Article Image 1 Article Image 2

ವಿದ್ಯಾದಾನದ ಮೂಲಕ ಸಮಾಜಕ್ಕೆ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ

Article Image

ವಿದ್ಯಾದಾನದ ಮೂಲಕ ಸಮಾಜಕ್ಕೆ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರ

ಧರ್ಮಸ್ಥಳ: ಪ್ರಾಥಮಿಕ ಶಿಕ್ಷಣದಿಂದ ಆರಂಭಗೊಂಡು ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣ ಸೇರಿದಂತೆ ಶಿಕ್ಷಣ ಐವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಮುನ್ನಡೆಸುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದಿಂದ ನಡೆಯುವ ವಿದ್ಯಾದಾನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಹೆಗ್ಗಡೆಯವರು ಐಟಿಐ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ವೈದ್ಯಕೀಯ, ಇಂಜಿನಿಯರಿಂಗ್ ಅಲ್ಲದೆ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹೀಗೆ ಹೊಸ ಹೊಸ ಕೋರ್ಸ್ಗಳನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ-ಹೊಸ ಅವಕಾಶಗಳನ್ನು ಸೃಷ್ಟಿಸಿದರು. ಉಜಿರೆಯಲ್ಲಿ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಎಸ್.ಡಿ.ಎಂ. ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಮತ್ತು ಧಾರವಾಡದಲ್ಲಿ ಎಸ್.ಡಿ.ಎಂ ವಿಶ್ವವಿದ್ಯಾಲಯವಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯು ಪ್ರಸಿದ್ಧವಾಗಿದೆ. ಭಜನಾ ತರಬೇತಿ ಕಮ್ಮಟವು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ. ತರಬೇತಿಯಲ್ಲಿ ಶಿಸ್ತು, ಮೌಲ್ಯ, ಸ್ವಚ್ಛತೆ, ವ್ಯವಹಾರ ಇತ್ಯಾದಿಗಳನ್ನು ಅರಿತುಕೊಂಡು ಮುನ್ನಡೆದಾಗ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು. ಉಪನ್ಯಾಸದಲ್ಲಿ ನಾಡಿನ ವಿವಿಧ ಭಜನಾ ಮಂಡಳಿಗಳಿAದ ಆಗಮಿಸಿದ ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 2ನೇ ದಿನದ ಕಾರ್ಯಾಗಾರ

Article Image

27ನೇ ವರ್ಷದ ಭಜನಾ ತರಬೇತಿ ಕಮ್ಮಟದ 2ನೇ ದಿನದ ಕಾರ್ಯಾಗಾರ

ಧರ್ಮಸ್ಥಳ, ಸೆ.15,: ಭಜನಾ ಕಮ್ಮಟಗಳು ಮಾನವನ ವ್ಯಕ್ತಿತ್ವ ರೂಪಿಸುವ ಉತ್ತಮ ವೇದಿಕೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 2ನೇ ದಿನದ ಕಾರ್ಯಾಗಾರದಲ್ಲಿ 'ಗ್ರಾಮೀಣ ನಾಯಕತ್ವ ಭಜನಾ ಮಂಡಳಿಗಳ ಪಾತ್ರ' ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಇಂದಿನ ಪೀಳಿಗೆ ಸಾಮಾಜಿಕ ಮಾದ್ಯಮದತ್ತ ಒಲವನ್ನು ತೋರುತ್ತಿದ್ದು ಪ್ರಪಂಚದಾದ್ಯಂತ ಋಣಾತ್ಮಕ ಚಿಂತನೆಗಳನ್ನು ಸೃಷ್ಟಿಸಿ ಅತ್ಯಮೂಲ್ಯ ಸಮಯದ ವ್ಯರ್ಥಮಾಡುತ್ತಿದೆ.ಈ ಚಿಂತನೆಗಳು ಬದಲಾಗಿ ಯುವಕರು ಧಾರ್ಮಿಕ ಮತ್ತು ಆಧ್ಯಾತ್ಮಿಕತೆಗೆ ಒಲವು ತೋರಿದಾಗ ಭಾರತ ತನ್ನನ್ನು ತಾನು ಶ್ರೇಷ್ಠ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾದ್ಯ. ಆಧ್ಯಾತ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆದರ್ಶಗಳು ರೂಪುಗೊಳ್ಳುತ್ತವೆ. ಮಾನವನ ಉತ್ತುಂಗದ ಸಾಧನೆ ಮತ್ತು ಅಧಃಪತನ ಇವೆರಡೂ ನಿರ್ಧಾರಗೊಳ್ಳುವುದು ಆತನ ಸ್ವಭಾವ ಅಥವಾ ವ್ಯಕ್ತಿತ್ವದಿಂದ ಮಾತ್ರ ಎಂದು ಹೇಳಿದರು. ಜೀವನದಲ್ಲಿ ಒಳಿತನ್ನು ಉತ್ತುಂಗಕ್ಕೆ, ಕೆಡುಕನ್ನ ಮಿತಕ್ಕೆ ಕೊಂಡೊಯ್ಯುವ ಪ್ರಯತ್ನ ನಮ್ಮ ಕೈಯಲ್ಲೇ ಇದೆ. ನಮ್ಮೆಲ್ಲರ ಹಣೆಬರಹ ನಮ್ಮ ಅಂಗೈಯಲ್ಲಿದೆ. ಹಣೆಬರಹ ಬದಲಾಯಿಸಲು ಸಾಧ್ಯವಾಗದಿದ್ದರೂ, ಅದನ್ನು ಏರಿಸುವ ಮತ್ತು ಇಳಿಸುವ ಪ್ರಯತ್ನ ನಮ್ಮೆಲ್ಲರಿಂದ ಸಾಧ್ಯವಿದೆ. ನೈತಿಕ ವಿಚಾರಗಳನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಉತ್ತಮ ಜೀವನವನ್ನು ನಿರ್ಧರಿಸುವ ಮೂಲಮಂತ್ರವೇ ಆಲೋಚನೆ, ಮಾನವ ಜೀವನದಲ್ಲಿ ಯಶಸ್ಸು ಅಥವಾ ಅವನತಿಗೆ ಆಲೋಚನೆಗಳೇ ಕಾರಣ. ಆಲೋಚನೆಗಳು ಹವ್ಯಾಸವಾಗಿ ನಮ್ಮ ಚಾರಿತ್ರ‍್ಯವನ್ನು ನಿರ್ಧರಿಸುತ್ತವೆ ಮತ್ತು ಚಾರಿತ್ರ‍್ಯವು ಭವಿಷ್ಯವನ್ನು ರೂಪಿಸುತ್ತದೆ. ನಮ್ಮ ಆಲೋಚನೆಗಳು ರಚನಾತ್ಮಕವಾಗಿದಷ್ಟು ಜಗತ್ತಿನಲ್ಲಿ ಸಾಧನೆಗೆ ದಾರಿಗಳು ತೆರೆದುಕೊಳ್ಳುತ್ತವೆ ಎಂದರು. ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿತ್ವಗಳ ಸಾಧನೆಯ ಗುಟ್ಟೇ ಅವರ ಪರಿಶ್ರಮ ಮತ್ತು ಧನಾತ್ಮಕ ಆಲೋಚನೆಗಳು. ಇದಕ್ಕೆ ನಿದರ್ಶನವೆಂಬಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ದೃಷ್ಟಿಕೋನ ಮತ್ತು ಬೃಹತ್ ಆಲೋಚನೆಗಳು ಸಮಾಜದಲ್ಲಿ ಉತ್ತಮ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ವಹಿಸಿದ ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪದ್ಮ ಗೌಡ ಮಾತನಾಡಿದರು. ದೇವಾಲಯಗಳ ಅಭಿವೃದ್ಧಿಗೆ ಧಾರ್ಮಿಕ ಪ್ರಜ್ಞೆ ಅತೀ ಮುಖ್ಯ. ಜೀವನದ ಆಂತರಿಕ ಮತ್ತು ಬಾಹ್ಯ ಸರ್ವ ಸಂಸ್ಥೆಗಳಿಗೂ ಮನ:ಶಾಂತಿ ತಂದುಕೊಡಬಲ್ಲ ಶಕ್ತಿ ಕೇವಲ ಧ್ಯಾನ ಮತ್ತು ಭಜನೆಗಳಿಂದ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಶ್ರೀ ಕ್ಷೇತ್ರ ಭಜನಾ ಕಮ್ಮಟದ ಕೋಶಾಧಿಕಾರಿ ಪದ್ಮರಾಜ್ ಜೈನ್ ಕಾರ್ಯಕ್ರಮನಿರ್ವಹಿಸಿದರು.

ಧರ್ಮಸ್ಥಳ: ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

Article Image

ಧರ್ಮಸ್ಥಳ: ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

ಉಜಿರೆ: ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ದೇಶದ ಪ್ರಗತಿಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಎಂ. ಭಾಸ್ಕರ ಚಕ್ರವರ್ತಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್‌ಸೆಟ್ ಸಂಸ್ಥೆಗಳ) ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮಾದರಿಯಾಗಿದ್ದು ಕೇಂದ್ರಸರ್ಕಾರವೂ ಇದಕ್ಕೆ ಮಾನ್ಯತೆ ನೀಡಿದ್ದು, ದೇಶದೆಲ್ಲೆಡೆ ಇಂದು 670 ಸಂಸ್ಥೆಗಳು ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡುತ್ತಿದ್ದು ದೇಶದ ಆರ್ಥಿಕ ಪ್ರಗತಿಯಲ್ಲಿ ಇವುಗಳ ತ್ಯಾಗ, ಸೇವೆ ಮತ್ತು ಸಾಧನೆ ಅಮೂಲ್ಯವಾಗಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು. ಕೌಶಲಾಭಿವೃದ್ಧಿ ಇಂದು ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಗೃಹನಿರ್ಮಾಣ ಕಾರ್ಮಿಕರು ಹಾಗೂ ಇತರ ಕುಶಲಕರ್ಮಿಗಳ ಬೇಡಿಕೆ ಹೆಚ್ಚಾಗುತ್ತಿದ್ದು ಕೌಶಲಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಎಲ್ಲಾ ನಿರ್ದೇಶಕರುಗಳು ಪ್ರತಿದಿನ ರುಡ್‌ಸೆಟ್ ಸಂಸ್ಥೆಗಳ ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಯೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ರುಡ್‌ಸೆಟ್ ಸಂಸ್ಥೆಗಳ ರಾಷ್ಟ್ರೀಯ ನಿಯಂತ್ರಕ ಬೆಂಗಳೂರಿನ ಆರ್.ಆರ್. ಸಿಂಗ್ ಮಾತನಾಡಿ ತರಬೇತಿ ನೀಡುವಾಗ ನಿರುದ್ಯೋಗಿಗಳಲ್ಲಿ ನಾಯಕತ್ವ ಗುಣವನ್ನೂ ಬೆಳೆಸಬೇಕು ಎಂದು ಹೇಳಿದರು. ರುಡ್‌ಸೆಟ್ ಸಂಸ್ಥೆಗಳ ಮಹಾನಿರ್ದೇಶಕ ರಾಜು ಎನ್. ಕೋರಿ ಮಾತನಾಡಿ ಗ್ರಾಮೀಣ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಹೊಸತನದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು. ಉನ್ನತ ಸಾಧನೆ ಮಾಡಿದ ರುಡ್‌ಸೆಟ್ ಸಂಸ್ಥೆಗಳನ್ನು ಗೌರವಿಸಲಾಯಿತು. ಆರ್ಥಿಕ ಆದಾಯ: ರುಡ್‌ಸೆಟ್ ಸಂಸ್ಥೆ, ಒನ್‌ಗೋಲ್ (ಪ್ರಥಮ), ರುಡ್‌ಸೆಟ್ ಸಂಸ್ಥೆ, ಧಾರವಾಡ (ದ್ವಿತೀಯ). ವಾರ್ಷಿಕ ಕಾರ್ಯಯೋಜನೆ: ರುಡ್‌ಸೆಟ್ ಸಂಸ್ಥೆ, ವಿಜಯಪುರ (ಪ್ರಥಮ), ರುಡ್‌ಸೆಟ್ ಸಂಸ್ಥೆ, ಹಾಜಿಪುರ (ದ್ವಿತೀಯ). ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಉತ್ತಮ ಸೇವೆ, ಸಾಧನೆಗೆ ಎಲ್ಲಾ ನೌಕರರನ್ನು ಅಭಿನಂದಿಸಿದರು. ಸಂಸ್ಥೆಗಳ ಪ್ರಗತಿ, ಸಾಧನೆ ಗುರುತಿಸಿ ಹೊಸ ಯೋಜನೆಗಳನ್ನು ರೂಪಿಸುವುದೇ ವಾರ್ಷಿಕ ಸಮ್ಮೇಳನದ ಉದ್ದೇಶವಾಗಿದೆ ಎಂದರು. ಬ್ಯೂಟಿ ಪಾರ್ಲರ್, ಹೊಲಿಗೆ ಮೊದಲಾದ ವೃತ್ತಿಗಳನ್ನು ಮನೆಯಲ್ಲೆ ಮಾಡಬಹುದು ಎಂದು ಅವರು ಸಲಹೆ ನೀಡಿದರು. ನಿರ್ದೇಶಕರುಗಳು ಮತ್ತು ಸಿಬ್ಬಂದಿ ಉತ್ತಮ ಗುಣಮಟ್ಟದ ತರಬೇತಿಗೆ ವೈಯಕ್ತಿಕ ಗಮನ ಹರಿಸಬೇಕೆಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು. ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು. ಉಜಿರೆ ಸಂಸ್ಥೆಯ ನಿರ್ದೇಶಕ ಅಜೇಯ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.

ಸೆ. 14 ರಿಂದ 21: ಧರ್ಮಸ್ಥಳದಲ್ಲಿ ಭಜನಾ ಕಮ್ಮಟ

Article Image

ಸೆ. 14 ರಿಂದ 21: ಧರ್ಮಸ್ಥಳದಲ್ಲಿ ಭಜನಾ ಕಮ್ಮಟ

ಉಜಿರೆ: ಧರ್ಮಸ್ಥಳದಲ್ಲಿ ಇಪ್ಪತ್ತೇಳನೆ ವರ್ಷದ ಭಜನಾ ಕಮ್ಮಟ ಸೆ. 14 ರಿಂದ 21 ರ ವರೆಗೆ ನಡೆಯಲಿದೆ ಎಂದು ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ. ಖ್ಯಾತ ಗಾಯಕರಾದ ಶಂಕರ್‌ಶಾನ್‌ಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಮಣಿಪಾಲ, ಸೌಮ್ಯ ಸುಭಾಷ್, ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ, ವಿದುಷಿ ಚೈತ್ರಾ, ಉಜಿರೆ, ಸುನಿಲ್ ಶೆಟ್ಟಿ, ಧರ್ಮಸ್ಥಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಮಟದಲ್ಲಿ ಮಾಹಿತಿ, ಮಾರ್ಗದರ್ಶನ ನೀಡುವರು. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಉಪಾನ್ಯಾಸ, ಸಂಜೆ ಗಂಟೆ 5.30 ರಿಂದ ನಗರಭಜನೆ ಇದೆ. ಸೆ. 21ರಂದು ಭಾನುವಾರ ಸಮಾರೋಪ ಸಮಾರಂಭ ನಡೆಯಲಿದ್ದು ಪೂರ್ವಾಹ್ನ 10 ಗಂಟೆಯಿಂದ 400 ಭಜನಾ ತಂಡಗಳ ಆರು ಸಾವಿರ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ನೃತ್ಯಭಜನೆ ನಡೆಯಲಿದೆ. ಉದ್ಘಾಟನಾ ಸಮಾರಂಭ: ಸೆ. 14 ರಂದು ಭಾನುವಾರ ಪೂರ್ವಾಹ್ನ 11 ಗಂಟೆಗೆ ಮಹೋತ್ಸವ ಸಭಾ ಭವನದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಭಜನಾ ಕಮ್ಮಟವನ್ನು ಉದ್ಘಾಟಿಸುವರು. ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಧಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರಕ್ಕೆ ಚಾಲನೆ

Article Image

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರಕ್ಕೆ ಚಾಲನೆ

ಉಜಿರೆ, ಸೆ.11: ಸಂಶೋಧನಾ ಪ್ರಕ್ರಿಯೆಗೆ ಪೂರಕ ತಾಂತ್ರಿಕ ಪರಿಕರವಾಗಿ ತಂತ್ರಜ್ಞಾನವು ಬಳಕೆಯಾಗಬೇಕೇ ಹೊರತು ಹೊಸದನ್ನು ಹುಡುಕಾಡುವ ಪ್ರಜ್ಞೆಯನ್ನೇ ನಿಯಂತ್ರಿಸುವ ಮಟ್ಟಿಗೆ ನಿರ್ಣಾಯಕವಾಗಬಾರದು ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ ಸೆಲ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ಸಂಶೋಧನ ಬರವಣಿಗೆ ಮತ್ತು ಪ್ರಕಟಣೆ- ವಿಧಾನಾತ್ಮಕ ದೃಷ್ಟಿಕೋನ’ ಕುರಿತು ಗುರುವಾರ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನವು ಸಂಶೋಧಕನ ಪರಿಶ್ರಮ ಕಡಿಮೆಗೊಳಿಸಿ ಸಹಾಯಕನಂತಿರಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಸಂಶೋಧಕನೇ ಮುಖ್ಯಪಾತ್ರ ವಹಿಸಬೇಕೇ ವಿನಃ ತಂತ್ರಜ್ಞಾನ ನಿರ್ಣಾಯಕವಾಗಬಾರದು. ಸಂಶೋಧಕ ಇಲ್ಲದಿದ್ದರೆ ತಂತ್ರಜ್ಞಾನ ಅರ್ಥಹೀನ. ತಂತ್ರಜ್ಞಾನವೂ ಕೂಡಾ ಸಂಶೋಧನೆಯ ಫಲವಾಗಿರುತ್ತದೆ. ತಂತ್ರಜ್ಞಾನವು ಮನುಷ್ಯ ಹುಡುಕಾಟದ ಫಲವೇ ಆಗಿರುತ್ತದೆ. ಹೀಗಾಗಿ ಸಂಶೋಧನೆಯು ಮನುಷ್ಯಕೇಂದ್ರಿತವಾಗಿರಬೇಕು. ಕೇವಲ ತಂತ್ರಜ್ಞಾನ ಕೇಂದ್ರಿತವಾಗಿರಬಾರದು. ತಂತ್ರಜ್ಞಾನದ ಭರಾಟೆಯಲ್ಲಿ ಸಂಶೋಧನೆಯ ಹಿಂದಿನ ಮನುಷ್ಯ ಬೌದ್ಧಿಕ ಶಕ್ತಿ ಹಿನ್ನೆಲೆಗೆ ಸರಿಯಬಾರದು ಎಂದು ಹೇಳಿದರು. ಬೋಧಕರಾಗಲು ಬೇಕಾದ ಶೈಕ್ಷಣಿಕ ಅರ್ಹತೆಯನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡು ಸಂಶೋಧನೆಗೆ ತೊಡಗಬಾರದು. ಸಂಶೋಧನೆ ಎನ್ನುವುದು ಉದ್ಯೋಗ ದಕ್ಕಿಸಿಕೊಳ್ಳುವ ಗುರುತಿಸಿಕೊಳ್ಳುವ ಖಯ್ಯಾಲಿ ಅಲ್ಲ. ಸಂಶೋಧನೆ ಎನ್ನುವುದು ಪ್ರವೃತ್ತಿಯಾಗಬೇಕು. ಅದು ಫ್ಯಾಶನ್ ಅಲ್ಲ. ಅದು ಹೊಸದೊಂದನ್ನು ಹುಡುಕಾಡುವ ವ್ಯಕ್ತಿಗತ ಉತ್ಸಾಹದ ಪ್ರತಿಫಲ ಎಂದು ಹೇಳಿದರು. ನಿರಂತರ ಓದಿನ ಆಸಕ್ತಿ ಮತ್ತು ಸಂಶೋಧನೆಯ ಹಸಿವು ಇಲ್ಲದವರು ಉತ್ತಮ ಪ್ರಾಧ್ಯಾಪಕರಾಗಲು ಸಾಧ್ಯವಿಲ್ಲ. ಸಂಶೋಧನೆಯು ಬೋಧನೆಯ ಅವಿಭಾಜ್ಯ ಅಂಗ. ಒಬ್ಬ ಪ್ರಾಧ್ಯಾಪಕ ಸದಾ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಪ್ರತಿಯೊಂದು ಹೊಸ ಸಂಗತಿಯೂ ಒಂದು ಸಂಶೋಧನೆಯ ಫಲವಾಗಿರುತ್ತದೆ. ತರಗತಿ ನಿರ್ವಹಿಸುವಾಗ ಅಧ್ಯಾಪಕ ಹೊಸ ಐಡಿಯಾ, ಹೊಸ ಪರಿಕಲ್ಪನೆ ಹೊಳೆಸಿಕೊಳ್ಳುವುದುಕ್ಕೆ ಈ ಸಂಶೋಧನಾತ್ಮಕ ಗುಣವೇ ಆಧಾರವಾಗಿರುತ್ತದೆ ಎಂದು ತಿಳಿಸಿದರು. ಸಂಶೋಧನೆ ಎಂದರೆ ಕೇವಲ ಓದು ಅಥವಾ ಬರವಣಿಗೆ ಮಾತ್ರವಲ್ಲ. ಅದು ಸಂಶೋಧಕನ ಅನುಭವ ಮತ್ತು ವೈಯಕ್ತಿಕ ಗಮನವನ್ನು ಅಪೇಕ್ಷಿಸುತ್ತದೆ. ಅಧ್ಯಯನ, ಜ್ಞಾನ ವಿಸ್ತರಣೆಯ ಹಾದಿಯಲ್ಲಿಹೊಸ ವಾದಗಳ ಮಂಡಿಸಬೇಕಾಗುತ್ತದೆ. ಈಗಾಗಲೇ ಇರುವ ಜ್ಞಾನದ ಆಧಾರದ ಮೇಲೆ ಹೊಸದನ್ನು ರೂಪಿಸಬೇಕಾಗುತ್ತದೆ. ಹಿಂದಿನ ಜ್ಞಾನ ವೈಜ್ಞಾನಿಕ ತಳಹದಿಯನ್ನು ಕಲ್ಪಿಸಿಕೊಡುತ್ತದೆ. ಈ ಆಯಾಮದಲ್ಲಿ ಬೌದ್ಧಿಕ ಬಲ ರೂಪಿಸಿಕೊಳ್ಳಬೇಕು. ಹೊಸ ಚಿಂತನೆಕಟ್ಟಬೇಕು. ಆಳವಾದ ಒಳನೋಟಗಳ ಮೂಲಕ ಸಂಶೋಧನೆಯ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಗತ್ತಿನಲ್ಲಿ ಇಲ್ಲದೇ ಇರುವುದನ್ನು ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ಒಂದು ನಿರ್ದಿಷ್ಟ ಸಂಶೋಧನಾ ಪ್ರಮೇಯ ಕಂಡುಕೊಂಡು ಅದನ್ನು ವಿಸ್ತರಣೆ ಅಥವಾ ಪರಿಷ್ಕರಣೆ ಮಾಡುವ ಇಲ್ಲವೇ ಹೊಸ ವಿಷಯವನ್ನು ನೀಡುವುದರ ಕುರಿತಾಗಿ ಸಂಶೋಧಕನಿಗೆ ಸ್ಪಷ್ಟವಾದ ದೃಷ್ಟಿಕೋನ ಇರಬೇಕು. ಇತ್ತೀಚಿನ ಸಂಶೋಧನೆಗಳು ಜಾಳುಜಾಳಾಗುತ್ತಿವೆ ಎಂಬ ಕೊರಗು ವ್ಯಕ್ತವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಮಾರ್ಗದರ್ಶಕರು ಹೆಚ್ಚು ಗಮನವಹಿಸಬೇಕು ಈ ಕೊರಗು ನಿವಾರಿಸಿ ಗುಣಮಟ್ಟದ ಸಂಶೋಧನೆ ಸಾಧ್ಯವಾಗಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಮಾತನಾಡಿದರು. ಸಂಶೋಧನೆಯ ಹಾದಿ ಪ್ರಯಾಸದಾಯಕವಾಗಿದ್ದರೂ ಖುಷಿ ನೀಡುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಹೆಚ್ಚಾಗಿ ಆಕರ್ಷಿಸಬೇಕು ಎನ್ನುವ ಉದ್ದೇಶದಿಂದ ಕಾಲೇಜು ಸಂಶೋಧನಾ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್‌ಡಾ. ಸೌಮ್ಯಾ ಬಿ. ಪಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕರಾದ ಡಾ. ದಿವಾಕರ ಕೆ., ಡಾ. ಸುದರ್ಶನ್ ಪಿ. ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ. ಎಂ ಆಸ್ಪತ್ರೆ : ಉಚಿತ ಆರೋಗ್ಯ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ. ಎಂ ಆಸ್ಪತ್ರೆ : ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮುಂಡಾಜೆ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕುಕ್ಕಾವು, ಜನಜಾಗೃತಿ ಸಮಿತಿ ಕುಕ್ಕಾವು ಇದರ ಸಹಕಾರದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಜಿರೆ ಎಸ್.ಡಿ. ಎಂ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾವು ಇಲ್ಲಿ ನಡೆಸಲಾಯಿತು. ಕೂಡಬೆಟ್ಟು ಸದಾಶಿವೇಶ್ವರ ದೇವಸ್ಥಾನದ ಮೊಕ್ತೇಸರರಾದ ವಾಸುದೇವ ಕಕ್ಕೆನೇಜಿ ಶಿಬಿರವನ್ನು ಉದ್ಘಾಟಿಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲ್ವಿಚಾರಕರಾದ ರವೀಂದ್ರ ಗುಡಿಗಾರ್ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೇವೆಗಳ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯಚಂದ್ರ ಗೌಡ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿ ಯಶೋಧರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರೀಶ್ ಮಾಂಜ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ನೋಣಯ್ಯ ಗೌಡ, ಬಂಗಾಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡ, ಒಕ್ಕೂಟದ ಅಧ್ಯಕ್ಷ ಜಗದೀಶ್ ಕುಂಬಾರ ಮತ್ತು ಸುರೇಶ್, ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಲೋಕೇಶ್ ಕುಂಬಾರು ಉಪಸ್ಥಿತರಿದ್ದರು. ಉಜಿರೆ ಎಸ್.ಡಿ. ಎಂ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ| ಪ್ರತೀತ್, ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ರಜತ್, ಕಣ್ಣಿನ ತಜ್ಞರಾದ ಡಾ| ಶುಭಾಶ್ಚಂದ್ರ, ಇ.ಎನ್.ಟಿ ತಜ್ಞರಾದ ಡಾ| ರೋಹನ್ ದೀಕ್ಷಿತ್, ಜನರಲ್ ಫಿಸಿಷಿಯನ್ ಡಾ| ಪ್ರೌಸ್ಟಿಲ್ ಮತ್ತು ಡಾ| ಆದರ್ಶ ತಪಾಸಣೆಯನ್ನು ನಡೆಸಿಕೊಟ್ಟರು. 504 ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ತ್ರಿವೇಣಿ ಸ್ವಾಗತಿಸಿ, ವಲಯ ಮೇಲ್ವಿಚಾರಕ ಜನಾರ್ದನ್ ಧನ್ಯವಾದ ಅರ್ಪಿಸಿದರು. ಸೇವಾಪ್ರತಿನಿಧಿ ರಶ್ವಿ ಸುರೇಖಾ ಹಾಗೂ ಶೌರ್ಯವಿಪತ್ತು ನಿರ್ವಹಣಾ ಘಟಕದ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಶಿಬಿರದ ಯಶಸ್ವಿಗೆ ಸಹಕರಿಸಿದರು.

ಡಿಜಿಟಲ್ ಲೋಕುಡ್ ತುಳು ಒಂದು ದಿನದ ಬರವಣಿಗೆ ಕಮ್ಮಟ

Article Image

ಡಿಜಿಟಲ್ ಲೋಕುಡ್ ತುಳು ಒಂದು ದಿನದ ಬರವಣಿಗೆ ಕಮ್ಮಟ

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ಆಸಕ್ತಿ ಮೂಡುವಂತೆ ಮಾಡಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿಕಾಡ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನಲ್ಲಿ ನಡೆದ ‘ಡಿಜಿಟಲ್ ಲೋಕುಡ್ ತುಳು’ ಒಂದು ದಿನದ ಬರವಣಿಗೆ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನ, ತುಳು ಐಸಿರ, ಒಂಜಿ ದಿನ ಬಲೆ ಓದುಗ ಕೂಟ, ಮಕ್ಕಳ ರಂಗತರಬೇತಿ ಶಿಬಿರ, ತುಳುನಾಡ ಸಿರಿ ಮದಿಪು, ತುಳುಭಾಷೆ ಬದ್ಕ್ ಗೇನದ ಪೊಲಬು ಮುಂತಾದ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತುಳುವಿನ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗಿವೆ. ತುಳು ಭಾಷೆಯ ಸಮೃದ್ಧತೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಬೇಕು. ತುಳು ಸಾಹಿತ್ಯ ಓದುವ ಅಭಿರುಚಿಯನ್ನು ಯುವಜನತೆಯಲ್ಲಿ ಬೆಳೆಸಬೇಕಾಗಿದೆ. ತುಳುನಾಡಿನ ತಿಂಡಿತಿನಿಸುಗಳು, ಆಚರಣೆಗಳು, ಆಟಗಳು, ದಸರಾ ವೇಷಗಳು, ಊರಿನ ಹೆಸರುಗಳು ವಿಶೇಷತೆಯಿಂದ ಕೂಡಿವೆ. ಇವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತುಳು ಮೌಖಿಕ ಪರಂಪರೆಯಿಂದ ಆರಂಭವಾಗಿ ತಳೆ ಗರಿಯಲ್ಲಿ ಬರೆಯುವ ಕಾಲದಿಂದ ಇದೀಗ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ. ಈ ಪ್ರಕ್ರಿಯೆಯಲ್ಲಿ ಯುವಜನತೆ ಹೆಚ್ಚು ಆಸಕ್ತಿ ತೋರಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತುಳು ಸಾಹಿತ್ಯ ಅಕಾಡೆಮಿ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹಿರಿ–ಕಿರಿಯರ ಸಹಭಾಗಿತ್ವದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ವಿಷಯ. ತುಳು ಭಾಷೆಯನ್ನು ಬೆಳೆಸುವುದರೊಂದಿಗೆ ಅದರ ಶ್ರೀಮಂತ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ, ವಿಶೇಷವಾಗಿ ತುಳು ಸಾಹಿತ್ಯದ ಬೆಳವಣಿಗೆಯಲ್ಲಿ ಬಾಸೆಲ್ ಮಿಷನ್‌ನ ಕೊಡುಗೆ ಅನನ್ಯ ಎಂದರು. ಸಂತ ಅಲೋಶಿಯಸ್ ಪರಿಗಣಿತ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಕಮ್ಮಟವನ್ನು ನಡೆಸಿಕೊಟ್ಟು ಮಾತನಾಡಿ, “ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಹಾಗೂ ವಿಸ್ತರಿಸಲು ಡಿಜಿಟಲ್ ಜಗತ್ತು ಅಪೂರ್ವ ಅವಕಾಶಗಳನ್ನು ಒದಗಿಸಿದೆ. ತುಳು ವಿಕಿಪೀಡಿಯದಲ್ಲಿ ಈಗಾಗಲೇ ಮಹತ್ವದ ಮಾಹಿತಿಗಳು ದಾಖಲಾಗಿವೆ. ಆದರೆ ಅದು ನಿಂತ ನೀರಾಗಬಾರದು. ನಿರಂತರ ಪರಿಷ್ಕರಣೆ ಹಾಗೂ ಅಮೂಲ್ಯ ಮಾಹಿತಿಗಳ ದಾಖಲಾತಿ ಅಗತ್ಯ, ಎಂದು ತಿಳಿಸಿದರು. ಅವರು ವಿಕಿಪೀಡಿಯದಲ್ಲಿ ಲೇಖನ ಬರೆಯುವ ಕುರಿತು ಪ್ರಾಯೋಗಿಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಮ್ಮಟದಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯ ಪಾಂಗಳ ಬಾಬು ಕೊರಗ, ಪ್ರಾಂಶುಪಾಲ ಡಾ. ಕುರಿಯನ್ ಇದ್ದರು. ಡಾ. ಯೋಗೀಶ ಕೈರೋಡಿ ಸ್ವಾಗತಿಸಿ, ಸೌಮ್ಯ ಕುಂದರ್ ನಿರೂಪಿಸಿ, ಅನಿಶಾ ಶೆಟ್ಟಿ ವಂದಿಸಿದರು.

ರಾಜ್ಯ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಮಹಾಸಭೆ

Article Image

ರಾಜ್ಯ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಮಹಾಸಭೆ

ರಾಜ್ಯ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಮಹಾಸಭೆ ತಾರೀಕು 24-08-2025ರಂದು ಕರ್ನಾಟಕ ರಾಜ್ಯ ಸಹಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಇದರ ಮಹಾಸಭೆಯು ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಡಾ. ಕೆ. ಜಯಕೀರ್ತಿ ಜೈನ್ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್ ಸಹಕಾರಿ ಸಂಘದ ಗತ ವರ್ಷದ ವರದಿಯನ್ನು ಸಭೆಗೆ ಮಂಡಿಸಿ 2025-26ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದಿಸಲಾಯಿತು. ಈ ಸಂದರ್ಭದಲ್ಲಿ ಕ್ಲಪ್ತ ಸಮಯದಲ್ಲಿ ದಂಡನೆ ಬಡ್ಡಿ ಇಲ್ಲದೆ ಸಾಲ ಮರುಪಾವತಿ ಮಾಡಿದ ಗ್ರಾಹಕರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸರಕಾರಿ ನೌಕರರ ಮಕ್ಕಳಿಗೆ ನೀಡುವ ಪ್ರೋತ್ಸಾಹಕ ಬಹುಮಾನವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 584 (ಶೇ.90) ಅಂಕ ಪಡೆದ ದುರ್ಗಾದಾಸ್ ಎಎಸ್‌ಐ ಬೆಳ್ತಂಗಡಿ ಇವರ ಸುಪುತ್ರ ಸಂಜನಾ ಎಂ.ಡಿ. ಇವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭ ನಿರ್ದೇಶಕರಾದ ಅಬ್ದುಲ್ ರಜಾಕ್ (ಆರೋಗ್ಯ ಇಲಾಖೆ) ಹಾಗೂ ರತ್ನಾವತಿ (ಸಿ.ಡಿ.ಪಿ.ಓ) ಇಲಾಖೆ ಇವರನ್ನು ಗೌರವಿಸಲಾಯಿತು. ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 20ರಷ್ಟು ಲಾಭಾಂಶವನ್ನು ಅಧ್ಯಕ್ಷರು ಘೋಷಿಸಿದರು. ಸಂಘದಲ್ಲಿ ಸಾಲ ಮೊತ್ತ ವಸೂಗಾಗಿ ನಿರ್ಮಲ್ ಕುಮಾರ್ ನಾರಾವಿ ಎಂಬುವವರನ್ನು ನೇಮಿಸಿದ್ದು ಅವರು ಸಂಘದ ನಿಬಂಧನೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇದ್ದುದರಿಂದ ಅವರನ್ನು ಸದ್ರಿ ಹುದ್ದೆಯಿಂದ ಮುಕ್ತಗೊಳಿಸಿದ್ದಿ ಅವರು ಇದೀಗ ಸಂಘದ ಬ್ಗೆ ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದಿರಬೇಕೆಂದು ಅಧ್ಯಕ್ಷರು ವಿನಂತಿಸಿದರು. ಸಂಘದ ಉಪಾಧ್ಯಕ್ಷರಾದ ಚಿದಾನಂದ ಹೂಗಾರ್, ನಿರ್ದೇಶಕರಾದ ಅಬ್ದುಲ್ ರಜಾಕ್, ಚಂದ್ರಶೇಖರ್, ಪರಮೇಶ್, ರತ್ನಾವತಿ, ಆರತಿ, ಪ್ರಶಾಂತ್, ಹರಿಪ್ರಸಾದ್, ವಾರಿಜ ಕೆ. ಉಪಸ್ಥಿತರಿದ್ದರು. ಕೊಕ್ಕಡ ಶಾಖಾ ವ್ಯವಸ್ಥಾಪಕ ಅತಿಶಯ ಜೈನ್ ಉಪಸ್ಥಿತರಿದ್ದರು. ಸಂಘದ ಸಲಹೆಗಾರರಾದ ವಸಂತ್ ಸುವರ್ಣ ಸ್ವಾಗತಿಸಿ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ವಶಾಲ, ಧಾಮಿನಿ ಸಹಕರಿಸಿದರು. ಪಿಗ್ಮಿ ಸಂಗ್ರಾಹಕರೆಲ್ಲರು ಉಪಸ್ಥಿತರಿದ್ದು ಸಹಕರಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ರಮೇಶ್ ಹಾಗೂ ಅವರ ತಂಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಈ ಶಿಬಿರವನ್ನು 100ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರ

ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಫಿಸಿಯೋಥೆರಪಿ ದಿನದ ಪ್ರಯುಕ್ತ ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರವನ್ನು ದಿನಾಂಕ 5/09/2025 ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಆದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನರ ಮತ್ತು ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ, ಮಕ್ಕಳಲ್ಲಿ ಕಂಡುಬರುವ ದೈಹಿಕ ತೊಂದರೆಗಳಿಗೆ, ಶಸ್ತ್ರಚಿಕಿತ್ಸೆಯ ಬಳಿಕದ ಫಿಸಿಯೋಥೆರಪಿ ಮತ್ತು ನೋವು ನಿವಾರಣೆಗಳಿಗೆ ಮಾಡಬೇಕಾದ ಫಿಸಿಯೋಥೆರಪಿಗಳನ್ನು ಈ ಶಿಬಿರದಲ್ಲಿ ಉಚಿತವಾಗಿ ಮಾಡಲಾಗುವುದು. ಫಿಸಿಯೋಥೆರಪಿ ಸಮಾಲೋಚನೆ ಉಚಿತ ಮತ್ತು ಫಿಸಿಯೋಥೆರಪಿ ವಿಧಾನಗಳಿಗೆ 20% ರಿಯಾಯತಿ ದೊರೆಯಲಿದೆ. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ತಜ್ಞರಾದ ಸನ್ನಿಧಿ ಜೈನ್ ಮತ್ತು ಪ್ರೀಥಮ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಈ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ 04/09/2025ರ ಒಳಗೆ ಕಚೇರಿ ಸಮಯದಲ್ಲಿ 7760397878 ಅಥವಾ 8073349216 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಒಂದು ದಿನದ ಕಾರ‍್ಯಗಾರ

Article Image

ರಾಜ್ಯ ಮಟ್ಟದ ಒಂದು ದಿನದ ಕಾರ‍್ಯಗಾರ

ಮೂಡುಬಿದಿರೆ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ‘ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು. ಮಂಗಳೂರು ವಿವಿ ಕಾಲೇಜಿನ ಡಾ ಮಾಧವ ಎಂಕೆ ಮಾತನಾಡಿ, ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರು ಸರಸ್ವತಿಯ ದಾಸೋಹಿಗಳು. ಅವರ ಸೇವೆ ಅಕ್ಷರಶಃ ಮಾನವ ಸಮಾಜದ ಬೆಳಕಿನ ದೀಪ. ಜ್ಞಾನ ಹಂಚುವ ಕಾರ‍್ಯದಲ್ಲಿ ತೊಡಗಿರುವ ಅವರು ನಿಜಕ್ಕೂ ಪುಣ್ಯವಂತರು ಎಂದರು. ಈ ಜಗತ್ತಿನಲ್ಲಿ ಭಗವಂತನು ಮಾನವನಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ವರವೇ ಸಮಯ. ಧನ, ಪದವಿ, ಸ್ಥಾನಮಾನದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಸಮಯ ಮಾತ್ರ ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ. ಈ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆಯೇ ಜೀವನದ ಸಾಧನೆ ನಿರ್ಧಾರವಾಗುತ್ತದೆ ಎಂದರು. ಕಲಿಕೆಯ ದೇಗುಲವಾದ ಗ್ರಂಥಾಲಯದಲ್ಲಿ ಸಮಯ ಕಳೆಯುವವರು ನಿಜವಾದ ಸಾಧಕರು. ಓದುವ ಹವ್ಯಾಸ ಇರುವವರು ಎಂದಿಗೂ ಅಧೀರರಾಗುವುದಿಲ್ಲ. ಓದಿನಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಒತ್ತಡಮುಕ್ತ ಜೀವನ ಸಾಧ್ಯವಾಗುವುದರ ಜೊತೆಗೆ ಜ್ಞಾನದ ಹಸಿವು, ಭಾವನಾತ್ಮಕ ಧೈರ್ಯ, ಸ್ಥೈರ್ಯ, ಕಲ್ಪನಾಶಕ್ತಿ ಮತ್ತು ಭಾಷಾಸಂಪತ್ತು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳನ್ನು ಗ್ರಂಥಾಲಯದತ್ತ ಸೆಳೆಯುವ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುವುದು ಕಾಲದ ಅವಶ್ಯಕತೆ” ಎಂದು ಸಲಹೆ ನೀಡಿದರು. ಬದುಕನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಬದುಕು ನಿರ್ಮಾಣವಾಗುತ್ತದೆ. ಜೋಗದ ಜಲಪಾತವನ್ನು ನೋಡಿ ಕೆಲವರು ಕೇವಲ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾರೆ. ಆದರೆ ಅದೇ ದೃಶ್ಯವನ್ನು ಸರ್ ಎಂ. ವಿಶ್ವೇಶ್ವರಯ್ಯ ಕಂಡಾಗ, ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರೂಪಿಸುವ ಪ್ರೇರಣೆ ದೊರಕಿತು. ಅದೇ ಜೋಗದ ಜಲಪಾತವನ್ನು ಕವಿ ನಿಸಾರ್ ಅಹಮದ್ ನೋಡಿದಾಗ, ಪ್ರಕೃತಿಯ ಸೊಬಗಿನೊಂದಿಗೆ ಮಾನವ ಜೀವನವನ್ನು ಜೋಡಿಸಿ “ನಿತ್ಯೋತ್ಸವ” ಎಂಬ ಅದ್ಭುತ ಕವಿತೆಯನ್ನು ರಚಿಸಿದರು. ಮತ್ತೊಬ್ಬ ಸಿನಿಮಾ ನಟ ಗಣೇಶ್ ಅದೇ ಜಲಪಾತವನ್ನು ನೋಡಿ ಹರ್ಷೋದ್ಗಾರಗೊಂಡು “ಕುಣಿದು ಕುಣಿದು ಬಾರೆ” ಎಂಬ ಹಾಡಿಗೆ ನೃತ್ಯ ಮಾಡಿದರು ಎಂದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಕುರಿಯನ್ ಮಾತನಾಡಿ, ಜಗತ್ತಿನ ಎಲ್ಲಾ ಸಾಧನೆಯ ಹಿಂದೆ ಗ್ರಂಥಾಲಯದ ಪಾತ್ರವಿದೆ. ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ, ಮಾಸ್ತಿಯನ್ನು ಓದಿಕೊಂಡು ಜ್ಞಾನದ ವರ್ಜನೆಗೆ ಶ್ರಮಿಸಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಗಮನ ಗ್ರಂಥಾಲಯದಿಂದ ದೂರವಾಗುತ್ತಿದೆ. ಇಂಟರ್ನೆಟ್, ಮೊಬೈಲ್, ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಆಕ್ರಮಿಸಿವೆ. ಈ ಹಿನ್ನೆಲೆ, ವಿದ್ಯಾರ್ಥಿಗಳನ್ನು ಪುನಃ ಗ್ರಂಥಾಲಯದತ್ತ ಸೆಳೆಯುವ ನವೀನ ಕಾರ್ಯಯೋಜನೆಗಳನ್ನು ರೂಪಿಸುವುದು ಕಾಲದ ಅವಶ್ಯಕತೆ. ಈ ನೆಲೆಯಲ್ಲಿ ಈ ಕಾರ‍್ಯಗಾರ ಹೊಸ ಸಾಧ್ಯತೆಗಳ ಕುರಿತು ಯೋಚಿಸಲಿ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದ ನ್ಯೂಸ್ ಬುಲೆಟಿನ್‌ನ್ನು ಬಿಡುಗಡೆಗೊಳಿಸಲಾಯಿತು. ಸಂಘದ ನಿವೃತ್ತ ಗ್ರಂಥಪಾಲಕರಾದ ಬೇಸಂಟ್ ಕಾಲೇಜಿನ ಪ್ರೋ ವಾಸಪ್ಪ ಗೌಡ, ಮಾಹೆಯ ಲೀಲಾವತಿಯವರನ್ನು ಸನ್ಮಾನಿಸಲಾಯಿತು. ಅಧ್ಯಾಪಕ ಭೂಷಣಾ ಪ್ರಶಸ್ತಿ ವಿಜೇತೆರಾದ ಯಶೋಧಾ ಹಾಗೂ ವಿಜಯಲಲಿತಾ, ಶಿಕ್ಷಣಾ ಇಲಾಖೆಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಗ್ರಂಥಪಾಲಕಿ ಪ್ರಶಸ್ತಿ ವಿಜೇತೆ ರಂಜಿತಾ ಸಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅದಿಥಿ, ಈ ವರ್ಷ ಪಿಎಚ್‌ಡಿ ಪದವಿ ಪಡೆದ ಡಾ ಪ್ರೇಮಾ, ಡಾ ಲೋಕೇಶ್ ಹಾಗೂ ಡಾ ಲೋಕನಾಥ್‌ರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಕಾಲೇಜಿನ ಗ್ರಂಥಾಲಯ ವಿಭಾಗ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು. ಮೈಸೂರು ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ ಆದಿತ್ಯ ಕುಮಾರಿ ಎಚ್, ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಾಪಾಲಕಿ ಶ್ಯಾಮಲತಾ ಇದ್ದರು. ಕಾರ‍್ಯಗಾರದಲ್ಲಿ ಸಂಘದ 85ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡರು. ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದಅಧ್ಯಕ್ಷೆ ಡಾ ರೇಖಾ ಡಿ ಪೈ ಸ್ವಾಗತಿಸಿ, ಕರ‍್ಯದರ್ಶಿ ಡಾ ವನಜಾ ಬಿ. ವಂದಿಸಿ, ಸದಸ್ಯೆ ಡಾ ಸುಜಾತಾ ಕಾರ‍್ಯಕ್ರಮ ನಿರೂಪಿಸಿದರು.

ಚಿಪ್ಪು ತೆಗೆದು ಮುತ್ತನ್ನು ಪಡೆಯುವ ಭಾಷೆ ಸಂಸ್ಕೃತ – ಡಾ. ಶ್ರೀಶ ಕುಮಾರ

Article Image

ಚಿಪ್ಪು ತೆಗೆದು ಮುತ್ತನ್ನು ಪಡೆಯುವ ಭಾಷೆ ಸಂಸ್ಕೃತ – ಡಾ. ಶ್ರೀಶ ಕುಮಾರ

ಕಲ್ಲಬೆಟ್ಟು : ಸಂಸ್ಕೃತ ಭಾಷೆಯು ಸಮುದ್ರದ ಆಳದಿಂದ ಹುಟ್ಟುವ ಮುತ್ತಿನಂತೆ. ಮುತ್ತನ್ನು ಪಡೆಯಲು ಚಿಪ್ಪನ್ನು ಒಡೆದು ನೋಡುವ ಅಗತ್ಯವಿದ್ದಂತೆ ಸಂಸ್ಕೃತವನ್ನು ಅರಿಯಲು ಅದರ ಪಾಠಪುಸ್ತಕದ ಚಿಪ್ಪುಗಳನ್ನು ಮೀರಿ ಒಳನೋಟ ಬೀರಿದರೆ ಅದರ ನಿಜವಾದ ಮೌಲ್ಯವು ನಮ್ಮ ಜೀವನವನ್ನು ಅಂದಗೊಳಿಸುತ್ತದೆ. ಭಾಷೆಯು ವ್ಯಕ್ತಿಗೆ ಆತ್ಮವಿಶ್ವಾಸ ತುಂಬಿ ನೈತಿಕ ನೆಲೆಯಲ್ಲಿ ಬದುಕಿಗೆ ಪ್ರೇರಣೆಯಾಗಿ ಜೀವನದ ಎಲ್ಲ ಬಾಗಿಲುಗಳನ್ನು ತೆರೆಯುವ ಕೀಲಿಕೈ ಇದ್ದಂತೆ. ಭಾರತೀಯ ಜ್ಞಾನ ಪರಂಪರೆಗಳ ಮೂಲಾಧಾರವಾದ ಸಂಸ್ಕೃತ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಸಂಸ್ಕೃತಿ, ಪರಂಪರೆ, ಮೌಲ್ಯ ಹಾಗೂ ಚಿಂತನೆಗಳ ಜೀವಂತ ಪ್ರತಿರೂಪ. ವಿದ್ಯಾರ್ಥಿಗಳು ಇದರ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಅವರು ನಿಜವಾದ ಜ್ಞಾನವನ್ನು ಸಂಪಾದಿಸುತ್ತಾರೆ. ನೋಡಿ ಆಲಿಸಿ ಸ್ವಯಂ ಚಿಂತನೆಯನ್ನು ಮಾಡಿ ವಿಷಯವನ್ನು ಮಥಿಸಿದರೆ ಕಲಿಕೆ ಪರಿಪೂರ್ಣವಾಗಿ ಬದುಕಿಗೆ ದಾರಿದೀಪವಾಗುವ ಬಗೆಯನ್ನು ಸಂಸ್ಕೃತವು ಸೂತ್ರ ರೂಪದಲ್ಲಿ ತಿಳಿಸಿಕೊಟ್ಟಿದೆ ಎಂದು ಪುತ್ತೂರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶ ಕುಮಾರ ಅಭಿಪ್ರಾಯಪಟ್ಟರು. ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರಶ್ಮಿತಾ ಜೈನ್ ಮಾತನಾಡಿ ನವ ಚೇತನದ ಭಾಷೆಯಾದ ಸಂಸ್ಕೃತವು ವಿಶ್ವ ಭಾಷೆಯಾಗಿ, ಸಂಸ್ಕಾರದ ಬಿಂಬವಾಗಿ ಭಾರತವನ್ನು ಪ್ರತಿನಿಧಿಸುತ್ತಿದೆ. ಭಾರತದ ಪ್ರಾಚೀನ ಸಾಹಿತ್ಯ-ಜ್ಞಾನ ಪರಂಪರೆಯ ಶ್ರೀಮಂತಿಕೆಗೆ ಅನ್ಯದೇಶೀಯರೂ ಒಲವನ್ನು ತೋರುತ್ತಿರುವುದು ಇದಕ್ಕೆ ನಿದರ್ಶನ ಎಂದು ಸಂಸ್ಕೃತ ಮಹತ್ತಿಕೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಸಂಸ್ಕೃತ ಗೀತಗಾಯನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಸಂಸ್ಕೃತ ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿ, ಗಗನ್ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕು. ಹಿಮಾನಿ ಶೆಟ್ಟಿ ನಿರೂಪಿಸಿ ಸಂಸ್ಕೃತ ಶಿಕ್ಷಕ ಪಾರ್ಶ್ವನಾಥ ಜೈನ್ ವಂದಿಸಿದರು.

ಉಜಿರೆ ಎಸ್.ಡಿ.ಎಂ ಕಾಲೇಜು: ಪುಸ್ತಕ ಬಿಡುಗಡೆ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ ಕಾಲೇಜು: ಪುಸ್ತಕ ಬಿಡುಗಡೆ ಕಾರ್ಯಕ್ರಮ

ಉಜಿರೆ : ಪ್ರಸ್ತುತ ಸಂದರ್ಭದಲ್ಲಿ ಪುಸ್ತಕ ರಚಿಸಿ ಪ್ರಕಟಣದ ಹಂತಕ್ಕೆ ತರುವುದು ತುಸು ಕಷ್ಟ, ಪ್ರಕಟಗೊಂಡರೂ ಬಳಿಕ ಕಾಡುವ ಪ್ರಶ್ನೆಯೆಂದರೆ ಓದುವ ಸಮೂಹ ಯಾವುದೆಂದು. ಪುಸ್ತಕಗಳಿಂದ ದೊರಕುವ ಅಧಿಕೃತ ಜ್ಞಾನಕ್ಕೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಆದ್ದರಿಂದ ಪುಸ್ತಕದಿಂದ ದೊರಕುವ ವಿಚಾರವು ಅತ್ಯಂತ ಅಮೂಲ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಹೇಳಿದರು. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಮಣ್ಯೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿರುವ ಸಮಗ್ರ ಬೆಳವಣಿಗೆ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ. ವಿ. ಜೋಶಿ ಹಾಗೂ ಪ್ರೊ. ರಮೇಶ್ ಸಾಲಿಯಾನ್ ಅವರು ಬರೆದಿರುವ "ಎ ಸರ್ಚ್ ಫಾರ್ ಇನ್ ಕ್ಲೂಸಿವ್ ಗ್ರೋಥ್ ಇನ್ ಅರ್ಥಶಾಸ್ತ್ರ" ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅರ್ಥಶಾಸ್ತ್ರ ವಿಭಾಗದಿಂದ ಸಂಪಾದಿಸಲಾದ ಮುಖ್ಯ ಸಂಕಲನಕಾರ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಮತ್ತು ಸಹ ಸಂಕಲನಕಾರ ಡಾ. ಗಣರಾಜ ಕೆ. ರವರಿಂದ ಮೂಡಿದ "ರೂರಲ್ ಡೆವಲಪ್ಮೆಂಟ್ ಫಾರ್ ಜಾಬ್ ಕ್ರಿಯೇಶನ್ ಅಂಡ್ ಪಾವರ್ಟಿ ಅಲಿವೇಶನ್ ಇನ್ ಎಮರ್ಜಿಂಗ್ ಎಕನಾಮೀಸ್" ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸಿ ಮಾತನಾಡಿದ ಡಾ.ಸತೀಶ್ಚಂದ್ರ ಎಸ್. ಅವರು ಸಾವಿರ ಎರಡು ಸಾವಿರ ವರ್ಷಗಳ ಹಿಂದೆಯೇ ದೂರದೃಷ್ಟಿಯನ್ನು ಹಾಯಿಸಿ ಒಂದು ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಏನೆಲ್ಲಾ ಮಾಡಬೇಕು ಹಾಗೂ ಆರ್ಥಿಕವಾಗಿ ಎಷ್ಟು ಬಲಿಷ್ಠರಾಗಿರಬೇಕು ಎಂಬ ಮಾಹಿತಿಯನ್ನು ಕೌಟಿಲ್ಯನು ಅಂದಿನ ಕಾಲದಲ್ಲಿ ಈ ಅರ್ಥಶಾಸ್ತ್ರದಲ್ಲಿ ಒಳಗೊಡಿಸಿಕೊಂಡಿದ್ದನು. ಪುಸ್ತಕಗಳನ್ನು ಓದುವವರು ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ಈ ರೀತಿಯ ಮಾಹಿತಿ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುತ್ತದೆ. ಕಾಲೇಜಿನಲ್ಲಿ ಹಲವಾರು ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಬಳಿಕ ಡಾ. ಜಿ. ವಿ.ಜೋಶಿ, ತಾವು ಬರೆದ ಪುಸ್ತಕದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉದ್ದೇಶಿಸಲಾದ 'ಒಳಗೊಳ್ಳುವಿಕೆಯ ಮೂಲಕ ಅಭಿವೃದ್ಧಿ' ಎಂಬ ವಿಷಯದ ಮೇಲೆ ವಿಚಾರ ಮಂಡನೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಈಗಿನ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದುವರೆಯುವ ಆಸಕ್ತಿ ಇರುತ್ತದೆ. ಕೆಲವರಿಗೆ ಮುಂದೇನು ಮಾಡಬೇಕು ಎನ್ನುವ ಖಚಿತತೆ ಇರುವುದಿಲ್ಲ. ಸಾಹಿತ್ಯಾಸಕ್ತರು ಕಾಲೇಜು ಜೀವನದಿಂದಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕಾಲೇಜು ಉತ್ತಮ ವೇದಿಕೆ. ತಮ್ಮ ಆಯ್ಕೆಯ ವಿಷಯದ ಜೊತೆಗೆ ಪುಸ್ತಕಗಳ ಒಲವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ನವದೆಹಲಿಯ ಜೆ.ಎನ್. ಯು. ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ರಮೇಶ್ ಸಾಲಿಯನ್ ಸೇರಿದಂತೆ. ಕಾರ್ಯಕ್ರಮ ಸಂಯೋಜಕರಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗಣರಾಜ ಕೆ. ಹಾಗೂ ಸುಬ್ರಹ್ಮಣ್ಯ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ. ಟಿ. ಹಾಗೂ ಪ್ರಾಧ್ಯಾಪಕ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಕಾರ್ಯಕ್ರಮ ಸಂಯೋಜಕ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಗಣರಾಜ ಕೆ. ಸ್ವಾಗತಿಸಿ, ರಕ್ಷಾ ಆರ್. ದೇವಾಡಿಗ ವಂದಿಸಿದರು. ವಿದ್ಯಾರ್ಥಿನಿ ಮಾನ್ಯ ಕೆ.ಅರ್. ಕಾರ್ಯಕ್ರಮವನ್ನು ನಿರೂಪಿಸಿದರು.

ಮಹಿಳಾ ಕ್ಷೇಮಪಾಲನಾ ಸಮಿತಿಯ 2025-26ರ ಚಟುವಟಿಕೆಗಳ ಉದ್ಘಾಟನೆ

Article Image

ಮಹಿಳಾ ಕ್ಷೇಮಪಾಲನಾ ಸಮಿತಿಯ 2025-26ರ ಚಟುವಟಿಕೆಗಳ ಉದ್ಘಾಟನೆ

ಮೂಡುಬಿದಿರೆ: ಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟ. ಈ ಅವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಗುರಿಯನ್ನು ಸಾಧಿಸಲು ಕ್ರಿಯಾಶೀಲರಾಗಬೇಕು. ನಿಜವಾದ ಕ್ರಿಯಾಶೀಲತೆಯೇ ಯಶಸ್ಸಿನ ದಾರಿಯನ್ನು ತೆರೆದಿಡುತ್ತದೆ ಎಂದು ಆಳ್ವಾ ಫಾರ್ಮಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗ್ರೀಷ್ಮಾ ಆಳ್ವ ನುಡಿದರು. ಅವರು ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ಸಮಿತಿಯ 2025-26ರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯ, ಆದರೆ ಅದನ್ನು ಬಳಸಿಕೊಳ್ಳುವ ರೀತಿಯೇ ಭವಿಷ್ಯವನ್ನು ನಿರ್ಧರಿಸುತ್ತದೆ. ತಪ್ಪು-ಸರಿಗಳನ್ನು ಅರಿತು ಯೌವ್ವನದಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡಬೇಕು. ಸಾಧನೆಯ ಹಂಬಲವಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಗೊಂದಲ, ನೋವು, ರೋಷ, ಹತಾಶೆ, ಆತಂಕ ಇಂತಹ ಭಾವನೆಗಳು ಸಾಮಾನ್ಯ. ಇದು ವ್ಯಕ್ತಿತ್ವದ ಬೆಳವಣಿಗೆಯ ಒಂದು ಹಂತ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭಾವನೆಗಳೊಂದಿಗೆ ಮುನ್ನಡೆಯಲು ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರ ಬೆಂಬಲ ಅಗತ್ಯ. ನಮ್ಮ ಜೀವನದಲ್ಲಿ ಪ್ರತಿ ಒಬ್ಬರಿಗೂ ಆದರ್ಶ ವ್ಯಕ್ತಿಯೊಬ್ಬ ಅಗತ್ಯ. ‘ನನ್ನ ಆದರ್ಶ ಯಾರು? ಅವರು ನನಗೆ ಏಕೆ ಆದರ್ಶ?’ ಎಂಬ ಪ್ರಶ್ನೆಯನ್ನು ಆತ್ಮಾವಲೋಕನದಿಂದ ಅರಿತು ಸಾಗಿದರೆ ಜೀವನದಲ್ಲಿ ಗುರಿಸಾಧಿಸಲು ಸಾಧ್ಯ. ಆದರ್ಶ ವ್ಯಕ್ತಿಯ ಜೀವನಶೈಲಿ, ಪರಿಶ್ರಮ, ಮೌಲ್ಯಗಳು ಮತ್ತು ಧೈರ್ಯವನ್ನು ಅವಲೋಕಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಾವು ಸಹ ಶ್ರೇಷ್ಠತೆಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಮಹಿಳಾ ಕ್ಷೇಮಪಾಲನಾ ಸಮಿತಿ ಸಂಯೋಜಕಿ ಕೀರ್ತನಾ ಶೆಟ್ಟಿ ಮತ್ತು ಆಂತರಿಕ ಸಮಿತಿ ಸಂಯೋಜಕಿ ಡಾ. ಸುಲತಾ ವಿದ್ಯಾಧರ್ ಇದ್ದರು. ವಿದ್ಯಾರ್ಥಿನಿ ಮಧು ಕಾರ್ಯಕ್ರಮ ನಿರೂಪಿಸಿ, ನಿಧಿ ಸ್ವಾಗತಿಸಿ, ಪೂರ್ವಿ ವಂದಿಸಿದರು.

ಎಸ್ ಡಿ ಎಂ ನಲ್ಲಿ ಸಂಸ್ಕೃತ ಸಂಧ್ಯಾ ಕಾರ್ಯಕ್ರಮ

Article Image

ಎಸ್ ಡಿ ಎಂ ನಲ್ಲಿ ಸಂಸ್ಕೃತ ಸಂಧ್ಯಾ ಕಾರ್ಯಕ್ರಮ

ಉಜಿರೆ, ಅ 21 : ಸಂಸ್ಕೃತ ಭಾಷೆ ನಶಿಸಿ, ಅಳಿಸಿ ಹೋಗಲು ಬಿಡದೇ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ. ಮೂಲ ಭಾಷೆಯನ್ನ ನಾವು ಮಾತನಾಡಿ, ಅಭಿವೃದ್ಧಿಗೊಳಿಸಬೇಕು ಎಂದು ಇಲ್ಲಿನ ಶ್ರೀ .ಧ. ಮಂ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಹೇಳಿದರು. ಇಲ್ಲಿನ ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ಮತ್ತು ಶ್ರೀ. ಧ. ಮಂ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ವಿಭಾಗದ ಜಂಟಿ ಆಶ್ರಯದಲ್ಲಿ ಇಂದು (21/08) ಸಂಸ್ಕೃತ ಸಂಧ್ಯಾ- ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ತರಗತಿಗಳನ್ನ ನಡೆಸುವಾಗ ಆದಷ್ಟು ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆಯನ್ನು ನಡೆಸ ಬೇಕು. ದಿನ ನಿತ್ಯವೂ ಕೂಡ ಕನಿಷ್ಠ ಒಂದು ವಾಕ್ಯವನ್ನು ಸಂಸ್ಕೃತದಲ್ಲಿ ಮಾತನಾಡುವುದಕ್ಕೆ ಎಲ್ಲರೂ ಅಭ್ಯಾಸ ಮಾಡಬೇಕು ಎಂದು ಸಂಸ್ಕೃತ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು. ವಿಭಾಗದ ವತಿಯಿಂದ ಮುಂದಿನ ದಿನಗಳಲ್ಲಿ ಸಂಸ್ಕೃತ ಭಾಷೆ, ಸಂಸ್ಕೃತಿಯನ್ನ ಉಳಿಸಿ ಬೆಳೆಸುವಂತಹ ಹಲವಾರು ಕಾರ್ಯಕ್ರಮಗಳು ಬರಲಿ ಎಂದು ಅವರು ಶುಭಹಾರೈಸಿದರು. ಪದವಿ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಮತ್ತು ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಎನ್ ಭಟ್ ಅಧ್ಯಕ್ಷೀಯ ಸ್ಥಾನವಹಿಸಿ ಮಾತನಾಡಿದರು. ಸಂಸ್ಕೃತ ದೇವ ಭಾಷೆ. ಯಾಕೆಂದರೆ ಹಿಂದೆ ದೇವತೆಗಳು ಪರಸ್ಪರ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಮಾತ್ರವಲ್ಲದೇ ಹಿಂದಿನ ಕಾಲದಲ್ಲಿ ಜನರು ಪರಸ್ಪರ ಸಂಸ್ಕೃತ ಭಾಷೆಯಲ್ಲೇ ಸಂಸ್ಕೃತ ಭಾಷೆಯಲ್ಲೇ ವ್ಯವಹರಿಸುತ್ತಿದ್ದರು. ಬ್ರಿಟೀಷರು ನಮ್ಮ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ನಂತರವೇ ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಯ ಉಪಯೋಗ ಕಡಿಮೆಯಾಗಿದ್ದು ಎಂದು ಅವರು ಹೇಳಿದರು. ಪ್ರಾಚೀನ ಕಾಲದಲ್ಲಿ ನಮ್ಮೆಲ್ಲರ ಮಾತೃ ಭಾಷೆ ಸಂಸ್ಕೃತವೇ ಆಗಿತ್ತು. ಆದ್ದರಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಮ್ಮನಿಂದ ಆದಷ್ಟು ಸಂಸ್ಕೃತ ಭಾಷೆಯನ್ನ ನಮ್ಮ ಸಂಭಾಷಣೆಯಲ್ಲಿ ಪ್ರಯೋಗ ಮಾಡುವ ಪ್ರಯತ್ನವನ್ನು ಮಾಡಿದರೆ ಮಾತ್ರ ಭಾಷೆಯ ಮೇಲೆ ನಮಗೆ ಪ್ರೀತಿ, ಅಭಿಮಾನ ಹುಟ್ಟುತ್ತದೆ ಎಂದು ಅವರು ಹೇಳಿದರು. ವಿಭಾಗದ ವತಿಯಿಂದ ಪ್ರತಿ ತಿಂಗಳು ಹೊರತರುವ “ಸುಬೋಧಿನಿ” ಬಿತ್ತಿ ಪತ್ರದ ವಿಶೇಷಾಂಕವನ್ನು ಉದ್ಘಾಟಕರು ಬಿಡುಗಡೆಗೊಳಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಂಸ್ಕೃತ ಭಾಷಾ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗ ಪ್ರಾಧ್ಯಾಪಕ ಡಾ. ಪ್ರಸನ್ನ ಕುಮಾರ್ ಐತಾಳ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಲಕಾ, ಆತ್ಮಿಕ ನಿರೂಪಿಸಿ, ಹಿರಿಯ ವಿದ್ಯಾರ್ಥಿನಿ ಹಾಗೂ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ವಂದಿಸಿದರು. ಸಂಸ್ಕೃತ ಭಾಷೆಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮ ಸಂಯೋಜಕ, ಸಹ ಪ್ರಾಧ್ಯಾಪಕ ಶ್ರೇಯಸ್. ಜೆ. ಪಾಳಂದೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ

ಸಾವಯವ ಕೃಷಿಗೆ ಸಂಬಂಧಿಸಿ ಹಲವಾರು ಯೋಜನೆಗಳು ಜಾರಿಗೆ ಬಂದರೂ ಬಳಸಿಕೊಳ್ಳದೆ ರಾಸಾಯನಿಕ ಗೊಬ್ಬರ, ಔಷಧಿಗೆ ಮೊರೆಹೊಗುವ ಮಾನವನ ಅತಿಯಾಸೆಯಿಂದಾಗಿ ಪರಿಸರದ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಉಜಿರೆಯ ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್ ಕಳವಳ ವ್ಯಕ್ತಪಡಿಸಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಜು.30 ರಂದು ಅವರು ಸಸ್ಯಶಾಸ್ತ್ರ ವಿಭಾಗದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಹಾಗೂ ಸಸ್ಯಸೌರಭ ಮತ್ತು ಇಕೋ ಕ್ಲಬ್ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು. ಹವಾಮಾನದಲ್ಲಿ ಏರಿಳಿತ ಏಕೆ ಆಗುತ್ತಿದೆ ಎಂದು ಸಂಶೋಧಿಸಿದಾಗ ರಾಸಾಯನಿಕಗಳನ್ನು ಭೂಮಿಗೆ ಸಿಂಪಡಿಸುವುದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿರುವುದೇ ಕಾರಣ ಎಂದು ಕಂಡುಕೊಳ್ಳಲಾಗಿದೆ. ತೋಟಗಳಲ್ಲಿ ಸಿಂಪಡಿಸಿದ ರಾಸಾಯನಿಕಗಳು ಮಳೆ ನೀರಿನೊಂದಿಗೆ ಅಂತರ್ಜಲಕ್ಕೇ ಸೇರಿ ಜೀವಕ್ಕೆ ಮಾರಕವಾಗುತ್ತಿವೆ. ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಭೂಮಿಯ ಫಲವತ್ತತೆ ಹಾಳು ಮಾಡಲಾಗುತ್ತಿದೆ ಎಂದರು. ವಿದ್ಯಾವಂತರಾಗಿರುವ ಪ್ರಸ್ತುತ ಪೀಳಿಗೆ ಕೂಡ ಕೃಷಿ ಸಂಬಂಧಿತ ವಿಷಯದಲ್ಲಿ ರಾಸಾಯನಿಕ ಔಷಧಿ ಬಳಸುತ್ತಿದೆ. ಆ ಮೂಲಕ ಪರಿಸರದ ಬಲಿಗೆ ಕಾರಣವಾಗುತ್ತಿದೆ. ಪರಿಸರಕ್ಕೆ ಇನ್ನೊಂದು ಸವಾಲು ಪ್ಲಾಸ್ಟಿಕ್. ಇದನ್ನು ನಿರ್ಮೂಲನೆ ಮಾಡಲು ಎಷ್ಟೇ ಕ್ರಮಗಳು ಬಂದರೂ ಅದನ್ನು ಯಾರೂ ಪಾಲಿಸುತ್ತಿಲ್ಲ. ಯುವಜನತೆ ಈ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು. "ಇವತ್ತಿನ ಯುವಸಮಾಜ ನಮ್ಮ ದೇಶದ ರಾಯಭಾರಿ ಇದ್ದಂತೆ. ದೇಶದ ಗತಿಯನ್ನು ಉತ್ತುಂಗಕ್ಕೆ ಏರಿಸುವ ಶಕ್ತಿ ಯುವಜನತೆಗಿದೆ. ದೇಶದ ಹಾಗೂ ಪ್ರಪಂಚದ ಭವಿಷ್ಯವನ್ನು ಬದಲಾಯಿಸಲು ಸಾಧ್ಯ ಎಂದರೆ ಅದು ನಿಮ್ಮಂತಹ ಯುವ ಜನತೆಯಿಂದ ಮಾತ್ರ. ದೇಶವನ್ನು ಭದ್ರಗೊಳಿಸುವ ಶಕ್ತಿ ನಿಮ್ಮಲ್ಲಿ ಇದೆ” ಎಂದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಕುಂತಲಾ ಅವರು ವಿಭಾಗದ ಬಗ್ಗೆ ಮಾತನಾಡಿದರು. ವಿಭಾಗದ ಭಿತ್ತಿಪತ್ರಿಕೆ 'ಸಸ್ಯಸೌರಭ' ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ವಿಭಾಗದಲ್ಲಿ 34 ವರ್ಷಗಳಿಂದ ಸಹಾಯಕರಾಗಿದ್ದು, ನಿವೃತ್ತಿ ಹೊಂದಿದ ಜಿನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ರಾವ್ ಹಾಗೂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಪದ್ಮಶ್ರೀ ಸ್ವಾಗತಿಸಿ, ಚಿತ್ಕಲಾ ಹಾಗೂ ತಂಡದವರು ಪ್ರಾರ್ಥಿಸಿದರು. ಯುವಿಕಾ ವಂದಿಸಿದರು. ನಿಕಿತಾ ಹಾಗೂ ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದರು.

ಭಾವನಾತ್ಮಕ ಬುದ್ಧಿಮತ್ತೆ ಬೆಳವಣಿಗೆಯಿಂದ ಯಶಸ್ಸು ಸಾಧ್ಯ: ಅಶ್ವಿನಿ ಹೆಚ್

Article Image

ಭಾವನಾತ್ಮಕ ಬುದ್ಧಿಮತ್ತೆ ಬೆಳವಣಿಗೆಯಿಂದ ಯಶಸ್ಸು ಸಾಧ್ಯ: ಅಶ್ವಿನಿ ಹೆಚ್

ಭಾವನಾತ್ಮಕವಾಗಿ ಬಲವಾದರೆ, ಅದು ಜೀವನದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಹೆಚ್. ಹೇಳಿದರು. ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗ ಜು.28ರಂದು ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಶೈಕ್ಷಣಿಕ ಯಶಸ್ಸಿಗೆ ಭಾವನಾತ್ಮಕ ಬುದ್ಧಿಮತ್ತೆ’ ಕುರಿತು ಮಾತನಾಡಿದರು. “ಭಾವನಾತ್ಮಕ ಬುದ್ಧಿಮತ್ತೆ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ಇತರರ ಭಾವನೆಗಳನ್ನೂ ಅರ್ಥಮಾಡಿಕೊಳ್ಳುವ ಈ ಗುಣ ಹುಟ್ಟಿದಾಗಿನಿಂದ ಬರುವಂಥದ್ದಲ್ಲ; ನಾವು ಬೆಳೆಸಿಕೊಂಡು ಹೋಗುವಂತದ್ದು. ಅದನ್ನು ಸ್ಥಿರವಾಗಿ ಇಟ್ಟುಕೊಂಡು ನಮ್ಮ ಗುರಿಯ ಕಡೆ ಮುನ್ನಡೆಯುವುದು ಮುಖ್ಯ. ಭಾವನಾತ್ಮಕ ಬುದ್ಧಿಮತ್ತೆ ಸ್ಥಿರವಾಗಿದ್ದರೆ ಯಾವುದೇ ರೀತಿಯ ಮಾನಸಿಕ ಒತ್ತಡಗಳಾದರೂ ಅದರಿಂದ ಹೊರಬರುವ ದಾರಿ ಕಂಡುಕೊಳ್ಳಬಹುದು” ಎಂದು ಅವರು ತಿಳಿಸಿದರು. ಇತ್ತೀಚೆಗೆ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಅತಿಯಾದ ಉದ್ವೇಗದಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದು ಕಂಡು ಬರುತ್ತಿದೆ. ಅದಕ್ಕೆ ಕಾರಣ ಭಾವನಾತ್ಮಕ ಬುದ್ಧಿಮತ್ತೆಯ ಕೊರತೆ. ಅದನ್ನು ಹತೋಟಿಯಲ್ಲಿಡಲು, ಅದರಿಂದಾಗುವ ಸಮಸ್ಯೆಗಳನ್ನು ನಿವಾರಿಸಲು, ಮಾನಸಿಕ ಒತ್ತಡ ಕಡಿಮೆ ಮಾಡಲು, ಮೊದಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ. ನಂತರ ನಿಮ್ಮ ದಿನನಿತ್ಯದ ದಿನಚರಿಯನ್ನು ಟೈಮ್ ಟೇಬಲ್ ಮಾಡಿ, ಅದರ ಮೇಲೆ ಕೆಲಸ ಮಾಡಿ, ನಿಮ್ಮ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಅರ್ಥ ಮಾಡಿಕೊಂಡು, ನಿಮ್ಮ ಗುರಿ ಕುರಿತು ಚಿಂತಿಸಿ. ಅನಗತ್ಯ ಆಲೋಚನೆಗಳನ್ನು ಬಿಟ್ಟು ಸ್ವಲ್ಪ ಸಮಯ ಧ್ಯಾನ ಮಾಡಿ ಎಂದು ಸಲಹೆ ನೀಡಿದರು. ಶೈಕ್ಷಣಿಕ ನೆಲೆಯಲ್ಲಿ ಭಾವನಾತ್ಮಕ ಬುದ್ಧಿಮತ್ತೆಯು ಒತ್ತಡಗಳಿಂದ ಹೊರಬಂದು, ಗುರಿಯ ಕಡೆಗೆ ಏಕಾಗ್ರತೆ ವಹಿಸಿ, ಭಾವನೆಗಳನ್ನು ಹತೋಟಿಯಲ್ಲಿ ಹಿಡಿದು, ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಉತ್ತಮ ಸಂವಹನ ವೃದ್ಧಿಸಲು ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಭಾವನಾತ್ಮಕ ಬುದ್ಧಿಮತ್ತೆ ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ಸಂಶೋಧನೆ ಪ್ರಕಾರ ಯಾವುದೇ ಕಂಪೆನಿಯಲ್ಲಿ ಉನ್ನತ ಹುದ್ದೆ ಗಳಿಸಬೇಕಾದರೆ ಭಾವನಾತ್ಮಕ ಬುದ್ಧಿಮತ್ತೆ ಉತ್ತಮವಾಗಿರುವುದು ಅಗತ್ಯ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರಾದ ಶರಸ್ಚಂದ್ರ ಕೆ.ಎಸ್., ಗುರುರಾಜ್ ಕೆ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ನಿಕಾಯದ ಡೀನ್ ಹಾಗೂ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಕುಂತಲಾ ಸ್ವಾಗತಿಸಿದರು. ವಿದ್ಯಾರ್ಥಿ ಯಶವಂತ್ ಅತಿಥಿ ಪರಿಚಯ ನೀಡಿದರು. ತೇಜಸ್ವಿನಿ ವಿ.ಎಸ್. ವಂದಿಸಿ, ವಿಷ್ಮಾ ಜಿ. ಹಾಗೂ ಏಂಜಲ್ ನಿರೂಪಿಸಿದರು.

ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Article Image

ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

ಬೆಳ್ತಂಗಡಿ ಮುಳಿಯದಲ್ಲಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆಯು ಆಗಸ್ಟ್ 23ರಂದು ಸಂಜೆ 3.00ಗಂಟೆಗೆ ಬೆಳ್ತಂಗಡಿ ಮುಳಿಯ ಶೋರೂಮ್ ಮುಂಭಾಗದಲ್ಲಿ ನಡೆಯಲಿದೆ. ಮುದ್ದು ಕೃಷ್ಣ- 0-3 ವರ್ಷ ಬಾಲ ಕೃಷ್ಣ- 4-7 ವರ್ಷ ರಾಧಾ ಕೃಷ್ಣ- 8-12 ವರ್ಷ (ಇಬ್ಬರು ಕಡ್ಡಾಯ). ಸ್ಪರ್ಧೆಯ ನಿಬಂಧನೆಗಳು * ಆಗಸ್ಟ್ 21 ರ ಒಳಗೆ ನೋಂದಾಯಿಸಿಕೊಳ್ಳಬೇಕು * ತೀರ್ಪುಗಾರರ ತೀರ್ಮಾನವೇ ಅಂತಿಮ * ನಿರ್ದಿಷ್ಟ ಸಮಯಕ್ಕೆ ಹಾಜರಿರಬೇಕು * ಸ್ಪರ್ಧಿಗಳು ತಮ್ಮ ಆಧಾರ್ ಕಾರ್ಡ್ ತರಬೇಕು * ಪ್ರತಿ ವಿಭಾಗಕ್ಕೂ ನಿರ್ದಿಷ್ಟ ಸಮಯ ನೀಡಲಾಗುವುದು (2-3 ನಿಮಿಷ) * ಪ್ರತಿ ವಿಭಾಗಕ್ಕೂ ವೇಷ ಭೂಷಣವನ್ನು ತಯಾರಿ ಮಾಡಿಕೊಂಡು ಬರಬೇಕು * ಸ್ಪರ್ಧಿಗಳು ತಮಗೆ ಬೇಕಾದ ಹಾಡನ್ನು ತಾವೇ ತರಬೇಕು * ಫೋಟೋಶೂಟ್ ಮಾಡಲು ಮುಕ್ತ ಅವಕಾಶ * ವಿಜೇತ ಸ್ಪರ್ಧಾಳುಗಳ ಫೋಟೋ ವೀಡಿಯೋವನ್ನು ಮುಳಿಯ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಾಕಲಾಗುವುದು * ವಿಜೇತ ಸ್ಪರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ನೋಂದಾವಣೆಗಾಗಿ: 9902349916 8792530916.

ಸತ್ತೂರು, ಧಾರವಾಡ: ಡೇಟಾ ಟು ಡಿಸಿಷನ್ - ಒಂದು ದಿನದ ಕಾರ್ಯಾಗಾರ

Article Image

ಸತ್ತೂರು, ಧಾರವಾಡ: ಡೇಟಾ ಟು ಡಿಸಿಷನ್ - ಒಂದು ದಿನದ ಕಾರ್ಯಾಗಾರ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗವು, ಭಾರತೀಯ ವೈದ್ಯಕೀಯ ಸೂಕ್ಷ್ಮಾಣು ಜೀವಶಾಸ್ತ್ರಜ್ಞರ ಸಂಘ, ಕರ್ನಾಟಕ ರಾಜ್ಯ ಘಟಕದ ಸಹಯೋಗದೊಂದಿಗೆ "ಡೇಟಾ ಟು ಡಿಸಿಷನ್" ಒಂದು ದಿನದ ನಿರಂತರ ಕಲಿಕಾ ಕಾರ್ಯಾಗಾರವನ್ನು “ರೋಗ ನಿರೋಧಕದ ನೀತಿ ಮತ್ತು ವೈದ್ಯರ ಸಲಹೆಗೆ ಕೃತಕ ಬುದ್ಧಿಮತೆಯ ಮಾಹಿತಿ” ಎಂಬ ಧ್ಯೇಯೆಯೊಂದಿಗೆ ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮತ್ತು ಮುಖ್ಯ ಅತಿಥಿಯವರಾದ ಕೆ.ಎಲ್.ಇ ವಿಶ್ವವಿದ್ಯಾಲಯದ, ಜೆ.ಎನ್. ವೈದ್ಯಕೀಯ ಕಾಲೇಜಿನ ಸೂಕ್ಷಾö್ಮಣು ಜೀವವಿಜ್ಞಾನದ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ಸೂಕ್ಷ್ಮ ಜೀವಶಾಸ್ತ್ರಜ್ಞರ ಭಾರತೀಯ ಸಂಘದ ಅಧ್ಯಕ್ಷರಾದ ಡಾ. ಮಹಾಂತೇಶ್ ನಾಗಮೋತಿ ಮತ್ತಿತರ ಗಣ್ಯರು ಕಾರ್ಯಗಾರವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಸೂಕ್ಷ್ಮಾಣು ಜೀವಶಾಸ್ತ್ರಜ್ಞರು ಮತ್ತು ಇತರ ವೈದ್ಯಕೀಯ ವೃತ್ತಿಪರರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಡಾ. ಆರ್.ಡಿ. ಕುಲಕರ್ಣಿ, ಹಿರಿಯ ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ. ಶಾರೂನ್, ಡಾ. ಅಮಿತ್ ಜೋಶಿ, ಡಾ. ಸುಘೋಷ್ ಕುಲಕರ್ಣಿ ಮತ್ತಿತರರು ಈ ಕಾರ್ಯಾಗಾರದಲ್ಲಿ ತಜ್ಞ ಉಪನ್ಯಾಸ ನೀಡಿದರು. ಡಾ. ಮಹಾಂತೇಶ್ ನಾಗಮೋತಿ ಮತ್ತು ಸಾಕೇತ್ ಶೆಟ್ಟಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡುತ್ತಾ: ರೋಗ ನಿರೋಧಕ ಮಾತ್ರೆಗಳ ದುರುಪಯೋಗ ಮತ್ತು ಅತಿಯಾದ ಬಳಕೆಯನ್ನು ನಿಯಂತ್ರಿಸಬೇಕು. ಸೂಕ್ಷ್ಮಾಣು ಜೀವಶಾಸ್ತ್ರಜ್ಞರು ರೋಗ ನಿರೋಧಕಗಳ ತರ್ಕಬದ್ಧ ಬಳಕೆಯಲ್ಲಿ ಸದಾ ಮಾರ್ಗದರ್ಶನ ಮಾಡುತ್ತಾ ಮುಂದಾಳತ್ವ ವಹಿಸುತ್ತಾರೆ. ಎಐ ತಂತ್ರಜ್ಞಾನವು ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತನ್ನ ಮಹತ್ತರ ಕೊಡುಗೆಯನ್ನು ನೀಡುತ್ತಿದೆ. ಎಐ ತಂತ್ರಜ್ಞಾನವು ಆರೋಗ್ಯ ವೃತ್ತಿಪರರ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಹೊರತು ವೃತ್ತಿಪರರಿಗೆ ಬದಲಿಯಾಗಲು ಸಾಧ್ಯವಿಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಎಐ ತಂತ್ರಜ್ಞಾನ ಪ್ರವೇಶಿಸಿದ್ದರಿಂದ ವೈದ್ಯರು ತಮ್ಮ ಜ್ಞಾನವನ್ನು ಉನ್ನತಿಕರಿಸಬೇಕಾದ ಅನಿವಾರ್ಯತೆಗಳಿವೆ. ಈ ಕಾರ್ಯಕ್ರಮದಲ್ಲಿ ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಭಾರತೀಯ ವೈದ್ಯಕೀಯ ಸೂಕ್ಷ್ಮ ಜೀವಶಾಸ್ತ್ರಜ್ಞರ ಸಂಘ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಯಾದಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ನವಾಜ್ ಒಮರ್, ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಘಟನಾ ಸಮಿತಿಯ ಅಧ್ಯಕ್ಷರಾದ ಡಾ. ಅಜಂತ್ ಜಿ.ಎಸ್. ಮತ್ತಿತ್ತರರು ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಎಚ್, ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಾಗಾರದ ಮಹತ್ವವನ್ನು ತಿಳಿಸಿದರು. ಡಾ. ಪವಿತ್ರಾ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶುಭದಾ ಸಿ. ವಂದನಾಪರ್ಣೆ ಸಲ್ಲಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ 46 ವರ್ಷ ಪ್ರಾಯದ ರೋಗಿಯೊಬ್ಬರಿಗೆ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್ ಕೆ., ಮೂಳೆ ಶಸ್ತ್ರಚಿಕಿತ್ಸಾ ವೈದ್ಯರಾದ ಡಾ| ಶತಾನಂದ ಪ್ರಸಾದ್ ರಾವ್ ಮತ್ತು ಅರೆವಳಿಕೆ ತಜ್ಞರಾದ ಡಾ| ಚೈತ್ರಾ ಆರ್. ಇವರ ತಂಡ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸರ್ಜರಿ ಬಳಿಕ ರೋಗಿಯಲ್ಲಿ ಕುತ್ತಿಗೆ ನೋವು ನಿವಾರಣೆಯಾಗಿದೆ ಮತ್ತು ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಸರ್ಜರಿ ನಡೆಸಿದ ಮೂಳೆ ಶಸ್ತ್ರಚಿಕಿತ್ಸಾ ಡಾ| ಶತಾನಂದ ಪ್ರಸಾದ್ ರಾವ್ ತಿಳಿಸಿದ್ದಾರೆ. ಏನಿದು ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ? ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ ಎನ್ನುವುದು ಕುತ್ತಿಗೆಯ ಮೇಲೆ ಪರಿಣಾಮ ಬೀರುವ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಅತೀ ಸಣ್ಣ ಛೇದನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದರಿಂದ ಅತೀ ಕಡಿಮೆ ಅಂಗಾಂಶಗಳ ಹಾನಿ, ಶೀಘ್ರ ಚೇತರಿಕೆ, ಕಡಿಮೆ ನೋವು, ಅತೀ ಕಡಿಮೆ ರಕ್ತದ ನಷ್ಟ ಮತ್ತು ಸೋಂಕಿನ ಅಪಾಯವೂ ಕೂಡ ಕಡಿಮೆಯಾಗಿರುತ್ತದೆ. ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುವುದರೊಂದಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿದಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರು

Article Image

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿದಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರು

ರಾಜ್ಯ ಸಭಾ ಸದಸ್ಯ ಶ್ರಿ ಕ್ಷೇತ್ರ ದರ್ಮಸ್ಥಳದ ದರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯ ಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ತಲಾ 1.46 ಲಕ್ಷದಂತೆ 1.46 ಕೋಟಿ ಮಂಜೂರಾಗಿದೆ ಎಂದು ರಾಜ್ಯ ಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಜನಾರ್ದನ್ ಕೆ ಎನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಕ್ಕಳ ಶಿಕ್ಷಣ ಬೆಳವಣಿಗೆ ಆದುನಿಕ ತಂತ್ರಜ್ಞಾನ ಬಳಸಿ ಶಿಕ್ಷಣ ನೀಡುವ ಉದ್ದೇಶದಿಂದ ಡಾ ಹೆಗ್ಗಡೆಯವರು ಇದನ್ನು ಮಂಜೂರುಗೊಳಿಸಿದ್ದಾರೆ.

ಸಾಹಿತ್ಯಾಭಿರುಚಿ ಮತ್ತೆ ಬೆಳೆಯಲಿ: ಡಾ. ಹೆಚ್.ಎಸ್. ಸತ್ಯನಾರಾಯಣ

Article Image

ಸಾಹಿತ್ಯಾಭಿರುಚಿ ಮತ್ತೆ ಬೆಳೆಯಲಿ: ಡಾ. ಹೆಚ್.ಎಸ್. ಸತ್ಯನಾರಾಯಣ

ಉಜಿರೆ: ಕಳೆದು ಹೋಗಿರುವ ಸಾಹಿತ್ಯಾಭಿರುಚಿ ಮತ್ತೆ ಬೆಳೆಯಬೇಕು ಎಂದು ಪ್ರಸಿದ್ಧ ವಿಮರ್ಶಕ ಡಾ. ಹೆಚ್.ಎಸ್. ಸತ್ಯನಾರಾಯಣ ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಜು.15ರಂದು ಕನ್ನಡ ವಿಭಾಗದ 2025-26 ನೇ ಸಾಲಿನ ಕಾರ್ಯ ಚಟುವಟಿಕೆ ಹಾಗೂ ಕನ್ನಡ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. “ಇವತ್ತಿನ ಬದುಕು ಸಾಹಿತ್ಯದ ಸಂಪರ್ಕದಿಂದ ದೂರವಾಗುತ್ತಿದೆ. ಪುಸ್ತಕ ಓದುವ ಹವ್ಯಾಸ ಮಕ್ಕಳಲ್ಲಿ ದೂರವಾಗುತ್ತಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು. ಎಸ್.ಡಿ.ಎಂ. ಕಾಲೇಜಿನ ಹಾ.ಮಾ. ನಾಯಕ ಸಂಶೋಧನಾ ಕೇಂದ್ರವು ಸಕ್ರಿಯವಾಗಿ ಸಾಹಿತ್ಯದ ಬಗೆಗಿನ ಸಂಶೋಧನೆ ನಡೆಸುತ್ತಿದೆ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳು, ಇನ್ನಿತರ ಸಾಹಿತ್ಯಿಕ ಕಾರ್ಯಕ್ರಮ ನಡೆಸುತ್ತಿದೆ. ವಿದ್ಯಾರ್ಥಿಗಳ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಕನ್ನಡ ಸಂಘವು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಮೊದಲು 'ಚಿಂತನ ವೇದಿಕೆ' ಎಂದು ಎನ್.ಜಿ. ಪಟವರ್ಧನ್ ಅವರು ಆರಂಭಿಸಿದರು. ಬಳಿಕ ಅದು ಕನ್ನಡ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಈಗಿನ ಕಾಲದಲ್ಲಿ ಕೌಶಲ್ಯಗಳು ಮುಖ್ಯ. ಎಂದಿಗೂ ಧನಾತ್ಮಕವಾಗಿ ಚಿಂತನೆ ಮಾಡಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಹಾಗೂ ಹೊಸತನವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಅವರನ್ನು ಸನ್ಮಾನಿಸಲಾಯಿತು. ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮಾನಸ, ಅಮೃತ, ರಂಗಸ್ವಾಮಿ, ಶಿಫಾನ, ಸ್ವಪ್ನಾ ಹಾಗೂ ಸಂಕೇತ್, ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿದರು. ಸಂಕೇತ್ ವಂದಿಸಿದರು. ಜೀವಿತ್ ಕಾರ್ಯಕ್ರಮ ನಿರೂಪಿಸಿದರು.

ಇಂಗ್ಲಿಷ್ ಭಾಷೆ ಜಗತ್ತಿನಾದ್ಯಂತ ಮನ್ನಣೆ ಪಡೆದ ಭಾಷೆ: ರಾಘವ್ ಶರ್ಮ

Article Image

ಇಂಗ್ಲಿಷ್ ಭಾಷೆ ಜಗತ್ತಿನಾದ್ಯಂತ ಮನ್ನಣೆ ಪಡೆದ ಭಾಷೆ: ರಾಘವ್ ಶರ್ಮ

ಇಂಗ್ಲಿಷ್ ಭಾಷೆಯನ್ನು ಕೇವಲ ಒಂದು ಭಾಷೆ ಎಂದು ಪರಿಗಣಿಸಿ ಕಡೆಗಣಿಸಬಾರದು. ಜಗತ್ತಿನಾದ್ಯಂತ ಮನ್ನಣೆ ಪಡೆದ ಒಂದೇ ಒಂದು ಭಾಷೆ ಎಂದರೆ ಅದು ಇಂಗ್ಲಿಷ್ ಎಂದು ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರಪತ್ರಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವ ಶರ್ಮ ಹೇಳಿದರು. ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಇಂಗ್ಲಿಷ್ ವಿಭಾಗದ ಸಾಹಿತ್ಯ ಸಂಘದ 2025- 26ನೇ ಶೈಕ್ಷಣಿಕ ವರ್ಷದ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಇಂಗ್ಲಿಷ್ ಒಂದೇ ಭಾಷೆಯಲ್ಲ, ಹಲವಾರು ಭಾಷೆಗಳು ಇವೆ. ಆದರೂ ಇಂಗ್ಲಿಷ್ ವಿಶೇಷ ಮನ್ನಣೆ ಪಡೆದಿದೆ. ಆದ್ದರಿಂದ ಇಂಗ್ಲಿಷ್ ಭಾಷಾ ಜ್ಞಾನ ವೃದ್ಧಿ ಅಗತ್ಯ ಎಂದರು. “ನಾನು ಮೊದಲಿನಿಂದಲೂ ಇಂಗ್ಲಿಷ್ ಭಾಷೆಯನ್ನು ಓದಿಕೊಂಡು ಬಂದಿದ್ದವನಲ್ಲ. ಡಿಗ್ರಿ ಜೀವನದಲ್ಲಿ ಮೊದಲಾಗಿ ಪತ್ರಿಕೋದ್ಯಮದ ಜೊತೆಗೆ ಇಂಗ್ಲಿಷ್ ಸಾಹಿತ್ಯ ಓದಿದ್ದೆ. ಆದರೂ ಕೂಡ ನಾನು ಕೆಲಸಕ್ಕಾಗಿ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಇಂಗ್ಲಿಷಿನಿಂದ ಇನ್ನೊಂದು ಭಾಷೆಗೆ ಭಾಷಾಂತರ ಮಾಡುವ ಸಂದರ್ಭದಲ್ಲಿ ಬಹಳಷ್ಟು ತೊಂದರೆ ಅನುಭವಿಸಿದ್ದೇನೆ. ದಿನನಿತ್ಯ ಕನ್ನಡ ಪತ್ರಿಕೆಗಳ ಜೊತೆಗೆ ಇಂಗ್ಲಿಷ್ ಪತ್ರಿಕೆ ಓದುವುದರಿಂದ ಭಾಷಾ ಕಲಿಕೆ ವೃದ್ಧಿಯಾಗುತ್ತದೆ” ಎಂದು ಸಲಹೆ ನೀಡಿದರು. “ವಿಭಾಗದ ವತಿಯಿಂದ ನಡೆಸುವ ಸ್ಕೂಲ್ ಅಡಾಪ್ಶನ್ ಕಾರ್ಯಕ್ರಮ, ಅತಿಥಿ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಭಾಷಾ ಜ್ಞಾನ ವೃದ್ಧಿಸುತ್ತದೆ. ಇದು ವೈಜ್ಞಾನಿಕ ಜಗತ್ತು, ವಿಜ್ಞಾನದ ಜೊತೆಗೆ ನಾವು ಕೂಡ ಮುಂದುವರಿಯಬೇಕು. ಸೋಶಿಯಲ್ ಮೀಡಿಯಾ ಯುಗದಲ್ಲಿ ನಾವು ಅದರ ಒಂದು ಭಾಗವಾಗಿರಬೇಕು ಆದರೆ ಸಾಮಾಜಿಕ ಜಾಲತಾಣಗಳು ನಮ್ಮನ್ನು ಆಳ್ವಿಕೆ ಮಾಡದ ಹಾಗೆ ಜಾಗರೂಕರಾಗಿರಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಜಾನನ ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಮಿತಿಗಳ ವಿದ್ಯಾರ್ಥಿ ಸಂಯೋಜಕರು ತಮ್ಮ ಯೋಜನೆ ಕುರಿತು ವಿವರಿಸಿದರು. ಲಿಟರರಿ ಸಂಘದ ಅಧ್ಯಕ್ಷ ಚಂದನ್, ಸಂಯೋಜಕ, ಸಹ ಪ್ರಾಧ್ಯಾಪಕ ಸೂರ್ಯ ನಾರಾಯಣ ಭಟ್ ಪಿ., ಇತರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿ.ಎ. ವಿದ್ಯಾರ್ಥಿನಿಯರಾದ ಗೌರವಿಸಿ ಸ್ವಾಗತಿಸಿ, ಶ್ರೇಯಾ ಮಿಂಚಿನಡ್ಕ ನಿರೂಪಿಸಿದರು. ಅನುಷಾ, ಕೃಷ್ಣವೇಣಿ, ಸುಶೀರ ಪ್ರಾರ್ಥಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಸನುಷಾ ಪಿಂಟೋ ವಂದಿಸಿದರು.

ಪ್ರಮೋದ್ ಕುಮಾರ್ ಅವರಿಗೆ ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ ನಿಂದ ಮೆಚ್ಚುಗೆಯ ಪ್ರಮಾಣಪತ್ರ

Article Image

ಪ್ರಮೋದ್ ಕುಮಾರ್ ಅವರಿಗೆ ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ ನಿಂದ ಮೆಚ್ಚುಗೆಯ ಪ್ರಮಾಣಪತ್ರ

ಉಜಿರೆಯ ಎಸ್.ಡಿ.ಎಂ. ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಅವರಿಗೆ ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ (SOF) ನಿಂದ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಗಿದೆ. 2024–2025ರ ಶೈಕ್ಷಣಿಕ ವರ್ಷದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸುವಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಉತ್ತೇಜಿಸುವಲ್ಲಿ ಅವರ ಅತ್ಯುತ್ತಮ ನಾಯಕತ್ವ ಮತ್ತು ಸಮರ್ಪಿತ ಉಪಕ್ರಮಗಳನ್ನು ಈ ಮನ್ನಣೆ ಗುರುತಿಸುತ್ತದೆ. ಪ್ರಮಾಣಪತ್ರವು ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಮಾಡಿದ ಅಸಾಧಾರಣ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ, ಪ್ರತಿಷ್ಠಿತ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಯಶಸ್ಸು ಮತ್ತು ಭಾಗವಹಿಸುವಿಕೆಗೆ ಕೊಡುಗೆ ನೀಡುತ್ತದೆ. ಏಪ್ರಿಲ್ 30, 2025 ರಂದು ನೀಡಲಾದ ಈ ಮೆಚ್ಚುಗೆಯು ಶೈಕ್ಷಣಿಕ ಸಾಧನೆ ಮತ್ತು ಸ್ಪರ್ಧಾತ್ಮಕ ಮನೋಭಾವದ ಸಂಸ್ಕೃತಿಯನ್ನು ಬೆಳೆಸುವ ಕಾಲೇಜಿನ ಬದ್ಧತೆಯನ್ನು ಒತ್ತಿಹೇಳುತ್ತದೆ.

ಉಜಿರೆ ಎಸ್‌ ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

Article Image

ಉಜಿರೆ ಎಸ್‌ ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

ಬೆಳ್ತಂಗಡಿ, ಜು. 21: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳ ಸಿಇಟಿ-2025 ಆಯ್ಕೆ ದಾಖಲಿಸುವ ಪ್ರಕ್ರಿಯೆ ಆನ್‌ಲೈನ್‌ ಆಗಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸಹಾಯ ಕೇಂದ್ರವನ್ನು ಉಜಿರೆಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಿಸಲಾಗಿದೆ. ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಅಶೋಕ್ ಕುಮಾರ್ ತಿಳಿಸಿದ್ದಾರೆ. ಆಯ್ಕೆಯನ್ನು ನಮೂದಿಸಲು ಬರುವಾಗ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ಡ್ ಮೊಬೈಲ್, ಸಿ.ಇ.ಟಿ ಸೀಕ್ರೆಟ್ ಕೀ, ಪಾಸ್ ವರ್ಡನ್ನು ಜತೆಗೆ ತರಲು ಕೋರಲಾಗಿದೆ.

ಸರಕಾರಿ ಹುದ್ದೆ ಗಿಟ್ಟಿಸಿಕೊಳ್ಳುವತ್ತ ಗಮನಹರಿಸಿ: ಡಾ. ಪ್ರಕಾಶ್ ಎಸ್

Article Image

ಸರಕಾರಿ ಹುದ್ದೆ ಗಿಟ್ಟಿಸಿಕೊಳ್ಳುವತ್ತ ಗಮನಹರಿಸಿ: ಡಾ. ಪ್ರಕಾಶ್ ಎಸ್

ಉಜಿರೆ: ದಕ್ಷಿಣ ಕನ್ನಡ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಿ ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂದು ಕೊಯ್ಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಪ್ರಕಾಶ್ ಎಸ್. ಹೇಳಿದರು. ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ 2025-26 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಜು.14ರಂದು ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲಾ ಸವಲತ್ತು, ಅವಕಾಶಗಳಿದ್ದರೂ ಈ ಭಾಗದ (ದಕ್ಷಿಣ ಕನ್ನಡ) ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹಿಂದೇಟು ಹಾಕುತ್ತಿದ್ದಾರೆ. ಪದವಿ ವಿದ್ಯಾಭ್ಯಾಸ ಸಂದರ್ಭದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿತುಕೊಂಡು ಪ್ರಯತ್ನಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು. “ವಿದ್ಯಾರ್ಥಿ ಜೀವನದಲ್ಲಿ ಹತ್ತಾರು ಅವಕಾಶಗಳು ನಮ್ಮನ್ನು ಹುಡುಕಿಬರುತ್ತವೆ. ಅವುಗಳ ಸದುಪಯೋಗದಿಂದ ಯಶಸ್ಸು ಸಾಧ್ಯ. ಚಿಕ್ಕ ವಯಸ್ಸಿನಲ್ಲಿ ಅವಕಾಶಗಳು ಬಹಳಷ್ಟು ಇರುತ್ತವೆ ಆದರೆ ಬೆಳೆಯುತ್ತಾ ಹೋದಂತೆ ಅವಕಾಶ ಕಡಿಮೆಯಾಗುತ್ತದೆ. ವಯಸ್ಸು ಓಡುವ ಕುದುರೆಯಿದ್ದಂತೆ. ಹಾಗಾಗಿ ಆಯಾ ವಯಸ್ಸಿಗೆ ಸೂಕ್ತವಾದ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗ ಮುಖ್ಯಸ್ಥ ಡಾ. ಗಣರಾಜ ಕೆ., ಶಿಕ್ಷಣದಲ್ಲಿ ಸೃಜನಶೀಲತೆ ಬಹಳ ಮುಖ್ಯ, ಸೃಜನಶೀಲತೆಯಿಂದ ಉತ್ತಮ ಶಿಕ್ಷಣದ ಜೊತೆಗೆ ಯಶಸ್ಸು ಸಾಧ್ಯ ಎಂದರು. ವಿಭಾಗ ಬೆಳೆದು ಬಂದ ಹಾದಿಯನ್ನು ನೆನಪಿಸಿದ ಅವರು, ವಿಭಾಗದ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಪುನೀತ್, ಸುಹೈಮಾ ಹಾಗೂ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿಗಳಾದ ಸೂರ್ಯ, ಸೃಷ್ಟಿ ಪ್ರಾರ್ಥಿಸಿ, ಅಚಲ ಹಾಗೂ ವೀಕ್ಷಾ ಕಾರ್ಯಕ್ರಮ ನಿರೂಪಿಸಿ, ಮಾನವ್ ವಂದಿಸಿದರು.

ಪ್ರಕೃತಿಯ ಉಳಿವು, ನಮ್ಮೆಲ್ಲರ ಉಳಿವು - ಪ್ರಸನ್ನ ಪಡ್ಡಂದಡ್ಕ

Article Image

ಪ್ರಕೃತಿಯ ಉಳಿವು, ನಮ್ಮೆಲ್ಲರ ಉಳಿವು - ಪ್ರಸನ್ನ ಪಡ್ಡಂದಡ್ಕ

ಮೂಡುಬಿದಿರೆ: ಪರಿಸರ ಉಳಿಸಿ, ಪರಿಸರ ಬೆಳೆಸಿ ಎನ್ನುವ ಉಕ್ತಿಯಂತೆ ಎಕ್ಸಲೆಂಟ್ ಸಿಬಿಎಸ್ಇ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವನಮಹೋತ್ಸವ ಕಾರ್ಯಕ್ರಮವನ್ನು ಪಡ್ಡಂದಡ್ಕ ಗ್ರಾಮದ ಪರಿಸರ ಪ್ರೇಮಿ ಶ್ರೀಮತಿ ಪ್ರಸನ್ನ ರವರ ಮನೆಯ ಸುತ್ತಮುತ್ತಲಿನ ವಿಶಾಲ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದ ಮೂಲ ರೂವಾರಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಸ್ವತಃ ತಾವೇ ಗಿಡವನ್ನು ನೆಡುವ ಮೂಲಕ ಮಕ್ಕಳಿಗೆ ಪರಿಸರದ ಹಾಗೂ ವನಸಂಪತ್ತಿನ ಉಳಿವಿನ ಅರಿವು ಮೂಡಿಸಿದರು. ಪರಿಸರ ಪ್ರೇಮಿಯಾದ ಪ್ರಸನ್ನರವರು ಮಾತನಾಡಿ ಪ್ರಕೃತಿಯ ಉಳಿವು ನಮ್ಮೆಲ್ಲರ ಉಳಿವು ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯ ಎಂದು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಸನ್ನರವರ ಪುತ್ರಿಯಾದ ಹೇಮಲತಾರವರು ಉಪಸ್ಥಿತರಿದ್ದರು. ಶಿಕ್ಷಕಿಯಾದ ಪ್ರಜ್ಞಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಆಳ್ವಾಸ್: ಮಾನ್ಸೂನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಚೊಚ್ಚಲ ಆಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ

Article Image

ಆಳ್ವಾಸ್: ಮಾನ್ಸೂನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಚೊಚ್ಚಲ ಆಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ

ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಮೂಡುಬಿದಿರೆಯಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಈ ಕ್ರೀಡೆಯ ಮೂಲಕ ರಾಷ್ಟ್ರ ಮಟ್ಟದ ಇನ್ನಷ್ಟು ಪ್ರತಿಭೆಗಳು ಮೂಡಿ ಬರಲಿ ಎಂದು ಸಿಎ ಉಮೇಶ್ ರಾವ್ ನುಡಿದರು. ಅವರು ಆಳ್ವಾಸ್ ಬ್ಯಾಡ್ಮಿಂಟನ್ ಅಕಾಡೆಮಿಯು ಎಂ. ಕೆ. ಅನಂತರಾಜ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಚೊಚ್ಚಲ ಬಾರಿಗೆ ಮಕ್ಕಳಿಗಾಗಿ ಆಯೋಜಿಸಿದ್ದ ‘ಮಾನ್ಸೂನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ್ನು’ ಉದ್ಘಾಟಿಸಿ ಮಾತನಾಡಿದರು. "ಕ್ರೀಡೆಯಲ್ಲಿ ಎಂದೂ ಕೇವಲ ಗೆಲುವಿಗಾಗಿ ಆಟವಾಡಬೇಡಿ. ಅನುಭವದಿಂದ ಸಿಗುವ ಪಾಠ ಅಮೂಲ್ಯವಾದುದ್ದು. ಆಟದಲ್ಲಿ ಸೋಲೂ ಒಂದು ಪಾಠವಾಗಿದ್ದು, ನಿರಂತರ ಕಲಿಕೆ ಮತ್ತು ಅಭ್ಯಾಸವೇ ಕ್ರೀಡಾಪಟುವಿನ ನಿಜವಾದ ಬಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ, "ಕ್ರೀಡೆ ಎಂದರೆ ಕೇವಲ ಗೆಲುವು ಅಥವಾ ಸೋಲಲ್ಲ. ಕ್ರೀಡಾ ಮನೋಭಾವದ ಬೆಳೆವಣಿಗೆ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟುವೂ ತನ್ನ ಎದುರಾಳಿಗೆ ಗೌರವ ತೋರಬೇಕು, ನಿಯಮಗಳನ್ನು ಪಾಲಿಸಬೇಕು ಮತ್ತು ಫಲಿತಾಂಶವೇನು ಆದರೂ ತನ್ನ ಶ್ರೇಷ್ಠ ಪ್ರಯತ್ನ ನೀಡಬೇಕು," ಎಂದು ಯುವ ಕ್ರೀಡಾಪಟುಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಕ್ರೀಡಾಕೂಟವು 11, 13, 15 ಮತ್ತು 17 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗಾಗಿ ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಕಿರಿಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜೇತರಿಗೆ ಟ್ರೋಫಿ ಮತ್ತು ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‌ಎಫ್‌ಓ ಮಂಜುನಾಥ್, ಆಳ್ವಾಸ್ ಸಂಸ್ಥೆಯ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್, ದೈಹಿಕ ನಿರ್ದೇಶಕ ಉದಯಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚೈತ್ರ ಕಾರ‍್ಯಕ್ರಮ ನಿರ್ವಹಿಸಿದರು.

ಶೌರ್ಯ : ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಕೌಶಲಾಭಿವೃದ್ಧಿ ತರಬೇತಿ

Article Image

ಶೌರ್ಯ : ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಕೌಶಲಾಭಿವೃದ್ಧಿ ತರಬೇತಿ

ಉಜಿರೆ: ಜಾತಿ-ಮತ ಬೇಧವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾನವೀಯತೆಯೊಂದಿಗೆ “ಶೌರ್ಯ” ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಮಾಡುವ ಸೇವೆ ಅದ್ಭುತವಾಗಿದ್ದು, ಹೆಚ್ಚಿನ ಸಂತೋಷ ಮತ್ತು ಅಭಿಮಾನ ಉಂಟು ಮಾಡಿದೆ. ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ “ಶೌರ್ಯ” ವಿಪತ್ತು ನಿರ್ವಹಣಾ ತಂಡದ 330 ಸದಸ್ಯರಿಗೆ ಆಯೋಜಿಸಿದ ತುರ್ತು ಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬದುಕಿನಲ್ಲಿ ಏನೇ ಆಪತ್ತು, ವಿಪತ್ತು ಬಂದರೂ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ “ಶೌರ್ಯ” ಘಟಕದ ಸ್ವಯಂ-ಸೇವಕರು ಆಪತ್ಕಾಲದ ಆಪದ್ಬಾಂಧವರಾಗಿ ಸಕಾಲಿಕ ನೆರವು, ರಕ್ಷಣೆ ನೀಡುತ್ತಾರೆ. ಅವರು ಕೂಡಾ ತಮ್ಮ ರಕ್ಷಣೆಯನ್ನು ಮೊದಲು ತಾವು ಮಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಆಪತ್ತು, ಆತಂಕದಲ್ಲಿದ್ದವರ ಸೇವೆ ದೇವರ ಪೂಜೆ, ಸೇವೆಯಷ್ಟೇ ಪವಿತ್ರ ಹಾಗೂ ಪುಣ್ಯದ ಕಾಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಂಧ್ರಪ್ರದೇಶದ ಗುಂಟೂರು ಎನ್.ಡಿ.ಆರ್.ಎಫ್. ತಂಡದ ಹಿರಿಯ ಅಧಿಕಾರಿ ಶಾಂತಿಲಾಲ್ ಜಟಿಯಾ “ಶೌರ್ಯ” ಸ್ವಯಂ ಸೇವಕರ ಸೇವೆಯನ್ನು ಶ್ಲಾಘಿಸಿ ಇಂತಹ ಘಟಕಗಳು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪ್ರಾರಂಭವಾಗಬೇಕು. ಸಂಘಟನೆಯೇ ಶಕ್ತಿಯಾಗಿದ್ದು, ಒಗ್ಗಟ್ಟಿನಿಂದ ಎಲ್ಲರೂ ಸೇವೆ ಮಾಡಿದರೆ ಉನ್ನತ ಸಾಧನೆ ಸಾಧ್ಯವಾಗುತ್ತದೆ. ಇದಕ್ಕೆ ಸರ್ಕಾರದ ಮಾನ್ಯತೆಯೂ ದೊರಕಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿ ಅವರು ಶುಭ ಹಾರೈಸಿದರು. ಸ್ವಯಂ-ಸೇವಕರ ಪರವಾಗಿ ಅವಿನಾಶ್ ಮತ್ತು ನಡ ಗ್ರಾಮದ ಸಂಯೋಜಕಿ ವಸಂತಿ ಅನುಭವ, ಅನಿಸಿಕೆ ವ್ಯಕ್ತಪಡಿದರು. ಸಾಧಕರ ಸನ್ಮಾನ: ಉತ್ತಮ ಸೇವೆ-ಸಾಧನೆ ಮಾಡಿದ ಸ್ವಯಂ-ಸೇವಕರಾದ ಉಜಿರೆಯ ರವೀಂದ್ರ , ಅರಸಿನಮಕ್ಕಿಯ ಅವಿನಾಶ್, ನಾರಾವಿಯ ದಿನೇಶ್ ಶೆಟ್ಟಿ ಮತ್ತು ತೆಂಕಕಾರಂದೂರು ಗ್ರಾಮದ ಸವಿತಾ ಪಿರೇರಾ ಅವರನ್ನು ಅಭಿನಂದಿಸಲಾಯಿತು. ಉತ್ತಮ ಸಾಧಕ ಘಟಕ ಪ್ರಶಸ್ತಿ: ಶಿಶಿಲ- ಅರಸಿನಮಕ್ಕಿ ಘಟಕ ಮತ್ತು ಮಡಂತ್ಯಾರ್ ಘಟಕಗಳಿಗೆ ಉತ್ತಮ ಸಾಧಕ ಘಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಕ್ಷಿಣಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ನಿರ್ವಹಣಾ ಅಧಿಕಾರಿ ವಿಜಯ್ ಪೂಜಾರ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಆಶಯನುಡಿಗಳನ್ನಾಡಿ “ಶೌರ್ಯ” ತಂಡ 5 ವರ್ಷಗಳ ಸಾರ್ಥಕ ಸೇವೆ ಪೂರೈಸಿದ್ದು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್, ರಾಜ್ಯದ 91 ತಾಲ್ಲೂಕುಗಳಲ್ಲಿ 10,460 ಸ್ವಯಂ ಸೇವಕರು ಸೇವಾ ಕಾಯಕದಲ್ಲಿ ನಿರತರಾಗಿದ್ದಾರೆ ಎಂದರು. ಯೋಜನಾಧಿಕಾರಿ ಅಶೋಕ, ಬಿ. ಧನ್ಯವಾದವಿತ್ತರು. ಯೋಜನಾಧಿಕಾರಿ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಾಂತಿಲಾಲ್ ಜಟಿಯಾ, ವಿನೋದ್ ಜಿ ಮತ್ತು ಅಧಿಕಾರಿಗಳು ವಿಪತ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಲಾಂಛನ ಬಿಡುಗಡೆ

Article Image

ಲಾಂಛನ ಬಿಡುಗಡೆ

ಉಜಿರೆ: ಅಳದಂಗಡಿಯ ಆಮಂತ್ರಣ ಸೇವಾ ಪ್ರತಿಷ್ಠಾನದ ಲಾಂಛನವನ್ನು ಚಲನಚಿತ್ರ ನಟ ಅನಿರುದ್ಧ್ ಜಟ್ಕರ್ ಬುಧವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪ್ರತಿಷ್ಠಾನದ ಆಶ್ರಯದಲ್ಲಿ ನಡೆಸುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಪ್ರತಿಷ್ಠಾನದ ಆಡಳಿತ ಮಂಡಳಿಯ ವಿಜಯಕುಮಾರ್ ಜೈನ್ ಅಳದಂಗಡಿ, ಅರುಣ ಜೈನ್, ಸದಾನಂದ ಕುದ್ಯಾಡಿ, ಕೊರಗಪ್ಪ, ಸಂಪತ್ ಜೈನ್, ರಂಜನ್ ಕುಮಾರ್ ಮತ್ತು ಭಾರತಿ ಗುಂಡೂರಿ ಉಪಸ್ಥಿತರಿದ್ದರು. ಜುಲೈ 13 ರಂದು ಭಾನುವಾರ ಅಳದಂಗಡಿಯಲ್ಲಿ ಮೌಂಟ್ ಕಾರ್ಮೆಲ್ ಸಂಕಿರ್ಣದಲ್ಲಿ ಪ್ರತಿಷ್ಠಾನದ ನೂತನ ಕಾರ್ಯಾಲಯ ಉದ್ಘಾಟನೆಗೊಳ್ಳಲಿದ್ದು ತಾಲ್ಲೂಕಿನ ಸಾಧಕರನ್ನು ಗೌರವಿಸಲಾಗುವುದು ಎಂದು ವಿಜಯ ಕುಮಾರ್ ಜೈನ್ ತಿಳಿಸಿದ್ದಾರೆ.

ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರ ಮಟ್ಟದ ವಿಶೇಷ ಮಾನ್ಯತೆ

Article Image

ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರ ಮಟ್ಟದ ವಿಶೇಷ ಮಾನ್ಯತೆ

ರಾಷ್ಟ್ರಮಟ್ಟದ ಪ್ರಸಿದ್ಧ ಹಾಗೂ ಜನಪ್ರಿಯ ನಿಯತಕಾಲಿಕೆಗಳಾದ 'ಇಂಡಿಯಾ ಟುಡೇ' ಹಾಗೂ 'ದಿ ವೀಕ್' ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಶ್ರೀ ಧ.ಮಂ. ಕಾಲೇಜು ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಶ್ರೇಣಿಯೊಂದಿಗೆ ವಿಶೇಷ ಮಾನ್ಯತೆ ಪಡೆದಿದೆ. ಕಲೆ, ವಿಜ್ಞಾನ, ವಾಣಿಜ್ಯ, ಬಿಸಿಎ, ಬಿಬಿಎ, ಪತ್ರಿಕೋದ್ಯಮ ಹಾಗೂ ಎಂ.ಎಸ್.ಡಬ್ಲ್ಯೂ. ವಿಭಾಗಗಳ ಶೈಕ್ಷಣಿಕ ಸಾಧನೆ, ಚಟುವಟಿಕೆ, ಕಲಿಕಾ ಸೌಲಭ್ಯ, ಪ್ರವೇಶಾತಿ, ನೇಮಕಾತಿ, ಕಲಿಕಾ ಶುಲ್ಕ ಹಾಗೂ ಕಾಲೇಜಿಗೆ ಸಂದ ಪ್ರಶಸ್ತಿ, ಗೌರವ, ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯಗಳು, ಆಡಳಿತ ನಿರ್ವಹಣಾ ವ್ಯವಸ್ಥೆ ಸೇರಿದಂತೆ ವಿವಿಧ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಎರಡೂ ನಿಯತಕಾಲಿಕೆಗಳು ರಾಷ್ಟ್ರಮಟ್ಟದ ವಿವಿಧ ಕಾಲೇಜುಗಳ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದೆ. 'ಇಂಡಿಯಾ ಟುಡೇ' ಸಮೀಕ್ಷೆಯಲ್ಲಿ ಕಾಲೇಜಿನ ಬಿಎ ವಿಭಾಗ 62ನೇ ರ‍್ಯಾಂಕ್ ಗಳಿಸಿದ್ದು, ಬಿಎಸ್‌ಸಿಗೆ 77ನೇ ಸ್ಥಾನ ಲಭಿಸಿದೆ. ಕಾಮರ್ಸ್ ವಿಭಾಗವು 97ನೇ ಸ್ಥಾನದಲ್ಲಿದ್ದು, ಬಿಸಿಎ ವಿಭಾಗವು 30ನೇ ರ‍್ಯಾಂಕ್ ಗಳಿಸಿದೆ. ಬಿಬಿಎ ವಿಭಾಗವು 43ನೇ ಸ್ಥಾನದಲ್ಲಿದ್ದು ಎಂ.ಎಸ್.ಡಬ್ಲ್ಯೂ. ವಿಭಾಗಕ್ಕೆ 27ನೇ ಸ್ಥಾನ ಲಭ್ಯವಾಗಿದೆ. ಪತ್ರಿಕೋದ್ಯಮ ವಿಭಾಗಕ್ಕೆ 22ನೇ ಸ್ಥಾನ ಲಭಿಸಿದ್ದು, ರಾಷ್ಟ್ರಮಟ್ಟದ ಮುಂಚೂಣಿ ಕಾಲೇಜುಗಳ ಪಟ್ಟಿಯಲ್ಲಿ ಪತ್ರಿಕೋದ್ಯಮವು ನಾಲ್ಕನೇ ಸ್ಥಾನ ಹಾಗೂ ಎಂ.ಎಸ್.ಡಬ್ಲ್ಯೂ. ವಿಭಾಗವು ಹತ್ತನೇ ಸ್ಥಾನದ ಅಗ್ರಪಂಕ್ತಿಗೆ ಸೇರಿವೆ. 'ದಿ ವೀಕ್' ನಡೆಸಿದ ಸಮೀಕ್ಷೆಯಲ್ಲೂ ಬಿಎ ವಿಭಾಗಕ್ಕೆ 78ನೇ ಸ್ಥಾನ ಲಭಿಸಿದ್ದು, ಬಿಎಸ್‌ಸಿ ಹಾಗೂ ಬಿಕಾಂಗೆ ತಲಾ 96 ಹಾಗೂ 117ನೇ ಸ್ಥಾನ ಲಭ್ಯವಾಗಿದೆ. ಪತ್ರಿಕೋದ್ಯಮ ವಿಭಾಗಕ್ಕೆ 25ನೇ ಬ್ಯಾಂಕ್ ಪ್ರಾಪ್ತವಾಗಿದೆ. ಕಾಲೇಜಿನ ಈ ಸಾಧನೆಯನ್ನು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಶ್ಲಾಘಿಸಿದ್ದಾರೆ. ಹಿಂದಿನ ವರ್ಷಗಳಲ್ಲೂ ಇವೆರಡೂ ನಿಯತಕಾಲಿಕೆಗಳ ಸಮೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮಂ. ಕಾಲೇಜು ಮೊದಲ 100 ಕಾಲೇಜುಗಳಲ್ಲಿ ರ‍್ಯಾಂಕ್ ಗಳಿಸಿದ್ದು, ಈ ವರ್ಷದ ಮೌಲ್ಯಮಾಪನದಲ್ಲೂ ಗಣನೀಯ ಸಾಧನೆಯೊಂದಿಗೆ ಮನ್ನಣೆ ಪಡೆದಿದೆ ಎಂದು ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

First Previous

Showing 2 of 10 pages

Next Last