ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ
ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಕಾರ್ಕಳದ ಪರಮಪೂಜ್ಯ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾನುವಾರ ಅಷ್ಟಾಹ್ನಿಕ ಪೂಜೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಗುಣ ಎಸ್.ಡಿ. ಶೆಟ್ಟಿ ಉಜಿರೆ ಅವರ ಮಗಳು ಪ್ರಗತಿ ರಾಜಿತ್ ಶೆಟ್ಟಿ, ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು, ಕೊಲ್ಲಾಪುರ ಸಮೀಪ ಉದ್ಗಾವ್ನಲ್ಲಿ ಆಚಾರ್ಯ ಶ್ರೀ 108 ವಿಶುದ್ದ ಸಾಗರಮುನಿ ಮಹಾರಾಜರಿಂದ ನಂದೀಶ್ವರ ಮಂಟಪಕ್ಕೆ ಲಘು ಪಂಚ ಕಲ್ಯಾಣ ನಡೆಯಿತು. ಆಷಾಢ ಮಾಸದ ಅಷ್ಟಾಹ್ನಿಕ ಪರ್ವದ ಮೊದಲ ಅಷ್ಟಮಿಯ ದಿನದಂದು ಬೆಳಗ್ಗೆ 10.30ಕ್ಕೆ ಜಿನ ಮಂದಿರದಲ್ಲಿ ವಿಶೇಷ ಆರಾಧನೆ ಹಾಗೂ ವಿಶೇಷ ಪೂಜೆಗಳು ನೆರವೇರಿದ ನಂತರ ವಿರಾಜಮಾನಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದರು. ಉಜಿರೆ ಎಸ್.ಡಿ. ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.