Article Image

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

Article Image

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

ಉಜಿರೆ: ಪುದುವೆಟ್ಟು ಗ್ರಾಮದ ನಿಡ್ವಾಳ ಬಸದಿಯಲ್ಲಿ ಭಾನುವಾರ ಕೇವಲಜ್ಞಾನ ಕಲ್ಯಾಣ, ಸಮವಸರಣ ಪೂಜೆ, ಭವ್ಯ ಅಗ್ರೋಧಕ ಮೆರವಣಿಗೆ ಬಳಿಕ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಮೂರ್ತಿಗೆ ೧೦೦೮ ಕಲಶಗಳಿಂದ ಅಭಿಷೇಕ ಹಾಗೂ ಮಹಾಮಂಗಲಾರತಿಯೊಂದಿಗೆ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನಗೊಂಡಿತು. ಪೂಜ್ಯ ಏಲಾಚಾರ್ಯ ಪ್ರಸಂಗ ಸಾಗರ ಮುನಿಮಹಾರಾಜರು ಮತ್ತು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶಾಮೃತ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಪ್ರತಿಷ್ಠಾಚಾರ್ಯ ಜಯರಾಜ ಇಂದ್ರರು ಮತ್ತು ಧರಣೇಂದ್ರ ಕುಮಾರ್ ಹಾಗೂ ಸ್ಥಳ ಪುರೋಹಿತರಾದ ಶ್ರೀಕೀರ್ತಿ ಇಂದ್ರರು, ಬೈಲಂಗಡಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಕೋಟ್ಯಣ್ಣ ಬಂಟರಾದ ಸುರೇಂದ್ರಕುಮಾರ್ ಜೈನ್, ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಧನಕೀರ್ತಿ ಆರಿಗ, ಉಪಾಧ್ಯಕ್ಷ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ಚಂದ್ರನಾಥ ಜೈನ್, ಸಂಚಾಲಕ ಜಯವರ್ಮ ಕಾಜವ ಮತ್ತು ಕೋಶಾಧಿಕಾರಿ ಅಜಯ್ ಕುಮಾರ್ ಹಾಗೂ ಸರ್ವಸದಸ್ಯರು ಮತ್ತು ಊರಿನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

ಬೆಳ್ತಂಗಡಿ, ಫೆ. 08: ವೇಣೂರು ಕಲ್ಲು ಬಸದಿ ಸಮುಚ್ಚಯದ ಭ|| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಶ್ರೀ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ನಂತರ ಪೂಜ್ಯ ಶ್ರೀಗಳು ಆಶೀರ್ವಚನವನ್ನು ದಯಪಾಲಿಸಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ದಿ. ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಇಂದ್ರ, ಸಮಿತಿಯ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ಸಮಿತಿಯ ಸರ್ವಸದಸ್ಯರು, ಊರ-ಪರವೂರ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಪದ್ಮಾವತಿ ದೇವಿಯ ಆರಾಧನ ಪೂರ್ವಕ ಪ್ರತಿಷ್ಠೆ ಮತ್ತು ಸರಸ್ವತಿ ದೇವಿ ಆರಾಧನಾ ಪೂರ್ವಕ ಪ್ರತಿಷ್ಠೆ ನೆರವೇರಿತು. ಶ್ರಾವಕ-ಶ್ರಾವಕಿಯರು ಸಹಕರಿಸಿದರು.

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

Article Image

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

ಪ್ರಾಚೀನ ಜೈನ ಕ್ಷೇತ್ರ ಹಾಗೂ ಅಮೂಲ್ಯವಾದ ಪಚ್ಚೆ ಪಾರ್ಶನಾಥ ಸ್ವಾಮಿಯ ಮತ್ತು ಮಹಾಮಾತೆ ಪದ್ಮಾವತಿ ದೇವಿಯ ಪರಿವಾರ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಯಾಗಿರುವ ಬಸದಿಯಲ್ಲಿ ತಾ. 25-01-2026 ರಂದು ವಾರ್ಷಿಕ ಪೂಜಾ ಮಹೋತ್ಸವವು ತುಂಬಾ ವೈಭವದಿಂದ ನೆರವೇರಿತು. ಸಿಂಹನಗದ್ದೆಯ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು. ಸಾನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಜೈನ ಪರಂಪರೆಯು ರಾಷ್ಟ್ರೀಯ ಚಿನ್ನೆಗಳ ಆಯ್ಕೆಯ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿ, ನಾವು ಜೈನರು ಎಂಬದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಕರೆ ನೀಡಿದರು. ಅಲ್ಲದೆ ಪೂಜ್ಯ ಶಾಂತಿಸಾಗರರು ಹೇಳಿದ ಮಾರ್ಗದಲ್ಲಿ ಬಸದಿಯಲ್ಲಿ ಪೂಜೆಗಳನ್ನು ನಡೆಸುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಮಾತನಾಡಿ ಪೆನುಕೊಂಡ ಕ್ಷೇತ್ರದ ಜೈನ ಇತಿಹಾಸದ ಮಹತ್ವವನ್ನು ವಿವರಿಸಿ ಹೇಳಿದರು. ಅವರನ್ನು ಬಸದಿ ಟ್ರಸ್ಟ್ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೆನುಕೊಂಡ ತಾಲ್ಲೂಕಿನ ತಹಶೀಲ್ದಾರ್ ಸ್ವಾತಿರವರನ್ನು ಹಾಗೂ ಮುಖಂಡರಾದ ವೆಂಕಟೇಶ್ವರಲು ರಾವ್ ಮತ್ತು ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಅಭಿಯಂತರರಾದ ಹೆಚ್.ಡಿ. ಪಾರ್ಶ್ವನಾಥರವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಬಸದಿ ಸಮಿತಿಯ ಪದಾಧಿಕಾರಿಗಳು, ಸ್ವಾಮೀಜಿಯವರ ಸಮ್ಮುಖದಲ್ಲಿ ತಾವು ಬಸದಿ ಅಭಿವೃದ್ಧಿಗೆ ತ್ರಿಕರಣಪೂರ್ವಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಕೈಗೊಂಡರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾ‌ರ್‌ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 108 ಕಳಶಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳ ಮೂಲಕ ವಾರ್ಷಿಕೋತ್ಸವ ಪೂಜೆಯು ಎಲ್ಲರೂ ಮೆಚ್ಚುವಂತೆ ನಡೆಯಿತು. ಆಗಮಿಸಿದ್ದ ಭಕ್ತರಿಗೆ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಸಮರ್ಪಕವಾಗಿ ಏರ್ಪಡಿಸಲಾಗಿತ್ತು.

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

ವೇಣೂರು: ಇಲ್ಲಿನ ಕಲ್ಲು ಬಸದಿ ಸಮಚ್ಚಯದ ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. ೦೮ರಂದು (ನಾಳೆ) ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

Article Image

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

ಧರ್ಮಸ್ಥಳ : ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಮಂಗಳವಾರ ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಪಾದಾಭಿಷೇಕ ನಡೆಸಲಾಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಪಾದಾಭಿಷೇಕ ಮಾಡಿದರು. ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್‌ವರ್ಮ ಪಾದಾಭಿಷೇಕ ನೆರವೇರಿಸಿದರು. ಪೂಜಾಮಂತ್ರ ಪಠಣ, ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಸುಶ್ರಾವ್ಯ ಜಿನಭಕ್ತಿ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. 216 ಕಲಶಗಳಿಂದ ಜಲಾಭಿಷೇಕದ ಬಳಿಕ ಇಕ್ಷುರಸ (ಕಬ್ಬಿನ ಹಾಲು), ಗಂಧ, ಚಂದನ, ಅರಿಶಿನ, ಕಲ್ಕಚೂರ್ಣ ಮೊದಲಾದ ಮಂಗಲದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು. ಪೂರ್ಣಕುಂಭದಿಂದ ಪಾದಾಭಿಷೇಕ, ಪುಷ್ಪವೃಷ್ಠಿ, ಮಹಾಮಂಗಳಾರತಿ ಹಾಗೂ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು. ಇಂದಿನ ಮಕ್ಕಳೆ ಮುಂದಿನ ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಬಾಲ್ಯದಿಂದಲೆ ಮನೆಯಲ್ಲಿ ಅವರಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಮಂಗಲಪ್ರವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಬಾಹುಬಲಿಯ ತ್ಯಾಗ, ಅಹಿಂಸೆ ವಿಶ್ವಮಾನ್ಯವಾಗಿದೆ. ಮೊದಲು ನಮ್ಮನ್ನು ನಾವು ಅರಿತುಕೊಂಡು, ಜೈನಧರ್ಮದ ಮರ್ಮವನ್ನರಿತು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಜೀವನ ನಡೆಸಬೇಕು. ಮಕ್ಕಳು ನಮ್ಮ ಉತ್ತರಾಧಿಕಾರಿಗಳಾಗಿದ್ದು ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಮಾತನಾಡಿ, ಜೈನಧರ್ಮದ ಸಾರವಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯ ಎಂಬ ತ್ರೈರತ್ನಗಳ ಪಾಲನೆಯಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದರು. ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪಂಜಿಕಲ್ಲು: ಚತುರ್ಥ ವರ್ಧಂತ್ಯುತ್ವವ

Article Image

ಪಂಜಿಕಲ್ಲು: ಚತುರ್ಥ ವರ್ಧಂತ್ಯುತ್ವವ

ಬಂಟ್ವಾಳ : ಪಂಜಿಕಲ್ಲು ೧೦೦೮ ಭಗವಾನ್‌ ಶ್ರೀ ಆದಿನಾಥ ಸ್ವಾಮಿ ಬಸದಿಯ ಶಿಲಾಮಯ ಪುನರ್‌ ನಿರ್ಮಾಣ ಹಾಗೂ ನೂತನ ಮಾನಸ್ಥಂಭ ಪ್ರತಿಷ್ಟಾಪನಾ ಪಂಚಕಲ್ಯಾಣ ಮಹೋತ್ವವದ ಚತುರ್ಥ ವರ್ಧಂತ್ಯುತ್ವವವು, ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಿನಾಂಕ 07-02-2026ನೇ ಶನಿವಾರದಂದು ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ನೆರವೇರಲಿದೆ.

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Article Image

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದಿರೆಯ ಆವರಣದಲ್ಲಿ ಇಂದು ಜನವರಿ 26ರಂದು 77ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. "ಭಾರತದ ಸಂವಿಧಾನವು ಭಾರತದ ಪರಮೋಚ್ಚ ಕಾನೂನು. ನಾವು ಸದಾ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವಗಳನ್ನು ಗೌರವಿಸಿ ಪಾಲಿಸಬೇಕು" ಎಂದು ಗೌರವಾನ್ವಿತ ಅತಿಥಿಗಳಾದ ಡಾ. ದಯಾನಂದ (ಜೆಇಇ ಮತ್ತು ನೀಟ್ ಕೆಮಿಸ್ಟ್ರಿ ಡೀನ್) ಎಕ್ಸಲೆಂಟ್ ಪಿ.ಯು ಕಾಲೇಜ್ ಮೂಡಬಿದಿರೆಯವರು ಆಶಯವನ್ನು ಅಭಿವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಇನ್ನೋರ್ವ ಅತಿಥಿ ಎಕ್ಸಲೆಂಟ್ ಪಿಯು ಕಾಲೇಜ್ ಉಪ ಪ್ರಾಂಶುಪಾಲ ತೇಜಸ್ವಿ ಭಟ್ ರವರು "ಒಂದೇ ಧ್ವಜದಡಿ ನಿಂತಿರುವ ನಾವೆಲ್ಲರೂ ಸಮಾನರು. ಸಮಾಜವನ್ನು ಕಟ್ಟುವಲ್ಲಿ ನಾವು ಶ್ರಮಿಸಬೇಕು. ಇಂದು ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ" ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ಶ್ರೀ ಪ್ರಸಾದ್, ಸಿಬಿಎಸ್ಇ ಸಂಯೋಜಕಿ ಶ್ರೀಮತಿ ವಿಮಲ, ಶಾಲಾ ನಾಯಕ ಶ್ರೀಕರ್ ಮತ್ತು ಶಿಕ್ಷಕ ಶಿಕ್ಷಕೇತರ ವರ್ಗ ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷ್ ಸ್ವಾಗತಿಸಿ, ವಿದ್ಯಾರ್ಥಿನಿ ಪೂರ್ವಿ ವಂದಿಸಿ ನಿರೂಪಿಸಿದರು.

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವ ಆಚರಣೆ

Article Image

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವವನ್ನು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾದ ವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಪಿ. ವಿಠ್ಠಲ್ ರಾವ್ ಅವರು ದ್ವಜಾರೋಹಣವನ್ನು ಮಾಡಿದರು. ಮುಖ್ಯ ಅತಿಥಿಗಳಾದ ಡಾ. ಪಿ. ವಿಠ್ಠಲ್ ರಾವ್ ಅವರು ತಮ್ಮ ಸಂದೇಶ ಭಾಷಣದಲ್ಲಿ ಮಾತನಾಡುತ್ತಾ: ಗಣರಾಜ್ಯೋತ್ಸವವು ಸಮಾನತೆ ಮತ್ತು ನ್ಯಾಯದ ತತ್ವಗಳನೊಳಗೊಂಡ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ಭಾರತದಲ್ಲಿ ಶಿಕ್ಷಣವು ರಾಷ್ಟ್ರೀಯ ಅಭಿವೃದ್ದಿಯ ಅಡಿಪಾಯದೊಂದಿಗೆ ವೈವಿಧ್ಯತೆಯೇ ಶಕ್ತಿ ಹೊಂದಿದೆ. ಪ್ರತಿಯೊಬ್ಬರು ತಮ್ಮ ಉತ್ತಮ ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಪೌರತ್ವ ಮತ್ತು ನೈತಿಕ ನಾಯಕತ್ವದ ಜವಾಬ್ದಾರಿಗಳಿಗೆ ಸಿದ್ದವಾಗಬೇಕು. ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆ ಭಾರತದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿವೆ. ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್, ಹಣಕಾಸಿನ ಅಧಿಕಾರಿಗಳಾದ ವಿ. ಜಿ. ಪ್ರಭು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಉಪ ಪ್ರಾಂಶುಪಾಲರುಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ. ಕಿರಣ ಐತಾಳ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.. ಡಾ. ಆದಿತ್ಯಾ ಅಗ್ನಿಹೋತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್ ಕೆ. ಎಸ್. ವಂದಿಸಿದರು

ಎಸ್.ಡಿ.ಎಂ ಅಂಗಳದಲ್ಲಿ 77ನೇ ಗಣರಾಜ್ಯೋತ್ಸವ

Article Image

ಎಸ್.ಡಿ.ಎಂ ಅಂಗಳದಲ್ಲಿ 77ನೇ ಗಣರಾಜ್ಯೋತ್ಸವ

ಉಜಿರೆ, ಜ 26: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಉಜಿರೆಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವು ಭಾರತದ ಶ್ರೇಷ್ಠ ಪರಂಪರೆಯ ಗಟ್ಟಿ ಅಡಿಪಾಯದ ಮೇಲೆ ವರ್ತಮಾನವನ್ನು ಸಮೃದ್ಧಗೊಳಿಸಿಕೊಂಡು ಉಜ್ವಲ ಭವಿಷ್ಯದ ಹಾದಿ ನಿಚ್ಛಳಗೊಳಿಸಿಕೊಳ್ಳುವ ಮಹತ್ವಾಕಾಂಕ್ಷಿ ಸಂಕಲ್ಪವನ್ನು ಎತ್ತಿಹಿಡಿಯಿತು. ಈ ಮೌಲಿಕ ಆಶಯ ಧ್ವನಿಸುವ ವಿದ್ಯಾರ್ಥಿಗಳ ಪ್ರತಿಭಾಪೂರ್ಣ ಕಲಾತ್ಮಕ ಅಭಿವ್ಯಕ್ತಿಯ ಪ್ರದರ್ಶನವು ಭಾರತದ ಆಡಳಿತಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ದೃಢೀಕರಿಸಿದವು. ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ ವಿಭಾಗದ ಕೆಡೆಟ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್ ಪ್ರತಿನಿಧಿಗಳ ಪಥಸಂಚಲನ, ಶಿಸ್ತುಬದ್ಧ ನಡೆಯು ಗಮನ ಸೆಳೆಯಿತು. ಎನ್.ಸಿ.ಸಿ. ಅಧಿಕಾರಿ ಭಾನುಪ್ರಕಾಶ್ (ಆರ್ಮಿ) ಅವರ ಮಾರ್ಗದರ್ಶನದಲ್ಲಿ ಪಥಸಂಚಲನ ನಡೆಯಿತು. ತದನಂತರ ಎಸ್.ಡಿ.ಎಂ ಸಂಸ್ಥೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಅಭಿವ್ಯಕ್ತಿಯ ವಿವಿಧ ಮಾದರಿಗಳು ವೈವಿಧ್ಯಮಯ ಇತಿಹಾಸವನ್ನು ಸಮಗ್ರವಾಗಿ ತಿಳಿದುಕೊಂಡು ಹೊಸ ಕಾಲದ ಸ್ಪರ್ಧಾತ್ಮಕತೆರೂಢಿಸಿಕೊಳ್ಳುವ ಉತ್ಸಾಹವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಎಸ್.ಡಿ.ಎಂ ಶಾಲೆಯ ಚಿಣ್ಣರು ಅನಾವರಣಗೊಳಿಸಿದ ಪ್ಯಾರಾಚ್ಯೂಟ್ ಜೊತೆಗಿನ ಸಂವಾದಿ ಅಭಿನಯ ಭಾರತದ ಭವಿಷ್ಯದ ದಿಗ್ವಿಜಯದ ಮುನ್ನಡೆಯ ಹುಮ್ಮಸ್ಸನ್ನು ಸಂಕೇತಿಸಿತು. ಅವರ ನೃತ್ಯಸಂವಾದದ ಅಭಿವ್ಯಕ್ತಿಯ ಹಿನ್ನೆಲೆಯಾಗಿ ಕೇಳಿಬಂದ ಜನಜನಿತ "ಡಾಗ್ ಮಿಲಿನಿಯೇರ್" ಸಿನಿಮಾದ "ಜೈ ಹೋ" ಹಾಡು ಹೊಸ ತಲೆಮಾರಿನ ಎಳೆಯ ಮನಸುಗಳ ಆತ್ಮವಿಶ್ವಾಸದ ಜೋಷ್‌ಅನ್ನು ಆಕರ್ಷಣೀಯವಾಗಿ ಅನಾವರಣಗೊಳಿಸಿತು. ಭಾರತವನ್ನು ಅನ್ಯರ ಹಿಡಿತದಿಂದ ವಿಮುಕ್ತಗೊಳಿಸುವ ಕ್ರಾಂತಿಕಾರಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಮಹಿಳಾ ಹೋರಾಟಗಾರರಾಗಿದ್ದ ರಜಿಯಾ ಸುಲ್ತಾನಾ, ರುದ್ರಮಾದೇವಿ, ರಾಣಿ ಪದ್ಮಿನಿ, ರಾಣಿ ಅಬ್ಬಕ್ಕ, ಚೆನ್ನ ಬೈರಾದೇವಿ, ಬೆಳವಡಿ ಮಲ್ಲಮ್ಮ, ತಾರಾಬಾಯಿ, ಅಹಲ್ಯಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಭೀಮಾಬಾಯಿ ಮತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿ ಕುರಿತ ವೀರೋಚಿತ ಇತಿಹಾಸದ ವಿವರಗಳು ವಿದ್ಯಾರ್ಥಿನಿಯರ ಕಲಾತ್ಮಕ ಅಭಿನಯದ ಮೂಲಕ ದೇಶದ ಬಗೆಗಿನ ಹೆಮ್ಮೆ ಮತ್ತು ಅಭಿಮಾನ ಹೆಚ್ಚಿಸಿದವು. ಹಿಂದಿನ ಕಾಲದ ಬದುಕಿನ ವೈಶಿಷ್ಟ್ಯತೆಯನ್ನು ಕಾಣಿಸಿ ಸದ್ಯದ ವೈರುಧ್ಯಗಳನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳ ಅಭಿನಯ ಸಾಮರ್ಥ್ಯ ವಿಭಿನ್ನವಾಗಿತ್ತು. ಹಿನ್ನೆಲೆಯಲ್ಲಿ "ಮಾಲ್ಗುಡಿ ಡೇಸ್" ಧಾರಾವಹಿಯ ಶೀರ್ಷಿಕೆ ಗೀತೆಯ ಸಂಗೀತ ನಿನಾದ ಹಳೆಯ ಕಾಲ ಮತ್ತು ಹೊಸ ಕಾಲದ ಅರ್ಥಪೂರ್ಣ ಸಂಯೋಜನೆಯ ದ್ಯೋತಕವಾಗಿ ಮನಸೂರೆಗೊಂಡಿತು. ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಲಾಭಿವ್ಯಕ್ತಿಯು ನಿಸರ್ಗಸಹಜವಾದ ಪ್ರಾಕೃತಿಕ ಚಿಕಿತ್ಸೆಯ ವಿಧಾನಗಳ ಅನುಸರಣೆಯೊಂದೇ ಮನುಷ್ಯ ಬದುಕನ್ನು ಪುನರುಜ್ಜೀವನಗೊಳಿಸಬಲ್ಲದು ಎಂಬ ಸಂದೇಶವನ್ನು ಸಾರಿತು. ಶಿವ ಪಾರ್ವತಿ ನಡುವಿನ ಇಂಗ್ಲಿಷ್ ಸಂಭಾಷಣೆಯ ಮೂಲಕ ಶುರುವಾದ ಈ ಕಲಾತ್ಮಕ ಪ್ರದರ್ಶನವು ಋಷಿಮುನಿಗಳೂ ಸೇರಿದಂತೆ ವಿವಿಧ ಪ್ರಾಜ್ಞರು ಕೊಡಮಾಡಿದ ನಿಸರ್ಗಸ್ನೇಹಿ ಚಿಕಿತ್ಸಾ ಜ್ಞಾನ ಹಿಂದಿನ ಕಾಲದಿಂದ ಸದ್ಯದ ಆಧುನಿಕ ಕಾಲದವರೆಗೆ ದಾಟಿಕೊಂಡ ಬಗೆಯನ್ನು ಆಪ್ತವಾಗಿ ಚಿತ್ರಿಸಿತು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪ್ರಕೃತಿಯಲ್ಲಿಯೇ ಅಡಗಿದೆ ಎನ್ನುವ ಮೌಲಿಕ ಚಿಂತನೆಯನ್ನು ಧ್ವನಿಸಿತು. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಸಾಧನೆಯ ಹೆಜ್ಜೆಗಳ ಮೂಲಕ ಅಭಿವೃದ್ಧಿಯ ಸಾಧ್ಯತೆಗಳನ್ನು ಕಂಡರಿಸುವ ಹೊಸ ಮಾದರಿಗಳನ್ನು ಕಾಣಿಸುತ್ತಾ ಹೇಗೆ ತಲೆಮಾರುಗಳನ್ನು ಪ್ರಭಾವಿಸಿದರು ಎಂಬ ಅಂಶವನ್ನು ಎತ್ತಿಹಿಡಿಯುವ ವಿದ್ಯಾರ್ಥಿ ತಂಡದ ಮತ್ತೊಂದು ಪ್ರದರ್ಶನ ಆಕರ್ಷಣೀಯವಾಗಿತ್ತು. ಭಾರತದ ಜಾನಪದ ವೈಭವ, ಕೇರಳ ಸಂಸ್ಕೃತಿಯ ವಿಶೇಷತೆ, ಆಪರೇಷನ್ ಸಿಂಧೂರದ ವಿವರ, ವಂದೇ ಮಾತರಂ ಗೀತೆಯ ಜೊತೆಗಿನ ಸತ್ವಯುತ ಮೌಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ನಿಖರ ಸಾಧನೆಯ ವಿವರಗಳನ್ನು ವಿವಿಧ ಪ್ರದರ್ಶನಗಳು ಬಿಂಬಿಸಿದವು. ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗ, ಕ್ರೀಡಾವಿಭಾಗ ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯ ವಿವರಗಳನ್ನು ಪ್ರಸ್ತುಪಡಿಸಲಾಯಿತು.

ಧಾರವಾಡದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Article Image

ಧಾರವಾಡದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡದ ಹೊಸಯಲ್ಲಾಪುರದ ದಿಗಂಬರ ಜೈನ್ ಸಮಾಜ ಟ್ರಸ್ಟ್ ವತಿಯಿಂದ ಶ್ರೀ ಆದಿನಾಥ ಜೈನ ಬಸದಿಯಲ್ಲಿ 77ನೆಯ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷರಾದ ಡಾ. ಆರ್. ಎ. ಬಾಳಿಕಾಯಿ ಅವರು ಧ್ವಜ ಅನಾವರಣ ಮಾಡಿ, ಭಾರತೀಯ ಸಂವಿಧಾನವು: ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಜಾತಿ, ಧರ್ಮ, ಲಿಂಗ ಆಧಾರಿತ ಭೇದಭಾವವನ್ನು ತಿರಸ್ಕರಿಸುತ್ತದೆ. ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿರ್ದಿಷ್ಟಪಡಿಸುತ್ತದೆ. ಇದು ಕೇವಲ ಕಾನೂನು ಪುಸ್ತಕವಲ್ಲ, ಒಂದು ಸಾಮಾಜಿಕ ಒಪ್ಪಂದವಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಮಾತ್ರವಲ್ಲದೆ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಬೆಳೆಯುತ್ತಿರುವ ಭಾರತಕ್ಕಾಗಿ ಕೆಲಸ ಮಾಡಲು ನಾವು ಇಂದು ಪ್ರತಿಜ್ಞೆ ಮಾಡೋಣ, ಎಂದು ತಿಳಿಸುತ್ತ, ಟ್ರಸ್ಟಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿನ ಕಾರ್ಯದರ್ಶಿ ಅರುಣ ಬ್ಯಾಡಗಿ, ಸಹ ಕೋಶಾಧ್ಯಕ್ಷ ಯಲ್ಲಪ್ಪ ಜೈನರ ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀಧರ ಬಸ್ತಿ, ಶ್ರಾವಕ-ಶ್ರಾವಕಿಯರು ಹಾಗೂ ಇತರರು ಉಪಸ್ಥಿತರಿದ್ದರು. ಡಾ. ಆರ್. ಎ. ಬಾಳಿಕಾಯಿ ಉಪಾಧ್ಯಕ್ಷರು, ದಿಗಂಬರ ಜೈನ್ ಸಮಾಜ ಟ್ರಸ್ಟ್, ಹೊಸಯಲ್ಲಾಪುರ, ಧಾರವಾಡ

ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಬಿಡುಗಡೆ

Article Image

ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಬಿಡುಗಡೆ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಜೈನ ಕ್ಷೇತ್ರ ಬ್ರಹ್ಮಯಕ್ಷನ ಮಹೋನ್ನತ ಮಹಿಮಾ ಕ್ಷೇತ್ರ ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಜೈನ ಸಮಾಜದ ನಿರೀಕ್ಷಿತ ಸಂಶೋಧನಾ ಕೃತಿಯಾದ "ಕರ್ನಾಟಕ ಜೈನ ಪರಂಪರೆಯಲ್ಲಿ ಬ್ರಹ್ಮಯಕ್ಷ" ಹಾಗೂ "ನಿರಂಜನ ವೈಭವ" ಎಂಬ ಎರಡು ಕೃತಿಗಳನ್ನು ನಿವೃತ್ತ ಇಂಜಿನಿಯರ್ ಹಾಗೂ ಹಾಸನ ಮಹಾವೀರ ಜೈನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ನಾಗೇಂದ್ರಯ್ಯರವರು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಕುರಿತು ವೃಷಬ್ ಕುಮಾರ್ ರವರು ಮಾತಾನಾಡಿದರು. ಕೃತಿಕಾರರಾದ ವೀರೇಂದ್ರ ಕುಮಾರ್ ರವರು ಜೈನ ಯಕ್ಷಯಕ್ಷಿಯರ ಮಹತ್ವ ಹಾಗೂ ಬ್ರಹ್ಮ ಯಕ್ಷರ ಆರಾಧನೆಯ ಕುರಿತು ಉಪನ್ಯಾಸ ಮಾಡಿದರು. ಈ ಕೃತಿಯ ಪ್ರಕಾಶಕರಾದ ಸಿಂದಗೆರೆ ಸುಪಾರ್ಶ್ವ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾದ ನಾಗರತ್ನರಾಜಯ್ಯ ಹಾಗೂ ಕಾರ್ಯದರ್ಶಿಗಳಾದ ಪಾರ್ಶ್ವನಾಥಯ್ಯರವರು, ವಿಪುಲ್ ಜೈನ್ ಅತುಲ್ ಜೈನ್ ಚಂದ್ರಕೀರ್ತಿ, ಹಾಸನ ದ ಧನಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ನಾಡಿನ ತುಮಕೂರು ಮೈಸೂರು ಹಾಸನ ಬೆಂಗಳೂರು ಅಡಗೂರು ಮಾಯಸಂದ್ರ ಶ್ರವಣಬೆಳಗೊಳ ದಿಂದ ಜನರು ಆಗಮಿಸಿ ಈ ಕಾರ್ಯಕ್ರಮ ಕ್ಕೆ ಸಾಕ್ಷಿಯಾದರು.

ಭುವನವಾಹಿನಿ ಕ್ಯಾಲೆಂಡರ್‌ ಬಿಡುಗಡೆ

Article Image

ಭುವನವಾಹಿನಿ ಕ್ಯಾಲೆಂಡರ್‌ ಬಿಡುಗಡೆ

ವೇಣೂರು: ಭುವನವಾಹಿನಿ ಜಿನಮಿತ್ರ ಪತ್ರಿಕೆಯು ರಜತ ವರ್ಷ ಆಚರಣೆಯ ಸುಸಂದರ್ಭದಲ್ಲಿ ನೂತನವಾಗಿ ಆರಂಭಿಸಿದ ಭುವನವಾಹಿನಿ ಕ್ಯಾಲೆಂಡರ್‌ನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಧರ್ಮಸ್ಥಳ ಲಕ್ಷದೀಪೋತ್ಸವ : ಸಮವಸರಣ ಪೂಜೆ

Article Image

ಧರ್ಮಸ್ಥಳ ಲಕ್ಷದೀಪೋತ್ಸವ : ಸಮವಸರಣ ಪೂಜೆ

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಗುರುವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಪಡೆಯುವ ಅವಕಾಶವಿದೆ. ಜೈನರ ಆರಾಧನಾ ಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೀಡಿನಿಂದ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಮೂರ್ತಿಯನ್ನು ಮಹೋತ್ಸವ ಸಭಾಭವನಕ್ಕೆ ಕೊಂಡುಹೋಗಿ ಅಲ್ಲಿ ಸಮವಸರಣ ಪೂಜೆ ನಡೆಸಲಾಯಿತು. ಬಾಹುಬಲಿ ಸೇವಾಸಮಿತಿ ಆಶ್ರಯದಲ್ಲಿ ಧರ್ಮಸ್ಥಳದ ಶ್ರಾವಕರು-ಶ್ರಾವಕಿಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಸಲಾಯಿತು. ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಕುಮಾರಿ ಮಾನ್ಯ, ರಜತಾ ಹಾಗೂ ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿದರು. ಅರುಣ ಮತ್ತು ಮಂಜುಳಾ ಜಿನಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಶಿರ್ ಇಂದ್ರ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಹಿಮ್ಮೇಳದಲ್ಲಿ ರವಿರಾಜ ಉಜಿರೆ ಮತ್ತು ಶೋಧನ್ ಧರ್ಮಸ್ಥಳ ಸಹಕರಿಸಿದರು. ಮಂಗಳೂರಿನ ಸುಕುಮಾರ್ ಬಳ್ಳಾಲ್ ನಿರ್ದೇಶನದಲ್ಲಿ ಸಾಣೂರು ಶ್ರೀಧರ ಪಾಂಡಿ ವಿರಚಿತ “ಕನಕ ಜ್ವಾಲೆ” ಯಕ್ಷಾಮೃತ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು. ಡಾ. ಪ್ರಖ್ಯಾತ್ ಶೆಟ್ಟಿ ಭಾಗವತರಾಗಿ, ಚೆಂಡೆವಾದನದಲ್ಲಿ ಚಂದ್ರಶೇಖರ ಹಾಗೂ ಮದ್ದಳೆ ವಾದನದಲ್ಲಿ ಬಿ. ಜನಾರ್ದನ ತೋಳ್ಪಾಡಿತ್ತಾಯ ಸಹಕರಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಾ. ಸಿ.ಕೆ. ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ ತೃತೀಯ ಸ್ಥಾನ

Article Image

ಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ ತೃತೀಯ ಸ್ಥಾನ

ನವೆಂಬರ್ 14 ರಿಂದ 16 ರವರೆಗೆ ಕೊಡಗಿನಲ್ಲಿ Blueband Sports ಇವರು ನಡೆಸಿದ Robusta Rally, round 3 of Blueband FMSCI, Indaian National Rally Championship 2025 ರಲ್ಲಿ ಕಾರ್ಕಳದ ಶಿರ್ಲಾಲಿನ ಯುವ ರೇಸರ್ ಚಿರಂತ್ ಜೈನ್ ಇವರು ತಮ್ಮ ಸ್ನೇಹಿತ ವಿಶಾಖ್ ಜೊತೆಗೂಡಿ ಕಾರ್ ರೇಸಿಂಗ್ ನಲ್ಲಿ ತೃತೀಯ ಸ್ಥಾನ ಮತ್ತು ಓವರ್ ಆಲ್ ಕೆಟಗರಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಚಿರಂತ್ ಜೈನ್ ಇವರು ಕಾರ್ಕಳ ಶಿರ್ಲಾಲಿನ ರತ್ನರಾಜ್ ಹೆಗ್ಡೆ ಮತ್ತು ನೀತು ರತ್ನರಾಜ್ ಹೆಗ್ಡೆ ದಂಪತಿಗಳ ಸುಪುತ್ರರಾಗಿದ್ದು, ಮೂಡಬಿದ್ರೆಯ ಮೈಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ ಪ್ರಸ್ತುತ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುವುದರೊಂದಿಗೆ ರೇಸಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ.

ಯುವಜನ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Article Image

ಯುವಜನ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವೇಣೂರು: ಶ್ರೀ ಬಾಹುಬಲಿ ಯುವಜನ ಸಂಘದ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷರಾದ ಪ್ರಭಾಚಂದ್ರರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿಗಳಾದ ಅಶ್ವಿನ್ ರವರು ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು. ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು . ಅಧ್ಯಕ್ಷರು : ಪ್ರಭಾಚಂದ್ರ ಬೆಳ್ಳಿಬೆಟ್ಟು, ಕಾರ್ಯದರ್ಶಿ : ಪವನ್ ಶ್ರೀಪದ್ಮ ಪೆರ್ಮಾಣು, ಖಜಾಂಚಿ : ಸಂತೋಷ್ ಎಂ.ಆರ್, ಜತೆ ಕಾರ್ಯದರ್ಶಿ: ಯುವರಾಜ್ ವೇಣೂರು ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಕ್ರೀಡಾಕೂಟವನ್ನು ಡಿಸೆಂಬರ್ 25ರಂದು ನಡೆಸುವುದಾಗಿ ನಿರ್ದರಿಸಲಾಯಿತು.

ನೆಲ್ಲಿಕಾರಿನಲ್ಲಿ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸಂಪನ್ನ

Article Image

ನೆಲ್ಲಿಕಾರಿನಲ್ಲಿ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸಂಪನ್ನ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಭ|1008 ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ಅಷ್ಟಾಹ್ನಿಕ ಪರ್ವದ ಶುಭ ಸಮಯದಲ್ಲಿ ದಿನಾಂಕ 29/10/2025 ರಿಂದ 5/11/2025 ರವರೆಗೆ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ನೆರೆವೆರಿದ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನವು, ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಮೂಡುಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿಯವರ ಪಾವನ ಸಾನಿದ್ಯ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಅತ್ಯಂತ ಅದ್ದೂರಿಯಾಗಿ ಸಂಪನ್ನಗೊಂಡಿತು. ಬಸದಿಯ ಆಡಳಿತ ಮೊಕ್ತೇಸರರು ಮತ್ತು ಸೇವಾ ಕರ್ತೃಗಳಾದ ನೆಲ್ಲಿಕಾರಿನ ಧರ್ಮಬಂಧು ಮನ್ಮಥಕುಮಾರ್ ಮತ್ತು ರೂಪ ದಂಪತಿಗಳು ಹಾಗೂ ಶಂಭವ್ ಕುಮಾರ್ ಮತ್ತು ರಾಜೇಶ್ವರಿ ದಂಪತಿಗಳ ಪರಿವಾರದವರು ಆರಾಧನೆಯ ನೇತೃತ್ವ ವಹಿಸಿಕೊಂಡಿದ್ದರು. ಹಾಗೂ ಊರಿನ ಶ್ರಾವಕ ಶ್ರಾವಕಿಯರು ಪೂಜೆಯಲ್ಲಿ ಪಾಲ್ಗೊಂಡರು. ಪ್ರತಿಷ್ಠಾಚಾರ್ಯ ನೆಲ್ಲಿಕಾರಿನ ಪ್ರಸನ್ನಕುಮಾರ್ ಇಂದ್ರ ಮತ್ತು ಸಹ ಪುರೋಹಿತರು ಆರಾಧನ ವಿಧಿ ವಿಧಾನವನ್ನು ನೆರೆವೇರಿಸಿ ಕೊಟ್ಟರು. ಧಾರ್ಮಿಕ ವಿಧ್ವ0ಸರಾದ ಮುನಿರಾಜ್ ರೆಂಜಾಳರವರು ಪೂಜಾ ವಿಧಾನದ ವಿವರಣೆ ನೆರೆವೇರಿಸಿದರು. ನಿರೀಕ್ಷಾ ಜೈನ್ ಹೊಸ್ಮಾರ್ ರವರ ಸಂಗೀತ ಪೂಜಾಷ್ಟಕವು ದೇಶ ವಿದೇಶದ ಧರ್ಮ ಬಂಧುಗಳ ಮನ ಸೂರೆಗೊಳಿಸಿತು.

ಧರ್ಮಸ್ಥಳ : ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಅಗ್ನಿಶಾಮಕ ವಾಹನ ಕೊಡುಗೆ

Article Image

ಧರ್ಮಸ್ಥಳ : ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಅಗ್ನಿಶಾಮಕ ವಾಹನ ಕೊಡುಗೆ

ಉಜಿರೆ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಇಲಾಖೆ ವತಿಯಿಂದ ಧರ್ಮಸ್ಥಳದಲ್ಲಿರುವ “ಮಂಜುಷಾ” ವಸ್ತುಸಂಗ್ರಹಾಲಯಕ್ಕೆ ಸಾರ್ವಜನಿಕರ ವೀಕ್ಷಣೆಗಾಗಿ ಮಂಜೂರಾದ ಅಗ್ನಿಶಾಮಕ ವಾಹನವನ್ನು ಬುಧವಾರ ಧರ್ಮಸ್ಥಳದಲ್ಲಿ ಮಂಗಳೂರಿನ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ. ತಿರುಮಲೇಶ್ ಹಸ್ತಾಂತರಿಸಿದರು. ಮಂಜೂಷ ಮ್ಯೂಸಿಯಂನ ಪ್ರಬಂಧಕರಾದ ದಿವಕಾರ ಪ್ರಭು ಉಪಸ್ಥಿತರಿದ್ದರು.

ಡಾ. ನಿರಂಜನ್ ಕುಮಾರ್ ಅವರಿಗೆ ಡಾ. ಮುರಳಿ ಮನೋಹರ ಜೋಶಿ ಜೀವಮಾನ ಸಾಧನಾ ಪ್ರಶಸ್ತಿ

Article Image

ಡಾ. ನಿರಂಜನ್ ಕುಮಾರ್ ಅವರಿಗೆ ಡಾ. ಮುರಳಿ ಮನೋಹರ ಜೋಶಿ ಜೀವಮಾನ ಸಾಧನಾ ಪ್ರಶಸ್ತಿ

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರಿಗೆ ಪದ್ಮವಿಭೂಷಣ ಡಾ. ಮುರಳಿ ಮನೋಹರ ಜೋಶಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಶ್ರೇಷ್ಠ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಕ್ಟೋಬರ್ 31, 2025 ರಂದು ನವದೆಹಲಿಯಲ್ಲಿ ನಡೆದ ವಿಶ್ವ ಶೈಕ್ಷಣಿಕ ಒಕ್ಕೂಟದ ((Federation of World Academics)) ಸಮಾರಂಭದ 8ನೇ ವಾರ್ಷಿಕ ಸಮ್ಮೇಳನದಲ್ಲಿ ನೀಡಲಾಯಿತು. ಮಾಜಿ ಮಾನವ ಸಂಪನ್ಮೂಲ ಸಚಿವರು ಹಾಗೂ ಶ್ರೇಷ್ಠ ಶಿಕ್ಷಕರು ಆದ ಡಾ. ಮುರಳಿ ಮನೋಹರ ಜೋಶಿ ಅವರು ಈ ಪ್ರಶಸ್ತಿಗಳನ್ನು ನೀಡಿದರು.

ನೆಲ್ಲಿಕಾರು: ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ

Article Image

ನೆಲ್ಲಿಕಾರು: ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ

ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮದ ಅತಿಶಯ ಕ್ಷೇತ್ರ ಭ| ಶ್ರೀ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಮತ್ತು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರಿ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನವು ಇದೇ ಬರುವ ಅ. 29ರಿಂದ ನ. 05ರವರೆಗೆ ಜರಗಲಿದೆ

ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆ

Article Image

ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ತಂದೆ ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆಯನ್ನು ಸೋಮವಾರ ಧರ್ಮಸ್ಥಳದಲ್ಲಿ ನಡೆಸಲಾಯಿತು. ಬೀಡಿನಿಂದ ಭಗವಾನ್ ಚಂದ್ರನಾಥಸ್ವಾಮಿ ಬಸದಿಯವರೆಗೆ ಮೌನ ಮೆರವಣಿಗೆಯಲ್ಲಿ ಹೋಗಿ ಪೂಜ್ಯರ ಪುಣ್ಯಸ್ಮರಣೆ ಮಾಡಲಾಯಿತು.

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Article Image

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

.ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಪೂಜ್ಯರ ತಾತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕನಸು ಹಾಗೂ ತಂದೆ ರತ್ನವರ್ಮ ಹೆಗ್ಗಡೆಯವರ ಮನಸನ್ನು ಅನುಸರಿಸಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸರ್ವತೋಮುಖ ಪ್ರಗತಿಯೊಂದಿಗೆ ಸಮಾಜಕ್ಕೂ ಅನುಪಮ ಸೇವೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರದೊಂದಿಗೆ ನನಸಾಗಿ ಮಾಡಿದ್ದಾರೆ. ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಅನೇಕ ದೀನ-ದಲಿತರ, ಮಹಿಳೆಯರ ಬದುಕಿಗೆ ತಾಯಿ-ತಂದೆ ಹಾಗೂ ಪೋಷಕರಂತೆ ಪ್ರೀತಿಮತ್ತು ವಿಶ್ವಾಸದಿಂದ ನಿರಂತರ ಪ್ರೇರಣೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ನವ ಚೈತನ್ಯದೊಂದಿಗೆ ಸ್ವಾವಲಂಬಿ ಜೀವನ ಮಾಡಲು ದಾರಿದೀಪವಾಗಿದ್ದಾರೆ. ಮಹಿಳಾ ಸಬಲೀಕರಣ, ಧಾರ್ಮಿಕ ಸಂಸ್ಕಾರ, ಭಜನಾ ತರಬೇತಿ ಮೂಲಕ ಸಮಾಜದ ಸರ್ವರೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಎಲ್ಲರಿಗೂ ಕಾಯಕಲ್ಪ ನೀಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಆಧುನಿಕ ತಂತ್ರಜ್ಞಾನ ಬಳಸಿ ಸರದಿಸಾಲಿನಲ್ಲಿ ದೇವರದರ್ಶನದ ಸೌಲಭ್ಯ ಇತ್ಯಾದಿ ಅನುಪಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅಭಿನಂದಿಸಿದರು. ಹೊಸ ಯೋಜನೆಗಳು: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭ, ಎಂ.ಆರ್.ಐ. ಘಟಕ, 2000ನೇ ಮದ್ಯವರ್ಜನ ಶಿಬಿರ ಧರ್ಮಸ್ಥಳದಲ್ಲಿ ನವಂಬರ್ 6ರಂದು ನಡೆಯಲಿದ್ದು, ವ್ಯಸನಮುಕ್ತರು ಭಾಗವಹಿಸಲಿದ್ದಾರೆ ಎಂದು ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದ ಅಶೋಕನಗರದಲ್ಲಿ 2 ಕೋಟಿ 41 ಲಕ್ಷ ರೂ. ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ 300 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ 13 ದೇವಾಲಯಗಳನ್ನು ಜೀರ್ಣೋದ್ಧಾರಕ್ಕಾಗಿ ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 25,500 ಕೋಟಿ ರೂ. ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ ಎಂದರು. ೨೦೨೬ರ ಮಾರ್ಚ್ ಒಳಗೆ 1000 ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು. ಬೆಳ್ತAಗಡಿಯಲ್ಲಿ 7 ಎಕ್ರೆ ಜಾಗದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಕ್ಷೇತ್ರದ ಎಲ್ಲಾ ಭಕ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು “ನಾವು ಸದಾ ನಿಮ್ಮೊಂದಿಗಿದ್ದೇವೆ” ಎಂದು ತಮಗೆ ಭರವಸೆ ನೀಡಿರುವುದರಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಉತ್ಸಾಹ ಮೂಡಿಬಂದಿದೆ ಎಂದರು. ನೀವೆಲ್ಲರೂ ತೋರಿಸಿದ ಭಕ್ತಿ, ಪ್ರೀತಿ-ವಿಶ್ವಾಸ ಮತ್ತು ಗೌರವವನ್ನು ಶ್ರೀ ಸ್ವಾಮಿಗೆ ಅರ್ಪಿಸುವುದಾಗಿ ಹೆಗ್ಗಡೆಯವರು ತಿಳಿಸಿದರು. ತನ್ನ ಸೇವಾಕಾಯಕದಲ್ಲಿ ಪತ್ನಿ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಸಕ್ರಿಯ ಸಹಕಾರವನ್ನು ಧನ್ಯತೆಯಿಂದ ಸ್ಮರಿಸಿದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಗ್ಗಡೆಯವರು ಸೇವಾಕಾರ್ಯಗಳ ಮೂಲಕ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು. ಸತ್ಯ, ಧರ್ಮ, ನ್ಯಾಯ-ನೀತಿಯ ಸನ್ಮಾರ್ಗದಲ್ಲಿ ನಡೆದು ಆದರ್ಶ ಸಮಾಜ ಸುಧಾರಕರಾಗಿ ಎಲ್ಲರಿಗೂ ಶಾಂತಿ ಮತ್ತು ಪ್ರೀತಿಯ ಸಂದೇಶ ನೀಡುವ ಹೆಗ್ಗಡೆಯವರು ಸರ್ವರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಕಂಚಿಕಾಮಕೋಟಿ ಪೀಠದ ಪ್ರತಿನಿಧಿ ಗುರುಚರಣಮೂರ್ತಿ ಶುಭಾಶಂಸನೆ ಮಾಡಿದರು. ಡಾ. ವಿಘ್ನರಾಜ ಮತ್ತು ಡಾ. ಪವನ್ ಸಂಪಾದಿಸಿದ “ವೃಷಭೇಶ್ವರ” ಗ್ರಂಥವನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

ಭಗವಾನ್ ೧0೦೮ ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣೋತ್ಸವವು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಇತ್ತೀಚೆಗೆ ವಿಜ್ರಂಭಣೆಯಿಂದ ಜರಗಿತು. ಭಗವಾನ್ ತೀರ್ಥಂಕರರಿಗೆ ಹಾಲು, ಗಂಧ, ಸಿಯಾಳ ಚಂದನ ಮುಂತಾದ ದೃವ್ಯಗಳಿಂದ ಅಭಿಷೇಕಗಳನ್ನು ಮಾಡಿ ಮಹಾಮತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿ ಸಾಮೂಹಿಕ ಆರತಿ ಬೆಳಗುದರೊಂದಿಗೆ ಜಿನ ಭಜನೆಯೊಂದಿಗೆ ಪೂಜಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ವಿದ್ಯುತ್ ಚಾಲಿತ ಬ್ಯಾಂಡ್ ಸೆಟ್‌ನ್ನು ಶ್ರೇಯ ವಿಶಾಲ್ ಹೆಗಡೆ ಕಾಯರ್ತಡ್ಕ ಇವರು ದಾನ ನೀಡಿದರು ಎಲ್ಲರ ಸಹಕಾರದಿಂದ ದೋಸೆ ಹಬ್ಬವನ್ನು ಆಚರಿಸಲಾಯಿತು. ಅತಿ ಹೆಚ್ಚು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದು ಡಾ. ಕೆ. ಜಯಕೀರ್ತಿ ಜೈನ್, ಹೆಚ್. ವಿಜಯಕುಮರ್, ಫಣಿರಾಜ್ ಜೈನ್, ಯುವರಾಜ್ ಜೈನ್, ಸಂತೋಷ್ ಜೈನ್, ಅತಿಶಯ ಜೈನ್, ವಿಜೇಶ್ ಜೈನ್, ಭುವನ್ ಜೈನ್, ಪ್ರೀತಮ್ ಜೈನ್ ಹಾಗೂ ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಅಕ್ಟೋಬರ್ 24 ಶುಕ್ರವಾರ) ಇಂದು ಮತ್ತು 25 ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ರವರೆಗೆ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ| ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್, ಡಾ| ದೇವೇಂದ್ರ ಕುಮಾರ್. ಪಿ, ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ ಭಾಗವಹಿಸಲಿದ್ದಾರೆ. ಮೂಳೆಗಳ ತಪಾಸಣೆ, ಸಂಧಿವಾತ ಆರೈಕೆ, ಮೊಣಕಾಲಿನ ಆಥ್ರೋಸ್ಕೋಪಿಕ್ ಲಿಗಮೆಂಟ್‌ಗಳ ತಪಾಸಣೆ, ಬೆನ್ನುಮೂಳೆ ಮತ್ತು ಕುತ್ತಿಗೆ ನೋವಿನ ತಪಾಸಣೆ, ಭುಜದ ನೋವಿನ ತಪಾಸಣೆ, ಶಸ್ತ್ರಚಿಕಿತ್ಸೆ ರಹಿತ ಮೂಳೆಯ ಆರೈಕೆ, ಮೊಣಗಂಟು ಮತ್ತು ಸೊಂಟ ನೋವಿನ ತಪಾಸಣೆ, ಪಾದ ಮತ್ತು ಮೊಣಕಾಲಿನ ತಪಾಸಣೆ, ಸ್ಪೋರ್ಟ್ಸ್ ಇಂಜುರಿ ತಪಾಸಣೆಗಳನ್ನು ನಡೆಸಲಾಗುವುದು. ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್ರೇ, ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ 10% ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, ಔಷಧದಲ್ಲಿ 10% ರಿಯಾಯಿತಿ ದೊರೆಯಲಿದೆ. ಕೀಹೋಲ್ ಸರ್ಜರಿ, ಪಾದದ ಸರ್ಜರಿ, ಎಂಡೋಸ್ಕೋಪಿ ಸರ್ಜರಿ, ಲೇಸರ್ ಸರ್ಜರಿ, ಎಲ್ಲಾ ತರಹದ ಆರ್ಥೋಸ್ಕೋಪಿಕ್ ಲಿಗ್‌ಮೆಂಟ್ ಸರ್ಜರಿ, ಸಂಪೂರ್ಣ ಮಂಡಿ ಮತ್ತು ಸೊಂಟದ ಬದಲಾವಣೆ ಮತ್ತು ಡಿಸ್ಕ್ ಸರ್ಜರಿಯಲ್ಲಿ ವಿಶೇಷ ರಿಯಾಯಿತಿ ದೊರೆಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು 7760397878 ಅಥವಾ 8073349216 ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.

ಮೈಸೂರು: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರ ಭೇಟಿ

Article Image

ಮೈಸೂರು: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರ ಭೇಟಿ

ಮೈಸೂರು, ಅ.10: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಬಸದಿಗಳ ಸಂರಕ್ಷಣೆಯ ಬಗ್ಗೆ ವಿವರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಆಯುಕ್ತರು ಬಸದಿಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ಮಾಡುವುದಿಲ್ಲ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಒಂದೆರಡು ದಿನದಲ್ಲಿ ಲಿಖಿತವಾಗಿ ಉತ್ತರ ನೀಡುವುದಾಗಿ ಭರವಸೆ ನೀಡಿದರು. ಎಲ್ಲಾ ಬಸದಿಗಳನ್ನು ಸಂರಕ್ಷಣೆ ಮಾಡಲು ಇಲಾಖೆ ಒತ್ತು ನೀಡಲಿದೆ ಎಂಬುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಕೆ ಜಯಕೀರ್ತಿ ಜೈನ್, ವಿಜಯಕುಮಾರ್. H, ಸುರೇಂದ್ರ ಕುಮಾರ್ ಜೈನ್, ಅಜಿತ್ ಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು

ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ

Article Image

ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ

ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್. ಎನ್. ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಭಾನುವಾರ ಹಮ್ಮಿಕೊಂಡಿದ್ದ 24ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು. ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ ಸೇರಿದಂತೆ ಹಲವು ಜೈನ ಸಾಹಿತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಈ ಪರಂಪರೆ ಹಾಗೆಯೇ ಮುಂದುವರಿದಿದೆ. ಸಂವಿಧಾನದಲ್ಲಿರುವ ಜಾತ್ಯಾತೀತ ತತ್ವವನ್ನು ಮೊದಲು ಸಾರಿದವನು ಜೈನ ಕವಿ ಪಂಪ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಮನುಷ್ಯ ಜಾತಿ ಒಂದೇ ಎಂದು ಸಾರಿದ್ದ ಎಂದು ಮುಕುಂದರಾಜ್ ಸ್ಮರಿಸಿದರು. 11ನೇ ಶತಮಾನಕ್ಕೂ ಮೊದಲು ಈ ನಾಡಿನ ಒಕ್ಕಲಿಗರೆಲ್ಲರೂ ಜೈನ ಸಮುದಾಯಕ್ಕೆ ಸೇರಿದ್ದರು. ಆದರೆ ಹೊಯ್ಸಳ ದೊರೆ ಜೈನ ಸಮುದಾಯ ಪರಂಪರೆಗೆ ಸೇರಿದ ಬಿಟ್ಟಿದೇವ (ವಿಷ್ಣುವರ್ಧನ) ರಾಮಾನುಜಚಾರ್ಯರಿಂದಾಗಿ ವೈಷ್ಣವ ದೀಕ್ಷೆ ಪಡೆಯುತ್ತಾನೆ. ಆತ ಮುಂದೆ ಹಲವು ಜೈನರನ್ನು ವೈಷ್ಣವ ಪರಂಪರೆಗೆ ಮತಾಂತರಿಸುತ್ತಾನೆ. ಹೀಗೆ ಮತಾಂತರರಾದವರು ಈಗ ಒಕ್ಕಲಿಗರಾಗಿದ್ದಾರೆ ಎಂದರು. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಎರಡು ಪ್ರಮುಖ ಸಾಲಿಗ್ರಾಮಗಳಿವೆ. ಒಂದು ಶಿವರಾಮ ಕಾರಂತರ ಸಾಲಿಗ್ರಾಮ ಇನ್ನೊಂದು ನಟ ರಾಜಕುಮಾರ್ ಅವರ ಪತ್ನಿ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಊರು, ಆ ಸಾಲಿಗ್ರಾಮದವರು ನಾವು. ರಾಜಕುಮಾರ ನಮ್ಮೂರಿನ ಅಳಿಯ ಎನ್ನಲು ನಮಗೆ ಹೆಮ್ಮೆ ಆಗುತ್ತಿದೆ. ಮುಂದಿನ ವರ್ಷ ಸಂಘದ ಬೆಳ್ಳಿ ಹಬ್ಬ ಆಚರಿಸಲಾಗುವುದು ಎಂದರು. ಈ ವೇಳೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರಿಗೆ ಸುಮಾ ವಂಸತ ಪ್ರಶಸ್ತಿ ಮತ್ತು ಶಿಲ್ಪ ಕಲಾವಿದ ಚಿತ್ತ ಜಿನೇಂದ್ರ ಅವರಿಗೆ ಶ್ರೇಯೋಭದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಅಧ್ಯಕ್ಷೆ ಡಾ.ನೀರಜಾ ನಾಗೇಂದ್ರಕುಮಾರ್ ಅಜಿತ್ ಮುರುಗುಂಡೆ ಹಾಗೂ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್

Article Image

ರೂ. 54 ಲಕ್ಷದ ಪ್ಯಾಕೇಜ್ ಧಿಕ್ಕರಿಸಿ ವೈರಾಗ್ಯದ ಮಾರ್ಗ ಹಿಡಿದ 24ರ ಸಾಫ್ಟ್ವೇರ್ ಇಂಜಿನಿಯರ್

ಅಶೋಕನಗರ (ಮಧ್ಯ ಪ್ರದೇಶ )- ಆತ 24ರ ಹರಯದ ಯುವಕ, ಹೆಸರು ಪಿಯುಷ್ ಜೈನ, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯನಿರತ. ತಂದೆ ತಾಯಿಗಳು ಬಹು ಕನಸು ಹೊತ್ತು ಮಗನ ಭವಿಷ್ಯ ಉಜ್ವಲವಾಗಲಿ ಎಂದು ಆತನನ್ನು ಈ ಹಂತಕ್ಕೆ ಬೆಳೆಸಿದ್ದರು. ಮಗನಿಗೆ ಮದುವೆ ಮಾಡುವುದು ಎಂದು ಯೋಚಿಸಿದ ತಾಯಿ ಸೀಮಾ ಜೈನ್ ಹೆಣ್ಣನ್ನು ಕೂಡ ನೋಡಿ ಮಗನಿಗೆ ತಿಳಿಸಿದ್ದರು. ಬಾಲ್ಯದಿಂದ ಧಾರ್ಮಿಕ ಪರಿಸರ, ಜಿನ ಮುನಿಗಳ ಸಂಪರ್ಕದಲ್ಲಿ ಬೆಳೆದಿದ್ದ ಪಿಯುಷ್ ಮನಸ್ಸು ವೈರಾಗ್ಯದ ಕಡೆ ಮುಖ ಮಾಡಿತ್ತು. ಮಧ್ಯಪ್ರದೇಶದ ಅಶೋಕನಗರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಶ್ರಮಣ ಶಿರೋಮಣಿ, ಮುನಿಪುಂಗವ ಸುಧಾಸಾಗರರ ಕಡೆಗೆ ಆತನ ಮನಸ್ಸು ಓಡುತ್ತಿತ್ತು. ಹೆಣ್ಣು ನೋಡಲು ಬರುವಂತೆ ತಾಯಿ ಕರೆ ಮಾಡಿದಾಗ ಮಗ ಹೇಳಿದ - ಅಮ್ಮ ನಾನು ನಿಮ್ಮ ಮಗನಾಗಿ ಇನ್ನು ಮುಂದೆ ನಿಮ್ಮ ಎದುರು ಬರಲಾರೆ, ಆದರೆ ಶ್ರಮಣ ಜೀವನದ ಪಥಿಕನಾಗಿ ನಿಮಗೆ ಕಾಣಿಸಿಕೊಳ್ಳುತ್ತೇನೆ. ಹೀಗೆ ಹೇಳಿದ ಪಿಯೂಷ್ ತನ್ನ 54 ಲಕ್ಷದ ಪ್ಯಾಕೇಜ್‌ಗೆ ವಿದಾಯ ಹೇಳಿ ನೇರವಾಗಿ ಮುನಿಗಳ ಚಾತುರ್ಮಾಸ ಸ್ಥಾನಕ್ಕೆ ತೆರಳಿ ತನಗೆ ಸನ್ಯಾಸ ಮಾರ್ಗದ ಮೊದಲ ಹೆಜ್ಜೆ ಬ್ರಹ್ಮಚರ್ಯ ವ್ರತವನ್ನು ನೀಡುವಂತೆ ನಿವೇದಿಸಿಕೊಂಡ. ಮುನಿಗಳು ಆತನನ್ನು ಪರಾಮರ್ಶೆಸಿ, ಚರ್ಚಿಸಿ ವ್ರತ ನೀಡಲು ಒಪ್ಪಿದರು. ವಿಜಯದಶಮಿಯ ಶುಭದಿನ, ಚಾತುರ್ಮಾಸ ಕಾರ್ಯಕ್ರಮಗಳಿಗಾಗಿ ಹಾಕಿದ್ದ ವಿಶಾಲ ಪೆಂಡಾಲನಲ್ಲಿ ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಪಿಯುಷನ ತಂದೆ ತಾಯಿಗಳನ್ನೂ ಕರೆಸಲಾಗಿತ್ತು. ಪಿಯುಷನಿಗೆ ಸನ್ಯಾಸ ನೀಡುವ ಬಗ್ಗೆ ಅವರ ಅನುಮತಿಯನ್ನೂ ಪಡೆಯಲಾಗಿತ್ತು. ವೇದಿಕೆಗೆ ಬರುತ್ತಿದ್ದಂತೆ ತಂದೆ ತಾಯಿಯರ ಕಣ್ಣೀರ ಕಟ್ಟೆ ಒಡೆಯಿತು. ಮಗನಿಗೆ ವಿದಾಯ ಹೇಳಬೇಕಾದ ಹೃದಯದ ತಾಪ ಅಶ್ರುವಿನ ರೂಪದಲ್ಲಿ ಧಾರೆಯಾಗಿ ಹರಿಯಿತು. ಈ ಅಶೃಧಾರೆ ಸಂಪೂರ್ಣ ಸಭೆಯನ್ನು ವ್ಯಾಪಿಸಿತು. ನೆರೆದ ಸಭಿಕರೆಲ್ಲರ ಕಣ್ಣುಗಳಿಂದ ಅಶ್ರು ಸುರಿಯುವಿಕೆಯನ್ನು ತಡೆಯಲಾಗಲಿಲ್ಲ. ತಮ್ಮ ಮನೆಯ ಮಗನನ್ನೇ ಬಿಟ್ಟುಕೊಡುತ್ತಿದ್ದೇವೆ ಎನ್ನುವ ನೋವು ಎಲ್ಲರಲ್ಲೂ ಕಾಣುತ್ತಿತ್ತು. ಸಂಪೂರ್ಣ ಪೆಂಡಾಲ್ ಸoವೇದನೆ ಮತ್ತು ಶ್ರದ್ಧೆಯಲ್ಲಿ ನೆನೆದು ಹೋಯಿತು. ಆಗ ಮುನಿ ಶ್ರೀ ಹೇಳಿದರು ಈ ಬಾಲಕನಿಗೆ ಸನ್ಯಾಸ ನೀಡುವ ಮುನ್ನ ಆತನಿಗೆ ಸಾಕಷ್ಟು ತಿಳಿಸಿ ಹೇಳಿದ್ದೇವೆ, ಚರ್ಚಿಸಿದ್ದೇವೆ, ಮೋಕ್ಷ ಮಾರ್ಗ ಸುಲಭವಲ್ಲ, ಇದು ಕತ್ತಿಯ ಅಲಗಿನ ಮೇಲೆ ನಡೆದಂತೆ ಇರುವುದು, ಎಂದೆಲ್ಲ ಹೇಳಿದರೂ ಈ ಬಾಲಕ ಹೆದರಲಿಲ್ಲ, ಹಿಂಜರಿಯಲಿಲ್ಲ, ಯಾವಾಗ ಸಂಸಾರದ ಬಂಧನಗಳು ಸಡಿಲುಗೊಳ್ಳುವವೋ ಆಗ ಈ ಜೀವ ಕಠಿಣ ಮಾರ್ಗದಲ್ಲಿ ಮುನ್ನಡೆಯುತ್ತದೆ. ಇಂದು ವಿಜಯದಶಮಿಯ ಈ ಶುಭ ದಿನ ಪಿಯುಷ್ ವೈರಾಗ್ಯ ಮಾರ್ಗವನ್ನು ಸ್ವೀಕರಿಸಿದ್ದಾನೆ, ಈತ ಸಮಗ್ರ ಸಮಾಜದ ಗೌರವವಾಗಿದ್ದಾನೆ. ಇಂದು ಮಗ ಮನೆಯಿಂದ ದೂರವಾಗುತ್ತಿದ್ದಾನೆ ಎಂದು ತಾಯಿ ಸುರಿಸುತ್ತಿರುವ ಕಣ್ಣೀರು ಮುಂದೊಂದು ದಿನ ಸಂತೋಷದ ಕಣ್ಣೀರಾಗಿ ಪರಿವರ್ತನೆಗೊಳ್ಳಲಿದೆ". ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಿಯುಷ್ ಬ್ರಹ್ಮಚಾರಿ ವ್ರತಧಾರಿಯಾಗಿ ಮುನಿ ಸಂಘ ಸೇರಿದನು. ಹಂತ ಹಂತವಾಗಿ ದಿಗಂಬರತ್ವ ಸ್ವೀಕರಿಸುವನು. ಇಲ್ಲಿಯವರೆಗೆ ಮುನಿ ಸಂಫದಲ್ಲಿ 17 ಬ್ರಹ್ಮಚಾರಿಗಳು ಇದ್ದು ಅವರಲ್ಲಿ ಡಾಕ್ಟರ್, ಇಂಜಿನಿಯರ್, ಸಿ ಎ ಮತ್ತಿತರ ಉನ್ನತ ಶಿಕ್ಷಿತರು ಇದ್ದು ಇದೀಗ ಅವರೊಂದಿಗೆ ಪಿಯುಷ್ ಸೇರ್ಪಡೆಯಾಗಿದೆ. 54 ಲಕ್ಷದ ಪ್ಯಾಕೇಜ್ ಪಡೆದು ಭೋಗ ಜೀವನ ಕೈಗೆಟುಕಿತ್ತಾದರೂ ಅದನ್ನು ಬದಿಗಿಟ್ಟು ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಸಭಿಕರ ಅಶ್ರು ಧಾರೆಯ ತೇವದಲ್ಲಿ ವೈರಾಗ್ಯದ ಮಹಿಮೆ ಮತ್ತು ತ್ಯಾಗದ ಹೊಳಪು ಸೇರಿಕೊಂಡ ಸಂದೇಶವನ್ನು ಈ ಪ್ರಸಂಗ ನೀಡುತ್ತಿತ್ತು. ಜೀವನದ ನಿಜಸುಖ ತ್ಯಾಗದಲ್ಲಿದೆ, ವೈರಾಗ್ಯದಲ್ಲಿದೆ ಮತ್ತು ಈ ಮಾರ್ಗವೇ ಅಂತಿಮವಾಗಿ ಆತ್ಮನನ್ನು ಪರಮಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ ಎಂದು ಹೇಳುತ್ತಿತ್ತು. ಇದೇ ಸಂದರ್ಭದಲ್ಲಿ ವಿದ್ವಾಂಸರ ಸಮ್ಮೇಳನ ವೂ ಆಯೋಜಿತವಿದ್ದುದರಿಂದ 550 ಕ್ಕೂ ಹೆಚ್ಚು ವಿದ್ವಾಂಸರು ಕೂಡ ಪಿಯುಷ್ ವೈರಾಗ್ಯ ಪ್ರಸಂಗಕ್ಕೆ ಸಾಕ್ಷಿ ಆದರು. ಶಾಂತಿನಾಥ ಕೆ. ಹೋತಪೇಟಿ

ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ

Article Image

ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ

ಮಂಗಳೂರು: ಬಹುಜನರ ಅಪೇಕ್ಷೆಯ ಮೇರೆಗೆ ಮಂಗಳೂರು ನಗರದಲ್ಲಿ ದ್ವಿತೀಯ ಬಾರಿಗೆ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ ಮಹಾಕವಿ ರತ್ನಾಕರ ವರ್ಣಿವಿರಚಿತ ಮಹಾಕಾವ್ಯ ಭರತೇಶ ವೈಭವ ಕಾವ್ಯ ವಾಚನ - ಪ್ರವಚನ ಸಪ್ತಾಹ ಸಂಭ್ರಮವು ದಿನಾಂಕ 05-10-2025 ರಿಂದ ತಾ. 12-10-2025ರ ವರೆಗೆ ಪ್ರತಿದಿನ ಸಂಜೆ ಗಂಟೆ 6.00 ರಿಂದ 8.00ರ ವರೆಗೆ ವರ್ಧಮಾನ ಸಿದ್ದಾರ್ಥ ಭವನ, ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್‌ ಇಲ್ಲಿ ಜರುಗಲಿದೆ. ಉದ್ಘಾಟನೆ : ಶ್ರೀ ಅಭಿಷೇಕ್ ಬಿ.ಎಸ್., BE, MBA ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಮೆಸ್ಕಾಂ ಸಬ್‌ಡಿಸನ್, ಕಾವೂರು, ಮಂಗಳೂರು ಕಾವ್ಯವಾಚನ : ಶ್ರೀ ಸಾತ್ವಿಕ್ ಜೈನ್ ಎನ್., ಬಜಗೋಳಿ ಎಂ.ಸಿ.ಎ. ವಿದ್ಯಾರ್ಥಿ, ಎನ್.ಐ.ಟಿ.ಕೆ. ಪ್ರವಚನ : ಶ್ರೀ ಮುನಿರಾಜ ರೆಂಜಾಳ, ಕಾರ್ಕಳ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್

Article Image

ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಭಿಷ್ ಬಿಲ್ರ‍್ಸ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ ಅಭಿಷ್ ವಿಸ್ಟಾವನ್ನು ಅನಾವರಣಗೊಳಿಸಿದ್ದು, ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಗರದ ಹೃದಯ ಭಾಗವಾದ ಪಾಂಡೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಅಭಿಷ್ ವಿಸ್ಟಾ ಅಪಾರ್ಟ್ಮೆಂಟ್ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ. ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಈ ಪ್ರೀಮಿಯಂ ಅಪಾರ್ಟ್ಮೆಂಟ್ ತನ್ನ ವಿಶಿಷ್ಟ ಸ್ಥಳ ಮತ್ತು ಆಕರ್ಷಕ ವಿನ್ಯಾಸದಿಂದ ವಿಶಿಷ್ಟತೆ ಸಾಧಿಸಿದೆ. ಮೂರನೇ ಮಹಡಿಯ ಮೇಲ್ಭಾಗದಿಂದಲೇ ಸಮುದ್ರ ಹಾಗೂ ಪಶ್ಚಿಮ ಘಟ್ಟದಿಂದ ಹರಿದು ಬರುವ ನೇತ್ರಾವತಿ ಹಾಗೂ ಪಲ್ಗುಣಿ ನದಿಯ ಸಂಗಮದ ವಿಹಂಗಮಕ ನೋಟ ಕಣ್ಣು ಸೆಳೆಯುತ್ತದೆ. ನೈಸರ್ಗಿಕ ಸೌಂದರ್ಯದೊಂದಿಗೆ ನಗರದ ಚೈತನ್ಯವನ್ನೂ ಅನುಭವಿಸಲು ಸಾಧ್ಯವಾಗುವ ಈ ವಾಸಸ್ಥಳವು `ಗುಡ್ ಲೊಕೇಶನ್ - ರಿಚ್ ಲೊಕೇಶನ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ಪ್ರಮುಖ ಭಾಗ ಎಂದರೆ ಪ್ರೆಮ್ ಲೊಕೇಷನ್‌ನಲ್ಲಿ ಒಂದಾಗಿರುವ ಪಾಂಡೇಶ್ವರ - ಮಂಗಳಾದೇವಿ ದೇವಸ್ಥಾನ ಮುಖ್ಯ ರಸ್ತೆಯಲ್ಲೆ ಅಭಿಷ್ ವಿಸ್ಟಾ ನಿರ್ಮಾಣವಾಗುತ್ತಿದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಎರಡುವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಣಕಾಸು ಸೌಲಭ್ಯ: ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳೊಂದಿಗೆ ಅಭಿಷ್ ಬಿಲ್ರ‍್ಸ್ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದಾಗಿ ಮನೆ ಖರೀದಿಗೆ ಸುಲಭವಾಗಿ ಗ್ರಾಹಕರಿಗೆ ಹಣಕಾಸು ಸೌಲಭ್ಯ ಸಿಗಲಿದೆ. ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ದೇವಸ್ಥಾನ, ಮಸೀದಿ, ಚರ್ಚ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ಅಭಿಷ್ ವಿಸ್ಟಾದಲ್ಲಿ ಗ್ರಾಹಕರು ಮನೆ ಬುಕ್ ಮಾಡಬಹುದಾಗಿದೆ. 1660 ಚದರ ಅಡಿಯಿಂದ 1875 ಚದರ ಅಡಿ ವರೆಗಿನ ಮೂರು ಬೆಡ್ ರೂಂನ ಮನೆ ನಿರ್ಮಾಣವಾಗಲಿದೆ. ಪ್ರತಿ ಮಹಡಿಯಲ್ಲಿ ಐದು ಮನೆ ಇದ್ದು, ಗಾಳಿ ಬೆಳಕಿಗೆ ತೆರೆದುಕೊಂಡಿದೆ. ಒಟ್ಟು 17 ಮಹಡಿಯ ಈ ವಸತಿ ಸಮುಚ್ಚಯದಲ್ಲಿ ಎರಡು ಮಹಡಿ ಕಾರು ನಿಲುಗಡೆ, 14 ಮಹಡಿಯಲ್ಲಿ 70 ಮನೆಗಳು ಹಾಗೂ ಟಾಪ್ ಫ್ಲೋರ್‌ನಲ್ಲಿ ಕ್ಲಬ್ ಹೌಸ್ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಅತೀ ಎತ್ತರದ ಹಾಗೂ ಬೃಹತ್ ವಸತಿ ಸಮುಚ್ಚಯ ಇದಾಗಿದ್ದು, ಅಭಿಷ್ ವಿಸ್ಟಾ ಕೇವಲ ವಾಸಸ್ಥಳವಲ್ಲ, ಬುದ್ಧಿವಂತ ಹೂಡಿಕೆದಾರರಿಗಾಗಿ ಭವಿಷ್ಯದ ಮೌಲ್ಯವರ್ಧಿತ ಆಸ್ತಿ ಕೂಡ ಹೌದು. ಆಧುನಿಕ ಜೀವನಶೈಲಿಯ ಕನಸನ್ನು ನನಸು ಮಾಡುವ ಅಭಿಷ್ ವಿಸ್ಟಾ ಇಂದು ನಗರದ ಅತ್ಯಂತ ಆಕರ್ಷಕ ಪ್ರೀಮಿಯಂ ಅಪಾರ್ಟ್ಮೆಂಟ್ ಯೋಜನೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ. ಅಭಿಷ್‌ನ ವಿಸ್ತಾದ ವಿಶೇಷತೆ: ಪ್ರೆಮ್ ಲೊಕೇಷನ್ 17 ಮಹಡಿ – 70 ಮನೆ ಚತುಷ್ಪಥ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಚಯ ಮೂರನೇ ಮಹಡಿಯ ಬಳಿಕ ನೇತ್ರಾವತಿ, ಪಲ್ಗುಣಿ ನದಿ ಹಾಗೂ ಸಮುದ್ರದ ಸಂಗಮದ ವಿಹಂಗಮ ನೋಟ ಅತ್ಯಾಧುನಿಕ ಸೌಲಭ್ಯ, ಟ್ರಾಫಿಕ್ ಜಂಜಾಟದಿಂದ ಮುಕ್ತಿ ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಎಲ್ಲ ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸ ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್ ಚಿ‌ಲ್ಡ್ರನ್ಸ್ ಪ್ಲೇ ಏರಿಯಾ. ವಾಕಿಂಗ್‌ಗಾಗಿ ಫೂಟ್ ರಿಫ್ಲೆಕ್ಸೋಲಜಿ ಪಥ ಅತಿಥಿಗಳು ಹಾಗೂ ಮಾಲೀಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್ ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತ ಟೆರೆಸ್‌ನಲ್ಲಿ ಲ್ಯಾಂಡ್ ಸ್ಕೇಪ್.

ಬೆಳಗಾವಿ: ನವರಾತ್ರಿ ಉತ್ಸವ

Article Image

ಬೆಳಗಾವಿ: ನವರಾತ್ರಿ ಉತ್ಸವ

ಬೆಳಗಾವಿ: ನಗರದ ಮಜಗಾವಿ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ್ ದಿಗಂಬರ ಜೈನ ಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿನಿತ್ಯ ಜಿನಭಗವಂತರ ಅಭಿಷೇಕ ಮತ್ತು ಶಾಂತಿಧಾರ ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ. ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ವಹಿಸಿ ತಮ್ಮ ಪ್ರವಚನದಲ್ಲಿ ಮಾತನಾಡುತ್ತ ವರ್ಷಕ್ಕೊಮ್ಮೆ ಬರುವ ಜೈನ ಧರ್ಮದ ಈ ಉತ್ಸವದಲ್ಲಿ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನಭಗವಂತರ ಪೂಜಾ ಅಭಿಷೇಕ ಮಾಡಬೇಕು. ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂದು ತಿಳಿಸಿದರು. 9 ದಿನಗಳ ಕಾಲ ನಡೆಯುವ ಈ ಉತ್ಸವದ ನಿಮಿತ್ಯ ಮಂದಿರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಮುನಿ ಮಹಾರಾಜರ ಸಾನಿಧ್ಯದಲ್ಲಿ ಬೃಹತ್ ಧಾರ್ಮಿಕ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿದೆ, ಇದರಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಹಾಕುವದು, ವ್ಯಸನದಿಂದ ಮುಕ್ತ ಮಾಡುವುದು, ಗುರು ಹಿರಿಯರಿಗೆ ಗೌರವ ಕೊಟ್ಟು, ಭಗವಂತರ ಪೂಜೆಯ ವಿಧಿ, ವಿಧಾನಗಳನ್ನು ಕಲಿಸುವದು ಈ ಶಿಬಿರದ ಉದ್ದೇಶವಾಗಿದ್ದು ಪರಿವಾರ ಸಮೇತ ಭಾಗವಹಿಸಿ ಪುಣ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯಿಂದ ನೃತ್ಯ ಮಾಡಿ ಭಗವಂತರಿಗೆ ಪೂಜೆ ಸಲ್ಲಿಸಿದರು. ಮಜಗಾವಿ ಗ್ರಾಮದ ಪಂಚ್ ಕಮಿಟಿ ಚತುರ್ಮಾಸ್ ಕಮಿಟಿ ಎಲ್ಲ ಯುವಕ ಮಂಡಳ ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು.

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

Article Image

ಪುರಾತತ್ವ ಇಲಾಖೆ ನಿರ್ಧಾರದ ಪರಿಶೀಲನೆಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಪುರಾತನ ಬಸದಿಗಳ ಮಾಹಿತಿಗಳನ್ನು ಕೇಳಿದ್ದು ಕೆಲವೊಂದು ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದ್ದು ಇದನ್ನು ನಾವು ತೀವ್ರವಾಗಿ ವಿರೋಧಿಸುತಿದ್ದೇವೆ. ಎಲ್ಲಾ ಬಸದಿಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿದ್ದು ಜೈನ ಸಮಾಜದ ಶ್ರದ್ದಾ ಕೇಂದ್ರಗಳಾಗಿದ್ದು ಪುರಾತತ್ವ ಇಲಾಖೆ ನಿರ್ಧಾರದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಎಲ್ಲ ಬಸದಿಗಳ ಸ್ಥಳ ಪರಿಶೀಲನೆ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ ಹಾಗೂ ಪುರಾತತ್ವ ಇಲಾಖೆಗೆ ಸೇರಿಸುವ ಅಗತ್ಯ ಇಲ್ಲದಿರುವ ಬಗ್ಗೆ ಪುರಾತತ್ವ ಇಲಾಖೆಗೆ ವರದಿ ನೀಡಬೇಕಾಗಿ ಮನವಿ ಮಾಡಲಾಯಿತು. ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಯಶೋಧರ್ ಬಳ್ಳಾಲ್ ಬಂಗಾಡಿ ಅರಮನೆ, ವಿಜಯಕುಮಾರ್ ಸಿದ್ದಾರ್ಥ್ ನಿಲಯ, ಯುವರಾಜ್ ಪೂವಣಿ, ಜಿನರಾಜ ಪೂವಣಿ, ಪಣಿರಾಜ್ ಜೈನ್, ಸುರಭಿ, ಅಭಿನಂದನ್, ವೀರೇಂದ್ರ ಜೈನ್, ಸುರೇಂದ್ರ ಕುಮಾರ್ ಧರ್ಮಸ್ಥಳ, ವಿನಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

First Previous

Showing 1 of 11 pages

Next Last