Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಎರಡು ದಿನಗಳ ವಾಕ್ ಮತ್ತು ಶ್ರವಣ ಚಿಕಿತ್ಸೆಯ ಕಾರ್ಯಾಗಾರ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಎರಡು ದಿನಗಳ ವಾಕ್ ಮತ್ತು ಶ್ರವಣ ಚಿಕಿತ್ಸೆಯ ಕಾರ್ಯಾಗಾರ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ವಾಕ್ ಮತ್ತು ಶ್ರವಣ ವಿಭಾಗವು ನವೆಂಬರ್ 21 ಮತ್ತು 22, 2025 ರಂದು “ಶ್ರವಣೇಂದ್ರಿಯದಿಂದ ಪ್ರಚೋದಿಸಲ್ಪಟ್ಟ ಸಾಮರ್ಥ್ಯಗಳಲ್ಲಿನ ಪ್ರವೃತ್ತಿಗಳು: ಸಂಶೋಧನೆ ಮತ್ತು ಚಿಕಿತ್ಸೆಗಳ ದೃಷ್ಟಿಕೋನಗಳ ಸೇತುವೆ” ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಮೈಸೂರಿನ ಅಖಿಲ್ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಎಂ. ಜಯರಾಮ್ ಅವರು ಮುಖ್ಯ ಅತಿಥಿಯಾಗಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವಾನ್ವಿತ ಅತಿಥಿಯಾಗಿದ್ದರು ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಣಕಾಸು ಅಧಿಕಾರಿಯಾದ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್., ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಗೌರವಿಸಿ ಮುಖ್ಯ ಅತಿಥಿಗಳಾದ ಡಾ. ಎಂ. ಜಯರಾಮ್ ಅವರನ್ನು ಗಣ್ಯರು ಸನ್ಮಾನಿಸಿದರು. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಸಂಯೋಜಕಿ ಮತ್ತು ಉಪ ಪ್ರಾಂಶುಪಾಲರಾದ ಡಾ. ವಿದ್ಯಾ ಪಾಟೀಲ್ ಅವರು ವಾಕ್ ಮತ್ತು ಶ್ರವಣ ವಿಭಾಗದ ಅಭಿವೃದ್ಧಿಯ ಕುರಿತು ವಿವರಿಸಿದರು. ಕರ್ನಾಟಕದಾದ್ಯಂತ ಸುಮಾರು 100ಕ್ಕೂ ಅಧಿಕ ವಾಕ್ ಮತ್ತು ಶ್ರವಣ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥರು ಹಾಗೂ ಸಂಘಟನಾ ಅಧ್ಯಕ್ಷರಾದ ಡಾ. ವಸೀಮ್ ಅಹ್ಮದ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಅರುಣಾ ಪ್ರಭು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿಯಾದ ಬೃಂದಾ ಎಲ್. ರಾಜ್ ವಂದನಾರ್ಪಣೆ ಸಲ್ಲಿಸಿದರು

ಉಜಿರೆ ಎಸ್.ಡಿ.ಎಂ. ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪ-ಉಪಕುಲಪತಿ ಭೇಟಿ

Article Image

ಉಜಿರೆ ಎಸ್.ಡಿ.ಎಂ. ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪ-ಉಪಕುಲಪತಿ ಭೇಟಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿಯ ಉಪ- ಉಪಕುಲಪತಿ ಹಾಗೂ ಧಾರವಾಡ ಎಸ್.ಡಿ.ಎಂ. ಎಜ್ಯೂಕೇಶನ್ ಸೊಸೈಟಿಯ ಕಾರ್ಯದರ್ಶಿ ಆಗಿರುವ ಜೀವಂಧರ್ ಕುಮಾರ್ ಇವರು ಅ.24ರಂದು ಭೇಟಿ ನೀಡಿದರು. ಭೇಟಿಯ ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೀಡರ್ ಇದ್ದ ಹಾಗೆ ಫಾಲೋರ‍್ಸ್ ಇರುತ್ತಾರೆ. ಪೂಜ್ಯರಂತಹ ಮಹಾನ್ ವ್ಯಕ್ತಿಯ ಲೀಡರ್‌ಶಿಪ್ ನಮಗಿರುವಾಗ ನಾವೇ ಅತ್ಯಂತ ಧನ್ಯರು ಎಂದರು. ಇಲ್ಲಿನ ವೈದ್ಯರಲ್ಲಿ ಸಿಬ್ಬಂದಿಗಳಲ್ಲಿ ವಿಶೇಷವಾಗಿ ನಾನು ನಗುಮೊಗವನ್ನು ಕಾಣುತ್ತಿದ್ದೇನೆ. ಪೂಜ್ಯರ ಮಾರ್ಗದರ್ಶನದಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಬೆಳೆಯುತ್ತಿದೆ. ಪೂಜ್ಯರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುತ್ತಿರುವ ನಿಮ್ಮೆಲ್ಲರಿಂದ ಈ ಆಸ್ಪತ್ರೆ ಮತ್ತಷ್ಟು ಬೆಳಯಲಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಪೇಥಲಾಜಿಸ್ಟ್ ಡಾ| ಮೇಘಾ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ರಾಜ್ಯದ ಹದಿಮೂರು ಕಡೆಗಳಲ್ಲಿ 2000ನೇ ಮದ್ಯವರ್ಜನ ಶಿಬಿರ

Article Image

ರಾಜ್ಯದ ಹದಿಮೂರು ಕಡೆಗಳಲ್ಲಿ 2000ನೇ ಮದ್ಯವರ್ಜನ ಶಿಬಿರ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಇಂದಿನಿಂದ (ಅ.30) ರಾಜ್ಯದ ಹದಿಮೂರು ಕಡೆಗಳಲ್ಲಿ 2000ನೇ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ್ ಬಾದಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿಯವರಾದ ವಿವೇಕ್ ವಿ. ಪಾಯಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ, ಮೂಡಬಿದ್ರೆ, ಮಂಗಳೂರು, ಉಡುಪಿ, ಗುಬ್ಬಿ, ಮಧುಗಿರಿ, ಧಾರವಾಡ, ಬಸವಕಲ್ಯಾಣ, ಶ್ರೀರಂಗ ಪಟ್ಟಣ, ಅರಸೀಕೆರೆ, ಗದಗ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ಅ. 30 ರಿಂದ ನ.6 ರವರೆಗೆ ಪ್ರತಿ ಶಿಬಿರದಲ್ಲಿ ತಲಾ 76 ರಂತೆ ಶಿಬಿರಾರ್ಥಿಗಳನ್ನು ಸೇರಿಸಿ ಒಂದು ಸಾವಿರ ವ್ಯಸನಿಗಳಿಗೆ ಮನಪರಿವರ್ತನೆ ಮೂಲಕ ವ್ಯಸನಮುಕ್ತರಾಗಿ ಮಾಡುವ ಗುರಿ ಹೊಂದಲಾಗಿದೆ. ಈವರೆಗೆ 1987 ಮದ್ಯವರ್ಜನ ಶಿಬಿರಗಳ ಮೂಲಕ ಒಂದು ಲಕ್ಷದ ಮೂವತ್ತಮೂರು ಸಾವಿರ ಮದ್ಯವ್ಯಸನಿಗಳನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತರಾಗಿ ಮಾಡಲಾಗಿದೆ ಎಂದು ಅವರು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ 2025

Article Image

ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ 2025

ಸತ್ತೂರ, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ - 2025 ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ದಿನಾಂಕ, ಅಕ್ಟೊಬರ್ 3 ಮತ್ತು 4, 2025ರಂದು “ಸ್ಪಂದನ” - ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಹಮ್ಮಿಕೋಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಶ್ರೀ ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪ ನಾಯಕರು, ಕರ್ನಾಟಕ ವಿಧಾನಸಭಾ, ಡಾ. ನಿರಂಜನ್ ಕುಮಾರ, ಉಪ ಕುಲಪತಿಗಳು, ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಡಾ. ತಿಮ್ಮಪ್ಪ ಹೆಗ್ಡೆ, ನಿರ್ದೇಶಕರು ಹಾಗೂ ಹಿರಿಯ ತಜ್ಞರು, ನಾರಾಯಣ ನರರೋಗ ಸಂಸ್ಥೆ, ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಬಲರಾಮ ನಾಯ್ಕ, ಪ್ರಾಂಶುಪಾಲರು ಮತ್ತು ಗೌರವ ಅಧ್ಯಕ್ಷರು, ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ, ವಿ. ಜೀವಂಧರ ಕುಮಾರ, ಕಾರ್ಯದರ್ಶಿಗಳು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಧಾರವಾಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾದ ಡಾ. ನಿರಂಜನ್ ಕುಮಾರ ಅವರು ಮಾತನಾಡುತ್ತಾ: ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಶ್ರೇಷ್ಠವನ್ನಾಗಿ ಮಾಡಬೇಕು. ಹಳೆಯ ವಿದ್ಯಾರ್ಥಿಗಳ ಸಮಾಜ ಸೇವೆಯು ಅವರ ವಿದ್ಯಾಭ್ಯಾಸದ ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ಮತ್ತು ಅತ್ಯುತ್ತಮ ತರಬೇತಿಯನ್ನು ಒದಗಿಸುವುದು ನಮ್ಮ ಕುಲಪತಿಗಳ ಗುರಿಯಾಗಿದೆ. ಎಸ್.ಡಿ.ಎಂ. ಸಂಸ್ಥೆಗಳು ನಮ್ಮ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು “ಎಸ್.ಡಿ.ಎಂ. ಕುಟುಂಬ” ಎಂದು ಪರಿಗಣಿಸುತ್ತವೆ. ಉತ್ತಮ ಶಿಕ್ಷಣದ ಉದ್ದೇಶವು ಯಾವುದೇ ವೃತ್ತಿಪರರ ವಯಕ್ತಿಕ ಗುರಿಗಿಂತ ಹೆಚ್ಚಾಗಿರಬೇಕು. ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯೂ ತಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರಬೇಕು. ಅರವಿಂದ್ ಬೆಲ್ಲದ್ ಅವರು ತಮ್ಮ ಸ್ಪೂರ್ತಿದಾಯಕ ಮತ್ತು ಪ್ರೇರಿತ ಮಾತುಗಳೊಂದಿಗೆ ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಡಾ. ತಿಮ್ಮಪ್ಪ ಹೆಗ್ಡೆ ದಿಕ್ಸೂಚಿ ಭಾಷಣ ಮಾಡಿದರು. ಡಾ. ರೋಶನ ಶೆಟ್ಟಿ, ಅಧ್ಯಕ್ಷರು, ಹಳೆಯ ವಿದ್ಯಾರ್ಥಿಗಳ ಸಂಘ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅಪೂರ್ವಾ ಮತ್ತು ಡಾ. ಮೇಘನಾ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರವಿ ಶಿರಹಟ್ಟಿ ಮತ್ತು ಡಾ. ಕಿರಣ ರೆಡ್ಡೆರ ಅವರು ಅರವಿಂದ ಬೆಲ್ಲದ ಮತ್ತು ಡಾ. ತಿಮ್ಮಪ್ಪ ಹೆಗ್ಡೆ ಅವರನ್ನು ಪರಿಚಯಿಸಿದರು. ಡಾ. ಮಹಿಮಾ ದಂಡ, ಕಾರ್ಯದರ್ಶಿ, ಸ್ಪಂದನ ಹಳೆಯ ವಿದ್ಯಾರ್ಥಿಗಳ ಸಂಘ, ವಂದನಾರ್ಪಣೆ ಸಲ್ಲಿಸಿದರು.

ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯಗಳು ಪೂರಕ: ಡಾ. ಸತೀಶ್ಚಂದ್ರ ಎಸ್

Article Image

ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯಗಳು ಪೂರಕ: ಡಾ. ಸತೀಶ್ಚಂದ್ರ ಎಸ್

ಸಾಹಿತ್ಯಗಳಲ್ಲಿ ಬರುವ ವಿಷಯಗಳು ಜನರ ಮತ್ತು ಸಮಾಜದ ಉನ್ನತಿಗೆ ಕಾರಣವಾಗಿವೆ. ತತ್ವಪದಗಳು ನೈತಿಕ ಮೌಲ್ಯಗಳನ್ನು ಒಳಗೊಂಡಿವೆ.ಮಾನವನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಾಹಿತ್ಯಗಳನ್ನು ತಿಳಿಯಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಹೇಳಿದರು. ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಕನ್ನಡ ವಿಭಾಗ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತತ್ವಪದಗಳು - ಸಾಂಸ್ಕೃತಿಕ ಅನುಸಂಧಾನ, ಸೆ.19 ಮತ್ತು 20 ರಂದು ನಡೆಯಲಿರುವ ಎರಡು ದಿನಗಳ ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಖನಿಜಗಳ ನಿಕ್ಷೇಪಗಳು ಹೇಗೆ ಅಡಗಿದೆಯೋ ಹಾಗೆ ಸಾಹಿತ್ಯ - ಸಂಸ್ಕೃತಿಗಳಲ್ಲಿ ಹಲವಾರು ನಿಕ್ಷೇಪಗಳು ಅಡಗಿದೆ. ನಮ್ಮ ದೇಶದ ಒಂದು ಆಸ್ತಿಯೆಂದರೆ ಅದು ಸಾಂಸ್ಕೃತಿಕತೆ. ಅದರಲ್ಲಿ ಪ್ರಚಲಿತ ವಿಚಾರಗಳು ಬಹಳಷ್ಟು ಕಾಣಸಿಗುತ್ತದೆ. ಅವುಗಳನ್ನು ಅರಿತು ಮೌಲ್ಯಾಧಾರಿತ ಮಾನವರಾಗಿ ಬೆಳೆಯಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. 'ಹಿಂದಿನ ಚರಿತ್ರೆಯನ್ನು ನಾವು ನೋಡಿದರೆ ಸಮಾಜದಲ್ಲಿ ಹಲವಾರು ಬೇಧಭಾವ ಹಾಗೂ ಸಂಕುಚಿತ ಮನೋಭಾವನೆ ನಮ್ಮಲ್ಲಿತ್ತು. ಆ ಸಮಾಜದಲ್ಲಿ ಸಮಾನತೆಯನ್ನು ತರಲು ತತ್ವಪದಗಳು, ದಾಸಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳು ಕಾರಣವಾದವು. ತತ್ವಪದಗಳ ಸಾರವನ್ನು ವಿದ್ಯಾರ್ಥಿಗಳು ತಿಳಿದು ಸಮಾಜದಲ್ಲಿ ಒಳ್ಳೆಯ ವಾಗ್ಮಿಗಳಾಗಲಿ' ಎಂದರು. ಕನ್ನಡ ವಿಭಾಗದ ಭಿತ್ತಿಪತ್ರಿಕೆಯಾದ 'ಸಿರಿಗನ್ನಡ' ದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ಅಧಿಕಾರಿಯಾದ ಎಸ್. ಸತ್ಯನಾರಾಯಣ, ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕರಾದ ಪ್ರೊ. ಎಸ್.ಎನ್. ಕಾಕತ್ಕಾರ್ ಹಾಗೂ ಹಲವು ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್. ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ. ಎ. ವಂದಿಸಿದರು. ಕನ್ನಡ ಪ್ರಾಧ್ಯಾಪಕರಾದ ಭವ್ಯಶ್ರಿ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದು.

ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ವಿಶಿಷ್ಟ ಸಾಧನೆ

Article Image

ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ವಿಶಿಷ್ಟ ಸಾಧನೆ

ಕರ್ನಾಟಕದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮುಖಾಂತರ ಇತ್ತೀಚೆಗೆ ನಡೆದ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದೀಕ್ಷಾ ಬಿ.ಎಸ್. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2025 ನೇ ಜೂನ್ ತಿಂಗಳಲ್ಲಿ ವಿಶ್ವವಿದ್ಯಾನಿಲಯವು ಸಂಗೀತ ನೃತ್ಯ ಮತ್ತು ತಾಳ ವಾದ್ಯಗಳ ವಿವಿಧ ಹಂತಗಳ ಪರೀಕ್ಷೆಗಳನ್ನು ನಡೆಸಿತ್ತು. ಇವುಗಳಲ್ಲಿ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉಜಿರೆಯ ದೀಕ್ಷಾ ಬಿ.ಎಸ್. ಇವರು ಲಿಖಿತ ಮತ್ತು ಮೌಖಿಕ ಎರಡು ವಿಧದ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಅಂಕಗಳೊಂದಿಗೆ ಈ ವಿಶಿಷ್ಟ ಸಾಧನೆಗೆ ಭಾಜನರಾಗಿದ್ದಾರೆ. ಇವರು ಕಳೆದ ಹದಿನೈದು ವರ್ಷಗಳಿಂದ ಭರತನಾಟ್ಯ ಗುರುಗಳಾದ ವಿದುಷಿ ಸ್ವಾತಿ ಕಿರಣ್ ಮತ್ತು ವಿದುಷಿ ಪೃಥ್ವಿ ಕಿರಣ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಈ ಹಿಂದೆಯೂ ಭರತನಾಟ್ಯದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪೂರ್ವ ಪರೀಕ್ಷೆಗಳಲ್ಲಿಯೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ. ದೀಕ್ಷಾ ಬಿ.ಎಸ್. ಪ್ರಸ್ತುತ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (Regional Institute of Education) ಎಂ.ಎಸ್.ಸಿ.ಎಡ್. ಎಂಬ ಅಧ್ಯಯನವನ್ನು ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಾಲೀಗದ್ದೆಯವರಾದ ಇವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಧರ ಭಟ್ ಮತ್ತು ಸರಕಾರಿ ಪ್ರೌಢಶಾಲೆ ಹಳೆಪೇಟೆ, ಉಜಿರೆಯ ಗಣಿತ ಶಿಕ್ಷಕಿ ವೀಣಾ ಶ್ಯಾನಭಾಗ್ ದಂಪತಿಯ ಸುಪುತ್ರಿ.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಿಂದ ಉಪನ್ಯಾಸ

Article Image

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಿಂದ ಉಪನ್ಯಾಸ

ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಾದ ಡಾ| ಪ್ರತೀಕ್ಷ್ ಪಿ. ಇವರು ಪುದುಚೇರಿಯ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆ.29ರಿಂದ 31 ರವರೆಗೆ ನಡೆದ ದಕ್ಷಿಣ ಭಾರತೀಯ ರಾಜ್ಯಗಳ ಮೂಳೆಚಿಕಿತ್ಸಾ ಸಂಘದ 24ನೇ ವಾರ್ಷಿಕ ಸಮ್ಮೇಳನ ಓಯಸಿಸ್ಕಾನ್- 2025 ಇದರಲ್ಲಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಪ್ರಮುಖ ಉಪನ್ಯಾಸ ನೀಡಿದರು. ದಕ್ಷಿಣ ಭಾರತದ ರಾಜ್ಯಗಳ ಹೆಸರಾಂತ ಪ್ರಮುಖ ಮೂಳೆಚಿಕಿತ್ಸಾ ತಜ್ಞರ ಕೂಡುವಿಕೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಮೂಳೆಚಿಕಿತ್ಸೆಯಲ್ಲಿ ಉಂಟಾಗುವ ತೊಡಕುಗಳು ಮತ್ತು ಅದರ ನಿವಾರಣೆಯ ಕುರಿತು ತಜ್ಞ ವೈದ್ಯರುಗಳು ಉಪನ್ಯಾಸ ನೀಡುತ್ತಾರೆ. ಈ ಸಮ್ಮೇಳನದಲ್ಲಿ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಾಗಿರುವ, ಫೂಟ್ ಅಂಡ್ ಆಂಕ್ಲ್ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಪಾದ ಮತ್ತು ಪಾದದ ಮಣಿಗಂಟು ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ, ಡಾ. ಪ್ರತೀಕ್ಷ್. ಪಿ ಇವರು ಉಪನ್ಯಾಸ ನೀಡಿದರು. ಇವರು ಈಗಾಗಲೇ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಕ್ರಪಾದ ಹೊಂದಿರುವ, ನಡೆದಾಡಲು ಕಷ್ಟಪಡುತ್ತಿದ್ದ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಗು ಸ್ವತಂತ್ರವಾಗಿ ನಡೆದಾಡುವಂತೆ ಮಾಡುವ ಮೂಲಕ ಮಗುವಿನ ಪೋಷಕರಲ್ಲಿ ಸಂತೋಷ ತುಂಬಿದ ಇವರು ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮೆಚ್ಚುಗೆ ಪಾತ್ರರಾಗಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು. ಡಾ ಪ್ರತೀಕ್ಷ್ ಪಿ. ಇವರು ಈ ಸಮ್ಮೇಳನದಲ್ಲಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಪ್ರಮುಖ ಉಪನ್ಯಾಸ ನೀಡಲು ಸಂಘದಿಂದ ಆಹ್ವಾನಿಸಲ್ಪಟ್ಟಿದ್ದರು. ಪಾದದ ಮಧ್ಯದಲ್ಲಿರುವ ಅನೇಕ ಕೀಲುಗಳ ಮತ್ತು ಮೂಳೆಗಳ ಮುರಿತದಿಂದ ಅಥವಾ ಮಧ್ಯದ ಪಾದವನ್ನು ಬೆಂಬಲಿಸುವ ಅಸ್ಥಿರಜ್ಜುಗಳು ಹರಿದು ಗಾಯ ಉಂಟಾಗುವುದು. ಮುಂದೆ ಇದೇ ಗಾಯಗಳು ಸಂಕೀರ್ಣ ಸಮಸ್ಯೆಯಾಗಿ ಬದಲಾಗುವುದು ಮತ್ತು ಇವುಗಳಿಗೆ ಇರುವ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳ ಬಗ್ಗೆ ಇವರು ಈ ಸಮ್ಮೇಳನದಲ್ಲಿ ಪ್ರಮುಖ ಮಹತ್ವದ ಮಾಹಿತಿ ನೀಡಿದರು.

ಅರಿವಿನ ದೀವಿಗೆ ಉಪನ್ಯಾಸ ಮಾಲೆ ಕಾರ್ಯಕ್ರಮ

Article Image

ಅರಿವಿನ ದೀವಿಗೆ ಉಪನ್ಯಾಸ ಮಾಲೆ ಕಾರ್ಯಕ್ರಮ

ಉಜಿರೆ, ಸೆ.16: ವಿಶ್ವಮನ್ನಣೆ ಪಡೆದ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಮೂಲಕ ಮಹತ್ವದ ವಿಚಾರಗಳನ್ನು ತಿಳಿದುಕೊಂಡು ಕನ್ನಡದ ಅಂತಃಸತ್ವ ಹೆಚ್ಚಿಸುವುದಕ್ಕೆ ಕನ್ನಡಿಗರು ಆದ್ಯತೆ ನೀಡಬೇಕು ಎಂದು ಕನ್ನಡದ ನಿವೃತ್ತ ಪ್ರಾಧ್ಯಾಪಕ, ವಾಗ್ಮಿ ಪ್ರೊ. ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ. ಧ. ಮಂ ಕಾಲೇಜಿನ ಕನ್ನಡ ವಿಭಾಗವು ಹೇಮಾವತಿ. ವಿ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಪ್ರಯೋಜಕತ್ವದಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಮಂಗಳವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ "ಅರಿವಿನ ದೀವಿಗೆ" ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ "ಕನ್ನಡವೆಂಬ ಭಾವಸಂಪತ್ತು" ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಎಂದರೆ ಕೇವಲ ಮನಸ್ಸಿನ ಭಾವನೆ ಹೊರಹಾಕುವ ಒಂದು ಭಾಷೆಯಷ್ಟೇ ಅಲ್ಲ. ಕನ್ನಡ ಮಾತನಾಡುವವರು ಈ ಭಾಷೆಯೊಂದಿಗೆ ರೂಪಿಸಿಕೊಳ್ಳುವ ಸಾಂಗತ್ಯ ವಿಶೇಷವಾದುದು. ಈ ಬಗೆಯ ಭಾಷಿಕ ಸಾಂಗತ್ಯವು ಬೇರೆ ಯಾವ ಭಾಷೆಗೂ ಇಲ್ಲ. ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳುವ ಸಂದರ್ಭದಲ್ಲಿ ಮಾತೃಭಾಷೆಯಾಗಿ ಕನ್ನಡವು ಪ್ರಮುಖ ಪಾತ್ರವಹಿಸುತ್ತದೆ. ಕನ್ನಡವೇ ಕಣ್ಣಾಗಿ ಕಿವಿಯಾಗಿ ಜಗತ್ತನ್ನು ವಿಭಿನ್ನವಾಗಿ ಗ್ರಹಿಸುವುದಕ್ಕೆ ನೆರವಾಗುತ್ತದೆ ಎಂದರು. ಆಚಾರ್ಯ ವಿನೋಬಾ ಭಾವೆ ಅವರು ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ವರ್ಣಿಸಿದ್ದಾರೆ. ಇಂಗ್ಲಿಷ್ ಭಾಷೆ ಇಂದು ಜಾಗತಿಕ ಭಾಷೆಯಾಗಿದ್ದರೂ ಕೂಡ ಕನ್ನಡಿಗರೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳವರಿಗೆ ಅವರವರ ಮಾತೃಭಾಷೆಯೇ ಶ್ರೇಷ್ಠವಾಗಿರುತ್ತದೆ. ಮಾತೃಭಾಷೆಯೊಂದಿಗೆ ಸಾಧ್ಯವಾಗುವ ಆಪ್ತ ಸಾಂಗತ್ಯ ಇಂಗ್ಲೀಷ್ ಸೇರಿದಂತೆ ಅನ್ಯದೇಶಿ ಭಾಷೆಗಳೊಂದಿಗೆ ಸಾಧ್ಯವಾಗುವುದಿಲ್ಲ. ಜಗತ್ತಿನ ಹಲವಾರು ವಿಚಾರಗಳನ್ನು ಹೊತ್ತುತರುವ ಇಂಗ್ಲಿಷ್ ಭಾಷೆಗೆ ಹಿತಮಿತವಾಗಿ ಆದ್ಯತೆ ನೀಡಿ ಕನ್ನಡದ ಸತ್ವವನ್ನು ಹೆಚ್ಚಿಸಬಹುದು ಎಂದು ಹೇಳಿದರು. ಜೀವಂತಿಕೆಯೊಂದಿಗಿನ ವ್ಯಕ್ತಿತ್ವಗಳು ಬದುಕಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಾರೆ. ಆ ವ್ಯಕ್ತಿತ್ವಗಳು ಇಲ್ಲವಾದಾಗ ಅವರ ವೈಶಿಷ್ಟ್ಯತೆಯು ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿದಿರುತ್ತದೆ. "ಅರಿವಿನ ದೀವಿಗೆ" ಕಾರ್ಯಕ್ರಮದ ಪ್ರೇರಕ ಶಕ್ತಿ ಡಾ.ಬಿ.ಯಶೋವರ್ಮ ಅಂಥ ವ್ಯಕ್ತಿತ್ವ. ಅವರೀಗ ಇಲ್ಲದಿದ್ದರೂ ಅವರ ವ್ಯಕ್ತಿತ್ವಕ್ಕಿದ್ದ ಆಕರ್ಷಣೀಯ ಅಸ್ಮಿತೆ ಶಾಶ್ವತವಾಗಿ ನೆಲೆಯೂರಿದೆ ಎಂದು ನೆನಪಿಸಿಕೊಂಡರು. ಆದರ್ಶದೊಂದಿಗೆ ಬದುಕಬೇಕು. ಇಲ್ಲದೇ ಹೋದರೆ ಹೇಗೆ ಬದುಕಿದ್ದೇವೆ ಎನ್ನುವುದಕ್ಕೆ ಸಮರ್ಥನೆಯ ಪುರಾವೆಯೇ ಸಿಗುವುದಿಲ್ಲ. ಸಮರ್ಥನೀಯ ಪುರಾವೆ ಹುಡುಕಾಡುವುದಕ್ಕೆ ಕಷ್ಟಪಡಬೇಕಾಗುತ್ತದೆ. ಆದರ್ಶ ಮೌಲ್ಯಗಳೊಂದಿಗಿನ ಬದುಕು ಸಮರ್ಥನೀಯ ಎನ್ನಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸೋನಿಯಾ ಯಶೋವರ್ಮ ಮಾತನಾಡಿದರು. ಯಶೋವರ್ಮರು ಕೃಷ್ಣೇಗೌಡರ ದೊಡ್ಡ ಅಭಿಮಾನಿಯಾಗಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅವರ ಹರಟೆ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದರು. ಇದರ ಜೊತೆಗೆ ಅವರು ತುಂಬಾ ಪುಸ್ತಕ ಪ್ರಿಯರಾಗಿದ್ದರು. ಧರ್ಮ, ಚರಿತ್ರೆ ಸೇರಿದಂತೆ ವಿವಿಧ ವಲಯಗಳ ಕುರಿತ ಮಹತ್ವದ ಪುಸ್ತಕಗಳನ್ನು ಓದುತ್ತಿದ್ದರು ಎಂದರು. ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಮಾತನಾಡಿದರು. ಕಾಲೇಜಿನ ಸಮಗ್ರ ಬೆಳವಣಿಗೆಗೆ ಬೇಕಾದ ಶಿಸ್ತುಬದ್ಧ ಆಡಳಿತ ಕ್ರಮ, ಹಸಿರು ಚಿಂತನೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಬಂಧಿತ ಹೆಜ್ಜೆಗಳೊಂದಿಗೆ ಡಾ. ಬಿ.ಯಶೋವರ್ಮ ಹೆಗ್ಗುರುತು ಮೂಡಿಸಿದ್ದರು ಎಂದು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಭವ್ಯಶ್ರೀ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ನಾಗಣ್ಣ ಡಿ.ಎ. ವಂದಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ಚಾಂಪಿಯನ್

Article Image

ಮೂಡುಬಿದಿರೆ: ಎಕ್ಸಲೆಂಟ್ ಚಾಂಪಿಯನ್

ಕ್ರೀಡೆಯಿಂದ ನಾವು ಕಲಿಯುವ ಪಾಠ ಜೀವನದುದ್ದಕ್ಕು ನಮ್ಮ ಕೈಹಿಡಿಯುತ್ತದೆ. ಮನಸ್ಸನ್ನು ಸಮತೋಲನದಲ್ಲಿ ಇಡುವಲ್ಲಿ ಕ್ರೀಡೆಯ ಪಾತ್ರ ದೊಡ್ಡದು ಎಂದು ಎಕ್ಸಲೆಂಟ್ ಮೂಡುಬಿದಿರೆಯ ಪ್ರಾಂಶುಪಾಲರಾದ ಪ್ರದೀಪ್‌ ಕುಮಾರ್ ಶೆಟ್ಟಿ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಮತ್ತು ಎಕ್ಸಲೆಂಟ್ ಮೂಡುಬಿದಿರೆಯ ಸಹಯೋಗದೊಂದಿಗೆ ಎಕ್ಸಲೆಂಟ್‌ ಕಾಲೇಜಿನಲ್ಲಿ ನಡೆದ ಅಂಡರ್ -19, ಮೂಡುಬಿದಿರೆ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷರಾಗಿ ನುಡಿದರು. ವೇದಿಕೆಯಲ್ಲಿ ಮೂಡುಬಿದಿರೆ ತಾಲೂಕು ಕ್ರೀಡಾ ಸಂಯೋಜಕರಾದ ನವೀನ್ ಎಂ.ಹೆಗ್ಡೆ, ಎಕ್ಸಲೆಂಟ್ ಮೂಡುಬಿದಿರೆಯ ದೈಹಿಕ ಶಿಕ್ಷಣ ತರಬೇತುದಾರರಾದ ಎಸ್.ಎಸ್. ಪಾಟೀಲ್ ಉಪಸ್ಥಿತರಿದ್ದರು. ಬಾಲಕರ ಹಾಗೂ ಬಾಲಕಿಯರ ವಿಭಾಗದ ಟೇಬಲ್ ಟೆನಿಸ್‌ನಲ್ಲಿ ಹಾಗೂ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ವಿದ್ಯಾರ್ಥಿಗಳು ಜಯಗಳಿಸಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. ದೈಹಿಕ ಶಿಕ್ಷಣ ತರಬೇತುದಾರ ಲೆಫ್ಟಿನೆಂಟ್ ಮಹೇಂದ್ರ ಕುಮಾರ್‌ ಜೈನ್ ನಿರೂಪಿಸಿ ಕನ್ನಡ ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ವಂದಿಸಿದರು.

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

Article Image

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ. ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ನಿರ್ಮಾಣಕ್ಕೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ. ತಂತ್ರಜ್ಞಾನದ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಶಿಕ್ಷಕರ ಪಾತ್ರ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಮೌಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ, ವಿದ್ಯಾರ್ಥಿ ಕೇಂದ್ರಿತ, ನವಯುಗದ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕವೃಂದ ನಮ್ಮದಾಗಬೇಕು ಎಂದು ಆಶಿಸಿದರು. ಹೊಸ ದಿಗಂತ ಪತ್ರಿಕೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿಎಸ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ದೇಶ ಅಥವಾ ಸಮಾಜ ಶಿಕ್ಷಣದಿಂದ ರೂಪಿತವಾಗಬೇಕು. ಸಮಾಜದ ನಡೆ ಶಿಕ್ಷಣದಿಂದ ನಿರ್ಧರಿತವಾಗಬೇಕು. ಸತ್ಯದ ದಾರಿಯಲ್ಲಿ ಮೌಲ್ಯವನ್ನು ಹೆಚ್ಚಿಸುವುದೇ ಶಿಕ್ಷಣ. ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಆಸ್ಥೆಯ, ಅಪರಿಗ್ರಹದಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಸ್ವಾಭಿಮಾನಿ ಸಮಾಜ ನಿರ್ಮಾಣವಾಗಬೇಕೆಂದರೆ ಅಂತಹ ಶಿಕ್ಷಣ ನೀಡಬೇಕು ಎಂದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್ ಡಾ. ಹೆಚ್ ಎಸ್ ಬಲ್ಲಾಳ್ ಹಾಗೂ ಸರಸ್ವತಿ ಸಮೂಹ ವಿದ್ಯಾಸಂಸ್ಥೆ ಮೇಘಾಲಯದ ಸ್ಥಾಪಕರು ಹಾಗೂ ಸಂವಿಧಾನ ತಜ್ಞ ಡಾ. ಅನಂತಕೃಷ್ಣ ಭಟ್‌ರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್, ಡಾ ಹೆಚ್ ಎಸ್ ಬಲ್ಲಾಳ, ಈ ತರಹದ ಗುರುತಿಸುವಿಕೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರೆಪಿಸುತ್ತದೆ. ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಇನ್ನೊಬ್ಬರಿಗಾಗಿ ಬದುಕಿದರೆ, ಅದೇ ಶ್ರೇಷ್ಠ ಬದುಕು ಎಂದು ನುಡಿದರು. ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಸಾಧನೆಗಾಗಿ ಅತ್ಯುತ್ತಮ ಆಡಳಿತ ನಿರ್ವಾಹಕ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಪ್ರಾಚರ‍್ಯ ಡಾ ಕುರಿಯನ್ ಹಾಗೂ ಮಂಗಳೂರಿನ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಇವರಿಗೆ ನೀಡಲಾಯಿತು. ಸಂಶೋಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಣಿಪಾಲ್ ಯೂನಿವರ್ಸಿಟಿಯ, ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊ. ಹರೀಶ್ ಜೋಶಿ ಹಾಗೂ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶಾಂತರಾಮ ರೈ ಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕಿ ಡಾ ಸುಭಾಷಿಣಿ ಶ್ರೀವತ್ಸ ಹಾಗೂ ಅಜ್ಜರಕಾಡಿನ ಡಾ ಜಿ ಶಂಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಜೇಂದ್ರ ಪಿ ಇವರಿಗೆ ನೀಡಲಾಯಿತು. ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರೊ. ವಿಜಯಲತಾ ಹಾಗೂ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯಶೋಧರಿಗೆ ನೀಡಿ ಗೌರವಿಸಲಾಯಿತು. ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿಯನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಡಾ. ರಾಧಾಕೃಷ್ಣ ಹಾಗೂ ವಿರಾಜಪೇಟೆಯ ಕಾವೇರಿ ಕಾಲೇಜಿನ ತಮ್ಮಯ್ಯರಿಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 2025ನೇ ಸಾಲಿನಲ್ಲಿ ಪಿಹೆಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಮಂಗಳೂರು ವಿವಿಯ ಕುಲಸಚಿವ ಡಾ ಪಿಎಲ್ ಧರ್ಮಾ, ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್, ಕೆಆರ್‌ಎಂಎಸ್‌ಎಸ್‌ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ ಮಹಾದೇಶ ಸಿ, ಡಾ ಎಸ್ ಬಿ ಎಂ ಪ್ರಸನ್ನ, ಕೆಆರ್‌ಎಂಎಸ್‌ಎಸ್‌ನ ಮಂಗಳೂರು ವಿಭಾಗದ ಅಧ್ಯಕ್ಷೆ ವಾಣಿ ಯುಎಸ್, ಕಾರ‍್ಯದರ್ಶಿ ರಾಜೇಶ್ ಇದ್ದರು. ಕೆಆರ್‌ಎಂಎಸ್‌ಎಸ್‌ನ ಮಮತಾ ಶೆಟ್ಟಿ ಹಾಗೂ ವೆಂಕಟೇಶ್ ನಾಯಕ್ ಕಾರ‍್ಯಕ್ರಮ ನಿರೂಪಿಸಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

Article Image

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

ಎಸ್.ಡಿ.ಎಂ. ಬಯೋಮೆಡಿಕಲ್ ಸೈನ್ಸಸ್ ಇನ್‌ಸ್ಟಿಟ್ಯೂಟ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳ ರಾಷ್ಟ್ರೀಯ ಸ್ವಯಂ ಸೇವಕ ಘಟಕಗಳು ಜಂಟಿಯಾಗಿ ಜುಲೈ 24, 2025ರಂದು ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿತು. ಸಹ ಉಪ ಕುಲಪತಿಗಳು (ಆಡಳಿತ) ಶ್ರೀ ವಿ. ಜೀವಂಧರ್ ಕುಮಾರ್ ಮತ್ತು ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ನಗರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ. ಶಿವರಾಜ್ ಕೆ. ಕಟಕಭಾವಿ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಮಾದಕವಸ್ತು ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಮಂಜುನಾಥ್ ಸುಣಗಾರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ. ಶಿವರಾಜ್ ಕಟಕಭಾವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ; ವಿದ್ಯಾರ್ಥಿಗಳು ಶ್ರಮವಹಿಸಿ ಕಲಿಯುವ ಮುಖೇನ ಸಂತೃಪ್ತಿಯನ್ನು ಪಡೆಯಬೇಕು. ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗದೇ ಅದರಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಲ್ಲದೇ ಇಡೀ ಕುಟುಂಬದ ಶಾಂತಿಯನ್ನು ಹಾಳು ಮಾಡುತ್ತದೆ. ವಿಷಕಾರಕವಾದ ಮಾದಕ ವಸ್ತುಗಳ ಸೇವನೆಯಿಂದ ಹಂತ ಹಂತವಾಗಿ ದೇಹದ ಎಲ್ಲಾ ಅಂಗಗಳನ್ನು ಹಾನಿಗೊಳಗಾಗುತ್ತವೆ. ಕ್ಷಣಿಕ ಸಂತೋಷಕ್ಕಾಗಿ ಅಮೂಲ್ಯವಾದ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಶಿಕ್ಷಣ ಮತ್ತು ಇಡೀ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿಕೊಳ್ಳುವ ಯಾವುದೇ ರೀತಿಯ ಅಪರಾಧ ಕೃತ್ಯಗಳ ಬಗ್ಗೆ ನಾವು ಯೋಚಿಸಬಾರದು. ನಾವೆಲ್ಲರೂ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆಯ ಕುರಿತಾದ ಕಾನೂನುಗಳನ್ನು ಅನುಸರಿಸಬೇಕು. ಭಾರತವನ್ನು ಮಾದಕ ವಸ್ತುಗಳ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಆರೋಗ್ಯಕರ ಶೈಕ್ಷಣೀಕ ಪರಿಸರ ಹೊಂದಲು ಆತಂರಿಕ ಮಾದಕ ವಸ್ತು ವಿರೋಧಿ ಸಮಿತಿಯನ್ನು ರಚಿಸಲು ಸಲಹೆ ಮಾಡಲಾಯಿತು. ಡಾ. ಮಂಜುನಾಥ್ ಸುಣಗಾರ ಅವರು ವಿವಿಧ ಮಾದಕ ದ್ರವ್ಯ ವಸ್ತುಗಳ ಪರಿಚಯ, ಸೇವನೆಯ ದುಷ್ಪರಿಣಾಮ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಮುಂಜಾಗೃತಿಯನ್ನು ಮೂಡಿಸಿದರು. ಡಾ. ಶಿವರಾಜ್ ಕಟಕಭಾವಿ ಮತ್ತು ಡಾ. ಮಂಜುನಾಥ್ ಸುಣಗಾರ ಅವರನ್ನು ಎಸ್.ಡಿ.ಎಂ. ಸಂಸ್ಥೆವತಿಯಿಂದ ಗಣ್ಯರು ಸನ್ಮಾನಿಸಿದರು. ಸಂಶೋಧನಾ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಡಾ. ಅಜಯಕುಮಾರ್ ಓಲಿ ಮತ್ತು ಪ್ರಸನ್ನ ದೇಶಪಾಂಡೆ, ಎನ್.ಎನ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ರೇಣುಕಾರಾಧ್ಯ ಕೆ. ಮಠ, ಅಧ್ಯಾಪಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಮೇಘನಾ ಹೆಗ್ಡೆ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಮೈಜಾ ಶಿಬಾರಗಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

Article Image

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

ವಯೋಸಹಜವಾಗಿ ಮೈಗೂಡುವ ಋಣಾತ್ಮಕ ಚಿಂತನೆಗಳನ್ನು ತೊರೆದಾಗ ಮನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಮನಃಶಾಸ್ತ್ರ (ಸ್ನಾತಕೋತ್ತರ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಅವರು ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ ಉದ್ಘಾಟಿಸಿ, ‘ಕಾಲೇಜು ಜೀವನದಲ್ಲಿ ಮಾನಸಿಕ ಆರೋಗ್ಯದ ಪೋಷಣೆ’ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬರಬೇಕು. ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನು ಸ್ವೀಕರಿಸಿ, ತಾಳ್ಮೆಯಿಂದ ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮನಸು ಮತ್ತು ಮೆದುಳಿನ ಸಮತೋಲನ ನಿರ್ವಹಣೆಯಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು. “ಮನಸ್ಸಿನ ದುಗುಡಗಳನ್ನು ನಮಗೆ ಸೂಕ್ತ ಎನಿಸುವ ವ್ಯಕ್ತಿಯ ಜೊತೆ ಹಂಚಿಕೊಂಡಾಗ ಮಾತ್ರ ಅವುಗಳಿಗೆ ಪರಿಹಾರ ಸಾಧ್ಯ. ನಮ್ಮ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕು ಎಂಬುದರ ಬಗ್ಗೆ ನಮಗೆ ಅರಿವಿರಬೇಕು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇದೆ. ಅವುಗಳನ್ನು ಹುಡುಕುವ ತಾಳ್ಮೆ ಮೈಗೂಡಬೇಕು” ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಪ್ರತಿಯೊಂದು ವಿಚಾರಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ನಿಲ್ಲಿಸಿ ತಮ್ಮ ಮೆದುಳಿಗೆ ಕೆಲಸ ಕೊಡಬೇಕು. ಹಾಗಾದಾಗ ಮಾತ್ರ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಯುವಜನತೆ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ವಿಷಯವಾರು ಸಂಘ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮನೋರಂಜನೆಯ ಉದ್ದೇಶಕ್ಕಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಂದರು. ರಸಾಯನಶಾಸ್ತ್ರ ವಿಭಾಗವು ಹಿಂದಿನಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಆ ಯಶಸ್ಸನ್ನು ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿಗಳು ತಯಾರಿಸಿದ ‘ಸ್ಪಟಿಕ’ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ., ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮೌಲ್ಯ ಮತ್ತು ಸಿಂಚನ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಶಾಂತ್ ಸ್ವಾಗತಿಸಿ, ಜೋಷ್ಣಾ ವಂದಿಸಿ, ಅನ್ವಿತಾ ಸೇರಾ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ಸಿರಿ ಮಿಲ್ಲೆಟ್ ಕೆಫೆ ಧಾರವಾಡದಲ್ಲಿ ಶುಭಾರಂಭ

Article Image

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ಸಿರಿ ಮಿಲ್ಲೆಟ್ ಕೆಫೆ ಧಾರವಾಡದಲ್ಲಿ ಶುಭಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತೀ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ನೂತನ ಸಿರಿ ಮಿಲ್ಲೆಟ್ ಕೆಫೆ’ಯು ಜು. 04ರಂದು ಶುಭಾರಂಭಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಸಿರಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಪರಮಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಿನೂತನವಾದ ಸಿರಿ ಮಿಲ್ಲೆಟ್ ಕೆಫೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪೂಜ್ಯರು ಯುವ ಪೀಳಿಗೆಗೆ ಆರೋಗ್ಯಕರವಾಗಿ ಜೀವಿಸಲು ಅವಶ್ಯಕವಾಗಿರುವ ಪೌಷ್ಟಿಕಾಂಶಯುಕ್ತ ಆಹಾರೋತ್ಪನ್ನಗಳು ದೊರೆಯಬೇಕು ಎನ್ನುವ ಉದ್ದೇಶದಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಎಸ್.ಡಿ.ಎಂ ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿದೆ. ಇಲ್ಲಿ ಮಧುಮೇಹ, ಬೊಜ್ಜು ನಿವಾರಕ, ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಸಿರಿಧಾನ್ಯ ಉತ್ಪನ್ನಗಳನ್ನು ಬಳಸಿ ಶುಚಿ-ರುಚಿಯಾದ ಆರೊಗ್ಯಕರವಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ದೃಷ್ಟಿಯಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಆರಂಭಿಸಿದ್ದೇವೆ. ಅಲ್ಲದೆ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲ್ಲೆಟ್ ಕುಕ್ಕೀಸ್, ಮಿಲ್ಲೆಟ್ ರಸ್ಕ್, ಡೋನಟ್, ರಿಬ್ಬನ್ ಪಕೋಡಾ, ನವಣೆ ಲಡ್ಡು, ಬೆಳಗ್ಗಿನ ಉಪಹಾರಕ್ಕೆ ಯೋಗ್ಯವಾಗಿರುವ ಬರಗು ದೋಸೆ, ಮಿಲ್ಲೆಟ್ ಉಪ್ಮ, ಪೋಹ, ವರ್ಮಸಲ್ಲಿ, ಮಧ್ಯಾಹ್ನದ ಭೋಜನಕ್ಕೆ ಸಿರಿಧಾನ್ಯಗಳ ಬಿಸಿಬೇಳೆ ಬಾತ್, ತಾಳಿಪಟ್ಟು, ದಾಲ್ ಕಿಚಡಿ, ಮಿಲ್ಲೆಟ್ ಮೊಸರನ್ನ, ಜೋಳ ರೋಟ್ಟಿ, ಸಂಜೆಗೆ ಸ್ನಾಕ್ಸ್ ಐಟಮ್ ಗಳಾದ ನ್ಯೂಟ್ರಿ ಅಟ್ಟ ಆನಿಯನ್ ಪಕೋಡಾ, ವೆಜ್ ಸ್ಯಾಂಡ್ ವಿಚ್, ಜೋಳ ವಡ ಇತ್ಯಾದಿ ಉತ್ತಮ ಗುಣಮಟ್ಟವುಳ್ಳ ಬಿಸಿ ಬಿಸಿ ಖಾದ್ಯಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಎಲ್ಲರೂ ಸಿರಿ ಮಿಲ್ಲೆಟ್ ಕೆಫೆಗೆ ಭೇಟಿ ನೀಡಿ, ಇಲ್ಲಿ ದೊರೆಯುವ ವಿವಿಧ ಮಿಲ್ಲೆಟ್ ಖಾದ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾರವಾಡ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ್ ದಂಪತಿಗಳು ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧಾರವಾಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಜೀವಂಧರ್ ಕುಮಾರ್, ಹಣಕಾಸು ನಿರ್ದೇಶಕರಾದ ವಿ.ಜಿ.ಪ್ರಭು, ಧಾರವಾಡ ಎಸ್.ಡಿ.ಎಂ ಡೆಂಟಲ್ ಹಾಸ್ಪಿಟಲ್ ಪಿ.ಆರ್.ಒ. ಶ್ರೀ ನಾಗ್ ಕುಮಾರ್, ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿ.ಸಿ.ಒ ಗಣೇಶ್ ಪ್ರಸಾದ್ ಎಸ್ ಕಾಮತ್, ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಮುಖ್ಯ

Article Image

ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಮುಖ್ಯ

ಉಜಿರೆ: ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಬಹುಮುಖ್ಯವಾಗಿದೆ. ಮಹಿಳೆಯರು ಸಮತೋಲನದೊಂದಿಗೆ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಯ ನಿರ್ವಹಣೆ ಮಾಡಿಕೊಳ್ಳಬೇಕು. ಗ್ರಾಹಕರ ಜೊತೆಗೆ ಉತ್ತಮ ರೀತಿಯಲ್ಲಿ ಸೌಜನ್ಯಪೂರ್ವಕವಾಗಿ ಸಂವಹನ ಮಾಡಿ, ಉತ್ತಮವಾದ ಮನೋಭಾವ ಬೆಳಸಿಕೊಳ್ಳಿ. ಸರ್ಕಾರದ ಮತ್ತು ಬ್ಯಾಂಕಿನ ಆರ್ಥಿಕ ಸಹಕಾರ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ ಬಿ.ಪಿ ಹೇಳಿದರು. ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದ ಕಂಪ್ಯೂಟರ್ ಡಿ.ಟಿ.ಪಿ ಮತ್ತು ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ, ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.

ಅವಲೋಕನ ಅವಾರ್ಡ್ಸ್ : ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿ

Article Image

ಅವಲೋಕನ ಅವಾರ್ಡ್ಸ್ : ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿ

ಬೆಳ್ತಂಗಡಿ : 'ಅವಲೋಕನ' ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಪಿಲಿಕುಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181 ಒಳಪಟ್ಟ ರೋಟರಿ ಕ್ಲಬ್ ಗಳ ಪೈಕಿ 2024 -25 ನೇ ಸಾಲಿನ ವಾರ್ಷಿಕ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿವಿಧ ವಿಭಾಗಗಳಲ್ಲಿ 10 ಪ್ರಶಸ್ತಿಗಳು ಲಭಿಸಿವೆ. RI ಜಿಲ್ಲೆ 3181 ರೋಟರಿ ಕ್ಲಬ್ ಗಳ ಪೈಕಿ ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿಗಳು ಈ ಬಾರಿ ದೊರೆತಿದೆ. ಪ್ರಶಸ್ತಿಗಳ ವಿವರ : 1. 3181 ಜಿಲ್ಲೆಯ ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ಡೈಮಂಡ್ ಪ್ಲಸ್ ಪ್ರಶಸ್ತಿ (ಅತ್ಯುನ್ನತ ಗೌರವ) 2. ಕಾರ್ಯೋನ್ಮುಕ ಶ್ರೇಷ್ಠತೆ ಪ್ರಶಸ್ತಿ -ಪ್ರಥಮ ಸ್ಥಾನ 3. ಎಕ್ಸೆಲೆನ್ಸ್ ಇನ್ ಪಬ್ಲಿಕ್ ಇಮೇಜ್‌ - ಪ್ರಥಮ ಸ್ಥಾನ 4. ಆಕ್ಷನ್ ಚಾಂಪಿಯನ್ ಮೆಚ್ಚುಗೆ ಪ್ರಶಸ್ತಿ - ರೋ. ಅನಂತ್ ಭಟ್ ಮತ್ತು ರೋ. ವಿದ್ಯಾಕುಮಾರ್ ಕಾಂಚೋಡುರವರಿಗೆ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರಶಸ್ತಿ. 5. ಸಿಗ್ನಿಫಿಕೆಂಟ್ ಸರ್ವೀಸ್ ಅವಾರ್ಡ್ - ರೋಟರಿ ಕ್ಲಬ್ ಬೆಳ್ತಂಗಡಿ 6. ಸೇವಾ ವಿಭಾಗದ ವೈಯಕ್ತಿಕ ಪ್ರಶಸ್ತಿ : ರೋ. ಶ್ರೀಧರ್ ಕೆ ವಿ 7. TRF ಚಾಂಪಿಯನ್ ಅವಾರ್ಡ್ 8. ಇಂಟರಾಕ್ಟ್ ಕ್ಲಬ್ ಡೈಮಂಡ್ ಪ್ಲಸ್ ಅವಾರ್ಡ್ಸ್-ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ (CBSE) ಉಜಿರೆ. 9. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ, ಉಜಿರೆ 10. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಅನುದಾನಿತ ಮಾಧ್ಯಮಿಕ ಶಾಲೆ ಉಜಿರೆ ಬೆಳ್ತಂಗಡಿ ರೋಟರಿ ಕ್ಲಬ್ ನ 2024-25 ನೇ ಸಾಲಿನ ಶೈಕ್ಷಣಿಕ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಪ್ರಮುಖ ಸೇವಾ ಕಾರ್ಯಗಳು : ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ನವೀಕರಣ ಕಾರ್ಯಗಳು, 40 ಲಕ್ಷ ಮೊತ್ತದ ಸರಕಾರಿ ಶಾಲಾ ಕಾಲೇಜುಗಳಿಗೆ ಹೊಸ ಶೌಚಾಲಯಗಳ ನಿರ್ಮಾಣ ಕಾರ್ಯ, 25 ಲಕ್ಷಕ್ಕೂ ಅಧಿಕ ಮೊತ್ತದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, 14 ಲಕ್ಷ ಮೊತ್ತದ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, 5 ಲಕ್ಷ ಮೊತ್ತದ ಶಾಲಾ ಕಾಲೇಜುಗಳಿಗೆ ಮೂಲಭೂತ ಪೀಟೋಪಕರಣಗಳ ಕೊಡುಗೆ, ವಿವಿಧ ತರಭೇತಿ ಮತ್ತು ಮಾಹಿತಿ ಕಾರ್ಯಕ್ರಮ, ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಯುತ್ ಕಾರ್ನಿವಲ್ - ವಿವಿಧ ಜಿಲ್ಲಾ ವಿದ್ಯಾರ್ಥಿಗಳ ಜಿಲ್ಲಾ ಸಮ್ಮೇಳನ, 7 ಉಚಿತ ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು, 9 ಬೃಹತ್ ರಕ್ತದಾನ ಶಿಬಿರಗಳ ಮೂಲಕ 1300 ಯುನಿಟ್ ರಕ್ತ ಸಂಗ್ರಹ, 9 ಲಕ್ಷಕ್ಕೂ ಅಧಿಕ ಮೊತ್ತದ ತಾಲೂಕು ಪಶು ಆಸ್ಪತ್ರೆಯ ಕಟ್ಟಡ ನವೀಕರಣ, ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ, ಅಶಕ್ತರಿಗೆ ವೀಲ್ ಚೇರ್, ವಾಕರ್ ಮತ್ತು ವಾಟರ್ ಬೆಡ್ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಸೇರಿದಂತೆ 200ಕ್ಕೂ ಅಧಿಕ ಸಾಮಾಜಿಕ ಕಾರ್ಯಕ್ರಮಗಳು, 2 ಕೋಟಿಗೂ ಹೆಚ್ಚಿನ ಅನುದಾನ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿನಿಯೋಗ ರೋಟರಿ ಕ್ಲಬ್ ಬೆಳ್ತಂಗಡಿಯದ್ದಾಗಿದೆ. ಈ ಎಲ್ಲಾ ಕಾರ್ಯಗಳನ್ನು ಗುರುತಿಸಿ ರೋಟರಿ RI ಜಿಲ್ಲೆ 3181 ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರೋಟರಿ 3181 ಜಿಲ್ಲಾ ಗವರ್ನರ್ ರೋ.ವಿಕ್ರಮ ದತ್ತ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೋ. ಮೊಹಮ್ಮದ್ ವಳವೂರು, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಜಯಕುಮಾರ್ ಶೆಟ್ಟಿ, ರೋ.ಅಳಗಪ್ಪನ್ ರೋ. ದೇವ್ ಆನಂದ್, ಎಲ್ಐ ಜಿಲ್ಲೆ 317 ಜಿಲ್ಲಾ ಗವರ್ನರ್ ಲಯನ್ ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ, ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ರೋ. ಧನಂಜಯ ರಾವ್, ರೋ. ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು,ರೋ. ಅರುಣ್, ರೋ. ಶ್ರೀಧರ್ ಕೆ.ವಿ, ರೋ. ಪ್ರವೀಣ್ ಗೋರ್ ಸೇರಿದಂತೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರ ಆರ್ಶಿವಾದ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರುಗಳ ಸಹಕಾರದಿಂದ ಈ ವರ್ಷ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಯಿತು. ತಾಲೂಕಿನಲ್ಲಿನ ಬೇರೆ ಬೇರೆ ಅಗತ್ಯತೆಗಳನ್ನು ಅರಿತು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಯೋಜನೆಗೆ ತರಲು ಸಹಕಾರ ನೀಡಿದ ಬೆಳ್ತಂಗಡಿಯ ಅನೇಕ ಸಂಘ - ಸಂಸ್ಥೆಗಳು, ಬೆಂಗಳೂರಿನ ಸಿಎಸ್ಆರ್ ಪಾರ್ಟ್ನರ್ ಕಂಪೆನಿಗಳು ಮತ್ತು ಇಂದಿರಾನಗರ ಕ್ಲಬ್ ಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಬಂದಿರುವ ಈ ಎಲ್ಲಾ ಪ್ರಶಸ್ತಿಗಳು ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರ ಪರಿಶ್ರಮದ ಫಲವಾಗಿದೆ. - ಪೂರನ್ ವರ್ಮ ಅಧ್ಯಕ್ಷರು ರೋಟರಿ ಕ್ಲಬ್, ಬೆಳ್ತಂಗಡಿ .

ಮೂಡುಬಿದಿರೆ: ಯೋಗ ಸಂಗಮ -2025

Article Image

ಮೂಡುಬಿದಿರೆ: ಯೋಗ ಸಂಗಮ -2025

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕಾಲೇಜು, ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ‘ಯೋಗ ಸಂಗಮ -2025’ ಕಾರ‍್ಯಕ್ರಮ ನಡೆಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳ 1500 ವಿದ್ಯಾರ್ಥಿಗಳು ಏಕಕಾಲದಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲನ್ನು ಅನುಸರಿಸಿ 45 ನಿಮಿಷಗಳ ಸಾಮೂಹಿಕ ಯೋಗ ಪ್ರದರ್ಶನವನ್ನು ನೀಡಿದರು. ದೇಶದ ಒಂದು ಲಕ್ಷಕ್ಕೂ ಅಧಿಕ ಭಾಗಗಳಲ್ಲಿ ಈ ಯೋಗ ಸಂಗಮ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಅನಂತ ಕೃಷ್ಣ ಸಿ. ವಿ ಮತ್ತು ತ್ರಿಶಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ನ್ಯಾಚುರೋಪತಿ ವಿಭಾಗದ ಪ್ರಾಂಶುಪಾಲ ಡಾ. ವನಿತಾ ಶೆಟ್ಟಿ, ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ.ಸಜಿತ್ ಎಂ, ಆಳ್ವಾಸ್ ಫಾರ್ಮಸಿ ಕಾಲೇಜಿನ ಪ್ರಾಚರ‍್ಯ ಡಾ.ಮಂಜುನಾಥ ಸೆಟ್ಟಿ, ಆಳ್ವಾಸ್ ದೈಹಿಕ ಶಿಕ್ಷಣ ಸ್ನಾತಕೋತ್ತರ ಕಾಲೇಜಿನ ಡಾ. ಮಧು ಜಿ ಆರ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಉಪ ಪ್ರಾಂಶುಪಾಲೆ ಹಾಗೂ ಯೋಗ ವಿಭಾಗದ ಮುಖ್ಯಸ್ಥ ಡಾ. ವಿದ್ಯಾ ನ್ಯಾಚುರೋಪತಿ ಮತ್ತು ಯೋಗ ವಿಭಾಗದ ಡೀನ್. ಡಾ.ಅರ್ಚನಾ ಇದ್ದರು.

2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅಂಕುರ

Article Image

2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅಂಕುರ

ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ) ವತಿಯಿಂದ 2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ 'ಅಂಕುರ' ಆಳ್ವಾಸ್ ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಶಿಕ್ಷಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳಿದ್ದ ಮಾತ್ರಕ್ಕೇ ಶ್ರೇಷ್ಠ ವೆನಿಸಿಕೊಳ್ಳಲಾರವು. ಆ ಕಟ್ಟಡಗಳಿಗೆ ಜೀವಕಳೆ ವಿದ್ಯಾರ್ಥಿಗಳಿಂದ ಮಾತ್ರ ತುಂಬಲು ಸಾಧ್ಯ. ಅಂತಹ ವಿದ್ಯಾರ್ಥಿ ಸಮೂಹ ನೀವಾಗಬೇಕು. ಆಳ್ವಾಸ್ ನ ವಿದ್ಯಾರ್ಥಿಗಳೇ ‘ಆಳ್ವಾಸ್ ಬ್ರ್ಯಾಂಡ್’ ಎಂದರು. ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಸೇರುವ ಮೂಲ ಉದ್ದೇಶವನ್ನು ಅರಿಯಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ಸಮಕಾಲೀನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಪ್ರಪಂಚದ ಆಧುನಿಕ ಅಗತ್ಯಗಳಿಗೆ ತಕ್ಕಂತಹ ಜ್ಞಾನ ಮತ್ತು ಕೌಶಲಗಳನ್ನು ಸದಾ ನೀಡುತ್ತಿದೆ. ಸ್ವಾಯತ್ತ ಕಾಲೇಜಿನ ನೆಲೆಯಲ್ಲಿ ನಿತ್ಯ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆ, ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳಿಗೆ ತಕ್ಕಂತೆ ಪಠ್ಯ ಕ್ರಮವನ್ನು ರೂಪಿಸಲಾಗುತ್ತಿದೆ. ಇವು ವಿದ್ಯಾರ್ಥಿಗಳಲ್ಲಿ ವಾಸ್ತವಿಕ ಜ್ಞಾನ, ತಂತ್ರಜ್ಞಾನಾಧಾರಿತ ಕೌಶಲಗಳು, ಸೃಜನಾತ್ಮಕತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಸಾಮರ್ಥ್ಯಗಳನ್ನು ಬೆಳೆಸುತ್ತದೆ ಎಂದರು. ಆಳ್ವಾಸ್ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪದವಿ ಹಂತದಲ್ಲಿ ಪೋಷಕರು ಮಕ್ಕಳ ಬೆಳೆವಣಿಗೆಯನ್ನು ಹತ್ತಿರದಿಂದ ಗಮನಿಸುವ ಕೆಲಸವನ್ನು ಮಾಡಬೇಕು. ಈ ಮೂರು ವರ್ಷ ಬರೀ ಶಿಕ್ಷಣ ಮಾತ್ರವಲ್ಲದೇ ಅದರ ಹೊರತಾಗಿ ಸಾಮರ್ಥ್ಯಗಳ ವೃದ್ಧಿಯತ್ತಾ ಗಮನಕೊಡಬೇಕು. ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಎರಡು ಗಂಟೆಯಾದರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನೊಂದಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿಕೊಂಡು ಕೆಲಸ ಮಾಡಿದಾಗ ಅದ್ಭುತವನ್ನು ಸೃಷ್ಟಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ) ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ . ರವೀಂದ್ರನ್, ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.

ಎಸ್.ಡಿ.ಎಂ. ಆರೋಗ್ಯ ಸಂವಾದಕ್ಕೆ ಸಾವಿರ ಸಂಚಿಕೆಯ ಸಂಭ್ರಮ

Article Image

ಎಸ್.ಡಿ.ಎಂ. ಆರೋಗ್ಯ ಸಂವಾದಕ್ಕೆ ಸಾವಿರ ಸಂಚಿಕೆಯ ಸಂಭ್ರಮ

ಪ್ರತೀ ಮಂಗಳವಾರ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಸಂಜೆ 7.00ರಿಂದ 7.30ರ ಕೃಷಿರಂಗ ಕಾರ್ಯಕ್ರಮದಲ್ಲಿ ಮೂಡಿ ಬರುವ ಎಸ್.ಡಿ.ಎಂ. ಆಸ್ಪತ್ರೆ ಪ್ರಾಯೋಜಿತ ಕಾರ್ಯಕ್ರಮವೇ ಎಸ್.ಡಿ.ಎಂ. ಆರೋಗ್ಯ ಸಂವಾದ. 2006 ಎಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಆರೋಗ್ಯ ಸಂವಾದ ಕಾರ್ಯಕ್ರಮವು ಕಳೆದ 20 ವರ್ಷಗಳಲ್ಲಿ ಒಂದೂ ಮಂಗಳವಾರ ತಪ್ಪದೆ ಜನರಿಗೆ ಆರೋಗ್ಯ ಸೇವಾ ಸಲಹೆಯನ್ನು ನೀಡುತ್ತಾ ಬಂದಿದೆ. 2003-04ರಲ್ಲಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಗೊಂಡಾಗ ಆಕಾಶವಾಣಿ ಧಾರವಾಡ ಕೇಂದ್ರದವರ ಕೋರಿಕೆಯ ಮೇರೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಆರೋಗ್ಯ ಸಂವಾದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇಲ್ಲಿಯವರೆಗೆ ನಿರಂತರವಾಗಿ ನಡೆದು ಬಂದ ಈ ಆರೋಗ್ಯ ಸಂವಾದ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಆಸ್ಪತ್ರೆಯ ನೂರಾರು ವೈದ್ಯರುಗಳಿಂದ ಉತ್ತರ ಕರ್ನಾಟಕದ ಸಾವಿರಾರು ಮಂದಿ ತಮ್ಮ ಆರೋಗ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದೀಗ ನಿರಂತರ ವಿಂಶತಿ (20ನೇ) ವರ್ಷಕ್ಕೆ ಪಾದಾರ್ಪಣೆ ಮಾಡಿ, ಇದೇ ಜೂನ್ 17, 2025ಕ್ಕೆ 1000ನೇ ಸಂಚಿಕೆಯಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮ ದೇಶದ ಆಕಾಶವಾಣಿ ಕೇಂದ್ರಗಳಲ್ಲೇ ಇನ್ನೊಂದಿಲ್ಲ ಎಂದರೆ ತಪ್ಪಾಗಲಾರದು. ಇದರ ಪ್ರಯುಕ್ತ ದಿನಾಂಕ 17 ಜೂನ್, 2025ರಂದು ಮದ್ಯಾಹ್ನ 12.00ರಿಂದ 1.00ಗಂಟೆಯವರೆ ವಿಶೇಷ ನೇರ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸತ್ತೂರು, ಧಾರವಾಡ: ಕ್ರೀವಾ-2025 ಸಾಂಸ್ಕೃತಿಕ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ: ಕ್ರೀವಾ-2025 ಸಾಂಸ್ಕೃತಿಕ ಕಾರ್ಯಕ್ರಮ

ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜು “ಕ್ರೀವಾ 2025” - “ಅಸ್ತಿತ್ವದ ಸಾರ” ಎಂಬ ಧ್ಯೇಯೆಯೊಂದಿಗೆ 28ರಿಂದ 31 ಮೇ, 2025ರ ವರೆಗೆ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀವಾ 2025 ಕಲೆ, ಸಂಸ್ಕೃತಿ ಮತ್ತು ಸಂಗೀತಗಳನ್ನೋಳಗೊಂಡ ವಾರ್ಷಿಕ ಸಾಂಸ್ಕೃತಿಕ ವೇದಿಕೆಯಾಗಿದೆ. ಯುವ ಗಾಯಕ ಮತ್ತು ಸಂಗೀತ ಸಂಯೋಜಕರಾದ ವಿಶ್ವನಾಥ ಹಾವೇರಿ ಅವರು ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಗೌರವ ಅತಿಥಿಗಳಾಗಿ ಕ್ರೀವಾ-2025 ಲಾಂಛನವನ್ನು ಅನಾವರಣಗೊಳಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ನಿತೀಶ ಶೆಟ್ಟಿ ಕ್ರೀವಾದ ಅವಲೋಕನ ನೀಡಿದರು. ಚಾಂದನಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಲಲಿತಾ ಮತ್ತು ಹಾರ್ದಿಕ ಕಾರ್ಯಕ್ರಮವನ್ನು ನಿರೂಪಿಸಿದರು. ವೆದಾಂಗ ವಂದನಾರ್ಪಣೆ ಸಲ್ಲಿಸಿದರು.

ಸತ್ತೂರು, ಧಾರವಾಡ: ನಾನ್ ಇನ್ವ್ಸಿವ್ ವೆಂಟಿಲೇಷನ್ ಕುರಿತು ಒಂದು ದಿನದ ಕಾರ್ಯಾಗಾರ

Article Image

ಸತ್ತೂರು, ಧಾರವಾಡ: ನಾನ್ ಇನ್ವ್ಸಿವ್ ವೆಂಟಿಲೇಷನ್ ಕುರಿತು ಒಂದು ದಿನದ ಕಾರ್ಯಾಗಾರ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ 25 ಮೇ 2025 ರಂದು “ಆಮ್ಲಜನಕ ವಿತರಣಾ ಸಾಧನಗಳು” ಎಂಬ ವಿಷಯದೊಂದಿಗೆ “ನಾನ್ ಇನ್ವ್ಸಿವ್ ವೆಂಟಿಲೇಷನ್” ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಸುಮಾರು 170ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಡಾ. ಸಂಜಯ್, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಮಾಧುರಿ ಕುರ್ದಿ, ಕೆ.ಎಲ್.ಇ ಬೆಳಗಾವಿಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ಕುಲಕರ್ಣಿ, ಹುಬ್ಬಳ್ಳಿಯ ಜೆಜಿಎಂಎಂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ಹಿರೇಮಠ, ಬಿಜಾಪುರದ ಬಿ.ಎಲ್.ಡಿ.ಇ. ತುರ್ತು ಚಿಕಿತ್ಸಾ ವಿಭಾಗದ ಡಾ. ಉದಯಕುಮಾರ್ ಜೆ ಖಾಸಗೆ, ಕೆ.ಎಲ್.ಇ. ಬೆಳಗಾವಿಯ ಡಾ. ಗುರುಪ್ರಸಾದ್ ಆಂಟಿನ್ ಕಾರ್ಯಾಗಾರದ ಕುರಿತು ವಿಶೇಷ ತಜ್ಞ ಉಪನ್ಯಾಸ ನೀಡಿದರು. ಡಾ. ಸುಚಿತಾ ಹಾಗೂ ಡಾ. ನರೇಂದ್ರ ರೆಡ್ಡಿ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮೀ ಕಾರ್ಯಗಾರದ ಪ್ರಾಸ್ತಾವಿಕ ಭಾಷಣವನ್ನು ನೀಡಿದರು. ಡಾ. ರಜನಿಕಾಂತ ವಂದನಾರ್ಪಣೆ ಸಲ್ಲಿಸಿದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ: ಮೂರನೆ ಅಂತರರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭ

Article Image

ಯೋಗ ಮತ್ತು ಪ್ರಕೃತಿ ಚಿಕಿತ್ಸೆ: ಮೂರನೆ ಅಂತರರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭ

ಉಜಿರೆ: ದೇಹ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧವಿದ್ದು, ಔಷಧಿರಹಿತ ಪ್ರಕೃತಿಚಿಕಿತ್ಸೆ ಮೂಲಕ ನಾವು ಆರೋಗ್ಯಭಾಗ್ಯವನ್ನು ಹೊಂದಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಕೇಂದ್ರ ಸಚಿವ ಅರ್ಜುನ್‌ರಾಮ್ ಮೇಘವಾಲ್ ಹೇಳಿದರು. ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ ಯೋಗ ಮತ್ತು ಪ್ರಕೃತಿಚಿಕಿತ್ಸೆ ಬಗ್ಗೆ ಮೂರನೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು. ನಮ್ಮ ದೇಹ ಮತ್ತು ನಮ್ಮ ಸುತ್ತಲಿನ ಪ್ರಕೃತಿ, ಪರಿಸರ ಪಂಚಭೂತಗಳಿಂದ ರೂಪಿಸಲ್ಪಟ್ಟಿದೆ. ಎಲ್ಲದರಲ್ಲಿಯೂ ಅಧಿಕ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಆಹಾರ-ವಿಹಾರಕ್ಕೆ ದೇಹ ಸಹಕಾರಿಯಾದರೆ ಪ್ರೀತಿ-ವಿಶ್ವಾಸ, ಸೇವೆ, ಅನುಕಂಪ ಮೊದಲಾದ ಮಾನವೀಯಮೌಲ್ಯಗಳ ಉದ್ದೀಪನಕ್ಕೆ ಮನಸ್ಸು ಪ್ರೇರಕವಾಗಿದೆ. ಪರಿಶುದ್ಧ ಮನದೊಂದಿಗೆ ನಾವು ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬೆರೆತಾಗ ಸುಖ-ಶಾಂತಿ, ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಪರಂಪರೆ ತ್ಯಾಗ, ಸೇವೆ ಹಾಗೂ ಲೋಕಕಲ್ಯಾಣ ಕಾರ್ಯಗಳನ್ನು ಅವರು ಶ್ಲಾಘಿಸಿ ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಿದರು. ಇಂತಹ ಕಲ್ಯಾಣಕಾರ್ಯಗಳಿಂದ ಭಾರತ “ವಿಶ್ವಗುರು” ಮಾನ್ಯತೆ ಹೊಂದಿದೆ. ತಾವು ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರನ್ನು ದೆಹಲಿಯಲ್ಲಿ ತಮ್ಮ ಮನೆಗೆ ಆಹ್ವಾನಿಸಿ ಗೌರವಿಸುವುದಾಗಿ ಸಚಿವರು ತಿಳಿಸಿದರು. ಸಚಿವರು ಪ್ರಶ್ನೋತ್ತರ ರೂಪದಲ್ಲಿ ಪ್ರತಿನಿಧಿಗಳಿಂದಲೆ ಮಾಹಿತಿ ಪಡೆದು ತಮ್ಮ ಭಾಷಣವನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಯಶಸ್ವಿಯಾದರು. ಪ್ರತಿನಿಧಿಗಳ ಪರವಾಗಿ ಉತ್ತರ ಪ್ರದೇಶದ ಡಾ. ನೀರಜ್, ಆಂಧ್ರಪ್ರದೇಶದ ಡಾ. ಶಶಿಕಲಾ ಮತ್ತು ಪುತ್ತೂರಿನ ಡಾ. ಸುಲೇಖಾ ವರದರಾಜ್ ತಮ್ಮ ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸಿದರು. ಬೆಂಗಳೂರಿನ ಡಾ. ಸೀತಾರಾಮ ಜಿಂದಾಲ್ ಅವರ ವಿಶೇಷ ಸೇವೆ, ಸಾಧನೆಗಾಗಿ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪರವಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ. ಬಬಿನಾ ಪ್ರಶಸ್ತಿ ಸ್ವೀಕರಿಸಿದರು. ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ವಿಶೇಷ ಸೇವೆ ಮಾಡಿದ ಡಾ. ನವೀನ್ ಕೆ.ವಿ. ಡಾ. ಕನಕಸೋನಿ, ಡಾ. ಗಾಯತ್ರಿ, ಡಾ. ನಿತೇಶ್, ಡಾ. ರಾಘವೇಂದ್ರ ರಾವ್, ಡಾ. ಬಬಿನಾ, ಡಾ. ಮಂಜುನಾಥ್ ಮತ್ತು ಡಾ. ಅಖಿಲಾ ಅವರನ್ನು ಸನ್ಮಾನಿಸಲಾಯಿತು. ಡಾ. ನವೀನ್ ಕೆ.ವಿ. ವರದಿ ಸಾದರಪಡಿಸಿದರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ ಪ್ರಕೃತಿಚಿಕಿತ್ಸಾ ಪದ್ಧತಿಯಿಂದ ಔಷಧಿ ರಹಿತವಾಗಿ ಹೆಚ್ಚಿನ ರೋಗಗಳನ್ನು ಶಮನಗೊಳಿಸಬಹುದು. ಆಧುನಿಕ ಜೀವನಶೈಲಿ, ಆಹಾರ-ವಿಹಾರ ಹಾಗೂ ಪ್ರಕೃತಿಯಿಂದ ನಾವು ವಿಮುಖರಾಗಿರುವುದೇ ಹೆಚ್ಚಿನ ರೋಗಗಳು ಬರಲು ಕಾರಣ ಎಂದು ಅವರು ಹೇಳಿದರು. ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ. ಸುಜಾತ ಧನ್ಯವಾದವಿತ್ತರು.

ಮುಳಿಯ ಹೊಸ ಲೋಗೋ ಅನಾವರಣ

Article Image

ಮುಳಿಯ ಹೊಸ ಲೋಗೋ ಅನಾವರಣ

ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ ಲೋಗೊ ದೊಂದಿಗೆ ನಿಮ್ಮ ಮುಂದಿದೆ. ಜನಪ್ರಿಯ ಸೆಲೆಬ್ರಿಟಿ ರಮೇಶ್ ಅರವಿಂದ್ ಈ ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು. ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness) ನೀಡುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿಯಲಿದೆ. "ಇದೇ ತಿಂಗಳು ಹೊಚ್ಚ ಹೊಸತನದೊಂದಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಎಂದು ಮರುನಾಮಕರಣಗೊಳ್ಳಲಿದೆ. ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ ಹೊಸ ಲೋಗೋ ಆಧುನಿಕತೆಯನ್ನು ಮತ್ತು ಡಿಸೈನ್ ಎಲಿಮೆಂಟ್ ಹೊಂದಿದ್ದು ಹೊಸ ಟ್ರೆಂಡ್ ಗಳನ್ನು ಹೊರ ಸೂಸುತ್ತದೆ. ನಂಬಿಕೆ ಮತ್ತು ಪರಂಪರೆಯ ಜೊತೆಗೆ ಮುಳಿಯದ mascot ಆಗಿರುವ ಆನೆ ಮರಿ ದೃಢತೆ ಮತ್ತು ನಾಯಕತ್ವ ಮತ್ತು ಎಗ್ರೆಸಿವ್ ವಿಚಾರಗಳನ್ನು ಮುಂದಿಡುತ್ತದೆ" ಶುದ್ಧತೆ ಮೀರಿದ ಪರಿಪೂರ್ಣತೆ ಯೆಡೆಗೆ ಸಾಗಿ ಬಂದು ಮುಳಿಯ ತನ್ನ ಸುತ್ತಮುತ್ತ ಸಂತೋಷ ಉಣ ಬಡಿಸಿದೆ ಎನ್ನುತ್ತಾರೆ ಕೇಶವ ಪ್ರಸಾದ್ ಮುಳಿಯ. ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ-ಉಳಿಸುತ್ತಿರುವುದು ನಮ್ಮ ಮುಳಿಯ ಪರಂಪರೆ. ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ,- ಸಂತೋಷ ನೀಡಿದ್ದೇವೆ.. ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ.. Creating happiness (ಸದಾ ಸಂತೋಷ ) ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ" ಎನ್ನುತ್ತಾರೆ ಕೃಷ್ಣ ನಾರಾಯಣ ಮುಳಿಯ. "ಈ ಹೊಸ ಲೋಗೋವನ್ನು ಪುತ್ತೂರಿನ ಸಾಫ್ಟ್ವೇರ್ ಕಂಪನಿಯಾದ " ದ ವೆಬ್ ಪೀಪಲ್ "ಮಾಡಿರುತ್ತದೆ ಎಂದು ಮುಳಿಯ ಸಂಸ್ಥೆಯ ಬ್ರಾಂಡ್ ಮತ್ತು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಈ ಸಂದರ್ಭದಲ್ಲಿ ಲೋಗೋದ ವಿನ್ಯಾಸದ ಕುರಿತು ವಿವರಿಸಿದರು. ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂಜೀವ ಹಾಗೂ ದ ವೆಬ್ ಪೀಪಲ್ ಪಾಲುದಾರರಾದ ಆದಿತ್ಯ ಕಲ್ಲುರಾಯ ಮತ್ತು ಶರತ್ ಉಪಸ್ಥಿತರಿದ್ದರು...

ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ

Article Image

ಜೈವಿಕ ತಂತ್ರಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ

ವಿದ್ಯಾಗಿರಿ: ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನ ವಿಲೀನಗೊಂಡು ಸಂಶೋಧನಾ ಅಧ್ಯಯನ ನಡೆಸಲು ಪೂರಕ ವಾತವರಣ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಣಿಪಾಲ ಕೆಎಂಸಿಯ ಔಷಧಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕಿ ಡಾ. ರಮ್ಯಾ ಕಟೀಲ್ ಹೇಳಿದರು. ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಜೈವಿಕ ವಿಜ್ಞಾನ ವಿಭಾಗ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇದರ ಸಹಯೋಗದೊಂದಿಗೆ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ "ಜೈವಿಕ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ನಾವೀನ್ಯತೆಗಳು" ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವೈಜ್ಞಾನಿಕ ವಿಚಾರ ಸಂಕಿರಣವು ಸಂಶೋಧನಾರ್ಥಿಗಳಿಗೆ ಸೃಜನಾತ್ಮಕ ಜ್ಞಾನ, ವಿಚಾರ ವಿನಿಮಯ ಮತ್ತು ಅಧ್ಯಯನದಲ್ಲಿ ಪಾಲ್ಗೊಳ್ಳಲು ಸಹಕಾರಿ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇಲ್ಲಿನ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ, ಸಂಶೋಧನಾ ಪ್ರಬಂಧಗಳನ್ನು ತಯಾರಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ನಿರಾಕರಣೆಯಾಗುವ ಸಂಭವ ಎದುರಾಗಬಹುದು. ಪರಿಶ್ರಮ ಮತ್ತು ಸ್ಥಿರತೆಯಿಂದ ಅಧ್ಯಯನವನ್ನು ಪೂರ್ಣಗೊಳಿಸಿ. ಪ್ರತಿ ಅಧ್ಯಯನದಲ್ಲಿಯೂ ಕುತೂಹಲ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ಜೀವನದ ಪ್ರತಿ ಹಂತವನ್ನು ಸವಾಲಾಗಿ ಸ್ವೀಕರಿಸಿ, ಯಶಸ್ಸನ್ನು ಪಡೆಯಿರಿ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಸಂಶೋಧಕನಿಗೆ ಸಮಾಜದಲ್ಲಾಗುವ ಎಲ್ಲಾ ಪ್ರಚಲಿತ ಘಟನೆಗಳ ಅರಿವು ಬಹಳ ಅವಶ್ಯಕ ಎಂದು ತಿಳಿಸಿದರು. ಈ ರೀತಿಯ ವೈಜ್ಞಾನಿಕ ವಿಚಾರ ಸಂಕಿರಣ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಉತ್ತೇಜಿಸಲು ಪೂರಕ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧಿಕೃತ ಸಂಶೋಧನಾ ಲೇಖನಗಳ ಪುಸ್ತಕದ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ನಡೆದ ವಿವಿಧ ವಿಷಯವಾರು ಅಧಿವೇಶನಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಎಚ್. ಲಕ್ಷ್ಮಿಕಾಂತ, ಬೆಂಗಳೂರು ನ್ಯೂಟ್ರೇಸ್‌ನ ಎಲೆಕ್ಟ್ರೋ ಕೆಮಿಸ್ಟ್ರೀ ವಿಭಾಗದ ಪ್ರಧಾನ ಸಂಶೋಧಕಿ ಡಾ. ಹರ್ಷಿತಾ ಬಿ. ಎ. ಹಾಗೂ ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜಿನ ಜೀವ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಪ್ರಿಯಾಂಕಾ ಶ್ರೀಧರನ್‌ರಿಂದ ಉಪನ್ಯಾಸ ನಡೆಯಿತು. ಆಳ್ವಾಸ್ ಕಾಲೇಜು ಮತ್ತು ವಿವಿಧ ಕಾಲೇಜಿನ ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ 'ಜೈವಿಕ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ನಾವೀನ್ಯತೆಗಳು' ಕುರಿತ ಮೌಖಿಕ ಪ್ರಸ್ತುತಿ ಮತ್ತು ಪೋಸ್ಟರ್ ಪ್ರಸ್ತುತಿ ನೆರವೇರಿತು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಹಾಗೂ ಸಂಚಾಲಕ ಡಾ. ರಾಮ ಭಟ್ ಪಿ. ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಹನಾ ಪೂಜಾರಿ ನಿರೂಪಿಸಿ, ಅನಿಕೇತ ಸುಧೀರ್ ವಂದಿಸಿದರು.

ಮಂಗಳೂರು ವಿವಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ-ಖೋ ಟೂರ್ನಮೆಂಟ್ -2025

Article Image

ಮಂಗಳೂರು ವಿವಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ-ಖೋ ಟೂರ್ನಮೆಂಟ್ -2025

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್-2025ರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಪಿಯನ್ನು ಸತತ 17 ನೇ ಬಾರಿ ಹಾಗೂ ಮಹಿಳೆಯರ ತಂಡ ಹೆಚ್‌ವಿ ಕಮಲೇಶ್ ರೋಲಿಂಗ್ ಟ್ರೋಪಿಯನ್ನು ಸತತ 14ನೇ ಬಾರಿ ಪಡೆದು ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರುಷರ ಖೋ-ಖೋ ತಂಡ 27-5 ಅಂಕಗಳ ಅಂತರದಿಂದ ಪುತ್ತೂರಿನ ವಿವೇಕಾನಂದ ಕಾಲೇಜು ವಿರುದ್ಧ ಗೆಲುವು ಸಾಧಿಸಿದರೆ, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ತಂಡ ಏಕಪಕ್ಷೀಯವಾಗಿ 18-0 ಅಂಕಗಳ ಅಂತರದಲ್ಲಿ ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜು ವಿರುದ್ಧ ಗೆಲುವು ಸಾಧಿಸಿ ಎರಡು ವಿಭಾಗದಲ್ಲಿ ''ಸಮಗ್ರ ಪ್ರಶಸ್ತಿ'' ಗೆ ಭಾಜನವಾಯಿತು. ವೈಯಕ್ತಿಕ ಪುರುಷರ ಚಾಂಪಿಯನ್‌ಶಿಪ್‌ನಲ್ಲಿ "ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ"ಗೆ ಆಳ್ವಾಸ್ ಕಾಲೇಜಿನ ನಿಖಿಲ್ ಮತ್ತು"ಬೆಸ್ಟ್ ಡಿಫೆಂಡರ್ ಪ್ರಶಸ್ತಿ"ಗೆ ಪ್ರಮೋದ್ ಡಿ ಹಾಗೂ ವೈಯಕ್ತಿಕ ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲಿ "ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ"ಗೆ ಆಳ್ವಾಸ್ ಕಾಲೇಜಿನ ಪ್ರೇಕ್ಷಾ ಮತ್ತು ''ಬೆಸ್ಟ್ ಚೇಸರ್ '' ಪ್ರಶಸ್ತಿಗೆ ಕವನ ಭಾಜನರಾದರು. ಪುರುಷರ ವಿಭಾಗದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿಗೆ 4ನೇ ಸ್ಥಾನ, ಹಂಪನಕಟ್ಟೆ ವಿ. ವಿ ಕಾಲೇಜಿಗೆ ತೃತೀಯ ಸ್ಥಾನ, ಪುತ್ತೂರಿನ ವಿವೇಕಾನಂದ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 17ನೇ ಬಾರಿ''ಸಮಗ್ರ ಪ್ರಶಸ್ತಿ''ಲಭಿಸಿತು. ಮಹಿಳೆಯರ ವಿಭಾಗದ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ತೃತೀಯ ಸ್ಥಾನ, ಬೆಳ್ತಂಗಡಿಯ ಜಿಎಫ್‌ಜಿಸಿ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 14ನೇ ಬಾರಿ ''ಸಮಗ್ರ ಪ್ರಶಸ್ತಿ'' ಲಭಿಸಿತು. ಸಮಾರೋಪ ಸಮಾರಂಭ: ದೇಸಿ ಕ್ರೀಡೆಯಾದ ಖೋ- ಖೋ ಆಟವು ಕ್ರೀಡಾಳುಗಳಲ್ಲಿ ಉತ್ತಮ ಕ್ರೀಡಾ ಮನೋಭಾವವನ್ನು ಹುಟ್ಟು ಹಾಕುವ ಶಕ್ತಿ ಹೊಂದಿದೆ ಎಂದು ಆಳ್ವಾಸ್ ಪ. ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ ಎಂ ಸದಾಕತ್ ನುಡಿದರು. ಕ್ರೀಡೆಯಲ್ಲಿ ಮಾನವೀಯತೆ ಸಾರುವ ಮನೋಭಾವ ಬೆಳೆಸಿಕೊಳ್ಳಿ ಎಂದು ತಿಳಿಸಿದರು. ಖೋ-ಖೋ ಆಟದಲ್ಲಿ ಸ್ಪರ್ಧಾರ್ಥಿಗಳು ಕ್ರೀಡಾ ಸ್ಪೂರ್ತಿ, ಚುರುಕುತನ ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ಗೆಲ್ಲುವುದರ ಕಡೆಗೆ ಶ್ರಮವಿರಲಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಡಾ. ಪ್ರಸನ್ನ ಕುಮಾರ್ ಬಿ ಕೆ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ ಮಧು ಜಿ ಆರ್, ಆಳ್ವಾಸ್ ಹಣಕಾಸು ಅಧಿಕಾರಿ ಶಾಂತಾರಾಮ್ ಕಾಮತ್, ಆಳ್ವಾಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಲಕ್ ಶೆಟ್ಟಿ, ವಿವಿಧ ಕಾಲೇಜಿನ ಕ್ರೀಡಾ ನಿರ್ದೇಶಕರು, ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿಯಾ ಸೆಬಾಸ್ಟಿಯನ್ ನಿರೂಪಿಸಿದರು.

ರೋಟರಿ ಕ್ಲಬ್ ಬೆಳ್ತಂಗಡಿ : ಭಾರತೀಯ ಸೇನಾದಿನ ಆಚರಣೆ

Article Image

ರೋಟರಿ ಕ್ಲಬ್ ಬೆಳ್ತಂಗಡಿ : ಭಾರತೀಯ ಸೇನಾದಿನ ಆಚರಣೆ

ಬೆಳ್ತಂಗಡಿ : ಗಡಿ ಭಾಗ ಮತ್ತು ಯುದ್ಧ ಭೂಮಿಯ ಪ್ರತಿಯೊಂದು ಕ್ಷಣವು ರೋಚಕ. ಗುಡ್ಡ ಭಾಗದ ಹವಮಾನದ ಪರಿಸ್ಥಿತಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಪರಕೀಯರ ಸವಾಲುಗಳಿಗೂ ಸದಾ ಸಿದ್ದರಾಗಿರಬೇಕು. ಜೊತೆಯಲ್ಲಿ ಇದ್ದವರು ಕ್ಷಣಾರ್ಧದಲ್ಲಿ ಗುಂಡಿಗೆ ಬಲಿಯಾಗುವ ಸನ್ನಿವೇಶದ ವೇದನೆಗಳು ಹೇಳತೀರದು. ಪ್ರತಿ ಮನೆಯಲ್ಲಿನ ಒಂದು ಕ್ಷಣದ ಪ್ರಾರ್ಥನೆಯೇ ನಮ್ಮ ಆತ್ಮವಿಶ್ವಾಸ ಮತ್ತು ಆರೋಗ್ಯದ ಶಕ್ತಿ ಎಂದು ನಿವೃತ್ತ ಸೇನಾನಿ ವಿಕ್ಟರ್ ಕ್ರಸ್ತಾ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನದಲ್ಲಿ ನಡೆದ 77ನೇ ಭಾರತೀಯ ಸೇನಾದಿನದ ಆಚರಣೆಯಲ್ಲಿ ಮಾತನಾಡಿದರು. 1980 ರ ದಶಕದ ಯುದ್ಧ ಭೂಮಿಗಳು ಮತ್ತು ಗಡಿ ಭಾಗಗಳು ಈಗ ಸುಧಾರಿಸಿವೆ. ಸರ್ಕಾರಗಳು ಸೈನ್ಯದ ಅಭಿವೃದ್ಧಿಗೆ ಮನ್ನಣೆ ನೀಡಿದೆ. ಯುವ ತಲೆಮಾರಿಗೆ ಭಾರತ ಎದುರಿಸಿದ ಯುದ್ಧ ಸನ್ನಿವೇಶಗಳ ಇತಿಹಾಸವನ್ನು ಪರಿಚಯಿಸಬೇಕು. ಸಾಧ್ಯವಾದರೆ ಮುಂದೊಂದು ದಿನ ಇಸ್ರೇಲ್ ಮಾದರಿಯ ಸೈನ್ಯ ವ್ಯವಸ್ಥೆಯನ್ನು ಭಾರತದಲ್ಲೂ ಅಳವಡಿಸುವ ಮೂಲಕ ಯುವ ಜನತೆಯನ್ನು ಸೈನ್ಯದೆಡೆಗೆ ಪ್ರೇರೇಪಿಸಬೇಕು ಎಂದರು. ಈ ಸಂದರ್ಭದಲ್ಲಿ ಅಲಹಬಾದ್, ರಾಜಸ್ಥಾನ್, ಅರುಣಾಚಲ, ಜಮ್ಮು ಇತ್ಯಾದಿ ಗಡಿಭಾಗಗಳಲ್ಲಿ ತಾವು ಅನುಭವಿಸಿದ ರೋಚಕ ಕ್ಷಣಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ಸೈನಿಕರು ಕೊರೆಯುವ ಚಳಿ, ಸುಡುವ ಬಿಸಿಲಿನ ನಡುವೆಯೂ ಪ್ರಾಣ ಪಣಕ್ಕಿಟ್ಟು ದೇಶ ಸೇವೆ ಸಲ್ಲಿಸುವ ಬದುಕು ನಮಗೆಲ್ಲರಿಗು ಪ್ರೇರಣೆಯಾಗಬೇಕು. ನಮ್ಮ ಪ್ರತಿದಿನದ ಪ್ರಾರ್ಥನೆಯಲ್ಲಿ ಹಗಲಿರುಳು ದೇಶ ಕಾಯುವ ವೀರ ಯೋಧರಿಗಾಗಿ ಒಂದು ನಿಮಿಷವಾದರೂ ಮೀಸಲಿಡಬೇಕು ಎಂದರು. ಇದೇ ಸಂದರ್ಭದಲ್ಲಿ 1981 ರಿಂದ 1998ರ ವರೆಗೆ ದೇಶದ ಹಲವು ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಕ್ಟರ್ ಕ್ರಸ್ತಾ ರವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಪೂರನ್ ವರ್ಮ, ಕಾರ್ಯದರ್ಶಿ ರೋ.ಸಂದೇಶ್ ಕುಮಾರ್ ರಾವ್,ರೋ.ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು, ರೋ.ಅರುಣ್, ರೋ‌.ಅರವಿಂದ ಕಾರಂತ್, ರೋ. ಪ್ರವೀಣ್ ಗೋರೆ ಮತ್ತು ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ರೋ. ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ನಿರೂಪಿಸಿ,ವಂದಿಸಿದರು. ಬಾಲ್ಯದಿಂದಲೂ ಭಾರತಮಾತೆಯ ಸೇವೆಸಲ್ಲಿಸಬೇಕೆಂಬ ಕನಸ್ಸು ಕಂಡು, ಭಾರತೀಯ ಸೈನ್ಯ ಸೇರಿ ನಿವೃತ್ತನಾದೆ. ಸೈನಿಕರೂ ತಮ್ಮ ಸರ್ವಸ್ವವನ್ನೆಲ್ಲ ತೊರೆದು ಗಡಿಭಾಗಗಳಲ್ಲಿ ಶ್ರಮಿಸುತ್ತಾರೆ.ಕೆಲವೊಮ್ಮೆ ಅನೀರಿಕ್ಷಿತರಾಗಿ ಗುಡ್ಡ ಕುಸಿತ , ಪರಕೀಯರ ದಾಳಿಗಳಿಗೆ ಬಲಿಯಾಗಿ ವೀರ ಯೋಧರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಮಾಜ ಅವರ ಕುಟುಂಬದ ಜವಾಬ್ದಾರಿಯನ್ನು ಹೊರಬೇಕು. ಸೈನ್ಯ ದಿನ, ಕಾರ್ಗಿಲ್ ವಿಜಯ ದಿನದಂತ ಸಂದರ್ಭಗಳಲ್ಲಿ ಯೋಧರನ್ನು ಸ್ಮರಿಸುವುದರ ಜೊತೆಗೆ, ಸರ್ಕಾರ ಮರಣ ಹೊಂದಿದ ಸೈನಿಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಗಮನಿಸಬೇಕು. - ವಿಕ್ಟರ್ ಕ್ರಸ್ತಾ, ನಿವೃತ್ತ ಸೇನಾನಿ, ಭೂಸೇನೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ

10ನೇ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನ “SDM MitO24” (ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್, ಭಾರತ) “ಮೈಟೊಕಾಂಡ್ರಿಯ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಪ್ರಗತಿ” ಎಂಬ ಧ್ಯೆಯೆಯೊಂದಿಗೆ ನವೆಂಬರ್ 11 ರಿಂದ 12 ರವರೆಗೆ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ಸುಮಾರು 100ಕ್ಕೂ ಹೆಚ್ಚು ತಜ್ಞ ಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಮತ್ತು ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತಿತರ ಗಣ್ಯರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಡಾ. ನಿರಂಜನ ಕುಮಾರ್ ಮಾತನಾಡುತ್ತಾ: ಮೈಟೊಕಾಂಡ್ರಿಯವು ಎಲ್ಲಾ ಜೀವಕೋಶಗಳ ಶಕ್ತಿ ಕೇಂದ್ರವಾಗಿದೆ. ಮೈಟೊಕಾಂಡ್ರಿಯದ ಕಾಯಿಲೆಗಳು ಬಹಳ ಅಪರೂಪದ ಕಾಯಿಲೆಗಳಾಗಿದ್ದು ಜೀವಕೋಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ರೋಗಗಳನ್ನು ಗುಣಪಡಿಸಬಹುದು. ಜೀವನದ ಗುಣಮಟ್ಟವನ್ನು ಆಧರಿಸಿ ಸಂಶೋಧನೆ ಮಾಡಬೇಕು. ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಮೈಟೊಕಾಂಡ್ರಿಯದ ಸಂಶೋಧನೆಗಳು ಪ್ರಗತಿಯಲ್ಲಿವೆ. ಸೊಸೈಟಿ ಆಫ್ ಮೈಟೊಕಾಂಡ್ರಿಯಾ ರಿಸರ್ಚ್ ಆ್ಯಂಡ್ ಮೆಡಿಸಿನ್, ಭಾರತದ ಅಧ್ಯಕ್ಷರಾದ ಡಾ. ಕೆ ತಂಗರಾಜ್ ಅವರು ಸೊಸೈಟಿಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಮ್ಮೇಳನದ ಭಾಗವಾಗಿ ಬಿತ್ತಿಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ಅತ್ಯುತ್ತಮ ಬಿತ್ತಿಪತ್ರ ಪ್ರಶಸ್ತಿ ಮತ್ತು ಯುವ ವಿಜ್ಞಾನಿಗಳ ಪ್ರಶಸ್ತಿಗಳನ್ನು ನೀಡಲಾಯಿತು. ಸಂಶೋಧನ ನಿರ್ದೇಶಕ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಡಾ. ಕೆ. ಸತ್ಯಮೂರ್ತಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಅರವಿಂದ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ. ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಜಯ್ ಕುಮಾರ್ ಓಲಿ ವಂದನಾರ್ಪಣೆ ಸಲ್ಲಿಸಿದರು.

ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್

Article Image

ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಚರ್ಮರೋಗ ಮತ್ತು ದೈಹಿಕ ಶಿಕ್ಷಣ ವಿಭಾಗ, ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಮತ್ತು ಇಂಟರ್‌ನ್ಯಾಶನಲ್ ಆರ್ಬಿಟರ್, ಪ್ರಮೋದ್ ಮೋರೆ ಅವರ ಸಹಯೋಗದೊಂದಿಗೆ ಎಸ್.ಡಿ.ಎಂ. ಡೆಂಟಲ್ ಕಾಲೇಜಿನಲ್ಲಿ ಅಕ್ಟೋಬರ್ 02, 2024 ರಂದು “ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿಯನ್ನು” ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ದೇಶದಾದ್ಯಂತ 12 ಟೈಟಲ್ಡ್ ಮತ್ತು 2 ಅಂತರಾಷ್ಟ್ರೀಯ ಆಟಗಾರರು ಸೇರಿದಂತೆ ಒಟ್ಟು 277 ಆಟಗಾರರು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್. ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಮತ್ತು ಏಕಾಗ್ರತೆಯ ಮನಸ್ಸಿಗೆ ಚೆಸ್ ಆಟವು ಉತ್ತಮವಾಗಿದೆ ಎಂದರು. ಪಂದ್ಯಾವಳಿಯ ನಿರ್ದೇಶಕರಾದ ಡಾ. ನವೀನ್ ಕೆ.ಎನ್, ಸಹ ನಿರ್ದೇಶಕಿಯಾದ ಡಾ. ಶ್ವೇತಾ ಪ್ರಭು, ಸಂಘಟನಾ ಕಾರ್ಯದರ್ಶಿ ಅನುರಾಗ ಖನ್ನೂರ್, ಎಸ್.ಡಿ.ಎಂ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಸ್. ಜಿ. ಕೊಪ್ಪದ್, ಡಾ. ಶರದ್ ಜವಳಿ, ಎಸ್.ಡಿ.ಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾರಾಷ್ಟ್ರದ ಶ್ರೀ ಆಕಾಶ್ ದಳವಿ 8 ಅಂಕಗಳೊಂದಿಗೆ ಪ್ರಥಮ, ನವಲಗುಂದ ನಿರಂಜನ್ 8 ಅಂಕಗಳೊಂದಿಗೆ ದ್ವಿತಿಯ ಮತ್ತು 7.5 ಅಂಕಗಳೊಂದಿಗೆ ಮೊಹಮ್ಮದ ನುಬೇರಷಾ ಶೇಖ್ ತೃತೀಯ ಸ್ಥಾನ ಪಡೆದಿದ್ದಾರೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ ಅವರ ಉಪಸ್ಥಿತಿಯಲ್ಲಿ ಎಲ್ಲಾ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಹಾರ್ದಿಕ್ ರಾಣೆ ಅತಿಥಿಗಳನ್ನು ಸ್ವಾಗತಿಸಿದರು. ಆದಿತ್ಯ ಟಿ ಕಾರ್ಯಕ್ರಮ ನಿರೂಪಿಸಿದರು. ಪಂಚಮಿ ಸರ್ಪಂಗಳ ವಂದನಾರ್ಪಣೆ ಸಲ್ಲಿಸಿದರು.

ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ

Article Image

ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ

ಧಾರವಾಡ : ಎಸ್.ಡಿ.ಎಂ. ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಅವರಿಗೆ ಕರ್ನಾಟಕ ಸರಕಾರದಿಂದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ವಿಭಾಗದ 2022ನೇ ಸಾಲಿನ ಪ್ರತಿಷ್ಠಿತ ರಾಜಾ ರಾಮಣ್ಣ ಪ್ರಶಸ್ತಿ ಲಭಿಸಿರುತ್ತದೆ. ಸೆಪ್ಟಂಬರ್ 26ರಂದು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೋ. ಸಿ.ಎನ್.ಆರ್. ರಾವ್, ಶ್ರೀ. ಎನ್. ಎಸ್. ಬೋಸರಾಜು, ಮಂತ್ರಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷರಾದ ಪ್ರೊ. ಎ. ಎಸ್. ಕಿರಣ್ ಕುಮಾರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್, ಡಾ. ಎಕ್ರೂಪ್ ಕೌರ್, ಐ.ಎ.ಎಸ್, ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ & ತಂತ್ರಜ್ಞಾನ ಕರ್ನಾಟಕ ಸರ್ಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಳೆದ 35 ವರ್ಷಗಳಲ್ಲಿ ಡಾ. ಸತ್ಯಮೂರ್ತಿ ಅವರು ರೂಪಾಂತರಗಳು, ಕಾರ್ಯವಿಧಾನಗಳು, ರೋಗನಿರ್ಣಯ ಮತ್ತು ಚಿಕಿತ್ಸಕ ತಂತ್ರಗಳ ಪ್ರಮುಖ ಸಂಶೋಧನೆಗಳನ್ನು ಸಂಶೋಧಿಸಿರುತ್ತಾರೆ. ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕುರಿತು ಅವರ ಸಂಶೋಧನೆಯು ಉತ್ತಮ ರೀತಿಯಲ್ಲಿ ಗುರುತಿಸಲ್ಪಟ್ಟಿದೆ. ಅವರು ಪ್ರಕೃತಿ ಮತ್ತು ಚಿಕಿತ್ಸೆಯಂತಹ ಆಯುರ್ವೇದ ತತ್ವಗಳ ಸಮಕಾಲೀನ ಜ್ಞಾನವನ್ನು ಗಣನೀಯವಾಗಿ ಮುನ್ನಡೆಸಿ, 350 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳು ಮತ್ತು 18 ಪೇಟೆಂಟ್‌ಗಳೊಂದಿಗೆ , ಅವರು ಮಾನವ ರೋಗ, ರೋಗನಿರ್ಣಯ, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ವಿಜ್ಞಾನ ಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭ

Article Image

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಛಾಯಾಗ್ರಹಣ (ಫೋಟೊಗ್ರಫಿ) ವಿಶಿಷ್ಟ ಕಲೆಯಾಗಿದ್ದು, ಸಮಯ, ಸಂದರ್ಭ ಮತ್ತು ಭಾವನೆಗಳನ್ನು ಗಮನಿಸಿ ಫೋಟೊ ತೆಗೆಯುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಬೆಳಕು, ಮುಖದ ಭಾವನೆಗಳು, ಹಾಗೂ ಮಾನಸಿಕ ಸ್ಥಿತಿಯನ್ನು ಗಮನಿಸಿ ಫೋಟೊ ತೆಗೆದರೆ ಮಾತ್ರ ಅದು ಆಕರ್ಷಕವಾಗಿ ಮೂಡಿ ಬರಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಇಂದು ವಿವಿಧ ರೀತಿಯ ಪ್ರಿಂಟಿಂಗ್ ಪೇಪರ್‌ಗಳು ಬಂದಿವೆ. ಅದರ ಬಗ್ಯೆಯೂ ಮಾಹಿತಿ ಕಲೆ ಹಾಕಿ, ಆಲ್ಬಂ ಮಾಡುವಾಗಲೂ ಹತ್ತು ಸಾರಿ ಮತ್ತೆ ಮತ್ತೆ ನೋಡುವಂತೆ ಅದನ್ನು ತಯಾರಿಸಬೇಕು. ಜೀವನದಲ್ಲಿ ಉತ್ತಮ ಶಿಸ್ತನ್ನು ಕೂಡಾ ಅಳವಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತುಸಂಗ್ರಹಾಲಯದಲ್ಲಿ 700 ಕ್ಯಾಮರಾಗಳು ಇವೆ. ಕ್ಯಾಮರಾಗಳ ಮೌಲ್ಯವರ್ಧನೆ ಹಾಗೂ ಮಾದರಿಗಳನ್ನು ಗಮನಿಸಿ ಬುದ್ಧಿವಂತಿಕೆಯಿಂದ ಪ್ರಗತಿ ಸಾಧಿಸಬೇಕು ಎಂದು ಹೆಗ್ಗಡೆಯವರು ತಿಳಿಸಿದರು. “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ರುಡ್‌ಸೆಟ್ ಬೆಳೆದು ಬಂದ ವಿಧಾನದ ಅವಲೋಕನ ಮಾಡಿದರು. ಜಯರಾಮ ಮತ್ತು ಸಿದ್ದಾರ್ಥ ತರಬೇತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮತ್ತು ಅತಿಥಿ ಉಪನ್ಯಾಸಕ ಸೂರ್ಯಪ್ರಕಾಶ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.

ಶಿಷ್ಯವೇತನ: ಅರ್ಜಿ ಆಹ್ವಾನ

Article Image

ಶಿಷ್ಯವೇತನ: ಅರ್ಜಿ ಆಹ್ವಾನ

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ಪದವಿ, ಡಿಪ್ಲೊಮಾ ಮತ್ತು ವೃತ್ತಿಪರ ಪದವಿವರೆಗೆ ರಾಜ್ಯದಲ್ಲಿರುವ ಹಾಗೂ ಸರಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ರಾಜ್ಯದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 1ನೇ ತರಗತಿಯಿಂದ ಅಂತಿಮ ವರ್ಷದ ಪದವಿ ಹಾಗೂ ಡಿಪ್ಲೊಮಾವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆ.15 ಹಾಗೂ ವೃತ್ತಿಪರ ಪದವಿ ವಿದ್ಯಾರ್ಥಿಗಳು ಅ.15ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

First Previous

Showing 1 of 2 pages

Next Last