Article Image

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

Article Image

ಸತ್ತೂರು, ಧಾರವಾಡ: ಅಂತರಾಷ್ಟ್ರಿಯ ಯೋಗ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯವು ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಧ್ಯೇಯೆಯೊಂದಿಗೆ ದಿನಾಂಕ 21 ಜೂನ್ ರಂದು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿದ್ದು, ಮತ್ತಿತರ ಗಣ್ಯರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಪ್ರಕೃತಿ ಮತ್ತು ಯೋಗ ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಅರಳಿಹಳ್ಳಿ ಅವರು ಯೋಗದ ಮಹತ್ವ ತಿಳಿಸಿ ಅತಿಥಿ ಭಾಷಣ ಮಾಡುತ್ತಾ: ಯೋಗದಿಂದ ನಮ್ಮ ಆತ್ಮ ಸರ್ವೋಚ್ಛವಾಗುತ್ತದೆ. ಯೋಗದಿಂದ ಮನಸ್ಸಿಗೆ ಸುಖ ಮತ್ತು ಶಾಂತಿ ಸಿಗುತ್ತದೆ. ಯೋಗವು ಸಮಗ್ರ ದೇಹವನ್ನು ಸಮತೋಲನದಲ್ಲಿರಿಸುತ್ತದೆ. ಅಷ್ಟಾಂಗ ಯೋಗವು ಜೀವನದಲ್ಲಿ ಪರಿಪೂರ್ಣತೆಯನ್ನು ಗಳಿಸಲು ಸಹಾಯ ಮಾಡುತ್ತದೆ ಎಂದರು. ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಯೋಗ ಪರಿಣಿತರಾದ ಡಾ. ಸತೀಶ ಪಾಟೀಲ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗ ತಜ್ಞರ ತಂಡವು ವಿಶೇಷ ಆಸನಗಳನ್ನು ಪ್ರದರ್ಶಿಸಿದರು. ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಡಾ. ನಿರಂಜನ್ ಕುಮಾರ ಅವರು ಯೋಗ ತಜ್ಞರ ತಂಡವನ್ನು ಶ್ಲಾಘಿಸಿ, ಸನ್ಮಾನಿಸಿದರು. ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯ್ಕ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಕೃತಿಕಾ ಗುತ್ತಲ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಿರಣ ಕುಮಾರ ಅವರು ವಂದನಾರ್ಪಣೆ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Article Image

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

ಉಜಿರೆ: ದೈಹಿಕ ಹಾಗೂ ಮಾನಸಿಕ ಸಮತೋಲನದೊಂದಿಗೆ ಆರೋಗ್ಯಭಾಗ್ಯ ಕಾಪಾಡಲು ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಯೋಗಾಭ್ಯಾಸಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಹತ್ತನೆ ವಿಶ್ವ ಯೋಗ ದಿನ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಕ್ಕೆ ವಿದೇಶಗಳಿಂದ ಔಷಧಿ ಆಮದು ಮಾಡುತ್ತೇವೆ. ವಿದೇಶಗಳಿಗೆ ಭಾರತದಿಂದ ಔಷಧಿ ರಹಿತ ಯೋಗವನ್ನು ರಫ್ತು ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ಜಾಗತಿಕಮಟ್ಟದಲ್ಲಿ ಯೋಗದ ಮಹತ್ವ ಪ್ರಚಾರವಾಗಿದ್ದು ಎಲ್ಲರೂ ಆಸಕ್ತಿ ಮತ್ತು ಕುತೂಹಲದಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ತಾತ್ವಿಕ ನೆಲೆಯಲ್ಲಿ ಭಾರತ ವಿಶ್ವಗುರುವಿನ ಮಾನ್ಯತೆ ಹೊಂದಿದೆ. ಧರ್ಮಸ್ಥಳದ ಶಾಂತಿವನಟ್ರಸ್ಟ್ ನೇತೃತ್ವದಲ್ಲಿ ಧರ್ಮಸ್ಥಳ, ಮಣಿಪಾಲದ ಬಳಿ ಪರೀಕ್ಷಾ ಮತ್ತು ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿ ಆರೋಗ್ಯಭಾಗ್ಯ ರಕ್ಷಣೆಗೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಹೆಗ್ಗಡೆಯವರು ಅಭಿನಂದಿಸಿದರು. ಬೆಂಗಳೂರಿನ ಪರಿಮಳ ಆರೋಗ್ಯ ಸೇವಾಕೇಂದ್ರದ ಡಾ. ಜೋಸ್ ಎಬ್‌ನಜೀರ್ ಮತ್ತು ತುಮಕೂರಿನ ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ ಶುಭಾಶಂಸನೆ ಮಾಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗವಿಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಯೋಗಪ್ರಚಾರದಲ್ಲಿ ವಿಶೇಷ ಸೇವೆ-ಸಾಧನೆ ಮಾಡಿದ ಮೈಸೂರಿನ ಕುಮಾರಿ ಖುಷಿ, ಎಚ್. ಅವರಿಗೆ “ಯೋಗರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಮಾರಿ ಖುಷಿ ಎಚ್. ಯೋಗ ಪ್ರಾತ್ಯಕ್ಷಿಕೆ ನೀಡಿದರು. ಯೋಗ ಸಾಧಕರಾದ ಅಶ್ವತ್ ಹೆಗಡೆ ಮತ್ತು ಡಾ. ಅಚ್ಯುತ ಈಶ್ವರನ್ ಅವರನ್ನು ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಸುಧಾಕರ ಕೊಟ್ಟಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಡಾ. ಶಶಿಕಾಂತ್ ಜೈನ್ ಮತ್ತು ಡಾ. ಸುಜಾತ ಉಪಸ್ಥಿತರಿದ್ದರು. ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಕುಮಾರಿ ಅನನ್ಯಾ ಜೈನ್ ಮತ್ತು ಡಾ. ಕೃತಿಕಾ ರಾಮಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

Article Image

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಮಿಜಾರು ಶೋಭಾವನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿಯ ಯೋಗ ದಿನಾಚರಣೆ ಧ್ಯೇಯ-“ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಅಡಿಯಲ್ಲಿ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಯೋಗ ಪ್ರೋಟೋಕಾಲ್ ನಿಯಮಾವಳಿ ಅನುಸಾರವಾಗಿ ತಾಡಾಸನ, ವೃಕ್ಷಸಾನ, ತ್ರಿಕೋನಾಸನ, ಅರ್ಧಚಕ್ರಾಸನ, ಇನ್ನಿತರ ಆಸನ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ವಿದ್ಯಾರ್ಥಿ ಸ್ಫೂರ್ತಿ ಮೊಯ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಪ್ರಯುಕ್ತ ಪೋಸ್ಟರ್ ತಯಾರಿಕೆ, ವಿಡೀಯೋ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಯೋಗ ವಿಭಾಗದ ಡೀನ್ ಡಾ. ಅರ್ಚನಾ ಇದ್ದರು. ವಿಭಾಗದ ವಿದ್ಯಾರ್ಥಿಗಳು ನೆರೆಹೊರೆಯ ಶಾಲಾ-ಕಾಲೇಜುಗಳಲ್ಲಿ ಕಳೆದ 10 ದಿನಗಳು ಯೋಗ ತರಬೇತಿಯನ್ನು ಉಚಿತವಾಗಿ ನಡೆಸಿಕೊಟ್ಟರು. ಪುರಭವನ: ಆಳ್ವಾಸ್ ಶಿಕ್ಷಣ ಸಂಸ್ಥೆಯ 50 ವಿದ್ಯಾರ್ಥಿಗಳು ಜಿಲ್ಲಾ ಆಯುಷ್ ವಿಭಾಗವು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

Article Image

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

ಪ್ರತಿಯೊಬ್ಬರಲ್ಲಿಯೂ ತಮ್ಮದೇ ಪ್ರತಿಭೆಗಳಿರುತ್ತದೆ. ನಿಮಗೆ ಸಿಗುವ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ. ಕೌಶಲ್ಯಕ್ಕೆ ಪ್ರತಿಭೆಗೆ ಯಾವುದೇ ಮಿತಿಯಿಲ್ಲ. ಕಳೆದುಕೊಂಡ ಅವಕಾಶಗಳು ಮತ್ತೊಮ್ಮೆ ಸಿಗುವುದಿಲ್ಲ. ನಿಮ್ಮೊಳಗಿರುವ ಕೌಶಲ್ಯವನ್ನು ಗುರುತಿಸಿಕೊಳ್ಳಿ. ಸಮಾಜವನ್ನು ಬದಲಾಯಿಸುವ ಶಕ್ತಿ ವಿದ್ಯೆಗಿದೆ. ಯುಪಿಎಸ್‌ಸಿ, ಐಎಎಸ್, ಐಪಿಎಸ್ ನಂತಹ ಕನಸುಗಳನ್ನು ನೀವು ಕಾಣಬೇಕು. ನಿಮಗೆ ಕಲಿಸಿದ ಗುರುಗಳು ಎದ್ದು ನಿಂತು ನಿಮಗೆ ಗೌರವ ಕೊಡುವಂತಹ ರೀತಿಯಲ್ಲಿ ಸಾಧನೆಯನ್ನು ಮಾಡಬೇಕು. ಜೀವನದಲ್ಲಿ ಯಾವತ್ತಿಗೂ ನಿರಾಶರಾಗಬೇಡಿ ಬದುಕು ನಿರಂತರವಾಗಿ ಸಾಗುವ ನದಿ ಇದ್ದ ಹಾಗೆ. ಜೀವನದಲ್ಲಿ ಸತತ ಪ್ರಯತ್ನ, ಅಭ್ಯಾಸ, ಭರವಸೆಯೊಂದಿದ್ದರೆ ಒಂದಲ್ಲಾ ಒಂದು ದಿವಸ ನೀವು ಸಾಧಕರಾಗಿ ಗುರುತಿಸಿಕೊಳ್ಳುತ್ತೀರಿ ಆದ್ದರಿಂದ ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇರಲಿ ಎಂದು ಖ್ಯಾತ Daijiworld 24x7 Media Network ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಇವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಪ್ರತಿಭೆ ದೇವರು ನೀಡಿರುವ ಕೊಡುಗೆ. ನಿಮ್ಮಲ್ಲಿ ನಿಮಗೆ ಭರವಸೆ ಇರುವವರೆಗೆ ನಿಮಗೆ ಯಾವತ್ತೂ ಸೋಲಾಗುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನಾವರಣಗೊಳಿಸಿ ಎಂದು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಹೇಳಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಓದಿ ರ‍್ಯಾಂಕ್ ಪಡೆಯುವುದಲ್ಲ ಅದು ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಮಗುವನ್ನು ಅತ್ಯುತ್ತಮ ಮಾನವನನ್ನಾಗಿಸುವ ಶಕ್ತಿ ಶಾಲೆಗಿದೆ. ರ‍್ಯಾಂಕ್ ಪಡೆಯುವ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಸಾಧಕರೆನಿಸಿಕೊಂಡಿರುವವರೆಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ನಿಮಗೆ ಮಾದರಿಯಾಗಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿ ಮೂಡುಬಿದಿರೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರುಪಾಕ್ಷಪ್ಪ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಜೀವನವನ್ನು ಬದಲಾಯಿಸುವ ಶಕ್ತಿ ಕಲೆಗಿದೆ. ಕಲೆ ಮನುಷ್ಯನ್ನು ಯಾವತ್ತೂ ಕೈ ಬಿಡುವುದಿಲ್ಲ ಜೀವನದಲ್ಲಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಮುಖ್ಯವಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ. ಓದಿನ ಜೊತೆಗೆ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿತುಕೊಳ್ಳಿ ನಮ್ಮಲ್ಲಿ ಏನು ಇಲ್ಲ ಎಂದು ಬೇಸರದ ಬದುಕನ್ನು ಬದುಕಬೇಡಿ. ನಿಮ್ಮಲ್ಲಿರುವ ಆಸಕ್ತಿ ಕ್ಷೇತ್ರದಲ್ಲಿ ಅಭ್ಯಾಸ ಮುಂದುವರೆಸಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ. ಸಮಾಜದಲ್ಲಿ ನಿಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶಗಳು ಸಿಗುತ್ತಲೇ ಇರುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ತರಬೇತುದಾರರಾದ ರಶ್ಮಿತಾ-ಭರತನಾಟ್ಯ, ಸರ್ಪಾಜ್-ಕರಾಟೆ, ಸೌಂದರ್ಯ-ಚೆಸ್, ರೂಪೇಶ್ ಕುಮಾರ್-ನೃತ್ಯ, ಪೂರ್ಣಿಮಾ ಗೋರೆ-ಸಂಗೀತ, ಮಹವೀರ ಪಾಂಡಿ-ಯಕ್ಷಗಾನ, ಚಂದ್ರಶೇಖರ ಆಚಾರ್ಯ-ಚೆಂಡೆ, ಗೌರಿಪ್ರಸಾದ್-ತಬಲ, ಬಾಸ್ಕರ್ ನೆಲ್ಯಾಡಿ-ಚಿತ್ರಕಲೆ, ಚೇತನ ಶೆಟ್ಟಿ- ಕ್ರಾಪ್ಟ್ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಸಂಪತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಿರು ವಯಸ್ಸಿನಲ್ಲಿಯೇ ಸರ್ವಕಲಾ ಪ್ರಕಾರಗಳಲ್ಲಿ ಸಾಧನೆಗೈದ ಬೆಳುವಾಯಿಯ ಶುಭಾಂಜನ ಭಟ್ ಇವರನ್ನು ಗೌರವಿಸಿ ಸಂಮಾನಿಸಲಾಯಿತು. ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆಯ ವಿದ್ಯಾರ್ಥಿ ಸುಮಿತ್ ಹಾಗೂ ಕರಾಟೆ ತರಬೇತುದಾರರಾದ ಸರ್ಫಾಜ್ ಇವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾನಿಧ್ಯಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು, ಸಂಜಲ ನಿರೂಪಿಸಿದರು, ರಶ್ಮಿತಾ ಸ್ವಾಗತಿಸಿದರು, ಭುವನ ವಂದಿಸಿದರು.

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

Article Image

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸ

ಭಾಷಾ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದಾಗ ಇಂಗ್ಲಿಷ್ ಅಧ್ಯಯನ ಸುಲಲಿತವಾಗುತ್ತದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಎ.ವಿ ಹಾಲ್‌ನಲ್ಲಿ ಇತೀಚೆಗೆ ನಡೆದ ಭಾಷಾಶಾಸ್ತ್ರ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ತಜ್ಞ ಅಧ್ಯಾಪಕರ ಕೊರತೆ ಇದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ, ಆದರೆ ಇದು ಸತ್ಯಕ್ಕೆ ದೂರವಾದ ಮಾತು. ವಿದ್ಯಾರ್ಥಿಗಳು ಜ್ಞಾನದ ಅನ್ವೇಷಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡರೆ, ಅಧ್ಯಾಪಕರೊಂದಿಗೆ ಚರ್ಚಿಸಿದರೆ, ಅಧ್ಯಾಪಕರು ಜ್ಞಾನವನ್ನು ವೃದ್ಧಿಸಿಕೊಳ್ಳಲು ಹೆಚ್ಚು ಶ್ರಮವನ್ನು ವಹಿಸುತ್ತಾರೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ. ಟಿ. ಕೆ. ರವಿಚಂದ್ರನ್ ಸ್ವಾಗತಿಸಿ, ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಪವಿತ್ರ ತೇಜ್ ನಿರೂಪಿಸಿ, ವಂದಿಸಿದರು.

ಸತ್ತೂರು, ಧಾರವಾಡ: ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ದಿನಾಚರಣೆ

Article Image

ಸತ್ತೂರು, ಧಾರವಾಡ: ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ದಿನಾಚರಣೆ

ಎಸ್.ಡಿಎಂ. ದಂತ ಮಹಾವಿದ್ಯಾಲಯದ, ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ಜೂನ್ 19ರಂದು ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ಚಿಕಿತ್ಸಾ ದಿನವನ್ನು ಆಚರಿಸಲಾಯಿತು. ಈ ವಿಭಾಗವು ಧಾರವಾಡದ ಸುತ್ತಮುತ್ತಲಿನ 17 ತಾಲೂಕುಗಳಲ್ಲಿ ಸಂಚಾರಿ ಚಿಕಿತ್ಸಾಲಯದ ಮೂಲಕ ಬಾಯಿಯ ಆರೋಗ್ಯದ ಕುರಿತು ದೂರದ ಹಳ್ಳಿಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಇತ್ತೀಚಿಗೆ 75 ಶಿಬಿರಗಳಲ್ಲಿ, 12,000ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಶಶಿ ಪಾಟೀಲ್ ಮುಖ್ಯ ಅತಿಥಿಗಳಾಗಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತಿತರ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರವಾಡ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯವರಾದ ಡಾ. ಶಶಿ ಪಾಟೀಲ್ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಮತ್ತು ದಂತ ಮಹಾವಿದ್ಯಾಲಯವು ಯಾವಾಗಲೂ ಸಮುದಾಯದ ಆರೋಗ್ಯ ಸುಧಾರಣೆಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಎಸ್.ಡಿ.ಎಂ. ನ ಶಿಬಿರಗಳು ಮತ್ತು ಸಂಚಾರಿ ಆಸ್ಪತ್ರೆಯು ಸಹಕಾರಿಯಾಗಿದೆ. ಆರೋಗ್ಯದ ಮಹತ್ವದ ಬಗ್ಗೆ ಸಮುದಾಯಕ್ಕೆ ತಿಳಿಸಲು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದರು. ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಕಾರ್ಯಗಾರವನ್ನು ನಡೆಸುತ್ತಿರುವ ಸಾಮೂಹಿಕ ದಂತ ಚಿಕಿತ್ಸಾ ವಿಭಾಗಕ್ಕೆ ಉಪಕುಲಪತಿಗಳಾದ ಡಾ. ನಿರಂಜನ ಕುಮಾರ್ ಅಭಿನಂದಿಸುತ್ತಾ, ಸಮತೋಲನ ಆಹಾರದ ಮೇಲೆ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಆಶಾ ಕಾರ್ಯಕರ್ತೆಯರು ವಿಶೇಷವಾಗಿ ಅವರ ಆರೋಗ್ಯದ ಉನ್ನತಿಗಾಗಿ ಗಮನಹರಿಸುತ್ತಾರೆ. ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ತಂಬಾಕು ಸೇವನೆಯಿಂದ ಆಗುವ ಸಮಸ್ಯೆಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು ಎಂದರು. ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ನಡೆಸಿದ ವಿವಿಧ ಆರೋಗ್ಯ ಶಿಬಿರಗಳ ವರದಿಯನ್ನು ಡಾ. ಶೋದನ್ ಮಂಡಿಸಿದರು. ಡಾ. ಹೇಮಾ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಸಾಮೂಹಿಕ ದಂತ ಚಿಕಿತ್ಸಾ ವಿಭಾಗವು ಜಿಲ್ಲಾ ಆರೋಗ್ಯ ಕಛೇರಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ರೋಟರಿ ಕ್ಲಬ್ ಮತ್ತು SKDRDP ಸಹಯೋಗದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ದಿನದ ಅಂಗವಾಗಿ ಎಸ್.ಡಿ.ಎಂ. ದಂತ ಮಹಾವಿದ್ಯಾಲಯವು ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನದ ಹಲವಾರು ಶಾಲಾ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ವಿಭಾಗದ ಮುಖ್ಯಸ್ಥರಾದ ಡಾ. ರವಿ ಶಿರಹಟ್ಟಿ ಅತಿಥಿಯವರನ್ನು ಸ್ವಾಗತಿಸಿದರು. ಡಾ. ಅಕ್ಷತಾ ಅಗ್ನಿಹೋತ್ರಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಪ್ರೀತಾ ಶೆಟ್ಟಿ ವಂದಿಸಿದರು. ಡಾ. ಜೆಬಾ ಶೇಖ್ ಕಾರ್ಯಕ್ರಮವನ್ನು ನಿರೂಪಿಸಿದರು.

ಬೃಹತ್ ರಕ್ತದಾನ ಶಿಬಿರ

Article Image

ಬೃಹತ್ ರಕ್ತದಾನ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಹಳೆ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ. ಐ.ಟಿ.ಐ. ವೇಣೂರು, ಗ್ರಾಮ ಪಂಚಾಯತ್ ಕುಕ್ಕೇಡಿ, ಪದ್ಮಾಂಬ ಸಮೂಹ ಸಂಸ್ಥೆಗಳು ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ (ರಿ.) ಕುಕ್ಕೇಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ವೇಣೂರು, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರು, ಫಲ್ಗುಣಿ ಸೇವಾ ಸಂಘ (ರಿ.) ವೇಣೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ (ರಿ.) ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಕ್ಕೇಡಿ-ನಿಟ್ಟಡೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ರಕ್ತದಾನದ ಬೃಹತ್ ಶಿಬಿರವು ವೇಣೂರಿನ ಎಸ್.ಡಿ.ಎಂ ಐಟಿಐ ನಲ್ಲಿ ನಾಳೆ(ಜೂ. 21) ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

Article Image

ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ‍್ಯಕ್ರಮ

ಮೂಡುಬಿದಿರೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತ, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ವಿದ್ಯಾಗಿರಿಯಲ್ಲಿ ಅಭಿನಂದಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಗೌರವಾಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ನಮ್ಮ ದೇಶದಲ್ಲಿ ಪರಿಚಿತ ಆಟವಾಗಿ, ಆದರೆ ಈ ಭಾಗದಲ್ಲಿ ಅಷ್ಟೊಂದು ಖ್ಯಾತಿಗೆ ಬಾರದ ಕ್ರೀಡೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್, ಕಳೆದ ಐದು ವರ್ಷಗಳ ಸತತ ಪರಿಶ್ರಮದಿಂದಾಗಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಇವುಗಳ ನಡವಿನ ಸಮತೋಲಿತ ನಡಿಗೆ ಎರಡು ಕ್ಷೇತ್ರದಲ್ಲಿ ಉನ್ನತಿ ಹೊಂದಲು ಸಹಕಾರಿ. ಆದರೆ ಕ್ರೀಡೆಯ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸುವುದು ಸಾಧುವಲ್ಲ ಎಂದರು. ಆರೋಗ್ಯ, ಮನೋನಿಶ್ಚಯ, ಕ್ರೀಡಾ ಮನೋಭಾವ ಹಾಗೂ ಸೌಹಾರ್ದತೆಯಂತಹ ಗುಣಗಳು ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿ ಕರಗತವಾಗುತ್ತದೆ ಎಂದರು. ಆಳ್ವಾಸ್ ಸಂಸ್ಥೆ, ಈ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್‌ನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಮ್ಮ ಸಂಘದ ಪರಿಶ್ರಮದಿಂದಾಗಿ ಇಂದು ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿ ಹಂತದಲ್ಲೂ ಕಠಿಣ ಸವಾಲನ್ನು ಮೀರಿ ವಿದ್ಯಾರ್ಥಿಗಳು ಜಯಶಾಲಿಗಳಾಗಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ಏಕೈಕ ತಂಡ ನಮ್ಮದು. ಮುಂದಿನ ಆಗಸ್ಟ್ ನಲ್ಲಿ ಹಂಗೇರಿಯ ಬುಡಾಪೇಸ್ಟಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಿಕ್ ಚಾಂಪಿಯನ್‌ಶಿಫ್‌ನಲ್ಲಿ ಭಾಗವಹಿಸಲು ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪದಕ ವಿಜೇತರ ವಿವರ: ಮೇ 21ರಿಂದ 27ರವರೆಗೆ ಪುಣೆಯಲ್ಲಿ ನಡೆದ ಚಿಲ್ಡನ್ಸ್ ಮತ್ತು ಕೆಡೆಟ್ ಹಾಗೂ ಜೂನ್ 10 ರಿಂದ 14ರ ವರೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಜಿಲ್ಲೆಯ ಕ್ರೀಡಾಪಟುಗಳು 8 ಚಿನ್ನದ ಪದಕ, 7 ಬೆಳ್ಳಿಯ ಪದಕ ಮತ್ತು 13 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಅನ್ಶಿ ಎನ್. ಎಮ್. ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 10 ರಿಂದ 13ರವರೆಗೆ ಬಾಗಲಕೋಟೆಯಲ್ಲಿ ನಡೆದ ಸೌತ್ ಝೋನ್ ಖೇಲೋ ಇಂಡಿಯಾ ವುಶು ವುಮೆನ್ಸನ ಲೀಗ್ ನಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್‌ನ ವಿದ್ಯಾರ್ಥಿಗಳು 1 ಚಿನ್ನದ ಪದಕ ಮತ್ತು 6 ಕಂಚಿನ ಪದಕಗಳನ್ನು ಪಡೆದು ಮುಂಬರುವ ರಾಷ್ಟ್ರೀಯ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾರ‍್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ನಿತಿನ್ ಸುವರ್ಣ ಮತ್ತು ಶಿಕ್ಷಕ ಸಂಪತ್ ಕುಮಾರ್ ಇದ್ದರು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಇ.ಎನ್.ಟಿ ಶಿಬಿರದಲ್ಲಿ 143 ಮಂದಿ ಭಾಗಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಇ.ಎನ್.ಟಿ ಶಿಬಿರದಲ್ಲಿ 143 ಮಂದಿ ಭಾಗಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರ ನಡೆಯುತ್ತಿದ್ದು, ದಿನಾಂಕ ಜೂ. 16 ರಂದು ‘ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ’ ನಡೆಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಇವರು ಶಿಬಿರ ಉದ್ಘಾಟಿಸಿ ಮಾತನಾಡಿ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ತಿಂಗಳಿಗೆ ಮೂರು ಅಥವಾ ನಾಲ್ಕು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ. ಪೂಜ್ಯ ಹೆಗ್ಗಡೆಯವರ ನಿರ್ದೇಶನದಂತೆ ತಿಂಗಳಿಗೆ 2 ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗುತ್ತದೆ. ಕನಿಷ್ಟ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು ಕೂಡ ಇಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾದ ಜನತೆಗೆ ಅವರು ಇರುವ ಜಾಗದಲ್ಲಿಯೇ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ದೊರಕಿಸಿ ಕೊಡುವುದು ನಮ್ಮ ಗುರಿಯಾಗಿದೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡುತ್ತಾ, ಈ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಇ.ಎನ್.ಟಿ ಸಂಬಂಧಿಸಿದ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಕೂಡ ಇಲ್ಲಿ ನಡೆಸಲಾಗಿದೆ ಎಂದರು. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10%, ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 143 ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡು ಸಂತೋಷ ವ್ಯಕ್ತಪಡಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

Article Image

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

ಮೂಡುಬಿದಿರೆ: ಶಿಸ್ತು, ಸಮಯಪ್ರಜ್ಞೆ, ಸೃಜನಶೀಲತೆ, ಕ್ರೀಡಾಮನೋಭಾವ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಅಪಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ ಮೋಹನ ಆಳ್ವ ಹೇಳಿದರು. ನಗರದ ಸ್ವರಾಜ್ ಮೈದಾನದ ಸ್ಕೌಟ್ಸ್ - ಗೈಡ್ಸ್ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಸಹಯೋಗದಲ್ಲಿ ನಡೆದ 2023-24 ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವುದು ಅಭಿನಂದನಾರ್ಹ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ, ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡಲಾಗದ ಶೈಕ್ಷಣಿಕ ಕಾರ್ಯವನ್ನು ಮೋಹನ ಆಳ್ವರು ಮಾಡುತ್ತಿದ್ದಾರೆ ಎಂದರು. ಶೈಕ್ಷಣಿಕ ಕಾರ್ಯದ ಜೊತೆಯಲ್ಲಿ ಅಂತರಾಷ್ಟ್ರೀಯ ಜಾಂಬೂರಿ ಆಯೋಜಿಸಿದ್ದ ಕುರಿತು ನೆನೆದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳು ಬಹಳಷ್ಟಿದ್ದಾರೆ ಆದರೆ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ರ‍್ಯಾಂಕ್ ಗಳಿಸಿರುವುದು ಅಭಿನಂದನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ವಿರೂಪಾಕ್ಷ ಮಾತನಾಡಿ ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಿಸಿಕೊಂಡಾಗ ಸರ್ವತೋಮುಖ ಕಲಿಕೆ ಸಾಧ್ಯ ಎಂದರು. ಉತ್ತಮ ಶಿಸ್ತುಬದ್ಧ ಜೀವನ ರೂಪಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕರಿಸುತ್ತಿದೆ ಎಂದರು. ಆತ್ಮ ವಿಶ್ವಾಸದ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಈ ಶಿಕ್ಷಣ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ದಕ್ಷಿಣ ಕನ್ನಡ, ಕಾರವಾರ, ಉಡುಪಿ, ಶಿರಸಿ, ಕೊಡಗು ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್ ವಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಶ್ರೀಪತಿ ಭಟ್, ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಜ್ಯೋತಿ ಜೆ. ಪೈ. ಜಿಲ್ಲಾ ಗೈಡ್ ಆಯುಕ್ತೆ ಉಡುಪಿ ಜಿಲ್ಲೆ, ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಚಂದ್ರಶೇಖರ್ ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತರು, ಶಿರಸಿ ಜಿಲ್ಲೆ, ಸಾವಿತ್ರಿ ಮನೋಹರ್, ALT, ಉಡುಪಿ ಜಿಲ್ಲೆ, ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್ ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ. ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ಘೋಷಿಸಿದರು, ಕಾರ್ಯಕ್ರಮವನ್ನು ನವೀನ್ ಚಂದ್ರ ಅಂಬೂರಿ ನಿರೂಪಿಸಿ, ವಸಂತ್ ದೇವಾಡಿಗ ಸ್ವಾಗತಿಸಿದರು.

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

Article Image

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

ಮೂಡುಬಿದಿರೆ: ಕಾಲೇಜು ಮಟ್ಟದಲ್ಲಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡಿದರೆ ಮಾತ್ರ ದೇಶದಲ್ಲಿ ಕ್ರೀಡೆ ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಇಲ್ಲಿರುವ ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅವರು ಮಾತನಾಡಿದರು. ಕ್ರೀಡೆಯನ್ನು ಬೆಳೆಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡುಗೆ ಅಪಾರ. ಸರ್ಕಾರದ ನೆರವಿಲ್ಲದೆಯೂ ಆಳ್ವಾಸ್ ಸಂಸ್ಥೆ ಕ್ರೀಡಾಪಟುಗಳ ಬೆಳವಣಿಗೆಗೆ ಶ್ರಮ ಪಡುತ್ತಿದೆ. ಈ ಮಾದರಿ ದೇಶದಲ್ಲೇ ಮೊದಲು ಎಂದರು. ಮುಂದಿನ ದಿನಗಳಲ್ಲಿ ನಮ್ಮ ಫೆಡರೇಶನ್ ಕಪ್ ಅನ್ನು ಆಳ್ವಾಸ್‌ನಲ್ಲೆ ನಡೆಸಲಾಗುವುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ದೇಶಿಯ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷ ಉಂಟುಮಾಡಿದೆ. ಆಳ್ವಾಸ್ ಸಂಸ್ಥೆಯೂ ಕ್ರೀಡೆಯ ಪೋಷಣೆ ಹಾಗೂ ಬೆಳವಣಿಗೆಗೆ ಮಹತ್ವವನ್ನು ನೀಡುತ್ತದೆ. ಇದರ ಫಲವಾಗಿ ನಮ್ಮ ಸಂಸ್ಥೆಯಿಂದ 7 ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು ಎಂದರು. ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿ ಹಾಗೂ ಖೇಲೊ ಇಂಡಿಯಾ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ ಆಳ್ವಾಸ್ ವಿದ್ಯಾರ್ಥಿ ಜಿತಿನ್ ನಾಯ್ಕ್, ಪ್ರೊ ಕಬಡ್ಡಿ ಆಟಗಾರರಾದ ರಂಜಿತ್ ನಾಯ್ಕ್ ಹಾಗೂ ಶಶಾಂಕ್ ಬಿ. ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪುರುಷೋತ್ತಮ್ ಪೂಜಾರಿ ಹಾಗೂ ರೋಹಿತ್ ತೊಕ್ಕೊಟ್ಟು ಇದ್ದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾರ್ ವಂದಿಸಿ, ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು. ಈ ಟೂರ್ನಿಯಲ್ಲಿ ಒಟ್ಟು 64 ಪುರುಷರ ಹಾಗೂ 19 ಮಹಿಳಾ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಜೂನ್ 20ರಂದು ಅಂತಿಮ ಹಣಾಹಣಿ ಪಂದ್ಯಗಳು ಹಾಗೂ ಸಮಾರೋಪ ನಡೆಯಲಿದೆ.

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

Article Image

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ “ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು” ಕುರಿತು ಸಂವಾದ ಕಾರ್ಯಕ್ರಮ

ಮೂಡುಬಿದಿರೆ: “ವೈದ್ಯಕೀಯ ಬಹಳ ಪವಿತ್ರವಾದ ವೃತ್ತಿ. ಆ ವೃತ್ತಿಯ ಎಲ್ಲಾ ತ್ಯಾಗ ಮತ್ತು ಸವಾಲುಗಳ ನಡುವೆಯೂ ಅದು ಬಹಳ ಸಂತೃಪ್ತಿಯನ್ನು ನೀಡುವ ವೃತ್ತಿ. ಈ ನಿಟ್ಟಿನಲ್ಲಿ ನಾನು ಜಗತ್ತಿನ ಅತ್ಯಂತ ಉತ್ತಮ ವೃತ್ತಿಯಲ್ಲಿದ್ದೇನೆ” ಎಂದು ಬೆಂಗಳೂರಿನ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕುಲರ್ ಸಾಯನ್ಸಸ್ ಎಂಡ್ ರಿಸರ್ಚ್ ನ ಸಹಾಯಕ ಪ್ರಾಧ್ಯಾಪಕ ಡಾ. ಪಾರಿತೋಶ್ ಬಲ್ಲಾಳ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಿದ, “ನೀಟ್ ಪರೀಕ್ಷೆಯ ಯಶಸ್ಸಿನ ಸೂತ್ರ” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ವೈದ್ಯನಾಗಲು ಪಡಬೇಕಾದ ತ್ಯಾಗ, ಶ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಹೃದಯ ತಜ್ಞನಾಗಲು ಹದಿಮೂರು ವರ್ಷ ಬೇಕಾಗುತ್ತದೆ ಎಂದರು. “ಈ ಎರಡು ವರ್ಷಗಳಲ್ಲಿ ನೀವು ಎದುರಿಸುವ ಕಷ್ಟಗಳು ನಿಮ್ಮ ಭವಿಷ್ಯತ್ತಿಗೆ ನಿಮ್ಮನ್ನು ತಯಾರಿಸುತ್ತದೆ. ದೊಡ್ಡ ಕನಸನ್ನು ಕಾಣಲು ಹಿಂಜರಿಯಬೇಡಿ. ಪ್ರಥಮ ಪದವಿಪೂರ್ವದಲ್ಲಿ ನಾನು ಕಡಿಮೆ ಅಂಕಗಳನ್ನು ಗಳಿಸಿದ್ದೆ. ಆಗ ನನ್ನ ಪ್ರಾಂಶುಪಾಲರ ಮಾರ್ಗದರ್ಶನದಿಂದ ಆದ್ಯತೆಗಳಿಗನುಗುಣವಾಗಿ ನನ್ನ ಚಟುವಟಿಗಳನ್ನು ಆಯ್ದುಕೊಂಡು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ನಿಮ್ಮ ಪ್ರಸ್ತುತ ಪರಿಸ್ಥಿತಿ ಹೇಗೆಯೇ ಇದ್ದರೂ ಉತ್ಕ್ರಷ್ಟವಾದುದನ್ನು ಸಾಧಿಸಲು ಸಾಧ್ಯ. ನಿಮ್ಮ ಕಲಿಕೆಯ ಶೈಲಿಯನ್ನು ಅರಿತುಕೊಳ್ಳಿ, ಉತ್ತಮ ನೆನಪಿಗಾಗಿ ನೀವು ಗಳಿಸಿದ ಜ್ಞಾನವನ್ನು ನಿಮ್ಮ ಪರಿಸರದ ಜೊತೆ ಹೊಂದಿಸಿ, ಅದರ ಜೊತೆಗೆ ವ್ಯಾಯಾಮವನ್ನು ಮಾಡಿ, ನಿಮ್ಮ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ, ನಿಮ್ಮ ಗುರಿಯನ್ನು ದೃಶ್ಯೀಕರಿಸಿ, ಅನೇಕ ಪುನರಾವರ್ತನೆಗಳನ್ನು ಮಾಡಿ” ಎಂದರು. ಹೀಗೆ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಡಾ ಪಾರಿತೋಶ್ ಬಲ್ಲಾಳರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರಿಯನ್ನು ತಲುಪಲು ಅವರು ನೀಡಿದ ಸಲಹೆಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನೋಲಿಯ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

Article Image

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾಗಿರಿಯ ಜಗಜ್ಯೋತಿ ಬಸವೇಶ್ವರ ವೃತ್ತದ, ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಕಾಲೇಜು ಸಂಕೀರ್ಣ ಹಾಗೂ ವಿದ್ಯಾರ್ಥಿನಿ ವಸತಿ ನಿಲಯದ ಉದ್ಘಾಟನಾ ಸಮಾರಂಭ ಜೂ. 17ರಂದು ನಡೆಯಿತು. ನೂತನ ಕಾಲೇಜು ಸಂಕೀರ್ಣ-‘ಜಗನ್ಮೋಹನ’ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಉದ್ಯಮಿ ಕೆ. ಶ್ರೀಪತಿ ಭಟ್ ನೆರವೇರಿಸಿದರು. ಡಾ. ಎಂ. ಮೋಹನ ಆಳ್ವರ ಧರ್ಮಪತ್ನಿ ದಿ.ಶೋಭಾ ಆಳ್ವರ ನೆನಪಿಗಾಗಿ ನೂತನ ವಸತಿ ನಿಲಯಕ್ಕೆ ‘ಶೋಭಾಯಮಾನ’ ಎಂದು ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ್ ಶೆಟ್ಟಿ ನೇರವೇರಿಸಿದರು. ‘ಜಗನ್ಮೋಹನ’ದ ವಿಶೇಷತೆಗಳು: ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ನೂತನ ಕಾಲೇಜು ಕಟ್ಟಡ -‘ಜಗನ್ಮೋಹನ’ದಲ್ಲಿ 68 ತರಗತಿ ಕೊಠಡಿಗಳಿದ್ದು, 3 ಭೌತಶಾಸ್ತ್ರದ ಲ್ಯಾಬ್, 3 ರಸಾಯಶಾಸ್ತ್ರದ ಲ್ಯಾಬ್ ಹಾಗೂ 2 ಜೀವಶಾಸ್ತ್ರದ ಲ್ಯಾಬ್ ಹಾಗೂ ಒಂದು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ವಿಶಾಲವಾದ ಸ್ಟಡಿಹಾಲ್‌ನ್ನು ಹೊಂದಿರುವ ಈ ಕಟ್ಟಡ, ಪ್ರತಿಧ್ವನಿ ಮುಕ್ತ ವ್ಯವಸ್ಥೆಯನ್ನು ಹೊಂದಿದೆ. ಪ್ರಶಾಂತ ಪರಿಸರದ ನಡುವೆ, ವಿಶಾಲವಾದ ಹೂದೋಟ, ಸುಂದರವಾದ ವಾಕಿಂಗ್ ಟ್ರ್ಯಾಕ್, ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯಿಂದ ನಿರ್ಮಿಸಿದ ಭಗವಾನ್ ಮಹಾವೀರರ ಮೂರ್ತಿ ಮನಸ್ಸಿಗೆ ಆಹ್ಲಾದಕರ ವಾತವರಣವನ್ನು ಒದಗಿಸುತ್ತದೆ. ಶೋಭಾಯಮಾನ ವಸತಿ ನಿಲಯ: ಶೋಭಾಯಮಾನ ವಸತಿ ನಿಲಯವು ಆಧುನಿಕ ಕಾಲದ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ವಸತಿ ಗೃಹವಾಗಿದೆ. 600 ವಿದ್ಯಾರ್ಥಿನಿಯರಿಗೆ ವಸತಿಯನ್ನು ಒದಗಿಸಬಲ್ಲ ಈ ಹಾಸ್ಟೆಲ್, ಎಲ್‌ ಆಕಾರದಲ್ಲಿ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕನುಗುಣವಾಗಿ ಹಾಸ್ಟೆಲ್‌ನ ರೂಮ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತೀ ರೂಮ್ ಅಟ್ಯಾಚೆಡ್ ಬಾತ್‌ರೂಮ್ ವ್ಯವಸ್ಥೆಯನ್ನು ಒಳಗೊಂಡಿದೆ. ಎರಡು ಅತ್ಯಾಕರ್ಷಕ ಡೈನಿಂಗ್ ಹಾಲ್‌ಗಳಿದ್ದು, ಒಂದೇ ಕಿಚನ್‌ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲೂ ವಿಶಾಲವಾದ ಸ್ಟಡಿ ಹಾಲ್‌ನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸದಾ ಕಾಲ ಈ ವ್ಯವಸ್ಥೆಯನ್ನು ಉಪಯೋಗಿಬಹುದಾಗಿದೆ. 24 ಗಂಟೆಗಳ ಸಿಸಿಟಿವಿ ಕಣ್ಗಾವಲಿರುವ ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ವೈದ್ಯಕೀಯ ತಂಡ, ಆಪ್ತ ಸಲಹೆಗಾರರು, ವಾರ್ಡನ್‌ಗಳು ಸದಾ ಸೇವೆಯಲ್ಲಿ ನಿರತರಾಗಿರುತ್ತಾರೆ. ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ “ಉತ್ಸವ 2024”

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ “ಉತ್ಸವ 2024” ಅನ್ನು ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ದಿನಾಂಕ 10ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿ ಮತ್ತು ಬೆಂಗಳೂರಿನ ಖ್ಯಾತ ರೆಡಿಯೋಲಾಜಿಸ್ಟ್ ಆದ ಡಾ. ರೋಹಿತ್ ಮಧುಕರ ಅವರು "ಉತ್ಸವ 2024" ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 20 ವರ್ಷಗಳ ಹಿಂದೆ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತ್ತು ಈಗ ಅದರ ಯಶಸ್ಸನ್ನು ಆನಂದಿಸುವುದರೊಂದಿಗೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹೆಮ್ಮೆಯ ಮೊದಲ ಬ್ಯಾಚ್ ಆಗಿದ್ದರಿಂದ ಆಡಳಿತ ಮಂಡಳಿ ಮತ್ತು ಶಿಕ್ಷಕರೇ ನಮಗೆ ಎಲ್ಲವೂ ಆಗಿದ್ದರು. ನಮ್ಮ 2003ನೇ ಬ್ಯಾಚ್ ಹಲವು “ಮೊದಲ” ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದನ್ನು ಸ್ಮರಿಸಿಕೊಂಡರು. ಅಂದಿನ ಅಧ್ಯಾಪಕರು ವಿದ್ಯಾರ್ಥಿಗಳು ತಮ್ಮನ್ನು ಹೇಗೆ ಪೋಷಿಸಿ, ಸಮಾಜಕ್ಕೆ ಉತ್ತಮ ವೈದ್ಯರನ್ನಾಗಿ ರೂಪಿಸಿದ್ದನ್ನು ನೆನಪಿಸಿಕೊಂಡರು. ಉತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆಯನ್ನು ಬೆಳೆಸಿ, ಉತ್ತಮ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಎಸ್.ಡಿ.ಎಂ. ಮಹಾವಿದ್ಯಾಲಯವು ಕಳೆದ 20 ವರ್ಷಗಳಲ್ಲಿ ಸಾಧಿಸಿದ ಉತ್ತಮ ಪ್ರಗತಿಗಾಗಿ ಎಸ್.ಡಿ.ಎಂ. ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಮುಂದೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿಯೇ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಹಿಂಜರಿಯಬಾರದು. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುತ್ತಾರೆ ಎಂಬುದನ್ನು ನಂಬಬೇಕು. ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಲ್ಲಿ ಹೊಸ ಜ್ಞಾನವನ್ನು ಮೂಡಿಸುತ್ತವೆ ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಉಪ ವಿದ್ಯಾರ್ಥಿ ಕಲ್ಯಾಣಾಧಿಕಾರಿಯವರಾದ ಆಶಾ ದೇಶಪಾಂಡೆ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಯಿ ಧೀರಾ ಅವರು ವಿದ್ಯಾರ್ಥಿಗಳ ವಾರ್ಷಿಕ ಸಂಚಿಕೆಯಾದ ಸ್ಟಿಲ್‌ವಾಟರ‍್ಸ್ ನ ವಿಶ್ಲೇಷಣೆ ನೀಡಿದರು. ರೋಹಿಣಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಚಂದನ ಅವರು ವಂದನಾರ್ಪಣೆ ಸಲ್ಲಿಸಿದರು.

ರತ್ನಮಾನಸದಲ್ಲಿ ಪ್ರವೇಶದ್ವಾರ ಉದ್ಘಾಟನೆ

Article Image

ರತ್ನಮಾನಸದಲ್ಲಿ ಪ್ರವೇಶದ್ವಾರ ಉದ್ಘಾಟನೆ

ಜೀವನಶಿಕ್ಷಣ ನೀಡುವ ಉಜಿರೆಯ ರತ್ನಮಾನಸ ವಿದ್ಯಾರ್ಥಿನಿಲಯದ ಪ್ರವೇಶದ್ವಾರವನ್ನು ಬುಧವಾರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ರತ್ನಮಾನಸ ವಿದ್ಯಾರ್ಥಿ ನಿಲಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ಅಡುಗೆ ಮಾಡುವುದು, ತರಕಾರಿ ಬೆಳೆಸುವುದು, ಲೆಕ್ಕಪತ್ರ ನಿರ್ವಹಣೆ, ಕ್ಷೌರ ಮಾಡುವುದು, ನಾಯಕತ್ವ, ಸಮಾಜ ಸೇವೆ ಇತ್ಯಾದಿ ವಿಷಯಗಳಲ್ಲಿ ಸೂಕ್ತ ಮಾಹಿತಿ, ಮಾರ್ಗದರ್ಶನ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಗುತ್ತದೆ. ತನ್ಮೂಲಕ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಧರ್ಮಸ್ಥಳಕ್ಕೆ ಬಂದ ಗಣ್ಯರನ್ನು ಉಜಿರೆಯಲ್ಲಿರುವ ಸಿದ್ಧವನ ಗುರುಕುಲ ಮತ್ತು ರತ್ನಮಾನಸಕ್ಕೆ ವೀಕ್ಷಣೆಗೆ ಕಳುಹಿಸಿ ಎಲ್ಲರೂ ಬಾಲಕರ ಚಟುವಟಿಕೆಗಳನ್ನು ಕಂಡು ಶ್ಲಾಘಿಸಿದ್ದಾರೆ ಎಂದರು. ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಸಲ್ಪಡುವ ಎಲ್ಲಾ ಪ್ರೌಢಶಾಲೆಗಳು ಶೇ. ನೂರು ಫಲಿತಾಂಶ ಪಡೆದ ಬಗ್ಗೆ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭ ಹಾರೈಸಿದರು. ಅಖಿಲ ಭಾರತ ಮಟ್ಟದಲ್ಲಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರತ್ನಮಾನಸದ ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಅವರನ್ನು ಗೌರವಿಸಲಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಐ.ಟಿ. ವಿಭಾಗದ ಸಿ.ಇ.ಒ. ಪೂರನ್‌ವರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರೀತಂ ಸ್ವಾಗತಿಸಿದರು. ನಿಶಿತ್ ಧನ್ಯವಾದವಿತ್ತರು. ಹಿರಿಯ ವಿದ್ಯಾರ್ಥಿ ಶ್ಯಾಂ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ: 'ಸಮೃದ್ಧಿ' ಹಲಸು ಹಣ್ಣುಗಳ ಮಹಾಮೇಳ

Article Image

ಮೂಡುಬಿದಿರೆ: 'ಸಮೃದ್ಧಿ' ಹಲಸು ಹಣ್ಣುಗಳ ಮಹಾಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ, ಆಹಾರೋತ್ಸವ ಮಹಾಮೇಳ ಸಮಿತಿ, ಮೂಡುಬಿದಿರೆ, ಕೃಷಿ ಇಂಜಿನಿಯರಿಂಗ್ ವಿಭಾಗ, ಆಳ್ವಾಸ್ ತಾಂತ್ರಿಕ ಕಾಲೇಜು, ಮಿಜಾರು ಸಂಯುಕ್ತ ಆಶ್ರಯದಲ್ಲಿ ಕೃಷಿ ಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ 'ಸಮೃದ್ಧಿ' ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳವು ಮೂಡುಬಿದಿರೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಜೂನ್ 14, 15 ಮತ್ತು 16ರಂದು ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ತಳಿಗಳ ಹಲಸಿನ ಹಣ್ಣಿನ ಬೃಹತ್ ಸಂಗ್ರಹ. ಸವಿರುಚಿ ತಳಿಗಳ ಮಾವು, ಪಪ್ಪಾಯ, ಅನಾನಸು, ಪೇರಳೆ, ನೇರಳೆ-ಪ್ರಾದೇಶಿಕ ಹಣ್ಣುಗಳ ವಿಶೇಷ ಸಂಗ್ರಹ. ರಂಬುಟನ್, ಮ್ಯಾಂಗೋಸ್ಟಿನ್, ಡ್ರಾಗನ್, ಬಟರ್ ಫ್ರೂಟ್-ವಿದೇಶಿ ಹಣ್ಣುಗಳ ಮಹಾಮೇಳ. ಕಲ್ಲಂಗಡಿ, ಕಬ್ಬು, ತಾಜಾ ಹಣ್ಣುಗಳ ಸವಿರಸಗಳ ತಾಣ. ಹಣ್ಣು-ತರಕಾರಿಗಳಿಂದಲೇ ತಯಾರಾದ ಸಿದ್ಧ (Readymade) ತಿನಿಸುಗಳ ಬೃಹತ್ ಸಂಗ್ರಹ. ಜೈನ, ಬ್ರಾಹ್ಮಣ, ಗೌಡ ಸಾರಸ್ವತ ಸಮುದಾಯಗಳ ವಿಶೇಷ ಪ್ರಾದೇಶಿಕ ಶುದ್ಧ ಸಸ್ಯಾಹಾರಿ ತಿಂಡಿ-ತಿನಿಸುಗಳ ಆಗರ. ಆಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆಗಳು, ಗೃಹೋಪಯೋಗಿ ವಸ್ತುಗಳ ಬೃಹತ್ ಮೇಳ. ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ. ವೈವಿಧ್ಯಮಯ ಫಲ-ಪುಷ್ಪಗಿಡಗಳ ನರ್ಸರಿ ಸಮಾವೇಶ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಬಲೀಕರಣ-ಸ್ವಾವಲಂಬನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಫಲಾನುಭವಿಗಳ 'ಸಿರಿ' ಸ್ವದೇಶಿ ಉತ್ಪನ್ನಗಳ ಬೃಹತ್ ಸಂಗ್ರಹ. ಖಾದಿ-ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಸ್ವದೇಶಿ ಮೇಳ, ಮಳೆಗಾಲದ ಕರಾವಳಿಗರ ವಿಶೇಷ ತಿನಿಸಿನ ಸೊಪ್ಪು ತರಕಾರಿಗಳ ಮಾರಾಟ ವ್ಯವಸ್ಥೆ. ನವವಿಧ ಸಿರಿಧಾನ್ಯಗಳ ಬೃಹತ್ ಸಂಗ್ರಹ. 300ಕ್ಕೂ ಮಿಕ್ಕಿದ ವೈವಿಧ್ಯಮಯ ಮಳಿಗೆಗಳ ಮಹಾಮೇಳ. ಈ ಮೇಲಿನವುಗಳು ವಿಶೇಷ ಆಕರ್ಷಣೆ ಆಗಿದ್ದು, ಪ್ರವೇಶ ಉಚಿತವಾಗಿರುತ್ತದೆ.

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

Article Image

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕ್ರಷ್ಟ ಸಾಧನೆಗೈದಿದ್ದಾರೆ. ನಿಶಾಂತ್ ಹೆಗ್ಡೆ ರಾಷ್ಟ್ರ ಮಟ್ಟದಲ್ಲಿ 4349ನೇ ಸ್ಥಾನ (GM), ಚಿರಾಗ್ ಕಂಚಿರಾಯ್ 573ನೇ ಸ್ಥಾನ (C), ಸಾನ್ವಿ ಎಸ್. ಟಿ. 1404ನೇ ಸ್ಥಾನ (C), ಸಂಜಯ್ ಬಿರಾದರ್ 2200ನೇ ಸ್ಥಾನ (C), ಸಚಿನ್ 3023ನೇ ಸ್ಥಾನ (C), ರೋಹನ್ ಎಸ್. 4263ನೇ ಸ್ಥಾನ (C) ಪಡೆದು ಉತ್ತಮ ಸ್ಥಾನಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

Article Image

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ನೋಂದಣಿ ಸಂಖ್ಯಾ ಫಲಕ ಹಾಕಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಹೆಸರು ಮತ್ತು ಮಾಲೀಕರ ಹೆಸರನ್ನೊಳಗೊಂಡ ಫಲಕವನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಬೋರ್ಡ್ ಬಳಸುವಂತೆ ಸೂಚಿಸಲಾಗಿದೆ. ಫಲಕ ಅಳವಡಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಈ ನಿಯಮಗಳನ್ನು ಅನುಸರಿಸದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ತಿದ್ದುಪಡಿ ಕಾಯಿದೆ 2017ರ ಸೆಕ್ಷನ್ 19(5)ರ ಅನ್ವಯ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಆಹಾರ ಸುರಕ್ಷತಾ ದಿನ- "ಸುರಕ್ಷಿತ ಆಹಾರ ನಮಗೇಕೆ ಮುಖ್ಯ"

Article Image

ಆಹಾರ ಸುರಕ್ಷತಾ ದಿನ- "ಸುರಕ್ಷಿತ ಆಹಾರ ನಮಗೇಕೆ ಮುಖ್ಯ"

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದಿಂದ ಆಹಾರ ಸುರಕ್ಷತಾ ದಿನವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆರಂಭದಲ್ಲಿ “ಸುರಕ್ಷಿತ ಆಹಾರ ನಮಗೇಕೆ ಮುಖ್ಯ ಎನ್ನುವುದನ್ನು ಪ್ರಸ್ತುತ ಪಡಿಸುವ ಕಿರುನಾಟಕ, ನಂತರದಲ್ಲಿ ನಮ್ಮ ಸುತ್ತಮುತ್ತಲು ಸುಲಭದಲ್ಲಿ ದೊರೆಯುವ ಅನೇಕ ಅಹಾರ ಪದಾರ್ಥಗಳಾದ ಮಾವಿನಕಾಯಿ, ಎಳನೀರು, ಒಂದೆಲಗ, ಪೇರಲೆಕಾಯಿ, ಬಾಳೆಹಣ್ಣು, ಈರುಳ್ಳಿ ಇತ್ಯಾದಿಗಳ ಉಪಯೋಗಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಸಾಗಿಬಂತು. ಕಾರ್ಯಕ್ರಮವನ್ನು ಕೊಬ್ಬರಿ-ಬೆಲ್ಲವನ್ನು ಅತಿಥಿಗಳಿಂದ ಮಕ್ಕಳಿಗೆ ನೀಡಿ ಆರಂಭಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಸಿದ್ದ-ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಡಾ. ಸ್ಮಿತಾ ಭಟ್ ಯು. ಎಸ್‌ರವರು- ಆಹಾರ ಕೇವಲ ಒಂದು ಜಡವಸ್ತುವಲ್ಲ ಅದು ನಮ್ಮ ದೇಹವನ್ನು ಪ್ರವೇಶಿಸಿ ದೇಹಕ್ಕೆ ಶಕ್ತಿ ತುಂಬುವ ಅಪರೂಪದ ವಸ್ತು. ನಮ್ಮ ದೇಹ ಕಸದ ಬುಟ್ಟಿಯಲ್ಲ. ಹಾಗಾಗಿ ಆಹಾರವೆಂದುಕೊಂಡು ಸಿಕ್ಕಿದನ್ನೆಲ್ಲ ತಿನ್ನದೇ ಸಮತೂಕದ ಆಹಾರವನ್ನು ಸೇವಿಸುವಂತೆ ಕರೆಯಿತ್ತರು. ಆಹಾರದ ಘಟಕಗಳು ಅವುಗಳ ಮೂಲಗಳು ಮತ್ತು ಅವುಗಳ ಉಪಯುಕ್ತತೆ ತಿಳಿಸಿಕೊಟ್ಟು, ಅದರ ಜೊತೆಗೆ ಸಿಕ್ಕಿದನ್ನೆಲ್ಲ ತಿನ್ನುತ್ತಾ ಹೋದರೆ, ನಾವು ತಿಂದ ಆಹಾರವೇ ಮುಂದೆ ವಿಷವಾಗಿ ನಮಗೆ ಅಪಾಯ ತರುತ್ತದೆ. ಜಂಕ್‌ಫುಡ್ ಎಂಬ ಮಾರಿಯನ್ನು ದೂರವಿಟ್ಟು, ಅತಿಯಾದ ಸಕ್ಕರೆ, ಉಪ್ಪು, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳನ್ನು ತ್ಯಜಿಸಿ -ಉತ್ತಮ ಆರೋಗ್ಯವನ್ನು ನಮ್ಮದಾಗಿಸುವತ್ತ ಗಮನ ಕೊಡುವಂತೆ ಕರೆನೀಡಿದರು. ಯಾವುದೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡಾಗ ಅದನ್ನು ತಯಾರಿಸಲು ಬಳಸುವ ಸಾಮಾಗ್ರಿಗಳ ಮಾಹಿತಿಯನ್ನು ತಪ್ಪದೇ ಓದಿಕೊಳ್ಳಿ. ಸದಾಕಾಲ ಸಮತೂಕದ ಆಹಾರವನ್ನು ಸೇವಿಸಿ ಎನ್ನುವ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮಾತಾನಾಡಿದ ಮುಖ್ಯಶಿಕ್ಷರಾದ ಶಿವಪ್ರಸಾದ್ ಭಟ್ ಮಾತಾನಾಡಿ ಉತ್ತಮ ಆರೋಗ್ಯ ನಮ್ಮದಾಗಬೇಕಾದರೆ ಅದರ ಬಗ್ಗೆ ಮನಗೆ ಸ್ಪಷ್ಟ ಅರಿವಿರಬೇಕು- ಜಂಕ್‌ಫುಡ್ ಇವತ್ತಿನಿಂದಲೇ ದೂರಮಾಡಿ, ಆರೋಗ್ಯಕ್ಕಿಂತ ದೊಡ್ಡ ಭಾಗ್ಯವಿಲ್ಲ, ಅದನ್ನು ಕಾಪಾಡಿಕೊಳ್ಳಿ ಎಂಬ ಕರೆಯಿತ್ತರು. ಆಹಾರ ಸುರಕ್ಷತಾ ದಿನದ ಮಹತ್ವ ಸಾರುವ ವೀಡಿಯೊ ಸಂದೇಶವನ್ನು ಪ್ರಸ್ತುತ ಪಡಿಸಲಾಯಿತು. ಸಂಸ್ಥೆಯ ವಿಜ್ಞಾನ ವಿಭಾಗದ ಉಸ್ತುವಾರಿಯಲ್ಲಿ ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಚ್ಚಿನ್ ನಾಯಕ್ ವಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಸತ್ತೂರು, ಧಾರವಾಡ: ವಿಶ್ವ ಪರಿಸರ ದಿನಾಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಪರಿಸರ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಜೂನ್ 05ರಂದು “ವಿಶ್ವ ಪರಿಸರ ದಿನ”ವನ್ನು ಆಚರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಿಡಗಳಿಗೆ ನೀರುಣಿಸುವುದರ ಮೂಲಕ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳು ಪರಿಸರವು ಮಾನವಕುಲಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿ, ಅದನ್ನು ಸಂರಕ್ಷಿಸುವಂತೆ ತಿಳಿಯ ಹೇಳಿದರು. ಪರಿಸರ ದಿನಾಚರಣೆಯಲ್ಲಿ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ವಿಶ್ವವಿದ್ಯಾಲಯದ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಶ್ವ ಪರಿಸರ ದಿನದ ಅಂಗವಾಗಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕವು “ಭೂ ಮರುಸ್ಥಾಪನೆ, ಮರು ಭೂಮೀಕರಣ, ಬರ ಸ್ಥಿತಿಸ್ಥಾಪಕತ್ವ” ಎಂಬ ಧ್ಯೇಯದ ಕುರಿತು ತಜ್ಞ ಉಪನ್ಯಾಸವನ್ನು ಆಯೋಜಿಸಿದ್ದರು. ಧಾರವಾಡದ ಪ್ರಸಿದ್ಧ ವೈದ್ಯ ಮತ್ತು ಪರಿಸರವಾದಿ ಡಾ. ಚಿದಾನಂದ ರಾಮನಗೌಡರ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಲು ತಮ್ಮ ಸುತ್ತಮುತ್ತ ಸಸಿಗಳನ್ನು ನೆಡಬೇಕು ಮತ್ತು ಆಗಾಗ ನೀರುಣಿಸುತ್ತಿರಬೇಕು. ಶುದ್ಧ ಗಾಳಿ ಮತ್ತು ನೀರನ್ನೊಳಗೊಂಡ ಪರಿಸರವು ಮಾನವನಿಗೆ ಮೊದಲ ಮತ್ತು ಪ್ರಥಮ ಪ್ರಾಶಸ್ತ್ಯದ ಔಷಧವಾಗಿದೆ. ಪರಿಸರ ದಿನವನ್ನು ಆಚರಿಸುವುದರಿಂದ ನಾವು ಯುವ ಪೀಳಿಗೆಗೆ ಪರಿಸರದ ಅರಿವು ಮತ್ತು ಜಾಗೃತಿಯನ್ನು ಮೂಡಿಸಿದಂತಾಗುತ್ತದೆ. ಪರಿಸರದ ಅಸಮತೋಲನವು ತಾಪಮಾನ ಮತ್ತು ಹವಾಮಾನದ ವೈಪರಿತ್ಯತೆಗೆ ಕಾರಣವಾಗಿ ಮಾನವರ ಮೇಲೆ ಅತೀವ ಪರಿಣಾಮಗಳುಂಟು ಮಾಡುತ್ತದೆ. ದೇವರ ಕೊಡುಗೆಯಾದ ಹಸಿರು ಎಲೆಗಳು ಉತ್ತಮ ಆಮ್ಲಜನಕವನ್ನು ಕೊಡುವುದರಿಂದ ಅದರ ಸಂರಕ್ಷಣೆಯು ಆವಶ್ಯಕ. ಜನರಿಂದ ಪರಿಸರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹೊರತಾಗಿ ಪರಿಸರವೇ ನಮ್ಮನ್ನು ನಿಯಂತ್ರಿಸುತ್ತದೆ ಎಂಬ ಅರಿವಿರಬೇಕು ಎಂದು ಹೇಳಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ ವಿಜಯ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಡಾ. ರಾಕೇಶ ನಾಯಕ, ವಿಶ್ವವಿದ್ಯಾಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರಾದ ಬಾಬಣ್ಣಾ ಶೆಟ್ಟಿಗಾರ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಕ್ಸಲೆಂಟ್, ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ

Article Image

ಎಕ್ಸಲೆಂಟ್, ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ

ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2024ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ನಿಖಿಲ್ ಬಿ. ಗೌಡ 710 ಅಂಕ ಪಡೆದು ರಾಷ್ಟ್ರ ಮಟ್ಟದಲ್ಲಿ 383ನೇ ರ‍್ಯಾಂಕ್ ಪಡೆದು ಅತ್ಯುನ್ನತ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಸೂರಜ್ ಕೂಡಲಗಿಮಠ-687, ನಿಶಾಂತ್ ಪಿ.ಹೆಗಡೆ-685, ಶಿಶಿರ ಬಿ.ಇ.-685, ಭಾರ್ಗವಿ ಎಂ.ಜೆ.-680, ಸೃಜನ್ ಎಂ.ಆರ್.-680, ಶಶಿಭೂಷಣ-676, ಗೌರವ ಭಾರದ್ವಾಜ್-675, ರಿತೀಶ್ ಎಂ.-671, ರೋಹಿತ್ ಗೌಡ-671, ಹರ್ಶಿತ್ ಡಿ.-666, ಸುಹಾಸ್ ಎಂ.ಎಸ್.-665, ವಿಷ್ಣುಪ್ರಸಾದ್ ಎಸ್.ಆರ್.-656, ಸಮರ್ಥ ಸಮ್ಯಮ್ ರಾಮಕೃಷ್ಣ-655, ಶಶಾಂಕ್ ಎಂ.-655, ಚಿನ್ಮಯ್‌ರಾಜ್ ಎಂ.ಎಸ್.-650, ಶ್ರೀಶೈಲ-650, ಶ್ರಾವ್ಯಾ ಡೋಂಗ್ರೆ-648, ತನುಶ್ರೀ ಎಸ್.ಕಲ್ಕೋಟಿ-643, ಶ್ರೆಯಸ್ ಎಸ್.ಮಾಲಿ-642, ಭೀಮಶಂಕರ-638, ಪವನ್ ಜಿ. ಎಸ್.-637, ಕಾರ್ತಿಕ್ ಎಂ.-636, ಶಶಾಂಕ್ ಎಸ್.ಎಸ್.-636, ಸಂಗಮೇಶ್-636, ರೋಶನ್-633, ಸಾಕ್ಷಿತ್ ಎನ್.ಎಸ್.ಗೌಡ-633, ವರ್ಷಾ ಬಡಿಗೇರ್-632, ಮೋಹನ್ ಗೌಡ-630, ಕೆ.ಜಿ. ಪ್ರಣವ್ ಕಶ್ಯಪ್-627, ಚಿರಂತನ್ ಹೆಚ್.ಆರ್.-626, ಸಚೀಂದ್ರ ಆರ್.-625, ಅಂಕುಶ್ ಬಿ.ಎಂ.-625, ಆದಿತ್ಯ ಜೆ.ಬಿ.-623, ಸೃಷ್ಟಿ ಲಕ್ಷ್ಮಣ-623, ಮಂಜುನಾಥ ಎಸ್.-620, ಪಿ.ಆಕಾಶ್ ರೆಡ್ಡಿ-619, ಪ್ರಕೃತಿ ಸಿ.-615, ಆಶ್ರಯಾ ಪಿ.-614, ಶ್ರೀತೇಜ್ ಎಸ್.-614, ಗಿರಿ ತೇಜಸ್ವಿ ಟಿ.-610, ವಿನೋದ್ ರೆಡ್ಡಿ ಪಾಟೀಲ್-607, ಹಿತೇಶ್ ವೈಷ್ಣವ್-605, ಅನಿರುದ್ಧ ಎನ್.ಎಂ.-602, ಗಾಯತ್ರಿ ಮುಕುಂದ್ ಮೊಗೇರ್-602, ಮನೋಜ್ ಬಿ.ಎಲ್.-602, ಕವನಾ ಪಾಟೀಲ್ ಜಿ.ಬಿ.-601, ಸುಹಾಸ್ ಜಿ.-601, ಕರಿಬಸಪ್ಪ ಯಲಿಗಾರ್-600, ಶರಧಿ ಬಿ.ಎಸ್.-600 ಅಂಕಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದು ಅರ್ಹತೆ ಗಳಿಸಿರುತ್ತಾರೆ. 17 ವಿದ್ಯಾರ್ಥಿಗಳು 650ಕ್ಕಿಂತ ಹೆಚ್ಚಿನ ಅಂಕ, 50 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿರುತ್ತಾರೆ. 105 ವಿದ್ಯಾರ್ಥಿಗಳು 550ಕ್ಕಿಂತಲೂ ಹೆಚ್ಚಿನ ಅಂಕ, 152 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚಿನ ಅಂಕ, 186 ವಿದ್ಯಾರ್ಥಿಗಳು 450ಕ್ಕಿಂತ ಹೆಚ್ಚಿನ ಅಂಕ, 211 ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚಿನ ಅಂಕಗಳಿಸುವ ಮೂಲಕ ಎಕ್ಸಲೆಂಟ್ ಸಂಸ್ಥೆಯ ಸ್ಪರ್ಧಾತ್ಮಕ ಮತ್ತು ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ ಪ್ರಶಾಂತ್ ಹೆಗಡೆ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಸಿಇಟಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್

Article Image

ಸಿಇಟಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಿದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ನಿಖಿಲ್ ಬಿ. ಗೌಡ ವೆಟರ್ನರಿ ಮತ್ತು ನರ್ಸಿಂಗ್‌ನಲ್ಲಿ ರಾಜ್ಯಕ್ಕೆ 8 ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾಗಳಲ್ಲಿ 10ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 31ನೇ ರ‍್ಯಾಂಕ್, ಅಗ್ರಿಕಲ್ಚರಲ್‌ನಲ್ಲಿ 108ನೇ ರ‍್ಯಾಂಕ್ ಪಡೆದಿರುತ್ತಾನೆ. ಶ್ರೀ ಶೈಲ ಅಗ್ರಿಕಲ್ಚರಲ್ (ಪಿ) ಮತ್ತು ವೆಟರ್ನರಿ(ಪಿ) 2ನೇ ರ‍್ಯಾಂಕ್, ನಿಶಾಂತ್ ಪಿ. ಹೆಗಡೆ ವೆಟರ್ನರಿ 54ನೇ ರ‍್ಯಾಂಕ್, ನರ್ಸಿಂಗ್ 54, ಅಗ್ರಿಕಲ್ಚರಲ್ 59, ಬಿಎನ್‌ವೈಎಸ್ 61, ಬಿಫಾರ್ಮಾ ಮತ್ತು ಡಿಫಾರ್ಮಾ 89ನೇ ರ‍್ಯಾಂಕ್ ಪಡೆದಿರುತ್ತಾರೆ. ಅದೇ ರೀತಿ ಭಾರ್ಗವಿ ಎಂ. ಜೆ., ಸೃಜನ್ ಎಂ. ಆರ್, ಶಿಶಿರ ಬಿ. ಇ., ರೋಹನ್ ಎಸ್, ಶಶಾಂಕ್ ಎಂ., ಸುಹಾಸ್ ಎಂ. ಎಸ್, ಸಮರ್ಥ ಸಮ್ಯಮ್, ಸಂಜಯ್ ಬಿರಾದಾರ್ ಅತ್ಯುತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿವಿಧ ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ನೂರರ ಒಳಗೆ 11 ರ‍್ಯಾಂಕ್, ಐದುನೂರರ ಒಳಗೆ 44 ರ‍್ಯಾಂಕ್, ಸಾವಿರದ ಒಳಗೆ 92 ರ‍್ಯಾಂಕ್‌ಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ ಶೆಟ್ಟಿ, ಉಪಪ್ರಾಂಶುಪಾಲ, ಸಿಇಟಿ ಸಂಯೋಜಕ ಮತ್ತು ಭೌತಶಾಸ್ತ್ರ ಉಪನ್ಯಾಸಕ ಮನೋಜ್ ಕುಮಾರ್ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಎಕ್ಸಲೆಂಟ್: ಎನ್ ಸಿ ಸಿ ನೌಕದಳ ಎಕ್ಸಲೆಂಟ್ ವಿದ್ಯಾರ್ಥಿ ಬೆಸ್ಟ್ ಕೆಡೆಟ್

Article Image

ಎಕ್ಸಲೆಂಟ್: ಎನ್ ಸಿ ಸಿ ನೌಕದಳ ಎಕ್ಸಲೆಂಟ್ ವಿದ್ಯಾರ್ಥಿ ಬೆಸ್ಟ್ ಕೆಡೆಟ್

ಮಂಗಳೂರಿನ KARNATAKA NAVAL UNIT ಇದರ ಸಹಭಾಗಿತ್ವದಲ್ಲಿ ಉಡುಪಿಯ ಎಂ.ಐ.ಟಿ ಕ್ಯಾಂಪಸ್‌ನಲ್ಲಿ ನಡೆದ CATS NAVY CAMPನಲ್ಲಿ ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯಶಸ್ ಜಿ. ಜೂನಿಯರ್ ವಿಭಾಗದ ಬೆಸ್ಟ್ ಕೆಡೆಟ್(JD) ಹಾಗೂ ಶ್ರಾವಣಿ ಎ. ಗುರುಸ್ವಾಮಿ(JW) ಸೆಕೆಂಡ್ ಬೆಸ್ಟ್ ಕೆಡೆಟ್‌ಗಳಾಗಿ ಹೊರಹೊಮ್ಮಿದ್ದಾರೆ. ಕ್ಯಾಂಪ್‌ನಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಸಂಗೀತ, ಕ್ರೀಡೆ, ಪರೇಡ್ ಇತ್ಯಾದಿ ಚಟುವಟಿಕೆಗಳಲ್ಲಿ ಬಹುಮಾನ ಗಳಿಸಿಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಕೇರ್‌ಟೇಕರ್ ಆಫೀಸರ್ ರೇಣುಕಾಚಾರ್ಯ ಅಭಿನಂದಿಸಿದ್ದಾರೆ.

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

Article Image

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ 27 ಮೇ 2024 ರಂದು “ವಿಶ್ವ ತುರ್ತು ಚಿಕಿತ್ಸಾ ದಿನ”ದ ಅಂಗವಾಗಿ “ಅಪಧಮನಿಯ ರಕ್ತದ ಅನಿಲ ವಿಶ್ಲೇಷಣೆಯ ಬಗ್ಗೆ ಪ್ರಾಥಮಿಕ ಜ್ಞಾನ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಸುಮಾರು 150ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗವು ಕರ್ನಾಟಕದಲ್ಲಿ ಸ್ಥಾಪನೆಯಾದ 5 ನೇ ವಿಭಾಗ ಮತ್ತು 2 ನೇ ಅತಿ ದೊಡ್ಡ ವಿಭಾಗವಾಗಿದೆ. ಎಸ್.ಡಿ.ಎಂ ವೈದ್ಯಕೀಯ ಕಾಲೇಜು ಕಳೆದ ಐದು ವರ್ಷಗಳಿಂದ ತುರ್ತು ಚಿಕಿತ್ಸಾ ವಿಭಾಗದಲ್ಲಿ ಎಂ.ಡಿ. ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ. ಡಾ. ನಿರಂಜನ್ ಕುಮಾರ, ಉಪಕುಲಪತಿಗಳು, ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ. ರತ್ನಮಾಲಾ ಎಂ. ದೇಸಾಯಿ, ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಡಾ. ವಿಜಯ ಕುಲಕರ್ಣಿ, ಉಪ ಪ್ರಾಂಶುಪಾಲರು, ಡಾ. ಕಿರಣ ಹೆಗ್ಡೆ, ವೈದ್ಯಕೀಯ ಅಧೀಕ್ಷಕರು, ಡಾ. ಮಖ್ದೂಮ್ ಕಿಲ್ಲೇದಾರ ಉಪ ವೈದ್ಯಕೀಯ ಅಧೀಕ್ಷಕರು, ಮತ್ತಿತರರು ಈ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಹಾದೇವ, ಜೆ ಜೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಂಜುನಾಥ. ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಉದಯ ಮತ್ತು ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳು ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ. ರಜನಿಕಾಂತ, ಅಥಿತಿಗಳನ್ನು ಸ್ವಾಗತಸಿದರು, ಡಾ. ವಿಜಯಲಕ್ಷ್ಮಿ , ಪ್ರಾಧ್ಯಾಪಕರು ಮತ್ತು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಕಾರ್ಯಗಾರದ ಅವಲೋಕನ ನೀಡಿದರು. ಡಾ. ಸುಚಿತಾ ವಂದನಾರ್ಪಣೆ ಸಲ್ಲಿಸಿದರು.

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ -ವಿಶ್ವ ಥೈರಾಯ್ಡ್ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ -ವಿಶ್ವ ಥೈರಾಯ್ಡ್ ದಿನಾಚರಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವೈದ್ಯಕೀಯ ಚಿಕಿತ್ಸಾ(General Medicine) ವಿಭಾಗ ಮತ್ತು ಅಂತಃಸ್ರಾವಿಕ ಗ್ರಂಥಿ ಶಾಸ್ತ್ರ (Endocrinology) ವಿಭಾಗಗಳು ಜಂಟಿಯಾಗಿ ವಿಶ್ವ ಥೈರಾಯ್ಡ್ ದಿನಾಚರಣೆಯ ಅಂಗವಾಗಿ, ಥೈರಾಯ್ಡ್ ಸಮಸ್ಯೆಗಳ ಅರಿವು ಮೂಡಿಸಲು ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಂತಃಸ್ರಾವಿಕ ಗ್ರಂಥಿ ಶಾಸ್ತ್ರ (Endocrinology) ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಎಂ. ಉಸ್ಮಾನ್ ಯಾದವಾಡ ಅವರು ಥೈರಾಯ್ಡ್ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡುತ್ತಾ, ಈ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಗಳು ಎಲ್ಲಾ ವಯೋಮಾನದವರಿಗೂ ಮತ್ತು ಹುಟ್ಟಿದ ಮಕ್ಕಳಿಗೂ ಬರಬಹುದಾದ ಸಾಮಾನ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಸಮಸ್ಯೆಯನ್ನು ಸರಿಯಾಗಿ ನಿಯಂತ್ರಿಸಿ ನಿರ್ವಹಿಸದಿದ್ದಲ್ಲಿ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಥೈರಾಯ್ಡ್ ಸಮಸ್ಯೆಗಳನ್ನು ಬಾರದಂತೆ ತಡೆಗಟ್ಟಲು ಸಾಧ್ಯವಿಲ್ಲ, ಜಾಗೃತಿ ಮತ್ತು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ, ಥೈರಾಯ್ಡ್ ಸಮಸ್ಯೆಗಳು “ಸಾಂಕ್ರಾಮಿಕ ರೋಗವಲ್ಲಾ” ಎಂದು ತಿಳಿದಿರಲಿ ಎಂದರು. ವಿದ್ಯಾರ್ಥಿಗಳಿಗಾಗಿ ಚರ್ಚೆ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಡಾ. ನಿರಂಜನ ಕುಮಾರ್, ಉಪಕುಲಪತಿಗಳು, ಡಾ. ಚಿದೇಂದ್ರ ಎಂ. ಶೆಟ್ಟರ, ಕುಲಸಚಿವ, ಡಾ. ರತ್ನಮಾಲಾ ಎಂ ದೇಸಾಯಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಹಿರಿಯ ವೈದ್ಯರಾದ ಡಾ. ಬಸವರಾಜ ಹಳಕಟ್ಟಿ, ಡಾ. ಪಿ. ವಿಠ್ಠಲ ರಾವ್ ಮತ್ತು ಇತರರು ಉಪಸ್ಥಿತರಿದ್ದರು. ಡಾ. ಸ್ವಾಮಿ ಕಳಸೂರಮಠ, ಅಥಿತಿಗಳನ್ನು ಸ್ವಾಗತಿಸಿ, ಕಾರ್ಯಾಗಾರದ ಅವಲೋಕನ ಮಾಡಿದರು. ಡಾ. ರೈನಾ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಚರ್ಮರೋಗ ತಪಾಸಣಾ ಶಿಬಿರ

Article Image

ಚರ್ಮರೋಗ ತಪಾಸಣಾ ಶಿಬಿರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರವು ನಡೆಯುತ್ತಿದ್ದು, ಮೇ 26ರಂದು ಚರ್ಮರೋಗ ತಪಾಸಣಾ ಶಿಬಿರ ನಡೆಸಲಾಯಿತು. ಈ ಶಿಬಿರದಲ್ಲಿ ಚರ್ಮದ ಕಲೆಗಳು, ಕಪ್ಪು ಕಲೆಗಳು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು, ಮಕ್ಕಳ ಚರ್ಮದ ತೊಂದರೆಗಳು, ಸೌಂದರ್ಯದ ಸಮಸ್ಯೆಗಳು, ಕುಷ್ಠರೋಗ ಸಮಸ್ಯೆ, ಗಾಯದ ಗುರುತುಗಳು, ಮೊಡವೆಗಳಿಗೆ ಚಿಕಿತ್ಸೆ, ಇಸುಬು, ಡ್ರಗ್ ಅಲರ್ಜಿ, ಸೋರಿಯಾಸಿಸ್, ತೊನ್ನುರೋಗ (ಬಿಳಿ ಮಚ್ಚೆ), ತುರಿಕೆ ಖಜ್ಜಿ, ಉಗುರು ಸಂಬಂಧಿತ ರೋಗಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು. ಚರ್ಮರೋಗ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ MBBS., MD, DNB (DVL) ಶಿಬಿರ ಉದ್ಘಾಟಿಸಿ, ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ರೋಗ ತಪಾಸಣೆ ಉಚಿತವಾಗಿತ್ತು. ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ನೀಡಲಾಗಿತ್ತು. ಶಿಬಿರದಲ್ಲಿ 200 ಕ್ಕೂ ಅಧಿಕ ಮಂದಿ ಭಾಗವಹಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳ ಭೇಟಿ

Article Image

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳ ಭೇಟಿ

ಉಜಿರೆ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜಕಲ್ಯಾಣ ಸಚಿವ ಎಚ್. ಸಿ. ಮಹಾದೇವಪ್ಪ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತ್ತು ಪಶುಸಂಗೋಪನಾ ಸಚಿವ ವೆಂಕಟೇಶ್ ಶನಿವಾರ(ಮೇ 25) ಧರ್ಮಸ್ಥಳಕ್ಕೆ ಬಂದಾಗ ಅವರಿಗೆ ಪ್ರವೇಶದ್ವಾರದಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಡಿ. ಹರ್ಷೇಂದ್ರಕುಮಾರ್ ಸಚಿವರುಗಳನ್ನು ಸ್ವಾಗತಿಸಿದರು. ಬಳಿಕ ದೇವರದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ ಮತ್ತು ಕೆ. ಅಭಯಚಂದ್ರ ಜೈನ್, ಶಾಸಕ ಅಶೋಕ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬೆಳ್ತಂಗಡಿಯ ರಕ್ಷಿತ್ ಶಿವರಾಂ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್, ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

ಉಜಿರೆಯಲ್ಲಿ ರಕ್ತದಾನ ಶಿಬಿರ

Article Image

ಉಜಿರೆಯಲ್ಲಿ ರಕ್ತದಾನ ಶಿಬಿರ

ರಕ್ತದಾನ ಮಾಡುವವರು ಹಾಗೂ ತೆಗೆದುಕೊಳ್ಳುವವರು ಯಾವುದೇ ಪ್ರಚಾರದ ಬಯಕೆ ಇಲ್ಲದೆ ಮಾಡುವ ರಕ್ತದಾನವು ಇತರ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪೂರನ್‌ವರ್ಮ ಹೇಳಿದರು. ಅವರು ಭಾನುವಾರ ಉಜಿರೆ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಮಂಗಳೂರಿನ ಕೆ.ಎಂ.ಸಿ. ರಕ್ತ ಕೇಂದ್ರ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡಿದವರಿಗೆ ಆರೋಗ್ಯವರ್ಧನೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಜೊತೆಗೆ ಧನಾತ್ಮಕ ಚಿಂತನೆಯೊಂದಿಗೆ ಧನ್ಯತಾ ಭಾವವೂ ಮೂಡಿಬರುತ್ತದೆ ಎಂದು ಅವರು ಹೇಳಿದರು. ವಿದೇಶಗಳಿಗಿಂತಲೂ ಭಾರತದಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನ ಶಿಬಿರದಲ್ಲಿ ಸಹಕರಿಸಿದ ಎಲ್ಲರನ್ನೂ ಅವರು ಅಭಿನಂದಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ಯಾಡಿ ಸೇವಾ ಭಾರತಿಯ ಸಂಚಾಲಕ ವಿನಾಯಕ ರಾವ್ ಕನ್ಯಾಡಿಯವರು ಮಾತನಾಡುತ್ತಾ ರಕ್ತದಾನದ ಮಹತ್ವವನ್ನು ವಿವರಿಸಿ, ಕನ್ಯಾಡಿಯಲ್ಲಿ ಸೇವಾ ಭಾರತಿಗೆ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುವುದು. ಈಗಾಗಲೇ ಅನೇಕ ದಾನಿಗಳು ಹಾಗೂ ಸಂಸ್ಥೆಗಳು ಉದಾರ ನೆರವಿನ ಭರವಸೆ ನೀಡಿದ್ದಾರೆ ಎಂದರು. ಉಜಿರೆ ಶರತ್‌ಕೃಷ್ಣ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಧರ್ಣಪ್ಪ ಗೌಡ, ಬಂಟರ ಸಂಘದ ಅಧ್ಯಕ್ಷೆ ವನಿತಾ ಶೆಟ್ಟಿ, ಜಯಶ್ರೀ ಪ್ರಕಾಶ್, ಶ್ಯಾಮ್ ಭಟ್ ಅತ್ತಾಜೆ, ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಅಜಿತ್‌ ಕುಮಾರ್ ಆರಿಗ ಮತ್ತು ಜನಾರ್ದನ್ ಕಾನರ್ಪ ಉಪಸ್ಥಿತರಿದ್ದರು. ಕನ್ಯಾಡಿ ಸೇವಾ ಭಾರತಿ ಅಧ್ಯಕ್ಷರಾದ ಸ್ವರ್ಣಗೌರಿ ಸ್ವಾಗತಿಸಿದರು. ಮಾಧವ ಗೌಡ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ-ಸೇವಕರು ರಕ್ತದಾನ ಶಿಬಿರದ ಸಂಘಟನೆಯಲ್ಲಿ ಸಕ್ರೀಯ ಸಹಕಾರ ನೀಡಿದರು.

ಮೂಡುಬಿದಿರೆ: ಬೃಹತ್ ಉದ್ಯೋಗ ಮೇಳ

Article Image

ಮೂಡುಬಿದಿರೆ: ಬೃಹತ್ ಉದ್ಯೋಗ ಮೇಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯ ‘ಆಳ್ವಾಸ್ ಪ್ರಗತಿ 2024’ ಬೃಹತ್ ಉದ್ಯೋಗ ಮೇಳದ 14ನೇ ಆವೃತ್ತಿಯು ಜೂನ್ 7 ಮತ್ತು 8ರಂದು ಆಳ್ವಾಸ್ ಕ್ಯಾಂಪಸ್ ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ನಡೆಯಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಕಂಪನಿಗಳಿಗೆ ಸಂಪೂರ್ಣ ಉಚಿತ ಉದ್ಯೋಗಮೇಳ. IT, Automobile, ITeS, Banking and Finance, Healthcare, Sales and Retail, Media, Hospitality, Manufacturing, Education, Construction, Telecom, NGO ಹೀಗೆ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ವೆಬ್ ಸೈಟ್ ಮೂಲಕ ಉಚಿತ ನೋಂದಣಿ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ: 9741440490, 9663190590, 7975223865 web site: www.alvaspragati.com

ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜಗಳ ಲಭ್ಯ

Article Image

ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜಗಳ ಲಭ್ಯ

ಮಂಗಳೂರು: 2024ರ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರ್ವ ಸಿದ್ಧತೆಗಳು ಪ್ರಾರಂಭಗೊಂಡಿದ್ದು, ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಗೆ ಕೃಷಿ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

First Previous

Showing 3 of 6 pages

Next Last