Article Image

ವೇಣೂರು: ವಾರ್ಷಿಕ ಮಹೋತ್ಸವ

Article Image

ವೇಣೂರು: ವಾರ್ಷಿಕ ಮಹೋತ್ಸವ

ವೇಣೂರು: ಭಗವಾನ್‌ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಪರಮ ಪೂಜ್ಯ "ಭಾರತಭೂಷಣ" ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ದಿನಾಂಕ 1-06-2025ನೇ ಆದಿತ್ಯವಾರದಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಲಿರುವುದು.

ಉಪನ್ಯಾಸ ಕಾರ್ಯಕ್ರಮ

Article Image

ಉಪನ್ಯಾಸ ಕಾರ್ಯಕ್ರಮ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಬಹು ನಿರೀಕ್ಷಿತ ಮತ್ತು ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾದ ಪ್ರತಿ ತಿಂಗಳು ಕೊನೆಯ ಶನಿವಾರ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮಾಸಿಕ ಸರಣಿ ಉಪನ್ಯಾಸ ಮಾಲಿಕೆ ದಿವ್ಯ ವಾಣಿ ಯು ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠದ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈಗಾಗಲೇ ಎರಡು ಉಪನ್ಯಾಸಗಳು ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಮೂರನೇ ಉಪನ್ಯಾಸ ಕಾರ್ಯಕ್ರಮವನ್ನು ಹುಬ್ಬಳ್ಳಿ ಗೋಕುಲ ರಸ್ತೆ ಮಾನಸಗಿರಿ ಇಲ್ಲಿನ ಮಹಾವೀರ ಭವನದಲ್ಲಿ ದಿನಾಂಕ 31-5-2025ರಂದು ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರು ಜೈನ ಅಧ್ಯಯನ ಪೀಠದ ಸಂಯೋಜಕರೂ ಆದ ಡಾ. ಜಿನದತ್ತ ಹಡಗಲಿ ಇವರು ವಹಿಸಲಿದ್ದು ಹಿರಿಯ ಉಪನ್ಯಾಸಕ ಡಾ. ವೈ ಎಮ್ ಭಜಂತ್ರಿ ಇವರು ಶೃತ ಪಂಚಮಿ ಮತ್ತು ಅದರ ಮಹತ್ವ ಕುರಿತಾಗಿ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಇಲ್ಲಿನ ತ್ರಿಕೂಟ ಬಸದಿಯ ಭ. ಮಹಾವೀರ ಜೈನ ಹಿತವರ್ಧಕ ಸಂಘದ ಮತ್ತು ಸನ್ಮತಿ ಮಹಿಳಾ ಮಂಡಳದ ಪದಾಧಿಕಾರಿಗಳ ಗೌರವ ಉಪಸ್ಥಿತಿ ಇರಲಿದೆ. ಟ್ರಸ್ಟಿನ ಗೌರವಾಧ್ಯಕ್ಷ ಡಾ. ಅಜಿತ್ ಪ್ರಸಾದ, ಹುಬ್ಬಳ್ಳಿ ಜೈನ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಜೈನ್ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ್ ಸೇರಿದಂತ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿ ಹಾಗೂ ಉಪನ್ಯಾಸ ಮಾಲಿಕೆಯ ಪ್ರೇರಕರೂ ಆದ ಎಸ್.ಆರ್. ಮಲ್ಲಸಮುದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಂತರಾಜ ಮಲ್ಲಸಮುದ್ರ

ಹೊಂಬುಜ: ಶ್ರುತ ಪಂಚಮಿ ಆಚರಣೆ

Article Image

ಹೊಂಬುಜ: ಶ್ರುತ ಪಂಚಮಿ ಆಚರಣೆ

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ 'ಶ್ರುತ ಪಂಚಮಿ ಮಹೋತ್ಸವ' ವನ್ನು ಮೇ. 31, 2025ರ ಶನಿವಾರದಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ಸದ್ಧರ್ಮ ಬಾಂಧವರು ಈ ಪೂಜಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬೇಕಾಗಿ ವಿನಂತಿ. ಸಂಪರ್ಕ: 08185-262722, 9481453653, 9483801460

ಕು. ಸಾನ್ವಿ ಮಲ್ಲಸಮುದ್ರಗೆ ಅಮೇರಿಕ ಅಧ್ಯಕ್ಷರಿಂದ ಶ್ರೇಷ್ಠ ಶೈಕ್ಷಣಿಕ ಅವಾರ್ಡ್

Article Image

ಕು. ಸಾನ್ವಿ ಮಲ್ಲಸಮುದ್ರಗೆ ಅಮೇರಿಕ ಅಧ್ಯಕ್ಷರಿಂದ ಶ್ರೇಷ್ಠ ಶೈಕ್ಷಣಿಕ ಅವಾರ್ಡ್

ಅಮೇರಿಕಾದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ಧಾರವಾಡದ ಲೇಖಕ ಶಾಂತರಾಜ ಮಲ್ಲಸಮುದ್ರ ಇವರ ಮೊಮ್ಮಗಳಾದ *ಕುಮಾರಿ ಸಾನ್ವಿ ಸೂರಜ ಮಲ್ಲಸಮುದ್ರ* ಇವಳಿಗೆ 2024 ಶೈಕ್ಷಣಿಕ ವರ್ಷದಲ್ಲಿ "President's award for educational excellence" ದೊರೆತಿದೆ. ಶಿಕ್ಷಣದಲ್ಲಿ ಸರ್ವಾ0ಗೀಣ ಉತ್ತಮ ಪ್ರಗತಿ ಮತ್ತು ಹಿರಿಮೆಯನ್ನು ಗುರುತಿಸಿ ಕೊಡುತ್ತಿರುವ ಈ ಪ್ರತಿಷ್ಠಿತ ಅವಾರ್ಡ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದಿನಾಂಕ 23-5-2024 ರಂದು ಪ್ರದಾನ ಮಾಡಲಾಯಿತು. ಇವಳು ಶಿಕ್ಷಣದಲ್ಲಿ ಮಾತ್ರವಲ್ಲ ಅತ್ಯಂತ ಸಾಹಸದ ಕ್ರೀಡೆಯಾದ "ಈಜು" (swimming ) ನಲ್ಲೂ ಓಲಂಪಿಕ್ ಆಯ್ಕೆಗಾಗಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾಳೆ. ಈಗಾಗಲೇ ಈ ಕ್ರೀಡೆಯಿಂದ ಹಲವು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾಳೆ. ಭಾರತ ದೇಶದ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿದ ಕು. ಸಾನ್ವಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ನಿಮ್ಮೆಲ್ಲರ ಪ್ರೋತ್ಸಾಹ ಶುಬೇಚ್ಚೆ ಆಶೀರ್ವಾದ ಇರಲೆಂದು ಅಪೇಕ್ಷಿಸುತ್ತೇವೆ.

ವಿಮಲ ತಾಳಿಕೋಟಿ -ಸೇವಾರತ್ನ

Article Image

ವಿಮಲ ತಾಳಿಕೋಟಿ -ಸೇವಾರತ್ನ

ಸಿಂಗಾಪುರ: ಬೆಂಗಳೂರಿನ ಸುಹಾಸ್ತಿ ಯುವ ಜೈನ ಮಿಲನ್ ಸಂಘಟನೆಯು ಸಿಂಗಾಪುರದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಜೈನ ಮಿಲನ್ ಸದಸ್ಯರ ಸಮಾವೇಶ "ಜಿನ ಸಮ್ಮಿಲನ"ದಲ್ಲಿ ಹುಬ್ಬಳ್ಳಿಯ ಸಮಾಜ ಸೇವಾಕರ್ತ ವಿಮಲ್ ತಾಳಿಕೋಟಿ ಅವರಿಗೆ, ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸೇವೆಗಾಗಿ "ಸೇವಾರತ್ನ" ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ ಗೌರವಿಸಲಾಯಿತು. ನವಗ್ರಹ ತೀರ್ಥ, ವರೂರಿನ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕರು, ಅಖಿಲ ಭಾರತ ಜೈನ ಮಿಲನ್ ಕಾರ್ಯಧ್ಯಕ್ಷ ಡಿ. ಸುರೇಂದ್ರಕುಮಾರ, ಅನಿತಾ ಸುರೇಂದ್ರಕುಮಾರ್, ಸುಹಾಸ್ತಿ ಜೈನ ಮಿಲನ್ ನ ಚಿತ್ತ ಜಿನೇಂದ್ರ ವಜ್ರ ಕುಮಾರ್, ಜಿನೇಂದ್ರ ಕಣಗಾವಿ ಯುವರಾಜ್ ಜೈನ್, ಮಾಳ ಹರ್ಷೇಂದ್ರ ಉಪಸ್ಥಿತರಿದ್ದರು. ಕರ್ನಾಟಕದಿಂದ 250ಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಿಂಗಪುರದ ಜೈನ್ ಸಮಾಜ ಅತ್ಯುತ್ತಮ ಸಹಕಾರ ನೀಡಿದರು. ಶಾಂತಿನಾಥ ಕೆ ಹೋತಪೇಟಿ

ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ

Article Image

ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ

ಸಹ್ಯಾದ್ರಿಯ ತಪ್ಪಲಿನಲ್ಲಿರುವ ಮಲೆನಾಡಿನ ಸುಂದರ ನಗರ ಶಿವಮೊಗ್ಗದ ಮಹಾವೀರ ನಗರದಲ್ಲಿರುವ ‌ಭಗವಾನ್‌ 1008 ಶ್ರೀ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ಮಾನ ಸ್ಥಂಭೋಪರಿ 24 ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆ, ನೂತನ ಶಿಲಾಮಯ ಗರ್ಭಗುಡಿಯಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ದೇವಿ ಮತ್ತು ಕ್ಷೇತ್ರಪಾಲ ಪ್ರತಿಷ್ಠಾಪನೆ, ನಾಗ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನ ಹಾಗೂ ನೇತೃತ್ವ ಮತ್ತು ನಾಡಿನ ಸಮಸ್ತ ಭಟ್ಟಾರಕ ಶ್ರೀಗಳವರ ಪಾವನ ಸಾನ್ನಿಧ್ಯದಲ್ಲಿ ಇಂದಿನಿಂದ (ಮೇ. 28) ಮೊದಲ್ಗೊಂಡು ಮೇ. 30ರವರೆಗೆ ಮೂರು ದಿನಗಳ ಕಾಲ ವೈಭವಪೂರ್ಣವಾಗಿ ಜರುಗಲಿದೆ.

'ಭುವನವಾಹಿನಿ' ಅಂಕಣಕಾರ ಎಂ.ರತ್ನ ಕುಮಾರ್ ರಿಗೆ ಕ.ಸಾ.ಪ. ಸನ್ಮಾನ

Article Image

'ಭುವನವಾಹಿನಿ' ಅಂಕಣಕಾರ ಎಂ.ರತ್ನ ಕುಮಾರ್ ರಿಗೆ ಕ.ಸಾ.ಪ. ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ 'ಹಿರಿಯ ಕವಿ ಮನೆ ಭೇಟಿ' ಸರಣಿ ಕಾರ್ಯಕ್ರಮದನ್ವಯ ಈ ಬಾರಿ ಕನ್ನಡದ ದೈನಿಕಗಳಾದ ನವ ಭಾರತ, ಉದಯವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಜೈನ ಮಾಸಿಕ 'ಭುವನವಾಹಿನಿ' ಪತ್ರಿಕೆಯ ಅಂಕಣಕಾರರಾಗಿರುವ ಹಿರಿಯ ಕನ್ನಡ, ತುಳು ಸಾಹಿತಿ ರತ್ನ ಕುಮಾರ್ ಎಂ. ಅವರ ಮನೆಗೆ ಭೇಟಿ ನೀಡಿ ಅವರನ್ನು ಹಾರ, ಶಾಲು, ಪೇಟ, ಶ್ರೀಫಲಾದಿಗಳನ್ನು ಸಮರ್ಪಿಸಿ, ಸನ್ಮಾನಿಸಿ, ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನ ಕುಮಾರರು, ತಾನು ಬೆಳೆದು ಬಂದ ಹಾದಿಯನ್ನು ಹಂಚಿಕೊಂಡು "ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಸಾಹಿತಿಗಳಂತೂ ಹೊಸ ದೃಷ್ಟಿ, ಹೊಸ ಸೃಷ್ಟಿಯೊಂದಿಗೆ ಹೊಸ ಕೊಡುಗೆಗಳನ್ನು ನೀಡುತ್ತಲೇ ಇರಬೇಕು. ಹಿರಿಯ ಕವಿಗಳನ್ನು ಮನೆಗೇ ಬಂದು ಆತ್ಮೀಯವಾಗಿ ಸನ್ಮಾನಿಸುವ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ" ಎಂದು ನುಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕ. ಸಾ. ಪ. ಕೇಂದ್ರ ಮಾರ್ಗದರ್ಶನ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗಣೇಶ ಪ್ರಸಾದಜೀ ರತ್ನ ಕುಮಾರ್ ರ ಬದುಕು ಬರಹಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಪ್ರತಿನಿಧಿ ಸನತ್ ಕುಮಾರ್ ಜೈನ್, ರತ್ನ ಕುಮಾರ್ ರ ಪತ್ನಿ ಎಂ. ಎನ್. ಇಂದಿರಾ, ಪುತ್ರ ಅಜಿತ ಕುಮಾರ್, ಸೊಸೆ ಪ್ರದೀಪ್ತಾ ಅಜಿತ್, ಮೊಮ್ಮಕ್ಕಳು ಮತ್ತು ರತ್ನ ಕುಮಾರ್ ರ ಅಭಿಮಾನಿ ವೃಂದದವರು ಉಪಸ್ಥಿತರಿದ್ದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು.

ಹಿರಿಯ ಸಂಶೋಧಕ ಡಾ. S. D. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

Article Image

ಹಿರಿಯ ಸಂಶೋಧಕ ಡಾ. S. D. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ದಿನಾಂಕ 16.5.25ರಂದು ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕರೂ ಡಾ. ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ನಿರ್ದೇಶಕರೂ ಅದ ಡಾ. S. D. ಶೆಟ್ಟಿ ಹಾಗೂ ಸುಗುಣ ಶೆಟ್ಟಿ ದಂಪತಿಗಳನ್ನು ಅವರ ಸಾಧನೆ ಮತ್ತು ಮದುವೆಯ 50ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿಯ ಪರವಾಗಿ ಸಮಿತಿ ಸಂಚಾಲಕರು ಡಾ. ಜಯಕೀರ್ತಿ ಜೈನ್ ನೇತೃತ್ವದಲ್ಲಿ ಗೌರವಿಸಲಾಯಿತು. ಉಪಾಧ್ಯಕ್ಷ ಶ್ರೀ ಜಿನರಾಜ ಪೂವಣಿ ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕೊಕ್ಕಡ ಶಾಖೆಯ ಪ್ರಬಂಧಕರಾದ ಪಿ. ಅತೀಶಯ ಜೈನ್, ರಾಣಿ ಕಾಳಲಾ ದೇವಿ ಜೈನ್ ಮಹಿಳಾ ಸಮಾಜದ ರಕ್ಷಾ ಪುರೋಹಿತರಾದ ಅರಹಂತ ಇಂದ್ರ, ಜಿನೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಪ್ರಥಮ ಬಾರಿಗೆ ಧ್ವನಿ -ಬೆಳಕು ಸಂಯೋಜನೆಯ ಸಮವಸರಣ: ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಹುಬ್ಬಳ್ಳಿಯ ಕೊಡುಗೆ

Article Image

ಪ್ರಥಮ ಬಾರಿಗೆ ಧ್ವನಿ -ಬೆಳಕು ಸಂಯೋಜನೆಯ ಸಮವಸರಣ: ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಹುಬ್ಬಳ್ಳಿಯ ಕೊಡುಗೆ

ಹುಬ್ಬಳ್ಳಿಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಗೋಕುಲ ರಸ್ತೆಯ ಮಾನಸಗಿರಿಯಲ್ಲಿ ವರ್ಷಗಳ ಹಿಂದೆ ಚಿಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಭಗವಾನ್ ಶ್ರೀ ಮಹಾವೀರ ಜಿನಮಂದಿರ ಈಗ ವಿಶಾಲ ತ್ರಿಕೂಟ ಜಿನಮಂದಿರವಾಗಿ ಪರಿವರ್ತಿತ ಗೊಂಡಿದೆ. ಉತ್ತರ ಭಾರತದ ನೂತನ ಮಂದಿರಗಳ ಶೈಲಿಯಲ್ಲಿ ಅತ್ಯಂತ ಸುಂದರವಾಗಿ ಎರಡು ಮಹಡಿಗಳಲ್ಲಿ (ನೆಲ ಮಹಡಿ ಹಾಗು ಮೊದಲ ಮಹಡಿ) ನಿರ್ಮಾಣಗೊಂಡಿರುವ ಮಂದಿರ ಈಗ ಜೈನ ಬಾಂಧವರಿಗಾಗಿ ಹುಬ್ಬಳ್ಳಿಯ ಕೊಡುಗೆ ಆಗಿದೆ. ಮೊದಲ ಮಹಡಿಯಲ್ಲಿ ವಿವಿಧ ಚಿತ್ತಾರಗಳಿಂದ ಅಲಂಕೃತ ಮೂರು ವಿಶಾಲ ವೇದಿಗಳಲ್ಲಿ ಮಧ್ಯದಲ್ಲಿ ಮೂಲನಾಯಕ ಶ್ರೀ ಮಹಾವೀರ ತೀರ್ಥಂಕರರು, ಎಡ ವೇದಿಯ ಮೇಲೆ 12 ನೆಯ ಶ್ರೀ ವಾಸುಪೂಜ್ಯ ತೀರ್ಥಂಕರರು, ಬಲ ವೇದಿಯ ಮೇಲೆ 22ನೆಯ ಶ್ರೀ ನೇಮಿನಾಥ ತೀರ್ಥಂಕರರ ನಯನ ಮನೋಹರ ಪ್ರತಿಮೆಗಳು ವಿರಾಜಮಾನಗೊಂಡಿದ್ದು ಜಿನಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಮಾನಸಗಿರಿಯ ಶ್ರೀ ಮಹಾವೀರ ಭವನದ ಪರಿಸರವನ್ನು ಪ್ರವೇಶಿಸಿ ಒಳನಡೆದಾಗ ಭವ್ಯ ಮಾನಸ್ತoಭ ಶ್ರದ್ಧಾಳುಗಳನ್ನು ಕೈ ಬೀಸಿ ಕರೆಯುತ್ತದೆ. ಚತುರ್ಮುಖ ಜಿನಬಿಂಬ ದರ್ಶನ ಮಾಡುತ್ತ ಮಾನಸ್ತoಭ ಪ್ರದಕ್ಷಿಣೆ ಹಾಕಿ ಬಸದಿಯ ಕಡೆ ಹೆಜ್ಜೆ ಹಾಕಿದಾಗ. ಕಣ್ಣುಗಳು ಅರಳುತ್ತವೆ, ಅಚ್ಚರಿ ಉಂಟಾಗುತ್ತದೆ, ಮೈ ಮನಗಳು ಪುಳಕಿತಗೊಳ್ಳುತ್ತವೆ, ಸಮವಸರಣದ ಭವ್ಯ ರಚನೆ ನಮ್ಮನ್ನು ತನ್ನತ್ತ ಎಳೆದುಕೊಳ್ಳುತ್ತದೆ. ಏನು ಭವ್ಯ, ಏನು ದಿವ್ಯ, ಅಮಮ, ಸಮವಸರಣವು ಎಂದು ಕೈಗಳು ತನ್ನಿಂದ ತಾನೇ ಸಮವಸರಣದ ಒಡೆಯನಿಗೆ ನಮಿಸುತ್ತವೆ. ಆದಿ ಬ್ರಹ್ಮ, ಪ್ರಥಮ ಜಿನೇಶ ಆದಿನಾಥ ಸ್ವಾಮಿಯ ಸುಂದರಾತಿಸುಂದರ ಸಮವಸರಣ ಮನವನ್ನು ಪ್ರಫುಲ್ಲಿತಗೊಳಿಸುತ್ತದೆ, ಮಸ್ತಕ ಜಿನಚರಣಗಳಲ್ಲಿ ಬಾಗುತ್ತದೆ. ಶಾಸ್ತ್ರಗಳಲ್ಲಿ ಬರುವ ವರ್ಣನೆ ಗನುಸಾರ ಕ್ರಮಬದ್ಧ ರಚನೆ ಯನ್ನು ನೋಡುತ್ತಾ ಇರುವಂತೆ ಧ್ವನಿ ಮತ್ತು ಬೆಳಕಿನ ಆಟ ಆರಂಭವಾಗುತ್ತದೆ. ವರ್ಣಮಯ ಬೆಳಕಿನೊಂದಿಗೆ ಧ್ವನಿಯು ಜೊತೆಗೂಡಿ ಸಮವಸರಣದ ಸ್ವರೂಪವನ್ನು ವಿವರಿಸುತ್ತ ಹೋಗುತ್ತಿರಲು ನಾವು ತೀರ್ಥಂಕರರ ಕಾಲದಲ್ಲಿ ಅವರ ಸಮವಸರಣದಲ್ಲಿ ಇರುವೆವೇ ಎಂದು ಭಾಸವಾಗುತ್ತದೆ. ಎಷ್ಟು ಹೊತ್ತು ಕುಳಿತರೂ ಬಿಟ್ಟು ಹೋಗುವ ಮನಸ್ಸಾಗದು. ಇಂಥ ಧ್ವನಿ ಬೆಳಕು ಸಂಯೋಜನೆ ಇರುವ ಸಮವಸರಣ ರಚನೆ ಇದೇ ಮೊದಲು ಎಂದು ಹೇಳಲಾಗಿದೆ. ಇಂಥ ಸಮವಸರಣವನ್ನು, ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಕೊಡಮಾಡಿರುವುದು ಹುಬ್ಬಳ್ಳಿಗರಿಗೆ ಹೆಮ್ಮೆ, ಶಾಂತ ಪರಿಸರ, ಹಸಿರು ವಾತಾವರಣ, ಹುಬ್ಬಳ್ಳಿಯ ಪಿಕನಿಕ್ ತಾಣ ತೋಳನ ಕೆರೆಯ ಸುಂದರ ನೋಟ, ಬಸದಿ ದರ್ಶನ ನಂತರ ಸುತ್ತಾಡಬಹುದಾದ ಸಮೀಪದಲ್ಲೇ ಇರುವ ತೋಳನಕೆರೆ ಉದ್ಯಾನ, ಬಸದಿಯಲ್ಲಿ ಕುಳಿತುಕೊಂಡರೆ ಸಂಸಾರದ ತಾಪತ್ರಯಗಳೇ ಮರೆತು ಹೋಗುವ ಶಾಂತಿಯ ಅನುಭವ ಆಗುತ್ತದೆ. ಬನ್ನಿ ಬಸದಿಯ ದರ್ಶನ ಮಾಡಿ ಹುಬ್ಬಳ್ಳಿಯವರು ಮತ್ತು ಹುಬ್ಬಳ್ಳಿಗೆ ಬರುವವರು. ಒಂದು ಸಂಗತಿ ನಿಮಗೂ ಗೊತ್ತು ಸಮವಸರಣ ಎಂದರೆ ಸಮಅವಸರ ಅಂದರೆ ಸರ್ವರಿಗೂ ಸಮಾನ ಅವಕಾಶ ಇರುವ ಧರ್ಮಸಭೆ. ಇಲ್ಲಿ ಭವ್ಯ ಜೀವಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಅಭವ್ಯರಿಗೆ ದರ್ಶನ ಮಾಡುವ ಮನಸ್ಸೇ ಬರುವುದಿಲ್ಲ. ಇಂಥ ಭವ್ಯ ನಿರ್ಮಾಣ 20 ವರ್ಷಗಳ ತಪಸ್ಸಿನ ಮಧುರ ಫಲ. ಭಗವಾನ್ ಮಹಾವೀರ ಜೈನ ಹಿತವರ್ಧಕ ಸಂಘ, ಬಸದಿ ನಿರ್ಮಾಣ ಸಮಿತಿ, ಪಂಚಕಲ್ಯಾಣ ಮಹೋತ್ಸವ ಸಮಿತಿ, ಸನ್ಮತಿ ಮಹಿಳಾ ಮಂಡಲಗಳ ಸಂಯುಕ್ತ ಶ್ರಮ, ಹುಬ್ಬಳ್ಳಿ ದಿಗಂಬರ ಜೈನ ಸಮಾಜ ಹಾಗು ಅನ್ಯ ಸಂಘಟನೆಗಳ ಸಹಕಾರಗಳ ಮಿಶ್ರಣ ಒಂದು ತೀರ್ಥವನ್ನೇ ನಿರ್ಮಿಸಿವೆ. ಬಸದಿಯ ಬಲಭಾಗದಲ್ಲಿ ಬ್ರಹ್ಮದೇವರ ಆಲಯವನ್ನು ನಿರ್ಮಿಸಲಾಗಿದ್ದು ಇಲ್ಲಿ ಪ್ರತಿಷ್ಠಾಪನೆ ಗೊಂಡ ಬ್ರಹ್ಮ ದೇವರನ್ನು ಮಕ್ಕಳ ಬ್ರಹ್ಮದೇವರು ಎಂದು ಕರೆಯಲಾಗಿದೆ. 280 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಗದ್ದೆಯೊಂದರಲ್ಲಿ ಭೂ ಗರ್ಭದಲ್ಲಿ ಪ್ರಾಪ್ತವಾಗಿ ಕುಟುಂಬವೊಂದರ ಕುಲದೇವರಾಗಿ ಪೂಜೆಗೊಳ್ಳುತ್ತಿದ್ದ ಬ್ರಹ್ಮ ದೇವ ಆ ಕುಟುಂಬದವರಿಂದಲೇ ಇಂದು ತ್ರಿಕೂಟ ಜಿನಾಲಯ ಕ್ಷೇತ್ರಪಾಲ ಮಂದಿರದಲ್ಲಿ ನೆಲೆಗೊಂಡಿದ್ದಾನೆ. ಸುಂದರ ಆಲಯ ಬ್ರಹ್ಮ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ. ತ್ರಿಕೂಟ ಜಿನಾಲಯದ ದರ್ಶನ ಮಾಡಿ ಪುಣ್ಯ ಭಾಜನರಾಗಿ: ನೂತನ ಜಿನಮಂದಿರದ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವು 11 ರಿಂದ 15 ಮೇ 2025ರವರೆಗೆ ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ, ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕರು, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರ ಪಾವನ ಸಾನಿಧ್ಯ ಹಾಗು ಮಾರ್ಗದರ್ಶನ ದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು ಸಾನಿಧ್ಯ ನೀಡಿದರು. ಹುಬ್ಬಳ್ಳಿಯ ಇತರ ಬಸದಿಗಳು: ಹುಬ್ಬಳ್ಳಿಯ ಪ್ರಾಚೀನ ಜಿನಮಂದಿರ 1300 ವರ್ಷ ಪುರಾತನ ಶ್ರೀ ಅನಂತನಾಥ ಬಸದಿ (ಕಿಲ್ಲೆ ಬಸದಿ)450 ವರ್ಷಗಳಿಗೂ ಪುರಾತನ ಶ್ರೀ ಪಾರ್ಶ್ಶ್ವನಾಥ ಬಸದಿ. ಇಲ್ಲಿನ ಶ್ರೀ ಪದ್ಮಾವತಿ ಅಮ್ಮ ನ ಖ್ಯಾತಿಯಿಂದಾಗಿ ಪದ್ಮಾವತಿ ಬಸದಿ ಎಂದೇ ಪ್ರಸಿದ್ಧಿ ಪ್ರಥಮ ಜಿನೇಶ ಆದಿನಾಥರು ಮೂಲನಾಯಕರಾಗಿರುವ, ನಡುವಿನ ಬಸದಿ ಎಂದೂ ಕರೆಯಲ್ಪಡುವ ಬಸದಿ ಅಮೃತ ಮಹೋತ್ಸವ ಆಚರಿಸಿಕೊಂಡು ಭಕ್ತಾ ಮರ ಶ್ಲೋಕ- ಚಿತ್ರಗಳ ಚಿತ್ತಾರದೊಂದಿಗೆ ಭಕ್ತಾಮರ ಜಿನಾಲಯವಾಗಿದೆ. ಮಹಾವೀರ ಗಲ್ಲಿಯ ಶ್ರೀ ಶಾಂತಿನಾಥ ಬಸದಿ ದೊಡ್ಡ ಬಸದಿ ಎಂದೂ ಕರೆಯಲ್ಪಡುತ್ತದೆ, ಹುಬ್ಬಳ್ಳಿ ಜೈನ ಸಮಾಜಕ್ಕೆ ಕೇಂದ್ರ ಬಸದಿ, ಆರಂಭ ಕಾಲದಿಂದಲೂ ಸಮಾಜದ ಚಟುವಟಿಕೆಗಳ ತಾಣ ಪಕ್ಕದಲ್ಲಿ ಶಾಂತಿನಾಥ ಸಾಂಸ್ಕೃತಿಕ ಭವನ ಇಲ್ಲಿಂದ ಮುಂದೆ ಶ್ರೀ ಚಂದ್ರಪ್ರಭ ಬಸದಿ, ಶತಮಾನ ಕಂಡು ಮುನ್ನಡೆದಿದೆ, ಸ್ಟೇಷನ್ ರಸ್ತೆಯ ದಿಗಂಬರ ಜೈನ ಬೋರ್ಡಿಂಗ್ ನ ಶ್ರೀ ಚಂದ್ರಪ್ರಭ ಬಸದಿ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ಸಹಿತ ಹುಬ್ಬಳ್ಳಿ ವ್ಯಾಪ್ತಿಯಲ್ಲೇ ಬರುವ ಬುಡರಸಿಂಗಿ, ನವನಗರ, ಅಮರಗೋಳಗಳಲ್ಲೂ ಬಸದಿಗಳಿವೆ. ಹುಬ್ಬಳ್ಳಿ ಸಮೀಪದ ದರ್ಶನೀಯ ಸ್ಥಳಗಳು ನವಗ್ರಹ ತೀರ್ಥ, ಅರಟಾಳ, ಲಕ್ಷ್ಮೇ ಶ್ವರ, ಲಕ್ಕುಂಡಿ, ಅಮ್ಮಿನಭಾವಿ, ಸೋಂದಾ, ಕಸಮಳಗಿ ಶಾಂತಿನಾಥ ಕೆ ಹೋತಪೇಟಿ

ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ

Article Image

ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ

ಬಂಟ್ವಾಳ : ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ ಹಾಗೂ ಡಾ. ಪ್ರಭಾಚಂದ್ರ ಜೈನ್ ರವರ ಅಭಿನಂದನಾ ಕಾರ್ಯಕ್ರಮ ದಿನಾಂಕ 4/5/2025ನೇ ಆದಿತ್ಯವಾರ ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿಯ ಸ್ವಸ್ತಿಕ್ ಸಭಾಭವನದಲ್ಲಿ ನಡೆಯಿತು. ಜೈನ್ ಮಿಲನ್ ಬಂಟ್ವಾಳದ ಅಧ್ಯಕ್ಷರಾದ ಮಧ್ವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು ನಾಲ್ಕೂವರೆ ದಶಕಗಳಿಂದ ಸಿದ್ಧಕಟ್ಟೆಯಲ್ಲಿ ಜನಪ್ರಿಯ ವೈದ್ಯರಾಗಿರುವ ಪ್ರಭಾಚಂದ್ರ ಜೈನ್ ಇವರನ್ನು ಉಭಯ ಜೈನ್ ಮಿಲನ್‌ಗಳ ವತಿಯಿಂದ ಸನ್ಮಾನಿಸಲಾಯಿತು. ಡಾ. ಪ್ರಭಾಚಂದ್ರ ಜೈನ್ ಇವರನ್ನು ಸನ್ಮಾನಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಮಾತನಾಡುತ್ತಾ ಡಾ. ಪ್ರಭಾ ಚಂದ್ರ ಜೈನ್ ಕೇವಲ ವೈದ್ಯರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು, ಇವರ ಅಭಿನಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು. ನಲ್ಲೂರoಗಡಿ ಬಸದಿಯ ಮೊಕ್ತೇಸರರು ಮತ್ತು ಮಾಜಿ ಮಂತ್ರಿಗಳಾದ ಕೆ. ಅಭಯಚಂದ್ರ ಜೈನ್ ಮಾತನಾಡಿ ಜೈನ್ ಮಿಲನ್ ಗಳು ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ, ಸಿದ್ದಕಟ್ಟೆಯಲ್ಲಿ ಡಾ. ಪ್ರಭಾಚಚಂದ್ರ ಜೈನ್‌ರವರ ಆರೋಗ್ಯ ಸೇವೆಯನ್ನು ಪಡೆಯದ ವ್ಯಕ್ತಿಗಳಿಲ್ಲ ಅವರು ಕೇವಲ ವೈದ್ಯರಾಗಿರದೆ , ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು . ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂಡಬಿದ್ರೆಯ ನಿವೃತ್ತ ಕನ್ನಡ ಅಧ್ಯಾಪಕರಾದ ಶ್ರೀಧರ್ ಜೈನ್ ಅಭಿನಂದನ ಭಾಷಣ ಮಾಡಿದರು. ಡಾ. ಸುದೀಪ್ ಸಿದ್ದಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು. ರಶ್ಮಿತ ಯುವರಾಜ್ ಜೈನ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಭಾಶ್ಚಂದ್ರ ಜೈನ್, ಜಯರಾಜ ಕಂಬಳಿ, ರಾಜೇಶ್ ಕುಮಾರ್, ಪುಷ್ಪರಾಜ್, ಶಶಿಕಲಾ ಮತ್ತು ಗೀತಾ ಜಿನ ಚಂದ್ರ ಉಪಸ್ಥಿತರಿದ್ದರು. ಸಿದ್ಧಕಟ್ಟೆಯ ಶ್ರೀ ಅನಂತಪದ್ಮ ಮಹಿಳಾ ಸಂಘ, ಸ್ವಸ್ತಿಕ್ ಯುವಜನ ಸಂಘ, ಮೂಡಬಿದ್ರೆಯ ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಶಾ ಸುಧಾಕರ್ ಮತ್ತು ಅರ್ಪಿತ ಪ್ರಾಣೇಶ್ ಪ್ರಾರ್ಥಿಸಿದರು. ಉದಯ್ ಕುಮಾರ್ ಜೈನ್ ಸ್ವಾಗತಿಸಿ ನಿರಂಜನ್ ಕುಮಾರ್ ಧನ್ಯವಾದ ನೀಡಿದರು. ಭರತ್ ಕುಮಾರ್ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.

ವೀರೇಂದ್ರ ಕುಮಾರ್ ಬೇಗೂರ್ ಅವರಿಗೆ ಗೌರವ ಸನ್ಮಾನ

Article Image

ವೀರೇಂದ್ರ ಕುಮಾರ್ ಬೇಗೂರ್ ಅವರಿಗೆ ಗೌರವ ಸನ್ಮಾನ

ಜೈನಧರ್ಮ ಸಿದ್ಧಾಂತದ ಬಗ್ಗೆ ವೀರೇಂದ್ರ ಕುಮಾರ್ ಬೇಗೂರ್ ರವರು ಶಾಸನೋಕ್ತ ಮಾಹಿತಿಯ ಉಪನ್ಯಾಸವನ್ನು ದಿನಾಂಕ 10 -5- 2025 ಶನಿವಾರ ಹಾಗೂ 11-5-2025 ರ ಭಾನುವಾರ ನೀಡಿದರು. ಐತಿಹಾಸಿಕ ಜ್ಞಾನವನ್ನು ಪ್ರಶಂಸಿಸಿ ತ್ರಿಲೋಕ ಜೈನ್ ಮಿಲನ್ ಹಾಗೂ ಹಾಸನದ ಜೈನ ಸಮಾಜದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ತ್ರಿಲೋಕ್ ಜೈನ್ ಮಿಲನ್ ಹಾಸನದವರು ಈಎರಡೂ ದಿನದ ಕಾರ್ಯಕ್ರಮವನ್ನು ಹಿರಿಯ ಶ್ರಾವಕ ಶ್ರಾವಕೀಯರಿಗಾಗಿ ಹಾಸನ ಜೈನ್ ಭವನದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಾಣಿ ರತ್ನಾಕರ್ ರವರು ನಿರ್ವಹಿಸಿದರು. ವೀರೇಂದ್ರ ಕುಮಾರ್ ಬೇಗೂರ್ ಮಿಲನ್ ವತಿಯಿಂದ ಡಾ. ಅಶ್ವಿನ್ ಕುಮಾರ್ ರವರು ಗೌರವಿಸಿದರು.

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಬಸದಿಗೆ ಹೋಗಿ ಅಷ್ಟದ್ರವ್ಯಗಳಿಂದ ಅಷ್ಟವಿಧಾರ್ಚನೆ ಪೂಜೆ ಮಾಡಿದಾಗ ಅಷ್ಟಕರ್ಮಗಳ ನಾಶವಾಗುತ್ತದೆ. ಸಕಲಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆಯಲ್ಲಿ ಭಾಗವಹಿಸಿ ಮಂಗಲ ಪ್ರವಚನ ನೀಡಿದರು. ದಾನ ಮತ್ತು ದೇವರ ಪೂಜೆ ಶ್ರಾವಕರ ಧರ್ಮವಾಗಿದೆ. ಗೃಹಸ್ಥರು ದಾನ, ಧರ್ಮಾದಿ ಸತ್ಕಾರ್ಯಗಳಿಂದ ಶೋಭಿಸುತ್ತಾರೆ. ದಾನದಿಂದ ದುರ್ಗತಿಯ ನಾಶವಾಗಿ ಸದ್ಗತಿ ಪ್ರಾಪ್ತವಾಗುತ್ತದೆ. ಪೂಜೆಯಲ್ಲಿ ದ್ರವ್ಯಪೂಜೆ ಮತ್ತು ಭಾವಪೂಜೆ ಎಂಬ ಎರಡು ವಿಧಗಳಿದ್ದು ದ್ರವ್ಯಪೂಜೆಯು ಭಾವಪೂಜೆಗೆ ನಾಂದಿಯಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ಮೂಲಕ ದಾನವೇ ಧರ್ಮವಾಗಿ ಧರ್ಮಸ್ಥಳದಲ್ಲಿ ನೆಲೆನಿಂತಿದೆ. ತೀರ್ಥಂಕರರು ತಮ್ಮ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಮಾಡಿದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೂಡಾ ತಮ್ಮ ಅವಿರತ ಸೇವಾಕಾಯಕ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ತೀರ್ಥಂಕರರಾಗುವ ಎಲ್ಲಾ ಯೋಗ್ಯತೆ ಹಾಗೂ ಮಾನ್ಯತೆ ಹೊಂದಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು. ಧರ್ಮಸ್ಥಳಕ್ಕೆ ಬಂದಾಗ ತವರು ಮನೆಗೆ ಬಂದ ಅನುಭವ ತಮಗಾಗಿದೆ. ಹೆಗ್ಗಡೆಯವರು ಮತ್ತು ಕುಟುಂಬದವರ ಸೇವಾವೈಖರಿ ಶ್ಲಾಘಿಸಿ ಅಭಿನಂದಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯೆಯೊಂದಿಗೆ ತಮಗೆ ದೊರೆತ ಸಂಸ್ಕಾರ, ಶಿಸ್ತು ಮತ್ತು ಮಾರ್ಗದರ್ಶನದಿಂದ ತಮ್ಮ ಇಂದಿನ ಸ್ಥಾನಕ್ಕೆ ಶೋಭೆ ತಂದಿದೆ ಎಂದರು. ಸಿದ್ಧವನ ಗುರುಕುಲದಲ್ಲಿ ತಮ್ಮ ಮುತ್ತಜ್ಜ ನೇಮಿಸಾಗರವರ್ಣೀಜಿಯವರ ಸ್ಮಾರಕವನ್ನು ನಿರ್ಮಿಸಬೇಕೆಂದು ಸ್ವಾಮೀಜಿ ಹೆಗ್ಗಡೆಯವರಿಗೆ ಸಲಹೆ ನೀಡಿದರು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪಂಚನಮಸ್ಕಾರ ಮಂತ್ರ ಪಠಣದಿಂದ ಅಪಾರ ಶಕ್ತಿ ದೊರಕಿ ನಮಗೆ ಪುಣ್ಯ ಸಂಚಯವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಂಚನಮಸ್ಕಾರ ಮಂತ್ರ ಪಠಣದ ಬಗ್ಗೆ ವಿಶೇಷ ಉಪನ್ಯಾಸ ನೀಡಿರುವುದನ್ನು ಅವರು ಧನ್ಯತೆಯಿಂದ ಸ್ಮರಿಸಿದರು. ಉಭಯ ಸ್ವಾಮೀಜಿಯವರ ಪಾದಪೂಜೆ ಮಾಡಿ, ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು. ಹೇಮಾವತಿ ವೀ. ಹೆಗ್ಗಡೆಯವರು, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್, ಸೋನಿಯಾವರ್ಮ ಉಪಸ್ಥಿತರಿದ್ದರು. ಪ್ರಥಮ ಬಾರಿ ಧರ್ಮಸ್ಥಳ ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಪೂಜ್ಯ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಬೆಳಗೊಳದ ಸ್ವಾಮೀಜಿಯವರು ಸಿದ್ಧವನ ಗುರುಕುಲಕ್ಕೂ ಭೇಟಿ ನೀಡಿದರು.

ಮೂಡುಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ

Article Image

ಮೂಡುಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ

ನಮ್ಮ ರಾಷ್ಟ್ರದ ಯುದ್ಧ ಸನ್ನಿವೇಶದ ಸಂದರ್ಭದಲ್ಲಿ ಜೈನ ಕಾಶಿ ಶ್ರೀ ದಿಗಂಬರ ಜೈನ ಮಠದಲ್ಲಿ 11.5.2025 ರಂದು ಬೆಳಿಗ್ಗೆ 8.45ಕ್ಕೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಉಪಸ್ಥಿತಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರ ಅಭಿಷೇಕ ನೆರವೇರಿಸಿ, ಪಟ್ಟದ ಮಹಾ ಮಾತೆ ಅಭಿಷ್ಟವರ ಪ್ರಧಾಯಿನಿ ಯಕ್ಷಿ ಕೂಷ್ಮಾoಡಿನೀದೇವಿ, ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಮಾಡಿ, ಯುದ್ಧ ಸಂಧರ್ಭ ಎಲ್ಲಾ ಭಯೋತ್ಪದನೆ ದೂರವಾಗಲಿ ಸರ್ವ ಧರ್ಮಿಯರು ಸರ್ವ ಭಾಷೆಯವರು ನಾವೆಲ್ಲರೂ ಐಕ್ಯತೆಯಿಂದ ಭಾರತ ದೇಶದ ವಿಜಯ ಪ್ರಾಪ್ತಿಗಾಗಿ ಪ್ರಾರ್ಥಿಸೋಣ ಲೋಕದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಾಗಲಿ ಇಂತಹ ವಿಷಮ ಸ್ಥಿತಿಯಲ್ಲಿ ರಾಷ್ಟ್ರ ಧರ್ಮದ ಏಕತೆಗಾಗಿ ಶ್ರಮಿಸೋಣ ಭಾರತ ಸರಕಾರ ಹಾಗೂ ಸೈನಿಕರ ಆತ್ಮ ಸ್ಥೈರ್ಯ ಹೆಚ್ಚಿಸೋಣ ಎಂದು ಶ್ರೀ ಗಳವರು ನುಡಿದರು ಅಭಯ ಚಂದ್ರ ಜೈನ್, ದಯಾನಂದ ಪೈ, ವಿಜಯ ಕುಮಾರ್, ಬಾಹುಬಲಿ ಪ್ರಸಾದ್, ಎ ಗುಣಪಾಲ್ ಹೆಗ್ಡೆ, ಗುಣಪಾಲ್ ಮುದ್ಯ ನಿರಂಜನ್, ರಾಘವೇಂದ್ರ ಭಂಡಾರ್ಕರ್, ಶ್ರೀಧರ್ ಅರಮನೆ, ವೃoದ ರಾಜೇಂದ್ರ, ಶ್ವೇತಾ ಜೈನ್ ,ವೀಣಾ, ಸುದಾ, ಮಂಜುಳಾ ಅಭಯ ಚಂದ್ರ ಮೊದಲಾದವರಿದ್ದರು ವರದಿ: ಸಂಜಯಂತ ಕುಮಾರ್ ಶೆಟ್ಟಿ ವ್ಯವಸ್ಥಾಪಕರು, ಸ್ವಸ್ತಿಶ್ರೀ ಭಟ್ಟಾರಕ ನಗರ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ

ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರ : ನಿರಂಜನ್‌ ಜೈನ್‌ ಕುದ್ಯಾಡಿ

Article Image

ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರ : ನಿರಂಜನ್‌ ಜೈನ್‌ ಕುದ್ಯಾಡಿ

ಭಾರತ ದೇಶ ಮೂಲತಃ ಅಹಿಂಸೆಯನ್ನು ಬಯಸುತ್ತಿದೆ. ಈ ಅಹಿಂಸೆಗೆ ತೊಡಕಾಗಿರುವ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದನೆ ತೊಡಕಾಗಿದೆ. ಭಗವಾನ್ ಮಹಾವೀರ, ಬುದ್ಧ, ಶ್ರೀರಾಮಚಂದ್ರ ಇವರೆಲ್ಲ ಅಹಿಂಸೆಯ ಪ್ರತಿಪಾದಕರಾಗಿದ್ದರೂ ಹಿಂಸೆಗೆ ಕಾರಣವಾಗುವ ವಿಚಾರಗಳನ್ನು ವಿರೋಧಿಸಿದವರಾಗಿದ್ದಾರೆ. ಪಾಕಿಸ್ಥಾನಕ್ಕೆ ತನ್ನ ಪ್ರಜೆಗಳ ಹಿತಕ್ಕಿಂತ ನೆರೆಯ ರಾಷ್ಟ್ರ ಭಾರತಕ್ಕೆ ಕಿರುಕುಳ ನೀಡುವ ಮಾನಸಿಕ ವಿಕೃತಿಯಲ್ಲಿ ಸಂತೋಷವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತದ ಆಪರೇಷನ್ ಸಿಂಧೂರ ಸರಿಯಾದ ಕ್ರಮವಾಗಿದೆ. ಇದರಿಂದಾಗಿ ಭಯೋತ್ಪಾದಕ ಮನಸ್ಸುಗಳು ನಿರ್ನಾಮವಾಗಿ ಶಾಂತಿ ನೆಲೆಸಲಿ. ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರವಾಗಿಯೇ ಇರಲಿದೆ. ಜೈ ಹಿಂದ್

'ಆಪರೇಶನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ: ಧರ್ಮಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Article Image

'ಆಪರೇಶನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ: ಧರ್ಮಸ್ಥಳದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಪ್ರಧಾನಿ ನರೇಂದ್ರಮೋದಿಯವರ ದಕ್ಷ ಮಾರ್ಗದರ್ಶನದಲ್ಲಿ “ಆಪರೇಶನ್ ಸಿಂಧೂರ” ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೈನಿಕರನ್ನು ಅಭಿನಂದಿಸಿ, ಅವರಿಗೆ ಮುಂದೆಯೂ ಸರ್ವರೀತಿಯ ಯಶಸ್ಸನ್ನು ಕೋರಿ ಗುರುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಿದರು. ಸೈನಿಕರಿಂದ ದೇಶದ ರಕ್ಷಣಾಕಾರ್ಯ ಯಶಸ್ವಿಯಾಗಲಿ ಹಾಗೂ ಭಯ ಮತ್ತು ಆತಂಕ ನಿವಾರಣೆಯಾಗಿ ಎಲ್ಲೆಲ್ಲೂ ಸದಾ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಗೊಳ್ಳಲಿ ಎಂದು ಹೆಗ್ಗಡೆಯವರು ಹಾರೈಸಿದ್ದಾರೆ.

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನ ಮಂದಿರದಲ್ಲಿ ವಿಶೇಷ ಪೂಜೆ

Article Image

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನ ಮಂದಿರದಲ್ಲಿ ವಿಶೇಷ ಪೂಜೆ

ನಮ್ಮ ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸುತ್ತ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಸಂಕಲ್ಪದೊಂದಿಗೆ ಪೂಜೆಯನ್ನು ದಿನಾಂಕ 8.5.25 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರ ಚಂದ್ರಪುರದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ನಡೆಸಲಾಯಿತು.. ಈ ಸಂದರ್ಭದಲ್ಲಿ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದರು.

ಮಂಗಳೂರು: ರಾಜೇಶ್ ಎಮ್.ರವರು ಅಧ್ಯಕ್ಷರಾಗಿ ಆಯ್ಕೆ

Article Image

ಮಂಗಳೂರು: ರಾಜೇಶ್ ಎಮ್.ರವರು ಅಧ್ಯಕ್ಷರಾಗಿ ಆಯ್ಕೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ನ್ಯಾಯಾಂಗ ಇಲಾಖಾ ಅಧಿಕಾರಿಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಸತತವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ರಾಜೇಶ್ ಎಮ್.ರವರು ಪ್ರಸ್ತುತ ಮಂಗಳೂರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾರ್ಷಿಕೋತ್ಸವ ಸಮಾರಂಭ

Article Image

ವಾರ್ಷಿಕೋತ್ಸವ ಸಮಾರಂಭ

ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಮಾರಂಭವು ಮೇ. 10, 11 ಮತ್ತು 12ರಂದು ನಡೆಯಲಿದೆ. ಮೇ, 10 : ಶನಿವಾರ: ಬೆಳಿಗ್ಗೆ ಗಂಟೆ 8.45ಕ್ಕೆ ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ನವಕಲಶ ಅಭಿಷೇಕ. ಸಂಜೆ ಗಂಟೆ 4 ರಿಂದ ನಾಂದಿಮಂಗಲ, ಪೂಜಾವಿಧಾನ, ಮಹಾಮಂಗಳಾರತಿ ಮೇ, 11 : ಭಾನುವಾರ : ಬೆಳಿಗ್ಗೆ ಗಂಟೆ 8.30 ರಿಂದ ವಾಸ್ತುಪೂಜಾ ವಿಧಾನ, ಋಷಿಮಂಡಲ ಯಂತ್ರಾರಾಧನೆ, 16 ಕಲಶಾಭಿಷೇಕ. ಸಂಜೆ ಗಂಟೆ 4 ರಿಂದ ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮಹಾಮಂಗಳಾರತಿ ಮೇ, 12: ಸೋಮವಾರ: ಬೆಳಿಗ್ಗೆ ಗಂಟೆ 9 ರಿಂದ ಕಲಿಕುಂಡ ಯಂತ್ರಾರಾಧನೆ ಸಂಜೆ ಗಂಟೆ 5.30ರಿಂದ ಭವ್ಯ ಅಗ್ರೋದಕ ಮೆರವಣಿಗೆ, 108 ಕಲಶ ಮಹಾಭಿಷೇಕ, ಮಹೋತ್ಸವ, ಮಹಾಮಂಗಳಾರತಿ

ಧಾರವಾಡ: ಸಾಂಸ್ಕೃತಿಕ ಕಾರ್ಯಕ್ರಮ

Article Image

ಧಾರವಾಡ: ಸಾಂಸ್ಕೃತಿಕ ಕಾರ್ಯಕ್ರಮ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಲೈಡ ಹೆಲ್ತ್ ಸೈನ್ಸಸ್ ವಿಭಾಗದವರಿಂದ “ಪರ್ವ 2025” ಅನ್ನು “ದಿ ಫ್ರಾಸ್ಟಿವಲ್ - ವಿಂಟರ್ಸ್ ಸಿಂಫನಿ” ಎಂಬ ಧ್ಯೇಯೆಯೊಂದಿಗೆ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದರು. ಪದ್ಮಲತಾ ನಿರಂಜನ್ ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ, ವಿದ್ಯಾರ್ಥಿಗಳು ಸೃಜನಶೀಲತೆಯಿಂದ ಏನು ಬೇಕಾದರೂ ಸಾಧಿಸಬಹುದು. ಎಲ್ಲಾ ಆರೋಗ್ಯ ವೃತ್ತಿಪರರು ರೋಗಿಗಳನ್ನು ನೋಡಿಕೊಳ್ಳಲು ಉತ್ತಮ ಮನಸ್ಸಿನಿಂದ ಕೆಲಸ ಮಾಡಬೇಕು ಪೂರ್ಣ ಸಮರ್ಪಣೆ ಮತ್ತು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ನಿಮ್ಮ ಜ್ಞಾನ ಮತ್ತು ನವೀನ ಕೌಶಲ್ಯಗಳನ್ನು ನವೀಕರಿಸುತ್ತಿರಬೇಕು. ಅಭಿವೃದ್ಧಿ ಒಳ್ಳೆಯ ಉದ್ದೇಶಕ್ಕಾಗಿ ನಡೆಯಬೇಕು. ಶಿಸ್ತಿನಿಂದ ಎಸ್.ಡಿ.ಎಂ. ಹೆಸರು ಮತ್ತು ಖ್ಯಾತಿಯನ್ನು ಜಾಗತಿಕವಾಗಿ ಮುಂದೆ ತರಬೇಕು. ರೋಗಿಯ ಸುರಕ್ಷತೆ ಮತ್ತು ಉತ್ತಮ ಅಭ್ಯಾಸಗಳು ವಿದ್ಯಾರ್ಥಿಗಳ ಮೂಲ ಉದ್ದೇಶ. ಬುದ್ಧಿವಂತ ವ್ಯಕ್ತಿಯಾಗುವುದಕ್ಕಿಂತ ಜ್ಞಾನವುಳ್ಳ ವ್ಯಕ್ತಿಯಾಗುವುದು ಹೆಚ್ಚು ಮುಖ್ಯ ಎಂದು ಹೇಳಿದರು. ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗ್ಡೆ, ಅಲೈಡ್ ಹೆಲ್ತ್ ಸೈನ್ಸಸ್‌ನ ಸಂಯೋಜಕರಾದ ಡಾ. ವಿದ್ಯಾ ಎಸ್. ಪಾಟೀಲ್ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೂರಜ್ ಮತ್ತು ಎಲ್ಹಾಮ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಆಂಜೆಲ್ ಬ್ಲಿಸ್ಸಿ ವಂದನಾರ್ಪಣೆ ಸಲ್ಲಿಸಿದರು.

ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ

Article Image

ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜ ಗ್ರಾಮದಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಪ್ರತಿಷ್ಠಾ ಮಹೋತ್ಸವದ 39ನೆ ವಾರ್ಷಿಕೋತ್ಸವದ ಅಂಗವಾಗಿ ಮೇ. 3ರಂದು ಶನಿವಾರ ಬೆಳಿಗ್ಗೆಯಿಂದ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ 24 ಕಲಶಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಜಿನಭಜನೆ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ. ರಾಜವೀರ ಇಂದ್ರ ತಿಳಿಸಿದ್ದಾರೆ. ಅಳಿಯೂರು ಆದಿರಾಜ ಜೈನ್ ನೇತೃತ್ವದಲ್ಲಿ ಸಂಗೀತ ಮತ್ತು ಭಜನೆಯೊಂದಿಗೆ ಶ್ರಾವಕರು ಮತ್ತು ಶ್ರಾವಕಿಯರಿಂದ ಹನ್ನೆರಡು ವೃತಗಳ ಪೂಜೆ ನಡೆಯಲಿದೆ. ಧಾರ್ಮಿಕ ಸಭೆ: ಭಾರತೀಯ ಜೈನ್ ಮಿಲನ್, ಮಂಗಳೂರು ವಲಯದ ಉಪಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಾರಾವಿ ಅಜಿತ್ ಕುಮಾರ್ ಜೈನ್ ಧಾರ್ಮಿಕ ಉಪಾನ್ಯಾಸ ನೀಡುವರು.

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

Article Image

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

ತುಮಕೂರು: ಚಿಕ್ಕಪೇಟೆಯ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಹೃದಯ ಸಂಬಂಧಿತ ರೋಗದ ಬಗ್ಗೆ ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರವು 27.04.2025ನೇ ಭಾನುವಾರ ಜೈನ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಟಸ್ಟ್ ವೆಲ್ ಹಾಸ್ಪಿಟಲ್ ವತಿಯಿಂದ ಡಾಕ್ಟರ್ ಅಮಿತ್ ಕುಮಾರ್ ಎಂ. ಒಸ್ವಾಲ್ ರವರು ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮುನ್ನೆಚ್ಚರಿಕೆಯನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಮಧುಮೇಹ,ರಕ್ತದೊತ್ತಡ, ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು. ಉಚಿತ ವೈದ್ಯಕೀಯ ಶಿಬಿರವನ್ನು ಮಾಡಿಕೊಟ್ಟ ಟ್ರಸ್ಟ್ ಆಸ್ಪತ್ರೆಯ ಡಾ. ಅಮಿತ್ ಕುಮಾರ್ ಎಂ ಒಸ್ಪಾಲ್ ರವರು ಮತ್ತು ಅವರ ತಂಡಕ್ಕೆ ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ

Article Image

ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ

ಉಜಿರೆ: ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಂ ಎಂಬ ರತ್ನತ್ರಯ ಧರ್ಮದ ಪಾಲನೆಯೊಂದಿಗೆ ರಾಗ-ದ್ವೇಷ ರಹಿತನಾದ ವೀತರಾಗ ಭಗವಂತನ ಶ್ರದ್ಧಾ-ಭಕ್ತಿಯ ಧ್ಯಾನದಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಬಾಹುಬಲಿ ಯುವಜನ ಸಂಘ, ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ಹಾಗೂ ಬ್ರಾಹ್ಮಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸಾಮೂಹಿಕ ವೃತೋಪದೇಶ ಸಮಾರಂಭದಲ್ಲಿ 53 ಮಂದಿ ಬಾಲಕರು ಮತ್ತು ಬಾಲಕಿಯರಗೆ ವೃತೋಪದೇಶ ನೀಡಿ ಆಶೀರ್ವದಿಸಿದರು. ವೃತ ಸ್ವೀಕಾರದಿಂದ ವರ್ತನೆಗಳ ಪರಿವರ್ತನೆ ಹಾಗೂ ಸುಧಾರಣೆಯಾಗುತ್ತದೆ. ಮನ, ವಚನ, ಕಾಯದಿಂದ ಪರಿಶುದ್ಧರಾಗಿ ದೇವರು, ಗುರುಗಳು ಮತ್ತು ಶಾಸ್ತçದಲ್ಲಿ ಅಚಲ ನಂಬಿಕೆ ಇಟ್ಟು ನಿತ್ಯವೂ ಜಪ, ತಪ, ಧ್ಯಾನದ ಮೂಲಕ ಆತ್ಮನಿಗಂಟಿದ ಸಕಲ ಪಾಪ ಕರ್ಮಗಳ ಕೊಳೆ ಕಳೆದುಕೊಂಡಾಗ ಮೋಕ್ಷ ಪ್ರಾಫ್ತಿಯಾಗುತ್ತದೆ. ನಿತ್ಯವೂ ಪಂಚಾಣುವೃತಗಳ ಪಾಲನೆ ಮಾಡಬೇಕು. ನೀರನ್ನು ಸೋಸಿ ಕುಡಿಯಬೇಕು ಹಾಗೂ ರಾತ್ರಿ ಭೋಜನ ತ್ಯಾಗ ಮಾಡಿ “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದೊಂದಿಗೆ ಸಾತ್ವಿಕ ಜೀವನ ನಡೆಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಜನಿವಾರ ಎಂಬುದು ರತ್ನತ್ರಯ ಧರ್ಮ ಧಾರಣೆಯ ಸಂಕೇತ. ಬೀಗದ ಕೀ ಹಾಕಲು ಅಥವಾ ಬೆನ್ನು ತುರಿಸಲು ಅದನ್ನು ಬಳಸಬಾರದು ಎಂದು ಅವರು ಕಿವಿಮಾತು ಹೇಳಿದರು. ಮಾತಾ-ಪಿತರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸಿ ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದೊಂದಿಗೆ ಆದರ್ಶ ಜೀವನ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು. ಎಲ್ಲರಿಗೂ ಜನಿವಾರ ವಿತರಿಸಿ, ಸಾಮೂಹಿಕವಾಗಿ ಪಂಚನಮಸ್ಕಾರ ಮಂತ್ರ ಪಠಣ ನಡೆಸಲಾಯಿತು.

ಕಾರ್ಕಳ, ಹಿರಿಯಂಗಡಿ: ವಿದ್ಯಾರ್ಥಿಗಳ ನೋಂದಾವಣೆ ಆರಂಭ

Article Image

ಕಾರ್ಕಳ, ಹಿರಿಯಂಗಡಿ: ವಿದ್ಯಾರ್ಥಿಗಳ ನೋಂದಾವಣೆ ಆರಂಭ

ಕಾರ್ಕಳ ತಾಲೂಕಿನ ಹಿರಿಯಂಗಡಿಯಲ್ಲಿರುವ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮ ಮತ್ತು ಇದರ ಆಡಳಿತಕ್ಕೊಳಪಟ್ಟ ಎಸ್ ಎನ್ ವಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 2025-26 ನೇ ಸಾಲಿಗೆ ವಿದ್ಯಾರ್ಥಿಗಳ ನೋಂದಾವಣೆ ಆರಂಭಗೊಂಡಿದೆ. ನಿಲಯದಲ್ಲಿ 6ನೇ ತರಗತಿಯಿಂದ ಪಿಯುಸಿ ತರಗತಿವರೆಗೆ ಪ್ರವೇಶ ನೀಡಲಾಗುತ್ತದೆ. ಕಳೆದ 80 ವರ್ಷಗಳಿಂದ ಗುರುಕುಲ ಪದ್ಧತಿಯೊಂದಿಗೆ ಸಂಸ್ಕಾರಯುತ ಜೀವನದ ಮೌಲ್ಯಗಳನ್ನು ಸಾವಿರಾರು ವಿದ್ಯಾರ್ಥಿಗಳಿಗೆ ದಯಪಾಲಿಸಿ ನಾಡಿನಾದ್ಯಂತ ಉತ್ತಮ ಶಿಕ್ಷಣ ಸಂಸ್ಥೆ ಎಂದು ಗುರುತಿಸಲ್ಪಟ್ಟಿರುತ್ತದೆ. ಗುಣಮಟ್ಟದ ಶಾಲಾ ಶಿಕ್ಷಣದೊಂದಿಗೆ ಕಡ್ಡಾಯ ಧಾರ್ಮಿಕ ಶಿಕ್ಷಣ, ನೈತಿಕತೆ, ಕ್ರೀಡೆ, ಭಾಷಣ ಕಲೆ, ಭಜನೆ, ಸಮಾಜ ಸೇವೆ, ಪೌರೋಹಿತ್ಯ ಅಧ್ಯಯನದ ಬಗ್ಗೆಯೂ ಗಮನಕೊಡಲಾಗುವುದು. ಉತ್ತಮ ವಸತಿ, ಊಟ – ತಿಂಡಿ, ಸ್ನಾನಕ್ಕೆ ಬಿಸಿನೀರು, ಶುದ್ಧ ಕುಡಿಯುವ ನೀರು, ಸುಸಜ್ಜಿತ ರೂಮಿನ ವ್ಯವಸ್ಥೆ, ಕ್ರೀಡೆ ಮತ್ತು ಮನೋರಂಜನ ಚಟುವಟಿಕೆಗಳೊಂದಿಗೆ ಪ್ರಶಾಂತ ವಾತಾವರಣದಲ್ಲಿ ಜ್ಞಾನಾರ್ಜನೆಗೆ ಸರ್ವ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ. ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸ್ವಸ್ತಿ ಶ್ರೀ ನೇಮಿಸಾಗರ ವರ್ಣೀಜಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆಸಕ್ತ ಪೋಷಕರು ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 20.05.2025 ರೊಳಗೆ ಕಚೇರಿಯನ್ನು ದೂರವಾಣಿ ಸಂಖ್ಯೆ 8197500498 ಮೂಲಕ ಸಂಪರ್ಕಿಸಲು ಕೋರಲಾಗಿದೆ.

ನಾರಾವಿಯಲ್ಲಿ ಅದ್ದೂರಿಯಾಗಿ ನಡೆದ ಭ. ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ

Article Image

ನಾರಾವಿಯಲ್ಲಿ ಅದ್ದೂರಿಯಾಗಿ ನಡೆದ ಭ. ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ

ನಾರಾವಿ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರೆವೇರಿತು. ಜಿನ ಭಗವಂತರಿಗೆ ಶ್ರಾವಕ ಬಂಧುಗಳು ಹಾಗೂ ಮಕ್ಕಳು ಜಿನಭಿಷೇಕ ಮಾಡುವುದರ ಮೂಲಕ ಪುಣ್ಯ ಪಡೆದುಕೊಂಡರು. ಜೈನ ಯುವಜನ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಆಡಳಿತ ಸಮಿತಿ ನಾರಾವಿ ಹಾಗೂ ಜೈನ್ ಮಿಲನ್ ನಾರಾವಿ ಮತ್ತು ಊರ ಹಾಗೂ ಪರವೂರ ಶ್ರಾವಕ ಬಂಧುಗಳ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

Article Image

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ ಭಗವಾನ್ ಮಹಾವೀರರ 2624 ನೆಯ ಜನ್ಮ ಜಯಂತಿಯನ್ನು ತುಮಕೂರು ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ವತಿಯಿಂದ ವೈಭವದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ನಂತರ ನಗರದ ಚಿಕ್ಕಪೇಟೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರದ ತ್ರಿಲೋಕ್ ಭವನದಿಂದ ಮೆರವಣಿಗೆ ಸಾಗಿದ ಭಕ್ತರು, ಗ್ರಾಮ ದೇವತೆ ವೃತ್ತ, ಚಿಕ್ಕಪೇಟೆ ವೃತ್ತ, ಚಿಕ್ಕಪೇಟೆಯ ಮುಖ್ಯರಸ್ತೆ, ಕೋಟೆ ಆಂಜನೇಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಎಂ.ಜಿ. ರಸ್ತೆ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಜೈನ ಭವನದಲ್ಲಿ ಸಮಾವೇಶಗೊಂಡರು. ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸಭೆಯನ್ನ ಉದ್ದೇಶಿಸಿ ಮಾತನಾಡಿ ಭಗವಾನ್ ಶ್ರೀ ಮಹಾವೀರರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶಾಂತಿ, ಅಹಿಂಸೆಗೆ ಸಹಕರಿಸಬೇಕೆಂದರು. ಸವಿತಾ, ಸುಭೋದ್ ಕುಮಾರ್ ಜೈನ್ ಇಂದ್ರ ಇಂದ್ರಾಣಿಯರಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿ ಅಂಗವಾಗಿ ನಗರದ ಸುರೇಶ್ ಬಾಂಡ್ ಟೀ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು- ಹಂಪಲುಗಳನ್ನು ವಿತರಿಸಲಾಯಿತು. ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ. ಡಿ. ಬಾಹುಬಲಿ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷ ಕೆ.ಪಿ. ವೀರೇಂದ್ರ, ಡೈರಿ ರಾಜೇಂದ್ರ ಪ್ರಸಾದ್, ಟಿ.ಜೆ. ನಾಗರಾಜ್, ಎ. ಆರ್. ಬ್ರಹ್ಮಪ್ರಕಾಶ್, ಜ್ವಾಲಾಮಾಲಿನಿ, (ಎಂ.ಎಲ್.ಎ. ಮಾಲಮ್ಮ)ಮಂಜುಳಾ ಚಂದ್ರಪ್ರಭ, ಎಸ್‌.ವಿ. ಜಿನೇಶ್, ಬಿ .ಎಸ್ ಪಾರ್ಶ್ವನಾಥ, ವಿನಯ್ ಸೇರಿದ್ದಂತೆ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಸದಸ್ಯರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ. ರoಗನಾಥ - ತುಮಕೂರು.

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯ0ತಿ ದಿನಾಚರಣೆ

Article Image

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯ0ತಿ ದಿನಾಚರಣೆ

ಮೂಡುಬಿದಿರೆ: ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯ0ದು ನಡೆಯುವ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣ ಮಹೋತ್ಸವ ಎಕ್ಸಲೆ0ಟ್ ಮೂಡುಬಿದಿರೆಯಲ್ಲಿಸ0ಭ್ರಮದಿ0ದ ಸ0ಪನ್ನಗೊ0ಡಿತು. ಕಾರ್ಯಕ್ರಮದಲ್ಲಿ ಎಕ್ಸಲೆ0ಟ್ ಮೂಡುಬಿದಿರೆ ಈ ವರ್ಷದಿ0ದ ಕೊಡಮಾಡುವ ಸನ್ಮತಿ ಮಹಾವೀರ ಶಾ0ತಿ ಪುರಸ್ಕಾರ -2025 ನ್ನು ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮ0ಗಳೂರಿನ ವಿಶ್ರಾ0ತ ಪ್ರಾ0ಶುಪಾಲರಾದ ಪ್ರೊ ಅರಳ ರಾಜೇ0ದ್ರ ಶೆಟ್ಟಿಯವರಿಗೆ ನೀಡಿ ಅಭಿವ0ದಿಸಲಾಯಿತು. ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ಅರಳ ರಾಜೇ0ದ್ರ ಶೆಟ್ಟಿಯವರು ಚೈತನ್ಯ ಈ ನೆಲದ ಕಣಕಣದಲ್ಲೂ ಅ0ತರ್ಯಾಮಿಯಾಗಿದೆ. ಅದನ್ನು ಕಾಣುವ ಕಣ್ಣಿರಬೇಕು. ಕಲ್ಲಿನೊಳಗಿನ ದೈವನಿಹಿತ ಶಕ್ತಿಯನ್ನು ಕ0ಡ ಯುವರಾಜರು ಅದರ ಸಾಕ್ಷಾತ್ಕಾರದ ಪಣ ತೊಟ್ಟರು. ಅವರ ಧರ್ಮ ಪತ್ನಿ ರಶ್ಮಿತಾ ಜೈನ್ ಜೊತೆಗೂಡಿದರು. ಅಭಯಚ0ದ್ರರು ಅಭಯ ನೀಡಿದರು. ಮು0ದಿನದ್ದು ಇತಿಹಾಸ. ಈ ನೆಲದಲ್ಲಿ ಕಲ್ಲರಳಿ ಹೂವಾಯಿತು. ನನಗೆ ಕರ್ಮಸ್ಥಳವೇ ಧರ್ಮಸ್ಥಳ. ಪೂಜ್ಯ ವೀರೆ0ದ್ರ ಹೆಗ್ಗಡೆಯವರಿಗೆ ನನ್ನೆಲ್ಲಾ ಸ0ತೋಷವನ್ನು ಅರ್ಪಿಸುತ್ತಿದ್ದೇನೆ. ನಮ್ಮ ಕೆಲಸವನ್ನು ತೃಪ್ತಿಯಿ0ದ ನಿಷ್ಠೆಯಿ0ದ ಮಾಡಿದರೆ ಸ0ತೋಷ ನಮ್ಮನ್ನು ಅರಸಿಕೊ0ಡು ಬರುತ್ತದೆ. ನಿರೀಕ್ಷೆಗಳ ಹಿ0ದೆ ಓಡಕೂಡದು. ಬದುಕಿನ ಬಹಳ ದೊಡ್ಡ ಗುಟ್ಟು ಸ0ತೋಷದಲ್ಲಿದೆ. ಮನಸ್ಸು ಸ0ತೋಷದಲ್ಲಿದ್ದರೆ ಬದುಕು ಸಾರ್ಥಕ್ಯವನ್ನು ಕಾಣುತ್ತದೆ. ನಾವು ನಮ್ಮ ದೃಷ್ಟಿ ಬದಲಾಯಿಸಿದರೆ ನಮ್ಮ ಸೃಷ್ಟಿ ಬದಲಾಗುತ್ತದೆ. ಸೃಷ್ಟಿಯಲ್ಲಿ ಸೌ0ದರ್ಯವೇ ಇರುತ್ತದೆ. ನಾವು ನಮ್ಮ ಅನಾವಶ್ಯಕ ಮಾತು, ಯೋಚನೆ, ಚಿ0ತನೆಗಳಿ0ದ ಆ ಸೌ0ದರ್ಯವನ್ನು ಕಾಣದಾಗಿದ್ದೇವೆ. ಅಹಿ0ಸೆ ಎ0ಬ ಒ0ದು ಬಾಗಿಲು ಸಾಕು ಭಗವ0ತನ ಸಾಕ್ಷಾತ್ಕಾರಕ್ಕೆ. ಅಹಿ0ಸೆಯ ರಾಜ ಮಾರ್ಗದಲ್ಲಿ ಪ್ರೀತಿ ಇದೆ, ಸಹನೆ ಇದೆ, ವಿಶ್ವಾಸ, ಭರವಸೆ ಇದೆ. ಆ ಮಾರ್ಗದಲ್ಲಿ ಪಥಿಕರಾಗೋಣ. ಮಣ್ಣ ಕಣಕಣದಲ್ಲೂ ತ0ಪು ತಣಿವುಗಳಿರಲಿ. ಒಲವಿನೊರತೆಯು ಹೊಳೆಯಾಗಿ ಹರಿದು ಬರಲಿ. ಭ್ರಮೆಯ ಬದುಕನ್ನು ಕಳಚಿ ಹೊರಡೋಣ, ಪ್ರೀತಿ ಎ0ಬ ಬೆಳಕಿನ ಬಟ್ಟೆ ನಮ್ಮನ್ನು ಭಗವ0ತನ ಕಡೆ ಒಯ್ಯುತ್ತದೆ. ಈ ಎಕ್ಸಲೆ0ಟ್ ನಲ್ಲಿ ನೀವು ಕಲಿಯುವುದರೊ0ದಿಗೆ ಬೆಳೆಯಿರಿ, ಎಕ್ಸಲೆ0ಟ್ ಗಳಾಗಿ ಎ0ದರು. ಪ್ರತಿ ಮಗುವೂ ಪ್ರಪ್ರಥಮವಾಗಿ ಒಳ್ಳೆಯವರೇ. ಸುತ್ತಲಿನ ಋಣಾತ್ಮಕ ಸ0ಗತಿಗಳು ನಿಮ್ಮನ್ನು ಕೆಡಿಸದಿರಲಿ. ಆಯ್ಕೆ ನಿಮ್ಮ ಕೈಯಲ್ಲಿದೆ. ಒಳ್ಳೆಯ ಆಯ್ಕೆ ಒಳ್ಳೆಯ ಜೀವನ. ಬೆಳಕಿನ ಬಟ್ಟೆಯಲ್ಲಿ ನಡೆಯುವ ಎಕ್ಸಲೆ0ಟ್ ನ ಈ ದೀಪಗಳು ಸಮಾಜಕ್ಕೆ ಬೆಳಕಾಗಲಿ ಎ0ದರು. ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಕೆ ಅಭಯಚ0ದ್ರ ಜೈನ್ ಸರಳ ಜೀವನ ಶ್ರೇಷ್ಠ ಜೀವನ. ಸರಳ ಜೀವನ ಘನತೆ, ಗೌರವ ಎಲ್ಲವನ್ನು ತ0ದುಕೊಡುತ್ತದೆ. ಭಾರತೀಯತೆ, ರಾಷ್ಟ್ರೀಯ ಚಿ0ತನೆಗಳೊ0ದಿಗೆ ಸರಳ ಬದುಕು ನಮ್ಮದಾಗಲಿ ಎ0ದರು. ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಸಭೆಯ ಅಧ್ಯಕ್ಷರಾಗಿ ಬದುಕು ಮತ್ತು ಬದುಕಲು ಬಿಡಿ ಎ0ಬ ಸಿದ್ಧಾ0ತ ನಮ್ಮ ಬದುಕಿಗೆ ದಾರಿ ದೀಪಗಳಾಗಲಿ. ಭಗವತ್ ಸಾಕ್ಷಾತ್ಕಾರಕ್ಕೆ ಮುನ್ನುಡಿ ಇರುವುದೇ ಆತ್ಮತೃಪ್ತಿಯ ಸನ್ನಿಧಿಯಲ್ಲಿ. ಗುಣವ0ತರಾಗಿ, ಕಷ್ಟದಲ್ಲಿರುವವರಿಗೆ ಬಲವಾಗಿ, ಸೌಜನ್ಯ, ಸೌಶೀಲ್ಯ, ಸೌಮನಸ್ಸುಗಳು ನಮ್ಮ ಸ0ಸಾರವಾದರೆ ನಮ್ಮ ಹೃದಯದಲ್ಲಿಭಗವ0ತ ನೆರೆಗೊ0ಡು ನಮ್ಮ ಎಲ್ಲಾ ಕೆಲಸಗಳಿಗೆ ಭಗವದನುಗ್ರಹ ಇರುತ್ತದೆ. ಮಹಾತ್ಮರ, ಸ0ತರ ಜೀವನ ನಮ್ಮ ಬದುಕಿಗೆ ಹೊಸ ಬೆಳಕಿನ ದಾರಿ ತೋರಿಸಲಿ. ನಾವು ಅದರಲ್ಲಿ ಮು0ದುವರೆಯೋಣ ಎ0ದರು. ಆಧ್ಯಾತ್ಮಿಕತೆಯ ಪರಮ ಸತ್ಯವನ್ನು ಪ್ರಾಪ0ಚಿಕರಿಗೆ ಬೋಧಿಸಿದ ಅಹಿ0ಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯದ ಮೂಲಕ ಸೈತಿಕ ನಡವಳಿಕೆಯ ಸಹೋದರ, ಸಮನ್ವತೆಯ ಉದಾತ್ತ ಧರ್ಮ ತೋರಿಕೊಟ್ಟ, ವಿಶ್ವಮಾನ್ಯ ಚೇತನವಾದ ಜೈನಧರ್ಮದ 24 ನೇ ತೀರ್ಥ0ಕರರಾದ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣೋತ್ಸವ ಶ್ರಾವಕರಾದ ಅಜಿತ್ ನಾರಾವಿಯವರ ಮಾರ್ಗದರ್ಶನದಲ್ಲಿ ಅಷ್ಟವಿಧ ಅರ್ಚನೆಯೊ0ದಿಗೆ ಶ್ರದ್ಧೆಯಿ0ದ ಶ್ರೀಮತಿ ಪದ್ಮಪ್ರಿಯ, ಕು ಋದ್ಧಿ ಕೇರ ಅವರ ಮ0ತ್ರ ಪಠಣದೊ0ದಿಗೆ ಸ0ಪನ್ನಗೊ0ಡಿತು. ಇದೇ ಸ0ದರ್ಭದಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ನೇರ0ಕಿ ಪಾರ್ಶ್ವನಾಥ, ಸುಧಾ ಪಾರ್ಶ್ವನಾಥ ದ0ಪತಿಯನ್ನು ವಿಶೇಷ ಗೌರವ ಪುರಸ್ಕಾರಗಳೊ0ದಿಗೆ ಅಭಿನ0ದಿಸಲಾಯಿತು. ವಿದ್ಯಾರ್ಥಿನಿ ಶ್ರೇಯಾ ಪ್ರಕಾಶ್ ನೀಲಗೌಡರ್ ಅವರನ್ನು ಅವರ ಬಹುಮುಖೀ ಪ್ರತಿಭೆಗಾಗಿ ಗೌರವಿಸಲಾಯಿತು. ಭಾರತೀಯ ಅ0ಚೆ ಇಲಾಖೆ ದಿನದ ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶ್ವನಮೋಕಾರ ಮ0ತ್ರ ದಿನದ ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶೇಷ ಗೌರವವನ್ನು ಸ0ಸ್ಥೆಯ ಗೌರವಾಧ್ಯಕ್ಷರಾದ ಅಭಯಚ0ದ್ರ ಜೈನ್ ಹಾಗೂ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಹಸ್ತಾ0ತರಿಸಲಾಯಿತು. ಸ0ಸ್ಥೆಯ ರಕ್ಷಣಾ ಸಿಬ್ಬ0ದಿಗಳಿಗೆ ಹಾಗೂ ಸ್ವಚ್ಛತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಗೌರವಿಸಲಾಯಿತು. ವೇದಿಕೆಯಲ್ಲಿ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು. ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತಿನೊ0ದಿಗೆ ಸ್ವಾಗತಿಸಿದರು. ಉಪನ್ಯಾಸಕ ಸುನಾದ್ ರಾಜ್ ಜೈನ್ ವ0ದಿಸಿದರು. ಸ0ಸ್ಥೆಯ ಆಡಳಿತ ನಿರ್ದೇಶಕರಾದ ಡಾ ಬಿ.ಪಿ ಸ0ಪತ್ ಕುಮಾರ್ ನಿರೂಪಿಸಿದರು.

ಮಹಾವೀರ ಜನ್ಮ ಕಲ್ಯಾಣೋತ್ಸವ

Article Image

ಮಹಾವೀರ ಜನ್ಮ ಕಲ್ಯಾಣೋತ್ಸವ

ಧರ್ಮಸ್ಥಳ, ಏಪ್ರಿಲ್ 10: ಇಂದು ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ, ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ತೀರ್ಥಂಕರರಿಗೆ ವಿಶೇಷ ಅಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆಗಳನ್ನು ಸಲ್ಲಿಸಲಾಯಿತು. ಬಳಿಕ, ಬಾಲ ತೀರ್ಥಂಕರನಿಗೆ ವೈಭವಯುತವಾದ ನಾಮಕರಣೋತ್ಸವವನ್ನು ಆಚರಿಸಲಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Article Image

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆಯ ಅಂಗವಾಗಿ ಗುರುವಾರ ತೋರಣಮುಹೂರ್ತ , ವಿಮಾನಶುದ್ಧಿ, ಭಗವಾನ್ ಮಹಾವೀರ ಸ್ವಾಮಿಗೆ ನವಕಲಾಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರು ಮತ್ತು ಸಹಪುರೋಹಿತರಯ ಧಾರ್ಮಿಕ ವಿಧಿ-ವಿಧಾನಗನ್ನು ನೆರವೇರಿಸಿದರು. ಬಳಿಕ ನಡೆದ ಶಾಂತಿಚಕ್ರ ಆರಾಧನೆಯಲ್ಲಿ 26 ಮಂದಿ ಶ್ರಾವಕರು, ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು. ಭಗವಾನ್ ಮಹಾವೀರ ತೀರ್ಥಂಕರರ ಜೀವನ-ಸಾಧನೆ ಬಗ್ಯೆ ಉಪನ್ಯಾಸ ನೀಡಿದ ಅಳದಂಗಡಿ ಮಿತ್ರಸೇನ ಜೈನ್, ಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಅನೇಕಾಂತವಾದ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉಪದೇಶಗಳು ಸಾರ್ವಜನಿಕ ಮೌಲ್ಯ ಹೊಂದಿವೆ. ಸಕಲ ಪ್ರಾಣಿಪಕ್ಷಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಮಹಾವೀರರು ಬೋಧಿಸಿದ ತತ್ವಗಳಿಂದ ವಿಶ್ವಶಾಂತಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಬೆಂಗಳೂರಿನ ವಕೀಲ ಕೆ.ಬಿ. ಯುವರಾಜ ಬಳ್ಳಾಲ್, ವಿಜಯಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ಸುಮತಿ ಕೆ.ಆರ್. ಬಳ್ಳಾಲ್ದ, ವಿನಯಾ ಜೆ. ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್ ಮತ್ತು ಮಣಿಮಾಲ ಬಳ್ಳಾಲ್ ಹಾಗೂ ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಣಮೋಕಾರ ಮಹಾಮಂತ್ರ ಪಠಣ ಸಮಾರಂಭ

Article Image

ಣಮೋಕಾರ ಮಹಾಮಂತ್ರ ಪಠಣ ಸಮಾರಂಭ

108 ದೇಶಗಳಲ್ಲಿ ಏಕಕಾಲದಲ್ಲಿ ಬೆಳಗ್ಗೆ ಏಳರಿಂದ ಹತ್ತು ಗಂಟೆಯವರೆಗೆ ನಮೋಕಾರ ಮಂತ್ರವನ್ನು ಪಠಿಸಲಾಯಿತು. ಭಾರತದಲ್ಲಿ ಪ್ರಧಾನಮಂತ್ರಿಯಾದ ಸನ್ಮಾನ್ಯ ನರೇಂದ್ರ ಮೋದಿಯವರು ನವ ದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿರುತ್ತಾರೆ. ಒಂದು ಜಗತ್ತು, ಒಂದು ಮಂತ್ರ, ಶಾಂತಿಗಾಗಿ ಜೊತೆಯಲ್ಲಿ ಎಂಬ ಧ್ಯೇಯದೊಂದಿಗೆ ಜೀತೋ ಸಂಸ್ಥೆ ವಿಶ್ವದಾದ್ಯಂತ ಏರ್ಪಡಿಸಿದ್ದ ವಿಶ್ವ ಣಮೋಕಾರ ಮಂತ್ರ ದಿವಸ ಇದರ ಅಂಗವಾಗಿ ಭಾರತೀಯ ಜೈನ್ ಮಿಲನ್ ಮೂಡುಬಿದರೆ, ಬಸದಿ ಸ್ವಚ್ಛತಾ ತಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸಮಸ್ತ ಜೈನ ಬಾಂಧವರು ಮೂಡುಬಿದರೆ ಇವರಿಂದ ಜೈನ ಕಾಶಿ ಮೂಡುಬಿದರೆಯಲ್ಲಿ ಸಾವಿರ ಕಂಬದ ಬಸದಿ ಎಂದೇ ಪ್ರಸಿದ್ಧವಾಗಿರುವ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಸಾಮೂಹಿಕವಾಗಿ ಣಮೋಕಾರ ಮಂತ್ರವನ್ನು ಪಠಿಸಲಾಯಿತು.

ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ

Article Image

ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ

ಸತ್ತೂರು, ಧಾರವಾಡ : ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಿಕ್ಷಣ ಘಟಕವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಾಂತೀಯ ನೋಡಲ್ ಕೇಂದ್ರ, ಜೆ.ಎನ್.ಎಂ.ಸಿ. ಬೆಳಗಾವಿಯ ಸಹಯೋಗದೊಂದಿಗೆ ಏಪ್ರಿಲ್ 03 ಮತ್ತು 04, 2025ರಂದು “ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ” ಎಂಬ ವಿಷಯದ ಮೇಲೆ 2 ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರವು ಅಧ್ಯಾಪಕರಿಗೆ, ವೈದ್ಯಕೀಯ ವಿಷಯದಲ್ಲಿ ಹೊಸ ಬೋಧನೆ ಮತ್ತು ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಸಹಕಾರಿಯಾಗಿದ್ದು, ಈ ಕಾರ್ಯಾಗಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದಿಸಲ್ಪಟ್ಟಿದೆ. ಅಧ್ಯಾಪಕರು ತಮ್ಮ ದೈನಂದಿನ ವೈದ್ಯಕೀಯ ಜ್ಞಾನವನ್ನು ನವೀಕರಿಸಲು ಇದು ಉತ್ತಮ ವೇದಿಕೆಯಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ ಅವರು ಮುಖ್ಯ ಅತಿಥಿಗಳಾಗಿದ್ದು, ಜೆ.ಎನ್.ಎಂ.ಸಿಯ, ಎನ್.ಎಂ.ಸಿ. ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕರಾದ ಡಾ. ಸುನಿತಾ ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ನಿರಂಜನ್ ಕುಮಾರ, ಉಪ ಕುಲಪತಿಗಳು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ: ಪ್ರೀತಿ ಮತ್ತು ಉತ್ಸಾಹದಿಂದ ಬೋದಿಸುತ್ತಾ ಉತ್ತಮ ಶಿಕ್ಷಕರಾಗಬೇಕು. ವೈದ್ಯಕೀಯ ಶಿಕ್ಷಕರು ಉತ್ತಮ ಜ್ಞಾನ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳನ್ನು ಸ್ವತಂತ್ರರಾಗುವಂತೆ ರೂಪಿಸುವುದು ಶಿಕ್ಷಕರಿಗೆ ಉತ್ತಮ ತೃಪ್ತಿಯನ್ನು ನೀಡುತ್ತದೆ. ಶಿಕ್ಷಣವು ವೃತ್ತಿಪರತೆ ಮತ್ತು ಜೀವನದ ಕಲೆಯನ್ನು ಕಲಿಸುತ್ತದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಮರ್ಶಾತ್ಮಕ ಚಿಂತನೆ ಅಗತ್ಯ. ಶಿಕ್ಷಣದ ಜ್ಞಾನವನ್ನು ಹಂಚಿಕೊಳ್ಳಲು ಸಹಯೋಗ ಮತ್ತು ಸಹಕಾರ ಅಗತ್ಯ. ಉತ್ತಮ ಶಿಕ್ಷಣವು ವ್ಯಕ್ತಿಯ ಬುದ್ಧಿವಂತಿಕೆಯನ್ನು ಜಾಗೃತಗೊಳಿಸುತ್ತದೆ. ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ದೀಪಕ ಕನಬೂರ, ಔಷಧಗುಣ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ಸಂಯೋಜಕರಾದ ಡಾ. ರಾಧಿಕಾ ಶೇರ್ಖಾನೆ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಅರ್ಚನಾ ಡಂಬಳ ಅವರು ಅತಿಥಿಗಳನ್ನು ಸ್ವಾಗತಿಸಿ, ಎನ್.ಎಂ.ಸಿ. ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕರಾದ ಡಾ. ಸುನಿತಾ ಪಾಟೀಲ್ ಅವರನ್ನು ಪರಿಚಯಿಸಿದರು. ಡಾ. ಸ್ಮೀತಾ ಪ್ರಭು ಕಾರ್ಯಕ್ರವನ್ನು ನಿರೂಪಿಸಿದರು. ಡಾ. ಸ್ನೇಹಾ ವಂದನಾರ್ಪಣೆ ಸಲ್ಲಿಸಿದರು.

First Previous

Showing 7 of 20 pages

Next Last