ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ
Published Date: 25-Jul-2025 Link-Copied
ಎಸ್.ಡಿ.ಎಂ. ಬಯೋಮೆಡಿಕಲ್ ಸೈನ್ಸಸ್ ಇನ್ಸ್ಟಿಟ್ಯೂಟ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳ ರಾಷ್ಟ್ರೀಯ ಸ್ವಯಂ ಸೇವಕ ಘಟಕಗಳು ಜಂಟಿಯಾಗಿ ಜುಲೈ 24, 2025ರಂದು ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿತು. ಸಹ ಉಪ ಕುಲಪತಿಗಳು (ಆಡಳಿತ) ಶ್ರೀ ವಿ. ಜೀವಂಧರ್ ಕುಮಾರ್ ಮತ್ತು ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ನಗರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ. ಶಿವರಾಜ್ ಕೆ. ಕಟಕಭಾವಿ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಮಾದಕವಸ್ತು ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಮಂಜುನಾಥ್ ಸುಣಗಾರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ. ಶಿವರಾಜ್ ಕಟಕಭಾವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ; ವಿದ್ಯಾರ್ಥಿಗಳು ಶ್ರಮವಹಿಸಿ ಕಲಿಯುವ ಮುಖೇನ ಸಂತೃಪ್ತಿಯನ್ನು ಪಡೆಯಬೇಕು. ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗದೇ ಅದರಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಲ್ಲದೇ ಇಡೀ ಕುಟುಂಬದ ಶಾಂತಿಯನ್ನು ಹಾಳು ಮಾಡುತ್ತದೆ. ವಿಷಕಾರಕವಾದ ಮಾದಕ ವಸ್ತುಗಳ ಸೇವನೆಯಿಂದ ಹಂತ ಹಂತವಾಗಿ ದೇಹದ ಎಲ್ಲಾ ಅಂಗಗಳನ್ನು ಹಾನಿಗೊಳಗಾಗುತ್ತವೆ. ಕ್ಷಣಿಕ ಸಂತೋಷಕ್ಕಾಗಿ ಅಮೂಲ್ಯವಾದ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಶಿಕ್ಷಣ ಮತ್ತು ಇಡೀ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿಕೊಳ್ಳುವ ಯಾವುದೇ ರೀತಿಯ ಅಪರಾಧ ಕೃತ್ಯಗಳ ಬಗ್ಗೆ ನಾವು ಯೋಚಿಸಬಾರದು. ನಾವೆಲ್ಲರೂ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆಯ ಕುರಿತಾದ ಕಾನೂನುಗಳನ್ನು ಅನುಸರಿಸಬೇಕು. ಭಾರತವನ್ನು ಮಾದಕ ವಸ್ತುಗಳ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಆರೋಗ್ಯಕರ ಶೈಕ್ಷಣೀಕ ಪರಿಸರ ಹೊಂದಲು ಆತಂರಿಕ ಮಾದಕ ವಸ್ತು ವಿರೋಧಿ ಸಮಿತಿಯನ್ನು ರಚಿಸಲು ಸಲಹೆ ಮಾಡಲಾಯಿತು. ಡಾ. ಮಂಜುನಾಥ್ ಸುಣಗಾರ ಅವರು ವಿವಿಧ ಮಾದಕ ದ್ರವ್ಯ ವಸ್ತುಗಳ ಪರಿಚಯ, ಸೇವನೆಯ ದುಷ್ಪರಿಣಾಮ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಮುಂಜಾಗೃತಿಯನ್ನು ಮೂಡಿಸಿದರು. ಡಾ. ಶಿವರಾಜ್ ಕಟಕಭಾವಿ ಮತ್ತು ಡಾ. ಮಂಜುನಾಥ್ ಸುಣಗಾರ ಅವರನ್ನು ಎಸ್.ಡಿ.ಎಂ. ಸಂಸ್ಥೆವತಿಯಿಂದ ಗಣ್ಯರು ಸನ್ಮಾನಿಸಿದರು. ಸಂಶೋಧನಾ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಡಾ. ಅಜಯಕುಮಾರ್ ಓಲಿ ಮತ್ತು ಪ್ರಸನ್ನ ದೇಶಪಾಂಡೆ, ಎನ್.ಎನ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ರೇಣುಕಾರಾಧ್ಯ ಕೆ. ಮಠ, ಅಧ್ಯಾಪಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಮೇಘನಾ ಹೆಗ್ಡೆ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಮೈಜಾ ಶಿಬಾರಗಟ್ಟಿ ವಂದನಾರ್ಪಣೆ ಸಲ್ಲಿಸಿದರು.