Article Image

ರೋಟಾಲಯ ಸಂಗೀತ ಸ್ಪರ್ಧೆ

Article Image

ರೋಟಾಲಯ ಸಂಗೀತ ಸ್ಪರ್ಧೆ

ಉಜಿರೆ: ಬೆಳ್ತಂಗಡಿ ರೋಟರಿಕ್ಲಬ್ ಮತ್ತು ಲಯನ್ಸ್‌ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಭಾನುವಾರ ಬೆಳ್ತಂಗಡಿಯಲ್ಲಿ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ರೋಟಾಲಯ ಸಂಗೀತ ಸ್ಪರ್ಧೆ ನಡೆಸಲಾಯಿತು. ರೋಟರಿ ಜಿಲ್ಲಾ ಉಪರಾಜ್ಯಪಾಲ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಮತ್ತು ಲಯನ್ಸ್ ಕ್ಲಬ್‌ನ ರಾಜು ಶೆಟ್ಟಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಫಲಿತಾಂಶ: ದೇಶಭಕ್ತಿಗೀತೆ: ಸಮೂಹ ಗಾಯನ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ), ಉಜಿರೆ (ಪ್ರಥಮ). ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ (ದ್ವಿತೀಯ) ಭಾವಗೀತೆ: ಪ್ರಾಪ್ತಿ ಶೆಟ್ಟಿ, ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ (ಪ್ರಥಮ). ಸ್ವಸ್ತಿಶ್ರೀ ಹೆಬ್ಬಾರ್ ಎಸ್.ಡಿ.ಎಂ., ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ), ಉಜಿರೆ (ದ್ವಿತೀಯ) ದೇಶಭಕ್ತಿ ಸಮೂಹ ಗಾಯನ: ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆ, ಧರ್ಮಸ್ಥಳ (ಪ್ರಥಮ). ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ (ದ್ವಿತೀಯ) ಎ. ವಿಭಾಗ: ಭಾವಗೀತೆ ಸ್ಪರ್ಧೆ: ಸನ್ನಿಧಿ, ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ ಸಿ) ಉಜಿರೆ (ಪ್ರಥಮ). ಅಂಜಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ (ದ್ವಿತೀಯ) ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು, ಗೀತಾಪ್ರಭು, ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೊ ಕ್ಲಬ್ ಅಧ್ಯಕ್ಷರಾದ ಡಾ. ಭಾಷಿಣಿ, ಡಾ. ಶಶಿಕಾಂತ ಡೋಂಗ್ರೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಬಿ. ಜನಾರ್ದನ ತೋಳ್ಪಾಡಿತ್ತಾಯ, ಸುಬ್ರಹಣ್ಯ, ಪ್ರಶಾಂತ ಬಾಳಿಗ ಬೆಳ್ತಂಗಡಿ ಮತ್ತು ಅಯ್ಯಪ್ಪ ಪ್ರಭು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.

ಗೃಹವಿಜ್ಞಾನ ವಿಭಾಗದ ಚಟುವಟಿಕೆ ಉದ್ಘಾಟನಾ ಸಮಾರಂಭ

Article Image

ಗೃಹವಿಜ್ಞಾನ ವಿಭಾಗದ ಚಟುವಟಿಕೆ ಉದ್ಘಾಟನಾ ಸಮಾರಂಭ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಗೃಹವಿಜ್ಞಾನ ವಿಭಾಗದ ಪ್ರಸಕ್ತ ವರ್ಷದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ‘ಗೃಹವಾಹಿನಿ’ ಜು.25ರಂದು ನಡೆಯಿತು. ವಿಭಾಗದ ನಿಕಟಪೂರ್ವ ಮುಖ್ಯಸ್ಥೆ ಪ್ರೊ. ಆಲ್ಫೋನ್ಸಮ್ಮ ಅವರು ಉದ್ಘಾಟಿಸಿ ಮಾತನಾಡಿ, ಸ್ವಾವಲಂಬಿ ಜೀವನ ಹಾಗೂ ಅದಕ್ಕೆ ಬೇಕಾದ ಎಲ್ಲಾ ಪೂರಕ ಶಿಕ್ಷಣ ಗೃಹವಿಜ್ಞಾನ ಒದಗಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುವುದು, ಅಡುಗೆ ಮಾಡುವುದು ಸಹಿತ ನಿತ್ಯ ಜೀವನಕ್ಕೆ ಬೇಕಾದ ಎಲ್ಲಾ ಕೌಶಲಗಳನ್ನು ಸೂಕ್ತ ರೀತಿಯಲ್ಲಿ ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ ಎಂದರು. ವಿಭಾಗದ ಭಿತ್ತಿಪತ್ರಿಕೆ ಗೃಹವಾಣಿಯ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿಭಾಗದ ಮುಖ್ಯಸ್ಥೆ ಶೋಭಾ, ಸಹಾಯಕ ಪ್ರಾಧ್ಯಾಪಕಿ ಐಶ್ವರ್ಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಂಜಲಿ ಎಚ್ ಆರ್, ಐಶ್ವರ್ಯ ಹೆಚ್ ಆರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದರ್ಶಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಅಂಜಲಿ ಸ್ವಾಗತಿಸಿ, ಸೌಜನ್ಯ ವಂದಿಸಿ, ಸನುಷ ಪಿಂಟೋ ನಿರೂಪಿಸಿದರು.

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

Article Image

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

ಬೆಳ್ತಂಗಡಿ: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಬೆಳ್ತಂಗಡಿ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ಆ.9ರಂದು ಡೈಮಂಡ್ ಫೆಸ್ಟ್ ಗೆ ಚಾಲನೆ ನೀಡಲಾಯಿತು. ಬೆಳ್ತಂಗಡಿ ಮಹಿಳಾ ಉದ್ಯಮಿ ಪ್ರೀತಿ ರತೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಳಿಯ ಸಂಸ್ಥೆಯಲ್ಲಿ ಹೊಸ ಹೊಸ ವಿನ್ಯಾಸದ ಆಭರಣಗಳ ಸಂಗ್ರಹಗಳಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಮುಳಿಯದ ಎಲ್ಲಾ ಕುಶಲಕರ್ಮಿಗಳಿಗೆ ಹಾಟ್ಸ್ ಆಫ್ ಹೇಳಲೇಬೇಕು. ಯಾಕೆಂದರೆ ಪ್ರತಿ ಬಾರಿಯೂ ಬಂದಾಗ ಡಿಸೈನ್ ಗಳು ಬದಲಾವಣೆಗಳು ಆಗುತ್ತಿದ್ದು ಒಂದಕ್ಕೊಂದು ಆಕರ್ಷಣೆಯಾಗಿರುತ್ತದೆ. ಈ ಶ್ರಾವಣ ಮಾಸದ ಶನಿವಾರದಂದು ಪ್ರಾರಂಭ ಮಾಡಿರುವ ಡೈಮಂಡ್ ಫೆಸ್ಟ್ ಮಾರುಕಟ್ಟೆಯಲ್ಲಿ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಇಂದಬೆಟ್ಟು ಗ್ರಾಮ ಆಡಳಿತ ಅಧಿಕಾರಿ ಅಂಕಿತ್ ಜೈನ್ ಮಾತನಾಡಿ, ಮುಳಿಯ ಸಂಸ್ಥೆ ಹಲವಾರು ವರ್ಷಗಳಿಂದ ತನ್ನ ಗ್ರಾಹಕರನ್ನು ಸೆಳೆಯುತ್ತಲೇ ಬಂದಿರುತ್ತದೆ. ನಾನು ಕಳೆದ ಎರಡು ವರ್ಷದಿಂದ ಮುಳಿಯ ಸಂಸ್ಥೆಯ ಗ್ರಾಹಕನಾಗಿದ್ದು, ನಮ್ಮ ನಿರೀಕ್ಷೆಯ ಡಿಸೈನ್ ಗಳು ಇಲ್ಲಿ ದೊರೆಯುತ್ತಿದೆ. ಎಲ್ಲಾ ಸಿಬ್ಬಂದಿಗಳು ವಿನಮ್ರವಾಗಿದ್ದು ಮತ್ತೆ ಮತ್ತೆ ಬರಬೇಕು ಎಂದು ಭಾಸವಾಗುತ್ತದೆ. ಯಾವುದೇ ಹಬ್ಬಗಳ ಸಂಭ್ರಮದಂದು ನಮಗೆ ಮುಳಿಯ ನೆನಪಾಗುತ್ತಿದ್ದು ಡೈಮಂಡ್ ಫೆಸ್ಟ್ ಯಶಸ್ಸಾಗಲಿ ಎಂದು ಶುಭ ಹಾರೈಸಿದರು. ಹಲವು ವಿನ್ಯಾಸದ ವಜ್ರದ ಸಂಗ್ರಹಣೆ: 81 ವರ್ಷಗಳ ಇತಿಹಾಸವಿರುವಂತಹ ಮುಳಿಯ ಸಂಸ್ಥೆ ಸುಂದರ ಅರಮನೆಯ ಕಿರೀಟಕ್ಕೆ ಇಂದು ಮತ್ತೊಂದು ಸಾಧನೆಯ ಗರಿಯ ಜೋಡಿಸುವ ಸಂಭ್ರಮ. ವಜ್ರಗಳ ವಿವಿಧ ವಿನ್ಯಾಸಗಳನ್ನು ಸಂಭ್ರಮಿಸುವ ದಿನ. ಸುಮಾರು 4000 ಸಾವಿರದಿಂದ ಪ್ರಾರಂಭವಾಗುವಂತಹ ವಜ್ರದ ಬೆಲೆಯು ಹಲವು ವಿನ್ಯಾಸ ಮತ್ತು ವೈವಿಧ್ಯತೆಯನ್ನೊಳಗೊಂಡು 1 ಲಕ್ಷದವರೆಗೂ ಮುಂದುವರೆಯುತ್ತದೆ. ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ವಜ್ರದ ಗುಣಮಟ್ಟವನ್ನು ಗ್ರಾಹಕರಿಕೆ ತಿಳಿಸುವಂತಹ ಯಂತ್ರವೂ ಕೂಡ ಮುಳಿಯದಲ್ಲಿದೆ. ಹಲವು ವಿನ್ಯಾಸದ ವಜ್ರದ ಸಂಗ್ರಹಣೆಯ ಹಬ್ಬ ಇಂದಿನಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಗ್ರಾಹಕರು, ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕರು ಲೋಹಿತ್ ಸ್ವಾಗತಿಸಿದರು. ಸಿಬ್ಬಂದಿ ಅಕ್ಷಯ್ ಪ್ರಾರ್ಥಿಸಿ ವಂದಿಸಿದರು. ಸೋನಾಕ್ಷಿ ನಿರೂಪಿಸಿದರು.

ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ

Article Image

ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ

ಮೂಡುಬಿದಿರೆ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ, ಶ್ರೀಕ್ಷೇತ್ರದ ರಾಜಾಂಗಣದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದವು. ಡಾ| ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ "ದೇವವೃದ್ಧರು" ನಾಟಕವು ಅತ್ಯುತ್ತಮ ನಾಟಕ ಪ್ರಶಸ್ತಿಯೊಂದಿಗೆ ರೂ.50,000 ನಗದು ಬಹುಮಾನ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕಕ್ಕೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಆಳ್ವಾಸ್ ಪಿ.ಯು. ವಿದ್ಯಾರ್ಥಿ ಮನುಜ ನೇಹಿಗ ಸುಳ್ಯ ಪಡೆದುಕೊಂಡರು. ಆಳ್ವಾಸ್‌ನ ಇನ್ನೊಂದು ತಂಡ ಪ್ರದರ್ಶಿಸಿದ, ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶಿಸಿದ್ದ ‘ಮಗು ಮತ್ತು ಮರ’ ನಾಟಕವು ದ್ವಿತೀಯ ಪ್ರಶಸ್ತಿಯೊಂದಿಗೆ ರೂ 30,000 ನಗದನ್ನು ಪಡೆಯಿತು. ಈ ನಾಟಕದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮನೋಜ್ ತೀರ್ಥಹಳ್ಳಿ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತೇಜಸ್ವಿನಿ ತರೀಕೆರೆ ಪಡೆದುಕೊಂಡರು. ಪ್ರಶಸ್ತಿಯನ್ನು ಶ್ರೀ ಒಡಿಯೂರು ಗುರುದೇವಾನಂದ ಸ್ವಾಮಿಗಳು ನೀಡಿದರು. ಸ್ಪರ್ಧೆಯಲ್ಲಿ ಉಡುಪಿ, ದ.ಕ ಜಿಲ್ಲೆಯ ಒಟ್ಟು 12 ತಂಡಗಳು ಭಾಗವಹಿಸಿದ್ದವು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.

ಎಕ್ಸಲೆಂಟ್ ಮೂಡುಬಿದಿರೆ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Article Image

ಎಕ್ಸಲೆಂಟ್ ಮೂಡುಬಿದಿರೆ: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಪರಿವರ್ತನಾಶೀಲವಾದ ಪ್ರಪಂಚದಲ್ಲಿ ಬದುಕೆನ್ನುವುದು ಪ್ರವೃತ್ಯಾತ್ಮಕ ನೈಜ ಪ್ರವಾಹ ಚೇತನ ಅದರ ಕೇಂದ್ರ ಇಂದಿನ ಸಮಾಜಕ್ಕೆ ಅವಕಾಶಗಳು ಮುಕ್ತವಾಗಿದೆ. ಚೇತನವನ್ನು ಕೇಂದ್ರವಾಗಿರಿಸಿಕೊಂಡು, ವೃತ್ತಿ ನಿರಂತರ ಮಾರ್ಗದರ್ಶನದೊಂದಿಗೆ ಶ್ರದ್ಧೆ, ಅಭ್ಯಾಸದೊಂದಿಗೆ ಮುಂದುವರಿದಲ್ಲಿ ವೃತ್ತಿಯಲ್ಲಿ ಯಶಸ್ಸು ಶತಸಿದ್ಧ. ಎರಡು ದಶಕಗಳ ಹಿಂದೆ ಇದ್ದಷ್ಟು ಕಷ್ಟ ಈಗಿಲ್ಲ ಈಗ ಸರಿಯಾದ ವೃತ್ತಿಯಲ್ಲಿ ಮುಂದೆ ಸಾಗುವುದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಮಾರ್ಗದರ್ಷನ ನೀಡುವ ತಜ್ಞರಿದ್ದಾರೆ. ವಾಣಿಜ್ಯ ವಿಭಾಗದ ಭವಿಷ್ಯ ಉಜ್ವಲವಾಗಿದೆ ಎಂದು ಹಿರಿಯ ಚಾರ್ಟೆಡ್ ಅಕೌಂಟೆಂಟ್, ಆರ್.ಎಸ್. ಭಟ್ ಮತ್ತು ಕೊ.ನ ಸಿಎ ರಘುಪತಿ ಎಸ್. ಭಟ್ ಹೇಳಿದರು. ಅವರು ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ಪಿಪಿಕೆ ಎಸೋಷಿಯೇಟ್ಸ್ ಮುಖ್ಯಸ್ಥರಾದ ಸಿಎ ಪ್ರಶಾಂತ್ ಪೈ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ಆದ ನಂತರ ಇರುವ ಬಹು ಆಯ್ಕೆಗಳ ವಿವರಣೆ ನೀಡುತ್ತಾ ಏಕಾಗ್ರತೆ ಹಾಗೂ ಬದ್ಧತೆಯಿಂದ ಸಿಎ ಉತ್ತೀರ್ಣರಾಗಬಹುದು ತನ್ಮೂಲಕ ಆರ್ಥಿಕವಾಗಿ ಬಲಿಷ್ಠರಾಗಬಹುದು ಎಂದರು. ಸಮಾರಂಭದ ಅಧ್ಯಕ್ಷರಾದ ಎಕ್ಸಲೆಂಟ್ ಮೂಡುಬಿದಿರೆಯ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಭಾರತದ ಆರ್ಥಿಕ ನೀತಿಯಲ್ಲಿ ವಾಣಿಜ್ಯ ವಿಭಾಗದ ಪಾತ್ರ ಬಹಳ ದೊಡ್ಡದು. ಈಗಲೂ ಭಾರತದಲ್ಲಿ ಸಿಎ ಉತ್ತೀರ್ಣರಾದವರಿಗೆ ಬಹಳಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಎತ್ತರಕ್ಕೇರುವ, ಆರ್ಥಿಕವಾಗಿ ಸದೃಢವಾಗುವ ಉಳಿದವರಿಗೆ ನೆರವಾಗುವ ಹಳ್ಳಿಯಿಂದ ರಾಷ್ಟ್ರ ರಾಜಧಾನಿಯ ತನಕ ಅನಿವಾರ್ಯವಾಗಿರುವ ಸಿಎ ವೃತ್ತಿ ಆಯ್ಕೆ ಮಾಡಿ ಕಠಿಣ ಪರಿಶ್ರಮದಿಂದ ಮುಂದುವರಿದರೆ ನಿಮ್ಮೆಲ್ಲರ ಭವಿಷ್ಯ ಭದ್ರವಾಗುವುದು ಅಲ್ಲದೆ ಉಳಿದ ವೃತ್ತಿಗಳ ಸರಿಯಾದ ಆಯ್ಕೆ ನಿಮ್ಮ ಮುಂದಿನ ನಡೆಗಳನ್ನು ಬಲಿಷ್ಠಗೊಳಿಸುವುದು ಎಂದರು. ಬಳಿಕ ಭಾರತೀಯ ಸನದಿ ಲೆಕ್ಕಿಗರ ಸಂಘದ ವತಿಯಿಂದ ಸಿಎ ಆಕಾಶ್‌ದೀಪ್ ಹಾಗೂ ಸಿಎ ವೃಂದಾ ಕೊನ್ನರ್ ಅವರಿಂದ ವಾಣಿಜ್ಯ ವಿಭಾಗ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಯಿತು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಖಿತಾ ಸ್ವಾಗತಿಸಿ ಅದಿತಿ ಕಾರ್ಯಕ್ರಮ ನಿರೂಪಿಸಿದರು.

15ನೇ ಆವೃತ್ತಿಯ ಆಳ್ವಾಸ್ ಪ್ರಗತಿ 2873 ಮಂದಿಗೆ ಉದ್ಯೋಗ, 288 ಕಂಪನಿಗಳು ಭಾಗಿ

Article Image

15ನೇ ಆವೃತ್ತಿಯ ಆಳ್ವಾಸ್ ಪ್ರಗತಿ 2873 ಮಂದಿಗೆ ಉದ್ಯೋಗ, 288 ಕಂಪನಿಗಳು ಭಾಗಿ

ಮೂಡುಬಿದಿರೆ: 15ನೇ ಆವೃತ್ತಿಯ "ಆಳ್ವಾಸ್ ಪ್ರಗತಿ" ಬೃಹತ್ ಉದ್ಯೋಗ ಮೇಳ ಆಗಸ್ಟ್ 2 ರಂದು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಸಮಾಪನಗೊಂಡಿತು. ಎರಡು ದಿನಗಳ ಕಾಲ ನಡೆದ ಉದ್ಯೋಗ ಮೇಳದಲ್ಲಿ, 2873 ಉದ್ಯೋಗಾಕಾಂಕ್ಷಿಗಳನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಯಿತು. ಭಾಗವಹಿಸಿದ ಒಟ್ಟು 288 ಕಂಪನಿಗಳ ಪೈಕಿ 260 ಕಂಪೆನಿಗಳು, 3734 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಒಟ್ಟು 14,245 ಅಭ್ಯರ್ಥಿಗಳು 2 ದಿನದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು. ದುಬೈ ಮೂಲದ ಫಾರ್ಚುನ್ ಸಂಸ್ಥೆಯು 5 ಅಭ್ಯರ್ಥಿಗಳನ್ನು 5 ರಿಂದ 8 ಲಕ್ಷ ವಾರ್ಷಿಕ ವೇತನದ ಹುದ್ದೆಗೆ ಆಯ್ಕೆ ಮಾಡಿದ್ದು, 25 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಗೊಂಡಿದ್ದಾರೆ. ನಾರಾಯಣ ಹೃದಯಾಲಯವು 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಮತ್ತು ಅಂತಿಮ ಸುತ್ತಿನ ಸಂದರ್ಶನಕ್ಕೆ 28 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. ಝೀ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಅಂತಿಮ ಸುತ್ತಿಗೆ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೌದಿ ಅರೇಬಿಯಾ ಮೂಲದ ಎಕ್ಪರ್ಟೈಸ್ ಕಂಪೆನಿಯು 37 ಜನರನ್ನು ನೇಮಿಸಿಕೊಂಡಿದೆ. ಮುಂಬೈ ಮೂಲದ ಆಲ್‌ಕಾರ್ಗೋ ಲಾಜಿಸ್ಟಿಕ್ಸ್ 3 ರಿಂದ 5 ಲಕ್ಷ ವರೆಗಿನ ವಾರ್ಷಿಕ ವೇತನವಿರುವ ಹುದ್ದೆಗಳಿಗೆ 9 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ತೇಜಸ್ವಿನಿ ಗ್ರೂಪ್ಸ್ ವಾರ್ಷಿಕ 6 ಲಕ್ಷ ಪ್ಯಾಕೇಜ್‌ಗೆ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇನ್‌ಫೋಸಿಸ್ ಬಿಪಿಎಂ ಕಂಪೆನಿಯು 79 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್‌ಯಂಗ್ ಸಂಸ್ಥೆಯು 20 ಅಭ್ಯರ್ಥಿಗಳನ್ನು 4.36 ದಿಂದ 8.36 ಲಕ್ಷದ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿಕೊಂಡಿದೆ.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟ್‌ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ

Article Image

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟ್‌ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಂದನ್ ಬಿ.ಎಂ, ಉಸ್ಮಾ, ಪ್ರೇಕ್ಷಾ ಹಾಗೂ ಸಾವನ್ ಶೆಟ್ಟಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಆಯೋಜಿಸಿದ್ದ 48ನೇ ಸರಣಿಯ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಅವರು ತಯಾರಿಸಿದ ಪ್ರಾಜೆಕ್ಟ್‌ಗೆ ‘ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿ ಲಭಿಸಿತು. ಒಟ್ಟು ಈ ವಿಭಾಗದಲ್ಲಿ 496 ಪ್ರಾಜೆಕ್ಟ್‌ಗಳು ಸ್ಪರ್ಧೆಗೆ ಆಗಮಿಸಿದ್ದವು. ಮೆಕ್ಕುಜೋಳದ ಒಣಗಿದ ಸಿಪ್ಪೆಯಿಂದ ಕಪ್ ತಯಾರಿಕಾ ಯಂತ್ರದ ಅಭಿವೃದ್ಧಿಗಾಗಿ ಈ ಪ್ರಶಸ್ತಿ ಪಡೆದುಕೊಂಡರು. ಪರಿಸರ ಸ್ನೇಹಿ ಆವಿಷ್ಕಾರ ಮತ್ತು ದಕ್ಷತೆಯ ಹಿನ್ನೆಲೆಯಲ್ಲಿ ಈ ಪ್ರಾಜೆಕ್ಟ್ ಮೌಲ್ಯಮಾಪನಾ ಸಮಿತಿಯ ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು. ಈ ಪ್ರಾಜೆ‌ಕ್ಟ್‌ಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೆ. ವಿ. ಸುರೇಶ್ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಶ್ಲಾಘಿಸಿದ್ದಾರೆ. ರೈತರಿಗೆ ಉಪಯೋಗವಾಗುವ ಯಂತ್ರ: 10 ರಿಂದ 12 ಡಿಗ್ರಿ ಬಿಸಿ ನೀರನ್ನು 4 ಗಂಟೆ, ತಣ್ಣೀರನ್ನು 5 ರಿಂದ 6 ಘಂಟೆ ಶೇಖರಿಸಬಹುದಾಗಿದೆ. ಒಂದು ಕಪ್‌ಗೆ 59ಪೈಸೆ ಖರ್ಚಾಗಲಿದ್ದು, ಒಂದು ರೂಪಾಯಿಗೆ ಮಾರಾಟ ಮಾಡಿದರೂ 41 ಪೈಸೆಯನ್ನು ಉಳಿಸಬಹುದಾಗಿದೆ. ಈ ಯಂತ್ರ ಒಂದು ಗಂಟೆಗೆ 114 ಕಪ್‌ಗಳನ್ನು ಉತ್ಪಾದನೆ ಮಾಡಬಲ್ಲದು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿ

ತೀವ್ರವಾದ ಬೆನ್ನುನೋವಿನಿಂದ ನಡೆಯಲು ಕಷ್ಡಪಡುತ್ತಿದ್ದ 58 ವರ್ಷ ವಯಸ್ಸಿನ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಆಗಮಿಸಿದ್ದರು. ಇಲ್ಲಿನ ವೈದ್ಯರು ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ಸಮಸ್ಯೆ ಇರುವ ಬಗ್ಗೆ ತಿಳಿಯಿತು. ಕನಿಷ್ಟ ಆಕ್ರಮಣಕಾರಿ (Minimal invasive) ಸರ್ಜರಿ ಮತ್ತು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆಯುತ್ತಿರುವ, ಈಗಾಗಲೇ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅನುಭವ ಹೊಂದಿರುವ ಇಲ್ಲಿನ ಮೂಳೆ ಶಸ್ತ್ರಚಿಕಿತ್ಸಕರಾಗಿರುವ ಡಾ| ಶತಾನಂದ ಪ್ರಸಾದ್ ರಾವ್ ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಮಹಿಳೆಯ ಎದೆಗೂಡಿನ ಬೆನ್ನುಮೂಳೆಯ ಭಾಗವಾಗಿರುವ ಡಿ-10 ಕಶೇರುಖಂಡದ ಮುರಿತವಾಗಿರುವುದು ಕಂಡುಬಂದಿತ್ತು. ಸಮಸ್ಯೆಯನ್ನು ಖಚಿತಪಡಿಸಿಕೊಂಡ ವೈದ್ಯರು ಕನಿಷ್ಟ ಆಕ್ರಮಣಕಾರಿ ಮೂಲಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಶೆಟ್ಟಿ ಸಹಕರಿಸಿದರು. ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ| ಶತಾನಂದ ಪ್ರಸಾದ್ ರಾವ್ ತಿಳಿಸಿದರು. ಡಾ| ಶತಾನಂದ ಪ್ರಸಾದ್ ರಾವ್ ಇವರು ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್. ಕೆ, ಇವರ ಜೊತೆಗೂಡಿ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಬಾರಿ ಸ್ವತಂತ್ರವಾಗಿ ಕನಿಷ್ಟ ಆಕ್ರಮಣಕಾರಿ ಸ್ಪೈನಲ್ ಸರ್ಜರಿಯನ್ನು ನಡೆಸಿದ್ದಾರೆ. ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ, ನುರಿತ ತಜ್ಞ ವೈದ್ಯರ ತಂಡದಿಂದ ಇಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನಾಚರಣೆ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನಾಚರಣೆ

ಎಸ್.ಡಿ.ಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಸಡು ಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ಲೇಖಾ ಮತ್ತು ಡಾ. ಆನಂದ್ ತಾವರಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಡಾ. ಸ್ವಾತಿ ಸೆಟ್ಟಿ,ಡಾ ಲೀನಾ ಹಾಗೂ ಇತರ ಶಿಕ್ಷಕ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಿಂಗಳಾದ್ಯಂತ ಹಮ್ಮಿಕೊಂಡಿದ್ದ ಹಲವರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು . ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಪ್ರಭಾವಶೀಲವಾದ ಬಾಯಿಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಾಟಕ ವಿಶೇಷ ಗಮನ ಸೆಳೆಯಿತು. ಆರೋಗ್ಯ ಕಾರ್ಯ ಚಟುವಟಿಕೆಯ ಭಾಗವಾಗಿ ರೋಗಿಗಳಿಗೆ ಓರಲ್ ಹೈಜಿನ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಉಜಿರೆ: ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

Article Image

ಉಜಿರೆ: ಸಾರ್ವಜನಿಕರಿಗಾಗಿ ಹೃದಯ ಪುನಶ್ಚೇತನ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ 27 ಜುಲೈ 2025 ರಂದು CPR (Cardiopulmonary Resuscitation) ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಅಗಸ್ಟೀನ್ ಟಿ.ಎ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೆವ್. ಫಾ. ಸುನಿಲ್ ಪೂವತಿಂಗಲ್ ಉಪಸ್ಥಿತರಿದ್ದರು. ತರಬೇತಿಯನ್ನು ನೀಡಲು ಎಸ್.ಡಿ.ಎಂ ಮಲ್ಟಿಸ್ಪೆಲಾಲಿಟಿ ಆಸ್ಪತ್ರೆಯ ನರ್ಸಿಂಗ್ ಸೂಪೆರಿಂಟೆಂಡೆಂಟ್ ಶೆರ್ಲಿ ಮತ್ತು ಅವರ ವೈದ್ಯಕೀಯ ತಂಡ ಹಾಜರಿದ್ದರು. ಅವರು ಸಾಮಾನ್ಯ ಜನರಿಗೆ CRP ತಂತ್ರಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ರಾಯೋಗಿಕವಾಗಿ ತರಬೇತಿಯನ್ನೂ ನೀಡಿದರು. ಸಂಘದ ಕಾರ್ಯದರ್ಶಿ ಶಿಜೋ ಜೋಸೆಫ್ ಸ್ವಾಗತ ಭಾಷಣ ಮಾಡಿದರು, ನಿರೂಪಣೆಯನ್ನು ನಿರ್ವಹಿಸಿದರು. ಉಪಾಧ್ಯಕ್ಷ ಮ್ಯಾಥ್ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್., ಸಂಘದ ಇತರ ಸದಸ್ಯರು ಹಾಗೂ ಊರಿನ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಮತ್ತು ತರಬೇತಿಯನ್ನು ಪಡೆದುಕೊಂಡರು. ಈ ಕಾರ್ಯಕ್ರಮ ಜನಜಾಗೃತಿ ಮೂಡಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಅತ್ಯಂತ ಪರಿಣಾಮಕಾರಿ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ

Article Image

ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯು ಭಾರತೀಯ ಮಕ್ಕಳ ಶಸ್ತ್ರಚಿಕಿತ್ಸೆ ಸಂಘ, ಕರ್ನಾಟಕ ರಾಜ್ಯ ಅಧ್ಯಾಯದ ಆಶ್ರಯದಲ್ಲಿ ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಮಕ್ಕಳ ಶಸ್ತ್ರಚಿಕಿತ್ಸಕರು ಭಾಗವಹಿಸಲಿದ್ದಾರೆ. ಸಮ್ಮೇಳನವು ಆಗಸ್ಟ್ 8 ರಿಂದ 10, 2025 ರವರೆಗೆ ನಡೆಯಲಿದೆ. ಆಗಸ್ಟ್ 8 ರಂದು, ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ (Kidney Stone) ಸಂಬಂಧಿಸಿದ ಕಾರ್ಯಾಗಾರವನ್ನು ನಡೆಸಲಾಗುವುದು. ಆಗಸ್ಟ್ 9 ಮತ್ತು 10, 2025 ರಂದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೈದ್ಯರಿಂದ ಅನೇಕ ಭಾಷಣಗಳು ನಡೆಯಲಿವೆ. ಈ ಸಮ್ಮೇಳನವು ಮಕ್ಕಳ ಶಸ್ತ್ರಚಿಕಿತ್ಸಕರಿಗೆ ತನ್ನ ರೋಗಿಗಳಿಗೆ ಚಿಕಿತ್ಸೆ ನೀಡಲು, ಹೆಚ್ಚು ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷರು, ಡಾ| ಅನಿಲ್ ಹಲಗೇರಿ ಬಿ, ಡಾ| ವಿಜಯ್ ಪೂಜಾರ್ ಸಿ ಮತ್ತು ಡಾ| ರಾಜಶಂಕರ್ ಸಂಕಲ್. ಕಾರ್ಯದರ್ಶಿಗಳಾಗಿರುವ, ಡಾ| ಅಕ್ಷಯ್ ಕಲವಂತ್ ಬಿ, ಡಾ| ರವೀಂದ್ರ ಜಿ ಖಾಸ್ನಿಸ್ ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

Article Image

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ. ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ನಿರ್ಮಾಣಕ್ಕೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ. ತಂತ್ರಜ್ಞಾನದ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಶಿಕ್ಷಕರ ಪಾತ್ರ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಮೌಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ, ವಿದ್ಯಾರ್ಥಿ ಕೇಂದ್ರಿತ, ನವಯುಗದ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕವೃಂದ ನಮ್ಮದಾಗಬೇಕು ಎಂದು ಆಶಿಸಿದರು. ಹೊಸ ದಿಗಂತ ಪತ್ರಿಕೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿಎಸ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ದೇಶ ಅಥವಾ ಸಮಾಜ ಶಿಕ್ಷಣದಿಂದ ರೂಪಿತವಾಗಬೇಕು. ಸಮಾಜದ ನಡೆ ಶಿಕ್ಷಣದಿಂದ ನಿರ್ಧರಿತವಾಗಬೇಕು. ಸತ್ಯದ ದಾರಿಯಲ್ಲಿ ಮೌಲ್ಯವನ್ನು ಹೆಚ್ಚಿಸುವುದೇ ಶಿಕ್ಷಣ. ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಆಸ್ಥೆಯ, ಅಪರಿಗ್ರಹದಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಸ್ವಾಭಿಮಾನಿ ಸಮಾಜ ನಿರ್ಮಾಣವಾಗಬೇಕೆಂದರೆ ಅಂತಹ ಶಿಕ್ಷಣ ನೀಡಬೇಕು ಎಂದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್ ಡಾ. ಹೆಚ್ ಎಸ್ ಬಲ್ಲಾಳ್ ಹಾಗೂ ಸರಸ್ವತಿ ಸಮೂಹ ವಿದ್ಯಾಸಂಸ್ಥೆ ಮೇಘಾಲಯದ ಸ್ಥಾಪಕರು ಹಾಗೂ ಸಂವಿಧಾನ ತಜ್ಞ ಡಾ. ಅನಂತಕೃಷ್ಣ ಭಟ್‌ರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್, ಡಾ ಹೆಚ್ ಎಸ್ ಬಲ್ಲಾಳ, ಈ ತರಹದ ಗುರುತಿಸುವಿಕೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರೆಪಿಸುತ್ತದೆ. ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಇನ್ನೊಬ್ಬರಿಗಾಗಿ ಬದುಕಿದರೆ, ಅದೇ ಶ್ರೇಷ್ಠ ಬದುಕು ಎಂದು ನುಡಿದರು. ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಸಾಧನೆಗಾಗಿ ಅತ್ಯುತ್ತಮ ಆಡಳಿತ ನಿರ್ವಾಹಕ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಪ್ರಾಚರ‍್ಯ ಡಾ ಕುರಿಯನ್ ಹಾಗೂ ಮಂಗಳೂರಿನ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಇವರಿಗೆ ನೀಡಲಾಯಿತು. ಸಂಶೋಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಣಿಪಾಲ್ ಯೂನಿವರ್ಸಿಟಿಯ, ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊ. ಹರೀಶ್ ಜೋಶಿ ಹಾಗೂ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶಾಂತರಾಮ ರೈ ಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕಿ ಡಾ ಸುಭಾಷಿಣಿ ಶ್ರೀವತ್ಸ ಹಾಗೂ ಅಜ್ಜರಕಾಡಿನ ಡಾ ಜಿ ಶಂಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಜೇಂದ್ರ ಪಿ ಇವರಿಗೆ ನೀಡಲಾಯಿತು. ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರೊ. ವಿಜಯಲತಾ ಹಾಗೂ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯಶೋಧರಿಗೆ ನೀಡಿ ಗೌರವಿಸಲಾಯಿತು. ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿಯನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಡಾ. ರಾಧಾಕೃಷ್ಣ ಹಾಗೂ ವಿರಾಜಪೇಟೆಯ ಕಾವೇರಿ ಕಾಲೇಜಿನ ತಮ್ಮಯ್ಯರಿಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 2025ನೇ ಸಾಲಿನಲ್ಲಿ ಪಿಹೆಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಮಂಗಳೂರು ವಿವಿಯ ಕುಲಸಚಿವ ಡಾ ಪಿಎಲ್ ಧರ್ಮಾ, ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್, ಕೆಆರ್‌ಎಂಎಸ್‌ಎಸ್‌ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ ಮಹಾದೇಶ ಸಿ, ಡಾ ಎಸ್ ಬಿ ಎಂ ಪ್ರಸನ್ನ, ಕೆಆರ್‌ಎಂಎಸ್‌ಎಸ್‌ನ ಮಂಗಳೂರು ವಿಭಾಗದ ಅಧ್ಯಕ್ಷೆ ವಾಣಿ ಯುಎಸ್, ಕಾರ‍್ಯದರ್ಶಿ ರಾಜೇಶ್ ಇದ್ದರು. ಕೆಆರ್‌ಎಂಎಸ್‌ಎಸ್‌ನ ಮಮತಾ ಶೆಟ್ಟಿ ಹಾಗೂ ವೆಂಕಟೇಶ್ ನಾಯಕ್ ಕಾರ‍್ಯಕ್ರಮ ನಿರೂಪಿಸಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

Article Image

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

ಎಸ್.ಡಿ.ಎಂ. ಬಯೋಮೆಡಿಕಲ್ ಸೈನ್ಸಸ್ ಇನ್‌ಸ್ಟಿಟ್ಯೂಟ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳ ರಾಷ್ಟ್ರೀಯ ಸ್ವಯಂ ಸೇವಕ ಘಟಕಗಳು ಜಂಟಿಯಾಗಿ ಜುಲೈ 24, 2025ರಂದು ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿತು. ಸಹ ಉಪ ಕುಲಪತಿಗಳು (ಆಡಳಿತ) ಶ್ರೀ ವಿ. ಜೀವಂಧರ್ ಕುಮಾರ್ ಮತ್ತು ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ನಗರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ. ಶಿವರಾಜ್ ಕೆ. ಕಟಕಭಾವಿ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಮಾದಕವಸ್ತು ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಮಂಜುನಾಥ್ ಸುಣಗಾರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ. ಶಿವರಾಜ್ ಕಟಕಭಾವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ; ವಿದ್ಯಾರ್ಥಿಗಳು ಶ್ರಮವಹಿಸಿ ಕಲಿಯುವ ಮುಖೇನ ಸಂತೃಪ್ತಿಯನ್ನು ಪಡೆಯಬೇಕು. ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗದೇ ಅದರಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಲ್ಲದೇ ಇಡೀ ಕುಟುಂಬದ ಶಾಂತಿಯನ್ನು ಹಾಳು ಮಾಡುತ್ತದೆ. ವಿಷಕಾರಕವಾದ ಮಾದಕ ವಸ್ತುಗಳ ಸೇವನೆಯಿಂದ ಹಂತ ಹಂತವಾಗಿ ದೇಹದ ಎಲ್ಲಾ ಅಂಗಗಳನ್ನು ಹಾನಿಗೊಳಗಾಗುತ್ತವೆ. ಕ್ಷಣಿಕ ಸಂತೋಷಕ್ಕಾಗಿ ಅಮೂಲ್ಯವಾದ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಶಿಕ್ಷಣ ಮತ್ತು ಇಡೀ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿಕೊಳ್ಳುವ ಯಾವುದೇ ರೀತಿಯ ಅಪರಾಧ ಕೃತ್ಯಗಳ ಬಗ್ಗೆ ನಾವು ಯೋಚಿಸಬಾರದು. ನಾವೆಲ್ಲರೂ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆಯ ಕುರಿತಾದ ಕಾನೂನುಗಳನ್ನು ಅನುಸರಿಸಬೇಕು. ಭಾರತವನ್ನು ಮಾದಕ ವಸ್ತುಗಳ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಆರೋಗ್ಯಕರ ಶೈಕ್ಷಣೀಕ ಪರಿಸರ ಹೊಂದಲು ಆತಂರಿಕ ಮಾದಕ ವಸ್ತು ವಿರೋಧಿ ಸಮಿತಿಯನ್ನು ರಚಿಸಲು ಸಲಹೆ ಮಾಡಲಾಯಿತು. ಡಾ. ಮಂಜುನಾಥ್ ಸುಣಗಾರ ಅವರು ವಿವಿಧ ಮಾದಕ ದ್ರವ್ಯ ವಸ್ತುಗಳ ಪರಿಚಯ, ಸೇವನೆಯ ದುಷ್ಪರಿಣಾಮ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಮುಂಜಾಗೃತಿಯನ್ನು ಮೂಡಿಸಿದರು. ಡಾ. ಶಿವರಾಜ್ ಕಟಕಭಾವಿ ಮತ್ತು ಡಾ. ಮಂಜುನಾಥ್ ಸುಣಗಾರ ಅವರನ್ನು ಎಸ್.ಡಿ.ಎಂ. ಸಂಸ್ಥೆವತಿಯಿಂದ ಗಣ್ಯರು ಸನ್ಮಾನಿಸಿದರು. ಸಂಶೋಧನಾ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಡಾ. ಅಜಯಕುಮಾರ್ ಓಲಿ ಮತ್ತು ಪ್ರಸನ್ನ ದೇಶಪಾಂಡೆ, ಎನ್.ಎನ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ರೇಣುಕಾರಾಧ್ಯ ಕೆ. ಮಠ, ಅಧ್ಯಾಪಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಮೇಘನಾ ಹೆಗ್ಡೆ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಮೈಜಾ ಶಿಬಾರಗಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಸುಸ್ಥಿರ ಆರೋಗ್ಯಕ್ಕೆ ಸ್ವಚ್ಛ ಪರಿಸರ : ರಶ್ಮಿತಾ ಜೈನ್

Article Image

ಸುಸ್ಥಿರ ಆರೋಗ್ಯಕ್ಕೆ ಸ್ವಚ್ಛ ಪರಿಸರ : ರಶ್ಮಿತಾ ಜೈನ್

ಕಲ್ಲಬೆಟ್ಟು  : ನೆಲ, ಜಲ, ಪ್ರಕೃತಿಯ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಉಸಿರಾಡುವುದಕ್ಕೆ ಹಸಿರು ಪ್ರಕೃತಿಯ ಅವಶ್ಯಕತೆ ಇದೆ.  ಸದೃಢ ಆರೋಗ್ಯಕ್ಕೆ ಸ್ವಚ್ಛ ಪರಿಸರ ಅತ್ಯಗತ್ಯ. ಇಂದು ನಾವು ನೆಡುವ ಗಿಡಗಳು ಮುಂದಿನ ಪೀಳಿಗೆಗೆ ವರದಾನವಾಗಬೇಕು. ಯುವ ಪೀಳಿಗೆ ಕ್ರಿಯಾಶೀಲವಾದಷ್ಟು ಹಿರಿಯರಿಂದ ಪ್ರೋತ್ಸಾಹ ದೊರಕುತ್ತದೆ. ಪರಿಸರ ಸಂರಕ್ಷಣೆಯತ್ತ ವಿದ್ಯಾರ್ಥಿಗಳ ಮನೋಭಾವ ಬೆಳೆಸುವ ನಿಟ್ಟಿನಲ್ಲಿ, ಸಾಮಾಜಿಕ ಜಾಗೃತಿ ಮೂಡಿಸುವ ನೆಲೆಯಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ “ಸಸ್ಯ ಶ್ಯಾಮಲಾ” ಎಂಬ ಶೀರ್ಷಿಕೆಯಡಿ ಮೂಡುಬಿದಿರೆ ಸುತ್ತಮುತ್ತ ಪರಿಸರದಲ್ಲಿ 1000 ಗಿಡಗಳನ್ನು  ನೆಟ್ಟು ಸಂರಕ್ಷಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಸಾಮಾಜಿಕ ಜಾಗೃತಿಯ ಘೋಷ ವಾಕ್ಯಗಳು ನಮ್ಮ ಮನಸ್ಸಿನಲ್ಲಿ ಉತ್ಸಾಹವನ್ನು ತುಂಬಿ ದೈನಂದಿನ ಬದುಕಿನಲ್ಲಿ ಹೃದಯಪೂರ್ವಕವಾಗಿ ಆಚರಣೆಗೆ ತಂದಾಗ ಅರ್ಥಪೂರ್ಣ ಕಾರ್ಯಕ್ರಮ ವಾಗುತ್ತದೆ. ಮತ್ತು ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಾಮಾಜಿಕ ಕರ್ತವ್ಯಗಳ ಬಗ್ಗೆ ಯೋಚಿಸುತ್ತ  ಕಾರ್ಯ ಪ್ರವೃತ್ತರಾದಾಗ ಸ್ವಚ್ಛ ಪರಿಸರ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು. ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್’, ಜವಾಹರಲಾಲ್ ನೆಹರು ಪ್ರೌಢಶಾಲೆ, ಶಿರ್ತಾಡಿ, ಜೀವ ನಿಧಿ ಸೇವಾ ಬಳಗ ಆರ್.ಸಿ.ಸಿ. ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸಸ್ಯ ಶ್ಯಾಮಲಾ ವನಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‌ನ ಅಧ್ಯಕ್ಷ ರೊ. ಹರೀಶ್ ಎಂ.ಕೆ. ಅವರು ಮಾತನಾಡುತ್ತ ಎಕ್ಸಲೆಂಟ್ ಸಂಸ್ಥೆಯು ಸಸ್ಯ ಶಾಮಲಾ ಯೋಜನೆಯ ಮೂಲಕ ಜನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ರೋಟರಿ ಸಂಸ್ಥೆ ಸದಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸುತ್ತ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆಯ ಹೊಣೆಗಾರಿಕೆಗೆ ವಿದ್ಯಾರ್ಥಿಗಳ ತಂಡವನ್ನು ರಚಿಸಿದರು. ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಆಗ್ನೆಸ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಜನಾರ್ದನ ಸೇರಿಗಾರ್, ಜೀವ ನಿಧಿ ಸೇವಾ ಬಳಗ ಆರ್.ಸಿ.ಸಿ.ಯ ಅಧ್ಯಕ್ಷ ಶಶಿಧರ್ ದೇವಾಡಿಗ ಗೆಂದೊಟ್ಟು, ರಾಷ್ಟ್ರ ಸೇವಿಕಾ ಸಮಿತಿಯ ಅಧ್ಯಕ್ಷೆ ಮೂಕಾಂಬಿಕಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಸ್ವಾಗತಿಸಿ. ಎಕ್ಸಲೆಂಟ್ ಸಂಸ್ಥೆಯ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕಿ ಸುಮಂಗಲಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಮಾಲತಿ ವಂದಿಸಿದರು. ಕಾರ್ಯಕ್ರಮದ ನಂತರ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮತ್ತು ಶಿರ್ತಾಡಿ ಜವಾಹರಲಾಲ್ ನೆಹರೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಕ್ಸಲೆಂಟ್ ಸಂಸ್ಥೆ ಒದಗಿಸಿದ ವಿವಿಧ ತಳಿಯ ಗಿಡಗಳನ್ನು ಶಾಲೆಯ ನೆಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜು ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ. ಕಾಲೇಜು ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಉಜಿರೆಯ ರತ್ನಮಾನಸದಲ್ಲಿ ಜು.20ರಂದು ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರತ್ನಮಾನಸದ ಮೇಲ್ವಿಚಾರಕರಾದ ಯತೀಶ್ ಬಳಂಜ ಇವರು ನೇಜಿ ನೆಡುವ ವಿಧಾನ ಹಾಗೂ ಜಗದೀಶ ಮುಂಡಾಜೆ ಇವರು ಭತ್ತದ ಕೃಷಿಯ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಪ್ರಥಮ ಮತ್ತು ತೃತೀಯ ಬಿ.ಎಸ್ಸಿಯ ಸುಮಾರು 25 ವಿದ್ಯಾರ್ಥಿಗಳು ಉತ್ಸಾಹದಿಂದ ಜೊತೆಗೂಡಿ ನೇಜಿ ನಾಟಿ ಮಾಡಿ ಸಂಭ್ರಮಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಕುಂತಲಾ. ಬಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಭವ್ಯ ನಾಯಕ್ ಮತ್ತು ಮಂಜುಶ್ರೀ ಉಪಸ್ಥಿತರಿದ್ದರು.

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

Article Image

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

ವಯೋಸಹಜವಾಗಿ ಮೈಗೂಡುವ ಋಣಾತ್ಮಕ ಚಿಂತನೆಗಳನ್ನು ತೊರೆದಾಗ ಮನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಮನಃಶಾಸ್ತ್ರ (ಸ್ನಾತಕೋತ್ತರ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಅವರು ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ ಉದ್ಘಾಟಿಸಿ, ‘ಕಾಲೇಜು ಜೀವನದಲ್ಲಿ ಮಾನಸಿಕ ಆರೋಗ್ಯದ ಪೋಷಣೆ’ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬರಬೇಕು. ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನು ಸ್ವೀಕರಿಸಿ, ತಾಳ್ಮೆಯಿಂದ ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮನಸು ಮತ್ತು ಮೆದುಳಿನ ಸಮತೋಲನ ನಿರ್ವಹಣೆಯಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು. “ಮನಸ್ಸಿನ ದುಗುಡಗಳನ್ನು ನಮಗೆ ಸೂಕ್ತ ಎನಿಸುವ ವ್ಯಕ್ತಿಯ ಜೊತೆ ಹಂಚಿಕೊಂಡಾಗ ಮಾತ್ರ ಅವುಗಳಿಗೆ ಪರಿಹಾರ ಸಾಧ್ಯ. ನಮ್ಮ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕು ಎಂಬುದರ ಬಗ್ಗೆ ನಮಗೆ ಅರಿವಿರಬೇಕು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇದೆ. ಅವುಗಳನ್ನು ಹುಡುಕುವ ತಾಳ್ಮೆ ಮೈಗೂಡಬೇಕು” ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಪ್ರತಿಯೊಂದು ವಿಚಾರಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ನಿಲ್ಲಿಸಿ ತಮ್ಮ ಮೆದುಳಿಗೆ ಕೆಲಸ ಕೊಡಬೇಕು. ಹಾಗಾದಾಗ ಮಾತ್ರ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಯುವಜನತೆ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ವಿಷಯವಾರು ಸಂಘ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮನೋರಂಜನೆಯ ಉದ್ದೇಶಕ್ಕಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಂದರು. ರಸಾಯನಶಾಸ್ತ್ರ ವಿಭಾಗವು ಹಿಂದಿನಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಆ ಯಶಸ್ಸನ್ನು ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿಗಳು ತಯಾರಿಸಿದ ‘ಸ್ಪಟಿಕ’ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ., ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮೌಲ್ಯ ಮತ್ತು ಸಿಂಚನ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಶಾಂತ್ ಸ್ವಾಗತಿಸಿ, ಜೋಷ್ಣಾ ವಂದಿಸಿ, ಅನ್ವಿತಾ ಸೇರಾ ಕಾರ್ಯಕ್ರಮ ನಿರೂಪಿಸಿದರು.

ದ. ಕ. ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಕಾರ್ಯಾಗಾರ

Article Image

ದ. ಕ. ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಕಾರ್ಯಾಗಾರ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಎಂ. ಆಳ್ವ ಗಣಿತವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಎಲ್ಲಾ ತಾರ್ಕಿಕ ವಿಜ್ಞಾನಗಳಿಗೆ ಹೇಗೆ ಅಡಿಪಾಯವನ್ನು ಹಾಕುತ್ತದೆ ಎಂಬುದನ್ನು ಉಲ್ಲೇಖಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಆದರೆ ಜೆ.ಇ.ಇ., ಎನ್.ಎ.ಟಿ.ಎ., ಎನ್.ಡಿ.ಎ., ಬಿ. ನಂತಹ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಬಂದಾಗ ವಿದ್ಯಾರ್ಥಿಗಳು ಹಿಂದುಳಿಯುತ್ತಾರೆ. ಪಿ.ಯು.ಸಿ. ಮಟ್ಟದಲ್ಲಿ ಫಲಿತಾಂಶಗಳನ್ನು ಹೆಚ್ಚಿಸಲು ಗಣಿತದ ಅಡಿಪಾಯವನ್ನು ಬಲಪಡಿಸಲು ಉಪನ್ಯಾಸಕರು ಕಾರ್ಯ ಪ್ರವೃತರಾಗಬೇಕೆಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ, ಶಿಕ್ಷಕರು ಕೇವಲ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು, ಇಲ್ಲವಾದರೆ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವಿದ್ಯಾರ್ಥಿಗಳು ಗಣಿತದಲ್ಲಿ ಏಕೆ ಹಿಂದುಳಿಯುತ್ತಾರೆ ಎಂಬುದಕ್ಕೆ ಉದಾಹರಣೆಗಳನ್ನು ನೀಡಿದರು. ಗಣಿತ ಮತ್ತು ಭೌತಶಾಸ್ತ್ರವು ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಡಾ. ಪ್ರಶಾಂತ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ 'ದಿ ಬುಕ್ ಮ್ಯಾಥ್ ಮೇಡ್ ಈಸಿ' ಪುಸ್ತಕದ 8ನೇ ಆವೃತ್ತಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಗಣಿತ ಶಿಕ್ಷಕಿ ಸೀತಾ ಹಾಗೂ ಪುಸ್ತಕದ ಸಂಪಾದಕೀಯ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಮುಂಬರುವ ಶೈಕ್ಷಣಿಕ ವರ್ಷದ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಲಾರೆನ್ಸ್ ಸಿಕ್ವೆರಿಯಾ, ಉಪಾಧ್ಯಕ್ಷ ಆದರ್ಶ್ ಚೊಕ್ಕಾಡಿ, ಕಾರ್ಯದರ್ಶಿ ಅನುಪಮಾ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ವರುಣ್ ಪ್ರಭು, ವೆಲಿಟ, ಲೋಹಿತ್ ಸಾಲ್ಯಾನ್ ಹಾಗೂ ಸುಕನ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರನಾಥ್ ಬರ್ವೆ ವಂದಿಸಿದರು.

ಅಡಕೆ ಕೊಳೆರೋಗ ನಿರ್ವಹಣೆಗೆ ರೈತರಿಗೆ ಸಹಾಯಧನ

Article Image

ಅಡಕೆ ಕೊಳೆರೋಗ ನಿರ್ವಹಣೆಗೆ ರೈತರಿಗೆ ಸಹಾಯಧನ

ಮಂಗಳೂರು: ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಲವೆಡೆ ಅಡಕೆ ಯಲ್ಲಿ ಕೊಳೆರೋಗ ಕಾಣಿಸಿಕೊಂಡಿರುವುದು ತೋಟ ಗಾರಿಕೆ ಇಲಾಖೆಯ ಗಮನಕ್ಕೆ ಬಂದಿದೆ. ಅಡಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶ, ಕೀಟ, ರೋಗ ನಿರ್ವಹಣೆ ಸಂಬಂಧ ಗೊಬ್ಬರ, ಸೂಕ್ಷ್ಮ ಪೋಷ ಕಾಂಶ, ಕೀಟನಾಶಕ, ಶಿಲೀಂಧ್ರನಾಶಕಗಳನ್ನು ಖರೀದಿ ಸುವ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪಯೋಜನೆಯಡಿ ಸಹಾಯಧನ ಸೌಲಭ್ಯ ಲಭ್ಯವಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ದ.ಕ. ತೋಟಗಾರಿಕೆ ಉಪ ನಿರ್ದೇಶಕ ಮಂಜುನಾಥ ಡಿ. ತಿಳಿಸಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಿ : ಡಾ. ಮಂಜುನಾಥ್ ಶ್ರೀಪಾದ್ ರೇವಣಕರ್

Article Image

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಿ : ಡಾ. ಮಂಜುನಾಥ್ ಶ್ರೀಪಾದ್ ರೇವಣಕರ್

ಮೂಡುಬಿದಿರೆ : ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ 2025 26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೂರಜ್ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರೊಟೇರಿಯನ್ ಪಿ.ಎಚ್.ಎಫ್ ಡಾ. ಮಂಜುನಾಥ್ ಶ್ರೀಪಾದ್ ರೇವಣಕರ್ ಇವರು ಆಗಮಿಸಿದ್ದರು. ಗೌರವ ಅತಿಥಿಗಳಾದ ಅಡ್ವೋಕೇಟ್ ಪದ್ಮಪ್ರಸಾದ್ ಜೈನ್, ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಶಾಲಾ ಪ್ರಾಂಶುಪಾಲರಾದ ಪ್ರಸಾದ್ ಇವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿ ನಾಯಕತ್ವದ ಗುಣವನ್ನು ಎಳವೆಯಲ್ಲಿಯೇ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ರವರು ತಿಳಿಸಿದರು. ಈ ಶುಭ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಯಕತ್ವದ ಗುಣ ದೊಡ್ಡ ಗುಣ. ಶಿಕ್ಷಣದೊಂದಿಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಎಲ್ಲಿ ಸಂಸ್ಕಾರವಿರುತ್ತದೆಯೋ ಅಲ್ಲಿ ಶಿಕ್ಷಣವಿರುತ್ತದೆ ಶಾಲಾ ಸುಧಾರಣೆ ಮಕ್ಕಳ ಕೈಯಲ್ಲಿದೆ ಎಂದು ಮುಖ್ಯ ಅತಿಥಿಗಳಾದ ಡಾ. ಮಂಜುನಾಥ್ ಶ್ರೀಪಾದ್ ರೇವಣ್‌ಕರ್ ರವರು ತಿಳಿಸಿದರು. ಗೌರವ ಅತಿಥಿಗಳಾದ ಪದ್ಮಪ್ರಸಾದ್ ಜೈನರವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗ್ರಹಿಕಾ ಸಾಮರ್ಥ್ಯ ಬಹಳ ಅವಶ್ಯಕತೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಮಾಣವಚನವನ್ನು ಸ್ವೀಕರಿಸಿ ಉದ್ಘಾಟನಾ ಸಮಾರಂಭವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಹರ್ಷಿತ ನೆರವೇರಿಸಿದರು. ಶಾಲಾ ನಾಯಕಿ ನಿರೀಕ್ಷಾ ಸ್ವಾಗತಿಸಿ, ಶಾಲಾ ನಾಯಕ ಶ್ರೀಕಾರ್ ಪಾಟೀಲ್ ವಂದಿಸಿದರು.

ಮೂಡುಬಿದರೆ : ವಿಚಾರ ವಿನಿಮಯ ಕಾರ್ಯಕ್ರಮ

Article Image

ಮೂಡುಬಿದರೆ : ವಿಚಾರ ವಿನಿಮಯ ಕಾರ್ಯಕ್ರಮ

ಮಂಗಳೂರು ತೋಟಗಾರಿಕಾ ಇಲಾಖೆ, ಮೂಡುಬಿದರೆ ಕೃಷಿ ವಿಚಾರ ವಿನಿಮಯ ಕೇಂದ್ರ ಮತ್ತು ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಜಂಟಿ ಆಶ್ರಯದಲ್ಲಿ ಜುಲೈ 19ರಂದು ಸಮಾಜ ಮಂದಿರದಲ್ಲಿ ಅನಾನಸು ಮತ್ತು ಡ್ರ್ಯಾಗನ್, ಹಣ್ಣುಗಳ ಉಪ ಉತ್ಪನ್ನ ಘಟಕ ಸ್ಥಾಪಿಸುವರೆ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ ಮಾತನಾಡಿ, ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ನೂರು ಪಟ್ಟು ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿದ್ದು ಯಾವುದೇ ಪರಿಸರದ ವಿನಾಶದ ಬಗ್ಗೆ ಮೊದಲೇ ತಿಳಿದಿರುತ್ತವೆ. ತೋಟಗಾರಿಕಾ ಬೆಳೆಗಳನ್ನು ಬೆಳೆಯುವಾಗ ಆಯಾ ಮಣ್ಣಿನ ಗುಣಮಟ್ಟ, ಪೂರಕಾಂಶಗಳನ್ನು ಸಮಗ್ರವಾಗಿ ತಿಳಿದುಕೊಂಡು ಮುಂದುವರಿಯಬೇಕಾಗುತ್ತದೆ ಎಂದು ತಿಳಿಸಿ ತೋಟಗಾರಿಕಾ ಬೆಳೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂವಾದದಲ್ಲಿ ಪ್ರಸ್ತುತಪಡಿಸಿದರು. ಹಣ್ಣಿನ ಯಾವುದೇ ಉಪ ಉತ್ಪನ್ನಗಳಾದ ಡ್ರೈ ಹಣ್ಣು, ಜ್ಯೂಸ್, ಇತ್ಯಾದಿ ತಯಾರಿಸುವಾಗ ಬಹಳ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹಾಗೂ ಶೇಖರಣಾ ಜಾಗರೂಕತೆಗಳ ಬಗ್ಗೆ ಮೊದಲೇ ತಿಳುವಳಿಕೆಯನ್ನು ಹೊಂದಿರಬೇಕಾಗುತ್ತದೆ ಎಂದು ವಿವೇಕ್ ಸೋನ್ಸ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಪ್ಪಿನಂಗಡಿಯ ಜೆರೋಮ್ ಸಂವಾದದಲ್ಲಿ ಭಾಗವಹಿಸಿ ಸ್ಥಾಪಿಸುವ ಸಂಘಕ್ಕೇ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನೀಡಿ ಸಹಕಾರಿ ಸಂಘದ ಏಳಿಗೆಗೆ ಒಂದಾಗಿರಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಅಮುಲ್ ನಂತಹ ಸಂಸ್ಕರಣ ಘಟಕವನ್ನು ಅನಾನಸ್ಸು ಹಣ್ಣಿಗಾಗಿ ಸ್ಥಾಪಿಸಿ ಮೂಡುಬಿದಿರೆಯ ಬ್ರ್ಯಾಂಡ್ ಉತ್ಪನ್ನವನ್ನು ಜಗತ್ತಿಗೆ ಪರಿಚಯಿಸುವ ಎಂದು ಕರೆಕೊಟ್ಟರು. ವೇದಿಕೆಯಲ್ಲಿ ರಾಜವರ್ಮ ಹಾಜರಿದ್ದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ್ ಕುಮಾರ್ ಸ್ವಾಗತಿಸಿದರು. ಜಿನೇಂದ್ರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ವಂದಿಸಿದರು.

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣವಾಚನ ಪ್ರವಚನ ಉದ್ಘಾಟನೆ

Article Image

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣವಾಚನ ಪ್ರವಚನ ಉದ್ಘಾಟನೆ

ಉಜಿರೆ: ಪುರಾಣ ಅಂದರೆ ಭಗವಂತನ ಕಥೆ. ಪುರಾಣ ವಾಚನ-ಪ್ರವಚನ ಎಂಬುದು ಜ್ಞಾನ ಯಜ್ಞ ಹಾಗೂ ಜ್ಞಾನ ಸತ್ರವಾಗಿದ್ದು ಆಸಕ್ತಿ ಮತ್ತು ತನ್ಮಯತೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಪುರಾಣ ವಾಚನ-ಪ್ರವಚನ ಶ್ರವಣದಿಂದ ಪ್ರತಿಯೊಬ್ಬರ ಮನದಲ್ಲೂ, ಮನೆಯಲ್ಲೂ ಸುಖ, ಶಾಂತಿ-ನೆಮ್ಮದಿ ನೆಲೆಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಡಾ. ಶಾಂತರಾಮ ಪ್ರಭು, ನಿಟ್ಟೂರು ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ 45ನೇ ವರ್ಷದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾಭಾರತ ಕಥೆ ಕೇಳಿ ಕುಷ್ಠ ರೋಗ ನಿವಾರಣೆಯಾಗಿದೆ ಎಂದು ಪುರಾಣದಿಂದ ತಿಳಿದು ಬಂದಿದೆ. ಪುರಾಣ ವಾಚನ-ಪ್ರವಚನವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸುವ ಸತ್ಸಂಗದಿಂದ ಪರಸ್ಪರ ಪ್ರೀತಿ-ವಿಶ್ವಾಸ, ಭ್ರಾತೃತ್ವ, ದಯೆ, ಅನುಕಂಪ ಮೊದಲಾದ ಮಾನವೀಯಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಓದುವ ಹವ್ಯಾಸದಿಂದ ನಮ್ಮ ಜ್ಞಾನಕ್ಷಿತಿಜ ವಿಸ್ತಾರವಾಗುತ್ತದೆ. ಊರಿನವರು ಹಾಗೂ ಧರ್ಮಸ್ಥಳಕ್ಕೆ ಬರುವ ಭಕ್ತರು ಕೂಡಾ ಪುರಾಣ ವಾಚನ-ಪ್ರವಚನದ ಸದುಪಯೋಗ ಪಡೆದು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸುಪ್ರಿಯಾಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ದೇವಳದ ಪಾರುಪತ್ಯಹಾರರಾದ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಪುರಂದರ ಭಟ್, ಉದಯಕುಮಾರ್ ಜೈನ್, ಚಂದ್ರಕಾಂತ್, ಮಹಾವೀರ ಅಜ್ರಿ, ಸಂತೋಷ್, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ನಿಶಾಂತ್ ಧನ್ಯವಾದವಿತ್ತರು. ಕುಮಾರವ್ಯಾಸ ವಿರಚಿತ “ಕರ್ಣಾಟ ಭಾರತ ಕಥಾಮಂಜರಿ” ಬಗ್ಗೆ ಗಣಪತಿ ಪದ್ಯಾಣ ವಾಚನಕಾರರಾಗಿ ಹಾಗೂ ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿ ಸಹಕರಿಸಿದರು. ಸೆಪ್ಟೆಂಬರ್ 16ರ ವರೆಗೆ ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 8.00ರ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ.

ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ ಕುರಿತು ಅತಿಥಿ ಉಪನ್ಯಾಸ

Article Image

ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ ಕುರಿತು ಅತಿಥಿ ಉಪನ್ಯಾಸ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ಮಾಧ್ಯಮ ಬರವಣಿಗೆ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಜು.11ರಂದು ನಡೆಯಿತು. ಪತ್ರಕರ್ತೆ ರಶ್ಮಿ ಯಾದವ್ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಸಾಹಿತ್ಯವನ್ನು ಓದಿದಾಗ ಭಾಷಾ ಕೌಶಲ್ಯ ಬೆಳೆಯುತ್ತದೆ. ಜೀವನ ಹಲವು ಬಗೆಯಲ್ಲಿ ಅರ್ಥವಾಗುತ್ತದೆ. ಯಾಕೆಂದರೆ ಸಾಹಿತ್ಯದಲ್ಲಿ ಜೀವನದ ಅನೇಕ ಅನುಭವಗಳು ಇರುತ್ತವೆ. ಅನುಭವಗಳು ಜೀವನವನ್ನು ರೂಪಿಸುತ್ತವೆ ಎಂದರು. “ಸಾಹಿತ್ಯದ ಓದು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಸಾಹಿತ್ಯವನ್ನು ಓದಲೇಬೇಕು. ನಮ್ಮ ಮಾಧ್ಯಮಗಳ ಚರಿತ್ರೆ ನೋಡಿದರೆ ಅಲ್ಲಿ ಸಾಹಿತ್ಯ ಓದಿದ ಮಹಾನ್ ಪತ್ರಕರ್ತರನ್ನು ಕಾಣಬಹುದು. ನಾವು ಯಾವುದೇ ವಿಷಯವನ್ನು ಬರೆಯುವಾಗ ಕವಿಗಳ ಪದ್ಯಗಳನ್ನು, ಹೇಳಿಕೆ, ವಿಚಾರಗಳನ್ನು ಉಲ್ಲೇಖಿಸಿದರೆ ಆ ಬರಹಕ್ಕೆ ಹೆಚ್ಚು ತೂಕ ಬರುತ್ತದೆ. ಓದುಗರ ಮನಸ್ಸನ್ನು ಸೆಳೆಯುತ್ತದೆ. ಆದ್ದರಿಂದ ಸಾಹಿತ್ಯವನ್ನು ಅಧ್ಯಯನ ಮಾಡುವುದು ಕೇವಲ ಬರವಣಿಗೆಗೆ ಅಷ್ಟೇ ಅಲ್ಲದೆ ಬದುಕಿಗೂ ಉಪಯುಕ್ತ” ಎಂದರು. ಮಾಧ್ಯಮ ಬರವಣಿಗೆ ಸ್ವರೂಪ ಕುರಿತು ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾರ್ಯಕ್ರಮ ಸಂಯೋಜಕ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಉಪಸ್ಥಿತರಿದ್ದರು. ಐಚ್ಛಿಕ ಕನ್ನಡ ದ್ವಿತೀಯ ವರ್ಷದ ವಿದ್ಯಾರ್ಥಿ ರಂಗನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆ: ಒಂದು ವೈಜ್ಞಾನಿಕ ದೃಷ್ಟಿಕೋನ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮ

Article Image

ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆ: ಒಂದು ವೈಜ್ಞಾನಿಕ ದೃಷ್ಟಿಕೋನ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮ

ಉಜಿರೆ, ಜು.12: ವಿಜ್ಞಾನ, ಕಲೆ, ಆಧ್ಯಾತ್ಮಿಕತೆ ಹೀಗೆ ಎಲ್ಲವನ್ನೂ ಒಳಗೊಂಡಿರುವ ಸಾಂಪ್ರದಾಯಿಕ ಭಾರತೀಯ ಜ್ಞಾನವ್ಯವಸ್ಥೆಯು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗಬೇಕಿದೆ ಎಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಎನ್.ಸಿ.ಇ.ಆರ್.ಟಿ.)ಯ ಸಹಾಯಕ ಪ್ರಾಧ್ಯಾಪಕ, ಯುವ ವಿಜ್ಞಾನಿ ಡಾ. ಅರ್ಪಣ್ ಕುಮಾರ್ ನಾಯಕ್ ಅಭಿಪ್ರಾಯಪಟ್ಟರು. ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗವು ಜು.12 ರಂದು ಆಯೋಜಿಸಿದ್ದ ‘ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆ: ಒಂದು ವೈಜ್ಞಾನಿಕ ದೃಷ್ಟಿಕೋನ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಭಾರತೀಯ ಸಾಂಪ್ರದಾಯಿಕ ಜ್ಞಾನವ್ಯವಸ್ಥೆಯು ಬ್ರಿಟಿಷರ ಆಡಳಿತ ಪರಿಣಾಮವಾಗಿ ಎಲ್ಲಿಯೂ ನಿಖರವಾಗಿ ದಾಖಲಾಗಿಲ್ಲ. ಇಂದಿನ ಪಠ್ಯಪುಸ್ತಕಗಳು ಕೂಡ ಅವುಗಳ ಕುರಿತಾಗಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಾವಿರಾರು ವರ್ಷಗಳು ಕಳೆದರೂ ದೃಢವಾಗಿ ನಿಂತಿರುವ ಪುರಾತನ ಕಟ್ಟಡಗಳ ನಿರ್ಮಾಣ ಮಾಡಲು ಬಳಸಿರುವ ಸಾಂಪ್ರದಾಯಿಕ ಜ್ಞಾನವ್ಯವಸ್ಥೆಯು ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕಿದೆ ಎಂದು ಅವರು ಹೇಳಿದರು. “ಆಧುನಿಕ ವಿಜ್ಞಾನಕ್ಕೂ ಸವಾಲೆಸೆಯುವ ಶಿಲ್ಪಕಲೆಗಳ ರಚನೆ ಪುರಾತನ ಕಾಲದಲ್ಲಿ ನಡೆದಿದೆ. ತಂತ್ರಜ್ಞಾನದ ಸಹಾಯವಿಲ್ಲದೆ ಕೇವಲ ಇತರರಿಂದ ಕೇಳಿ, ನಿರಂತರ ಅಭ್ಯಾಸ ಮತ್ತು ಪ್ರಯೋಗಗಳಿಂದಲೇ ನಿರ್ಮಾಣಗೊಂಡ ಅವುಗಳ ಹಿಂದೆ ಒಂದು ವೈಜ್ಞಾನಿಕ ದೃಷ್ಟಿಕೋನವಿದೆ. ಅದನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ಯಾವುದೇ ಕಲಿಕೆಯಿಲ್ಲದೆಯೇ ನಮ್ಮ ಪೂರ್ವಜರು ಗಣಿತಶಾಸ್ತ್ರ, ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರಗಳನ್ನು ಪುರಾತನ ಕಟ್ಟಡಗಳ ನಿರ್ಮಾಣದಲ್ಲಿ ಬಳಸಿಕೊಂಡಿರುವ ರೀತಿ ನಿಜಕ್ಕೂ ಮೆಚ್ಚುವಂತದ್ದು. ಅವರು ವಿಜ್ಞಾನವನ್ನು ಬಳಸಿಕೊಂಡಿರುವ ರೀತಿ ಮತ್ತು ಅವರ ಕೆಲಸಗಳಲ್ಲಿದ್ದ ಪರಿಪೂರ್ಣತೆಯನ್ನು ನಾವು ಅಳವಡಿಸಿಕೊಳ್ಳಬೇಕಿದೆ” ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಉಪ ಪ್ರಾಂಶುಪಾಲೆ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ. ಹಾಗೂ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿ, ಹೇಮಾವತಿ ವಂದಿಸಿದರು.

ಎಕ್ಸಲೆಂಟ್ ಮೂಡುಬಿದಿರೆ: ವಾಣಿಜ್ಯ ಸಂಘದ ಉದ್ಘಾಟನೆ

Article Image

ಎಕ್ಸಲೆಂಟ್ ಮೂಡುಬಿದಿರೆ: ವಾಣಿಜ್ಯ ಸಂಘದ ಉದ್ಘಾಟನೆ

ಮೂಡುಬಿದಿರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ಯಾಲಾಕ್ಸಿ ಸ್ಪೋರ್ಟ್ಸ್‌ ವರ್ಲ್ಡ್‌ನ ಎಂಡಿ, ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಸದಾನಂದ ನಾವಡ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ನಾನು ತರಗತಿಯಲ್ಲಿ ಕಲಿತ ಪಾಠ ನನ್ನ ಜೀವನದಲ್ಲಿ ಉಪಯೋಗ ಆಗಲಿಲ್ಲ. ಆದರೆ ನಾನು ಭಾಗವಹಿಸಿದ ಪಠ್ಯೇತರ ಚಟುವಟಿಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿತು. ಇದು ನನ್ನ ಉದ್ಯಮವನ್ನು ಬೆಳೆಸುವಲ್ಲಿ ಸಹಕಾರಿಯಾಯಿತು. ವಾಣಿಜ್ಯ ವಿಭಾಗದ ಚಟುವಟಿಕೆಗಳನ್ನು ಕ0ಡಾಗ ಖಂಡಿತವಾಗಿ ನಿಮ್ಮ ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಲು ಇದು ಸಹಕಾರಿಯಾಗುತ್ತದೆ ಎಂದರು. ಜಗತ್ತಿನ ಶೇಕಡಾ ತೊಂಭತ್ತೊಂದರಷ್ಟು ಜನರು ಉದ್ಯೋಗಿ ಅಥವಾ ಸ್ವಉದ್ಯೋಗಿಗಳಾಗಿರುತ್ತಾರೆ. ಉದ್ಯಮವನ್ನು ನಡೆಸಬೇಕಾದರೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಯಶಸ್ಸು ಕೇವಲ ರಿಸ್ಕ್ ತೆಗೆದುಕೊಳ್ಳುವವರ ಪಾಲಾಗಿದೆ ಎಂದರು. ಜೀವನದಲ್ಲಿ ಪ್ರಗತಿಯನ್ನು ಕಾಣಬೇಕಾದರೆ ತನ್ನ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಕಾಲದೊಂದಿಗೆ ಬದಲಾಗಲು ಬಯಸದ ಅನೇಕ ಉದ್ದಿಮೆಗಳು ಇಂದು ವಿಫಲವಾಗಿವೆ. ತನ್ನ ಯಶಸ್ಸು ಅಥವಾ ಸೋಲಿಗೆ ತನ್ನ ಮನೋಭಾವವೇ ಕಾರಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ವಾಣಿಜ್ಯ ವಿಭಾಗ ಸಂಸ್ಥೆಯ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊ0ಡಿದೆ. ಈ ಶೈಕ್ಷಣಿಕ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿಕೊ0ಡಿದೆ. ಪ್ರತಿಯೊಂದು ಕಾರ್ಯಕ್ರಮವೂ ವಿದ್ಯಾರ್ಥಿಗಳ ಕೌಶಲವನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಿದೆ. ಈ ಎಲ್ಲಾ ಪಠ್ಯೇತರ ಚಟುವಟಿಕೆಗಳ ಹೊರತಾಗಿಯೂ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಯಲ್ಲಿ ಅನೇಕ ಸ್ಥಾನಗಳನ್ನು ಪಡೆದುಕೊಳ್ಳುತ್ತಾ ಇದೆ. ಇಂಥಹ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿದೆ ಎನ್ನುವುದಕ್ಕೆ ಈ ಫಲಿತಾಂಶಗಳೇ ಸಾಕ್ಷಿ ಎಂದು ಪ್ರಸಕ್ತ ಶೈಕ್ಷಣಿಕ ವರ್ಷದ ವಾಣಿಜ್ಯ ವಿಭಾಗದ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಅತಿಥಿಯಾಗಿ ಉಪಸ್ಥಿತರಿದ್ದ ಜೋರಮ್ಮಾ ಹೋಂ ಪ್ರೊಡಕ್ಟ್ಸ್‌ನ ಸ್ಥಾಪಕ ಹಾಗೂ ಪೂರ್ವ ವಿದ್ಯಾರ್ಥಿ ಶೇಖ್ ಸಾಹಿಲ್ ಮಾತನಾಡುತ್ತಾ ತಾನು ಉದ್ಯಮವನ್ನು ಆರಂಭಿಸಬೇಕಾದರೆ ಇಲ್ಲಿನ ವಾಣಿಜ್ಯ ವಿಭಾಗದ ಚಟುವಟಿಕೆಗಳೇ ಕಾರಣ. ಒಂದು ಉತ್ಪನ್ನದ ಬಗ್ಗೆ ಪ್ರದರ್ಶಿಸುವ ಸ್ಪರ್ಧೆ ಮತ್ತು ಇನ್ನಿತರ ಚಟುವಟಿಕೆಗಳು ನನ್ನಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿತು ಮತ್ತು ಉದ್ಯಮವನ್ನು ಆರಂಭಿಸುವ ಯೋಚನೆಯನ್ನು ನೀಡಿತು. ಇಲ್ಲಿ ನಡೆಯುವ ಚಟುವಟಿಕೆಗಳ ಸ0ಪೂರ್ಣ ಲಾಭವನ್ನು ನೀವು ಪಡೆದುಕೊಂಡರೆ ಖ0ಡಿತ ನೀವು ಕೂಡ ಯಶಸ್ವಿ ಉದ್ಯಮಿಗಳಾಗಿ ರೂಪುಗೊಳ್ಳುವಿದರಲ್ಲಿ ಸಂದೇಹವಿಲ್ಲ. ಉದ್ಯಮದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ಆದರೆ ಅವನ್ನು ಮೆಟ್ಟಿ ನಿಂತು ತಾಳ್ಮೆಯಿಂದ ನಿಮ್ಮ ಕರ್ತವ್ಯವನ್ನು ನೀವು ಮಾಡಿದರೆ ಯಶಸ್ಸು ಖಂಡಿತ ನಿಮಗೊಲಿಯುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ ವಾಣಿಜ್ಯ ವಿಭಾಗವು ಸ0ಸ್ಥೆಯ ಹೃದಯಬಡಿತವಾಗಿದೆ. ವರ್ಷದಿಂದ ವರ್ಷಕ್ಕೆ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ0ದಿದೆ. ನಮ್ಮ ವಿದ್ಯಾರ್ಥಿಗಳು ಇಲ್ಲಿ ನಡೆಯುತ್ತಿರುವ ಚಟುವಟಿಗಳ ಲಾಭವನ್ನು ಪಡೆದುಕೊ0ಡು ಬೆಳೆದ ರೀತಿ ತು0ಬಾ ಸಂತಸ ತಂದಿದೆ. ಸ0ಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅನೇಕ ಅವಕಾಶಗಳಿವೆ. ಅದರ ಸದುಪಯೋಗವನ್ನು ಪಡೆದು ಜೀವನದಲ್ಲಿ ಸಾರ್ಥಕತೆಯನ್ನು ಪಡೆಯುವಂತಾಗಲಿ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಸುವಿತ್ ಭಂಡಾರಿ ಸ್ವಾಗತಿಸಿದರು. ವಾಣಿಜ್ಯ ಸಂಘದ ಅಧ್ಯಕ್ಷೆ ಶ್ರಾವಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿ ಸದಾನಂದ ನಾವಡರನ್ನು ನಿಶ್ಚಯ ಪರಿಚಯಿಸಿದರು. ಅತಿಥಿ ಶೇಖ್ ಸಾಹಿಲ್ ರನ್ನು ಸುಹಾನ ಸಚಿನ್ ಪರಿಚಯಿಸಿದರು. ಶಮಂತ್ ಕೆ ಎಂ ವಂದಿಸಿದರು.

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ ವಾಚನ-ಪ್ರವಚನ

Article Image

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ ವಾಚನ-ಪ್ರವಚನ

ಉಜಿರೆ: ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ-ಪ್ರವಚನ ಕಾರ್ಯಕ್ರಮವು ಜುಲೈ 16 ರಿಂದ ಸೆಪ್ಟೆಂಬರ್ 16ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30ರಿಂದ 8 ಗಂಟೆ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರು ಹಾಗೂ ಕಲಾವಿದರಿಂದ ಕುಮಾರವ್ಯಾಸ ವಿರಚಿತ “ಕರ್ಣಾಟ ಭಾರತ ಕಥಾಮಂಜರಿ”ಯ ವಾಚನ-ಪ್ರವಚನ ನಡೆಯುತ್ತದೆ. ಶನಿವಾರ ಮತ್ತು ಭಾನುವಾರಗಳಲ್ಲಿ ಕವಿ ರತ್ನಾಕರವರ್ಣಿಯ ಭರತೇಶವೈಭವ, ಮಂಕುತಿಮ್ಮನ ಕಗ್ಗ, ಶ್ರೀಮದ್ಭಾಗವತ, ಯಶೋಧರಚರಿತೆ, ತೊರವೆರಾಮಾಯಣ, ಮಹಾಭಾರತ, ಸೋಮೇಶ್ವರಶತಕ ಮೊದಲಾದ ವಿವಿಧ ಕಾವ್ಯಗಳ ಆಯ್ದ ಭಾಗಗಳನ್ನು ವಾಚನ-ಪ್ರವಚನಕ್ಕೆ ಬಳಸಲಾಗುವುದು. ಜುಲೈ 16 ರಂದು ಬುಧವಾರ ಮತ್ತು 17 ರಂದು ಗುರುವಾರ ಗಣಪತಿ ಭಟ್ ಪದ್ಯಾಣ ವಾಚನಕಾರರಾಗಿಯೂ, ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿಯೂ ಭಾಗವಹಿಸುವರು. ಉದ್ಘಾಟನಾ ಸಮಾರಂಭ: ಜುಲೈ 16 ರಂದು ಬುಧವಾರ ಸಂಜೆ 5 ಗಂಟೆಗೆ ಯಕ್ಷಗಾನ ಬಯಲಾಟ ಅಕಾಡೆಮಿಯ “ಯಕ್ಷಸಿರಿ” ಪ್ರಶಸ್ತಿ ಪುರಸ್ಕೃತರಾದ ಹಾಗೂ ನಿವೃತ್ತ ಉಪನ್ಯಾಸಕ ಡಾ. ಶಾಂತರಾಮ ಪ್ರಭು ನಿಟ್ಟೂರು ಅವರು ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು ಎಂದು ಸಮಿತಿಯ ಸಂಚಾಲಕರಾದ ಎ.ವಿ. ಶೆಟ್ಟಿ ತಿಳಿಸಿದ್ದಾರೆ.

ಶಿಕ್ಷಕ ಪಾಲಕ ವಿದ್ಯಾರ್ಥಿಗಳ ಸಭೆ 2025

Article Image

ಶಿಕ್ಷಕ ಪಾಲಕ ವಿದ್ಯಾರ್ಥಿಗಳ ಸಭೆ 2025

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ 2025ರ ಶೈಕ್ಷಣಿಕ ಸಾಲಿನ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಕ-ಪಾಲಕ-ವಿದ್ಯಾರ್ಥಿಗಳ ಪ್ರಥಮ ಸಭೆಯನ್ನು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದ ದಿಕ್ಕನ್ನು ತೀರ್ಮಾನಿಸುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿ, ಗುರಿ ಮುಟ್ಟುವೆಡೆಗೆ ಶ್ರಮಿಸಬೇಕು. ಈ ಪ್ರಯಾಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರವು ಬಹಳ ಮಹತ್ವದ್ದಾಗಿದೆ ಎಂದರು. ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುತ್ತಾನೆ. ಹಾಗಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸೂಕ್ತವಲ್ಲ ಎಂದರು. ಮನಸ್ಸಿನ ಸಮತೋಲನ ಅಗತ್ಯ. "ಬಾಲ್ಯಾವಸ್ಥೆಗಿಂತ ಪ್ರೌಢಾವಸ್ಥೆ ವಿಭಿನ್ನ ಮನೋಧರ್ಮದಿಂದ ಕೂಡಿರುತ್ತದೆ. ದೈಹಿಕವಾಗಿ ಶಕ್ತಿಶಾಲಿಯಾದರೂ, ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಅಧ್ಯಯನ ಸಮಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ, ಪ್ರತಿಯೊಂದು ವಿಷಯಕ್ಕೂ ಸಮಾನ ಮಹತ್ವ ನೀಡಿ ಎಂದರು. ಶಿಸ್ತು ಮತ್ತು ಸಮಯದ ಮೌಲ್ಯ ಅರಿಯಿರಿ ಆರೋಗ್ಯದ ವಿಷಯದಲ್ಲೂ ಜಾಗೃತಿ ಅಗತ್ಯ. ಕಳೆದುಹೋದ ಸಮಯ ಮರಳದು. ಆದ್ದರಿಂದ ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ ಮತ್ತು ಶಿಸ್ತುಬದ್ಧ ಜೀವನ ನಡೆಸಿರಿ,” ಎಂದು ಸಲಹೆ ನೀಡಿದರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕಿ ವಿದ್ಯಾ ಇದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ

Article Image

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ

ಮಡಂತ್ಯಾರು: 2024-2025ನೇ ಸಾಲಿನ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರವು ಜು.13ರಂದು ಪೂರ್ವಾಹ್ನ ಗಂಟೆ 11.00ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷ ಜೋಯೆಲ್ ಗಾಡ್ ಫ್ರೀ ಮೆಂಡೋನ್ಸ ಅವರ ಅಧ್ಯಕ್ಷತೆಯಲ್ಲಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಜರಗಲಿದೆ. ಮಹಾಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ, ಕ್ರೀಡಾ ಸಾಧಕರಿಗೆ, ಕೃಷಿ ಸಾಧನೆ ಮಾಡಿದ ಕೃಷಿಕರಿಗೆ, ಪ್ರಸ್ತುತ ವರ್ಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಹಾಗೂ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 'ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಫಾ. ಎಲ್.ಎಮ್. ಪಿಂಟೋ ಆಸ್ಪತ್ರೆ, ಬದ್ಯಾರು ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇದರ ರಾಷ್ಟ್ರೀಯ ಸೇವಾ ಯೋಜನೆ (N.S.S.) ಮತ್ತು ಯೂತ್ ರಡ್ ಕ್ರಾಸ್ (Y.R.C) ಸಹಯೋಗದೊಂದಿಗೆ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರವು ಬೆಳಿಗ್ಗೆ 9ರಿಂದ ನಡೆಯಲಿದೆ. ಲಭ್ಯವಿರುವ ವೈದ್ಯರ ಸೇವೆ ಮೆಡಿಸಿನ್ ವಿಭಾಗ : ಡಾ. ಜೆಫ್ರಿ ಲೂವಿಸ್ ಮೂಳೆ ಚಿಕಿತ್ಸಾ ವಿಭಾಗ : ಡಾ. ವಿಲ್ಕರ್ ಲಿಯಾಂಡರ್ ಕುಟಿನ್ಹ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ: ಡಾ.ಜ್ಞಾನೇಶ್ವರಿ ಎಂಡಿ, ಒಜಿಬಿ ಶಸ್ತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ಚಿಕಿತ್ಸಾ ವಿಭಾಗ: ಡಾ. ಎಲ್ಲೋಯ್ ಸಲ್ದಾನ್ಹ ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ: ಡಾ. ದೇವಶ್ಯ ಮಕ್ಕಳ ಚಿಕಿತ್ಸಾ ವಿಭಾಗ: ಡಾ. ಜೇಸನ್ ಡಿಸೋಜ ಕಣ್ಣಿನ ಚಿಕಿತ್ಸಾ ವಿಭಾಗ: ಡಾ. ಮಹೇಶ್ ಚರ್ಮರೋಗ ಚಿಕಿತ್ಸಾ ವಿಭಾಗ: ಡಾ. ನಾಗಭೂಷನ್, ಮನೋರೋಗ ಚಿಕಿತ್ಸಾ ವಿಭಾಗ: ಡಾ. ಕ್ಲಿಂಟನ್ ಕ್ಯಾಸ್ಟಲಿನೋ ಸೇವೆ ನೀಡಲಿದ್ದಾರೆ. ಲಭ್ಯವಿರುವ ಸೇವೆಗಳು: ಉಚಿತ ವೈದ್ಯರ ಸೇವೆ, ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಮಿಯರ್ ಪರೀಕ್ಷೆ, ಉಚಿತ ಕ್ಯಾನ್ಸರ್ ತಪಾಸಣಾ, ಸ್ತನ ಪರೀಕ್ಷೆ, ಉಚಿತ ಫಾ. ಎಲ್.ಎಮ್. ಪಿಂಟೋ ಹೆಲ್ತ್ ಕರ‍್ಡ್, ಉಚಿತ ಮಧುಮೇಹ ತಪಾಸಣೆ, ಉಚಿತ ಇಸಿಜಿ (ಅಗತ್ಯವಿರುವವರಿಗೆ ಮಾತ್ರ), ಉಚಿತ ಔಷಧಿ, 50% ಹರ‍್ಮೊನ್ ರಕ್ತ ಪರೀಕ್ಷೆ, 50% ವಿಟಮಿನ್ 'ಡಿ'2 ಮತ್ತು ವಿಟಮಿನ್ ಬಿ 12, 50% ಹಿಮೋಗ್ಲೋಬಿನ್ ಪರೀಕ್ಷೆ, ಉಚಿತ ಕಣ್ಣು ತಪಾಸಣಾ ಶಿಬಿರ, ಶಿಬಿರ ಪ್ರಯುಕ್ತ ರೂ.1500/- ಬೆಲೆಯ ಕನ್ನಡಕಗಳನ್ನು 50% ರಿಯಾಯಿತಿ ದರದಲ್ಲಿ ರೂ. 750/-ಗೆ ವಿತರಿಸಲಾಗುವುದು. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಕನ್ನಡಕವನ್ನು (ಐದು ದಿನಗಳಲ್ಲಿ) ವಿತರಿಸಲಾಗುವುದು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಉಜಿರೆ: ಜನಸಂಖ್ಯೆಯಲ್ಲಿ ಭಾರತವು ಚೀನಾ ದೇಶವನ್ನು ಮೀರಿಸಿರುವುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂದು ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಕಳವಳ ವ್ಯಕ್ತಪಡಿಸಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.11ರಂದು ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಬೆಳ್ತಂಗಡಿ, ತಾ.ಪಂ. ಬೆಳ್ತಂಗಡಿ, ಗ್ರಾ.ಪಂ. ಉಜಿರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ, ಎಸ್.ಡಿ.ಎಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. “ಚೀನಾ ನಮ್ಮ ದೇಶಕ್ಕಿಂತ ಎರಡೂವರೆ ಪಟ್ಟು ದೊಡ್ಡ ದೇಶ. ಆದರೆ ಅದನ್ನು ಹಿಂದೆ ಹಾಕಿ ನಾವು ಮುಂದೆ ಬಂದಿದ್ದೇವೆ. ವಿಶ್ವ ಜನಸಂಖ್ಯೆ 820 ಕೋಟಿಯಲ್ಲಿ ಭಾರತದ ಜನಸಂಖ್ಯೆ 146 ಕೋಟಿ ಆಗಿದೆ. ಇದು ಹೆಮ್ಮೆ ಪಡುವ, ಸಂಭ್ರಮಿಸುವ ಸಂಗತಿಯಲ್ಲ. ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದು ಅನಿವಾರ್ಯ” ಎಂದು ಅವರು ಹೇಳಿದರು. ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಪನ್ಮೂಲ ಕೂಡ ಹೆಚ್ಚು ಬೇಕಾಗುತ್ತದೆ. ಭೂಮಿಯಿಂದ ಪರಿಸರದಿಂದ ಸಂಪನ್ಮೂಲಗಳನ್ನು ಪಡೆಯುವ ಮಾನವ ಅರಣ್ಯನಾಶ ಮತ್ತು ಗಣಿಗಾರಿಕೆಯಲ್ಲಿ ತೊಡಗಿದ್ದಾನೆ. ಗಣಿಗಾರಿಕೆ ಆದಂತಹ ಜಾಗದಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ. ಇದರಿಂದ ಆಹಾರ ಉತ್ಪತ್ತಿಯೂ ಕಡಿಮೆಯಾಗುತ್ತದೆ‌ ಎಂದರು. ಪ್ರಾಣಿಗಳ ವಾಸಸ್ಥಳವನ್ನು ನಾವು ಅತಿಕ್ರಮಿಸಿರುವುದರಿಂದ ಅವುಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಹವಾಮಾನ ವೈಪರೀತ್ಯ ಹೆಚ್ಚುತ್ತಿದೆ. ಪ್ರವಾಹದಿಂದ ಸಂಪನ್ಮೂಲಗಳು ನಾಶವಾಗುತ್ತಿವೆ. ಮನುಷ್ಯನ ಆಸೆಗಳಿಗೆ ಕೊನೆಯಿಲ್ಲದಂತಾಗಿದೆ. ಯುದ್ಧಗಳಲ್ಲಿ ಬಾಂಬ್ ಬಳಕೆಯಿಂದ ಭೂಮಿ ತನ್ನ ಫಲವಂತಿಕೆ ಕಳೆದುಕೊಳ್ಳುತ್ತಿದೆ ಎಂದರು. ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., “ಜನಸಂಖ್ಯೆ ಹೆಚ್ಚಳ ಸಮಸ್ಯೆಯೇ ಅಲ್ಲ ಆದರೆ, ಜನರಿಗೆ ಬೇಕಾದ ವ್ಯವಸ್ಥೆ ಆಗದೆ ಇರುವುದೇ ಸಮಸ್ಯೆ. ಹಾಗಾಗಿ ಈ ಕುರಿತು ಅರಿವು ಮೂಡಿಸುವುದು ಅಗತ್ಯ” ಎಂದು ಅಭಿಪ್ರಾಯಪಟ್ಟರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ಮಾತನಾಡಿ, ಮರಣ ಸಂಖ್ಯೆ ಕಡಿಮೆ ಆಗಿರುವುದರ ಜೊತೆಗೆ ಜನನ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನಸಂಖ್ಯೆ ಹೆಚ್ಚಳ ಕಂಡಿದ್ದು, ಜನಸಂಖ್ಯೆ ಸ್ಫೋಟಕ್ಕೆ ಕಾರಣವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜಾತ್ ಆರ್.ಬಿ., ಪ್ರಕೃತಿಗೆ ವಿರುದ್ಧವಾಗಿ ಮನುಷ್ಯನ ವಿವಿಧ ಚಟುವಟಿಕೆಗಳಿಗೆ ಪ್ರತಿಯಾಗಿ ಇಂದು ಪ್ರಕೃತಿಯು ಮನುಷ್ಯನ ವಿರುದ್ಧ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಿದರು. ತಾಯಿ-ಮಗುವಿನ ಆರೋಗ್ಯಕ್ಕೆ ಬಹುವಾಗಿ ಪ್ರಾಮುಖ್ಯ ನೀಡಬೇಕು. ಕುಟುಂಬ ಯೋಜನೆ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಆಶಾ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಪ್ರಹಸನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚು ಫಲಾನುಭವಿಗಳನ್ನು ಆರೋಗ್ಯ ಕೇಂದ್ರಗಳಿಗೆ ಕರೆತರುವಲ್ಲಿ ಯಶಸ್ವಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಕರ್ತರನ್ನು ಗೌರವಿಸಲಾಯಿತು. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬೆಳ್ತಂಗಡಿ ತಾ.ಸಾ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ್, ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮೇಲ್ವಿಚಾರಕಿ ಲೀಲಾವತಿ, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನಿತಾ, ತಾಲೂಕು ಆರೋಗ್ಯ ವಿಭಾಗದ ಸಿಬ್ಬಂದಿ ಅಮ್ಮಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜೇಯ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ವಂದಿಸಿದರು.

ಉಜಿರೆ ಎಸ್‌.ಡಿ.ಎಂ. ಎಜುಕೇಶನಲ್ ಟ್ರಸ್ಟ್ ನಿಂದ ಪ್ರಸಕ್ತ ವರ್ಷದ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ

Article Image

ಉಜಿರೆ ಎಸ್‌.ಡಿ.ಎಂ. ಎಜುಕೇಶನಲ್ ಟ್ರಸ್ಟ್ ನಿಂದ ಪ್ರಸಕ್ತ ವರ್ಷದ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ

ಉಜಿರೆ, ಜು.10: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್ 2025ನೇ ಶೈಕ್ಷಣಿಕ ವರ್ಷದಲ್ಲಿ ಮೀಸಲಿಟ್ಟಿರುವ ಒಟ್ಟು 2.50 ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಣೆ ಪ್ರಕ್ರಿಯೆಗೆ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಇಂದು (ಜು.10) ಸಾಂಕೇತಿಕ ಚಾಲನೆ ನೀಡಿದರು. ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 2 ಸಾವಿರ ವಿದ್ಯಾರ್ಥಿಗಳನ್ನು ಒಳಗೊಳ್ಳುವ ವಿದ್ಯಾರ್ಥಿವೇತನ ಯೋಜನೆಯ ಮೊದಲ ಕಂತಿನ ಚೆಕ್ ವಿತರಿಸಿದರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಅರ್ಹ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ನಡೆಸಿ ಮನೆಯನ್ನು ಬೆಳಗಬೇಕು. ಹಣ ಸಂಪಾದನೆಗೆ ಇರುವ ಶ್ರಮವನ್ನು ಅರಿಯಬೇಕು. ಸಮಾಜದಲ್ಲಿ ಪ್ರಕಾಶಿಸುವ ವ್ಯಕ್ತಿತ್ವಗಳಾಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಎಸ್.ಡಿ.ಎಂ. ಸಂಸ್ಥೆಗಳ 1,450 ವಿದ್ಯಾರ್ಥಿಗಳ ಜೊತೆಗೆ ಇತರ ಸಂಸ್ಥೆಗಳ ವಿದ್ಯಾರ್ಥಿಗಳನ್ನೂ ಈ ವಿದ್ಯಾರ್ಥಿವೇತನ ಯೋಜನೆ ಒಳಗೊಂಡಿದೆ ಎಂದ ಅವರು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಸ್.ಡಿ.ಎಂ. ಕಾಲೇಜು, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಇತ್ಯಾದಿ ಸಂಸ್ಥೆಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಬದ್ಧತೆ ಹಾಗೂ ಕಾಳಜಿ ಕುರಿತು ವಿವರಿಸಿದರು. ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, “ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೇಷ್ಠ, ಮೌಲ್ಯಯುತ ಶಿಕ್ಷಣ ಒದಗಿಸುತ್ತಿದೆ. 1985ರಿಂದ ಎಸ್.ಡಿ.ಎಂ. ಎಜುಕೇಶನಲ್ ಟ್ರಸ್ಟ್ ಮೂಲಕ ನಮ್ಮ ಸಂಸ್ಥೆಗಳ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡುತ್ತಿದ್ದು, ಆ ಮೂಲಕ ವಿದ್ಯಾದಾನದ ಕ್ರಾಂತಿ ನಡೆಯುತ್ತಿದೆ” ಎಂದರು. ಎಸ್ ಡಿ ಎಂ ಎಜುಕೇಶನಲ್ ಸೊಸೈಟಿಯ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯಾ ಬಿ.ಪಿ. ಉಪಸ್ಥಿತರಿದ್ದರು. ಎಸ್ ಡಿ ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಂದಿಸಿದರು. ಡಾ. ನೆಫೀಸತ್ ಪಿ. ನಿರೂಪಿಸಿದರು. ವೃತ್ತಿಪರ ಮತ್ತು ಸ್ನಾತಕೋತ್ತರ ಕೋರ್ಸಿಗೆ ಅನುಗುಣವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ 10 ತಿಂಗಳ ಕಾಲ 1,000 ಮತ್ತು 1,250 ರೂ.ಗಳನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ಸಿರಿ ಮಿಲ್ಲೆಟ್ ಕೆಫೆ ಧಾರವಾಡದಲ್ಲಿ ಶುಭಾರಂಭ

Article Image

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ಸಿರಿ ಮಿಲ್ಲೆಟ್ ಕೆಫೆ ಧಾರವಾಡದಲ್ಲಿ ಶುಭಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತೀ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ನೂತನ ಸಿರಿ ಮಿಲ್ಲೆಟ್ ಕೆಫೆ’ಯು ಜು. 04ರಂದು ಶುಭಾರಂಭಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಸಿರಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಪರಮಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಿನೂತನವಾದ ಸಿರಿ ಮಿಲ್ಲೆಟ್ ಕೆಫೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪೂಜ್ಯರು ಯುವ ಪೀಳಿಗೆಗೆ ಆರೋಗ್ಯಕರವಾಗಿ ಜೀವಿಸಲು ಅವಶ್ಯಕವಾಗಿರುವ ಪೌಷ್ಟಿಕಾಂಶಯುಕ್ತ ಆಹಾರೋತ್ಪನ್ನಗಳು ದೊರೆಯಬೇಕು ಎನ್ನುವ ಉದ್ದೇಶದಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಎಸ್.ಡಿ.ಎಂ ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿದೆ. ಇಲ್ಲಿ ಮಧುಮೇಹ, ಬೊಜ್ಜು ನಿವಾರಕ, ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಸಿರಿಧಾನ್ಯ ಉತ್ಪನ್ನಗಳನ್ನು ಬಳಸಿ ಶುಚಿ-ರುಚಿಯಾದ ಆರೊಗ್ಯಕರವಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ದೃಷ್ಟಿಯಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಆರಂಭಿಸಿದ್ದೇವೆ. ಅಲ್ಲದೆ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲ್ಲೆಟ್ ಕುಕ್ಕೀಸ್, ಮಿಲ್ಲೆಟ್ ರಸ್ಕ್, ಡೋನಟ್, ರಿಬ್ಬನ್ ಪಕೋಡಾ, ನವಣೆ ಲಡ್ಡು, ಬೆಳಗ್ಗಿನ ಉಪಹಾರಕ್ಕೆ ಯೋಗ್ಯವಾಗಿರುವ ಬರಗು ದೋಸೆ, ಮಿಲ್ಲೆಟ್ ಉಪ್ಮ, ಪೋಹ, ವರ್ಮಸಲ್ಲಿ, ಮಧ್ಯಾಹ್ನದ ಭೋಜನಕ್ಕೆ ಸಿರಿಧಾನ್ಯಗಳ ಬಿಸಿಬೇಳೆ ಬಾತ್, ತಾಳಿಪಟ್ಟು, ದಾಲ್ ಕಿಚಡಿ, ಮಿಲ್ಲೆಟ್ ಮೊಸರನ್ನ, ಜೋಳ ರೋಟ್ಟಿ, ಸಂಜೆಗೆ ಸ್ನಾಕ್ಸ್ ಐಟಮ್ ಗಳಾದ ನ್ಯೂಟ್ರಿ ಅಟ್ಟ ಆನಿಯನ್ ಪಕೋಡಾ, ವೆಜ್ ಸ್ಯಾಂಡ್ ವಿಚ್, ಜೋಳ ವಡ ಇತ್ಯಾದಿ ಉತ್ತಮ ಗುಣಮಟ್ಟವುಳ್ಳ ಬಿಸಿ ಬಿಸಿ ಖಾದ್ಯಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಎಲ್ಲರೂ ಸಿರಿ ಮಿಲ್ಲೆಟ್ ಕೆಫೆಗೆ ಭೇಟಿ ನೀಡಿ, ಇಲ್ಲಿ ದೊರೆಯುವ ವಿವಿಧ ಮಿಲ್ಲೆಟ್ ಖಾದ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾರವಾಡ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ್ ದಂಪತಿಗಳು ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧಾರವಾಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಜೀವಂಧರ್ ಕುಮಾರ್, ಹಣಕಾಸು ನಿರ್ದೇಶಕರಾದ ವಿ.ಜಿ.ಪ್ರಭು, ಧಾರವಾಡ ಎಸ್.ಡಿ.ಎಂ ಡೆಂಟಲ್ ಹಾಸ್ಪಿಟಲ್ ಪಿ.ಆರ್.ಒ. ಶ್ರೀ ನಾಗ್ ಕುಮಾರ್, ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿ.ಸಿ.ಒ ಗಣೇಶ್ ಪ್ರಸಾದ್ ಎಸ್ ಕಾಮತ್, ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

First Previous

Showing 3 of 15 pages

Next Last