Article Image

ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಮುಖ್ಯ

Article Image

ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಮುಖ್ಯ

ಉಜಿರೆ: ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಬಹುಮುಖ್ಯವಾಗಿದೆ. ಮಹಿಳೆಯರು ಸಮತೋಲನದೊಂದಿಗೆ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಯ ನಿರ್ವಹಣೆ ಮಾಡಿಕೊಳ್ಳಬೇಕು. ಗ್ರಾಹಕರ ಜೊತೆಗೆ ಉತ್ತಮ ರೀತಿಯಲ್ಲಿ ಸೌಜನ್ಯಪೂರ್ವಕವಾಗಿ ಸಂವಹನ ಮಾಡಿ, ಉತ್ತಮವಾದ ಮನೋಭಾವ ಬೆಳಸಿಕೊಳ್ಳಿ. ಸರ್ಕಾರದ ಮತ್ತು ಬ್ಯಾಂಕಿನ ಆರ್ಥಿಕ ಸಹಕಾರ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ ಬಿ.ಪಿ ಹೇಳಿದರು. ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದ ಕಂಪ್ಯೂಟರ್ ಡಿ.ಟಿ.ಪಿ ಮತ್ತು ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ, ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾಧ್ಯಾಯದಿಂದ ಆತ್ಮಕಲ್ಯಾಣ

Article Image

ಸ್ವಾಧ್ಯಾಯದಿಂದ ಆತ್ಮಕಲ್ಯಾಣ

ಉಜಿರೆ: ಜೈನಧರ್ಮ ವಿಶ್ವದ ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆ, ಸತ್ಯ, ಅಪರಿಗ್ರಹ, ಸ್ಯಾದ್ವಾದ ಮೊದಲಾದ ಉದಾತ್ತ ತತ್ವಗಳ ಪಾಲನೆಯಿಂದ ಜೀವನ ಪಾವನವಾಗಿ, ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ರತ್ನತ್ರಯ ಧರ್ಮದ ಪಾಲನೆ ಮತ್ತು ಸ್ವಾಧ್ಯಾಯದಿಂದ ಆತ್ಮಕಲ್ಯಾಣವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಎಂದು ನಿವೃತ್ತ ಶಿಕ್ಷಕ ರಘುಚಂದ್ರ ಚೌಟ ಹೇಳಿದರು. ಅವರು ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ತ್ಯಾಗ, ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉದಾತ್ತ ತತ್ವ, ಸಿದ್ಧಾಂತಗಳನ್ನು ಬದುಕಿನಲ್ಲಿ ನಿತ್ಯವೂ ಪಾಲಿಸುವವರೆಲ್ಲರೂ ಜೈನರಾಗುತ್ತಾರೆ. ಬರೆ ಜಾತಿಜೈನರಾದರೆ ಸಾಲದು, ನೀತಿ ಜೈನರೂ ಆಗಬೇಕು ಎಂದು ಅವರು ಸಲಹೆ ನೀಡಿದರು. ಸಕಲ ಪಾಪಕರ್ಮಗಳ ಕೊಳೆ ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಸಕಲ ಸುಖ-ಭೋಗ ಹಾಗೂ ಬಂಧನಗಳಿಂದ ಮುಕ್ತರಾಗಿ ಮೋಕ್ಷ ಪ್ರಾಪ್ತಿಯೇ ಬದುಕಿನ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಡಾ. ಜಯಕೀರ್ತಿ ಜೈನ್, ಧರ್ಮಸ್ಥಳ, ವಿಶ್ವಾಸ್ ರಾವ್, ಸನ್ಮತ್ ಕುಮಾರ್ ನಾರಾವಿ ಮತ್ತು ವಸಂತ ಸುವರ್ಣ ಉಪಸ್ಥಿತರಿದ್ದರು.

ಅವಲೋಕನ ಅವಾರ್ಡ್ಸ್ : ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿ

Article Image

ಅವಲೋಕನ ಅವಾರ್ಡ್ಸ್ : ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿ

ಬೆಳ್ತಂಗಡಿ : 'ಅವಲೋಕನ' ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಪಿಲಿಕುಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181 ಒಳಪಟ್ಟ ರೋಟರಿ ಕ್ಲಬ್ ಗಳ ಪೈಕಿ 2024 -25 ನೇ ಸಾಲಿನ ವಾರ್ಷಿಕ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿವಿಧ ವಿಭಾಗಗಳಲ್ಲಿ 10 ಪ್ರಶಸ್ತಿಗಳು ಲಭಿಸಿವೆ. RI ಜಿಲ್ಲೆ 3181 ರೋಟರಿ ಕ್ಲಬ್ ಗಳ ಪೈಕಿ ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿಗಳು ಈ ಬಾರಿ ದೊರೆತಿದೆ. ಪ್ರಶಸ್ತಿಗಳ ವಿವರ : 1. 3181 ಜಿಲ್ಲೆಯ ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ಡೈಮಂಡ್ ಪ್ಲಸ್ ಪ್ರಶಸ್ತಿ (ಅತ್ಯುನ್ನತ ಗೌರವ) 2. ಕಾರ್ಯೋನ್ಮುಕ ಶ್ರೇಷ್ಠತೆ ಪ್ರಶಸ್ತಿ -ಪ್ರಥಮ ಸ್ಥಾನ 3. ಎಕ್ಸೆಲೆನ್ಸ್ ಇನ್ ಪಬ್ಲಿಕ್ ಇಮೇಜ್‌ - ಪ್ರಥಮ ಸ್ಥಾನ 4. ಆಕ್ಷನ್ ಚಾಂಪಿಯನ್ ಮೆಚ್ಚುಗೆ ಪ್ರಶಸ್ತಿ - ರೋ. ಅನಂತ್ ಭಟ್ ಮತ್ತು ರೋ. ವಿದ್ಯಾಕುಮಾರ್ ಕಾಂಚೋಡುರವರಿಗೆ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರಶಸ್ತಿ. 5. ಸಿಗ್ನಿಫಿಕೆಂಟ್ ಸರ್ವೀಸ್ ಅವಾರ್ಡ್ - ರೋಟರಿ ಕ್ಲಬ್ ಬೆಳ್ತಂಗಡಿ 6. ಸೇವಾ ವಿಭಾಗದ ವೈಯಕ್ತಿಕ ಪ್ರಶಸ್ತಿ : ರೋ. ಶ್ರೀಧರ್ ಕೆ ವಿ 7. TRF ಚಾಂಪಿಯನ್ ಅವಾರ್ಡ್ 8. ಇಂಟರಾಕ್ಟ್ ಕ್ಲಬ್ ಡೈಮಂಡ್ ಪ್ಲಸ್ ಅವಾರ್ಡ್ಸ್-ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ (CBSE) ಉಜಿರೆ. 9. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ, ಉಜಿರೆ 10. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಅನುದಾನಿತ ಮಾಧ್ಯಮಿಕ ಶಾಲೆ ಉಜಿರೆ ಬೆಳ್ತಂಗಡಿ ರೋಟರಿ ಕ್ಲಬ್ ನ 2024-25 ನೇ ಸಾಲಿನ ಶೈಕ್ಷಣಿಕ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಪ್ರಮುಖ ಸೇವಾ ಕಾರ್ಯಗಳು : ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ನವೀಕರಣ ಕಾರ್ಯಗಳು, 40 ಲಕ್ಷ ಮೊತ್ತದ ಸರಕಾರಿ ಶಾಲಾ ಕಾಲೇಜುಗಳಿಗೆ ಹೊಸ ಶೌಚಾಲಯಗಳ ನಿರ್ಮಾಣ ಕಾರ್ಯ, 25 ಲಕ್ಷಕ್ಕೂ ಅಧಿಕ ಮೊತ್ತದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, 14 ಲಕ್ಷ ಮೊತ್ತದ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, 5 ಲಕ್ಷ ಮೊತ್ತದ ಶಾಲಾ ಕಾಲೇಜುಗಳಿಗೆ ಮೂಲಭೂತ ಪೀಟೋಪಕರಣಗಳ ಕೊಡುಗೆ, ವಿವಿಧ ತರಭೇತಿ ಮತ್ತು ಮಾಹಿತಿ ಕಾರ್ಯಕ್ರಮ, ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಯುತ್ ಕಾರ್ನಿವಲ್ - ವಿವಿಧ ಜಿಲ್ಲಾ ವಿದ್ಯಾರ್ಥಿಗಳ ಜಿಲ್ಲಾ ಸಮ್ಮೇಳನ, 7 ಉಚಿತ ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು, 9 ಬೃಹತ್ ರಕ್ತದಾನ ಶಿಬಿರಗಳ ಮೂಲಕ 1300 ಯುನಿಟ್ ರಕ್ತ ಸಂಗ್ರಹ, 9 ಲಕ್ಷಕ್ಕೂ ಅಧಿಕ ಮೊತ್ತದ ತಾಲೂಕು ಪಶು ಆಸ್ಪತ್ರೆಯ ಕಟ್ಟಡ ನವೀಕರಣ, ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ, ಅಶಕ್ತರಿಗೆ ವೀಲ್ ಚೇರ್, ವಾಕರ್ ಮತ್ತು ವಾಟರ್ ಬೆಡ್ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಸೇರಿದಂತೆ 200ಕ್ಕೂ ಅಧಿಕ ಸಾಮಾಜಿಕ ಕಾರ್ಯಕ್ರಮಗಳು, 2 ಕೋಟಿಗೂ ಹೆಚ್ಚಿನ ಅನುದಾನ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿನಿಯೋಗ ರೋಟರಿ ಕ್ಲಬ್ ಬೆಳ್ತಂಗಡಿಯದ್ದಾಗಿದೆ. ಈ ಎಲ್ಲಾ ಕಾರ್ಯಗಳನ್ನು ಗುರುತಿಸಿ ರೋಟರಿ RI ಜಿಲ್ಲೆ 3181 ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರೋಟರಿ 3181 ಜಿಲ್ಲಾ ಗವರ್ನರ್ ರೋ.ವಿಕ್ರಮ ದತ್ತ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೋ. ಮೊಹಮ್ಮದ್ ವಳವೂರು, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಜಯಕುಮಾರ್ ಶೆಟ್ಟಿ, ರೋ.ಅಳಗಪ್ಪನ್ ರೋ. ದೇವ್ ಆನಂದ್, ಎಲ್ಐ ಜಿಲ್ಲೆ 317 ಜಿಲ್ಲಾ ಗವರ್ನರ್ ಲಯನ್ ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ, ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ರೋ. ಧನಂಜಯ ರಾವ್, ರೋ. ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು,ರೋ. ಅರುಣ್, ರೋ. ಶ್ರೀಧರ್ ಕೆ.ವಿ, ರೋ. ಪ್ರವೀಣ್ ಗೋರ್ ಸೇರಿದಂತೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರ ಆರ್ಶಿವಾದ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರುಗಳ ಸಹಕಾರದಿಂದ ಈ ವರ್ಷ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಯಿತು. ತಾಲೂಕಿನಲ್ಲಿನ ಬೇರೆ ಬೇರೆ ಅಗತ್ಯತೆಗಳನ್ನು ಅರಿತು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಯೋಜನೆಗೆ ತರಲು ಸಹಕಾರ ನೀಡಿದ ಬೆಳ್ತಂಗಡಿಯ ಅನೇಕ ಸಂಘ - ಸಂಸ್ಥೆಗಳು, ಬೆಂಗಳೂರಿನ ಸಿಎಸ್ಆರ್ ಪಾರ್ಟ್ನರ್ ಕಂಪೆನಿಗಳು ಮತ್ತು ಇಂದಿರಾನಗರ ಕ್ಲಬ್ ಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಬಂದಿರುವ ಈ ಎಲ್ಲಾ ಪ್ರಶಸ್ತಿಗಳು ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರ ಪರಿಶ್ರಮದ ಫಲವಾಗಿದೆ. - ಪೂರನ್ ವರ್ಮ ಅಧ್ಯಕ್ಷರು ರೋಟರಿ ಕ್ಲಬ್, ಬೆಳ್ತಂಗಡಿ .

ಸಾವಯವ ಕೃಷಿಯಿಂದ ನಿರುದ್ಯೋಗಕ್ಕೆ ಪರಿಹಾರ: ಕೆ. ಜಗದೀಶ

Article Image

ಸಾವಯವ ಕೃಷಿಯಿಂದ ನಿರುದ್ಯೋಗಕ್ಕೆ ಪರಿಹಾರ: ಕೆ. ಜಗದೀಶ

ಸಾವಯವ ಕೃಷಿಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ನಿರುದ್ಯೋಗಕ್ಕೆ ಪರಿಹಾರ ನೀಡಬಹುದಾಗಿದೆ ಎಂದು ಬೆಂಗಳೂರಿನ ಸ್ವದೇಶಿ ಜಾಗರಣ ಮಂಚ್ ವೇದಿಕೆಯ ಹಿರಿಯ ಭಾಷಣಕಾರ ಕೆ. ಜಗದೀಶ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಕೋಶದ ವತಿಯಿಂದ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಸ್ವೋದ್ಯೋಗ ಹಾಗೂ ಸ್ವದೇಶಿ ಚಿಂತನೆಯ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ’ ಕುರಿತು ಉಪನ್ಯಾಸ ನೀಡಿದರು. ಭಾರತವು ಆರ್ಥಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಉದ್ಯೋಗ ಕೊರತೆ ಹಾಗೆಯೇ ಇದೆ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಹಸು, ಜಾನುವಾರಗಳನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಧಿಕ ಉತ್ಪಾದನೆ ಮಾಡಬಹುದು ಎಂದು ಅವರು ಹೇಳಿದರು. ಪ್ರತಿವರ್ಷ 1 ಕೋಟಿಗಿಂತಲೂ ಅಧಿಕ ಪದವೀಧರರು ಹೊರಬರುತ್ತಿದ್ದು, ಅವರಿಗೆ 10 ಲಕ್ಷದಷ್ಟು ಮಾತ್ರ ಉದ್ಯೋಗ ಸೃಷ್ಟಿಯಾಗುತ್ತಿದೆ. ಕೊರೋನ ನಂತರ ಪರಿಸ್ಥಿತಿ ಹದಗೆಟ್ಟಿದ್ದು, ಉದ್ಯೋಗ ಸೃಷ್ಟಿ ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದರು. ಭಾರತದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ (ಎಂ.ಎಸ್.ಎಂ.ಇ.)ಗಳಿಗೆ 26 ಶೇ.ದಷ್ಟು ಗ್ರಾಮೀಣ ಭಾಗದಲ್ಲಿ ಬೇಡಿಕೆ ಇದೆ. ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ 8 ಸಾವಿರ ಕೋಟಿಯಷ್ಟು ಉದ್ಯಮಾವಕಾಶ ಇದೆ. ಸ್ವ ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ವ್ಯಾಪಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಯುವಕರು ಉದ್ಯೋಗ ಸೃಷ್ಟಿ ಮಾಡಬೇಕು. ಪದವಿ ಜೊತೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರು, ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಸ್ವಾಗತಿಸಿ, ಸುಮನ್ ಜೈನ್ ವಂದಿಸಿದರು.

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯಲ್ಲಿ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮ

Article Image

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯಲ್ಲಿ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮ

ಶಾಲಾ ಸಂಸತ್ತು ನಾಯಕತ್ವದ ಬೆಳವಣಿಗೆಗೆ ಅಡಿಪಾಯವನ್ನು ಒದಗಿಸುವ ವೇದಿಕೆ. ಕೈಯ ಐದು ಬೆರಳುಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬನಲ್ಲಿಯೂ ಒಂದೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಸೋಲು ಜೀವನದ ಅಂತ್ಯವಲ್ಲ ಅದು ಯಶಸ್ಸಿನ ಆರಂಭ’ ಎಂದು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೆ ಅಭಿಪ್ರಾಯ ಪಟ್ಟರು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯಲ್ಲಿ ದಿನಾಂಕ 08-ಜುಲೈ 2025 ರ ಮಂಗಳವಾರದಂದು ಜರಗಿದ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ‘ವೇದಿಕೆಯ ಮೇಲಿರುವವರು ಮಾತ್ರ ನಾಯಕರಲ್ಲ ಮುಂಭಾಗದಲ್ಲಿರುವವರು ನಾಯಕರಾಗುವ ಯೋಗ್ಯತೆಯನ್ನು ಹೊಂದಿರುತ್ತಾರೆ. ಗುರುಕುಲ ಶಿಕ್ಷಣ ವ್ಯವಸ್ತೆ ಇರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಜಿನೇಂದ್ರ ಕುಮಾರ್ ಅವರು ಮಾತನಾಡುತ್ತಾ ‘ಜೀವನದಲ್ಲಿ ಯಾವ ಹುದ್ದೆಯು ಅಧಿಕಾರವಲ್ಲ, ಅದು ಜವಬ್ದಾರಿಯಾಗಿದೆ. ಸಂವಿಧಾನವು ಹಕ್ಕುಗಳಿಗೆ ಮಾತ್ರ ಸೀಮಿತವಲ್ಲ, ಅದರಲ್ಲಿ ಕರ್ತವ್ಯಗಳು ಕೂಡ ಇದೆ. ಪ್ರತಿಯೊಬ್ಬರೂ ಅವರ ವಯಸ್ಸಿಗನುಗುಣವಾಗಿ ದೇಶಸೇವೆಯನ್ನು ಮಾಡಬೇಕು. ಸಾರ್ವಜನಿಕ ಸಂಪತ್ತನ್ನು ರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದುದು. ಇಲ್ಲಿ ಗೆದ್ದವನು ನಾಯಕನಲ್ಲ ಬಿದ್ದವನನ್ನು ಮೇಲೆತ್ತುವವ ನಿಜವಾದ ನಾಯಕ’ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು ವಿದ್ಯಾರ್ಥಿ ಸಂಸತ್ತು ಕಲಿಕೆಯನ್ನು ಪಾಯೋಗಿಕವಾಗಿ ಅನುಭವಿಸುವ ಒಂದು ಉತ್ತಮ ವೇದಿಕೆಯಾಗಿದ್ದು, ಅದು ನಾಯಕತ್ವ ಮತ್ತು ಜವಬ್ದಾರಿಯ ಮೌಲ್ಯವನ್ನು ಬೆಳೆಸುತ್ತದೆ. ವ್ಯಕ್ತಿಯ ವರ್ತನೆ, ನಡತೆಗಳೇ ವ್ಯಕ್ತಿತ್ವದ ಮಾನದಂಡವಾಗಿದೆ. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು. ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಅವರು ಮಾತನಾಡುತ್ತಾ ಸಿಕ್ಕ ಜವಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತ ಸಮಾಜದ ಶ್ರೇಯಸ್ಸಿಗೆ ಕಾರಣರಾಗಬೇಕು. ಇಂದು ನಿಮಗೆ ಸಿಕ್ಕ ಸ್ಥಾನ ಭಾರತೀಯ ಸಂಸತ್ತನ್ನೇರಲು ಪ್ರಥಮ ಮೆಟ್ಟಿಲಾಗಲಿ. ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಿಥುನ್ ರೈ ಹಾಗೂ ಜಿನೇಂದ್ರ ಕುಮಾರ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಹಾಗೂ ನಾಗರಿಕ ಕರ್ತವ್ಯದ ಹೊಣೆಗಾರಿಕಾ ಫಲಕವನ್ನು ವಿವಿಧ ವಿಭಾಗದ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ ಭಟ್, ಉಪಮುಖ್ಯೋಪಾಧ್ಯಾಯರಾದ ಜಯಶೀಲ ಉಪಸ್ಥಿತರಿದ್ದರು. ಶಿಕ್ಷಕಿ ವೆನೆಸ್ಸಾ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಹಿತೇಶ್ ನಾಯಕ್ ಸ್ವಾಗತಿಸಿ ರೀನಲ್ ರಿನ್ಸಿಯಾ ಸೆರಾವೋ ವಂದಿಸಿದರು.

ಪೃಥ್ವಿ ಜುವೆಲ್ಸ್ ನಲ್ಲಿ ಭರ್ಜರಿ ಆಷಾಢ ಸೇಲ್ಸ್

Article Image

ಪೃಥ್ವಿ ಜುವೆಲ್ಸ್ ನಲ್ಲಿ ಭರ್ಜರಿ ಆಷಾಢ ಸೇಲ್ಸ್

ಬೆಳ್ತಂಗಡಿ: ಕಳೆದ ಏಳೆಂಟು ವರ್ಷಗಳಿಂದ ಚಿನ್ನಾಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ “ಭರ್ಜರಿ ಆಷಾಢ ಸೇಲ್ಸ್” ನಡೆಯುತ್ತಿದೆ. ಜೂ.30ರಂದು ಪ್ರಾರಂಭಗೊಂಡ “ಭರ್ಜರಿ ಆಷಾಢ ಸೇಲ್ಸ್” ನ ರಿಯಾಯಿತಿಗಳ ಕೊಡುಗೆಗಳು ಜು.31 ರವರೆಗೆ ನಡೆಯಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಆರೋಗ್ಯವೇ ಮಹಾಭಾಗ್ಯ ಡಾ.ವಿನಯ್ ಕುಮಾರ್ ಹೆಗ್ಡೆ

Article Image

ಆರೋಗ್ಯವೇ ಮಹಾಭಾಗ್ಯ ಡಾ.ವಿನಯ್ ಕುಮಾರ್ ಹೆಗ್ಡೆ

“ಮನುಷ್ಯನಿಗೆ ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರಿಲ್ಲ. ದೇಹದ ಪ್ರತಿಯೊಂದು ಅಂಗವೂ ಕೂಡ ಆರೋಗ್ಯ ಪೂರ್ಣವಾಗಿದ್ದಾಗ ಮನುಷ್ಯ ಲವಲವಿಕೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯ. ಹಲ್ಲಿನ ಬಗ್ಗೆಯೂ ಕಾಳಜಿ ಅತೀ ಮುಖ್ಯ, ನಿರ್ಲಕ್ಷ ಸಲ್ಲದು” ಎಂದು ಖ್ಯಾತ ದಂತ ವೈದ್ಯ ಡಾ. ವಿನಯ ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು. ಮೂಡಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ‘ಮಕ್ಕಳು ಬಾಲ್ಯದಲ್ಲಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ದಿನನಿತ್ಯದ ದಂತ ಆರೈಕೆಯು ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ “ವೈದ್ಯೋ ನಾರಾಯಣೋ ಹರಿ” ಎಂಬ ಉಕ್ತಿಗೆ ಬದ್ಧರಾಗಿದ್ದುಕೊಂಡು ಡಾ. ವಿನಯ ಕುಮಾರ್ ಹೆಗ್ಡೆ ಅವರು ಮೂಡಬಿದಿರೆಯ ಜನತೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರಲ್ಲಿರುವ ಕಾಳಜಿ, ನಿಸ್ವಾರ್ಥ ಸೇವಾ ಮನೋಭಾವ ಮುಂತಾದ ಮಾನವೀಯ ಮೌಲ್ಯಗಳು ಇಂದು ಅವರನ್ನು ವೃದ್ಧ, ತರುಣರೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ನೆಚ್ಚಿನ ವೈದ್ಯರನ್ನಾಗುವಂತೆ ಮಾಡಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ವೈದ್ಯರ ಮಹತ್ವವನ್ನು ಮಕ್ಕಳಿಗೆ ಹೇಳಿ ‘ವೈದ್ಯರ ದಿನಾಚರಣೆ’ ಆಚರಣೆಯ ಅಗತ್ಯತೆಯನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ. ವಿನಯ ಕುಮಾರ್ ಹೆಗ್ಡೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವೈದ್ಯರ ಮಹತ್ವದ ಸಂದೇಶವನ್ನು ಸಾರುವ ಹಲವು ಚಟುವಟಿಕೆಗಳ ಮೂಲಕ ಮಕ್ಕಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯಶೀಲ ಹಾಗೂ ಶಿಕ್ಷಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.

ಕಲೆಯ ಜೊತೆಗೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್

Article Image

ಕಲೆಯ ಜೊತೆಗೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್

ಎಕ್ಸಲೆಂಟ್ ವಿದ್ಯಾ ಸಂಸ್ಥೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ನೀವು ಧನ್ಯರು. ವಿದ್ಯಾರ್ಥಿ ಜೀವನ ಬಾಲ್ಯದ ಸುವರ್ಣ ಯುಗ ಚಿನ್ನಕ್ಕೆ ಬಡಿದಷ್ಟು ಆಕಾರ ಮತ್ತು ಹೆಚ್ಚು ಹೊಳಪು ಬರುತ್ತದೆ. ಕಲಾ ಮಾತೆ ಶಾರದೆ ನಮಗೆ ಒಲಿಯದಿದ್ದರೂ ನಾವೂ ಅದರ ಬೆನ್ನ ಹಿಂದೆ ಸಾಗಬೇಕು. ಎಂದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಹೇಳಿದರು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿ ಮುಂದುವರಿದು ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಮರೆಯಬಾರದು, ನಮ್ಮ ಮನೆಯನ್ನು ಪ್ರೀತಿ ಮಾಡಿದಂತೆ ಶಾಲೆಯನ್ನು ಪ್ರೀತಿ ಮಾಡಬೇಕು. ಶಾಲೆ ವಿದ್ಯಾ ದೇಗುಲ. ಸ್ವಂತ ಉದ್ಯೋಗ ಪಡೆದ ನಂತರ ಹೆತ್ತವರನ್ನು ಗುರುಗಳನ್ನು ಶ್ರದ್ಧೆಯಿಂದ ಸ್ಮರಿಸಬೇಕು. ತಂದೆ ತಾಯಿಯನ್ನು ನೋಡಿಕೊಂಡರೆ ಅವರ ಸಂತೋಷದಷ್ಟು ಆರ್ಶೀವಾದ ಇನ್ನೊಂದಿಲ್ಲ. ಪ್ರಪಂಚವನ್ನು ತೋರಿಸಿಕೊಟ್ಟವರು ಅವರು ಅವರೊಂದಿಗೆ ಪ್ರತಿದಿನ ಮಾತನಾಡಬೇಕು. ಪ್ರತಿಯೊಬ್ಬರಲ್ಲಿಯೂ ನನಗೆ ಎಲ್ಲಾ ಗೊತ್ತಿದೆ ಎಂಬ ಅಹಂಕಾರ ಇರಬಾರದು. ಕಲೆಯ ಜೊತೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ “Golden Book of Record holder” ವಿದ್ವಾನ್ ಯಶವಂತ್ ಎಮ್ ಜಿ ಮಾತನಾಡಿ ದೀಪ ಬೆಳಗಬೇಕಾದರೆ ದೇವರ ಅಸ್ತಿತ್ವ ಅತೀ ಮುಖ್ಯ, ಇಚ್ಛಾ ಶಕ್ತಿ, ದೈವೀಶಕ್ತಿ ಮತ್ತು ಆತ್ಮ ವಿಶ್ವಾಸ ಜೊತೆಗಿದ್ದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಆಶ್ರಯ ಕೊಟ್ಟವರಿಗೆ ಯಾವಾಗಲೂ ನಾವೂ ಕೃತಜ್ಞರಾಗಿರಬೇಕು. ಜೀವನದಲ್ಲಿ ಸಾಧನೆ ಮಾಡಲು ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಮತ್ತು ಸಂಸಾರ ಅತೀ ಮುಖ್ಯ. ಸಾಧನೆ ಮಾಡಲು ಒಂದು ಉತ್ತಮ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಆಗಿದೆ. ಅಧ್ಯಯನ ಮಾಡುವಾಗ ನಾನು ದಡ್ಡ ಬೇರೆಯವರು ಜಾಣರು ಎಂಬ ಮನೋಭಾವ ಬಿಡಿ. ನಾವು ನಮ್ಮ ಮೇಲೆ ಆತ್ಮ ವಿಶ್ವಾಸ ಇಟ್ಟು ಹಂತ ಹಂತವಾಗಿ ಸಾಧನೆಯ ಮೆಟ್ಟಿಲು ಹತ್ತಿ ಅಸಾಧಾರಣೆಯ ಸಾಧನೆ ಮಾಡಬಹುದು. ನಮಗೆ ಸಹಾಯ ಮಾಡಿದವರನ್ನು ಸ್ಮರಿಸದಿದ್ದರೆ ಬದುಕು ವ್ಯರ್ಥ. ಮೊದಲು ಕೆಟ್ಟ ಸಮಯ ಇದ್ದರೆ ಮುಂದೆ ಉತ್ತಮ ಸಮಯ ಬಂದೇ ಬರುತ್ತದೆ. ಕಲೆ ಮತ್ತು ಕಲಾವಿದರನ್ನು ಬೆಳೆಸುವ, ಗೌರವಿಸುವ ಗುಣ ಯುವರಾಜ್ ಸರ್ ಮತ್ತು ರಶ್ಮಿತಾ ಮೇಡಂ ಅವರಲ್ಲಿ ಇದೆ ಎಂದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತಾನಾಡಿ, ಕಲೆಯನ್ನು ಕಟ್ಟಿಕೊಂಡು ಜೀವನ ನಡೆಸಬಹುದು, ಕಲೆ ಹೃದಯವನ್ನು ತಟ್ಟಿದ್ದರೆ ಸರಳತೆ ಮನ ಗೆಲ್ಲುತ್ತದೆ. ಇದರಿಂದ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದು. ಸಾಧಕರ ಜೀವನ ನಮಗೆ ಆದರ್ಶವಾಗಬೇಕು. ಕಲೆಯನ್ನು ಜೀವನ ಪೂರ್ತಿ ಅಳವಡಿಸಿಕೊಂಡರೆ ಬದುಕು ಸುಂದರಮಯವಾಗುತ್ತದೆ. ಕಲೆಗೆ ಎಂತಹ ಕಲ್ಲನ್ನು ಶಿಲೆ ಮಾಡುವ ಸಾಮರ್ಥ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಎಲ್ಲರಿಗೂ ಭಗವಂತ ಏನಾದರೂ ಒಂದು ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಪ್ರತಿಭೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅಂತಹ ಕಲೆಗೆ ಮತ್ತು ಕಲಾವಿದರಿಗೆ ಗೌರವವನ್ನು ನೀಡುತ್ತಾ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಗುರಿಗಳನ್ನು ಇಟ್ಟು ಕೊಳ್ಳುವುದಕ್ಕಿಂತ ಒಂದೇ ಗುರಿಯನ್ನು ಬೇರೆ ಬೇರೆ ರೀತಿಯಲ್ಲಿ ಸಾಧಿಸಿ ತೋರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅರವಿಂದ ಬೋಳಾರ್ ಮತ್ತು ಯಶವಂತ್ ಎಂ.ಜೆ. ಅವರನ್ನು ಸಂಸ್ಥೆಯ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ಶಿಕ್ಷಕರು ಹಾಗೂ ಸಂಸ್ಥೆಗೆ ಹೊಸದಾಗಿ ಈ ವರ್ಷ ದಾಖಲಾದ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾರಾದ ಶಿವಪ್ರಸಾದ್ ಭಟ್ ಮತ್ತು ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರು ಶ್ರೀ ಪ್ರಸಾದ್ ಮತ್ತು ಉಪ ಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಜಯಲಕ್ಷ್ಮಿ, ವಿದ್ಯಾರ್ಥಿನಿ ಅದಿತಿ ನಿರೂಪಿಸಿದರು, ಆಕಾಂಕ್ಷ್ ಜೈನ್ ಸ್ವಾಗತಿಸಿ, ನಕ್ಷತ್ರ ವಂದಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ

ಉಜಿರೆ, ಜೂ.30: ಶಿಕ್ಷಣ ದೊಡ್ಡ ಶಕ್ತಿಯಾಗಿದ್ದು, ಜ್ಞಾನದ ಜೊತೆಗೆ ಕೌಶಲಗಳನ್ನು ಹೊಂದಿ ಸಮಾಜವನ್ನು ಎದುರಿಸುವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಎರಡು ದಿನದ ಪ್ರಶಿಕ್ಷಣ ಕಾರ್ಯಕ್ರಮವನ್ನು ಜೂ.30ರಂದು ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಆಸ್ತಿವಂತರು, ಹಣವಂತರು ಶಕ್ತಿಶಾಲಿ, ಶ್ರೀಮಂತರೆಂದು ಪರಿಗಣಿಸಲ್ಪಟ್ಟಿದ್ದರೆ, ಪ್ರಸ್ತುತ ಕಾಲದಲ್ಲಿ ಜ್ಞಾನವಂತರು ಭೌತಿಕ ಮತ್ತು ಬೌದ್ಧಿಕವಾಗಿ ಶಕ್ತಿಶಾಲಿಗಳು, ಶ್ರೀಮಂತರೆಂದು ಪರಿಗಣಿಸಲ್ಪಡುತ್ತಾರೆ. ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ಆ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಪದವಿ ಶಿಕ್ಷಣವು ಜವಾಬ್ದಾರಿಯುತ ಘಟ್ಟವಾಗಿದ್ದು, ಬೋಧಕರೇ ಎಲ್ಲವನ್ನೂ ಕಲಿಸಬೇಕಾಗಿಲ್ಲ. ವಿದ್ಯಾರ್ಥಿಗಳು ಲಭ್ಯ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಂಡು ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಹಯೋಗ ಮತ್ತು ಸಂವಹನ ಕೌಶಲದ ಮೂಲಕ ನಿಜ ಜೀವನದ ಸಮಸ್ಯೆಗಳನ್ನು ಎದುರಿಸಲು ಶಕ್ತರಾಗಬೇಕು ಎಂದು ಅವರು ಸಲಹೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳವು ಶಿಕ್ಷಣ ಸಂಸ್ಥೆ (ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ) ಮೂಲಕ ಗುಣಮಟ್ಟದ ಶಿಕ್ಷಣ, ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡುತ್ತ ಶಿಕ್ಷಣ ಯಜ್ಞ ನಡೆಸುತ್ತಿದೆ. ದೇಶದ ಸುಮಾರು 1,350 ವಿವಿಗಳ ಅಧೀನದ 50-52 ಸಾವಿರ ಕಾಲೇಜುಗಳಲ್ಲಿ ಉನ್ನತ 100 ಕಾಲೇಜುಗಳ ಪೈಕಿ ಎಸ್.ಡಿ.ಎಂ. ಕಾಲೇಜು ಒಂದೆಂದು ಗುರುತಿಸಲ್ಪಟ್ಟಿದೆ. ಕಡಿಮೆ ಶುಲ್ಕ, ನುರಿತ ಬೋಧಕ ವರ್ಗ, ಪಠ್ಯೇತರ ಚಟುವಟಿಕೆಗೆ ಅವಕಾಶ ಇತ್ಯಾದಿ ವ್ಯವಸ್ಥೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನ, ಬೌದ್ಧಿಕ ವಿಕಸನಕ್ಕೆ ಒತ್ತು ನೀಡುತ್ತಿದೆ ಎಂದರು. ಮುಖ್ಯ ಅತಿಥಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಮಾತನಾಡಿದರು. ಮಾಹಿತಿ ಪೂರಕ್ಕೆ ಸಿಲುಕಿರುವ ಯುವ ಪೀಳಿಗೆ ಅಗತ್ಯವಾದುದನ್ನು ಅರಗಿಸಿಕೊಂಡು ಕಲಿಕೆಯನ್ನು ಒರೆಹಚ್ಚಿ ನೋಡುವ ಪ್ರಯತ್ನ ಮಾಡಬೇಕು ಎಂದರು. ಎಲ್ಲವೂ ತಿಳಿದಿದೆ ಎಂಬ ಅಹಂ ಬಿಟ್ಟು, ಕಲಿಕೆಯತ್ತ ಮನಸ್ಸು ಮಾಡಬೇಕು. ಅಂಧಾನುಕರಣೆ ಬಿಟ್ಟು ಜ್ಞಾನವಂತರನ್ನು ಹಿಂಬಾಲಿಸಬೇಕು. ಸಮಾಜಕ್ಕೆ ಪ್ರಯೋಜನಕಾರಿ ಜ್ಞಾನವಂತರಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಮೌಲ್ಯ ಕಲಿಕೆ ನಮ್ಮ ಆಶಯವಾಗಿದ್ದು, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಪೂರಕವಾದ ವ್ಯವಸ್ಥೆಗಳು ನಮ್ಮಲ್ಲಿವೆ. ಆದರೆ ಅಂತಿಮವಾಗಿ ಪರಿಶ್ರಮವೆಂಬುದು ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅವಕಾಶಗಳನ್ನು ವರವಾಗಿ ಪರಿವರ್ತಿಸಿಕೊಳ್ಳಬೇಕು. ಪೋಷಕರೂ ತಮ್ಮ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ಗಮನ ಇರಿಸಬೇಕು ಎಂದರು. ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಎಸ್. ಎನ್. ಕಾಕತ್ಕರ್, ಕಾಲೇಜಿನ ಉಪ ಪ್ರಾಂಶುಪಾಲೆ ನಂದಕುಮಾರಿ, ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಜಿ. ಆರ್. ಭಟ್ ಉಪಸ್ಥಿತರಿದ್ದರು. ಸುಪ್ರೀತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಶಿಸ್ತುಪಾಲನ ಸಮಿತಿ ಸಂಯೋಜಕ ನಟರಾಜ್ ಎಚ್. ಕೆ. ಸ್ವಾಗತಿಸಿ, ಮುಖ್ಯ ಸಂಯೋಜಕ ಶ್ರೇಯಸ್ ಬಿ. ವಂದಿಸಿದರು. ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.

ಸಮಯನಿಷ್ಠೆಯಿಂದ ಕಾರ್ಯಪ್ರವೃತ್ತನಾಗುವವನೇ ನಿಜವಾದ ವೈದ್ಯ: ಡಾಕ್ಟರ್ ಪುನೀತ್

Article Image

ಸಮಯನಿಷ್ಠೆಯಿಂದ ಕಾರ್ಯಪ್ರವೃತ್ತನಾಗುವವನೇ ನಿಜವಾದ ವೈದ್ಯ: ಡಾಕ್ಟರ್ ಪುನೀತ್

ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್ಇ ಶಾಲೆಯಲ್ಲಿ ವೈದ್ಯ ದಿನಾಚರಣೆಯನ್ನು ನೆರವೇರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನದೊಂದಿಗೆ ವೈದ್ಯರಿಗೆ ಗೌರವವನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಯುವರಾಜ್ ಜೈನ್ ರವರು ಉಪಸ್ಥಿತರಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳ ಜೀವನದ ಘಟನೆಗಳನ್ನು ಸ್ಮರಿಸುವ ಮೂಲಕ ವೈದ್ಯ ವೃತ್ತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾಕ್ಟರ್ ಪುನೀತ್ ರವರು ಮಾತನಾಡಿ ಸಮಯ ನಿಷ್ಠೆಯಿಂದ ಕಾರ್ಯಪ್ರವೃತ್ತನಾಗುವವನೇ ನಿಜವಾದ ವೈದ್ಯ ಎಂದು ಹೇಳುವ ಮೂಲಕ ವೈದ್ಯರಾಗಬೇಕೆಂಬ ಕನಸನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿಯ ಘನತೆಯ ಕುರಿತು ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಮುಖ್ಯಸ್ಥರಾಗಿರುವ ವಿಶ್ವರಾಜ್, ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಶ್ರೀಪ್ರಸಾದ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಇಷಿತ ನೆರವೇರಿಸಿದರು. ವಿದ್ಯಾರ್ಥಿನಿಯಾದ ಪ್ರಿಯಾಂಕರವರು ಸ್ವಾಗತಿಸಿ, ಆರವ್ ಕಿರಣ್ ವಂದಿಸಿದರು.

ಜೈನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

Article Image

ಜೈನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

ಜೈನ ಪದವಿಪೂರ್ವ ಕಾಲೇಜು ಮೂಡುಬಿದಿರೆ ಇದರ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಗೌರವಾನ್ವಿತ ಸಂಚಾಲಕರಾದ ಶ್ರೀಯುತ ಕೆ. ಹೇಮರಾಜ್ ವಹಿಸಿದ್ದರು. ಉದ್ಘಾಟಕರಾಗಿ ಆಗಮಿಸಿದ ಡಾII ಮಾಧವ ಎಮ್. ಕೆ. ಮುಖ್ಯಸ್ಥರು ಕನ್ನಡ ವಿಭಾಗ ಹಾಗೂ ಸಂಯೋಜಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ಇವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಜೀವನದಲ್ಲಿಒಳ್ಳೆಯ ಸಂಸ್ಕಾರ, ಒಂದು ಗುರಿಯನ್ನು ಇಟ್ಟುಕೊಂಡು, ಕಠಿಣ ಪರಿಶ್ರಮ ಪಡುತ್ತಾ ಇಷ್ಡಪಟ್ಟು ಓದಿದರೆ ಯಶಸ್ಸು ಖಂಡಿತ ಸಾಧ್ಯ. ಎಷ್ಟೇ ಶ್ರೀಮಂತರಿರಲಿ ಎಷ್ಟೇ ಬಡವರಿರಲಿ ಎಲ್ಲರಿಗೂ ಇರುವ ದಿನದ ಸಮಯ ಒಂದೇ. ವಿದ್ಯಾರ್ಥಿಗಳು ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಶ್ರಮ ಪಡಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾII ಪ್ರಭಾತ್ ಬಲ್ನಾಡು ಇವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚರಣ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು. ದಿಗಂಬರ ಜೈನ ವಿದ್ಯಾವರ್ಧಕ ಸಂಘದ ವತಿಯಿಂದ 2024-25 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಘದ ಸಂಚಾಲಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷರೂ ಆಗಿರುವ ಕೆ. ಹೇಮರಾಜ್ ಇವರು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಮಾತುಗಳನ್ನು ಆಡಿದರು. ವಿದ್ಯಾರ್ಥಿ ಸಂಘದ ಮಾರ್ಗದರ್ಶಕ ಉಪನ್ಯಾಸಕರಾದ ಶ್ರೀರಾಮಚಂದ್ರ ಭಟ್ ಇವರು ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಟಿ.ಜಿ ಸರ್ವರನ್ನೂ ಸ್ವಾಗತಿಸಿದರು, ಕಾರ್ಯದರ್ಶಿ ಸಿಲ್ವಿಯಾ ಡಿ.ಸೋಜ ವಂದಿಸಿದರು. ಸಾಹಿತ್ಯ ಮತ್ತು ಲಲಿತ ಕಲಾ ಸಂಘದ ಕಾರ್ಯದರ್ಶಿ ಶ್ರವಣ್ ಶೆಟ್ಟಿ ಹಾಗೂ ಜೊತೆ ಕಾರ್ಯದರ್ಶಿ ಸಾನಿಕಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಐಸರ್‌ನಲ್ಲಿ ಮೂಡುಬಿದಿರೆ ಎಕ್ಸಲೆಂಟ್‌ನ ವಿದ್ಯಾರ್ಥಿ 17 ನೇ ಸ್ಥಾನ: ರಾಷ್ಟ್ರಮಟ್ಟದ ಸಾಧನೆ

Article Image

ಐಸರ್‌ನಲ್ಲಿ ಮೂಡುಬಿದಿರೆ ಎಕ್ಸಲೆಂಟ್‌ನ ವಿದ್ಯಾರ್ಥಿ 17 ನೇ ಸ್ಥಾನ: ರಾಷ್ಟ್ರಮಟ್ಟದ ಸಾಧನೆ

ಮೂಡುಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರತಿಷ್ಠಿತ ಐಸರ್ ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಶಿಶಿರ್ ಶೆಟ್ಟಿ ಐಸರ್‌ನಲ್ಲಿ ಮೂಡುಬಿದಿರೆ ಎಕ್ಸಲೆಂಟ್ ನ ವಿದ್ಯಾರ್ಥಿ 17 ನೇ ಸ್ಥಾನವನ್ನು ಪಡೆದಿದ್ದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾನೆ. ಶಿಶಿರ್ ಈ ವರ್ಷ ನಡೆದ ಕಾಮೆಡ್ ಕೆ ನಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ, ಜೆಇಇ ಅಡ್ವಾನ್ಸ್ಡ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ 664ನೇ ಸ್ಥಾನ, ಸಿಇಟಿ ಇ0ಜಿನಿಯರಿಂಗ್ ವಿಭಾಗದಲ್ಲಿ 4 ನೇ ಸ್ಥಾನ ಮತ್ತು ದ್ವಿತೀಯ ಪದವಿಪೂರ್ವ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 7 ನೇ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುತ್ತಾನೆ. ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಯುವರಾಜ ಜೈನ್, ಪ್ರಾಂಶುಪಾಲರಾದ ಪ್ರದೀಪ ಕುಮಾರ್ ಶೆಟ್ಟಿ, ಮತ್ತು ಉಪನ್ಯಾಸಕ ವರ್ಗದವರು ಅಭಿನ0ದನೆ ಸಲ್ಲಿಸಿದ್ದಾರೆ.

ಉಜಿರೆ ಎಸ್.ಡಿ.ಎಂ. ಆಸ್ಪತ್ರೆ ವೈದ್ಯರಿಂದ ಮೈತ್ರಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ. ಆಸ್ಪತ್ರೆ ವೈದ್ಯರಿಂದ ಮೈತ್ರಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರ

ಡಾ. ಡಿ. ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿ ಸಹಯೋಗದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ ಇವರು ಮೈತ್ರೆ ಹಾಸ್ಟೆಲ್ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಉಚಿತ ಚರ್ಮರೋಗ ತಪಾಸಣೆ ಮತ್ತು ಜಾಗೃತಿ ಶಿಬಿರವನ್ನು 2 ದಿನ ನಡೆಸಿಕೊಟ್ಟರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ಶರೀರದ ಆರೋಗ್ಯ ಕಾಪಾಡುವಲ್ಲಿ ಚರ್ಮದ ಪಾತ್ರ, ಹಾನಿಕಾರಕ ಪರಿಸರದ ಅಂಶಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಚರ್ಮದ ಆರೈಕೆ. ಹದಿಹರೆಯದಲ್ಲಿ ಮೊಡವೆಗಳನ್ನು ತಡೆಗಟ್ಟುವ ವಿಧಾನ ಇತ್ಯಾದಿ ವಿಷಯಗಳನ್ನು ತಿಳಿಸಿಕೊಟ್ಟರು. ಸುಮಾರು 120 ವಿದ್ಯಾರ್ಥಿನಿಯರಿಗೆ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿದರು.

ಜಾಗೃತಿ ಕಾರ್ಯಕ್ರಮ

Article Image

ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಣಿಕೆ ತಡೆ ದಿನ’ದಂದು ಆಳ್ವಾಸ್ ಹೋಮಿಯೋಪತಿ ಕಾಲೇಜು ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ ಪೋಲೀಸ್ ಠಾಣಾ ಉಪನಿರೀಕ್ಷಕಿ ಪ್ರತಿಭಾ ಮಾತನಾಡಿ, ಮಾದಕ ದ್ರವ್ಯಗಳ ವ್ಯಸನಕ್ಕೆ ಹೆಚ್ಚಾಗಿ ಯುವಕರು ಮತ್ತು ಯುವತಿಯರು ಬಲಿಯಾಗುತ್ತಿದ್ದಾರೆ. ಇವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಇದರಿಂದ ಕೇವಲ ಸೇವಿಸುವವನಿಗೆ ಮಾತ್ರವಲ್ಲ, ಸಮಾಜಕ್ಕೂ ತೊಂದರೆಯಾಗುತ್ತಿದೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಾದ ಕಳ್ಳತನ, ಕೊಲೆ, ಅತ್ಯಾಚಾರ ಇತ್ಯಾದಿಗಳಿಗೆ ತೊಡಗಿರುವ 70% ಆರೋಪಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿರುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪುನರ್ಜನ್ಮ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಆಳ್ವ, ‘2019ರಲ್ಲಿ ಭಾರತದಲ್ಲಿ ನಡೆದ ಸಮೀಕ್ಷೆಯ ಪ್ರಕಾರ 17 ಕೋಟಿ ಮದ್ಯಪಾನ, 5.1 ಕೋಟಿ ಓಪಿಯಂ, 3.2 ಕೋಟಿ ಗಾಂಜಾ ಸೇವಿಸುವವರಿದ್ದು, ಆದರೆ ಕೇವಲ 612 ನೋಂದಾಯಿಸಲ್ಪಟ್ಟ ದುಶ್ಚಟ ನಿವಾರಣಾ ಕೇಂದ್ರಗಳಿವೆ. ಇವುಗಳ ನಡುವೆ ಇರುವ ವ್ಯತ್ಯಾಸ ದುಶ್ಚಟ ನಿವಾರಣಾ ಕೇಂದ್ರಗಳಿಗಿರುವ ಬೇಡಿಕೆಯನ್ನು ತಿಳಿಸುತ್ತದೆ. ಮಾದಕ ದ್ರವ್ಯಗಳ ವ್ಯಸನ ಒಂದು ಸಾಂಕ್ರಾಮಿಕ ರೋಗ. ಅದು ಕೇವಲ ವ್ಯಕ್ತಿಯಲ್ಲಿ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ನಾವೆಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿ, ಮುನ್ನಡೆಯಬೇಕು ಎಂದರು. ಬೆಳ್ತಂಗಡಿ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ನಮ್ಮ ಕಣ್ಣ ಮುಂದಿರುವ ಅತೀ ದೊಡ್ಡ ಶತ್ರು ಮಾದಕ ವಸ್ತುಗಳು. ಮಾನವರು ಸಾಮಾನ್ಯವಾಗಿ ಕೆಟ್ಟ ಚಟಗಳೆಡೆಗೆ ಬೇಗನೆ ಆಕರ್ಷಿತರಾಗುತ್ತಾರೆ. ಶರೀರ ಒಂದು ಕಾರ್ಖಾನೆಯಂತೆ. ದೇಹಕ್ಕೆ ನೀಡುವ ಪದಾರ್ಥಗಳ ಮೇಲೆ ಅದು ವರ್ತಿಸಲಾರಂಭಿಸುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ದೇಹದ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಲಾಗದೆ ಆರೋಗ್ಯ ಹದಗೆಡುತ್ತದೆ, ಮನಸ್ಸೂ ಅಶಾಂತವಾಗುತ್ತದೆ. ದುಶ್ಚಟಗಳಿಗೆ ಒಳಗಾದವರು ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸುಧಾರಿಸುವುದಿಲ್ಲ. ಮನಸ್ಥಿತಿ ಉತ್ತಮವಿದ್ದಲ್ಲಿ ಮಾತ್ರ ಪರಿಸ್ಥಿತಿಯ ಉತ್ತಮವಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ ರೋಷನ್ ಪಿಂಟೋ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಳ್ವಾಸ್ ಪುರ್ನಜನ್ಮದ ಆಪ್ತಸಮಾಲೋಚಕಿ ಸುಮನ್ ಪಿಂಟೋ ಸ್ವಾಗತಿಸಿ, ಬೆನ್ಸನ್ ಡಿಸೋಜ ವಂದಿಸಿ, ಮುಖ್ಯ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ ನಿರೂಪಿಸಿದರು.

ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ಫೋರಮ್‌ನ ಸಮಾರೋಪ ಸಮಾರಂಭ

Article Image

ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ಫೋರಮ್‌ನ ಸಮಾರೋಪ ಸಮಾರಂಭ

ವಿದ್ಯಾಗಿರಿ: ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನಕ್ಕೆ ಕಾಲಿಡುವ ಪ್ರತಿ ವಿದ್ಯಾರ್ಥಿಯೂ ಸಂದರ್ಶನವನ್ನು ಎದುರಿಸುವ ಕಲೆಯನ್ನು ಕರಗತ ಪಡಿಸಿಕೊಂಡಿರಬೇಕು. ಪ್ರತಿ ನಿರ್ಧಾರವನ್ನು ಜಾಗರೂಕತೆಯಿಂದ ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ಸುಲಭ ಸಾಧ್ಯ ಎಂದು ಬನ್ನಡ್ಕ ಎಸ್ ಕೆಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ವಿವೇಕ್ ವಲ್ಲಭ್ ನುಡಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ "ಸಮಾಜಕಾರ್ಯ ಫೋರಮ್‌ನ’ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವೃತ್ತಿ ಬದುಕಿಗೆ ಕಾಲಿಡುವಾಗ ವೃತ್ತಿಪರತೆಯನ್ನು ರೂಡಿಸಿಕೊಳ್ಳುವುದರೊಂದಿಗೆ ಹೊಸ ಉದ್ಯಮಕ್ಕಿಂತ ಸ್ಥಾಪಿತ ಕಂಪನಿಗೆ ಸೇರುವುದು ಉತ್ತಮ. ಪ್ರತಿ ಹಂತದಲ್ಲೂ ಅಲ್ಲಿ ಸಿಗುವ ವೃತ್ತಿಯ ಅನುಭವ ಮತ್ತಷ್ಟು ವೈಯಕ್ತಿಕ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸಮಾಜಕಾರ್ಯ ಎನ್ನುವುದು ಎಂದಿಗೂ ಸಮುದಾಯವನ್ನು ಕಟ್ಟುವ ಮತ್ತು ಅಭಿವೃದ್ಧಿ ಪೋಷಿಸುವ ಕಾರ್ಯದಲ್ಲಿ ತನ್ನೊಂದಿಗೆ ತನ್ನವರನ್ನು ಬೆಳೆಸುವ ಕ್ಷೇತ್ರ. ಹಾಗಾಗಿ ಎಂತಹ ಪರಿಸ್ಥಿಯಲ್ಲಿಯೂ ಮನುಷತ್ವವನ್ನು ಮರೆತು ವರ್ತಿಸದಿರಿ. ನಿಮ್ಮ ಸುತ್ತಮುತ್ತಲಿನ ಸಮುದಾಯದ ಒಳಿತಿಗೆ ಸದಾ ಶ್ರಮಿಸುತ್ತಿರಿ ಎಂದು ಆಳ್ವಾಸ್ (ಸ್ವಾಯತ್ತ ) ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಶುಭ ಹಾರೈಸಿದರು. ಬಳಿಕ, ಅತ್ಯುತ್ತಮ ಸಮಾಜಕಾರ್ಯ ವಿದ್ಯಾರ್ಥಿ ಹಾಗೂ ಸಮುದಾಯ ಶಿಬಿರದ ಅತ್ಯುತ್ತಮ ಶಿಬಿರಾರ್ಥಿ ಪ್ರಶಸ್ತಿಯನ್ನು ಕ್ರಮವಾಗಿ ಲಾವಣ್ಯ ಹಾಗೂ ಮಹೇಶ್‌ಗೆ ನೀಡಿ ಅಭಿನಂದಿಸಲಾಯಿತು. ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಕೆ, ಸಮಾಜಕಾರ್ಯ ಫೋರಮ್ ಸಂಯೋಜಕ ಕೃಷ್ಣಮೂರ್ತಿ ಬಿ, ವಿದ್ಯಾರ್ಥಿ ಸಂಯೋಜಕ ಶ್ರೇಯಸ್, ಫೋರಮ್ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

ಉಜಿರೆ: ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

Article Image

ಉಜಿರೆ: ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಡಿ. ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 22-06-2025ನೇ ಆದಿತ್ಯವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ ನಡೆಯಿತು. ಜನರಲ್ ಸರ್ಜನ್ ಡಾ| ಕಿರಣ್ ಕುಮಾರ್ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಂತ ನಗರದ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯ ಈ ಗ್ರಾಮೀಣ ಆಸ್ಪತ್ರೆಯಲ್ಲಿ ದೊರೆಯುತ್ತದೆ. ಇಲ್ಲಿನ ವೈದ್ಯಕೀಯ ಸೇವೆ ನಗರದ ಆಸ್ಪತ್ರೆಗಳಿಗೆ ಸಮಾನವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡುತ್ತಾ, ಒಳ್ಳೆಯ ಮನಸ್ಸು ಮತ್ತು ಸೇವಾ ಮನೋಭಾವ ಹೊಂದಿರುವ ಅನುಭವಿ ತಜ್ಞ ವೈದ್ಯರ ತಂಡ, ತರಬೇತಿ ಹೊಂದಿದ ನುರಿತ ದಾದಿಯರು ಮತ್ತು ಟೆಕ್ನಿಶಿಯನ್ಸ್ ಇಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇಲ್ಲಿ ನಡೆಸಲಾಗುವ ಉಚಿತ ಶಿಬಿರಗಳ ಮೂಲಕ ಹಲವಾರು ಮಂದಿಯ ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗಿದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಜನರಲ್ ಸರ್ಜನ್ ಡಾ| ಬಾಲಾಜಿ ಪ್ರಭಾಕರನ್ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಶಿಬಿರದಲ್ಲಿ ಸಾಮಾನ್ಯ ಶಸ್ತçಚಿಕಿತ್ಸಾ ತಪಾಸಣೆ, ಹರ್ನಿಯಾ (ಕಿಬ್ಬೊಟ್ಟೆ, ತೊಡೆಸಂದು, ಹೊಕ್ಕಳು) ಕಡಿಮೆ ಮಾಡಬಹುದಾದ ಊತ, ಪಿತ್ತಕೋಶದ ಕಲ್ಲುಗಳು, ಕಿಬ್ಬೊಟ್ಟೆಯ ನೋವು, ಕಾಮಾಲೆ, ಅಪೆಂಡಿಸೈಟಿಸ್ (ಕೆಳಗಿನ ಬಲ ಹೊಟ್ಟೆ ನೋವು), ಮೂಲವ್ಯಾದಿ, ಪಿಸ್ತುಲಾ, ವೃಷಣಗಳ ನೋವು ರಹಿತ ಊತ, ಚರ್ಮದ ಗಾಯಗಳು ಮತ್ತು ಗೆಡ್ಡೆಗಳ ತಪಾಸಣೆ ನಡೆಸಲಾಯಿತು. 75ಕ್ಕಿಂತಲೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.

ಮೂಡುಬಿದಿರೆ: ಯೋಗ ಸಂಗಮ -2025

Article Image

ಮೂಡುಬಿದಿರೆ: ಯೋಗ ಸಂಗಮ -2025

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕಾಲೇಜು, ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ‘ಯೋಗ ಸಂಗಮ -2025’ ಕಾರ‍್ಯಕ್ರಮ ನಡೆಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳ 1500 ವಿದ್ಯಾರ್ಥಿಗಳು ಏಕಕಾಲದಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲನ್ನು ಅನುಸರಿಸಿ 45 ನಿಮಿಷಗಳ ಸಾಮೂಹಿಕ ಯೋಗ ಪ್ರದರ್ಶನವನ್ನು ನೀಡಿದರು. ದೇಶದ ಒಂದು ಲಕ್ಷಕ್ಕೂ ಅಧಿಕ ಭಾಗಗಳಲ್ಲಿ ಈ ಯೋಗ ಸಂಗಮ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಅನಂತ ಕೃಷ್ಣ ಸಿ. ವಿ ಮತ್ತು ತ್ರಿಶಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ನ್ಯಾಚುರೋಪತಿ ವಿಭಾಗದ ಪ್ರಾಂಶುಪಾಲ ಡಾ. ವನಿತಾ ಶೆಟ್ಟಿ, ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ.ಸಜಿತ್ ಎಂ, ಆಳ್ವಾಸ್ ಫಾರ್ಮಸಿ ಕಾಲೇಜಿನ ಪ್ರಾಚರ‍್ಯ ಡಾ.ಮಂಜುನಾಥ ಸೆಟ್ಟಿ, ಆಳ್ವಾಸ್ ದೈಹಿಕ ಶಿಕ್ಷಣ ಸ್ನಾತಕೋತ್ತರ ಕಾಲೇಜಿನ ಡಾ. ಮಧು ಜಿ ಆರ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಉಪ ಪ್ರಾಂಶುಪಾಲೆ ಹಾಗೂ ಯೋಗ ವಿಭಾಗದ ಮುಖ್ಯಸ್ಥ ಡಾ. ವಿದ್ಯಾ ನ್ಯಾಚುರೋಪತಿ ಮತ್ತು ಯೋಗ ವಿಭಾಗದ ಡೀನ್. ಡಾ.ಅರ್ಚನಾ ಇದ್ದರು.

2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅಂಕುರ

Article Image

2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅಂಕುರ

ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ) ವತಿಯಿಂದ 2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ 'ಅಂಕುರ' ಆಳ್ವಾಸ್ ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಶಿಕ್ಷಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳಿದ್ದ ಮಾತ್ರಕ್ಕೇ ಶ್ರೇಷ್ಠ ವೆನಿಸಿಕೊಳ್ಳಲಾರವು. ಆ ಕಟ್ಟಡಗಳಿಗೆ ಜೀವಕಳೆ ವಿದ್ಯಾರ್ಥಿಗಳಿಂದ ಮಾತ್ರ ತುಂಬಲು ಸಾಧ್ಯ. ಅಂತಹ ವಿದ್ಯಾರ್ಥಿ ಸಮೂಹ ನೀವಾಗಬೇಕು. ಆಳ್ವಾಸ್ ನ ವಿದ್ಯಾರ್ಥಿಗಳೇ ‘ಆಳ್ವಾಸ್ ಬ್ರ್ಯಾಂಡ್’ ಎಂದರು. ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಸೇರುವ ಮೂಲ ಉದ್ದೇಶವನ್ನು ಅರಿಯಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ಸಮಕಾಲೀನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಪ್ರಪಂಚದ ಆಧುನಿಕ ಅಗತ್ಯಗಳಿಗೆ ತಕ್ಕಂತಹ ಜ್ಞಾನ ಮತ್ತು ಕೌಶಲಗಳನ್ನು ಸದಾ ನೀಡುತ್ತಿದೆ. ಸ್ವಾಯತ್ತ ಕಾಲೇಜಿನ ನೆಲೆಯಲ್ಲಿ ನಿತ್ಯ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆ, ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳಿಗೆ ತಕ್ಕಂತೆ ಪಠ್ಯ ಕ್ರಮವನ್ನು ರೂಪಿಸಲಾಗುತ್ತಿದೆ. ಇವು ವಿದ್ಯಾರ್ಥಿಗಳಲ್ಲಿ ವಾಸ್ತವಿಕ ಜ್ಞಾನ, ತಂತ್ರಜ್ಞಾನಾಧಾರಿತ ಕೌಶಲಗಳು, ಸೃಜನಾತ್ಮಕತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಸಾಮರ್ಥ್ಯಗಳನ್ನು ಬೆಳೆಸುತ್ತದೆ ಎಂದರು. ಆಳ್ವಾಸ್ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪದವಿ ಹಂತದಲ್ಲಿ ಪೋಷಕರು ಮಕ್ಕಳ ಬೆಳೆವಣಿಗೆಯನ್ನು ಹತ್ತಿರದಿಂದ ಗಮನಿಸುವ ಕೆಲಸವನ್ನು ಮಾಡಬೇಕು. ಈ ಮೂರು ವರ್ಷ ಬರೀ ಶಿಕ್ಷಣ ಮಾತ್ರವಲ್ಲದೇ ಅದರ ಹೊರತಾಗಿ ಸಾಮರ್ಥ್ಯಗಳ ವೃದ್ಧಿಯತ್ತಾ ಗಮನಕೊಡಬೇಕು. ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಎರಡು ಗಂಟೆಯಾದರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನೊಂದಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿಕೊಂಡು ಕೆಲಸ ಮಾಡಿದಾಗ ಅದ್ಭುತವನ್ನು ಸೃಷ್ಟಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ) ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ . ರವೀಂದ್ರನ್, ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.

ಧರ್ಮಸ್ಥಳದಲ್ಲಿ ಯಾಂತ್ರೀಕೃತ ಕೃಷಿಗೆ ಚಾಲನೆ

Article Image

ಧರ್ಮಸ್ಥಳದಲ್ಲಿ ಯಾಂತ್ರೀಕೃತ ಕೃಷಿಗೆ ಚಾಲನೆ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಸೋಮವಾರ ಧರ್ಮಸ್ಥಳದ ಗದ್ದೆಯಲ್ಲಿ ಯಾಂತ್ರೀಕೃತ ಕೃಷಿಗೆ ಚಾಲನೆ ನೀಡಲಾಯಿತು. ಯಾಂತ್ರೀಕೃತ ಕೃಷಿಯಿಂದ ರೈತರು ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಮತ್ತು ಲಾಭ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿ ಹೆಗ್ಗಡೆಯವರು ಶುಭ ಹಾರೈಸಿದರು. ಯಂತ್ರಶ್ರೀ ಯೋಜನೆಯಲ್ಲಿ ರಾಜ್ಯದ 96 ತಾಲ್ಲೂಕುಗಳಲ್ಲಿ 44,119 ರೈತರನ್ನು ಪ್ರೇರೆಪಿಸಿ 1,00,254 ಎಕ್ರೆ ಕೃಷಿ ಭೂಮಿಯನ್ನು ಈಗಾಗಲೆ ಹದಗೊಳಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿವಾಹಕ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ

Article Image

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ

ಉಜಿರೆ, ಜೂನ್ 18: ಭಾರತದ ಸಮೃದ್ಧ ಜ್ಞಾನ ಪರಂಪರೆಯ ಹಲವು ವಿಶೇಷತೆಗಳ ಸೊಗಡಿನ ರಕ್ಷಣೆಗೆ ಬೌದ್ಧಿಕ ಆಸ್ತಿ ಹಕ್ಕು ಸಹಾಯಕವಾಗುತ್ತದೆ ಎಂದು ನಿಟ್ಟೆ ಡೀಮ್ಡ್ ಟುಬಿ ಯುನಿವರ್ಸಿಟಿಯ ಎನ್‌ಎಂಎಎಂ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿ ಮಾನವಿಕ ವಿಭಾಗದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಬಿ. ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ‘ಇನ್ನೋವೇಟ್ ಆ್ಯಂಡ್ ಪ್ರೊಟೆಕ್ಟ್: ಪೇಟೆಂಟ್ಸ್, ಟ್ರೇಡ್‌ಮಾರ್ಕ್ಸ್, ಪಬ್ಲಿಷಿಂಗ್ ರೈಟ್ಸ್’ ಕುರಿತು ಬುಧವಾರ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಪಾರಂಪರಿಕ ಜ್ಞಾನ ಅಗಾಧವಾದುದು. ಈ ಜ್ಞಾನದ ಆವರಣದಲ್ಲಿ ಲಭ್ಯವಾಗಿರುವ ಅಪರೂಪದ ಮಾದರಿಗಳನ್ನು ಕದ್ದು ತಮ್ಮದೆಂದು ಪ್ರತಿಪಾದಿಸುವ ಪ್ರಯತ್ನಗಳು ವಿಶ್ವಮಟ್ಟದಲ್ಲಿ ಆಗುತ್ತಿವೆ. ಇಂತಹ ಪ್ರಯತ್ನಗಳನ್ನು ತಡೆದು ಭಾರತದ್ದೇ ಆದ ಪಾರಂಪರಿಕ ಜ್ಞಾನದ ಅಸ್ಮಿತೆಯನ್ನು ಎತ್ತಿಹಿಡಿಯುವುದಕ್ಕೆ ಬೌದ್ಧಿಕ ಆಸ್ತಿ ಹಕ್ಕು ಪೂಕರವಾಗಿರುವುದು ವಿವಿಧ ಪ್ರಕರಣಗಳಲ್ಲಿ ದೃಢವಾಗಿದೆ ಎಂದರು. ಜಪಾನ್ ನಮ್ಮ ಗಾಯಿತ್ರಿ ಮಂತ್ರ ತನ್ನದೆಂದು ಹೇಳಿಕೊಂಡು ಪೇಟೆಂಟ್ ಪಡೆಯಲು ಮುಂದಾಗಿತ್ತು. ಅರಿಷಿಣದ ಚಿಕಿತ್ಸಕ ಗುಣದ ವಿಶೇಷತೆಯನ್ನು ಅರಿತು ಅಮೆರಿಕದವರು ತಮ್ಮದೆಂದು ವಾದಿಸಿ ಪೇಟೆಂಟ್ ಪಡೆಯಲು ಮುಂದಾಗಿದ್ದರು. ಅರೇಬಿಕ್ ಸಾಹಿತ್ಯದಲ್ಲಿ ಉಲ್ಲೇಖಿತ ವಿವರವೊಂದು ಅರಿಷಿಣ ಭಾರತದ್ದು ಎಂಬುದನ್ನು ಸಾಬೀತುಪಡಿಸಿತ್ತು. ಭಾರತದ ಜ್ಞಾನ ಪರಂಪರೆಯ ಒಳಗೆ ಲಭ್ಯವಿರುವ ಇಂತಹ ಹಲವು ಪ್ರಯೋಜನಕಾರಿ ಅಂಶಗಳನ್ನು ಪತ್ತೆ ಹಚ್ಚಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮದನ್ನಾಗಿಸಿಕೊಳ್ಳುವ ಹುನ್ನಾರ ನಡೆಸುತ್ತಿವೆ. ಇಂತಹ ಹುನ್ನಾರಗಳಿಗೆ ತಡೆಯೊಡ್ಡುವ ಏಕೈಕ ಮಾರ್ಗ ಎಂದರೆ ಬೌದ್ಧಿಕ ಆಸ್ತಿ ಹಕ್ಕಿನ ಸಮರ್ಪಕ ಬಳಕೆ ಮತ್ತು ಅನ್ವಯಿಸಿಕೊಳ್ಳುವಿಕೆ ಎಂದು ಅವರು ತಿಳಿಸಿದರು. ಈಗಾಗಲೇ ಭಾರತೀಯ ಜ್ಞಾನ ಪರಂಪರೆಯ ವೈವಿಧ್ಯಮಯ ಅಂಶಗಳನ್ನು ಕಳೆದುಕೊಂಡಿದ್ದೇವೆ. ಇದೀಗ ಎಚ್ಚೆತ್ತುಕೊಳ್ಳುವ ಕಾಲ. ಮುಂಬರುವ ದಿನಗಳಲ್ಲಿ ನಮ್ಮ ಭಾರತೀಯ ಜ್ಞಾನದ ವಿಭಿನ್ನ ಅಂಶಗಳನ್ನು ಗೊತ್ತುಮಾಡಿಕೊಂಡು ಅವುಗಳ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವ ಉಳಿದ ದೇಶಗಳ ಹುನ್ನಾರಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ವಿಶೇಷ ನಿಗಾವಹಿಸಿ ಕಟ್ಟುನಿಟ್ಟಿನ ಹೆಜ್ಜೆಗಳನ್ನಿರಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಶೈಕ್ಷಣಿಕ ಕಲಿಕೆಯೊಂದಿಗೆ ಸಂಶೋಧನಾತ್ಮಕ ಹೆಜ್ಜೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಟ್ರೆಂಡ್‌ಗೆ ಅನುಗುಣವಾಗಿ ಎಸ್.ಡಿ.ಎಂ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ದೇಶದ ಶೈಕ್ಷಣಿಕ ವಲಯವು ಸಂಶೋಧನೆಯನ್ನು ಪ್ರಧಾನ ಆದ್ಯತೆಯ ಭಾಗವಾಗಿ ಪರಿಗಣಿಸುತ್ತಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಂಶೋಧನೆಯ ಬಹು ಆಯಾಮಗಳನ್ನು ಪರಿಚಯಿಸುವ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ ಎಂದರು. ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಅವರು ಸ್ವಾಗತಿಸಿದರು. ಡಾ. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಘಟಕದ ಸಂಘಟನಾ ಕಾರ್ಯದರ್ಶಿ ಡಾ. ನೆಫಿಸತ್ ವಂದಿಸಿದರು. ಉದ್ಘಾಟನಾ ಸಮಾರಂಭದ ‘ಪೇಟೆಂಟಿಂಗ್ ಟು ಪ್ರೊಟೆಕ್ಟ್ ದ ಇಂಟಲೆಕ್ಚುವಲ್ ಪ್ರಾಪರ್ಟಿ, ಐಪಿ ಮ್ಯಾನೇಜ್‌ಮೆಂಟ್ ಫಾರ್ ಸ್ಟಾರ್ಟ್ಅಪ್ಸ್’ ಕುರಿತು ಡಾ.ರಾಮಕೃಷ್ಣ ಬಿ ವಿಚಾರಗಳನ್ನು ಮಂಡಿಸಿದರು.

ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

Article Image

ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಮೂಡುದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ, ಮೂಡಬಿದಿರೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆಯ ಮೂಲಕ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ದಕ್ಷಿಣ ಕನ್ನಡದ ಜಿಲ್ಲೆಯ 8 ತಾಲೂಕುಗಳಲ್ಲಿ ಮೂಡುಬಿದಿರೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ‍್ಯನಿರ್ವಹಿಸುತ್ತಿದೆ. ಮೂಡುಬಿದಿರೆಯಲ್ಲಿ ಅಸೋಸಿಯೇಶನ್ ನಿರ್ಮಾಣವಾಗುವುದರ ಮೂಲಕ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ, ಹಿಂದಿನ ಕಾಲದಲ್ಲಿ ಹೆಚ್ಚಿನ ಖರ್ಚಿಲ್ಲದೆ ಆಡುತ್ತಿದ್ದ ಆಟ ಕಬಡ್ಡಿ. ಇದೊಂದು ಹಳ್ಳಿಯ ಕ್ರೀಡೆ. ಪ್ರೋಕಬ್ಬಡಿ ಬಂದ ನಂತರ ಇದರ ಖ್ಯಾತಿ ಹಾಗೂ ಆಟಗಾರರಿಗೆ ಮನ್ನಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಲಭಿಸುತ್ತಿದೆ. ಮೂಡುಬಿದಿರೆ ತಾಲೂಕಿನ ನೂತನ ಅಧ್ಯಕ್ಷರು, ಯುವಕರು ಹಾಗೂ ಹಿಡಿದ ಕೆಲಸವನ್ನು ಅಷ್ಟೇ ಆಸ್ಥೆಯಿಂದ ಮಾಡುವವರು. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಖ್ಯಾತಿಗೊಳ್ಳಲಿ ಎಂದು ಆಶಿಸಿದರು. ತಾಲೂಕು ಕಬಡ್ಡಿ ಅಸೋಸಿಯೇಶನ್ ಮಹಾಪೋಷಕರು ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ನಾನೊಬ್ಬ ಕ್ರೀಡಾಪಟುವಿನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ತನ್ನ ತಂದೆ 1926ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು. 1929ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿಯವರೊಂದಿಗೆ ಕ್ರಿಕೆಟ್ ಆಡಿದ್ದರು. ಆ ಹಿನ್ನಲೆಯಿಂದ ನಾನು ಕ್ರೀಡಾಸಚಿವನಾಗಿದ್ದ ಸಂದರ್ಭದಲ್ಲಿ ಕ್ರೀಡಾ ಕ್ಷೇತಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಹಕಾರಿಯಾಯಿತು. ನಾವೆಲ್ಲ ರಾಜಕೀಯವನ್ನು ಬದಿಗಿಟ್ಟು ಕ್ರೀಡಾಪಟುಗಳಿಗೆ ಬೆಂಬಲವನ್ನ ನೀಡುವ ಕೆಲಸ ಮಾಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯವನ್ನ ರೂಪಿಸಿಕೊಳ್ಳಬಹುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಮೂಡಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ನಿಯೋಜಿತ ಅಧ್ಯಕ್ಷ ವಿವೇಕ್ ಆಳ್ವ ಮಾತನಾಡಿ, ನಮ್ಮ ಸಂಸ್ಥೆ ಹಾಗೂ ಸಂಸ್ಥೆಯ ಅಧ್ಯಕ್ಷರು ಕ್ರೀಡೆಗೆ ನೀಡಿದ ಕೊಡುಗೆಯಿಂದ ನನಗೆ ಈ ಗೌರವ ಲಭಿಸಿದೆ. ವಿವಿಧ ಸಂಘ ಸಂಸ್ಥೆಗಳಿಂದ ಉನ್ನತ ಹುದ್ದೆಯ ಅವಕಾಶಗಳು ಬಂದಾಗ ಸದಾ ನಿರಾಕರಿಸುತ್ತಾ ಬಂದ ನಾನು, ಈ ಹುದ್ದೆಯನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದೇನೆ. ದಕ್ಷಿಣ ಕನ್ನಡದಲ್ಲಿ ಕಬಡ್ಡಿಗೆ ವಿಶೇಷ ಸ್ಥಾನವಿದೆ. ಈ ಕ್ರೀಡೆಯ ಮೂಲಕ ಯುವ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಕೆಲಸವನ್ನು ನಾವೆಲ್ಲ ಜೊತೆಯಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ಮೂಡುಬಿದಿರೆಯ 30 ಶಾಲೆಗಳ ವಿದ್ಯಾರ್ಥಿಗಳಿಗೆ ಕಬಡ್ಡಿ ಕ್ಷೇತ್ರಕ್ಕೆ ಬೇಕಾದ ಅಗತ್ಯ ತರಬೇತಿ ಹಾಗೂ ಸೌಲಭ್ಯವನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಶಾಸಕರಾದಿಯಾಗಿ ಎಲ್ಲಾ ಮಹಾಪೋಷಕರು ಸಹಕಾರವನ್ನು ನೀಡುವಂತೆ ಕೋರಿಕೊಂಡರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಮಾಹಾಪೋಷಕರುಗಳಾದ ಶ್ರೀಪತಿ ಭಟ್, ತಿಮ್ಮಯ ಶೆಟ್ಟಿ, ಸುನಿಲ್ ಆಳ್ವ, ನಾರಾಯಣ ಪಿಎಂ, ಪ್ರೇಮನಾಥ ಶೆಟ್ಟಿ, ಅಬುಲಾಲ್, ಸುಚರಿತ ಶೆಟ್ಟಿ, ಸುದರ್ಶನ್ ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಶಿಯೇಶನ್ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಮೂಡಬಿದಿರೆ ತಾಲೂಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಕಾರ್ಯಧ್ಯಕ್ಷ ಪ್ರಮೋದ್ ಸ್ವಾಗತಿಸಿ, ಕಾರ್ಯದರ್ಶಿ ಹಂಸವತಿ ಸಿಎಚ್ ವಂದಿಸಿ, ಸದಸ್ಯ ನವೀನ್ ಅಂಬೂರಿ ನಿರೂಪಿಸಿದರು.

ಆಳ್ವಾಸ್: ಮೂರು ದಿನಗಳ ಯೂತ್ ಯೋಗ ಫೆಸ್ಟ್

Article Image

ಆಳ್ವಾಸ್: ಮೂರು ದಿನಗಳ ಯೂತ್ ಯೋಗ ಫೆಸ್ಟ್

ಮಿಜಾರು: ಯೋಗದಲ್ಲಿ ಮುಖ್ಯವಾಗಿ ಎರಡು ಅಂಶಗಳು. ಒಂದು ತತ್ವಶಾಸ್ತ್ರ ಇನ್ನೊಂದು ಅಭ್ಯಾಸ. ಆದರೆ ಈ ಎರಡು ಅಂಶಗಳು ಒಟ್ಟಿಗೆ ಮೇಳೈಸಬೇಕಾದಾಗ, ಮೊದಲು ತತ್ತ್ವಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅಭ್ಯಾಸ ಮಾಡಲು ಮೊದಲು ಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು ಎಂದು ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಉಪಪ್ರಾಂಶುಪಾಲೆ ಹಾಗೂ ಡೀನ್ ಡಾ. ಸುಜಾತ ದಿನೇಶ್ ಹೇಳಿದರು. ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಪರಿಷತ್ತು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಇವುಗಳ ಜಂಟಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 16 ರಿಂದ 19ರವರೆಗೆ `ಯೂತ್ ಯೋಗ ಫೆಸ್ಟಿವಲ್' ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನ್ಯಾಚುರೋಪಥಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬರುವ ಅಡೆತಡೆಗಳನ್ನು ಯೋಗತತ್ವಶಾಸ್ತ್ರ ಸಿದ್ಧಾಂತಗಳ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು. ನಮ್ಮ ಭವಿಷ್ಯವನ್ನು ನಮ್ಮ ವರ್ತಮಾನ ನಿರ್ಧರಿಸುತ್ತದೆ. ಆದುದರಿಂದ ನಾವು ತಿನ್ನುವ ಆಹಾರ ಹಾಗೂ ನಿದ್ರೆ ನಮ್ಮ ಭವಿಷ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಯೋಗ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಳವಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕೇಂದ್ರೀಯ ಸಂಶೋಧನಾ ಮಂಡಳಿ ನಾಗಮಂಡಲ ಇಲ್ಲಿನ ಸಂಶೋಧನಾ ಅಧಿಕಾರಿ ಡಾ. ನಿತೀಶ್ ಎಂ ಕೆ, ಈ ವರ್ಷ ಭಾರತ ಆಯುಷ್ ಸಚಿವಾಲಯವು ಅಂತರರಾಷ್ಟ್ರೀಯ ಯೋಗ ದಿನದ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2014ರಲ್ಲಿ ಪ್ರಧಾನಿಯವರಿಂದ ಈ ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಾರಂಭಿಸಲಾಯಿತು. ಇಂದು ಯೋಗವು 190ಕ್ಕೂ ಹೆಚ್ಚಿನ ದೇಶಗಳಲ್ಲಿ ಜೀವನ ಪದ್ದತಿಯ ಭಾಗವಾಗಿ ಆಳವಡಿಸಿಕೊಳ್ಳಲಾಗಿದೆ ಮತ್ತು 144 ದೇಶಗಳು ಪ್ರಕೃತಿ ಚಿಕಿತ್ಸೆಯನ್ನು ಸ್ವೀಕರಿಸಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ 2022ರ ಯೋಗಸಮೀಕ್ಷೆಯ ಪ್ರಕಾರ ಯುಎಸ್‌ನಲ್ಲಿ 38.4 ಮಿಲಿಯನ್ ಜನರು ಯೋಗವನ್ನು ಅನುಸರಿಸುತ್ತಿದ್ದಾರೆ. ಸಾಮನ್ಯವಾಗಿ ಜನರು ಒತ್ತಡ ನಿವಾರಣೆ, ನಮ್ಯತೆ, ಮಾನಸಿಕ ಸ್ಪಷ್ಟತೆಗೆ ಯೋಗವನ್ನು ಅನುಸರಿಸುತ್ತಾರೆ. ಆದರೆ ಯೋಗದೊಂದಿಗೆ ನಾವು ತಿನ್ನುವ ಆಹಾರ ಕೂಡಾ ಪರಿಣಾಮ ಬೀರಬಲ್ಲದು. ಯೋಗವನ್ನು ಅನುಸರಿಸುವುದರ ಜೊತೆಯಲ್ಲಿ, ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಬೇಕು ಎಂದರು. ಕಾರ್ಯಕ್ರಮದ ಆರಂಭದಲ್ಲಿ ಪತಂಜಲಿ ಮಹರ್ಷಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮೂರು ದಿನಗಳ ಕಾಲ ನಡೆದ ಯೂತ್ ಯೋಗ ಫೆಸ್ಟಿವಲ್‌ನಲ್ಲಿ ಯೋಗ ಒಲಿಂಪಿಯಾಡ್, ಯೋಗ ಸ್ಕಿಟ್, ಯೋಗ ಡ್ಯಾನ್ಸ್ ಫ್ಯೂಷನ್, ಯೋಗ ಡಿಬೇಟ್, ಯೋಗ ರೀಲ್ಸ್, ಯೋಗ ಗಿಬ್ಲಿ, ಯೋಗ ಪೋಸ್ಟರ್ ಸ್ಪರ್ಧೆಗಳು ನಡೆಯಲಿವೆ. ಎಸ್‌ಡಿಎಮ್ ಕಾಲೇಜ್ ಉಜಿರೆ, ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಶಾರದಾ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಮುನಿಯಾಲ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಹಾಗೂ ಆಳ್ವಾಸ್ ಶಾಲೆ ಹಾಗೂ ಪದವಿ ಕಾಲೇಜುಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಹಾಗೂ ಉಪಪ್ರಾಂಶುಪಾಲೆ ಡಾ. ವಿದ್ಯಾರಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರೀನಾ ರೊಡ್ರಿಗಸ್ ನಿರೂಪಿಸಿದರು.

ಡರ್ಮಾ ಅಡ್ವಾನ್ಸ್ 2025ರ ಮೊದಲ ದಿನದ ಕಾರ್ಯಕ್ರಮ

Article Image

ಡರ್ಮಾ ಅಡ್ವಾನ್ಸ್ 2025ರ ಮೊದಲ ದಿನದ ಕಾರ್ಯಕ್ರಮ

ಸತ್ತೂರು, ಧಾರವಾಡ: ಡರ್ಮಾ ಅಡ್ವಾನ್ಸ್ 2025ರ ಮೊದಲ ದಿನದ ಕಾರ್ಯಕ್ರಮ ಜೂನ್ 14ರಂದು ಧಾರವಾಡದ ಎಸ್ಡಿಎಂ ಮೆಡಿಕಲ್ ಸೈನ್ಸಸ್ ಅಂಡ್ ಹಾಸ್ಪಿಟಲ್ (SDMCMSH) ನಲ್ಲಿ ಆರಂಭವಾಯಿತು. ಈ ಕಾರ್ಯಕ್ರಮವು ವಿಶೇಷವಾಗಿ ಸ್ನಾತಕೋತ್ತರ ಚರ್ಮರೋಗ ತರಬೇತಿಗೆ ಹೋಲಿಸಿದ ಶೈಕ್ಷಣಿಕ ಕೇಂದ್ರೀಕೃತತೆಗೆ ಸಾಕ್ಷಿಯಾದ ದಿನವಾಯಿತು. ದಿನವು ಕ್ಲಿನಿಕಲ್ ಜ್ಞಾನವನ್ನು ಗಟ್ಟಿಗೊಳಿಸುವುದರೊಂದಿಗೆ ಪರೀಕ್ಷಾ ಸಿದ್ಧತೆಯನ್ನು ಹೆಚ್ಚಿಸುವ ಗಂಭೀರವಾದ, ಪರೀಕ್ಷಾ ಆಧಾರಿತ ಅಧಿವೇಶನಗಳಿಂದ ಕೂಡಿತ್ತು. ಕರ್ನಾಟಕದ ಎಲ್ಲೆಡೆ ಹಾಗೂ ಇತರ ರಾಜ್ಯಗಳಿಂದ ಬಂದ ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ರತಿನಿಧಿಗಳು ಮತ್ತು ಬೋಧಕವರ್ಗದವರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಅಧಿವೇಶನಗಳು ಪರಸ್ಪರ ಸಂವಾದಾತ್ಮಕವಾಗಿದ್ದು, ಪ್ರಕರಣಾಧಾರಿತವಾಗಿದ್ದವು ಮತ್ತು ಇತ್ತೀಚಿನ ಪರೀಕ್ಷಾ ಮಾದರಿಗಳಿಗೆ ತಕ್ಕಂತೆ ರೂಪುಗೊಂಡಿದ್ದವು. ಇದರಿಂದಾಗಿ ಭಾಗವಹಿಸಿದವರಿಗೆ ಸಮೃದ್ಧವಾದ ಹಾಗೂ ಪ್ರಾಯೋಗಿಕ ಅಧ್ಯಯನ ಅನುಭವವನ್ನು ಒದಗಿಸಿತು. ಈ ಕಾರ್ಯಕ್ರಮವನ್ನು ಈ ಕೆಳಗಿನ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು: ಡಾ. ನಿರಂಜನ್ ಕುಮಾರ್, ಉಪಕುಲಪತಿ, ಎಸ್ಡಿಎಂ ವಿಶ್ವವಿದ್ಯಾಲಯ; ಡಾ. ಚಿದೇಂದ್ರ ಶೆಟ್ಟರ್, ರಿಜಿಸ್ಟ್ರಾರ್, ಎಸ್ಡಿಎಂ ವಿಶ್ವವಿದ್ಯಾಲಯ; ಡಾ. ವಿಜಯ ಕುಲಕರ್ಣಿ, ಪ್ರಾಚಾರ್ಯರು, SDMCMSH; ಡಾ. ನವೀನ್ ಕೆ. ಎನ್., ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಚರ್ಮರೋಗ ವಿಭಾಗ, SDMCMSH; ಡಾ. ಮಂಜುನಾಥ ಹುಲಿಮಣಿ, ಅಧ್ಯಕ್ಷರು, IADVL ಕರ್ನಾಟಕ; ಡಾ. ಮಹೇಶ್ ಕುಮಾರ್, ಗೌರವ ಕಾರ್ಯದರ್ಶಿ, IADVL ಕರ್ನಾಟಕ; ಡಾ. ಎಸ್. ಬಿ. ಅಥಣಿಕರ್, ಆಯೋಜನಾ ಸಹ-ಅಧ್ಯಕ್ಷರು; ಡಾ. ಶ್ವೇತಾ ಆರ್. ಪ್ರಭು, ಆಯೋಜನಾ ಕಾರ್ಯದರ್ಶಿ ಮತ್ತು ಇತರ ಗಣ್ಯರುಯವರ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಗೌರವ ಹಾಗೂ ಮಹತ್ವವನ್ನು ನೀಡಿತು. ಅತ್ಯುತ್ತಮ ಭಾಗವಹಿಸುವಿಕೆ, ಶೈಕ್ಷಣಿಕ ಕಟ್ಟುನಿಟ್ಟು ಮತ್ತು ಗುರಿಯುತ ವಿಷಯ ವಸ್ತುಗಳೊಂದಿಗೆ, ಮೊದಲ ದಿನವೇ ಈ ಸಮಾವೇಶದ ಮುಂದಿನ ದಿನಗಳಿಗೊಂದು ಶಕ್ತಿಯುತ ಹಾಗೂ ಪ್ರೇರಣಾದಾಯಕ ಶೈಲಿಯನ್ನು ಸ್ಥಾಪಿಸಿತು.

ಎಕ್ಸಲೆಂಟ್ ಮೂಡುಬಿದಿರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

Article Image

ಎಕ್ಸಲೆಂಟ್ ಮೂಡುಬಿದಿರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ಮೂಡುಬಿದಿರೆ: ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2025 ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ನೂತನ್ ಕೃಷ್ಣ 599 (99.9328752), ಖುಷಿ ವಿನಯ್ ರಾಚೋಟಿ 588 (99.8864355), ರೋಹಿತ್ ಕಾಮತ್ 582 (99.8504968), ಸೋಹನ್ ಯಡಾಲ್ 572 (99.7700194), ಲಿಖಿತ್ ಸಿ ಪಿ 570 , ಶ್ರೇಯಸ್ ಹೆಚ್ ಎಸ್ 547, ಧ್ರುವ ಎಸ್ ಪಿ 536 , ಹೆಚ್ ಎ0 ದೇವಸೇನ್ 533, ಚಿನ್ಮಯಿ ಕೆ ಎಲ್ 529, ಚೇತನ್ ಕೆ ಎಸ್ 523, ನಮೃತಾ ಕೆ 518, ಪ್ರೀತಮ್ ಗೌಡ 516, ಮನೋಜ್ ಕೆ 514, ಪವನ್ ಗೌಡ 512, ಪ್ರತ್ಯೂಶ್ ಬಿ ಪಿ 508, ಸಮೃದ್ಧಿ ಎ ಎ0 507, ಲೇಖನ್ ಕುಮಾರ್ ಎ0 ಎಸ್ 506 ಯಶಸ್ ನಾಯ್ದು 502 , ಸ0ಪ್ರೀತ್ ಸಿ 500 ಅಂಕಗಳನ್ನು ಗಳಿಸಿರುತ್ತಾರೆ ಸಾಧಕ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ಎಕ್ಸಾಮ್ ಡೈರೆಕ್ಟರ್ ಡಾ.ಪ್ರಶಾ0ತ್ ಹೆಗಡೆ, ನೀಟ್ ಸಂಯೋಜಕ ರಾಮಮೂರ್ತಿ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಎಸ್.ಡಿ.ಎಂ. ಆರೋಗ್ಯ ಸಂವಾದಕ್ಕೆ ಸಾವಿರ ಸಂಚಿಕೆಯ ಸಂಭ್ರಮ

Article Image

ಎಸ್.ಡಿ.ಎಂ. ಆರೋಗ್ಯ ಸಂವಾದಕ್ಕೆ ಸಾವಿರ ಸಂಚಿಕೆಯ ಸಂಭ್ರಮ

ಪ್ರತೀ ಮಂಗಳವಾರ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಸಂಜೆ 7.00ರಿಂದ 7.30ರ ಕೃಷಿರಂಗ ಕಾರ್ಯಕ್ರಮದಲ್ಲಿ ಮೂಡಿ ಬರುವ ಎಸ್.ಡಿ.ಎಂ. ಆಸ್ಪತ್ರೆ ಪ್ರಾಯೋಜಿತ ಕಾರ್ಯಕ್ರಮವೇ ಎಸ್.ಡಿ.ಎಂ. ಆರೋಗ್ಯ ಸಂವಾದ. 2006 ಎಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಆರೋಗ್ಯ ಸಂವಾದ ಕಾರ್ಯಕ್ರಮವು ಕಳೆದ 20 ವರ್ಷಗಳಲ್ಲಿ ಒಂದೂ ಮಂಗಳವಾರ ತಪ್ಪದೆ ಜನರಿಗೆ ಆರೋಗ್ಯ ಸೇವಾ ಸಲಹೆಯನ್ನು ನೀಡುತ್ತಾ ಬಂದಿದೆ. 2003-04ರಲ್ಲಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಗೊಂಡಾಗ ಆಕಾಶವಾಣಿ ಧಾರವಾಡ ಕೇಂದ್ರದವರ ಕೋರಿಕೆಯ ಮೇರೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಆರೋಗ್ಯ ಸಂವಾದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇಲ್ಲಿಯವರೆಗೆ ನಿರಂತರವಾಗಿ ನಡೆದು ಬಂದ ಈ ಆರೋಗ್ಯ ಸಂವಾದ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಆಸ್ಪತ್ರೆಯ ನೂರಾರು ವೈದ್ಯರುಗಳಿಂದ ಉತ್ತರ ಕರ್ನಾಟಕದ ಸಾವಿರಾರು ಮಂದಿ ತಮ್ಮ ಆರೋಗ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದೀಗ ನಿರಂತರ ವಿಂಶತಿ (20ನೇ) ವರ್ಷಕ್ಕೆ ಪಾದಾರ್ಪಣೆ ಮಾಡಿ, ಇದೇ ಜೂನ್ 17, 2025ಕ್ಕೆ 1000ನೇ ಸಂಚಿಕೆಯಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮ ದೇಶದ ಆಕಾಶವಾಣಿ ಕೇಂದ್ರಗಳಲ್ಲೇ ಇನ್ನೊಂದಿಲ್ಲ ಎಂದರೆ ತಪ್ಪಾಗಲಾರದು. ಇದರ ಪ್ರಯುಕ್ತ ದಿನಾಂಕ 17 ಜೂನ್, 2025ರಂದು ಮದ್ಯಾಹ್ನ 12.00ರಿಂದ 1.00ಗಂಟೆಯವರೆ ವಿಶೇಷ ನೇರ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್ ಯೋಗಪಟುಗಳಿಗೆ 8 ಚಿನ್ನ

Article Image

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್ ಯೋಗಪಟುಗಳಿಗೆ 8 ಚಿನ್ನ

ಮೂಡುಬಿದಿರೆ: ಇತ್ತೀಚೆಗೆ ವಿಯೆಟ್ನಾಂನಲ್ಲಿ ಜರುಗಿದ ಎರಡನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ 8 ಯೋಗಪಟುಗಳು ಭಾರತ ದೇಶವನ್ನು ಪ್ರತಿನಿಧಿಸಿ 8 ಚಿನ್ನದ ಪದಕವನ್ನು ಜಯಿಸುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲಿ 8 ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿಯನ್ನು ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು. ಸಬ್‌ಜ್ಯೂನಿಯರ್ ವಿಭಾಗದಲ್ಲಿ ಯಶಿಕ ಹಾಗೂ ಚಂದನ - ತಾಳಬದ್ದ ಯೋಗಾಸನದಲ್ಲಿ ಚಿನ್ನ, ಕೋಮಲ - ಕಲಾತ್ಮಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆದರು. ಜ್ಯೂನಿಯರ್ ಹುಡುಗರ ವಿಭಾಗದಲ್ಲಿ ಪ್ರಜ್ವಲ್ - ಕಲಾತ್ಮಕ ಯೋಗಾಸನ ಹಾಗೂ ಪೃಥ್ವಿಚಾರ್ - ಸಂಪ್ರದಾಯಿಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆದರು. ಜ್ಯೂನಿಯರ್ ಹುಡುಗಿಯರ ವಿಭಾಗದಲ್ಲಿ ಹಿಮಜ - ಸಂಪ್ರದಾಯಿಕ ಯೋಗಾಸನ ಹಾಗೂ ಅನನ್ಯ ಗುರವ್ - ಕಲಾತ್ಮಕ ಯೋಗಾಸನದಲ್ಲಿ ಚಿನ್ನ, ಸೀನಿಯರ್ ಹುಡುಗಿಯರ ವಿಭಾಗದಲ್ಲಿ ನಿರ್ಮಲ ಸುಭಾಷ್ ಕೊಡ್ಲಿಕರ್ - ಸಂಪ್ರದಾಯಿಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದರು. ಪದಕ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಎಸ್.ಡಿ.ಎಂ ವೃತ್ತಿಪರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

Article Image

ಎಸ್.ಡಿ.ಎಂ ವೃತ್ತಿಪರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ಉಜಿರೆ: ಯುವಕರ ಆಸಕ್ತಿಗೆ ಅನುಗುಣವಾದ ಉದ್ಯೋಗಾವಕಾಶಗಳ ಲಭ್ಯತೆ ಮತ್ತು ಸದ್ಭಳಕೆಯಿಂದ ಭಾರತವು ವಿವಿಧ ರಂಗಗಳಲ್ಲಿ ವಿಶ್ವಮಟ್ಟದ ಸ್ಪರ್ಧೆಯನ್ನೊಡ್ಡಿ ಮುಂಚೂಣಿ ಸ್ಥಾನ ಗಳಿಸಬಹುದು ಎಂದು ಧರ್ಮಸ್ಥಳದ ಎಸ್‌ಕೆಡಿಆರ್‌ಡಿಪಿ ಬಿ.ಸಿ ಟ್ರಸ್ಟ್ ಸಿ.ಇ.ಒ ಅನಿಲ್ ಕುಮಾರ್ ಎಸ್.ಎಸ್‌. ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ರಿಲಯನ್ಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿತ ಮೂರು ದಿನಗಳ ವೃತ್ತಿಪರತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ಪೂರಕ ಕೌಶಲ್ಯವಿಲ್ಲದೆ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟರೆ ವೃತ್ತಿಪರತೃಪ್ತಿ ಸಾಧ್ಯವಾಗುವುದಿಲ್ಲ. ಕೌಶಲ್ಯದ ಅಭಾವವು ವ್ಯಕ್ತಿಯ ವಿಕಾಸವನ್ನುತಡೆಯುವುದಷ್ಟೇ ಅಲ್ಲ, ದೇಶದ ಉತ್ಪಾದಕತೆ ಮತ್ತು ನಾವೀನ್ಯತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಪೊರೇಟ್ ಸಂಸ್ಥೆಗಳು ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿವೆ. ಕಡಿಮೆ ವೇತನ, ಉಚಿತ ಇಂಟರ್ನ್ಷಿಪ್ ಹೆಸರಲ್ಲಿ ಮೂಲಭೂತ ಅಗತ್ಯಗಳನ್ನು ಪೂರೈಸದೇ ಅಗತ್ಯ ಅವಧಿಗಿಂತ ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿದೆ. ಸ್ಪಷ್ಟ ವೃತ್ತಿಪರ ಮಾರ್ಗದರ್ಶನವಿಲ್ಲದ್ದರಿಂದ ಈ ರೀತಿಯ ಶೋಷಣೆಗಳಾಗುತ್ತವೆ. ಈ ಬಗೆಯ ಶೋಷಣೆಯು ಭವಿಷ್ಯದಲ್ಲಿ ಸಮರ್ಥ ಯುವಕರ ಹಿನ್ನಡೆಗೆ ಕಾರಣವಾಗುತ್ತದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಮ್ಯಾಜಿಕ್ ಬಸ್ ಫೌಂಡೇಶನ್ ಎಂಸಿಎಸ್‌ಆರ್ ಪ್ರಾಜೆಕ್ಟ್ ಮ್ಯಾನೇಜರ್ ಧವನ್‌ಗೌಡ ಮಾತನಾಡಿದರು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರಲ್ಲಿನ ವ್ಯಾವಹಾರಿಕ ಕೌಶಲ್ಯ ಹಾಗೂ ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿಗೆ ಒತ್ತು ನೀಡುವುದು ಬಹಳ ಅಗತ್ಯವಾಗಿದೆ. ಸಮಾಜಕಾರ್ಯ ವೃತ್ತಿಯು ನೇರವಾಗಿ ಜನರಜೊತೆ ಸಂಪರ್ಕ ಹೊಂದಿರುವ ಕ್ಷೇತ್ರ. ವಿದ್ಯಾರ್ಥಿಗಳು ಉತ್ತಮಗ್ರಹಿಸುವಿಕೆ, ಸಂವೇದನೆ, ಸ್ಪಷ್ಟ ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ ಗುಣ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವುದು ಬಹುಅಗತ್ಯವಾಗಿದೆ ಎಂದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕ ಜ್ಞಾನವಷ್ಟೇ ಮುಖ್ಯವಲ್ಲ. ಆತ್ಮವಿಶ್ವಾಸ ಹಾಗೂ ನಿರ್ಧಾರ ತೆಗೆದುಕೊಳ್ಳುವ ಧೈರ್ಯವು ವ್ಯಕ್ತಿತ್ವದ ಅವಿಭಾಜ್ಯ ಅಂಶಗಳು. ವೃತ್ತಿಪರ ಕೌಶಲ್ಯತರಬೇತಿ ಕಾರ್ಯಾಗಾರಗಳಿಂದ ಈ ಆತ್ಮವಿಶ್ವಾಸ, ಧೈರ್ಯ ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಲು ತರಬೇತಿ ಕಾರ್ಯಾಗಾರಗಳು, ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಕ್ಷೇತ್ರಕಾರ್ಯದ ಅನುಭವಗಳು ಸಹಾಯಕವಾಗುತ್ತವೆ. ವೃತ್ತಿಜೀವನದ ಸಾಮರ್ಥ್ಯವನ್ನು ರೂಢಿಸುತ್ತವೆ. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್‌ ಕೆ.ಆರ್. ಉಪಸ್ಥಿತರಿದ್ದರು. ಡಾ. ಅತುಲ್ ಎಸ್. ಸೆಮಿತ್ ಸ್ವಾಗತಿಸಿದರು. ಸ್ವಾತಿ ಬಿ. ಸ್ವಾಗತಿಸಿದರು, ಡಾ. ದಾನೇಶ್ವರಿ ವಂದಿಸಿದರು.

ಆಳ್ವಾಸ್: ವರ್ಷದ 3ನೇ ಉಚಿತ ನೇತ್ರ ತಪಾಸಣೆ

Article Image

ಆಳ್ವಾಸ್: ವರ್ಷದ 3ನೇ ಉಚಿತ ನೇತ್ರ ತಪಾಸಣೆ

ವಿದ್ಯಾಗಿರಿ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವರ್ಷದ ಮೂರನೇ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನಾ ಕ್ರಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಕಳೆದ ಬಾರಿ ವಿವಿಧ ಸಮುದಾಯಗಳ ಸಹಯೋಗದಲ್ಲಿ 9 ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲಾಗಿತ್ತು. ಇದರಲ್ಲಿ 1478 ಜನರು ಪಾಲ್ಗೊಂಡು, 784 ಜನರಿಗೆ ಉಚಿತ ಕನ್ನಡಕ ಹಾಗೂ 109 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ ಎಂದರು. ಜೂನ್ 16ಕ್ಕೆ ಮುಂದಿನ ಹಂತದ ಉಚಿತ ನೇತ್ರ ತಪಾಸಣಾ ಶಿಬಿರವು ನಡೆಯಲಿದೆ ಎಂದು ತಿಳಿಸಿದರು. ಈ ಬಾರಿಯ ಒಟ್ಟು ಮೂರು ಹಂತದ ಶಿಬಿರಗಳಲ್ಲಿ 348 ಮಂದಿ ಭಾಗಿಯಾಗಿ 178 ಜನರು ಉಚಿತ ಕನ್ನಡಕ ಪಡೆಯಲು ಹಾಗೂ 39 ಜನರು ಶಸ್ತ್ರ ಚಿಕಿತ್ಸೆಯನ್ನು ಪಡೆಯಲು ಹೆಸರು ನೋಂದಾಯಿಸಿಕೊಂಡರು. ಕಾರ್ಯಕ್ರಮದಲ್ಲಿ ಮಂಗಳೂರಿನ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ. ಆಕಾಂಕ್ಷ ಶೆಟ್ಟಿ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ, ಮೂಡುಬಿದಿರೆಯ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಮೂಡುಬಿದಿರೆಯ ಭಾರತೀಯ ಜೈನ ಮಿಲನ್ ಕೋಶಾಧಿಕಾರಿ ಪುಷ್ಪರಾಜ್ ಜೈನ್, ಜಂಟಿ ಕಾರ್ಯದರ್ಶಿ ಅನಂತವೀರ್ ಜೈನ್, ಅಶ್ವಥ್ಥಪುರದ ಶ್ರೀಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ, ಮರಾಠಿ ಸಮಾಜ ಸೇವಾ ಸಂಘದ ಮೂಡುಬಿದಿರೆಯ ಅಧ್ಯಕ್ಷ ರಾಮಚಂದ್ರ ಕೆಂಬಾರೆ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀನ ಎಂ, ಮಿಜಾರು-ಎಡಪದವು ಗಾಣಿಗ ಯಾನೆ ಸಫಲಿಗ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಸಫಲಿಗ, ಯುವವಾಹಿನಿ ಮೂಡುಬಿದಿರೆ ಘಟಕದ ಉಪಾಧ್ಯಕ್ಷ ವಿದೇಶ ಎಂ ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಕಿರಿಯ ವೈದ್ಯ ಡಾ ಸುಮಂತ್ ನಿರ್ವಹಿಸಿದರು.

ಧಾರವಾಡ: ವಿಶ್ವ ಪರಿಸರ ದಿನಾಚರಣೆ

Article Image

ಧಾರವಾಡ: ವಿಶ್ವ ಪರಿಸರ ದಿನಾಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ಫಿಸಿಯೋಥೆರಪಿ ಮತ್ತು ನರ್ಸಿಂಗ್ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಎಸ್.ಡಿ.ಎಂ. ಫಿಸಿಯೋಥೆರಪಿ - ನರ್ಸಿಂಗ್ ಕಾಲೇಜಿನಲ್ಲಿ "ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದು” ಎಂಬ ಧ್ಯೆಯೆಯೊಂದಿಗೆ “ವಿಶ್ವ ಪರಿಸರ ದಿನ”ವನ್ನು ಆಚರಿಸಲಾಯಿತು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ವೈದ್ಯಕೀಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಮತ್ತು ಪರಿಸರ ತಜ್ಞರಾದ ಡಾ. ಮೂಕ್ಕಯ್ಯಸ್ವಾಮಿ ವಿ. ಕಳಸೂರಮಠ ಅವರು ಮುಖ್ಯ ಅತಿಥಿಯಾಗಿದ್ದರು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳು ಸಸಿಗಳನ್ನು ನೆಟ್ಟು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಸ್ವಂತ ಪ್ರಯೋಜನಕ್ಕಾಗಿ ಪರಿಸರವನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಪ್ರಕೃತಿ ದೇವರ ಕೊಡುಗೆ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ಲಾಸ್ಟಿಕ್ ಬಳಕೆಯನ್ನು ಕ್ರಮೇಣ ಕಡಿಮೆ ಮಾಡಿ ಮತ್ತು ಬಟ್ಟೆ, ಕಾಗದದ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು. ನಾವು ಮೊದಲು ನಮ್ಮ ಮನೆಯ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿಡಬೇಕು ಪ್ರಕೃತಿ ನಮ್ಮ ಜೀವನದ ಅಂತರ್ಗತ ಭಾಗವಾಗಿದೆ ಮತ್ತು ಪ್ರಕೃತಿಯು ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿದರು. ಡಾ. ನಿರಂಜನ್ ಕುಮಾರ್ ಅವರು ಡಾ. ಕಳಸೂರಮಠ ಅವರನ್ನು ಸನ್ಮಾನಿಸಿದರು. ಡಾ. ಬಲರಾಮ್ ನಾಯಕ್, ಡಾ. (ಕರ್ನಲ್) ಯು.ಎಸ್. ದಿನೇಶ್, ಡಾ. ಸಂಜಯ್ ಪರ್ಮಾರ್, ಡಾ. ಪ್ರಸನ್ನ ದೇಶಪಾಂಡೆ, ಡಾ. ಕೆ. ಸತ್ಯಮೂರ್ತಿ, ಭೌತಚಿಕಿತ್ಸೆಯ ಮತ್ತು ನರ್ಸಿಂಗ್ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕರಾದ ಮಲ್ಲಿಕಾರ್ಜುನ್ ಪಿ. ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಫಿಸಿಯೋಥೆರಪಿ ಕಾಲೇಜಿನ ಸಂಯೋಜರಾದ ಡಾ. ಸಂಗೀತಾ ಅಪ್ಪಣ್ಣವರ್ ವಂದನಾರ್ಪಣೆ ಸಲ್ಲಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸತ್ತೂರಿನ ಆಶ್ರಯ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ, ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಸ್ವಚ್ಛತೆಯ ಬಗ್ಗೆ ಜಾಗೃತಿ ನೀಡಿದರು. ಡಾ. ಅಜಯ ಕುಮಾರ್ ಓಲಿ, ಪ್ರೋ. ಕ್ಲೇಮೆಂಟ್ ಚೆಲ್ಲಿ, ಪ್ರದೀಪ ಶೆಟ್ಟಿ, ಗುರುಪ್ರಸಾದ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕರಾದ ಡಾ. ರೇಣುಕಾರಾಧ್ಯ ಮಠ ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ಫಿಸಿಯೋಥೆರಪಿ - ನರ್ಸಿಂಗ್ ವಿದ್ಯಾರ್ಥಿಗಳಿಂದ ಪರಿಸರ ರಕ್ಷಣೆಯ ಕುರಿತು ಕಿರು ನಾಟಕ ಪ್ರದರ್ಶಿಸಲಾಯಿತು.

ಕಾಮೆಡ್‌ಕೆ: ಎಕ್ಸಲೆಂಟ್ ಮೂಡುಬಿದಿರೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ರ‍್ಯಾಂಕ್

Article Image

ಕಾಮೆಡ್‌ಕೆ: ಎಕ್ಸಲೆಂಟ್ ಮೂಡುಬಿದಿರೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ರ‍್ಯಾಂಕ್

ಖಾಸಗಿ ಎಂಜಿನಿಯರಿಂಗ್ ಪದವಿ ಕಾಲೇಜುಗಳಲ್ಲಿ ಸೀಟ್ ಪಡೆಯಲು ಕಾಮೆಡ್-ಕೆ ನಡೆಸಿದ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಶಿಶಿರ್ ಹೆಚ್ ಶೆಟ್ಟಿ ಮೊದಲ (1 st Rank) ರ‍್ಯಾಂಕ್ ಗಳಿಸಿದ್ದಾರೆ. ರಾಷ್ಟ್ರದಾದ್ಯಂತ 1,13,111 ವಿದ್ಯಾರ್ಥಿಗಳು ಬರೆದ ಈ ಪರೀಕ್ಷೆಯನ್ನು ಬರೆದಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜ್ ಗಮನಾರ್ಹ ಸಾಧನೆ ಮಾಡಿದೆ. ಮೂಡುಬಿದಿರೆ ಹರೀಶ ಶೆಟ್ಟಿ ಮತ್ತು ಸುಮಿತಾ ಶೆಟ್ಟಿ ಮಗನಾದ ಶಿಶಿರ್ ಹೆಚ್ ಶೆಟ್ಟಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 664 ನೇ ಸ್ಥಾನ. ಜೆ.ಇ.ಇ ಮೈನ್ಸ್ ನಲ್ಲಿ 99.971 ಪರ್ಸಂಟೈಲ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 4ನೇರ‍್ಯಾಂಕ್, ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ದ್ವಿತೀಯ ಪಿಯುಸಿಯಲ್ಲಿ ರಾಜ್ಯ ಮಟ್ಟದಲ್ಲಿ 7ನೇ ರ‍್ಯಾಂಕ್ (593 ಅಂಕಗಳು) ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳು, ಉತ್ಕ್ರಷ್ಠ ಸಾಧನೆ ತೋರಿಸಿದ್ದು ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 15 ರ‍್ಯಾಂಕ್‌ಗಳು, ಜೆಇಇ ಅಡ್ವಾನ್ಸ್ ನಲ್ಲಿ ರಾಷ್ಟ್ರಮಟ್ಟದಲ್ಲಿ 5000 ರ‍್ಯಾಂಕ್‌ನ ಒಳಗೆ 6 ವಿದ್ಯಾರ್ಥಿಗಳು, ಸಿಇಟಿಯಲ್ಲಿ ನಾನಾ ವಿಭಾಗಗಳಲ್ಲಿ 100 ರೊಳಗೆ 13 ರ‍್ಯಾಂಕ್, 500 ರೊಳಗೆ 38 ರ‍್ಯಾಂಕ್, 1000 ರೊಳಗೆ 64 ರ‍್ಯಾಂಕ್ ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ. ಎನ್‌ಡಿಎ, ನಾಟ ಲಿಖಿತ ಪರೀಕ್ಷೆಗಳಲ್ಲಿ ಸಂಸ್ಥೆಯ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಷ್ಟ್ರೀಯ ಮೆರಿಟೈಮ್ ಯೂನಿವರ್ಸಿಟಿ ಮುಕ್ತ ಸ್ಪರ್ಧೆಯಲ್ಲಿ 124ನೇ ಸ್ಥಾನ ಪಡೆಯುದರೊಂದಿಗೆ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆ ಗುಣಮಟ್ಟದ ಶಿಕ್ಷಣದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ದಾಖಲೆ ಫಲಿತಾಂಶವನ್ನು ಸಾಧಿಸಿದೆ. ಅತ್ಯುತ್ತಮ ದಾಖಲೆಗಳೊಂದಿಗೆರಾಷ್ಟ್ರಮಟ್ಟದಲ್ಲಿ 1ನೇ ರ‍್ಯಾಂಕ್ ಪಡೆದಿರುವ ಶಿಶಿರ್ ಹೆಚ್ ಶೆಟ್ಟಿ ಇವರನ್ನು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಹರ್ಷವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಮನೋಜ್ ಕುಮಾರ್, ಸ್ಪರ್ಧಾತ್ಮಕ ಪರೀಕ್ಷೆಗಳ ವಿಭಾಗದ ಮುಖ್ಯಸ್ಥರಾದ ರಾಮಮೂರ್ತಿ, ಡಾ, ದಯಾನಂದ, ವಿದ್ಯಾರ್ಥಿಯ ತಂದೆ ಹರೀಶ್ ಶೆಟ್ಟಿ ಇವರು ಉಪಸ್ಥಿತರಿದ್ದರು. ಉಪನ್ಯಾಸ ವಿಕ್ರಮ ನಾಯಕ್ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

First Previous

Showing 4 of 15 pages

Next Last