ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ
Published Date: 10-Oct-2025 Link-Copied
ಭಕ್ತಾಮರವಾಲೆ ಬಾಬಾ ಖ್ಯಾತಿಯ ಪರಮಪೂಜ್ಯ ಮುನಿಶ್ರೀ ಪ್ರಣಾಮಸಾಗರ ಮಹಾರಾಜರ ಕರೆಯ ಮೇರೆಗೆ ದೇಶದ ಬಹುಪಾಲು ಜಿನಮಂದಿರಗಳಲ್ಲಿ ಜೈನ ಜಗತ್ತಿನ ಜನಪ್ರಿಯ ಸ್ತೋತ್ರ ಭಕ್ತಾಮರ ಏಕಕಾಲಕ್ಕೆ ಗುಂಜಾಯಮಾನಗೊಳ್ಳುವ ಮೂಲಕ ಸುಖ ಶಾಂತಿ ನೆಮ್ಮದಿ ಸಂತೋಷಗಳ ಹಿತಾನುಭವ ನೀಡಿತು. ವಿಶ್ವಶಾಂತಿಯ ಭಾವನೆಯೊಂದಿಗೆ "ಭಕ್ತಾಮರ ಉತ್ಸವ " ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಿನಿಂದ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಶ್ರಾವಕ ಶ್ರಾವಕಿಯರು ಸಂಭ್ರಮದಿಂದ ಪಾಲ್ಗೊಂಡರು. ಹುಬ್ಬಳ್ಳಿಯ ಎಲ್ಲ ಬಸದಿಗಳಲ್ಲೂ ಭಕ್ತಾಮರ ಉತ್ಸವ ವರ್ಣರಂಜಿತವಾಗಿ ನಡೆಯಿತು. ನಗರದ ವಿವಿಧ ಮಹಿಳಾ ಸಮಾಜಗಳ ನೇತೃತ್ವದಲ್ಲಿ ವಿವಿಧ ಬಸದಿಗಳಲ್ಲಿ ವೈವಿಧ್ಯಮಯ ಅಲಂಕಾರ ಸಹಿತ ಭಕ್ತಾಮರ ಪಾಠ ನಡೆಯಿತು. ಭಕ್ತಾಮರ ನಾಯಕ ಭಗವಾನ್ ಆದಿನಾಥರೇ ಮೂಲನಾಯಕರಾಗಿರುವ, ಭಿತ್ತಿಗಳಲ್ಲಿ ಭಕ್ತಾಮರ ಚಿತ್ತಾರವನ್ನು ಹೊಂದಿರುವ ಭಗವಾನ್ ಶ್ರೀ ಆದಿನಾಥ ಬಸದಿ, ಭಗವಾನ್ ಶ್ರೀ ಶಾಂತಿನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಅನಂತನಾಥಬಸದಿ, ಭಗವಾನ್ ಶ್ರೀ ಪಾರ್ಶ್ಶ್ವನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಆದಿನಾಥರ ಸಮವಸರಣವನ್ನೇ ಹೊಂದಿರುವ ತ್ರಿಕೂಟ ಬಸದಿಗಳಲ್ಲಿ ನಡೆದ ಸಾಮೂಹಿಕ ಭಕ್ತಾಮರ ಪಾಠ ನೆರೆದ ಜನರಿಗೆ ವಿಶಿಷ್ಟ, ಅನುಪಮ ಆನಂದವನ್ನು ನೀಡಿತು.. ಪ್ರತಿ ಒಂದು ಶ್ಲೋಕ ಪಾಠದ ನಂತರ ದೀಪ ಬೆಳಗಿ ಭಗವಂತನ ಸನ್ನಿಧಿಗೆ ಅರ್ಪಿಸಿ ಭಕ್ತಿ ಮಾಡಲಾಯಿತು. ದೀಪಾವಳಿಗೆ ಮುನ್ನ ಒಂದು ಕಿರು ದೀಪೋತ್ಸವ ನಡೆಯಿತು. ಭಗವಾನ್ ಶ್ರೀ ಆದಿನಾಥ ಸ್ವಾಮಿ, ಆಚಾರ್ಯ ಶ್ರೀಮಾನತುಂಗರು, ಭಕ್ತಾಮರ ಸ್ತೋತ್ರ, ಭಕ್ತಾಮರವಾಲೇ ಬಾಬಾರ ಜಯಘೋಷಗಳು ಮೊಳಗಿದವು.