Article Image

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

Article Image

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು ಇವರ ವತಿಯಿಂದ ಶಿಕ್ಷಕ ವೃತ್ತಿಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದು ಇವರ ಸೇವೆಯನ್ನು ಪುರಸ್ಕರಿಸಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಮೊದಲು ಇವರಿಗೆ, "ತಾಲೂಕು ಸಾಧಕ ಶಿಕ್ಷಕ ಪ್ರಶಸ್ತಿ" "ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ", "ನಿಟ್ಟೆ ರೋಟರಿ ಸಂಸ್ಥೆಯ ನೇಶನ್ ಬಿಲ್ಡರ್ ಅವಾರ್ಡ್" ಲಭಿಸಿರುತ್ತದೆ.

ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

Article Image

ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಎರಡು ತಿಂಗಳ ಕಾಲ ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಸೋಮವಾರ ಮುಕ್ತಾಯಗೊಂಡಿತು. ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6 ರಿಂದ ರಾತ್ರಿ ಗಂಟೆ 8ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಹಾಗೂ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ಕೂಡಾ ಕಾರ್ಯಕ್ರಮದ ಸೊಗಡನ್ನು ಆಸ್ವಾದಿಸಿ ಪುಣ್ಯಸಂಚಯ ಮಾಡಿಕೊಂಡರು. ಎರಡು ತಿಂಗಳು ನಡೆದ ಪುರಾಣ ವಾಚನದಲ್ಲಿ 14 ಮಂದಿ ಹಾಗೂ ಪ್ರವಚನದಲ್ಲಿ 20 ಮಂದಿ ವಿದ್ವಾಂಸರು ಭಾಗವಹಿಸಿದರು. ಸೋಮವಾರ ಸುಪ್ರೀತಾ ಕೋರ್ನಾಯ ವಾಚನ ಮಾಡಿದರೆ ಅಶೋಕ ಭಟ್ ಪ್ರವಚನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಹೆಗ್ಗಡೆಯವರು ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿ, ಎಲ್ಲರನ್ನೂ ಗೌರವಿಸಿ ಅಭಿನಂದಿಸಿದರು.

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

Article Image

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಹದಿಮೂರನೆ ವರ್ಷದ ಅನಂತನೋಂಪಿ ಆರಾಧನಾ ವಿಧಾನದ ಪ್ರಥಮ ದಿನದ ಪೂಜೆಯು ಸೋಮವಾರ ನಡೆಯಿತು. 12 ಮಂದಿ ಶ್ರಾವಕರು ಹಾಗೂ 8 ಮಂದಿ ಶ್ರಾವಕಿಯರು ಸೇರಿದಂತೆ ಒಟ್ಟು 20 ಮಂದಿ ನೋಂಪಿಯ ವೃತಧಾರಿಗಳಾಗಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು. ಅಳದಂಗಡಿಯ ಪದ್ಮಪ್ರಭ ಇಂದ್ರ ಮತ್ತು ನಾರಾವಿ ಹರ್ಷೇಂದ್ರ ಇಂದ್ರ ಅವರ ಸಹಕಾರದೊಂದಿಗೆ ನೋಂಪಿ ಆರಾಧನಾ ವಿಧಾನ ನಡೆಯಿತು. ಮೂರು ದಿನಗಳಲ್ಲಿ ಅನಂತ ನೋಂಪಿ ನಡೆಯಲಿದ್ದು ಇಂದು ಬುಧವಾರ ಸಮಾಪನಗೊಳ್ಳುತ್ತದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿರಿದ್ದು ಮಂಗಲಪ್ರವಚನ ನೀಡುವರು.

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

Article Image

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ ಆಚರಣೆಯ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಮತ್ತು ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು ನಂತರ ಉತ್ತಮ ಮಾರ್ದವ ಧರ್ಮದ ಬಗ್ಗೆ ಡಾ. ನೀರಜಾ ನಾಗೇಂದ್ರಕುಮಾರ್ ಅವರು ಉಪನ್ಯಾಸ ನೀಡಿದರು. ಹುಬ್ಬಳ್ಳಿ ಜೈನ ಸಮಾಜದ ಲೋಬೋಗೋಳ್, ವಿದ್ಯಾಧರ್, ಬೀಳಗಿ, ರತ್ನಾಕರ್ ಅಣ್ಣಿಗೇರಿ, ಶಾಂತಿನಾಥ ಹೋತಪೇಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಭುಜಬಲಿ ಬ್ರಹ್ಮಚರ್ಯಾ ಶ್ರಮ ಹಿರಿಯoಗಡಿ ಕಾರ್ಕಳ ದಶಲಕ್ಷಣ ಪರ್ವ ಸಮಾರಂಭ

Article Image

ಶ್ರೀ ಭುಜಬಲಿ ಬ್ರಹ್ಮಚರ್ಯಾ ಶ್ರಮ ಹಿರಿಯoಗಡಿ ಕಾರ್ಕಳ ದಶಲಕ್ಷಣ ಪರ್ವ ಸಮಾರಂಭ

ದಶಲಕ್ಷಣ ಪರ್ಯೂಶಣ ಪರ್ವದ ಮೂರನೇ ದಿನ ಪೂಜೆ ಭಜನೆ, ವಿದ್ಯಾರ್ಥಿಗಳ ಉಪನ್ಯಾಸದೊಂದಿಗೆ ಉತ್ತಮ ಆರ್ಜವ ಧರ್ಮವನ್ನು ಆಚರಿಸಲಾಯಿತು. ಮೂಡುಬಿದಿರೆಯ ಖ್ಯಾತ ವಕೀಲರಾದ ಶ್ವೇತಾ ಜೈನ್ ಉತ್ತಮ ಆರ್ಜವ ಧರ್ಮದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

ಕಾರ್ಕಳ: ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿಂಹ ಮಾಸದ ಮಂಗಳವಾರದ ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳದ ಶ್ರೀ ಜೈನ ಮಠದಲ್ಲಿ ಜರುಗಿದವು. ವಿಶೇಷ ಆಮಂತ್ರಿತರಾದ ಶ್ರೀ ಕ್ಷೇತ್ರ ಕೊಲ್ಲಾಪುರ, ಶ್ರೀ ದಿಗಂಬರ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಮ್ಮ ಪಾವನ ಸಾನಿಧ್ಯವನ್ನು ನೀಡಿದ ಈ ಪುಣ್ಯ ಸಂದರ್ಭದಲ್ಲಿ ಕಾರ್ಕಳ ಶ್ರೀ ಮಠದ ವತಿಯಿಂದ ಪೂಜ್ಯರನ್ನು ಮಠಾಧೀಶರು ಕಾರ್ಕಳದ ಸಮಸ್ತ ಜೈನ ಬಾಂಧವರ ಪರವಾಗಿ ಅತ್ಯಂತ ಪ್ರೀತಿಯಿಂದ ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಮಾಡಿದರು.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಶಿಕಾಂತ್ ವೈ. ಆಯ್ಕೆ

Article Image

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಶಿಕಾಂತ್ ವೈ. ಆಯ್ಕೆ

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡುಬಿದಿರೆ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶಶಿಕಾಂತ್ ವೈ ಆಯ್ಕೆಯಾಗಿದ್ದು ಸೆ.14 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು, ರಾಜ್ಯಾಧ್ಯಕ್ಷರಾದ ಎನ್.ಗೋಪಾಲ ಹಾಗೂ ಗಣ್ಯರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಇವರಿಗೆ 2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುತ್ತದೆ.

ದಶಲಕ್ಷಣಪರ್ವ ಆಚರಣೆ ಉದ್ಘಾಟನೆ

Article Image

ದಶಲಕ್ಷಣಪರ್ವ ಆಚರಣೆ ಉದ್ಘಾಟನೆ

ಉಜಿರೆ: ಧರ್ಮದ ಮರ್ಮವನ್ನರಿತು ಮಾಡುವ ಆಚರಣೆಯಿಂದ ನಮ್ಮಲ್ಲಿರುವ ದೋಷಗಳ ನಿವಾರಣೆಯಾಗಿ ವರ್ತನೆಯಲ್ಲಿ ಪರಿವರ್ತನೆಯಾಗುತ್ತದೆ ಎಂದು ನಿವೃತ್ತ ಉಪನ್ಯಾಸಕಿ ಪ್ರೊ. ತ್ರಿಶಲಾ ಉದಯಕುಮಾರ್ ಮಲ್ಲ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ದಶಲಕ್ಷಣ ಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ದಶಲಕ್ಷಣ ಪರ್ವವು ಆಧ್ಯಾತ್ಮಿಕ ಪರ್ವವಾಗಿದ್ದು, ದಶಧರ್ಮಗಳ ಅನುಷ್ಠಾನದಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು, ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸಮಯದ ಸದುಪಯೋಗ ಮಾಡಬೇಕೆಂದು ಅವರು ಸಲಹೆ ನೀಡಿದರು. ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ, ನಿರಂಜನ ಜೈನ್ ಅಳಿಯೂರು ಧಾರ್ಮಿಕ ಪ್ರವಚನ ನೀಡಿ, ಉತ್ತಮ ಕ್ಷಮಾ ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ ಎಂಬ ದಶಧರ್ಮಗಳು ನಮ್ಮ ಆತ್ಮನ ಸಹಜ ಗುಣಗಳಾಗಿವೆ. ಆತ್ಮನಿಗೆ ಕರ್ಮದ ಕೊಳೆ ಅಂಟಿದಾಗ ಆತ್ಮನ ಸಹಜಗುಣ ಪ್ರಕಟವಾಗುವುದಿಲ್ಲ. ರಾಗ-ದ್ವೇಷ ರಹಿತವಾಗಿ, ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಾಂ ಎಂಬ ರತ್ನತ್ರಯ ಧರ್ಮದ ಮೂಲಕ ದಶಧರ್ಮಗಳ ಪಾಲನೆ ಮಾಡಬೇಕು. ಕೋಪವನ್ನು ತ್ಯಜಿಸಿದಾಗ, ಕ್ಷಮಾ ಗುಣ ಬೆಳೆಯುತ್ತದೆ. ಮಾರ್ದವ ಅಂದರೆ ಮೃದು ಸ್ವಭಾವ, ವಿನಯಶೀಲತೆ. ಮನಸು, ಕಣ್ಣು ಮತ್ತು ಕೋಪದ ನಿಯಂತ್ರಣದಿಂದ ದಶಧರ್ಮಗಳ ಪಾಲನೆಯೊಂದಿಗೆ ಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಾದ ಆದರ್ಶ್ ಮತ್ತು ಜೀವನ್ ಮಾತನಾಡಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಚೌತಿ, ದಶಲಕ್ಷಣಪರ್ವ ಮೊದಲಾದ ಪರ್ವಗಳ ಆಚರಣೆಯಿಂದ ಸಾರ್ವಕಾಲಿಕ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಂದಿನ ವೇಗದ ಮತ್ತು ಯಾಂತ್ರಿಕ ಬದುಕಿನಲ್ಲಿ ನಮ್ಮ ಆಚಾರ-ವಿಚಾರ ಮತ್ತು ಆಹಾರ-ವಿಹಾರ ಪರಿಶುದ್ಧವಾಗಿದ್ದಲ್ಲಿ ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಹೇಳಿದರು. ಸಿದ್ಧವನ ಗುರುಕುಲದ ಉಪಪಾಲಕ ಕೇಶವ ಉಪಸ್ಥಿತರಿದ್ದರು. ಸಂಕೇತ್ ಸ್ವಾಗತಿಸಿದರು. ಚೇತನ್ ಧನ್ಯವಾದವಿತ್ತರು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ದಾವಣಗೆರೆ: ದಶ ಲಕ್ಷಣ ಪರ್ವ ಉಪನ್ಯಾಸ

Article Image

ದಾವಣಗೆರೆ: ದಶ ಲಕ್ಷಣ ಪರ್ವ ಉಪನ್ಯಾಸ

ದಾವಣಗೆರೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರಕ್ಕೆ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹಾಗೂ ರತ್ನತ್ರಯ ಧಾರವಾಹಿ ನಿರ್ದೇಶಕಿ. ಡಾ. ನೀರಜಾ ನಾಗೇಂದ್ರ ಕುಮಾರ್ ಭೇಟಿ ನೀಡಿ ಉತ್ತಮ ಅರ್ಜವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷ ಪದ್ಮಪ್ರಕಾಶ್ ಹಾಗೂ ದಾವಣಗೆರೆ ಜೈನ ಸಮಾಜದ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Article Image

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

ಉಜಿರೆ: ದಶಲಕ್ಷಣಪರ್ವ ಆಚರಣೆಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಬರೆದ “ಪರ್ಯೂಷಣ ಪರ್ವ” ಕೃತಿಯನ್ನು ಸೋಮವಾರ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುಸ್ತಕದಲ್ಲಿರುವ ಉಪಯುಕ್ತ ಆಧ್ಯಾತ್ಮಿಕ ಮಾಹಿತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ ಪುಷ್ಪದಂತ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ನಿರಂಜನ್ ಜೈನ್, ಆರ್.ಯನ್. ಪೂವಣಿ ಉಪಸ್ಥಿತರಿದ್ದರು.

ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆ

Article Image

ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಿಶ್ವ ಭೌತಚಿಕಿತ್ಸಾ ಸಪ್ತಾಹ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನಲ್ಲಿ ಸೆಪ್ಟೆಂಬರ್ 3 ರಿಂದ 6ರವರೆಗೆ ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಭೌತಚಿಕಿತ್ಸಾ ಸಪ್ತಾಹದ ಅಂಗವಾಗಿ ಪೋಸ್ಟರ್ ಪ್ರದರ್ಶನ, ಚರ್ಚಾ ಸ್ಪರ್ಧೆ, ಶೈಕ್ಷಣಿಕ ಕಾರ್ಯಕ್ರಮಗಳು, ಕಾಲ್ನಡಿಗೆ ಜಾಥಾ, ತಪಾಸಣಾ ಶಿಬಿರ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮುಖ್ಯ ಅತಿಥಿಗಳಾಗಿದ್ದು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಭೌತಚಿಕಿತ್ಸಕರು ಮತ್ತು ಎಂ.ಎಸ್.ರಾಮಯ್ಯ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ರವೀಂದ್ರ ಹಾಗೂ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರವಿ ಸವದತ್ತಿ ಅವರನ್ನು ಭೌತಚಿಕಿತ್ಸೆಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣನವರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಜ್ಯೋತಿ ಜೀವಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಡಾ. ತುಳಸಿ ಕುಲಕರ್ಣಿ ಮತ್ತು ಡಾ. ಐಶ್ವರ್ಯ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸುಧೀರ್ ಭಟ್ಟಭೋಲನ್ ವಂದರ್ನಾಪಣೆ ಸಲ್ಲಿಸಿದರು.

ದಶಲಕ್ಷಣ ಪರ್ವದ ಉದ್ಘಾಟನಾ ಸಮಾರಂಭ

Article Image

ದಶಲಕ್ಷಣ ಪರ್ವದ ಉದ್ಘಾಟನಾ ಸಮಾರಂಭ

ವೇಣೂರಿನಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವತಿಯಿಂದ ನಡೆಯುತ್ತಿರುವ ದಶಲಕ್ಷಣ ಪರ್ವ ಆಚರಣೆಯ ಉದ್ಘಾಟನಾ ಸಮಾರಂಭವು ಇಂದು (ಅ.08ರಂದು) ಶ್ರೀ ಬಾಹುಬಲಿ ಕ್ಷೇತ್ರ (ಯಾತ್ರಿ ನಿವಾಸ)ದಲ್ಲಿ ನಡೆಯಿತು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಜರುಗಿ, ನಂತರ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರ್ವಗಳ ರಾಜ ದಶಲಕ್ಷಣ ಮಹಾಪರ್ವ. ಜೀವನ ಬಿಟ್ಟು ಧರ್ಮವಿಲ್ಲ. ಸಿಟ್ಟನ್ನು ನಿಗ್ರಹಿಸುವುದನ್ನ ಜೈನ ಆಚಾರ್ಯರು ತಿಳಿಸಿದ್ದಾರೆ. ಜ್ಞಾನಕ್ಕೆ ಗುಣಕ್ಕೆ ಉತ್ತಮ ಬೆಲೆ ಇದೆ. ಒಳಗಿನ ನಮ್ಮ ಮನಸ್ಸನ್ನು ಪರಿವರ್ತನೆ ಮಾಡಬೇಕು ಎಂದು ಜೈನ ಧರ್ಮ ಹೇಳುತ್ತದೆ ಎಂದರು. ಕ್ರೋಧವು ಮಾಯಾದಿಂದ ಮಾನದಿಂದ ಲೋಭದಿಂದ ಹೊರ ಬರಬಾರದು ಕ್ಷಮಾ ಧರ್ಮವನ್ನು ಪಾಲಿಸಬೇಕು. ಕ್ಷಮೆಯನ್ನು ಧಾರಣೆ ಮಾಡಬೇಕು. ದಶಲಕ್ಷಣವನ್ನು ನಾವು ನಮ್ಮ ಜೀವನದಲ್ಲಿ ಪಾಲಿಸೋಣ ಎಂದು ಹೇಳಿದರು. ಕೆ. ಅಭಯಚಂದ್ರ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅವರು ಶಿಕ್ಷಣದಿಂದ ಒಳ್ಳೆಯ ಸ್ಥಾನಮಾನ, ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ ಎಂದರು. ಈಗಿನ ಕಾಲಘಟ್ಟದಲ್ಲಿ ಯುವ ಪೀಳಿಗೆಯನ್ನು ಹುರಿದುಂಬಿಸುವ ಕೆಲಸ ಆಗಬೇಕು ಎಂದು ಹೇಳಿದರು. ಇತ್ತೀಚೆಗೆ ನಿಧನರಾದ ಯಂ. ವಿಜಯರಾಜ ಅಧಿಕಾರಿಯವರ ಪ್ರೀತಿ, ಪ್ರಾಮಾಣಿಕತೆ, ನೇರ ನುಡಿಯ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರಭಾತ್ ಬಲ್ನಾಡ್‌ರವರು ಉತ್ತಮ ಕ್ಷಮಾ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮವಾಗಿದೆ. ಪರ್ವಗಳ ರಾಜ ದಶಲಕ್ಷಣ ಪರ್ವದ ಹತ್ತು ಲಕ್ಷಣಗಳನ್ನು ಯಾವ ವ್ಯಕ್ತಿ ಅನುಸರಿಸುತ್ತಾನೋ ಅವನು ಪರಿಪೂರ್ಣವಾಗುತ್ತಾನೆ, ನಾಲ್ಕು ಕಷಾಯಗಳಾದ ಕ್ರೋಧ, ಮಾಯಾ, ಮಾನ, ಲೋಭ, ಇವುಗಳನ್ನು ನಿಗ್ರಹಿಸುವುದರಿಂದ ಮಾತ್ರ ಉತ್ತಮ ಕ್ಷಮಾ ಧರ್ಮವನ್ನು ಪಾಲಿಸಿದಂತಾಗುತ್ತದೆ. ಪುಣ್ಯ ಸಂಪಾದನೆಯು ಕ್ಷಮೆಯಿಂದಾಗುತ್ತದೆ. ಕ್ಷಮಾ ಧರ್ಮದ ಪಾಲನೆಯಿಂದ ಮೋಕ್ಷ ಮಾರ್ಗವನ್ನು ಪಡೆಯೋಣ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್‌ರವರು ಯಾವುದು ಕೂಡ ಭಗವಂತನ ಇಚ್ಚೆಯಿಲ್ಲದೇ ನಡೆಯುವುದಿಲ್ಲ ಮನಸ್ಸಿನಲ್ಲಿ ಒಳ್ಳೆಯ ಭಾವನೆಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಕೆಲವು ಘಟನೆಗಳನ್ನು ವಿವರಿಸುವ ಮೂಲಕ ಕ್ಷಮಾ ಧರ್ಮವನ್ನು ತಿಳಿಸಿದರು. ಯಾವುದೇ ಕಾರ್ಯಕ್ರಮ ಮಾಡುವಾಗ ಕ್ಷಮಾ ಧರ್ಮ ಇದ್ದರೆ ಮಾತ್ರ ಆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಾಗವನ್ನು ನೀಡಿ ಸಹಕರಿಸಿದ ವಿಜೇತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿಗಳಾದ ಮಾರಗುತ್ತು ಯಂ. ವಿಜಯರಾಜ್ ಅಧಿಕಾರಿ ಅವರಿಗೆ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿಗಳಾದ ಜಯರಾಜ್ ಕಂಬಳಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಮತ್ತು ಶಿವಪ್ರಸಾದ್ ಅಜಿಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ನಿಧಿ ಜೈನ್ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವಿತ್ತರು.

ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ

Article Image

ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ

ಮಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ಇತ್ತೀಚೆಗೆ ಆರಂಭವಾದ ಧವಳ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸೆ. 1 ರಂದು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಸಿದ್ದಾರ್ಥ ಸಭಾಭವನ (ಜೈನ್ ಬೋರ್ಡಿಂಗ್) ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುದರ್ಶನ್ ಜೈನ್ ಇವರು ಈ ಸಂಸ್ಥೆಯ 2023-24 ನೇ ಸಾಲಿನಲ್ಲಿ 65.40 ಕೋಟಿಯಷ್ಟು ವ್ಯವಹಾರ ನಡೆಸಿ, ರೂ. 9.50 ಕೋಟಿ ಠೇವಣಿಯೊಂದಿಗೆ ಸಾಲ ಸೌಲಭ್ಯ ಒದಗಿಸಿ, ರೂ. 2.45 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಯಪಡಿಸಿದರು. ನಿರ್ದೇಶಕಾರದ ಶಶಿಕಲಾ ಕೆ.ಹೆಗ್ಡೆ ಕಾರ್ಕಳ ಇವರು ಸಭೆ ಕಾರ್ಯ ಕಲಾಪಗಳ ಕಾರ್ಯ ಸೂಚಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ ಇವರು 2023-24 ನೇ ಸಾಲಿನ ಆರ್ಥಿಕ ವ್ಯವಹಾರಗಳ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಕಳೆದ ಸಾಲಿನ ವರದಿಯನ್ನು ಸುಧೀರ್ ಕುಮಾರ್ ವೈ, ಇವರು ಮಂಡಿಸಿದರೆ, ನಿರ್ದೇಶಕರಾದ ಪುಷ್ಪರಾಜ್ ಜೈನ್ ಇವರು ಈ ಸಂಸ್ಥೆ ಸ್ಥಾಪಿಸಿದ ಉದ್ದೇಶವನ್ನು ಸಭೆಗೆ ತಿಳಿಯಪಡಿಸಿದರು, ಹಾಗೂ ಇನ್ನೋರ್ವ ನಿರ್ದೇಶಕರಾದ ರಾಜೇಶ್ ಎಮ್. ರವರು ಮಾತನಾಡುತ್ತಾ ಸಂಸ್ಥೆಯ ಮಹಾಸಭೆಯ ಅಧಿಕಾರ-ಸದಸ್ಯರ ಕರ್ತವ್ಯಗಳ ಬಗ್ಗೆ ಸದಸ್ಯರಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಹೊಸ್ಮಾರು ಶಿಶುಪಾಲ್ ಜೈನ್ ರವರು ಸ್ವಾಗತಿಸಿದರು. ಸಂಸ್ಥೆಯ ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಣೆಯೊಂದಿಗೆ ಲೆಕ್ಕ ಪತ್ರಗಳನ್ನು ಮಂಡಿಸಿದರು. ಹಿರಿಯ ಪ್ರಭಂದಕ ನಿವೇಶ್ ಕುಮಾರ್ ಮುಂದಿನ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆದರು. ನಿರ್ದೇಶಕರಾದ ಸಚಿನ್ ಕುಮಾರ್ ವಂದಿಸಿದರು.

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

Article Image

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

ಜೈನ ಧರ್ಮವು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಜೈನ ಧರ್ಮದ ತತ್ವ ಸಿದ್ಧಾಂತಗಳು ವೈಜ್ಞಾನಿಕ ಹಿನ್ನೆಲೆಯಲ್ಲಿದೆ ಜೈನ ಧರ್ಮೀಯರಲ್ಲಿ ಜೈನ ಧರ್ಮದ ಪ್ರಜ್ಞೆ ಉಳಿಸಿ ಬೆಳೆಸುವಲ್ಲಿ ಜಿನಚೈತ್ಯಾಲಯಗಳು ಪೂರಕ ಮತ್ತು ಪ್ರೇರಕ ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಭ| 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯು ಪಾಳುಬಿದ್ದಿತ್ತು ಈದೀಗ ಈ ಸೀಮೆಯ ಜೈನ ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಮತ್ತು ಬಸದಿಗೆ ಸಂಬಂಧಪಟ್ಟ ಎಲ್ಲಾ ಮನೆತನಗಳು ಸೇರಿಕೊಂಡು ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಿದ್ದು ಇದರ ಶಿಲಾನ್ಯಾಸ ಸಮಾರಂಭ ದಿನಾಂಕ 28-08-2024ರಂದು ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಇವರ ದಿವ್ಯ ಹಸ್ತದಿಂದ ಶಿಲಾನ್ಯಾಸ ಮತ್ತು ವಾಸ್ತು ತಜ್ಞ ಪಾದೂರು ಸುದರ್ಶನ್ ಇಂದ್ರ ಇವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು ಈ ಸಂದರ್ಭದಲ್ಲಿ ನಿಡ್ವಾಳ ಬಸದಿಗೆ ಸೇರಿರುವ ಎಲ್ಲಾ ಊರ-ಪರವೂರ ಶ್ರಾವಕ ಶ್ರಾವಕೀಯರು ಭಾಗವಹಿಸಿದ್ದರು.

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

Article Image

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಟ್ಟಾಭಿಷೇಕ 25ನೇ ವರ್ದಂತಿ ಉತ್ಸವದ ಅಂಗವಾಗಿ ಮಹಾವೀರ ಭವನದಲ್ಲಿ ಆ.29ರಂದು ಗುರುವಂದನೆ ಕಾರ್ಯಕ್ರಮ ನಡೆಯಿತು. ವಿದ್ವಾಂಸ ಡಾ. ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಭಟ್ಟಾರಕ ಪರಂಪರೆ ಈ ಭಾಗದಲ್ಲಿ ವಿಶೇಷವಾದದ್ದು. ಭಾರತೀಯ ಧಾರ್ಮಿಕ ಪರಂಪರೆಯ ಸಂತ ಎಂದ ಅವರು ತಮ್ಮ ವರ್ದಂತಿ ಉತ್ಸವವನ್ನು ಆಡಂಬರದಿಂದ ಆಚರಿಸದೆ, ಪುರಾತನ ಜಿನ ಚೈತ್ಯಾಲಯದ ಜೀರ್ಣೋದ್ಧಾರ, 25 ತಾಳಮದ್ದಳೆ ಸರಣಿ ಕಾರ್ಯಕ್ರಮ, ಪ್ರಾಚೀನ, ಅಪರೂಪದ ಗ್ರಂಥಗಳಿರುವ ರಮಾರಾಣಿ ಶೋಧ ಸಂಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವುದು ಅರ್ಥಪೂರ್ಣ ಆಚರಣೆ ಎಂದರು. ಭಟ್ಟಾರಕ ಸ್ವಾಮೀಜಿಯವರು ಶ್ರಾವಕ, ಶ್ರಾವಕಿಯರಿಗೆ ಆಶೀರ್ವಾದವಿತ್ತರು. ಬಸದಿಗಳ ಮೊಕ್ತೇಸರರಾದ ಪಟ್ಟಶೆಟ್ಟಿ ಸುದೇಶ್ ಆದರ್ಶ, ಎ. ಸುದೀಶ್ ಕುಮಾರ್ ಬೆಕ್ಕೇರಿ, ಚೌಟರ ಅರಮನೆಯ ಕುಲದೀಪ ಎಂ., ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ., ಧಾರ್ಮಿಕ ಮುಖಂಡರಾದ ಧನಕೀರ್ತಿ ಬಲಿಪ, ಶೈಲೇಂದ್ರ ಕುಮಾರ್, ಕೃಷ್ಣರಾಜ ಹೆಗ್ಡೆ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಜಯಪ್ರಕಾಶ್ ಪಡಿವಾಳ್, ಸುಭಾಶ್ಚಂದ್ರ ಚೌಟ, ಮತ್ತಿತರರು ಉಪಸ್ಥಿತರಿದ್ದರು. ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು. ನಂತರ ಅಹಿಂಸ ವಿಜಯ ಹಾಗೂ ತ್ರಿಶಂಕು ಸ್ವರ್ಗ ತಾಳಮದ್ದಳೆ ನಡೆಯಿತು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ನವ ನಕ್ಷತ್ರ ಸನ್ಮಾನ 2024'

Article Image

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ನವ ನಕ್ಷತ್ರ ಸನ್ಮಾನ 2024'

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನವ ನಕ್ಷತ್ರ ಸನ್ಮಾನ 2024 ಗೌರವ ಪುರಸ್ಕಾರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿವಿ9 ಕನ್ನಡ ಸುದ್ದಿ ವಾಹಿನಿಯ 17ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಅರಮನೆ ಮೈದಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರಿಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

Article Image

ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

ಸತ್ತೂರು, ಧಾರವಾಡ: "ಆರೋಹಣ"ವನ್ನು 23 ಆಗಸ್ಟ್ 2024 ರಂದು ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಉದ್ಘಾಟಿಸಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ಪಠ್ಯೇತರ ಚಟುವಟಿಕೆ, ಮನರಂಜನೆ ಕಾರ್ಯಕ್ರಮ, ಕ್ರೀಡೆ, ರಂಗೋಲಿ, ಛಾಯಾಗ್ರಹಣ, ಚಿತ್ರಕಲೆ, ಅಡುಗೆ, ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಚಟುವಟಿಕೆಗಳನ್ನು ಒಳಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಮನಸ್ಸು ಮತ್ತು ದೇಹದ ಸಮತೋಲನೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು. ಮುಖ್ಯ ಅತಿಥಿಗಳಾದ ಡಾ. ನಿರಂಜನ ಕುಮಾರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮತನಾಡುತ್ತಾ: "ಆರೋಹಣ" ಎಂದರೆ ಉತ್ತಮ ಸಾಧನೆಗಾಗಿ ಸೃಜನಶೀಲತೆಯನ್ನು ಕಂಡುಕೊಳ್ಳುವುದು. ಸೃಜನಶೀಲತೆಯು ಅವರ ಅಧ್ಯಯನದ ಉದ್ದಕ್ಕೂ ವಿದ್ಯಾರ್ಥಿಗಳ ಶಕ್ತಿಯಾಗಿರಬೇಕು. ವಿದ್ಯಾರ್ಥಿಗಳು ಪರಸ್ಪರ ಹೋಲಿಕೆ ಮಾಡದೆ ಆರೋಗ್ಯಕರ ಸ್ಪರ್ಧೆಯನ್ನು ಅಳವಡಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳು ಅವುಗಳ ಪುನರಾವರ್ತನೆಯಾಗದಂತೆ ಮುನ್ನಡೆಯಬೇಕು. ಶಿಕ್ಷಣವು ಸ್ಪಷ್ಟ ಉದ್ದೇಶ ಮತ್ತು ಜಾಗತಿಕ ಬೆಳವಣಿಗೆಯತ್ತ ಗಮನಹರಿಸಬೇಕು ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಅಜಯಕುಮಾರ ಓಲಿ ಸ್ವಾಗತಿಸಿದರು. ಡಾ. ಅಜಯ್ ಎಸ್.ಕೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಕುಮಾರಿ ಅಕ್ಸಾ ಶಫೀಕ್ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಆಚಾರ್ಯ ವಂದನಾರ್ಪಣೆ ಸಲ್ಲಿಸಿದರು.

ತೌಳವ ಇಂದ್ರ ಸಮಾಜ(ರಿ.)ದಿಂದ ಆಟಿಡೊಂಜಿ ವಿಹಾರ ಕೂಟ

Article Image

ತೌಳವ ಇಂದ್ರ ಸಮಾಜ(ರಿ.)ದಿಂದ ಆಟಿಡೊಂಜಿ ವಿಹಾರ ಕೂಟ

ತೌಳವ ಇಂದ್ರ ಸಮಾಜದ "ಆಟಿಡೊಂಜಿ ವಿಹಾರ ಕೂಟ" ವಿನೂತನವಾದ ಕಾರ್ಯಕ್ರಮ ರವಿವಾರ ಕಾರ್ಕಳ ಶಿರ್ಲಾಲಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಸೂಡಿ ಬಸದಿ ಪರಿಸರದಲ್ಲಿ ನಡೆಯಿತು.ಬಸದಿಗೆ ಬನ್ನಿ ಕಾರ್ಯಕ್ರಮದಿಂದ ಪ್ರೇರಿತರಾಗಿ ಈ ಕಾರ್ಯಕ್ರಮ ರೂಪಿಸಲಾಗಿದ್ದು ಸದಸ್ಯರೆಲ್ಲರೂ ಮೂಡಬಿದಿರೆಯಿಂದ ಸೂಡಿಗೆ ವಿಹಾರಗೈದು ಆಟಿ ಕೂಟ ನಡೆಸಿದರು. "ಸೂಡಿ ಬಸದಿ ಸಂದರ್ಶಿಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎನ್ನುತ್ತಾ "ಪ್ರಸ್ತುತ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸುವ ಪ್ರಯತ್ನ ಇದಾಗಿದ್ದು ಹಳ್ಳಿ ಪ್ರದೇಶದಲ್ಲಿರುವ ಬಸದಿಗಳನ್ನು ಸಂದರ್ಶಿಸಿ ಸ್ಥಳೀಯರೊಡನೆ ಒಂದುದಿನ ಕಳೆದು ಸಂಪರ್ಕ ಕೊಂಡಿಯನ್ನು ಹೆಚ್ಚಿಸಿಕೊಳ್ಳುವುದು ಒಂದು ಒಳ್ಳೆಯ ಕಾರ್ಯಕ್ರಮ ಅಲ್ಲದೆ ಸ್ಥಳೀಯ ಆಡಳಿತ ಮಂಡಳಿಯವರ ಕಾರ್ಯಕ್ಕೆ ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಂತೆಯೂ ಆಗುತ್ತದೆ "ಎಂದು ಮುಖ್ಯ ಅತಿಥಿಯಾದ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಗುಣಪಾಲ ಕಡಂಬ ಇಂದಿಲ್ಲಿ ಹೇಳಿದರು. ಸೂಡಿ ಬಸದಿ ಆಡಳಿತ ಮಂಡಳಿ ಕಾರ್ಯದರ್ಶಿ ಸೂರಜ್ ಜೈನ್ ರವರು ಮಾತನಾಡುತ್ತಾ ತೌಳವ ಇಂದ್ರ ಸಮಾಜದ ವಿನೂತನ ವಿಶಿಷ್ಟ ಶೈಲಿಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಜ್ಞಾನಚಂದ್ರ ಇಂದ್ರರು ಪ್ರಾಸ್ತಾವಿಕ ಮಾತು ಆಡಿ, ಅತಿಥಿಗಳನ್ನು ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಅರ್ಕಕೀರ್ತಿ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಬಸದಿಯ ಶ್ರೀ ಆದಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಪೂಜೆಯನ್ನು ನಯನ ಇಂದ್ರರು ನೆರವೇರಿಸಿದ ಬಳಿಕ ಬಸದಿಯ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಸದಸ್ಯರಿಗೆ ವಿವಿಧ ಮನರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಮದ್ಯಾಹ್ನ ಗಂಜಿ ಚಟ್ನಿಯೂಟ, ಉಪಹಾರಕ್ಕೆ ಬಸಳೆಪುಂಡಿ, ಅರಸಿನ ಎಲೆಕಡುಬು ಮುಂತಾದ ಸಾಂಪ್ರದಾಯಿಕ ತಿಂಡಿಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಅಲ್ಲಿಂದ ವಿಹಾರ ನಿರ್ಮಾಣ ಹಂತದಲ್ಲಿರುವ ಮೂಡಾರು ಬಸದಿಗೆ ತೆರಳಿ ದರ್ಶನ ಪಡೆದು ಮುಂದುವರಿದು ಹತ್ತಿರದ ಜಲಪಾತ ವೀಕ್ಷಣೆಯೂ ನಡೆಯಿತು. ಮೇಘನಾ ಪ್ರಾರ್ಥನೆ ನೆರವೇರಿಸಿದರು, ತೌಳವ ಇಂದ್ರ ಸಮಾಜದ ಉಪಾಧ್ಯಕ್ಷರಾದ ಅಕ್ಷಯ ಕುಮಾರ್ ಮಳಲಿಯವರು ಕಾರ್ಯಕ್ರಮ ಸಂಯೋಜಿಸಿ, ನಿರ್ವಹಣೆ ಮಾಡಿದರು, ಕಾರ್ಯದರ್ಶಿ ಅಭಯಕುಮಾರ್ ಬಿ. ಧನ್ಯವಾದಗಳನ್ನು ಅರ್ಪಿಸಿದರು.

ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ

Article Image

ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ

ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ ಬೆಂಗಳೂರಿನ ಮಂಜುನಾಥ ಸ್ವಾಮಿ ಕಲಾಮಂಟಪದಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಾಮೂಹಿಕ ಪಂಚ ನಮಸ್ಕಾರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ನಿರ್ದೇಶಕರಾದ B. ಸೋಮಶೇಖರ ಶೆಟ್ಟಿ ಹಾಗೂ ಇತರ ಉಪಾಧ್ಯಕ್ಷರು, ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು, ಜೈನ್ ಮಿಲನ್ ರಾಷ್ಟೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು, ಸಭಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಜಿನಭಜನೆ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ನೀಡಿದರು. ವಲಯಾಧ್ಯಕ್ಷರಾದ ಯುವರಾಜ್ ಭಂಡಾರಿ ಅವರು ಎಲ್ಲಾ ವಿಭಾಗಗಳ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು, ಕಾರ್ಯದರ್ಶಿ ರತ್ನರಾಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಲಯದ ಪದಾಧಿಕಾರಿಗಳು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು, ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

Article Image

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕದಲ್ಲಿ ಜೈನ ಧರ್ಮ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಉತ್ತರ ಕರ್ನಾಟಕದ ಸಂಘಟನೆ ಕೊರತೆಯ ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸುಹಾಸ್ತಿ ಜೈನ ಮಿಲನ. ಮುಖಂಡ, ಕಲಾವಿದ ಚಿತ್ತ ಜಿನೇಂದ್ರ ತಿಳಿಸಿದರು. ಅವರು ರಾಜಾಜಿನಗರ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ, ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೈನ ಧರ್ಮದ ಸಮಸ್ಯೆ, ಸಂಘಟನೆ, ಸಂಸ್ಕೃತಿ, ಸಂಸ್ಕಾರ, ಆರ್ಥಿಕ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿವೆ, ಜೈನ ಧರ್ಮದ ಪರಿಸ್ಥಿತಿ ಹೀನಾಯವಾಗಿದ್ದು ಸಂಘಟನೆ ಕೊರತೆ ಎದ್ದು ಕಾಣುತ್ತಿವೆ ಈ ಬಗ್ಗೆ ಎಲ್ಲರೂ ಸಂಘಟಿತರಾಗಿ ಧ್ವನಿ ಗೂಡಿಸಬೇಕೆಂದರು. ರಾಜಾಜಿನಗರ ಜೈನ್ ಮಿಲನ್ ಅಧ್ಯಕ್ಷೇ ಮಮತಾ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಧಾ ಬಾಹುಬಲಿ, ಬಾಹುಬಲಿ ಗೌರಜ್ ಸೇರಿದಂತೆ ರಾಜಾಜಿನಗರ ಜೈನ ಮಿಲನ್ ಪದಾಧಿಕಾರಿಗಳು, ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಚಿತ್ತ ಜಿನೇಂದ್ರರವರನ್ನು ಸನ್ಮಾನಿಸಲಾಯಿತು. ಜೆ. ರಂಗನಾಥ - ತುಮಕೂರು

ವೇಣೂರು: ಭಾರತೀಯ ಜೈನ್ ಮಿಲನ್ ತಿಂಗಳ ಮಾಸಿಕ ಸಭೆ

Article Image

ವೇಣೂರು: ಭಾರತೀಯ ಜೈನ್ ಮಿಲನ್ ತಿಂಗಳ ಮಾಸಿಕ ಸಭೆ

ವೇಣೂರು: ಭಾರತೀಯ ಜೈನ್ ಮಿಲನ್ ನ ಜುಲೈ ತಿಂಗಳ ಮಾಸಿಕ ಸಭೆ ಹಾಗೂ ಆಹಾರವೋತ್ಸವ ಕಾರ್ಯಕ್ರಮವನ್ನು ಆ. 15ರಂದು ಶ್ರೀ ಬಾಹುಬಲಿ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ವೀರ್ ವೀರಾಂಗನೆಯರು ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 50 ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಸುಕುಮಾರ್ ಜೈನ್ ವಹಿಸಿದ್ದರು. ಆಹಾರೋತ್ಸವದ ಉದ್ಘಾಟನೆಯನ್ನು ತಿಮ್ಮಣ್ಣರಸರಾದ ಡಾಕ್ಟರ್ ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಹತ್ವದ ಕುರಿತು ಉದ್ಘಾಟಕರು ಮತ್ತು ಅತಿಥಿಗಳು ವಿವರಿಸಿದರು. ವಿಜಯರಾಜ ಅಧಿಕಾರಿ ಅವರ ಪ್ರಾರ್ಥನೆಯೊಂದಿಗೆ ನಿರ್ಮಲ್ ಕುಮಾರ್ ಜೈನ್ ಸ್ವಾಗತಿಸಿ, ಪ್ರಾರಂಭವಾದ ಕಾರ್ಯಕ್ರಮವನ್ನು ಮಹಾವೀರ ಜೈನ್ ನಿರೂಪಿಸಿದರು. ಸುನಿತಾ ಎನ್. ಬಲ್ಲಾಳ್ ರವರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸುಮಾರು 150 ವೀರ್ ವೀರಾಂಗನೆಯರು ಮತ್ತು ವೀರ್ ಕುವರಿಯರು ಮತ್ತು ವೀರ್ ಕುವರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯೋಗ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ: ಡಾ. ಶಶಿಕಾಂತ ಜೈನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Article Image

ಯೋಗ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ: ಡಾ. ಶಶಿಕಾಂತ ಜೈನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಯೋಗ ಕ್ಷೇತ್ರದಲ್ಲಿ ಮಾಡಿದ ಉನ್ನತ ಸೇವೆ, ಸಾಧನೆಗಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ಏಶಿಯಾ ಪೆಸಿಫಿಕ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅ. 22 ರಂದು ಗುರುವಾರ ಕೊಲೊಂಬೊದಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮಾರಗುತ್ತು ವಿಜಯರಾಜ್ ಅಧಿಕಾರಿ ನಿಧನ

Article Image

ಮಾರಗುತ್ತು ವಿಜಯರಾಜ್ ಅಧಿಕಾರಿ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು, ಶ್ರೀಕ್ಷೇತ್ರ ಮುದ್ದಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರು, ನಿವೃತ್ತ ಉಪನ್ಯಾಸಕರಾದ ಮಾರಗುತ್ತು ವಿಜಯರಾಜ್ ಅಧಿಕಾರಿಯವರು ಇಂದು (ಆ. 16ರಂದು) ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಸಹಿತ ಅಪಾರ ಬಂಧು ವಗ೯ವನ್ನು ಅಗಲಿದ್ದಾರೆ. ವೇಣೂರು ಶ್ರೀ ಜೈನ ದಿಗಂಬರ ತೀಥ೯ಕ್ಷೇತ್ರ ಸಮಿತಿಯ ಮಾಜಿ ಕಾಯ೯ದಶಿ೯ಗಳು, ವಿವೇಕಾನಂದ ಸೇವಾ ಟ್ರಸ್ಟ್ ನ ಸ್ಥಾಪಾಕಾಧ್ಯಕ್ಷರೂ ಆದ ಇವರು ಪ್ರಗತಿ ಪರ ಕೃಷಿಕರು, ಧಾರ್ಮಿಕ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಮಾಲತಿ ವಸಂತರಾಜ್ ಕಾರ್ಕಳ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

Article Image

ಮಾಲತಿ ವಸಂತರಾಜ್ ಕಾರ್ಕಳ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ರಾಂತ ಭೋಧಕರಾದ ಮಾಲತಿ ವಸಂತರಾಜ್ ಕಾರ್ಕಳ ಇವರ ಶೈಕ್ಷಣಿಕ ಕ್ಷೇತ್ರದ ಸೇವೆಯ ಪರಿಗಣನೆಯ ಮೇಲೆ "ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ"ಯನ್ನು ನೀಡಿ ಸನ್ಮಾನಿಲಾಯಿತು.

ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ

Article Image

ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಅಳದಂಗಡಿ ಇವರ ಜೈನ ಆಗಮ ಶಾಶ್ತç ಸಂಕೃತಿ ಅಧ್ಯಯನ ಜ್ಞಾನಕ್ಕಾಗಿ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ ಮಾಡಿ ಸನ್ಮಾನಿಲಾಯಿತು.

ಶ್ವೇತಾ ದಿಲೀಪ್ ನಾರಾವಿ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

Article Image

ಶ್ವೇತಾ ದಿಲೀಪ್ ನಾರಾವಿ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ವೇತಾ ದಿಲೀಪ್ ನಾರಾವಿ ಇವರ ಧಾರ್ಮಿಕ ಕ್ಷೇತ್ರದ ಪರಿಗಣನೆಯ ಮೇಲೆ “ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ”ಯನ್ನು ನೀಡಿ ಸನ್ಮಾನಿಲಾಯಿತು.

ಬೆಂಗಳೂರು: ಜಿನಶ್ರೀ ಆರ್. ಅವರಿಗೆ ಪಿಎಚ್‌ಡಿ ಪದವಿ

Article Image

ಬೆಂಗಳೂರು: ಜಿನಶ್ರೀ ಆರ್. ಅವರಿಗೆ ಪಿಎಚ್‌ಡಿ ಪದವಿ

ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯು ಕುಟುಂಬ ಕೌನ್ಸಿಲರ್ ಪ್ರಾಕ್ಟಿಸ್ ಮಾಡುತ್ತಿರುವ ಜನಶ್ರೀ ಆರ್. ಅವರಿಗೆ ಪಿಎಚ್‌ಡಿ ಪದವಿ ಘೋಷಣೆ ಮಾಡಿದೆ. ಡಾ. ಮಂಜುಳಾ ವಿ. ಅವರ ಮಾರ್ಗದರ್ಶನದಲ್ಲಿ "Process of Emotion regulation in relation to Attachment and Mindfulness traits during Gottman's Dreams & within & Conflict intervention psychology" ಎಂಬ ವಿಷಯ ಮೇಲೆ ಮಂಡಿಸಿದ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ಲಭಿಸಿದೆ. ಜಿನಶ್ರೀ ಅವರು ಭಾರತದ ರಾಷ್ಟ್ರೀಯ ಗ್ರಂಥಾಲಯ ಕೊಲ್ಕತ್ತಾದ ಮಾಜಿ ಮಹಾನಿರ್ದೇಶಕರು ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕರಾದ ಡಾ. ಪಿ. ವೈ. ರಾಜೇಂದ್ರ ಕುಮಾರ್ ಅವರ ಪುತ್ರಿಯಾಗಿದ್ದು, ಸಿಸ್ಕೊ, ಎಚ್‌ಪಿ, ವಿಪ್ರೊ ಕಂಪನಿಗಳಲ್ಲಿ 17 ವರ್ಷಗಳ ಕಾಲ ಸಾಫ್ಟ್ವೇರ್ ಎಂಜಿನಿಯರ್ ಮತ್ತು ತಾಂತ್ರಿಕ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. MA ಸೈಕಾಲಜಿ (IGNOU), MBA (SISII ಕ್ಯಾಲಿಫೋರ್ನಿಯಾ), MS (IIITB ಬೆಂಗಳೂರು) ಮತ್ತು BE(BIT, ಬೆಂಗಳೂರು)ನಲ್ಲಿ ಪದವಿ ಪಡೆದಿದ್ದಾರೆ.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಇವರಿಗೆ ಗೌರವ ಸನ್ಮಾನ

Article Image

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಇವರಿಗೆ ಗೌರವ ಸನ್ಮಾನ

ಧರ್ಮಸ್ಥಳ: ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸುತ್ತಾ, ಹಲವಾರು ಕಾರ್ಯಕ್ರಮ ಸಂಘಟನೆ, ಸೇವಾ ಚಟುವಟಿಕೆ, ಸಂಘ ಸಂಸ್ಥೆಗಳ ಸ್ಥಾಪನೆ, ಸಾವಿರಾರು ಕಲಾವಿದರಿಗೆ ಬೆಳಕಾದ ವಿಷಯಕ್ಕಾಗಿ ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಅಳದಂಗಡಿ ಇವರಿಗೆ ಜು.21 ರಂದು ಸನ್ಮಾನ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳ ನೇತ್ರಾವತಿ ಬಳಿಯ ಪ್ರಣವ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಜಾನಪದ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಚುಟುಕು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಮಂತ್ರಣ ಸಂಸ್ಥೆಯವರು ಸೇರಿ ಈ ಸನ್ಮಾನ ನೆರವೇರಿಸಿದರು. ಈ ಸಮಾರಂಭದಲ್ಲಿ ಹಿರಿಯರಾದ ಬಿ. ಭುಜಬಲಿ ಧರ್ಮಸ್ಥಳ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ. ಸುವರ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್. ಪ್ರಕಾಶ್ ಶೆಟ್ಟಿ, ಉದ್ಯಮಿ ಲ| ನಿತ್ಯಾನಂದ ನಾವರ, ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಪ್ರೀತಮ್ ಧರ್ಮಸ್ಥಳ, ಡಾ. ದೀಪಾಲಿ ಡೊಂಗ್ರೆ, ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್ ಧರ್ಮಸ್ಥಳ, ವಿದ್ಯಾಧರ್ ಜೈನ್ ಉಪ್ಪಿನಂಗಡಿ, ಬೆಳ್ತಂಗಡಿ ಜೆಸಿಐ ಮಂಜುಶ್ರೀ ಅಧ್ಯಕ್ಷರಾದ ರಂಜಿತ್ ಹೆಚ್.ಡಿ., ಪ್ರಣವ್ ಸಭಾಂಗಣ ಮಾಲಕರಾದ ಸುರೇಂದ್ರ ಪ್ರಭು, ಮಲ್ಲಿನಾಥ್ ಜೈನ್ ಧರ್ಮಸ್ಥಳ, ಶ್ರೀದೇವಿ ಸಚಿನ್, ಬೇಬಿ ಪೂಜಾರಿ ಪುನ್ಕೆತ್ಯಾರು, ಶಾರದ ಶೆಟ್ಟಿ ಅಳದಂಗಡಿ, ಸದಾನಂದ ಬಿ.ಕುದ್ಯಾಡಿ, ಅರುಣ್ ಜೈನ್ ಅಳದಂಗಡಿ, ರಂಜನ್ ನೆರಿಯ, ಸ್ನೇಕ್ ಪ್ರಕಾಶ್ ಶೆಟ್ಟಿ ಧರ್ಮಸ್ಥಳ, ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಹರೀಶ್ ವೈ ಚಂದ್ರಮ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪ್ರಧಾನ ಸಂಚಾಲಕ ಅಭಿಷೇಕ್ ಬಜಗೋಳಿ, ಅಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು, ಉಪಾಧ್ಯಕ್ಷೆ ವಿಂಧ್ಯಾ ಎಸ್.ರೈ ಕಡೇಶಿವಾಲಯ, ನಿರ್ದೇಶಕರುಗಳಾದ ಚೇತನ್ ಕುಮಾರ್ ಅಮೈ, ಸ್ವಾತಿ ಸೂರಜ್ ಶಿಶಿಲ, ಆರ್.ಜೆ ಇಂದ್ರ ಕುಂದಾಪುರ, ಆಶಾ ಅಡೂರು, ವಿದ್ಯಾಶ್ರೀ ಅಡೂರ್ ಸ್ವಾತೀ ಕುಲಾಲ್ ಕಡ್ತಲ, ಕವಿತಾ ದಿನೇಶ್ ಕಟೀಲು, ಪ್ರಜ್ಞಾ ವಾಣಿಗೋರೆ ಕಾರ್ಕಳ, ಕೇಶವ ನೆಲ್ಯಾಡಿ, ಪರ್ಣಶಾ ಗೋಖಲೆ, ಹೇಮಾ ಜಯರಾಮ್ ರೈ ಕುರಿಯ, ಸುಶ್ಮೀತಾ ಮೂಡಬಿದ್ರೆ, ಹೆಚ್. ಕೆ. ನಯನಾಡು, ಪ್ರಸಾದ್ ನಾಯಕ್ ಕಾರ್ಕಳ ಮುಂತಾದವರು ಉಪಸ್ಥಿತರಿದ್ದರು.

ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ

Article Image

ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ

ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್‌ನವರು ಹಲವು ಖ್ಯಾತ ವೈದ್ಯರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಜೂನ್ 25ರಂದು ಸಂಜೆ 6 ಗಂಟೆಗೆ ನಯನ ಸಭಾಂಗಣದಲ್ಲಿ ಜರುಗಿದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸನ್ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.

ದೂರದರ್ಶನದ 'ಬಿ' ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಅನನ್ಯ ರಂಜನಿ ಆಯ್ಕೆ

Article Image

ದೂರದರ್ಶನದ 'ಬಿ' ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಅನನ್ಯ ರಂಜನಿ ಆಯ್ಕೆ

ದೂರದರ್ಶನ 'ಬಿ' ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಮಹಾವೀರ ಹಾಗೂ ಆರತಿರವರ ಪುತ್ರಿ ಉದಯೋನ್ಮುಖ ಭರತನಾಟ್ಯ ಕಲಾವಿದೆ ಅನನ್ಯ ರಂಜನಿ ಆಯ್ಕೆಯಾಗಿದ್ದಾರೆ. ಈಕೆ ಸಪ್ತವರ್ಣದ ರಶ್ಮಿತ ಲಾಸ್ಯ ಹಾಗೂ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾಗಿ, ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪಡೆದಿದ್ದಾರೆ. ಅನನ್ಯ ರಂಜನಿ ಪ್ರಸ್ತುತ ವಿದ್ವತ್ ಪೂರ್ವಪರೀಕ್ಷೆಯ ತಯಾರಿ ಮಾಡುತ್ತಿದ್ದು, ಉಜಿರೆಯ ಎಸ್. ಡಿ ಎಂ. ಕಾಲೇಜಿನಲ್ಲಿ ಅಂತಿಮ ವಿಜ್ಞಾನ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

First Previous

Showing 1 of 3 pages

Next Last