಿಕೆಯನ್ನು ತಡೆಯಲಾಗಲಿಲ್ಲ. ತಮ್ಮ ಮನೆಯ ಮಗನನ್ನೇ ಬಿಟ್ಟುಕೊಡುತ್ತಿದ್ದೇವೆ ಎನ್ನುವ ನೋವು ಎಲ್ಲರಲ್ಲೂ ಕಾಣುತ್ತಿತ್ತು. ಸಂಪೂರ್ಣ ಪೆಂಡಾಲ್ ಸoವೇದನೆ ಮತ್ತು ಶ್ರದ್ಧೆಯಲ್ಲಿ ನೆನೆದು ಹೋಯಿತು. ಆಗ ಮುನಿ ಶ್ರೀ ಹೇಳಿದರು ಈ ಬಾಲಕನಿಗೆ ಸನ್ಯಾಸ ನೀಡುವ ಮುನ್ನ ಆತನಿಗೆ ಸಾಕಷ್ಟು ತಿಳಿಸಿ ಹೇಳಿದ್ದೇವೆ, ಚರ್ಚಿಸಿದ್ದೇವೆ, ಮೋಕ್ಷ ಮಾರ್ಗ ಸುಲಭವಲ್ಲ, ಇದು ಕತ್ತಿಯ ಅಲಗಿನ ಮೇಲೆ ನಡೆದಂತೆ ಇರುವುದು, ಎಂದೆಲ್ಲ ಹೇಳಿದರೂ ಈ ಬಾಲಕ ಹೆದರಲಿಲ್ಲ, ಹಿಂಜರಿಯಲಿಲ್ಲ, ಯಾವಾಗ ಸಂಸಾರದ ಬಂಧನಗಳು ಸಡಿಲುಗೊಳ್ಳುವವೋ ಆಗ ಈ ಜೀವ ಕಠಿಣ ಮಾರ್ಗದಲ್ಲಿ ಮುನ್ನಡೆಯುತ್ತದೆ. ಇಂದು ವಿಜಯದಶಮಿಯ ಈ ಶುಭ ದಿನ ಪಿಯುಷ್ ವೈರಾಗ್ಯ ಮಾರ್ಗವನ್ನು ಸ್ವೀಕರಿಸಿದ್ದಾನೆ, ಈತ ಸಮಗ್ರ ಸಮಾಜದ ಗೌರವವಾಗಿದ್ದಾನೆ. ಇಂದು ಮಗ ಮನೆಯಿಂದ ದೂರವಾಗುತ್ತಿದ್ದಾನೆ ಎಂದು ತಾಯಿ ಸುರಿಸುತ್ತಿರುವ ಕಣ್ಣೀರು ಮುಂದೊಂದು ದಿನ ಸಂತೋಷದ ಕಣ್ಣೀರಾಗಿ ಪರಿವರ್ತನೆಗೊಳ್ಳಲಿದೆ". ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಿಯುಷ್ ಬ್ರಹ್ಮಚಾರಿ ವ್ರತಧಾರಿಯಾಗಿ ಮುನಿ ಸಂಘ ಸೇರಿದನು. ಹಂತ ಹಂತವಾಗಿ ದಿಗಂಬರತ್ವ ಸ್ವೀಕರಿಸುವನು. ಇಲ್ಲಿಯವರೆಗೆ ಮುನಿ ಸಂಫದಲ್ಲಿ 17 ಬ್ರಹ್ಮಚಾರಿಗಳು ಇದ್ದು ಅವರಲ್ಲಿ ಡಾಕ್ಟರ್, ಇಂಜಿನಿಯರ್, ಸಿ ಎ ಮತ್ತಿತರ ಉನ್ನತ ಶಿಕ್ಷಿತರು ಇದ್ದು ಇದೀಗ ಅವರೊಂದಿಗೆ ಪಿಯುಷ್ ಸೇರ್ಪಡೆಯಾಗಿದೆ. 54 ಲಕ್ಷದ ಪ್ಯಾಕೇಜ್ ಪಡೆದು ಭೋಗ ಜೀವನ ಕೈಗೆಟುಕಿತ್ತಾದರೂ ಅದನ್ನು ಬದಿಗಿಟ್ಟು ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಸಭಿಕರ ಅಶ್ರು ಧಾರೆಯ ತೇವದಲ್ಲಿ ವೈರಾಗ್ಯದ ಮಹಿಮೆ ಮತ್ತು ತ್ಯಾಗದ ಹೊಳಪು ಸೇರಿಕೊಂಡ ಸಂದೇಶವನ್ನು ಈ ಪ್ರಸಂಗ ನೀಡುತ್ತಿತ್ತು. ಜೀವನದ ನಿಜಸುಖ ತ್ಯಾಗದಲ್ಲಿದೆ, ವೈರಾಗ್ಯದಲ್ಲಿದೆ ಮತ್ತು ಈ ಮಾರ್ಗವೇ ಅಂತಿಮವಾಗಿ ಆತ್ಮನನ್ನು ಪರಮಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ ಎಂದು ಹೇಳುತ್ತಿತ್ತು. ಇದೇ ಸಂದರ್ಭದಲ್ಲಿ ವಿದ್ವಾಂಸರ ಸಮ್ಮೇಳನ ವೂ ಆಯೋಜಿತವಿದ್ದುದರಿಂದ 550 ಕ್ಕೂ ಹೆಚ್ಚು ವಿದ್ವಾಂಸರು ಕೂಡ ಪಿಯುಷ್ ವೈರಾಗ್ಯ ಪ್ರಸಂಗಕ್ಕೆ ಸಾಕ್ಷಿ ಆದರು. ಶಾಂತಿನಾಥ ಕೆ. ಹೋತಪೇಟಿ

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

Article Image

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

ಕಾರ್ಕಳ, ಅ. 3: ಹಿರಿಯ ವಕೀಲ, ಬಿಜೆಪಿ ಹಿರಿಯ ನಾಯಕರಾದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಕೆ. ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. 1968ರಲ್ಲಿ ವಕೀಲ ವೃತ್ತಿಗೆ ಪ್ರವೇಶಿಸಿದ ಅವರು, ಬಡವರು, ಕೃಷಿ ಕಾರ್ಮಿಕರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದ ಅವರು ಕಾನೂನು ಕ್ಷೇತ್ರದೊಂದಿಗೆ ಸಮಾಜಸೇವೆ, ಧಾರ್ಮಿಕ ಹಾಗೂ ಪರಿಸರಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸಮಾಜಮುಖಿ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದ ಅವರು, ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಕಾರ್ಕಳ ಬಿಜೆಪಿಯಲ್ಲಿ ಹಿರಿಯರಾಗಿ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ನಿಧನ: ವೀಣಾ ಅಭಿನಂದನ್‌ ವನಕುದುರೆ

Article Image

ನಿಧನ: ವೀಣಾ ಅಭಿನಂದನ್‌ ವನಕುದುರೆ

ಹುಬ್ಬಳ್ಳಿ: ಪ್ರಿಯದರ್ಶಿನಿ ಕಾಲೋನಿ ನಿವಾಸಿ ವೀಣಾ ಅಭಿನಂದನ್‌ ವನಕುದುರೆ (53ವ) ಇವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ಪತಿ ಅಭಿನಂದನ್‌ ವನಕುದುರೆ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ

Article Image

ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ

ಮಂಗಳೂರು: ಬಹುಜನರ ಅಪೇಕ್ಷೆಯ ಮೇರೆಗೆ ಮಂಗಳೂರು ನಗರದಲ್ಲಿ ದ್ವಿತೀಯ ಬಾರಿಗೆ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ ಮಹಾಕವಿ ರತ್ನಾಕರ ವರ್ಣಿವಿರಚಿತ ಮಹಾಕಾವ್ಯ ಭರತೇಶ ವೈಭವ ಕಾವ್ಯ ವಾಚನ - ಪ್ರವಚನ ಸಪ್ತಾಹ ಸಂಭ್ರಮವು ದಿನಾಂಕ 05-10-2025 ರಿಂದ ತಾ. 12-10-2025ರ ವರೆಗೆ ಪ್ರತಿದಿನ ಸಂಜೆ ಗಂಟೆ 6.00 ರಿಂದ 8.00ರ ವರೆಗೆ ವರ್ಧಮಾನ ಸಿದ್ದಾರ್ಥ ಭವನ, ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್‌ ಇಲ್ಲಿ ಜರುಗಲಿದೆ. ಉದ್ಘಾಟನೆ : ಶ್ರೀ ಅಭಿಷೇಕ್ ಬಿ.ಎಸ್., BE, MBA ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಮೆಸ್ಕಾಂ ಸಬ್‌ಡಿಸನ್, ಕಾವೂರು, ಮಂಗಳೂರು ಕಾವ್ಯವಾಚನ : ಶ್ರೀ ಸಾತ್ವಿಕ್ ಜೈನ್ ಎನ್., ಬಜಗೋಳಿ ಎಂ.ಸಿ.ಎ. ವಿದ್ಯಾರ್ಥಿ, ಎನ್.ಐ.ಟಿ.ಕೆ. ಪ್ರವಚನ : ಶ್ರೀ ಮುನಿರಾಜ ರೆಂಜಾಳ, ಕಾರ್ಕಳ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್

Article Image

ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಭಿಷ್ ಬಿಲ್ರ‍್ಸ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ ಅಭಿಷ್ ವಿಸ್ಟಾವನ್ನು ಅನಾವರಣಗೊಳಿಸಿದ್ದು, ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಗರದ ಹೃದಯ ಭಾಗವಾದ ಪಾಂಡೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಅಭಿಷ್ ವಿಸ್ಟಾ ಅಪಾರ್ಟ್ಮೆಂಟ್ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ. ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಈ ಪ್ರೀಮಿಯಂ ಅಪಾರ್ಟ್ಮೆಂಟ್ ತನ್ನ ವಿಶಿಷ್ಟ ಸ್ಥಳ ಮತ್ತು ಆಕರ್ಷಕ ವಿನ್ಯಾಸದಿಂದ ವಿಶಿಷ್ಟತೆ ಸಾಧಿಸಿದೆ. ಮೂರನೇ ಮಹಡಿಯ ಮೇಲ್ಭಾಗದಿಂದಲೇ ಸಮುದ್ರ ಹಾಗೂ ಪಶ್ಚಿಮ ಘಟ್ಟದಿಂದ ಹರಿದು ಬರುವ ನೇತ್ರಾವತಿ ಹಾಗೂ ಪಲ್ಗುಣಿ ನದಿಯ ಸಂಗಮದ ವಿಹಂಗಮಕ ನೋಟ ಕಣ್ಣು ಸೆಳೆಯುತ್ತದೆ. ನೈಸರ್ಗಿಕ ಸೌಂದರ್ಯದೊಂದಿಗೆ ನಗರದ ಚೈತನ್ಯವನ್ನೂ ಅನುಭವಿಸಲು ಸಾಧ್ಯವಾಗುವ ಈ ವಾಸಸ್ಥಳವು `ಗುಡ್ ಲೊಕೇಶನ್ - ರಿಚ್ ಲೊಕೇಶನ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ಪ್ರಮುಖ ಭಾಗ ಎಂದರೆ ಪ್ರೆಮ್ ಲೊಕೇಷನ್‌ನಲ್ಲಿ ಒಂದಾಗಿರುವ ಪಾಂಡೇಶ್ವರ - ಮಂಗಳಾದೇವಿ ದೇವಸ್ಥಾನ ಮುಖ್ಯ ರಸ್ತೆಯಲ್ಲೆ ಅಭಿಷ್ ವಿಸ್ಟಾ ನಿರ್ಮಾಣವಾಗುತ್ತಿದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಎರಡುವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಣಕಾಸು ಸೌಲಭ್ಯ: ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳೊಂದಿಗೆ ಅಭಿಷ್ ಬಿಲ್ರ‍್ಸ್ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದಾಗಿ ಮನೆ ಖರೀದಿಗೆ ಸುಲಭವಾಗಿ ಗ್ರಾಹಕರಿಗೆ ಹಣಕಾಸು ಸೌಲಭ್ಯ ಸಿಗಲಿದೆ. ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ದೇವಸ್ಥಾನ, ಮಸೀದಿ, ಚರ್ಚ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ಅಭಿಷ್ ವಿಸ್ಟಾದಲ್ಲಿ ಗ್ರಾಹಕರು ಮನೆ ಬುಕ್ ಮಾಡಬಹುದಾಗಿದೆ. 1660 ಚದರ ಅಡಿಯಿಂದ 1875 ಚದರ ಅಡಿ ವರೆಗಿನ ಮೂರು ಬೆಡ್ ರೂಂನ ಮನೆ ನಿರ್ಮಾಣವಾಗಲಿದೆ. ಪ್ರತಿ ಮಹಡಿಯಲ್ಲಿ ಐದು ಮನೆ ಇದ್ದು, ಗಾಳಿ ಬೆಳಕಿಗೆ ತೆರೆದುಕೊಂಡಿದೆ. ಒಟ್ಟು 17 ಮಹಡಿಯ ಈ ವಸತಿ ಸಮುಚ್ಚಯದಲ್ಲಿ ಎರಡು ಮಹಡಿ ಕಾರು ನಿಲುಗಡೆ, 14 ಮಹಡಿಯಲ್ಲಿ 70 ಮನೆಗಳು ಹಾಗೂ ಟಾಪ್ ಫ್ಲೋರ್‌ನಲ್ಲಿ ಕ್ಲಬ್ ಹೌಸ್ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಅತೀ ಎತ್ತರದ ಹಾಗೂ ಬೃಹತ್ ವಸತಿ ಸಮುಚ್ಚಯ ಇದಾಗಿದ್ದು, ಅಭಿಷ್ ವಿಸ್ಟಾ ಕೇವಲ ವಾಸಸ್ಥಳವಲ್ಲ, ಬುದ್ಧಿವಂತ ಹೂಡಿಕೆದಾರರಿಗಾಗಿ ಭವಿಷ್ಯದ ಮೌಲ್ಯವರ್ಧಿತ ಆಸ್ತಿ ಕೂಡ ಹೌದು. ಆಧುನಿಕ ಜೀವನಶೈಲಿಯ ಕನಸನ್ನು ನನಸು ಮಾಡುವ ಅಭಿಷ್ ವಿಸ್ಟಾ ಇಂದು ನಗರದ ಅತ್ಯಂತ ಆಕರ್ಷಕ ಪ್ರೀಮಿಯಂ ಅಪಾರ್ಟ್ಮೆಂಟ್ ಯೋಜನೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ. ಅಭಿಷ್‌ನ ವಿಸ್ತಾದ ವಿಶೇಷತೆ: ಪ್ರೆಮ್ ಲೊಕೇಷನ್ 17 ಮಹಡಿ – 70 ಮನೆ ಚತುಷ್ಪಥ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಚಯ ಮೂರನೇ ಮಹಡಿಯ ಬಳಿಕ ನೇತ್ರಾವತಿ, ಪಲ್ಗುಣಿ ನದಿ ಹಾಗೂ ಸಮುದ್ರದ ಸಂಗಮದ ವಿಹಂಗಮ ನೋಟ ಅತ್ಯಾಧುನಿಕ ಸೌಲಭ್ಯ, ಟ್ರಾಫಿಕ್ ಜಂಜಾಟದಿಂದ ಮುಕ್ತಿ ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಎಲ್ಲ ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸ ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್ ಚಿ‌ಲ್ಡ್ರನ್ಸ್ ಪ್ಲೇ ಏರಿಯಾ. ವಾಕಿಂಗ್‌ಗಾಗಿ ಫೂಟ್ ರಿಫ್ಲೆಕ್ಸೋಲಜಿ ಪಥ ಅತಿಥಿಗಳು ಹಾಗೂ ಮಾಲೀಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್ ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತ ಟೆರೆಸ್‌ನಲ್ಲಿ ಲ್ಯಾಂಡ್ ಸ್ಕೇಪ್.

ಸಚಿನ್ ಕುಮಾರ್ ಜೈನ್ ನಿರ್ದೇಶಕರಾಗಿ ಆಯ್ಕೆ

Article Image

ಸಚಿನ್ ಕುಮಾರ್ ಜೈನ್ ನಿರ್ದೇಶಕರಾಗಿ ಆಯ್ಕೆ

ಸವಣೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಇದರ ಪುತ್ತೂರು ಕ್ಷೇತ್ರದಿಂದ ನಿರ್ದೇಶಕರಾಗಿ ಪುಣ್ಚಪ್ಪಾಡಿ ಗ್ರಾಮದ ಸಚಿನ್ ಕುಮಾರ್ ಜೈನ್ ಅವರು 2ನೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿನ್ ಕುಮಾರ್ ಜೈನ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಪ್ರಸ್ತುತ ಪುಣ್ಚಪ್ಪಾಡಿ ಗೌರಿಗಣೇಶ ಸೇವಾಟ್ರಸ್ಟ್ ಅಧ್ಯಕ್ಷರಾಗಿ, ಮಂಗಳೂರಿನ ಧವಳ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚಿನ್ ಕುಮಾರ್ ಅವರು ಪುಣ್ಚಪಾಡಿ ಯುವರಾಜ ಕಡಂಬ ಮತ್ತು ಮಲ್ಲಿಕಾ ಯುವರಾಜ್ ಅವರ ಪುತ್ರ.

ಬೆಳಗಾವಿ: ನವರಾತ್ರಿ ಉತ್ಸವ

Article Image

ಬೆಳಗಾವಿ: ನವರಾತ್ರಿ ಉತ್ಸವ

ಬೆಳಗಾವಿ: ನಗರದ ಮಜಗಾವಿ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ್ ದಿಗಂಬರ ಜೈನ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿನಿತ್ಯ ಜಿನಭಗವಂತರ ಅಭಿಷೇಕ ಮತ್ತು ಶಾಂತಿಧಾರ ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ. ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ವಹಿಸಿ ತಮ್ಮ ಪ್ರವಚನದಲ್ಲಿ ಮಾತನಾಡುತ್ತ ವರ್ಷಕ್ಕೊಮ್ಮೆ ಬರುವ ಜೈನ ಧರ್ಮದ ಈ ಉತ್ಸವದಲ್ಲಿ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನಭಗವಂತರ ಪೂಜಾ ಅಭಿಷೇಕ ಮಾಡಬೇಕು. ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂದು ತಿಳಿಸಿದರು. 9 ದಿನಗಳ ಕಾಲ ನಡೆಯುವ ಈ ಉತ್ಸವದ ನಿಮಿತ್ಯ ಮಂದಿರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಮುನಿ ಮಹಾರಾಜರ ಸಾನಿಧ್ಯದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿದೆ, ಇದರಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಹಾಕುವದು, ವ್ಯಸನದಿಂದ ಮುಕ್ತ ಮಾಡುವುದು, ಗುರು ಹಿರಿಯರಿಗೆ ಗೌರವ ಕೊಟ್ಟು, ಭಗವಂತರ ಪೂಜೆಯ ವಿಧಿ, ವಿಧಾನಗಳನ್ನು ಕಲಿಸುವದು ಈ ಶಿಬಿರದ ಉದ್ದೇಶವಾಗಿದ್ದು ಪರಿವಾರ ಸಮೇತ ಭಾಗವಹಿಸಿ ಪುಣ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯಿಂದ ನೃತ್ಯ ಮಾಡಿ ಭಗವಂತರಿಗೆ ಪೂಜೆ ಸಲ್ಲಿಸಿದರು. ಮಜಗಾವಿ ಗ್ರಾಮದ ಪಂಚ್ ಕಮಿಟಿ ಚತುರ್ಮಾಸ್ ಕಮಿಟಿ ಎಲ್ಲ ಯುವಕ ಮಂಡಳ ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು.

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

Article Image

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಪುರಾತನ ಬಸದಿಗಳ ಮಾಹಿತಿಗಳನ್ನು ಕೇಳಿದ್ದು ಕೆಲವೊಂದು ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದ್ದು ಇದನ್ನು ನಾವು ತೀವ್ರವಾಗಿ ವಿರೋಧಿಸುತಿದ್ದೇವೆ. ಎಲ್ಲಾ ಬಸದಿಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿದ್ದು ಜೈನ ಸಮಾಜದ ಶ್ರದ್ದಾ ಕೇಂದ್ರಗಳಾಗಿದ್ದು ಪುರಾತತ್ವ ಇಲಾಖೆ ನಿರ್ಧಾರದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಎಲ್ಲ ಬಸದಿಗಳ ಸ್ಥಳ ಪರಿಶೀಲನೆ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ ಹಾಗೂ ಪುರಾತತ್ವ ಇಲಾಖೆಗೆ ಸೇರಿಸುವ ಅಗತ್ಯ ಇಲ್ಲದಿರುವ ಬಗ್ಗೆ ಪುರಾತತ್ವ ಇಲಾಖೆಗೆ ವರದಿ ನೀಡಬೇಕಾಗಿ ಮನವಿ ಮಾಡಲಾಯಿತು. ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಯಶೋಧರ್ ಬಳ್ಳಾಲ್ ಬಂಗಾಡಿ ಅರಮನೆ, ವಿಜಯಕುಮಾರ್ ಸಿದ್ದಾರ್ಥ್ ನಿಲಯ, ಯುವರಾಜ್ ಪೂವಣಿ, ಜಿನರಾಜ ಪೂವಣಿ, ಪಣಿರಾಜ್ ಜೈನ್, ಸುರಭಿ, ಅಭಿನಂದನ್, ವೀರೇಂದ್ರ ಜೈನ್, ಸುರೇಂದ್ರ ಕುಮಾರ್ ಧರ್ಮಸ್ಥಳ, ವಿನಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Article Image

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

ಬೆಳ್ತಂಗಡಿ: ಜೈನ ಬಸದಿಗಳ ಮುಖ್ಯ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲ ಆಗುವಂತೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿರುತ್ತಾರೆ. ಈ ಯೋಜನೆ ಪ್ರಥಮ ಬಾರಿಗೆ ಜಾರಿಯಾಗುತ್ತಿರುವುದು ನಮಗೆಲ್ಲ ಸಂತೋಷವನ್ನುಂಟು ಮಾಡಿದೆ. ಯೋಜನೆಯನ್ನು ಜಾರಿ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ರವರಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಝಮೀರ್ ರವರಿಗೆ ಹಾಗೂ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಶ್ರಮವಹಿಸಿದ ನಮ್ಮ ಸಮಾಜದ ಎಚ್. ನಾಭಿರಾಜ ಜೈನ್ ಹಾಗೂ ಕರ್ನಾಟಕ ಸರಕಾರಕ್ಕೆ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಚಾಲಕರಾದ ಡಾ. ಕೆ ಜಯಕೀರ್ತಿ ಜೈನ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ಅಲೈಡ್ ಹೆಲ್ತ್ ಸೈನ್ಸಸ್ ಘಟಕವು ಸೆಪ್ಟೆಂಬರ್ 24, 2025 ರಂದು 7ನೇ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಖ್ಯಾತ ಸಮಾಜ ಸೇವಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ ಅವರು ಮುಖ್ಯ ಅತಿಥಿಗಳಾಗಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವ ಅತಿಥಿಗಳಾಗಿದ್ದು ದೀಪ ಬೆಳಗಿಸುವ ಮೂಲಕ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ರಾಜಣ್ಣ ಕೊರವಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ಆರೋಗ್ಯ ವೃತ್ತಿಪರರು ಧೈರ್ಯ ಮತ್ತು ಸಹಾನುಭೂತಿಯಿಂದ ರೋಗಿಗಳ ಸೇವೆ ಮಾಡಬೇಕು. ಎಸ್.ಡಿ.ಎಂ ಸಂಸ್ಥೆಗಳು ಶ್ರೇಷ್ಠತೆಯೊಂದಿಗೆ ಮಾನವೀಯ ಸೇವೆಗಳಿಗೆ ಹೆಸರುವಾಸಿಯಾಗಿವೆ. ಹೊಸ ಹೊಸ ತಂತ್ರಜ್ಞಾನದ ಬಳಕೆಯೊಂದಿಗೆ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡಬೇಕು. ಸಮಯಪಾಲನೆ, ಶಿಸ್ತು ಮತ್ತು ಒಗಟ್ಟಿಗೆ ಆರೋಗ್ಯ ವೃತ್ತಿಪರರು ಆದ್ಯತೆ ನೀಡಬೇಕು. ಮಾನವೀಯತೆಯಿಂದ ರೋಗಿಗಳ ಸೇವೆ ಮಾಡುವುದರೊಂಗೆ ಉತ್ತಮ ಸಂವಹನವನ್ನು ಹೊಂದಬೇಕು. ಪ್ರತಿದಿನ ನಾವು ದೊಡ್ಡ ಕನಸುಗಳನ್ನು ಕಾಣತ್ತಾ, ಅದನ್ನು ಸಾಧಿಸುವ ಗುರಿ ಹೊಂದಬೇಕು. ಎಸ್.ಡಿ.ಎಂ.ನ ಅತ್ಯುತ್ತಮ ಸೌಲಭ್ಯ ಮತ್ತು ನಿಮಗೆ ಲಭ್ಯವಿರುವ ವಿಫುಲ ಅವಕಾಶವನ್ನು ಬಳಸಿಕೊಳ್ಳಬೇಕು. ಎಸ್.ಡಿ.ಎಂ. ಸಂಸ್ಥೆಗಳು ಸದೃಢ ಕಟ್ಟಡಗಳನ್ನು ನಿರ್ಮಿಸುವುದಲ್ಲದೆ ಜ್ಞಾನದ ಬದ್ರಬುನಾದಿಯನ್ನು ಸಹ ನಿರ್ಮಿಸುತ್ತದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹೊಸ ವಿದ್ಯಾರ್ಥಿಗಳಿಗೆ ಬಿಳಿ ಕೋಟುಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಕಾಲೇಜಿನ ವೈಶಿಷ್ಟ್ಯದ ಬಗ್ಗೆ ಪರಿಚಯ ಮಾಡಿಕೊಟ್ಟರು. ನೇಫ್ರಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗರಾಜ್ ನಾಯಕ್, ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿಎಸ್, ವಿಶ್ವವಿದ್ಯಾಲಯದ ತತ್ವಗಳು ಮತ್ತು ನೀತಿಗಳ ಬಗ್ಗೆ ವಿವರಿಸಿದರು. ಅಂಗ ರಚನಾಶಾಸ್ತ್ರ ವಿಭಾಗದ ಅಧ್ಯಾಪಕಿ ಡಾ. ರೋಶನಿ ಸದಾಶಿವ, ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಅಲೈಡ್ ಹೆಲ್ತ್ ಸೈನ್ಸ್ನ ಸಂಯೋಜಕಿಯವರಾದ ಡಾ. ವಿದ್ಯಾ ಎಸ್ ಪಾಟೀಲ್ ಅತಿಥಿಗಳನ್ನು ಸ್ವಾಗತಿಸಿದರು. ಉಪ ಸಂಯೋಜಕರಾದ ಡಾ. ಅನಿಲ್ ಬರ್ಗಲೆ, ಆಡಳಿತಾಧಿಕಾರಿಗಳು ಮತ್ತು ವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು. ಡಾ. ಉಪೇಂದ್ರ ಜೋಯಿಶ್ ವಂದನಾರ್ಪಣೆ ಸಲ್ಲಿಸಿದರು.

ಪ್ರತಿಷ್ಠಿತ ರತ್ನಾಕರ ಬ್ಯಾಂಕ ನಿಂದ ಮೂರು ತಲೆಮಾರಿನ ಗ್ರಾಹಕರಿಗೆ ಸನ್ಮಾನ

Article Image

ಪ್ರತಿಷ್ಠಿತ ರತ್ನಾಕರ ಬ್ಯಾಂಕ ನಿಂದ ಮೂರು ತಲೆಮಾರಿನ ಗ್ರಾಹಕರಿಗೆ ಸನ್ಮಾನ

ಮಹಾರಾಷ್ಟ್ರ ಮೂಲದ ಪ್ರತಿಷ್ಠಿತರತ್ನಾಕರ ಬ್ಯಾಂಕ್ (RBL Bank) ಇದು ಹುಬ್ಬಳ್ಳಿಯಲ್ಲಿ ತನ್ನ ಶಾಖೆಯನ್ನು ಸುಮಾರು 42 ವರ್ಷಗಳ ಹಿಂದೆ ತೆರೆಯಿತು. ಆಗಿನಿಂದ ಇಂದಿನವರೆಗೂ ಈ ಬ್ಯಾಂಕು ಬ್ಯಾಂಕಿಂಗ್ ಸೇವೆಯಲ್ಲಿ ಸಾರ್ವಜನಿಕ ವಲಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ ಈ ರತ್ನಾಕರ ಬ್ಯಾಂಕ್ ಮೂರು ತಲೆಮಾರಿನಿಂದ ಈಗಲೂ ಅತ್ಯಂತ ಕ್ರೀಯಾಶೀಲವಾಗಿ ವ್ಯವಹರಿಸುತ್ತಿರುವ ಈಗ ಮೂರನೇ ಜನರೇಷನ್ ಗ್ರಾಹಕರನ್ನು ಗುರುತಿಸಿ ಗೌರವಿಸಲು ಮುಂದಾಗಿದೆ. ಇತ್ತೀಚಿಗೆ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ಮೂರು ತಲೆಮಾರಿನ ಗ್ರಾಹಕರಲ್ಲಿ ಪ್ರಮುಖರಾದ ಹುಬ್ಬಳ್ಳಿ ಮಹಾವೀರ ಗಲ್ಲಿಯ ಪ್ರತಿಷ್ಠಿತ ಮೆ. ಎಸ್. ಬಿ. ಬೀಳಗಿ & ಸನ್ಸ್ ಹೆಸರಿನ ವ್ಯಾಪಾರಿ ಸಂಸ್ಥೆಯ ಮುಖ್ಯಸ್ಥ ಬ್ರಹ್ಮಕುಮಾರ ಎಸ್ ಬೀಳಗಿ, ಇವರ ಪುತ್ರ ಅಜಯ ಬಿ. ಬೀಳಗಿ ಹಾಗೂ ಇವರ ಪುತ್ರಿ ಪ್ರಣೀತ ಎ. ಬೀಳಗಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಯಶೀಲಾ ಬೀಳಗಿ ಮತ್ತು ಚಂದನಾ ಎ. ಬೀಳಗಿ ಇದ್ದರು. ಹಾಗೆಯೇ ಹುಬ್ಬಳ್ಳಿಯ ಇನ್ನೊರ್ವ ಗಿರಿಯ ಗ್ರಾಹಕ ಮೆ| ರಾಧಾಕೃಷ್ಣ ಇಂಡಸ್ಟ್ರೀಸ್ ಮಾಲೀಕರಾದ ಉದಯ ದಡೋತಿ ಮತ್ತು ಪ್ರತಿಭಾ ದಡೋತಿ ಮತ್ತು ಇವರ ಪುತ್ರ ಗುಣಧರ ದಡೋತಿ ಹಾಗೂ ಇವರ ಪತ್ನಿ ಶಲಾಖಾ ಇವರನ್ನು ಸನ್ಮಾನಿಸಿ ಗೌರವಿಸಿದರು ಜೊತೆಗೆ ಅತ್ಯಂತ ಹಿರಿಯ ಗ್ರಾಹಕರು ಬ್ಯಾಂಕನ ಹಿತೈಸಿಗಳೂ ಆದ 92 ವಸಂತಗಳನ್ನು ಕಂಡ ಸುರೇಂದ್ರ ನಾವಳ್ಳಿ ಇವರನ್ನೂ ಬ್ಯಾಂಕ್ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಬ್ಯಾಂಕು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ಬ್ಯಾಂಕಿನ ಹಿರಿಯ ಅಧಿಕಾರಿ ನಂಜುಂಡ ಸ್ವಾಮಿ, ಬ್ರಾಂಚ್ ಮ್ಯಾನೇಜರ್ ಚಂದ್ರಗೌಡ ಪಾಟೀಲ್, ಟಾಸ್ಕ್ ಮ್ಯಾನೇಜರ್ - ಸಂಗಪ್ಪ ಉಕ್ಕಲಿ, ಸಿಬ್ಬಂದಿ ರತ್ನಾ ಉಪಾಧ್ಯೆ ಮತ್ತು ಕಾವೇರಿ ರಾಥೋಡ್ ಇವರು ಈ ಸನ್ಮಾನ ಸಮಾರಂಭವನ್ನು ನೆರವೇರಿಸಿದರು. ವರದಿ : ಎಸ್. ಆರ್. ಮಲ್ಲಸಮುದ್ರ

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ

Article Image

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ

ಮಠದಕಣಿ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 48ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಬುಧವಾರ(24-9-2025) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಖ್ಯ ಅಥಿತಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ದ.ಕ ಜಿಲ್ಲಾ ಅಧ್ಯಕ್ಷೆ ಹಾಗೂ ವಕೀಲರಾದ ಡಾ. ಅಕ್ಷತಾ ಆದರ್ಶ್ ಮೂಡುಬಿದಿರೆ ಮತ್ತು ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ವಿಶ್ವನಾಥ್ ಶೆಟ್ಟಿಗಾರ, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೃತ್ಯ ನಿರ್ದೇಶಕರುಗಳಾದ ರೀಮಾ ಜಗನ್ನಾಥ್ ಮಾರ್ನಮಿಕಟ್ಟೆ , ವಿದುಷಿ ಪ್ರಾರ್ಥನಾ ರೋಹಿತ್ ಹೊಸಬೆಟ್ಟು , ವಂಸತ್ ಕುಮಾರ್, ಆಶಿಶ್ ಅಂಚನ್, ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಿಗೌರವಿಸಲಾಯಿತು. ಪ್ರಿಯಾ ಸುದೇಶ್ ಕುಮಾರ್ ಮಂಗಳೂರು ನಿರೂಪಿಸಿದರು. ಗೌರವ್ ಶೆಟ್ಟಿಗಾರ, ಉಷಾ ಅಶೋಕ್, ಧಾತ್ರಿ, ಕೃತಿ ಸನಿಲ್, ಪ್ರೇರಣ ಜೆ,ಅಪೇಕ್ಷಾ ಎ. ಮೊದಲಾದವರು ಸಹಕರಿಸಿದರು.

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

Article Image

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗುಂಡದ ಬಸದಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮವು ಇಂದು ಬೆಳಿಗ್ಗೆ ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಗಣ್ಯರು, ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.

ಡಾ. ಮೋಹನ ಕುಮಾರ ಶಾಸ್ತ್ರಿ ಅವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

Article Image

ಡಾ. ಮೋಹನ ಕುಮಾರ ಶಾಸ್ತ್ರಿ ಅವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

ಮೈಸೂರಿನ ಆಚಾರ್ಯ ಗುರುಕುಲದ ಕುಲ ಸಚಿವರು ಹಾಗೂ ಖ್ಯಾತ ವಾಗ್ಮಿಗಳು ಶಿಕ್ಷಣ ತಜ್ಞರು, ವಿದ್ಯಾರ್ಥಿ ಪೋಷಕ ಆಪ್ತ ಸಮಾಲೋಚಕರಾದ ವಿದ್ಯಾ ವಾಚಸ್ಪತಿ ಡಾ ಮೋಹನ ಕುಮಾರ ಶಾಸ್ತ್ರಿ ಅವರಿಗೆ ರಾಷ್ಟ್ರ ಮಟ್ಟದ ಮಹಾತ್ಮ ಗಾಂಧಿ ನ್ಯಾಷನಲ್ ಸರ್ವೀಸ್ ಪುರಸ್ಕಾರ 2025 ಲಭಿಸಿದೆ.

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

Article Image

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

ಗರ್ಡಾಡಿ ಗುಂಡದ ಬಸದಿಯ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸೆ.24 ರಂದು ಬೆಳಗ್ಗೆ 8.45ಗಂಟೆಗೆ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

Article Image

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

ಮೂಡಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿಯ ಪ್ರಯುಕ್ತ “ನವರಾತ್ರಿ - ನವಶಕ್ತಿ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಎಂದರು ಜೊತೆಗೆ ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಇಂದು.ಎಂ. ಮುಖ್ಯ ಅಧಿಕಾರಿಗಳು ಮೂಡುಬಿದರೆ ಪುರಸಭೆ ಇವರು ಪ್ರಶಂಸಿಸಿದರು. ಈ ಕಾರ್ಯಕ್ರಮವು ನವರಾತ್ರಿಯ ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ.“ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ” ಎಂದು ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಮಾತನಾಡಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಲಿ ಎಂದು ನವಶಕ್ತಿಯ ಮಹತ್ವವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವರಾಜ್ ಜೈನ್ ನವರು ತಿಳಿಸಿದರು. ಶಾರದಾದೇವಿಗೆ ಪುಷ್ಪ ಅರ್ಪಿಸಿ, ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸುಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರ ಮಾತೃಶ್ರೀ ಪದ್ಮಾವತಿ ಅಮ್ಮನವರನ್ನು ವಿಶೇಷವಾಗಿ ಗೌರವ ಪೂರ್ವಕವಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ನವಶಕ್ತಿ ಸ್ವರೂಪದ ನವನಾರಿಯರಾದ ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವರ್ಮಾ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ದೀಪಾ ಉಮೇಶ್ ರಾವ್ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇಂದಿನ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಎಕ್ಸಲೆಂಟ್ ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್, ಅಪೇಕ್ಷರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಅರ್ಚನಾ ಹಾಗೂ ಸ್ವಾತಿಯಾವರು ನೆರವೇರಿಸಿ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್ ರವರು ವಂದಿಸಿದರು.

ಶಾಂತಿನಾಥ ಪಾಯಪ್ಪ ಕುರನಿರವರು ಪಿ.ಎಸ್.‌ಐ ಆಗಿ ಆಯ್ಕೆ

Article Image

ಶಾಂತಿನಾಥ ಪಾಯಪ್ಪ ಕುರನಿರವರು ಪಿ.ಎಸ್.‌ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿಯಾಗಿರುವ ಶಾಂತಿನಾಥ ಪಾಯಪ್ಪ ಕುರನಿರವರು ಪೋಲೀಸ್‌ ಸಬ್ ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆ‌ಯ್ಕೆಯಾಗಿರುತ್ತಾರೆ. ಇವರು 132‌ ರಾಂಕ್ ಪಡೆದಿರುತ್ತಾರೆ. ಇವರು ಪಾಯಪ್ಪ ಕುರನಿ ಮತ್ತು ಸುಜಾತ ಕುರನಿ ದಂಪತಿಗಳ ಪುತ್ರ.

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

Article Image

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪರಿಪೂರ್ಣತೆಯತ ಸಾಗಬೇಕಾದರೆ ಶಿಕ್ಷಣವು ಬಹಳ ಮುಖ್ಯವಾಗಿ ಬೇಕು. ಶಿಕ್ಷಣ ಎನ್ನುವುದು ಅವರ ಬದುಕಿಗೆ ಭದ್ರತೆಯ ಅಡಿಗಲ್ಲು ಆಗಬೇಕಾದರೆ ಇಂತಹ ವಿದ್ಯಾ ಪ್ರೋತ್ಸಾಹ ಧನದ ಅವಶ್ಯಕತೆ ಖಂಡಿತ ಇದೆ. ಅಂತಹ ಕಾರ್ಯವನ್ನು ಮಾಡುತ್ತಿರುವ ಕೆಲ್ಲಗುತ್ತು ಕಿನ್ಯಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಳ್ತಂಗಡಿ ತಾಲೂಕಿನ ಸಮಸ್ತ ಶ್ರಾವಕ ಹಾಗೂ ಶ್ರಾವಿಕೆಯರ ಈ ಕಾರ್ಯವು ಮಹತ್ತರವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಿ. ಅಂತಹ ಮೌಲ್ಯವೇ ನಮ್ಮ ನಿಮ್ಮೆಲ್ಲರ ಬದುಕಿನ ಭೂಷಣವಾಗಲಿ ಎಂದು ಗೇರುಕಟ್ಟೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿರವರು ಮಾತಾಡಿದರು. ಅವರು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯ ಸಮುಚ್ಛಯದಲ್ಲಿ ಇರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ 36ನೇ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀ ಅತಿಶಯ ಕ್ಷೇತ್ರ ಹುಂಬುಜ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಶ್ರೀಮದ್ದದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಪ್ರಿಯ ಬಳ್ಳಾಲ್ ರವರು ಟ್ರಸ್ಟ್ ವತಿಯಿಂದ ನೀಡುತ್ತಿರುವ ವೈದ್ಯಕೀಯ ನೆರವಿನ ಕುರಿತು ವಿವರವಾಗಿ ಮಾಹಿತಿಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ರಾಜವರ್ಮ ರಾಜ ಬಳ್ಳಾಲ್ ಹಾಗೂ ಮಾಲಾಡಿ ಗುತ್ತು ವಜ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟ್ರಸ್ಟ ಹಾಗೂ ದಾನಿಗಳ ಸಹಕಾರದಿಂದ ಈ ವರ್ಷ 753 ವಿದ್ಯಾರ್ಥಿಗಳಿಗೆ 22,10,550 ರೂಪಾಯಿಯನ್ನು ವಿದ್ಯಾಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ಇದೇ ರೀತಿ ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿರುವುದು ನಮ್ಮ ಸಮಾಜಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ಮಾತ್ರವಲ್ಲದೆ 12 ಜನರಿಗೆ ಕ್ಯಾನ್ಸರ್ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿರುವ ಸಹಕಾರವನ್ನು ನೆನಪಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ವಕೀಲರಾದ ಶಶಿಕಿರಣ್ ಜೈನ ಸ್ವಾಗತಿಸಿ, ಧವಳ ಸಹಕರಿಸಿ, ನಿರಂಜನ್ ಜೈನ್ ಧನ್ಯವಾದ ಸಲ್ಲಿಸಿ, ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸುವುದರೊಂದಿಗೆ ಸಮಾಪನಗೊಂಡಿತು.

ರತ್ನತ್ರಯ ಜೈನ ಮಿಲನ್: ಮಾಸಿಕ ಸಭಾ ವರದಿ

Article Image

ರತ್ನತ್ರಯ ಜೈನ ಮಿಲನ್: ಮಾಸಿಕ ಸಭಾ ವರದಿ

ರತ್ನತ್ರಯ ಜೈನ ಮಿಲನ ಮಾಸಿಕ ಸಭೆಯು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಅತಿಥಿಗಳಿಂದ ದೀಪಪ್ರಜ್ವಲನೆ ಪ್ರಾರಂಭಗೊಂಡು ಮುಖ್ಯ ಅತಿಥಿಗಳಾದ ನೀರಜ ನಾಗೇಂದ್ರ ಕುಮಾರ ದಶಲಕ್ಷಣಗಳ (ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ) ಮಹತ್ವದ ಕುರಿತು ಉಪನ್ಯಾಸ ನೀಡಿದರು. ಉಷಾರಾಣಿ ‘ಉತ್ತಮ ಕ್ಷಮಾ’ ಎಂಬ ವಿಷಯದ ಕುರಿತು ವಿಶದವಾದ ಭಾಷಣ ಮಾಡಿದರು. ಸುಖಾನಂದ ಅವರು, ನಡೆಯಲಿರುವ ಜಾತಿಗಣತಿಯ ಸಂದರ್ಭದಲ್ಲಿ ‘ಜೈನ - ದಿಗಂಬರ’ ಎಂದು ನಮೂದಿಸಲು ಸದಸ್ಯರಿಗೆ ಸಲಹೆ ನೀಡಿದರು. ಅನಂತಕುಮಾರಿ ಪದ್ಮರಾಜ್ ಅವರು ಆತ್ಮೀಯ ಸ್ವಾಗತ ಭಾಷಣ ಮಾಡಿದರು. ಬಳಿಕ ಮಾಲಿನಿ ಬ್ರಹ್ಮಣ್ಣ ರತ್ನತ್ರಯ ಮಿಲನದ ಉದ್ದೇಶವನ್ನು ವಿವರಿಸಿದರು. ಪೂರ್ಣಿಮಾ ಜಯಂತ್ ಪರ್ವವಾಚನ ಮಾಡಿದರು. ಸೆಪ್ಟೆಂಬರ್ ತಿಂಗಳಲ್ಲಿ ವಿವಾಹ ವಾರ್ಷಿಕೋತ್ಸವ ಹಾಗು ಹುಟ್ಟುಹಬ್ಬ ಆಚರಿಸಿಕೊಂಡ ಸದಸ್ಯರಿಗೆ ಮಹಾವೀರ ಕುಮಾರ್ ಅವರು ಹಾರ್ದಿಕ ಶುಭಾಶಯ ಕೋರಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಳಿಕ ಸಭಾಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ಅಧ್ಯಕ್ಷರ ನುಡಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಆತಿಥ್ಯವನ್ನು ಪದ್ಮ ಸೂರಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಷಾರಾಣಿ, ನೀರಜ ನಾಗೇಂದ್ರ ಕುಮಾರ, ಪ್ರೇಮ, ಸುಖಾನಂದ ಹಾಗು ರತ್ನತ್ರಯ ಜೈನ ಮಿಲನ ಅಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಂತಕುಮಾರಿಯವರು ನಿರೂಪಿಸಿ. ಶ್ವೇತಾ ನವೀನ್ ಕುಮಾರ್ ಅವರ ವಂದನಾರ್ಪಣೆಯೊಂದಿಗೆ ಸಭೆ ಸಮಾರೋಪಗೊಂಡಿತು.

ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಗೆ : ಶಿಕ್ಷಣ ಸೇವಾ ರತ್ನ ಪ್ರಶಸ್ತಿ

Article Image

ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಗೆ : ಶಿಕ್ಷಣ ಸೇವಾ ರತ್ನ ಪ್ರಶಸ್ತಿ

ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ಇವರು ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷನ್ ಇವರ ಜನ್ಮದಿನಾಚರಣೆ ಮತ್ತು ಶಿಕ್ಷಕ ದಿನಾಚರಣೆಯ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ "ಶಿಕ್ಷಣ ಸೇವಾ ರತ್ನ" ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಇವರು ಭಾಜನರಾಗಿದ್ದಾರೆ. ಲಕ್ಷ್ಮಣ್ ರವರು ಕಳೆದ 35 ವರ್ಷಗಳಿಂದ ಶಿಕ್ಷಕರಾಗಿ ಅತ್ಯತ್ತಮ ಸೇವೆ ಸಲ್ಲಿಸುತ್ತಿದ್ದು ಸಹಸ್ರಾರು ಮಕ್ಕಳ ಬಾಳಲ್ಲಿ ಬೆಳಕಾಗಿದ್ದಾರೆ. ಇವರು ಮಕ್ಕಳಿಗೆ ಕೇವಲ ಅಕ್ಷರಗಳನ್ನು ಭೋದನೆ ಮಾಡಿಲ್ಲ ಅವರು ವಿದ್ಯಾರ್ಥಿಗಳಿಗೆ ಬದುಕುವ ರೀತಿಯನ್ನು ಕಲಿಸಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರು ಕಾಡ ಕಲ್ಲನ್ನು ಸುಂದರ ಮೂರ್ತಿಯನ್ನಾಗಿ ಮಾಡುವ ಶಿಲ್ಪಿಗಳಿದ್ದಹಾಗೆ ಇದು ಶಿಕ್ಷಕರಿಂದ ಮಾತ್ರ ಸಾಧ್ಯ ಈ ಕಾರಣಕ್ಕೆ ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಅಭಿಮಾನ ಇರುವದು ಸಹಜ. ಪ್ರಸ್ತುತ ಗದಗ ಜಿಲ್ಲೆ ಶಿರಹಟ್ಟಿ ತಾಲೂಕ ಲಕ್ಷ್ಮೇಶ್ವರ ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿನ ಶಾಲೆಯೊಂದರಲ್ಲಿ ಸ್ಥಳೀಯರ ಸಹಕಾರ ಸಹಾಯದಿಂದ ಸುಂದರವಾದ ಕೊಠಡಿಗಳನ್ನು ನಿರ್ಮಿಸಿ ಅದರ ಆವರಣದಲ್ಲಿ ಕೈದೋಟ ಹೂವಿನ ಗಿಡಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿದ್ದಾರೆ. ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಪ್ರೇಮ, ಸಹಬಾಳ್ವೆ ಸಮಾನತೆಯ ತಿಳುವಳಿಕೆ ನೀಡಿ ಮಕ್ಕಳ ಮನದಲ್ಲಿ ಹೆಮ್ಮೆಯ ಶಿಕ್ಷಕರಾಗಿ ರುಪುಗೊಂಡಿದ್ದಾರೆ. ಇವರ ಅತ್ಯುತ್ತಮ ಸೇವೆಯನ್ನು ಗಮನಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಸಕ್ತ ಸಾಲಿನಲ್ಲಿ "ಶಿಕ್ಷಣ ಸೇವಾ ರತ್ನ ಪ್ರಶಸ್ತಿ" ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ದಿನಾಂಕ 24-9-2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 3-30 ಕ್ಕೆ ಜರುಗಲಿದ್ದು ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು, ಮಂತ್ರಿಗಳು ಶಾಸಕರು, ಸಂಸದರು ಗಣ್ಯರು ಭಾಗವಹಿಸಲಿದ್ದಾರೆ. ತನ್ನಿಮಿತ್ಯ ಇವರ ಸಂಕ್ಷಿಪ್ತ ಪರಿಚಯ : ದಿನಾಂಕ: 22-05-1966 ರಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದಲ್ಲಿ ರಾಮಣ್ಣ ಮತ್ತು ಸಾವಿತ್ರಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. (ಜೈನ ಸಮಾಜದ ಗಣ್ಯರೂ, ಹಿರಿಯ ಬರಹಗಾರರು ಸಾಮಾಜಿಕ ಕಾರ್ಯಕರ್ತರು ಆದ ಶ್ರೀ ಶಾಂತರಾಜ ಮಲ್ಲಸಮುದ್ರ ಇವರು ಇವರ ಹಿರಿಯ ಸಹೋದರ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಮಾಧ್ಯಮಿಕ ಶಿಕ್ಷಣ, ಕಾಲೇಜ್ ಶಿಕ್ಷಣ ಹಾಗೂ ಶಿಕ್ಷಕ ತರಬೇತಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ್ ಪಟ್ಟಣದಲ್ಲಿ ಮುಗಿಸಿದರು. ಹಾಸನ ಜಿಲ್ಲೆ ಶ್ರವಣಬೆಳಗೊಳದ ಶ್ರೀಮಠವು ನಡೆಸುವ ಶ್ರೀ ಅಂಬಿಕಾ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಇಲ್ಲಿ 10-06-1990 ರಿಂದ 04-01-1999 ರ ವರೆಗೆ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ 1999ರಲ್ಲಿ ಹಾಸನ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿ ನಿಯುಕ್ತಿಗೊಂಡು ದಿನಾಂಕ 05.01.1999 ರಿಂದ 07-07-2000 ರವರೆಗೆ ಸ .ಹಿ. ಪ್ರಾಥಮಿಕ ಶಾಲೆ ಬಿ ಹೊನ್ನೆನಹಳ್ಳಿ ಹೋಂ.ಬಾಗೂರು. ತಾಲೂಕು ಚನ್ನರಾಯಪಟ್ಟಣ ಇಲ್ಲಿ ಸೇವೆ ನಂತರ 08.07.2000 ರಿಂದ 07.03.2003 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ ಹೊನ್ನೇನಹಳ್ಳಿ ಬೆಕ್ಕ ಹೋಬಳಿ ಕ್ಲಸ್ಟರ್ ಶ್ರವಣಬೆಳಗೊಳ ಜಿಲ್ಲಾ ಹಾಸನ ಇಲ್ಲಿಗೆ ವರ್ಗಾವಣೆ ಗೊಂಡರು. ಮುಂದೆ ಹಾಸನ ಜಿಲ್ಲೆಯಿಂದ ಗದಗ ಜಿಲ್ಲೆಗೆ ವರ್ಗಾವಣೆಗೊಂದು ದಿ. 08.03.2003 ರಿಂದ 18.06.2008 ರವರೆಗೆ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆ ಸೂರಣಗಿ ತಾಲೂಕು. ಶಿರಹಟ್ಟಿ ಜಿಲ್ಲಾ ಗದಗ ಇಲ್ಲಿ ನಂತರ 18.06.2008ರಿಂದ 03.09.2013ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆದರಹಳ್ಳಿ ತಾ. ಲಕ್ಷ್ಮೇಶ್ವರ ಜಿಲ್ಲೆ ಗದಗ ನಂತರ 04.09.2013ರಿಂದ ಇಲ್ಲಿಯವರೆಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರ ಲಕ್ಷ್ಮೇಶ್ವರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ಸೇವೆ 35 ವರ್ಷಗಳ ಸುದೀರ್ಘ ಸೇವೆಯಲ್ಲಿ ಜೀವನದುದ್ದಕ್ಕೂ ಆದರ್ಶ ಮತ್ತು ಶಿಸ್ತು ಮೈಗೂಡಿಸಿಕೊಂಡ ಇವರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ಆದರ್ಶಪ್ರಾಯರಾಗಿದ್ದಾರೆ. ಇತರ ಸಾಮಾಜಿಕ ಚಟುವಟಿಕೆಗಳು: ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಲಕ್ಷ್ಮೇಶ್ವರದಲ್ಲಿ ಐದು ವರ್ಷದಿಂದ ಪುರಾಣ ಪ್ರವಚನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಸುಮಾರು ಹತ್ತು ವರ್ಷದಿಂದ ಬಿ.ಎಲ್.ಓ. (ಬೂತ್ ಲೆವೆಲ್ ಆಫೀಸರ್) ಅಂತ ಕಂದಾಯ ಇಲಾಖೆಯ ಜೊತೆಗೆ ಅಂದರೆ ಹೊಸದಾಗಿ ಮತದಾರರನ್ನು ಮತ ಪಟ್ಟಿಗೆ ಸೇರಿಸುವುದು, ತಿದ್ದುಪಡೆ ಮಾಡುವುದು, ಬೇರೆ ಕಡೆ ವರ್ಗಾವಣೆ ಆದರೆ ವರ್ಗಾವಣೆ ಮಾಡುವುದು ಇತ್ಯಾದಿ ಶಿಕ್ಷಣ ಇಲಾಖೆಯ ಕೆಲಸದ ಜೊತೆಗೆ ಕಂದಾಯ ಇಲಾಖೆಯ ಕೆಲಸವನ್ನು ಕೂಡ ಮಾಡುವ ಮೂಲಕ ಎಲ್ಲಾ ಸರಕಾರಿ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಏತನ್ಮದ್ಯ ದಿನಾಂಕ 15.05.1995 ರಂದು ಸ್ವಗ್ರಾಮದವರೇ ಆದ ಶಿಕ್ಷಕಿ ಸಾವಿತ್ರಿ ಇವರೊಂದಿಗೆ ವಿವಾಹವಾಗಿದ್ದು ಈ ಶಿಕ್ಷಕ ದಂಪತಿಗಳು ಒಂದೇ ಜಿಲ್ಲೆ ಯಲ್ಲಿ ಕಳೆದ ಕೆಲವು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಇವರ ಸಾಧನೆಯ ಹಿಂದೆ ಇವರ ಪತ್ನಿಯ ಸಹಕಾರ ಪ್ರೋತ್ಸಾಹ ಬಹುಮಟ್ಟಿಗೆ ಕಾರಣವಾಗಿದೆ ಎನ್ನಬಹುದು. ಇವರಿಗೆ ಇಬ್ಬರು ಪುತ್ರರು ಇದ್ದು ಓರ್ವ ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಇನ್ನೊರ್ವ ವೈದ್ಯಕೀಯ ಶಿಕ್ಷಣ ಪಡೆಯಲು ಪ್ರವೇಶ ಪರೀಕ್ಷೆ ಬರುತ್ತಿದ್ದಾನೆ. ಇವರ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿ ಇನ್ನೂ ಹಲವಾರು ಪ್ರಶಸ್ತಿ ಸಮ್ಮಾನಗಳು ಸಿಗಲಿ. ಶಾಂತರಾಜ ಮಲ್ಲಸಮುದ್ರ ಲೇಖಕರು

ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ

Article Image

ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ

ಶಿವಮೊಗ್ಗ: ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವವು 22-09-2025 ರಿಂದ 02-10-2025 ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಶಕ್ತಿ ದೇವಿಗೆ ವಿವಿಧ ಅಲಂಕಾರಗಳಿಂದ ವಿಶೇಷ ಪೂಜೆ ನೆರವೇರಲಿದೆ. 22-09-2025 ಸೋಮವಾರ ಘಟಸ್ಥಾಪನೆ: ಹೂವಿನ ಅಲಂಕಾರ 23-09-2025, ಮಂಗಳವಾರ ಭೈರವಿ ಪದ್ಮಾವತಿ ದರ್ಶನ 24-09-2025, ಬುಧವಾರ ಮುತ್ತಿನ ಅಲಂಕಾರ 25-09-2025, ಗುರುವಾರ ಹಣ್ಣಿನ ಅಲಂಕಾರ 26-09-2025, ಶುಕ್ರವಾರ (ಲಕ್ಷಹೂವಿನ ಪೂಜೆ) ಸುವರ್ಣ ಅಲಂಕಾರ 27-09-2025, ಶನಿವಾರ ಸೀರೆ ಅಲಂಕಾರ 28-09-2025, ಭಾನುವಾರ ಧಾನ್ಯಗಳ ಅಲಂಕಾರ 29-09-2025 ಸೋಮವಾರ (ಸರಸ್ವತಿ ಪೂಜೆ) ನವಿಲಿನ ಅಲಂಕಾರ 30-09-2025. ಮಂಗಳವಾರ (ಜೀವದಯಾಷ್ಟಮಿ) ಬಳೆ ಅಲಂಕಾರ 01-10-2025, ಬುಧವಾರ (ಆಯುಧ ಪೂಜೆ) ಸುವರ್ಣ ಅಲಂಕಾರ 02-10-2025, ಗುರುವಾರ (ವಿಜಯದಶಮಿ) ಸುವರ್ಣ ಅಲಂಕಾರ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವದೊಂದಿಗೆ ಬನ್ನಿ ಮಂಟಪದವರೆಗೆ ಸ್ಯಾಕ್ರೋಫೋನ್, ಚಂಡೆ, ಡೊಳ್ಳುಕುಣಿತ, ಸಕಲ ಮಂಗಲವಾದ್ಯಗಳೊಂದಿಗೆ ಸಾಲಾಂಕೃತ ಶೋಭಾಯಾತ್ರೆ ನಡೆಯಲಿದೆ.

ಡಾ. ಅಜಿತಪ್ರಸಾದ ಇವರು ಪ್ರತಿಷ್ಠಿತ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ನೇಮಕ

Article Image

ಡಾ. ಅಜಿತಪ್ರಸಾದ ಇವರು ಪ್ರತಿಷ್ಠಿತ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ನೇಮಕ

ಕರ್ನಾಟಕ ವಿದ್ಯಾವರ್ಧಕ ಸಂಘವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಹಾಸಾಧಕರಿಗೆ ಗೌರವ ಉಪಾಧ್ಯಕ್ಷರನ್ನಾಗಿ ನೇಮಿಸಿ ತನ್ನ ಘನತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಇವರಲ್ಲಿ ಪ್ರಮುಖರಾದ ಡಾ. ಅಜಿತಪ್ರಸಾದ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬೆಟ್ಟದಷ್ಟು. ಜೆ.ಎಸ್.ಎಸ್. ಸಂಸ್ಥೆಯ ಮೂಲಕ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಕೊಡುವದಕ್ಕೆ ಅಪಾರವಾಗಿ ಶ್ರಮಿಸಿದ್ದಾರೆ. ಈಗಲೂ ಅದೇ ದಾರಿಯಲ್ಲಿ ಮುನ್ನಡೆದಿದ್ದಾರೆ. ನಮ್ಮ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಗೌರವಾಧ್ಯಕ್ಷರಾದ ಇವರು ಸಾಹಿತ್ಯದ ಚಟುವಟಿಕೆಗಳನ್ನು ಅಭಿವೃದ್ಧಿ ಮಾಡುವಲ್ಲಿ ಸಲಹೆ ಮಾರ್ಗದರ್ಶನ ನೀಡುತ್ತ ಪ್ರೋತ್ಸಾಹಿಸುತ್ತಿದ್ದಾರೆ. ಪ್ರಸ್ತುತ 130 ವರ್ಷಗಳ ಇತಿಹಾಸ ಹೊಂದಿದ ಕರ್ನಾಟಕದ ಹೆಮ್ಮೆಯ ಮತ್ತು ಪ್ರತಿಷ್ಠಿತ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ನೇಮಕ ಮಾಡಿ ಗೌರವಿಸಿದ್ದು ಸಮಾಜಕ್ಕೆ ಅವರ ಶಿಷ್ಯ ಬಳಗಕ್ಕೆ, ಅಭಿಮಾನಿಗಳಿಗೆ ಬಾರೀ ಸಂತೋಷವನ್ನುಂಟುಮಾಡಿದೆ. ಎಸ್. ಆರ್. ಮಲ್ಲಸಮುದ್ರ

ಮಂಜುನಾಥ ಕಡಹಟ್ಟಿರವರು ಪಿ.ಎಸ್.ಐ ಆಗಿ ಆಯ್ಕೆ

Article Image

ಮಂಜುನಾಥ ಕಡಹಟ್ಟಿರವರು ಪಿ.ಎಸ್.ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ, ರಾಯಬಾಗ್‌ ತಾಲೂಕಿನ ಯಲ್ಪರಟ್ಟಿ ನಿವಾಸಿಯಾಗಿರುವ ಮಂಜುನಾಥ ಕಡಹಟ್ಟಿರವರು ಪೋಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆಯ್ಕೆಯಾಗಿರುತ್ತಾರೆ. ಇವರು ಸುಲೋಚನ ಮತ್ತು ರಾಮಪ್ಪ ದಂಪತಿಗಳ ಪುತ್ರ.

ರೋಹಿತ್‌ ರಾಜಗೌಡ ಪಾಟೀಲರವರು ಪಿ.ಎಸ್.ಐ ಆಗಿ ಆಯ್ಕೆ

Article Image

ರೋಹಿತ್‌ ರಾಜಗೌಡ ಪಾಟೀಲರವರು ಪಿ.ಎಸ್.ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ, ರಾಯಬಾಗ ತಾಲೂಕಿನ ಮೊರಬ ಗ್ರಾಮದ ನಿವಾಸಿಯಾಗಿರುವ ರೋಹಿತ್‌ ರಾಜಗೌಡ ಪಾಟೀಲ್‌ರವರು ಪೋಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆಯ್ಕೆಯಾಗಿರುತ್ತಾರೆ. ಇವರು ರಾಜಗೌಡ ಪಾಟೀಲ ಮತ್ತು ಭಾರತಿ ರಾಜಗೌಡ ಪಾಟೀಲ ದಂಪತಿಗಳ ಪುತ್ರ.

First Previous

Showing 2 of 20 pages

Next Last