Article Image

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ 'ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ಪ್ರಶಸ್ತಿ

Article Image

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ 'ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ಪ್ರಶಸ್ತಿ

ಉಜಿರೆ,ದಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯ ಮತ್ತು ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ವತಿಯಿಂದ ʼಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ' ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದರು. ಪ್ರಶಸ್ತಿ ನೀಡಿದ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ಸಂಸ್ಥೆಯೂ, ಹಲವು ದಶಕಗಳಿಂದ ಶಿಕ್ಷಣ ಮತ್ತು ತತ್ಸಂಬಂಧಿ ಕ್ಷೇತ್ರಗಳ ಬೆಳವಣಿಗೆಗೆ ಪವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಶುಭಾಶಯ ತಿಳಿಸಿದರು. ಪ್ರಶಸ್ತಿಗೆ ಪಾತ್ರವಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಪ್ರಾಚಾರ್ಯರು, ಪೋಷಕರು ಹಾಗು ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿರುತ್ತಾರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ವಿಜ್ಞಾನ, ಆಯುರ್ವೇದ , ಕಾನೂನು, ತಂತ್ರಜ್ಞಾನ, ಪದವಿ, ಸ್ನಾತಕೋತ್ತರ, ಮೆಡಿಕಲ್ ಸೇರಿದಂತೆ ಸಂಸ್ಥೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಶಿಸ್ತು, ಸಂಸ್ಕಾರ, ಮೌಲ್ಯ ಹಾಗು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ. ಈಗಾಗಲೇ ನೂರಾರು ಜನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಶ್ಲಾಘಿಸಿ ಗೌರವಿಸಿದೆ. ಇದೀಗ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ವತಿಯಿಂದ ''ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ' ಪ್ರಶಸ್ತಿ ನೀಡಿ ಗೌರವಿಸಿರುವುದು ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಹೆಚ್ಚಿಸಿದೆ. ಅಕಾಡೆಮಿಕ್ ಇನ್‌ಸೈಟ್ಸ್ ಸಂಸ್ಥೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪರವಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ - ಡಾ. ಸತೀಶ್ಚಂದ್ರ ಎಸ್ ಕಾರ್ಯದರ್ಶಿಗಳು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ರಾಯಭಾರಿ ರಮೇಶ್ ಅರವಿಂದ್ ಭೇಟಿ

Article Image

ಎಕ್ಸೆಲ್ ಕಾಲೇಜಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ರಾಯಭಾರಿ ರಮೇಶ್ ಅರವಿಂದ್ ಭೇಟಿ

ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ರಾಯಭಾರಿ ರಮೇಶ್ ಅರವಿಂದ್ ಅವರನ್ನು ಬೆಳ್ತಂಗಡಿ ಶಾಖಾ ಪ್ರಬಂಧಕರಾದ ಲೋಹಿತ್ ಕುಮಾರ್ ಹಾಗೂ ಸಿಬ್ಬಂದಿ ಶಿವರಾಜ್‌ರವರು, ಎಕ್ಸೆಲ್ ಕಾಲೇಜ್‌ನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಇವರ ಸಮ್ಮುಖದಲ್ಲಿ ಹೂಗುಚ್ಛ ನೀಡಿ ಗೌರವಿಸಲಾಯಿತು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಎರಡು ದಿನಗಳ ವಾಕ್ ಮತ್ತು ಶ್ರವಣ ಚಿಕಿತ್ಸೆಯ ಕಾರ್ಯಾಗಾರ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಎರಡು ದಿನಗಳ ವಾಕ್ ಮತ್ತು ಶ್ರವಣ ಚಿಕಿತ್ಸೆಯ ಕಾರ್ಯಾಗಾರ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ವಾಕ್ ಮತ್ತು ಶ್ರವಣ ವಿಭಾಗವು ನವೆಂಬರ್ 21 ಮತ್ತು 22, 2025 ರಂದು “ಶ್ರವಣೇಂದ್ರಿಯದಿಂದ ಪ್ರಚೋದಿಸಲ್ಪಟ್ಟ ಸಾಮರ್ಥ್ಯಗಳಲ್ಲಿನ ಪ್ರವೃತ್ತಿಗಳು: ಸಂಶೋಧನೆ ಮತ್ತು ಚಿಕಿತ್ಸೆಗಳ ದೃಷ್ಟಿಕೋನಗಳ ಸೇತುವೆ” ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಮೈಸೂರಿನ ಅಖಿಲ್ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಎಂ. ಜಯರಾಮ್ ಅವರು ಮುಖ್ಯ ಅತಿಥಿಯಾಗಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವಾನ್ವಿತ ಅತಿಥಿಯಾಗಿದ್ದರು ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಣಕಾಸು ಅಧಿಕಾರಿಯಾದ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್., ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಗೌರವಿಸಿ ಮುಖ್ಯ ಅತಿಥಿಗಳಾದ ಡಾ. ಎಂ. ಜಯರಾಮ್ ಅವರನ್ನು ಗಣ್ಯರು ಸನ್ಮಾನಿಸಿದರು. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಸಂಯೋಜಕಿ ಮತ್ತು ಉಪ ಪ್ರಾಂಶುಪಾಲರಾದ ಡಾ. ವಿದ್ಯಾ ಪಾಟೀಲ್ ಅವರು ವಾಕ್ ಮತ್ತು ಶ್ರವಣ ವಿಭಾಗದ ಅಭಿವೃದ್ಧಿಯ ಕುರಿತು ವಿವರಿಸಿದರು. ಕರ್ನಾಟಕದಾದ್ಯಂತ ಸುಮಾರು 100ಕ್ಕೂ ಅಧಿಕ ವಾಕ್ ಮತ್ತು ಶ್ರವಣ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥರು ಹಾಗೂ ಸಂಘಟನಾ ಅಧ್ಯಕ್ಷರಾದ ಡಾ. ವಸೀಮ್ ಅಹ್ಮದ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಅರುಣಾ ಪ್ರಭು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿಯಾದ ಬೃಂದಾ ಎಲ್. ರಾಜ್ ವಂದನಾರ್ಪಣೆ ಸಲ್ಲಿಸಿದರು

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ

ಅಂಕಣಕಾರರಾಗಿ, ಕವಿಯಾಗಿ, ರಾಜಕಾರಣಿಯಾಗಿ, ಉದ್ಯಮಿಯಾಗಿ, ಶಿಕ್ಷಕರಾಗಿ, ವಕೀಲರಾಗಿ ಮತ್ತು ರಾಷ್ಟ್ರೀಯ ಚಿಂತಕರಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ತನ್ವೀರ್ ಅಹಮದ್ ಉಲ್ಲಾ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ “ಇಸ್ಲಾಂ ಧರ್ಮದಲ್ಲಿ ಸಮನ್ವಯತೆ” ವಿ಼ಷಯದಲ್ಲಿ ಉಪನ್ಯಾಸ ನೀಡಲಿರುವ ತನ್ವೀರ್ ಅಹಮದ್ ಉಲ್ಲಾ ಅವರು ಪಾದಯಾತ್ರೆಯ ಮೂಲಕ ಬೆಂಗಳೂರಿನಿಂದ ಆಗಮಿಸಿದ್ದರು. ಈ ಸಂದರ್ಭದಲ್ಲಿ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದ ನನಗೆ ದಾರಿಯುದ್ದಕ್ಕೂ ಧರ್ಮಸ್ಥಳ ವಿಶೇಷವಾಗಿ ಕಾಣಿಸಿತು. ನೊಂದವರ ಕಣ್ಣೀರಿನಲ್ಲಿ ಆಶಾದಾಯಕವಾಗಿ, ಪ್ರೀತಿಸುವವರ ಹೃದಯದಲ್ಲಿ ಪ್ರೀತಿಯಾಗಿ, ಓದುವ ಮಕ್ಕಳ ಪುಸ್ತಕದಲ್ಲಿ, ಮರುಅರಣ್ಯೀಕರಣದ ಮರಗಳ ಗೂಡಿನಲ್ಲಿರುವ ಹಕ್ಕಿಯ ಮರಿಗಳಲ್ಲಿ ನನಗೆ ಪೂಜ್ಯರ ಸಮಾಜ ಸೇವೆಯ ಮೂಲಕ ಧರ್ಮಸ್ಥಳ ಕಂಡಿತು. ಈ ಆಸ್ಪತ್ರೆಗೆ ಬಂದು ಇಲ್ಲಿನ ಹೈಟೆಕ್ ಸೌಲಭ್ಯವಿರುವ ಡಯಾಲಿಸಿಸ್ ಕೇಂದ್ರದಲ್ಲಿ ಸಿಗುತ್ತಿರುವ ಉಚಿತ ಡಯಾಲಿಸಿಸ್ ಸೇವೆ ನೋಡಿದಾಗ ಧರ್ಮಸ್ಥಳ ನನಗೆ ಒಂದು ಅನನ್ಯ ಕ್ಷೇತ್ರವಾಗಿ ಕಾಣಿಸಿತು. ಪೂಜ್ಯರ ಸಮಾಜ ಸೇವೆಯ ದರ್ಶನವಾಯಿತು. ಧರ್ಮಸ್ಥಳ ಎಂದರೆ ಧರ್ಮ. ಇಲ್ಲಿ ಧರ್ಮ ಪ್ರೀತಿಯಲ್ಲಿದೆ. ತ್ಯಾಗದಲ್ಲಿದೆ. ಸೇವೆಯ ರೂಪದಲ್ಲಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯ ಸಿಬ್ಬಂದಿಗಳು ಧನ್ಯರು. ಭಾವೈಕ್ಯದ ಭಾರತ, ಪ್ರೀತಿಯ ಭಾರತ, ನಮ್ಮಲ್ಲೆರ ಭಾರತವನ್ನು ಕಟ್ಟೋಣ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಟೋರ್ ಇನ್-ಚಾರ್ಜ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿಧಿ 2 ಕೋಟಿ ಕಾಮಗಾರಿ ಶಿಲಾನ್ಯಾಸ ಮತ್ತು ಸಿರಿ ಕೆಫೆ-ಸಿರಿ ಮಳಿಗೆ ಉದ್ಘಾಟನೆ

Article Image

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿಧಿ 2 ಕೋಟಿ ಕಾಮಗಾರಿ ಶಿಲಾನ್ಯಾಸ ಮತ್ತು ಸಿರಿ ಕೆಫೆ-ಸಿರಿ ಮಳಿಗೆ ಉದ್ಘಾಟನೆ

ಬೆಳ್ತಂಗಡಿ: ಗ್ರಾಮದ ಅಗತ್ಯತೆ ಮತ್ತು ಗ್ರಾಮೀಣ ಜನರ ಜೀವನ ಸ್ಥಿತಿಗತಿ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಿತ್ಯ ವರದಿ ಬರುತ್ತಿದ್ದು, ಇದರಂತೆ ಇಲ್ಲಿಂದ 800 ಕಿ.ಮೀ. ದೂರದ ಬೀದರ್ ಜಿಲ್ಲೆಯ ಸ್ಥಿತಿ ಕುರಿತು ಮಾಹಿತಿ ದೊರೆತ ಕಾರಣ ಅಲ್ಲಿಯ ಜನರ ಜೀವನ ಸುಧಾರಣೆ ಅಗಬೇಕು ಎಂದು ನನ್ನ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರೂ. ಬಳಕೆ ಮಾಡಿದ್ದು ಇದರಿಂದ ನಿತ್ಯ 18 ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ ಒಂದು ಲಕ್ಷದ ನಲುವತ್ತು ಸಾವಿರ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಇದೇ ರೀತಿ ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ಮುಂದೆಯೂ ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ರಾಜ್ಯಸಭಾ ಸಂಸದರಾದ ಡಾ.‌ ವೀರೇಂದ್ರ ಹೆಗ್ಗಡೆಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ ರೂ. 2 ಕೋ.ರೂ. ಅನುದಾನದಡಿ ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ-ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಾ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲೂಕಿನ ಕೆಲವು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗೆ ರಾಜ್ಯಸಭಾ ನಿಧಿಯನ್ನು ಬಳಸಲಾಗಿದೆ. ಗ್ರಾಮಾಭಿವೃದ್ದಿ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಬಂದರೆ, ಸಿರಿ ಸಂಸ್ಥೆಯಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕಿದೆ. ಮುಂದೆಯೂ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವಂತೆ ಮಾಡಲಾಗುವುದು. ಇಲ್ಲಿನ ಶಾಸಕರ, ಪಟ್ಟಣ ಪಂಚಾಯಿತಿ ಅಧ್ಯಕ್ಷರ ,ಸದಸ್ಯರ ಬೇಡಿಕೆಯಂತೆ ಜನರ ಅನುಕೂಲಕ್ಕಾಗಿ ಈ ರಸ್ತೆಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು. ಶಾಸಕ‌ ಹರೀಶ್ ಪೂಂಜ ಅವರು ಮಾತನಾಡಿ, ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಡಿ ಬೆಳ್ತಂಗಡಿ ಅಯ್ಯಪ್ಪ ಮಂದಿರ ಬಳಿಯಿಂದ ಹುಣ್ಸೆಕಟ್ಟೆ ವರೆಗಿನ ರಸ್ತೆ ಅಭಿವೃದ್ದಿಗೆ 2 ಕೋಟಿ ರೂ. ನೀಡುವ ಮೂಲಕ ಉಪ್ಪಿನಂಗಡಿ- ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕರೆಯಲ್ಲಿ ಟ್ರಾಫಿಕ್ ಸಮಸ್ಯೆ ಬಂದಾಗ ಈ ಸಂಪರ್ಕ ರಸ್ತೆ ಸಾವಿರಾರು ಜನರಿಗೆ ಅನುಕೂಲವಾಗಿದೆ. ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಿಂದ 10 ಕೋಟಿ ರೂ. ಅನುದಾನ ನೀಡಿ ಸಾವಿರಾರು ಕುಟುಂಬಗಳ ಆರ್ಥಿಕ ಬೆಳವಣಿಗೆ ಕಾರಣವಾಗಿದ್ದಾರೆ. ಇದರಿಂದ ದೇಶದಲ್ಲಿ ಸಂಸದರ ನಿಧಿ ವಿನಿಯೋಗ ಹೇಗೆ ಮಾಡಬಹುದೆಂದು ಡಾ. ಹೆಗ್ಗಡೆಯವರು ಕೆಲಸ ಮಾಡಿ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಸಿರಿ ಸಂಸ್ಥೆಯಲ್ಲಿ ಒಂದು ಸಾವಿರ ಸಿಬ್ಬಂದಿಗಳು ಇದ್ದಾರೆ. ಮಹಿಳೆಯರಿಗೆ ಉದ್ಯೋಗ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಪಟ್ಟಣ ಪಂಚಾಯತ್ ಗೆ ಅನುದಾನಗಳ ಕೊರತೆ ಇದ್ದ ಸಂದರ್ಭದಲ್ಲಿ ರಸ್ತೆಗೆ ಎರಡು ಕೋಟಿ ಅನುದಾನ ನೀಡಿ ನಗರ ಪಂಚಾಯತ್ ಗೆ ಶಕ್ತಿ ತುಂಬಿದ್ದಾರೆ. ಇದಕ್ಕಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರ ಪರವಾಗಿ ಡಾ.ಹೆಗ್ಗಡೆಯವರಿಗೆ ಅಭಿನಂದಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ಸಿರಿ ಸಂಸ್ಥೆ ಟ್ರಸ್ಟಿ ರಾಜೇಶ್ ಪೈ ಉಜಿರೆ, ಪ.ಪಂ.‌ ಮುಖ್ಯಾಧಿಕಾರಿ ರಾಜೇಶ್, ಸಿರಿ ಸಂಸ್ಥೆ ಸಿಇಒ ಪ್ರಸನ್ನ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಜನಾರ್ದನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಿರಿ ಗೋದಾಮು ವಿಭಾಗದ ಮ್ಯಾನೇಜರ್ ಜೀವನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉಜಿರೆ ಎಸ್.ಡಿ.ಎಂ. ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪ-ಉಪಕುಲಪತಿ ಭೇಟಿ

Article Image

ಉಜಿರೆ ಎಸ್.ಡಿ.ಎಂ. ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪ-ಉಪಕುಲಪತಿ ಭೇಟಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿಯ ಉಪ- ಉಪಕುಲಪತಿ ಹಾಗೂ ಧಾರವಾಡ ಎಸ್.ಡಿ.ಎಂ. ಎಜ್ಯೂಕೇಶನ್ ಸೊಸೈಟಿಯ ಕಾರ್ಯದರ್ಶಿ ಆಗಿರುವ ಜೀವಂಧರ್ ಕುಮಾರ್ ಇವರು ಅ.24ರಂದು ಭೇಟಿ ನೀಡಿದರು. ಭೇಟಿಯ ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೀಡರ್ ಇದ್ದ ಹಾಗೆ ಫಾಲೋರ‍್ಸ್ ಇರುತ್ತಾರೆ. ಪೂಜ್ಯರಂತಹ ಮಹಾನ್ ವ್ಯಕ್ತಿಯ ಲೀಡರ್‌ಶಿಪ್ ನಮಗಿರುವಾಗ ನಾವೇ ಅತ್ಯಂತ ಧನ್ಯರು ಎಂದರು. ಇಲ್ಲಿನ ವೈದ್ಯರಲ್ಲಿ ಸಿಬ್ಬಂದಿಗಳಲ್ಲಿ ವಿಶೇಷವಾಗಿ ನಾನು ನಗುಮೊಗವನ್ನು ಕಾಣುತ್ತಿದ್ದೇನೆ. ಪೂಜ್ಯರ ಮಾರ್ಗದರ್ಶನದಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಬೆಳೆಯುತ್ತಿದೆ. ಪೂಜ್ಯರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುತ್ತಿರುವ ನಿಮ್ಮೆಲ್ಲರಿಂದ ಈ ಆಸ್ಪತ್ರೆ ಮತ್ತಷ್ಟು ಬೆಳಯಲಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಪೇಥಲಾಜಿಸ್ಟ್ ಡಾ| ಮೇಘಾ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ಆಳ್ವಾಸ್‌ನಿಂದ ಕರಾವಳಿ ಕರ್ನಾಟಕದ ಮೊದಲ ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸ ಆರಂಭ

Article Image

ಆಳ್ವಾಸ್‌ನಿಂದ ಕರಾವಳಿ ಕರ್ನಾಟಕದ ಮೊದಲ ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸ ಆರಂಭ

ಮೂಡುಬಿದಿರೆ: ಮಿಜಾರಿನ ಶೋಭಾವನ ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನೂತನವಾಗಿ ಆರಂಭವಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲೇಜು, ಈ ಶೈಕ್ಷಣಿಕ ವರ್ಷದಿಂದಲೇ ಬಹು ಬೇಡಿಕೆಯ ನಾಲ್ಕು ವರ್ಷದ ಅವಧಿಯ ಬಿಎಸ್ಸಿ (ಆನರ್ಸ್) ಅಗ್ರಿಕಲ್ಚರ್ ಮತ್ತು ಬಿ.ಟೆಕ್ ಫುಡ್ ಟೆಕ್ನಾಲಜಿ ಕೋರ್ಸಗಳನ್ನು ಪ್ರಾರಂಭಿಸುತ್ತಿದೆ. ಈ ಕಾಲೇಜು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿ ಕಾರ‍್ಯನಿರ್ವಹಿಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇದು ಕರಾವಳಿ ಕರ್ನಾಟಕದಲ್ಲಿ, ಪ್ರಥಮ ಬಾರಿಗೆ ಕೃಷಿ ವಿಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ಮಹತ್ವದ ಸಂಸ್ಥೆಯಾಗಿ ಮೂಡಿಬರಲಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಪ್ರಯೋಗಶಾಲೆ, ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ನೈಜ ಅನುಭವ, ಆಹಾರ ಸಂಸ್ಕರಣೆ, ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ, ನಿಪುಣ ಬೋಧಕ ವೃಂದ ಹಾಗೂ ಕೈಗಾರಿಕಾ ತರಬೇತಿಯ ಸೌಲಭ್ಯಗಳನ್ನು ಒದಗಿಸಲಿದೆ. ಆಳ್ವಾಸ್ ಸಂಸ್ಥೆ ಈಗಾಗಲೇ ಮಂಗಳೂರು ವಿವಿ, ರಾಜೀವ್‌ಗಾಂಧಿ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿಯ ಪಠ್ಯಕ್ರಮಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, ಇದೀಗ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿಭಾಗಗಳ ಸೇರ್ಪಡೆ ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಮತ್ತೊಂದು ಮೈಲುಗಲ್ಲಾಗಲಿದೆ. ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸನ್ನು ಪ್ರಾರಂಬಿಸಲು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಆರ್ ಸಿ ಜಗದೀಶ, ಕುಲಸಚಿವರಾದ ಡಾ ಕೆ.ಸಿ ಶಶಿಧರರವರ ಸಹಕಾರವನ್ನು ಸ್ಮರಿಸಲಾಗಿದೆ. 2025 ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು (9448458334, 8050585606) ಸಂಪರ್ಕಿಸಲು ಕೋರಲಾಗಿದೆ. ಕಾಲೇಜು ಕೋಡ್ ( ಫಾರ್ಮ ಸೈನ್ಸ್) 038 ಆಗಿರಲಿದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್, ಆಳ್ವಾಸ್ ಪದವಿ( ಸ್ವಾಯತ್ತ) ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಇದ್ದರು.

ರಾಜ್ಯದ ಹದಿಮೂರು ಕಡೆಗಳಲ್ಲಿ 2000ನೇ ಮದ್ಯವರ್ಜನ ಶಿಬಿರ

Article Image

ರಾಜ್ಯದ ಹದಿಮೂರು ಕಡೆಗಳಲ್ಲಿ 2000ನೇ ಮದ್ಯವರ್ಜನ ಶಿಬಿರ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಇಂದಿನಿಂದ (ಅ.30) ರಾಜ್ಯದ ಹದಿಮೂರು ಕಡೆಗಳಲ್ಲಿ 2000ನೇ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ್ ಬಾದಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿಯವರಾದ ವಿವೇಕ್ ವಿ. ಪಾಯಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ, ಮೂಡಬಿದ್ರೆ, ಮಂಗಳೂರು, ಉಡುಪಿ, ಗುಬ್ಬಿ, ಮಧುಗಿರಿ, ಧಾರವಾಡ, ಬಸವಕಲ್ಯಾಣ, ಶ್ರೀರಂಗ ಪಟ್ಟಣ, ಅರಸೀಕೆರೆ, ಗದಗ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ಅ. 30 ರಿಂದ ನ.6 ರವರೆಗೆ ಪ್ರತಿ ಶಿಬಿರದಲ್ಲಿ ತಲಾ 76 ರಂತೆ ಶಿಬಿರಾರ್ಥಿಗಳನ್ನು ಸೇರಿಸಿ ಒಂದು ಸಾವಿರ ವ್ಯಸನಿಗಳಿಗೆ ಮನಪರಿವರ್ತನೆ ಮೂಲಕ ವ್ಯಸನಮುಕ್ತರಾಗಿ ಮಾಡುವ ಗುರಿ ಹೊಂದಲಾಗಿದೆ. ಈವರೆಗೆ 1987 ಮದ್ಯವರ್ಜನ ಶಿಬಿರಗಳ ಮೂಲಕ ಒಂದು ಲಕ್ಷದ ಮೂವತ್ತಮೂರು ಸಾವಿರ ಮದ್ಯವ್ಯಸನಿಗಳನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತರಾಗಿ ಮಾಡಲಾಗಿದೆ ಎಂದು ಅವರು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

Article Image

ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ದ.ಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಜೈನ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 28 ಚಿನ್ನ, 20 ಬೆಳ್ಳಿ ಮತ್ತು 14 ಕಂಚಿನ ಪದಕಗಳೊಂದಿಗೆ 52 ಪದಕಗಳನ್ನು ಪಡೆದು ಬಾಲಕರ ವಿಭಾಗದಲ್ಲಿ 100 ಅಂಕ ಮತ್ತು ಬಾಲಕಿಯರ ವಿಭಾಗದಲ್ಲಿ 104 ಅಂಕ ಒಟ್ಟು 214 ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು 16 ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಜೈನ್ ಪದವಿಪೂರ್ವ ಕಾಲೇಜು 19 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕರ ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸಿನ ಸಮರ್ಥ ಪಡೆದುಕೊಂಡರೆ, ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸಿನ ನಾಗಿಣಿ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಗೆ ಕರ್ಣಾಟಕ ಬ್ಯಾಂಕ್ ಎಂ.ಡಿ, ಸಿಇಒ ಭೇಟಿ

Article Image

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಗೆ ಕರ್ಣಾಟಕ ಬ್ಯಾಂಕ್ ಎಂ.ಡಿ, ಸಿಇಒ ಭೇಟಿ

ಉಜಿರೆ : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಜಿರೆಯ ಕೇಂದ್ರ ಕಛೇರಿಗೆ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಶ್ರೀನಿವಾಸ ಭಟ್ ಭೇಟಿ ನೀಡಿದರು. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಘವೇಂದ್ರ ಶ್ರೀನಿವಾಸ ಭಟ್ ರವರಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿನಂದಿಸಿದರು. ಈ ವೇಳೆ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಭಟ್, ಉಡುಪಿ ರಥಬೀದಿ ಶಾಖೆಯ ಹಿರಿಯ ಪ್ರಬಂಧಕ ಪ್ರಶಾಂತ್ ಎಂ. ರಾವ್ ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿ ಹಣಕಾಸು ಅಧಿಕಾರಿ ಅರವಿಂದ್ ಭಗವತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಘವೇಂದ್ರ ಶ್ರೀನಿವಾಸ ಭಟ್ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸತ್ತೂರು, ಧಾರವಾಡ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ, ಮನೋರೋಗ ಚಿಕಿತ್ಸಾ ವಿಭಾಗವು ಎಸ್.ಡಿ.ಎಂ. ನರ್ಸಿಂಗ್ ಕಾಲೇಜು ಅವರ ಸಹಭಾಗಿತ್ವದಲ್ಲಿ “ವಿಪತ್ತು ಮತ್ತು ತುರ್ತು ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ, ಸೇವೆಗಳಿಗೆ ಆದ್ಯತೆ” ಎಂಬ ಧ್ಯೇಯೆಯೊಂದಿಗೆ ಅಕ್ಟೋಬರ್ 10, 2025ರಂದು “ವಿಶ್ವ ಮಾನಸಿಕ ಆರೋಗ್ಯ” ದಿನವನ್ನು ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಧ್ಯೇಯೆ ವಾಕ್ಯವನ್ನು ಅನಾವರಣಗೊಳಿಸಿದರು. ಡಾ. ಸಚಿನ್ ಬಿ. ಎಸ್. ಮತ್ತು ಡಾ. ಮನೋಜ ಶೆಟ್ಟರ ಅವರು ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ: ಆರೋಗ್ಯ ವೃತ್ತಿಪರರು ತಮ್ಮ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳಬೇಕು. ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅತ್ಯಂತ ಕಾಳಜಿಯಿಂದ ಚಿಕಿತ್ಸೆ ನೀಡಬೇಕು ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಸದಾ ಉತ್ತಮ ಆರೋಗ್ಯವನ್ನು ಹೊಂದಲು ಮನಸ್ಸಿಗೆ ಆಘಾತಗಳಾಗದಂತೆ ಜಾಗೃತಿವಹಿಸಬೇಕು. ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ, ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ, ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿತ್ತಪತ್ರ ಪ್ರದರ್ಶನ ಮತ್ತು ರಸಪ್ರಶ್ನೆ ಸ್ಪರ್ಧೆಗಳ ವಿಜೆತರಿಗೆ ಬಹುಮಾನಗಳನ್ನು ವಿತರಿಸಿದರು. ಡಾ. ಸ್ಪೂರ್ತಿ ಹಾಗೂ ಡಾ. ಮೋಕ್ಷ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ನಾಗೇಶ ಅಜ್ಜವಾಡಿ ಮಠ ವಂದಣಾರ್ಪಣೆ ಸಲ್ಲಿಸಿದರು.

ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ 2025

Article Image

ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ 2025

ಸತ್ತೂರ, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ - 2025 ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ದಿನಾಂಕ, ಅಕ್ಟೊಬರ್ 3 ಮತ್ತು 4, 2025ರಂದು “ಸ್ಪಂದನ” - ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಹಮ್ಮಿಕೋಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಶ್ರೀ ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪ ನಾಯಕರು, ಕರ್ನಾಟಕ ವಿಧಾನಸಭಾ, ಡಾ. ನಿರಂಜನ್ ಕುಮಾರ, ಉಪ ಕುಲಪತಿಗಳು, ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಡಾ. ತಿಮ್ಮಪ್ಪ ಹೆಗ್ಡೆ, ನಿರ್ದೇಶಕರು ಹಾಗೂ ಹಿರಿಯ ತಜ್ಞರು, ನಾರಾಯಣ ನರರೋಗ ಸಂಸ್ಥೆ, ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಬಲರಾಮ ನಾಯ್ಕ, ಪ್ರಾಂಶುಪಾಲರು ಮತ್ತು ಗೌರವ ಅಧ್ಯಕ್ಷರು, ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ, ವಿ. ಜೀವಂಧರ ಕುಮಾರ, ಕಾರ್ಯದರ್ಶಿಗಳು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಧಾರವಾಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾದ ಡಾ. ನಿರಂಜನ್ ಕುಮಾರ ಅವರು ಮಾತನಾಡುತ್ತಾ: ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಶ್ರೇಷ್ಠವನ್ನಾಗಿ ಮಾಡಬೇಕು. ಹಳೆಯ ವಿದ್ಯಾರ್ಥಿಗಳ ಸಮಾಜ ಸೇವೆಯು ಅವರ ವಿದ್ಯಾಭ್ಯಾಸದ ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ಮತ್ತು ಅತ್ಯುತ್ತಮ ತರಬೇತಿಯನ್ನು ಒದಗಿಸುವುದು ನಮ್ಮ ಕುಲಪತಿಗಳ ಗುರಿಯಾಗಿದೆ. ಎಸ್.ಡಿ.ಎಂ. ಸಂಸ್ಥೆಗಳು ನಮ್ಮ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು “ಎಸ್.ಡಿ.ಎಂ. ಕುಟುಂಬ” ಎಂದು ಪರಿಗಣಿಸುತ್ತವೆ. ಉತ್ತಮ ಶಿಕ್ಷಣದ ಉದ್ದೇಶವು ಯಾವುದೇ ವೃತ್ತಿಪರರ ವಯಕ್ತಿಕ ಗುರಿಗಿಂತ ಹೆಚ್ಚಾಗಿರಬೇಕು. ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯೂ ತಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರಬೇಕು. ಅರವಿಂದ್ ಬೆಲ್ಲದ್ ಅವರು ತಮ್ಮ ಸ್ಪೂರ್ತಿದಾಯಕ ಮತ್ತು ಪ್ರೇರಿತ ಮಾತುಗಳೊಂದಿಗೆ ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಡಾ. ತಿಮ್ಮಪ್ಪ ಹೆಗ್ಡೆ ದಿಕ್ಸೂಚಿ ಭಾಷಣ ಮಾಡಿದರು. ಡಾ. ರೋಶನ ಶೆಟ್ಟಿ, ಅಧ್ಯಕ್ಷರು, ಹಳೆಯ ವಿದ್ಯಾರ್ಥಿಗಳ ಸಂಘ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅಪೂರ್ವಾ ಮತ್ತು ಡಾ. ಮೇಘನಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರವಿ ಶಿರಹಟ್ಟಿ ಮತ್ತು ಡಾ. ಕಿರಣ ರೆಡ್ಡೆರ ಅವರು ಅರವಿಂದ ಬೆಲ್ಲದ ಮತ್ತು ಡಾ. ತಿಮ್ಮಪ್ಪ ಹೆಗ್ಡೆ ಅವರನ್ನು ಪರಿಚಯಿಸಿದರು. ಡಾ. ಮಹಿಮಾ ದಂಡ, ಕಾರ್ಯದರ್ಶಿ, ಸ್ಪಂದನ ಹಳೆಯ ವಿದ್ಯಾರ್ಥಿಗಳ ಸಂಘ, ವಂದನಾರ್ಪಣೆ ಸಲ್ಲಿಸಿದರು.

ಮಂಗಳೂರು ವಿ.ವಿ ಅಂತರ ಕಾಲೇಜು ಯೋಗಾಸನ ಸ್ಪರ್ಧೆ

Article Image

ಮಂಗಳೂರು ವಿ.ವಿ ಅಂತರ ಕಾಲೇಜು ಯೋಗಾಸನ ಸ್ಪರ್ಧೆ

ಮೂಡುಬಿದಿರೆ: ಬಲ್ಮಟದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪುರುಷರ ತಂಡವು ಪ್ರಥಮ ಸ್ಥಾನವನ್ನು ಪಡೆದರೆ, ಮಹಿಳೆಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಆ ಮೂಲಕ ಆಳ್ವಾಸ್ ಪದವಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಕೊಕ್ಕೊ ಬೆಳೆಯ ವಿಚಾರ ವಿನಿಮಯ

Article Image

ಕೊಕ್ಕೊ ಬೆಳೆಯ ವಿಚಾರ ವಿನಿಮಯ

ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದಿಂದ ಕೊಕ್ಕೋ ಬೆಳೆಯಲ್ಲಿ ಸುಧಾರಿತ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಮಾಜ ಮಂದಿರದಲ್ಲಿ ಅಕ್ಟೋಬರ್ 4 ರಂದು ನಡೆದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೋಲಾರದ ಡಾ. ರಶ್ಮಿ ಆರ್ ಅವರು ಮಾತನಾಡಿ ಮಳೆಯ ನೀರಿನೊಂದಿಗೆ ಕೊಚ್ಚಿ ಹೋಗುವ ಮೇಲ್ಮಣ್ಣನ್ನು ಉಳಿಸಿಕೊಂಡಲ್ಲಿ ಫಲವನ್ನು ಹೆಚ್ಚಿಸಬಹುದಾಗಿದೆ. ಕೊಕ್ಕೋ ನಾಟಿಗೆ ಕನಿಷ್ಠ 18 ಫೀಟುಗಳ ಅಂತರ ಇರತಕ್ಕದ್ದು ಅಗತ್ಯ ಇರುವ ರಸಸಾರವನ್ನು ಒದಗಿಸಿ ಬೆಳೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿದ ಪ್ರಭಾತ್ ಸಿಲ್ಕ್ಸ್ ಮಾಲೀಕ ಪ್ರಭಾ ಚಂದ್ರ ಜೈನ್ ಕೃಷಿಗೆ ಪ್ರಾಣಿಗಳ ಉಪಟಳ ಇದ್ದರೂ, ಉತ್ತಮ ಆರೋಗ್ಯಕ್ಕೆ ಹಟ್ಟಿ ಗೊಬ್ಬರದಿಂದ ಬೆಳೆದ ಬೆಳೆ ಹೆಚ್ಚು ಪರಿಣಾಮಕಾರಿ ಎಂದು ನೆನಪಿಸಿದರು. ಕೃಷಿ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಿಜಾರು ಹೊಸ ಮನೆ ವಿನಯ್ ಕುಮಾರ್ ಹಾಜರಿದ್ದರು. ಗುಣಪಾಲ ಮುದ್ಯ ಸ್ವಾಗತಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಕೋಟ್ಯಾನ್ ವರದಿ ಮಂಡಿಸಿದರು. ಲಿಡ್ವಿನ್ ಡಿ ಕೋಸ್ತ ವಂದಿಸಿದರು.

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 13 ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ

Article Image

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 13 ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ

ವಿದ್ಯಾಗಿರಿ: ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು ತೇರ್ಗಡೆಯಾಗಿ, ರಾಷ್ಟ್ರಮಟ್ಟದಲ್ಲಿ ಮಹತ್ತರ ಸಾಧನೆ ಮೆರೆದಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಹರ್ಷ ಎಂ, ಚಿನ್ಮಯ್ ಎಸ್, ಸಂಕೇತ್ ಭಟ್, ಸುಮಿತ್ ವಿ ಕೆ, ಹರ್ಷ ರೆಡ್ಡಿ, ಮೋಹಿತ್ ಕುಮಾರ್, ಪ್ರಣವ್ ವಿ ಪಂಡಿತ್, ಅಕ್ಷಯ್ ಭಾರದ್ವಾಜ್, ಅನುಷ್ ಅರುಣ್, ಪಿಯೂಷ್ ಹೆಚ್, ವಿಸ್ಮಯ ನಾರಾಯಣ್, ಮೆಲ್ರೊಯ್ ಕ್ಯಾಸ್ಟೆಲಿನೊ, ಇಶಾನ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ರಾಷ್ಟೀಯ ರಕ್ಷಣಾ ಅಕಾಡೆಮಿ- ಎನ್‌ಡಿಎ) ಮತ್ತು ಇಂಡಿಯನ್ ನೇವಲ್ ಅಕಾಡೆಮಿ (ಭಾರತೀಯ ನೌಕಾ ಅಕಾಡೆಮಿ- ಐಎನ್‌ಎ) ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ. ಆಳ್ವಾಸ್ ಪದವಿ ಪೂರ್ವ ಕಾಲೇಜು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ನಿರಂತರ ವಾಗಿ ವಿಶೇಷ ತರಬೇತಿ, ಅಣುಕು ಪರೀಕ್ಷೆ, ಮಾರ್ಗದರ್ಶನ ಕಾರ್ಯಗಾರಗಳನ್ನು ನಡೆಸುತ್ತಾ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಸನ್ನದ್ಧರನ್ನಾಗಿಸುತ್ತಿದೆ.

ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರ

Article Image

ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರ

ಮೂಡುಬಿದಿರೆ: ಅರಣ್ಯಗಳತ್ತಾ ನಮ್ಮ ನಿಲುವು ಸದಾ ವಿವೇಚನೆಯಿಂದ ಕೂಡಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ನುಡಿದರು. ಅವರು ಆಳ್ವಾಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ, ಹಳೆವಿದ್ಯಾರ್ಥಿಗಳ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು. ಪ್ರಕೃತಿಯನ್ನು ಅವಲೋಕಿಸುವುದು ಬಹಳ ಮುಖ್ಯ. ಪ್ರಕೃತಿಯ ಪ್ರತಿಯೊಂದು ಅಂಶವೂ ನಮಗೆ ಬದುಕಿಗೆ ಪಾಠವನ್ನು ಕಲಿಸುತ್ತದೆ. ಪ್ರಕೃತಿ, ಕೇವಲ ಸಂಪನ್ಮೂಲವಲ್ಲ, ಅದು ಸುಖ-ಶಾಂತಿಯ ಅಮೂಲ್ಯ ಸಂಪತ್ತು. ಅದನ್ನು ಕಾಪಾಡುವುದು ನಮ್ಮ ನೈತಿಕ ಕರ್ತವ್ಯ ಮಾತ್ರವಲ್ಲ, ಭವಿಷ್ಯದ ಪೀಳಿಗೆಗಾಗಿ ಜೀವಸಂಪತ್ತನ್ನು ಉಳಿಸುವ ಅಗತ್ಯವೂ ನಮ್ಮದಾಗಿದೆ. ನಾವು ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಸುಖ ಮತ್ತು ಶಾಂತಿಯಿಂದ ಬದುಕಲು ಸಾಧ್ಯ. ನಾವು ವಾಸಿಸುತ್ತಿರುವ ಪ್ರದೇಶ ಜೀವ ವೈವಿಧ್ಯತೆಯ ಹಾಟ್ ಸ್ಪಾಟ್. ಜಗತ್ತಿನಲ್ಲಿ ಕೇವಲ 2 ರಿಂದ 3 ಶೇಕಡಾದಷ್ಟು ಪ್ರದೇಶವಷ್ಟೇ ಜೀವ ವೈವಿಧ್ಯ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆದ್ದರಿಂದ ಜನರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ. ಕುರಿಯನ್ ಮಾತನಾಡಿ, ತಂತ್ರಜ್ಞಾನ ಬೆಳದಂತೆ ಮನುಷ್ಯ ತನ್ನ ಎಲ್ಲಾ ಬಳಸುವ ವಸ್ತುಗಳನ್ನು ಶಸ್ತ್ರವನ್ನಾಗಿಸಿ ಮಾರ್ಪಾಡಿಸಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಕೃತಿಯೊಂದಿಗೆ ಹೋರಾಡುವುದಕ್ಕಿಂತ ಅದರಲ್ಲಿ ಬೆರೆತು ಬದುಕುವುದು ಮಾನವನ ನಿಜವಾದ ಕರ್ತವ್ಯ ಎಂದರು. ಆಗುಂಬೆಯ ಕಾನನ ಸಂಸ್ಥೆಯ ನಿರ್ದೇಶಕ, ಜೋಯೆಲ್ ಕೊರಿಯಾ ಮಾತನಾಡಿ, ನಮ್ಮ ಭೂಮಿಯ ಭವಿಷ್ಯವು ನಾವು ಇಂದು ಕೈಗೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿವೆ. ಪರಿಸರ ಸಂರಕ್ಷಣೆಯ ಚಳವಳಿಗಳಲ್ಲಿ ಯುವ ಪೀಳಿಗೆ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ವಿಶೇಷವಾಗಿ ಲಯನ್‌ಟೈಲ್ಡ್ ಮಕಾಕ್ (Lion-tailed Macaque) ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಮಾನವನ ಹಸ್ತಕ್ಷೇಪವು ಹೇಗೆ ಅವುಗಳ ಆಹಾರ ಪದ್ಧತಿ ಮತ್ತು ವಾಸಸ್ಥಾನವನ್ನು ಅಸಮತೋಲನಗೊಳಿಸುತ್ತಿವೆ ಎಂಬುದನ್ನು ವಿವರಿಸಿದರು. ಸಂತ ಅಲೋಷಿಯಸ್ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಕಿರಣ್ ವಾಟಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡಾ. ವಿನಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ‍್ಯಗಾರ ನಡೆಸಿಕೊಟ್ಟರು. ಆಳ್ವಾಸ್ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರಾ ಇದ್ದರು. ಶ್ರಾವ್ಯ ಕಾರ‍್ಯಕ್ರಮ ನಿರೂಪಿಸಿ, ಮಾನಸ ವಂದಿಸಿದರು.

ಅಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ

Article Image

ಅಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ತಮ್ಮ ತಾಯಿ ಸ್ಮರಣಾರ್ಥ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ 25ನೇ ವರ್ಷದ 'ಅಮ್ಮ ಪ್ರಶಸ್ತಿ'ಗಾಗಿ 2024 ಮತ್ತು 2025ನೇ ಸಾಲಿನಲ್ಲಿ ಪ್ರಕಟವಾದ ಕೃತಿ ಆಹ್ವಾನಿಸಲಾಗಿದೆ. 24 ವರ್ಷಗಳಿಂದ ನಿರಂತರ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈಗ 25ರ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ'ಗಾಗಿ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳ ಎರಡು ಪ್ರತಿ ಕೃತಿಗಳ ಆಹ್ವಾನ ಕಳುಹಿಸಬಹುದು. ಆಯ್ಕೆಯಾದ 5 ಕೃತಿಗಳಿಗೆ ತಲಾ 5 ಸಾವಿರ ನಗದು ಪುರಸ್ಕಾರ ಮತ್ತು ಸನ್ಮಾನ, ಗೌರವದ ಕಾಣಿಕೆ ನೀಡಿ ಸತ್ಯ ರಿಸಲಾಗುವುದು. ಕೃತಿಗಳನ್ನು ಸ್ವೀಕರಿಸಲು 'ಅ.30 ಕೊನೆಯ ದಿನಾಂಕವಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃತಿಗಳನ್ನು ರತ್ನಕಲಾ ಮಹಿಪಾಲರೆಡ್ಡಿ ಮುನ್ಸೂರ್, ಸಂಚಾಲಕಿ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂ‌ ಪ್ರತಿಷ್ಠಾನ 'ಅಮ್ಮ ನಿಲಯ', ರಾಮಚಂದ್ರ ಲೇಔಟ್, ಪಿಡಬ್ಲ್ಯುಡಿ ಕಚೇರಿ ಹತ್ತಿರ, ಸೇಡಂ-585 222. ಕಲಬುರಗಿ ಜಿಲ್ಲೆ ಈ ವಿಳಾಸಕ್ಕೆ ಕಳಿಸಬೇಕು.

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Article Image

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ನಡೆದ ರಾಜ್ಯ ಮಟ್ಟದ ದಸರಾ ಸಿಎಂ ಕಪ್ 2025ರಲ್ಲಿ ಆಳ್ವಾಸ್ ತಂಡವು ಹಲವು ಪ್ರಶಸ್ತಿ ಮತ್ತು ಪದಕಗಳನ್ನು ಪಡೆದುಕೊಂಡಿದೆ. ತಂಡ ವಿಭಾಗದ ಕ್ರೀಡೆಗಳಾದ ಪುರುಷರ ಕಬಡ್ಡಿಯಲ್ಲಿ ಆಳ್ವಾಸ್ ತಂಡ, ಬೆಂಗಳೂರು ಸಿಟಿಯ ವಿರುದ್ಧ 13 ಅಂಕಗಳ ಅಂತರದಿಂದ ಜಯಶಾಲಿಯಾದರೆ, ಮಹಿಳೆಯರ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಆಳ್ವಾಸ್ ತಂಡ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 30-08, 35-20 ನೇರ ಸೆಟ್‌ಗಳಿಂದ ಸೋಲಿಸಿ ಪ್ರಥಮ ಸ್ಥಾನವನ್ನು ಪಡೆಯಿತು. ಅಂತೆಯೇ ಮಹಿಳಾ ಕಬಡ್ಡಿ, ಪುರುಷರ ಖೋ-ಖೋ, ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಆಳ್ವಾಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಅಥ್ಲೇಟಿಕ್ಸ್ನಲ್ಲಿ ಆಳ್ವಾಸ್‌ನ ನಾಗ್ರೇಂದ್ರ ಡಿಸ್ಕಸ್ ಥ್ರೋನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರೆ, 800 ಮೀ ಓಟದಲ್ಲಿ ಆಳ್ವಾಸ್‌ನ ರೇಖಾ ಬಸಪ್ಪ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ವೈಯಕ್ತಿಕ ವಿಭಾಗದ ಅಥ್ಲೆಟಿಕ್ಸ್ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಒಟ್ಟು ಕ್ರೀಡಾಕೂಟದಲ್ಲಿ 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕವನ್ನು, ವೇಯ್ಟ್ ಲಿಫ್ಟಿಂಗ್‌ನಲ್ಲ್ಲಿ ಒಟ್ಟು 8 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕವನ್ನು, ಕುಸ್ತಿ ಪಂದ್ಯಾಟದಲ್ಲಿ ಒಟ್ಟು 5 ಕಂಚಿನ ಪದಕ, ಯೋಗಾಸನ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕಗಳನ್ನು ಪಡೆದುಕೊಂಡಿದೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.

ಸಿರಿ ಕೇಂದ್ರ ಕಛೇರಿಗೆ ಡಿ. ವೀರೇಂದ್ರ ಹೆಗ್ಗಡೆ ದಂಪತಿ ಭೇಟಿ

Article Image

ಸಿರಿ ಕೇಂದ್ರ ಕಛೇರಿಗೆ ಡಿ. ವೀರೇಂದ್ರ ಹೆಗ್ಗಡೆ ದಂಪತಿ ಭೇಟಿ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿರಿ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿರುವ ಹೇಮಾವತಿ ವೀ. ಹೆಗ್ಗಡೆಯವರು ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಿರಿ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಸಿರಿ ಸಂಸ್ಥೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಹೆಗ್ಗಡೆ ದಂಪತಿಗಳು, ಇಲ್ಲಿ ನಡೆಯುತ್ತಿರುವ ವಿವಿಧ ಉತ್ಪನ್ನಗಳ ಉತ್ಪಾದನಾ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ನವರಾತ್ರಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ ಅವರು ನವರಾತ್ರಿಯು ಶಕ್ತಿ, ಬುದ್ಧಿವಂತಿಕೆ, ಧೈರ್ಯ, ಭಕ್ತಿ ಮತ್ತು ರಕ್ಷಣೆಯಂತಹ ವಿಭಿನ್ನ ಗುಣಗಳ ಸ್ವರೂಪವಾಗಿರುವ ನವದುರ್ಗೆಯರ ಪೂಜೆಗೆ ಸಮರ್ಪಿತವಾಗಿದೆ. ಸಿರಿಯಲ್ಲಿ ದುಡಿಯುವ ಮಹಿಳೆಯರು ಕೂಡಾ ಸಿರಿಯ ಶಕ್ತಿ ಸ್ವರೂಪಿಣಿಯರಾಗಿದ್ದು, ಎಲ್ಲರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿದು ಸಿರಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿ, ಮುನ್ನಡೆಸುವ ಮೂಲಕ ಇನ್ನೂ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ದೊರೆತು ನೆಮ್ಮದಿಯ ಜೀವನ ನಡೆಸುವಂತಾಗಲಿ, ಎಲ್ಲರಿಗೂ ನವದುರ್ಗೆಯರ ಆಶೀರ್ವಾದವಿರಲಿ ಎಂದು ಶುಭ ಹಾರೈಸಿದರು. ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಾದ ಕೆ.ಎನ್ ಜನಾರ್ಧನರವರು ಹೆಗ್ಗಡೆ ದಂಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ರಾಜೇಶ್ ಪೈ, ಸಿರಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ಅಜ್ರಿ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ಮಾರುಕಟ್ಟೆ ವಿಭಾಗ ಮತ್ತು ವಿವಿಧ ಉತ್ಪಾದನಾ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು, ಗೋದಾಮು ಪ್ರಬಂಧಕರು ಹಾಗೂ ಸಿರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಳ್ವಾಸ್ ಕಾಲೇಜಿನಲ್ಲಿ ಮಾಯಾಚಕ್ರ ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ

Article Image

ಆಳ್ವಾಸ್ ಕಾಲೇಜಿನಲ್ಲಿ ಮಾಯಾಚಕ್ರ ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಗೌರವ್ ಹೆಗ್ಡೆ ನಿರ್ದೇಶನದ ಕಿರುಚಿತ್ರ ‘ಮಾಯಾಚಕ್ರ’ದ ಪ್ರೀಮಿಯರ್ ಷೋ ಆಳ್ವಾಸ್ ಕಾಲೇಜಿನ ರಾಷ್ಟ್ರೀ ಯ ಸೇವಾ ಯೋಜನೆಯ ಸಹಯೋಗದಲ್ಲಿ ಕಾಲೇಜಿನ ಆಡಿಯೋ ವೀಡಿಯೋ ಥಿಯೇಟರ್‌ನಲ್ಲಿ ನಡೆಯಿತು. ಕಿರುಚಿತ್ರ ವೀಕ್ಷಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಗೌರವ್ ಹೆಗ್ಡೆ ಮತ್ತು ಅವರ ತಂಡದ ಚೊಚ್ಚಲ ಪ್ರಯತ್ನವನ್ನು ಶ್ಲಾಘಿಸಿದರು. ಎಳವೆಯಲ್ಲಿಯೇ ಇಂತಹ ಸೃಜನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಸಮಾಜಕ್ಕೆ ಪ್ರೇರಣಾದಾಯಕ. ತನಿಖಾ ಪತ್ರಿಕೋದ್ಯಮದ ಕಥಾಹಂದರ ಹೊಂದಿರುವ ಈ ಕಿರುಚಿತ್ರವು, ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸಬೇಕಾಗುವ ತೊಂದರೆಗಳು, ಸವಾಲುಗಳು ಮತ್ತು ಸಮಾಜದ ಒತ್ತಡಗಳ ನೈಜ ಚಿತ್ರಣವನ್ನು ನೀಡುತ್ತದೆ. ‘ಮಾಯಾಚಕ್ರ’ದ ಇನ್ನೊಂದು ವಿಶೇಷತೆ, ಚಿತ್ರದಲ್ಲಿ ಸ್ಥಳೀಯ ಸ್ಥಳಗಳು ಮತ್ತು ಪ್ರತಿಭೆಗಳನ್ನು ಬಳಸಿರುವುದು. ಈ ಮೂಲಕ ಗ್ರಾಮೀಣ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ, ಪ್ರತಿಭಾವಂತರಿಗೆ ತಮ್ಮ ನಟನಾ ಕೌಶಲ್ಯವನ್ನು ತೋರಿಸಲು ವೇದಿಕೆ ಒದಗಿಸಲಾಗಿದೆ ಎಂದರು. ಸಿನಿಮಾದ ನಿರ್ದೇಶಕ ಗೌರವ್ ಹೆಗ್ಡೆ ಮಾತನಾಡಿ, “ಈಗಿನ ರೀಲ್ಸ್ ಜಮಾನದಲ್ಲಿ ದೀರ್ಘ ಅವಧಿಯ ಕಿರುಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಒಂದು ಸವಾಲಿನ ಕೆಲಸ. ಆ ಅಂಶವನ್ನು ಮನದಲ್ಲಿ ಇಟ್ಟುಕೊಂಡು, ನಾವು ಸುಮಾರು ಅರ್ಧ ಗಂಟೆಯ ಅವಧಿಯ ಸಿನಿಮಾವನ್ನು ತಯಾರಿಸಿದ್ದೇವೆ. ಈ ಕಿರುಚಿತ್ರದ ಮೂಲಕ ಸಾಮಾನ್ಯ ಜನರ ಹಕ್ಕನ್ನು ಪ್ರಶ್ನಿಸಲು ಮುಂದಾದ ಒಬ್ಬ ಪತ್ರಕರ್ತೆಯ ಧೈರ್ಯ, ಸತ್ಯಕ್ಕಾಗಿ ಹೋರಾಟ ಮತ್ತು ಆ ಹೋರಾಟದ ವಿರುದ್ಧ ಬಲಿಷ್ಠ ಲಾಬಿ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ತಿಳಿಸಲಾಗಿದೆ. ಮಾಧ್ಯಮದ ಜವಾಬ್ದಾರಿ, ಸಮಾಜದಲ್ಲಿ ಬೇರೂರಿರುವ ಅಸಮರ್ಪಕ ಪದ್ಧತಿಗಳ ವಿರುದ್ಧ ಧೈರ್ಯದಿಂದ ನಿಲ್ಲುವ ಅಗತ್ಯ ಮತ್ತು ಸತ್ಯಕ್ಕಾಗಿ ಹೋರಾಡುವವರ ಎದುರಿಸುವ ಸಂಕಷ್ಟಗಳನ್ನು ಚಿತ್ರಿಸಲಾಗಿದೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ. ಕುರಿಯನ್ ಮಾತನಾಡಿ, ಆಸಕ್ತಿಯ ಹಾದಿಯಲ್ಲಿ ನಿರಂತರ ಪ್ರಯತ್ನ ಮಾಡಿದರೆ ಖಂಡಿತವಾಗಿಯೂ ಯಶಸ್ಸು ನಮ್ಮದಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಆಸಕ್ತಿಯನ್ನು ಗುರುತಿಸಿ, ಅದನ್ನು ಪೋಷಿಸುತ್ತಾ ಸಾಗಬೇಕು ಎಂದರು. ಸಂಗೀತ ನಿರ್ದೇಶಕ ಹಾಗೂ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಗೌತಮ್ ಮಾತನಾಡಿ, ಸಾಧಾರಣ ಕಥಾಹಂದರದ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶವನ್ನು ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದರು. ಕಾರ‍್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಸುದೀಪ್ ಇದ್ದರು. ಕಿರಣ್ ಕಾರ‍್ಯಕ್ರಮ ನಿರೂಪಿಸಿ, ಶಶಾಂಕ್ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು.

ಎಸ್.ಡಿ.ಎಂ ಸ್ಟ್ಯಾಟ್ ಎಕ್ಸ್‌ಪ್ಲೋರ್ ಅಸೋಸಿಯೇಷನ್‌ಗೆ ಚಾಲನೆ

Article Image

ಎಸ್.ಡಿ.ಎಂ ಸ್ಟ್ಯಾಟ್ ಎಕ್ಸ್‌ಪ್ಲೋರ್ ಅಸೋಸಿಯೇಷನ್‌ಗೆ ಚಾಲನೆ

ಉಜಿರೆ,ಸೆ.22: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗವಕಾಶ ಕಡಿಮೆಯಾಗುತ್ತಿಲ್ಲ. ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಜಿ. ಎಸ್. ತ್ಯಾಗರಾಜು ಹೇಳಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗದ ‘ಸ್ಟ್ಯಾಟ್ ಎಕ್ಸ್‌ಪ್ಲೋರ್ ಅಸೋಸಿಯೇಷನ್’ನ ಕಾರ್ಯಚಟುವಟಿಕೆಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ದಿ ರೋಲ್ ಆಫ್ ಸ್ಟ್ಯಾಟಿಸ್ಟಿಕ್ಸ್ ಇನ್ ಬಿಲ್ಡಿಂಗ್ ರಿಲಯೇಬಲ್ ಎಐ ಸಿಸ್ಟಮ್’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕೃತಕ ಬುದ್ಧಿಮತ್ತೆಗೆ ಪೂರಕವಾದ ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕಂಪ್ಯೂಟರ್ ಆವಿಪ್ಕಾರವಾದಾಗ ಹಲವರು ಉದ್ಯೋಗವಕಾಶಗಳನ್ನು ಕಳೆದುಕೊಂಡರು. ಮುಂದೆ ಅದರೊಂದಿಗೆಯೇ ಹೊಸ ಕೌಶಲ್ಯಗಳನ್ನು ಬೆಳೆಸಿಕೊಂಡು ಹೊಸ ಬಗೆಯ ಉದ್ಯೋಗಳನ್ನು ಸೃಷ್ಟಿಸಿಕೊಂಡರು. ಅದರಂತೆಯೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನ ಹೊಸ ಕೌಶಲ್ಯಗಳೊಂದಿಗೆ ಮುಂದುವರಿಯಬೇಕಾಗಿದೆ ಎಂದರು. ಎಐ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ತಾಂತ್ರಿಕತೆ. ಸಂಖ್ಯಾಶಾಸ್ತ್ರದ ಸಾಧ್ಯತೆಗಳನ್ನು ಎಐ ವಿಸ್ತರಿಸಬಲ್ಲದು. ಸಂಖ್ಯಾಶಾಸ್ತ್ರ, ವಲಯದಲ್ಲಿ ನೂತನ ಆವಿಷ್ಕಾರಗಳನ್ನು ರೂಪಿಸುವುದಕ್ಕೆ ಎಐ ತಂತ್ರಜ್ಞಾನವನ್ನು ಪೂರಕವಾಗಿಸಿಕೊಳ್ಳಬೇಕು. ಎಲ್ಲಾ ವಿಷಯಗಳಲ್ಲಿಯೂ ನಿಖರತೆ ಅವಶ್ಯಕ. ಈ ನಿಖರತೆಗೆ ಸಂಖ್ಯಾಶಾಸ್ತ್ರದ ಅಗತ್ಯವಿದೆ. ಈ ನಿಖರತೆಯ ಸ್ವರೂಪವನ್ನು ಇನ್ನಷ್ಟು ಅಧಿಕೃತಗೊಳಿಸುವುದಕ್ಕೆ ಎಐ ತಂತ್ರಜ್ಞಾನ ನೆರವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಸ್ನಾತಕೋತ್ತರ ಕೇದ್ರದ ಡೀನ್ ಸೌಮ್ಯ ಬಿ.ಪಿ ಮಾತನಾಡಿದರು. ಸರಕಾರವು ಹೊಸ ನೀತಿ ನಿಯಮಗಳನ್ನು ಅಭಿವೃದ್ಧಿಪಡಿಸುವಾಗ ಸಾಂಖ್ಯಿಕ ಮಾಹಿತಿಯನ್ನೇ ಅವಲಂಬಿಸಿರುತ್ತದೆ. ಉದ್ಯಮ ವಲಯ ಮತ್ತು ವ್ಯವಹಾರಗಳಲ್ಲಿಯೂ ಕೂಡ ಸಂಖ್ಯಾಶಾ‌ಸ್ತ್ರವೇ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇದರ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ‍್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಕುಮಾರಿ ಉಪಸ್ಥಿತರಿದ್ದರು. ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಪ್ರಕೃತಿ ಟಿ.ಪಿ ವಂದಿಸಿದರು.

ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯಗಳು ಪೂರಕ: ಡಾ. ಸತೀಶ್ಚಂದ್ರ ಎಸ್

Article Image

ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯಗಳು ಪೂರಕ: ಡಾ. ಸತೀಶ್ಚಂದ್ರ ಎಸ್

ಸಾಹಿತ್ಯಗಳಲ್ಲಿ ಬರುವ ವಿಷಯಗಳು ಜನರ ಮತ್ತು ಸಮಾಜದ ಉನ್ನತಿಗೆ ಕಾರಣವಾಗಿವೆ. ತತ್ವಪದಗಳು ನೈತಿಕ ಮೌಲ್ಯಗಳನ್ನು ಒಳಗೊಂಡಿವೆ.ಮಾನವನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಾಹಿತ್ಯಗಳನ್ನು ತಿಳಿಯಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಹೇಳಿದರು. ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಕನ್ನಡ ವಿಭಾಗ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತತ್ವಪದಗಳು - ಸಾಂಸ್ಕೃತಿಕ ಅನುಸಂಧಾನ, ಸೆ.19 ಮತ್ತು 20 ರಂದು ನಡೆಯಲಿರುವ ಎರಡು ದಿನಗಳ ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಖನಿಜಗಳ ನಿಕ್ಷೇಪಗಳು ಹೇಗೆ ಅಡಗಿದೆಯೋ ಹಾಗೆ ಸಾಹಿತ್ಯ - ಸಂಸ್ಕೃತಿಗಳಲ್ಲಿ ಹಲವಾರು ನಿಕ್ಷೇಪಗಳು ಅಡಗಿದೆ. ನಮ್ಮ ದೇಶದ ಒಂದು ಆಸ್ತಿಯೆಂದರೆ ಅದು ಸಾಂಸ್ಕೃತಿಕತೆ. ಅದರಲ್ಲಿ ಪ್ರಚಲಿತ ವಿಚಾರಗಳು ಬಹಳಷ್ಟು ಕಾಣಸಿಗುತ್ತದೆ. ಅವುಗಳನ್ನು ಅರಿತು ಮೌಲ್ಯಾಧಾರಿತ ಮಾನವರಾಗಿ ಬೆಳೆಯಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. 'ಹಿಂದಿನ ಚರಿತ್ರೆಯನ್ನು ನಾವು ನೋಡಿದರೆ ಸಮಾಜದಲ್ಲಿ ಹಲವಾರು ಬೇಧಭಾವ ಹಾಗೂ ಸಂಕುಚಿತ ಮನೋಭಾವನೆ ನಮ್ಮಲ್ಲಿತ್ತು. ಆ ಸಮಾಜದಲ್ಲಿ ಸಮಾನತೆಯನ್ನು ತರಲು ತತ್ವಪದಗಳು, ದಾಸಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳು ಕಾರಣವಾದವು. ತತ್ವಪದಗಳ ಸಾರವನ್ನು ವಿದ್ಯಾರ್ಥಿಗಳು ತಿಳಿದು ಸಮಾಜದಲ್ಲಿ ಒಳ್ಳೆಯ ವಾಗ್ಮಿಗಳಾಗಲಿ' ಎಂದರು. ಕನ್ನಡ ವಿಭಾಗದ ಭಿತ್ತಿಪತ್ರಿಕೆಯಾದ 'ಸಿರಿಗನ್ನಡ' ದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ಅಧಿಕಾರಿಯಾದ ಎಸ್. ಸತ್ಯನಾರಾಯಣ, ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕರಾದ ಪ್ರೊ. ಎಸ್.ಎನ್. ಕಾಕತ್ಕಾರ್ ಹಾಗೂ ಹಲವು ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್. ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ. ಎ. ವಂದಿಸಿದರು. ಕನ್ನಡ ಪ್ರಾಧ್ಯಾಪಕರಾದ ಭವ್ಯಶ್ರಿ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದು.

ಆಳ್ವಾಸ್ ಪಿಯು ಕಾಲೇಜಿನಲ್ಲಿ ನಾಟಾ ಓರಿಯೆಂಟೇಷನ್

Article Image

ಆಳ್ವಾಸ್ ಪಿಯು ಕಾಲೇಜಿನಲ್ಲಿ ನಾಟಾ ಓರಿಯೆಂಟೇಷನ್

ಮೂಡಬಿದಿರೆ: ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ನಾಟಾ ಪರೀಕ್ಷೆಯ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪ ಕ್ಷೇತ್ರದ ಭವಿಷ್ಯ ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು. ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್‌ನ ನಿರ್ದೇಶಕ ವಿನೋದ್ ರ‍್ಹಾನ ಮಾತನಾಡಿ, ವಾಸ್ತುಶಿಲ್ಪದಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕಲಾತ್ಮಕ ಚಿಂತನೆಯ ಸಮನ್ವಯ ಅಗತ್ಯ. ಪಿಯುಸಿ ನಂತರ ವಾಸ್ತುಶಿಲ್ಪ ಪದವಿಗೆ ಪ್ರವೇಶ ಪಡೆಯಲು ದೇಶದಾದ್ಯಂತ ನಡೆಯುವ ನಾಟಾ (NATA) ಹಾಗೂ ಜೆಇಇ ಬಿಆರ್ಕ್ (JEE B.Arch) ಪರೀಕ್ಷೆಗಳ ಮಹತ್ವವನ್ನು ವಿವರಿಸಿದರು. ನಾಟಾ ಪರೀಕ್ಷೆಯಲ್ಲಿ ಗಣಿತ, ರೇಖಾಚಿತ್ರ ದೃಶ್ಯಗ್ರಹಣ ಹಾಗೂ ತಾರ್ಕಿಕ ಚಿಂತನೆಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಸಿದ್ಧತೆಗಾಗಿ ಸೂಕ್ತ ಮಾರ್ಗದರ್ಶನ ಒದಗಿಸಿದರು. ಬಿ.ಆರ್ಕ ಪದವಿಯ ಕುರಿತು ಮಾತನಾಡಿ, ಈ ಐದು ವರ್ಷದ ಕೋರ್ಸ್ನಲ್ಲಿ ವಾಸ್ತು ವಿನ್ಯಾಸ, ನಗರ ಯೋಜನೆ, ಪರಿಸರ ಸ್ನೇಹಿ ನಿರ್ಮಾಣ ಮುಂತಾದ ಹಲವು ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಬಿ.ಆರ್ಕ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕರ, ನಗರ ಯೋಜನೆ ಮುಂತಾದ ಅನೇಕ ವೃತ್ತಿ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು. ನಿಟ್ಟೆ ವಿವಿಯ ಆರ್ಕಿಟೆಕ್ಚರ್ ವಿಭಾಗದ ಸಹಾಯಕ ಪ್ರಾಧ್ಯಪಕ ನಿಕಿತಾ ಮಖಾಸನ ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಾಗ ಕೇವಲ NEET, JEE, CET ಪರೀಕ್ಷೆಗಳಿಗಷ್ಟೇ ಸೀಮಿತರಾಗದೆ, ಲಭ್ಯವಿರುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಬೇಕು. ಇಂದಿನ ಪೀಳಿಗೆ ಅವಕಾಶಗಳ ಜಗತ್ತನ್ನು ಅನ್ವೇಷಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಕೇವಲ ಒಂದು ಅಥವಾ ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸದೆ, ಹೊಸ ಹೊಸ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿದರೆ ಮಾತ್ರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು. ಸಮಾಜಕ್ಕೆ ಅಗತ್ಯವಿರುವ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದರೆ, ತಮ್ಮ ವೃತ್ತಿಜೀವನದೊಂದಿಗೆ ರಾಷ್ಟ್ರ ನಿರ್ಮಾಣದಲ್ಲೂ ಸಹ ಪಾತ್ರವಹಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕರಾದ ಗೌತಮ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸುಧಾರಾಣಿ ನಿರೂಪಿಸಿದರು.

ಗೌರವ ದಯೆ ಹಾಗೂ ಅರ್ಥಮಾಡಿಕೊಳ್ಳುವ ಮನೋಭಾವದಿಂದ ಶಾಂತಿ ಸಾಧ್ಯ : ಅಜೇಯ

Article Image

ಗೌರವ ದಯೆ ಹಾಗೂ ಅರ್ಥಮಾಡಿಕೊಳ್ಳುವ ಮನೋಭಾವದಿಂದ ಶಾಂತಿ ಸಾಧ್ಯ : ಅಜೇಯ

ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಪೀಳಿಗೆ ಹಾಗೂ ಮುಂದಿನ ನಾಯಕರು, ವಿಜ್ಞಾನಿಗಳು ಮತ್ತು ಸಮಾಜ ಪರಿವರ್ತಕರು. ಆದರಿಂದ ಶಾಂತಿ ನಮ್ಮಿಂದಲೇ ಆರಂಭವಾಗಬೇಕು. ನಾವು ಪರಸ್ಪರ ಮಾತನಾಡುವ ರೀತಿ, ನಾವು ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ವಿಧಾನ ಇವೆಲ್ಲವೂ ಶಾಂತಿಗೆ ವೇದಿಕೆ ನೀಡುತ್ತದೆ. ಎಂದು ಉಜಿರೆಯ ರೂಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ. ಧ. ಮಂ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗವು ಆಯೋಜಿಸಿದ ಅಂತರಾಷ್ಟ್ರೀಯ ಶಾಂತಿ ದಿನ ಕಾರ್ಯಕ್ರಮ ಸೆಪ್ಟಂಬರ್ 23ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಶಾಂತಿಯನ್ನು ಉತ್ತೇಜಿಸಲು ಏನು ಮಾಡಬಹುದೆಂದರೆ : ನಾವು ಮಾಡುವ ಚಿಕ್ಕ ಕೆಲಸಗಳು ಕೂಡ ಮುಂದೆ ದೊಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಕರಾತ್ಮಕತೆ ಹರಡುವುದನ್ನು ತಪ್ಪಿಸುವುದು ಮುಖ್ಯವಾಗಿದೆ ಹಾಗೂ ಶಾಂತಿ ಪೂರ್ಣ ಮಾತುಗಳು ಮತ್ತು ಕ್ರಿಯೆಗಳನ್ನು ನಮ್ಮ ವಯಕ್ತಿಕ ಜೀವನ ಹಾಗೂ ಕಾಲೇಜು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಹಾಗೆಯೇ "ನಮ್ಮ ಯಶಸ್ಸು ಜೀವನದ ಶಾಂತಿ" ಎಂದು ತಿಳಿಸಿದರು. ವಿಭಾಗದ ಮುಖ್ಯಸ್ಥ ನಟರಾಜ್ ಎಚ್. ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇವತ್ತು ಯುವಕರು ಯಾಕೆ ತೊಂದರೆಗೊಳಾಗುತ್ತಾರೆ ಎಂದರೆ ಇಡೀ ಪ್ರಪಂಚದಲ್ಲಿ ನೋಡುವುದಾದರೆ ಯುವಕರು ತೊಂದರೆಗೆ ಸಿಲುಕಿದಾಗಲೇ ಅಲ್ಲಿ ಶಾಂತಿ ಕದಳುತ್ತಾ ಬರುತ್ತದೆ ಕಾರಣ ಯುದ್ಧಗಳು ಹಾಗೂ ಯುದ್ಧಗಳಿಂದ ಬಲಿಯದಂತಹ ವ್ಯಕ್ತಿಗಳು. ಹಾಗೆಯೇ ಬದುಕನ್ನು ಕಟ್ಟಿಕೊಂಡವನಿಗೆ ಶಾಂತಿಯನ್ನು ಹಾಳು ಮಾಡಿಕೊಳ್ಳುವಂತಹ ದಾರಿಗಳು ಸಿಗುವುದಿಲ್ಲ. ಇಂದು ಸಾಮಾಜಿಕ ಮಾಧ್ಯಮಗಳು ಯುವಕರನ್ನು ದಾರಿ ತಪ್ಪಿಸುವಂತೆ ಮಾಡುತ್ತಿದೆ. ಹಾಗೂ ಪ್ರತಿ ಹಂತದಲ್ಲಿಯೂ ಕೂಡ ಶಾಂತಿಯನ್ನು ಪ್ರಚೋದಿಸುತ್ತಾ ಪ್ರತಿಪಾದಿಸುತ್ತಾ ಬಂದಿರುವ ದೇಶ ನಮ್ಮದು. ಇವತ್ತು ನಾವು ಭಾರತವನ್ನು ತಿರುಗಿ ನೋಡುವ ಪರಿಸ್ಥಿತಿಗೆ ಬೆಳಿತಾ ಇದ್ದೇವೆ . ಹಾಗೂ ವಿಶ್ವಗುರುವಾಗಿ ಬದಲಾಗುತ್ತಿದೆ ನಮ್ಮ ದೇಶ. ನಮ್ಮೆಲ್ಲಾರ ಉದ್ದೇಶ ಶಾಂತಿ ಸ್ಥಾಪನೆಗೋಸ್ಕರವಾಗಿದೆ . ಹಾಗೂ ಈ ದೇಶಕ್ಕೆ, ಮಣ್ಣಿಗೆ ಹಾಗೂ ಮಕ್ಕಳಿಗೆ ಶಾಂತಿ ಸ್ಥಾಪನೆಯ ಭಾಷಣ ಅವಶ್ಯಕತೆ ಇಲ್ಲ ಯಾಕೆಂದರೆ ಅದು ನಮ್ಮ ರಕ್ತದಲ್ಲೇ ಇದೆ ಎಂದು ತಿಳಿಸಿದರು. ಹಾಗೆ ರಾಜಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಕಲಿಸಿಕೊಡುತ್ತದೆ, ಶಾಂತಿ ದಿನ, ಹಾಗೂ ಕಾರ್ಗಿಲ್ ದಿನವನ್ನು ಕೂಡ ಆಚರಿಸುತ್ತಾ ಬಂದಿದೆ. ಇದರ ಉದ್ದೇಶ ವಿದ್ಯಾರ್ಥಿಗಳಿಗೆ ದೇಶದ ತ್ಯಾಗ ಹಾಗೂ ಬಲಿದಾನದ ಬಗ್ಗೆ ತೋರಿಸುವ ಉದ್ದೇಶವಾಗಿದೆ. ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಂತಿ ದಿನದ ಪ್ರಮಾಣವಚನವನ್ನು ವಿದ್ಯಾರ್ಥಿಗಳು ಹಾಗೂ ವಿಭಾಗದ ಪ್ರಾಧ್ಯಾಪಕರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಭಾಗ್ಯಶ್ರೀ ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿಗಳಾದ ಮಾನವ ನಿರೂಪಿಸಿದರು, ಶ್ರೇಯಂಕ್ ಸ್ವಾಗತಿಸಿದರು, ಪದ್ಮಶ್ರೀ ಅತಿಥಿಯನ್ನು ಪರಿಚಯಿಸಿದರು, ಹಾಗೂ ವಿಭಾಗದ ಪ್ರಾಧ್ಯಾಪಕ ಡಾ. ಶಿವಕುಮಾರ್ ವಂದಿಸಿದರು.

ಶತಮಾನಗಳೇ ಕಲಿತರು ವಿದ್ಯೆಗೆ ವಯಸ್ಸಿಲ್ಲ: ಡಾ. ಬಿ.ಎ ಕುಮಾರ ಹೆಗ್ಡೆ

Article Image

ಶತಮಾನಗಳೇ ಕಲಿತರು ವಿದ್ಯೆಗೆ ವಯಸ್ಸಿಲ್ಲ: ಡಾ. ಬಿ.ಎ ಕುಮಾರ ಹೆಗ್ಡೆ

ಚರಿತ್ರೆಯ ಆಳವಾದ ಜ್ಞಾನ ನಾವು ತಿಳಿಯಬೇಕು. ಹಿಂದಿನ ಕಾಲಘಟ್ಟದವರು ಬಹಳ ಸೂಕ್ಷ್ಮವಾಗಿ ಆಲೋಚನೆ ಮಾಡುತ್ತಾ ಇದ್ದರು. ಅವರ ವಿದ್ಯೆಗೆ ಸಾಟಿಯಿಲ್ಲ, ಶತಮಾನಗಳೇ ಕಲಿತರು ವಿದ್ಯೆಗೆ ವಯಸ್ಸಿಲ್ಲ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಕನ್ನಡ ವಿಭಾಗ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತತ್ವಪದಗಳು - ಸಾಂಸ್ಕೃತಿಕ ಅನುಸಂಧಾನ ಎರಡು ದಿನಗಳ ರಾಷ್ಟೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನ ಸ್ಥಿತಿಗತಿಗಳನ್ನು ಅರಿತು ಬಹಳ ಖರಾರುವಕ್ಕಾಗಿ ತತ್ವಪದಕಾರರು ಸಮಾಜಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ತತ್ವಪದಕಾರರು ಕೊಟ್ಟ ವಿಷಯಗಳು ಅಧ್ಯಯನಕ್ಕೆ ಉತ್ತಮವಾದ ವಿಷಯಗಳಾಗಿವೆ. ಅವರಿಗೆ ತಿಳಿದ ಅಥವಾ ಅನುಭವಕ್ಕೆ ಬಂದ ವಿಷಯಗಳನ್ನು ತತ್ವಪದಕಾರರು ಪದ್ಯಗಳ ಮೂಲಕ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತತ್ವಪದಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. "ಈ ಕಾರ್ಯಕ್ರಮಕ್ಕೆ ವಿಧ್ಯಾರ್ಥಿಗಳ ನಾಡಿಮಿಡಿತವನ್ನು ಅರಿತು ಮಾಹಿತಿ ನೀಡುವ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳು ಬಹಳ ಚುರುಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಹಳ ತಾಳ್ಮೆಯಿಂದ ಪ್ರೀತಿಯಿಂದ ಕಾರ್ಯಕ್ರಮ ನಡೆಸಲು ಸಹಕರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಾಧ್ಯಾಪಕಿ ಜಯಶ್ರೀ ಹಾಗೂ ವಿದ್ಯಾರ್ಥಿಗಳಾದ ಅನಿರುದ್ಧ್, ಅನನ್ಯ, ಮನೀಷ್ ಮತ್ತು ಶೇಖರ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಪ್ರಾಧ್ಯಾಪಕರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ನಾಗಣ್ಣ ಡಿ. ಎ. ಸ್ವಾಗತಿಸಿ, ಕನ್ನಡ ವಿಭಾಗದ ಪ್ರಾಧ್ಯಾಪಕಿ ಭವ್ಯಶ್ರೀ ಬಲ್ಲಾಳ್ ನಿರೂಪಿಸಿ ವಂದಿಸಿದರು.

ಉಜಿರೆ ರುಡ್‌ಸೆಟ್ ಸಂಸ್ಥೆ ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭೇಟಿ

Article Image

ಉಜಿರೆ ರುಡ್‌ಸೆಟ್ ಸಂಸ್ಥೆ ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭೇಟಿ

ಉಜಿರೆ: ಉಜಿರೆಯ ಸಿದ್ಧವನ ರುಡ್ ಸೆಟ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯಲ್ಲಿ ನಡೆಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತಾ ರುಡ್‌ಸೆಟ್ ಸಂಸ್ಥೆಗಳ ತರಬೇತಿಯಲ್ಲಿ ಪ್ರಯೋಗಿಕ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದರಿಂದ ಶಿಭಿರಾರ್ಥಿಗಳಿಗೆ ಹೆಚ್ಚು ಕೌಶಲ್ಯ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು. ಇದರಿಂದ ಸ್ವಂತ ಉದ್ಯೋಗ ಪ್ರಾರಂಬಿಸಲು ಅನುಕೂಲವಾಗುತ್ತದೆ, ಇಲ್ಲಿನ ತರಬೇತಿ ಪಡೆದ ನಂತರವೂ ಹೊಸ ಹೊಸ ತಂತ್ರಜ್ಞಾನಗಳನ್ನು ನವೀಕರಿಸಿಕೊಳ್ಳಿ, ಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ ಹಾಗೂ ಉದ್ಯಮಿಗಳು ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಂಡಾಗ ಲಾಭ ನಷ್ಟಗಳ ವಿವರ ದೊರೆಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀಯುತ ನರ್ವಾಡೆ ವಿನಾಯಕಕಾರಭಾರಿ IAS, ಹೇಳಿ ತರಬೇತಿ ಪಡೆದಯಿತ್ತಿರುವ ಎಲ್ಲರಿಗೂ ಶುಭ ಹಾರೈಸಿದರು ನಂತರ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ರುಡ್ ಸೆಟ್ ಸಂಸ್ಥೆಯ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿ, ಸಲಹೆಗಳನ್ನು ನೀಡಿ ಸಹಕಾರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಗ್ರಣಿ ಬ್ಯಾಂಕಿನ್ ಮುಖ್ಯ ಪ್ರಬಂಧಕರಾದ ಕವಿತಾ ಎನ್ ಶೆಟ್ಟಿ ಹಾಗೂ ನರ್ಬಾಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತಾ ಕರ್ತಾ, ಶ್ರೀ ಧರ್ಮಸ್ಥ ಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಡಾ. ಎಸ್ ಸತೀಶ್ಚಂದ್ರ, ಉಜಿರೆ ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕರಾದ ಜಯಂತ ಅಡಿಗ ಮತ್ತು ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಜಯ ಕುಮಾರ ಬಿ.ಪಿ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಉಪಸ್ಥಿತರಿದ್ದರು.

ಕರ್ನಾಟಕ ಸೀನಿಯರ್ ವಾಲಿಬಾಲ್ ಚಾಂಪಿಯನಶಿಪ್: ಆಳ್ವಾಸ್ ಚಾಂಪಿಯನ್ಸ್

Article Image

ಕರ್ನಾಟಕ ಸೀನಿಯರ್ ವಾಲಿಬಾಲ್ ಚಾಂಪಿಯನಶಿಪ್: ಆಳ್ವಾಸ್ ಚಾಂಪಿಯನ್ಸ್

ಮೂಡುಬಿದಿರೆ: ಕರ್ನಾಟಕ ವಾಲಿಬಾಲ್ ಸಂಸ್ಥೆ ಆಯೊಜಿಸಿದ್ದ ಲೋಕೆಶ್ ಗೌಡ ಟ್ರೋಫಿ ಕರ್ನಾಟಕ ಸೀನಿಯರ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಸ್ಪೋಟ್ಸ್ ಕ್ಲಬ್ ತಂಡ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರಿನ ಶ್ರೀಕಂಠಿರವ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ 3-1 ಅಂತರದಿಂದ ಕರ್ನಾಟಕ ರಾಜ್ಯ ಪೋಲಿಸ್ ತಂಡವನ್ನು ಮಣಿಸಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಆಳ್ವಾಸ್ ಆಟಗಾರರು ಪ್ರಶಸ್ತಿಗೆ ಮುತ್ತಿಕ್ಕಿದರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡ, ಕ್ರೀಡಾ ಹಾಸ್ಟೆಲ್ ಬಿಜಿ ತಂಡವನ್ನು 3-1 ಅಂತರದಿಂದ ಪರಭವಗೊಳಿಸಿತ್ತು. ವಿಜೇತರಿಗೆ ಕರ್ನಾಟಕದ ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಪ್ರಶಸ್ತಿ ವಿತರಿಸಿದರು. ವಿಜೇತ ತಂಡದ ಸದಸ್ಯರನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ : 23 ಶ್ರೇಷ್ಠ ಭಜನಾ ಮಂಡಳಿಗಳಿಗೆ ಸಾಧಕ ಪ್ರಶಸ್ತಿ ಪ್ರದಾನ

Article Image

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ : 23 ಶ್ರೇಷ್ಠ ಭಜನಾ ಮಂಡಳಿಗಳಿಗೆ ಸಾಧಕ ಪ್ರಶಸ್ತಿ ಪ್ರದಾನ

ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದಲ್ಲಿ ಉತ್ತಮ ಸೇವೆ, ಸಾಧನೆ ಮಾಡಿದ 23 ಭಜನಾ ಮಂಡಳಿಗಳಿಗೆ “ಸಾಧಕ ಪ್ರಶಸ್ತಿ” ಪ್ರದಾನ ಮಾಡಿ ಅಭಿನಂದಿಸಿದರು. ಭಜನೆ ಮಾಡುವಾಗ ಪರಿಶುದ್ಧ ತನು, ಮನದಿಂದ ದೃಢಸಂಕಲ್ಪದೊಂದಿಗೆ ಯಾವುದೇ ರೀತಿಯ ಚಿಂತೆ, ಸಂಕೋಚ ಇಲ್ಲದೆ ಭಕ್ತಿ ಹಾಗೂ ಉತ್ಸಾಹದಿಂದ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಎಲ್ಲಾ ಭಜನಾ ಮಂಡಳಿಗಳ ಸೇವಾ ಕಳಕಳಿ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು ಹಿಂದೆ ಎಲ್ಲಾ ಕಡೆಗಳಲ್ಲಿ “ಜನ ಮರುಳೋ, ಜಾತ್ರೆ ಮರುಳೋ” ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಎಲ್ಲೆಡೆ ಭಜನಾ ಮಂಡಳಿಗಳಿಂದಾಗಿ ಎಲ್ಲಾ ಊರುಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಸಭೆ-ಸಮಾರಂಭ, ಹಬ್ಬ ಹರಿದಿನಗಳಲ್ಲಿ ಶಿಸ್ತು, ಸಂಯಮ, ಸ್ವಚ್ಛತೆ, ಬದ್ಧತೆ ಹಾಗೂ ಸೇವಾ ಕಳಕಳಿ ಕಂಡುಬರುತ್ತಿರುವುದು ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡಿದೆ ಎಂದು ಹೆಗ್ಗಡೆಯವರು ಅಭಿಪ್ರಾಯ ವ್ಯಕ್ತಪಡಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ವಿಶೇಷವಾಗಿ ಭಜನೆಯಲ್ಲಿ ಪುಟ್ಟಮಕ್ಕಳ ಪ್ರತಿಭೆ, ಆಸಕ್ತಿ ಮತ್ತು ಉತ್ಸಾಹವನ್ನು ಅವರು ಶ್ಲಾಘಿಸಿದರು. ಭಜನಾ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಸಾಲಿಯಾನ್ ಮತ್ತು ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಹಾಗೂ ಎಲ್ಲಾ ಪದಾಧಿಕಾರಿಗಳ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು. ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತು ಭಜನಾ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಸಾಲಿಯಾನ್ ಇದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಮಂಡಳಿಗಳ ಸೇವೆ, ಸಾಧನೆಯನ್ನು ಸಾದರಪಡಿಸಿದರು. ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ಸ್ವಾಗತಿಸಿದರು. ಭಜನಾ ಪರಿಷತ್‌ನ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಧನ್ಯವಾದವಿತ್ತರು. ವಕೀಲ ಕೇಶವ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಪರಿಷತ್: ಪದಾಧಿಕಾರಿಗಳ ವಾರ್ಷಿಕ ಸಭೆ

Article Image

ಭಜನಾ ಪರಿಷತ್: ಪದಾಧಿಕಾರಿಗಳ ವಾರ್ಷಿಕ ಸಭೆ

ಉಜಿರೆ: ಜೀವನದಲ್ಲಿ ಶಿಸ್ತಿಗೆ ಭಜನೆ ಪೂರಕವಾಗಿದೆ. ಪರಿಶುದ್ಧ ದೇಹ ಮತ್ತು ಮನಸ್ಸಿನಿಂದ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಗುರುವಾರ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಪದಾಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಹೇಮವತಿ ವೀ. ಹೆಗ್ಗಡೆಯವರು ಶುಭಾಶಂಸನೆ ಮಾಡಿ ಭಜನಾ ಪರಿಷತ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀನಿವಾಸರಾವ್, ಸತೀಶ್ ಸುಳ್ಯ ಮತ್ತು ಲೋಕೇಶ್ ಅನಿಸಿಕೆ ವ್ಯಕ್ತಪಡಿಸಿದರು. ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಚಂದ್ರಶೇಖರ ಸಾಲ್ಯಾನ್ ಸ್ವಾಗತಿಸಿದರು. ರವೀಂದ್ರ ಧನ್ಯವಾದವಿತ್ತರು. ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು.

ಆಳ್ವಾಸ್ ಟೆಕ್ ಪಾರ್ಕ್ನಲ್ಲಿ ಸ್ವಿಚ್‌ಗೇರ್ ಕಂಪನಿ ಶಾಖೆ ಉದ್ಘಾಟನೆ

Article Image

ಆಳ್ವಾಸ್ ಟೆಕ್ ಪಾರ್ಕ್ನಲ್ಲಿ ಸ್ವಿಚ್‌ಗೇರ್ ಕಂಪನಿ ಶಾಖೆ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ ಪಾರ್ಕ್ನಲ್ಲಿ ಸ್ವಿಚ್‌ಗೇರ್ ಅಂಡ್ ಕಂಟ್ರೋಲ್ ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ (SCTPL) ನ ಹೊಸ ಘಟಕವನ್ನು ಉದ್ಘಾಟಿಸಲಾಯಿತು. ಘಟಕ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, “ಇಂತಹ ಅಂತರರಾಷ್ಟ್ರೀಯ ಕಂಪನಿಗಳು ಕರಾವಳಿ ಭಾಗದಲ್ಲಿ ಸ್ಥಾಪನೆಯಾಗುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳು ದೊರೆತು, ಅವರ ಪ್ರತಿಭೆಗೆ ಪೂರಕ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು. ಪ್ರಸ್ತುತ ಆಳ್ವಾಸ್ ಟೆಕ್ ಪಾರ್ಕ್‌ನಲ್ಲಿ 8 ಕಾರ್ಪೊರೇಟ್ ಕಂಪನಿಗಳು, 4 ಸ್ಟಾರ್ಟ್ಅಪ್‌ಗಳು ಮತ್ತು 2 ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿವೆ. ಈಗಾಗಲೇ 75 ವಿದ್ಯಾರ್ಥಿಗಳು ತಮ್ಮ 12 ಹೊಸ ಸ್ಟಾರ್ಟ್ಅಪ್ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಕ್ರಿಯ ತರಬೇತಿ ಪಡೆಯುತ್ತಿದ್ದಾರೆ. ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಟೈ (TiE), ಸಿಐಐ (CII) ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳ ಸಹಕಾರ ಲಭ್ಯವಾಗಿದೆ ಎಂದರು. SCTPL ನಿರ್ದೇಶಕ ಹರ್ಷಿತ್ ಶೆಟ್ಟಿ ಮಾತನಾಡಿ, “ನಮ್ಮ ಕಂಪನಿ 2004ರಲ್ಲಿ ಸ್ಥಾಪನೆಯಾದ ಭಾರತೀಯ ಸಂಸ್ಥೆಯಾಗಿದ್ದು, ಲೋ ಮತ್ತು ಮಿಡಿಯಂ ವೋಲ್ಟೇಜ್ ಸ್ವಿಚ್‌ಬೋಡ್‌ಗಳು, ಬಸ್‌ವೇ ವ್ಯವಸ್ಥೆಗಳು ಹಾಗೂ ಶೀಟ್ ಮೆಟಲ್ ಎನ್‌ಕ್ಲೋಸರ್ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ವಿದ್ಯುತ್ ವಿತರಣೆ, ಶಕ್ತಿ ನಿರ್ವಹಣೆ ಮತ್ತು ಕೈಗಾರಿಕಾ ಸ್ವಯಂಚಾಲಿತ ಪರಿಹಾರಗಳಲ್ಲಿ ಕಂಪನಿಯು ಸಮಗ್ರ ಸೇವೆಗಳನ್ನು ನೀಡುತ್ತಿದೆ” ಎಂದು ತಿಳಿಸಿದರು. ಸದ್ಯ 100 ಕೋಟಿ ವ್ಯವಹಾರ ನಡೆಸುತ್ತಿದ್ದು, ಮುಂದಿನ ವರ್ಷಗಳಲ್ಲಿ 1000 ಕೋಟಿಯ ವ್ಯವಹಾರ ವೃದ್ಧಿಸುವ ಗುರಿಯಿದೆ ಎಂದರು. ಮೂಡುಬಿದಿರೆಯಲ್ಲಿ ಆರಂಭಗೊಂಡ ಈ ಘಟಕವನ್ನು ಮಿನಿಯೇಚರ್ (ಕಂಪನಿಯ ಉತ್ಪನ್ನಗಳ ಸಣ್ಣ ರೂಪ) ತಯಾರಿಕಾ ಕೇಂದ್ರವಾಗಿ ಬಳಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೆಲಸದ ಅನುಭವ ದೊರೆಯಲಿದ್ದು, ತರಬೇತಿ ಪಡೆಯುವಾಗಲೇ ಸಂಪಾದನೆ ಮಾಡುವ ಅವಕಾಶವೂ ಸಿಗಲಿದೆ. ಇಲ್ಲಿ ತರಬೇತಿ ಪಡೆಯುವವರು ಭವಿಷ್ಯದಲ್ಲಿ ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದ ಹರ್ಷಿತ್ ಶೆಟ್ಟಿ, ತನ್ನ ಇಂದಿನ ಸಾಧನೆಗೆ ಡಾ. ಎಂ. ಮೋಹನ ಆಳ್ವರಿಂದ ಕಲಿತ ಸಮಯಪಾಲನೆ, ಶಿಸ್ತು ಮತ್ತು ಪರಿಶ್ರಮವೇ ಮೂಲಾಧಾರ ಎಂದರು. ಕಾರ‍್ಯಕ್ರಮದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚರ‍್ಯ ಡಾ ಪೀಟರ್ ಫೆರ್ನಾಂಡೀಸ್ SCTPL ನಿರ್ದೇಶಕ ವಿನಯ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯಮಶೀಲಾ ಅಭಿವೃದ್ಧಿಕೋಶದ ಮುಖ್ಯಸ್ಥ ವೇಣುರಾವ್ ದೇವ್, ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಕುಮಾರಸ್ವಾಮಿ ಹಾಗೂ ಶ್ರೀನಿವಾಸ ಇದ್ದರು.

First Previous

Showing 1 of 15 pages

Next Last