Article Image

ಸಿಇಟಿ: ಕೇಂದ್ರ ಪಠ್ಯಕ್ರಮದ ಪಿಯು ಅಂಕ ದಾಖಲಿಸಲು ಮೇ 20ರವರೆಗೆ ಅವಕಾಶ

Article Image

ಸಿಇಟಿ: ಕೇಂದ್ರ ಪಠ್ಯಕ್ರಮದ ಪಿಯು ಅಂಕ ದಾಖಲಿಸಲು ಮೇ 20ರವರೆಗೆ ಅವಕಾಶ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 12ನೇ ತರಗತಿಯನ್ನು ಸಿಬಿಎಸ್‌ಇ (ಜಮ್ಮು ಮತ್ತು ಕಾಶ್ಮೀರ ಸೇರಿದಂತೆ), ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ ಮತ್ತಿತರ ಬೋರ್ಡುಗಳಲ್ಲಿ 2024ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ದಾಖಲಿಸಲು ಮೇ 14ರಿಂದ 20ರವರೆಗೆ ಆನ್‌ಲೈನ್ ಪೋರ್ಟಲ್ ಲಿಂಕ್ ಅನ್ನು ಸಕ್ರಿಯಗೊಳಿಸಲಿದೆ. ಅರ್ಹ ಅಭ್ಯರ್ಥಿಗಳು ಮೇ 20ರ ಒಳಗೆ ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು ನಿಗದಿತ ಲಿಂಕ್‌ನಲ್ಲಿ ದಾಖಲಿಸಿ, ಅಂಕಪಟ್ಟಿಯ ಪಿಡಿಎಫ್‌ ಪ್ರತಿಯನ್ನು ತಪ್ಪದೇ ಅಪ್ ಲೋಡ್ ಮಾಡಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2024ಕ್ಕಿಂತ ಹಿಂದಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರೂ ಅಂಕಗಳನ್ನು ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಅರ್ಹತಾ ಕಂಡಿಕೆ 'Ckause-Y' ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳೂ ಅಂಕಗಳನ್ನು ಪೋರ್ಟಲ್ ನಲ್ಲಿ ದಾಖಲಿಸಬೇಕು. ಕರ್ನಾಟಕ ದ್ವಿತೀಯ ಪಿಯುಸಿ 2024ರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳುತ್ತದೆ. ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024ರ 'ನಾಟಾ' ಪರೀಕ್ಷೆಯ ಅಂಕಗಳನ್ನು ಅರ್ಹತೆಗೆ‌ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.inಗೆ ಭೇಟಿ ನೀಡಲು ಕೋರಿದೆ.

ಸರಕಾರಿ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಕ್ಕೆ ಆಹ್ವಾನ

Article Image

ಸರಕಾರಿ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಕ್ಕೆ ಆಹ್ವಾನ

ಬಂಟ್ವಾಳ: ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಆಯುಕ್ತರ ಆದೇಶದ ಪ್ರಕಾರ 2024-25ನೇ ಸಾಲಿನಲ್ಲಿ ಮೆರಿಟ್ ಆಧಾರಿತ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡುವ ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಎಸೆಸೆಲ್ಸಿ/ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ತಾಂತ್ರಿಕ ವೆಬ್‌ಸೈಟ್ https://dtetech.karnataka.gov.in/kartechnical ನಿಂದ ಮಾಹಿತಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಅದರ ಸೂಚನೆಗಳನ್ವಯ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಸಿಬಂದಿಯವರ ಸಹಾಯದೊಂದಿಗೆ ತಮ್ಮ ಇಚ್ಛೆಗನುಗುಣವಾಗಿ ಕೋರ್ಸ್/ಕಾಲೇಜು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ದಾಖಲಿಸಲು ಮೇ 21 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

Article Image

ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

ರಾಜ್ಯದ ನಾನಾ ಕೃಷಿ ಮತ್ತು ತೋಟಗಾರಿಕೆ ವಿವಿಗಳಲ್ಲಿ ವಿವಿಧ ಸ್ನಾತಕ ಪದವಿಗಳ ಪ್ರವೇಶಕ್ಕೆ ಮೇ 14ರಂದು ನಿಗದಿಯಾಗಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಮೇ 25ಕ್ಕೆ ಮುಂದೂಡಲಾಗಿದೆ. 2024-25ನೇ ಸಾಲಿನ ಪ್ರಥಮ ವರ್ಷದ ಸ್ನಾತಕ ಪದವಿಗಳಿಗೆ ಬೆಂಗಳೂರು, ಧಾರವಾಡ ಕೃಷಿ ವಿವಿ, ರಾಯಚೂರು ಮತ್ತು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಯಲ್ಲಿ ವಿವಿಧ ಸ್ನಾತಕ ಪದವಿಗಳಿಗೆ ಮೇ 17ರಂದು ಸಂಜೆ 4 ಗಂಟೆಯೊಳಗೆ ಸೂಕ್ತ ದಾಖಲೆಗಳನ್ನು ಖುದ್ದು ಸಂಬಂಧಪಟ್ಟ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲೇ ಸಲ್ಲಿಸಬೇಕು ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ. ಮುಂದೂಡಿರುವ ಸ್ನಾತಕ ಪದವಿಯ ಪ್ರಾಯೋಗಿಕ ಪರೀಕ್ಷೆಗಳ ಕುರಿತು ಹಾಗೂ ದಾಖಲಾತಿ ಸಲ್ಲಿಕೆಯ ಕುರಿತ ಪೂರ್ಣ ಮಾಹಿತಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಗಳ ಅಧಿಕೃತ ಅಂತರ್ಜಾಲದಿಂದ ಪಡೆಯಬಹುದು ಎಂದು ತಿಳಿಸಿದೆ.

ವೈದ್ಯಕೀಯ ಕಾಲೇಜುಗಳ ಬಾಸ್ಕೆಟ್‌ಬಾಲ್ ಪಂದ್ಯಾವಳಿ

Article Image

ವೈದ್ಯಕೀಯ ಕಾಲೇಜುಗಳ ಬಾಸ್ಕೆಟ್‌ಬಾಲ್ ಪಂದ್ಯಾವಳಿ

ಸತ್ತೂರು, ಧಾರವಾಡ: ವೈದ್ಯಕೀಯ ಕಾಲೇಜುಗಳ ಬಾಸ್ಕೆಟ್‌ಬಾಲ್ (ಪುರುಷ ಮತ್ತು ಮಹಿಳೆಯರ) ಪಂದ್ಯಾವಳಿಯನ್ನು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೇ 9 ರಿಂದ 12 ರವರೆಗೆ “ಕ್ರಾಸ್‌ಓವರ್-2024” ಅನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಂದ 11 ಪುರುಷರ ಮತ್ತು 6 ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಈ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪುರುಷ ಮತ್ತು ಮಹಿಳಾ ತಂಡಗಳು ಪ್ರಥಮ ಸ್ಥಾನ ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪುರುಷ ಮತ್ತು ಮಹಿಳಾ ತಂಡಗಳು ದ್ವಿತಿಯ ಸ್ಥಾನಗಳನ್ನು ಗಳಿಸಿವೆ. ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ ಅವರು ಪಂದ್ಯಾವಳಿಗಳ ವಿಜೇತರಿಗೆ ಮೇ 12 ರಂದು ಬಹುಮಾನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ದೀಪಕ ಕಣಬೂರ, ಡಾ. ನೈದಿಲ ಶೆಟ್ಟಿ ಮತ್ತು ಡಾ. ಶರದ್ ಜವಳಿ ಉಪಸ್ಥಿತರಿದ್ದರು.

ಸಿಬಿಎಸ್ಇ: ಎಕ್ಸೆಲೆಂಟ್ ಸಿಬಿಎಸ್ಇ ಶಾಲೆಗೆ ಶೇ.100 ಫಲಿತಾಂಶ

Article Image

ಸಿಬಿಎಸ್ಇ: ಎಕ್ಸೆಲೆಂಟ್ ಸಿಬಿಎಸ್ಇ ಶಾಲೆಗೆ ಶೇ.100 ಫಲಿತಾಂಶ

ಮೂಡುಬಿದಿರೆ: ಎಕ್ಸೆಲೆಂಟ್ ಮೂಡುಬಿದಿರೆ ಆಡಳಿತದಲ್ಲಿ ನಡೆಯುತ್ತಿರುವ ಎಂ. ಕೆ. ಶೆಟ್ಟಿ ಸ್ಕೂಲ್ ಮೂಡುಬಿದಿರೆ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 27 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತಾರೆ. ಸುವಿತ್ ಭಂಡಾರಿ ಶೇ.92 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಶೇ.90 ಅಂಕಗಳಿಸಿದ ಸುಯೋಗ್ ಎಸ್. ಅಂಚನ್ ಹಾಗೂ ಪೃಥ್ವಿ ಪ್ರಕಾಶ್ ಭಂಡಾರಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕರಾದ ಬಿ .ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಬಿ. ಪುಷ್ಪರಾಜ್ ಹಾಗೂ ಪ್ರಾಂಶುಪಾಲರಾದ ಸುರೇಶ ಅಭಿನಂದನೆ ಸಲ್ಲಿಸಿದ್ದಾರೆ.

ನೀಟ್ ಅಭ್ಯರ್ಥಿಗಳ ಸಿಇಟಿ ನೋಂದಣಿ: ಕೆಇಎ ಸ್ಪಷ್ಟನೆ

Article Image

ನೀಟ್ ಅಭ್ಯರ್ಥಿಗಳ ಸಿಇಟಿ ನೋಂದಣಿ: ಕೆಇಎ ಸ್ಪಷ್ಟನೆ

ಬೆಂಗಳೂರು: ನೀಟ್ ಪರೀಕ್ಷೆ ಬರೆದವರು ಕೂಡ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಸಿಇಟಿಗೆ ನೋಂದಣಿ ಮಾಡಿಸಬೇಕು ಎಂಬ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಇದು ಹೊಸದಾಗಿ ಜಾರಿಯಾಗಿರುವ ನಿಯಮವಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸ್ಪಷ್ಟಪಡಿಸಿದೆ. ಈ ಸಂಬಂಧ ಕೆಇಎ ಹೊಸ ನಿಯಮ ಜಾರಿಗೊಳಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಕೆಲವರು ಅನಗತ್ಯವಾಗಿ ಗುಲ್ಲೆಬ್ಬಿಸುತ್ತಿದ್ದಾರೆ ಎಂದು ಕೆಇಎ ಹೇಳಿದೆ. ಪ್ರಸಕ್ತ ಸಾಲಿನಲ್ಲಿ ನೀಟ್ ಬರೆದಿರುವ ಸುಮಾರು 2 ಲಕ್ಷ ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 50,000 ವಿದ್ಯಾರ್ಥಿಗಳು ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆಗೆ ಕೆಇಎ ನೋಡಲ್ ಸಂಸ್ಥೆ ಎಂದೂ ಕೆಇಎ ಸ್ಪಷ್ಟಪಡಿಸಿದೆ.

ಮಂಗಳೂರು: ಪಶುಪಾಲಕರಿಂದ ಅರ್ಜಿ ಆಹ್ವಾನ

Article Image

ಮಂಗಳೂರು: ಪಶುಪಾಲಕರಿಂದ ಅರ್ಜಿ ಆಹ್ವಾನ

ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಶೇ.50 ಸಹಾಯಧನ ಮೂಲಕ 2024-25 ನೇ ಸಾಲಿಗೆ 2 ಎಚ್‌ಪಿ ಮೇವು ಕತ್ತರಿಸುವ ಯಂತ್ರಗಳ ಸರಬರಾಜು ಯೋಜನೆಗೆ ಪಶುಪಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಸ್ಥಳೀಯ ಪಶು ವೈದ್ಯಾಧಿಕಾರಿ ಅಥವಾ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ), ಹತ್ತಿರದ ಪಶು ಆಸ್ಪತ್ರೆ ಕಚೇರಿಯನ್ನು ಸಂಪರ್ಕಿಸಿ, ಅರ್ಜಿಯನ್ನು ಅವಶ್ಯಕ ದಾಖಲೆಯೊಂದಿಗೆ ಮೇ 18ರೊಳಗೆ ಸಲ್ಲಿಸುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಡಿಪ್ಲೊಮಾ ಪ್ರವೇಶ: ಅರ್ಜಿ ಆಹ್ವಾನ

Article Image

ಡಿಪ್ಲೊಮಾ ಪ್ರವೇಶ: ಅರ್ಜಿ ಆಹ್ವಾನ

ಮಂಗಳೂರು: ಬೊಂದೇಲ್‌ನಲ್ಲಿರುವ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟಿಸ್ (ಇಂಗ್ಲಿಷ್, ಕನ್ನಡ ) ಹಾಗೂ ಲೈಬ್ರರಿ ಆ್ಯಂಡ್ ಇನ್ಫಾರ್ಮೇಷನ್ ಸೈನ್ಸ್ ಕೋರ್ಸುಗಳ ದಾಖಲಾತಿಗೆ ಎಸ್‌ಎಸ್‌ಎಲ್‌ಸಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಮೇ 14ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜನ್ನು ಸಂಪರ್ಕಿಸಬಹುದು ಎಂದು ಪ್ರಿನ್ಸಿಪಾಲ್‌ರವರು ತಿಳಿಸಿದ್ದಾರೆ.

ಮಂಗಳೂರು: ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ

Article Image

ಮಂಗಳೂರು: ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ಉಳಾಯಿಬೆಟ್ಟುವಿನ ಮೌಲಾನ ಆಜಾದ್ ಮಾದರಿ ಶಾಲೆಗೆ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. 6ರಿಂದ 10ನೇ ತರಗತಿವರೆಗೆ ಕನ್ನಡ, ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಬೋಧಿಸಲು ಬಿಎಸ್ಸಿ-ಬಿಎಡ್ ಮತ್ತು ಬಿಎ-ಬಿಎಡ್ ಪದವೀಧರ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಉಜಿರೆ: ರುಡ್ ಸೆಟ್‌ ಸಂಸ್ಥೆ-“ಮಹಿಳೆಯರಿಗೆ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಬಹಳ ಮುಖ್ಯ”

Article Image

ಉಜಿರೆ: ರುಡ್ ಸೆಟ್‌ ಸಂಸ್ಥೆ-“ಮಹಿಳೆಯರಿಗೆ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಬಹಳ ಮುಖ್ಯ”

ಹೆಣ್ಣು ಮಕ್ಕಳನ್ನು ಪೋಷಕರು ಬೆಳೆಸುವಾಗ ಸಾಮಾನ್ಯವಾಗಿ ಮದುವೆಯ ಬಗ್ಗೆ ಯೋಚನೆ ಮಾಡುತ್ತಾರೆ ವಿದ್ಯಾಭ್ಯಾಸ ನೀಡುತ್ತಾರೆ ಆದರೆ ಉದ್ಯೋಗದ ಬಗ್ಗೆ ಯೋಚಿಸುವುದು ಕಡಿಮೆ. ಇಂದಿನ ಹೆಣ್ಣು ಮಕ್ಕಳಿಗೆ ವಿದ್ಯೆಯ ಜೊತೆಗೆ ಉದ್ಯೋಗ ಬೇಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯ ಬಹು ಮುಖ್ಯವಾಗುತ್ತದೆ. ನಮ್ಮ ಕೈಯಲ್ಲಿ ನಮ್ಮ ದುಡ್ಡು ಇರಬೇಕು ನಮ್ಮ ಮತ್ತು ಮಕ್ಕಳ ಬೇಕು-ಬೇಡಗಳಿಗೆ, ಸ್ಪಂದಿಸಲು ಅನುಕೂಲವಾಗುತ್ತದೆ. ಇನ್ನೂ ಮುಖ್ಯವಾಗಿ ನಮ್ಮ ಮನೋಬಲ ಏನು, ನಮ್ಮ ಒಳಗೆ ಏನು ಆಸೆ ಇದೆ. ನಮ್ಮಲ್ಲಿ ಏನು ಪ್ರತಿಭೆ ಇದೆ. ನಮ್ಮ ವ್ಯಕ್ತಿತ್ವ ಏನು ಎಂಬುದನ್ನು ತಿಳಿದಿರಬೇಕು. ಪದವಿ ಓದಿದ ನಂತರ ಕೂಡ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದಿರಬೇಕು. ನಮ್ಮಲ್ಲಿ ಏನು ಕೌಶಲ್ಯ ಇದೆ ಎಂಬುದು ಗೊತ್ತಿರಬೇಕು. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಕೌಶಲ್ಯಗಳು ಇರುತ್ತದೆ. ಅದನ್ನು ಗುರುತಿಸಿ, ಪೋಷಿಸಿ ಬೆಳೆಸಬೇಕು ಇದು ಮುಖ್ಯ. ಇಂದು ಬೇರೆ ಬೇರೆ ಸಾಮಾಜಿಕ ಜಾಲತಾಣ ಮೂಲಕ ವಿಷಯಗಳನ್ನು ಕಲಿತು ಜ್ಙಾನ ವೃದ್ಧಿ ಮಾಡಿಕೊಳ್ಳಬಹುದು, ರುಡ್ ಸೆಟ್ ಸಂಸ್ಥೆಯಲ್ಲಿ ಮಾತ್ರ ಕೌಶಲ್ಯದ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ಕಲಿಸಿಕೊಡುತ್ತಾರೆ ಇದು ವ್ಯವಹಾರದಲ್ಲಿ ಬಹಳ ಮುಖ್ಯವಾಗಿರುತ್ತದೆ. ರುಡ್ ಸೆಟ್ ಸಂಸ್ಥೆಯಲ್ಲಿ ಎಲ್ಲಾ ವಿಷಯಗಳನ್ನು ಒಟ್ಟಿಗೆ ಸಿಗುವುದರಿಂದ ನಿಮಗೆ ಅನುಕೂಲವಾಗುತ್ತದೆ ಮುಂದೆ ತರಬೇತಿಯಲ್ಲಿ ಕಲಿತ ವಿಷಯವನ್ನು ನೀವು ಗ್ರಾಹಕರಿಗೆ ಯಾವ ರೀತಿ ವಿಭಿನ್ನವಾಗಿ ನಿರೂಪಿಸುತ್ತೀರಿ ಅದರ ಮೂಲಕ ನಿಮ್ಮನ್ನು ನೀವು ತೋರಿಸಿಕೊಡಬೇಕು. ಅನ್ನುವುದನ್ನು ನೀವು ರೂಪಿಸಕೊಳ್ಳಲು ನಿಮ್ಮಲ್ಲಿ ಸಮಯ ನಿರ್ವಹಣೆ, ಹಣಕಾಸಿ ವ್ಯವಹಾರ, ಉತ್ತಮ ಮಾತುಗಾರಿಕೆ ಮುಖ್ಯವಾಗಿ ಇರಲಿ, ಗ್ರಾಹಕರ ನಂಬಿಕೆ ಉಳಿಸಿಕೊಂಡು ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಿ, ನಿಮ್ಮ ವೃತ್ತಿ ಜೀವನದ ದಾರಿಯಲ್ಲಿ ನಿಮಗೆಲ್ಲ ಯಶಸ್ಸು ಸಿಗಲಿ ಎಂದು ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶೃದ್ಧಾ ಅಮಿತ್ ಅಭಿಪ್ರಾಯಪಟ್ಟರು. ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 06 ದಿನ ಗಳ ಕಾಲ ನಡೆದ ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶುಭ ಹಾರೈಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿಯ ನಿಕಟಪೂರ್ವಕ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ ಅವರು ಉಪಸ್ಥಿತರಿದ್ದರು ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ರವರು ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಅವರು ವಂದಿಸಿದರು. ತರಬೇತಿಯಲ್ಲಿ ಒಟ್ಟು 35 ಜನ ಅಭ್ಯರ್ಥಿಗಳು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯನಿರ್ವಾಹಕ, ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

Article Image

ಕಾರ್ಯನಿರ್ವಾಹಕ, ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ.ಎಲ್.ಎಚ್. ಮಂಜುನಾಥ್ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಮೇ.11ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಡಾ.ಎಲ್.ಎಚ್. ಮಂಜುನಾಥರವರು ಅದ್ಬುತ ಕೆಲಸಗಳ ಮೂಲಕ ಜನರ ಪ್ರೀತಿ ವಿಶ್ವಾಸ ನಂಬಿಕೆಗಳಿಸಿದ್ದಾರೆ. ನಮ್ಮಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತವಿರಬೇಕು, ಏನೂ ಮಾಡಬೇಕೆಂಬುದರ ಬಗ್ಗೆ ಜ್ಞಾನವಿರಬೇಕು ಎಂದರು. ಡಾ.ಎಲ್.ಎಚ್ ಮಂಜುನಾಥ್ ಅವರು ಮಾತನಾಡಿ ಡಾ. ಹೆಗ್ಗಡೆಯವರು ನನಗೆ ದೇವರಿದ್ದಾಗೆ. ಕಳೆದ 23 ವರ್ಷಗಳ ಕಾಲ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಪೂಜ್ಯರಿಗೆ ಕೃತಜ್ಞತೆ ಅರ್ಪಿಸಿದರು. ಭಾರತೀಯ ಜೀವ ವಿಮಾ ನಿಗಮದ ಮುಂಬೈ ಕೇಂದ್ರ ಕಚೇರಿ ವ್ಯವಸ್ಥಾಪಕ, ನಿರ್ದೇಶಕ ಎಂ. ಜಗನ್ನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳು, ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಡಾ. ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳಾದ ಡಿ.ಸುರೇಂದ್ರ ಕುಮಾರ್, ವೈ ನಾಗೇಶ್ವರ ರಾವ್, ಸಂಪತ್ ಸಾಮ್ರಾಜ್ಯ, ಉದಯಕುಮಾರ್ ಶೆಟ್ಟಿ, ಶ್ಯಾಮ್ ಭಟ್, ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್. ಪೈ, ಡಾ.ಎಲ್.ಎಚ್. ಮಂಜುನಾಥ್ ಅವರ ಧರ್ಮಪತ್ನಿ ನಳಿನಿ, ಪುತ್ರ ಡಾ. ರೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ದಾ ಅಮಿತ್ ಹಾಗೂ ಯೋಜನೆಯ ವಿವಿಧ ವಿಭಾಗದ ಅಧಿಕಾರಿಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಎಲ್.ಎಚ್. ಮಂಜುನಾಥ್ ದಂಪತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಯೋಜನೆಯ ಪ್ರಾದೇಶಿಕ ಕಚೇರಿ, ಕೇಂದ್ರ ಕಚೇರಿ ಹಾಗೂ ಎಸ್.ಡಿ.ಎಂ ನ ವಿವಿಧ ವಿಭಾಗಗಳಿಂದ ಗೌರವಿಸಲಾಯಿತು. ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪೂಜಾ ಪಕ್ಕಳ, ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ವಿಭಾಗದ ಅಭಿವೃದ್ಧಿ ಅಧಿಕಾರಿ ಆನಂದ ಸುವರ್ಣ ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್: ಸಂಸ್ಥಾಪನಾ ದಿನಾಚರಣೆ

Article Image

ಕನ್ನಡ ಸಾಹಿತ್ಯ ಪರಿಷತ್: ಸಂಸ್ಥಾಪನಾ ದಿನಾಚರಣೆ

ಉಜಿರೆ: ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಕನ್ನಡನಾಡು, ನುಡಿ ಮತ್ತು ಸಂಸ್ಕೃತಿಯನ್ನು ಸದಾ ಲವಲವಿಕೆಯೊಂದಿಗೆ ಜೀವಂತವಾಗಿರಿಸಲು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುಮಾರ ಹೆಗ್ಡೆ ಅವರು ಭಾನುವಾರ(ಮೇ 5) ಸಿದ್ಧವನ ಗುರುಕುಲದಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ 110ನೆ ಸಂಸ್ಥಾಪನಾ ದಿನಾಚರಣೆ ಉದ್ಘಾಟಸಿ ಶುಭ ಹಾರೈಸಿದರು. ಇಂದು ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹೋಬಳಿ ಮಟ್ಟದವರೆಗೂ ಹೆಚ್ಚಿನ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮಾತನಾಡಿ ಜಿಲ್ಲೆಯಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ, ನುಡಿ, ಸಂಸ್ಕೃತಿ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗಿದೆ ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತಿ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಶ ಕುಮಾರ್ ಅವರು ಮಾತನಾಡಿ, ಶಬ್ದ ಮತ್ತು ಅರ್ಥಗಳ ಮಂಜುಳ ಸಂಯೋಜನೆಯೇ ಮನಕ್ಕೆ ಮುದ ನೀಡುವ ಸಾಹಿತ್ಯ ಆಗುತ್ತದೆ. ಸಾಹಿತ್ಯ ಕೃತಿಗಳನ್ನು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಂಗಳೂರಿನ ಡಾ. ಮಾಧವ ಎಂ.ಕೆ. ಮಾತನಾಡಿ ವಿದೇಶೀಯರ ದಾಳಿಗಳು ಕನ್ನಡ ಭಾಷೆಯ ಮೇಲೂ ಗಾಢ ಪರಿಣಾಮ ಬೀರಿವೆ. ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು ಎಂದರು. ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ ‘ನೀಟ್' ಪರೀಕ್ಷೆ

Article Image

ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ ‘ನೀಟ್' ಪರೀಕ್ಷೆ

ಮಂಗಳೂರು,ಉಡುಪಿ: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರವಿವಾರ (ಮೇ 5) ಕರಾವಳಿಯಾದ್ಯಂತ ಸಾಂಗವಾಗಿ ನಡೆದಿದೆ. ವಿದ್ಯಾರ್ಥಿಗಳ ಹಾಲ್‌ಟಿಕೆಟ್ ಹಾಗೂ ಐಡಿ ದಾಖಲೆಯನ್ನು ಪರೀಕ್ಷಾ ಕೇಂದ್ರದ ಗೇಟ್‌ನಲ್ಲಿಯೇ ಪರಿಶೀಲಿಸಿ ಒಳಗೆ ಬಿಡಲಾಯಿತು. ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಗಡಿಯಾರ, ಇಯರ್ ಫೋನ್, ಮೈ ಮೇಲೆ ಆಭರಣ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅವಕಾಶವಿರಲಿಲ್ಲ. ಪರೀಕ್ಷೆ ಬರೆಯಲು ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮಂಗಳೂರಿಗೆ ಆಗಮಿಸಿದ್ದರು. ಮಧ್ಯಾಹ್ನ ಅನಂತರ ಪರೀಕ್ಷೆ ಇದ್ದರೂ ಬಹುತೇಕ ವಿದ್ಯಾರ್ಥಿಗಳು ಬೆಳಗ್ಗೆಯೇ ಆಗಮಿಸಿದ್ದರು. ದ.ಕ. ಜಿಲ್ಲೆಯ 18 ಕೇಂದ್ರಗಳಲ್ಲಿ 9,670 ವಿದ್ಯಾರ್ಥಿಗಳು, ಪರೀಕ್ಷೆಗಾಗಿ ನೋಂದಣಿ ಮಾಡಿದ್ದರು. ಈ ಪೈಕಿ 9,235 ಮಂದಿ ಪರೀಕ್ಷೆ ಬರೆದಿದ್ದಾರೆ. ಉಡುಪಿ ಜಿಲ್ಲೆಯ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ನೋಂದಣಿ ಮಾಡಿಕೊಂಡಿದ್ದ 3,241 ವಿದ್ಯಾರ್ಥಿಗಳಲ್ಲಿ 3,084 ಮಂದಿ ಹಾಜರಾಗಿದ್ದಾರೆ. ದ.ಕ., ಉಡುಪಿ ಜಿಲ್ಲೆಗಳ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಗುಲ್ಬರ್ಗ, ಹಾಸನ ಸಹಿತ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಡ್ರೋನ್ಸ್ ಫಾರ್ ಅಗ್ರಿಕಲ್ಚರ್: ತರಬೇತಿ ಕಾರ್ಯಾಗಾರ

Article Image

ಡ್ರೋನ್ಸ್ ಫಾರ್ ಅಗ್ರಿಕಲ್ಚರ್: ತರಬೇತಿ ಕಾರ್ಯಾಗಾರ

ಉಡುಪಿ: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣೆ ಸಂಸ್ಥೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಹಯೋಗದಲ್ಲಿ ‘ಅಪ್ಲಿಕೇಶನ್ಸ್ ಆಫ್ ಯುಎವಿ ಆ್ಯಂಡ್ ಡ್ರೋನ್ಸ್ ಫಾರ್ ಅಗ್ರಿಕಲ್ಚರ್' ಮೇ 14 ರಿಂದ 16ರ ವರೆಗೆ ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಪ್ರತಿಷ್ಠಿತ ಸಂಸ್ಥೆಗಳ ನುರಿತ ವಿಜ್ಞಾನಿಗಳು ವಿಷಯಾಧಾರಿತ ಉಪನ್ಯಾಸಗಳನ್ನು ನೀಡಲಿದ್ದಾರೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಯುವ ವಿಜ್ಞಾನಿಗಳು ಮೇ 10ರ ಒಳಗಾಗಿ https://forms.gle/LwxDoR5sktBVHktf9 ನೋಂದಾಯಿಸಿಕೊಂಡು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಮಾಹಿತಿಗೆ 9743084194 ಪ್ರಕಟಣೆ ತಿಳಿಸಿದೆ.

ಬೆಳ್ತಂಗಡಿ: ಸುದರ್ಶನ ಕ್ರಿಯಾ ಯೋಗ ಶಿಬಿರ

Article Image

ಬೆಳ್ತಂಗಡಿ: ಸುದರ್ಶನ ಕ್ರಿಯಾ ಯೋಗ ಶಿಬಿರ

ಗುರುದೇವ್ ಶ್ರೀ ರವಿಶಂಕರ್ ಅವರ ಆನಂದೋತ್ಸವ ಸುದರ್ಶನ ಕ್ರಿಯಾ ಯೋಗ ಶಿಬಿರ ಉಜಿರೆಯ ಅರಿಪ್ಪಾಡಿ ಮಠ ಸಭಾಂಗಣದಲ್ಲಿ ಮೇ 15 ರಿಂದ 20ರ ವರೆಗೆ ಪ್ರತೀ ಸಂಜೆ 5.30 ರಿಂದ 8ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯಾ ಮತ್ತು ಜೀವನಕ್ಕೆ ಸಂಬಂಧಿಸಿದ ಜ್ಞಾನ ಒದಗಿಸಲಾಗುವುದು. ವಿಶ್ವದ ಮಿಲಿಯಾಂತರ ಜನರ ಜೀವನವನ್ನು ಪರಿವರ್ತಿಸಿದ ಸರಳವಾದ ಉಸಿರಾಟ ಪ್ರಕ್ರಿಯೆ ಸುದರ್ಶನ ಕ್ರಿಯೆ ಕಲಿಯುವ ಸುವರ್ಣಾವಕಾಶವಿದ್ದು ಒತ್ತಡ ರಹಿತ, ಶಾಂತವಾದ ಮನಸ್ಸು ಸಂತೋಷ ಉತ್ಸಾಹ ಮತ್ತು ಕ್ರಿಯಾಶೀಲತೆ, ಮಾನಸಿಕ ಖಿನ್ನತೆ, ಚಿಂತೆ ಮತ್ತು ಆತಂಕಗಳಿಂದ ಮುಕ್ತಿ, ಆರೋಗ್ಯಕರವಾದ ದೇಹ ಮತ್ತು ಉತ್ತಮ ನಿದ್ದೆಗೆ ಸುದರ್ಶನ ಕ್ರಿಯಾ ಯೋಗ ಉಪಯುಕ್ತವಾಗಿದ್ದು ಆಸಕ್ತರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Article Image

ಬೆಂಗಳೂರು: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕ ಲೋಕಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್ 'ಸಿ' ವೃಂದದ 76 ಮೋಟಾರು ವಾಹನ ನಿರೀಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಿದೆ. ಮೊದಲೇ ನಿಗದಿಯಾಗಿದ್ದಂತೆ ಏ.22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವಿಳಂಬವಾಗುತ್ತಿರುವುದರಿಂದ ಕೊನೆಯ ದಿನಾಂಕವನ್ನು ಮೇ 21ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಾಹನ ಚಾಲನಾ ಪರವಾನಗಿ (ಡಿಎಲ್)ಗೆ ಸಂಬಂಧಿಸಿದ ಅರ್ಜಿಯಲ್ಲಿ ಡಿಎಲ್ ಸಂಖ್ಯೆ ನಮೂದಿಸಿದಾಗ ಅದರ ಸಂಪೂರ್ಣ ಮಾಹಿತಿ ಎಪಿಐ ತಂತ್ರಾಂಶದ ಮೂಲಕ ಅರ್ಜಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅದು ತಾಂತ್ರಿಕ ಕಾರಣದಿಂದ ವಿಳಂಬವಾಗುತ್ತಿರುವುದರಿಂದ ಅರ್ಜಿ ಸಲ್ಲಿಸುವ ಕಾಲಮಿತಿ ವಿಸ್ತರಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜೆಇಇ ಮೈನ್ಸ್ ಪರೀಕ್ಷೆ: ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

Article Image

ಜೆಇಇ ಮೈನ್ಸ್ ಪರೀಕ್ಷೆ: ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟçಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕ್ರಷ್ಟ ಸಾಧನೆಗೈದಿದ್ದಾರೆ. ಎರಡು ಹಂತಗಳಲ್ಲಿ ನಡೆದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಒಟ್ಟು 130 ವಿದ್ಯಾರ್ಥಿಗಳು ಹಾಜರಾಗಿದ್ದು 78 ವಿದ್ಯಾರ್ಥಿಗಳು ಉತ್ತಮ ಪರ್ಸೆಂಟೆಜ್ ಪಡೆದು ಜೆಇಇ ಅಡ್ವಾನ್ಸ್ ಗೆ ಅರ್ಹತೆ ಪಡೆದಿರುತ್ತಾರೆ. ನಿಶಾಂತ್ ಪಿ. ಹೆಗಡೆ (99.5545), ಸಂಜಯ್ ಬಿರಾದಾರ್ (99.4222), ಸಚಿನ್ ವಿ. ನಾಗರೆಡ್ಡಿ(99.3426), ಸೃಜನ್ ಎಂ. ಆರ್. (99.0462) 99 ಪರ್ಸೆಂಟೆಜ್‌ಗಿ0ತ ಅಧಿಕ ಅಂಕವನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿ. ಚಿರಾಗ್ ಕಂಚಿರಾಯ ರಾಷ್ಟ್ರಮಟ್ಟದಲ್ಲಿ 1106ನೇ ರ‍್ಯಾಂಕ್(ಎಸ್.ಸಿ), ಸಂಜಯ್ ಬಿರಾದಾರ್ 1321 ನೇ ರ‍್ಯಾಂಕ್(ಇ.ಡಬ್ಲು.ಎಸ್), ಸಚಿನ್ ವಿ. ನಾಗರೆಡ್ಡಿ 1517 ನೇ ರ‍್ಯಾಂಕ್(ಇ.ಡಬ್ಲು.ಎಸ್), ಮತ್ತು ಸಾನ್ವಿ ಟಿ. ಎಸ್. 3022ನೇ ರ‍್ಯಾಂಕ್(ಎಸ್.ಟಿ), ಶ್ರೀಶೈಲ್ ಬಿ. ಪಾಟೀಲ್ 4590ನೇ ರ‍್ಯಾಂಕ್(ಇ.ಡಬ್ಲು.ಎಸ್), ರೋಹನ್ 4803 ನೇ ರ‍್ಯಾಂಕ್(ಇ.ಡಬ್ಲು.ಎಸ್), ಮತ್ತು ನಿಶಾಂತ್ ಪಿ. ಹೆಗಡೆ 7251 ನೇ ರ‍್ಯಾಂಕ್(ಸಿ.ಆರ್.ಎಲ್) ಪಡೆದಿರುತ್ತಾರೆ. ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ನಿಖಿಲ್ ಬಿ. ಗೌಡ ಮತ್ತು ಭಾರ್ಗವಿ ಭೌತಶಾಸ್ತ್ರ ವಿಷಯದಲ್ಲಿ 100 ಪರ್ಸೆಂಟೆಜ್‌ನ್ನು ಪಡೆದಿರುತ್ತಾರೆ. ಭೌತಶಾಸ್ತ್ರದಲ್ಲಿ 11 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 6 ವಿದ್ಯಾರ್ಥಿಗಳು ಮತ್ತು ಗಣಿತಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು 99 ಪರ್ಸೆಂಟೆಜ್‌ಗಿ0ತ ಅಧಿಕ ಅಂಕವನ್ನು ಪಡೆದಿರುತ್ತಾರೆ.

ಪಿಯು ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Article Image

ಪಿಯು ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ-2 ಏ. 29ರಿಂದ ಆರಂಭಗೊಳ್ಳಲಿದ್ದು, ಮೇ 16ರವರೆಗೆ ನಡೆಯಲಿದೆ. ಪರೀಕ್ಷೆ ಬರೆಯಲು 1,49,300 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಪ್ರವೇಶ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವೆಬ್ ಸೈಟ್‌ನಿಂದ ಪಡೆಯಬಹುದಾಗಿದೆ. 32,848 ವಿದ್ಯಾರ್ಥಿಗಳು ಉನ್ನತೀಕರಣ (ಇಂಪ್ರೂವ್‌ಮೆಂಟ್) ಬಯಸಿ ಪರೀಕ್ಷೆ ತೆಗೆದುಕೊಂಡಿದ್ದು, 27,092 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. 89,221 ನಾಟ್ ಕ್ಲಿಯರ್ಡ್ ವಿದ್ಯಾರ್ಥಿಗಳಾಗಿದ್ದು, 139 ವಿದ್ಯಾರ್ಥಿಗಳು ಶೇ.75 ರಷ್ಟು ಹಾಜರಾತಿ ಇಲ್ಲದೇ 17 ವರ್ಷ ತುಂಬಿದ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಾದ್ಯಂತ 301 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳು https://kseab.karnataka.gov.in ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಪಡೆಯಬಹುದಾಗಿದೆ. 11 ಅಂಕಿಗಳನ್ನೊಳಗೊಂಡ ನೋಂದಣಿ ಸಂಖ್ಯೆ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಇನ್ನುಳಿದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪ್ರವೇಶಪತ್ರ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಉಜಿರೆ: ನಿವೃತ್ತ ನೌಕರನಿಗೆ ಸನ್ಮಾನ

Article Image

ಉಜಿರೆ: ನಿವೃತ್ತ ನೌಕರನಿಗೆ ಸನ್ಮಾನ

ಸಂಸ್ಥೆಯ ನೌಕರರು ಸಂಸ್ಥೆಯ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ನೌಕರರು ಎಂದೂ ಅಡಗಿಸಿಕೊಳ್ಳಬಾರದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿರುವ ಶಾಂತಿವನದಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಚಂದು ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದರು. ನೌಕರರು ಸಂಸ್ಥೆಯ ಧ್ಯೇಯವನ್ನು ಅರಿತು ಕರ್ತವ್ಯ ಪಾಲನೆ ಮಾಡಿದರೆ ಸಂಸ್ಥೆ ಬೆಳೆಯುತ್ತದೆ, ಬೆಳಗುತ್ತದೆ ಎಂದು ಅವರು ಹೇಳಿದರು. ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀಧರ ಭಟ್ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಡಾ. ಶಶಿಕಾಂತ್ ಜೈನ್ ಧನ್ಯವಾದವಿತ್ತರು. ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

Article Image

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ)ವು ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈ ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಸುವರ್ಣ ಆರ್ಕೇಡ್ ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿತು . ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ.ರವರು ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಕೆ. ಜಯಕೀರ್ತಿ ಜೈನ್‌ರವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪರಮೇಶ್ ಟಿ., ಚಂದ್ರಶೇಖರ್, ರತ್ನಾವತಿ, ಪ್ರಶಾಂತ ಕುಮಾರ್, ಹರಿಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಶಾಖಾ ವ್ಯವಸ್ಥಾಪಕ ಪಿ. ಅತಿಶಯ್ ಜೈನ್, ಮುಖ್ಯ ಪಶು ವೈದ್ಯಾಧಿಕಾರಿ ಡಾ| ರವಿ ಕುಮಾರ್, ಸಬ್ ರಿಜಿಸ್ಟ್ರಾರ್ ನಾಗರಾಜ್, ಸಿಬ್ಬಂದಿಗಳಾದ ವಿಶಾಲ, ನಿತಿನ್ ಹಾಗೂ ನಿತ್ಯನಿಧಿ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದರು..ಸಹಕಾರಿ ಸಂಘದ ಸಲಹೆಗಾರರಾದ ವಸಂತ ಸುವರ್ಣರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಚಿದಾನಂದ ಎಸ್. ಹೂಗಾರ್‌ರವರು ವಂದಿಸಿದರು. ಈ ಸಹಕಾರಿ ಸಂಘದಲ್ಲಿ ಇ-ಸ್ಟ್ಯಾಂಪಿಂಗ್ , ಕಲರ್ ಝೆರಾಕ್ಸ್,, ಝೆರಾಕ್ಸ್,, ಆಯುಷ್ಮಾನ್ ಹೆಲ್ತ್ ಕಾರ್ಡ್, ಪಹಣಿ ಪತ್ರ, ಎಲ್ಲಾ ಬಗೆಯ ಸ್ಟೇಷನರಿಗಳು ಮಿತ ದರದಲ್ಲಿ ದೊರೆಯುವ ಸೌಲಭ್ಯಗಳು ಇರುತ್ತದೆ.

ಮೂಡಬಿದಿರೆ: ಎಕ್ಸಲೆಂಟ್ ಗುಣಸಾಗರ್ ಜಿಲ್ಲೆಗೆ ಪ್ರಥಮ

Article Image

ಮೂಡಬಿದಿರೆ: ಎಕ್ಸಲೆಂಟ್ ಗುಣಸಾಗರ್ ಜಿಲ್ಲೆಗೆ ಪ್ರಥಮ

ಮೂಡಬಿದಿರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗುಣಸಾಗರ್ ಡಿ. ದ್ವಿತೀಯ ಪದವಿಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ 597 ಅಂಕವನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ತಿಪಟೂರಿನ ಪತ್ರಕರ್ತರಾದ ದಯಾನಂದ ಟಿ. ಎಸ್. ಮತ್ತು ಸವಿತಾ ದಂಪತಿಗಳ ಪುತ್ರ. ಇವರು ಹತ್ತನೇ ತರಗತಿಯಲ್ಲಿ 91% ಅಂಕವನ್ನು ಪಡೆದಿದ್ದು ಪದವಿಪೂರ್ವ ಪರೀಕ್ಷೆಯಲ್ಲಿ 99.5% ಅಂಕವನ್ನು ಪಡೆಯುವುದರ ಮೂಲಕ ಸತತ ಪರಿಶ್ರಮದಿ0ದ ಅತ್ಯುನ್ನತ ಸಾಧನೆ ಸಾಧ್ಯ ಎಂದು ಸಾಬೀತು ಪಡಿಸಿದ್ದಾರೆ.

ಮ್ಯಾಪ್ಸ್ ಶಿಕ್ಷಣ ಸಂಸ್ಥೆ: ಸ್ಕಾಲರ್‌ಶಿಪ್‌ನೊಂದಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Article Image

ಮ್ಯಾಪ್ಸ್ ಶಿಕ್ಷಣ ಸಂಸ್ಥೆ: ಸ್ಕಾಲರ್‌ಶಿಪ್‌ನೊಂದಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಕಳೆದ 18 ವರ್ಷಗಳಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ - ಕದ್ರಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮ್ಯಾಪ್ಸ್ ಕಾಲೇಜು ಪಿಯುಸಿ, ಬಿ.ಕಾಂ.ನೊಂದಿಗೆ ಸಿ.ಎ, ಎಸಿಸಿಎ, ಸಿಎಸ್, ಸಿಎಂಎ ವಿಷಯದಲ್ಲಿ ಪ್ರೊಫೆಶನಲ್ ಕೋಚಿಂಗ್ ನೀಡುತ್ತಿದೆ. ಈ ಕೋರ್ಸುಗಳಿಗೆ (ಸ್ಕಾಲರ್‌ಶಿಪ್ ಸೌಲಭ್ಯದೊಂದಿಗೆ) ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾಪ್ಸ್ ಕಾಲೇಜಿನಲ್ಲಿ ವಿಶಿಷ್ಟ ರೀತಿಯ ಬಿಸಿಎ ಪದವಿ ಶಿಕ್ಷಣ ಒದಗಿಸಲಾಗುತ್ತಿದ್ದು, ವಿ.ವಿ. ನಿಗದಿ ಮಾಡಿದ ಪದವಿ ಶಿಕ್ಷಣದ ಜತೆಗೆ ಹೆಚ್ಚುವರಿಯಾಗಿ ಡಾಟಾ ಅನಾಲಿಟಿಕ್ಸ್, ವೆಬ್ ಡಿಸೈನಿಂಗ್, ಆ್ಯನಿಮೇಶನ್ ಆ್ಯಂಡ್ ಗ್ರಾಫಿಕ್ಸ್, ಸೈಬರ್ ಸೆಕ್ಯೂರಿಟಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮುಂತಾದ ವಿಷಯಗಳಲ್ಲಿ ತರಬೇತಿ ಉದ್ಯೋಗಳಿಗೆ ಸಜ್ಜುಗೊಳಿಸಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಈ ಮೇಲಿನ ಕೋರ್ಸುಗಳಿಗೆ ಸ್ಕಾಲರ್‌ಶಿಪ್ ಸೌಲಭ್ಯ ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದು. ವೆಬ್‌ಸೈಟ್: https://www.mapsmangalore.com/.

ನಾಳೆಯಿಂದ ಪುತ್ತೂರು ವಾರ್ಷಿಕ ಜಾತ್ರೆ ಆರಂಭ

Article Image

ನಾಳೆಯಿಂದ ಪುತ್ತೂರು ವಾರ್ಷಿಕ ಜಾತ್ರೆ ಆರಂಭ

ಪುತ್ತೂರು, ಎ.9: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ ಎ.10 ರಿಂದ ಪ್ರಾರಂಭಗೊಳ್ಳಲಿದ್ದು, ಎ.20ರ ತನಕ ನಡೆಯಲಿದೆ. 10 ದಿನಗಳ ಜಾತ್ರೆಯ ಸಂದರ್ಭದಲ್ಲಿ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸಲಿದ್ದಾರೆ. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ಪುತ್ತೂರಿನಲ್ಲಿ ಮಾತ್ರವಾಗಿದ್ದು, ದ.ಕ. ಜಿಲ್ಲೆಯ ಮಟ್ಟಿಗೆ ಇದು ಧಾರ್ಮಿಕ ಚರಿತ್ರೆ. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಲ್ಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ, 157 ಕಟ್ಟೆಪೂಜೆ, 12 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃತಸ್ನಾನ, ದೈವಗಳ ನೇಮದ ಸಂಭ್ರಮಕ್ಕೆ ಪುತ್ತೂರಿನ ಸೀಮೆ ಸಜ್ಜಾಗಿದೆ.

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ: ಪಿಯುಸಿಯವರಿಗೆ ಸಿಇಟಿ ಆನ್ ಲೈನ್ ಅಣಕು ಪರೀಕ್ಷೆ

Article Image

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ: ಪಿಯುಸಿಯವರಿಗೆ ಸಿಇಟಿ ಆನ್ ಲೈನ್ ಅಣಕು ಪರೀಕ್ಷೆ

ಮಂಗಳೂರು, ಎ. 8: ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಆನ್ ಲೈನ್ ಮೂಲಕ ಅಣಕು ಪರೀಕ್ಷೆಯನ್ನು ಬರೆಯುವ ವಿಶೇಷ ಅವಕಾಶವನ್ನು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಭೌತಶಾಸ್ತ್ರ ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ಪ್ರತ್ಯೇಕವಾಗಿ 60 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತದೆ. ಎ. 10ರಂದು ಭೌತಶಾಸ್ತ್ರ, 11ರಂದು ಗಣಿತ, 12ರಂದು ರಸಾಯನಶಾಸ್ತ್ರ ಮತ್ತು 13ರಂದು ಜೀವಶಾಸ್ತ್ರ ವಿಷಯಗಳಲ್ಲಿ ಸಂಜೆ 7 ರಿಂದ 8 ಗಂಟೆಯವರೆಗೆ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಸಿಇಟಿ ಬರೆಯುವ ಎಲ್ಲ ವಿದ್ಯಾರ್ಥಿಗಳು ಈ ಅಣಕು ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವುದಲ್ಲದೇ ಪರೀಕ್ಷಾ ಪ್ರಶ್ನೆ ಪತ್ರಿಕೆಯ ವಿಶಿಷ್ಟತೆ ಹಾಗೂ ಕ್ಲಿಷ್ಟತೆಯ ಮಟ್ಟವನ್ನು ತಿಳಿದುಕೊಂಡು ತಮ್ಮ ತಮ್ಮ ಕಲಿಕಾ ವಿಧಾನವನ್ನು ವಿಶ್ಲೇಷಿಸಿ, ತಾವು ನಡೆಸುವ ಕಲಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಂಡು ಅಭ್ಯಾಸ ಮಾಡಬಹುದೆಂದು ತಿಳಿದುಕೊಂಡು ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಒಂದು ಉತ್ತಮ ಅವಕಾಶ ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀನಿವಾಸ ಮಯ್ಯ ಡಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ https://sitmng.ac.in/ SIT/About/Mock-Cet2024 ಅಥವಾ www.sitmng.ac.in ಗೆ ಭೇಟಿ ನೀಡಿ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ವಿವರ ಹಾಗೂ ಮಾಹಿತಿಗಳಿಗೆ ಡಾ| ಧೀರಜ್ ಹೆಬ್ರಿ ಅವರನ್ನು ಸಂಪರ್ಕಿಸಬಹುದು (dheeraj.h7 @sitmng.ac.in).

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ: ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

Article Image

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ: ವಾರ್ಷಿಕ ಮಹಾಸಭೆ, ಹಿರಿಯ ನಾಗರಿಕರಿಗೆ ಸನ್ಮಾನ

ಉಜಿರೆ: ಸಂಘದ ಸದಸ್ಯರಾದ ಅಚ್ಚಿನಡ್ಕ ವೀರಮ್ಮನವರು ಬೆಳ್ತಂಗಡಿಯಲ್ಲಿ ಕೆಲ್ಲಗುತ್ತು ಪರಿಸರದಲ್ಲಿ ಉದಾರ ಕೊಡುಗೆಯಾಗಿ ನೀಡಿದ ಹತ್ತು ಸೆಂಟ್ಸ್ ನಿವೇಶನದಲ್ಲಿ ಒಂದು ವರ್ಷದೊಳಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಿ ಉದ್ಘಾಟನಾ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠಲ ಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ಬೆಳ್ತಂಗಡಿಯ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು. ಸಂಘದ ಹಿರಿಯ ಸದಸ್ಯರುಗಳಾದ ಎಂ. ಕೆ. ಆರಿಗ, ಮಹಾಬಲ ಹೆಗ್ಡೆ, ಲಲಿತ, ಬಾಬುಗೌಡ, ಆಗ್ನೇಸ್ ಡೇಸಾ, ದೇವಪ್ಪ ಗೌಡ, ಪ್ರೊ. ಕೆ. ವಿಷ್ಣುಮೂರ್ತಿ ಭಟ್, ವಿಕ್ಟರ್ ಮೊರಾಸ್, ನಿವೃತ್ತ ಉಪನ್ಯಾಸ ಸುಬ್ರಹ್ಮಣ್ಯ ಮಧ್ಯಸ್ತ, ಸೋಮನಾಥ ಮಯ್ಯ ಅಳದಂಗಡಿ, ಜುಲಿಯಾನಾ ಲೋಬೊ, ಪ್ರೊ. ಉದಯಕುಮಾರ ಮಲ್ಲ, ಬೆಳ್ತಂಗಡಿ, ಬಾಬು ಪೂಜಾರಿ ಕೆದ್ದು, ರಾಮ ಕಾರಂತ ಉಜಿರೆ, ಬಾಬು ಗೌಡ ಮುಂಡಾಜೆ ಮೊದಲಾದರನ್ನು ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ಪ್ರೊ. ನಾ’ವುಜಿರೆ ಅವರಿಗೆ ಆರ್. ಯನ್. ಪೂವಣಿ ಹಾಗೂ ನಿವೃತ್ತ ಶಿಕ್ಷಕ ಜಯರಾಜ ಕಾಡ ಕುತ್ಲೂರು ಅವರಿಗೆ ವಸಂತರಾವ್ ನುಡಿನಮನ ಸಲ್ಲಿಸಿದರು. ಕೋಶಾಧಿಕಾರಿ ಜಗನ್ನಿವಾಸ ರಾವ್ ಮತ್ತು ಉಪಾಧ್ಯಕ್ಷರಾದ ಕುಸುಮಾವತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮಕುಮಾರ್ ವರದಿ ಸಾದರಪಡಿಸಿದರು. ಸಂಘದ ಉಪಾಧ್ಯಕ್ಷ ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿದರು. ಪದ್ಮಕುಮಾರ್ ಧನ್ಯವಾದವಿತ್ತರು.

ಓಡೀಲು: ಇಂದಿನಿಂದ ಬ್ರಹ್ಮಕಲಶೋತ್ಸವ

Article Image

ಓಡೀಲು: ಇಂದಿನಿಂದ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಕಕಲಶೋತ್ಸವ ಮತ್ತು ಜಾತ್ರೋತ್ಸವದ ಕಾರ್ಯಕ್ರಮಗಳು ವೇದಮೂರ್ತಿ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಏ.8ರಿಂದ ಆರಂಭವಾಗಲಿವೆ. ಧಾರ್ಮಿಕ ಕಾರ್ಯಕ್ರಮಗಳು: ಸಂಜೆ 4 ಗಂಟೆಗೆ ಮಹಾದ್ವಾರ ಉದ್ಘಾಟನೆ, ಹೊರೆ ಕಾಣಿಕೆಯ ಶೋಭಾಯಾತ್ರೆ, ಉಗ್ರಾಣ ಮುಹೂರ್ತ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7.30ಕ್ಕೆ ಜರುಗುವ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಲಿದ್ದು, ಇತರ ಗಣ್ಯರು ಭಾಗವಹಿಸುವರು. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ ಎಲ್‌ಐಸಿಯಿಂದ 333 ವಿಮಾ ಗ್ರಾಮ ಘೋಷಣೆ

Article Image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ ಎಲ್‌ಐಸಿಯಿಂದ 333 ವಿಮಾ ಗ್ರಾಮ ಘೋಷಣೆ

ಬೆಳ್ತಂಗಡಿ, ಎ. 6: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಯವರ ಪರಿಕಲ್ಪನೆಯಂತೆ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ದಿಂದ ರಾಜ್ಯದಾದ್ಯಂತ 333 ವಿಮಾ ಗ್ರಾಮಗಳನ್ನು ಗುರುತಿಸಿ 1,22,88,016 ರೂ. ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆಯ ಸಿಇಒ ಡಾ| ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ವಿಮಾ ಭದ್ರತೆ ನೀಡುವ ಕೆಲಸವನ್ನು ಕಳೆದ ಎರಡು ದಶಕಗಳಿಂದ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ 23,27,650 ಮಂದಿ ಇದರ ಲಾಭ ಪಡೆದಿದ್ದಾರೆ. ಈ ಮಧ್ಯೆ ಮೈಕ್ರೋಬಚತ್ ಪಾಲಿಸಿಯಡಿ ವಿಮಾ ಗ್ರಾಮಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಎಲ್‌ಐಸಿ ಮಾಡುತ್ತಿದ್ದು, ರಾಜ್ಯಾದ್ಯಂತ 13,71,000 ಮಂದಿಗೆ ಈ ಪಾಲಿಸಿ ಮಾಡಲಾಗಿದೆ. 'ಏನಿದು ವಿಮಾ ಗ್ರಾಮ? ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮಗಳನ್ನು ಎಲ್‌ಐಸಿ ಗುರುತಿಸುತ್ತದೆ. 2019ರಿಂದ ರಾಜ್ಯಾದ್ಯಂತ 333 ವಿಮಾ ಗ್ರಾಮಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ 35,000ರಿಂದ 1 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಎಸ್.ಡಿ.ಎಂ. ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ ಶಿಬಿರ

Article Image

ಎಸ್.ಡಿ.ಎಂ. ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ ಶಿಬಿರ

ಉಜಿರೆ: 2024-25ನೇ ಶೈಕ್ಷಣಿಕ ವರ್ಷದ ಎಸ್.ಡಿ.ಎಂ. ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ ಶಿಬಿರವು ಪದವಿ ವಿದ್ಯಾರ್ಥಿಗಳಿಗೆ ಏ.10 ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಏ.15ರಂದು ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಯ್ಕೆ ನಡೆಯುವ ಕ್ರೀಡೆಗಳು: ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಲಿಫ್ಟಿಂಗ್, ಹ್ಯಾಂಡ್ ಬಾಲ್, ಸಾಫ್ಟ್ ಬಾಲ್, ನೆಟ್ ಬಾಲ್, ಬ್ಯಾಡ್ಮಿಂಟನ್. ವಿ.ಸೂ.: ಸಂದರ್ಶನಕ್ಕೆ ಬರುವ ಕ್ರೀಡಾ ವಿದ್ಯಾರ್ಥಿಗಳು ಕ್ರೀಡಾ ಪ್ರಶಸ್ತಿ ಪತ್ರ, ಕ್ರೀಡಾ ಸಮವಸ್ತ್ರದೊಂದಿಗೆ ಹಾಜರಿರಬೇಕು ಹಾಗೂ ಆಯ್ಕೆಗೊಂಡ ಕ್ರೀಡಾಪಟುಗಳು ಒಂದು ವಾರದ ತರಬೇತಿಯಲ್ಲಿ ಭಾಗವಹಿಸತಕ್ಕದ್ದು. ಪದವಿ ವಿದ್ಯಾರ್ಥಿಗಳು (ಡಿಗ್ರಿ) ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ ಕಡ್ಡಾಯವಾಗಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 7676056892, 9481616461, 9742887411, 8970542738

ಕೆಪಿಎಸ್ಸಿ ಪರೀಕ್ಷೆ ಮುಂದೂಡಿಕೆ

Article Image

ಕೆಪಿಎಸ್ಸಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: 2023-24ನೇ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ 'ಎ' ಮತ್ತು 'ಬಿ' ವೃಂದದ 384 ಹುದ್ದೆಗಳ ನೇಮಕಕ್ಕೆ ಮೇ 5ರಂದು ನಿಗದಿಪಡಿಸಿದ್ದ ಪೂರ್ವಭಾವಿ ಪರೀಕ್ಷೆಯನ್ನು ಜು.7ಕ್ಕೆ ಮುಂದೂಡಿರುವ ಕರ್ನಾಟಕ ಲೋಕ ಸೇವಾ ಆಯೋಗ, ಅರ್ಜಿ ಸಲ್ಲಿಸುವ ಅವಧಿಯನ್ನು ಏ.15ರವರೆಗೆ ವಿಸ್ತರಿಸಿದೆ. ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಏ.3 ಕಡೇ ದಿನವಾಗಿತ್ತು. ಆದರೆ, ಚುನಾವಣೆ, ಇತರೆ ಪರೀಕ್ಷೆಗಳ ನಿಗದಿ ಮತ್ತಿತರ ಕಾರಣಗಳಿಂದಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೊದಲು ಪೂರ್ವಭಾವಿ ಪರೀಕ್ಷೆಯನ್ನು ಮೇ 5ಕ್ಕೆ ನಿಗದಿಪಡಿಸಲಾಗಿತ್ತು. ಹೊಸ ಆದೇಶದ ಪ್ರಕಾರ, ಪೂರ್ವಭಾವಿ ಪರೀಕ್ಷೆಯನ್ನು ಎರಡು ತಿಂಗಳು ಮುಂದೂಡಿ ಜು.7ಕ್ಕೆ ನಿಗದಿ ಮಾಡಲಾಗಿದೆ ಎಂದು ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ಕೆ.ರಾಕೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಏ.13ರಿಂದ 23ರವರೆಗೆ ನಡೆಯಲಿದೆ. ಏ.13ರ ಮೇಷ ಸಂಕ್ರಮಣದಂದು ರಾತ್ರಿ ಧ್ವಜಾರೋಹಣ, ಏ.14 ರಂದು ಸೌರಮಾನ (ವಿಷು) ಯುಗಾದಿ, ಧರ್ಮ ನೇಮ, ಏ.15ರಂದು ಅಣ್ಣಪ್ಪ ದೈವದ ನೇಮ, ಶ್ರೀ ಮಂಜುನಾಥ ಸ್ವಾಮಿ ಉತ್ಸವ, ಏ.16ರಂದು ಶ್ರೀ ಮಂಜುನಾಥ ಸ್ವಾಮಿಯ ಉತ್ಸವ, ಏ. 17ರಂದು ಬೈಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ಏ.18ರಂದು ಕಂಚಿಮಾರುಕಟ್ಟೆ ಉತ್ಸವ, ಏ.19ರಂದು ಲಲಿತೋದ್ಯಾನವನ ಕಟ್ಟೆ ಉತ್ಸವ, ಏ.20ರಂದು ಕೆರೆಕಟ್ಟೆ ಉತ್ಸವ, ಏ.21ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ ರಥೋತ್ಸವ, ಏ.22ರಂದು ರಾತ್ರಿ ಶ್ರೀಮನ್ಮಹಾ ರಥೋತ್ಸವ, ಏ.23ರಂದು ನೇತ್ರಾವತಿ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ಹಾಗೂ ರಾತ್ರಿ ಧ್ವಜಾವರೋಹಣ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

First Previous

Showing 13 of 15 pages

Next Last