Article Image

ಜೈನ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ

Article Image

ಜೈನ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ

ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರ ಇಂದು ಸಂಚಾಲಕರಾದ ಕೆ. ಹೇಮರಾಜ್ ಇವರು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ಕಾಲೇಜಿನ ಪ್ರಾಂಶುಪಾಲರಾದ ಮತ್ತು ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಸೀತಾರಾಮ ಕೇವಳ ಇವರು ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಮತ್ತು ಎಲ್ಲ ಉಪನ್ಯಾಸಕ ವೃಂದದವರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ಧಾರವಾಡ: ಹೊರ ರೋಗಿ ವಿಭಾಗದ ನೊಂದಣಿ ಆ್ಯಪ್ ಉದ್ಘಾಟನೆ

Article Image

ಧಾರವಾಡ: ಹೊರ ರೋಗಿ ವಿಭಾಗದ ನೊಂದಣಿ ಆ್ಯಪ್ ಉದ್ಘಾಟನೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇತ್ತೀಚಿಗೆ ಹೊರ ರೋಗಿಗಳ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ನೊಂದಣಿ ಮಾಡಲು ಮಾದರಿ(ಆ್ಯಪ್)ಅನ್ನು ಉದ್ಘಾಟಿಸಿದರು. ಈ ಮಾದರಿಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಪಾಲಿಕ್ಲಿನಿಕ್‌ಗಳಲ್ಲಿ ವೈದ್ಯರ ಲಭ್ಯತೆಯ ಬಗ್ಗೆ ಮಾಹಿತಿ ಮತ್ತು ರೋಗಿಗಳು ತಮಗೆ ಅನುಕೂಲದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಇದು ಶೀಘ್ರದಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಎಸ್.ಡಿ.ಎಂ. ಪಾಲಿಕ್ಲಿನಿಕ್ ಧಾರವಾಡದಲ್ಲಿ ಜುಬಲಿ ಸರ್ಕಲ್ ಬಳಿಯ ವಿ.ಜೆ.ಹೌಸ್‌ನಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಎಸ್.ಡಿ.ಎಂ. ಪಾಲಿಕ್ಲಿನಿಕ್ ವಿದ್ಯಾನಗರದ, ಗುರುದತ್ತ ಭವನದ ಹತ್ತಿರ ಕಾರ್ಯನಿರ್ವಹಿಸುತ್ತದೆ. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಖ್ದೂಮ್ ಕಿಲ್ಲೆದಾರ ಅವರು ಪ್ರಾತ್ಯಕ್ಷಿಕೆಯೊಂದಿಗೆ ಆ್ಯಪ್ ಕುರಿತು ಕುಲಪತಿಗಳಿಗೆ ಮಾಹಿತಿ ನೀಡಿದರು. ಎಸ್.ಡಿ.ಎಂ. ಆಸ್ಪತ್ರೆಯ ಯುರಾಲಜಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಥುಲಿಯಮ್ ಲೇಸರ 60 ವ್ಯಾಟ್ ಯಂತ್ರ ಮತ್ತು ಫ್ಲೆಕ್ಸಿಬಲ್ ಯುರೆಟೆರೊಸ್ಕೋಪ್‌ಅನ್ನು ಉದ್ಘಾಟಿಸಿದರು. ಇದು ಪ್ರಸ್ತುತ ವಿಶ್ವದ ಆಧುನಿಕ ಲೇಸರ್ ತಂತ್ರಜ್ಞಾನವಾಗಿದ್ದು ಇದರ ಸಹಾಯದಿಂದ ಮೂತ್ರಪಿಂಡ ಕಲ್ಲುಗಳು, ಮೂತ್ರನಾಳದ ಕಲ್ಲುಗಳು, ಮೂತ್ರಪಿಂಡದ ಕ್ಯಾನ್ಸರ್, ವಿವಿಧ ಮೂತ್ರಶಾಶಸ್ತ್ರದ ಸಮಸ್ಯೆಗಳಿಗೆ ರಕ್ತಸ್ರಾವವಿಲ್ಲದೆ, ಕಡಿಮೆ ನೋವು, ಶಸ್ತ್ರ ಚಿಕಿತ್ಸೆಯ ನಂತರದ ಗಾಯಗಳಿಲ್ಲದೇ ಚಿಕಿತ್ಸೆ ನೀಡಬಹುದಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಈ ಯಂತ್ರವನ್ನು ಬಳಸಬಹುದು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ, ಕಾರ್ಯನಿರ್ವಾಹಕ ನಿದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ, ಉಪಸ್ಥಿತರಿದ್ದರು. ಯುರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಕಲಭಾವಿ ಅವರು ಉಪಕರಣಗಳ ಕಾರ್ಯನಿರ್ವಹಿಸುವ ಕುರಿತು ಪ್ರಾತ್ಯಕ್ಷಿತೆ ನೀಡಿದರು.

ಮೂಡುಬಿದಿರೆ ಜೈನ್ ಮಿಲನ್ ಮಾಸಿಕ ಸಭೆ, ಸನ್ಮಾನ

Article Image

ಮೂಡುಬಿದಿರೆ ಜೈನ್ ಮಿಲನ್ ಮಾಸಿಕ ಸಭೆ, ಸನ್ಮಾನ

ಮೂಡುಬಿದಿರೆ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಘಟಕದ ಮಾಸಿಕ ಸಭೆಯು ಇಲ್ಲಿನ ಎಂ. ಸಿ. ಎಸ್. ಬ್ಯಾಂಕ್ ಸಭಾಭವನದಲ್ಲಿ ಜೈನ್ ಮಿಲನ್ ಅಧ್ಯಕ್ಷ ಆನಡ್ಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭಾ ಕಾಯ೯ಕ್ರಮಕ್ಕೂ ಮೊದಲು ಹೃದ್ರೋಗ ಸಂಬಂಧಿ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆಯ ಹೃದ್ರೋಗ ತಜ್ಞ ಡಾ. ದಿತೇಶ್ ಹೃದ್ರೋಗಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ರವಿರಾಜ್ ಎಂ. ಮತ್ತು ಕೊಡುಗೈ ದಾನಿ ನಿವೃತ್ತ ಟೆಲಿಕಾಂ ಇಂಜಿನಿಯರ್ ಎಂ. ವಿ. ಶೆಟ್ಟಿ ಅವರನ್ನು ಮಿಲನ್ ವತಿಯಿಂದ ಸನ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ವಲಯ ನಿದೇ೯ಶಕರಾದ ಪಿ. ಜಯರಾಜ್ ಕಂಬಳಿ, ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ವೇತಾ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಸಿಕ ಸಭಾ ಕಾರ್ಯಕ್ರಮದ ಪ್ರಾಯೋಜಕರಾದ ಎಂ. ಸಿ. ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನೇಮಿರಾಜ್, ಜೈನ್ ಮಿಲನ್ ಪದಾಧಿಕಾರಿಗಳಾದ ರಾಜೇಶ್, ಪುಷ್ಪರಾಜ್ ಜೈನ್, ಅನಂತವೀರ್ ಜೈನ್ ಉಪಸ್ಥಿತರಿದ್ದರು. ಸುರೇಖಾ ವಿ. ಹೆಗ್ಡೆ ಪ್ರಾಥಿ೯ಸಿದರು. ಪ್ರಶಾಂತ್ ಜೈನ್ ಮತ್ತು ಸಂಪತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ದಿನೇಶ್ ಚೌಟ ಸ್ವಾಗತಿಸಿದರು. ಡಾ. ಕ್ಷಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಮಲೆನಾಡು ಜೈನ್ ಮಿಲನ್

Article Image

ಮಲೆನಾಡು ಜೈನ್ ಮಿಲನ್

ಕೊಪ್ಪ, ಶೃಂಗೇರಿ: ಇಲ್ಲಿನ ಮಲೆನಾಡು ಜೈನ್ ಮಿಲನ್ ವತಿಯಿಂದ ಜಯಪುರದ ಶಾಂತ ಕುಮಾರ್ ದಂಪತಿಗಳ ಶಿಕ್ಷಣ ಪ್ರೇಮವನ್ನು ಗುರುತಿಸಿ ಸನ್ಮಾನಿಸಲಾಯಿತು.

ಶ್ರುತ ಪಂಚಮಿ

Article Image

ಶ್ರುತ ಪಂಚಮಿ

ಮೂಡುಬಿದಿರೆ ಶ್ರೀ ಜೈನ ಮಠದಲ್ಲಿ ಶ್ರುತ ಪಂಚಮಿ ನಿಮಿತ್ತ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾ‌ಯ೯ವಯ೯ ಮಹಾಸ್ವಾಮೀಜಿಗಳವರ ಮಾಗ೯ದಶ೯ನ, ನೇತೃತ್ವ ಮತ್ತು ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 9-6-2024 ರಿಂದ 11-6-2024ರವರೆಗೆ ಸಾಮೂಹಿಕ ಸರಸ್ವತಿ ಶತಾಷ್ಠ ನಾಮಾವಳಿ ಹಾಗೂ ಶ್ರುತ ಸ್ಕಂದ ಆರಾಧನೆ ಜರುಗಲಿರುವುದು.

ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು. ಜನರೆಲ್ಲ ಜಿನರಾಗಬೇಕು

Article Image

ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು. ಜನರೆಲ್ಲ ಜಿನರಾಗಬೇಕು

ಶ್ರಾವಕರ ಷಟ್ಕರ್ಮಗಳಾದ ದೇವರಪೂಜೆ, ಆರಾಧನೆ, ಗುರುಗಳಸೇವೆ, ಸ್ವಾಧ್ಯಾಯ ಮೊದಲಾದವುಗಳನ್ನು ಪರಿಶುದ್ಧ ಮನಸ್ಸಿನಿಂದ ನಿತ್ಯವೂ ಮಾಡಿದಾಗ, ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ. ಜನರೆಲ್ಲ ಜಿನರಾಗಬೇಕು. ಮೋಕ್ಷ ಪ್ರಾಪ್ತಿಯೇ ಬದುಕಿನ ಪರಮ ಗುರಿಯಾಗಬೇಕು ಎಂದು ಮೂಡಬಿದ್ರೆ ಜೈನಮಠದ ಪರಮ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಪುಂಜಾಲಕಟ್ಟೆ ಕಟ್ಟೆಮನೆ ಗುತ್ತು ದಿವಂಗತ ಉದಯಕುಮಾರ್ ಅವರ ಸ್ಮರಣಾರ್ಥ ಶಾಸ್ತ್ರದಾನಕ್ಕಾಗಿ ಪ್ರಕಟಿಸಿದ “ಸೂರ್ಯೋದಯ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕ್ರೋಧಾದಿ ಮಾನಕಷಾಯಗಳನ್ನು ತೊರೆದು ನಮ್ಮೊಳಗಿರುವ ವೀತರಾಗ ಸ್ವರೂಪಿ ಆತ್ಮನನ್ನು ಗುರುತಿಸಿಕೊಂಡು ಮೋಕ್ಷಪ್ರಾಪ್ತಿಗೆ ನಿರಂತರ ಪ್ರಯತ್ನಿಸಬೇಕು. ಮೋಹನೀಯ ಕರ್ಮ ಎಲ್ಲಾ ಕರ್ಮಗಳ ರಾಜ. ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವವನ್ನು ಹೊಂದಿಕೊಂಡು ಚಾಕಚಕ್ಯತೆಯಿಂದ ಬದುಕಿನ ಎಲ್ಲಾ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿ ಕರ್ಮ ಬಂಧವನ್ನು ತಡೆದು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿಗಳವರು ಸಲಹೆ ನೀಡಿದರು. ಇವರು ಕಟ್ಟೆಮನೆ ಉದಯಕುಮಾರರ ಸೇವಾ ಮನೋಭಾವ, ಆದರ್ಶ ನಾಯಕತ್ವ, ಶ್ರಾವಕ ಧರ್ಮದ ಪರಿಪಾಲನೆಯನ್ನು ಶ್ಲಾಘಿಸಿದರು. ಭಗವಾನ್ ಶಾಂತಿನಾಥ ಸ್ವಾಮಿಗೆ ೫೦೪ ಕಲಶ ಅಭಿಷೇಕ, ಮೂರೂ ಬಸದಿಗಳಲ್ಲಿ ಪಂಚಾಮೃತ ಅಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವರಹ ಪೂಜೆ ನಡೆಯಿತು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ ಮತ್ತು ಅಭಯಚಂದ್ರ ಜೈನ್, ಕೆ. ಪ್ರಸನ್ನ ಕುಮಾರ್ ಬೆಳ್ತಂಗಡಿ, ಎಸ್.ಡಿ. ಸಂಪತ್‌ಸಾಮ್ರಾಜ್ಯ ಶಿರ್ತಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಪ್ರಬಂಧಕರುಗಳಾದ ಎಂ. ಜಿನರಾಜ ಶೆಟ್ಟಿ ಮತ್ತು ಮೋಹನ ಪಡಿವಾಳ್, ಕೆ.ಪಿ. ಜಗದೀಶ ಅಧಿಕಾರಿ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಧರಣೇಂದ್ರ ಕುಮಾರ್ ಸಭಾಕಾರ್ಯಕ್ರಮ ನಿರ್ವಹಣೆ ಮಾಡಿದರು.

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವ

Article Image

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವ

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲಾ ಪ್ರಾರಂಭೋತ್ಸವವು ಜೂನ್ 3ರಂದು ಶಾಲಾ ಆವರಣದಲ್ಲಿ ನೆರವೇರಿತು. ಕಾರ್ಯಕ್ರಮದ ಉದ್ಘಾಟಕರಾಗಿ ಮೂಡುಬಿದಿರೆಯ ಖ್ಯಾತ ಲೆಕ್ಕ ಪರಿಶೋಧಕರಾದ ಉಮೇಶ್ ರಾವ್ ಮಿಜಾರುರವರು ಉಪಸ್ಥಿತರಿದ್ದು, ಕಷ್ಟವನ್ನು ಎದುರಿಸುವ ಸಾಮರ್ಥ್ಯ, ಸಮಯಪ್ರಜ್ಞೆ ಹಾಗೂ ಶಾಲಾ ನಿಯಮಗಳನ್ನು ಸರಿಯಾಗಿ ವಿದ್ಯಾರ್ಥಿಗಳು ಪಾಲಿಸಿದರೆ ಗೆಲುವು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್‌ರವರು ಶಾಲೆಯಲ್ಲಿ ಪೂರಕವಾದ ಕಲಿಕಾ ವಾತಾವರಣ ಇದ್ದಾಗ ಮಕ್ಕಳು ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಹತ್ತನೆಯ ತರಗತಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಸುವಿತ್ ಭಂಡಾರಿ, ಸುಯೋಗ್ ಅಂಚನ್, ಪೃಥ್ವಿ ಪ್ರಕಾಶ್ ಭಂಡಾರಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇಸ್ರೋ ‘ಯುವಿಕ’ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ, ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯಾಗಿರುವ ಮೌಲ್ಯ ವೈ. ಆರ್. ಜೈನ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಶಾಲಾ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಪುಪ್ಪರಾಜ್ ಬಿ., ಶಾಲಾ ಪ್ರಾಂಶುಪಾಲರಾದ ಸುರೇಶ ಹಾಗೂ ಶೈಕ್ಷಣಿಕ ಸಂಯೋಜಕರಾದ ಶ್ರೀಪ್ರಸಾದ್‌ರವರು ಉಪಸ್ಥಿತರಿದ್ದರು. ವಿಮಲಾ ಶೆಟ್ಟಿಯವರು ಕಾರ್ಯಕ್ರಮದ ನಿರೂಪಿಸಿ, ಪದ್ಮಾವತಿಯವರು ವಂದಿಸಿದರು.

ಸತ್ತೂರು, ಧಾರವಾಡ: “ನೆನಪು ಮತ್ತು ಮರೆವು” ಕಾರ್ಯಾಗಾರ

Article Image

ಸತ್ತೂರು, ಧಾರವಾಡ: “ನೆನಪು ಮತ್ತು ಮರೆವು” ಕಾರ್ಯಾಗಾರ

ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಶರೀರ ಕ್ರೀಯಾ ಶಾಸ್ತ್ರ ವಿಭಾಗದಿಂದ “ನೆನಪು ಮತ್ತು ಮರೆವು” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು ಜೂ. 1ರಂದು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಅತಿಥಿಗಳಾದ ಡಾ. ರತ್ನಮಾಲಾ ಎಂ. ದೇಸಾಯಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ನೆನಪು ಮಾನವನಿಗೆ ಅತೀ ಮೌಲ್ಯವಾದ ಆಯುಧವಾಗಿದೆ. ಕಹಿ ನೆನಪುಗಳನ್ನು ಮರೆಯುವುದು ಒಂದು ವರದಾನವಾಗಿದೆ. ಗೊಂದಲಗಳು ಹೆಚ್ಚಾಗುವುದು ಮತ್ತು ಏಕಾಗ್ರತೆ ಕಡಿಮೆಯಾಗುವುದು ಒಳ್ಳೆಯ ಲಕ್ಷಣವಲ್ಲಾ. ಉತ್ತಮ ಶಿಕ್ಷಣ ನೀಡುವುದಕ್ಕೆ ಶಿಕ್ಷಕರು ಒಳ್ಳೆಯ ನೆನಪಿನ ಶಕ್ತಿ ಹೊಂದಿರಬೇಕು. ಉತ್ತಮ ನೆನಪು ಮತು ಒಳ್ಳೆಯ ಜ್ಞಾನವು ಜೀವನದಲ್ಲಿ ಮರುಕಳಿಸುತ್ತಿರಬೇಕು ಎಂದು ಹೇಳಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಕಾರ್ಯಾಗಾರದ ಸಂಘಟನಾ ಅಧ್ಯಕ್ಷರು ಮತ್ತು ಶರೀರ ಕ್ರೀಯಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗಲಕ್ಷ್ಮೀ ಉಪಸ್ಥಿತರಿದ್ದರು. ಡಾ. ಗ್ರಾಮೋಪಾಧ್ಯಾಯ ಭೂಷಣ, ಡಾ. ನಾಗಲಕ್ಷ್ಮೀ , ಡಾ. ಸಚಿನ್ ಬಿ.ಎಸ್., ಡಾ. ಮಲ್ಲಿಕಾರ್ಜುನಗೌಡರ ಅವರು ವಿಷಯದ ಕುರಿತು ತಜ್ಞ ಉಪನ್ಯಾಸವನ್ನು ನೀಡಿದರು. ಈ ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ಸುಮಾರು 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಘಟನಾ ಕಾರ್ಯದರ್ಶಿಗಳಾದ ಡಾ. ಶ್ವೇತಾ ಗೌಡಪ್ಪಣ್ಣವರ ಸ್ವಾಗತಿಸಿದರು. ವೈಷ್ಣವಿ ಕುಲಕರ್ಣಿ ಮತ್ತು ವೇಣು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಸಂಘಟನಾ ಕಾರ್ಯದರ್ಶಿಗಳಾದ ಡಾ. ವಿದ್ಯಾ ನಾಡಗೇರ ಅವರು ವಂದನಾರ್ಪಣೆ ಸಲ್ಲಿಸಿದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಉದ್ಘಾಟನೆ

Article Image

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಉದ್ಘಾಟನೆ

ಧರ್ಮಸ್ಥಳ: ಮಹಿಳೆಯರು ಬುದ್ಧಿವಂತರಾಗಿದ್ದು, ಸದಾ ಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೇ ಇಂದು ಅವರು ತಮಗೆ ಸಿಗುವ ಎಲ್ಲಾ ಅವಕಾಶ, ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಗುರುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಪುರುಷರಿಂದ ಆಶ್ರಯ ಬೇಕಾಗಿಲ್ಲ. ಸದಾ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯವಾಗಿದೆ. ಕುಟುಂಬ ಮತ್ತು ಸಮಾಜದ ಸುಗಮ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಲ್ಯದಿಂದಲೆ ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವುದು ಮಾತೆಯರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಆದುದರಿಂದಲೆ ಧರ್ಮಸ್ಥಳದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವಾಗ ಪೋಷಕರಿಗೂ ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಎಲ್ಲಾ ಶಾಖೆಗಳ ಕಾರ್ಯನಿರ್ವಹಣೆಯನ್ನು ಏಕಸೂತ್ರದಲ್ಲಿ ಪೋಣಿಸಿ ಸಂದರ್ಭೋಚಿತವಾಗಿ ಮಾಹಿತಿ, ಮಾರ್ಗದರ್ಶನ ನೀಡುವುದು ಒಕ್ಕೂಟದ ಜವಾಬ್ದಾರಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ-ಸಹಾಯ ಸಂಘಗಳಿಗೆ ಒಕ್ಕೂಟದ ನೇತೃತ್ವದಲ್ಲಿ ಸದಾ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಕಾಲಕ್ಕೆ ತಕ್ಕಂತೆ ಅವರವರ ಪ್ರಾಯಕ್ಕೆ ಅನುಗುಣವಾಗಿ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಂದಿನ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಾಧನೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಹೇಮಾವತಿ ಹೆಗ್ಗಡೆಯವರು ಬರೆದ “ಗೆಳತಿ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಚಲನಚಿತ್ರ ನಟಿ ಪದ್ಮಜಾ ರಾವ್ ಮಾತನಾಡಿ ಧರ್ಮಸ್ಥಳದಲ್ಲಿ ತಮಗೆಲ್ಲ ದೊರೆತ ರಾಜಮರ್ಯಾದೆಯೊಂದಿಗೆ ಗೌರವಪೂರ್ವಕ ಆತಿಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿಗಳಾದರೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿ ಬರುತ್ತದೆ. ಮಹಿಳಾ ಸಬಲೀಕರಣವೂ ಆಗುತ್ತದೆ ಎಂದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಸಂಚಿಕೆ ಬಿಡುಗಡೆಗೊಳಿಸಿದ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ದಾನ ಚಿಂತಾಮಣಿ ಅತ್ತಿಮಬ್ಬೆ, ಉಳ್ಳಾಲದ ರಾಣಿ ಅಬ್ಬಕ್ಕ, ಮೊದಲಾದವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮಹಿಳೆಯರು ಸದಾ ಮಾತನಾಡುವ ಮಾತೆಯರಾಗದೆ, ಚಿಂತೆಯನ್ನು ಬಿಟ್ಟು ಸದಾಚಿಂತನೆಯನ್ನು ಮಾಡುವ ಚಿಂತಾಮಣಿಗಳಾಗಬೇಕು. ಮಹಿಳೆಯರು ಸಮರ್ಪಣಾ ಮನೋಭಾವದಿಂದ ಆರೋಗ್ಯಪೂರ್ಣ, ಕುಟುಂಬ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಬೇಕು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಅವರು ಕಿವಿಮಾತು ಹೇಳಿದರು. ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುಶೀಮಾ ಯಶವಂತ್, ಛಾಯಾಚಿತ್ರಗ್ರಾಹಕಿ ಹುಣಸೂರಿನ ಛಾಯಾ ಸುನಿಲ್ ಮತ್ತು ಮೈಸೂರಿನ ಕುಮಾರಿ ಅನನ್ಯ ಜೈನ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷರಾದ ಹೇಮಾವತಿ ಹೆಗ್ಗಡೆಯವರು ಮಾತನಾಡಿ, ಜೈನಧರ್ಮದಲ್ಲಿ ತ್ಯಾಗ, ಅಹಿಂಸೆ ಮತ್ತು ವಿರಕ್ತಿಗೆ ಪ್ರಾಶಸ್ತ್ಯವಿದೆ. ಮಹಿಳೆಯರು ಕುಟುಂಬದ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಬಿಂದುವಾಗಿ ಮಾತ್ರವಲ್ಲದೆ ಸಿಂಧುವಾಗಿಯೂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ನಿರಂತರ ಪ್ರಗತಿಗೆ ಸಹಕರಿಸಬೇಕು. ಮಹಿಳೆಯರಿಗೆ ಮಂದಿರಗಳು ಪಾಠಶಾಲೆಯಾದರೆ, ಸಮಾಜ ಪ್ರಯೋಗ ಶಾಲೆಯಾಗಬೇಕು. ಮಹಿಳೆಯರ ತ್ಯಾಗ, ಸೇವೆ, ಪ್ರೀತಿ-ವಿಶ್ವಾಸಕ್ಕೆ, ಸಮಾಜಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸೇವೆಯಿಂದ ಸಿಗುವ ತೃಪ್ತಿ, ಸಂತೋಷ ಮತ್ತು ನೆಮ್ಮದಿಯೇ ಮಹಿಳೆಯರಿಗೆ ದೊರಕುವ ನಿಜವಾದ ಪ್ರಶಸ್ತಿ ಎಂದು ಅಭಿಪ್ರಾಯಪಟ್ಟರು. ಮಹಿಳೆಯರು ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರವಂತರಾಗಿ ರೂಪಿಸಬೇಕು ಎಂದು ಅವರು ಹೇಳಿದರು. ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮಿನಿ ಪದ್ಮರಾಜ್ ಸ್ವಾಗತಿಸಿದರು. ಜಯಶ್ರೀ ಧನ್ಯವಾದವಿತ್ತರು. ಕುಮುದಾ ನಾಗಭೂಷಣ್ ಕಾರ್ಯಕ್ರಮ ನಿರ್ವಹಿಸಿದರು.

”ಕ್ರೀವಾ-2024” ಸಾಂಸ್ಕೃತಿಕ ಕಾರ್ಯಕ್ರಮ

Article Image

”ಕ್ರೀವಾ-2024” ಸಾಂಸ್ಕೃತಿಕ ಕಾರ್ಯಕ್ರಮ

ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಿಗೆ “ಕ್ರೀವಾ 2024”-“ವಸಂತ- ಹೊಸ ಹೆಜ್ಜೆ, ಹೊಸ ಆರಂಭ” ಎಂಬ ಧ್ಯೇಯೆಯೊಂದಿಗೆ ಮೇ 29ರಿಂದ ಜೂನ್ 1, 2024ವರೆಗೆ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು "ಕ್ರೀವಾ 2024" ಕಲೆ, ಸಂಸ್ಕೃತಿ ಮತ್ತು ಸಂಗೀತಗಳನ್ನೊಳಗೊಂಡ ವಾರ್ಷಿಕ ಸಾಂಸ್ಕೃತಿಕ ವೇದಿಕೆಯಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಮತ್ತು ನರರೋಗ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ಬಣಕಾರ ಮುಖ್ಯ ಅತಿಥಿಗಳಾಗಿದ್ದು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ: ಪ್ರಕೃತಿಯ ಸಂರಕ್ಷಣೆಯು ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಬೇಕು ಮತ್ತು ಯಶಸ್ಸು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಾವು ಮಾಡುವ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡಿವುದರೊಂದಿಗೆ ಇತರರನ್ನು ತೃಪ್ತಿಪಡಿಸಬೇಕು. ನಿರಂತರ ಪರಿಶ್ರಮ ಮತ್ತು ಉತ್ತಮ ಅಭ್ಯಾಸದಿಂದ ಸಾಧನೆಗಳ ಶಿಖರವನ್ನೇರಬಹುದು. ನಾವು ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಿಂದ ಮುನ್ನಡೆಸಬೇಕು. ವಿಶಾಲ ಮನೋಭಾವನೆಯಿಂದ ವಿದ್ಯಾರ್ಥಿಗಳು ಅತ್ಯುತ್ತಮ ಸೇವೆಯನ್ನು ನೀಡಲು ಸಾಧ್ಯ. ನೈತಿಕತೆ ಮತ್ತು ಉದ್ದೇಶ ಶಿಕ್ಷಣದ ಪ್ರಮುಖ ಉದ್ದೇಶವಾಗಿರಬೇಕು. ಎಸ್. ಡಿ. ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು “ಕ್ರೀವಾ-2024” ಲಾಂಛನವನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸಹ ಉಪಕುಲಪತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ, ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣವರು ಅತಿಥಿಗಳನ್ನು ಸ್ವಾಗತಿಸಿದರು. ರಶ್ಮಿ ಭಟ್ ರವರು ಕ್ರೀವಾದ ಅವಲೋಕನ ನೀಡಿದರು. ಚಾಂದನಿ ಮತ್ತು ಅಂಕಿತ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಜ್ಯೋತಿ ಜೀವನ್‌ರವರು ವಂದನಾರ್ಪಣೆ ಸಲ್ಲಿಸಿದರು.

ಜೈನ ಬಸದಿಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರಿಗೆ ಮನವಿ

Article Image

ಜೈನ ಬಸದಿಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರಿಗೆ ಮನವಿ

ಬೆಳ್ತಂಗಡಿ; ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಗೌರವಾನ್ವಿತ ಸಿದ್ದರಾಮಯ್ಯನವರನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭೇಟಿ ಮಾಡಿ ಜೈನ ಬಸದಿಗಳ ಅಭಿವೃದ್ಧಿಗಳ ಬಗ್ಗೆ ಇರುವ ಸಮಸ್ಯೆಗಳನ್ನು ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ನಾಭಿರಾಜ್ ಜೈನ್ ಬೆಂಗಳೂರು, ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ, ಸುದರ್ಶನ್ ಜೈನ್ ಬಂಟ್ವಾಳ, ವಿಜಯಕುಮಾರ್ ಕಾರ್ಯತ್ತಡ್ಕ, ಧನ ಕೀರ್ತಿ ಶೆಟ್ಟಿ ಧರ್ಮಸ್ಥಳ, ಶಶಿಕಿರಣ್ ಜೈನ್ ಬೆಳ್ತಂಗಡಿ, ಪಣಿರಾಜ್ ಜೈನ್ ಕೊಕ್ಕಡ, ಪ್ರಜ್ವಲ್ ಜೈನ್ ಅಳದoಗಡಿ ಮುಂತಾದವರಿದ್ದರು.

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ

Article Image

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಅಪರಾಹ್ನ ಶ್ರೀ ಪದ್ಮಾವತಿದೇವಿ ಆರಾಧನೆ, ಶ್ರಾವಕಿಯರಿಂದ ಸಹಸ್ರನಾಮ ಕುಂಕುಮಾರ್ಚನೆ, ಪದ್ಮಾವತಿದೇವಿ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳು ನಡೆದವು. ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ೧೦೮ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ ಹೆಗ್ಗಡೆಯವರು, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಮೂಡುಬಿದಿರೆ: 3ನೇ ವಾರ್ಷಿಕೋತ್ಸವ

Article Image

ಮೂಡುಬಿದಿರೆ: 3ನೇ ವಾರ್ಷಿಕೋತ್ಸವ

2022ರಂದು ಜೀರ್ಣೋದ್ಧಾರಗೊಳಿಸಿ, ಪ್ರತಿಷ್ಠಾಪಿಸಿದ ಮೂಡುಬಿದಿರೆ ಪಡುಬಸದಿ ಭಗವಾನ್ ಶ್ರೀಶ್ರೀಶ್ರೀ ವಿಮಲ ಶ್ರೀಶ್ರೀಶ್ರೀ ಅನಂತ, ಶ್ರೀಶ್ರೀಶ್ರೀ ಧರ್ಮನಾಥ ಸ್ವಾಮಿಯ ಬಿಂಬ ಪ್ರತಿಷ್ಠಾ ಮಹೋತ್ಸವದ 3ನೇ ವಾರ್ಷಿಕೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ನಾಳೆ (ಮೇ 24) ವಿಮಾನಶುದ್ಧಿ, ಶ್ರುತ ಪೂಜೆ, ಭ| ಶೀತಲ ತೀರ್ಥಂಕರ-ಶ್ರೀ ಬ್ರಹ್ಮಯಕ್ಷ ಆರಾಧನೆ- ಶ್ರೀ ಪದ್ಮಾವತಿ ಷೋಡಶೋಪಚಾರ ಪೂಜೆ, ಉತ್ಸವ ಮತ್ತು ಧಾರ್ಮಿಕ ಸಭಾಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

Article Image

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ(ಮೇ.21) ತೋರಣ ಮುಹೂರ್ತ, ವಿಮಾನಶುದ್ಧಿ, ಆರಾಧನಾ ಪೂರ್ವಕ ಕ್ಷೇತ್ರಪಾಲ ಪ್ರತಿಷ್ಠೆ, ನವಕಲಶ ಅಭಿಷೇಕ ಮತ್ತು ನಾಂದಿಮಂಗಲ ಪೂಜಾವಿಧಾನ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಮತ್ತು ಊರಿನ ಶ್ರಾವಕರು- ಶ್ರಾವಕಿಯರು ಉಪಸ್ಥಿತರಿದ್ದರು. ಇಂದಿನ ಕಾರ್ಯಕ್ರಮ: ಇಂದು ಬುಧವಾರ ವಾಸ್ತುಪೂಜಾ ವಿಧಾನ, ಜಿನಸಹಸ್ರನಾಮ ಪುಷ್ಪಾರ್ಚನೆ, ಷೋಡಶ ಕಲಶಾಭಿಷೇಕ, ನವಗ್ರಹ ಮಹಾಶಾಂತಿ, ಮಹಾಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ. ನಾಳೆ ಗುರುವಾರ ಅಪರಾಹ್ನ ಗಂಟೆ 2.30 ರಿಂದ ಮಹಾಮಾತೆ ಶ್ರೀಪದ್ಮಾವತಿ ಅಮ್ಮನವರ ಆರಾಧನೆ, ಸಹಸ್ರನಾಮ ಕುಂಕುಮಾರ್ಚನೆ, ಪದ್ಮಾವತಿ ದೇವಿ ಪ್ರತಿಷ್ಠೆ, ಭವ್ಯ ಅಗ್ರೋದಕ ಮೆರವಣಿಗೆ ಮತ್ತು ಉತ್ಸವ ಸಹಿತ ಭಗವಾನ್ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.

ಧರ್ಮಸ್ಥಳ ಮ್ಯೂಸಿಯಂಗೆ ಕಾರ್ ಕೊಡುಗೆ ನೀಡಿದ ಭಟ್ಟಾರಕ ಶ್ರೀಗಳವರು

Article Image

ಧರ್ಮಸ್ಥಳ ಮ್ಯೂಸಿಯಂಗೆ ಕಾರ್ ಕೊಡುಗೆ ನೀಡಿದ ಭಟ್ಟಾರಕ ಶ್ರೀಗಳವರು

ಮೂಡುಬಿದಿರೆ: ಇಲ್ಲಿನ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು 2003ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲಿಸ್ ವಾಹನವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕಾರ್ ಮ್ಯೂಸಿಯಂಗೆ ವಾಹನ ವರ್ಗಾವಣೆ ಸಹಿ ಮಾಡಿ ವರ್ಗಾಯಿಸಿದರು. ೧೦೮ ಶಾಂತಿ ಸಾಗರ ಆಚಾರ್ಯ ಪದರೋಹಣ ಶತಾಬ್ಧಿ ಮಹೋತ್ಸವ ಶ್ರೀಮಠದ ವತಿಯಿಂದ ವೇಣೂರು ಮಹಾಮಸ್ತಕಾಭಿಷೇಕ ಸಂದರ್ಭ ನೆರವೇರಿಸಿದ ನೆನಪಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿಯನ್ನು ಸ್ವಾಮೀಜಿಗಳವರು ಗೌರವಿಸಿ, ಅಭಿನಂದನಾ ಪತ್ರ, ಶ್ರೀಫಲ ನೀಡಿ ಹರಸಿದರು. ಹೆಗ್ಗಡೆಯವರು ವಾಹನ ವಸ್ತು ಸಂಗ್ರಹಾಲಯಕ್ಕೆ ಮೋಟಾರ್ ಕಾರ್ ಕೊಡುಗೆ ನೀಡಿದ ಸ್ವಾಮೀಜಿಗಳವರಿಗೆ ಅಭಿನಂದನಾ ಪತ್ರ ನೀಡಿದರು. ಶೈಲೇಂದ್ರ ಜೈನ್, ಎಂ. ಬಾಹುಬಲಿ ಪ್ರಸಾದ್, ಪ್ರವೀಣ್ ಇಂದ್ರ ವೇಣೂರು, ನಾಗವರ್ಮ ಆದಿತ್ಯ ಜೈನ್ ಉಪಸ್ಥಿತರಿದ್ದರು.

ಮಂಗಳೂರು: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮಂಗಳೂರು: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಮಂಗಳೂರು ಭಾರತೀಯ ಜೈನ್ ಮಿಲನ್ ಮಾಸಿಕ ಸಭೆಯು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಜೈನ್ ಮಿಲನ್ ಅಧ್ಯಕ್ಷರಾದ ರತ್ನಾಕರ್ ಜೈನ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಲಯ 8ರ ರಾಷ್ಟ್ರೀಯ ಉಪ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಧರ್ಮಸ್ಥಳ ಕ್ಷೇತ್ರದ ರಾಜೇಂದ್ರ ಕುಮಾರ್ ಭಾಗವಹಿಸಿದ್ದರು. ಮಂಗಳೂರು ಜೈನ್ ಸಮಾಜದ ಹಿರಿಯ ವಕೀಲರು ಹಾಗೂ ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷರಾದ ಎಲ್.ಡಿ. ಬಲ್ಲಾಳ್ ಮತ್ತು ಹಿರಿಯ ಜೈನ ವಿದ್ವಾಂಸ ಎಂ.ಕೆ. ಕುಟುಂಬದ ನಿರ್ಮಲ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಮಿಲನ್ ಸಭೆಯಲ್ಲಿ ನೂತನವಾಗಿ ಸೇರ್ಪಡೆಗೊಂಡ 10 ಸದಸ್ಯರನ್ನು ಸ್ವಾಗತಿಸಿ, ಪ್ರಮಾಣವಚನ ನೀಡಿದ ವಲಯ 8ರ ರಾಷ್ಟ್ರೀಯ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಿಲನ್ ಬಗೆಗೆನ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು. ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿ ಸಾಧನೆ ಮಾಡಿದ ನಗರದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯದರ್ಶಿ ವೈಶಾಲಿ ಪಡಿವಾಳ್, ಪ್ರಿಯಾ ಸುದೇಶ್ ವಂದಿಸಿದರು.

ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ: ಬಿ. ಸೋಮ ಶೇಖರ ಶೆಟ್ಟಿ

Article Image

ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ: ಬಿ. ಸೋಮ ಶೇಖರ ಶೆಟ್ಟಿ

ಉಜಿರೆ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಯ ಮಾಸಿಕ ಸಭೆಯು ಮಿಲನ್ ಅಧ್ಯಕ್ಷರಾದ ಡಾಕ್ಟರ್ ನವೀನ್ ಕುಮಾರ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಜೈನ್ ಮಿಲನ್ ನ ಕಾರ್ಯ ಕ್ರಮಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸವಿವರವಾಗಿ ಅಧ್ಯಕ್ಷರು ವಿವರಿಸಿ ತಿಳಿಸಿದರು. ಭುಜಬಲಿಯವರು ಯಶಸ್ವಿ ಮಾಸಿಕ ಸಭೆ ನಡೆಸುವ ಬಗ್ಗೆ ಸಲಹೆ ನೀಡಿದರು. ಧೀಮಹಿ ಮಹಿಳಾ ಸಮಾಜದ ಅಧ್ಯಕ್ಷೆ ಡಾಕ್ಟರ್ ರಜತ ಅವರು ಮಾತನಾಡಿ ತಿಂಗಳಿಗೆ ಒಂದು ಸಲ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಇಂತಹ ಸಭೆಗಳಿಂದ ಅವಕಾಶ ದೊರೆಯುತ್ತದೆ ಮತ್ತು ಇದನ್ನು ಎಲ್ಲಾ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಿಲನ್ ನಿರ್ದೇಶಕರಾದ ಬಿ. ಸೋಮ ಶೇಖರ ಶೆಟ್ಟಿ ಅವರು ಮಾತನಾಡಿ ಮಿಲನ್ ಸಂಘಟನೆಯ ಮಹತ್ವ ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸಂಘಟನೆ ಬಲಗೊಳಿಸುವಲ್ಲಿ ಸದಸ್ಯರ ಸಹಕಾರವನ್ನು ಕೋರಿದರು, ವೇದಿಕೆಯಲ್ಲಿ ಮುನಿರಾಜ ಅಜ್ರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು, ನಿಖಿತ್ ವಂದಿಸಿದರು.

ಎಕ್ಸಲೆಂಟ್: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

Article Image

ಎಕ್ಸಲೆಂಟ್: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು 100% ಫಲಿತಾಂಶವನ್ನು ದಾಖಲಿಸುವುದರೊಂದಿಗೆ ಆದಿತ್ಯ ಆರ್. ಪುಣಚಿತ್ತಾಯ 620 ಅಂಕ ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನವನ್ನು ಪಡೆದಿರುತ್ತಾರೆ. ಉಳಿದಂತೆ ಭಾರ್ಗವ ಭಟ್ (614), ಪೂರ್ಣಚಂದ್ರ ವಿ. (614), ಪೂರ್ವಿಕ್ (607), ತುಷಾರ್ (607), ಅಭಿಷೇಕ್ ಎಂ.ಸಿ. (605), ಹಿಮಧ್ವನಿ (601), ಕರಾಂಶು (601), ಕೃತಿಕಾ ಕಾಮತ್ (600), ಪವನ್ ಕಲ್ಯಾಣ್ (601) ಅಂಕವನ್ನು ಗಳಿಸಿರುತ್ತಾರೆ. ಅದೇ ರೀತಿ ವರುಣ್ ಆರ್. (599), ದ್ರುವ ಡೋಂಗ್ರೆ (598), ಯಶ್ ಭಿಡೆ (597), ಯಶಸ್ವಿನಿ ಎಸ್. (597), ಧನುಷ್ ಎಸ್. (595), ಪ್ರತೀಶ್ ಗೌಡ (595), ಶೆಝಾ ಶಕೀರ್ (595), ತನೀಷ್ ಜೈನ್ (595), ತನ್ಮಯಿ ಕೋರಿ (595), ಸಂಜೀತ್ ವೈ (594), ಅಕ್ಷರಾ (592), ಚೇತನ್ ಜೆ. (592), ಪ್ರೇರಣಾ (592), ಮೌಲ್ಯಾ ವೈ ಆರ್ ಜೈನ್ (591), ಡಿ. ಎಂ. ತನೀಷ್ (591), ಭವೇಶ್ ಜೆ. (589), ಅನ್ವಿತಾ ಕಾಮತ್ (588), ಉದಯ ಇ. (588), ಆರುಷ್ ಸಿ. (586), ಸುಜಲ್ ಶೆಟ್ಟಿ (586), ಪರಾಶ್ ಸಚಿನ್ (586), ಮೋನಿಷಾ ಆರ್. (582), ಪೂಜಿತ್ ಎಸ್. (582), ಪ್ರಾರ್ಥನಾ ಆರ್. (581), ತನನ್ ಗೌಡ (581), ಕಾರ್ತಿಕ್ ಸತ್ಯಪ್ಪ (580), ಅಂಕಗಳನ್ನು ಪಡೆಯುವುದರೊಂದಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ. ಹಾಜರಾದ 161 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಮೋಘ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ, ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಈ ಸಾಧನೆಗೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಯಾದ ರಶ್ಮಿತಾ ಜೈನ್, ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್ ಹಾಗೂ ಶೈಕ್ಷಣಿಕ ನಿರ್ದೇಶಕರಾದ ಪುಷ್ಪರಾಜ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 100 ಫಲಿತಾಂಶ

Article Image

ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 100 ಫಲಿತಾಂಶ

ಧರ್ಮಸ್ಥಳ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿದ್ದು, ಒಟ್ಟು 54 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳಿಗೆ ಏ+ ಹಾಗೂ 20 ವಿದ್ಯಾರ್ಥಿಗಳಿಗೆ ಏ ಗ್ರೇಡ್ ಲಭಿಸಿದ್ದು ಒಟ್ಟಾರೆಯಾಗಿ 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 23 ಪ್ರಥಮ ದರ್ಜೆ, ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಅತ್ಯಧಿಕ 618 ಅಂಕಗಳೊಂದಿಗೆ ಶೇಕಡ 100 ಫಲಿತಾಂಶ ಲಭ್ಯವಾಗಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಬಹಳ ಸಂತಸ ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಸಂತಸ ವ್ಯಕ್ತಪಡಿಸಿದ್ದಾರೆ. ಸಾಧನೆ ಮಾಡಿರುವ ಮಕ್ಕಳ ವಿವರ ಇಂತಿವೆ: ಹಂಸಿನಿ ಭಿಡೆ-618(98.9%), ಆಶಿತಾ-606(97%), ಭಾರ್ಗವಿ-604(96.6%), ಶ್ರಿವತ್ಸ ಯು.-598(95.7%), ಸುಮಿತ್ ಎಸ್.-597(95.5%), ಚಿನ್ಮಯಿ-596(95.4%), ಸುಶಾನ್-596(95.4%), ಸಮನ್ವಿ ಪಿ.-593(94.9%), ಅನ್ವಿತಾ ಹೆಬ್ಬಾರ್ ಎಮ್-586(93.8%), ಅಶ್ವಿಜ್-578(92.5%), ದೀಕ್ಷಾ-578(92.5%), ಸಾನ್ವಿ ಜೈನ್-570(91.2%), ಚಿನ್ನಮ್ಮ-569(91%), ಜೆಸ್ವಿನ್ ಕೆ. ಜೆ.-567(90.7%), ಅನಘಾ ಎಮ್.ಡಿ-558(89.3%), ಕುಶಾಲ್ ಆರಾಧ್ಯ-558(89.3%), ಅನಿಕಾ ಪಿ.-557(89.1%), ದೀಕ್ಷಾ ರೋಸ್-555(88.8%), ನಿಶಾಂತ್-547(87.5%), ಪೂರ್ವಿಕಾ ಆರ್.-547(87.5%), ಜೆಸ್ನಾ ಎಮ್. ಡಿ.-546(87.4%), ಆದಿತ್ಯಾ ಎಚ್. ಎಸ್.-544(87%), ರೇವಂತ್ ಮನೋಹರ್ ರಾವ್-543(86.9%), ಅಭಿಜ್ನಾನ್ ಎ. ಶೆಟ್ಟಿ-542(86.7%), ಅಪೇಕ್ಷಾ- 542(86.7%), ಅಶ್ವಲ್ ಹೆಬ್ಬಾರ್ ಎಮ್.-540(86.4%), ಪವಿತ್ರಾ ಜೈನ್-537 (85.9%), ಹರ್ಷಿತಾ ವಿ. ಆರ್.-533(85.3%), ನಿವೇದ್ಯಾ ಆರ್. ಬಿ.-533(85.3%).

ಮೂಡುಬಿದಿರೆ: ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, 1 ಕೋಟಿ ರೂ. ವಿದ್ಯಾರ್ಥಿವೇತನ

Article Image

ಮೂಡುಬಿದಿರೆ: ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, 1 ಕೋಟಿ ರೂ. ವಿದ್ಯಾರ್ಥಿವೇತನ

ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿರುವ ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆಯುವ ಆರ್ಥಿಕವಾಗಿ ಹಿಂದುಳಿದಿರುವ, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು 1 ಕೋಟಿ ರೂ ವಿದ್ಯಾರ್ಥಿವೇತನವನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಘೋಷಿಸಿದ್ದಾರೆ. ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಲು ಉದ್ದೇಶಿಸಿರುವ ಬಡ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡುವ ಉದ್ದೇಶದಿಂದ 10ನೇ ತರಗತಿಯಲ್ಲಿ 98% ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಗೆ ವಿದ್ಯಾರ್ಥಿವೇತನದ ಮೂಲಕ ಶಿಕ್ಷಣ ನೀಡಲು ಸಂಸ್ಥೆ ತೀರ್ಮಾನಿಸಿದೆ ಈ ಅವಕಾಶವನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು. ಸಂಸ್ಥೆಯು ಪಿಯುಸಿ ಶಿಕ್ಷಣದ ಜೊತೆಗೆ ಮೆಡಿಕಲ್ ಹಾಗೂ ಉನ್ನತ ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ನೀಟ್/ಜೆಇಇ/ಸಿಇಟಿ/ಸಿಎ ಮುಂತಾದ ತರಬೇತಿಯನ್ನು ಕೊಡಲು ಅತ್ಯುನ್ನತ ತರಬೇತಿ ಕೌಶಲ್ಯವನ್ನು ಪಡೆದಿರುವ ಅಧ್ಯಾಪಕ ವೃಂದವನ್ನು ಹೊಂದಿರುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ 20 ರಾಜ್ಯಮಟ್ಟದ ರ‍್ಯಾಂಕ್‌ಗಳಲ್ಲಿ 15 ರ‍್ಯಾಂಕ್‌ಗಳನ್ನು ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಪಡೆದು ಅದ್ವಿತೀಯ ಸಾಧನೆಯನ್ನು ಮಾಡಿರುತ್ತಾರೆ. ಪ್ರತೀ ವರ್ಷವೂ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ AIIMS, JIPMER, BOMBAY IIT, CHENAI IIT, BMC, MMC ಸೇರುತ್ತಿರುವುದು ಸಂಸ್ಥೆಯು ನೀಡುತ್ತಿರುವ ಅತ್ಯುತ್ತಮ ತರಬೇತಿ ವ್ಯವಸ್ಥೆಗೆ ಅತ್ಯುನ್ನತ ನಿದರ್ಶನವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಬೋರ್ಡ್, ಐಸಿಎಸ್‌ಐ ಮತ್ತು ಸಿಬಿಎಸ್‌ಇ ನಡೆಸುವ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 98ಕ್ಕಿಂತ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳು ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿವೇತನದ ಮೂಲಕ ಶಿಕ್ಷಣ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೂಡುಬಿದಿರೆ ಕಲ್ಲಬೆಟ್ಟುವಿನ ಸಂಸ್ಥೆಯ ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಸಂಸ್ಥೆಯ ವೆಬ್‌ಸೈಟ್ – www.excellentmoodbidri.in

ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕ

Article Image

ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕ

ಕಾರ್ಕಳ ತಾಲೂಕಿನ ಶಿರ್ಲಾಲು ಬಸದಿಯ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ಮತ್ತು ಮಹಾಮಾತೆ ಶ್ರಿ ಪದ್ಮಾವತಿ ದೇವಿಯ ರಜತ ರಥಯಾತ್ರಾ ಮಹೋತ್ಸವ, ಸಿದ್ಧಗಿರಿ ಕ್ಷೇತ್ರದ ಭ|| ಶ್ರೀ ಆದಿನಾಥ ಸ್ವಾಮಿ ಮತ್ತು ಭ|| ಶ್ರೀ ಭರತ ಕೇವಲೀ ಸ್ವಾಮಿ ಹಾಗೂ ಭ|| ಶ್ರೀ ಬಾಹುಬಲಿ ಕೇವಲಿ ಸ್ವಾಮಿ ಜಿನ ಬಿಂಬಗಳಿಗೆ 108 ಕಲಶಗಳಿಂದ ಅಭಿಷೇಕ ಮತ್ತು ಮಸ್ತಕಾಭಿಷೇಕ ಮಹೋತ್ಸವವು ಶ್ರವಣಬೆಳಗೊಳ ಶ್ರೀ ಜೈನ ಮಠದ ಸ್ವರ್ಗೀಯ ಪ. ಪೂ. ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪ್ರೇರಣೆಯೊಂದಿಗೆ, ಕಾರ್ಕಳ ಶ್ರೀ ಜೈನ ಮಠದ ಪ. ಪೂ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವದಲ್ಲಿ ಮತ್ತು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಭಾರತಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ಆಶೀರ್ವಚನದೊಂದಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ದಿನಾಂಕ 8-5-2024ನೇ ಬುಧವಾರ ಮೊದಲ್ಗೊಂಡು 10-5-2024ನೇ ಶನಿವಾರದಂದು ಸಂಪನ್ನಗೊಳ್ಳಲಿರುವುದು. ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಪರಿಸರದಲ್ಲಿ ಭ|| ಶ್ರೀ ಆದಿನಾಥ ಸ್ವಾಮಿ ಮತ್ತು ಭ|| ಶ್ರೀ ಭರತ ಕೇವಲೀ ಸ್ವಾಮಿ ಹಾಗೂ ಭ|| ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಗಳನ್ನು ‘ಧರ್ಮರತ್ನಾಕರ’ ಶಿರ್ಲಾಲು ದೊಡ್ಡಮನೆ ಸ್ವರ್ಗಿಯ ರತ್ನವರ್ಮ ಪೂವಣಿ ದಂಪತಿಗಳು ದಿನಾಂಕ 18-02-2013ರಲ್ಲಿ ಪ್ರತಿಷ್ಠಾಪಿಸಿದ್ದಾರೆ

ವೇಣೂರು, ಮೇ 4: ಮಹಾಮಸ್ತಕಾಭಿಷೇಕ ಸಂಪನ್ನ

Article Image

ವೇಣೂರು, ಮೇ 4: ಮಹಾಮಸ್ತಕಾಭಿಷೇಕ ಸಂಪನ್ನ

ವೇಣೂರು ಫಲ್ಗುಣಿ ತಟದಲ್ಲಿ ನೆಲೆಸಿರುವ ವಿರಾಟ ವಿರಾಗಿ ಭಗವಾನ್ ಬಾಹುಬಲಿ ಸ್ವಾಮಿಗೆ ಫೆ. 22ರಿಂದ ಆರಂಭಗೊಂಡು ಮಾ. 1ರ ವರೆಗೆ ನೆರವೇರಿದ ಮಹಾಮಸ್ತಕಾಭಿಷೇಕದ ಬಳಿಕ ಪ್ರಮುಖ ದಿನಗಳಲ್ಲಿ ನೆರವೇರುವ ಮಸ್ತಕಾಭಿಷೇಕಗಳಲ್ಲಿ ಕೊನೆಯ ಮಹಾಮಸ್ತಕಾಭಿಷೇಕವು ಶನಿವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಸ್ತಕಾಭಿಷೇಕ ಪ್ರಾರಂಭವಾಗುವ ಮೊದಲು ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಹಾಗೂ ಚಾರಿತ್ರ ಚಕ್ರವರ್ತಿ ೧೦೮ ಶಾಂತಿ ಸಾಗರ ಮುನಿಮಹಾರಾಜರ ಆಚಾರ್ಯ ಪದರೋಹಣ, ಆಚಾರ್ಯ ೧೦೮ ವಿದ್ಯಾನಂದ ಮುನಿಮಹಾರಾಜರ ಜನ್ಮ ಶತಾಬ್ಧಿ ನಿಮಿತ್ತ ವೇಣೂರು ಪಾರ್ಶ್ವನಾಥ ಬಸದಿಯಿಂದ ಕಲ್ಲುಬಸದಿವರೆಗೆ ರಜತ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ, ಪ್ರಥಮ ಕಲಶವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಪಡುಬೀಡು ಕಿನ್ಯಕ್ಕ ಅರಸ ರತ್ನಕರ ಬಲ್ಲಾಳ್, ಸತೀಶ್ ಪಡಿವಾಳ್, ಶ್ರೀಮಂದರ್ ಅರಿಗಾ ಕುಳವಳಿಕೆ ಕಡಬ, ಸಂಜಯಂತ್ ಕುಮಾರ್, ಧನಕೀರ್ತಿ ಬಲಿಪ ಕ್ರಮವಾಗಿ ವಿವಿಧ ಕಲಶ ನೆರವೇರಿಸಿದರು. ಮೂಡುಬಿದಿರೆ ಜೈನ ಮಠದ ವತಿಯಿಂದ ಅಮೆರಿಕಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಅಷ್ಟ ಗಂಧ ಅಭಿಷೇಕ ವಹಿಸಿಕೊಂಡ ಡಾ. ವಸಂತ ಕುಮಾರಯ್ಯ ದಂಪತಿ, ಅಜಿಲ ಅರಸರು, ಪ್ರವೀಣ್ ಇಂದ್ರ, ಅಭಯ ಚಂದ್ರ ಜೈನ್, ಪುಷ್ಪರಾಜ್ ಜೈನ್, ಶಿವಪ್ರಸಾದ್ ಅಜಿಲ ಹಾಗೂ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾನಾ ಮಹಾನೀಯರನ್ನು ಸ್ವಾಮೀಜಿಯವರು ಗೌರವಿಸಿದರು. ಚಂದನ, ಸರ್ವ ಔಷಧ, ಸುಗಂಧ ಕಲಶ, ಕನಕವೃಷ್ಟಿ, ಪುಷ್ಪವೃಷ್ಟಿ ಈ ಬಾರಿಯ ಕೊನೆಯ ಮಸ್ತಕಾಭಿಷೇಕದಂದು ಹೆಚ್ಚುವರಿ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. 2036ರಲ್ಲಿ ಮುಂದಿನ ಅಭಿಷೇಕ: ವೇಣೂರಿನಲ್ಲಿ 12 ವರ್ಷಗಳ ಬಳಿಕ ನಡೆದ ತ್ಯಾಗವೀರ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸರ್ವಜನ ಶಾಂತಿಯ ಸಂದೇಶವಾಗಿ ಮೂಡಿಬಂದಿದೆ. 30 ಉಪಸಮಿತಿಗಳ ಅಚ್ಚುಕಟ್ಟಿನ ನಿರ್ವಹಣೆಯೊಂದಿಗೆ 9 ದಿನಗಳು ಇರುಳ ಬೆಳಕಲ್ಲಿ ನಡೆದ ಮಹಾಮಸ್ತಕಾಭಿಷೇಕ ಸ್ವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಬಳಿಕ ಪ್ರಮುಖ ದಿನಗಳಲ್ಲಿ ನೆರವೇರಿದ ಅಭಿಷೇಕದ ಕೊನೆಯ ಪ್ರಕ್ರಿಯೆ ಮೇ 4ರಂದು ಸಂಪನ್ನಗೊಂಡಿತು. ಮುಂದೆ ವೇಣೂರಿನ ವಿರಾಟ ವಿರಾಗಿಗೆ 2036ರಲ್ಲಿ ಮಹಾಮಸ್ತಕಾಭಿಷೇಕ ನೆರವೇರಲಿದೆ.

ನಾರಾವಿ ಬಸದಿ: ಧಾಮಸಂಪ್ರೋಕ್ಷಣಾ ಮತ್ತು ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ ಬಸದಿ: ಧಾಮಸಂಪ್ರೋಕ್ಷಣಾ ಮತ್ತು ಪ್ರತಿಷ್ಠಾ ಮಹೋತ್ಸವ

ತಮ್ಮ ಪ್ರದೇಶದ ಮಠದ ಭಟ್ಟಾರಕರ ಅನುಮತಿ ಇಲ್ಲದೆ ಶ್ರಾವಕರು ಯಾವುದೇ ಸಂಪ್ರದಾಯ, ಪೂಜಾವಿಧಾನ, ಧಾರ್ಮಿಕ ಸಂಪ್ರದಾಯ ಬದಲಾಯಿಸಬಾರದು ಎಂದು ಮೂಡಬಿದಿರೆ ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳವರು ಭಾನುವಾರ(ಮೇ 5) ನಾರಾವಿ ಬಸದಿಯಲ್ಲಿ ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ನಿರ್ಮಲ ಮನಸ್ಸಿನಿಂದ ದೇವರಪೂಜೆ, ಗುರುಗಳ ಸೇವೆ ಮಾಡಿ, ಸ್ವಾಧ್ಯಾಯದ ಮೂಲಕ ತಮ್ಮ ವರ್ತನೆಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. ಪಂಚೇಂದ್ರಿಯಗಳನ್ನು ಸತ್ಕಾರ್ಯಗಳಲ್ಲಿ ಬಳಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು ಎಂದು ಕಾರ್ಕಳ ಶ್ರೀ ಜೈನ ಮಠದ ಪರಮ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಧಾರ್ಮಿಕ ಉಪನ್ಯಾಸ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳರವರು ಮಾತನಾಡಿ, ಧಾಮಸಂಪ್ರೋಕ್ಷಣೆ ಸಂದರ್ಭದಲ್ಲಿ ನಮ್ಮನ್ನು ನಾವು ಶುದ್ಧಿಕರಿಸಿಕೊಳ್ಳಬೇಕು. ಆಚಾರ್ಯರುಗಳು ಬರೆದ ಧಾರ್ಮಿಕ ಗ್ರಂಥಗಳ ಸ್ವಾಧ್ಯಾಯ ಮಾಡಿ, ಮಕ್ಕಳಿಗೂ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ ಅಹಿಂಸೆ ಮತ್ತು ತ್ಯಾಗ ಜೈನಧರ್ಮದ ವಿಶೇಷ ತತ್ವಗಳಾಗಿದ್ದು ಎಲ್ಲರೂ ಇದನ್ನು ಅನುಸರಿಸಬೇಕು. ಧರ್ಮದ ಚೌಕಟ್ಟಿನೊಳಗೆ ಪುರುಷಾರ್ಥಗಳನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಮಂಗಳೂರಿನ ಪುಷ್ಪರಾಜ ಜೈನ್, ಬಂಟ್ವಾಳದ ಸುದರ್ಶನ ಜೈನ್ ಮತ್ತು ನಿವೃತ್ತ ಪ್ರಾಂಶುಪಾಲರಾದ ರಾಜವೀರ ಇಂದ್ರ ಶುಭಾಶಂಸನೆ ಮಾಡಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಅಧ್ಯಕ್ಷತೆ ವಹಿಸಿದ್ದರು. ರಾಜವೀರ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಧನ್ಯವಾದವಿತ್ತರು. ನಿರಂಜನ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಭವ್ಯ ಅಗ್ರೋದಕ ಮೆರವಣಿಗೆ: ಅರಸಕಟ್ಟೆಯಿಂದ ನಾರಾವಿ ಬಸದಿವರೆಗೆ ಮೂರು ಕಿ.ಮೀ. ದೂರ ನಡೆದ ಭವ್ಯ ಮೆರವಣಿಗೆಯಲ್ಲಿ 24 ತೀರ್ಥಂಕರರ ಬಿಂಬಗಳನ್ನು ಬಸದಿಗೆ ತರಲಾಯಿತು. ನಾರಾವಿ, ಹೊಸ್ಮಾರು, ರೆಂಜಾಳ, ಅಳದಂಗಡಿ, ಈದು, ನೂರಾಳಬೆಟ್ಟು ಮೊದಲಾದ 24 ಗ್ರಾಮಗಳ ಶ್ರಾವಕರು-ಶ್ರಾವಕಿಯರು ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದರು. ಬಸದಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿಯ ಪ್ರತಿಷ್ಠೆ, ಶಿಖರಾರೋಹಣ, ಭಗವಾನ್ ಚಂದ್ರನಾಥ ಸ್ವಾಮಿಯ ಪ್ರತಿಷ್ಠೆ, ಶಾಂತಿಚಕ್ರ ಆರಾಧನೆ, 24 ತೀರ್ಥಂಕರರ ಆರಾಧನೆ, ಅಭಿಷೇಕ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ರಕ್ತೇಶ್ವರಿ ದೈವದ ನೇಮ ನಡೆಯಿತು.

ನಾರಾವಿ ಬಸದಿ: ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಎರಡನೇ ದಿನ

Article Image

ನಾರಾವಿ ಬಸದಿ: ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಎರಡನೇ ದಿನ

ಬಸದಿಗೆ ಹೋಗಿ ದೇವರದರ್ಶನ ಮಾಡಿ, ವೃತ-ನಿಯಮಗಳೊಂದಿಗೆ ಜಪ, ತಪ, ಧ್ಯಾನ ಮಾಡಿದಾಗ ಆರೋಗ್ಯ ಸುಧಾರಣೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ನಾರಾವಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಮಹೋತ್ಸವ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾನ, ಧರ್ಮಾದಿ ಸತ್ಕಾರ್ಯಗಳಿಗೆ ಅಂತಸ್ತು, ಸಂಪತ್ತಿನ ಇತಿ-ಮಿತಿ ಇರುವುದಿಲ್ಲ. ಶ್ರಾವಕರು, ಶ್ರಾವಕಿಯರು ಹಾಗೂ ಉದಾರ ದಾನಿಗಳು ಶ್ರದ್ಧಾ, ಭಕ್ತಿಯೊಂದಿಗೆ ತನು, ಮನ, ಧನದೊಂದಿಗೆ ನೀಡಿದ ದಾನ ಮತ್ತು ಸಕ್ರಿಯ ಸಹಕಾರದಿಂದ ಬಸದಿಯು ಆಕರ್ಷಕವಾಗಿ ಮೂಡಿ ಬಂದಿದೆ. ಬಸದಿಗೆ ಬಂದಾಗ ಇಲ್ಲಿ ಸ್ವಲ್ಪ ಹೊತ್ತು ಇದ್ದು ಧ್ಯಾನ, ಪ್ರಾರ್ಥನೆ, ಜಪ-ತಪ ಮಾಡುವ ಪ್ರೇರಣೆ ಸಿಗುತ್ತದೆ. ಇಂತಹ ಪವಿತ್ರ ಶ್ರದ್ಧಾ ಕೇಂದ್ರಗಳಿಂದ ಜೈನಧರ್ಮದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ಜೀವನ ನಡೆಸಲು ಸ್ಪೂರ್ತಿ, ಪ್ರೇರಣೆ ಸಿಗುತ್ತದೆ. ಜೈನರ ಪ್ರಭಾವದಿಂದ ಅನ್ಯಧರ್ಮಿಯರು ಕೂಡಾ ಮದ್ಯ, ಮಾಂಸ, ಮಧು ತ್ಯಾಗ, ರಾತ್ರಿಭೋಜನ ತ್ಯಾಗ ಮೊದಲಾದವುಗಳನ್ನು ಪಾಲಿಸಿ ಸಾತ್ವಿಕ ಜೀವನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ನಾರಾವಿ ಬಸದಿ ಅತಿಶಯ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಆಚಾರ್ಯ ಪರಂಪರೆಯಿಂದ ದೇವರು, ಗುರುಗಳು ಮತ್ತು ಶಾಸ್ತ್ರದ ಮೂಲಕ ಧರ್ಮಪ್ರಭಾವನೆಯಾಗುತ್ತಿದೆ. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬಿಂಬ ಪ್ರತಿಷ್ಠಾಪನೆ ಮಾಡಿದಾಗ ಮಂದಿರದಲ್ಲಿ ಸಾನ್ನಿಧ್ಯ ವೃದ್ಧಿಯೊಂದಿಗೆ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತದೆ, ಬೆಳಗುತ್ತದೆ ಎಂದರು. ಮೂಡಬಿದ್ರೆಯ ವಕೀಲರಾದ ಶ್ವೇತಾ ಜೈನ್, ಧಾರ್ಮಿಕ ಉಪನ್ಯಾಸ ನೀಡಿ, ಧರ್ಮದ ಮರ್ಮವನ್ನರಿತು ನಿತ್ಯವೂ ಅನುಷ್ಠಾನಗೊಳಿಸಬೇಕು. ಆತ್ಮ ಬೇರೆ, ದೇಹ ಬೇರೆ ಎಂಬ ಸತ್ಯವನ್ನರಿತು ದೇವರ ದರ್ಶನ, ಪ್ರಾರ್ಥನೆ, ಧ್ಯಾನ, ಉಪವಾಸ ಮೊದಲಾದ ವೃತ-ನಿಯಮಗಳ ಪಾಲನೆಯೊಂದಿಗೆ ಕರ್ಮನಿರ್ಜರೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯಕುಮಾರ್ ಮಾತನಾಡಿ, ಬಸದಿ ಜೀರ್ಣೋದ್ಧಾರದಿಂದ ಧರ್ಮಜಾಗೃತಿಯೊಂದಿಗೆ ಧರ್ಮಪ್ರಭಾವನೆಯೂ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಜೈನಧರ್ಮ ಸಾರ್ವಕಾಲಿಕ ಧರ್ಮವಾಗಿದ್ದು, ಬಸದಿಗಳ ಜೀರ್ಣೋದ್ಧಾರದಿಂದ ಧರ್ಮಪ್ರಭಾವನೆಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮೂಡಬಿದ್ರೆಯ ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಅಭಿನಂದಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ವಸಂತ ಭಟ್ ನಾರಾವಿ ಉಪಸ್ಥಿತರಿದ್ದರು. ಅರವಿಂದ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.

ನಿರಂಜನ ಲಹರಿ ಆಯೋಜಿಸಿರುವ ಭಾಷಣ ಸ್ಪರ್ಧೆ

Article Image

ನಿರಂಜನ ಲಹರಿ ಆಯೋಜಿಸಿರುವ ಭಾಷಣ ಸ್ಪರ್ಧೆ

ನಿರಂಜನ ಲಹರಿಯು “ಭಗವಾನ್ ಮಹಾವೀರ” ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ನಿಯಮಗಳು: 1. 15 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ 2. ಭಾಷಣದ ವೀಡಿಯೋ 5 ನಿಮಿಷದ ಒಳಗಿರಬೇಕು 3. ಮೊಬೈಲ್ ಅಡ್ಡಲಾಗಿ(horizontal) ಹಿಡಿದು ಚಿತ್ರೀಕರಿಸಿರಬೇಕು 4. ವೀಡಿಯೋ ಬಂದ ಕೂಡಲೇ ನಿರಂಜನ ಲಹರಿ ಯೂಟ್ಯೂಬ್ ಗೆ upload ಮಾಡಲಾಗುವುದು 5. ವೀಡಿಯೋ ಜೊತೆ ಪ್ರತ್ಯೇಕವಾಗಿ ಹೆಸರು/ ಊರು/ ನಂಬರ್ ನಮೂದಿಸಬೇಕು 6. ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಾಧಾನಕರ ಬಹುಮಾನ ಇರುತ್ತದೆ. 7. ಅತೀ ಹೆಚ್ಚು ಯೂಟ್ಯೂಬ್ ಲೈಕ್‌ಗೆ ಒಂದು ವಿಶೇಷ ಬಹುಮಾನ ಇರುತ್ತದೆ. 8. ನಿಮ್ಮ ವೀಡಿಯೋಗಳನ್ನು ಹಾಕಿ ಲಿಂಕ್ ಕೊಡಲಾಗುವುದು 9. ಲೈಕ್ ಗಾಗಿ ವೀಡಿಯೋ ಲಿಂಕ್ ಗಳನ್ನು ನೀವೇ ಪ್ರಚಾರ ಮಾಡಬೇಕು 10. ವೀಡಿಯೋಗಳನ್ನು ಕಳುಹಿಸಲು ಕೊನೆಯ ದಿನಾಂಕ - 15.05.2024 11. ಭಾಷಣವು ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು ವೀಡಿಯೋ ಕಳುಹಿಸಬೇಕಾದ ವಾಟ್ಸಾಪ್ ಮತ್ತು ಟೆಲಿಗ್ರಾಂ ನಂಬರ್: 9945563529

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

ಜೈನಧರ್ಮವು ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬುದು ಜೈನಧರ್ಮದ ಸಾರವಾಗಿದೆ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಪೂಜ್ಯ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳವರು ಹೇಳಿದರು. ಅವರು ಶುಕ್ರವಾರ(ಮೇ 3)ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ನಿತ್ಯವೂ ಧರ್ಮದ ಅನುಷ್ಠಾನಕ್ಕೆ ಸ್ಪೂರ್ತಿ, ಪ್ರೇರಣೆ ನೀಡುತ್ತವೆ. ಅಹಿಂಸೆ ಮತ್ತು ತ್ಯಾಗವನ್ನು ಪಾಲಿಸುವವರೆಲ್ಲ ಜೈನರೇ ಆಗುತ್ತಾರೆ. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಯೇ ಸಮವಸರಣವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಜೈನಧರ್ಮ ಅಪೂರ್ವ ಹಾಗೂ ಅಪಾರ ಕೊಡುಗೆ ನೀಡಿದೆ. ಕಾಲಕಾಲಕ್ಕೆ ಬಸದಿಗಳ ಜೀರ್ಣೋದ್ಧಾರ ಮತ್ತು ಧಾಮಸಂಪ್ರೋಕ್ಷಣೆಯಿಂದ ಸಾನ್ನಿಧ್ಯ ವೃದ್ಧಿಯಾಗಿ ಊರಿನಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ. ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿಯವರು ಹೇಳಿದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಸಮವಸರಣದ ಪ್ರತೀಕವಾದ ಬಸದಿಗಳು ನಮ್ಮನ್ನು ನಾವು ತಿದ್ದಿಕೊಂಡು ಸುಧಾರಣೆ ಮಾಡಲು ಪ್ರೇರಣೆ ನೀಡುತ್ತವೆ. ಶ್ರದ್ದಾ-ಭಕ್ತಿಯಿಂದ ನಿತ್ಯವೂ ಬಸದಿಗೆ ಹೋಗಿ ಏಕಾಗ್ರತೆಯಿಂದ ದೇವರ ದರ್ಶನ, ಜಪ, ತಪ, ಧ್ಯಾನ ಮಾಡಿದಾಗ ಆತ್ಮಕಲ್ಯಾಣವಾಗುತ್ತದೆ. ಶ್ರಾವಕರು, ಶ್ರಾವಕಿಯರು ಹಾಗೂ ದಾನಿಗಳೆಲ್ಲ ಸೇರಿ ಒಗ್ಗಟ್ಟಿನಿಂದ ಬಸದಿ ಜೀರ್ಣೋದ್ಧಾರ ಮಾಡಿದ ಬಗ್ಗೆ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ರವರು ಮಾತನಾಡಿ ಜೈನರ ಆಚಾರ-ವಿಚಾರ, ನೇರ ನಡೆ-ನುಡಿ ಹಾಗೂ ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಜೈನರಿಗೆ ವಿಶೇಷ ಮಾನ್ಯತೆ, ಗೌರವ ಇದೆ. ಜೈನರು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಹಾಗೂ ಸಾತ್ವಿಕ ಜೀವನ ನಡೆಸುತ್ತಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ ಎಂದು ಅವರು ಹೇಳಿದರು. ಶಿಶುಪಾಲ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆಯ ಮಹಾವೀರ ಜೈನ್ ಇಚಿಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು, ಅಧ್ಯಕ್ಷ ನಿರಂಜನ ಅಜ್ರಿ, ಎಂ.ಕೆ. ಆರಿಗ ಮರೋಡಿ ಮತ್ತು ಹರ್ಷೇಂದ್ರ ಕುಮಾರ್ ನೂರಾಳಬೆಟ್ಟು ಉಪಸ್ಥಿತರಿದ್ದರು. ಬಸದಿಯಲ್ಲಿ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನಶುದ್ಧಿ, ವಾಸ್ತುಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಈ ಸಂದರ್ಭದಲ್ಲಿ ಸೇವಾಕರ್ತೃಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು. ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ ಕುಮಾರ್ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಜೈನ ಶ್ರಾವಕ ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

Article Image

ಜೈನ ಶ್ರಾವಕ ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ|| ೧೦೦೮ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮೇ 3 ರಿಂದ ಮೇ 5 ವರೆಗೆ ನಡೆಯಲಿದೆ. ಈ ಪ್ರಯುಕ್ತ ಜೈನ ಶ್ರಾವಕ, ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತರ ವಿವರಗಳು ಇಂತಿವೆ : 1. ಧರ್ಮನಾಥ ಸ್ವಾಮಿಯ ಸಂಗೀತ/ಭಜನೆ ಸ್ಪರ್ಧೆ ಪ್ರಥಮ ಬಹುಮಾನ : ನವೀನ್ ಪ್ರಸಾದ್ ಜಾಂಬ್ಳೆ, ಬೆಂಗಳೂರು ದ್ವಿತೀಯ ಬಹುಮಾನ : ಸರ್ವಾರ್ಥ್. ಎಸ್. ಜೈನ್ ,ವೇಣೂರು 2. "ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ" - ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : ಅಶ್ವಿಕಾ ಜೈನ್, ನೂರಾಳ್ ಬೆಟ್ಟು ದ್ವಿತೀಯ ಬಹುಮಾನ : ನಾಗರತ್ನ ನಾಗರಾಜ್, ಬೆಂಗಳೂರು ವಿಜೇತರನ್ನು ದಿನಾಂಕ 5 ಮೇ ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.

ವೇಣೂರು: ಶ್ರೀ ಬಾಹುಬಲಿ ಸ್ವಾಮಿಯ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ

Article Image

ವೇಣೂರು: ಶ್ರೀ ಬಾಹುಬಲಿ ಸ್ವಾಮಿಯ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹಸನ್ಮುಖಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಫೆ. 22ರಿಂದ ಮಾ. 1ರ ತನಕ ಸಡಗರ, ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿದ್ದು, ತದನಂತರ ಮಾ. 16 ಮತ್ತು ಏ. 13ರಂದು ಮತ್ತೊಮ್ಮೆ ಮಸ್ತಕಾಭಿಷೇಕ ನಡೆದು, ಇದೀಗ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದೊಂದಿಗೆ ಇಂದು ಜರುಗಲಿದೆ.

ನಾರಾವಿ: ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

Article Image

ನಾರಾವಿ: ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ|| 1008 ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ನಾಡಿನ ಸಮಸ್ತ ಶ್ರೀ ಜೈನ ಮಠದ ಭಟ್ಟಾರಕರುಗಳ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಇಂದಿನಿಂದ(ಮೇ. 3) ಪ್ರಾರಂಭಗೊಂಡು ಮೇ. 5ರತನಕ ಜರುಗಲಿರುವುದು.

ಎಳನೀರು: 20ನೇ ವಾರ್ಷಿಕೋತ್ಸವ

Article Image

ಎಳನೀರು: 20ನೇ ವಾರ್ಷಿಕೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎಳನೀರು ಭ|| 1008 ಶ್ರೀ ಆದಿನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ 20ನೇ ವಾರ್ಷಿಕೋತ್ಸವವು ದಿನಾಂಕ 30-04-2024 ಮತ್ತು 01-05-2024 ರಂದು ಜರುಗಲಿದೆ. ವಿ.ಸೂ: ದಿನಾಂಕ 01-05-2024ನೇ ಬುಧವಾರ ಸಂಜೆ 7.00 ರಿಂದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

First Previous

Showing 2 of 5 pages

Next Last