ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ
ಮೂಡುಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ 2026-27ನೇ ಸಾಲಿನ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಸಮಾರಂಭವು ನಡೆಯಿತು. ಇದರ ಅಧ್ಯಕ್ಷಸ್ಥಾನವನ್ನು ಶಾಲಾ ಸಂಚಾಲಕರಾದ ಕೆ. ಹೇಮರಾಜ್ ಇವರು ವಹಿಸಿದ್ದು ಸಮಾರಂಭದ ಉದ್ಘಾಟನೆಯನ್ನು ಶಾಲಾ ಹಳೆ ವಿದ್ಯಾರ್ಥಿನಿ ಡಾ|| ಅನಘ ಪುನೀತ್ ಪಕ್ಕಳ ಇವರು ತಮ್ಮ ಅಮೃತ ಹಸ್ತದಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣದ ಬಗ್ಗೆ ತಿಳಿಸಿ ತಮ್ಮ ಬಾಲ್ಯ ಜೀವನದ ಅನುಭವವನ್ನು ಬಿಚ್ಚಿಟ್ಟು ಶಾಲೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ಶಾಲೆಯ ಶಿಕ್ಷಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ ಇವರು ಆಯ್ಕೆಯಾದ ನೂತನ ಮಂತ್ರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಶಾಲಾ ನಾಯಕ ವಿಹಾನ್ ಜಿ. ಪೂಜಾರಿ ಹಾಗೂ ವಿರೋಧ ಪಕ್ಷದ ನಾಯಕಿ ಪ್ರಾಪ್ತಿ ಇವರು ಶಾಲೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇವೆ ಎಂದು ತಮ್ಮ ಭಾಷಣದ ಮೂಲಕ ತಿಳಿಸಿದರು. ಶಾಲಾ ಸಂಚಾಲಕರಾದ ಕೆ.ಹೇಮರಾಜ್ ಇವರು ಅಧ್ಯಕ್ಷೀಯ ನುಡಿಯಲ್ಲಿ ನೂತನ ಪಧಾಧಿಕಾರಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದ ಕೊನೆಗೆ ಸಹಶಿಕ್ಷಕಿ ರೊಲಿಟಾ ಇವರು ಧನ್ಯವಾದಗೈದರು ಸಹಶಿಕ್ಷಕಿ ಮಂಜುಳಾ ಇವರು ಕಾರ್ಯಕ್ರಮ ನಿರೂಪಿಸಿದರು.
