ಪ್ರಥಮ ಬಾರಿಗೆ ಧ್ವನಿ -ಬೆಳಕು ಸಂಯೋಜನೆಯ ಸಮವಸರಣ: ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಹುಬ್ಬಳ್ಳಿಯ ಕೊಡುಗೆ
ಹುಬ್ಬಳ್ಳಿಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಗೋಕುಲ ರಸ್ತೆಯ ಮಾನಸಗಿರಿಯಲ್ಲಿ ವರ್ಷಗಳ ಹಿಂದೆ ಚಿಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಭಗವಾನ್ ಶ್ರೀ ಮಹಾವೀರ ಜಿನಮಂದಿರ ಈಗ ವಿಶಾಲ ತ್ರಿಕೂಟ ಜಿನಮಂದಿರವಾಗಿ ಪರಿವರ್ತಿತ ಗೊಂಡಿದೆ. ಉತ್ತರ ಭಾರತದ ನೂತನ ಮಂದಿರಗಳ ಶೈಲಿಯಲ್ಲಿ ಅತ್ಯಂತ ಸುಂದರವಾಗಿ ಎರಡು ಮಹಡಿಗಳಲ್ಲಿ (ನೆಲ ಮಹಡಿ ಹಾಗು ಮೊದಲ ಮಹಡಿ) ನಿರ್ಮಾಣಗೊಂಡಿರುವ ಮಂದಿರ ಈಗ ಜೈನ ಬಾಂಧವರಿಗಾಗಿ ಹುಬ್ಬಳ್ಳಿಯ ಕೊಡುಗೆ ಆಗಿದೆ.
ಮೊದಲ ಮಹಡಿಯಲ್ಲಿ ವಿವಿಧ ಚಿತ್ತಾರಗಳಿಂದ ಅಲಂಕೃತ ಮೂರು ವಿಶಾಲ ವೇದಿಗಳಲ್ಲಿ ಮಧ್ಯದಲ್ಲಿ ಮೂಲನಾಯಕ ಶ್ರೀ ಮಹಾವೀರ ತೀರ್ಥಂಕರರು, ಎಡ ವೇದಿಯ ಮೇಲೆ 12 ನೆಯ ಶ್ರೀ ವಾಸುಪೂಜ್ಯ ತೀರ್ಥಂಕರರು, ಬಲ ವೇದಿಯ ಮೇಲೆ 22ನೆಯ ಶ್ರೀ ನೇಮಿನಾಥ ತೀರ್ಥಂಕರರ ನಯನ ಮನೋಹರ ಪ್ರತಿಮೆಗಳು ವಿರಾಜಮಾನಗೊಂಡಿದ್ದು ಜಿನಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಮಾನಸಗಿರಿಯ ಶ್ರೀ ಮಹಾವೀರ ಭವನದ ಪರಿಸರವನ್ನು ಪ್ರವೇಶಿಸಿ ಒಳನಡೆದಾಗ ಭವ್ಯ ಮಾನಸ್ತoಭ ಶ್ರದ್ಧಾಳುಗಳನ್ನು ಕೈ ಬೀಸಿ ಕರೆಯುತ್ತದೆ. ಚತುರ್ಮುಖ ಜಿನಬಿಂಬ ದರ್ಶನ ಮಾಡುತ್ತ ಮಾನಸ್ತoಭ ಪ್ರದಕ್ಷಿಣೆ ಹಾಕಿ ಬಸದಿಯ ಕಡೆ ಹೆಜ್ಜೆ ಹಾಕಿದಾಗ. ಕಣ್ಣುಗಳು ಅರಳುತ್ತವೆ, ಅಚ್ಚರಿ ಉಂಟಾಗುತ್ತದೆ, ಮೈ ಮನಗಳು ಪುಳಕಿತಗೊಳ್ಳುತ್ತವೆ, ಸಮವಸರಣದ ಭವ್ಯ ರಚನೆ ನಮ್ಮನ್ನು ತನ್ನತ್ತ ಎಳೆದುಕೊಳ್ಳುತ್ತದೆ.
ಏನು ಭವ್ಯ, ಏನು ದಿವ್ಯ, ಅಮಮ, ಸಮವಸರಣವು ಎಂದು ಕೈಗಳು ತನ್ನಿಂದ ತಾನೇ ಸಮವಸರಣದ ಒಡೆಯನಿಗೆ ನಮಿಸುತ್ತವೆ. ಆದಿ ಬ್ರಹ್ಮ, ಪ್ರಥಮ ಜಿನೇಶ ಆದಿನಾಥ ಸ್ವಾಮಿಯ ಸುಂದರಾತಿಸುಂದರ ಸಮವಸರಣ ಮನವನ್ನು ಪ್ರಫುಲ್ಲಿತಗೊಳಿಸುತ್ತದೆ, ಮಸ್ತಕ ಜಿನಚರಣಗಳಲ್ಲಿ ಬಾಗುತ್ತದೆ.
ಶಾಸ್ತ್ರಗಳಲ್ಲಿ ಬರುವ ವರ್ಣನೆ ಗನುಸಾರ ಕ್ರಮಬದ್ಧ ರಚನೆ ಯನ್ನು ನೋಡುತ್ತಾ ಇರುವಂತೆ ಧ್ವನಿ ಮತ್ತು ಬೆಳಕಿನ ಆಟ ಆರಂಭವಾಗುತ್ತದೆ. ವರ್ಣಮಯ ಬೆಳಕಿನೊಂದಿಗೆ ಧ್ವನಿಯು ಜೊತೆಗೂಡಿ ಸಮವಸರಣದ ಸ್ವರೂಪವನ್ನು ವಿವರಿಸುತ್ತ ಹೋಗುತ್ತಿರಲು ನಾವು ತೀರ್ಥಂಕರರ ಕಾಲದಲ್ಲಿ ಅವರ ಸಮವಸರಣದಲ್ಲಿ ಇರುವೆವೇ ಎಂದು ಭಾಸವಾಗುತ್ತದೆ. ಎಷ್ಟು ಹೊತ್ತು ಕುಳಿತರೂ ಬಿಟ್ಟು ಹೋಗುವ ಮನಸ್ಸಾಗದು.
ಇಂಥ ಧ್ವನಿ ಬೆಳಕು ಸಂಯೋಜನೆ ಇರುವ ಸಮವಸರಣ ರಚನೆ ಇದೇ ಮೊದಲು ಎಂದು ಹೇಳಲಾಗಿದೆ. ಇಂಥ ಸಮವಸರಣವನ್ನು, ಜೈನ ಆಧ್ಯಾತ್ಮಿಕ ಪ್ರಪಂಚಕ್ಕೆ ಕೊಡಮಾಡಿರುವುದು ಹುಬ್ಬಳ್ಳಿಗರಿಗೆ ಹೆಮ್ಮೆ, ಶಾಂತ ಪರಿಸರ, ಹಸಿರು ವಾತಾವರಣ, ಹುಬ್ಬಳ್ಳಿಯ ಪಿಕನಿಕ್ ತಾಣ ತೋಳನ ಕೆರೆಯ ಸುಂದರ ನೋಟ, ಬಸದಿ ದರ್ಶನ ನಂತರ ಸುತ್ತಾಡಬಹುದಾದ ಸಮೀಪದಲ್ಲೇ ಇರುವ ತೋಳನಕೆರೆ ಉದ್ಯಾನ, ಬಸದಿಯಲ್ಲಿ ಕುಳಿತುಕೊಂಡರೆ ಸಂಸಾರದ ತಾಪತ್ರಯಗಳೇ ಮರೆತು ಹೋಗುವ ಶಾಂತಿಯ ಅನುಭವ ಆಗುತ್ತದೆ. ಬನ್ನಿ ಬಸದಿಯ ದರ್ಶನ ಮಾಡಿ ಹುಬ್ಬಳ್ಳಿಯವರು ಮತ್ತು ಹುಬ್ಬಳ್ಳಿಗೆ ಬರುವವರು.
ಒಂದು ಸಂಗತಿ ನಿಮಗೂ ಗೊತ್ತು ಸಮವಸರಣ ಎಂದರೆ ಸಮಅವಸರ ಅಂದರೆ ಸರ್ವರಿಗೂ ಸಮಾನ ಅವಕಾಶ ಇರುವ ಧರ್ಮಸಭೆ. ಇಲ್ಲಿ ಭವ್ಯ ಜೀವಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಅಭವ್ಯರಿಗೆ ದರ್ಶನ ಮಾಡುವ ಮನಸ್ಸೇ ಬರುವುದಿಲ್ಲ. ಇಂಥ ಭವ್ಯ ನಿರ್ಮಾಣ 20 ವರ್ಷಗಳ ತಪಸ್ಸಿನ ಮಧುರ ಫಲ. ಭಗವಾನ್ ಮಹಾವೀರ ಜೈನ ಹಿತವರ್ಧಕ ಸಂಘ, ಬಸದಿ ನಿರ್ಮಾಣ ಸಮಿತಿ, ಪಂಚಕಲ್ಯಾಣ ಮಹೋತ್ಸವ ಸಮಿತಿ, ಸನ್ಮತಿ ಮಹಿಳಾ ಮಂಡಲಗಳ ಸಂಯುಕ್ತ ಶ್ರಮ, ಹುಬ್ಬಳ್ಳಿ ದಿಗಂಬರ ಜೈನ ಸಮಾಜ ಹಾಗು ಅನ್ಯ ಸಂಘಟನೆಗಳ ಸಹಕಾರಗಳ ಮಿಶ್ರಣ ಒಂದು ತೀರ್ಥವನ್ನೇ ನಿರ್ಮಿಸಿವೆ.
ಬಸದಿಯ ಬಲಭಾಗದಲ್ಲಿ ಬ್ರಹ್ಮದೇವರ ಆಲಯವನ್ನು ನಿರ್ಮಿಸಲಾಗಿದ್ದು ಇಲ್ಲಿ ಪ್ರತಿಷ್ಠಾಪನೆ ಗೊಂಡ ಬ್ರಹ್ಮ ದೇವರನ್ನು ಮಕ್ಕಳ ಬ್ರಹ್ಮದೇವರು ಎಂದು ಕರೆಯಲಾಗಿದೆ. 280 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಗದ್ದೆಯೊಂದರಲ್ಲಿ ಭೂ ಗರ್ಭದಲ್ಲಿ ಪ್ರಾಪ್ತವಾಗಿ ಕುಟುಂಬವೊಂದರ ಕುಲದೇವರಾಗಿ ಪೂಜೆಗೊಳ್ಳುತ್ತಿದ್ದ ಬ್ರಹ್ಮ ದೇವ ಆ ಕುಟುಂಬದವರಿಂದಲೇ ಇಂದು ತ್ರಿಕೂಟ ಜಿನಾಲಯ ಕ್ಷೇತ್ರಪಾಲ ಮಂದಿರದಲ್ಲಿ ನೆಲೆಗೊಂಡಿದ್ದಾನೆ. ಸುಂದರ ಆಲಯ ಬ್ರಹ್ಮ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ.
ತ್ರಿಕೂಟ ಜಿನಾಲಯದ ದರ್ಶನ ಮಾಡಿ ಪುಣ್ಯ ಭಾಜನರಾಗಿ: ನೂತನ ಜಿನಮಂದಿರದ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವು 11 ರಿಂದ 15 ಮೇ 2025ರವರೆಗೆ ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ, ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕರು, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರ ಪಾವನ ಸಾನಿಧ್ಯ ಹಾಗು ಮಾರ್ಗದರ್ಶನ ದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು. ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು ಸಾನಿಧ್ಯ ನೀಡಿದರು.
ಹುಬ್ಬಳ್ಳಿಯ ಇತರ ಬಸದಿಗಳು: ಹುಬ್ಬಳ್ಳಿಯ ಪ್ರಾಚೀನ ಜಿನಮಂದಿರ 1300 ವರ್ಷ ಪುರಾತನ ಶ್ರೀ ಅನಂತನಾಥ ಬಸದಿ (ಕಿಲ್ಲೆ ಬಸದಿ)450 ವರ್ಷಗಳಿಗೂ ಪುರಾತನ ಶ್ರೀ ಪಾರ್ಶ್ಶ್ವನಾಥ ಬಸದಿ. ಇಲ್ಲಿನ ಶ್ರೀ ಪದ್ಮಾವತಿ ಅಮ್ಮ ನ ಖ್ಯಾತಿಯಿಂದಾಗಿ ಪದ್ಮಾವತಿ ಬಸದಿ ಎಂದೇ ಪ್ರಸಿದ್ಧಿ ಪ್ರಥಮ ಜಿನೇಶ ಆದಿನಾಥರು ಮೂಲನಾಯಕರಾಗಿರುವ, ನಡುವಿನ ಬಸದಿ ಎಂದೂ ಕರೆಯಲ್ಪಡುವ ಬಸದಿ ಅಮೃತ ಮಹೋತ್ಸವ ಆಚರಿಸಿಕೊಂಡು ಭಕ್ತಾ ಮರ ಶ್ಲೋಕ- ಚಿತ್ರಗಳ ಚಿತ್ತಾರದೊಂದಿಗೆ ಭಕ್ತಾಮರ ಜಿನಾಲಯವಾಗಿದೆ. ಮಹಾವೀರ ಗಲ್ಲಿಯ ಶ್ರೀ ಶಾಂತಿನಾಥ ಬಸದಿ ದೊಡ್ಡ ಬಸದಿ ಎಂದೂ ಕರೆಯಲ್ಪಡುತ್ತದೆ, ಹುಬ್ಬಳ್ಳಿ ಜೈನ ಸಮಾಜಕ್ಕೆ ಕೇಂದ್ರ ಬಸದಿ, ಆರಂಭ ಕಾಲದಿಂದಲೂ ಸಮಾಜದ ಚಟುವಟಿಕೆಗಳ ತಾಣ ಪಕ್ಕದಲ್ಲಿ ಶಾಂತಿನಾಥ ಸಾಂಸ್ಕೃತಿಕ ಭವನ ಇಲ್ಲಿಂದ ಮುಂದೆ ಶ್ರೀ ಚಂದ್ರಪ್ರಭ ಬಸದಿ, ಶತಮಾನ ಕಂಡು ಮುನ್ನಡೆದಿದೆ, ಸ್ಟೇಷನ್ ರಸ್ತೆಯ ದಿಗಂಬರ ಜೈನ ಬೋರ್ಡಿಂಗ್ ನ ಶ್ರೀ ಚಂದ್ರಪ್ರಭ ಬಸದಿ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ಸಹಿತ ಹುಬ್ಬಳ್ಳಿ ವ್ಯಾಪ್ತಿಯಲ್ಲೇ ಬರುವ ಬುಡರಸಿಂಗಿ, ನವನಗರ, ಅಮರಗೋಳಗಳಲ್ಲೂ ಬಸದಿಗಳಿವೆ.
ಹುಬ್ಬಳ್ಳಿ ಸಮೀಪದ ದರ್ಶನೀಯ ಸ್ಥಳಗಳು ನವಗ್ರಹ ತೀರ್ಥ, ಅರಟಾಳ, ಲಕ್ಷ್ಮೇ ಶ್ವರ, ಲಕ್ಕುಂಡಿ, ಅಮ್ಮಿನಭಾವಿ, ಸೋಂದಾ, ಕಸಮಳಗಿ
ಶಾಂತಿನಾಥ ಕೆ ಹೋತಪೇಟಿ