ಆಳ್ವಾಸ್: ವರ್ಷದ 3ನೇ ಉಚಿತ ನೇತ್ರ ತಪಾಸಣೆ
Published Date: 09-Jun-2025 Link-Copied
ವಿದ್ಯಾಗಿರಿ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವರ್ಷದ ಮೂರನೇ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನಾ ಕ್ರಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಕಳೆದ ಬಾರಿ ವಿವಿಧ ಸಮುದಾಯಗಳ ಸಹಯೋಗದಲ್ಲಿ 9 ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲಾಗಿತ್ತು. ಇದರಲ್ಲಿ 1478 ಜನರು ಪಾಲ್ಗೊಂಡು, 784 ಜನರಿಗೆ ಉಚಿತ ಕನ್ನಡಕ ಹಾಗೂ 109 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ ಎಂದರು. ಜೂನ್ 16ಕ್ಕೆ ಮುಂದಿನ ಹಂತದ ಉಚಿತ ನೇತ್ರ ತಪಾಸಣಾ ಶಿಬಿರವು ನಡೆಯಲಿದೆ ಎಂದು ತಿಳಿಸಿದರು. ಈ ಬಾರಿಯ ಒಟ್ಟು ಮೂರು ಹಂತದ ಶಿಬಿರಗಳಲ್ಲಿ 348 ಮಂದಿ ಭಾಗಿಯಾಗಿ 178 ಜನರು ಉಚಿತ ಕನ್ನಡಕ ಪಡೆಯಲು ಹಾಗೂ 39 ಜನರು ಶಸ್ತ್ರ ಚಿಕಿತ್ಸೆಯನ್ನು ಪಡೆಯಲು ಹೆಸರು ನೋಂದಾಯಿಸಿಕೊಂಡರು. ಕಾರ್ಯಕ್ರಮದಲ್ಲಿ ಮಂಗಳೂರಿನ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ. ಆಕಾಂಕ್ಷ ಶೆಟ್ಟಿ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ, ಮೂಡುಬಿದಿರೆಯ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಮೂಡುಬಿದಿರೆಯ ಭಾರತೀಯ ಜೈನ ಮಿಲನ್ ಕೋಶಾಧಿಕಾರಿ ಪುಷ್ಪರಾಜ್ ಜೈನ್, ಜಂಟಿ ಕಾರ್ಯದರ್ಶಿ ಅನಂತವೀರ್ ಜೈನ್, ಅಶ್ವಥ್ಥಪುರದ ಶ್ರೀಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ, ಮರಾಠಿ ಸಮಾಜ ಸೇವಾ ಸಂಘದ ಮೂಡುಬಿದಿರೆಯ ಅಧ್ಯಕ್ಷ ರಾಮಚಂದ್ರ ಕೆಂಬಾರೆ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀನ ಎಂ, ಮಿಜಾರು-ಎಡಪದವು ಗಾಣಿಗ ಯಾನೆ ಸಫಲಿಗ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಸಫಲಿಗ, ಯುವವಾಹಿನಿ ಮೂಡುಬಿದಿರೆ ಘಟಕದ ಉಪಾಧ್ಯಕ್ಷ ವಿದೇಶ ಎಂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಿರಿಯ ವೈದ್ಯ ಡಾ ಸುಮಂತ್ ನಿರ್ವಹಿಸಿದರು.