ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರ
Published Date: 03-Oct-2025 Link-Copied
ಮೂಡುಬಿದಿರೆ: ಅರಣ್ಯಗಳತ್ತಾ ನಮ್ಮ ನಿಲುವು ಸದಾ ವಿವೇಚನೆಯಿಂದ ಕೂಡಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ನುಡಿದರು. ಅವರು ಆಳ್ವಾಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ, ಹಳೆವಿದ್ಯಾರ್ಥಿಗಳ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು. ಪ್ರಕೃತಿಯನ್ನು ಅವಲೋಕಿಸುವುದು ಬಹಳ ಮುಖ್ಯ. ಪ್ರಕೃತಿಯ ಪ್ರತಿಯೊಂದು ಅಂಶವೂ ನಮಗೆ ಬದುಕಿಗೆ ಪಾಠವನ್ನು ಕಲಿಸುತ್ತದೆ. ಪ್ರಕೃತಿ, ಕೇವಲ ಸಂಪನ್ಮೂಲವಲ್ಲ, ಅದು ಸುಖ-ಶಾಂತಿಯ ಅಮೂಲ್ಯ ಸಂಪತ್ತು. ಅದನ್ನು ಕಾಪಾಡುವುದು ನಮ್ಮ ನೈತಿಕ ಕರ್ತವ್ಯ ಮಾತ್ರವಲ್ಲ, ಭವಿಷ್ಯದ ಪೀಳಿಗೆಗಾಗಿ ಜೀವಸಂಪತ್ತನ್ನು ಉಳಿಸುವ ಅಗತ್ಯವೂ ನಮ್ಮದಾಗಿದೆ. ನಾವು ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಸುಖ ಮತ್ತು ಶಾಂತಿಯಿಂದ ಬದುಕಲು ಸಾಧ್ಯ. ನಾವು ವಾಸಿಸುತ್ತಿರುವ ಪ್ರದೇಶ ಜೀವ ವೈವಿಧ್ಯತೆಯ ಹಾಟ್ ಸ್ಪಾಟ್. ಜಗತ್ತಿನಲ್ಲಿ ಕೇವಲ 2 ರಿಂದ 3 ಶೇಕಡಾದಷ್ಟು ಪ್ರದೇಶವಷ್ಟೇ ಜೀವ ವೈವಿಧ್ಯ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆದ್ದರಿಂದ ಜನರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ಆಳ್ವಾಸ್ ಕಾಲೇಜಿನ ಪ್ರಾಚರ್ಯ ಡಾ. ಕುರಿಯನ್ ಮಾತನಾಡಿ, ತಂತ್ರಜ್ಞಾನ ಬೆಳದಂತೆ ಮನುಷ್ಯ ತನ್ನ ಎಲ್ಲಾ ಬಳಸುವ ವಸ್ತುಗಳನ್ನು ಶಸ್ತ್ರವನ್ನಾಗಿಸಿ ಮಾರ್ಪಾಡಿಸಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಕೃತಿಯೊಂದಿಗೆ ಹೋರಾಡುವುದಕ್ಕಿಂತ ಅದರಲ್ಲಿ ಬೆರೆತು ಬದುಕುವುದು ಮಾನವನ ನಿಜವಾದ ಕರ್ತವ್ಯ ಎಂದರು. ಆಗುಂಬೆಯ ಕಾನನ ಸಂಸ್ಥೆಯ ನಿರ್ದೇಶಕ, ಜೋಯೆಲ್ ಕೊರಿಯಾ ಮಾತನಾಡಿ, ನಮ್ಮ ಭೂಮಿಯ ಭವಿಷ್ಯವು ನಾವು ಇಂದು ಕೈಗೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿವೆ. ಪರಿಸರ ಸಂರಕ್ಷಣೆಯ ಚಳವಳಿಗಳಲ್ಲಿ ಯುವ ಪೀಳಿಗೆ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ವಿಶೇಷವಾಗಿ ಲಯನ್ಟೈಲ್ಡ್ ಮಕಾಕ್ (Lion-tailed Macaque) ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಮಾನವನ ಹಸ್ತಕ್ಷೇಪವು ಹೇಗೆ ಅವುಗಳ ಆಹಾರ ಪದ್ಧತಿ ಮತ್ತು ವಾಸಸ್ಥಾನವನ್ನು ಅಸಮತೋಲನಗೊಳಿಸುತ್ತಿವೆ ಎಂಬುದನ್ನು ವಿವರಿಸಿದರು. ಸಂತ ಅಲೋಷಿಯಸ್ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಕಿರಣ್ ವಾಟಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡಾ. ವಿನಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಗಾರ ನಡೆಸಿಕೊಟ್ಟರು. ಆಳ್ವಾಸ್ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರಾ ಇದ್ದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ಮಾನಸ ವಂದಿಸಿದರು.