Article Image

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವ ಪ್ರಾರಂಭ

Article Image

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವ ಪ್ರಾರಂಭ

ಬೆಳ್ತಂಗಡಿ: ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ವರ್ಷಕ್ಕೆ 2 ಬಾರಿ ಚಿನ್ನೋತ್ಸವ ಪ್ರಾರಂಭಿಸುತ್ತೇವೆ. ಬೆಳ್ತಂಗಡಿ ಚಿನ್ನದಂತ ಊರು. ಮುಳಿಯ ಸಂಸ್ಥೆ ಆರು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಪ್ರಾರಂಭಗೊಂಡಾಗ ನಮ್ಮನ್ನು ಅತ್ಯಂತ ಗೌರವದಿಂದ ಕಂಡ ಊರು. ಇಲ್ಲಿಯ ಜನರು ಅತ್ಯಂತ ಸಾತ್ವಿಕ ಮನಸ್ಸಿನವರು ಎಂದು ಮುಳಿಯ ಮಾರ್ಕೇಟಿಂಗ್ ಕನ್ಸಲ್ವೆಂಟ್ ವೇಣು ಶರ್ಮ ಹೇಳಿದರು. ಅವರು ಬೆಳ್ತಂಗಡಿ ಮುಳಿಯ ಚಿನ್ನೋತ್ಸವಕ್ಕೆ ಅ.7 ರಂದು ಚಾಲನೆ ನೀಡಿ ಮಾತನಾಡಿದರು. 80 ವರ್ಷಗಳ ಪರಂಪರೆಯಲ್ಲಿ ಮುಳಿಯ ಚಿನ್ನಾಭರಣಗಳಲ್ಲಿ ಶುದ್ಧತೆಯನ್ನು ಕಾಪಾಡಿಗೊಂಡು ಬಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ವಿನೂತನ ಮತ್ತು ವಿಶಿಷ್ಠವಾದ ಡಿಸೈನ್ ನಮ್ಮಲ್ಲಿದ್ದು ಗ್ರಾಹಕರು ತಮ್ಮ ಇಷ್ಟದ ಚಿನ್ನಾಭರಣ ಪಡೆಯಬಹುದು ಎಂದರು. ತಾ.ಪಂ ತರಭೇತಿ ಸಂಯೋಜಕಿ, ಸಂಪನ್ಮೂಲ ವ್ಯಕ್ತಿ ಸುಧಾಮಣಿ ಮಾತನಾಡಿ ಮುಳಿಯದಲ್ಲಿ ಮನೆಯ ವಾತವರಣ ಕಂಡಿದ್ದೇವೆ. ಇಲ್ಲಿ ಬರುವಾಗ ನಗುಮೊಗದ ಸೇವೆಯೊಂದಿಗೆ ಸ್ವಾಗತಿಸಿ ಸತ್ಕಾರ ನೀಡುವುದು ಬಹಳ ಅದ್ಭುತವಾಗಿದೆ. ಎಲ್ಲಿಯೂ ಸಿಗದ ಡಿಸೈನ್ ಮುಳಿಯದಲ್ಲಿ ಸಿಗುತ್ತದೆ. ಹೆಣ್ಮಕ್ಕಳಿಗೆ ಚಿನ್ನ ಇಷ್ಟ, ಸ್ಟೀಮ್ ಮಾಡಿದ್ದು ಗ್ರಾಹಕರಿಗೆ ಪ್ರಯೋಜನವಾಗಿದೆ. ಸಂಸ್ಥೆ ವ್ಯಾಪರದೊಂದಿಗೆ ಧಾರ್ಮಿಕ ಆಚರಣೆಗಳನ್ನು ಆಚರಿಸಿ, ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮುಳಿಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದರು. ಮೂಡಬಿದ್ರೆ ಜೈನ್ ಕಾಲೇಜಿನ ಶಾರ್ವರಿ ಜೈನ್ ಮಾತನಾಡಿ ಮುಳಿಯ ಸಿಬ್ಬಂದಿಗಳ ಸೇವೆ ಅದ್ಭುತವಾಗಿದೆ. ಎಲ್ಲಾ ಹಬ್ಬಗಳನ್ನು ಆಚರಿಸಿ ಸಂಸ್ಥೆಯು ಮಾದರಿಯಾಗಿದೆ. ಚಿನ್ನಾಭರಣದಲ್ಲಿ ತುಂಬ ಕಲೆಕ್ಷನ್ ಇದ್ದು ಗ್ರಾಹಕರು ಚಿನ್ನೋತ್ಸವದಲ್ಲಿ ಭಾಗವಹಿಸಿ ಎಂದರು. ವೇದಿಕೆಯಲ್ಲಿ ಮುಳಿಯ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕುಮಾರ್ ಉಪಸ್ಥಿತರಿದ್ದರು. ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ಮ್ಯಾನೇಜರ್ ಲೋಹಿತ್ ಕುಮಾರ್ ಸ್ವಾಗತಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಮುಳಿಯದ ಉಪ ವ್ಯವಸ್ಥಾಪಕ ದಿನೇಶ್ ವಂದಿಸಿದರು. ಮದುವೆ, ಉಪನಯನ, ಗೃಹಪ್ರವೇಶ, ಮಗುವಿನ ನಾಮಕರಣ ಇತ್ಯಾದಿ ಸಮಾರಂಭಗಳಲ್ಲಿ ನಿಮ್ಮ ಸಂಭ್ರಮವನ್ನು ಹೆಚ್ಚಿಸಲು ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವ ಹಬ್ಬದಲ್ಲಿ ಭಾಗವಹಿಸಿ ನೆಚ್ಚಿನ ಆಭರಣಗಳನ್ನು ಆಕರ್ಷಕ ಬೆಲೆಗಳಲ್ಲಿ ಪಡೆಯಬಹುದಾಗಿದೆ. 5 ಕಾರು ಗೆಲ್ಲುವ ಸುವರ್ಣವಕಾಶ: ಮುಳಿಯ ಜ್ಯುವೆಲ್ಸ್ ನಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣ ಹಾಗೂ ಡೈಮಂಡ್ ಖರೀದಿಸಿ ಸಂಭ್ರಮಿಸಲು ಅವಕಾಶವಿದೆ. ರೂ. 20 ಸಾವಿರ ಮೊತ್ತದ ಡೈಮಂಡ್ ಆಭರಣ ಖರೀದಿಸಿ, ಕೂಪನ್ ಪಡೆದು 5 ಕಾರು ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಿದೆ.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಧಾರವಾಡ ಇದರ ಸಹಯೋಗದಲ್ಲಿ ಅ.4 ಮತ್ತು 5 ರಂದು ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ ನಡೆಯಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು- ಮಾನವ ಶರೀರ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಪಂಚೇಂದ್ರಿಯಗಳೇ ಮೂಲ ಸಾಧನ. ಎಲ್ಲಾ ಅಂಗಗಳ ಬಗ್ಗೆ ಅತೀ ಕಾಳಜಿ ಹೊಂದಿರುವ ಮಾನವ ಕಿವಿಗಳ ಬಗ್ಗೆ ನಿರ್ಲಕ್ಷ ತೋರಿಸುತ್ತಾನೆ. ಪಂಚೇಂದ್ರಿಯಗಳಲ್ಲಿ ಒಂದಕ್ಕೆ ಲೋಪವಾದರೂ ಇತರ ಇಂದ್ರಿಯಗಳ ಮೇಲೆ ಪರಿಣಾಮ ಬೀರಬಲ್ಲದು. ಆದ್ದರಿಂದ ಶ್ರವಣದೋಷದ ಬಗ್ಗೆ ನಿರ್ಲಕ್ಷ ಬೇಡ. ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿದ್ದು, ನಗರದ ಹೈಟೆಕ್ ಆಸ್ಪತ್ರೆಗಳಂತೆ ಅತ್ಯಾಧುನಿಕ ವೈದ್ಯಕೀಯ ಸೇವೆ ಹಾಗೂ ಕ್ಲಿಷ್ಟಕರ ಶಸ್ತçಚಿಕಿತ್ಸೆಗಳನ್ನು ಮಿತದರದಲ್ಲಿ ನಡೆಸುತ್ತಿದೆ. ಆಸ್ಪತ್ರೆಯ ಬಗ್ಗೆ ಜನ ಒಳ್ಳೆಯ ಅಭಿಪ್ರಾಯ ಹೊಂದಿರುವುದು ಸ್ಥಳಿಯರಾದ ನಮಗೆ ಖುಷಿ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಸುಸಜ್ಜಿತ ಶ್ರವಣ ಮತ್ತು ಮಾತು ಪರಿಶೀಲನಾ ಸೆಂಟರ್ ತೆರೆದು ಇನ್ನಷ್ಟು ಸೇವೆ ನೀಡುವಂತಾಗಲಿ ಎಂದರು. ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞರಾದ ಡಾ| ವಸೀಮ್ ಮಾತನಾಡಿ- ವಿಶ್ವದಲ್ಲಿ 190 ಕೋಟಿ ಮಂದಿ ಶ್ರವಣದೋಷ ಹೊಂದಿದ್ದಾರೆ. ಇದರಲ್ಲಿ 7 ಶೇಕಡಾ ಮಂದಿ ಭಾರತದಲ್ಲಿಯೇ ಇದ್ದಾರೆ. ಅತಿಯಾದ ಹೆಡ್‌ಪೋನ್ ಬಳಕೆ ಮತ್ತು ಡಿಜೆ ಸೌಂಡ್ ಶ್ರವಣದೋಷಕ್ಕೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸರ್ವೆ ಪ್ರಕಾರ ಮುಂದಿನ ದಿನಗಳಲ್ಲಿ 10 ರಲ್ಲಿ 4 ಮಂದಿ ಶ್ರವಣ ದೋಷ ಸಮಸ್ಯೆ ಎದುರಿಸಲಿದ್ದಾರೆ. ಶ್ರವಣದೋಷ ನಿವಾರಣೆ ಕ್ಲಿಷ್ಟಕರವಾದದ್ದು. ಕೇಳುವ ಸಾಮರ್ಥ್ಯ ಎಷ್ಟು ಮತ್ತು ಯಾವುದು ಹಿತ ಎಂಬುದನ್ನು ಅರಿತು ಚಿಕಿತ್ಸೆ ನೀಡಬೇಕಾಗುತ್ತದೆ ಎಂದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ, ಉಜಿರೆಯಲ್ಲಿ ಪ್ರಥಮ ಬಾರಿಗೆ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ ನಡೆಯುತ್ತಿದೆ. ಶ್ರವಣ ಮತ್ತು ಮಾತು ಪರಿಶೀಲನಾ ಚಿಕಿತ್ಸೆ ಅತೀ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿನ ಜನ ದೂರದ ಊರಿಗೆ ಹೋಗಿ ಇಂತಹ ಚಿಕಿತ್ಸೆ ಪಡೆಯುವುದು ಕಷ್ಟ. ಇದೇ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಇದರಿಂದ ಬೆಳ್ತಂಗಡಿ ಮತ್ತು ಆಸುಪಾಸಿನ ತಾಲೂಕಿನ ಜನತೆಗೆ ಪ್ರಯೋಜನವಾಗಿದೆ ಎಂದರು. 2 ದಿನ ನಡೆದ ಉಚಿತ ಶಿಬಿರದಲ್ಲಿ ಉಜಿರೆ ಎಸ್.ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್, ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞರಾದ ಡಾ| ವಸೀಮ್ ಮತ್ತು 8 ಮಂದಿಯ ತಂಡದವರಿಂದ ಎಲ್ಲಾ ವಯಸ್ಸಿನ ಜನರಿಗೆ ಮಾತು, ಭಾಷೆ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಲಾಯಿತು. 150ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಶಿಬಿರದಲ್ಲಿ ಭಾರತ ಸರಕಾರದ ಎ.ಡಿ.ಐ.ಪಿ ಯೋಜನೆಯಡಿ ಶ್ರವಣ ಉಪಕರಣಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಮಮತಾ, ಜಯಶ್ರೀ, ಅಕ್ಷತಾ ಮತ್ತು ನಿಶಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಉದ್ಘಾಟನಾ ಸಮಾರಂಭದಲ್ಲಿ ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್,ಪಿ ಉಪಸ್ಥಿತರಿದ್ದರು.

ಧರ್ಮಸ್ಥಳದಲ್ಲಿ ಪುತ್ತೂರಿನ “ಗಾನಸಿರಿ” ಕಲಾವಿದರಿಂದ ಸಂಗೀತ ಕಾರ್ಯಕ್ರಮ

Article Image

ಧರ್ಮಸ್ಥಳದಲ್ಲಿ ಪುತ್ತೂರಿನ “ಗಾನಸಿರಿ” ಕಲಾವಿದರಿಂದ ಸಂಗೀತ ಕಾರ್ಯಕ್ರಮ

ಉಜಿರೆ: ನವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಪುತ್ತೂರಿನ ಗಾನಸಿರಿ ಕಲಾಕೇಂದ್ರದ ಡಾ. ಕಿರಣ್‌ಕುಮಾರ್ ಮತ್ತು ಬಳಗದವರು ಸಂಗೀತ ಕಾರ್ಯಕ್ರಮ ನೀಡಿದರು. ಶ್ರೀಲಕ್ಷೀ, ಎಸ್., ಸೃಜನ ಪೂಜಾರಿ, ಮನಸ್ವಿ, ಅಚಿಂತ್ಯ ಸಹಕಲಾವಿದರಾಗಿ ಸಹಕರಿಸಿದರು. ತಬಲ ವಾದಕರಾಗಿ ಸುದರ್ಶನ ಆಚಾರ್ಯ, ಹಾರ್ಮೋನಿಯಂ ವಾದಕರಾಗಿ ದಿವ್ಯಾನಿಧಿ ರೈ ಸಹಕರಿಸಿದರು.

ಆಳ್ವಾಸ್ ಪದವಿಪೂರ್ವ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ

Article Image

ಆಳ್ವಾಸ್ ಪದವಿಪೂರ್ವ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ

ಮೂಡುಬಿದಿರೆ: ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳ ಮೂಲಕ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವ ‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ’ವು ಈ ಬಾರಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ಫೋಷಿಸಿದೆ. 10ನೇ ತರಗತಿಯಲ್ಲಿ ಸಿಬಿಎಸ್‌ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ), ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ)ದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳು ಅತ್ಯುತ್ತಮ ಮತ್ತು ಪರಿಣಾಮಕಾರಿ ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನಿಂದ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಷಯಗಳಲ್ಲಿ ಪಡೆಯಬಹುದು. ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ವಿಷಯಗಳ ಕುರಿತು 120 ನಿಮಿಷಗಳ ಪರೀಕ್ಷೆಯು ಅಕ್ಟೋಬರ್ 15, 2024ರಂದು ಮೂಡುಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆ ಇರಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 12, 2024 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ಈ ವೆಬ್ ಸೈಟ್ https://scholarship.alvas.org/puc/login.php ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿಶೇಷ ಸೂಚನೆ: ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದಲ್ಲಿ ಮತ್ತು ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯಲಿವೆ. ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವರವರು ಸಮಾಲೋಚನೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 6366377827/6366377825 ಸಂಪರ್ಕಿಸಬಹುದು.

ಆಳ್ವಾಸ್ ವಿದ್ಯಾರ್ಥಿಗಳಿಂದ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ

Article Image

ಆಳ್ವಾಸ್ ವಿದ್ಯಾರ್ಥಿಗಳಿಂದ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಣಿಪಾಲದ ಅಂಗರಚನಾಶಾಸ್ತ್ರ ಪ್ರಯೋಗಾಲಯ ಹಾಗೂ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಮೊದಲಿಗೆ ಮಣಿಪಾಲ ಮ್ಯೂಸಿಯಂಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಪ್ರಾಣಿಗಳು ಮತ್ತು ಮಾನವರ ವಿವಿಧ ಅಂಗರಚನಾ ರಚನೆಗಳನ್ನು ಮತ್ತು ವಿಶೇಷವಾಗಿ ಮಾನವರ ವಿವಿಧ ರೋಗಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳನ್ನು ವೀಕ್ಷಿಸಿದರು. ಭೇಟಿಯು ಉತ್ಕೃಷ್ಟ ಪ್ರೇರಕ ಅನುಭವವಾಗಿ ಹೊರಹೊಮ್ಮಿತು. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸಿತು. ನಂತರ ಉದಯವಾಣಿ ದಿನಪತ್ರಿಕೆ ಕಚೇರಿಗೆ ಭೇಟಿ ನೀಡಿ ಸ್ಥಾನೀಯ ಸಂಪಾದಕ ಕೃಷ್ಣ ಭಟ್‌ರೊಂದಿಗೆ ಸಂವಾದ ನಡೆಸಿದರು. ಆ ಬಳಿಕ ಕಚೇರಿಯ ಸಿಬ್ಬಂದಿ ವರ್ಗದವರು ಪತ್ರಿಕೆಯ ವಿವಿಧ ಅಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಉದಯವಾಣಿ ಡಿಜಿಟಲ್‌ನ ಸಿಬ್ಬಂದಿ ಡಿಜಿಟಲ್ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮುದ್ರಣ ವಿಭಾಗದ ಸಿಬ್ಬಂದಿ ಮುದ್ರಣ ತಂತ್ರಜ್ಞಾನ ಹಾಗೂ ಪ್ರಕ್ರಿಯೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಕ್ಷಿತಾ ತೋಡಾರು, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಜೋಶ್ವಿತಾ ಡೆಸಾ, ಉಪನ್ಯಾಸಕರಾದ ವಿವೇಕ್ ಜತೆಗಿದ್ದರು.

ಎಸ್.ಡಿ.ಎಂ ಕಾಲೇಜಿನಲ್ಲಿ ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ

Article Image

ಎಸ್.ಡಿ.ಎಂ ಕಾಲೇಜಿನಲ್ಲಿ ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ

ಉಜಿರೆ. ಆ.4: ಹೊಸ ಕಾಲದ ಸ್ಪರ್ಧಾತ್ಮಕತೆಯನ್ನು ನಿರ್ವಹಿಸುವುದರೊಂದಿಗೆ ವಿಶ್ವಾಸಾರ್ಹತೆ ಕಾಯ್ದುಕೊಂಡು ಜನಪರ ಮೌಲ್ಯಗಳಿಗೆ ಅನುಗುಣವಾಗಿ ಪ್ರಯೋಗ ನಡೆಸುವುದರ ಕಡೆಗೆ ಸುದ್ದಿಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು. ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ, ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ "ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು- ಪತ್ರಿಕಾ ಕಾರ್ಯಗಾರ" ಕುರಿತು ಶುಕ್ರವಾರ ಆಯೋಜಿತವಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಮಾಧ್ಯಮ ಪ್ರಭಾವೀಯಾಗುತ್ತದೆ. ಹಿಂದೆ ಮುದ್ರಿತ ಸುದ್ದಿ ಪ್ರತಿಕೆಗಳು ವ್ಯಾಪಕವಾಗಿ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡಿದ್ದವು. ಈಗ ಒಂದೊಂದು ಪತ್ರಿಕೆಯ ಕಂಟೆಂಟ್ ತದ್ವಿರುದ್ಧವಾಗಿದೆ. ಯಾವುದನ್ನು ನೆಚ್ಚಿಕೊಳ್ಳಬೇಕು ಎಂಬ ದ್ವಂದ್ವ ಓದುಗರಲ್ಲಿದೆ. ಈ ದ್ವಂದ್ವ ಸುದ್ದಿವಾಹಿನಿಗಳನ್ನು ವೀಕ್ಷಿಸುವವರಲ್ಲಿಯೂ ಇದೆ. ಇಂಥ ಸಂದರ್ಭದಲ್ಲಿ ಸುದ್ದಿಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವ ಪ್ರಯೋಗಗಳನ್ನು ನಡೆಸಿ ಜನಮನ್ನಣೆಯನ್ನು ಪಡೆಯುವುದರ ಕಡೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಹೇಳಿದರು. ಸುದ್ದಿಮಾಧ್ಯಮಗಳನ್ನು ನಿರ್ವಹಿಸುವಾಗ ಆರ್ಥಿಕತೆಯೂ ಮುಖ್ಯ. ಜಾಹಿರಾತುಗಳಿಗಷ್ಟೇ ಆದ್ಯತೆ ನೀಡುವ ಮಾಧ್ಯಮಗಳೂ ಇವೆ. ಜಾಹಿರಾತುಗಳ ಆದ್ಯತೆಯೊಂದಿಗೆ ಸತ್ವಯುತವಾದ ಸುದ್ದಿಗೆ ಆದ್ಯತೆ ನೀಡುವ ಮಾಧ್ಯಮಗಳೂ ಇವೆ. ನಮ್ಮಲ್ಲಿಯೇ ಮೊದಲು ಎಂಬ ಹುಮ್ಮಸ್ಸಿನಲ್ಲಿ ನಿಖರವಲ್ಲದ ಸುದ್ದಿವಿವರಗಳನ್ನು ಹರಿಯಬಿಡುವ ಪ್ರಯತ್ನಗಳೂ ನಡೆಯುತ್ತಿವೆ. ಇವುಗಳ ನಡುವೆ ಮೌಲಿಕವಾದ ಸುದ್ದಿಬಿಂಬಗಳನ್ನು ಕಟ್ಟಿಕೊಡುವ ಪ್ರಯೋಗಶೀಲತೆಯೇ ಶಾಶ್ವತ ಪ್ರಭಾವ ಬೀರುತ್ತದೆ. ಗ್ರಾಮೀಣ ಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಸ್ಥಳೀಯ ಪತ್ರಿಕೆಗಳು ಈ ನಿಟ್ಟಿನಲ್ಲಿ ಪ್ರಶಂಸನೀಯ ಎಂದರು. ಸದಭಿರುಚಿಯ ಓದು ಮತ್ತು ವೀಕ್ಷಣೆ ಟ್ರೆಂಡ್ ರೂಪುಗೊಳ್ಳುವುದಕ್ಕೆ ಮಾಧ್ಯಮಗಳೊಂದಿಗೆ ಜನಸಮೂಹವೂ ಪ್ರೇರಣೆಯಾಗಿ ನಿಲ್ಲಬೇಕಾಗುತ್ತದೆ. ಸತ್ವಯುತವಾದ ಕಂಟೆಂಟ್ ನೊಂದಿಗಿನ ಮಾಧ್ಯಮ ಪ್ರಯೋಗಗಳು ನಡೆದಾಗ ಅಂಥವುಗಳನ್ನು ಬೆಂಬಲಿಸುವುದರ ಮೂಲಕ ಸದಭಿರುಚಿಯ ಸಂಸ್ಕೃತಿಯನ್ನು ಹುಟ್ಟುಹಾಕಬಹುದು. ಇದು ಆರೋಗ್ಯಪೂರ್ಣ ಸಮಾಜವನ್ನು ರೂಪಿಸುತ್ತದೆ ಎಂದು ನುಡಿದರು. ರಾಷ್ಟ್ರಮಟ್ಟದಲ್ಲಿ ಕಾರ್ಯೋನ್ಮುಖವಾಗಿರುವ ಖ್ಯಾತನಾಮ ಪತ್ರಿಕೆಗಳಂತೆಯೇ ಸ್ಥಳೀಯ ಪತ್ರಿಕೆಗಳೂ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕಾರಣಕ್ಕಾಗಿಯೇ ಗ್ರಾಮೀಣ ಪತ್ರಿಕೋದ್ಯಮವು ಅಭ್ಯುದಯದ ಹಾದಿಯನ್ನು ನಿಚ್ಛಳಗೊಳಿಸುತ್ತಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಗ್ರಾಮೀಣ ಪತ್ರಿಕೆಗಳು ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿವೆ. ಇದರ ಜೊತೆಯಲ್ಲಿ ಸಾಮಾಜಿಕ ಜಾಗೃತಿ, ಜನ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು, ಗ್ರಾಮೀಣ ವರದಿಗಾರರು ಎದುರಿಸುವ ಸಮಸ್ಯೆಗಳು, ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪಾಸಿಟಿವ್ ಹಾಗೂ ನೆಗೆಟಿವ್ ಪತ್ರಿಕೋದ್ಯಮದ ಕುರಿತು ಚರ್ಚೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು. ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಪುತ್ತೂರಿನ ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲರಾದ ರಾಕೇಶ್‌ ಕುಮಾರ್ ಕಮ್ಮಾಜೆ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುದ್ದಿ ಬಿಡುಗಡೆಯ ಸಂತೋಷ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಹೆಗಡೆ ನಿರೂಪಿಸಿದರು.

ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್

Article Image

ಎಸ್.ಡಿ.ಎಂ. ಯುನಿವರ್ಸಿಟಿ ಚೆಸ್ ಕಪ್

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಚರ್ಮರೋಗ ಮತ್ತು ದೈಹಿಕ ಶಿಕ್ಷಣ ವಿಭಾಗ, ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಮತ್ತು ಇಂಟರ್‌ನ್ಯಾಶನಲ್ ಆರ್ಬಿಟರ್, ಪ್ರಮೋದ್ ಮೋರೆ ಅವರ ಸಹಯೋಗದೊಂದಿಗೆ ಎಸ್.ಡಿ.ಎಂ. ಡೆಂಟಲ್ ಕಾಲೇಜಿನಲ್ಲಿ ಅಕ್ಟೋಬರ್ 02, 2024 ರಂದು “ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿಯನ್ನು” ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ದೇಶದಾದ್ಯಂತ 12 ಟೈಟಲ್ಡ್ ಮತ್ತು 2 ಅಂತರಾಷ್ಟ್ರೀಯ ಆಟಗಾರರು ಸೇರಿದಂತೆ ಒಟ್ಟು 277 ಆಟಗಾರರು ಭಾಗವಹಿಸಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್. ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಮತ್ತು ಏಕಾಗ್ರತೆಯ ಮನಸ್ಸಿಗೆ ಚೆಸ್ ಆಟವು ಉತ್ತಮವಾಗಿದೆ ಎಂದರು. ಪಂದ್ಯಾವಳಿಯ ನಿರ್ದೇಶಕರಾದ ಡಾ. ನವೀನ್ ಕೆ.ಎನ್, ಸಹ ನಿರ್ದೇಶಕಿಯಾದ ಡಾ. ಶ್ವೇತಾ ಪ್ರಭು, ಸಂಘಟನಾ ಕಾರ್ಯದರ್ಶಿ ಅನುರಾಗ ಖನ್ನೂರ್, ಎಸ್.ಡಿ.ಎಂ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಸ್. ಜಿ. ಕೊಪ್ಪದ್, ಡಾ. ಶರದ್ ಜವಳಿ, ಎಸ್.ಡಿ.ಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾರಾಷ್ಟ್ರದ ಶ್ರೀ ಆಕಾಶ್ ದಳವಿ 8 ಅಂಕಗಳೊಂದಿಗೆ ಪ್ರಥಮ, ನವಲಗುಂದ ನಿರಂಜನ್ 8 ಅಂಕಗಳೊಂದಿಗೆ ದ್ವಿತಿಯ ಮತ್ತು 7.5 ಅಂಕಗಳೊಂದಿಗೆ ಮೊಹಮ್ಮದ ನುಬೇರಷಾ ಶೇಖ್ ತೃತೀಯ ಸ್ಥಾನ ಪಡೆದಿದ್ದಾರೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ ಅವರ ಉಪಸ್ಥಿತಿಯಲ್ಲಿ ಎಲ್ಲಾ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಹಾರ್ದಿಕ್ ರಾಣೆ ಅತಿಥಿಗಳನ್ನು ಸ್ವಾಗತಿಸಿದರು. ಆದಿತ್ಯ ಟಿ ಕಾರ್ಯಕ್ರಮ ನಿರೂಪಿಸಿದರು. ಪಂಚಮಿ ಸರ್ಪಂಗಳ ವಂದನಾರ್ಪಣೆ ಸಲ್ಲಿಸಿದರು.

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಸರ್ವ ಧರ್ಮ ಅರಿವು ಕಾರ್ಯಕ್ರಮ

Article Image

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಸರ್ವ ಧರ್ಮ ಅರಿವು ಕಾರ್ಯಕ್ರಮ

ಮೂಡುಬಿದಿರೆ: ಮಾಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ವ ಧರ್ಮ ಅರಿವು ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಧರ್ಮಗಳನ್ನು ಅರ್ಥ ಮಾಡಿಕೊಳ್ಳುವುದು ನಾಲ್ಕು ಅಂಧರು ಆನೆಯ ಯಾವುದೋ ಒಂದು ಭಾಗವನ್ನು ಸ್ಪರ್ಶಿಸಿ ಅನುಭವ ಪಡೆದುಕೊಂಡಂತೆ. ಪ್ರತಿಯೊಂದು ಧರ್ಮವು ತನ್ನದೇ ಆತ ತತ್ವವನ್ನು ಹೊಂದಿದೆ. ಆದರೆ ನಿಜವಾದ ಅರ್ಥಗ್ರಹಣ, ಎಲ್ಲಾ ದೃಷ್ಟಿಕೋನಗಳತ್ತ ತೆರೆದಾಗ ಮಾತ್ರ ಸಾಧ್ಯ. ಅಹಿಂಸೆ, ಸಹಾನುಭೂತಿ, ಸಹಿಷ್ಣುತೆ ಮತ್ತು ಸತ್ಯವೆಂಬುದು ಎಲ್ಲಾ ಧರ್ಮಗಳ ಅಧಾರವಾಗಿದೆ” ಎಂದರು. ದಯೆ ಮತ್ತು ಗೌರವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಾ, “ಇತರರನ್ನು ನೋಯಿಸಬೇಡಿ. ನೀವು ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ. ನಿಮ್ಮ ಕ್ರಿಯೆಯು ನಿಮ್ಮ ಜೊತೆಯಲ್ಲಿರುವವರಿಗೆ ಯಾವುದೇ ರೀತಿಯ ಹಾನಿಯನ್ನು ಅಥವಾ ನೋವನ್ನುಂಟು ಮಾಡಬಾರದು. ಸರ್ವೇ ಜನಾ: ಸುಖಿನೋ ಭವಂತು ಎ0ಬ ತತ್ವದ ಮೇಲೆ ಬೆಳೆದು ಬಂದ ದೇಶ ನಮ್ಮದು. ಇತ್ತೀಚೆಗಿನ ದಿನಗಳಲ್ಲಿ ಧಾರ್ಮಿಕ ಸಮನ್ವಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸೋಣ” ಎಂದರು. ಇಸ್ಲಾಂ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತರಾದ ರೆಹಾನಾ ಬೇಗಂ ಮಾತನಾಡುತ್ತಾ, “ಇಸ್ಲಾಮ್ ಎಂದರೆ ಶಾಂತಿ. ಕುರಾನ್ ಶಾಂತಿಯನ್ನು ಪ್ರತಿಪಾದಿಸುತ್ತದೆ. ನಮ್ಮ ಜೀವನವು ಅಮೂಲ್ಯವಾದದ್ದು. ದ್ವೇಷವು ಶಾಂತಿಯನ್ನು ಹಾಳು ಮಾಡುತ್ತದೆ. ನಾವು ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವತ್ತ ಪ್ರಯತ್ನಿಸಬೇಕು ಹಾಗೂ ಪ್ರೀತಿ ಎಲ್ಲಾ ಧರ್ಮಗಳ ಮೂಲ ತತ್ವವಾಗಿ ಉಳಿಯಬೇಕು. ಜಾತಿ ಧರ್ಮಗಳನ್ನು ಪರಿಗಣಿಸದೇ ವಿಷಸರ್ಪದ ಕಡಿತಕ್ಕೆ ಒಳಗಾದ ಸಾವಿರಾರು ಜನರ ಪ್ರಾಣವನ್ನು ಉಳಿಸುವ ಅವಕಾಶ ಆ ಭಗವಂತ ನನಗೆ ಒದಗಿಸಿಕೊಟ್ಟಿದ್ದಾನೆ. ನಾವ್ಯಾರೂ ದೇವರನ್ನು ನೋಡಿಲ್ಲ. ಆದರೆ ಪ್ರೀತಿ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ” ಎಂದರು. ಕ್ರೈಸ್ತ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ ಬಿ.ಇ.ಸಿ/ಎಸ್.ಸಿ.ಸಿಯ ನಿರ್ದೇಶಕರಾದ ವ0ದನೀಯ ಗುರು ಸುನಿಲ್ ಜಾರ್ಜ್ ಡಿ’ಸೋಜಾ ಮಾತನಾಡುತ್ತಾ, “ಕ್ರೈಸ್ತ ಧರ್ಮವು ನಾವೆಲ್ಲರೂ ದೇವರ ಮಕ್ಕಳು ಎಂದು ಬೋಧಿಸುತ್ತದೆ. ಈ ತತ್ವದ ಆಧಾರದಲ್ಲಿ ನಾವೆಲ್ಲರೂ ಒ0ದೇ ಕುಟು0ಬಕ್ಕೆ ಸೇರುತ್ತೇವೆ. ಯೇಸು ಕೇವಲ ತನ್ನ ಧಾರ್ಮಿಕ ಹಿನ್ನಲೆಯನ್ನು ಹ0ಚಿಕೊಳ್ಳುವವರ ಜೊತೆ ಮಾತ್ರವೇ ತನ್ನ ಪ್ರೀತಿಯನ್ನು ಹಂಚಿಕೊಂಡಿಲ್ಲ. ನಿಜವಾದ ಪ್ರೀತಿ ಮತ್ತು ಸಹಾನುಭೂತಿ ಧಾರ್ಮಿಕ ಮತ್ತು ಸಮಾಜಿಕ ಮೇರೆಗಳನ್ನು ಮೀರಿ ಹೋಗುತ್ತದೆ.” ಎಂದು ಹೇಳಿದರು. “ಇಂದಿನ ಧಾರ್ಮಿಕ ಅಸಹಿಷ್ಣುತೆ ಮತ್ತು ತಾರತಮ್ಯವನ್ನು ಪರಿಗಣಿಸಿದಾಗ ಪ್ರೀತಿ ಮತ್ತು ಸಹಾನುಭೂತಿ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಆಯ್ಕೆಯಲ್ಲ, ಜವಾಬ್ದಾರಿಯಾಗಿದೆ. ಸಹೋದರತ್ವವು ಕೇವಲ ಮಾತಿಗಷ್ಟೇ ಸೀಮಿತವಾಗಬಾರದು. ಅದು ಕ್ರಿಯೆಯಾಗಿ ಮೂಡಿಬರಬೇಕು” ಎಂದರು. ಹಿ0ದೂ ಧರ್ಮ ಅರಿವನ್ನು ಮೂಡಿಸಲು ಆಗಮಿಸಿದ ಸಂಸ್ಕ್ರತಿ ಚಿಂತಕರಾದ ಪುತ್ತಿಗೆ ಬಾಲಕೃಷ್ಣ ಭಟ್ ಮಾತನಾಡುತ್ತಾ, “ಯಾವುದನ್ನು ಧರಿಸುತ್ತೇವೆ ಮತ್ತು ಪೋಷಿಸುತ್ತೇವೆಯೋ ಅದು ಧರ್ಮ. ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಅದೊಂದು ಜಾಗತಿಕ ನೈತಿಕತೆಯಾಗಿ ಪರಿವರ್ತಿಸಬಹುದು. ಮತ್ತು ವಿಶ್ವದಾದ್ಯಂದ್ಯಂತ ಎಲ್ಲರಿಗೂ ಅನ್ವಯವಾಗುತ್ತದೆ” ಎಂದರು. “ಧರ್ಮವನ್ನು ಅರಿಯಲು ವೇದೋಪನಿಷತ್ತುಗಳಿವೆ, ತದನ0ತರ ಸಂಸ್ಕ್ರತಿಗಳಿವೆ. ಇವುಗಳನ್ನು ಅಧ್ಯಯನ ಮಾಡಿದ ಮೇಲೆಯೂ ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೆ ಮಹಾನ್ ವ್ಯಕ್ತಿಗಳ ಜೀವನವನ್ನು ಗಮನಿಸಿ ಅವರನ್ನು ಅನುಸರಿಸಬಹುದು. ಅದೂ ಕೂಡ ಕಷ್ಟವೆನಿಸಿದರೆ ಅ0ತರಾತ್ಮದ ನಿರ್ದೇಶನದ0ತೆ ನಡೆದುಕೊಳ್ಳಬಹುದು ಎ0ದರು. ಎಲ್ಲಾ ಧರ್ಮಗಳ ಅ0ತಿಮ ಗುರಿ ಆತ್ಮ ಸಾಕ್ಷಾತ್ಕಾರ. ಧರ್ಮ, ಅರ್ಥ, ಕಾಮವನ್ನು ಪೂರೈಸಿ ಎಲ್ಲಾ ಭೌತಿಕ ಗುರುತುಗಳಿ0ದ ಕಳಚಿಕೊಳ್ಳುವುದೇ ಮೋಕ್ಷ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸಿ ಎ0ದು ಹೇಳಿಕೊಡುವುದೇ ಧರ್ಮ. ನಾವೆಲ್ಲರೂ ಬದುಕು ಮತ್ತು ಬದುಕಲು ಬಿಡು ಎ0ಬ ತತ್ವದಲ್ಲಿ ಬದುಕಬೇಕಾಗಿದೆ. ಎಲ್ಲಾ ಧರ್ಮದ ಸಾರ ಮನುಷ್ಯ ಧರ್ಮವೇ ಆಗಿದೆ. ಎಲ್ಲರೂ ಸಮಾನತೆಯಿ0ದ, ಶಾ0ತಿ ಸಹಬಾಳ್ವೆಯಿ0ದ ಒಟ್ಟಾಗಿ ಬಾಳಿ ಬದುಕಿ ಭವ್ಯ ಭಾರತ ಧರ್ಮವನ್ನು ರಕ್ಷಿಸೋಣ ಎ0ದರು. ಸ0ಸ್ಥೆಯ ಆಡಳಿತ ನಿರ್ದೇಶಕ ಡಾ. ಸ0ಪತ್ ಕುಮಾರ್ ಉಜಿರೆ, ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಆ0ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಸಿಬಿಎಸ್ಸಿ ಶಾಲೆಯ ಪ್ರಾ0ಶುಪಾಲ ಸುರೇಶ್ ಉಪಸ್ಥಿತರಿದ್ದರು. ಎಕ್ಸಲೆ0ಟ್ ಶಿಕ್ಷಣ ಸ0ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಹರೀಶ್ ಎ0. ವ0ದಿಸಿದರು. ಡಾ. ವಾದಿರಾಜ ಕಾರ್ಯಕ್ರಮ ನಿರೂಪಿಸಿದರು.

ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ

Article Image

ಡಾ. ಕೆ. ಸತ್ಯಮೂರ್ತಿ ಅವರಿಗೆ ಡಾ. ರಾಜಾ ರಾಮಣ್ಣ ಪ್ರಶಸ್ತಿ

ಧಾರವಾಡ : ಎಸ್.ಡಿ.ಎಂ. ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಅವರಿಗೆ ಕರ್ನಾಟಕ ಸರಕಾರದಿಂದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ವಿಭಾಗದ 2022ನೇ ಸಾಲಿನ ಪ್ರತಿಷ್ಠಿತ ರಾಜಾ ರಾಮಣ್ಣ ಪ್ರಶಸ್ತಿ ಲಭಿಸಿರುತ್ತದೆ. ಸೆಪ್ಟಂಬರ್ 26ರಂದು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೋ. ಸಿ.ಎನ್.ಆರ್. ರಾವ್, ಶ್ರೀ. ಎನ್. ಎಸ್. ಬೋಸರಾಜು, ಮಂತ್ರಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷರಾದ ಪ್ರೊ. ಎ. ಎಸ್. ಕಿರಣ್ ಕುಮಾರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಗೋವಿಂದನ್ ರಂಗರಾಜನ್, ಡಾ. ಎಕ್ರೂಪ್ ಕೌರ್, ಐ.ಎ.ಎಸ್, ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ & ತಂತ್ರಜ್ಞಾನ ಕರ್ನಾಟಕ ಸರ್ಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಳೆದ 35 ವರ್ಷಗಳಲ್ಲಿ ಡಾ. ಸತ್ಯಮೂರ್ತಿ ಅವರು ರೂಪಾಂತರಗಳು, ಕಾರ್ಯವಿಧಾನಗಳು, ರೋಗನಿರ್ಣಯ ಮತ್ತು ಚಿಕಿತ್ಸಕ ತಂತ್ರಗಳ ಪ್ರಮುಖ ಸಂಶೋಧನೆಗಳನ್ನು ಸಂಶೋಧಿಸಿರುತ್ತಾರೆ. ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕುರಿತು ಅವರ ಸಂಶೋಧನೆಯು ಉತ್ತಮ ರೀತಿಯಲ್ಲಿ ಗುರುತಿಸಲ್ಪಟ್ಟಿದೆ. ಅವರು ಪ್ರಕೃತಿ ಮತ್ತು ಚಿಕಿತ್ಸೆಯಂತಹ ಆಯುರ್ವೇದ ತತ್ವಗಳ ಸಮಕಾಲೀನ ಜ್ಞಾನವನ್ನು ಗಣನೀಯವಾಗಿ ಮುನ್ನಡೆಸಿ, 350 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳು ಮತ್ತು 18 ಪೇಟೆಂಟ್‌ಗಳೊಂದಿಗೆ , ಅವರು ಮಾನವ ರೋಗ, ರೋಗನಿರ್ಣಯ, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ವಿಜ್ಞಾನ ಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ.

ಡಿಸೆಂಬರ್ 10ರಿಂದ 15ರವರೆಗೆ 30ನೇ ವರ್ಷದ ಆಳ್ವಾಸ್ ವಿರಾಸತ್

Article Image

ಡಿಸೆಂಬರ್ 10ರಿಂದ 15ರವರೆಗೆ 30ನೇ ವರ್ಷದ ಆಳ್ವಾಸ್ ವಿರಾಸತ್

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ಗೆ ಈ ವರ್ಷ 30ರ ಹರೆಯ. ಈ ಸಂದರ್ಭದಲ್ಲಿ ಅಪೂರ್ವ ಮತ್ತು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಆಳ್ವಾಸ್ ವಿರಾಸತ್-2024’ನ್ನು ಅತ್ಯಂತ ಯಶಸ್ವೀ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದರು. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾಗಿರಿಯ ಆವರಣದಲ್ಲಿ ಆಳ್ವಾಸ್ ವಿರಾಸತ್-2024 ಡಿಸೆಂಬರ್ 10, 2024ನೇ ಮಂಗಳವಾರದಂದು ಪ್ರಾರಂಭವಾಗಿ ಡಿಸೆಂಬರ್ 15, 2024ನೇ ಭಾನುವಾರದಂದು ಮುಕ್ತಾಯಗೊಳ್ಳಲಿದೆ. ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ಒಟ್ಟು 6 ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ವೈಭವೋಪೇತವಾಗಿ ಜರುಗಲಿದೆ. ಮೊದಲ 05 ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತುಗಳೇ ಮೊದಲಾದ ವಸ್ತು ಪ್ರದರ್ಶನಗಳಿಗೆ ಅವಕಾಶವಿದ್ದು ಕೊನೆಯ ದಿನ 15.12.2024ನೇ ಭಾನುವಾರವನ್ನು ಕೇವಲ ವಸ್ತು ಪ್ರದರ್ಶನಗಳಿಗಾಗಿಯೇ ಮೀಸಲಿಡಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ನಡೆಸುವ ಆಳ್ವಾಸ್ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್-2024’ ಗೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶವಿದ್ದು, ಸಂಸ್ಕೃತಿ ಪ್ರಿಯರೂ, ಕಲಾಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಮನೋವಿಜ್ಞಾನ ಸಂಘ ಉದ್ಘಾಟನೆ: ಮಾನಸಿಕ ಆರೋಗ್ಯದ ಬಗ್ಗೆ ತಪ್ಪು ಕಲ್ಪನೆ ಸಲ್ಲದು

Article Image

ಮನೋವಿಜ್ಞಾನ ಸಂಘ ಉದ್ಘಾಟನೆ: ಮಾನಸಿಕ ಆರೋಗ್ಯದ ಬಗ್ಗೆ ತಪ್ಪು ಕಲ್ಪನೆ ಸಲ್ಲದು

ಉಜಿರೆ: ಮನೋವಿಜ್ಞಾನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಮನೋವಿಜ್ಞಾನದ ವಿದ್ಯಾರ್ಥಿಗಳಾಗಿ ಎಲ್ಲರ ಸರ್ವತೋಮುಖ ಬೆಳವಣಿಗೆ ಹಾಗೂ ಕಲ್ಯಾಣಕ್ಕಾಗಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಪ್ರಾಧ್ಯಾಪಕಿ ಕೃಷ್ಣಗೋಪಕುಮಾರ್ ಹೇಳಿದರು. ಅವರು ಮಂಗಳವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಸ್ನಾತಕೋತ್ತರ ಹಾಗೂ ಮನೋವಿಜ್ಞಾನ ಸಂಶೋಧನಾ ಕೇಂದ್ರ ಆಯೋಜಿಸಿದ “ಪೀಸ್” ವಿದ್ಯಾರ್ಥಿಸಂಘ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಸಂಘದ ಮೂಲಕ ಶಾಂತಿ ಕಾಪಾಡುವ ಕಾರ್ಯಗಳು ನಿರಂತರ ನಡೆಯಲಿ ಎಂದು ಆಶಿಸಿದರು. ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ವಂದನಾ ಜೈನ್, ಕಾರ್ಯಕ್ರಮದ ಸಂಯೋಜಕಿ ಅಶ್ವಿನಿ ಶೆಟ್ಟಿ, ಡಾ. ಮಹೇಶ್‌ಬಾಬು, ಅಶ್ವಿನಿ ಎಚ್. ಸಿಂಧು ವಿ., ಸಂಘದ ಅಧ್ಯಕ್ಷರಾದ ಅಲಿಷ ಪಿ. ಜಾಯ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕುಮಾರಿ ಚೈತನ್ಯ ಸ್ವಾಗತಿಸಿದರು. ಕೀರ್ತನಾ ಧನ್ಯವಾದವಿತ್ತರು. ಸ್ಟಿನ್ಸಿ ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದೇ ಪೋಲಿಸ್ಇ ಲಾಖೆಯ ಮುಖ್ಯ ಧ್ಯೇಯ: ಸಂದೇಶ್ ಪಿ. ಜಿ. ಅಭಿಮತ

Article Image

ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದೇ ಪೋಲಿಸ್ಇ ಲಾಖೆಯ ಮುಖ್ಯ ಧ್ಯೇಯ: ಸಂದೇಶ್ ಪಿ. ಜಿ. ಅಭಿಮತ

ಪೋಲಿಸ್ ಕೆಲಸ ತುಂಬಾ ಪವಿತ್ರವಾದ ಕೆಲಸ, ಎಲ್ಲಿ ಮನುಷ್ಯರಿರುತ್ತಾರೆಯೋ ಅಲ್ಲಿ ಗಲಾಟೆ, ಗಲಭೆಗಳಿರುತ್ತವೆ. ಆದರೆ ಅವೆಲ್ಲವನ್ನು ಹಿಡಿತಕ್ಕೆ ತಂದು ಸಾರ್ವಜನಿಕರಲ್ಲಿ ಶಾಂತಿಯ ಬದುಕು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುವುದೇ ಪೊಲೀಸ್ ಇಲಾಖೆಯ ಮುಖ್ಯ ಧ್ಯೇಯ ಎಂದು ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೇಶ್ ಪಿ. ಜಿ.ಯವರು ಅಭಿಪ್ರಾಯಪಟ್ಟರು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೊಲೀಸ್ ಸಹಕಾರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಜನಗಳ ಮಧ್ಯೆ ಉತ್ತಮ ಭಾಂಧವ್ಯ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಹೊಸ ಭವಿಷ್ಯವನ್ನು ಬರೆದು ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿ ಮೂಡುಬಿದಿರೆಗೆ ಹೆಮ್ಮೆ ತಂದ ಇವರನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು. ಇದರ ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಒಬ್ಬ ದಕ್ಷ ಅಧಿಕಾರಿ ಇದ್ದರೆ ಅಲ್ಲಿನ ವ್ಯವಸ್ಥೆಗಳು ಉತ್ತಮವಾಗಿರುತ್ತದೆ. ಮೂಡುಬಿದಿರೆಗೆ ಅಂತಹ ಪೊಲೀಸ್ ಅಧಿಕಾರಿಯಾಗಿ ಸಂದೇಶ್ ಪಿ. ಜಿ ಯವರು ದೊರಕಿರುವುದು ನಮ್ಮೆಲ್ಲರ ಭಾಗ್ಯ. ಇವರು ತಮ್ಮ ಜವಬ್ದಾರಿಯಿಂದ ಸಂಬಂಧವನ್ನು ಕಟ್ಟುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದಾರೆ. ಈ ರೀತಿ ದೇಶ ಕಟ್ಟುವ ಕೆಲಸ ಮಾಡುತ್ತಿರುವ ಇವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಶಿಕ್ಷಕ ನಿರಂಜನ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಮುಕ್ತ ಚೆಸ್ ಪಂದ್ಯಾವಳಿ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಮುಕ್ತ ಚೆಸ್ ಪಂದ್ಯಾವಳಿ

ಸತ್ತೂರು, ಧಾರವಾಡ: ಶೀರ್ಷಿಕೆಯ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿಯನ್ನು ಅಕ್ಟೋಬರ್ 2, 2024 ರಂದು (ಬುಧವಾರ) ಎಸ್.ಡಿ.ಎಂ. ಡೆಂಟಲ್ ಕಾಲೇಜಿನ ಪರೀಕ್ಷಾ ಹಾಲ್ (ಎರಡನೇ ಮಹಡಿ)ನಲ್ಲಿ ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿಯು ದೇಶದಾದ್ಯಂತ ಗ್ರ್ಯಾಂಡ್ ಮಾಸ್ಟರ್‌ಗಳು ಮತ್ತು ಇತರ ಪ್ರತಿಷ್ಠಿತ ಚೆಸ್ ಆಟಗಾರರಿಂದ ಭಾಗವಹಿಸುವಿಕೆಯ ಗುರಿಯನ್ನು ಹೊಂದಿದೆ. ಎಸ್.ಡಿ.ಎಂ. ಕಪ್, ಚೆಸ್‌ನ ಅತ್ಯುನ್ನತ ಗುಣಮಟ್ಟವನ್ನು ಪ್ರದರ್ಶಿಸುವ ಪ್ರತಿಷ್ಠಿತ ಮತ್ತು ಹೆಚ್ಚು ಸ್ಪರ್ಧಾತ್ಮಕ ಕಾರ್ಯಕ್ರಮವಾಗಿದೆ. ಈ ಚೆಸ್ ಪಂದ್ಯಾವಳಿಯನ್ನು ಪುರುಷರು ಮತ್ತು ಮಹಿಳೆಯರು, ಎಲ್ಲಾ ವಯೋಮಾನದವರನ್ನು ಒಳಗೊಂಡಂತೆ ಮುಕ್ತ ವಿಭಾಗದಲ್ಲಿ ಏರ್ಪಡಿಸಲಾಗಿದೆ. 96 ಟ್ರೋಫಿಗಳೊಂದಿಗೆ ಒಟ್ಟು ಎರಡು ಲಕ್ಷ ರೂಪಾಯಿಗಳ ಮೌಲ್ಯದ ನಗದು ಬಹುಮಾನಗಳು ಇರುತ್ತವೆ. 8, 10, 12, 14 ಮತ್ತು 16 ರಂತಹ ವಿವಿಧ ವಯೋಮಾನದ ಗುಂಪುಗಳಲ್ಲಿ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿಗೆ ಅನುಕ್ರಮವಾಗಿ ರೂ.30,000, ರೂ. 25,000 ಮತ್ತು ರೂ. 20,000 ನಗದು ಬಹುಮಾನಗಳನ್ನು ನೀಡಲಾಗುತ್ತದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂರ್ಪಕಿಸಿ: ಅನುರಾಗ್, ಮೊಬೈಲ್ ಸಂಖ್ಯೆ. 91488 59412 / 96114 82250

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರ

ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಎಂ. ಆರ್. ಪೈ ಫೌಂಡೇಶನ್ ಮುಂಬೈ ಇವರ ಜಂಟಿ ಸಹಭಾಗಿತ್ವದಲ್ಲಿ, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಯ್ದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಉಚಿತ ನಾಯಕತ್ವ ತರಬೇತಿ ಶಿಬಿರವನ್ನು ಸೆಪ್ಟಂಬರ್ 23 ಮತ್ತು 24ರಂದು ಏರ್ಪಡಿಸಲಾಗಿತ್ತು. ಇಂದಿನ ಯುವ ವಿದ್ಯಾರ್ಥಿಗಳನ್ನು ನಾಳಿನ ಮಹಾನ್ ನಾಯಕರನ್ನಾಗಿ ರೂಪಿಸುವುದೇ ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಎಂ. ಆರ್. ಪೈ ಫೌಂಡೇಶನ್‌ನ ಮುಖ್ಯ ಉದ್ದೇಶ. ಈ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ದೇಶದ ಹಲವು ಭಾಗಗಳಲ್ಲಿ ನಡೆಸುತ್ತಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂಬೈನ ಎಂ. ಆರ್. ಪೈ ಫೌಂಡೇಶನ್‌ನಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಸಚಿನ್ ಕಾಮತ್ ಮತ್ತು ಕ್ಲಾರಿಸ್ಸಾ ಜತ್ತನ್ನ ಅವರು ಆಗಮಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹಲವು ವಿದ್ಯಾರ್ಥಿಗಳು ತರಬೇತಿ ಶಿಬಿರದ ಬಗ್ಗೆ ತಮ್ಮ ಪ್ರತಿಕ್ರೀಯೆಯನ್ನು ನೀಡಿದರು. ಎಸ್.ಡಿ.ಎಂ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ ಮತ್ತು ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್. ಅವರು ಅತಿಥಿಗಳಾಗಿದ್ದು, ಸುಮಾರು 90ಕ್ಕೂ ಹೆಚ್ಚು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮತ್ತು ನಾಯಕತ್ವ ಶಿಬಿರದ ಸಂಯೋಜಕರಾದ ಬಾಬಣ್ಣ ಶೆಟ್ಟಿಗಾರ್ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಮೇಘನಾ ಹೆಗಡೆ ಅತಿಥಿಗಳನ್ನು ಸ್ವಾಗತಿಸಿದರು. ಸಚಿನ್ ಕಾಮತ್ ಅವರು ಎಂ. ಆರ್. ಪೈ ಫೌಂಡೇಶನ್, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದ ಬಗ್ಗೆ ಪ್ರಸ್ತಾಪಿಸಿದರು. ಡಾ. ಅಂಜನಿ ವರ್ಮಾ ವಂದಿಸಿದರು.

ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ 2 ವಿದ್ಯಾರ್ಥಿಗಳು ತೇರ್ಗಡೆ

Article Image

ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ 2 ವಿದ್ಯಾರ್ಥಿಗಳು ತೇರ್ಗಡೆ

ಎಕ್ಸಲೆಂಟ್ ಮೂಡಬಿದಿರೆ: ಎನ್‌ಡಿಎ ಲಿಖಿತ ಪರೀಕ್ಷೆ 2 ವಿದ್ಯಾರ್ಥಿಗಳು ತೇರ್ಗಡೆ ಇತ್ತೇಚೆಗೆ ನಡೆದ ದೇಶದ ಪ್ರತಿಷ್ಠಿತ ಎನ್‌ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡಬಿದಿರೆಯ 2 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಮುಖ್, ದಿವ್ಯೇಶ್ ತೇರ್ಗಡೆಗೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

ವೇಣೂರು ಐಟಿಐಗೆ ಶೇಕಡ 100 ಫಲಿತಾಂಶ

Article Image

ವೇಣೂರು ಐಟಿಐಗೆ ಶೇಕಡ 100 ಫಲಿತಾಂಶ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಗೆ ಆಗಸ್ಟ್ 2024ರಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ. ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಟರ್ನರ್, ಮೆಕ್ಯಾನಿಕ್ ಮೋಟಾರ್ ವಾಹನ, ರೆಫ್ರಿಜರೇಟರ್ ಎಸಿ ಟೆಕ್ನಿಷಿಯನ್ ವೃತ್ತಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಶೇಕಡ 100 ಫಲಿತಾಂಶ ದೊರೆತಿದೆ. ಒಂದು ವರ್ಷದ ವೃತ್ತಿ ಘಟಕಗಳಾದ ಮೆಕ್ಯಾನಿಕ್ ಡೀಸೆಲ್ ವೃತ್ತಿಯಲ್ಲಿ ಶೇಕಡ 98, ವೆಲ್ಡರ್ ವೃತ್ತಿಯಲ್ಲಿ ಶೇಕಡ 92 ಫಲಿತಾಂಶ ಬಂದಿದ್ದು ಒಟ್ಟು 314 ಅಭ್ಯರ್ಥಿಗಳಲ್ಲಿ 310 ಮಂದಿ ತೇರ್ಗಡೆ ಹೊಂದಿರುತ್ತಾರೆ. ಈಗಾಗಲೇ ಕ್ಯಾಂಪಸ್ ನ ಮೂಲಕ ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಗೊಂಡಿರುವ ಈ ಎಲ್ಲಾ ವಿದ್ಯಾರ್ಥಿಗಳು ಕಂಪನಿಗಳಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿರುತ್ತಾರೆ. ಸಂಸ್ಥೆಯ ಉತ್ತಮ ಫಲಿತಾಂಶಕ್ಕಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್. ಇವರು ಸಿಬ್ಬಂದಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

PDO ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

Article Image

PDO ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕೆಲವು ತಿಂಗಳ ಹಿಂದೆಯಷ್ಟೇ ಕರ್ನಾಟಕ ಲೋಕಸೇವಾ ಆಯೋಗವು(KPSC) ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು ಮತ್ತು ಅರ್ಜಿ ಸಲ್ಲಿಕೆಗೆ ನೀಡಿದ್ದ ಕೊನೆ ದಿನಾಂಕ ಕೂಡ ಮುಗಿದಿತ್ತು. ಆದರೆ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗಾಗಿ ಒಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಅದೇನೆಂದರೆ, ಸೆಪ್ಟೆಂಬರ್ 10. 2024ರ CSE 166 SEN 2014 ಪ್ರಕಾರ ಒಂದು ಬಾರಿಗೆ ಅನ್ವಯವಾಗುವಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಮೂರು ವರ್ಷಗಳ ಕಾಲ ಹೆಚ್ಚಿನ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಹೀಗಾಗಿ PDO ಹುದ್ದೆಗಳಿಗೆ KPSC ಮತ್ತೊಮ್ಮೆ ಅರ್ಜಿ ಆಹ್ವಾನ ಮಾಡಿದೆ. ಕಾರಣಾಂತರಗಳಿಂದ ಈ ಹಿಂದೆ ಅರ್ಜಿ ಸಲ್ಲಿಸಲಾಗದವರು ಹಾಗೂ ವಯಸ್ಸಿನ ಮಿತಿ ಹೆಚ್ಚಿದ್ದ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ನಿರಾಸರಾಗಿದ್ದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನೇಮಕಾತಿ ಸಂಸ್ಥೆ:- ಕರ್ನಾಟಕ ಲೋಕಸೇವಾ ಆಯೋಗ (KPSC) ಉದ್ಯೋಗ ಸಂಸ್ಥೆ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆ ಹೆಸರು:- ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಒಟ್ಟು ಹುದ್ದೆಗಳ ಸಂಖ್ಯೆ:- 247 ಹುದ್ದೆಗಳು ಹುದ್ದೆಗಳ ವಿವರ:- * ಹೈದರಬಾದ್ ಕರ್ನಾಟಕ – 97 ಹುದ್ದೆಗಳು * ಸಾಮಾನ್ಯ – 150 ಹುದ್ದೆಗಳು ಉದ್ಯೋಗ ಸ್ಥಳ:- ಕರ್ನಾಟಕದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಇತರೆ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ ಶೈಕ್ಷಣಿಕ ವಿದ್ಯಾರ್ಹತೆ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು. ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:- * ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕನಿಷ್ಠ ವಯೋಮಿತಿ 18 ವರ್ಷಗಳು * ರಾಜ್ಯ ಸರ್ಕಾರವು ಸೆಪ್ಟೆಂಬರ್ 10 ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯಿಸುವಂತೆ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆ ನೀಡಿರುತ್ತದೆ. ಆ ಪ್ರಕಾರವಾಗಿ ಗರಿಷ್ಠ ವಯೋಮಿತಿ * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು * ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 41 ವರ್ಷ * ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 43 ವರ್ಷ ಅರ್ಜಿ ಸಲ್ಲಿಸುವ ವಿಧಾನ:- * ಆನ್ ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ * KPSC website ಗೆ ಭೇಟಿ ನೀಡಿ PDO ಅಪ್ಲಿಕೇಶನ್ ವಿಭಾಗಕ್ಕೆ ತೆರಳಿ, ಲಿಂಕ್ ಕ್ಲಿಕ್ ಮಾಡಿ ಕೇಳಲಾಗುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು * ಪೂರಕ ದಾಖಲೆಗಳನ್ನು ಕೂಡ ಸೂಚನೆ ಪ್ರಕಾರವಾಗಿ ಸಲ್ಲಿಸಬೇಕು * ನಿಮ್ಮ ವರ್ಗಕ್ಕೆ ಅನುಕೂಲವಾಗುವ ಅರ್ಜಿ ಶುಲ್ಕ ಪಾವತಿಸಿ, ಇ-ರಸೀದಿ ಪಡೆಯಿರಿ * ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ. ಅರ್ಜಿ ಶುಲ್ಕ:- * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600 * ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ ರೂ.300 * ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ * ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50 ಆಯ್ಕೆ ವಿಧಾನ:- * ಸ್ಪರ್ಧಾತ್ಮಕ ಪರೀಕ್ಷೆ * ನೇರ ಸಂದರ್ಶನ * ದಾಖಲೆಗಳ ಪರಿಶೀಲನೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ

Article Image

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ

ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ 2024, ಅಕ್ಟೋಬರ್ 10ರಂದು ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಕಾರಂತ ಹುಟ್ಟುಹಬ್ಬ ಸಮಾರಂಭವು ಜರಗಲಿದ್ದು, ಇದರ ಸಲುವಾಗಿ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾಲೇಜು ಹಾಗೂ ಮುಕ್ತ ಎಂಬ 2 ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೂರು ಪುಟಕ್ಕೆ ಮೀರದಂತೆ ಪ್ರಬಂಧವನ್ನು ಅಕ್ಟೋಬರ್ 6, 2024ರೊಳಗಾಗಿ ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪುವಂತೆ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಬಂಧದ ವಿಷಯ ಕಾಲೇಜು ವಿಭಾಗ : ಕಾರಂತರ ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯ ಅವಲೋಕನ, ಅನುಸಂಧಾನ ಮುಕ್ತ ವಿಭಾಗ : ಕಾರಂತರ ಸಾಹಿತ್ಯ (ಕಾದಂಬರಿಗಳು) ಅವಲೋಕನ, ಅನುಸಂಧಾನ

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ

Article Image

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ

ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಗಳು ರೋಟರಿ ಕ್ಲಬ್ ಬೆಂಗಳೂರು ಇಂದಿರಾ ನಗರ ಹಾಗೂ ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ತಾಲೂಕಿನ ಒಟ್ಟು 151 ವಿದ್ಯಾರ್ಥಿಗಳಿಗೆ ರೂ. 10,000ದಂತೆ ಒಟ್ಟು ರೂ. 15,10,000 ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿದೆ. ಬೆಳ್ತಂಗಡಿಯಲ್ಲಿರುವ ರೋಟರಿ ಸಭಾಭವನದಲ್ಲಿ ಇದೇ ಸೆಪ್ಟೆಂಬರ್ 21 ರಂದು ಶನಿವಾರ ಮಧ್ಯಾಹ್ನ 2:30ಕ್ಕೆ ಸರಿಯಾಗಿ ಈ ಸಮಾರಂಭ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಎಸ್.ಡಿ.ಎಂ, ವಾಣಿ ಮತ್ತು ಅನುಗ್ರಹ ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಅವಶ್ಯಕವಿರುವ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ ಶಿಪ್‌ನ ಪ್ರಯೋಜನ ದೊರೆಯಲಿದೆ. ಇದರಿಂದ ಆರ್ಥಿಕವಾಗಿ ಅಗತ್ಯವಿರುವ ವಿದ್ಯಾ ರ್ಥಿಗಳಿಗೆ ಸಹಾಯವಾಗಲಿದೆ. ಪ್ರತಿಷ್ಠಿತ ಹೌಸಿಂಗ್ ಫೈನಾನ್ಸ್ ಕಂಪನಿಯಾದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ನ ಮೂಲಕ ಬೆಳ್ತಂಗಡಿ ಪರಿಸರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಮೊತ್ತವನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಜೋಶಿ ಪಾಲ್ಗೊಳ್ಳಲಿದ್ದಾರೆ. ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೋ. ವಿಕ್ರಮದತ್ತ, ರೋಟರಿ ಕ್ಲಬ್ ಬೆಂಗಳೂರು ಇಂದಿರಾ ನಗರ ರೋ. ಪಿಯೂಶ್ ಜೈನ್, ರೋ. ಜಗದೀಶ್ ಮುಗಳಿ, ರೋ. ಮೊಹಮ್ಮದ್ ವಲವೂರ್, ರೋ. ಮನೋರಮಾ ಭಟ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ ಅನೇಕ ವರ್ಷಗಳಿಂದ ಈ ಸ್ಕಾಲರ್ಶಿಪ್ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ. ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಪೂರನ್ ವರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಜಿರೆ: ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಎಂಜಿನಿಯರಿಂಗ್ ವಿಧೇಯಕ 2024

Article Image

ಉಜಿರೆ: ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಎಂಜಿನಿಯರಿಂಗ್ ವಿಧೇಯಕ 2024

ಉಜಿರೆ: ದೇಶದ ಪ್ರಗತಿಗೆ ಎಂಜಿನಿಯರ್‌ಗಳ ಸೇವೆ ಮತ್ತು ಕೊಡುಗೆ ಅಮೂಲ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಓಶಿಯನ್‌ಪರ್ಲ್ ಹೋಟೆಲ್‌ನ ಸಭಾಭವನದಲ್ಲಿ ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್‌ಎಂಜಿನಿಯರಿಂಗ್ ವಿಧೇಯಕ-2024 “ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂಬ ಮಾತಿದೆ. ಯಾವುದೇ ಕ್ಷೇತ್ರದಲ್ಲಿ ವೃತ್ತಿಬಾಂಧವರೆಲ್ಲ ಸಂಘಟಿತರಾಗಿ ಕೆಲಸ ಮಾಡಿದರೆ ಉನ್ನತ ಪ್ರಗತಿ ಸಾಧ್ಯವಾಗುತ್ತದೆ. ವಿಶ್ವದ ಎಲ್ಲಾ ದೇಶಗಳ ಚಿತ್ತ ಈಗ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಭಾರತದತ್ತ ಇದೆ. ವೃತ್ತಿನಿರತ ಸಿವಿಲ್ ಎಂಜಿನಿಯರ್‌ಗಳ ಸಂಘಟನೆ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಅವರು ಹಾರೈಸಿದರು. ಇದೇ ಸಂದರ್ಭದಲ್ಲಿ ಲೋಗೋ ಅನಾವರಣಗೊಳಿಸಲಾಯಿತು. ಸಿವಿಲ್‌ಎಂಜಿನಿಯರ್‌ಗಳ ರಾಜ್ಯಮಟ್ಟದ ಸಂಘಟನೆಯ ಅಧ್ಯಕ್ಷ ಶ್ರೀಕಾಂತ್ ಎಸ್. ಚನ್ನಲ್ ಮಾತನಾಡಿ, ಸಿವಿಲ್‌ ಎಂಜಿನಿಯರ್‌ಗಳು, ರಾಷ್ಟ್ರನಿರ್ಮಾಪಕರು ಒಂದು ದೇಶದ ಕಟ್ಟಡಗಳ ವಿನ್ಯಾಸ ಅಲ್ಲಿನ ಜನರ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಪ್ರತಿಬಿಂಬಿಸುತ್ತದೆ. ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟು ಹಾಗೂ ವಾಣಿಜ್ಯಸಂಕೀರ್ಣಗಳ ನಿರ್ಮಾಣದಲ್ಲಿ ಸಿವಿಲ್‌ಎಂಜಿನಿಯರ್‌ಗಳ ಸೇವೆ ಅಮೂಲ್ಯವಾಗಿದೆ. ಕೇಂದ್ರಸರ್ಕಾರ ಹತ್ತು ಲಕ್ಷ ಕೋಟಿ ರೂ. ಹಾಗೂ ಖಾಸಗಿ ವಲಯದ ಉದ್ಯಮಗಳು ಹದಿನೆಂಟು ಲಕ್ಷ ಕೋಟಿ ರೂ. ಸೇರಿದಂತೆ ಒಟ್ಟು ಇಪ್ಪತ್ತೆಂಟು ಲಕ್ಷ ಕೋಟಿ ರೂ. ಸಿವಿಲ್ ಕಟ್ಟಡ ಕಾಮಗಾರಿಗಳಿಗಾಗಿ ಈಗಾಗಲೇ ವಿನಿಯೋಗಿಸಲಾಗಿದೆ. ಆದರೆ ಪರಿಣತ ಹಾಗೂ ಅಧಿಕೃತ ಸಿವಿಲ್ ಎಂಜಿನಿಯರ್‌ಗಳು ಕಟ್ಟಡ ಕಾಮಗಾರಿಯಲ್ಲಿ ಭಾಗವಹಿಸದೆ ತಾಂತ್ರಿಕಜ್ಞಾನದ ಕೊರತೆಯಿಂದಾಗಿ ಕಟ್ಟಡಗಳ ಕುಸಿತ, ಸೇತುವೆಗಳಲ್ಲಿ ಬಿರುಕು, ರಸ್ತೆಗಳ ಕಳಪೆ ಕಾಮಗಾರಿ, ಅಣೆಕಟ್ಟುಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಆದುದರಿಂದ ಅಧಿಕೃತ ಪರವಾನಿಗೆ ಪಡೆದ ಸಿವಿಲ್ ಎಂಜಿನಿಯರ್‌ಗಳೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಬೇಕು. ಇದಕ್ಕಾಗಿ ಅನುಮೋದನೆಗೊಂಡ ವೃತ್ತಿನಿರತ ಸಿವಿಲ್‌ಎಂಜಿನಿಯರಿಂಗ್ ವಿಧೇಯಕ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈಗಾಗಲೇ ವಿಧೇಯಕವು ಸರ್ಕಾರ ಮತ್ತು ಉಭಯಸದನಗಳಲ್ಲಿ ಅನುಮೋದನೆಗೊಂಡಿದ್ದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ ಎಂದು ಅವರು ಹೇಳಿದರು. ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಂ.ಯು. ಅಶ್ವಥ್, ಅಜಿತ್ ಕುಮಾರ್ ಮತ್ತು ಎಂ. ಆರ್. ಕಲ್‌ಗಲ್ ತಮ್ಮ ಅನಿಸಿಕೆ ತಿಳಿಸಿದರು. ವಿಶೇಷ ಸಾಧನೆ ಮಾಡಿದ ಸಿವಿಲ್‌ಎಂಜಿನಿಯರ್‌ಗಳಾದ ಉಜಿರೆಯ ಜಗದೀಶಪ್ರಸಾದ್, ಸಂಪತ್‌ರತ್ನ ರಾವ್ ಮತ್ತು ಸುಭಾಶ್ಚಂದರ ಅವರನ್ನು ಗೌರವಿಸಲಾಯಿತು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಉಜಿರೆಯ ಜಗದೀಶ ಪ್ರಸಾದ್ ಯಾವುದೇ ತಾಂತ್ರಿಕ ಮಾಹಿತಿ ಹಾಗೂ ಅರ್ಹತೆ ಇಲ್ಲದವರು ಸಿವಿಲ್‌ಎಂಜಿನಿಯರ್‌ಗಳ ಮೇಲೆ ಮಾಡುವ ಆಪಾದನೆ ಹಾಗೂ ದಬ್ಬಾಳಿಕೆ ತಡೆಯಲು ಸಂಘಟನೆ ಹಾಗೂ ವಿಧೇಯಕ ಅನಿವಾರ್ಯವಾಗಿದೆ ಎಂದರು. ಉಜಿರೆಯ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ರವೀಶ್ ಪಡುಮಲೆ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೆ ಮೊದಲು ಆಕರ್ಷಕ ವಾಹನ ಜಾಥಾ ನಡೆಯಿತು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 30 ಲಕ್ಷ ಮೌಲ್ಯದ 2 ಬಿಪಿಎಲ್ ಲೋವೆನ್‌ಸ್ಪೆöನ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು. ಡಿ. ಹರ್ಷೇಂದ್ರ ಕುಮಾರ್ ಅವರು ಹೊಸ ತಂತ್ರಜ್ಞಾನದ 2 ಐಸಿಯು ವೆಂಟಿಲೇಟರ್‌ಗಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿಯೊಂದು ಸಂಸ್ಥೆಗಳು ಕೂಡ ಸೇವೆಯ ಉದ್ದೇಶದಿಂದ ನಡೆಸಲ್ಪಡುತ್ತದೆ. ಖರ್ಚು ಬಗ್ಗೆ ಚಿಂತಿಸದೆ ಜನತೆಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದೇ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಧಾರಿತ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ. ಹಾಗಾಗಿ ದಿನೇ-ದಿನ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳು ಕೂಡ ಈ ಆಸ್ಪತ್ರೆಯ ಮೇಲೆ ಗ್ರಾಮೀಣ ಜನತೆಯಲ್ಲಿ ಭರವಸೆ ಹೆಚ್ಚಿಸಿದೆ. ಈ ಆಸ್ಪತ್ರೆ ಅನೇಕ ಮಂದಿಗೆ ಉದ್ಯೋಗದ ಅವಕಾಶ ನೀಡಿ ಅನೇಕ ಕುಟುಂಬಗಳು ನೆಮ್ಮದಿಗೆ ಕಾರಣವಾಗಿದೆ. ಇತರ ಅನೇಕರಿಗೆ ಪರೋಕ್ಷ ರೀತಿಯಲ್ಲಿ ವಿವಿಧ ಅವಕಾಶ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ ಎಂದರು. 9 ಹಾಸಿಗೆಗಳ ಸುಸಜ್ಜಿತ ಐಸಿಯು ಹೊಂದಿರುವ ಈ ಆಸ್ಪತ್ರೆಯು ಈಗಾಗಲೇ 6 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಈಗ ಒಟ್ಟು 8 ವೆಂಟಿಲೇಟರ್‌ಗಳಿವೆ. ಹೃದಯಾಘಾತ, ಸ್ಟ್ರೋಕ್, ಉಸಿರಾಟದ ಸಮಸ್ಯೆ ಮುಂತಾದ ತುರ್ತು ಸಂದರ್ಭದಲ್ಲಿ ಈ ಅತ್ಯಾಧುನಿಕ ವೆಂಟಿಲೇಟರ್‌ಗಳು ಬಹಳ ಉಪಯುಕ್ತವಾಗಲಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ಹಾಗೂ ರೋಗಿಯಿಂದ ಸಂಪರ್ಕ ಕಳೆದುಕೊಂಡಾಗ ಎಚ್ಚರಿಸುವ ಸೈರನ್ ಹೊಂದಿದ್ದು, ರೋಗಿಗೆ ಉಸಿರಾಟದಲ್ಲಿ ವ್ಯತ್ಯವಾಗದಂತೆ ನಿಗಾವಹಿಸುತ್ತದೆ. ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳಿಗೆ ಹೊಂದಾಣಿಕೆಯಾಗಬಲ್ಲದು. ಈ ವೆಂಟಿಲೇಟರ್ ಪರ‍್ಟೇಬಲ್ ಆಗಿದೆ. ಅಗತ್ಯ ಬಿದ್ದಾಗ ಆಂಬ್ಯುಲೆನ್ಸ್ಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಮಂಗಳೂರು ಬಳಿಕ ಈ ಅತ್ಯಾಧುನಿಕ ವೆಂಟಿಲೇಟರ್ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಇಲ್ಲಿನ ವೈದ್ಯರು, ದಾದಿಯರು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

ಉಜಿರೆ, ಸೆ.12: ಸಾಹಿತ್ಯವೆನ್ನುವುದು ಸಮುದ್ರ ಇದ್ದಂತೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಡೀ ಜಗತ್ತಿನ ಸಾಹಿತ್ಯ ತಿಳಿಯಲು ಒಂದು ಜನ್ಮ ಸಾಕಾಗುವುದಿಲ್ಲ. ಯಾವ ಭಾವಕ್ಕೆ ಎಷ್ಟು ಒತ್ತು ನೀಡುತ್ತೇವೆ ಎಂಬುದು ಸಾಹಿತ್ಯದಲ್ಲಿ ಮುಖ್ಯವಾಗುತ್ತದೆ ಎಂದು ಯುವ ಕವಿ, ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಧು ಬಿರಾದಾರ ಹೇಳಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಇಂದು (ಸೆ. 12) ಆಯೋಜಿಸಿದ್ದ ‘ಕಾವ್ಯ ಕಟ್ಟುವ ಬಗೆ’ ಕಾವ್ಯ ರಚನಾ ಕಮ್ಮಟದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪಂಪ, ರನ್ನ, ಕುವೆಂಪು ಬರೆದಿರುವುದು ಮಹಾಭಾರತವೇ. ಆದರೆ ಅವರ ಕಾಲಘಟ್ಟ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಬೇರೆಯಾಗಿದೆ. ಆದ್ದರಿಂದ ಅವರ ಕೃತಿ ವಿಶಿಷ್ಟತೆ ಹೊಂದಿದೆ. ಪ್ರವಾಹದ ಎದುರು ನಿಲ್ಲುವ ಕವಿಗಳು ಮಾತ್ರ ನೆನಪಿನಲ್ಲಿ ಇರುತ್ತಾರೆ. ಅನುಭವವಿದ್ದರೆ ಕವನ ತುಂಬಾ ಸುಲಭವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಕವಿತೆ ಬರೆಯುವುದು ಬಲು ಸುಲಭ. ಇದಕ್ಕೆ ಸೂಕ್ಷ್ಮಗ್ರಹಿಕೆ, ಸಹೃದಯತೆ ಜತೆಗೆ ವಿದ್ಯಮಾನಗಳ ಕುರಿತು ಕುತೂಹಲವಿರಬೇಕು. ಇದರ ಮೇಲೆ ನಮ್ಮ ಅಂತರಂಗದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ನೀಡಿದರೆ ಅದು ಕವನವಾಗುತ್ತದೆ” ಎಂದರು. “ಪ್ರಾಸ, ಭಾವ ಪೂರ್ಣವಾಗಿದ್ದರೆ ಅದುವೇ ಕಾವ್ಯ. ಭಾವನಾತ್ಮಕವಾಗಿ ನಮ್ಮನ್ನು ಹಿಂದಕ್ಕೆ ಕರೆದೊಯ್ಯುವ ಶಕ್ತಿ ಕಾವ್ಯಕ್ಕಿದೆ. ನಾವು ಹಿಂದೆ ಕೇಳಿದ ಪದ್ಯಗಳನ್ನು ಮತ್ತೆ ಕೇಳಿದಾಗ ನಮ್ಮ ಹಿಂದಿನ ದಿನಗಳು ನೆನಪಾಗುತ್ತವೆ” ಎಂದರು. ಕನ್ನಡ ಅಧ್ಯಾಪಕರಾದ ಡಾ. ದಿವಾಕರ ಕೊಕ್ಕಡ, ಡಾ ಎಂ.ಪಿ. ಶ್ರೀನಾಥ್, ಡಾ. ರಾಜಶೇಖರ್, ಭವ್ಯಶ್ರೀ, ತೇಜಸ್ವಿ ಕಾರ್ಯಕ್ರಮ ಸಂಯೋಜಕ ಡಾ. ನಾಗಣ್ಣ ಡಿ.ಎ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಉಲ್ಲೇಖ ವಂದಿಸಿ, ಹಿಮಾಲಿ ಎಂ. ಪಿ. ಕಾರ್ಯಕ್ರಮ ನಿರೂಪಿಸಿದರು.

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

Article Image

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

ಉಜಿರೆ: ಕೌಶಲ್ಯಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಮತ್ತು ಅನ್ವಯಿಕ ಸಾಮರ್ಥ್ಯದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರುಗೊಂಡಾಗ ಮಾತ್ರ ಅಚ್ಚಳಿಯದ ಪ್ರಭಾವ ಮೂಡಿಸಿ ಯಶಸ್ಸುಗಳಿಸಲು ಸಾಧ್ಯ ಎಂದು ಬೆಂಗಳೂರಿನ ಸಿಗ್ಮಾ ಅಲ್ಡಿಜ್ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ. ರವೀಂದ್ರ ವಿಕ್ರಮ್ ಸಿಂಗ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆಯೋಜಿತವಾದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹತ್ತು ವರ್ಷಗಳ ಹಿಂದಿನ ಕೌಶಲ್ಯಗಳು ಇದೀಗ ಅನ್ವಯಗೊಳ್ಳುವುದಿಲ್ಲ. ಕೋವಿಡ್ ನಂತರದ ಜಗತ್ತು ತಾಂತ್ರಿಕವಾಗಿ ಬದಲಾಗಿದೆ. ಹಳೆಯ ಕೌಶಲ್ಯಗಳ ನವೀಕರಣ ಇಂದಿನ ಅಗತ್ಯ. ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ. ಅದನ್ನು ಟೀಕಿಸಿ ದೂರ ನಿಲ್ಲುವಂತಿಲ್ಲ. ಬದುಕಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅದರ ಮೇಲೆ ಅತಿಯಾದ ಅವಲಂಬನೆಯಾಗದೇ ಸ್ವಯಂ ಸಾಮರ್ಥ್ಯದ ಅಧಾರದಲ್ಲಿ ಮುನ್ನೆಡೆಯುವ ವಿವೇಕದೊಂದಿಗೆ ಇದ್ದಾಗ ಸಾರ್ವಕಾಲಿಕ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆ ಕ್ಷಣದ ಅನಿವಾರ್ಯತೆ ಮತ್ತು ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವ್ಯಕ್ತಿಗತ ಮತ್ತು ವೃತ್ತಿಪರ ಬೆಳವಣಿಗೆಯನ್ನು ಕಂಡುಕೊಳ್ಳಬೇಕು. ತಂತ್ರಜ್ಞಾನದ ವೇಗವನ್ನು ಕಂಡುಕೊಂಡು ಅದಕ್ಕನುಗುಣವಾಗಿ ವೃತ್ತಿಪರತೆಯ ಶ್ರೇಷ್ಠತೆಯ ಮಜಲುಗಳನ್ನು ದಾಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದ ಕಲಿಕೆಯ ಹಾದಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ್ಯ ಮತ್ತು ವಿವೇಚನಾತ್ಮಕ ಎಚ್ಚರದ ಹೊಳಹುಗಳೊಂದಿಗೆ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ಕ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ವಿಸ್ತೃತ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದು ನುಡಿದರು. ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಎಸ್.ಎನ್. ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾದ್ಯಾಪಕರಾದ ಡಾ. ನೆಫಿಸತ್ ಪಿ. ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಸ್ವಾತಿ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಮಗ್ರ ವಿವರಗಳನ್ನೊಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಬ್ಬಿರುವ ರಕ್ತನಾಳದ ಸಮಸ್ಯೆ ಇರುವ 41 ವರ್ಷ ಹಾಗೂ 40 ವರ್ಷ ಪ್ರಾಯದ ಇಬ್ಬರಿಗೆ ಮೊದಲ ಬಾರಿಗೆ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಕಿರಣ್ ಹಾಗೂ ಅರೆವಳಿಕೆ ತಜ್ಞರಾದ ಡಾ| ಚೈತ್ರಾ ಆರ್. ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳು ಕೂಡ ಅತೀ ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ ಎನ್ನುವುದು ಶಸ್ತ್ರಚಿಕಿತ್ಸೆ ಇಲ್ಲದೆ ಉಬ್ಬಿರುವ ರಕ್ತನಾಳಗಳಿಗೆ ನೀಡುವ ಚಿಕಿತ್ಸೆಯ ಹೊಸ ವಿಧಾನವಾಗಿದೆ. ಉಬ್ಬಿರುವ ರಕ್ತನಾಳಗಳನ್ನು ತೊಡೆದು ಹಾಕಲು ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯ ನಂತರ ರೋಗಿ ಬಹಳ ಬೇಗನೇ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ಸೋಂಕಿನ ಅಪಾಯ ತುಂಬಾ ಕಡಿಮೆ ಇರುತ್ತದೆ. ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ನಗರ ಪ್ರದೇಶದ ಅಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ': ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

Article Image

'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ': ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

ಉಜಿರೆ: ಜೀವನವು ಮಾನಸಿಕ ವ್ಯವಸ್ಥೆಯನ್ನು ಅವಲಂಬಿಸಿದೆ ಹಾಗೂ ಆರೋಗ್ಯವೇ ಎಲ್ಲದಕ್ಕೂ ಮೂಲ ಆಧಾರ ಎಂದು ಮೈಸೂರಿನ ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಡಾ. ಖಾದರ್ ವಲ್ಲಿ ಹೇಳಿದರು. ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂದು (ಸೆ. 9) ಮನಃಶಾಸ್ತ್ರ ವಿಭಾಗದ (ಪದವಿ, ಸ್ನಾತಕೋತ್ತರ ಪದವಿ) ವತಿಯಿಂದ ಆಯೋಜಿಸಲಾಗಿದ್ದ 'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ' ಕುರಿತ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. “ಇಂದಿನ ಆಧುನಿಕ ಯುಗದಲ್ಲಿ ಜನರು ಫಾಸ್ಟ್ ಫುಡ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನ ಉಂಟಾಗುತ್ತಿದೆ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುತ್ತಿಲ್ಲ. ಪೌಷ್ಟಿಕ ಆಹಾರ ಸೇವಿಸುವ ಬದಲು ಅಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದರಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಅನೇಕ ಜನರು ಥೈರಾಯಿಡ್ ಮಧುಮೇಹ ರಕ್ತದೊತ್ತಡದಂತಹ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಜನರು ಸಿರಿಧಾನ್ಯಗಳನ್ನು ತಮ್ಮ ನಿತ್ಯ ದಿನನಿತ್ಯ ಆಹಾರ ಪದ್ಧತಿಯಲ್ಲಿ ಉಪಯೋಗಿಸಬಹುದು" ಎಂದರು. ಅನೇಕ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ, ಶಿವಮೊಗ್ಗದ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ. ಪ್ರೀತಿ ವಿ. ಶಾನಭಾಗ್ ಮಾತನಾಡಿ, "ಹಿಂದಿನ ಕಾಲದಲ್ಲಿ ಆರೋಗ್ಯದ ಏರುಪೇರಿಗೆ ಔಷಧಿಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧಿಗಳ ಜೊತೆಗೆ ಕಾಯಿಲೆಗಳು ಹೆಚ್ಚಾಗಿವೆ. ಈಗಿನ ಕಾಲದಲ್ಲಿ ತ್ವರಿತ ಪರಿಣಾಮವನ್ನು ಬಯಸುತ್ತೇವೆ. ಒಂದು ಕೆಲಸ ಆಗುವ ಮುನ್ನವೇ ಇನ್ನೊಂದು ಕೆಲಸದ ಏಳಿಗೆಗೆ ಹೆಜ್ಜೆ ಹಾಕಲು ತಯಾರಾಗಿರುತ್ತೇವೆ. ಅಧ್ಯಯನದ ಪ್ರಕಾರ ಇತ್ತೀಚಿನ ಜನಾಂಗದಲ್ಲಿ ತಾಳ್ಮೆ ಕಡಿಮೆಯಾಗಿ ಎಲ್ಲವನ್ನು ಶೀಘ್ರವಾಗಿ ಮುಗಿಸಬೇಕೆಂಬ ಒತ್ತಡ ಹೆಚ್ಚಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಮಾನವ ದೇಹವೇ ಒಂದು ರಾಸಾಯನಿಕ ವ್ಯವಸ್ಥೆ. ಹಾಗೆ ಈ ಎಲ್ಲ ರಾಸಾಯನಿಕಗಳು ನಾವು ಹೇಗೆ ಯೋಚಿಸುತ್ತೇವೆ, ಹೇಗೆ ವರ್ತಿಸುತ್ತೇವೆ, ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸುತ್ತವೆ ಎಂದು ಹೇಳಿದರು. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಕಲಾ ನಿಕಾಯದ ಡೀನ್ ಡಾ. ಶ್ರೀಧರ ಎನ್. ಭಟ್, ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ರಾಜ್ಯದ ವಿವಿಧೆಡೆಯ 15 ಕಾಲೇಜುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಅನನ್ಯ ಬಳಗದವರು ಪ್ರಾರ್ಥಿಸಿದರು. ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಂದನ ಜೈನ್ ಸ್ವಾಗತಿಸಿ, ಎಂ.ಎಸ್. ಸಿಂದು ವಂದಿಸಿದರು. ಸೀಮಾ ಜಂಗೀರ್ ಮತ್ತು ಜಾನವಿ ಎಮ್. ನಿರೂಪಿಸಿದರು.

ಯುವನಿಧಿ: ಅರ್ಜಿ ಆಹ್ವಾನ

Article Image

ಯುವನಿಧಿ: ಅರ್ಜಿ ಆಹ್ವಾನ

ಯುವನಿಧಿ ಯೋಜನೆಗೆ 2023 ಹಾಗೂ 2024ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ 6 ತಿಂಗಳವರೆಗೆ (180 ದಿನ) ಉದ್ಯೋಗ ಸಿಗದ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರಾಗಿರಬೇಕು. ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿದವರು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಗರಿಷ್ಠ 2 ವರ್ಷ ಅವಧಿಯವರೆಗೆ ಮಾತ್ರ ಈ ಭತ್ತೆ ಸಿಗಲಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 4,023 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 3,328 ಫಲಾನುಭವಿಗಳಿಗೆ ಜುಲೈ-2024ರ ಅಂತ್ಯಕ್ಕೆ ಒಟ್ಟು 2,02,69,500 ರೂ. ಡಿ.ಬಿ.ಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ಅರ್ಜಿ ಸಲ್ಲಿಸುವ ವಿಧಾನ https://sevasindhugs. karnataka.gov.in ಮೂಲಕ ಲಾಗಿನ್ ಆಗಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಮೂಲಕವೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್‌ ಸಂಖ್ಯೆಗೆ ಜೋಡಣೆ ಆದ ಆಧಾ‌ರ್ ಸಂಖ್ಯೆಯ ಬ್ಯಾಂಕ್‌ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಸ್ವಯಂ-ದೃಢೀಕರಣ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಕಿನೊಳಗೆ ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು https://sevasindhugs.karnataka.gov.in ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಸ್ . ಡಿ . ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

Article Image

ಎಸ್ . ಡಿ . ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಲ್ಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಉಚಿತ ECG, BP, GRBS (Sugar Test) ಹಾಗೂ ವೈದ್ಯರ ಸಮಾಲೋಚನೆಯು ನಾಳೆ (ಆ.6) ಬೆಳಿಗ್ಗೆ 9.30ರಿಂದ ಸಂಜೆ 5.00ರ ತನಕ ನಡೆಯಲಿದೆ . ಸೂಚನೆ : ಕೆ.ಕೆವೈಸಿ ಹಾಗೂ ಸುರಕ್ಷಾ ವಿಮಾ ಹೊಂದಿರುವವರು ವಿಮಾ ಕಾರ್ಡ್‌ನ ಪ್ರತಿಯನ್ನು ತರತಕ್ಕದ್ದು. ಎಲ್ಲಾ ಶಿಕ್ಷಕರು ತಮ್ಮ ಶಾಲಾ ಅಥವಾ ಕಾಲೇಜಿನ ಗುರುತಿನ ಚೀಟಿಯನ್ನು ತರತಕ್ಕದ್ದು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ, ವೆಬ್‌ಸೈಟ್: sdmhospitalujire.com ಹೆಸರು ನೋಂದಾಯಿಸಲು ಸಂಪರ್ಕಿಸಿ: 8073349216, 7760397878

ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶಾತಿಗೆ ಆಹ್ವಾನ

Article Image

ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶಾತಿಗೆ ಆಹ್ವಾನ

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜುಲೈ ಆವೃತ್ತಿಯ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ , ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿಗಳನ್ನು ಪಡೆಯಬಹುದಾಗಿದೆ. ಸ್ನಾತಕೋತ್ತರ (ಪಿಜಿ)ದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಶಾಸ್ತ್ರ , ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಶಾಸ್ತ್ರ , ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತು ಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ ಡ್ಯುಯೆಲ್ ಸ್ಪೆಷಲೈಜೇಷನ್ ( ಅಕೌಂಟಿಂಗ್ ಮತ್ತು ಫೈನಾನ್ಸ್/ಎಚ್‌ಆರ್ ಎಂ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಎಚ್‌ಆರ್‌ಎಂ /ಫೈನಾನ್ಸ್), ಎಂ.ಸಿ.ಎ, ಎಂ.ಲಿಬ್.ಐ.ಎಸ್‌ಸಿ, ಎಂ.ಎಸ್‌ಸಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಷಿಯನ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಮೈಕ್ರೋಬಯಾಲಜಿ ಮನಃಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಫುಡ್ ಮತ್ತು ನ್ಯೂಟ್ರಿಷನ್ ಸೈನ್ಸ್ ಮಾಹಿತಿ ತಂತ್ರಜ್ಞಾನ ಡಾಟಸೈನ್, ಕಂಪ್ಯೂಟರ್‌ಸೈನ್ಸ್). ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು- ಇಂಗ್ಲಿಷ್, ಕಮ್ಯುನಿಕೇಶನ್, ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ಹಣಕಾಸು ನಿರ್ವಹಣೆ ಮಾನವ ಸಂಪನ್ಮೂಲ ನಿರ್ವಹಣೆ, ಬಿಸಿನೆಸ್ ಲಾ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್, ಅಂಬೇಡ್ಕರ್ ಅಧ್ಯಯನಗಳನ್ನು ಅಭ್ಯಸಿಸಬಹುದಾಗಿದೆ. ಡಿಪ್ಲೋಮ ಶಿಕ್ಷಣ ಕಾರ್ಯಕ್ರಮಗಳಾದ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಮತ್ತು ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್, ಅರ್ಲಿ ಚೈಲ್ಡ್ ಹುಡ್‌ಕೇರ್ ಎಜುಕೇಷನ್ ಹಾಗೂ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳಾದ(ಆರು ತಿಂಗಳು)- ಪಂಚಾಯತ್ ರಾಜ್, ನ್ಯೂಟ್ರಿಷನ್ ಮತ್ತು ಫುಡ್, ಮಾಹಿತಿ ಸಂವಹನ ತಂತ್ರಜ್ಞಾನದ (ಐಸಿಟಿ) ಕೋರ್ಸ್ ಗಳನ್ನು ಮಾಡಬಹುದಾಗಿದೆ. ಈ ಮೇಲಿನ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 917090715010, 9591546202 ಸಂಪರ್ಕಿಸಬಹುದು. ಇಲ್ಲವೇ, ಇ-ಮೇಲ್:administration@alvas.org ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು. ಆಳ್ವಾಸ್‌ನಲ್ಲಿ ಪರೀಕ್ಷಾ ಕೇಂದ್ರವನ್ನೂ ಹೊಂದಿರುವ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಲಭ್ಯವಾಗಿದೆ. ಔದ್ಯೋಗಿಕ ನೆಲೆಯಲ್ಲಿ ಸ್ನಾತಕೋತ್ತರ, ಪದವಿ, ಒಂದು ವರ್ಷದ ಡಿಪ್ಲೊಮಾ ಹಾಗೂ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿವಿಧ ವಿಷಯಗಳಲ್ಲಿ ಮಾಡಲು ಅವಕಾಶವಿದ್ದು, ಉದ್ಯೋಗ ಮಾಡಿಕೊಂಡು ಕೋರ್ಸ್ ಮಾಡಲು ಸುವರ್ಣಾವಕಾಶ ದೊರೆತಿದೆ.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ತರಬೇತಿಯ ಸಮಾರೋಪ ಸಮಾರಂಭ

Article Image

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಪ್ರತಿಯೊಬ್ಬರು ವೃತಿ ಜೀವನದಲ್ಲಿ ತಮ್ಮದೇ ಆದ ಶಿಸ್ತು ಅನ್ನು ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು ಜೊತೆಗೆ ದುರಭ್ಯಾಸಗಳಿಂದ ಸಹ ದೂರ ಇರುಬೇಕು. ಹಾಗೂ ಕ್ಷೌರಿಕ ವೃತಿಯಲ್ಲಿ ಹೊಸ ಬದಲಾವಣೆಗಳು ಆಗುತ್ತಿದೆ ಅದನ್ನು ಅಳವಡಿಸಿಕೊಂಡು ನಮ್ಮ ವೃತ್ತಿ ಬಗ್ಗೆ ಹೆಮ್ಮೆ ಇರಬೇಕು. ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳೊಂದಿಗೆ ಉಚಿತ ತರಬೇತಿ ನೀಡಿ ಸವಿತಾ ಸಮಾಜದ ಹುಡುಗರಿಗೆ ಅನುಕೂಲ ಮಾಡಿದ್ದಾರೆ ಅವರಿಗೆ ಕೃತಜ್ಞತೆಯನ್ನು ನೀವೇ ಸ್ವ ಉದ್ಯೋಗಿಗಳಾಗಿ ಯಶಸ್ಸು ಕಾಣುವುದರಾ ಮೂಲಕ ಸಲ್ಲಿಸಬೇಕೆಂದು ರಾಯಚೂರು ಮಾಜಿ ರಾಜಸಭಾ ಸದಸ್ಯರಾದ ದಿವಗಂತ ಅಶೋಕ್‌ ಗಸ್ತಿಯವರ ಧರ್ಮಪತ್ನಿ ಸುಮಾ ಅಶೋಕ್‌ ಗಸ್ತಿ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಮೆನ್ಸ್ ಪಾರ್ಲರ್‌ ಸಲೂನ್‌ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿಯಾಗಿದ್ದ ಶ್ರೀ ರಾಘವೇಂದ್ರ ಇಟಗಿ, ನಿರ್ದೇಶಕರು, ಕರ್ನಾಟಕ ರಾಜ್ಯ ಸವಿತಾ ಇವರು ಮಾತನಾಡಿ ವೃತಿಯನ್ನು ಹೊಸತನ ಇಟ್ಟುಕೊಂಡು ಮುಂದುವರೆಯಿರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ, ರವಿ ಕುಮಾರ್‌ ಕಡೂರು, ಉಪಸ್ಥಿತರಿದ್ದರು ವೀರೇಶ ಬಳ್ಳಾರಿ ಪ್ರಾರ್ಥನೆ ಮಾಡಿದರು. ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ವಂದಿಸಿದರು. ಸುಮಾರು 32 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ಪ್ರಭಾಕರ್‌ , ವರಪ್ರಸಾದ್‌ ತರಬೇತಿಯ ಅನುಭವ ಹಂಚಿಕೊಂಡರು.

ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್

Article Image

ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್

ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಹಾಗೂ ಐ.ಸಿ.ಎ.ಐ ಮಂಗಳೂರು ಚಾಪ್ಟರ್ ವತಿಯಿಂದ ಆಳ್ವಾಸ್ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿಎ ವೃತ್ತಿಯ ಕುರಿತು ಮಾಹಿತಿ ಕಾರ‍್ಯಕ್ರಮ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ- ಇತ್ತೀಚಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಇಲ್ಲವೇ ತಾಂತ್ರಿಕ ಪದವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೂರಾರು ದಾರಿಗಳಿವೆ. ಅದನ್ನು ಅವರು ಅರಿತುಕೊಳ್ಳಬೇಕು ಎಂದರು. ಸಿಎಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಆರಂಭಿಕ ಹಂತದಲ್ಲೇ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಪೂರ್ವ ಹಂತದಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಿಎ ಕಾರ್ತಿಕೇಯ ಶೆಣೈ ಮಾತನಾಡಿ ಸಿಎ ಆರಂಭಿಕ ಹಂತದಿಂದ ಹಿಡಿದು ಕೊನೆಯ ತನಕ ಎಲ್ಲಾ ಪರೀಕ್ಷೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸಿಎ ಗೌತಮ್ ನಾಯಕ್ ಮಾತನಾಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರ ಉದ್ದೇಶಗಳ ಬಗ್ಗೆ ವಿವರಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಎ ಡೇನಿಯಲ್ ಪಿರೇರಾ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ.ಡಿ ಇದ್ದರು. ವಾಣಿಜ್ಯ ಸಂಘದ ಸಂಯೋಜಕಿ ರಶ್ಮಿನ್ ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.

First Previous

Showing 9 of 15 pages

Next Last