ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ
Published Date: 14-May-2025 Link-Copied
ಬಂಟ್ವಾಳ : ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ ಹಾಗೂ ಡಾ. ಪ್ರಭಾಚಂದ್ರ ಜೈನ್ ರವರ ಅಭಿನಂದನಾ ಕಾರ್ಯಕ್ರಮ ದಿನಾಂಕ 4/5/2025ನೇ ಆದಿತ್ಯವಾರ ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿಯ ಸ್ವಸ್ತಿಕ್ ಸಭಾಭವನದಲ್ಲಿ ನಡೆಯಿತು. ಜೈನ್ ಮಿಲನ್ ಬಂಟ್ವಾಳದ ಅಧ್ಯಕ್ಷರಾದ ಮಧ್ವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು ನಾಲ್ಕೂವರೆ ದಶಕಗಳಿಂದ ಸಿದ್ಧಕಟ್ಟೆಯಲ್ಲಿ ಜನಪ್ರಿಯ ವೈದ್ಯರಾಗಿರುವ ಪ್ರಭಾಚಂದ್ರ ಜೈನ್ ಇವರನ್ನು ಉಭಯ ಜೈನ್ ಮಿಲನ್ಗಳ ವತಿಯಿಂದ ಸನ್ಮಾನಿಸಲಾಯಿತು. ಡಾ. ಪ್ರಭಾಚಂದ್ರ ಜೈನ್ ಇವರನ್ನು ಸನ್ಮಾನಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಮಾತನಾಡುತ್ತಾ ಡಾ. ಪ್ರಭಾ ಚಂದ್ರ ಜೈನ್ ಕೇವಲ ವೈದ್ಯರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು, ಇವರ ಅಭಿನಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು. ನಲ್ಲೂರoಗಡಿ ಬಸದಿಯ ಮೊಕ್ತೇಸರರು ಮತ್ತು ಮಾಜಿ ಮಂತ್ರಿಗಳಾದ ಕೆ. ಅಭಯಚಂದ್ರ ಜೈನ್ ಮಾತನಾಡಿ ಜೈನ್ ಮಿಲನ್ ಗಳು ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ, ಸಿದ್ದಕಟ್ಟೆಯಲ್ಲಿ ಡಾ. ಪ್ರಭಾಚಚಂದ್ರ ಜೈನ್ರವರ ಆರೋಗ್ಯ ಸೇವೆಯನ್ನು ಪಡೆಯದ ವ್ಯಕ್ತಿಗಳಿಲ್ಲ ಅವರು ಕೇವಲ ವೈದ್ಯರಾಗಿರದೆ , ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು . ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂಡಬಿದ್ರೆಯ ನಿವೃತ್ತ ಕನ್ನಡ ಅಧ್ಯಾಪಕರಾದ ಶ್ರೀಧರ್ ಜೈನ್ ಅಭಿನಂದನ ಭಾಷಣ ಮಾಡಿದರು. ಡಾ. ಸುದೀಪ್ ಸಿದ್ದಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು. ರಶ್ಮಿತ ಯುವರಾಜ್ ಜೈನ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಭಾಶ್ಚಂದ್ರ ಜೈನ್, ಜಯರಾಜ ಕಂಬಳಿ, ರಾಜೇಶ್ ಕುಮಾರ್, ಪುಷ್ಪರಾಜ್, ಶಶಿಕಲಾ ಮತ್ತು ಗೀತಾ ಜಿನ ಚಂದ್ರ ಉಪಸ್ಥಿತರಿದ್ದರು. ಸಿದ್ಧಕಟ್ಟೆಯ ಶ್ರೀ ಅನಂತಪದ್ಮ ಮಹಿಳಾ ಸಂಘ, ಸ್ವಸ್ತಿಕ್ ಯುವಜನ ಸಂಘ, ಮೂಡಬಿದ್ರೆಯ ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಶಾ ಸುಧಾಕರ್ ಮತ್ತು ಅರ್ಪಿತ ಪ್ರಾಣೇಶ್ ಪ್ರಾರ್ಥಿಸಿದರು. ಉದಯ್ ಕುಮಾರ್ ಜೈನ್ ಸ್ವಾಗತಿಸಿ ನಿರಂಜನ್ ಕುಮಾರ್ ಧನ್ಯವಾದ ನೀಡಿದರು. ಭರತ್ ಕುಮಾರ್ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.