ಧಾರವಾಡ: ವಿಶ್ವ ಅಧಿಕ ರಕ್ತದೊತ್ತಡ ದಿನ
ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇತ್ತೀಚೆಗೆ “ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ” ಎಂಬ ಧ್ಯೇಯೆಯೊಂದಿಗೆ “ವಿಶ್ವ ಅಧಿಕ ರಕ್ತದೊತ್ತಡ ದಿನ”ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ರ್ಯಾಲಿ ಮತ್ತು ಅಧಿಕ ರಕ್ತದೊತ್ತಡ ತಡೆಯುವ ಪ್ರತಿಜ್ಞೆ ಸ್ವೀಕಾರ, ವೃದ್ದಾಶ್ರಮ ಭೇಟಿ, ಆರೋಗ್ಯ ಸಂಸ್ಥೆಗಳಲ್ಲಿ ರಕ್ತದೊತ್ತಡ ಪರೀಕ್ಷಿಸುವುದು, ರಸಪ್ರಶ್ನೆ ಹಾಗೂ ಬಿತ್ತಿಪತ್ರ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವೈದ್ಯಕೀಯ ವiಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕಿಯವರಾದ ಡಾ. ಪುಷ್ಪಾ ಪಾಟೀಲ್ ಅವರು ರ್ಯಾಲಿಯನ್ನು ಉದ್ಘಾಟಿಸಿ, ಮಾತನಾಡುತ್ತಾ: 40 ವರ್ಷ ಮೇಲ್ಪಟ್ಟ ಜನರು ಆಗಾಗ ಅಧಿಕ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ರಕ್ತದೊತ್ತಡದಿಂದ ಅನೇಕ ಆರೋಗ್ಯ ಸಮಸ್ಯೆಗಳುಂಟಾಗುವುದರಿಂದ ಆಗಾಗ ವೈದ್ಯರ ಹತ್ತಿರ ತಪಾಸಣೆ ಮಾಡುತ್ತಿರಬೇಕು. ಯಾವುದೇ ರೋಗ ಲಕ್ಷಣಗಳು ಕಾಣದೆ ಕೆಲವೊಮ್ಮೆ ಅಧಿಕ ರಕ್ತದೊತ್ತಡವು ಅನುವಂಶೀಯವಾಗಿರಬಹುದು. ಆರೋಗ್ಯಕರ ಆಹಾರ ಸೇವನೆ, ಯೋಗ, ಧ್ಯಾನ, ವ್ಯಾಯಾಮಗಳೊಂದಿಗೆ ಉತ್ತಮ ಜೀವನ ಶೈಲಿಯಿಂದ ರೋಗಗಳನ್ನು ತಡೆಯಬಹುದು ಎಂದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ವೈದ್ಯರಾದ ಡಾ. ದೀಪ್ತಿ ಮತ್ತು ಡಾ. ವಂದನಾ, ಎಸ್.ಡಿ.ಎಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ, ಮಲ್ಲಿಕಾರ್ಜುನ ಪಿ., ರೇಣುಕಾ ಬಾಗೇವಾಡಿ, ಪ್ರವೀಣ ತುಪ್ಪದ್ ಹಾಗೂ ಲಕಮಾಪುರ ಗ್ರಾಮ ಪಂಚಾಯಿತಿ ಮುಖಂಡರು ಉಪಸ್ಥಿತರಿದ್ದರು. ಲಕಮಾಪುರ ಗ್ರಾಮಸ್ಥರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸೋಮಶೇಖರ್ ಕೊಡ್ಲಿವಾಡ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.
