Article Image

ತತ್ವಪದಗಳು-ಸಾಂಸ್ಕೃತಿಕ ಅನುಸಂಧಾನ: ರಾಷ್ಟ್ರೀಯ ವಿಚಾರ ಸಂಕಿರಣ

Article Image

ತತ್ವಪದಗಳು-ಸಾಂಸ್ಕೃತಿಕ ಅನುಸಂಧಾನ: ರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ: ತತ್ವಪದಗಳಲ್ಲಿ ಸಮಾಜದ ಸರ್ವತೋಮುಖ ಪ್ರಗತಿಗೆ ಪೂರಕವಾದ, ವಿಶ್ವಮಾನವ ಪ್ರಜ್ಞೆ ಮೂಡಿಸುವ, ಸಮಾಜಸುಧಾರಣೆಯ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಸತ್ವಪೂರ್ಣ ಸಂದೇಶವಿದ್ದು ಅದರ ಅನುಷ್ಠಾನದಿಂದ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸುತ್ತದೆ. ರಾಜ್ಯದ ವಿವಿಧ ಕಡೆಗಳಲ್ಲಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ನಿಕ್ಷೇಪಗಳ ಅಧ್ಯಯನ ಮತ್ತು ಸಂಶೋಧನೆ ಮಾಡಬೇಕು ಎಂದು ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು. ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗದ ಸಹಯೋಗದೊಂದಿಗೆ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ “ತತ್ವಪದಗಳು-ಸಾಂಸ್ಕೃತಿಕ ಅನುಸಂಧಾನ” ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಯುವಜನತೆಗೆ ಹಾಗೂ ಜನಸಾಮಾನ್ಯರಿಗೆ ತತ್ವಪದಗಳ ಸಾರ್ವಕಾಲಿಕ ಮೌಲ್ಯ ಹೊಂದಿರುವ ಸಂದೇಶಗಳನ್ನು ತಿಳಿಸಬೇಕು ಎಂದು ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್ ಮಾತನಾಡಿ ತತ್ವಪದಗಳ ಸಾರವನ್ನು ತಿಳಿಯುವುದರಿಂದ ಸಮಾಜದಲ್ಲಿರುವ ಅಸಮಾನತೆ, ಅಂಕುಡೊಂಕು ಹಾಗೂ ಬೇಧಭಾವ ನಿವಾರಣೆಯಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸಂಕುಚಿತ ಮನೋಭಾವ ದೂರವಾಗುತ್ತದೆ ಎಂದು ಹೇಳಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್ ಬಿ.ಎ. ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳು ರಚಿಸಿದ “ಭಿತ್ತಿಪತ್ರಿಕೆ” ಯನ್ನು ಅನಾವರಣಗೊಳಿಸಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಹಿರಿಯ ಅಧಿಕಾರಿ ಸತ್ಯನಾರಾಯಣ ಮತ್ತು ನಿವೃತ್ತ ಪ್ರಾಂಶುಪಾಲ ಪ್ರೊ .ಬಿ.ಎ. ಕುಮಾರ ಹೆಗ್ಡೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬೋಜಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಚಾರಸಂಕಿರಣದ ಸಂಚಾಲಕ ಪ್ರೊ. ನಾಗಣ್ಣ ಡಿ.ಎ. ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕಿ ಭವ್ಯಶ್ರೀ ಬಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳದಲ್ಲಿ ರುದ್ರಪಾರಾಯಣ

Article Image

ಧರ್ಮಸ್ಥಳದಲ್ಲಿ ರುದ್ರಪಾರಾಯಣ

ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶುಕ್ರವಾರ ಶ್ರೀ ರಾಮಚಂದ್ರಾಪುರ ಮಠದ ಪೂಜ್ಯ ರಾಘವೇಶ್ವರಭಾರತಿ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ಹವ್ಯಕ ಮಹಾಮಂಡಲದ 550ಕ್ಕೂ ಮಿಕ್ಕಿದ ಶಿಷ್ಯ ವೃಂದದವರು ಹಾಗೂ ವಿದ್ವಾಂಸರು ಧರ್ಮಸ್ಥಳ ಬಂದು ಪವಿತ್ರ ತೀರ್ಥ ಕ್ಷೇತ್ರ ಹಾಗೂ ಹೆಗ್ಗಡೆಯವರ ಬಗ್ಯೆ ಇರುವ ಅಪಪ್ರಚಾರ ಮತ್ತು ಗೊಂದಲ ಸುಲಲಿತವಾಗಿ ನಿವಾರಣೆಯಾಗಿ ಮನಃಶಾಂತಿ, ನೆಮ್ಮದಿ ನೆಲೆಸಲಿ ಎಂದು ದೇವಸ್ಥಾನದಲ್ಲಿ ರುದ್ರಾನುಷ್ಠಾನ ಸಮರ್ಪಣೆ ಬಳಿಕ ಪ್ರವಚನ ಮಂಟಪದಲ್ಲಿ ರುದ್ರಪಾರಾಯಣ ಸೇವೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪೂಜ್ಯ ರಾಘವೇಶ್ವರ ಭಾರತೀ ಸ್ವಾಮೀಜಿಯವರು ವಯಸ್ಸಿನಲ್ಲಿ ಕಿರಿಯವರಾದರೂ ಜ್ಞಾನವೃದ್ಧರಾಗಿದ್ದು, ವಿಶೇಷ ನಾಯಕತ್ವದ ಲಕ್ಷಣ ಹೊಂದಿದ್ದಾರೆ. ತಮ್ಮ ಮೇಲೆ ಹಾಗೂ ಧರ್ಮಸ್ಥಳದ ಬಗ್ಯೆ ಅಪಾರ ಪ್ರೀತಿ-ವಿಶ್ವಾಸ, ಗೌರವ ಹೊಂದಿರುವ ಪೂಜ್ಯರ ಆಶೀರ್ವಾದಗಳಿಂದ ಕಷ್ಟದಿಂದ ಪಾರಾಗಿ ಕೊನೆಗೆ ಜಯಸಿಗಬಹುದು ಎಂದು ಹೆಗ್ಗಡೆಯವರು ವಿಶ್ವಾಸ ವ್ಯಕ್ತಪಡಿಸಿದರು. ಶ್ರೀರಾಮನೂ, ರಾವಣನಿಂದ ಹಿಂಸೆ ಅನುಭವಿಸಿ ಕೊನೆಗೆ ಜಯಶೀಲನಾದ. ಪೂಜ್ಯರ ಪರವಾಗಿ ಶಿಷ್ಯರು, ವಿದ್ವಾಂಸರೆಲ್ಲ ಧರ್ಮಸ್ಥಳಕ್ಕೆ ಬಂದು ಆಶೀರ್ವಾದ ಮಾಡಿ ಗೌರವಿಸಿರುವುದಕ್ಕೆ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಪ್ರಾರ್ಥಿಸಿ, ಶುಭ ಹಾರೈಸಿದರು. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸಲಾಯಿತು. ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಶ್ರೀಮಠದ ವೈದಿಕ ವಿದ್ವಾಂಸರಿಂದ ವಿಪ್ರಾಶೀರ್ವಾದ ನಡೆಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷ ಪಳ್ಳತ್ತಡ್ಕ ಶಂಕರನಾರಾಯಣ ಭಟ್ ಅವರನ್ನು ಹೆಗ್ಗಡೆಯವರು ಗೌರವಿಸಿದರು. ರಾಮಚಂದ್ರಾಪುರ ಮಠದ ಶಾಸ್ತ್ರಿಗಳಾದ ಸುಚೇತನ ಶಾಸ್ತ್ರಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃವಿಭಾಗದ ಅಧ್ಯಕ್ಷರಾದ ದೇವಿಕಾ ಶಾಸ್ತ್ರಿ, ಈಶ್ವರಿ, ಉಜಿರೆಯ ಶಾಮಭಟ್ ಅತ್ತಾಜೆ ಮತ್ತು ಕೇಶವ ಅತ್ತಾಜೆ ಮೊದಲಾದವರು ಉಪಸ್ಥಿತರಿದ್ದರು.

ವಾಲಿಬಾಲ್ ಪಂದ್ಯಾಟದಲ್ಲಿ ಎಸ್ ಎನ್ ವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Article Image

ವಾಲಿಬಾಲ್ ಪಂದ್ಯಾಟದಲ್ಲಿ ಎಸ್ ಎನ್ ವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಪೂರ್ಣಪ್ರಜ್ಞಾ ಪ.ಪೂ ಕಾಲೇಜು ಅದಮಾರು, ಕಾಪು ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಎಸ್.ಎನ್.ವಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಎಸ್.ಎನ್.ವಿ. ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತಂಡ ಪ್ರತಿನಿಧಿಸಿದ್ದ ಪ್ರಥಮ ಪಿಯುಸಿ ಧನುಷ್ ಹಾಗೂ ದ್ವಿತೀಯ ಪಿಯುಸಿ ಶ್ರೀಶಾಂತ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ತರಬೇತುದಾರರು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಕೋರಿರುತ್ತಾರೆ.

ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ವಿಶಿಷ್ಟ ಸಾಧನೆ

Article Image

ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ವಿಶಿಷ್ಟ ಸಾಧನೆ

ಕರ್ನಾಟಕದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮುಖಾಂತರ ಇತ್ತೀಚೆಗೆ ನಡೆದ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2025 ನೇ ಜೂನ್ ತಿಂಗಳಲ್ಲಿ ವಿಶ್ವವಿದ್ಯಾನಿಲಯವು ಸಂಗೀತ ನೃತ್ಯ ಮತ್ತು ತಾಳ ವಾದ್ಯಗಳ ವಿವಿಧ ಹಂತಗಳ ಪರೀಕ್ಷೆಗಳನ್ನು ನಡೆಸಿತ್ತು. ಇವುಗಳಲ್ಲಿ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉಜಿರೆಯ ದೀಕ್ಷಾ ಬಿ.ಎಸ್. ಇವರು ಲಿಖಿತ ಮತ್ತು ಮೌಖಿಕ ಎರಡು ವಿಧದ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಅಂಕಗಳೊಂದಿಗೆ ಈ ವಿಶಿಷ್ಟ ಸಾಧನೆಗೆ ಭಾಜನರಾಗಿದ್ದಾರೆ. ಇವರು ಕಳೆದ ಹದಿನೈದು ವರ್ಷಗಳಿಂದ ಭರತನಾಟ್ಯ ಗುರುಗಳಾದ ವಿದುಷಿ ಸ್ವಾತಿ ಕಿರಣ್ ಮತ್ತು ವಿದುಷಿ ಪೃಥ್ವಿ ಕಿರಣ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಈ ಹಿಂದೆಯೂ ಭರತನಾಟ್ಯದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪೂರ್ವ ಪರೀಕ್ಷೆಗಳಲ್ಲಿಯೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ. ದೀಕ್ಷಾ ಬಿ.ಎಸ್. ಪ್ರಸ್ತುತ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (Regional Institute of Education) ಎಂ.ಎಸ್.ಸಿ.ಎಡ್. ಎಂಬ ಅಧ್ಯಯನವನ್ನು ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಾಲೀಗದ್ದೆಯವರಾದ ಇವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಧರ ಭಟ್ ಮತ್ತು ಸರಕಾರಿ ಪ್ರೌಢಶಾಲೆ ಹಳೆಪೇಟೆ, ಉಜಿರೆಯ ಗಣಿತ ಶಿಕ್ಷಕಿ ವೀಣಾ ಶ್ಯಾನಭಾಗ್ ದಂಪತಿಯ ಸುಪುತ್ರಿ.

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ

Article Image

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗ ಮತ್ತು ರೋವರ್ಸ್ ರೇಂಜರ್ಸ್ ಘಟಕದ ಸಹಭಾಗಿತ್ವದಲ್ಲಿ ಸೆ. 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್. ಡಿ.ಎಂ ತಾಂತ್ರಿಕ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಪ್ರಸಾದ್ ಪಿ.ಎ ಮುಖ್ಯ ಅತಿಥಿಯಾಗಿ ಮಾತನಾಡಿದರು. ಓಝೋನ್ ನ ಅನ್ವೇಷಣೆ, ವೈಜ್ಞಾನಿಕ ಹಿನ್ನಲೆ, ಓಝೋನ್ ಪದರದ ಸವೆತಕ್ಕೆ ಕಾರಣವಾಗುವ ಮಾನವನ ಚಟುವಟಿಕೆಗಳು ಮತ್ತು ಓಝೋನ್ ಪದರದ ಸವೆತ ತಡೆಗಟ್ಟುವಲ್ಲಿ ವಿಶ್ವವ್ಯಾಪಿ ಜಾರಿಯಾಗಿರುವ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂಮಿಯ ರಕ್ಷಣೆಯಲ್ಲಿ ಓಝೋನ್ ಪದರದ ಮಹತ್ವವನ್ನು ಅರಿತು ಅದರ ಸವೆತಕ್ಕೆ ಕಾರಣವಾಗುತ್ತಿರುವ ಮಾನವ ಕ್ರಿಯೆಗಳನ್ನು ತಡೆಯುವಲ್ಲಿ ನಾವುಗಳು ಶ್ರಮಿಸಿಬೇಕಿದೆ. ವಿಜ್ಞಾನದ ವಿದ್ಯಾರ್ಥಿಗಳು ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಮೈಗೂಡಿಸಿಕೊಂಡು ಪರಿಸರವನ್ನು ಉಳಿಸಿ, ಬೆಳೆಸುವಲ್ಲಿ ಕೈಜೋಡಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ರೋವರ್ಸ್ ರೇಂಜರ್ಸ್ ಘಟಕದ ಸಂಯೋಜಕ ಪ್ರಸಾದ್ ಕುಮಾರ್, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ.ಡಿ ಮತ್ತು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ, ರೇಂಜರ್ ನವ್ಯಶ್ರೀ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಓಝೋನ್ ದಿನದ ಅಂಗವಾಗಿ ಸಮುದಾಯ ಜಾಗೃತಿ ಅಭಿಯಾನ ನಡೆಸಿದರು. ಮನೆ ಮನೆಗೆ ತೆರಳಿ ಓಝೋನ್ ಪದರದ ಮಹತ್ವ ತಿಳಿಸಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.

36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ

Article Image

36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಆಂಧ್ರಪ್ರದೇಶದ ಗುಂಟೂರುನಲ್ಲಿ ಸೆಪ್ಟೆಂಬರ್ 23ರಿಂದ 25ರವರೆಗೆ ನಡೆಯುತ್ತಿರುವ 36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 29 ಮಂದಿ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದಾರೆ. ಒಂದೇ ಸಂಸ್ಥೆಯಿಂದ 29 ಕ್ರೀಡಾಪಟುಗಳು ಸ್ಪರ್ಧೆಗೆ ಅವಕಾಶ ಪಡೆದಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ. ಇವರಲ್ಲಿ 10 ಮಂದಿ ಬಾಲಕಿಯರು ಹಾಗೂ 19 ಮಂದಿ ಬಾಲಕರು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಬಾಲಕಿಯರ ವಿಭಾಗ: ಐಶ್ವರ್ಯ (ಚಕ್ರ ಎಸೆತ, ಗುಂಡು ಎಸೆತ), ಗೀತಾ(400 ಮೀ., 4*400 ರಿಲೇ), ನಾಗಿನಿ (1000 ಮೀ.), ಚರಿಶ್ಮಾ (1000 ಮೀ.), ವೈಷ್ಣವಿ(ಉದ್ದ ಜಿಗಿತ), ಭಾಗೀರಥಿ (3 ಕಿ.ಮೀ ನಡಿಗೆ), ನಂದಾ (ಜಾವಲಿನ್ ಎಸೆತ), ಪ್ರೇಕ್ಷಿತಾ (ಜಾವಲಿನ್ ಎಸೆತ), ಮೇಘಾ(ತ್ರ‍್ರಯಥ್ಲಾನ್ ಸಿ), ಸುಜಾತ ವೈ(ತ್ರಯಥ್ಲಾನ್ ಸಿ). ಬಾಲಕರ ವಿಭಾಗ: ನೋಯಿಲ್ (ಉದ್ದ ಜಿಗಿತ), ಮಹಮ್ಮದ್ ತಬ್ಶೀರ್ (ತ್ರಿವಿಧ ಜಿಗಿತ), ಗುರು (ಹೆಪ್ಟಾಥ್ಲಾನ್), ಯಶವಂತ (800 ಮೀ., 4*400 ರಿಲೇ), ದಯಾನಂದ (400 ಮೀ., 4*400 ರಿಲೇ), ದರ್ಶನ (5 ಕಿ.ಮೀ ನಡಿಗೆ), ರಾಮು (400 ಮೀ., 4*400 ರಿಲೇ), ಸರ್ವಜಿತ್ (4*100 ರಿಲೇ), ಅಬ್ದುಲ್ ರಜಾಕ್ (ಹ್ಯಾಮರ್ ಎಸೆತ), ಕೇಶವ ನಾಯ್ಕ (ಜಾವಲಿನ್ ಎಸೆತ), ಮನಿಷ್ (ಉದ್ದ ಜಿಗಿತ), ಡೈನ್ದೇವ್ (800 ಮೀ. ಹರ್ಡಲ್ಸ್), ಲೋಹಿತ್ ಗೌಡ (ಉದ್ದ ಜಿಗಿತ), ನವೀನ್ (ಉದ್ದ ಜಿಗಿತ), ಕೃಷ್ಣ ಪ್ರಕಾಶ (ಜಾವಲಿನ್ ಎಸೆತ), ಮೈಲಾರಿ (ಜಾವಲಿನ್ ಎಸೆತ), ಪ್ರಣವ್ (ತ್ರಯಥ್ಲಾನ್ ಎ), ಆದರ್ಶ್ (ತ್ರಯಥ್ಲಾನ್ ಬಿ), ಸುಭಾಶ್ (ತ್ರಯಥ್ಲಾನ್ ಸಿ).

ಅಂತರಾಷ್ಟ್ರೀಯ ಸೂಕ್ಷ್ಮಜೀವಿಗಳ ದಿನಾಚರಣೆಯ

Article Image

ಅಂತರಾಷ್ಟ್ರೀಯ ಸೂಕ್ಷ್ಮಜೀವಿಗಳ ದಿನಾಚರಣೆಯ

ಮೂಡುಬಿದಿರೆ: ಸೂಕ್ಷ್ಮಜೀವಿಗಳನ್ನು ಕೇವಲ ರೋಗಕಾರಕರೆಂದು ನೋಡುವ ಬದಲು, ಅವು ಪ್ರಕೃತಿಯ ಸಮತೋಲನ ಮತ್ತು ಮಾನವ ಬದುಕಿಗೆ ನೀಡುವ ಕೊಡುಗೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ಆರೋಗ್ಯಕರ ಹಾಗೂ ಸಮೃದ್ಧ ಸಮಾಜವನ್ನು ಕಟ್ಟಬಹುದು ಎಂದು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ದಿವ್ಯಶ್ರೀ ಎಂ.ಎಸ್. ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸೂಕ್ಷ್ಮಜೀವಿಗಳ ದಿನಾಚರಣೆಯ ಅಂಗವಾಗಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉಪನ್ಯಾಸದಲ್ಲಿ ಸೂಕ್ಷ್ಮಜೀವಿಗಳಿಂದ ಪಡೆಯಬಹುದಾದ ಅನೇಕ ಉಪಯೋಗಗಳ ಕುರಿತಂತೆ ವಿವರಿಸಿದರು. ಸಾಮಾನ್ಯವಾಗಿ ಸೂಕ್ಷ್ಮಜೀವಿಗಳನ್ನು ಕೇಳಿದಾಗ ಅನೇಕರು ರೋಗಗಳೊಂದಿಗೆ ಅವುಗಳನ್ನು ಸಂಬಂಧಿಸುತ್ತಾರೆ. ನಿಜಕ್ಕೂ ಕೆಲವೆಡೆ ಸೂಕ್ಷ್ಮಜೀವಿಗಳು ಅಪಾಯಕಾರಿ, ಆದರೆ ಅದಕ್ಕಿಂತ ಹೆಚ್ಚಿನವು ಮಾನವನ ಬದುಕಿಗೆ ಅತ್ಯಗತ್ಯವಾದವುಗಳೇ ಆಗಿವೆ. ನಮ್ಮ ಕರುಳಿನಲ್ಲಿ ಕೋಟ್ಯಾಂತರ ಸೂಕ್ಷ್ಮಜೀವಿಗಳು ವಾಸಿಸುತ್ತಿದ್ದು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಕರ ಜೀವನಕ್ಕೆ ನೆರವಾಗುತ್ತವೆ. ದೈನಂದಿನ ಜೀವನದಲ್ಲಿ ಹಾಲಿನ ಉತ್ಪನ್ನಗಳು – ಮೊಸರು, ಚೀಸ್, ಬೆಣ್ಣೆ ಮುಂತಾದವುಗಳ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳೇ ಪ್ರಮುಖ ಪಾತ್ರವಹಿಸುತ್ತವೆ. ಕೃಷಿ ಕ್ಷೇತ್ರದಲ್ಲಿ ನೈಟ್ರೋಜನ್ ಸ್ಥಿರೀಕರಣ ಮಾಡುವ ಬ್ಯಾಕ್ಟೀರಿಯಾಗಳು ಬೆಳೆ ಉತ್ಪಾದನೆ ಹೆಚ್ಚಿಸಲು ಸಹಕರಿಸುತ್ತವೆ. ಪರಿಸರದಲ್ಲಿ ಜೀವಾವಶೇಷಗಳನ್ನು ಅಳಿಸಿ ಪ್ರಕೃತಿಯ ಚಕ್ರವನ್ನು ನಿರಂತರವಾಗಿಸುವುದು ಸಹ ಸೂಕ್ಷ್ಮಜೀವಿಗಳ ಕೆಲಸ. ಹವಾಮಾನ ಬದಲಾವಣೆ ನಿಯಂತ್ರಣ, ನವೀಕರಿಸಬಹುದಾದ ಶಕ್ತಿ ಉತ್ಪಾದನೆ, ಜೈವಿಕ ಗೊಬ್ಬರ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿಯೂ ಸೂಕ್ಷ್ಮಜೀವಿಗಳ ಕೊಡುಗೆ ಅನನ್ಯ ಎಂದರು ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಎಂ. ಹಾಗೂ ಉಪನ್ಯಾಸಕಿ ಚೈತ್ರಾ ಇದ್ದರು. ಬಿಎಸ್ಸಿ ವಿದ್ಯಾರ್ಥಿನಿ ಬೃಂದಾ ಸ್ವಾಗತಿಸಿ, ವೈಷ್ಣವಿ ಅತಿಥಿಯನ್ನು ಪರಿಚಯಿಸಿ, ಫಾತಿಮಾ ಶಿಫ್ನಾ ವಂದಿಸಿ, ವೃದ್ಧಿ ಕೇಳ ನಿರೂಪಿಸಿದರು.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಿಂದ ಉಪನ್ಯಾಸ

Article Image

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಿಂದ ಉಪನ್ಯಾಸ

ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಾದ ಡಾ| ಪ್ರತೀಕ್ಷ್ ಪಿ. ಇವರು ಪುದುಚೇರಿಯ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆ.29ರಿಂದ 31 ರವರೆಗೆ ನಡೆದ ದಕ್ಷಿಣ ಭಾರತೀಯ ರಾಜ್ಯಗಳ ಮೂಳೆಚಿಕಿತ್ಸಾ ಸಂಘದ 24ನೇ ವಾರ್ಷಿಕ ಸಮ್ಮೇಳನ ಓಯಸಿಸ್ಕಾನ್- 2025 ಇದರಲ್ಲಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಪ್ರಮುಖ ಉಪನ್ಯಾಸ ನೀಡಿದರು. ದಕ್ಷಿಣ ಭಾರತದ ರಾಜ್ಯಗಳ ಹೆಸರಾಂತ ಪ್ರಮುಖ ಮೂಳೆಚಿಕಿತ್ಸಾ ತಜ್ಞರ ಕೂಡುವಿಕೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಮೂಳೆಚಿಕಿತ್ಸೆಯಲ್ಲಿ ಉಂಟಾಗುವ ತೊಡಕುಗಳು ಮತ್ತು ಅದರ ನಿವಾರಣೆಯ ಕುರಿತು ತಜ್ಞ ವೈದ್ಯರುಗಳು ಉಪನ್ಯಾಸ ನೀಡುತ್ತಾರೆ. ಈ ಸಮ್ಮೇಳನದಲ್ಲಿ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಾಗಿರುವ, ಫೂಟ್ ಅಂಡ್ ಆಂಕ್ಲ್ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಪಾದ ಮತ್ತು ಪಾದದ ಮಣಿಗಂಟು ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ, ಡಾ. ಪ್ರತೀಕ್ಷ್. ಪಿ ಇವರು ಉಪನ್ಯಾಸ ನೀಡಿದರು. ಇವರು ಈಗಾಗಲೇ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಕ್ರಪಾದ ಹೊಂದಿರುವ, ನಡೆದಾಡಲು ಕಷ್ಟಪಡುತ್ತಿದ್ದ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಗು ಸ್ವತಂತ್ರವಾಗಿ ನಡೆದಾಡುವಂತೆ ಮಾಡುವ ಮೂಲಕ ಮಗುವಿನ ಪೋಷಕರಲ್ಲಿ ಸಂತೋಷ ತುಂಬಿದ ಇವರು ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮೆಚ್ಚುಗೆ ಪಾತ್ರರಾಗಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು. ಡಾ ಪ್ರತೀಕ್ಷ್ ಪಿ. ಇವರು ಈ ಸಮ್ಮೇಳನದಲ್ಲಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಪ್ರಮುಖ ಉಪನ್ಯಾಸ ನೀಡಲು ಸಂಘದಿಂದ ಆಹ್ವಾನಿಸಲ್ಪಟ್ಟಿದ್ದರು. ಪಾದದ ಮಧ್ಯದಲ್ಲಿರುವ ಅನೇಕ ಕೀಲುಗಳ ಮತ್ತು ಮೂಳೆಗಳ ಮುರಿತದಿಂದ ಅಥವಾ ಮಧ್ಯದ ಪಾದವನ್ನು ಬೆಂಬಲಿಸುವ ಅಸ್ಥಿರಜ್ಜುಗಳು ಹರಿದು ಗಾಯ ಉಂಟಾಗುವುದು. ಮುಂದೆ ಇದೇ ಗಾಯಗಳು ಸಂಕೀರ್ಣ ಸಮಸ್ಯೆಯಾಗಿ ಬದಲಾಗುವುದು ಮತ್ತು ಇವುಗಳಿಗೆ ಇರುವ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳ ಬಗ್ಗೆ ಇವರು ಈ ಸಮ್ಮೇಳನದಲ್ಲಿ ಪ್ರಮುಖ ಮಹತ್ವದ ಮಾಹಿತಿ ನೀಡಿದರು.

ಅರಿವಿನ ದೀವಿಗೆ ಉಪನ್ಯಾಸ ಮಾಲೆ ಕಾರ್ಯಕ್ರಮ

Article Image

ಅರಿವಿನ ದೀವಿಗೆ ಉಪನ್ಯಾಸ ಮಾಲೆ ಕಾರ್ಯಕ್ರಮ

ಉಜಿರೆ, ಸೆ.16: ವಿಶ್ವಮನ್ನಣೆ ಪಡೆದ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಮೂಲಕ ಮಹತ್ವದ ವಿಚಾರಗಳನ್ನು ತಿಳಿದುಕೊಂಡು ಕನ್ನಡದ ಅಂತಃಸತ್ವ ಹೆಚ್ಚಿಸುವುದಕ್ಕೆ ಕನ್ನಡಿಗರು ಆದ್ಯತೆ ನೀಡಬೇಕು ಎಂದು ಕನ್ನಡದ ನಿವೃತ್ತ ಪ್ರಾಧ್ಯಾಪಕ, ವಾಗ್ಮಿ ಪ್ರೊ. ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ. ಧ. ಮಂ ಕಾಲೇಜಿನ ಕನ್ನಡ ವಿಭಾಗವು ಹೇಮಾವತಿ. ವಿ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಪ್ರಯೋಜಕತ್ವದಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಮಂಗಳವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ "ಅರಿವಿನ ದೀವಿಗೆ" ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ "ಕನ್ನಡವೆಂಬ ಭಾವಸಂಪತ್ತು" ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಎಂದರೆ ಕೇವಲ ಮನಸ್ಸಿನ ಭಾವನೆ ಹೊರಹಾಕುವ ಒಂದು ಭಾಷೆಯಷ್ಟೇ ಅಲ್ಲ. ಕನ್ನಡ ಮಾತನಾಡುವವರು ಈ ಭಾಷೆಯೊಂದಿಗೆ ರೂಪಿಸಿಕೊಳ್ಳುವ ಸಾಂಗತ್ಯ ವಿಶೇಷವಾದುದು. ಈ ಬಗೆಯ ಭಾಷಿಕ ಸಾಂಗತ್ಯವು ಬೇರೆ ಯಾವ ಭಾಷೆಗೂ ಇಲ್ಲ. ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳುವ ಸಂದರ್ಭದಲ್ಲಿ ಮಾತೃಭಾಷೆಯಾಗಿ ಕನ್ನಡವು ಪ್ರಮುಖ ಪಾತ್ರವಹಿಸುತ್ತದೆ. ಕನ್ನಡವೇ ಕಣ್ಣಾಗಿ ಕಿವಿಯಾಗಿ ಜಗತ್ತನ್ನು ವಿಭಿನ್ನವಾಗಿ ಗ್ರಹಿಸುವುದಕ್ಕೆ ನೆರವಾಗುತ್ತದೆ ಎಂದರು. ಆಚಾರ್ಯ ವಿನೋಬಾ ಭಾವೆ ಅವರು ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ವರ್ಣಿಸಿದ್ದಾರೆ. ಇಂಗ್ಲಿಷ್ ಭಾಷೆ ಇಂದು ಜಾಗತಿಕ ಭಾಷೆಯಾಗಿದ್ದರೂ ಕೂಡ ಕನ್ನಡಿಗರೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳವರಿಗೆ ಅವರವರ ಮಾತೃಭಾಷೆಯೇ ಶ್ರೇಷ್ಠವಾಗಿರುತ್ತದೆ. ಮಾತೃಭಾಷೆಯೊಂದಿಗೆ ಸಾಧ್ಯವಾಗುವ ಆಪ್ತ ಸಾಂಗತ್ಯ ಇಂಗ್ಲೀಷ್ ಸೇರಿದಂತೆ ಅನ್ಯದೇಶಿ ಭಾಷೆಗಳೊಂದಿಗೆ ಸಾಧ್ಯವಾಗುವುದಿಲ್ಲ. ಜಗತ್ತಿನ ಹಲವಾರು ವಿಚಾರಗಳನ್ನು ಹೊತ್ತುತರುವ ಇಂಗ್ಲಿಷ್ ಭಾಷೆಗೆ ಹಿತಮಿತವಾಗಿ ಆದ್ಯತೆ ನೀಡಿ ಕನ್ನಡದ ಸತ್ವವನ್ನು ಹೆಚ್ಚಿಸಬಹುದು ಎಂದು ಹೇಳಿದರು. ಜೀವಂತಿಕೆಯೊಂದಿಗಿನ ವ್ಯಕ್ತಿತ್ವಗಳು ಬದುಕಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಾರೆ. ಆ ವ್ಯಕ್ತಿತ್ವಗಳು ಇಲ್ಲವಾದಾಗ ಅವರ ವೈಶಿಷ್ಟ್ಯತೆಯು ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿದಿರುತ್ತದೆ. "ಅರಿವಿನ ದೀವಿಗೆ" ಕಾರ್ಯಕ್ರಮದ ಪ್ರೇರಕ ಶಕ್ತಿ ಡಾ.ಬಿ.ಯಶೋವರ್ಮ ಅಂಥ ವ್ಯಕ್ತಿತ್ವ. ಅವರೀಗ ಇಲ್ಲದಿದ್ದರೂ ಅವರ ವ್ಯಕ್ತಿತ್ವಕ್ಕಿದ್ದ ಆಕರ್ಷಣೀಯ ಅಸ್ಮಿತೆ ಶಾಶ್ವತವಾಗಿ ನೆಲೆಯೂರಿದೆ ಎಂದು ನೆನಪಿಸಿಕೊಂಡರು. ಆದರ್ಶದೊಂದಿಗೆ ಬದುಕಬೇಕು. ಇಲ್ಲದೇ ಹೋದರೆ ಹೇಗೆ ಬದುಕಿದ್ದೇವೆ ಎನ್ನುವುದಕ್ಕೆ ಸಮರ್ಥನೆಯ ಪುರಾವೆಯೇ ಸಿಗುವುದಿಲ್ಲ. ಸಮರ್ಥನೀಯ ಪುರಾವೆ ಹುಡುಕಾಡುವುದಕ್ಕೆ ಕಷ್ಟಪಡಬೇಕಾಗುತ್ತದೆ. ಆದರ್ಶ ಮೌಲ್ಯಗಳೊಂದಿಗಿನ ಬದುಕು ಸಮರ್ಥನೀಯ ಎನ್ನಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸೋನಿಯಾ ಯಶೋವರ್ಮ ಮಾತನಾಡಿದರು. ಯಶೋವರ್ಮರು ಕೃಷ್ಣೇಗೌಡರ ದೊಡ್ಡ ಅಭಿಮಾನಿಯಾಗಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅವರ ಹರಟೆ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದರು. ಇದರ ಜೊತೆಗೆ ಅವರು ತುಂಬಾ ಪುಸ್ತಕ ಪ್ರಿಯರಾಗಿದ್ದರು. ಧರ್ಮ, ಚರಿತ್ರೆ ಸೇರಿದಂತೆ ವಿವಿಧ ವಲಯಗಳ ಕುರಿತ ಮಹತ್ವದ ಪುಸ್ತಕಗಳನ್ನು ಓದುತ್ತಿದ್ದರು ಎಂದರು. ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಮಾತನಾಡಿದರು. ಕಾಲೇಜಿನ ಸಮಗ್ರ ಬೆಳವಣಿಗೆಗೆ ಬೇಕಾದ ಶಿಸ್ತುಬದ್ಧ ಆಡಳಿತ ಕ್ರಮ, ಹಸಿರು ಚಿಂತನೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಬಂಧಿತ ಹೆಜ್ಜೆಗಳೊಂದಿಗೆ ಡಾ. ಬಿ.ಯಶೋವರ್ಮ ಹೆಗ್ಗುರುತು ಮೂಡಿಸಿದ್ದರು ಎಂದು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಭವ್ಯಶ್ರೀ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ನಾಗಣ್ಣ ಡಿ.ಎ. ವಂದಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಭೇಟಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಭೇಟಿ

ಪ್ರತಿಷ್ಟಿತ ಕೆನರಾ ಬ್ಯಾಂಕಿನ ಕೇಂದ್ರ ಕಛೇರಿಯ ಎಫ್.ಐ ವಿಂಗ್ ಜನರಲ್ ಮ್ಯಾನೇಜರ್ ಎಂ. ಭಾಸ್ಕರ ಚಕ್ರವರ್ತಿ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸೆ.13ರಂದು ಭೇಟಿ ನೀಡಿದರು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕರಾದ ಡಾ. ದೇವೇಂದ್ರ ಕುಮಾರ್. ಪಿ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಇವರು ಸ್ವಾಗತಿಸಿ ಬರಮಾಡಿಕೊಂಡರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಬಾರಿ ತಾನು ಭೇಟಿ ನೀಡಿದಾಗ ಇದ್ದ ತಜ್ಞ ವೈದ್ಯರ ಸಂಖ್ಯೆ, ಸಿಬ್ಬಂದಿಗಳ ಸಂಖ್ಯೆ, ರೋಗಿಗಳ ಸಂಖ್ಯೆ ಈ ಬಾರಿ ಎಲ್ಲವೂ ಹೆಚ್ಚಾಗಿದೆ. ಆಸ್ಪತ್ರೆ ಮತ್ತು ಆಸ್ಪತ್ರೆಯ ಸೇವೆ ಕೂಡ ವಿಸ್ತಾರಗೊಳ್ಳುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಿತದರದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದ ಅವರು ಕೇಂದ್ರ ಸರಕಾರದ ಹಲವಾರು ಉಳಿತಾಯ ಮತ್ತು ವಿಮಾ ಯೋಜನೆಗಳ ವಿವರ ನೀಡುತ್ತಾ, ಪ್ರತಿಯೊಬ್ಬರೂ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ಅಗತ್ಯವಿದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಮಾತನಾಡುತ್ತಾ, ಈ ಆಸ್ಪತ್ರೆಗೆ ಕೆನರಾ ಬ್ಯಾಂಕಿನಿಂದ ಕಳೆದ ವರ್ಷ ನೀಡಲ್ಪಟ್ಟ 10ಲಕ್ಷ ರೂಪಾಯಿಗಳ ವಿಶೇಷ ದೇಣಿಗೆಯನ್ನು ಸ್ಮರಿಸಿದರು. ಈ ಹಣದಲ್ಲಿ ಕಾರ್ಡಿಯಾಕ್ ಮೋನಿಟರ್ ಮತ್ತು ಸಿರಿಂಜ್ ಪಂಪು ಖರೀದಿಸಿದ್ದು, ಇದು ರೋಗಿಗಳ ತುರ್ತುಚಿಕಿತ್ಸೆಗೆ ಬಹಳ ಸಹಕಾರಿಯಾಗಿದೆ ಎಂದರು. ವೈದ್ಯಕೀಯ ಸೇವೆಗಳನ್ನು ವಿವರಿಸಿದ ಅವರು ಇಲ್ಲಿ ನುರಿತ ತಜ್ಞ ವೈದ್ಯರ ತಂಡವಿದ್ದು, ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಿತದರದಲ್ಲಿ ನಡೆಸಲಾಗುತ್ತಿದೆ. ಮೊಣಕಾಲು, ಸೊಂಟದಕೀಲುಗಳ ಬದಲಿ ಶಸ್ತ್ರಚಿಕಿತ್ಸೆಗಳಂತಹ ದುಬಾರಿ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮಾಡಲಾಗುತ್ತಿದೆ. ಶೀಘ್ರದಲ್ಲಿ ಎಂ.ಆರ್.ಐ ಸೇವೆ ಕೂಡ ದೊರೆಯಲಿದೆ ಎಂದರು. ವೈದ್ಯಕೀಯ ಅಧೀಕ್ಷಕರಾದ ಡಾ. ದೇವೇಂದ್ರ ಕುಮಾರ್. ಪಿ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಮೂಡುಬಿದಿರೆ: ಎಕ್ಸಲೆಂಟ್ ಚಾಂಪಿಯನ್

Article Image

ಮೂಡುಬಿದಿರೆ: ಎಕ್ಸಲೆಂಟ್ ಚಾಂಪಿಯನ್

ಕ್ರೀಡೆಯಿಂದ ನಾವು ಕಲಿಯುವ ಪಾಠ ಜೀವನದುದ್ದಕ್ಕು ನಮ್ಮ ಕೈಹಿಡಿಯುತ್ತದೆ. ಮನಸ್ಸನ್ನು ಸಮತೋಲನದಲ್ಲಿ ಇಡುವಲ್ಲಿ ಕ್ರೀಡೆಯ ಪಾತ್ರ ದೊಡ್ಡದು ಎಂದು ಎಕ್ಸಲೆಂಟ್ ಮೂಡುಬಿದಿರೆಯ ಪ್ರಾಂಶುಪಾಲರಾದ ಪ್ರದೀಪ್‌ ಕುಮಾರ್ ಶೆಟ್ಟಿ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಮತ್ತು ಎಕ್ಸಲೆಂಟ್ ಮೂಡುಬಿದಿರೆಯ ಸಹಯೋಗದೊಂದಿಗೆ ಎಕ್ಸಲೆಂಟ್‌ ಕಾಲೇಜಿನಲ್ಲಿ ನಡೆದ ಅಂಡರ್ -19, ಮೂಡುಬಿದಿರೆ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷರಾಗಿ ನುಡಿದರು. ವೇದಿಕೆಯಲ್ಲಿ ಮೂಡುಬಿದಿರೆ ತಾಲೂಕು ಕ್ರೀಡಾ ಸಂಯೋಜಕರಾದ ನವೀನ್ ಎಂ.ಹೆಗ್ಡೆ, ಎಕ್ಸಲೆಂಟ್ ಮೂಡುಬಿದಿರೆಯ ದೈಹಿಕ ಶಿಕ್ಷಣ ತರಬೇತುದಾರರಾದ ಎಸ್.ಎಸ್. ಪಾಟೀಲ್ ಉಪಸ್ಥಿತರಿದ್ದರು. ಬಾಲಕರ ಹಾಗೂ ಬಾಲಕಿಯರ ವಿಭಾಗದ ಟೇಬಲ್ ಟೆನಿಸ್‌ನಲ್ಲಿ ಹಾಗೂ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ವಿದ್ಯಾರ್ಥಿಗಳು ಜಯಗಳಿಸಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. ದೈಹಿಕ ಶಿಕ್ಷಣ ತರಬೇತುದಾರ ಲೆಫ್ಟಿನೆಂಟ್ ಮಹೇಂದ್ರ ಕುಮಾರ್‌ ಜೈನ್ ನಿರೂಪಿಸಿ ಕನ್ನಡ ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ವಂದಿಸಿದರು.

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಎಸ್ ಎನ್ ವಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ

Article Image

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಎಸ್ ಎನ್ ವಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜುಗಳ) ಕಾರ್ಕಳ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಾರ್ಕಳದ ಎಸ್ ಎನ್ ವಿ ಪದವಿ ಪೂರ್ವ ಕಾಲೇಜಿನ ಬಾಲಕಯರ ತಂಡ ಉತ್ತಮ ಪ್ರದರ್ಶನದೊಂದಿಗೆ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಇದೇ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಪ್ರೀತೇಶ್ ಇವರು ಉತ್ತಮ ರೈಡರ್ ಆಗಿ ವಿದ್ಯಾರ್ಥಿ ಶರಣ್ ಅವರು ಉತ್ತಮ ಡಿಪೆಂಡರ್ ಆಗಿ ವೈಯಕ್ತಿಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಬಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ತರಬೇತುದಾರರು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಕೋರಿರುತ್ತಾರೆ.

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಎಸ್.ಎನ್.ವಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ

Article Image

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಎಸ್.ಎನ್.ವಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜುಗಳ) ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಎಸ್ ಎನ್ ವಿ ಪದವಿ ಪೂರ್ವ ಕಾಲೇಜಿನ ಬಾಲಕಯರ ತಂಡ ಉತ್ತಮ ಪ್ರದರ್ಶನದೊಂದಿಗೆ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಇದೇ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಶ್ರೀಶಾಂತ್ ಇವರು ಉತ್ತಮ ಆಲ್ ರೌಂಡರ್ ಆಗಿ ವಿದ್ಯಾರ್ಥಿ ಧನುಷ್ ಅವರು ಉತ್ತಮ ಸೆಟ್ಟರ್ ಆಗಿ ವೈಯಕ್ತಿಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಬಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ತರಬೇತುದಾರರು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಕೋರಿರುತ್ತಾರೆ.

ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಬಾಲಕರ- ಬಾಲಕಿಯರ ಖೋ-ಖೋ ಪಂದ್ಯಾಟ

Article Image

ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಬಾಲಕರ- ಬಾಲಕಿಯರ ಖೋ-ಖೋ ಪಂದ್ಯಾಟ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಎಸ್‌ಡಿಪಿಟಿ ಪಿಯು ಕಾಲೇಜು ಕಟೀಲು ಇವರ ಜಂಟಿ ಆಶ್ರಯದಲ್ಲಿ ನಡೆದ ನಡೆದ ಬಾಲಕರ ಹಾಗೂ ಬಾಲಕಿಯರ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತಂಡವು ಕ್ರಮವಾಗಿ 18ನೇ ಬಾರಿಗೆ ಹಾಗೂ 16ನೇ ಬಾರಿಗೆ ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಬಾಲಕರ ವಿಭಾಗ ಬಾಲಕರ ವಿಭಾಗದ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತಂಡವು ವಿವೇಕಾನಂದ ಕಾಲೇಜು ಪುತ್ತೂರು ತಂಡವನ್ನು 5 ಅಂಕಗಳು ಹಾಗೂ ಇನ್ನಿಂಗ್ಸ್ನೊಂದಿಗೆ ಮಣಿಸಿ 18ನೇ ಬಾರಿ ಚಾಂಪಿಯನ್ಸ್ ಪ್ರಶಸ್ತಿ ಪಡೆಯಿತು. ಬಾಲಕರ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಆಳ್ವಾಸ್‌ನ ಅಮರೇಶ್ ಹಾಗೂ ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಆಳ್ವಾಸ್‌ನ ಅಶ್ವಿನ್ ಪಡೆದರು. ಬಾಲಕಿಯರ ವಿಭಾಗ ಬಾಲಕಿಯರ ವಿಭಾಗದ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತಂಡವು ಎಸ್ ಡಿ ಪಿ ಟಿ ಪಿಯು ಕಾಲೇಜು ಕಟೀಲು ತಂಡವನ್ನು 8 ಅಂಕಗಳು ಹಾಗೂ ಇನ್ನಿಂಗ್ಸ್ನೊಂದಿಗೆ ಮಣಿಸಿ 16ನೇ ಬಾರಿ ಜಯಶಾಲಿಯಾಯಿತು. ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಸಿಂಧುಜಾ ಹಾಗೂ ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಆಳ್ವಾಸ್‌ನ ಮೋನಿಕಾ ಪಡೆದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ

ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ ಖ್ಯಾತ ಸಂಧಿವಾತ ತಜ್ಞರಾದ ಡಾ| ಅಶ್ವಿನಿ ಕಾಮತ್ ಭಾಗವಹಿಸಿ ರೋಗಿಗಳ ತಪಾಸಣೆ ನಡೆಸಿದರು. ಸಂಧಿವಾತ, ಅಸ್ಥಿ ಸಂಧಿವಾತ, ಮಕ್ಕಳ ಸಂಧಿವಾತ, ರುಮಟಾಯ್ಡ್, ಆರ್ಥೈಟಿಸ್, ಸ್ಟಾಂಡಿಲೋ ಆರ್ಥೈಟಿಸ್, ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಸೋರಿಯಾಸಿಸ್, ವಾಸ್ಕುಲೈಟಿಸ್ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಶಿಬಿರದಲ್ಲಿ ಉಚಿತ ಸಮಾಲೋಚನೆಯ ಜತೆಗೆ ರಕ್ತ ಪರೀಕ್ಷೆಗೆ 20% ಹಾಗೂ ಔಷಧಗಳಿಗೆ 10% ರಿಯಾಯಿತಿಯನ್ನು ನೀಡಲಾಯಿತು.

ಸತ್ತೂರು ಧಾರವಾಡ: ವಿಶ್ವ ಭೌತಚಿಕಿತ್ಸಾ ಸಪ್ತಾಹ ಆಚರಣೆ

Article Image

ಸತ್ತೂರು ಧಾರವಾಡ: ವಿಶ್ವ ಭೌತಚಿಕಿತ್ಸಾ ಸಪ್ತಾಹ ಆಚರಣೆ

ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನಲ್ಲಿ ಸೆಪ್ಟೆಂಬರ್ 5ರಿಂದ 9ರವರೆಗೆ ಭೌತಚಿಕಿತ್ಸಾ ಸಪ್ತಾಹ ಮತ್ತು ವಿಶ್ವ ಭೌತ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಭೌತಚಿಕಿತ್ಸಾ ಸಪ್ತಾಹದ ಅಂಗವಾಗಿ ಪೋಸ್ಟರ್ ಪ್ರದರ್ಶನ, ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು, ಉತ್ತಮ ಆರೋಗ್ಯಕ್ಕಾಗಿ ಕಾಲ್ನಡಿಗೆ ಜಾಥಾ, ಆರೋಗ್ಯ ತಪಾಸಣಾ ಶಿಬಿರ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳಾದ ಡಾ. ನಿರಂಜನ್ ಕುಮಾರ ಅವರು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ಆರೋಗ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುವಾಗ ಒಂದು ತಂಡವಾಗಿ ಅನಿವಾರ್ಯತೆ ಇದೆ. ಜನರ ಜೀವಿತಾವಧಿ ಹೆಚ್ಚಿಸುವಲ್ಲಿ ಭೌತಿಕ ಚಿಕಿತ್ಸಕರ ಗುಣಮಟ್ಟದ ಸೇವೆ ಶ್ಲಾಘನಿಯ. ನಾವು ಯಾವುದೇ ವೃತ್ತಿಯಲ್ಲಿದ್ದರೂ, ಶ್ರಧ್ದೆಯಿಂದ ಕಾರ್ಯನಿರ್ವಹಿಸುತ್ತಾ ವೃತ್ತಿಯನ್ನು ಗೌರವಿಸಬೇಕು. ಪ್ರಪಂಚದಾದ್ಯಂತ ಆರೋಗ್ಯ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಕೇತ. ಭೌತಚಿಕಿತ್ಸಕರು ತಮ್ಮ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು. ಈ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಕಾಲೇಜ ಆಫ್ ಹೆಲ್ತ್ ಪ್ರೋಫೆಶನಲ್ಸ್ನ ಡೀನ್ ಮತ್ತು ಹಿರಿಯ ಭೌತಚಿಕಿತ್ಸಕರಾದ ಡಾ. ಜಿ. ಅರುಣ ಮಯ್ಯಾ ಹಾಗೂ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶರ್ಮಿಳಾ ದುಧಾನಿ ಅವರನ್ನು ಭೌತಚಿಕಿತ್ಸೆಯ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪ್ರಸಿದ್ಧ ಕೈಗಾರಿಕೋಧ್ಯಮಿಯಾದ ಮಹೀಂದ್ರ ಸಿಂಘಿ ಮತ್ತು ಮಹಾವೀರ ಜೈನ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣನವರ್ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುಧೀರ್ ಭಟ್ಟಭೋಲನ್ ಮತ್ತು ಡಾ. ಸಲೀಮಾ ಬಿಜಾಪುರಿ ಸನ್ಮಾನಿತರನ್ನು ಪರಿಚಯಿಸಿದರು. ಡಾ. ತುಳಸಿ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಎಲೀಶ ಜಿಡಿ ವಂದರ್ನಾಪಣೆ ಸಲ್ಲಿಸಿದರು.

ಉಜಿರೆ: ಫಿಸಿಯೋಥೆರಪಿ ಶಿಬಿರ

Article Image

ಉಜಿರೆ: ಫಿಸಿಯೋಥೆರಪಿ ಶಿಬಿರ

ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಫಿಸಿಯೋಥೆರಪಿ ದಿನದ ಪ್ರಯುಕ್ತ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರವನ್ನು ನಡೆಸಲಾಯಿತು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ್ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ಫಿಸಿಯೋಥೆರಪಿಯಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅದರದ್ದೇ ಆದ ಚಿಕಿತ್ಸಾ ವಿಧಾನಗಳಿವೆ. ನಮ್ಮ ಆಸ್ಪತ್ರೆಯಲ್ಲಿ ರೋಗಿಗಳ ಆರೋಗ್ಯ ಸಮಸ್ಯೆಗಳಿಗೆ ತಕ್ಕಂತೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಇಬ್ಬರು ಫಿಸಿಯೋಥೆರಪಿ ತಜ್ಞರು ಫಿಸಿಯೋಥೆರಪಿ ಸೇವೆ ನೀಡುತ್ತಿದ್ದು, ವಿಶ್ವ ಫಿಸಿಯೋಥೆರಪಿ ದಿನದ ಪ್ರಯುಕ್ತ ಈ ದಿನ ರಿಯಾಯಿತಿ ದರದಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ ಎಂದರು. ಶಿಬಿರದಲ್ಲಿ ನರ ಮತ್ತು ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ, ಮಕ್ಕಳಲ್ಲಿ ಕಂಡುಬರುವ ದೈಹಿಕ ತೊಂದರೆಗಳಿಗೆ, ಶಸ್ತ್ರಚಿಕಿತ್ಸೆಯ ಬಳಿಕದ ಫಿಸಿಯೋಥೆರಪಿ ಮತ್ತು ನೋವು ನಿವಾರಣೆಗಳಿಗೆ ಮಾಡಬೇಕಾದ ಫಿಸಿಯೋಥೆರಪಿಗಳನ್ನು ಉಚಿತವಾಗಿ ಮಾಡಲಾಯಿತು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ತಜ್ಞರಾದ ಸನ್ನಿಧಿ ಜೈನ್ ಮತ್ತು ಪ್ರೀಥಮ್ ಈ ಶಿಬಿರವನ್ನು ನಡೆಸಿಕೊಟ್ಟರು. ಫಿಸಿಯೋಥೆರಪಿ ಸಮಾಲೋಚನೆಯನ್ನು ಉಚಿತವಾಗಿ ಮಾಡಲಾಯಿತು. ಫಿಸಿಯೋಥೆರಪಿ ವಿಧಾನಗಳಿಗೆ 20% ರಿಯಾಯತಿ ನೀಡಲಾಯಿತು.

ಸತ್ತೂರು, ಧಾರವಾಡ: ನಾಯಕತ್ವ ತರಬೇತಿ ಶಿಬಿರ

Article Image

ಸತ್ತೂರು, ಧಾರವಾಡ: ನಾಯಕತ್ವ ತರಬೇತಿ ಶಿಬಿರ

ಎಸ್.ಡಿ.ಎಂ. ವಿಶ್ವವಿದ್ಯಾಲಯವು ತನ್ನ ಅಂಗ ಸಂಸ್ಥೆಗಳ ಆಯ್ದ ವಿದ್ಯಾರ್ಥಿಗಳಿಗಾಗಿ ಸೆಪ್ಟೆಂಬರ್ 1 ಮತ್ತು 2, 2025ರಂದು ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಸತತ ನಾಲ್ಕು ವರ್ಷಗಳಿಂದ ಮುಂಬೈನ, ಎಂ. ಆರ್. ಪೈ ಫೌಂಡೇಶನ್‌ನ ಸಹಯೋಗದೊಂದಿಗೆ ಈ ನಾಯಕತ್ವ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಇಬ್ಬರು ತಜ್ಞ ನಾಯಕತ್ವ ತರಬೇತುದಾರರಾದ ಸಚಿನ್ ಕಾಮತ್ ಮತ್ತು ಸುಧೀರ್ ಪೈ ಅವರು ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂಬೈನ ಎಂ. ಆರ್. ಪೈ ಫೌಂಡೇಶನ್‌ನಿಂದ ಬಂದಿದ್ದರು. ಸುಮಾರು 100ಕ್ಕೂ ಹೆಚ್ಚು ವಿದ್ಯಾ ಗೀತಾ ಪೈ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸ್ವಾತಿ ಕಪಾಡಿಯಾ ಅವರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಗುರಿ ನಿಗದಿ ಮತ್ತು ಸಾಧನೆ-ಯಶಸ್ಸಿಗೆ ಮಾರ್ಗಸೂಚಿ, ಸಂವಹನ ಕೌಶಲ್ಯಗಳನ್ನು ತೀಕ್ಷ್ಣಗೊಳಿಸುವುದು, ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳುವುದು-ವೈಯಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಮಸ್ಯೆ ಪರಿಹರಿಸುವುದು, ಅಗತ್ಯ ತಂಡದ ಕೆಲಸ ಕೌಶಲ್ಯಗಳನ್ನು ಹೆಚ್ಚಿಸುವುದು, ತನ್ನಲ್ಲಿ ನಂಬಿಕೆ ಇಡುವುದು, ಅರ್ಥಪೂರ್ಣ ಸಂಪರ್ಕಗಳನ್ನು ನಿರ್ಮಿಸುವುದು ಎಂಬ ವಿಷಯಗಳು ಮೇಲೆ ಎರಡು ದಿನಗಳ ತರಬೇತಿಯನ್ನು ನೀಡಲಾಯಿತು. ಗೀತಾ ಪೈ ಅವರು ವಿದ್ಯಾಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ವಿದ್ಯಾರ್ಥಿಗಳು ವೃತ್ತಿಪರ ನೀತಿ ಶಾಸ್ತ್ರವನ್ನು ನಿಕಟವಾಗಿ ಗಮನಿಸುತ್ತಾ ತಮ್ಮ ಜೀವನದಲ್ಲಿ ಅನುಸರಿಸಬೇಕು. ಆರೋಗ್ಯ ವೃತ್ತಿಪರರು ಅತೀ ಕಾಳಜಿಯಿಂದ ಉತ್ತಮ ಚಿಕಿತ್ಸೆ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಲಭ್ಯವಿರುವ ಅವಕಾಶಗಳನ್ನು ಸರಿಯಾಗಿ ಬಳಸಿ, ಉತ್ತಮ ನಾಯಕರಾಗಬೇಕು. ಎಸ್.ಡಿ.ಎಂ. ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯಕ್ ಅವರು ಮಾತನಾಡುತ್ತಾ, ನಾವು ಉತ್ತಮ ಅಭ್ಯಾಸಗಳನ್ನು ಅನುಸರಿಸಿ ದೀರ್ಘಕಾಲದವರೆಗೆ ಉಳಿಸಿಕೊಳ್ಳಬೇಕು. ಆರೋಗ್ಯ ಸೇವಾ ಸಿಬ್ಬಂದಿಗಳು ಸರಿಯಾದ ಸಂವಹನ ಮತ್ತು ಕೌಶಲ್ಯಗಳು ಅವಶ್ಯಕವಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯವು ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸಲು ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೀತಾ ಪೈ ಮತ್ತು ಸ್ವಾತಿ ಕಪಾಡಿಯಾ ಅವರನ್ನು ಸನ್ಮಾನಿಸಿದರು. ಸಹ ಉಪ ಕುಲಪತಿಗಳಾದ ಜೀವಂಧರ್ ಕುಮಾರ್, ಗೀತಾ ಎಂ.ಆರ್. ಪೈ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಬಾಬಣ್ಣ ಶೆಟ್ಟಿಗಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಕಲಿಕೆ ಎನ್ನುವುದು ಮುಗಿಯದ ಅಧ್ಯಾಯ: ದಿನೇಶ್ ಶೆಟ್ಟಿ ಕಾವಳಕಟ್ಟೆ

Article Image

ಕಲಿಕೆ ಎನ್ನುವುದು ಮುಗಿಯದ ಅಧ್ಯಾಯ: ದಿನೇಶ್ ಶೆಟ್ಟಿ ಕಾವಳಕಟ್ಟೆ

ಪುರಾಣದಿಂದಲೂ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ.ಹಾಗಾಗಿ ಕಲಿಕೆ ಎನ್ನುವುದು ತಕ್ಷಣಕ್ಕೆ ಮುಗಿಯುವುದಲ್ಲ ಅದೊಂದು ಮುಗಿಯದ ಅಧ್ಯಾಯ ಎಂದು ಖ್ಯಾತ ಯಕ್ಷಗಾನ ಕಲಾವಿದ, ವಾಗ್ಮಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿಪ್ರಾಯಪಟ್ಟರು. ಉಜಿರೆ ಶ್ರೀ ಧ.ಮಂ. ಕಾಲೇಜಿನ ಕಲಾ ಕೇಂದ್ರದಲ್ಲಿ ಆ.22ರಂದು ಆಯೋಜಿಸಲಾಗಿದ್ದ ಯಕ್ಷಗಾನದ ನೂತನ ರಂಗಸ್ಥಳದ ಚೌಕಟ್ಟು ಉದ್ಘಾಟನೆ ಕಾರ್ಯಕ್ರಮ ಮತ್ತು "ವಿಶ್ವಮಾನವ ಶ್ರೀ ರಾಮಚಂದ್ರ" ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಚರಿತ್ರೆಯ ಪುಟದಲ್ಲಿ ಒಂದು ಮಗುವಿನಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರ ಬಾಯಲ್ಲೂ ಹರಿದಾಡುವ ಏಕೈಕ ಹೆಸರು ರಾಮ. ರಾಮ ಕೇವಲ ಪುರಾಣ ಮಹಾಕಾವ್ಯದ ವ್ಯಕ್ತಿಯಾಗಿ ಬರಲಿಲ್ಲ ಶಕ್ತಿಯಾಗಿ ಬಂದಿದ್ದಾನೆ ಇದ್ದಕ್ಕೆ ಕಾರಣ ಅವನ ಕಲಿಕೆ. ಕಲಿಕೆ ಎನ್ನುವುದು ಜೀವನದ ಅಂತ್ಯದವರೆಗೂ ಮುಗಿಯದ ಅಧ್ಯಾಯ. ಇದ್ದಕ್ಕೆ ನಮ್ಮ ಮುಂದಿರುವ ನಿದರ್ಶನ ಶ್ರೀರಾಮ ಎಂದರು. ವಿಶ್ವಮಾನವ ಗುಣಗಳುಳ್ಳ ಶ್ರೀರಾಮನ ಆದರ್ಶಗಳನ್ನು ವಿದ್ಯಾರ್ಥಿಗಳು ವರ್ತಮಾನದಲ್ಲಿ ರೂಢಿಸಿಕೊಳ್ಳುವ ಅವಶ್ಯಕತೆ ಇದೆ.ಸಧ್ಯ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಹೆಸರು ಮಾಡುವ ಹುನ್ನಾರಗಳು ನಡೆಯುತ್ತಿರುವುದು ಶೋಚನೀಯ. ಪ್ರತಿಯೊಂದು ದೇವಾಲಯವು ಕೂಡ ನಮ್ಮ ಸಮೃದ್ಧ ಹಿಂದು ಸಂಸ್ಕೃತಿಯ ಆಸ್ತಿಗಳು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಯ ಮೇಲೆ ಇದೆ ಎಂದರು. ಧರ್ಮಸ್ಥಳ ಕ್ಷೇತ್ರದ ರೀತಿ ಪ್ರತಿಯೊಂದು ದೇವಾಲಯಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರೆ ಭಾರತ ರಾಮ ರಾಜ್ಯ ಆಗುವುದರಲ್ಲಿ ಅನುಮಾನವಿಲ್ಲ. ಹಿಂದೂ ದೇವಾಲಯಗಳು ಮೇಲೆ ಆಗುತ್ತಿರುವ ಧೋರಣೆಗಳನ್ನು ತಡೆಗಟ್ಟುವಲ್ಲಿ ಯುವಜನತೆ ಶ್ರಮಿಸಬೇಕು. ಎಂದವರು ಕಿವಿಮಾತು ಹೇಳಿದರು. ಕಲಾಕೇಂದ್ರದ ಮಾತೃ ಸ್ವರೂಪಿ, ಸೋನಿಯಾ ಯಶೋವರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. "ಬೆಳಗಿದ ದೀಪ ನಿಮ್ಮ ಬಾಳಿಗೆ ಹಾಗೂ ಕಲಾ ಕೇಂದ್ರಕ್ಕೆ ಬೆಳಕಾಗಲಿ ಎಂದು ಹಾರೈಸಿ,ಕಲೆಯನ್ನು ಮೈಗೂಡಿಸಿಕೊಂಡರೆ ಕಾಲೇಜಿನಲ್ಲಿ ಓದಿದ ವಿಷಯಗಳು ಬೇಗ ಅರ್ಥ ಆಗುವುದರ ಜೊತೆಗೆ ಏಕಾಗ್ರತೆ ಹೆಚ್ಚಾಗುತ್ತದೆ. ನಿಮ್ಮ ಜೀವನದ ಹಾದಿಯಲ್ಲಿ ನಿಮ್ಮ ಬುದ್ದಿ ಯನ್ನು ಬೇರೆಯವರು ನಡೆಸಲು ಬಿಡಬೇಡಿ, ಸರಿ ತಪ್ಪುಗಳನ್ನು ಅರಿತು ವಿಶ್ಲೇಷಿಸಿ ಮುಂದುವರೆದರೆ ಯಶಸ್ಸು ನಿಮ್ಮದಾಗುತ್ತದೆ ಎಂದವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ನೂತನ ರಂಗಸ್ಥಳವನ್ನು ಉದ್ಘಾಟಿಸಿ ಮಾತನಾಡಿದರು. "ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮೌಲ್ಯಯುತ ಶಿಕ್ಷಣ ಒದಗಿಸುವುದು, ನಮ್ಮ ಕಾಲೇಜಿನ ಅಧ್ಯಕ್ಷರ ಮೂಲ ಆಶಯವಾಗಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಿವೆ. ಅದರಲ್ಲಿ ಒದಗಿ ಬರುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು" ಎಂದರು. ಎಲ್ಲಾ ಸವಲತ್ತು ಹಾಗೂ ಅವಕಾಶಗಳನ್ನು ಉಪಯೋಸಿಕೊಂಡರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ.ನಮ್ಮ ಆಸಕ್ತಿ ವಿಚಾರಗಳನ್ನು ನಾವು ಗುರುತಿಸಿಕೊಂಡು, ಶಿಕ್ಷಣದ ಜೊತೆಗೆ ನಮ್ಮ ಆಸಕ್ತಿ ವಿಷಯದಲ್ಲಿ ಮುಂದುವರೆದು ಪರಿಶ್ರಮ ಶ್ರದ್ಧೆಯ ಜೊತೆಗೆ ಆತ್ಮವಿಶ್ವಾಸವನ್ನು ಬೆಳಿಸಿಕೊಳ್ಳಬೇಕು. ಎಂದು ಸಲಹೆ ನೀಡಿದರು. ಪೂಜ್ಯ ಖಾವಂದರ ಕುರಿತ ಸಾಧನೆ ಹಾಗೂ ಅವರ ಚಿಂತನೆಗಳನ್ನು ಒಳಗೊಂಡಂತಹ ಕಾರ್ಯಕ್ರಮವನ್ನು "ಯಕ್ಷ ದರ್ಶನ" ಎಂಬ ಶೀರ್ಷಿಕೆ ಅಡಿಯಲ್ಲಿ ಹಾಗೂ ಯಕ್ಷಗಾನದ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ವತಿಯಿಂದ ಯಕ್ಷಗಾನ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸವನ್ನು ವೆಂಕಪ್ಪಯ್ಯ ಸಾಂಸ್ಕೃತಿಕ ಯಕ್ಷಗಾನ ಅಧ್ಯಯನ ಭವನ ಸಿರಿಬಾಗಿಲು ಇಲ್ಲಿಗೆ ಭೇಟಿ ನೀಡಿದ ಅನುಭವಗಳನ್ನು ವಿದ್ಯಾರ್ಥಿಗಳು ಅಮೋಘ ಶಂಕರ್ ಹಾಗೂ ಅನನ್ಯ ಹಂಚಿಕೊಂಡರು. ವಿದ್ಯಾರ್ಥಿಗಳಿಬ್ಬರು "ಬಾಲ ಗೋಪಾಲ" ಪ್ರಸ್ತುತಿಯನ್ನು ಆಡಿ ತೋರಿಸಿದರು. ಪ್ರಸ್ತುತ ತಿಂಗಳು ಅತೀ ಹೆಚ್ಚು ಯಕ್ಷಗಾನ ತರಗತಿಗೆ ಹಾಜರಾದ ವಿದ್ಯಾರ್ಥಿಗಳಾದ ಸ್ಮೃತಿ ಹಾಗೂ ಅನನ್ಯರನ್ನು ಗುರುತಿಸಲಾಯಿತು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ. ನಾಗಣ್ಣ, ಯಕ್ಷಗಾನ ತರಬೇತುದಾರ ಅರುಣ್ ಕುಮಾರ್ ಧರ್ಮಸ್ಥಳ, ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ, ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಶ್ರೇಯಸ್ ಪಾಳ್ಯಂದೆ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಚಿನ್ ಉಪಸ್ಥಿತರಿದ್ದರು. ಯಕ್ಷಗಾನದ ವಿದ್ಯಾರ್ಥಿಗಳು ಹಾಗೂ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಕ್ಷಗಾನ ವಿದ್ಯಾರ್ಥಿಗಳು ಪ್ರಾರ್ಥಿಸಿ, ತೇಜಸ್ ಸ್ವಾಗತಿಸಿ, ಸಹನಾ ವಂದಿಸಿದರು.ಕಾರ್ಯಕ್ರಮವನ್ನು ಪವಿತ್ರ ನಿರೂಪಿಸಿದರು.

ಅಧ್ಯಕ್ಷರಾಗಿ ಡಾ. ಪ್ರಸನ್ನಕುಮಾರ ಐತಾಳ್ ಆಯ್ಕೆ

Article Image

ಅಧ್ಯಕ್ಷರಾಗಿ ಡಾ. ಪ್ರಸನ್ನಕುಮಾರ ಐತಾಳ್ ಆಯ್ಕೆ

ಮೂಡುಬಿದ್ರೆಯ ಎಕ್ಸೆಲೆಂಟ್ ಪ.ಪೂ ಕಾಲೇಜಿನಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ ಹಾಗೂ ವಾರ್ಷಿಕ ಸಭೆಯಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಂಗಳೂರು ಶ್ರೀ ಶಾರದಾ ಪ.ಪೂ ಕಾಲೇಜಿನ ಉಪನ್ಯಾಸಕ ರಮೇಶ್ ಆಚಾರ್ಯ, ಉಪಾಧ್ಯಕ್ಷರಾಗಿ ಮಂಗಳೂರು ಎಕ್ಸಪರ್ಟ್ ಪ.ಪೂ ಕಾಲೇಜಿನ ಶ್ರೀನಿವಾಸ ಮಧ್ಯಸ್ಥ, ಮೂಡುಬಿದ್ರೆ ಆಳ್ವಾಸ್ ಪ.ಪೂ ಕಾಲೇಜಿನ ಅಂಬರೀಷ ಚಿಪ್ಲೂಣಕರ, ಸುರತ್ಕಲ್ ಗೋವಿಂದದಾಸ ಪ.ಪೂ ಕಾಲೇಜಿನ ಪೈಕ ವೆಂಕಟರಮಣ ಭಟ್ ಇವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಗಳೂರು ಸೈಂಟ್ ಅಲೋಶಿಯಸ್ ಪ.ಪೂ ಕಾಲೇಜಿನ ಡಾ. ಸುರೇಖಾ ತಂತ್ರಿ, ಜೊತೆ ಕಾರ್ಯದರ್ಶಿಗಳಾಗಿ ಮಂಗಳೂರು ಮ್ಯಾಪ್ಸ್ ಪ.ಪೂ ಕಾಲೇಜಿನ ಶೈಲಜಾ ಹೆಚ್. ಎಸ್., ಮೂಡುಬಿದ್ರೆ ಆಳ್ವಾಸ್ ಪ.ಪೂ ಕಾಲೇಜಿನ ಅನಂತ ಭಟ್, ಕಲ್ಲಡ್ಕದ ಶ್ರೀರಾಮ ಪ.ಪೂ ಕಾಲೇಜಿನ ಮಹೇಂದ್ರ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಮೂಡುಬಿದ್ರೆಯ ಎಕ್ಸಲೆಂಟ್ ಪ.ಪೂ ಕಾಲೇಜಿನ ತೇಜಸ್ವಿ ಭಟ್ ಇವರು ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಮಂಗಳೂರಿನ ಡಾ. ಎನ್.ಎಸ್.ಎ.ಎಂ ಪ.ಪೂ ಕಾಲೇಜಿನ ರವಿಶಂಕರ ಹೆಗಡೆ, ರಾಜ್ಯಮಟ್ಟದ ಸಂಘಕ್ಕೆ ಜಿಲ್ಲಾ ಸಂವಹನ ಪ್ರತಿನಿಧಿಯಾಗಿ ಪುತ್ತೂರಿನ ಸರಕಾರಿ ಪ.ಪೂ ಕಾಲೇಜಿನ ಪ್ರಕಾಶ್ ವಿ.ಕೆ. ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿಯ ಸದಸ್ಯರಾಗಿ ಮಂಗಳೂರು ಬೆಸೆಂಟ್ ಪ.ಪೂ ಕಾಲೇಜಿನ ಅಜಿತಾ, ಮಂಗಳೂರು ಕೆನರಾ ಪ.ಪೂ ಕಾಲೇಜಿನ ಡಾ. ಮಧುಕೇಶ್ವರ ಶಾಸ್ತ್ರಿ, ಮೂಡಬಿದ್ರೆ ಜೈನ್ ಪ.ಪೂ ಕಾಲೇಜಿನ ರಾಮಚಂದ್ರ ಭಟ್, ಅಳಿಕೆ ಸತ್ಯಸಾಯಿ ಲೋಕಸೇವಾ ಪ.ಪೂ ಕಾಲೇಜಿನ ವೆಂಕಟಕೃಷ್ಣ ಶರ್ಮಾ ಇವರು ಆಯ್ಕೆಯಾಗಿದ್ದಾರೆ.

ಸುಲೋಚನಾ ಭಟ್ ನಿಧನ

Article Image

ಸುಲೋಚನಾ ಭಟ್ ನಿಧನ

ಪುತ್ತೂರು, ಆ. 28: ಸ್ವರ್ಣೋದ್ಯಮಿ ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಭಟ್ (71) ಅವರು ಅಲ್ಪಕಾಲದ ಅಸೌಖ್ಯದಿಂದ ಆ. 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ ಮುಳಿಯ ಶ್ಯಾಮ್ ಭಟ್, ಪುತ್ರರಾದ ಮುಳಿಯ ಜುವೆಲ್ಸನ ಸಿಎಂಡಿ ಕೇಶವ ಪ್ರಸಾದ್, ಎಂಡಿ ಕೃಷ್ಣ ನಾರಾಯಣ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಉದ್ಯಮಿಯಾಗಿದ್ದ ಸುಲೋಚನಾ ಅವರು ಲಯನೆಸ್ ಮತ್ತು ರೋಟರಿ ಇನ್ನರ್‌ವೀಲ್ ಕ್ಲಬ್ ಮೂಲಕ ಸಮಾಜಸೇವಕಿಯಾಗಿ ಗುರುತಿಸಿಕೊಂಡಿದ್ದರು. ಮುಳಿಯ ಜುವೆಲ್ಲರ್ಸ್‌ನ ಎಲ್ಲಾ ಶಾಖೆಗಳು ಇಂದು (29 ಆಗಸ್ಟ್ ಶುಕ್ರವಾರ) ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಹಕರು ಗಮನಿಸಬೇಕಾಗಿ ವಿನಂತಿ.

ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2025

Article Image

ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2025

ಮೂಡುಬಿದಿರೆ: ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದರಲ್ಲಿ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಫಲಿತಾಂಶ: 14 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಪ್ರಣವ್ ಎಸ್ - ಟ್ರಯಥ್ಲಾನ್-ಎ (ಪ್ರಥಮ), ಸುಭಾಷ್ - ಟ್ರಯಥ್ಲಾನ್-ಸಿ (ದ್ವಿತೀಯ), ಆದರ್ಶ್ - ಟ್ರಯಥ್ಲಾನ್- (ಪ್ರಥಮ), ಮೇಘಾ - ಟ್ರಯಥ್ಲಾನ್- ಸಿ (ಪ್ರಥಮ), ಸುಜಾತ - ಟ್ರಯಥ್ಲಾನ್-ಸಿ (ದ್ವಿತೀಯ) 16 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಕೃಷ್ಣ - ಜಾವೆಲಿನ್ ಎಸೆತ (ಪ್ರಥಮ), ಮೈಲಾರಿ - ಜಾವೆಲಿನ್ ಎಸೆತ (ದ್ವಿತೀಯ), ನವೀನ್ - ಉದ್ದ ಜಿಗಿತ (ಪ್ರಥಮ), ಲೋಹಿತ್ ಗೌಡ- ಉದ್ದ ಜಿಗಿತ (ದ್ವಿತೀಯ), ನ್ಯಾನ್‌ದೇವ್ - 80ಮೀ ಹರ್ಡಲ್ಸ್ (ಪ್ರಥಮ), ಪ್ರೇಕ್ಷಿತಾ - ಜಾವೆಲಿನ್ ಎಸೆತ (ಪ್ರಥಮ) 18 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಕವೀಶ್ - ಜಾವೆಲಿನ್ ಎಸೆತ (ದ್ವಿತೀಯ), ಆಕಾಶ್ - 110ಮೀ ಹರ್ಡಲ್ಸ್ (ತೃತೀಯ), ಉಲ್ಲಾಸ್ - 5ಕಿಮೀ ನಡಿಗೆ (ತೃತೀಯ), ಗುರು - ಹೆಪ್ಟತ್ಲಾನ್ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಮನೀಶ್ - ಉದ್ದ ಜಿಗಿತ (ತೃತೀಯ), ಭಾಗೀರಥಿ - 3ಕಿಮೀ ನಡಿಗೆ (ತೃತೀಯ), ನಾಗಿಣಿ - 1000ಮೀ (ಪ್ರಥಮ), ಚರೀಷ್ಮಾ - 1000ಮೀ (ದ್ವಿತೀಯ), ವೈಷ್ಣವಿ - ಉದ್ದ ಜಿಗಿತ (ಪ್ರಥಮ), 20 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ದಯಾನಂದ - 400ಮೀ (ದ್ವಿತೀಯ), ನೊಯಲ್ - ಉದ್ದ ಜಿಗಿತ (ಪ್ರಥಮ), ತಬಶೀರ್ - ತ್ರಿವಿಧ ಜಿಗಿತ (ಪ್ರಥಮ), ಉದ್ದ ಜಿಗಿತ (ತೃತೀಯ), ದರ್ಶನ್ - 10ಕಿಮೀ ನಡಿಗೆ (ಪ್ರಥಮ), ಸರ್ವಜಿತ್ - 100ಮೀ (ತೃತೀಯ), ಅಬ್ದುಲ್ ರಜಕ್ - ಹ್ಯಾಮರ್ ತ್ರೋ (ದ್ವಿತೀಯ), ಯಶವಂತ 800ಮೀ(ದ್ವಿತೀಯ), ರಾಮು-400ಮೀ (ತೃತೀಯ), ನಂದ - ಜಾವೆಲಿನ್ ಎಸೆತ (ದ್ವಿತೀಯ), ಶಬರಿ - 100ಮೀ ಹರ್ಡಲ್ಸ್ (ತೃತೀಯ), ಗೀತಾ - 400ಮೀ (ದ್ವಿತೀಯ), ಐಶ್ವರ್ಯ - ಚಕ್ರ ಎಸೆತ (ದ್ವಿತೀಯ), ಗುಂಡು ಎಸೆತ (ದ್ವಿತೀಯ) 23 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಸನತ್- ಡೆಕತ್ಲಾನ್ (ಪ್ರಥಮ), ಗಣೇಶ್ - ಗುಂಡು ಎಸೆತ (ಪ್ರಥಮ), ನಾಗೇಂದ್ರ - ಚಕ್ರ ಎಸೆತ (ಪ್ರಥಮ), ರೇಖಾ - 800ಮೀ (ಪ್ರಥಮ), 400ಮೀ (ದ್ವಿತೀಯ), ಪ್ರಣಮ್ಯ - 10000ಮೀ (ಪ್ರಥಮ) 5000ಮೀ (ಪ್ರಥಮ) ಸ್ಥಾನ ಪಡೆದಿರುತ್ತಾರೆ. ನೂತನ ಕೂಟ ದಾಖಲೆ : 18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ನಾಗಿಣಿ 1000 ಮೀ, ಹಾಗೂ 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನ್ಯಾನ್‌ದೇವ್ 80ಮೀ ಹರ್ಡಲ್ಸ್ ಹಾಗೂ 23 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಚಕ್ರ ಎಸೆತದಲ್ಲಿ ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ. ವೈಯಕ್ತಿಕ ಪ್ರಶಸ್ತಿ : 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆದರ್ಶ್ ಕ್ರೀಡಾಕೂಟದಲ್ಲಿ ಕೊಡ ಮಾಡುವ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾನೆ. ವಿಜೇತ ಕ್ರೀಡಾಪಟಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಮಹೋತ್ಸವ ಸಮ್ಮೇಳನ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಮಹೋತ್ಸವ ಸಮ್ಮೇಳನ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗವು ಆಗಸ್ಟ್ 22 ರಿಂದ 24, 2025 ರವರೆಗೆ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕರ್ನಾಟಕ ಅಂಗರಚನಾಶಾಸ್ತ್ರಜ್ಞರ ಘಟಕದ ಬೆಳ್ಳಿ ಮಹೋತ್ಸವ ಸಮ್ಮೇಳನವನ್ನು “ಅನುವಾದ ಅಂಗರಚನಾಶಾಸ್ತ್ರ: ಸಂಪ್ರದಾಯ ಮತ್ತು ತಂತ್ರಜ್ಞಾನದ ಸಿನ್ಸಿಟಿಯಮ್” ಎಂಬ ಧ್ಯೇಯೆಯೊಂದಿಗೆ ಆಯೋಜಿಸಲಾಗಿತ್ತು. ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಅಂಗರಚನಾಶಾಸ್ತ್ರಜ್ಞರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಸುಮಾರು 200ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಯಿತು. ಕರ್ನಾಟಕ ಅಂಗರಚನಾಶಾಸ್ತ್ರಜ್ಞರ ಘಟಕದ (ಏಅಂ) ಸ್ಥಾಪಕ ಅಧ್ಯಕ್ಷರಾದ ಡಾ. ಎಸ್ ಕಾಂತ ಮತ್ತು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮುಖ್ಯ ಅತಿಥಿಗಳಾಗಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಅಂಗರಚನಾಶಾಸ್ತ್ರಜ್ಞರ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಖಜಾಂಚಿಗಳಾದ ಡಾ. ಅಶ್ವಿನಿ ಸಿಎ, ಉಪಾಧ್ಯಕ್ಷರುಗಳಾದ ಡಾ. ಎನ್ ಎಂ ಸುರೇಶ್ ಮತ್ತು ಡಾ. ವಿದ್ಯಾ ಸಿಎಸ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ಪಿ. ಎಸ್. ಭೂಸರಡ್ಡಿ ಅವರು ಗೌರವ ಅತಿಥಿಗಳಾಗಿದ್ದರು. ಗಣ್ಯರು ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಡಾ. ಕಾಂತ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಅನ್ಯಾಟಮಿಸ್ಟ್ಸ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಗಳಾದ ಡಾ. ಜಥಾನಿ, ಖ್ಯಾತ ಸ್ವರೂಪ ಶಸ್ತ್ರಚಿಕಿತ್ಸಕರಾದ ಡಾ. ಎಸ್. ಎ. ಸುಬ್ರಮಣಿ ಮತ್ತು ಇತರರ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಕಾಂತ ಎಸ್. ಮತ್ತು ಡಾ. ನಿರಂಜನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಡಾ. ವೀಣಾ ಕುಲಕರ್ಣಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ರೋಶನಿ ಸದಾಶಿವ ಮತ್ತು ಡಾ. ವಿನಯ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಸಂಘಟನಾ ಕಾರ್ಯದರ್ಶಿಗಳಾದ ಡಾ. ಸುರೇಶ್ ಮನಗುತ್ತಿ ವಂದನಾರ್ಪಣೆ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ಜ್ಞಾನಪಥ ಮತ್ತು ಜ್ಞಾನರಥ ಕೃತಿಗಳ ಲೋಕಾರ್ಪಣೆ

Article Image

ಧರ್ಮಸ್ಥಳದಲ್ಲಿ ಜ್ಞಾನಪಥ ಮತ್ತು ಜ್ಞಾನರಥ ಕೃತಿಗಳ ಲೋಕಾರ್ಪಣೆ

ಉಜಿರೆ: ನೈತಿಕಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯವಾಗಿದ್ದು ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಕಟಿಸಿದ “ಜ್ಞಾನಪಥ” ಮತ್ತು “ಜ್ಞಾನರಥ” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜ್ಞಾನದೀವಿಗೆಯಾದ ಪುಸ್ತಕಗಳು ಉತ್ತಮ ಹಾಗೂ ಉಪಯುಕ್ತ ಜೀವನ ಸಂಗಾತಿಯಾಗಿದ್ದು, ನೈತಿಕ ಪುಸ್ತಕಗಳಲ್ಲಿರುವ ಲೇಖನಗಳು ಸಾರ್ಥಕ ಬದುಕಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ ಎಂದು ಅವರು ಶ್ಲಾಘಿಸಿ ಅಭಿನಂದಿಸಿದರು. ಶ್ರೀ ಮಂಜುನಾಥ ಚಲನಚಿತ್ರ: ತಾನು ಬಾಲ್ಯದಿಂದಲೂ ಧರ್ಮಸ್ಥಳದ ಪರಮ ಭಕ್ತನಾಗಿದ್ದು ಕೆಲವು ವರ್ಷಗಳ ಹಿಂದೆ ಸುಮಾರು ಮೂರು ತಿಂಗಳು ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಾಸ್ತವ್ಯ ಇದ್ದು, “ಶ್ರೀ ಮಂಜುನಾಥ” ಚಲನಚಿತ್ರ ನಿರ್ಮಾಣ ಮಾಡಿರುವ ಸವಿನೆನಪನ್ನು ಸ್ಮರಿಸಿದರು. ಧರ್ಮಸ್ಥಳಕ್ಕೆ ಬಂದು ಪ್ರಥಮವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು “ಶ್ರೀ ಮಂಜುನಾಥ” ಚಲನಚಿತ್ರ ತಯಾರಿಸುವ ಬಗ್ಗೆ ಅನುಮತಿ ಕೋರಿದಾಗ ಬಹಳ ನಿರೀಕ್ಷೆಯಲ್ಲಿದ್ದ ಅವರಿಗೆ ಆಶ್ಚರ್ಯವಾಯಿತು. ಹೆಗ್ಗಡೆಯವರು ತಕ್ಷಣ ಮಂಜುನಾಥ ದೇವರನ್ನು ವ್ಯಾಪಾರೀಕರಣ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಆದರೂ ದೇವರನ್ನು ಪ್ರಾರ್ಥಿಸಿ ತನ್ನ ದೃಢಸಂಕಲ್ಪ ನೆರವೇರಿಸಲು ಪ್ರಯತ್ನಿಸಿದರು. ಚಲನಚಿತ್ರ ನಿರ್ಮಾಣಕ್ಕೆ ಭಗೀರಥ ಪ್ರಯತ್ನ ಮಾಡಿದರು. ವಿಶೇಷವಾಗಿ ಜೈನಧರ್ಮದ ಬಗ್ಗೆ ವಿಶೇಷ ಗೌರವ, ಆದರ ಹೊಂದಿದ ಅವರು ಆಳವಾದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದರು. ಕನ್ನಡದ ಆದಿಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಏಳು ಕೋಟಿ ರೂ. ವೆಚ್ಛದಲ್ಲಿ ತಯಾರಾದ ಚಲನಚಿತ್ರದಲ್ಲಿ ತಾನು ನಷ್ಟ ಅನುಭವಿಸಬೇಕಾಯಿತು ಎಂದು ಸಿಹಿ-ಕಹಿ ಅನುಭವವನ್ನು ನೆನಪಿಸಿಕೊಂಡರು. ಶುಭಾಶಂಸನೆ ಮಾಡಿದ ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ ಎಚ್.ಡಿ.) ಮನೆಯ ವಾತಾವರಣದಿಂದಲೇ ಉತ್ತಮ ಸಂಸ್ಕಾರ ಮೂಡಿ ಬರಬೇಕು. ಜೀವ ದೊಡ್ಡದಲ್ಲ, ಜೀವನ ದೊಡ್ಡದು. ಮೊದಲು ನಾವು ಯಾರು ಎಂಬುದನ್ನು ಅರಿತುಕೊಂಡು, ನವಚೈತನ್ಯವನ್ನು ಹೊಂದಬೇಕು. ಸಜ್ಜನರ ಸತ್ಸಂಗ ಹಾಗೂ ಉತ್ತಮ ಪುಸ್ತಕಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಸಂಸ್ಕಾರ ಮೂಡಿಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಜನಾಂಗವಾಗಿದ್ದು ಅವರ ಉಜ್ವಲ ಭವಿಷ್ಯ ರೂಪಿಸಲಿಕ್ಕಾಗಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ವಾಮಿ ವಿವೇಕಾನಂದರಂತೆ ಓದಿದ ಪುಸ್ತಕದ ಅನುಭವವನ್ನು ಬದುಕಿನಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ಸಮಾಜದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಲಾಯಿತು. ಶಾರದಾಮಣಿಶೇಖರ್ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಸುಶ್ರಾವ್ಯ ಗಾಯನ ಮತ್ತು ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಧನ್ಯವಾದವಿತ್ತರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ ಎಕ್ಸಲೆಂಟ್ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ

Article Image

ಮೂಡುಬಿದಿರೆ ಎಕ್ಸಲೆಂಟ್ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ

ಎಕ್ಸಲೆಂಟ್ ಮೂಡುಬಿದಿರೆಯ ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜಿನ ಮಾದ್ಕ ವ್ಯಸನ ವಿರೋಧಿ ಸಮಿತಿ ಹಾಗೂ ಮೂಡುಬಿದಿರೆ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮ ಹಾಗೂ ಕಾನೂನು ಅರಿವು ನೀಡುವ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ ಎಕ್ಸಲೆಂಟ್‌ಮೂಡುಬಿದಿರೆಯ ರಾಜಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಾನೂನಿನ ಅರಿವು ನೀಡಿದ ಮೂಡುಬಿದಿರೆ ಆರಕ್ಷಕ ಠಾಣೆಯ ಪಿಎಸ್‌ಐ ಪ್ರತಿಭಾ ಅವರು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಭಾರತದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಜಾರಿಗೆ ತರಲಾದ ಒಂದು ಕಾಯ್ದೆ. ಈ ಕಾಯ್ದೆಯು ಮಾದಕ ವಸ್ತುಗಳ ಉತ್ಪಾದನೆ, ತಯಾರಿಕೆ, ಸಂಗ್ರಹಣೆ, ಸಾಗಣೆ, ಮಾರಾಟ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುತ್ತದೆ. ಮದ್ಯ, ಶುಗರ್, ವೈದ್ಯರ ಅನುಮತಿ ಇಲ್ಲದ ರಾಸಾಯನಿಕ ಔಷಧಗಳು ಇತ್ಯಾದಿ ಸೇವನೆಯು ದೇಶದಾದ್ಯಂತ ಯುವಜನರಲ್ಲಿ ಬೆಳೆಯುವ ಭೀತಿಯಾಗಿದೆ. ಇದರಿಂದ ಯುವಶಕ್ತಿ ತನ್ನ ಬಲವನ್ನು ಕಳಕೊಂಡಿದೆ. ಹದಿಹರೆಯದವರು ಮಾತ್ರವಲ್ಲ ಕೆಲವು ಸಂದರ್ಭಗಳಲ್ಲಿ ಹದಿಹರೆಯದ ಪೂರ್ವದ ಮಕ್ಕಳು ಇದಕ್ಕೆ ಬಲಿಯಾಗುತ್ತಾರೆ. ದೇಶದಲ್ಲಿ ಬಹಳಷ್ಟು ಜನರು ಸಹವಾಸ ದೋಷದಿಂದ, ಅನ್ಯ ಕಾರಣಗಳಿಂದ ಮಾದಕ ದ್ರವ್ಯ ಉಪಯೋಗಿಸುತ್ತಾರೆ. ಇದು ದೇಹದ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ಆರೋಗ್ಯವನ್ನು ಹಾಳು ಮಾಡುತ್ತದೆ. ಒಮ್ಮೆ ಅಪರಾಧ ಲೋಕದಲ್ಲಿ ಗುರುತಿಸಿ ಆದರೆ ನಿಮ್ಮ ಬಂಗಾರದತಹ ಭವಿಷ್ಯ, ಮನೆಯವರ ಸಾಮಾಜಿಕ ಸ್ಥಾನಮಾನ ಹಾಳಾಗುತ್ತದೆ ಎಂದರು. ಬಳಿಕ ಸೈಬರ್ ಅಪರಾಧಗಳ ಬಗ್ಗೆ, ಸಾಮಾಜಿಕ ಮಾಧ್ಯಮಗಳಿಂದ ಆಗುವ ತೊಂದರೆಗಳು, ವಿದ್ಯಾರ್ಥಿಗಳು ವಹಿಸಬೇಕಾದ ಎಚ್ಚರಿಕೆಗಳ ಕುರಿತು ವಿವರಣಾತ್ಮಕ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾದಕ ದ್ರವ್ಯದ ಜಾಲವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆಯ ಪ್ರಯತ್ನ ಶ್ಲಾಘನೀಯ. ಪ್ರತಿಯೊಂದು ಮಗುವಿನ ಬೆಳವಣಿಗೆ ಆರೋಗ್ಯದಾಯಕವಾಗಿರಬೇಕು. ಎತ್ತರಕ್ಕೆ ಏರಬೇಕು ಎಂಬುವುದು ಪ್ರತೀ ಹೆತ್ತವರ ಕನಸು. ಆ ಕನಸನ್ನು ಇಂತಹ ಮಾದಕ ದ್ರವ್ಯಗಳು ಪುಡಿಮಾಡಕೂಡದು. ನಾವು ಒಳ್ಳೆಯ ಅಭ್ಯಾಸಗಳಿಗೆ ವ್ಯಸನಿಗಳೋಣ. ಮಾನವೀಯ ಸಂಬಂಧ, ಶ್ರೇಷ್ಠ ಅಭ್ಯಾಸಗಳು, ದೇಶದ ಕುರಿತಾಗಿ ಗೌರವ ಬೆಳೆಸಿಕೊಳ್ಳಿ. ಸತ್ಯದ ದಾರಿಯಲ್ಲಿ ಮುಂದುವರಿಯಿರಿ. ಒಳ್ಳೆಯದನ್ನು ಬೆಂಬಲಿಸುತ್ತಾ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಸುವರೇ ಎಕ್ಸಲೆಂಟ್ ಸಂಸ್ಥೆಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷ ಪಡುತ್ತಾ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆದು ಮಾದಕ ವ್ಯಸನ ಮುಕ್ತ ಶ್ರೇಷ್ಠ ಭಾರತ ನಿರ್ಮಾಣವಾಗಲಿ ಎಂದರು. ವಿದ್ಯಾರ್ಥಿ ನಿತಿನ್ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ರಶ್ಮಿತಾ ಶೆಟ್ಟಿ ಹಾಗೂ ಸಂಜನ್ ಕೋಟೆ ಮಾದಕ ವ್ಯಸನದ ಕುರಿತು ಮಾತಾನಾಡಿದರು. ವಿದ್ಯಾರ್ಥಿಗಳಿಂದ ಮಾದಕ ವ್ಯಸನ ಮುಕ್ತ ಸಮಾಜ ಎಂಬ ಪ್ರಹಸನ ನಡೆಯಿತು. ವೇದಿಕೆಯಲ್ಲಿ ಕಾಲೇಜಿನ ಮಾದಕ ವ್ಯಸನ ವಿರೋಧಿ ಸಮಿತಿಯ ಮುಖ್ಯಸ್ಥರಾದ ಪ್ರದೀಪ್ ಕೆ ಪಿ ಉಪಸ್ಥಿತರಿದ್ದರು. ಕಾರ್ತಿಕ್ ಹೆಚ್. ನಿರೂಪಿಸಿ ಕಾರ್ತಿಕ್ ಅಗಡಿ ವಂದಿಸಿದರು.

ಸಂಸ್ಕೃತಿ ಪರಂಪರೆಯ ಬೇರು ಸಂಸ್ಕೃತ - ಯುವರಾಜ ಜೈನ್

Article Image

ಸಂಸ್ಕೃತಿ ಪರಂಪರೆಯ ಬೇರು ಸಂಸ್ಕೃತ - ಯುವರಾಜ ಜೈನ್

ನಮ್ಮ ಭಾರತೀಯ ಸಂಸ್ಕೃತಿಯ ಗಾಢವಾದ ಬೇರು ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ನಾಡಿನ ಸಂಸ್ಕೃತಿ, ತತ್ತ್ವ, ಧರ್ಮ, ಸಾಹಿತ್ಯ, ಕಲೆ ಮತ್ತು ಜ್ಞಾನದ ನಿರಂತರ ಪ್ರಕಾಶ. ಇಂದು ನಾವು ಕಾಣುತ್ತಿರುವ ಜೀವನಮೌಲ್ಯಗಳು, ಶಿಷ್ಟಾಚಾರಗಳು, ಶ್ರೀಮಂತ ಕಲೆಗಳು, ಜ್ಞಾನದ ಹರವುಗಳೆಲ್ಲ ಸಂಸ್ಕೃತ ಸಾಹಿತ್ಯದಲ್ಲಿ ನೆಲೆ ನಿಂತಿವೆ. ಸಂಸ್ಕೃತ ಅಧ್ಯಯನ ಮಾಡಿದರೆ ನಾವೇ ನಮ್ಮ ಮೂಲಗಳಿಗೆ ಹತ್ತಿರವಾಗುತ್ತೇವೆ, ಜಗತ್ತಿನೊಂದಿಗೆ ನಿಂತು ಮಾತನಾಡುವ ಶಕ್ತಿಯನ್ನು ಪಡೆಯುತ್ತೇವೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಸಂಸ್ಕೃತ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ  ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು  ಉದ್ಘಾಟಿಸಿ ಮಾತನಾಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ವಾಂಸರು ಮಂಗಳೂರಿನ ವಾಸುದೇವ ಕಾರಂತರು ಮಾತನಾಡುತ್ತ ಗುರು ಎಂದರೆ ಕೇವಲ ಪಾಠ ಹೇಳುವವನು ಮಾತ್ರವಲ್ಲ. ಆತನು ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಜ್ಞಾನವು ಕೇವಲ ಪುಸ್ತಕಗಳಲ್ಲಿ ಸೀಮಿತವಾಗದೆ, ಜೀವನದ ವಿವಿಧ ಕ್ಷೇತ್ರಗಳಲ್ಲಿ ಆಳವಾಗಿ ಅರ್ಥೈಸಿದಾಗ ಮಾತ್ರ ಅದು ಶಿಷ್ಯನಿಗೆ ಮಾರ್ಗದರ್ಶಕವಾಗುತ್ತದೆ. ನಿಜವಾದ ಗುರುವು ಸದಾ ಶಿಷ್ಯನ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಾನೆ. ವಿದ್ಯಾರ್ಥಿಯ ಮನಸ್ಸು ಅನೇಕ ವಿಚಾರಗಳಲ್ಲಿ ಅಲೆದಾಡುವುದು ಸಹಜ. ಇಂತಹ ಸಂದರ್ಭದಲ್ಲಿ ಶಿಷ್ಯನ ವಿಕ್ಷಿಪ್ತ ಮನಸ್ಸನ್ನು ನಿರ್ದಿಷ್ಟ ವಿಷಯದಲ್ಲಿ ನೆಲೆಗೊಳಿಸಿ, ಅಧ್ಯಯನದಲ್ಲಿ ಏಕಾಗ್ರತೆಯನ್ನು ಹುಟ್ಟಿಸುವುದು ಗುರುವಿನ ದೊಡ್ಡ ಹೊಣೆಗಾರಿಕೆ. ಇಂತಹ ಕಾರ್ಯವನ್ನು ನೆರವೇರಿಸಲು ಗುರುವು ಶಾಂತಿ, ಸಹನೆ ಮತ್ತು ತಾಳ್ಮೆಯನ್ನು ಹೊಂದಿರಬೇಕು ಎಂದು ಹಿತವಚನ ನುಡಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಅಂಕ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಡಾ. ಪ್ರಸನ್ನ ಕುಮಾರ್ ಐತಾಳ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ತೇಜಸ್ವೀ ಭಟ್ ನಿರೂಪಿಸಿ ಸಂಘದ ಕಾರ್ಯದರ್ಶೀ ಡಾ. ಮಧುಕೇಶ್ವರ ಶಾಸ್ತ್ರೀ ವಂದಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 79ನೇ ಸ್ವಾತಂತ್ರ‍್ಯ ದಿನಾಚರಣೆ

Article Image

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 79ನೇ ಸ್ವಾತಂತ್ರ‍್ಯ ದಿನಾಚರಣೆ

ಮೂಡುಬಿದಿರೆ: ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ನಿವೃತ್ತ ಅಧಿಕಾರಿ ಲೆ. ಜನರಲ್ ಅರುಣ್ ಅನಂತನಾರಾಯಣ್ ಹೇಳಿದರು. ವಿದ್ಯಾಗಿರಿಯ ಕೆ. ವಿ. ಸುಬ್ಬಣ್ಣ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವತಿಯಿಂದ ನಡೆದ 79ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಸ್ವಾತಂತ್ರ‍್ಯವೆಂದರೆ ಏನನ್ನಾದರೂ ಸಾಧಿಸುವ ಅವಕಾಶ ಎಂದು ಭಾಸವಾಗಬಹುದು, ಆದರೆ ನಮ್ಮ ಹಿರಿಯರು ಸರಿಯಾದ ಶಿಕ್ಷಣ ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕಿದ್ದರು. ನಿಜವಾದ ಸ್ವಾತಂತ್ರ‍್ಯ ಎಂದರೆ ಅಭಿವೃದ್ಧಿ ಪ್ರತಿಯೊಬ್ಬರಿಗೂ ತಲುಪಿದಾಗ ಹಾಗೂ ಪ್ರತಿಯೊಬ್ಬರೂ ಈ ಅಗತ್ಯ ಸೌಲಭ್ಯಗಳನ್ನು ಪಡೆದಾಗ ಸಾಧ್ಯವಾಗುವುದು. ಸ್ವಾತಂತ್ರ‍್ಯ ಹೋರಾಟದಲ್ಲಿ ಹಿರಿಯರು ನೀಡಿದ ತ್ಯಾಗಗಳಿಗೆ ಗೌರವ ಸಲ್ಲಿಸಿದ ಅವರು, “ಆಧುನಿಕ ಭಾರತವನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಮಿಸಲು ಸಾಧ್ಯವಿಲ್ಲ,ಅದಕ್ಕೆ ಸಮೂಹ ಶ್ರಮ ಅಗತ್ಯ. ಶಿಕ್ಷಕರು ಕೇವಲ ವೃತ್ತಿಯಲ್ಲಿಲ್ಲ, ಸೇವೆಯಲ್ಲಿ ಇದ್ದು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತವನ್ನು ಕಟ್ಟುವವರಾಗಿದ್ದಾರೆ ಎಂದರು. ಇಂತಹ ಮೌಲ್ಯಯುತ ಶಿಕ್ಷಣ ಪಡೆದ ವಿಧ್ಯಾರ್ಥಿ ಸಮೂಹದಿಂದ ನವ ಭಾರತದ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ ಡಾ. ಗ್ರೀಷ್ಮಾ, ಡಾ.ಹನಾ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಹಾಗೂ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್: 222 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

Article Image

ಬೆಳ್ತಂಗಡಿ ರೋಟರಿ ಕ್ಲಬ್: 222 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ತಮಗೆ ದೊರಕುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ಉತ್ತಮ ಸಂಸ್ಕಾರ ಹಾಗೂ ಗುರು-ಹಿರಿಯರಿಗೆ ಗೌರವ, ವಿನಯ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೇನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿ.ಜಿ.ಎಂ. ಪ್ರಶಾಂತ್ ಜೋಶಿ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ರೋಟರಿ ಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಕೇನ್‌ಫಿನ್ ಹೋಮ್ಸ್ ಸಹಯೋಗದಲ್ಲಿ 222 ವಿದ್ಯಾರ್ಥಿಗಳಿಗೆ ಇಪ್ಪತ್ತು ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ವಿದ್ಯಾರ್ಥಿವೇತನದ ಸದುಪಯೋಗ ಪಡೆದು ದೃಢಸಂಕಲ್ಪ ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಿ ವಿದ್ಯಾರ್ಥಿಗಳು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪುಗೊಳ್ಳಬೇಕು. ಮುಂದೆ ತಾವು ಸ್ವಾವಲಂಬಿ ಜೀವನ ನಡೆಸುವಾಗ, ತಾವು ಪಡೆದ ವಿದ್ಯಾರ್ಥಿವೇತನಕ್ಕಿಂತಲೂ ಹೆಚ್ಚಿನ ನೆರವನ್ನು ಇತರರಿಗೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ, ಶುಭಾಶಂಸನೆ ಮಾಡಿ, ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಸದುಪಯೋಗ ಮಾಡಬೇಕು. ಸದಾ ನಗುಮೊಗದಿಒಂದ ಸಂಕಷ್ಟದಲ್ಲಿರುವವರಿಗೆ ಸಕಾಲಿಕ ನೆರವುನೀಡಿ ಅವರು ಸುಖ-ಶಾಂತಿ, ಸಂತೋಷದಿಂದ ಜೀವನ ಮಾಡುವಂತೆ ಸಹಕರಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. ಬೆಂಗಳೂರು ಇಂದಿರಾನಗರ ರೋಟರಿಕ್ಲಬ್‌ನ ಮಾಜಿ ಅಧ್ಯಕ್ಷರಾದ ಸುಪ್ರಿಯಾ ಖಾಂದಾರಿ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಜವಾಬ್ದಾರಿಯುತ ಆದರ್ಶ ನಾಯಕರಾಗಿ ಸಮಾಜ ಸೇವೆ ಮತ್ತು ದೇಶಸೇವೆ ಮಾಡಬೇಕು ಎಂದು ಹೇಳಿದರು. ಕೇನ್‌ಫಿನ್ ಹೋಮ್ಸ್‌ನ ಉಪಪ್ರಬಂಧಕಿ ಚಿತ್ರಾಂಗದ ಸಾರಂಗಿ, ಸುರೇಶ್ ಸಾಲಿಯಾನ್, ಡಾ. ಎ. ಜಯಕುಮಾರ್ ಶೆಟ್ಟಿ, ರೋಟರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಕಾಂತ್ ಕಾಮತ್ ವಿದ್ಯಾರ್ಥಿವೇತನ ಸಮಿತಿ ಅಧ್ಯಕ್ಷ ಅಬೂಬಕ್ಕರ್, ಗೀತಾಪ್ರಭು ಉಪಸ್ಥಿತರಿದ್ದರು. ಮಂಗಳೂರಿನ ಸರ್ವಜ್ಞ ಐ.ಎ.ಎಸ್. ಅಕಾಡೆಮಿಯ ಸುರೇಶ್, ಎಂ.ಎಸ್. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಉಜಿರೆಯ ಡಾ. ದಯಾಕರ್, ಎಂ.ಎಂ. ಧನ್ಯವಾದವಿತ್ತರು. ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಏಕಕಾಲಕ್ಕೆ ಗರ್ಭಕೋಶದ ಗೆಡ್ಡೆ ಮತ್ತು ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಏಕಕಾಲಕ್ಕೆ ಗರ್ಭಕೋಶದ ಗೆಡ್ಡೆ ಮತ್ತು ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆ

ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಕಳೆದ 6 ತಿಂಗಳಿನಿಂದ ಬಳಲುತ್ತಿದ್ದ 45 ವರ್ಷ ಪ್ರಾಯದ ಮಹಿಳೆಯೊಬ್ಬರು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಾಗ ಈಕೆ ಅಸಹಜ ಗರ್ಭಾಶಯದ ರಕ್ತಸ್ರಾವದಿಂದ ಬಳಲುತ್ತಿದ್ದು, ಆಕೆಯ ಹೊಟ್ಟೆಯಲ್ಲಿ 7 ಸೆಂ.ಮೀ ಗಾತ್ರದ ಗೆಡ್ಡೆ ಸೇರಿದಂತೆ ಒಟ್ಟು 4 ಗೆಡ್ಡೆಯೊಂದಿಗೆ ಹರ್ನಿಯಾ (ಹೊಕ್ಕಳಿನ ಅಂಡವಾಯು)ಸಮಸ್ಯೆ ಕೂಡ ಇರುವುದು ಕಂಡು ಬಂದಿತ್ತು. ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತಾ, ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಬಾಲಾಜಿ ಪ್ರಭಾಕರನ್ ಮತ್ತು ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಆರ್. ಶೆಟ್ಟಿ ಇವರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಿಂದ ದೊಡ್ಡ ಗಾತ್ರದ ಗೆಡ್ಡೆ ಸೇರಿದಂತೆ ಎಲ್ಲಾ ಗೆಡ್ಡೆಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಇದೇ ಸಮಯದಲ್ಲಿ ಜಾಲರಿಯೊಂದಿಗೆ ಹರ್ನಿಯಾ ದುರಸ್ತಿ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಲಾಗಿದ್ದು, ಮಹಿಳೆಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚು ಗರ್ಭಕೋಶದ ಗೆಡ್ಡೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೆ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕೋಶದ ಗೆಡ್ಡೆಯ ಸಮಸ್ಯೆಯಿಂದ ಬಳಲುತ್ತಿರುವ ಬಹಳಷ್ಟು ಮಂದಿಗೆ ಶಸ್ತçಚಿಕಿತ್ಸೆ ಮಾಡಲಾಗಿದೆ ಎಂದು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಗಮನಹರಿಸಿ: ಜಯಶ್ರೀ

Article Image

ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಗಮನಹರಿಸಿ: ಜಯಶ್ರೀ

ಕಾಲೇಜು ಜೀವನದಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ವಿದ್ಯಾರ್ಥಿಗಳು ಗಮನಹರಿಸಿ ಸೂಕ್ತ ತಯಾರಿಯಲ್ಲಿ ತೊಡಗಬೇಕು ಎಂದು ಮನಃಶಾಸ್ತ್ರಜ್ಞೆ, ಬೆಂಗಳೂರಿನ ಭಾರತೀಯ ಮನಃಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆಯ ನಿಕಟಪೂರ್ವ ಪ್ರಾಧ್ಯಾಪಕಿ ಜಯಶ್ರೀ ಹೇಳಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದ ವತಿಯಿಂದ ಜು.30 ರಂದು ನಡೆದ ‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪುಸ್ತಕದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಪ್ರಾಯೋಗಿಕ ಕಲಿಕೆ ವಿದ್ಯಾರ್ಥಿಗಳಿಂದ ಆಗಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಅದನ್ನು ಕಲಿಕೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿನಿಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದ್ಮಶ್ರೀ ಸ್ವಾಗತಿಸಿ, ಯಶಸ್ವಿ ವಂದಿಸಿದರು.

First Previous

Showing 2 of 15 pages

Next Last