Article Image

ರೋಟರಿಯಿಂದ ರಕ್ಷಾಬಂಧನ ಸಂಭ್ರಮಾಚರಣೆ

Article Image

ರೋಟರಿಯಿಂದ ರಕ್ಷಾಬಂಧನ ಸಂಭ್ರಮಾಚರಣೆ

ಉಜಿರೆ : ಸಂಕುಚಿತವಾಗುತ್ತಿರುವ ಮಾನವ ಸಂಬಂಧಗಳಿಗೆ ಹಬ್ಬ- ಆಚರಣೆಗಳ ಮಹತ್ವವನ್ನು ಅರಿತುಕೊಳ್ಳಬೇಕು. ರಕ್ಷಾಬಂಧನದಂತ ಆಚರಣೆಯಿಂದ ಸಮಾಜದಲ್ಲಿ ಒಬ್ಬರನೊಬ್ಬರು ಸದಾ ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯ ಕುಮಾರಿ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿಬೆಟ್ಟು, ರೊ.ಕೆ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ರಕ್ಷಾ ಬಂಧನ ಸಂಭ್ರಮಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪುರಾಣ ಹಾಗೂ ಇತಿಹಾಸಗಳಲ್ಲೂ ರಕ್ಷಾ ಬಂಧನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಹಬ್ಬ ಹರಿದಿನಗಳು ತಾಂತ್ರಿಕಗೊಳ್ಳುತ್ತಿರುವ ವರ್ತಮಾನದಲ್ಲಿ ಹಬ್ಬಗಳ ವೈಜ್ಞಾನಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ರೋಟರಿಯ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ, ರಕ್ಷಾ ಬಂಧನ ರಕ್ಷೆ ಮತ್ತು ಪ್ರೀತಿಯ ಸಂಕೇತ. ಕೈ ಕಟ್ಟುವ ಒಂದಗಲದ ದಾರಕ್ಕೆ ತನ್ನದೇ ಆದ ಶಕ್ತಿ ಇದೆ ಎಂದರು. ದೀಪ ಬೆಳಗುವ ಮೂಲಕ ಗೌರವಿಸಿ ರಕ್ಷಾಬಂಧನವನ್ನು ಕಟ್ಟಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ರೊಟೆರಿಯನ್ ಸೋನಿಯಾ ವರ್ಮಾ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ‘ಎಸ್ ಡಿ ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024’

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ‘ಎಸ್ ಡಿ ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024’

ಉಜಿರೆ, ಆ.24: ಋಣಭಾರ ಕಡಿಮೆಯಾಗದ ಹೊರತು ಜೀವನ ಸಾರ್ಥಕ್ಯ ಕಾಣಲಾರದು. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಋಣಭಾರ ಕಡಿಮೆ ಮಾಡಿಕೊಳ್ಳಬಹುದು ಎಂದು ಉಜಿರೆ ಎಸ್ ಡಿ ಎಂ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಎನ್. ಸತ್ಯನಾರಾಯಣ ಹೊಳ್ಳ ಹೇಳಿದರು. ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಆ. 24ರಂದು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಪುನರ್ಮಿಲನ (ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024) ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವ್ಯಕ್ತಿಗೆ ವಿದ್ಯಾಋಣ, ಅನ್ನಋಣ ಇತ್ಯಾದಿ ಋಣಗಳಿರುತ್ತವೆ. ಅದು ದೊಡ್ಡ ಭಾರವಾಗಿದ್ದು, ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮೂಲಕ ಋಣದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನೈತಿಕ ಬೆಂಬಲ ನೀಡುವುದು, ಧನಸಹಾಯ ನೀಡುವುದು, ಸಂಘ ಸಂಸ್ಥೆಗಳ ಮೂಲಕ ನೆರವು ನೀಡುವುದು ಇತ್ಯಾದಿ ಕ್ರಮಗಳ ಮೂಲಕ ಋಣಭಾರ ಇಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. “ಹಿರಿಯ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಉದ್ಯೋಗ ಪಡೆಯುವಲ್ಲಿ ನೆರವು ನೀಡುತ್ತಿದ್ದು, ಆ ಮೂಲಕ ವಿದ್ಯಾಸಂಸ್ಥೆಯ ಋಣಭಾರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದರು. ಧನಾತ್ಮಕ ಚಿಂತನೆಯೊಂದಿಗೆ, ಇಚ್ಚಾಶಕ್ತಿ ಹೊಂದಿ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, “ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರಿಂದ ಪ್ರಾರಂಭವಾದ ಉಜಿರೆ ಎಸ್.ಡಿ.ಎಂ. ಕಾಲೇಜು 58 ವರ್ಷಗಳಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕೆ ಮಾತ್ರವಲ್ಲದೆ, ಉತ್ತಮ ಬದುಕಿಗೆ ಹೇತುವಾಗಿದೆ. ವೀರೇಂದ್ರ ಹೆಗ್ಗಡೆ ಅವರ ಪೋಷಣೆಯಲ್ಲಿ ಸಂಸ್ಥೆ ಇನ್ನಷ್ಟು ಬೆಳೆದಿದೆ. ಸಂಸ್ಥೆಯಿಂದ ಔದ್ಯೋಗಿಕ, ವೈಯಕ್ತಿಕ ಕೊಡುಗೆ ಪಡೆದಿರುವ ನಾವು ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ರೀತಿಯಲ್ಲಿ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ. ಹಿರಿಯ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಶ್ರೇಷ್ಠತೆ ಬರುತ್ತದೆ. ಅವರಿಂದ ಸಂಸ್ಥೆಗೆ ಬ್ರ್ಯಾಂಡ್ ವ್ಯಾಲ್ಯೂ ಲಭಿಸಿದೆ. ಸಂಸ್ಥೆಯ ಷಷ್ಟ್ಯಬ್ದಿ ಕೂಡ ಉತ್ತಮ ರೀತಿಯಲ್ಲಿ ಆಚರಿಸುವಂತಾಗಲಿ” ಎಂದರು. ಇನ್ನೋರ್ವ ಅತಿಥಿ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, "ಎಸ್.ಡಿ.ಎಂ. ವಿದ್ಯಾ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ಗ್ರಾಮೀಣ ಭಾಗದ ವಿದ್ಯಾಸಂಸ್ಥೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ನಮ್ಮ ಕಾಲೇಜು ಶ್ರೇಷ್ಠ ಸಾಧನೆಗಳನ್ನು ಮಾಡಿದೆ. ಇಂದಿನ ಕಾರ್ಯಕ್ರಮ ಮತ್ತೊಮ್ಮೆ ಹಿರಿಯ ವಿದ್ಯಾರ್ಥಿಗಳ ಮಿಲನಕ್ಕೆ ಕಾರಣವಾಗಿದೆ. ಹಿರಿಯ ವಿದ್ಯಾರ್ಥಿಗಳು ಅತ್ಯಂತ ಸಂವೇದನಾಶೀಲರಾಗಿ ಇಂದಿನ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಕೂಡ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಹೀಗೇ ಇರಲಿ" ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, "ಇಂದು ವಿವಿಧ ಹುದ್ದೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಸ್.ಡಿ.ಎಂ. ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರತ್ನವರ್ಮ ಹೆಗ್ಗಡೆ ಅವರ ಕನಸು ಸಾಕಾರಗೊಂಡಿದೆ. ಕಾಲೇಜಿನ ಬೆಳವಣಿಗಾಗಿ ಹಿರಿಯ ವಿದ್ಯಾರ್ಥಿ ಸಂಘ ಸದಾ ನಿಲ್ಲುತ್ತದೆ. ಪ್ರತಿ ತಿಂಗಳ ನೆನಪಿನಂಗಳ ಕಾರ್ಯಕ್ರಮದ ಆಯೋಜನೆ ಹಾಗೂ ವಿವಿಧ ಚಟುವಟಿಕೆಗಳ ಆಯೋಜನೆ ಮಾಡುವುದರ ಮೂಲಕ ನಮ್ಮ ಮಾತೃ ಸಂಸ್ಥೆ ಎಸ್.ಡಿ.ಎಂ. ಕಾಲೇಜಿನ ಋಣವನ್ನು ಭರಿಸಲು ಸಾಧ್ಯವಾಗಿದೆ. ಸಂಘಟನೆಗೆ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಭದ್ರ ತಳಪಾಯ ಹಾಕಿದ್ದಾರೆ. ಮಾರ್ಗದರ್ಶನ ನೀಡಿದ್ದಾರೆ" ಎಂದರು. ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಸಂಘದ ವತಿಯಿಂದ 5 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಾದ ಸುಶಾಂತ್ ಶೆಟ್ಟಿ ಮತ್ತು ಸಿರಿ ಶರ್ಮ ಅವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್, "ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ. ವಿದ್ಯಾಸಂಸ್ಥೆ ವರದಾನವಾಗಿದೆ. ಇಂತಹ ವಿದ್ಯಾಸಂಸ್ಥೆಯ ಜೊತೆ ಒಡನಾಟವನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಆಗಾಗ ಕಾಲೇಜಿಗೆ ಭೇಟಿ ನೀಡಿ ನಮ್ಮ ಸಂಬಂಧವನ್ನು ನೆನಪಿಸಿಕೊಳ್ಳಬೇಕು ಎನ್ನುವುದೇ ಸಂಘದ ಉದ್ದೇಶ” ಎಂದರು. ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಪ್ರಸ್ತುತ ಅತ್ಯಂತ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಕಾಲೇಜಿನಲ್ಲಿ ಪ್ರತಿ ತಿಂಗಳು ನಿರಂತರ ಎಸ್.ಡಿ.ಎಂ. ನೆನಪಿನಂಗಳ (ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈವರೆಗೆ 14 ಕಾರ್ಯಕ್ರಮ ನಡೆದಿದ್ದು ಒಟ್ಟು 14 ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ತಲಾ 5 ಸಾವಿರದಂತೆ ಒಟ್ಟು 75 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅರ್ಹ 15 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಿ ಉದಾರತೆ ತೋರಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಹಾಗೂ ಸ್ಥಳೀಯ ಎಸ್.ಡಿ.ಎಂ. ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ವೈದೇಹಿ ಮತ್ತು ಬಳಗದವರು ಪ್ರಾರ್ಥಿಸಿದರು. ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ವಂದಿಸಿದರು. ಡಾ. ದಿವಾಕರ ಕೆ. ಮತ್ತು ದಿವ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿಯ ಕಲಾಮಯಂ ತಂಡದವರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ ನಡೆಯಿತು.

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

Article Image

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

ಉಜಿರೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳ ಕಾಲ ಅನುಪಮವಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ನೌಕರರು ಸರ್ಕಾರಕ್ಕೂ, ಸಮಾಜಕ್ಕೂ ಉತ್ತಮ ಸೇವೆ ನೀಡಿದ್ದು ಸ್ವಾಭಿಮಾನದೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ತಮ್ಮ ಅನುಭವದ ಪರಿಪಕ್ವತೆಯೊಂದಿಗೆ ನಿವೃತ್ತರು ಸಮಾಜಸೇವೆಯಲ್ಲಿ ಪ್ರವೃತ್ತರಾಗಬೇಕು ಎಂದು ಉಜಿರೆಯ ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು. ಅವರು ಮಂಗಳವಾರ ಉಜಿರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ ಉದ್ಘಾಟಿಸಿ, ಮನವಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿಯೂ ನಿವೃತ್ತಿ ಒಂದು ಅನಿವಾರ್ಯ ಹಂತವಾಗಿದ್ದು ನಿವೃತ್ತರು ತಾಳ್ಮೆ , ಪ್ರೀತಿ-ವಿಶ್ವಾಸ ಹಾಗೂ ಮಾನಸಿಕ ಪರಿಪಕ್ವತೆಯೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ ಟಿ. ಕೃಷ್ಣಮೂರ್ತಿ ಮತ್ತು ಪ್ರೊ. ಎ. ಜಯಕುಮಾರ್ ಶೆಟ್ಟಿ ಹಾಗೂ ವೇಣೂರಿನ ಶೀಲಾ ಎಸ್. ಹೆಗ್ಡೆ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲಶೆಟ್ಟಿ ಮಾತನಾಡಿ, ನಿವೃತ್ತರು ವೃದ್ಧರಲ್ಲ, ಪ್ರಬುದ್ದರು. ಕಿರಿಯರಿಗೆ ಸಕಾಲಿಕ ಮಾಹಿತಿ, ಮಾರ್ಗದರ್ಶನ ನೀಡಬೇಕು. ಪ್ರತಿಯೊಬ್ಬ ಸದಸ್ಯರೂ ಸಂಘಟನೆ ಬಗ್ಗೆ ಅಭಿಮಾನ ಮತ್ತು ಆಸಕ್ತಿಯಿಂದ ಸೇವೆ ಮಾಡಬೇಕು ಎಂದು ಹೇಳಿದರು. ಎಲ್ಲಾ ವಿಭಾಗಸಂಘಟಕರು ಮತ್ತು ಹೊಸ ಸದಸ್ಯರನ್ನು ಗೌರವಿಸಲಾಯಿತು. ಸನ್ಮತ್ ಕುಮಾರ್ ನಾರಾವಿ ಪ್ರಾಸ್ತ್ತಾವಿಕವಾಗಿ ಮಾತನಾಡಿದರು. ಬಿ ಸೋಮಶೇಖರ್ ಶೆಟ್ಟಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು. ವಸಂತ ರಾವ್ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ

Article Image

ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ

ಉಜಿರೆ: ಅನ್ನದಾಸೋಹ, ಅರಿವುದಾಸೋಹ ಮತ್ತು ಅಕ್ಷರದಾಸೋಹ ಎಂಬ ತ್ರಿವಿಧ ದಾಸೋಹದೊಂದಿಗೆ ಮನಪರಿವರ್ತನೆ ಮೂಲಕ ಕ್ರಾಂತಿಕಾರಿ ಸಮಾಜಸುಧಾರಣೆಯೊಂದಿಗೆ ಲೋಕಕಲ್ಯಾಣ ಕಾರ್ಯಗಳನ್ನು ನಿರಂತರ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರು ಸಾಧುಸಂತರಿಗಿಂತಲೂ ಮಿಗಿಲಾಗಿ ಎಲ್ಲರಿಂದಲೂ ದೇವಮಾನವರಾಗಿ ಗೌರವಿಸಲ್ಪಡುತ್ತಾರೆ. ಅವರ ದರ್ಶನದಿಂದ ದೇವರ ದರ್ಶನ ಮಾಡಿದಷ್ಟೇ ಸಂತೋಷ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ತುಮಕೂರಿನ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮದ್ಯವ್ಯಸನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರ ಶತದಿನೋತ್ಸವದ ಸಂಭ್ರಮದ ನವಜೀವನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮದ್ಯಪಾನದಂತಹ ವ್ಯಸನಗಳಿಗೆ ಬಿದ್ದವರನ್ನು ಮತ್ತು ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದೇ ನಿಜವಾದ ಧರ್ಮವಾಗಿದೆ. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎನ್ನುವಂತೆ ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯವಾಗಬೇಕು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತಾ-ಪಿತರಂತೆ ಬಹಳ ಪ್ರೀತಿ-ವಿಶ್ವಾಸದಿಂದ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾಸಬಲೀಕರಣ, ಕೆರೆಗಳ ಪುನಶ್ಚೇತನ, ಶುದ್ಧ ಕುಡಿಯುವ ನೀರಿನಘಟಕ, ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರಗಳು, ಸ್ವ-ಉದ್ಯೋಗ ತರಬೇತಿ ಇತ್ಯಾದಿ ಸೇವಾ ಕಾರ್ಯಕ್ರಮ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿವೆ ಎಂದರು. ತುಮಕೂರಿನಲ್ಲಿ ತಮ್ಮ ಮಠದ ಭಕ್ತರಾದ ಚಂದ್ರಶೇಖರ ಎಂಬವರು ಮದ್ಯವ್ಯಸನಿಯಾಗಿದ್ದು ಮದ್ಯವರ್ಜನ ಶಿಬಿರಕ್ಕೆ ಸೇರಿ ವ್ಯಸನಮುಕ್ತರಾಗಿ ಈಗ ಎಂಜಿನಿಯರ್‌ರಾಗಿ ಸ್ವಂತ ಉದ್ಯಮದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನು ಸ್ವಾಮೀಜಿ ಉಲ್ಲೇಖಿಸಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರು ಮನ, ವಚನ, ಕಾಯದಿಂದ ದೃಢ ಸಂಕಲ್ಪ ಮಾಡಿ ಮುಂದೆ ಸಾರ್ಥಕ ಜೀವನ ನಡೆಸಬೇಕು. ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಪರಿಶುದ್ಧರಾಗಿ ದೇವರ ದರ್ಶನ ಮಾಡಿ ಅನುಗ್ರಹ ಪಡೆದು ಮುಂದೆ ಸುಖ-ಶಾಂತಿ, ನೆಮ್ಮದಿಯ ಕೌಟುಂಬಿಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ವ್ಯಸನಮುಕ್ತರ ಭಾಗ್ಯದ ಬಾಗಿಲು ತೆರೆದಿದೆ ಎಂದು ಅವರಿಗೆ ಉಜ್ವಲ ಭವಿಷ್ಯವನ್ನು ಹೆಗ್ಗಡೆಯವರು ಹಾರೈಸಿದರು. ಮಾಜಿ ವಿಧಾನಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಶುಭಾಶಂಸನೆ ಮಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸು ಕಂಡ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಹಾಗೂ ವ್ಯಸನಮುಕ್ತ ಭಾರತವನ್ನು ಹೆಗ್ಗಡೆಯವರು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶೇ. ನೂರರಷ್ಟು ನನಸಾಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ಶ ತದಿನೋತ್ಸವವನ್ನು ಆಚರಿಸಿದ ವ್ಯಸನಮುಕ್ತರು ಜೀವನಪರ್ಯಂತ ಆತ್ಮಸಾಕ್ಷಿಗೆ ಅನುಗುಣವಾಗಿ ಉತ್ತಮ ಜೀವನ ನಡೆಸಬೇಕು. ತಮಗೆ ಯಾವುದೇ ಸಮಸ್ಯೆ ಬಂದರೂ ಯೋಜನಾಧಿಕಾರಿ ಅಥವಾ ಶಿಬಿರಾಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಡಾ. ಅಭಿಷೇಕ್ ಚತುರ್ವೇದಿ ಮತ್ತು ದೇರಳೆಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಮೇಖಲಾ ದಿವಾಕರ್ ಅವರು ಮದ್ಯವರ್ಜನ ಶಿಬಿರಗಳ ಬಗ್ಗೆ ರಚಿಸಿದ ಸಂಶೋಧನಾ ಪ್ರಬಂಧಗಳನ್ನು ಡಿ. ವೀರೇಂದ್ರ ಹೆಗಡೆಯವರಿಗೆ ಅರ್ಪಿಸಿದರು. ಮಂಗಳೂರಿನ ಡಾ. ಶ್ರೀನಿವಾಸ ಭಟ್, ಎಸ್. ಡಿ. ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಅಧಿಕಾರಿ ದುಗ್ಗೇಗೌಡ, ಜಿಲ್ಲಾಧ್ಯಕ್ಷ ಪದ್ಮನಾಭ ಭಟ್, ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್, ಕಾಸಿಂ ಮಲ್ಲಿಗೆಮನೆ ಮೊದಲಾದವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳೊಂದಿಗೆ ವಿವೇಕ್ ವಿ. ಪಾÊಸ್, ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ನಾಗೇಶ್ ಮತ್ತು ಭಾಸ್ಕರ್, ಎನ್. ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ; ಎನ್ನೆಸ್ಸೆಸ್ ಸರಣಿ ಕಾರ್ಯಕ್ರಮಗಳ ಸಮಾರೋಪ

Article Image

ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ; ಎನ್ನೆಸ್ಸೆಸ್ ಸರಣಿ ಕಾರ್ಯಕ್ರಮಗಳ ಸಮಾರೋಪ

ಉಜಿರೆ, ಆ.7: ಕಾರ್ಗಿಲ್ ವಿಜಯ ದಿನಾಚರಣೆಯು ದೀಪಾವಳಿ ಹಬ್ಬದಂತೆ ಸಮಸ್ತ ದೇಶವಾಸಿಗಳಿಂದ ಆಚರಿಸಲ್ಪಡುತ್ತಿರುವುದು ಸಂತಸದ ಸಂಗತಿ ಎಂದು ಕಾರ್ಗಿಲ್ ಯುದ್ಧ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಇಂದು (ಆ.7) ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಆರಂಭದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆಯು ಸೈನ್ಯದಿಂದ ಮಾತ್ರ ಆಚರಿಸಲ್ಪಡುತ್ತಿತ್ತು. ಕ್ರಮೇಣ ನಾಗರಿಕರು ಆಚರಿಸಲು ಆರಂಭಿಸಿದರು. ಪ್ರಸ್ತುತ ದೇಶಾದ್ಯಂತ ವ್ಯಾಪಕವಾಗಿ ಆಚರಿಸಲ್ಪಡುತ್ತಿದೆ ಎಂದು ಅವರು ಹೇಳಿದರು. “ದೇಶದ ಪ್ರಾಂತೀಯ ಸಮಗ್ರತೆಗಾಗಿ ನಾವು ಹೋರಾಟ ಮಾಡಿದೆವು. ಕಿರಿಯ ವಯಸ್ಸಿನ ಸೈನಿಕರು ಪ್ರಾಣತ್ಯಾಗ ಮಾಡಿದರು. ಇಲ್ಲಿಯವರೆಗೆ ನಾವು ದೇಶವನ್ನು ಮುಂದೆ ತೆಗೆದುಕೊಂಡು ಬಂದಿದ್ದೇವೆ, ಇನ್ನು ಮುಂದೆ ದೇಶವನ್ನು ಮುನ್ನಡೆಸಬೇಕಾದವರು ನೀವು. ಈಗ ನಿಮ್ಮ ಸರದಿ” ಎಂದರು. “ದೇಶವು ಸುರಕ್ಷಿತ ಕೈಗಳಲ್ಲಿದೆ” ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು. “ಈ ಮಣ್ಣಿನಲ್ಲಿ ಹುಟ್ಟಲು ನಾನು ಅದೃಷ್ಟ ಮಾಡಿದ್ದೇನೆ. ಹಲವು ಜನರಿಗೆ ಹಲವು ಪ್ರಯತ್ನಗಳ ಬಳಿಕವೂ ಸೈನ್ಯ ಸೇರಲು ಸಾಧ್ಯವಾಗುವುದಿಲ್ಲ. ಆದರೆ ನಾನು ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾದೆ. ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶವೂ ಸಿಕ್ಕಿತು. ಭಾರತಾಂಬೆಗೆ ಅಳಿಲುಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ದೇಶಕ್ಕೆ ಈಗ ಸೇವೆ ಮಾಡದಿದ್ದಲ್ಲಿ ಇನ್ನು ಯಾವಾಗ? ನಾವಲ್ಲದೆ ಇನ್ನಾರು?” ಎಂದು ಅವರು ಹೇಳಿದರು. ಅತಿಥಿ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ದೇಶಕ್ಕೆ ಸೈನ್ಯ ಮತ್ತು ಸೈನಿಕರು ಎಷ್ಟು ಅನಿವಾರ್ಯ ಎಂಬುವುದು ಎಲ್ಲರಿಗೂ ಗೊತ್ತು. ನಾವು ರಾತ್ರಿ ನೆಮ್ಮಯಿಂದ ಮಲಗಿ ನಿದ್ದೆ ಹೋಗುತ್ತೇವೆ ಎಂದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಯೋಧರು. ದೇಶವನ್ನು ಕಾಪಾಡುವವರು ಯೋಧರು. ಆದ್ದರಿಂದ ಸೈನ್ಯದ ವ್ಯವಸ್ಥೆ ದೇಶಕ್ಕೆ ಅತೀ ಅಗತ್ಯ ಎಂದರು. ಮಾತೃಋಣ, ಪಿತೃಋಣ, ಗುರುಋಣಕ್ಕಿಂತಲೂ ಸೈನ್ಯ ಋಣ ಮಿಗಿಲು. ನಮ್ಮ ನಮ್ಮ ಕರ್ತವ್ಯದಲ್ಲಿ ಸೈನಿಕರ ಬದ್ಧತೆ, ಸೇವಾ ಮನೋಭಾವ ಅಳವಡಿಸಿಕೊಳ್ಳುವ ಮೂಲಕ ಆ ಋಣ ತೀರಿಸಬಹುದು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ದೈಹಿಕ, ಮಾನಸಿಕ, ಭಾವನಾತ್ಮಕ ದೃಢತೆ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ದೇಶದ ಸೈನಿಕರು ದೇಶದ ರಕ್ಷಣೆ ಮಾಡುವಾಗ ದೇಶವಾಸಿಗಳಾದ ನಾವು ದೇಶದೊಳಗಡೆ ಏನು ಮಾಡುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಬೇಕಿದೆ. ಸೈನಿಕರ ಶ್ರಮವನ್ನು ಯುವಜನರು ಅರಿತುಕೊಳ್ಳಬೇಕು. ನಮ್ಮ ಕಾಲೇಜಿನ ಎನ್ನೆಸ್ಸೆಸ್ ಘಟಕ ತನ್ನ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಸಂತಸದಾಯಕ ಎಂದರು. ಭಾರತ ಎಂದಿಗೂ ಯಾವ ದೇಶದ ಮೇಲೆಯೂ ಕೂಡ ಯುದ್ಧ ಸಾರಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದವರನ್ನು ಎಂದಿಗೂ ಸದೆ ಬಡಿಯದೆ ಬಿಟ್ಟಿಲ್ಲ ಎಂಬುದಕ್ಕೆ ಕಾರ್ಗಿಲ್ ಯುದ್ಧವೇ ಸಾಕ್ಷಿ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., "24ನೇ ಕಾರ್ಗಿಲ್ ವಿಜಯ ದಿನಾಚರಣೆ ಸಂದರ್ಭದಲ್ಲಿ ನಾವು ಸರಣಿ ಕಾರ್ಯಕ್ರಮಗಳನ್ನು ನಡೆಸುವ ಸಂಕಲ್ಪ ಮಾಡಿದ್ದೆವು. ಶಾಲಾ ಕಾಲೇಜುಗಳಲ್ಲಿ ದೇಶಭಕ್ತಿ ಕುರಿತ ಸರಣಿ ಕಾರ್ಯಕ್ರಮ ನಡೆಸಿ, ಇಂದು ಸಮಾರೋಪ ಸಮಾರಂಭ ಆಯೋಜಿಸಿದ್ದೇವೆ" ಎಂದರು. ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಡೆಸಿದ ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪಟ್ಟಿಯನ್ನು ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೊ. ದೀಪ ಆರ್.ಪಿ. ವಾಚಿಸಿದರು. ಗಣ್ಯರು ಬಹುಮಾನ ವಿತರಿಸಿದರು. ಎನ್ನೆಸ್ಸೆಸ್’ನ ಭಿತ್ತಿ ಪತ್ರಿಕೆ ‘ಯುವ ಚೇತನ’ದ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಭಾರತಾಂಬೆ ಭಾವಚಿತ್ರ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಪ್ರಥಮ ಬಿ.ಕಾಂ. ವಿದ್ಯಾರ್ಥಿ ಶಯನ್ ಕುಮಾರ್ ರಚಿಸಿದ ಪೆನ್ಸಿಲ್ ಸ್ಕೆಚ್ ಅನ್ನು ಅತಿಥಿಗೆ ನೀಡಿದರು. ಸ್ವಯಂಸೇವಕಿಯರಾದ ಶ್ವೇತಾ ಕೆ ಜಿ ನಿರೂಪಿಸಿ, ಸಿಂಚನ ಕಲ್ಲೂರಾಯ ವಂದಿಸಿದರು. ಬಳಿಕ, ಕ್ಯಾಪ್ಟನ್ ಅವರೊಂದಿಗೆ ಎನ್ನೆಸ್ಸೆಸ್ ಅಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸಂವಾದ ನಡೆಸಿದರು. ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.

ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಮಾಹಿತಿ ಕಾರ್ಯಗಾರ

Article Image

ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಮಾಹಿತಿ ಕಾರ್ಯಗಾರ

ವಿದ್ಯಾಗಿರಿ: ಶಿಕ್ಷಣ ಕ್ಷೇತ್ರದಲ್ಲಿ ನಾಟಕ ಮತ್ತು ಕಲೆ ಕೇವಲ ಪಠ್ಯೇತರ ಚಟುವಟಿಕೆಗಳಲ್ಲ. ಬದಲಾಗಿ ಅವು ಸೃಜನಶೀಲತೆ, ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸಲಿರುವ ಪ್ರಬಲ ಸಾಧನಗಳಾಗಿವೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‌ರಾಮ್ ಸುಳ್ಯ ತಿಳಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ ‘ಶಿಕ್ಷಣದಲ್ಲಿ ಕಲೆ ಹಾಗೂ ನಾಟಕದ ಪಾತ್ರ’ ದ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು. ಶಿಕ್ಷಣದಲ್ಲಿ ಕಲೆಯನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ವಯಂ ಅಭಿವ್ಯಕ್ತಿ ಮತ್ತು ಸಂವಹನಕ್ಕಾಗಿ ಮೌಲ್ಯಯುತವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ನೃತ್ಯ, ಸಂಗೀತ, ನಾಟಕ, ಸೃಜನಶೀಲ ಬರವಣಿಗೆ, ರಂಗಭೂಮಿ ಇತ್ಯಾದಿಗಳನ್ನು ಒಳಗೊಂಡಿರಬೇಕು. ನಾಟಕಗಳು ನಮ್ಮ ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ನಮ್ಮ ಕಣ್ಣ ಮುಂದೆ ಸೃಷ್ಟಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಕಲೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯಕ. ಪ್ರದರ್ಶನದ ಕಲೆಗಳು ಮಕ್ಕಳಲ್ಲಿ ತಮ್ಮ ಭಾವನೆ ಮತ್ತು ಕಲ್ಪನೆಗಳನ್ನು ಹಾಗೂ ತಮ್ಮದೇ ಆದ ವಿಶಿಷ್ಟ ಧ್ವನಿಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತವೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಕ್ಷಕರಾದವರು ಕಲೆಗಾರರು, ನಾಟಕಗಾರರು ಆಗಿರಬೇಕು. ಯಾವುದೇ ವಿಷಯವನ್ನು ಕಲೆ ಮತ್ತು ನಾಟಕದ ಮೂಲಕ ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ವಿಷಯವನ್ನು ಮನ ಮುಟ್ಟವಂತೆ ತಿಳಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರಮೂರ್ತಿ ಹೆಚ್. ಕೆ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಜಾನೆಟ್ ಸ್ವಾಗತಿಸಿ, ಅಪೂರ್ವ ವಂದಿಸಿ, ಕಾವ್ಯ ಕೆ ಕಾರ್ಯಕ್ರಮ ನಿರೂಪಿಸಿದರು.

ಎಕ್ಸಲೆಂಟ್: ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ

Article Image

ಎಕ್ಸಲೆಂಟ್: ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ

ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಪ್ರತೀಕ್ಷಣ ಸ್ಮರಿಸಬೇಕು. ಸೈನಿಕರು ಭಾವಜೀವಿಗಳು, ನಚೀಕೇತ್, ಸೌರಭ್ ಕಾಲಿಯಾರಂತಹ ಮೊದಲಾದ ವೀರ ಯೋಧರ ಬಲಿದಾನದ ಪ್ರತಿಫಲವಾಗಿ ಇಂದಿನ ಭಾರತ ಭವ್ಯವಾಗಿದೆ. ಕಾರ್ಗಿಲ್ ಯುದ್ಧವಲ್ಲ ಅದೊಂದು ಕಾರ್ಯಾಚರಣೆ. ಯಾಕೆ ಭಾರತಕ್ಕೆ ಕಾರ್ಗಿಲ್ ಮುಖ್ಯವೆಂದರೆ 527 ಸೈನಿಕರು ತಮ್ಮ ಯಶಸ್ವಿ ಕಾರ್ಯಚರಣೆಯಿಂದ ಭಾರತಕ್ಕೆ ಜಯ ತಂದುಕೊಟ್ಟು ಹುತಾತ್ಮರಾದರು. ಇಂದು ಆ ಕಾರ್ಯಚರಣೆಯಲ್ಲಿ ಮಡಿದ ಅಷ್ಟೂ ಸೈನಿಕರನ್ನು ಸ್ಮರಿಸಿಕೊಳ್ಳುವುದು ಅತೀ ಮುಖ್ಯ ಎಂಬುದಾಗಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಅಭಿಪ್ರಾಯಪಟ್ಟರು. ಎಕ್ಸಲೆಂಟ್ ಶಿಕ್ಷನ ಸಂಸ್ಥೆಗಳು ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿಯ ತನಕ ಹುತಾತ್ಮರಾದ ಎಲ್ಲಾ ಸೈನಿಕರಿಗೂ ಎದೆಗೆ ಗುಂಡುಬಿದ್ದಿದೆಯೇ ವಿನಃ ಬೆನ್ನಿಗಲ್ಲ. ಅಷ್ಟಿದ್ದರೂ ದೇಶಕ್ಕಾಗಿ ಬದುಕಬೇಕು ಎಂಬ ಭಾವುಕತೆ ಸೈನಿಕರದ್ದು. ಅವರು ದೇಶದ ರಕ್ಷಣೆ ಕಣ್ಣಮುಂದೆ ಬಂದರೆ ಸದಾ ಬಲಿದಾನಕ್ಕೆ ಮುಂದಾಗುತ್ತಾರೆ. ಬಲಿದಾನಗೈದ ವೀರಯೋಧರ ಕನಸುಗಳನ್ನು ಹೊತ್ತ ಭೂಮಿ ಇದು ಕಾರ್ಗಿಲ್ ಎಂದಿಗೂ ಭಾರತದ ಭಾಗ ಅಲ್ಲಿ ಮಡಿದ ಯೋಧರ ಪರಿಶ್ರಮ ನಮ್ಮ ನೆಮ್ಮದಿಯ ನಿದ್ರೆಗೆ ಕಾರಣ. ಆದರೆ ಇಂದು ನಾವುಗಳು ಜಾತಿ ಮತ ಭಾಷೆ ಇತ್ಯಾದಿ ಬಂಧನಗಳಿಗೆ ಒಳಗಾಗಿದ್ದೇವೆ. ಅದರಿಂದ ಹೊರಬಂದು ನಾವೆಲ್ಲಾ ಒಂದೇ, ನಾವೆಲ್ಲಾ ಭಾರತೀಯರು ಎನ್ನುವ ಹೆಮ್ಮೆ ನಮಗಿರಬೇಕು. ಜೀವನದಲ್ಲಿ ಗುರಿಯ ಸ್ಪಷ್ಟತೆ ಇದ್ದರೆ ಎಂತಹ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಯೋಧರ ತ್ಯಾಗ ಬಲಿದಾನಗಳನ್ನು ಸದಾ ಗೌರವಿಸಬೇಕು. ದೇಶ ಮೊದಲು ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ಯೋಧರ ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಈ ಕಾರ್ಗಿಲ್ ವಿಜಯ ಸುಲಭವಾಗಿ ಲಭಿಸಿದ್ದಲ್ಲ ಅದರಲ್ಲಿ ನೂರಾರು ಸೈನಿಕರು ವೀರತನದಿಂದ ಹೋರಾಡಿ ತಮ್ಮ ಬಲಿದಾನ ಮಾಡಿದ್ದಾರೆ. ಇಂದು ನಾವೆಲ್ಲಾ ಈ ಸಂಭ್ರಮಾಚರಣೆ ಮಾಡುತ್ತಿರುವುದು ಅವರಿಗೆ ಸಲ್ಲಿಸುತ್ತಿರುವ ಗೌರವ ಎಂದು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಅರಿವನ್ನು ಮೂಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯ ಜಯಶೀಲ, ಎನ್ ಸಿ ಸಿ ನೌಕದಳದ ಕೇರ್‌ಟೇಕರ್ ಆಫೀಸರ್ ರೇಣುಕಾಚಾರ್ಯ, ಭೂದಳದ ಕೇರ್‌ಟೇಕರ್ ಆಫೀಸರ್ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನಿಷಾ, ನವ್ಯ ಕಾರ್ಯಕ್ರಮ ನಿರೂಪಿಸಿದರು. ಹರ್ಷ ಅತಿಥಿಗಳನ್ನು ಪರಿಚಯಿಸಿದರು, ಗುಂಜನ್ ಕಾರ್ಗಿಲ್ ವಿಜಯ ದಿವಸದ ಮಹತ್ವ ತಿಳಿಸಿದರು. ಪ್ರನ್ಶು ವಂದಿಸಿದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸದ ಸವಿನೆನಪಿಗಾಗಿ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.

ಮೂಡುಬಿದಿರೆ: ವಿಶೇಷ ಉಪನ್ಯಾಸ ಕಾರ್ಯಕ್ರಮ

Article Image

ಮೂಡುಬಿದಿರೆ: ವಿಶೇಷ ಉಪನ್ಯಾಸ ಕಾರ್ಯಕ್ರಮ

ಪ್ರತಿದಿನ ಪತ್ರಿಕೆಗಳನ್ನು ಓದುವುದರಿಂದ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಪರಿಣಾಮಕಾರಿ ಸಂವಹನ, ಶಬ್ದ ಸಂಪತ್ತಿನ ವೃದ್ಧಿ ಸಾಧ್ಯ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಹಾಗೂ ಮೂಡುಬಿದಿರೆಯ ಮಹಾವೀರ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ವಿವಿಧ ನವ ಮಾಧ್ಯಮಗಳು ನಕಾರತ್ಮಕ, ಅತಿರಂಜಿತ ಸುದ್ದಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿವೆ. ಆದರೆ ಪತ್ರಿಕೆಗಳ ಮೂಲಕ ದೊರೆಯುವ ಸಕಾರಾತ್ಮಕ ಮತ್ತು ಮಹತ್ವಪೂರ್ಣ ದಾಖಲೆಗಳು ಜ್ಞಾನದ ಜೊತೆ ಓದಿನ ಸುಖವನ್ನು ನೀಡುತ್ತವೆ ಎಂದರು. ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಸಂಪಾದಕೀಯ ಪುಟ, ಸ್ಥಳೀಯ, ರಾಜ್ಯ, ರಾಷ್ಟ್ರಮಟ್ಟದ ಸುದ್ದಿಗಳ ಜೊತೆಗೆ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ಆಸಕ್ತಿದಾಯಕ ಸಂಗತಿಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು. ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಸಾಪ ಮೂಡುಬಿದಿರೆ ತಾಲೂಕು ಘಟಕ ಅಧ್ಯಕ್ಷ ಕೆ ವೇಣುಗೋಪಾಲ್ ಶೆಟ್ಟಿ, ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಬೇರೆ ಬೇರೆ ಮಾತೃಭಾಷೆಗಳನ್ನು ಹೊಂದಿದ್ದರು ಕನ್ನಡಕ್ಕೆ ವಿಶೇಷ ಸ್ಥಾನಮಾನ ನೀಡುತ್ತಾ ಅದನ್ನು ನಮ್ಮ ಜೀವನದ ಅಂಗವನ್ನಾಗಿ ಮಾಡಿಕೊಂಡಿದ್ದು ಉಲ್ಲೇಖನೀಯ ಎಂದರು. ವಿದ್ಯಾರ್ಥಿನಿ ಖ್ಯಾತಿ ಪ್ರಾರ್ಥಿಸಿ, ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ವಿಜಯಲಕ್ಷ್ಮಿ ಮಾರ್ಲಾ ವಂದಿಸಿದರು.

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Article Image

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಎನ್.ಸಿ.ಸಿ. ಭೂದಳ ಮತ್ತು ನೌಕಾದಳ ಘಟಕದ ವತಿಯಿಂದ ಇಂದು (ಜು.26) 25ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, "ಈ ದಿನ ಹುತಾತ್ಮರಾದ ಯೋಧರ ತ್ಯಾಗ ಬಲಿದಾನವನ್ನು ನೆನೆದು, ಯೋಧರ ಜೊತೆಗೆ ಅವರ ಕುಟುಂಬವನ್ನೂ ಸ್ಮರಿಸಬೇಕು. ಪ್ರಜ್ಞಾವಂತ ನಾಗರಿಕರಾಗಿ ದೇಶದ ಏಳಿಗೆ, ಏಕತೆ, ಸಾರ್ವಭೌಮತ್ವವನ್ನು ಹೆಚ್ಚಿಸುವ ಯೋಜನೆ ಮತ್ತು ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ" ಎಂದರು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಎನ್.ಸಿ.ಸಿ. ಕೆಡೆಟ್’ಗಳು ಹುತಾತ್ಮ ಯೋಧರಿಗೆ ರೈಫಲ್ ಸೆಲ್ಯೂಟ್ ಮುಖಾಂತರ ಗೌರವ ಸಲ್ಲಿಸಿದರು. ಕೆಡೆಟ್’ಗಳಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಕಾಲೇಜಿನ ಆಡಳಿತ ಕುಲಸಚಿವ ಡಾ. ಶಲೀಫ್ ಎ. ಪಿ., ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾಕುಮಾರಿ, ಅಸೋಸಿಯೇಟ್ ಎನ್.ಸಿ.ಸಿ. ಅಧಿಕಾರಿ (ಎಎನ್ಒ)ಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಲೆ. ಶುಭಾ ರಾಣಿ, ಕೇರ್ ಟೇಕಿಂಗ್ ಆಫೀಸರ್ (ಸಿಟಿಒ)ಗಳಾದ ಶೋಭಾ, ಹರೀಶ್ ಶೆಟ್ಟಿ, ಹಿರಿಯ ಎಎನ್ಒ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಕೆಡೆಟ್ ಗಳು ಉಪಸ್ಥಿತರಿದ್ದರು. ಕೆಡೆಟ್ ದೀಪ್ತಿ ಆಚಾರ್ಯ ಪಿ. ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

Article Image

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ದೇಶಪ್ರೇಮ ಎಂದಾಕ್ಷಣ ಸೇನೆ ಸೇರುವುದು ಮಾತ್ರವಲ್ಲ. ದೇಶದ ಅಭ್ಯುದಯಕ್ಕಾಗಿ ಸಲ್ಲಿಸುವ ಪ್ರತೀ ಕಾರ್ಯಕ್ರಮ ದೇಶಪ್ರೇಮವೆನಿಸುತ್ತದೆ ಎಂದು ಪತ್ರಕರ್ತ ಹಾಗೂ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ನುಡಿದರು. ಅವರು ಶುಕ್ರವಾರ (ಜು. 26) ಶಿವರಾಮ ಕಾರಂತರ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ವರ್ಷದ ಚಟುವಟಿಕೆಗಳು ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಭಾರತದ ಸ್ವಾತಂತ್ರ‍್ಯದ ನಂತರ ಐದು ಪ್ರಮುಖ ಯುದ್ಧಗಳು ನಡೆದಿವೆ. ಪಾಕಿಸ್ತಾನ ನಾಲ್ಕು ಯುದ್ಧಗಳಲ್ಲೂ ನಮ್ಮ ವಿರುದ್ಧ ಗೆಲ್ಲಲಾಗಲಿಲ್ಲ. ಸೈನಿಕರ ಸಾವು ನಮಗೆ ಸ್ವಾಭಾವಿಕ ಸಂಗತಿ ಎಂದೆನಿಸಬಾರದು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಲಿದಾನವನ್ನು ಸ್ಮರಿಸಬೇಕು. ಸೈನಿಕರ ನಿಸ್ವಾರ್ಥ ಸೇವೆ ಮತ್ತು ನಿಷ್ಠೆ ಸದಾ ಸ್ಮರಣೀಯ ಎಂದರು. ಕೆಂಗುರಸೆ ಎಂಬ ಯೋಧ ಘಾತಕ್ ಪ್ಲಟೂನ್ ಸೇರಿ ಹುತಾತ್ಮನಾದ ಮೇಲೆ ನಾಗಲ್ಯಾಂಡ್‌ನಲ್ಲಿ ಸೈನ್ಯದ ಬಗ್ಗೆ ಇದ್ದ ನಕಾರಾತ್ಮಕತೆ ಹೋಗಿ ಹೆಚ್ಚು ಹೆಚ್ಚು ಯುವಕರು ಸೇನೆ ಸೇರುವಂತಾದ ಪ್ರಸಂಗವನ್ನು ವಿವರಿಸಿದರು. ನಮ್ಮ ದೇಶದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಕಾರ್ಗಿಲ್‌ಯುದ್ಧ ಪಾಕಿಸ್ತಾನ ನಮ್ಮ ಬೆನ್ನಿಗೆ ಹಾಕಿದ ಚೂರಿ. ಕ್ಯಾ.ವಿಕ್ರಂ ಬಾತ್ರ, ರಾಜೇಶ್ ಅಧಿಕಾರಿ, ಕರ್ನಲ್ ರವೀಂದ್ರನಾಥ್ ಸೇರಿ ಹಲವು ಸೈನಿಕರ ಬಲಿದಾನದ ನಂತರ ನಾವು ಕಾರ್ಗಿಲ್ ಕದನ ಗೆದ್ದೆವು. ಮೊದಲ ಬಾರಿ ಈ ದೇಶದಲ್ಲಿ ಯುದ್ಧದ ನಂತರ ಎಲ್ಲಾ ಹುತಾತ್ಮರ ದೇಹಗಳನ್ನು ಮನೆಗೆ ತಲುಪಿಸುವ ಕೆಲಸ ನಡೆಯಿತು. ಹಾಗೆಯೇ ಅದರ ಮೂಲಕ ಭಾವನಾತ್ಮಕವಾಗಿ ಭಾರತವನ್ನು ಬೇಸೆಯೋ ಕೆಲಸವಾಯಿತು. ಇಂದಿಗೂ ಯುದ್ಧ ನಿಂತಿಲ್ಲ ಆದರೆ ಯುದ್ಧದ ರೂಪ ಬದಲಾಗಿದೆ ಎಂದರು. ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಮುನಿರಾಜ ರೆಂಜಾಳ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವೃತ್ತಿಯಲ್ಲಿ ನಿವೃತ್ತರಾದ ಪ್ರತಿಯೊಬ್ಬರಿಗೂ ಅವರ ಹಿಂದಿನ ವೃತ್ತಿಯ ಬಗ್ಗೆ ಆಸಕ್ತಿ ಇರುತ್ತದೆ. ನಾನು ಕಳೆದ 40 ವರ್ಷದಿಂದ ಎನ್.ಎಸ್.ಎಸ್. ಸಂಪರ್ಕದಲ್ಲಿದ್ದೇನೆ. ವಿಶ್ವಮಾನವನಾಗಿಸುವ ವೇದಿಕೆ ಯಾವುದಾದರೂ ಇದ್ದರೆ ಅದು ರಾ.ಸೇ.ಯೋ ಎಂದರು. ಒಂದು ಕೆಲಸವನ್ನು ಆರಂಭಿಸಿದ ನಂತರ ಅದಕ್ಕೆ ಪೂರಕವಾದ ಶ್ರಮ ಮತ್ತು ನಿರಂತರತೆ ಅಗತ್ಯ. ಈಗಿನ ಮಕ್ಕಳಲ್ಲಿ ಕಷ್ಟದ ಪರಿಚಯ ಇಲ್ಲ, ಹೊಂದಾಣಿಕೆಯೂ ಇಲ್ಲ. ಶ್ರಮಪಟ್ಟಾಗ ಮಾತ್ರ ಸುಂದರ ಜೀವನವನ್ನು ರೂಪಿಸಿಕೊಳ್ಳುಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಜೀವನದಲ್ಲಿ ಶಿಸ್ತುತನ್ನು ಪಾಲಿಸಬೇಕು. ತರಗತಿ ಹೊರಗಿನ ಶಿಕ್ಷಣ ಅದು ನಿಜವಾದ ಶಿಕ್ಷಣ. ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಿ. ಆಗ ಮಾತ್ರ ಜೀವನದಲ್ಲಿ ಯಶಸ್ಸುನ್ನು ಸಾದಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ಚಿ ಪ್ಳೂಣಕರ್ ಉಪಸ್ಥಿತರಿದ್ದರು. ರಾಷ್ಟೀಯ ಸೇವಾ ಯೋಜನೆಯ ಸಂಯೋಜಕ ಧರ್ಮೇಂದ್ರ ಕುದ್ರೋಳಿ ಸ್ವಾಗತಿಸಿ, ಗಣಪತಿ ನಾಯಕ್ ವಂದಿಸಿ, ಶಾಲೆಟ್ ಮೋನೀಸ್ ನಿರೂಪಿಸಿದರು.

ಉಜಿರೆ: ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ

Article Image

ಉಜಿರೆ: ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ

“ಗಿಡಗಳನ್ನು ಸಂರಕ್ಷಿಸುವ ಹೊಣೆಗಾರಿಕೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು” ಎಂದು ನಾಟಿ ವೈದ್ಯ ಪರಿಣತ, ಉಜಿರೆಯ ಧ.ಮಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮಾಜಿ ಸಿಬ್ಬಂದಿ ಸದಾನಂದ ಬಿ. ಮುಂಡಾಜೆ ಹೇಳಿದರು. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಸಂಘ ಮತ್ತು ಇಕೋ ಕ್ಲಬ್ ಇಂದು (ಜು.19) ಆಯೋಜಿಸಿದ್ದ ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತನ್ನ ಬೇರುಗಳ ಮೂಲಕ ನೀರನ್ನು ಹೀರಿಕೊಂಡು ಹೂ ಹಣ್ಣು ಇವನ್ನೆಲ್ಲ ನೀಡುವ ಯಾವುದೇ ಗಿಡ ಮರ ಬಳ್ಳಿಗಳು ಪ್ರಪಂಚದಲ್ಲಿ ಶ್ರೇಷ್ಠವಾದದ್ದು. ಹಲವಾರು ರೋಗಗಳನ್ನು ನಿವಾರಿಸುವಲ್ಲಿ ಸಸ್ಯಗಳ ಪಾತ್ರ ಬಹಳ ಮುಖ್ಯವಾದಂತದ್ದು. ಅಂತಹ ಗಿಡ ಮರಗಳನ್ನು ಉಳಿಸುವ ಉತ್ಸಾಹ ಅಗತ್ಯ ಎಂದು ಅವರು ಹೇಳಿದರು. ಒಂದು ರೋಗ ಬರಲು ಮನಸ್ಸು ಕಾರಣ. ಆ ರೋಗ ಗುಣವಾಗಲು ಕೂಡ ಮನಸ್ಸೇ ಕಾರಣ. ಹೀಗಾಗಿ ಔಷಧ ಕೊಡುವವನು ಮತ್ತು ತೆಗೆದುಕೊಳ್ಳುವವನ ಮಧ್ಯೆ ನಂಬಿಕೆ ಇದ್ದಾಗ ಮಾತ್ರ ಔಷಧ ಫಲಿಸುತ್ತದೆ ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ಪ್ರಕೃತಿಯಲ್ಲಿರುವ ಯಾವುದೇ ಗಿಡಗಳಲ್ಲಿ ಒಂದಲ್ಲ ಒಂದು ಔಷಧೀಯ ಗುಣ ಇದ್ದೇ ಇರುತ್ತದೆ. ಸಸ್ಯಗಳನ್ನು ಪ್ರೀತಿಸಿ, ಅವುಗಳೊಂದಿಗೆ ಮಾತನಾಡಿ. ಅವುಗಳು ಸ್ಪಂದಿಸುವ ಗುಣ ಹೊಂದಿವೆ” ಎಂದರು. ವಿಭಾಗದ ಭಿತ್ತಿಪತ್ರಿಕೆ ‘ಸಸ್ಯಸೌರಭ’ದ ‘ಹರ್ಬಲ್ಸ್ ದ್ಯಾಟ್ ಹೀಲ್’ ಸಂಚಿಕೆ ಅನಾವರಣಗೊಳಿಸಲಾಯಿತು. ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಥಮ್ ಪ್ರಾರ್ಥಿಸಿದರು. ನಯನ ಕೆ. ಸ್ವಾಗತಿಸಿ, ಲಾವಣ್ಯ ವಂದಿಸಿ, ವೈದೇಹಿ ನಿರೂಪಿಸಿದರು.

ಉಜಿರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Article Image

ಉಜಿರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಜನಸಂಖ್ಯಾ ಸ್ಪೋಟದಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ. ಎಲ್ಲರಿಗೂ ಆಹಾರ, ನೆಲ, ಜಲ, ಹಾಗೂ ಪರಿಶುದ್ಧವಾದ ಗಾಳಿ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆಯಾಗಿ ನಾವು ಇತರ ಗ್ರಹಗಳಿಗೆ ವಾಸ್ತವ್ಯಕ್ಕೆ ಹೋಗಬೇಕಾದ ಅನಿವಾರ್ಯತೆ ಒದಗಿ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು ಹೇಳಿದರು. ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಹಾಗೂ ಉಜಿರೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವಜನಸಂಖ್ಯಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತದಲ್ಲಿ ಪ್ರತಿದಿನ 73,781 ರಷ್ಟು ಜನಸಂಖ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯಾ ಸ್ಪೋಟದ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಚಿಕ್ಕ ಸಂಸಾರವೇ ಚೊಕ್ಕ ಸಂಸಾರವಾಗಿದ್ದು, ಸಂತಾನ ನಿಯಂತ್ರಣ ಅನಿವಾರ್ಯವಾಗಿದೆ. ಮಹಿಳೆ ಆರೋಗ್ಯವಂತಳಾದರೆ, ಕುಟುಂಬ ಹಾಗೂ ಸಮಾಜವೂ ಆರೋಗ್ಯವಂತವಾಗಿರುತ್ತದೆ. ಮಕ್ಕಳ ಜನನದ ನಡುವಿನ ಅಂತರ ಕನಿಷ್ಠ ಮೂರು ವರ್ಷಗಳಾದರೂ ಇರಬೇಕು. ಇಂದು 144 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಪ್ರಥಮ ಸ್ಥಾನದಲ್ಲಿರುವುದು ಪ್ರಗತಿಯ ದ್ಯೋತಕವಲ್ಲ. ಜನಸಂಖ್ಯಾ ಸ್ಪೋಟದ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಆರೋಗ್ಯವಂತ ಯುವಜನತೆಯಿಂದ ದೇಶದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಷಾಕಿರಣ ಕಾರಂತ ಮಾತನಾಡಿ ಗ್ರಾಮೀಣ ಪ್ರದೇಶದ ಮಹಿಳೆಯರು ಇನ್ನೂ ಹೆಚ್ಚು ಸಬಲೀಕರಣಗೊಳ್ಳಬೇಕಾಗಿದೆ. ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರು ನೀಡುವ ಮಾಹಿತಿ, ಮಾರ್ಗದರ್ಶನದ ಸದುಪಯೋಗ ಪಡೆದು ಹಾಗೂ ಸರ್ಕಾರದ ಸವಲತ್ತುಗಳ ಬಳಕೆಯೊಂದಿಗೆ ಮಹಿಳೆಯರು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಅವರು ಸಲಹೆ ನೀಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಶುಭಾಶಂಸನೆ ಮಾಡಿ, ದೇಶದ ಪ್ರಬಲ ಶಕ್ತಿಯಾದ ಯುವಜನತೆ ಎಲ್ಲಾ ಆಯಾಮಗಳಲ್ಲಿಯೂ ಸದೃಢರಾದಾಗ ದೇಶದ ಸರ್ವತೋಮುಖ ಪ್ರಗತಿಯಾಗುತ್ತದೆ. ನೌಕರರ ಕೊರತೆ ಇದ್ದರೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಪ್ರಜ್ಞೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ದ.ಕ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೌಜನ್ಯ ಮತ್ತು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞೆ ಡಾ. ರಶ್ಮಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು. ಡಾ. ಮಂಜು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ. ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು: ತೇಜಸ್ ವಿ.ಎಸ್., ಸರ್ಕಾರಿ ಪದವಿಪೂರ್ವ ಕಾಲೇಜು, ವೇಣೂರು (ಪ್ರಥಮ). ಧನುಷ್, ಕೆ.ಎನ್. ಮುಂಡಾಜೆ ಪದವಿಪೂರ್ವ ಕಾಲೇಜು, ಮುಂಡಾಜೆ (ದ್ವಿತೀಯ). ಫಾತಿಮತ್ ಹಿಸಾನಾ, ಸಕಾಋಇ ಪದವಿಪೂರ್ವ ಕಾಲೇಜು ಕೊಯ್ಯೂರು. ಬೆಳ್ತಂಗಡಿ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು. ಫಾತಿಮತ್ ಸುಮಯ್ಯ, ಸರ್ಕಾರಿ ಪದವಿಪೂರ್ವ ಕಾಲೇಜು ವೇಣೂರು (ಪ್ರಥಮ), ಕುಮಾರಿ ಸುರಕ್ಷಿತಾ, ವಾಣಿ ಪದವಿಪೂರ್ವ ಕಾಲೇಜು, ಬೆಳ್ತಂಗಡಿ (ದ್ವಿತೀಯ), ಕುಮಾರಿ ಜೆನಿತಾ ಪಿರೇರಾ, ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ (ತೃತೀಯ) ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸ್ವಾಗತಿಸಿದರು. ವಿಭಾಗ ಯೋಜನಾಧಿಕಾರಿ ಅಜೇಯ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವ

Article Image

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವ

ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರವು ಸೇವಾ ರೂಪದಲ್ಲಿ ಸಮಾಜಕ್ಕೆ ಒಳಿತನ್ನು ಮಾಡುವ ಸದುದ್ದೇಶದಿಂದ ಸಾಗುತಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ವ್ಯಾಪರೀಕರಣವಾಗುತ್ತಿದೆ. ಈ ನಡುವೆಯೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣ ಮಾಡದೇ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ಶ್ರಮಿಸುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ಸೋಮವಾರ ನಡೆದ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವದ ಸಲುವಾಗಿ ನಡೆದ "ಅಂಕುರ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ಸದಾ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಒತ್ತು ನೀಡಿದೆ. ಸಾಂಸ್ಕೃತಿಕ, ಕ್ರೀಡಾ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ದತ್ತು ಸ್ವೀಕಾರದ ಅಡಿಯಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಸಂಸ್ಥೆಯು ಈ ಹಿಂದೆ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇತ್ತು. ಆಗ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ ಇದೀಗ ಸ್ವಾಯತ್ತ ಸ್ಥಾನಮಾನದೊಂದಿಗೆ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆ, ಫಲಿತಾಂಶವನ್ನು ನೀಡಲು ಸಹಕಾರಿಯಾಗಿದೆ. ಶೈಕ್ಷಣಿಕ ವರ್ಷವನ್ನು ಸರಿಯಾದ ಸಮಯದಲ್ಲಿ ಪೂರಣಗೊಳಿಸಲು ಸಾಧ್ಯ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾವು ಬೆಳೆಯುವ ಪರಿಸರ ನಮ್ಮ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪೋಷಕರು ಇದರ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಪದವಿ ಜೀವನದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮ ಹಾಗೂ ನಾವು ಸಂಪಾದಿಸುವ ಜ್ಞಾನ ಮತ್ತು ಸಾಧನೆಯು ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಕುಲಸಚಿವ (ಪರೀಕ್ಷಾಂಗ) ಡಾ. ನಾರಾಯಣ ಶೆಟ್ಟಿ, ಕುಲಸಚಿವ (ಆಡಳಿತ) ಡಾ. ಟಿ. ಕೆ. ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ

Article Image

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಮುಂದಿನ ತಿಂಗಳು ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ ಆಯೋಜಿಸಲಾಗುವುದು ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಹೇಳಿದರು. ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಗ್ಗೆ ಅವರು ಮಾತನಾಡಿ ಧನ ಸಂಗ್ರಹದ ಬಗ್ಗೆ ಸಲಹೆ, ಸೂಚನೆ ನೀಡಿದರು. ಕೃಷ್ಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ ಐತಾಳ, ಪದ್ಮಕುಮಾರ್ ಮತ್ತು ವಸಂತ ರಾವ್ ದೇಣಿಗೆ ಸಂಗ್ರಹದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ನಿಧನರಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಎನ್.ಜಿ. ಪಟವರ್ಧನ್ ಬಗ್ಗೆ ಆರ್.ಯನ್. ಪೂವಣಿ ನುಡಿನಮನ ಸಲ್ಲಿಸಿದರು. ಬಳಿಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ಸಾದರ ಪಡಿಸಿದರು. ಕುಸುಮಾವತಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು.

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆ

Article Image

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆ

'ವೈದ್ಯೋ ನಾರಾಯಣೋ ಹರಿ' ಎಂಬ ಉಕ್ತಿಯಂತೆ, ಜುಲೈ 1ರಂದು ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ದೀಪ್ತಿ ರಾವ್ ರವರು ಉಪಸ್ಥಿತರಿದ್ದು ಉತ್ತಮ ಆರೋಗ್ಯಕರವಾದ ಜೀವನ ನಡೆಸಲು ಯಾವ ಕ್ರಮವನ್ನು ಅನುಸರಿಸಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅದೇ ರೀತಿ ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್‌ರವರು ನಾವು ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಹೊಂದಿರಬೇಕು, ನಮ್ಮ ಗುರಿ ಏನಿದೆಯೋ ಅದನ್ನು ಮುಟ್ಟಲು ನಿರಂತರ ಓದು ಅಗತ್ಯ ಅನ್ನುವುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಶ್ಮಿತಾರವರು ವೈದ್ಯಕೀಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಂಯೋಜಕರಾದ ಶ್ರಿಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಖಾರವರು ನೆರವೇರಿಸಿ, ದಿಯಾರವರು ವಂದಿಸಿದರು.

ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Article Image

ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

ವಿದ್ಯಾಗಿರಿ: ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ನ ಸೇವೆಯ ಧ್ಯೇಯದಿಂದ ವ್ಯಕ್ತಿ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡದ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಲು ಸಾಧ್ಯ. ಇಲ್ಲಿ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯವಾದ ಪಾಠಗಳನ್ನು ಹೇಳಿಕೊಡುತ್ತವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಡಾ. ಮೋಹನ ಆಳ್ವ ಅವರ ಶ್ರಮದಿಂದ ಜಿಲ್ಲಾ ಘಟಕವು ಮುಂಚೂಣಿಯಲ್ಲಿದೆ. ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯು ಇಡೀ ವಿಶ್ವವೇ ಮೂಡುಬಿದಿರೆಯತ್ತ ಮುಖ ಮಾಡುವಂತೆ ಮಾಡಿತ್ತು ಎಂದರು. ಪಠ್ಯದ ಕಲಿಕೆಯ ಜೊತೆಗೆ ಪಠ್ಯತರ ಚಟುವಟಿಕೆಗಳು ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ ಧನಾತ್ಮನಕವಾಗಿರಲು ಸಾಧ್ಯ ಎಂದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮದ್ ಸದಾಕತ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಾರ್ಥನೆಯಿಂದಲೇ ಇದರ ಧ್ಯೇಯವನ್ನು ತಿಳಿಯಬಹುದಾಗಿದೆ. ಸೇವಾ ಮನೋಭಾವ ಎಲ್ಲಾ ವಿದ್ಯಾರ್ಥಿಗಳು ಬೆಳೆಸುವುದು ಅವಶ್ಯಕ ಎಂದರು. ಯುವಜನತೆ ದೇಶದ ಆಸ್ತಿ. ಈ ಯುವಶಕ್ತಿಯನ್ನು ಬೆಳೆಸುವ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಕೌಶಲ, ನಾಗರಿಕ ಮೌಲ್ಯಗಳು ಹಾಗೂ ದೈಹಿಕ ಸಾಮರ್ಥ್ಯ ಬೆಳೆಸುವಲ್ಲಿ ಇದರ ಪಾತ್ರ ಅನನ್ಯ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಝಾನ್ಸಿ ಪಿ. ಎನ್ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ರೋವರ್ ಸ್ಕೌಟ್ ಲೀಡರ್ ಸುನಿಲ್, ರೇಂಜರ್ ಲೀಡರ್ ವೀಣಾ, ದಳನಾಯಕ ಕಾರ್ತಿಕ್, ದಳ ನಾಯಕಿ ನಕ್ಷತ್ರ ಇದ್ದರು. ವಿದ್ಯಾರ್ಥಿನಿ ನಕ್ಷತ್ರ ಸ್ವಾಗತಿಸಿ, ವಿದ್ಯಾರ್ಥಿನಿ ವರ್ಷ ವಂದಿಸಿ, ವಿದ್ಯಾರ್ಥಿನಿ ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರೋ. ನರೇಂದ್ರ ಎಲ್. ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸನ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ

Article Image

ಪ್ರೋ. ನರೇಂದ್ರ ಎಲ್. ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸನ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ

ಮೂಡುಬಿದಿರೆ: ಮೂಲತಃ ಕೃಷಿ ಕುಟುಂಬದಿಂದ ಬಂದ ಪ್ರೋ. ನರೇಂದ್ರ ನಾಯಕ್‌ರು ಶೈಕ್ಷಣಿಕ ಕ್ಷೇತ್ರದಲ್ಲೂ ಕೃಷಿಯ ಮೂಲಸತ್ವಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶೈಕ್ಷಣಿಕ ಕೃಷಿಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ(ಕುಪ್ಮಾ) ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು. ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮೂಡುಬಿದಿರೆಯ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕಲಾ ಪ್ರೇಮಿ, ಶಿಕ್ಷಣ ತಜ್ಞ ಪ್ರೋ. ನರೇಂದ್ರ ಎಲ್. ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸನ್ಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ ಕಾರ‍್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೋ. ನರೇಂದ್ರ ಎಲ್. ನಾಯಕ್, ಒಬ್ಬ ವ್ಯಕ್ತಿ, ತಾನು ಮಾಡುವ ಕೆಲಸದಿಂದ ಗೌರವ, ಪ್ರೀತಿಯನ್ನು ಗಳಿಸಲು ಸಾಧ್ಯ. ನಾನು ಪ್ರತೀ ಕೆಲಸವನ್ನು ನಿಸ್ವಾರ್ಥದಿಂದ, ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಕಳೆಯುತ್ತೇನೆ. ಕುಪ್ಮಾದ ಇತರೆ ಸದಸ್ಯರ ಸಾಧನೆ ಮುಂದೆ ನನ್ನ ಸಾಧನೆ ಚಿಕ್ಕದು. ನಿಮ್ಮ ಸಾಧಕರ ಸಾಲಿನಲ್ಲಿ ನನಗೊಂದು ಪುಟ್ಟ ಸ್ಥಾನಕೊಡಿ, ಅಷ್ಟೇ ಸಾಕು ಎಂದು ಸಂತಸವನ್ನು ವ್ಯಕ್ತಪಡಿಸಿದರು. ಶಿಕ್ಷಣ ಪ್ರೇಮಿಗಳಿಂದ ಶಿಕ್ಷಣ ಸಂಸ್ಥೆ ಕುಪ್ಮಾದ ಜೊತೆ ಕಾರ‍್ಯದರ್ಶಿ ಮೈಸೂರಿನ ವಿಶ್ವನಾಥ ಶೇಷಾಚಲ ಮಾತನಾಡಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯದ ಹಿನ್ನಲೆಯುಳ್ಳವರು ಸ್ಥಾಪಿಸಿದರೆ, ಕರಾವಳಿಯಲ್ಲಿ ಕಲೆ, ಸಾಹಿತ್ಯ, ಶಿಕ್ಷಣದ ಅಭಿರುಚಿಯುಳ್ಳವರು ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು. ತಮ್ಮ ವರ್ತನೆಯಲ್ಲಿ ಆದರ್ಶ ತುಂಬಿಕೊಂಡಿರುವವರು ನರೇಂದ್ರ ನಾಯಕರು, ನಮಗೆಲ್ಲರಿಗೆ ಕಾರ‍್ಯಸಫಲತೆಯಲ್ಲಿ ಜೀವಂತ ಉದಾಹರಣೆ ಎಂದರು. ವಿದ್ಯೆ ವಿನಯವುಳ್ಳವನಿಗೆ ಸ್ಥಾನಮಾನ ಬರುತ್ತದೆ ಎಂಬುದಕ್ಕೆ ನರೇಂದ್ರ ನಾಯಕರು ಉತ್ತಮ ಉದಾಹರಣೆ ಎಂದು ದಾವಣಗೆರೆ ಕುಪ್ಮಾ ಘಟಕದ ಸಂಯೋಜಕ ಎಸ್. ಜೆ. ಶ್ರೀಧರ್ ನುಡಿದರು. ಜೀವನ ಮರಳಿ ಅರಳಲಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಪ್ಮಾದ ಗೌರವಾಧ್ಯಕ್ಷ ಡಾ. ಎಂ. ಬಿ. ಪುರಾಣಿಕ್, ಷಷ್ಟಬ್ದಿ ಆಚರಿಸುತ್ತಿರುವ ನರೇಂದ್ರ ನಾಯಕರ ಜೀವನ ಮರಳಿ ಅರಳಲಿ ಎಂದು ಹಾರೈಸಿದರು. ಕಾರ‍್ಯಕ್ರಮದಲ್ಲಿ ಪ್ರೋ. ನರೇಂದ್ರ ಎಲ್. ನಾಯಕ್ ಹಾಗೂ ಡಾ. ಉಷಾ ಪ್ರಭಾ ನಾಯಕ್ ದಂಪತಿಗಳನ್ನು ಕುಪ್ಮಾವತಿಯಿಂದ ಸನ್ಮಾನಿಸಲಾಯಿತು. ಕಾರ‍್ಯಕ್ರಮ ಆರಂಭದಲ್ಲಿ ಪ್ರೋ. ನರೇಂದ್ರ ಎಲ್. ನಾಯಕ್‌ರ ಜೀವನ ಆಧಾರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಶಕ್ತಿ ಶಿಕ್ಷಣ ಸಮೂಹದ ಡಾ. ಕೆ.ಸಿ. ನಾಕ್, ಎಕ್ಸ್ ಪರ್ಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ನಾಯಕ್ ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿ, ಕುಪ್ಮಾ ಉಪಾಧ್ಯಕ್ಷ ಯುವರಾಜ್ ಜೈನ್ ಸ್ವಾಗತಿಸಿ, ಕುಪ್ಮಾ ಉಪಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ವಂದಿಸಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ, ಉಚಿತ ಸಮವಸ್ತ್ರ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

Article Image

ಅಂತರಾಷ್ಟ್ರೀಯ ಯೋಗ ದಿನಾಚರಣೆ, ಉಚಿತ ಸಮವಸ್ತ್ರ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಉಚಿತ ಸಮವಸ್ತ್ರ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು. ಮೊದಲಿಗೆ ಮಂಜುಳಾ ಜೈನ್ ಇವರ ಮಾರ್ಗದರ್ಶನದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕತೆಯನ್ನು ನೀಡಲಾಯಿತು. ಯೋಗ ದಿನಾಚರಣೆಯ ವಿಶೇಷತೆ ಮತ್ತು ಆಚರಣೆಯ ಮಹತ್ವದ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಯೋಗ ದಿನಾಚರಣೆಯ ಶುಭಾಶಯವನ್ನು ಕೋರಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ದಿಗಂಬರ ಜೈನ ವಿದ್ಯಾ ವರ್ಧಕ ಸಂಘ(ರಿ.) ಇದರ ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಲಿ ಎಂದು ಹಾರೈಸಿದರು. ಈ ಸುಸಂದರ್ಭದಲ್ಲಿ ಕೊಡುಗೈ ದಾನಿಯಾದ ಪ್ರಥ್ವಿರಾಜ್ ಶೆಟ್ಟಿ ಇವರು ಸುಮಾರು 30 ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಿದರು. ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾದ ಪೂರ್ಣಚಂದ್ರ ಜೈನ್ ಇವರ ವತಿಯಿಂದ 1 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡಬಿದಿರೆ ಇದರ ಅಧ್ಯಕ್ಷರಾಗಿರುವ ಪೂರ್ಣಚಂದ್ರ ಜೈನ್ ಮತ್ತು ಇದರ ಕಾರ್ಯದರ್ಶಿಗಳಾದ ಎಂ.ಕೆ. ಹರೀಶ್, ಶಾಲಾಭಿವೃದ್ಧಿಯ ನೂತನ ಅಧ್ಯಕ್ಷರಾದ ಪವನ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ. ಯೋಗ ಶಿಕ್ಷಕಿ ಮಂಜುಳಾ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ರೋಲಿಟಾರವರು ಸ್ವಾಗತಿಸಿದರು, ದಿವ್ಯಾಶ್ರೀ ಧನ್ಯವಾದಗೈದರು, ಪ್ರಣೀತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಎಕ್ಸಲೆಂಟ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

Article Image

ಎಕ್ಸಲೆಂಟ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯೋಗ ಎಂದರೆ ದೇಹ ಮನಸ್ಸುಗಳ ಚೈತನ್ಯದ ಶಕ್ತಿ. ಇದು ಮನುಷ್ಯನನ್ನು ಉಲ್ಲಾಸದಾಯಕನನ್ನಾಗಿ ಮಾಡುತ್ತದೆ. ಪ್ರತಿನಿತ್ಯ ಯೋಗದ ಅಭ್ಯಾಸ ಇಟ್ಟುಕೊಳ್ಳಬೇಕು. ಅದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆರೋಗ್ಯಕ್ಕೆ ಯೋಗವೇ ಭಾಗ್ಯ ಇಂದು ಪ್ರಪಂಚದಾದ್ಯಂತ ಜನರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. 'ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ' ಎನ್ನುವುದು ಈ ವರ್ಷದ ಥೀಮ್ ಆಗಿದೆ. ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಇದು ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಸಂಬಂಧವನ್ನು ಒತ್ತಿ ಹೇಳುತ್ತದೆ. ಆದ್ದರಿಂದ ಯೋಗ ಜೀವನಕ್ಕೆ ಬಹು ಮುಖ್ಯವಾಗಿ ಬೇಕಾಗಿದೆ ಎಂದು ಮಸ್ಕತ್ ನ ಓಮನ್‌ನಲ್ಲಿ ಯೋಗ ತರಬೇತುದಾರರಾಗಿರುವ ಜಗದೀಶ್ ಬಂಗೇರ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎನ್‌ಸಿ, ಎನ್‌ಎಸ್‌ಎಸ್, ರೇಂಜರ್ ರೋವರ್, ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಯೋಗ ನಮ್ಮ ಭಾರತದ ಸಂಸ್ಕ್ರತಿಯಾಗಿದೆ, ಸಂಸ್ಕಾರವಾಗಿದೆ. ಋಷಿ ಮುನಿಗಳಿಂದ ಬಳುವಳಿಯಾಗಿ ಬಂದಿರುವ ಯೋಗದ ಅಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ದಿನಂಪ್ರತಿ ನಮ್ಮ ಜೀವನದಲ್ಲಿ ಅದು ಒಂದು ಭಾಗವಾಗಬೇಕು. ಯೋಗ ಧ್ಯಾನದಿಂದ ಬದುಕು ಸುಂದರವಾಗಿ ರೂಪಿತಗೊಳ್ಳುತ್ತದೆ. ಅಂತಹ ಯೋಗದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಎಂದರು. ಸಂಸ್ಕ್ರತಿ ಯೋಗ ತಂಡ ಮಸ್ಕತ್ ಓಮನ್ ಇಲ್ಲಿನ ಶ್ವೇತ ಪ್ರಭು, ವೀಣಾ ರೋಹಿತ್ ಕುಮಾರ್, ರವಿ ಪ್ರಕಾಶ್ ಭಟ್ ತರಬೇತುದಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಂದ ಯೋಗದ ಸರ್ವ ಆಸನಗಳನ್ನು ಪ್ರದರ್ಶನ ಮಾಡಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎನ್‌ಸಿಸಿ ಅಧಿಕಾರಿ ಮಹೇಂದ್ರ ಕುಮಾರ್ ಜೈನ್, ಎನ್‌ಎಸ್‌ಎಸ್ ಅಧಿಕಾರಿ ತೇಜಸ್ವಿ ಭಟ್, ರೇಂಜರ‍್ಸ್ ರೋವರ‍್ಸ್ ಅಧಿಕಾರಿಗಳಾದ ಸಂಧ್ಯಾ ಹಾಗೂ ಪ್ರದೀಪ್ ಹಾಗೂ ರೆಡ್ ಕ್ರಾಸ್ ಅಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಎಕ್ಸಲೆಂಟ್ ಸೆಂಟ್ರಲ್ ಶಾಲೆಯ ಶೈಕ್ಷಣಿಕ ಸಂಯೋಜಕ ಪ್ರಸಾದ ಅತಿಥಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿನಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈವಿಕ್ ಸ್ವಾಗತಿಸಿದರು ಯಶಸ್ವಿನಿ ವಂದಿಸಿದರು. ವಿದ್ಯಾರ್ಥಿಗಳಿಂದ ಯೋಗದ ಕುರಿತಾದ ವೈವಿಧ್ಯಮಯ ನೃತ್ಯ ನಡೆಯಿತು.

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Article Image

ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

ಉಜಿರೆ: ದೈಹಿಕ ಹಾಗೂ ಮಾನಸಿಕ ಸಮತೋಲನದೊಂದಿಗೆ ಆರೋಗ್ಯಭಾಗ್ಯ ಕಾಪಾಡಲು ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಯೋಗಾಭ್ಯಾಸಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಹತ್ತನೆ ವಿಶ್ವ ಯೋಗ ದಿನ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಕ್ಕೆ ವಿದೇಶಗಳಿಂದ ಔಷಧಿ ಆಮದು ಮಾಡುತ್ತೇವೆ. ವಿದೇಶಗಳಿಗೆ ಭಾರತದಿಂದ ಔಷಧಿ ರಹಿತ ಯೋಗವನ್ನು ರಫ್ತು ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ಜಾಗತಿಕಮಟ್ಟದಲ್ಲಿ ಯೋಗದ ಮಹತ್ವ ಪ್ರಚಾರವಾಗಿದ್ದು ಎಲ್ಲರೂ ಆಸಕ್ತಿ ಮತ್ತು ಕುತೂಹಲದಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ತಾತ್ವಿಕ ನೆಲೆಯಲ್ಲಿ ಭಾರತ ವಿಶ್ವಗುರುವಿನ ಮಾನ್ಯತೆ ಹೊಂದಿದೆ. ಧರ್ಮಸ್ಥಳದ ಶಾಂತಿವನಟ್ರಸ್ಟ್ ನೇತೃತ್ವದಲ್ಲಿ ಧರ್ಮಸ್ಥಳ, ಮಣಿಪಾಲದ ಬಳಿ ಪರೀಕ್ಷಾ ಮತ್ತು ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿ ಆರೋಗ್ಯಭಾಗ್ಯ ರಕ್ಷಣೆಗೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಹೆಗ್ಗಡೆಯವರು ಅಭಿನಂದಿಸಿದರು. ಬೆಂಗಳೂರಿನ ಪರಿಮಳ ಆರೋಗ್ಯ ಸೇವಾಕೇಂದ್ರದ ಡಾ. ಜೋಸ್ ಎಬ್‌ನಜೀರ್ ಮತ್ತು ತುಮಕೂರಿನ ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ ಶುಭಾಶಂಸನೆ ಮಾಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತು ಯೋಗವಿಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಯೋಗಪ್ರಚಾರದಲ್ಲಿ ವಿಶೇಷ ಸೇವೆ-ಸಾಧನೆ ಮಾಡಿದ ಮೈಸೂರಿನ ಕುಮಾರಿ ಖುಷಿ, ಎಚ್. ಅವರಿಗೆ “ಯೋಗರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಮಾರಿ ಖುಷಿ ಎಚ್. ಯೋಗ ಪ್ರಾತ್ಯಕ್ಷಿಕೆ ನೀಡಿದರು. ಯೋಗ ಸಾಧಕರಾದ ಅಶ್ವತ್ ಹೆಗಡೆ ಮತ್ತು ಡಾ. ಅಚ್ಯುತ ಈಶ್ವರನ್ ಅವರನ್ನು ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಸುಧಾಕರ ಕೊಟ್ಟಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಡಾ. ಶಶಿಕಾಂತ್ ಜೈನ್ ಮತ್ತು ಡಾ. ಸುಜಾತ ಉಪಸ್ಥಿತರಿದ್ದರು. ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಕುಮಾರಿ ಅನನ್ಯಾ ಜೈನ್ ಮತ್ತು ಡಾ. ಕೃತಿಕಾ ರಾಮಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

Article Image

ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ

ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಮಿಜಾರು ಶೋಭಾವನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿಯ ಯೋಗ ದಿನಾಚರಣೆ ಧ್ಯೇಯ-“ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಅಡಿಯಲ್ಲಿ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಯೋಗ ಪ್ರೋಟೋಕಾಲ್ ನಿಯಮಾವಳಿ ಅನುಸಾರವಾಗಿ ತಾಡಾಸನ, ವೃಕ್ಷಸಾನ, ತ್ರಿಕೋನಾಸನ, ಅರ್ಧಚಕ್ರಾಸನ, ಇನ್ನಿತರ ಆಸನ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ವಿದ್ಯಾರ್ಥಿ ಸ್ಫೂರ್ತಿ ಮೊಯ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಪ್ರಯುಕ್ತ ಪೋಸ್ಟರ್ ತಯಾರಿಕೆ, ವಿಡೀಯೋ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಯೋಗ ವಿಭಾಗದ ಡೀನ್ ಡಾ. ಅರ್ಚನಾ ಇದ್ದರು. ವಿಭಾಗದ ವಿದ್ಯಾರ್ಥಿಗಳು ನೆರೆಹೊರೆಯ ಶಾಲಾ-ಕಾಲೇಜುಗಳಲ್ಲಿ ಕಳೆದ 10 ದಿನಗಳು ಯೋಗ ತರಬೇತಿಯನ್ನು ಉಚಿತವಾಗಿ ನಡೆಸಿಕೊಟ್ಟರು. ಪುರಭವನ: ಆಳ್ವಾಸ್ ಶಿಕ್ಷಣ ಸಂಸ್ಥೆಯ 50 ವಿದ್ಯಾರ್ಥಿಗಳು ಜಿಲ್ಲಾ ಆಯುಷ್ ವಿಭಾಗವು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

Article Image

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮ

ಪ್ರತಿಯೊಬ್ಬರಲ್ಲಿಯೂ ತಮ್ಮದೇ ಪ್ರತಿಭೆಗಳಿರುತ್ತದೆ. ನಿಮಗೆ ಸಿಗುವ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ. ಕೌಶಲ್ಯಕ್ಕೆ ಪ್ರತಿಭೆಗೆ ಯಾವುದೇ ಮಿತಿಯಿಲ್ಲ. ಕಳೆದುಕೊಂಡ ಅವಕಾಶಗಳು ಮತ್ತೊಮ್ಮೆ ಸಿಗುವುದಿಲ್ಲ. ನಿಮ್ಮೊಳಗಿರುವ ಕೌಶಲ್ಯವನ್ನು ಗುರುತಿಸಿಕೊಳ್ಳಿ. ಸಮಾಜವನ್ನು ಬದಲಾಯಿಸುವ ಶಕ್ತಿ ವಿದ್ಯೆಗಿದೆ. ಯುಪಿಎಸ್‌ಸಿ, ಐಎಎಸ್, ಐಪಿಎಸ್ ನಂತಹ ಕನಸುಗಳನ್ನು ನೀವು ಕಾಣಬೇಕು. ನಿಮಗೆ ಕಲಿಸಿದ ಗುರುಗಳು ಎದ್ದು ನಿಂತು ನಿಮಗೆ ಗೌರವ ಕೊಡುವಂತಹ ರೀತಿಯಲ್ಲಿ ಸಾಧನೆಯನ್ನು ಮಾಡಬೇಕು. ಜೀವನದಲ್ಲಿ ಯಾವತ್ತಿಗೂ ನಿರಾಶರಾಗಬೇಡಿ ಬದುಕು ನಿರಂತರವಾಗಿ ಸಾಗುವ ನದಿ ಇದ್ದ ಹಾಗೆ. ಜೀವನದಲ್ಲಿ ಸತತ ಪ್ರಯತ್ನ, ಅಭ್ಯಾಸ, ಭರವಸೆಯೊಂದಿದ್ದರೆ ಒಂದಲ್ಲಾ ಒಂದು ದಿವಸ ನೀವು ಸಾಧಕರಾಗಿ ಗುರುತಿಸಿಕೊಳ್ಳುತ್ತೀರಿ ಆದ್ದರಿಂದ ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇರಲಿ ಎಂದು ಖ್ಯಾತ Daijiworld 24x7 Media Network ನ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಇವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟನ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಪ್ರತಿಭೆ ದೇವರು ನೀಡಿರುವ ಕೊಡುಗೆ. ನಿಮ್ಮಲ್ಲಿ ನಿಮಗೆ ಭರವಸೆ ಇರುವವರೆಗೆ ನಿಮಗೆ ಯಾವತ್ತೂ ಸೋಲಾಗುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಅನಾವರಣಗೊಳಿಸಿ ಎಂದು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಹೇಳಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಓದಿ ರ‍್ಯಾಂಕ್ ಪಡೆಯುವುದಲ್ಲ ಅದು ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಮಗುವನ್ನು ಅತ್ಯುತ್ತಮ ಮಾನವನನ್ನಾಗಿಸುವ ಶಕ್ತಿ ಶಾಲೆಗಿದೆ. ರ‍್ಯಾಂಕ್ ಪಡೆಯುವ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಸಾಧಕರೆನಿಸಿಕೊಂಡಿರುವವರೆಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ನಿಮಗೆ ಮಾದರಿಯಾಗಲಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿ ಮೂಡುಬಿದಿರೆಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರುಪಾಕ್ಷಪ್ಪ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಜೀವನವನ್ನು ಬದಲಾಯಿಸುವ ಶಕ್ತಿ ಕಲೆಗಿದೆ. ಕಲೆ ಮನುಷ್ಯನ್ನು ಯಾವತ್ತೂ ಕೈ ಬಿಡುವುದಿಲ್ಲ ಜೀವನದಲ್ಲಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಮುಖ್ಯವಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ. ಓದಿನ ಜೊತೆಗೆ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿತುಕೊಳ್ಳಿ ನಮ್ಮಲ್ಲಿ ಏನು ಇಲ್ಲ ಎಂದು ಬೇಸರದ ಬದುಕನ್ನು ಬದುಕಬೇಡಿ. ನಿಮ್ಮಲ್ಲಿರುವ ಆಸಕ್ತಿ ಕ್ಷೇತ್ರದಲ್ಲಿ ಅಭ್ಯಾಸ ಮುಂದುವರೆಸಿ ನಿಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ. ಸಮಾಜದಲ್ಲಿ ನಿಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶಗಳು ಸಿಗುತ್ತಲೇ ಇರುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ತರಬೇತುದಾರರಾದ ರಶ್ಮಿತಾ-ಭರತನಾಟ್ಯ, ಸರ್ಪಾಜ್-ಕರಾಟೆ, ಸೌಂದರ್ಯ-ಚೆಸ್, ರೂಪೇಶ್ ಕುಮಾರ್-ನೃತ್ಯ, ಪೂರ್ಣಿಮಾ ಗೋರೆ-ಸಂಗೀತ, ಮಹವೀರ ಪಾಂಡಿ-ಯಕ್ಷಗಾನ, ಚಂದ್ರಶೇಖರ ಆಚಾರ್ಯ-ಚೆಂಡೆ, ಗೌರಿಪ್ರಸಾದ್-ತಬಲ, ಬಾಸ್ಕರ್ ನೆಲ್ಯಾಡಿ-ಚಿತ್ರಕಲೆ, ಚೇತನ ಶೆಟ್ಟಿ- ಕ್ರಾಪ್ಟ್ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸುರೇಶ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಸಂಪತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಿರು ವಯಸ್ಸಿನಲ್ಲಿಯೇ ಸರ್ವಕಲಾ ಪ್ರಕಾರಗಳಲ್ಲಿ ಸಾಧನೆಗೈದ ಬೆಳುವಾಯಿಯ ಶುಭಾಂಜನ ಭಟ್ ಇವರನ್ನು ಗೌರವಿಸಿ ಸಂಮಾನಿಸಲಾಯಿತು. ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆಯ ವಿದ್ಯಾರ್ಥಿ ಸುಮಿತ್ ಹಾಗೂ ಕರಾಟೆ ತರಬೇತುದಾರರಾದ ಸರ್ಫಾಜ್ ಇವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾನಿಧ್ಯಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು, ಸಂಜಲ ನಿರೂಪಿಸಿದರು, ರಶ್ಮಿತಾ ಸ್ವಾಗತಿಸಿದರು, ಭುವನ ವಂದಿಸಿದರು.

ಬೃಹತ್ ರಕ್ತದಾನ ಶಿಬಿರ

Article Image

ಬೃಹತ್ ರಕ್ತದಾನ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಹಳೆ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ. ಐ.ಟಿ.ಐ. ವೇಣೂರು, ಗ್ರಾಮ ಪಂಚಾಯತ್ ಕುಕ್ಕೇಡಿ, ಪದ್ಮಾಂಬ ಸಮೂಹ ಸಂಸ್ಥೆಗಳು ವೇಣೂರು, ಹಾಲು ಉತ್ಪಾದಕರ ಸಹಕಾರಿ ಸಂಘ (ರಿ.) ಕುಕ್ಕೇಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ವೇಣೂರು, ಲಯನ್ಸ್ ಕ್ಲಬ್ ವೇಣೂರು, ಲಯನ್ಸ್ ಕ್ಲಬ್ ಮಂಗಳೂರು, ಫಲ್ಗುಣಿ ಸೇವಾ ಸಂಘ (ರಿ.) ವೇಣೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯ, ಮಂಜುಶ್ರೀ ಭಜನಾ ಮಂಡಳಿ (ರಿ.) ಕುಂಡದಬೆಟ್ಟು, ಜನಸೇವಾ ಟ್ರಸ್ಟ್ (ರಿ.) ಪಡ್ಡಂದಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಕ್ಕೇಡಿ-ನಿಟ್ಟಡೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ರಕ್ತದಾನದ ಬೃಹತ್ ಶಿಬಿರವು ವೇಣೂರಿನ ಎಸ್.ಡಿ.ಎಂ ಐಟಿಐ ನಲ್ಲಿ ನಾಳೆ(ಜೂ. 21) ನಡೆಯಲಿದೆ.

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

Article Image

ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮ

ಮೂಡುಬಿದಿರೆ: ಶಿಸ್ತು, ಸಮಯಪ್ರಜ್ಞೆ, ಸೃಜನಶೀಲತೆ, ಕ್ರೀಡಾಮನೋಭಾವ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಅಪಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ ಮೋಹನ ಆಳ್ವ ಹೇಳಿದರು. ನಗರದ ಸ್ವರಾಜ್ ಮೈದಾನದ ಸ್ಕೌಟ್ಸ್ - ಗೈಡ್ಸ್ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಸಹಯೋಗದಲ್ಲಿ ನಡೆದ 2023-24 ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್ ಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವುದು ಅಭಿನಂದನಾರ್ಹ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ, ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡಲಾಗದ ಶೈಕ್ಷಣಿಕ ಕಾರ್ಯವನ್ನು ಮೋಹನ ಆಳ್ವರು ಮಾಡುತ್ತಿದ್ದಾರೆ ಎಂದರು. ಶೈಕ್ಷಣಿಕ ಕಾರ್ಯದ ಜೊತೆಯಲ್ಲಿ ಅಂತರಾಷ್ಟ್ರೀಯ ಜಾಂಬೂರಿ ಆಯೋಜಿಸಿದ್ದ ಕುರಿತು ನೆನೆದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳು ಬಹಳಷ್ಟಿದ್ದಾರೆ ಆದರೆ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ರ‍್ಯಾಂಕ್ ಗಳಿಸಿರುವುದು ಅಭಿನಂದನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ವಿರೂಪಾಕ್ಷ ಮಾತನಾಡಿ ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಿಸಿಕೊಂಡಾಗ ಸರ್ವತೋಮುಖ ಕಲಿಕೆ ಸಾಧ್ಯ ಎಂದರು. ಉತ್ತಮ ಶಿಸ್ತುಬದ್ಧ ಜೀವನ ರೂಪಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕರಿಸುತ್ತಿದೆ ಎಂದರು. ಆತ್ಮ ವಿಶ್ವಾಸದ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಈ ಶಿಕ್ಷಣ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ದಕ್ಷಿಣ ಕನ್ನಡ, ಕಾರವಾರ, ಉಡುಪಿ, ಶಿರಸಿ, ಕೊಡಗು ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್ ವಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಶ್ರೀಪತಿ ಭಟ್, ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಜ್ಯೋತಿ ಜೆ. ಪೈ. ಜಿಲ್ಲಾ ಗೈಡ್ ಆಯುಕ್ತೆ ಉಡುಪಿ ಜಿಲ್ಲೆ, ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಚಂದ್ರಶೇಖರ್ ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತರು, ಶಿರಸಿ ಜಿಲ್ಲೆ, ಸಾವಿತ್ರಿ ಮನೋಹರ್, ALT, ಉಡುಪಿ ಜಿಲ್ಲೆ, ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್ ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ. ವಿದ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ಘೋಷಿಸಿದರು, ಕಾರ್ಯಕ್ರಮವನ್ನು ನವೀನ್ ಚಂದ್ರ ಅಂಬೂರಿ ನಿರೂಪಿಸಿ, ವಸಂತ್ ದೇವಾಡಿಗ ಸ್ವಾಗತಿಸಿದರು.

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

Article Image

ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್

ಮೂಡುಬಿದಿರೆ: ಕಾಲೇಜು ಮಟ್ಟದಲ್ಲಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ನೀಡಿದರೆ ಮಾತ್ರ ದೇಶದಲ್ಲಿ ಕ್ರೀಡೆ ಬೆಳೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಇಲ್ಲಿರುವ ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಆತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ) ಮಟ್ಟದ ಪುರುಷರ ಮತ್ತು ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅವರು ಮಾತನಾಡಿದರು. ಕ್ರೀಡೆಯನ್ನು ಬೆಳೆಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡುಗೆ ಅಪಾರ. ಸರ್ಕಾರದ ನೆರವಿಲ್ಲದೆಯೂ ಆಳ್ವಾಸ್ ಸಂಸ್ಥೆ ಕ್ರೀಡಾಪಟುಗಳ ಬೆಳವಣಿಗೆಗೆ ಶ್ರಮ ಪಡುತ್ತಿದೆ. ಈ ಮಾದರಿ ದೇಶದಲ್ಲೇ ಮೊದಲು ಎಂದರು. ಮುಂದಿನ ದಿನಗಳಲ್ಲಿ ನಮ್ಮ ಫೆಡರೇಶನ್ ಕಪ್ ಅನ್ನು ಆಳ್ವಾಸ್‌ನಲ್ಲೆ ನಡೆಸಲಾಗುವುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ದೇಶಿಯ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷ ಉಂಟುಮಾಡಿದೆ. ಆಳ್ವಾಸ್ ಸಂಸ್ಥೆಯೂ ಕ್ರೀಡೆಯ ಪೋಷಣೆ ಹಾಗೂ ಬೆಳವಣಿಗೆಗೆ ಮಹತ್ವವನ್ನು ನೀಡುತ್ತದೆ. ಇದರ ಫಲವಾಗಿ ನಮ್ಮ ಸಂಸ್ಥೆಯಿಂದ 7 ಕ್ರೀಡಾಪಟುಗಳು ಒಲಿಂಪಿಕ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು ಎಂದರು. ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿ ಹಾಗೂ ಖೇಲೊ ಇಂಡಿಯಾ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ ಆಳ್ವಾಸ್ ವಿದ್ಯಾರ್ಥಿ ಜಿತಿನ್ ನಾಯ್ಕ್, ಪ್ರೊ ಕಬಡ್ಡಿ ಆಟಗಾರರಾದ ರಂಜಿತ್ ನಾಯ್ಕ್ ಹಾಗೂ ಶಶಾಂಕ್ ಬಿ. ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪುರುಷೋತ್ತಮ್ ಪೂಜಾರಿ ಹಾಗೂ ರೋಹಿತ್ ತೊಕ್ಕೊಟ್ಟು ಇದ್ದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿ ಕುಮಾರ್ ವಂದಿಸಿ, ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು. ಈ ಟೂರ್ನಿಯಲ್ಲಿ ಒಟ್ಟು 64 ಪುರುಷರ ಹಾಗೂ 19 ಮಹಿಳಾ ತಂಡಗಳು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ. ಜೂನ್ 20ರಂದು ಅಂತಿಮ ಹಣಾಹಣಿ ಪಂದ್ಯಗಳು ಹಾಗೂ ಸಮಾರೋಪ ನಡೆಯಲಿದೆ.

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

Article Image

‘ಜಗನ್ಮೋಹನ ಹಾಗೂ ಶೋಭಾಯಮಾನ’ ನೂತನ ಕಾಲೇಜು ಸಂಕೀರ್ಣ ಹಾಗೂ ವಸತಿ ನಿಲಯಗಳ ಲೋಕಾರ್ಪಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾಗಿರಿಯ ಜಗಜ್ಯೋತಿ ಬಸವೇಶ್ವರ ವೃತ್ತದ, ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಕಾಲೇಜು ಸಂಕೀರ್ಣ ಹಾಗೂ ವಿದ್ಯಾರ್ಥಿನಿ ವಸತಿ ನಿಲಯದ ಉದ್ಘಾಟನಾ ಸಮಾರಂಭ ಜೂ. 17ರಂದು ನಡೆಯಿತು. ನೂತನ ಕಾಲೇಜು ಸಂಕೀರ್ಣ-‘ಜಗನ್ಮೋಹನ’ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಉದ್ಯಮಿ ಕೆ. ಶ್ರೀಪತಿ ಭಟ್ ನೆರವೇರಿಸಿದರು. ಡಾ. ಎಂ. ಮೋಹನ ಆಳ್ವರ ಧರ್ಮಪತ್ನಿ ದಿ.ಶೋಭಾ ಆಳ್ವರ ನೆನಪಿಗಾಗಿ ನೂತನ ವಸತಿ ನಿಲಯಕ್ಕೆ ‘ಶೋಭಾಯಮಾನ’ ಎಂದು ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ್ ಶೆಟ್ಟಿ ನೇರವೇರಿಸಿದರು. ‘ಜಗನ್ಮೋಹನ’ದ ವಿಶೇಷತೆಗಳು: ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ನೂತನ ಕಾಲೇಜು ಕಟ್ಟಡ -‘ಜಗನ್ಮೋಹನ’ದಲ್ಲಿ 68 ತರಗತಿ ಕೊಠಡಿಗಳಿದ್ದು, 3 ಭೌತಶಾಸ್ತ್ರದ ಲ್ಯಾಬ್, 3 ರಸಾಯಶಾಸ್ತ್ರದ ಲ್ಯಾಬ್ ಹಾಗೂ 2 ಜೀವಶಾಸ್ತ್ರದ ಲ್ಯಾಬ್ ಹಾಗೂ ಒಂದು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ವಿಶಾಲವಾದ ಸ್ಟಡಿಹಾಲ್‌ನ್ನು ಹೊಂದಿರುವ ಈ ಕಟ್ಟಡ, ಪ್ರತಿಧ್ವನಿ ಮುಕ್ತ ವ್ಯವಸ್ಥೆಯನ್ನು ಹೊಂದಿದೆ. ಪ್ರಶಾಂತ ಪರಿಸರದ ನಡುವೆ, ವಿಶಾಲವಾದ ಹೂದೋಟ, ಸುಂದರವಾದ ವಾಕಿಂಗ್ ಟ್ರ್ಯಾಕ್, ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯಿಂದ ನಿರ್ಮಿಸಿದ ಭಗವಾನ್ ಮಹಾವೀರರ ಮೂರ್ತಿ ಮನಸ್ಸಿಗೆ ಆಹ್ಲಾದಕರ ವಾತವರಣವನ್ನು ಒದಗಿಸುತ್ತದೆ. ಶೋಭಾಯಮಾನ ವಸತಿ ನಿಲಯ: ಶೋಭಾಯಮಾನ ವಸತಿ ನಿಲಯವು ಆಧುನಿಕ ಕಾಲದ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ವಸತಿ ಗೃಹವಾಗಿದೆ. 600 ವಿದ್ಯಾರ್ಥಿನಿಯರಿಗೆ ವಸತಿಯನ್ನು ಒದಗಿಸಬಲ್ಲ ಈ ಹಾಸ್ಟೆಲ್, ಎಲ್‌ ಆಕಾರದಲ್ಲಿ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕನುಗುಣವಾಗಿ ಹಾಸ್ಟೆಲ್‌ನ ರೂಮ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತೀ ರೂಮ್ ಅಟ್ಯಾಚೆಡ್ ಬಾತ್‌ರೂಮ್ ವ್ಯವಸ್ಥೆಯನ್ನು ಒಳಗೊಂಡಿದೆ. ಎರಡು ಅತ್ಯಾಕರ್ಷಕ ಡೈನಿಂಗ್ ಹಾಲ್‌ಗಳಿದ್ದು, ಒಂದೇ ಕಿಚನ್‌ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲೂ ವಿಶಾಲವಾದ ಸ್ಟಡಿ ಹಾಲ್‌ನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸದಾ ಕಾಲ ಈ ವ್ಯವಸ್ಥೆಯನ್ನು ಉಪಯೋಗಿಬಹುದಾಗಿದೆ. 24 ಗಂಟೆಗಳ ಸಿಸಿಟಿವಿ ಕಣ್ಗಾವಲಿರುವ ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ವೈದ್ಯಕೀಯ ತಂಡ, ಆಪ್ತ ಸಲಹೆಗಾರರು, ವಾರ್ಡನ್‌ಗಳು ಸದಾ ಸೇವೆಯಲ್ಲಿ ನಿರತರಾಗಿರುತ್ತಾರೆ. ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು.

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

Article Image

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕ್ರಷ್ಟ ಸಾಧನೆಗೈದಿದ್ದಾರೆ. ನಿಶಾಂತ್ ಹೆಗ್ಡೆ ರಾಷ್ಟ್ರ ಮಟ್ಟದಲ್ಲಿ 4349ನೇ ಸ್ಥಾನ (GM), ಚಿರಾಗ್ ಕಂಚಿರಾಯ್ 573ನೇ ಸ್ಥಾನ (C), ಸಾನ್ವಿ ಎಸ್. ಟಿ. 1404ನೇ ಸ್ಥಾನ (C), ಸಂಜಯ್ ಬಿರಾದರ್ 2200ನೇ ಸ್ಥಾನ (C), ಸಚಿನ್ 3023ನೇ ಸ್ಥಾನ (C), ರೋಹನ್ ಎಸ್. 4263ನೇ ಸ್ಥಾನ (C) ಪಡೆದು ಉತ್ತಮ ಸ್ಥಾನಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

Article Image

ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ಫಲಕ ಕಡ್ಡಾಯ

ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ನೋಂದಣಿ ಸಂಖ್ಯಾ ಫಲಕ ಹಾಕಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಹೆಸರು ಮತ್ತು ಮಾಲೀಕರ ಹೆಸರನ್ನೊಳಗೊಂಡ ಫಲಕವನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಬೋರ್ಡ್ ಬಳಸುವಂತೆ ಸೂಚಿಸಲಾಗಿದೆ. ಫಲಕ ಅಳವಡಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಈ ನಿಯಮಗಳನ್ನು ಅನುಸರಿಸದ ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ತಿದ್ದುಪಡಿ ಕಾಯಿದೆ 2017ರ ಸೆಕ್ಷನ್ 19(5)ರ ಅನ್ವಯ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಅಥವಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ -ವಿಶ್ವ ಥೈರಾಯ್ಡ್ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ -ವಿಶ್ವ ಥೈರಾಯ್ಡ್ ದಿನಾಚರಣೆ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವೈದ್ಯಕೀಯ ಚಿಕಿತ್ಸಾ(General Medicine) ವಿಭಾಗ ಮತ್ತು ಅಂತಃಸ್ರಾವಿಕ ಗ್ರಂಥಿ ಶಾಸ್ತ್ರ (Endocrinology) ವಿಭಾಗಗಳು ಜಂಟಿಯಾಗಿ ವಿಶ್ವ ಥೈರಾಯ್ಡ್ ದಿನಾಚರಣೆಯ ಅಂಗವಾಗಿ, ಥೈರಾಯ್ಡ್ ಸಮಸ್ಯೆಗಳ ಅರಿವು ಮೂಡಿಸಲು ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಂತಃಸ್ರಾವಿಕ ಗ್ರಂಥಿ ಶಾಸ್ತ್ರ (Endocrinology) ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಎಂ. ಉಸ್ಮಾನ್ ಯಾದವಾಡ ಅವರು ಥೈರಾಯ್ಡ್ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡುತ್ತಾ, ಈ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಗಳು ಎಲ್ಲಾ ವಯೋಮಾನದವರಿಗೂ ಮತ್ತು ಹುಟ್ಟಿದ ಮಕ್ಕಳಿಗೂ ಬರಬಹುದಾದ ಸಾಮಾನ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಸಮಸ್ಯೆಯನ್ನು ಸರಿಯಾಗಿ ನಿಯಂತ್ರಿಸಿ ನಿರ್ವಹಿಸದಿದ್ದಲ್ಲಿ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಥೈರಾಯ್ಡ್ ಸಮಸ್ಯೆಗಳನ್ನು ಬಾರದಂತೆ ತಡೆಗಟ್ಟಲು ಸಾಧ್ಯವಿಲ್ಲ, ಜಾಗೃತಿ ಮತ್ತು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ, ಥೈರಾಯ್ಡ್ ಸಮಸ್ಯೆಗಳು “ಸಾಂಕ್ರಾಮಿಕ ರೋಗವಲ್ಲಾ” ಎಂದು ತಿಳಿದಿರಲಿ ಎಂದರು. ವಿದ್ಯಾರ್ಥಿಗಳಿಗಾಗಿ ಚರ್ಚೆ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಡಾ. ನಿರಂಜನ ಕುಮಾರ್, ಉಪಕುಲಪತಿಗಳು, ಡಾ. ಚಿದೇಂದ್ರ ಎಂ. ಶೆಟ್ಟರ, ಕುಲಸಚಿವ, ಡಾ. ರತ್ನಮಾಲಾ ಎಂ ದೇಸಾಯಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಹಿರಿಯ ವೈದ್ಯರಾದ ಡಾ. ಬಸವರಾಜ ಹಳಕಟ್ಟಿ, ಡಾ. ಪಿ. ವಿಠ್ಠಲ ರಾವ್ ಮತ್ತು ಇತರರು ಉಪಸ್ಥಿತರಿದ್ದರು. ಡಾ. ಸ್ವಾಮಿ ಕಳಸೂರಮಠ, ಅಥಿತಿಗಳನ್ನು ಸ್ವಾಗತಿಸಿ, ಕಾರ್ಯಾಗಾರದ ಅವಲೋಕನ ಮಾಡಿದರು. ಡಾ. ರೈನಾ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಚರ್ಮರೋಗ ತಪಾಸಣಾ ಶಿಬಿರ

Article Image

ಚರ್ಮರೋಗ ತಪಾಸಣಾ ಶಿಬಿರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರವು ನಡೆಯುತ್ತಿದ್ದು, ಮೇ 26ರಂದು ಚರ್ಮರೋಗ ತಪಾಸಣಾ ಶಿಬಿರ ನಡೆಸಲಾಯಿತು. ಈ ಶಿಬಿರದಲ್ಲಿ ಚರ್ಮದ ಕಲೆಗಳು, ಕಪ್ಪು ಕಲೆಗಳು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು, ಮಕ್ಕಳ ಚರ್ಮದ ತೊಂದರೆಗಳು, ಸೌಂದರ್ಯದ ಸಮಸ್ಯೆಗಳು, ಕುಷ್ಠರೋಗ ಸಮಸ್ಯೆ, ಗಾಯದ ಗುರುತುಗಳು, ಮೊಡವೆಗಳಿಗೆ ಚಿಕಿತ್ಸೆ, ಇಸುಬು, ಡ್ರಗ್ ಅಲರ್ಜಿ, ಸೋರಿಯಾಸಿಸ್, ತೊನ್ನುರೋಗ (ಬಿಳಿ ಮಚ್ಚೆ), ತುರಿಕೆ ಖಜ್ಜಿ, ಉಗುರು ಸಂಬಂಧಿತ ರೋಗಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು. ಚರ್ಮರೋಗ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ MBBS., MD, DNB (DVL) ಶಿಬಿರ ಉದ್ಘಾಟಿಸಿ, ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ರೋಗ ತಪಾಸಣೆ ಉಚಿತವಾಗಿತ್ತು. ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ನೀಡಲಾಗಿತ್ತು. ಶಿಬಿರದಲ್ಲಿ 200 ಕ್ಕೂ ಅಧಿಕ ಮಂದಿ ಭಾಗವಹಿಸಿದರು.

First Previous

Showing 1 of 3 pages

Next Last