Article Image

ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದಿಂದ ಉಮಂಗ್-2025

Article Image

ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದಿಂದ ಉಮಂಗ್-2025

ವಿದ್ಯಾಗಿರಿ: ‘ಉಮಂಗ್ ಮೇ ಮತ್ ಫಾಸ್ ಯೇ ದುನಿಯಾ ಕಾ ಖೇಲ್ ಹೇ’ (ಅತ್ಯುತ್ಸಾಹದಲ್ಲಿ ಮುಳುಗದಿರು, ಇದು ಜಗದ ಆಟ) ಎಂದು ಮೂಡುಬಿದಿರೆಯ ಜೈನ್ ಪ್ರೌಢಶಾಲೆಯ ನಿವೃತ್ತ ಹಿಂದಿ ಶಿಕ್ಷಕ ರಾಯಿ ರಾಜಕುಮಾರ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ವಿಭಾಗದ ವತಿಯಿಂದ ಆಯೋಜಿಸಲಾದ 'ಉಮಂಗ್-2025' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಎಲ್ಲಾ ಭಾಷೆಯು ನಮಗೆ ಉಪಯೋಗಿಯಾಗಿರುತ್ತೆ. ಅದು ಇಂಗ್ಲಿಷ್, ಹಿಂದಿ, ಕನ್ನಡ ಯಾವುದೇ ಭಾಷೆ ಆಗಲಿ. ಅವುಗಳನ್ನು ಬಳಸಿಕೊಂಡು ನಮ್ಮನು ನಾವು ಬೆಳಸಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದರು. ಉಮಂಗ್ ಎಂದರೆ ಖುಷಿ, ಆನಂದ, ಉಲ್ಲಾಸ, ಅತ್ಯುತ್ಸಾಹ. ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ, ಸುಖದ ಅನುಭವ ಎಲ್ಲರಿಗೂ ಸಿಗಬೇಕು ಅದುವೇ ಉಮಂಗ್ ಎಂದರು. ಯಾವುದೇ ಕೆಲಸವಾಗಲಿ, ಅದನ್ನು ಮನಸ್ಸಿನಿಂದ ಮಾಡಿದಾಗಲೇ ಉತ್ಸಾಹ. ಖುಷಿ ಎನ್ನುವಂತದ್ದು, ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ನಮ್ಮ ಬದುಕನ್ನು ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ. ಅಷ್ಟರ ಮಟ್ಟಿಗೆ ನಾವು ಬೆಳೆಯಲು ಸಾಧ್ಯವಿದೆ’ ಎಂದರು. ಝೆಂಕೊ.ಐಒ ಸಂಸ್ಥೆಯ ಸಿಇಒ ಡಿಂಪಲ್ ಪರ್ಮಾರ್ ಮಾತನಾಡಿ, ‘ಹಿಂದಿ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಾಂಸ್ಕೃತಿಕ ಗುರುತು ಹಾಗೂ ಘನತೆಯಾಗಿದೆ. ಭಾಷೆಯಯೊಂದಿಗೆ ಅಭಿವೃದ್ಧಿ ಹೊಂದುವ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಹಿಂದಿ ನಮ್ಮನು ಪ್ರೀತಿ ಸೂತ್ರದಲ್ಲಿ ಒಂದಾಗಿಸುತ್ತದೆ. ಇದು ಸಂವಹನದ ಮಾದ್ಯಮವಷ್ಟೇ ಅಲ್ಲ. ಇದು ಸಂವೇದನೆಯ ಆತ್ಮವಾಗಿದೆ. ಭಾಷೆ ಗಟ್ಟಿಯಾಗಿದ್ದರೆ, ಆ ಭಾಷಿಕರ ಯೋಚನೆಯೂ ದೃಢವಾಗಿರುತ್ತದೆ. ನಿಮಗೆ ಜೀವನದಲ್ಲಿ ದೊಡ್ಡ ಸವಾಲುಗಳು ಬರಲಿವೆ. ನಾವು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದರು. ಜೀವನದಲ್ಲಿ ಫಲಿತಾಂಶದ ಬಗ್ಗೆ ಯೋಚಿಸಬೇಡಿ, ಯಾವಾಗಲೂ ನೀವು ಸ್ಪರ್ಧೆಯನ್ನು ಹೇಗೆ ಎದುರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಗುರಿಯನ್ನು ಕೇಂದ್ರೀಕರಿಸಿ. ನೀವು ನಿಮ್ಮ ಮೇಲೆ ನಂಬಿಕೆ ಇಡಿ. ಏಕೆಂದರೆ ಸೋಲು ಗೆಲುವು ಮುಖ್ಯವಲ್ಲ. ನಿಮ್ಮ ಸಾಮರ್ಥ್ಯ ಮತ್ತು ದೃಢಸಂಕಲ್ಪ ಮಾತ್ರ ಮುಖ್ಯವಾಗುತ್ತದೆ. ನೀವು ನಿಮ್ಮನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ ನೀವು ಸುಧಾರಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ನಿರಂತರ ಪ್ರಯತ್ನ ಮುಂದುವರಿಸಿ’ ಎಂದರು. ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ ಎನ್ ಪಿ ನಾರಾಯಣ ಶೆಟ್ಟಿ, ಮಾತನಾಡಿ ಭಾಷೆ ಮನುಷ್ಯನ ವಿಕಾಸಕ್ಕೆ ದಾರಿಯನ್ನು ಒದಗಿಸುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಧೃತಿಗೆಡದೆ, ಧೈರ್ಯದಿಂದ ಎದುರಿಸಬೇಕು ಎಂದರು. ‘ಉಮಂಗ್-2025' ರ ಅಂಗವಾಗಿ ನಡೆದ ಸ್ಪರ್ಧೆಗಳಾದ ಚರ್ಚಾ ಸ್ಪರ್ಧೆ, ಸ್ಟ್ಯಾಂಡ್ ಅಪ್ ಕಾಮಿಡಿ, ಭಾಷಾಂತರ, ರೀಲ್ಸ್, ಕಿರು ಪ್ರಹಸನದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರು. ಸೈಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿವಿಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಹಿಂದಿ ವಿಭಾಗದ ಸಂಯೋಜಕ ಡಾ. ದತ್ತಾತ್ರೇಯ ಹೆಗ್ಡೆ, ಹಿರಿಯ ವಿದ್ಯಾರ್ಥಿಗಳಾದ ತನೀಷಾ, ಸ್ಪರ್ಷ, ವಿದ್ಯಾರ್ಥಿ ಸಂಯೋಜಕರಾದ ಖುಷಿ ಕುಡಾಲ್ಕರ್ ಮತ್ತು ಜೊನಾಥನ್ ಡಿ’ಸೋಜಾ ಇದ್ದರು. ವಿದ್ಯಾರ್ಥಿನಿ ವಿನೆಟ್ ವಾಸ್, ವೃದ್ಧಿ ರೈ ನಿರೂಪಿಸಿದರು.

ಉದ್ಯಮದಲ್ಲಿ ಯಶಸ್ಸಿಗಿಂತ ಪ್ರಗತಿ ಅಗತ್ಯ : ವಾಲ್ಟರ್ ನಂದಳಿಕೆ

Article Image

ಉದ್ಯಮದಲ್ಲಿ ಯಶಸ್ಸಿಗಿಂತ ಪ್ರಗತಿ ಅಗತ್ಯ : ವಾಲ್ಟರ್ ನಂದಳಿಕೆ

ಮೂಡುಬಿದಿರೆ: ಯಾವುದೇ ಉದ್ಯಮದಲ್ಲಿ ಯಶಸ್ಸು ಗಳಿಸುವುದಕ್ಕಿಂತಲೂ ಪ್ರಗತಿ ಹೊಂದುವುದು ಮುಖ್ಯ, ಸೋಲು ಕಂಡ ವ್ಯಕ್ತಿ ಗೆಲ್ಲುವ ಗುಟ್ಟನ್ನು ಚೆನ್ನಾಗಿ ಕಲಿಸಬಲ್ಲನು ಎಂದು ದೈಜಿವರ್ಲ್ಡ್ ವಾಹಿನಿಯ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ವಾಲ್ಟರ್ ನಂದಳಿಕೆ ಹೇಳಿದರು. ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ‘ಟ್ರೈಬ್ಲೇಜ್’ ವಿದ್ಯಾರ್ಥಿ ವೇದಿಕೆವತಿಯಿಂದ ಹಮ್ಮಿಕೊಂಡ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಸಂಸ್ಥೆ ಮುಖಾಂತರ ಕಂಡುಕೊಂಡ ಉದ್ಯಮಶೀಲತೆಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಉದ್ಯಮಿಗಳಾಗಲು ಆಶಯ ಹೊಂದಿರುವ ವಿದ್ಯಾರ್ಥಿಗಳು ಶಿಕ್ಷಣದ ಪ್ರಮಾಣ ಪತ್ರಗಳ ಜತೆಗೆ ಆತ್ಮವಿಶ್ವಾಸದೊಂದಿಗೆ ಸಂವಹನ ನಡೆಸುವದನ್ನೂ ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯ ವಿಧಾನ ಇಲ್ಲ, ಹೊಸ ವಿಷಯಗಳನ್ನು ತಿಳಿದುಕೊಂಡು ಆಯಾ ಕಾಲದ ಪ್ರವೃತ್ತಿಗಳಿಗೆ ಅನುಗುಣವಾಗಿ ನವೀಕರಿಸಿಕ್ಕೊಳ್ಳುವುದು ಯಶಸ್ವಿ ಉದ್ಯಮಕ್ಕೆ ಬಹಳ ಅಗತ್ಯ. ಅವಮಾನಗಳಿಗೆ ಹಿಂಜರಿಯದೆ ಉತ್ಸಾಹವಿರುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಾಗೂ ಉತ್ತಮ ಜೀವನ ಶೈಲಿಗೆ ಬದಲಾವಣೆಯಾಗಲು ಆರಂಭಿಕ ಹಂತದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಅಪ್ಡೇಟ್, ಅಪ್‌ಗ್ರೇಡ್ ಹಾಗೂ ಅಪ್ಲಿಫ್ಟ್ ಎನ್ನುವ ರೂಡಿಯನ್ನು ಪ್ರತಿಯೊಬ್ಬರೂ ಕಂಡುಕೊಳ್ಳಿ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗಬಹುದು, ಯಶಸ್ವಿ ವ್ಯಕ್ತಿಯನ್ನು ಅನುಸರಿಸುವುದರಿಂದ ಜೀವನಕ್ಕೆ ಪರಿಣಾಮಕಾರಿಯಾದ ಪ್ರೇರಣೆ ದೊರಕುತ್ತದೆ. ಬದುಕಿನಲ್ಲಿ ಸವಾಲುಗಳನ್ನು ಎದುರಿಸಿದಾಗ ಮಾತ್ರ ಹೊಸ ಕಲಿಕೆಯ ಆರಂಭವಾಗುತ್ತದೆ. ಹೊಸ ಪ್ರಯತ್ನದ ದಾರಿಯಲ್ಲಿ ಹಲವಾರು ಟೀಕೆಗಳು ಎದುರಾದರೂ ಯಶಸ್ಸು ದೊರೆತಾಗ ಸಹಜವಾಗಿಯೇ ಸಮಾಜ ಒಪ್ಪಿಕೊಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಿಭಾಗ ಮುಖ್ಯಸ್ಥೆ ಸುರೇಖಾ, ಟ್ರೈಬ್ಲೇಜ್ ವಿದ್ಯಾರ್ಥಿ ವೇದಿಕೆ ಮಾರ್ಗದರ್ಶಕಿ ಸೋನಿ, ವಿದ್ಯಾರ್ಥಿ ಸಂಯೋಜಕರಾದ ಆದರ್ಶ್ ಶೆಟ್ಟಿ, ಭೂಮಿಕಾ ಉಪಸ್ಥಿತರಿದ್ದರು. ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಖುಷಿ ಶೆಟ್ಟಿ ಸ್ವಾಗತಿಸಿ, ಸಮೃದ್ಧಿ ಪ್ರಭು ವಂದಿಸಿದರು.

ಎಸ್.ಡಿ.ಎಂ ವಾಣಿಜ್ಯಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ

Article Image

ಎಸ್.ಡಿ.ಎಂ ವಾಣಿಜ್ಯಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ, ಮಾರ್ಚ್ 11: ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳ ನಡುವೆ ವಿನೂತನವಾಗಿ ಆಲೋಚಿಸುವ ಸಾಮರ್ಥ್ಯ ಹೊಸ ಬಗೆಯ ಔದ್ಯೋಗಿಕ ಅವಕಾಶಗಳನ್ನು ಪಡೆಯಲು ನೆರವಾಗುತ್ತದೆ ಎಂದು ಮಂಗಳೂರಿನ ಎ. ಜೆ. ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಶರಣ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ವಿಭಾಗವು ‘ಸುಸ್ಥಿರ ಬೆಳವಣಿಗೆಗಾಗಿ ವಿವಿಧ ಕಾರ್ಯತಂತ್ರಗಳು ಕುರಿತ ‘ಎಕ್ಸ್ಪ್ಯಾಂಡಿಂಗ್ ಹಾರಿಜನ್’ ಶೀರ್ಷಿಕೆಯ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಜಗತ್ತಿನಲ್ಲಿ ವಿಶೇಷ ರೀತಿಯಲ್ಲಿ ಹೊಸ ಆಲೋಚನೆಗಳಿಂದ ಮತ್ತು ವಿಶೇಷ ರೀತಿಯ ಕೆಲಸಗಳಿಂದ ವಿದ್ಯಾರ್ಥಿಗಳು ತಮ್ಮನ್ನು ಗುರುತಿಸಿಕೊಳ್ಳಬೇಕು. ಈ ಬಗೆಯ ಕ್ರಿಯಾಶೀಲ ಗುರುತಿಸಿಕೊಳ್ಳುವಿಕೆಯಿಂದ ಔದ್ಯೋಗಿಕ ಅವಕಾಶಗಳ ಬಾಗಿಲು ತೆರೆಯುತ್ತದೆ. ತಂತ್ರಜ್ಞಾನದ ಅವಲಂಬನೆ ಹೆಚ್ಚಾದಾಗಲೂ ಆತಂಕ ಪಡುವ ಅನಿವಾರ್ಯತೆ ಎದುರಾಗುವುದಿಲ್ಲ ಎಂದರು. ಉದೋಗ್ಯ ಅವಕಾಶಗಳನ್ನು ಕಲ್ಪಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟಕರ ಸಂಗತಿಯಾಗಿದೆ. ಉಳಿದವರಿಗಿಂತ ಭಿನ್ನವಾಗಿ ಆಲೋಚಿಸುವ ಪ್ರಯತ್ನಗಳ ಕಡೆಗೆ ಹೆಚ್ಚಿನ ಗಮನವಿರಬೇಕು. ಎ.ಐ ತಂತ್ರಜ್ಞಾನಗಳಿಂದ ಉದೋಗ್ಯ ಅವಕಾಶಗಳು ಕುಗ್ಗುತ್ತವೆ. ಪ್ರತಿದಿನವೂ ಹೊಸ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಒಂದೇ ಆದಾಯದ ಮೇಲಿನ ಆವಲಂಬನೆ ಕಡಿಮೆಯಾಗಬೇಕು. ಮಾರುಕಟ್ಟೆಯ ಏರಿಳಿತಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಮರ್ಥ್ಯವನ್ನು ಮರೂಪಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ.ಅವರು ಮಾತನಾಡಿದರು. ವಿದ್ಯಾರ್ಥಿಗಳು ರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನಾಭಿವೃದ್ದಿ ಸಾಧ್ಯವಾಗುತ್ತದೆ. ಪಾಠಗಳ ಜೊತೆಗೆ ಹೊರಗಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಉದ್ಯೋಗ ಅವಕಾಶಗಳು ವಿಭಿನ್ನವಾದ ಆಲೋಚನೆಯನ್ನು ಮಾಡುವ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತವೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟçವನ್ನಾಗಿ ಮಾಡುವುದು ನಮ್ಮ ಕರ್ತವ್ಯ.ಎಂದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾಕುಮಾರಿ ಎಸ್.ವಿ ಹಾಗೂ ಉಜಿರೆ ಎಸ್.ಡಿ.ಎಂಕಾಲೇಜಿನ ವಾಣಿಜ್ಯ ನಿಕಾಯದ ಡೀನ್ ಶಂಕುತಲಾ, ಸಂಘಟನಾ ಕಾರ್ಯದರ್ಶಿ ಡಾ. ಸುರೇಶ ಬಾಬು, ಕೆ.ಎನ್, ಹರ್ಷಿತ್‌ ಕುಮಾರ್ ಶೆಟ್ಟಿ ಎನ್, ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಬಿ.ಕೆ. ಸ್ವಾಗತಿಸಿದರು, ಡಾ. ಸುರೇಶ್ ಬಾಬು ಕೆ.ಎನ್ ವಂದಿಸಿದರು. ದೀಕ್ಷಾ ಮತ್ತು ಕ್ಷಮಾ ಆಚಾರ್ಯ ನಿರೂಪಿಸಿದರು.

‘ಸಕ್ಷಮ’ ಆಳ್ವಾಸ್ ವುಮೆನ್ಸ್ ಅಸೋಸಿಯೇಷನ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2025

Article Image

‘ಸಕ್ಷಮ’ ಆಳ್ವಾಸ್ ವುಮೆನ್ಸ್ ಅಸೋಸಿಯೇಷನ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2025

ವಿದ್ಯಾಗಿರಿ: ‘ಮಹಿಳೆ ಇಲ್ಲದೇ ಪ್ರಕೃತಿ ಇಲ್ಲ. ‘ಶಕ್ತಿ’ ಇಲ್ಲದೆ ಶಿವನೂ ನಿಶ್ಶಕ್ತ. ಶೋಷಣೆ ಮೆಟ್ಟಿ ನಿಲ್ಲುವವಳೇ ನಿಜವಾದ ‘ಹೆಣ್ಣು’. ಹೆಣ್ಣಿಗೆ ವಿದ್ಯೆಯೇ ಸೌಂದರ್ಯ, ತೇಜಸ್ಸು’ ಎಂದು ಹಿರಿಯ ರಂಗಕರ್ಮಿ, ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ಗಿರಿಜಾ ಲೋಕೇಶ್ ಹೇಳಿದರು. ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ (ಕೃಷಿಸಿರಿ) ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಮಹಿಳಾ ವೇದಿಕೆ ‘ಸಕ್ಷಮ’ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡರ ಸ್ಮರಣೆಯಲ್ಲಿ ಆಯೋಜಿಸಿದ ‘ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಹಿಳೆ ಇಲ್ಲದೇ ಪ್ರಕೃತಿಯ ಇಲ್ಲ. ಆದರೆ ಹಿಂದೆ ಪುರಷನೂ ಬೇಕು ಎಂಬುದು ಗುಟ್ಟು’ ಎಂದು ನಸುನಕ್ಕ ಅವರು, ‘ವಿದ್ಯೆ- ವಿನಯ ಇಲ್ಲದವರಿಗೆ ಮೇಕಪ್ ಹೆಚ್ಚು ಬೇಕು’ ಎಂದು ಚಟಾಕಿ ಹಾರಿಸಿದರು. ‘ಅಮ್ಮ ಹೊಡೆದು ತಿದ್ದಿ ತೀಡಿದಾಗ ಗೊತ್ತಾಗಲಿಲ್ಲ. ಈಗ ಅದರ ಫಲ ಅನುಭವಿಸುತ್ತಿದ್ದೇನೆ. ಅಮ್ಮನ ಋಣ ಹೇಗೆ ತೀರಿಸಲಿ’ ಎಂದು ಭಾವುಕರಾದರು. ‘ಆಳ್ವಾಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನ್ನ ಬಹುದಿನದ ಕನಸು. ಕರೆದುದಕ್ಕೆ ಧನ್ಯವಾದ ಎಂದು ಗ್ರೀಷ್ಮಾ ಆಳ್ವ ಅವರಿಗೆ ಹೇಳಿದರು. ‘ಆಳ್ವಾಸ್ ಆವರಣದ ಶಿಸ್ತು ಮತ್ತು ನೈರ್ಮಲ್ಯ ದೇಶಕ್ಕೆ ಮಾದರಿ. ಹೀಗಾಗಿ ಇಲ್ಲಿ ಕಲಿತರೆ ದೇಶದ ಉತ್ತಮ ಪ್ರಜೆ ಆಗುವ ಅವಕಾಶ ಮಕ್ಕಳಿಗೆ ಲಭಿಸುತ್ತದೆ. ಆಳ್ವಾಸ್ ನಲ್ಲಿ ಓದುವುದು ದೊಡ್ಡ ಹೆಮ್ಮೆ’ ಎಂದ ಅವರು, ‘ಡಾ. ಮೋಹನ ಆಳ್ವರಿಗೂ ನಮಗೂ 50 ವರ್ಷಗಳ ನಂಟು. ಆದರೆ ವಯಸ್ಸಾಗಲಿಲ್ಲ. ಏಕೆಂದರೆ ಅವರ ಸಾಮಾಜಿಕ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು. ‘ನೀವು ಗ್ರಾಮೀಣ ಮಹಿಳೆ ಸುಕ್ರಿ ಬೊಮ್ಮನಗೌಡ ಅವರಿಗೆ ನೀಡಿದ ಗೌರವ ಶ್ಲಾಘನೀಯ. ಇಂದಿನ ‘ಸಿ’ ಶಸ್ತ್ರಚಿಕಿತ್ಸೆ ಹೆರಿಗೆಯ ನಡುವೆ ಸೂಲಗಿತ್ತಿಯರು ಅಂದು ನಿರ್ವಹಿಸಿದ ಪಾತ್ರ ಬಹುಮುಖ್ಯ. ಅದೇ ರೀತಿ ಸಾಲುಮರ ತಿಮ್ಮಕ್ಕ ಅವರ ಸಾಧನೆ’ ಎಂದು ಕೊಂಡಾಡಿದರು. ‘ನಾಳೆ ಎಲ್ಲ ನಮ್ಮದೂ’ ಎಂದು ವಿದ್ಯಾರ್ಥಿಗಳಿಗೆ ಹಾಡುವ ಮೂಲಕ ಮಹಿಳಾ ದಿನಾಚರಣೆಯ ಶುಭ ಕೋರಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2025ರ “ಸಮಾನತೆಗಾಗಿನ ಪ್ರಯತ್ನವನ್ನು ವೇಗಗೊಳಿಸಿ’’ ಎಂಬ ಧ್ಯೇಯವಾಕ್ಯವನ್ನು ವಿಶ್ವದೆಲ್ಲೆಡೆ ಕಾರ್ಯಗತಗೊಳಿಸುವ ಕೆಲಸವಾಗಬೇಕಿದೆ ಎಂದು ಕರೆ ನೀಡಿದರು. ಪುರುಷರಲ್ಲಿ ಸೌಂದರ್ಯ ಪ್ರಜ್ಞೆಯ ಗುಣವನ್ನು ಬಿತ್ತಿದ ಕೀರ್ತಿ ಮಹಿಳೆಗೆ ಸಲ್ಲುತ್ತದೆ. ಮಹಿಳೆಯು ವಿಭಿನ್ನ ಮತ್ತು ಜವಾಬ್ದಾರಿಯುತ ಪಾತ್ರದ ಮೂಲಕ ಪುರುಷರ ಬದುಕಿನಲ್ಲಿ ಪ್ರಜ್ಞೆ ಮತ್ತು ಶಕ್ತಿಯನ್ನು ಮೂಡಿಸುವಲ್ಲಿ ಕಾರಣಿಕರ್ತೆಯಾಗಿದ್ದಾಳೆ. ಸಮಾಜದಲ್ಲಿ ಹೆಣ್ಣಿಂದು ಅನೇಕ ರೀತಿಯ ಪಾತ್ರಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾಳೆ. ಪ್ರಸ್ತುತ ಕಾಲಮಾನದಲ್ಲಿ ಮಹಿಳೆ- ನರ್ಸ್, ಆಶಾ ಕಾರ್ಯಕರ್ತೆ, ಅಧ್ಯಾಪನಾ ವೃತ್ತಿ, ಪೊಲೀಸ್, ಪೈಲೆಟ್, ಲೋಕೋ ಪೈಲೆಟ್, ಉದ್ಯಮ ಕ್ಷೇತ್ರ , ಕ್ರೀಡೆ, ರಾಜಕೀಯ, ಸರ್ಕಾರೇತರ ಉದ್ಯೋಗ, ವಕೀಲಿ ವೃತ್ತಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತನ್ನನ್ನು ತಾನು ಪುರುಷನಿಗೆ ಸಮಾನಳಾಗಿ ಸ್ಫರ್ಧೆ ನೀಡುತ್ತಾ ಬಂದಿದ್ದಾಳೆ. ಪುರುಷ ಪ್ರದಾನ ಸಮಾಜದಲ್ಲಿ ಹಿಂದೆ ಸ್ಥಳೀಯ ಜನಪದ ಕಲೆಗಳಾದ ಕಂಬಳ, ಹುಲಿವೇಷ, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಸ್ಥಾನವಿರಲಿಲ್ಲ. ಆದರೆ, ಇಂದು ಮಹಿಳೆ ಹಂತ ಹಂತವಾಗಿ ಪುರುಷನ ಸಮಾನಕ್ಕೆ ತೆರೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಬೆಂಗಳೂರಿನ ಎಸ್-ವ್ಯಾಸ ಪರಿಗಣಿತ ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ವಿಭಾಗದ ಡೀನ್, ಪ್ರೊ ಕರುಣಾ ವಿಜಯೇಂದ್ರ ಮಾತನಾಡಿ, ತಾಳ್ಮೆ , ಸಹಜತೆ ಮತ್ತು ಅಭಿವ್ಯಕ್ತಿ ಸ್ವಾತಂತ್ಯವನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು. ಮಹಿಳೆಯ ಆತ್ಮಶಕ್ತಿಯ ಮುಂದೆ ಎಲ್ಲವೂ ನಗಣ್ಯ. ಛಲದಿಂದ ಸಶಕ್ತರಾಗಿ ನಿಂತು ಆಸಕ್ತ ಕ್ಷೇತ್ರದಲ್ಲಿ ಮುನ್ನಡೆಯಲು ಮಹಿಳೆಯರು ಮುಂಬರಬೇಕು ಎಂದು ಸಲಹೆ ನೀಡಿದರು. ಯುವಜನತೆಯ ವಯೋಸಹಜ ಆಕರ್ಷಣೆಗಳ ಎಲ್ಲೆ ಮೀರದೆ ತಮ್ಮ ನೆಲದ ಸಂಸ್ಕೃತಿಯನ್ನು ಕಾಪಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಮಂಗಳೂರಿನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರುಕಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಸಂಸ್ಕೃತಿಯನ್ನು ಪರಿಪಾಲಿಸುವುದು ಪ್ರಸ್ತುತತೆಗೆ ಹೆಚ್ಚು ಅಗತ್ಯವಿದೆ. ಮಾಡುವ ಎಲ್ಲಾ ಒಳ್ಳೆಯ ಕಾರ್ಯದಲ್ಲಿ ಆತ್ಮ ವಿಶ್ವಾಸ, ಧೈರ್ಯ ಮತ್ತು ಪರಿಶ್ರಮವಹಿಸುವ ಮನಸ್ಥಿತಿ ಇದ್ದಾಗ ಗುರಿಯನ್ನು ಸಾಧಿಸಲು ಸಾಧ್ಯ ಎಂದರು. ಇಂದಿನ ಮಹಿಳಾ ಸಮಾಜಕ್ಕೆ ಹಾಲಕ್ಕಿ ಜನಾಂಗದ ಸುಕ್ರಿ ಬೊಮ್ಮಗೌಡರ ಸರಳ ಜೀವನ ಆದರ್ಶಪ್ರಾಯ. ಪ್ರತಿ ಮಹಿಳೆ ತನ್ನಲ್ಲಿ ಅಡಗಿರುವ ಅಮೋಘ ಶಕ್ತಿಯನ್ನು ಅರಿತುಕೊಳ್ಳಬೇಕು. ದೇಶದ ಮಹಿಳೆ ವಿದ್ಯಾವಂತಳಾದರೆ ಶಿಶು ಮರಣವನ್ನು ಗಣನೀಯವಾಗಿ ತಡೆಯಲು ಸಾಧ್ಯ ಎಂದು ತಿಳಿಸಿದ ಯುನೆಸ್ಕೋ ಸಂಸ್ಥೆ ವರದಿಯನ್ನು ಉಲ್ಲೇಶಿಸಿದರು. ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್(ಸಿಎಫ್‌ಎಎಲ್)ನ ಸಂಶೋಧನಾ ನಿರ್ದೇಶಕಿ ಪ್ರೊ. ಸ್ಮಿತಾ ಹೆಗ್ಡೆ ಮಾತನಾಡಿ, 1908ರಲ್ಲಿ ನ್ಯೂಯಾರ್ಕ್ ಪಟ್ಟಣದ ಬೀದಿಬದಿಯಲ್ಲಿ ಮಹಿಳೆಯರು ತಮ್ಮ ವೃತ್ತಿಯಲ್ಲಿ ಸಮಾನತೆಯನ್ನು ಕೋರಿ ಪ್ರತಿಭಟನೆ ಮಾಡುವುದರ ಮೂಲಕ ಮಹಿಳಾ ಚಳುವಳಿಗೆ ನಾಂದಿ ಹಾಡಿದರು. ಮುಂದೆ ವಿಶ್ವಸಂಸ್ಥೆ 1977 ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲು ಅವಕಾಶ ನೀಡಿತು. ಸಾಮಾಜಿಕ ಮತ್ತು ಸಂತಾನೋತ್ಪತ್ತಿ ಹಕ್ಕು ಮಹಿಳೆಗೆ ದೊರೆತ ಅತ್ಯಂತ ದೊಡ್ಡ ಶಕ್ತಿ ಎನ್ನುವುದನ್ನು ಎಲ್ಲರು ಅರಿಯಬೇಕು ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಮೂವರು ಸಾಧಕಿಯರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಗೌರವಿಸಲಾಯಿತು. ಮಹಿಳಾ ಉದ್ಯಮಿ ಮತ್ತು ಇವೊಲ್ವ್ ಸಂಸ್ಥೆಯ ಅಧ್ಯಕ್ಷೆ ದಿವ್ಯಾ ಡಿ’ಸೋಜಾ, ರಾಷ್ಟ್ರೀಯ ಚಿಂತಕಿ ಮಾತಾ ಮೀನಾಕ್ಷಿ, ಭತ್ತದ ತಳಿಯನ್ನು ಸಂಗ್ರಹಿಸಿ ಪೋಷಿಸುವ ಸಾಣೂರಿನ ಸಾಧಕಿ ಬಾಲಕಿ ಮರಿಯಂ ಅಫ್ನಾ ಅವರನ್ನು ಗೌರವಿಸಲಾಯಿತು. ಗಿರಿಜಾ ಲೋಕೇಶ್‌ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವ ಫಾರ್ಮಸಿಯ ಆಡಳಿತ ನಿರ್ವಾಹಕಿ ಡಾ ಗ್ರೀಷ್ಮಾ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ| ಹನ ಶೆಟ್ಟಿ ಇದ್ದರು. ಬಂಟ್ಸ್ ಅಸೋಸಿಯೇಶನ್‌ನ ಸದಸ್ಯರು, ಸಂಸ್ಥೆಯ ಹಿತೈಷಿಗಳು, ಸಕ್ಷಮದ ಪದಾಧಿಕಾರಿಗಳು, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಆಳ್ವಾಸ್ ಪ.ಪೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ನಿರೂಪಿಸಿ, ಸಕ್ಷಮ ವುಮೆನ್ಸ್ ಅಸೋಸಿಯೇಷನ್ ಅಧ್ಯಕ್ಷೆ ಮೂಕಾಂಬಿಕಾ ಸ್ವಾಗತಿಸಿ, ಆಳ್ವಾಸ್ ಪ. ಪೂ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ರುಚಿಕಾ ವಂದಿಸಿದರು. ತದನಂತರ, ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಸಂಸ್ಥೆಯ ಮಹಿಳಾ ಸಿಬ್ಬಂದಿ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಈ ಕರ‍್ಯಕ್ರಮವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಸದಾಕತ್, ಆಳ್ವಾಸ್ ಸಹಕಾರ ಬ್ಯಾಂಕ್‌ನ ಮುಖ್ಯ ಪ್ರಬಂಧಕಿ ಅರ್ಪಿತಾ ಶೆಟ್ಟಿ ನರವೇರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಒಬ್ಬರನ್ನು “ಲಕ್ಕಿ ಸ್ಟಾರ್” ಎಂದು ಗುರುತಿಸಿ ಈ ವರ್ಷದ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಪದವಿಪೂರ್ವ ಕಾಲೇಜಿನ ಅಧ್ಯಾಪಕವೃಂದದಿಂದ ಸೆಮಿಕ್ಲಾಸಿಕಲ್ ನೃತ್ಯ ಪ್ರದರ್ಶನಗೊಂಡಿತು. ನಂತರ ಝುಂಬಾ ಟ್ರೈನರ್ ನಿತೇಶ್ ಕುಲಾಲ್‌ರಿಂದ ನಡೆದ ಝುಂಬಾ ಡ್ಯಾನ್ಸ್ ಸಭಿಕರನ್ನು ಸಂಗೀತಕ್ಕೆ ಅನುಗುಣವಾಗಿ ನೃತ್ಯ ಮಾಡಲು ಹುರಿದುಂಬಿಸಿತು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ ನಮೃತಾ ಕುಲಾಲ್ ನಡೆಸಿಕೊಟ್ಟರು. ಆರಂಭದಲ್ಲಿ ಅತಿಥಿಗಳನ್ನು ಸಾಂಸ್ಕೃತಿಕ ಕಲಾತಂಡಗಳು, ಸಾಧಕಿಯರ ವೇಷಭೂಷಣಧಾರಿ ಮಕ್ಕಳು ಸೇರಿದಂತೆ ವಿಜೃಂಭಣೆಯಿಂದ ವೇದಿಕೆಗೆ ಕರೆದುಕೊಂಡು ಬರಲಾಯಿತು.

ಸತ್ತೂರು,ಧಾರವಾಡ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

Article Image

ಸತ್ತೂರು,ಧಾರವಾಡ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯವು ಮಾರ್ಚ್ 08ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು, ಇದು ವಿವಿಧ ವಿಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಮತ್ತು ಜಾಗತಿಕವಾಗಿ ಲಿಂಗ ಸಮಾನತೆಯನ್ನು ಮುನ್ನಡೆಸಲು ಉದ್ದೇಶಿಸಲಾಗಿದೆ. ತಾಯಂದಿರು, ಸಹೋದರಿಯರು, ಪತ್ನಿಯರು, ಸಹೋದ್ಯೋಗಿಗಳು ಮತ್ತು ಸ್ನೇಹಿತರಾಗಿ ಮಹಿಳೆಯರು ವಹಿಸುವ ಅಮೂಲ್ಯ ಪಾತ್ರಗಳನ್ನು ಶ್ಲಾಘಿಸುವ ದಿನವೂ ಆಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಮುಖ್ಯ ಅತಿಥಿಯಾಗಿದ್ದರು ಮತ್ತು ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವ ಅತಿಥಿಯಾಗಿದ್ದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮಾನಸಿಕ ಆರೋಗ್ಯ, ಮಹಿಳೆಯರಿಗೆ ಪೋಷಣೆ ಮತ್ತು ಮಹಿಳೆಯರಿಗೆ ಸದೃಢತೆ ಎಂಬ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರಿಗಾಗಿ ರಸಪ್ರಶ್ನೆ ಸ್ಪರ್ಧೆ, ಕಿರು ನಾಟಕ ಮತ್ತು ಮೋಜಿನ ಆಟಗಳನ್ನು ನಡೆಸಲಾಯಿತು. ಸಮಾರಂಭದಲ್ಲಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಹಿರಿಯ ಶಿಕ್ಷಕಿಯವರಾದ ಡಾ. ವಿದ್ಯಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಡಾ. ಶುಭ ಅಕಾದಾಸ್ ಅತಿಥಿಗಳನ್ನು ಸ್ವಾಗತಿಸಿ ಮತ್ತು ಡಾ. ವಿದ್ಯಾ ಪಾಟೀಲ್ ಅವರನ್ನು ಪರಿಚಯಿಸಿದರು. ಡಾ. ಸಂಗೀತಾ ಅಪ್ಪನ್ನವರ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶ್ವೇತಾ ಕುಲಕರ್ಣಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಂಯೋಜಿಸಿದರು. ಡಾ. ಜ್ಯೋತಿ ಜೀವಣ್ಣನವರ ವಂದನಾರ್ಪಣೆ ಸಲ್ಲಿಸಿದರು.

ದೂರ ಶಿಕ್ಷಣ: ಆಳ್ವಾಸ್‌ನಲ್ಲಿ ಅವಕಾಶ

Article Image

ದೂರ ಶಿಕ್ಷಣ: ಆಳ್ವಾಸ್‌ನಲ್ಲಿ ಅವಕಾಶ

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದ ‘ಆಳ್ವಾಸ್‌ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024- 2025ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲೂ, ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ (ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಪದವಿಗಳನ್ನು ಮಾಡಬಹುದಾಗಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತು ಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ ಡ್ಯುಯೆಲ್ ಸ್ಪೆಷಲೈಜೇಷನ್ (ಅಕೌಂಟಿಂಗ್ ಮತ್ತು ಫೈನಾನ್ಸ್ / ಎಚ್‌ಆರ್‌ಎಂ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಎಚ್‌ಆರ್‌ಎಂ / ಫೈನಾನ್ಸ್), ಎಂ.ಸಿ.ಎ, ಎಂ.ಲಿಬ್.ಐ.ಎಸ್‌ಸಿ, ಎಂ.ಎಸ್‌ಸಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಷಿಯನ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಮೈಕ್ರೋಬಯಾಲಜಿ ಮನಃಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಫುಡ್‌ ಮತ್ತು ನ್ಯೂಟ್ರಿಷನ್ ಸೈನ್ಸ್ ಮಾಹಿತಿ ತಂತ್ರಜ್ಞಾನ ಡಾಟಸೈನ್, ಕಂಪ್ಯೂಟರ್‌ಸೈನ್ಸ್). ಪಿಜಿ ಸರ್ಟಿಫಿಕೇಟ್‌ ಕಾರ್ಯಕ್ರಮಗಳು- ಇಂಗ್ಲಿಷ್, ಕಮ್ಯುನಿಕೇಶನ್, ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ಹಣಕಾಸು ನಿರ್ವಹಣೆ ಮಾನವ ಸಂಪನ್ಮೂಲ ನಿರ್ವಹಣೆ, ಬಿಸಿನೆಸ್ ಲಾ, ಬಿಸಿನೆಸ್ ಅಡ್ಮಿನಿಸ್ಟ್ರೆಷನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್, ಅಂಬೇಡ್ಕರ್ ಅಧ್ಯಯನಗಳನ್ನು ಅಭ್ಯಸಿಸಬಹುದಾಗಿದೆ. ಡಿಪ್ಲೋಮ ಶಿಕ್ಷಣ ಕಾರ್ಯಕ್ರಮಗಳಾದ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಮತ್ತು ಹೆಲ್ತ್ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ‌ ಅಪ್ಲಿಕೇಷನ್, ಅರ್ಲಿ ಚೈಲ್ಡ್ಹುಡ್‌ಕೇರ್ ಎಜುಕೇಷನ್‌ ಹಾಗೂ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳಾದ(ಆರು ತಿಂಗಳು)- ಪಂಚಾಯತ್‌ರಾಜ್, ನ್ಯೂಟ್ರಿಷನ್ ಮತ್ತು ಫುಡ್, ಮಾಹಿತಿ ಸಂವಹನ ತಂತ್ರಜ್ಞಾನದ (ಐಸಿಟಿ) ಕೋರ್ಸಗಳನ್ನು ಮಾಡಬಹುದಾಗಿದೆ. ಈ ಮೇಲಿನ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ +917090715010, 9591546202 ಸಂಪರ್ಕಿಸಬಹುದು. ಇಲ್ಲವೇ, ಇಮೇಲ್:administration@alvas.org ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು. ಆಳ್ವಾಸ್‌ನಲ್ಲಿ ಪರೀಕ್ಷಾ ಕೇಂದ್ರವನ್ನೂ ಹೊಂದಿರುವ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವ ಜೊತೆಯಲ್ಲಿ ಈ ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿ ಪಡೆಯುವ ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಔದ್ಯೋಗಿಕ ನೆಲೆಯಲ್ಲಿ ಸ್ನಾತಕೋತ್ತರ, ಪದವಿ, ಒಂದು ವರ್ಷದ ಡಿಪ್ಲೊಮಾ ಹಾಗೂ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿವಿಧ ವಿಷಯಗಳಲ್ಲಿ ಮಾಡಲು ಅವಕಾಶವಿದ್ದು, ಉದ್ಯೋಗ ಮಾಡಿಕೊಂಡು ಕೋರ್ಸ್ ಮಾಡಲು ಸುವರ್ಣಾವಕಾಶ ದೊರೆತಿದೆ.

ಕಬಡ್ಡಿ ಪಂದ್ಯಾವಳಿಗೆ ಚಾಲನೆ

Article Image

ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಉಜಿರೆ ಮಾರ್ಚ್ 7: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯನ್ನು ವ್ಯಕ್ತಿಗತ ದಿನಚರಿಯ ಭಾಗವಾಗಿಸಿಕೊಂಡರೆ ಮಾನಸಿಕ ಸೌಕರ್ಯ, ಬೌದ್ಧಿಕ ಬೆಳವಣಿಗೆ ಮತ್ತು ಭಾವನಾತ್ಮಕ ಸಮತೋಲನದ ಪ್ರಜ್ಞೆಯೊಂದಿಗೆ ವ್ಯಕ್ತಿತ್ವವನ್ನು ಸಮಗ್ರಗೊಳಿಸಿಕೊಳ್ಳಬಹುದು ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಆಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯ ಮತ್ತು ಉಜಿರೆಯ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಪುರುಷ ಕಬ್ಬಡ್ಡಿ ಪಂದ್ಯಾವಳಿಯನ್ನು ಇಂದ್ರಪ್ರಸ್ಥ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯ ದಿನಚರಿಯಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಮಾನಸಿಕವಾಗಿ ಬೌದ್ಧಿಕವಾಗಿ ಭಾವನಾತ್ಮಕವಾಗಿ ಒಬ್ಬ ವ್ಯಕ್ತಿ ಬೆಳವಣಿಗೆಗೆ ಕ್ರೀಡೆ ಬಹಳ ಮುಖ್ಯ. ಅದರ ಜೊತೆಗೆ ಕ್ರೀಡಾಸ್ಪೂರ್ತಿಯು ಅವಶ್ಯಕ. ವಿದ್ಯಾರ್ಥಿಗಳು ಕೇವಲ ಭೌದ್ಧಿಕ ಚಟುವಟಿಕೆಯಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು. ದೇಶದ ಅನೇಕ ಕಡೆ ನಡೆದ ಕ್ರೀಡಾಕೂಟಗಳಲ್ಲಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈಯ್ಯುವುದಕ್ಕೆ ಪೂರಕವಾದ ಸ್ಫೂರ್ತಿದಾಯಕ ವಾತಾವರಣ ಎಸ್.ಡಿ.ಎಂ ಕಾಲೇಜಿನಿಂದ ದೊರಕುತ್ತಿದೆ. ವಿದ್ಯಾರ್ಥಿಗಳು ಅಂಕ ಗಳಿಕೆಯ ಜೊತೆ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆಗ ವ್ಯಕ್ತಿತ್ವದ ಸಮಗ್ರ ಬೆಳವಣಿಗೆ ಸಾಧ್ಯ ಎಂದರು. ಕಬ್ಬಡ್ಡಿ ಒಂದು ಚುರುಕಿನ ಆಟ. ಇಂತಹ ಆಟಗಳು ವ್ಯಕ್ತಿಯನ್ನು ಆರೋಗ್ಯಕರ ,ಸಮೃದ್ಧ ಹಾಗೂ ಕ್ರೀಯಾಶೀಲರನ್ನಾಗಿಸುತ್ತವೆ. ಸೋಲು ಮತ್ತು ಗೆಲುವುಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸುವಲ್ಲಿ ಇಂತಹ ಕ್ರೀಡೆಗಳ ಪಾತ್ರ ಅಪಾರ ಎಂದರು. ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಅವರು ಮಾತನಾಡಿದರು. ಕಬ್ಬಡ್ಡಿಯಂತಹ ತಂಡಸ್ಫೂರ್ತಿಯ ಆಟಗಳು ಒಬ್ಬ ಆಟಗಾರನಲ್ಲಿ ತಂಡದ ನಿರ್ವಹಣೆ, ನಾಯಕತ್ವದ ಗುಣ ಹಾಗೂ ಸಂವಹನ ಕಲೆಯನ್ನು ಅಭಿವೃದ್ಧಿಗೊಳಿಸುತ್ತವೆ ಎಂದರು. ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಪಾಲ್ಗೊಳ್ಳಲು ಇಂತಹ ಕ್ರೀಡಾಕೂಟಗಳು ಪ್ರೋತ್ಸಾಹಿಸುತ್ತವೆ. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶವನ್ನು ಪ್ರಾರಂಭದಿಂದಲೂ ನೀಡುತ್ತಾ ಬಂದಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕರಾದ ರಮೇಶ್ ಎಚ್, ಶಾರದಾ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಅವರು ಉಪಸ್ಥಿತರಿದ್ದರು. ಅಧ್ಯಾಪಕ ಡಾ.ಸುವೀರ್ ಜೈನ್ ನಿರೂಪಿಸಿದರು.

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆ

Article Image

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2025-26ನೇ ಸಾಲಿನ, 6 ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ನಡೆಯಿತು. ರಾಜ್ಯಾದ್ಯಾಂತ 32 ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಗಡಿಭಾಗದ ಜಿಲ್ಲೆಯಾದ ಕಾಸರಗೋಡು ಹಾಗೂ ಮಹಾರಾಷ್ಟ್ರದ ಗಡಿಜಿಲ್ಲೆಗಳಿಂದ 20134 ವಿದ್ಯಾರ್ಥಿಗಳು ಅನ್‌ಲೈನ್ ಮೂಲಕ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 18634 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಂತರ ಮಾತನಾಡಿದ ಅವರು ಈ ಕನ್ನಡನಾಡಿನಲ್ಲಿ ಜನ್ಮತಾಳಿ, ಬದುಕನ್ನ ನಡೆಸಿ, ಸಂಪಾದನೆಯನ್ನು ಗಳಿಸಿದ ನಮಗೆ ಈ ಕನ್ನಡ ನಾಡಿನ ಋಣ ಎಷ್ಟಿದೆ ಎಂಬುದನ್ನು ನಾವೆಲ್ಲ ಅರಿಯಬೇಕಿದೆ. ನಮ್ಮೆಲ್ಲರ ಕನ್ನಡದ ಬಗೆಗಿನ ಪ್ರೀತಿ ವೇದಿಕೆಯಲ್ಲಿ ಭಾಷಣ ಮಾಡಲು ಮಾತ್ರ ಸೀಮಿತವಾಗಿದೆ. ರಾಜಕಾರಣಿಗಳು ಅಥವಾ ಕನ್ನಡದ ಸಂಘ ಸಂಸ್ಥೆಗಳು ಕನ್ನಡಕ್ಕೆ ಕಿಂಚಿತ್ತು ಸಮಸ್ಯೆಯಾದರೂ ಗಂಭೀರವಾಗಿ ಮಾತನಾಡಲು, ಹೋರಾಟ ಮಾಡಲು ಮುಂದೆ ಬಂದರೂ, ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸಲು ಅವರ ಕೂಡುಗೆ ಸಾಲದು. ಕನ್ನಡ ಮಾಧ್ಯಮ ಶಾಲೆ ಗಟ್ಟಿಗೊಳಿಸದೆ ವಿನಃ ಕನ್ನಡ ಭಾಷೆಗೆ ಭವಿಷ್ಯವಿದೆ ಎಂದು ಹೇಳಲು ತಾನು ಸಿದ್ದನಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಜನರು ಮಾತನಾಡುವ ಭಾಷೆಯಾಗಿ ಸ್ವಲ್ಪ ಸಮಯ ಉಳಿಯಬಹುದೇ ಹೊರತು, ಕನ್ನಡದ ಸಾಹಿತ್ಯ, ಅದರ ಸಾಂಸ್ಕೃತಿಕ ವಿಚಾರವನ್ನು ಸೂರ್ಯ ಚಂದ್ರರಿರುವಷ್ಟು ಕಾಲ ಮುಂದೆ ಕೊಂಡುಹೋಗಲು ಸಾಧ್ಯವಿಲ್ಲ. ಈ ಶಕ್ತಿ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಸರಕಾರದ 1800 ಪ್ರಾಥಮಿಕ ಶಾಲೆಗಳು ಈ ವರ್ಷ ಮುಚ್ಚಲ್ಪಟ್ಟಿವೆ. 1200ಗಳಷ್ಟು ಶಾಲೆಗಳಲ್ಲಿ ಏಳು ಕ್ಲಾಸುಗಳಿಗೆ ಒಬ್ಬ ಉಪಾಧ್ಯಯರಿರುವುದು ಶೋಷನೀಯ. ನಮ್ಮ ರಾಜ್ಯದಲ್ಲಿ 2000ನೇ ಇಸವಿಯ ತನಕ ಹತ್ತು ಹಲವು ವಸತಿ ಶಾಲೆಗಳು ಅಂಬೇಡ್ಕರ್ ಶಾಲೆಗಳು, ಮೋರಾರ್ಜಿ ದೇಸಾಯಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳು, ನಾರಾಯಣ ಗುರುವಿನ ಶಾಲೆಗಳು, ಅಬ್ದುಲ್ ಕಲಾಂ ಶಾಲೆಗಳು, ಅಟಲ್ ಬಿಹಾರಿ ವಾಜಪೇಯಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದವು. 3ತದನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಸುಮಾರು 840 ವಸತಿ ಶಾಲೆಗಳನ್ನು ನಿರ್ಮಿಸಿದವು. ಒಂದು ವಸತಿ ಶಾಲೆಯನ್ನು ನಿರ್ಮಿಸಲು ಕನಿಷ್ಠ 10 ಎಕರೆಯಷ್ಟು ಜಾಗ, 24.5 ಕೋಟಿಯಷ್ಟು ಹಣ, ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸರಿಸುಮಾರು 2 ಲಕ್ಷದಷ್ಟು ಹಣವನ್ನು ವ್ಯಯಿಸುತ್ತಿದೆ. ಒಟ್ಟು 840 ವಸತಿ ಶಾಲೆಗಳ ಮೇಲೆ ಸರಕಾರ ವಾರ್ಷಿಕವಾಗಿ 36 ಸಾವಿರ ಕೋಟಿ ರೂಪಾಯಿಗಳ ಬಜೆಟ್‌ನ್ನು ಮೀಸಲಿಟ್ಟಿದೆ. ಆದರೆ ಈ ಎಲ್ಲಾ 840 ವಸತಿ ಶಾಲೆಗಳ ಪೈಕಿ ಚಾಮರಾಜಪೇಟೆಯ ಒಂದು ಶಾಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳು ಇಂಗ್ಲೀಷ್ ಮಾಧ್ಯಮ ಶಾಲೆಗಳಾಗಿ ಬದಲಾಗಿರುವುದು ಮಾತ್ರ ದುರಂತವೇ ಸರಿ. ನಾವಿಂದು ಬಡಮಕ್ಕಳಿಗೆ ಕನ್ನಡ ಮಾಧ್ಯಮ, ಸ್ಥಿತಿವಂತರಿಗೆ ಇಂಗ್ಲೀಷ್ ಮಾಧ್ಯಮ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಇದು ಸಲ್ಲದು. ಬುದ್ದಿವಂತಿಕೆಗೆ ಬಾಷೆಯ ತೊಡಕಿಲ್ಲ ಎಂಬುದನ್ನು ಜರ್ಮನಿ, ಜಪಾನ್, ಚೀನಾ, ರಷ್ಯಾ ದೇಶಗಳು ಸಾಬೀತುಪಡಿಸಿವೆ. ಇನ್ನೂ ಮುಂದಾದರೂ ಜಿಲ್ಲೆಗೊಂದರಂತೆ ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಸರಕಾರ ಮುಂದಾಗಬೇಕು. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು 15 ವರ್ಷಗಳ ಹಿಂದೆ ಪ್ರಾರಂಭಿಸಿ ಸದ್ಯ 640 ವಿದ್ಯಾರ್ಥಿಗಳು ಸಂಪೂರ್ಣ ಉಚಿತ ಶಿಕ್ಷಣದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಶಾಲೆಗಾಗಿ ನಮ್ಮ ಪ್ರತಿಷ್ಠಾನ ಪ್ರತಿ ವಿದ್ಯಾರ್ಥಿಯ ಮೇಲೆ 1.30 ಲಕ್ಷದಂತೆ ಸುಮಾರು 8ಕೋಟಿಯಷ್ಟು ಹಣವನ್ನು ವಿನಿಯೋಗಿಸುತ್ತಿದೆ. ಸರಕಾರ, ಇಲಾಖೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಮಾದರಿಯಾಗಿ ಪರಿಗಣಿಸಿ, ಇದೇ ರೀತಿಯ ಗುಣಾತ್ಮಕ ಶಿಕ್ಷಣವನ್ನು ನೀಡಿದರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಎಂದು ಸೋಲಾಗದು. ನಮ್ಮ ರಾಜ್ಯದಲ್ಲಿರುವ ಹತ್ತು ಹಲವು ಶ್ರೀಮಂತ ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಕಾರ್ಪೋರೇಟ್ ಸಂಸ್ಥೆಗಳು ಆಳ್ವಾಸ್ ಮಾದರಿಯ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಮುಂದೆ ಬರಬೇಕು. ತಮ್ಮ ಸಿಎಸ್‌ಆರ್ ಫಂಡ್‌ನ್ನು ಈ ನೆಲೆಯಲ್ಲಿ ವಿನಿಯೋಗಿಸಲು ಮನಸ್ಸು ಮಾಡಬೇಕು. ಈ ಸಂಸ್ಥೆಗಳು ತಮ್ಮ ಸಿಎಸ್‌ಆರ್ ಫಂಡ್‌ನ್ನು ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಮಿಸಲು ಅಥವಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬಳಸಲು ಮುಂದೆ ಬಂದರೆ ತಾನೇ ಖುದ್ದಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಮಕ್ಕಳಿಗೆ ಈ ಕಾಲಕ್ಕುನುಗುಣವಾದ ಶಿಕ್ಷಣವನ್ನು ನೀಡಲು ಸಿದ್ದ. ಯಾರೇ ಒಬ್ಬ ವ್ಯಕ್ತಿ, ಸಂಘ ಸಂಸ್ಥೆ ಅಥವಾ ಸರಕಾರವಿರಬಹುದು ತನಗೆ ಇಂತಹ ಅವಕಾಶವನ್ನು ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡರೆ, ಅವರ ಹೆಸರಿನಲ್ಲಿ ತನ್ನ ಕ್ಯಾಂಪಸನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತಾನು ಉತ್ಸುಕನಾಗಿದ್ದೆನೆ. ಸರಕಾರವು ಬಯಸಿದಲ್ಲಿ ಆಳ್ವಾಸ್ ಕ್ಯಾಂಪಸ್‌ನಲ್ಲೆ ಒಂದು ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಮುಂದೆ ಬಂದರೆ, ಈ ವರ್ಷದಲ್ಲೆ ಅಂತಹ ಶಾಲೆಯನ್ನು ಪ್ರಾರಂಭಿಸಲು ಸಿದ್ಧ ಎಂದರು. 35ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ 6ರಿಂದ 9ನೇ ತರಗತಿಯವರೆಗೆ 640ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ಊಟ, ವಸತಿ ವ್ಯವಸ್ಥೆಯಲ್ಲಿ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ. ವಾರ್ಷಿಕ ಈ ವಿದ್ಯಾರ್ಥಿಗಳ ಮೇಲೆ ಸಂಸ್ಥೆ ಸುಮಾರು 8 ಕೋಟಿಯಷ್ಟು ಹಣವನ್ನು ವ್ಯಯಿಸುತ್ತಿದೆ. 6 ರಿಂದ 9ನೇ ತರಗತಿಯವರೆಗಿನ ಪಠ್ಯ ವಿಷಯಗಳು ಮತ್ತು ತಾರ್ಕಿಕ ಸಾಮರ್ಥ್ಯ ಸೇರಿ ಒಟ್ಟು 2 ಗಂಟೆ 30 ನಿಮಿಷದಂತೆ 150 ಅಂಕಗಳಿಗೆ ಪರೀಕ್ಷೆ ನಡೆದಿದೆ. ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಪ್ರತ್ಯೇಕ ಆಯ್ಕೆ ಶಿಬಿರಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

ಆಳ್ವಾಸ್‌ನಲ್ಲಿ ಫಿಸಿಯೋ ಕನೆಕ್ಟ್ - 2025 ವಿಚಾರ ಸಂಕಿರಣ

Article Image

ಆಳ್ವಾಸ್‌ನಲ್ಲಿ ಫಿಸಿಯೋ ಕನೆಕ್ಟ್ - 2025 ವಿಚಾರ ಸಂಕಿರಣ

ಮೂಡುಬಿದಿರೆ: ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಫಿಸಿಯೋ ಕನೆಕ್ಟ್ - 2025 ವಿದ್ಯಾಗಿರಿಯ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೇಜಸ್ವಿನಿ ಆಸ್ಪತ್ರೆಯ ಆರ್ಥೋಸ್ಕೊಪಿ ಹಾಗೂ ಸ್ಪೋರ್ಟ್ಸ್ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸುಮಂತ್ ನಾಯಕ್, ಶಸ್ತ್ರಚಿಕಿತ್ಸೆಯು ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡಬಲ್ಲದು ಆದರೆ ನಿಜವಾದ ಸವಾಲು ರೋಗಿಯ ಚೇತರಿಕೆಯಲ್ಲಿ ಕಂಡುಬರುತ್ತದೆ. ಫಿಸಿಯೋತೆರಪಿಸ್ಟ್ ಗಳು ಅಂತಹ ಸವಾಲುಗಳನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಅದ್ಯಕ್ಷತೆ ವಹಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿ ಮಾತನಾಡಿ, ಕಲಿಯುವಿಕೆಯು ಒಂದು ನಿರಂತರ ಪ್ರಕ್ರಿಯೆ. ಈ ವಿಚಾರ ಸಂಕಿರಣದ ಮೂಲಕ ಪ್ರತಿಯೊಬ್ಬರು ಸವಾಲನ್ನು ಅರಿಯುವ ಜೊತೆಗೆ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜ್ಞಾನದ ವಿನಿಮಯವಾಗುವುದು ಅಗತ್ಯ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಪ್ರಾಧ್ಯಪಕ ಡಾ. ಪ್ರಭು ರಾಜ ಗಾಯಗಳ ಚೇತರಿಕೆಯಲ್ಲಿ ಉಂಟಾಗುವ ತೋರಕೊಲಂಬರ್ ಫಾಸಿಯ ಕುರಿತು ಮಾಹಿತಿ ನೀಡಿದರು. ಆಕ್ಸ್ಫರ್ಡ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ವಸಂತನ್, ಸ್ಟ್ರೋಕ್ಉಂಟಾದ ರೋಗಿಗಳಿಗೆ ಕೊಡಮಾಡುವ ಫಿಸಿಯೋಥೆರಪಿ ವ್ಯಾಯಾಮದ ಕುರಿತು ಮಾತನಾಡಿದರು. ಚೆನ್ನೈನ ಸವಿತ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಸರವನ ಕುಮಾರ್ ಜೆಐಸಿಯು ರೋಗಿಗಳ ನಿರ್ವಹಣೆಯಲ್ಲಿ ಫಿಸಿಯೋಥೆರಪಿ ಪಾತ್ರದ ಕುರಿತು ಹಾಗೂ ಡಾ. ಪರ್ತಿಪನ್ ರಾಮಸ್ವಾಮಿ ವ್ಯವಹಾರಿಕ ಉದ್ಯಮವಾಗಿ ಫಿಸಿಯೋಥೆರಪಿ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ವಿಚಾರ ಸಂಕಿರಣದಲ್ಲಿ ಭಾರತದ ವಿವಿಧ ಕಾಲೇಜುಗಳಿಂದ 420 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕ್ಷಮಾ ಶೆಟ್ಟಿ ಉಪಸ್ಥಿತರಿದ್ದರು. ಡಾ. ಉಮ್ಮೆ ಸೌದಾ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಎಸ್.ಡಿ.ಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ವಿಶ್ವನಾಥ್ ಪಿ. ನೇಮಕ

Article Image

ಉಜಿರೆ ಎಸ್.ಡಿ.ಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ವಿಶ್ವನಾಥ್ ಪಿ. ನೇಮಕ

ಉಜಿರೆ, ಮಾರ್ಚ್ 1: ಉಜಿರೆಯ ಶ್ರೀ ಧ.ಮ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಹಿರಿಯ ಅಧ್ಯಾಪಕ ಡಾ. ವಿಶ್ವನಾಥ ಪಿ ನೇಮಕಗೊಂಡಿದ್ದಾರೆ. ಡಾ.ಕುಮಾರ ಹೆಗ್ಡೆ ಅವರ ವಯೋಸಹಜ ನಿವೃತ್ತಿಯಿಂದ ತೆರವಾಗಿದ್ದ ಪ್ರಾಂಶುಪಾಲರ ಹುದ್ದೆಗೆ ವಿಶ್ವನಾಥ ಅವರು ಆಯ್ಕೆಯಾಗಿದ್ದಾರೆ. 34 ವರ್ಷಗಳ ಬೋಧನಾನುಭವವುಳ್ಳ ವಿಶ್ವನಾಥ ಅವರು ಕಳೆದ ಐದು ವರ್ಷಗಳಿಂದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ, ವಿಭಾಗದಲ್ಲಿ ಅಧ್ಯಯನ ಪೂರೈಸಿ 1990ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಆರ್ಗ್ಯಾನಿಕ್ ಕೆಮಿಸ್ಟ್ರೀ ವಿಷಯದಲ್ಲಿ ವಿಶೇಷ ಪರಿಣತಿ ಪಡೆದವರು. ನವದೆಹಲಿಯ ಯುಜಿಸಿಯ ಫ್ಯಾಕಲ್ಟಿ ಇಂಪ್ರೂವ್‌ಮೆಂಟ್ ಪ್ರೋಗ್ರಾಂನ ಭಾಗವಾಗಿ ಇವರು ಹೀಟರಾಸೈಕ್ಲಿಕ್ ಕೆಮಿಸ್ಟ್ರೀ ವಲಯದಲ್ಲಿ ನಡೆಸಿದ ಸಂಶೋಧನಾ ಅಧ್ಯಯನಕ್ಕಾಗಿ 1999ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಅಧ್ಯಯನ ಪೂರ್ಣಗೊಳಿಸಿದ ನಂತರ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ಒಂದು ವರ್ಷದವರೆಗೆ ಸೇವೆ ಸಲ್ಲಿಸಿದ ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ 1991ರಲ್ಲಿ ಸೇರ್ಪಡೆಗೊಂಡರು. ಕಾಲೇಜಿನಲ್ಲಿ 2008ರಲ್ಲಿ ಆರಂಭಗೊಂಡ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ಇವರ ಹೆಗಲೇರಿತು. ವಿಭಾಗದ ಮುಖ್ಯಸ್ಥರಾಗಿ 2013ರಲ್ಲಿ ಬಡ್ತಿ ಹೊಂದಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ನಂತರ 2020ರಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ನೇಮಕಗೊಂಡರು. ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ಯುಜಿಸಿ ನೂತನ ನಿಯಮಾನುಸಾರ ರಸಾಯನಶಾಸ್ತ್ರ ಪ್ರಾಧ್ಯಾಪಕರನ್ನಾಗಿಸಿ ಬಡ್ತಿ ನೀಡಿತು. ದಕ್ಷಿಣ ಕನ್ನಡದ ಖಾಸಗಿ ಕಾಲೇಜುಗಳ ಪೈಕಿ ಮೊದಲ ಬಾರಿಗೆ ಡಾ. ವಿಶ್ವನಾಥ ಪಿ ಅವರಿಗೆ ಪ್ರಾಧ್ಯಾಪಕ ಹುದ್ದೆ ಲಭಿಸಿರುವುದು ವಿಶೇಷ. ಡಾ.ವಿಶ್ವನಾಥ ಪಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಚಾರ ಗೋಷ್ಠಿಗಳು ಸೇರಿದಂತೆ ಅನೇಕ ಮಹತ್ವದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ತಮ್ಮ ಸಂಶೋಧನಾ ಅಧ್ಯಯನದ ಆಧಾರದಲ್ಲಿ 38 ಸಂಶೋಧನಾ ಪ್ರಬಂಧಗಳನ್ನು ಪೀರ್ ರೀವ್ಯೂವ್ಡ್ ಮತ್ತು ಯುಜಿಸಿ ಕೇರ್ ಲಿಸ್ಟ್ನಲ್ಲಿ ಆದ್ಯತೆ ಪಡೆದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ 12 ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದಿಂದ ಸಂಶೋಧನಾ ಮಾರ್ಗದರ್ಶಕರಾಗಿ ನಿಯೋಜಿತರಾಗಿರುವ ಇವರ ಮಾರ್ಗದರ್ಶನದಲ್ಲಿ ಒಬ್ಬರು ಪಿ.ಎಚ್.ಡಿ ಮತ್ತು ಒಬ್ಬರು ಎಂ.ಫಿಲ್ ಪದವಿ ಪಡೆದಿದ್ದಾರೆ. ಯುಜಿಸಿಯಿಂದ ಅನುಮೋದಿತ ಮೂರು ಕಿರಿಯ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದು ರಸಾಯನಶಾಸ್ತ್ರ ವಿಭಾಗದಿಂದ ನಿರ್ವಹಿಸಲ್ಪಟ್ಟ ಸಂಶೋಧನಾ ಯೋಜನೆಗೆ ಕೋ ಇನ್ವೆಸ್ಟಿಗೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಅನುಮೋದಿತಗೊಂಡ ಮಹತ್ವದ ಸಂಶೋಧನಾ ಯೋಜನೆಯ ಸ್ನಾತಕೋತ್ತರ ಹಂತದಲ್ಲಿ ಯೋಜನಾನುಷ್ಠಾನ ಸಮೂಹದ ಅಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬೋಧನೆ, ಸಂಶೋಧನಾ ಅಧ್ಯಯನ ಮತ್ತು ಸಾಂಸ್ಥಿಕ ಆಡಳಿತಾತ್ಮಕ ಹುದ್ದೆಗಳ ಸಮರ್ಥ ನಿರ್ವಹಣೆ – ಇವು ಡಾ.ವಿಶ್ವನಾಥ ಪಿ ಅವರ ಶೈಕ್ಷಣಿಕ ವೃತ್ತಿಪರತೆ ಮತ್ತು ನಾಯಕತ್ವದ ಗುಣಾತ್ಮಕ ಅಂಶಗಳು. ರಸಾಯನಶಾಸ್ತ್ರದ ಅಕ್ಯಾಡೆಮಿಕ್ ಹಿನ್ನೆಲೆಯೊಂದಿಗೆ ಎಸ್.ಡಿ.ಎಂ ಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿಭಾಯಿಸಿದವರು. ಬೋಧಕರು ಅಳವಡಿಸಿಕೊಳ್ಳಬೇಕಾದ ಶೈಕ್ಷಣಿಕ ಶಿಸ್ತನ್ನು ನೆಲೆಗೊಳಿಸಿದವರು. ವ್ಯವಸ್ಥಿತ ರೀತಿಯಲ್ಲಿ ಸಹೋದ್ಯೋಗಿಗಳ ತಂಡವನ್ನು ಕಟ್ಟುವ ಜಾಣ್ಮೆ ಇವರ ಶಕ್ತಿ. ವೃತ್ತಿಪರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿಗೆ ಪ್ರೇರಣೆ ನೀಡುವ ಅನನ್ಯತೆ ಇವರದು. ಡಾ.ವಿಶ್ವನಾಥ ಪಿ ನಿರ್ವಹಿಸಿದ ಹುದ್ದೆಗಳು ಮತ್ತು ಹೊಣೆಗಾರಿಕೆಗಳು ರೋವರ್/ರೇಂಜರ್ ಕಾರ್ಯಕ್ರಮ ಅಧಿಕಾರಿ, 1994ರಿಂದ 2003 ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ, 2003-07 ಅಧ್ಯಕ್ಷರು, 2008-2013 ಅಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರು, ಎಸ್.ಡಿ.ಎಂ ಕಾಲೇಜ್(ಸ್ವಾಯತ್ತ), ಉಜಿರೆ, 2013ರವರೆಗೆ ಕಾರ್ಯದರ್ಶಿಗಳು, ಎಸ್.ಡಿ.ಎಂ ಅಧ್ಯಾಪಕರ ಸಂಘ, 2015-16 ಉಪಾಧ್ಯಕ್ಷರು, ಮಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ (ಅಮುಕ್ತ್) 2015-2017 ಸಂಯೋಜಕರು, ಸಿ.ಪಿ.ಇ ಸ್ಕೀಮ್, ಯುಜಿಸಿ, ನವದೆಹಲಿ, ಎಸ್‌ಡಿಎಂ ಕಾಲೇಜ್, ಉಜಿರೆ. 2014-2019 ಸದಸ್ಯರು, ಐಕ್ಯೂಎಸಿ, ಅಕ್ಯಾಡೆಮಿಕ್ ಕೌನ್ಸಿಲ್, ಎಸ್.ಡಿ.ಎಂ ಕಾಲೇಜ್, ಉಜಿರೆ 2014ರವರೆಗೆ ಅಧ್ಯಕ್ಷರು, ಟೀಚಿಂಗ್, ಲರ್ನಿಂಗ್ ಮತ್ತು ಇವ್ಯಾಲ್ಯುವೇಷನ್, 2014ತೊ 2020 ನಿರ್ದೇಶಕರು, ಎಸ್.ಡಿ.ಎಂ ಸಂಶೋಧನಾ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, 2016ರಿಂದ 2021 ಸಂಯೋಜಕರು, ಎಂ.ಎಸ್.ಸಿ (ಮೆಡಿಸಿನಲ್ ಕೆಮಿಸ್ಟ್ರೀ, ಕೆಮಿಸ್ಟ್ರೀ ಆರ್ಗ್ಯಾನಿಕ್ ಕೆಮಿಸ್ಟ್ರೀ, 2008ರಿಂದ ಸಂಯೋಜಕರು, ಎಸ್.ಡಿ.ಎಂ ಮಣ್ಣು ಪರೀಕ್ಷಾ ಕೇಂದ್ರ 2016ರಿಂದ ಉಪಾಧ್ಯಕ್ಷರು, ಎಸ್.ಡಿ.ಎಂ ಸಿಬ್ಬಂದಿ ಸೌಹಾರ್ದ ಸಹಕಾರಿ ನಿಯಮಿತ(ರಿ), ಉಜಿರೆ. 2019ರಿಂದ ಕನ್ಸಲ್ಟಂಟ್, ವಾಟರ್ ಕ್ವಾಲಿಟಿ ಮೇಂಟೇನೆನ್ಸ್, ಎಸ್.ಡಿ.ಎಂ ಸ್ವಿಮ್ಮಿಂಗ್ ಪೂಲ್, 2020ರ ಜುಲೈ ತಿಂಗಳಿಂದ ಸದಸ್ಯರು, ಐಕ್ಯೂಎಸಿ, ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆ, 2024ರಿಂದ ಕಾರ್ಯಕಾರಿ ಮಂಡಳಿ ಸದಸ್ಯರು, ಎಸ್.ಡಿ.ಎಂ ಕಾಲೇಜು(ಸ್ವಾಯತ್ತ), ಉಜಿರೆ, 2025ರಿಂದ ಅಧ್ಯಕ್ಷರು, ಅಧ್ಯಯನ ಮಂಡಳಿ, ಎಂಎಸ್‌ಸಿ ಕೆಮಿಸ್ಟ್ರೀ/ಆರ್ಗ್ಯಾನಿಕ್ ಕೆಮಿಸ್ಟ್ರೀ, ಎಸ್.ಡಿ.ಎಂ ಕಾಲೇಜ್, ಉಜಿರೆ ಸದಸ್ಯರು, ಅಧ್ಯಯನ ಮಂಡಳಿ, ಸೇಂಟ್ ಅಲೋಷಿಯಸ್ ಕಾಲೇಜ್, ಮಂಗಳೂರು 2020ರಿಂದ 2022ರವರೆಗೆ, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ. 2022ರಿಂದ 2024ರವರೆಗೆ, ವಿವೇಕಾನಂದ ಕಾಲೇಜ್, ಪುತ್ತೂರು 2022ರಿಂದ 2025ರವರೆಗೆ ಆಂತರಿಕ ಪರೀಕ್ಷಾ ಮಂಡಳಿ ಸದಸ್ಯರು, ಸೇಂಟ್ ಅಲೋಷಿಯಸ್ ಕಾಲೇಜ್, ಮಂಗಳೂರು, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ, ಯೆನಪೊಯಾ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಿಂದ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಆಚರಣೆಯ ಅಂಗವಾಗಿ ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಪೋಸ್ಟರ್ ಮತ್ತು ಮಾಡಲ್ ಪ್ರಸ್ತುತಿ ಸ್ಪರ್ಧೆಗಳನ್ನು ನಡೆಸಲಾಯಿತು. ಈ ವರ್ಷ ಸುಮಾರು 62 ತಂಡದವರಿಂದ ವೈಜ್ಞಾನಿಕ ಪೋಸ್ಟರ್‌ಗಳನ್ನು ಮತ್ತು 32 ಮಾಡಲ್‌ಗಳನ್ನು ತಯಾರಿಸಿ ಪ್ದರ್ಶಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮಾಡಲ್ ಪ್ರದರ್ಶನವನ್ನು ಉದ್ಘಾಟಿಸಿದರು. ಹೈದರಾಬಾದ್‌ನ ಡಾ. ರೆಡ್ಡೀಸ್ ಇನ್ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನ ನಿರ್ದೇಶಕರಾದ ಡಾ. ಶ್ರೀನಿವಾಸ ಓರಗಂಟಿ ಅವರು ಮುಖ್ಯ ಅತಿಥಿಗಳಾಗಿ ಪೋಸ್ಟ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ಅವರು ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತೀಯ ಫಾರ್ಮಾ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಮುಂಚ್ಛೂಣಿಯಲ್ಲಿವೆ. ಯುವ ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಸಕ್ರೀಯ ಆಸಕ್ತಿಯನ್ನು ಹೊಂದಬೇಕು. ಭಾರತದಲ್ಲಿ ಆರೋಗ್ಯ ವೃತ್ತಿಪರರು ಮತ್ತು ಸಂಶೋಧಕರಿಗೆ ಸಾಕಷ್ಟು ಅವಕಾಶಗಳಿವೆ ಎಂದರು . ಮುಖ್ಯ ಅತಿಥಿಗಳಾದ ಡಾ. ಶ್ರೀನಿವಾಸ ಓರಗಂಟಿ, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಮತ್ತು ಡಾ. ನೈದಿಲ ಶೆಟ್ಟಿ ಅವರು ವಿಜೇತರಿಗೆ ನಗದು ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ಮತ್ತು ಸಂಸ್ಥೆಗಳ ಸಂಯೋಜಕರಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಪೊಸ್ಟರ್ ವಿಭಾಗದಲ್ಲಿ ಶ್ರುಪ್ತಾ ಪಡಿವಾಳ ಮತ್ತು ತಂಡ ಪ್ರಥಮ ಬಹುಮಾನವನ್ನು ಪಡೆದಿದೆ. ಮಾಡಲ್ ವಿಭಾಗದಲ್ಲಿ ಡಾ. ಮಂಜುನಾಥ ಮೇಟಿ ಮತ್ತು ತಂಡ ಪ್ರಥಮ ಬಹುಮಾನ ಗಳಿಸಿದೆ. ಬೋಧಕೇತರ ವಿಭಾಗದಲ್ಲಿ ಪ್ರವೀಣ ಹೋಳೆಮ್ಮನವರ ಮತ್ತು ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪಕುಲಪತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿರಾದ ಡಾ. ಚಿದೇಂದ್ರ ಶೆಟ್ಟರ, ಉಪ ಕುಲಸಚಿವರಾದ ಡಾ. ಅಜಂತಾ ಜಿ. ಎಸ್., ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ ಎಲ್. ಚಕ್ರಸಾಲಿ ಮತ್ತಿತರರು ಉಪಸ್ಥಿತರಿದ್ದರು. ಡಾ. ರಮೇಶ ಕುಮಾರ, ಪ್ರಾಧ್ಯಾಪಕರು, ಸ್ತ್ರಿ ರೋಗ ಮತ್ತು ಪ್ರಸೂತಿ ವಿಭಾಗ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಟಿ. ಜಿ. ವಾಸುದೇವನ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ದೀಕ್ಷಾ ದೇವರ ಪ್ರಾರ್ಥನೆ ಮಾಡಿದರು. ಡಾ. ಶರ್ಮಿಳಾ ದುಧಾನಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ವಾಚಿಸಿದರು. ಡಾ. ಸಲೀಮಾ ಬಿಜಾಪುರಿ ವಂದನಾರ್ಪಣೆ ಮಾಡಿದರು. ಡಾ. ರೇಣುಕಾರಾಧ್ಯ ಕೆ. ಮಠ ಕಾರ್ಯಕ್ರಮವನ್ನು ನಿರೂಪಿಸಿದರು.

ಎಸ್.ಡಿ.ಎಂ ಪಿಜಿ ಸೆಂಟರ್ ಕೆಮಿಸ್ಟ್ರಿ ವಿಭಾಗದಿಂದ ವಿಜ್ಞಾನ ದಿನಾಚರಣೆ

Article Image

ಎಸ್.ಡಿ.ಎಂ ಪಿಜಿ ಸೆಂಟರ್ ಕೆಮಿಸ್ಟ್ರಿ ವಿಭಾಗದಿಂದ ವಿಜ್ಞಾನ ದಿನಾಚರಣೆ

ಉಜಿರೆ ಮಾರ್ಚ್1: ತಾರ್ಕಿಕ ಚಿಂತನೆಯೊAದಿಗೆ ಗುರುತಿಸಿಕೊಂಡರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆಯುವಂಥ ಸಾಧನೆ ಸಾಧ್ಯವಾಗಿಸಿಕೊಳ್ಳಬಹುದು ಎಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಂದಕುಮಾರಿಕೆ.ಪಿ ಅಭಿಪ್ರಾಯಪಟ್ಟರು. ಉಜಿರೆ ಶ್ರೀ ಧ. ಮಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರದಂದು ರಸಾಯನ ಶಾಸ್ತ್ರ ವಿಭಾಗ ಹಾಗೂ ಕಾಂಕೇಮ್ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನ ಶಾಸ್ತ್ರ ವಿಜ್ಞಾನದ ಹೃದಯ ಭಾಗವಾಗಿದ್ದು, ದೈನಂದಿನ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯವಾದ ಪಾತ್ರವಹಿಸುತ್ತಿದೆ. ಆಧುನಿಕ ಜೀವನದ ಪ್ರತಿಯೊಂದು ಅಂಶವನ್ನೂ ರೂಪಿಸುತ್ತಿದೆ. ತಂತ್ರಜ್ಞಾನದ ಮೂಲಕ ಜ್ಞಾನಾರ್ಜನೆ ಸಾಧ್ಯವಾಗಿಸಿಕೊಳ್ಳಬೇಕು. ವೈಜ್ಞಾನಿಕ ಸಂಶೋಧನೆಗಳು ವೇಗಗತಿಯಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಅದಕ್ಕೆತಕ್ಕಂತೆ ವೃದ್ಧಿಸಿಕೊಳ್ಳಬೇಕು. ಇಲ್ಲವಾದರೆ ಉದ್ಯೋಗ ಅವಕಾಶಗಳು ಲಭಿಸುವುದಿಲ್ಲ ಎಂದರು. ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಂಶೋಧನೆ. ರಾಮನ್ ಪರಿಣಾಮದ ವಿವರಗಳನ್ನು 1928 ಫೆ. 28ರಂದು ಜಗತ್ತಿಗೆ ತಿಳಿಸಿದ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ. ಅವರ ಸಂಶೋಧನೆ ಅನ್ವಯದ ಮನವರಿಕೆಯಿಂದಾಗಿ 1930 ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಯಿತು. ಹಲವಾರು ವಿಜ್ಞಾನಿಗಳು ನಡೆದು ಬಂದ ಹಾದಿಯನ್ನು ಸ್ಮರಿಸಲೇಬೇಕು. ನಮ್ಮ ಸಣ್ಣ ಸಣ್ಣ ಆವಿಷ್ಕಾರಗಳೇ ದೊಡ್ಡ ಸಾಧನೆಗೆ ಮೈಲಿಗಲ್ಲುಗಳಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅವರು ಮಾತನಾಡಿದರು. ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯು ವಿದ್ಯಾರ್ಥಿಗಳನ್ನು ವಿಜ್ಞಾನ ವಿಷಯಗಳತ್ತ ಆಸಕ್ತಿ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಸಂಶೋಧನಾ ವಲಯದಲ್ಲಿ ಮಹತ್ವದ ಸಾಧನೆ ಕೈಗೊಳ್ಳಲು ಪ್ರೇರಣೆ ನೀಡುತ್ತದೆ ಎಂದರು. ರಸಾಯನಶಾಸ್ತ್ರ ವಿಭಾಗವು ಕಾಲೇಜಿನಲ್ಲಿಯೇ ಅತ್ಯಂತ ಅಧಿಕ ಸಂಶೋಧನೆಗಳನ್ನು ಕೈಗೊಂಡಿರುವ ವಿಭಾಗವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಭಾಗದ ಪ್ರತಿಷ್ಠೆಯನ್ನು ಹೆಚ್ಚಿಸುವ ಹಾಗು ಮುಂದಿನ ಪೀಳಿಗೆಗೆ ಮಾದರಿಯಾಗುವಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯ ಬಿ.ಪಿ, ಕಾಂಕೇಮ್ ಕಾರ್ಯದರ್ಶಿ ಡಾ.ನವೀನ್‌ಕುಮಾರ್, ಜಂಟಿ ಕಾರ್ಯದರ್ಶಿ ಡಾ. ಸುಜಯ್ ಎಂ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ನಿರೂಪಿಸಿದರು. ಕಾವ್ಯ ಶೆಟ್ಟಿ ಸ್ವಾಗತಿಸಿದರು. ಅನನ್ಯ ಪಿ. ವಂದಿಸಿದರು.

ಧರ್ಮಸ್ಥಳಕ್ಕೆ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

Article Image

ಧರ್ಮಸ್ಥಳಕ್ಕೆ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

ಉಜಿರೆ: ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳು ಗುರುವಾರ ಧರ್ಮಸ್ಥಳಕ್ಕೆ ಬಂದು ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಶಿಸ್ತುಬದ್ಧವಾಗಿ ನಡೆಯುತ್ತಿರುವ ಬಹುಮುಖಿ ಸೇವಾಚಟುವಟಿಕೆಗಳನ್ನು ಕುತೂಹಲ ಮತ್ತು ಆಸಕ್ತಿಯಿಂದ ವೀಕ್ಷಿಸಿ ಅಪೂರ್ವ ಅನುಭವ ಪಡೆದರು. ವಿಶೇಷವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ತಮ್ಮ ಅನೇಕ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ಪಡೆದರು. ಇತ್ತೀಚೆಗೆ ಭಾರತದ ಉಪರಾಷ್ಟ್ರಪತಿ ಮಾನ್ಯ ಜಗದೀಪ್ ಧನ್‌ಕರ್ ಉದ್ಘಾಟಿಸಿದ ದೇವರ ದರ್ಶನಕ್ಕಾಗಿ ``ಶ್ರೀ ಸಾನ್ನಿಧ್ಯ’’ ಸರದಿ ಸಾಲಿನ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಆಸಕ್ತಿಯಿಂದ ವೀಕ್ಷಿಸಿ, ಗಮನಿಸಿ ಸಂತೋಷ ಮತ್ತು ಅಚ್ಚರಿ ವ್ಯಕ್ತಪಡಿಸಿದರು. ಭಕ್ತಾದಿಗಳ ಅನುಕೂಲಕ್ಕಾಗಿ ಶೀಘ್ರ ದೇವರ ದರ್ಶನಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅಳವಡಿಸಿದ ಸೌಲಭ್ಯ, ಸವಲತ್ತುಗಳ ಬಗ್ಗೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ``ಅನ್ನಪೂರ್ಣ’’ ಭೋಜನಾಲಯದಲ್ಲಿ ಪ್ರತಿದಿನ ಸರಾಸರಿ 50,000 ಮಂದಿ ಭಕ್ತಾದಿಗಳಿಗೆ ಶುಚಿ-ರುಚಿಯಾದ ಸರಳ ಸಾತ್ವಿಕ ಆಹಾರ-ಅನ್ನ, ಸಾರು, ಸಾಂಬಾರು, ಮಜ್ಜಿಗೆ ಹಾಗೂ ಕುಡಿಯುವ ನೀರು ಎಲ್ಲವನ್ನೂ ಸ್ವಚ್ಛತೆಯೊಂದಿಗೆ ಬಳಸುವ ವಿಧಾನ, ಶಿಸ್ತು ಮತ್ತು ಊಟ ಮಾಡಿದ ಹಾಳೆತಟ್ಟೆ, ಬಾಳೆ ಎಲೆ ಇತ್ಯಾದಿಗಳ ನಿರ್ವಹಣೆ, ಅಡುಗೆ ಕೋಣೆಯಲ್ಲಿ ಬಳಸಿದ ನೀರನ್ನು ಶುದ್ಧೀಕರಿಸಿ ಮುಳಿಕ್ಕಾರು ತೋಟದ ಗಿಡಗಳಿಗೆ ಬಳಕೆ ಇತ್ಯಾದಿ ಬಗ್ಗೆ ವಿದ್ಯಾರ್ಥಿಗಳು ಸಮಗ್ರ ಮಾಹಿತಿ ಕಲೆ ಹಾಕಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ ಹಾಗೂ ಕುತೂಹಲಕಾರಿ ಪ್ರಶ್ನೆಗಳಿಗೆ ಪೂಜ್ಯರ ಸಮರ್ಪಕ ಉತ್ತರದಿಂದ ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು. ಅನ್ನದಾನ, ವಿದ್ಯಾದಾನ, ನ್ಯಾಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳ ಪರಂಪರೆ ಮತ್ತು ಮಾಹಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು. ``ನೋಡಿ ತಿಳಿ, ಮಾಡಿ ಕಲಿ’’ ತತ್ವವನ್ನು ಇಲ್ಲಿ ಪ್ರತ್ಯಕ್ಷವಾಗಿ ಅನುಭವಿಸಿದರು. ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ, ಕಲೆ, ಸಂಸ್ಕೃತಿ, ಪರಂಪರೆಯ ಸಂರಕ್ಷಣೆಯೊಂದಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ವಿದ್ಯಾರ್ಥಿಗಳಿಗೂ, ಪ್ರೊಫೆಸರುಗಳಿಗೂ ಹೊಸ ಅಪೂರ್ವ ಅನುಭವವನ್ನು ನೀಡಿತು. ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯೊಂದಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಯಶಸ್ವಿ ಬಳಕೆಯೊಂದಿಗೆ ಧರ್ಮಸ್ಥಳದ ಜನಮಂಗಳ ಕಾರ್ಯಗಳನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದ ಎಂ.ಬಿ.ಎ. ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳು ``ಅಯ್ಯಯ್ಯ, ಎಂಚ ಪೊರ್ಲಾಂಡ್’’ ಎಂದು ಅಚ್ಚರಿ ಮತ್ತು ಸಂತೋಷ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಶರಣ್‌ಕುಮಾರ್ ಶೆಟ್ಟಿ ಹಾಗೂ ಪ್ರೊ. ದಿಶಾ ಸಿ. ಶೆಟ್ಟಿ, ಪ್ರೊ. ಕೀರ್ತನ್ ದೀಕ್ಷಿತ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರ್ಮಸ್ಥಳಕ್ಕೆ ಅಧ್ಯಯನ ಪ್ರವಾಸದಲ್ಲಿ ಬಂದು ಅದ್ಭುತ ಅನುಭವ ಪಡೆದರು.

ಆಳ್ವಾಸ್‌ಗೆ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

Article Image

ಆಳ್ವಾಸ್‌ಗೆ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಬೆಂಗಳೂರಿನ ಜೆಪಿ ನಗರದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮೇರಿ ಗೋ ರೌಂಡ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್‌ನ 50ನೇ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯ ಫೈನಲ್ಸ್‌ನಲ್ಲಿ ಆಳ್ವಾಸ್ ತಂಡ ತಮಿಳುನಾಡುವಿನ ಪಿ.ಎಸ್.ಎನ್.ಎ ದಿಂಡಿಗಲ್ ತಂಡವನ್ನು 35-31 ಅಂಕಗಳಿಂದ ಮಣಿಸಿ ಗೋಲ್ಡ್ ಮೆಡಲ್ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಜೇತ ಆಳ್ವಾಸ್ ತಂಡವು ಸೂಪರ್ ಲೀಗ ಹಾಗೂ ಇತರ ಪಂದ್ಯಗಳಲ್ಲಿ ಆತಿಥೇಯ ಮೇರಿ ಗೋ ರೌಂಡ್ ಹಾಗೂ ಟಿಬಿಬಿಸಿ ತಿರುವತ್ತೂರು ತಂಡಗಳನ್ನು ಸೋಲಿಸಿತ್ತು. ಟೂರ್ನಿಯಲ್ಲಿ ರಾಷ್ಟ್ರದ 10 ಪ್ರಮುಖ ಆಹ್ವಾನಿತ ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ತಂಡದ ಲಕ್ಷ್ಮೀದೇವಿ ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಿಶೇಷ ಉಪನ್ಯಾಸ ಕಾರ್ಯಕ್ರಮ

Article Image

ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಜಿರೆ, ಫೆ. 24: ಪರಿಸರ ಸಂಬಂಧಿತ ಮಾಹಿತಿ ಕಲೆಹಾಕುವ ಸಂಯಮ ಮತ್ತು ಸಂಗ್ರಹಿತ ವಿವರಗಳನ್ನು ವಿವೇಚಿಸಿ ಅಭಿವ್ಯಕ್ತಿಸುವ ಪ್ರಯತ್ನಗಳ ಮೂಲಕ ಪರಿಸರ ಪರವಾದ ಕಾಳಜಿಯನ್ನು ಮೂಡಿಸಬಹುದು ಎಂದು ಪರಿಸರ ಚಿಂತಕ, ಲೇಖಕ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ಅವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪರಿಸರ ಕೇಂದ್ರಿತ ಚಿಂತನೆ ಮತ್ತು ಅಭಿವ್ಯಕ್ತಿ’ ಕುರಿತು ಮಾತನಾಡಿದರು. ಗಮನಿಸುವಿಕೆ, ದಾಖಲಿಸಿಕೊಳ್ಳುವಿಕೆ, ಪ್ರಶ್ನಿಸುವಿಕೆ, ಪರಿಚಯಿಸುವಿಕೆ ಆಧಾರಿತ ಬರವಣಿಗೆಯ ಅಭಿವ್ಯಕ್ತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪತ್ರಕರ್ತರಾಗಬಯಸುವವರಿಗೆ ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇರಬೇಕು. ಸಮಗ್ರ ಜ್ಞಾನದೊಂದಿಗೆ ಇದ್ದರೆ ಮಹತ್ವದ್ದನ್ನು ದಾಟಿಸುವ ಸಂವಹನಕಾರರಾಗಬಹುದು ಎಂದರು. ಯಾರೂ ಗಮನಿಸದೇ ಇರುವ ಸಂಗತಿಯನ್ನು ಬರೆದರೆ ಜನ ಓದುತ್ತಾರೆ. ಪರಿಸರದಲ್ಲಿ ತಿಳಿದುಕೊಳ್ಳಬೇಕಾದ ಅನೇಕ ಕೌತುಕದ ಅಂಶಗಳು ಅಡಗಿವೆ. ಅವುಗಳನ್ನು ತಿಳಿದುಕೊಂಡು ಜನರಿಗೆ ದಾಟಿಸುವ ಕಾಳಜಿ ತೋರಬೇಕು. ಆ ಮೂಲಕ ಪರಿಸರದ ಪರವಾದ ಸಂವಹನದ ವಿನೂತನ ಮಾದರಿಗಳನ್ನು ಸೃಷ್ಟಿಸಬಹುದು ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

ಕಲ್ಲಬೆಟ್ಟು : ಸ್ತ್ರೀ ಶಕ್ತಿಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ "ವೀರೆ- ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ" ಕಾರ್ಯಕ್ರಮವು ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಉದ್ಘಾಟನೆಯಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಅವರು ಹೆಣ್ಣುಮಕ್ಕಳ ಸುರಕ್ಷತೆಯ ಅವಶ್ಯಕತೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ತರಬೇತಿಗಳ ಮಹತ್ವವನ್ನು ವ್ಯಕ್ತಪಡಿಸುತ್ತ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಸಮಾಜದ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತು ಮಾತನಾಡಿದ ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರ ಸಮಾಜಮುಖಿ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಾಚಾರ್ಯ ಎಸ್. ಜಿ. ಹಿರೇಮಠ್ ಅವರು ಮಕ್ಕಳಲ್ಲಿ ಸ್ವಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ತರಬೇತಿಯು ಪ್ರಮುಖ ಪಾತ್ರ ವಹಿಸಲಿದೆ. ಹೆಣ್ಣು ಸುರಕ್ಷಿತ ವಲಯದಲ್ಲಿ ಬದುಕುತ್ತ ಸಮಾಜದ ಶಕ್ತಿಯಾಗಿ ರೂಪುಗೊಳ್ಳಬೇಕು. ಮಕ್ಕಳಲ್ಲಿ ಶಕ್ತಿ ಸ್ಫೂರ್ತಿಯನ್ನು ತುಂಬುವ ಎಕ್ಸಲೆಂಟ್ ಸಂಸ್ಥೆಯ ಸಂಕಲ್ಪ ಅಭಿನಂದನೀಯ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ, ಹೆಣ್ಣು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲಳಾದಾಗ ಸಮಾಜವು ಸಶಕ್ತವಾಗಿ ರೂಪುಗೊಳ್ಳುತ್ತದೆ. ಹೆಣ್ಣು ಮಕ್ಕಳು ತಮ್ಮ ಹಕ್ಕುಗಳು, ಅವಕಾಶಗಳು ಮತ್ತು ಸಬಲೀಕರಣದ ಬಗ್ಗೆ ಅರಿವು ಹೊಂದಿದಾಗ ಮಾತ್ರ ಸಮಾನತೆಯ ಸಮಾಜವನ್ನು ನಿರ್ಮಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಾ ಕೌಶಲಗಳನ್ನು ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವತ್ತ ಹೆಣ್ಣು ಯೋಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಕಾರ್ಯಕ್ರಮದ ಯೋಜನೆಯನ್ನು ಪ್ರಸ್ತುತಪಡಿಸಿದರು. ಸಭಾ ಕಾರ್ಯಕ್ರಮದ ನಂತರ ಇಂಚರ ಫೌಂಡೇಷನ್ (R) ಸಂಸ್ಥೆಯ ಸಿಬ್ಬಂದಿ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಭಾರ ನಿಲಯ ಪಾಲಕಿ ಆಶಾಲತಾ ಮತ್ತು ವಿದ್ಯಾರ್ಥಿ ಪ್ರತಿನಿಧಿ ಚೈತ್ರಾ ಪಾಟೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ : 30 ಕಂಪ್ಯೂಟರ್ ವಿತರಣಾ ಕಾರ್ಯಕ್ರಮ

Article Image

ರೋಟರಿ ಕ್ಲಬ್ : 30 ಕಂಪ್ಯೂಟರ್ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ : ಬಹುವರ್ಷಗಳಿಂದ ಅಗತ್ಯತೆ ಇದ್ದ ಬೆಳ್ತಂಗಡಿ ಪರಿಸರದ ಸರ್ಕಾರಿ ಶಾಲೆಗಳಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಮತ್ತು ನುವೇರ್ ಸಿಸ್ಟಮ್ಸ್ ಎಲ್ ಎಲ್ ಪಿ ಸಾಫ್ಟ್‌ವೇರ್ ಕಂಪನಿ ಬೆಂಗಳೂರು ಸಹಭಾಗಿತ್ವದಲ್ಲಿ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮವು ಕಾಶಿಬೆಟ್ಟು, ರೋಟರಿ ಸೇವಾ ಭವನದಲ್ಲಿ ನಡೆಯಿತು. ತಾಲೂಕಿನ ಶಾಲೆಗಳಲ್ಲಿ 40,000 ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೇ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಹಾಗು ವಿದ್ಯಾರ್ಥಿಗಳ ಆಡಳಿತಾತ್ಮಕ ಕೆಲಸಗಳಿಗಾಗಿ ಮಾತ್ರ ಕಂಪ್ಯೂಟರ್ ಇದ್ದು, ವಿದ್ಯಾರ್ಥಿಗಳ ಕಲಿಕೆಗೆ ಕಂಪ್ಯೂಟರ್ ಗಳ ಅಗತ್ಯತೆ ಬಹುದಿನಗಳಿಂದ ಇತ್ತು. ಈ ಅಗತ್ಯತೆಗೆ ಮನ್ನಣೆ ನೀಡಿದ ಬೆಳ್ತಂಗಡಿ ರೋಟರಿ ಸಂಸ್ಥೆಯು ತಾಲೂಕಿನ 12 ಶಾಲೆಗಳಿಗೆ 30 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದೆ. ಇದು ತಾಲೂಕಿನ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. 13,50,000 ರೂ. ಕಂಪ್ಯೂಟರ್ ಖರೀದಿಗೆ ವಿನಿಯೋಗ ಮಾಡಲಾಗಿದೆ. ಈ ಹಿಂದೆ ಶಿಕ್ಷಕರ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಂಪ್ಯುಟರ್ ಗಳ ತುರ್ತು ಅಗತ್ಯತತೆ ಇದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರಿಯಾಗಿ ಅನುದಾನ ಸಿಗದೇ ಕಳೆದ ನಾಲ್ಕು ವರ್ಷಗಳಿಂದ ಕಂಪ್ಯೂಟರ್ ಗಳ ಕೊರತೆ ಅನುಭವಿಸುತ್ತಿದ್ದ ಶಿಕ್ಷಣಾಧಿಕಾರಿಗಳ ಕಚೇರಿಯು ತನ್ನ ಇಲಾಖೆಯ ಮುಂದೆ 5 ಕಂಪ್ಯೂಟರ್ ಗಳ ಬೇಡಿಕೆಯನ್ನು ಇರಿಸಿತ್ತು. ಕಂಪ್ಯೂಟರ್ ಗಳು ಲಭಿಸಿದೆ ಇದ್ದುದರಿಂದ, ಬೆಳ್ತಂಗಡಿ ರೋಟರಿ ಕ್ಲಬ್ ಗೆ ಮನವಿ ನೀಡಿತ್ತು. ಮನವಿಯ ಬೆನ್ನಲ್ಲೆ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಂಪ್ಯೂಟರ್ ಗಳನ್ನು ನೀಡಿ ಸಹಕರಿಸಲಾಗಿತ್ತು. ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ರೋ. ಸುಬ್ಬು ಕೃಷ್ಣನ್, ಕೋವಿಡ್ ನಂತರದಿಂದ ಕಂಪ್ಯೂಟರ್ ಗಳ ಅಗತ್ಯತೆ ಎಷ್ಟಿದೆ ಎಂಬುದು ಈಗಾಗಲೇ ಎಲ್ಲರಿಗು ತಿಳಿದಿದೆ. ನಗರದ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ ಬೆಳ್ತಂಗಡಿ ಪರಿಸರದಂತ ಹಳ್ಳಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಬೆಳೆಯಬೇಕು. ಒಟ್ಟಾರೆಯಾಗಿ ಈ ಕಂಪ್ಯೂಟರ್ ಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉಪಯೋಗವಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಇದರ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ ಮಾತನಾಡಿ, ರೋಟರಿ ಸಂಸ್ಥೆಗಳು ಸದಾ ಸಾಮಾಜಿಕ ಸೇವೆ ಮತ್ತು ಬೆಳವಣಿಗೆಯೊಂದಿಗೆ ತಳುಕು ಹಾಕಿಕೊಂಡಿದೆ. ರೋಟರಿ ಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾದಾಗ ಮೂಲ ರೋಟರಿಯ ಉದ್ದೇಶವು ಈಡೇರಿದಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ಕಂಪ್ಯೂಟರ್ ವ್ಯವಸ್ಥೆಗಳು ಬೆಳ್ತಂಗಡಿಗೆ ಬಂದ ಆರಂಭದ ದಿನಗಳು ಮತ್ತು ಅಂದಿನ ಸಂದರ್ಭದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ‌ ಕಾರ್ಯದರ್ಶಿ ದಿವಂಗತ ಡಾ.ಯಶೋವರ್ಮರು ಬೆಳ್ತಂಗಡಿ ಯಂತಹ ಹಳ್ಳಿಯ ಪರಿಸರದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಎಷ್ಟು ಮುಖ್ಯ ಎಂಬ ಸಲುವಾಗಿ ಕಾಲೇಜುಗಳ ಗ್ರಂಥಾಲಯದಲ್ಲಿ ಟ್ಯಾಬ್ ಗಳ ಬಳಕೆ , ಕಂಪ್ಯೂಟರ್ ಲ್ಯಾಬ್ ಗಳ ಸ್ಥಾಪನೆ ಇತ್ಯಾದಿ ದೂರದೃಷ್ಟಿತ್ವದ ಕಾರ್ಯಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ದಿಡುಪೆಯ ಕಡಿರುದ್ಯಾವರ ಸರಕಾರಿ ಶಾಲೆಗೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸದಸ್ಯ ರೋ. ಕಿರಣ್ ಹೆಬ್ಬಾರ್ ಯು.ಪಿ.ಎಸ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ನೀಡಲು ಅನುಕೂಲ ಮಾಡಿಕೊಟ್ಟ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ರೋ. ಸುಬ್ಬು ಕೃಷ್ಣನ್ ರವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದದಲ್ಲಿ ಅನೇಕ ಶಾಲೆಯ ಶಿಕ್ಷಕರು, ಎಸ್.ಡಿ. ಎಂ.ಸಿ ಸದಸ್ಯರು ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಲಯ ಸೇನಾನಿ ರೋ. ಮನೋರಮಾ ಭಟ್ ನಿರೂಪಿಸಿ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವೂ ವಂದಿಸಿದರು. ಪ್ರಸ್ತುತ ಸಂದರ್ಭದಲ್ಲಿ ಕಂಪ್ಯೂಟರ್ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ಅತ್ಯವಶ್ಯಕವಾಗಿದೆ. ತಂತ್ರಜ್ಞಾನದಲ್ಲಿ ಪ್ರತಿನಿತ್ಯ ಹೊಸ ಹೊಸ ಬೆಳವಣಿಗೆಯನ್ನು ನಾವು ಕಾಣಬವುದು. ಈ ಎಲ್ಲಾ ಮಾಹಿತಿ ಮತ್ತು ಜ್ಞಾನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೈಗೆಟುಕದ ತುತ್ತಾಗಬಾರದು ಎಂಬ ಉದ್ದೇಶದಿಂದ ಈ ಕಂಪ್ಯೂಟರ್ ಗಳನ್ನು ನೀಡಲಾಗಿದೆ. ಈ ಎಲ್ಲಾ ಕಂಪ್ಯೂಟರ್ ಗಳು ವಿಶೇಷವಾಗಿ ವಿದ್ಯಾರ್ಥಿಗಳ ಕಲಿಕೆ ಮಾತ್ರ ಉಪಯೋಗವಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಪೂರನ್‌ ವರ್ಮ ತಿಳಿಸಿದರು. ಬೆಳ್ತಂಗಡಿ ರೋಟರಿ ಸಂಸ್ಥೆಯು ಈಗಾಗಲೇ ಸ್ಕಾಲರ್ಶಿಪ್ ವಿತರಣೆ, ಶಾಲೆಗಳ ನವೀಕರಣ, ಶಾಲಾ ಕೊಠಡಿಗಳ ನಿರ್ಮಾಣ, ನೂತನ ಶೌಚಾಲಯದ ನಿರ್ಮಾಣದಂತಹ ಅನೇಕ ಸೇವಾ ಕಾರ್ಯಗಳನ್ನು ತಾಲೂಕಿನ ಸರಕಾರಿ ಶಾಲೆಗಳಿಗೆ ಮಾಡುತ್ತಾ ಬಂದಿದೆ. ಈಗ ಬಹು ದಿನಗಳಿಂದ ಅವಶ್ಯಕತೆ ಇದ್ದ ಕಂಪ್ಯೂಟರ್ ವ್ಯವಸ್ಥೆಯನ್ನು ಶಾಲೆಗಳಿಗೆ ಕಲ್ಪಿಸಿ ಕೊಟ್ಟಿರುವುದು ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಅತ್ಯಂತ ಸಂತಸ ಮತ್ತು ಉಪಕಾರಿಯಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳೇ ಪಡೆಯಲಿದ್ದಾರೆ. ರೋಟರಿ ಸಂಸ್ಥೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಲಾಖೆಯ ವತಿಯಿಂದ ಕೃತಜ್ಞತೆಯನ್ನು ತಿಳಿಸುತ್ತೇವೆ ಎಂದು ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿ ಅವರು ತಿಳಿಸಿದರು. ತಾಲೂಕಿನ ಕಂಪ್ಯೂಟರ್ ಸ್ವೀಕೃತ ಶಾಲೆಗಳು : ಸರ್ಕಾರಿ ಮಾದರಿ ಶಾಲೆ ಬೆಳ್ತಂಗಡಿ - 5ಕಂಪ್ಯೂಟರ್ ಸರ್ಕಾರಿ ಹಿ. ಪ್ರಾ. ಶಾಲೆ ಕೊಯ್ಯೂರು - 3 ಕಂಪ್ಯೂಟರ್ ಹಳೆ ಪೇಟೆ ಕಿ. ಪ್ರಾ. ಶಾಲೆ - 1 ಕಂಪ್ಯೂಟರ್ ಅಳದಂಗಡಿ ಹಿ. ಪ್ರಾ. ಶಾಲೆ - 2 ಕಂಪ್ಯೂಟರ್ ಕಿರಿಯಾಡಿ ಹಿ. ಪ್ರಾ. ಶಾಲೆ - 1 ಕಂಪ್ಯೂಟರ್ ಮಿತ್ತಬಾಗಿಲು ಹಿ.ಪ್ರಾ ಶಾಲೆ - 5 ಕಂಪ್ಯೂಟರ್ ಅರಸಿನಮಕ್ಕಿ ಹಿ. ಪ್ರಾ. ಶಾಲೆ - 1 ಕಂಪ್ಯೂಟರ್ ದಿಡುಪೆ ಹಿ. ಪ್ರಾ ಶಾಲೆ - 2 ಕಂಪ್ಯೂಟರ್ ಬಂಗಾಡಿ ಹಿ. ಪ್ರಾ. ಶಾಲೆ - 2 ಕಂಪ್ಯೂಟರ್ ಕೊಯ್ಯೂರು ಕಿ‌.ಪ್ರಾ. ಶಾಲೆ - 5 ಕಂಪ್ಯೂಟರ್ ನಿಟ್ಟಡೆ ಹಿ. ಪ್ರಾ.ಶಾಲೆ ವೇಣೂರು - 2 ಕಂಪ್ಯೂಟರ್ ಕೊಯ್ಯೂರು ಶಾಲೆ ದೇವಸ್ಥಾನ - 1 ಕಂಪ್ಯೂಟರ್

ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ

Article Image

ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾರ್ಚ್‌ನೊಳಗೆ ಜಾನಪದ ಉತ್ಸವ ಆಚರಿಸುವಂತೆ ಕಾಲೇಜು ಶಿಕ್ಷಣ ನಿರ್ದೇಶಕರು ನಿರ್ದೇಶಿಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅಡಗಿರುವ ಆಯಾ ಪ್ರಾದೇಶಿಕ ಸಾಂಪ್ರದಾಯಿಕ ಕಲೆ ಹಾಗೂ ಕೌಶಲ ಪ್ರದರ್ಶಿಸಲು ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ ಶೀರ್ಷಿಕೆಯಡಿ ಉತ್ಸವ ಅಚರಿಸಬೇಕು. ಜನಪದ ಸಾಹಿತ್ಯ ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಇವುಗಳ ಕುರಿತು ಕಾರ್ಯಾಗಾರ, ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ/ವಸ್ತು ಪ್ರದರ್ಶನ, ಜನಾಂಗೀಯ ಪಾಕ ಪದ್ಧತಿ ಇವುಗಳ ಪ್ರದರ್ಶನ ಹಾಗೂ ಸ್ಪರ್ಧೆ, ಸ್ಥಳೀಯ ಕಲಾವಿದರಿಂದ ದೇಸಿ ನೃತ್ಯ-ಸಂಗೀತ, ಆಟ-ಇವುಗಳ ಪ್ರದರ್ಶನ ಹಾಗೂ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳಲ್ಲದೆ ವಿದ್ಯಾರ್ಥಿಗಳಲ್ಲಿ ವಿಶೇಷ ಸೃಜನಾತ್ಮಕ ಕಲಾತ್ಮಕ ಕೌಶಲಗಳಿದ್ದಲ್ಲಿ ಅಂತವುಗಳನ್ನು ಗುರುತಿಸಿ ಪ್ರದರ್ಶಿಸಲು ವೇದಿಕೆ ಸಿದ್ಧಪಡಿಸಿ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಜಪಾನ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮಕ್ಕೆ ಆಯ್ಕೆ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಜಪಾನ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮಕ್ಕೆ ಆಯ್ಕೆ

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಪಿ ಹೆಗ್ಡೆ, INSPIRE ಮಾನಕ್ ವಿಜ್ಞಾನ ಯೋಜನೆಯಡಿ ಪ್ರಸ್ತುತ ಪಡಿಸಿದ “Animal Vital Monitoring system”ಎಂಬ ಸಂಶೋಧನಾತ್ಮಕ ವಿಜ್ಞಾನ ಮಾದರಿ ಜಪಾನಿನ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯು ಆಯೋಜಿಸುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಸಕುರಾಗೆ ಆಯ್ಕೆಗೊಂಡಿದೆ. 15-6-2025 ರಿಂದ 21-06-2025ರ ವರೆಗೆ ಜಪಾನಿನಲ್ಲಿ ಜರಗುವ ಈ ವಿಜ್ಞಾನ ಕಾರ್ಯಕ್ರಮದಲ್ಲಿ ಭಾರತದಿಂದ ಆಯ್ಕೆಗೊಂಡಿರುವ 54ಮಂದಿ ವಿದ್ಯಾರ್ಥಿಗಳಲ್ಲಿ ರಾಹುಲ್ ಪಿ ಹೆಗ್ಡೆ ಕೂಡ ಓರ್ವನಾಗಿದ್ದಾನೆ. ಈ ವಿಜ್ಞಾನ ಮಾದರಿ ಪ್ರಾಣಿಗಳ ಆರೋಗ್ಯ ತಪಾಸಣಗೆ ಸಂಬಂಧಿಸಿದ್ದು, ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಇದು ಎಚ್ಚರಿಕೆ ಗಂಟೆಯೊಂದಿಗೆ ಮಾಹಿತಿಯನ್ನು ನೀಡುವ ವೈಜ್ಞಾನಿಕ ಅನ್ವೇಷಣೆಯಾಗಿದೆ.. ಎಕ್ಸಲೆಂಟ್ ATL ಲ್ಯಾಬ್ ಅಡಿಯಲ್ಲಿ INSPIRE ಯೋಜನೆಯಡಿ 2023ನೇ ಸಾಲಿನಲ್ಲಿ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಹುಲ್ ಪಿ ಹೆಗ್ಡೆ ಸಿದ್ದಪಡಿಸದ್ದ ಈ ಮಾದರಿ ಈ ಬಾರಿ ರಾಷ್ಟçಮಟ್ಟಕ್ಕೆ ಆಯ್ಕೆಗೊಂಡು ಎಲ್ಲರ ಗಮನ ಸೆಳೆದಿತ್ತು. ಕೇಂದ್ರ ಸರ್ಕಾರದ “Make in India” ಅಭಿಯಾನದಡಿಯಲ್ಲಿ ಸಂಸ್ಥೆಯ ಅಧ್ಯಕ್ಷರ ಮತ್ತು ಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಅತ್ಯಂತ ಆಸಕ್ತಿಯಲ್ಲಿ ಮಾಡುತ್ತಿರುವ ರಾಹುಲ್ ಪಿ ಹೆಗ್ಡೆ ಭವಿಷ್ಯದಲ್ಲಿ ತನ್ನದೇ ಆದ ಒಂದು ದೊಡ್ಡ ಕೊಡುಗೆಯನ್ನು ವಿಜ್ಞಾನ ಕ್ಷೇತ್ರಕ್ಕೆ ನೀಡುವ ಕನಸು ಹೊತ್ತಿದ್ದಾನೆ. ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಿಸುವ INSPIRE ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರೂ.10,000 ಸ್ಕಾಲರ್‌ಶಿಪ್‌ನೊಂದಿಗೆ ಜಿಲ್ಲಾ ರಾಜ್ಯ-ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಳ್ಳುತ್ತಿದ್ದಾರೆ. ಆಯ್ಕೆಗೊಂಡ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

ಆಳ್ವಾಸ್‌ನಲ್ಲಿ ಇನ್ಸ್ಫೀರಿಯಾ-2025 ರಾಷ್ಟ್ರೀಯ ವಿಚಾರ ಸಂಕಿರಣ

Article Image

ಆಳ್ವಾಸ್‌ನಲ್ಲಿ ಇನ್ಸ್ಫೀರಿಯಾ-2025 ರಾಷ್ಟ್ರೀಯ ವಿಚಾರ ಸಂಕಿರಣ

ಮೂಡುಬಿದಿರೆ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ವತಿಯಿಂದ `ಇನ್ಸ್ಪೀರಿಯಾ - 2025' ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನ್ ಮೂಲದ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಯುಚಿ ನಗಾನೊ ಮುಖ್ಯ ಅತಿಥಿಯಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಇನ್ನಿತರ ತಂತ್ರಜ್ಞಾನಗಳ ಪ್ರಗತಿಯೊಂದಿಗೆ ಆರೋಗ್ಯ ನಿರ್ವಹಣಾ ಕ್ಷೇತ್ರವು ಬಹಳಷ್ಟು ಮುಂದುವರಿದಿದೆ. ವೈದ್ಯಕೀಯ ಕ್ಷೇತ್ರವು ಸೋಂಕುಗಳನ್ನು ತಡೆಗಟ್ಟಿ ರೋಗಿಯ ಚೇತರಿಕೆಗೆ ಗಮನ ನೀಡುವುದರೊಂದಿಗೆ ಆಸ್ಪತ್ರೆಗಳು ಮನೆಯ ವಾತಾವರಣವನ್ನು ಕಲ್ಪಿಸಿಕೊಡುವಂತಿರಬೇಕು. ಆಸ್ಪತ್ರೆ ನಿರ್ವಹಣೆಯ ಕುರಿತು ಸೂಕ್ಷ್ಮ-ದೃಷ್ಠಿ ಬೆಳೆಸಿಕೊಳ್ಳಲು ನಮ್ಮಲ್ಲಿರುವ ಜ್ಞಾನ, ಕನಸುಗಳು ಹಾಗೂ ಆಶಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹೆಚ್ಚಿನ ಆಸ್ಪತ್ರೆಗಳನ್ನು ಕಾರ್ಪೋರೇಟ್ ಸಂಸ್ಥೆಗಳು ನಿರ್ವಹಿಸುವುದರಿಂದ ಜನಸಾಮಾನ್ಯರಿಗೆ ವ್ಯವಸ್ಥೆಗಳು ಬಳಸಿಕೊಳ್ಳಲು ಅನುಕೂಲಕರವಾಗಿಲ್ಲ. ಆಸ್ಪತ್ರೆಯ ನಿರ್ವಾಹಕರು ರೋಗಿಗಳ ಮೇಲೆ ಸಹಾನುಭೂತಿಯ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಸಿವು ಹೆಚ್ಚಾಗಬೇಕು ಎಂದರು. ಆಸ್ಪತ್ರೆ ನಿರ್ವಹಣೆಯಲ್ಲಿ ನೈತಿಕ ನಾಯಕತ್ವ ವಿಷಯದ ಕುರಿತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ರೆವರೆಂಡ್ ಫಾದರ್ ಅಜಿತ್ ಎಂ ಮಿನೇಜಸ್, ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಿಯಾತ್ಮಕ ಬದಲಾವಣೆಯ ಕುರಿತು ಎ.ಜೆ ಹಾಸ್ಪಿಟಲ್‌ನ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲಾ ಕೆ., ನಾಯಕತ್ವದಲ್ಲಿ ನಾವಿನ್ಯತೆಯ ಕುರಿತು ಯೇನಪೋಯಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಡೀನ್ ಡಾ. ಸುನಿತಾ ಸಲ್ದಾನ, ಆಸ್ಪತ್ರೆ ನಿರ್ವಹಣೆ ಹಾಗೂ ಮಂಡಳಿಯ ನಾಯಕತ್ವದ ಕುರಿತು ಬೆಂಗಳೂರಿನ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಸಂಗ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾಹೆಯ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥೆ ಡಾ ಉಷಾರಾಣಿ, ಸಕ್ರಾ ವಲ್ಡ್ ಹಾಸ್ಪಿಟಲ್‌ನ ನಿರ್ದೇಶಕಿ ನೀತಾ ವೇಗಸ್ ಇದ್ದರು. ರಾಷ್ಟ್ರದ ವಿವಿಧ ಭಾಗಗಳಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಸಮಾರೋಪ ಕಾರ‍್ಯಕ್ರಮದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ, ಉದ್ಯಮಿ ರಾಹುಲ್ ಇದ್ದರು. ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಟೋಬಿ ಟಾಮ್ ಪ್ರಥಮ, ಅಪರ್ಣ ವಿಕೆ ದ್ವಿತೀಯ, ಸ್ನಾತಕ ವಿಭಾಗದಲ್ಲಿ ತುಳಸಿ ಪ್ರಥಮ, ಫಾತಿಮಾ ಸೈಮಾ ದ್ವಿತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ಪ್ರೋ. ಆದರ್ಶ ಹೆಗ್ಡೆ ಅವರ ‘ಲೀಡ್ ಟು ಹೀಲ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕಿ ನಿಧಿ ವಂದಿಸಿದರು, ವಿದ್ಯಾರ್ಥಿನಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.

ಮುಕ್ತ ವಿವಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಆಳ್ವಾಸ್ ಆಯ್ಕೆ

Article Image

ಮುಕ್ತ ವಿವಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಆಳ್ವಾಸ್ ಆಯ್ಕೆ

ವಿದ್ಯಾಗಿರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ಪಡೆದಿರುವ ಸ್ನಾತಕ ಮತ್ತು ಸ್ನಾತಕೋತ್ತರ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಲಬುರಗಿ, ದಾವಣಗೆರೆ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯನ್ನು ಹೊರತು ಪಡಿಸಿದರೆ, ಕರಾವಳಿ ಕರ್ನಾಟಕದಲ್ಲಿ ಆಳ್ವಾಸ್ ಕಾಲೇಜು ಮಾತ್ರ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿ ನಡೆಸಲು ಅವಕಾಶ ಪಡೆದಿರುವ ಕೇಂದ್ರವಾಗಿದೆ.

ಉಜಿರೆ ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ

Article Image

ಉಜಿರೆ ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ

ಉಜಿರೆ : ಕಲಿಕೆ ಚೆನ್ನಾಗಿದ್ದರೆ ಗಳಿಕೆಯೂ ಚೆನ್ನಾಗಿರುತ್ತದೆ. ಕಲಿಕೆಯ ಸಂದರ್ಭದಲ್ಲಿ ಹೆತ್ತವರ ಶ್ರಮ, ಗಳಿಕೆಯ ಸಂದರ್ಭ ನಿಮ್ಮ ಪರಿಶ್ರಮ ನಿಮ್ಮ ಜೀವನವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಈ ರುಡ್‌ ಸೆಟ್‌ ಸಂಸ್ಥೆಯಲ್ಲಿ ಕಲಿತ ತರಬೇತಿಗಳು ನಿಮ್ಮ ಬದುಕಿಗೆ ದಾರಿ ದೀಪವಾಗಲಿ, ವೃತಿಯಲ್ಲಿ ಯಾವುದೇ ಕಾರಣಕ್ಕೂ ಅಡಗಿಸಿಕೊಳ್ಳಬೇಡಿ, ಹೆಚ್ಚು ತೊಡಗಿಸಿಕೊಳ್ಳಿ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಆನೇಕ ಯುವಕ-ಯುವತಿಯರು ಸ್ವಂತ ಉದ್ಯೋಗ ಮೂಲಕ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಟಿ.ವಿ. ಟೆಕ್ನಿಷಿಯನ್‌ ತರಬೇತಿ ಮತ್ತು 13 ದಿನಗಳ ಕಾಲ ನಡೆದೆ ಸಿ.ಸಿ. ಟಿವಿ ಕ್ಯಾಮರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿ ಸ್ವ ಉದ್ಯೋಗಕ್ಕೆ ಬೇಕಾದ ಸಾಲ ಸೌಲಭ್ಯಗಳಿಗೆ ಯೋಜನಾ ವರದಿಯನ್ನು ತಯಾರಿಸಿಕೊಂಡು ಬ್ಯಾಂಕಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟ ನೀಡಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 64 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಕೀರ್ತನಾ ಮತ್ತು ಪ್ರತಿಷ್ಟಾ ಪ್ರಾರ್ಥನೆ ಮಾಡಿದರು, ಮಹ್ಮಮದ್ ಫಯಾಜ್‌, ಅಶೋಕ, ಆನಂದ‌, ಕುಮಾರಿ ನಿಸರ್ಗ ತರಬೇತಿಯ ಅನುಭವ ಹಂಚಿಕೊಂಡರು.

ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ

Article Image

ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ

ಉಜಿರೆ, ಜ.26: ಭಾರತದ ಸಂವೈಧಾನಿಕ ಶ್ರೇಷ್ಠತೆ, ವೈವಿಧ್ಯಮಯ ಸಾಂಸ್ಕೃತಿಕ ವೈವಿಧ್ಯತೆ, ವೈಜ್ಞಾನಿಕ ತಾಂತ್ರಿಕ ಸಾಧನೆಯ ಮೈಲಿಗಲ್ಲುಗಳೊಂದಿಗಿನ ವಿನೂತನ ಅಸ್ಮಿತೆ ಮತ್ತು ವಿವಿಧ ಕ್ಷೇತ್ರಗಳ ಮಹತ್ವದ ಕೊಡುಗೆಗಳ ವಿಶೇಷತೆಯನ್ನು ಅನಾವರಣಗೊಳಿಸುವ ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ತಬ್ಧಚಿತ್ರ ಪ್ರದರ್ಶನದೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು 76ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ವಿನೂತನಗೊಳಿಸಿದರು. ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಸಮ್ಮುಖದಲ್ಲಿ 76ನೇ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರು ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧಿಸಿದ ವಿಶೇಷ ಹೆಜ್ಜೆಗಳು, ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಿಭಾಗ, ಹಾಲಕ್ಕಿ ನುಡಿಯ ಮೌಲಿಕತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆ, ನ್ಯಾಯ ಪರಿಕಲ್ಪನೆಗಳನ್ನು ಕಾಯಕಪ್ರಜ್ಞೆಯೊಂದಿಗೆ ಸಮೀಕರಿಸಿದ ಕಲಾತ್ಮಕತೆ, ಕರಾವಳಿ ಸಂಸ್ಕೃತಿಯ ವಿಶಿಷ್ಠ ಗುಣಲಕ್ಷಣಗಳು, ವೀರಗಾಸೆ ನೃತ್ಯ, ಕರ್ನಾಟಕ ಜನಪದ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನದೊಂದಿಗಿನ ಅಭ್ಯುದಯದ ಮಹತ್ವದ ಹಂತಗಳು ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಧಾನ ಆಶಯವನ್ನು ಟ್ಯಾಬ್ಲೊ ಪ್ರದರ್ಶನವು ಧ್ವನಿಸಿತು. ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಬಹುಮಾನಕ್ಕೆ ಪಾತ್ರರಾದರು. ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದರು. ಖ್ಯಾತ ಗಾಯಕ ಸಿ.ಅಶ್ವತ್ಥ್ ಗಾಯನದ ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಹಾಡಿನ ಹಿನ್ನೆಲೆಯೊಂದಿಗೆ ಮಹಿಳೆಯರ ಯಶೋಗಾಥೆಯನ್ನು ಕಾಣಿಸಿದ ಪ್ರದರ್ಶನ ವಿಶೇಷವಾಗಿತ್ತು. ರತ್ನಮಾನಸ ಜೀವನ ಶಿಕ್ಷಣಕ್ಕಿರುವ ಶ್ರಮಸಂಸ್ಕೃತಿ ಮತ್ತು ವಿದ್ಯಾ ಸಂಸ್ಕಾರದ ಆಯಾಮದ ಅಭಿವ್ಯಕ್ತಿಯು ಕಂಗೊಳಿಸಿತು. ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣೆಯ ತಾಂತ್ರಿಕ ನೈಪುಣ್ಯದ ಪ್ರಾತ್ಯಕ್ಷಿಕೆಯೂ ಮನಸೆಳೆಯಿತು. ಸೈನಿಕರ ತ್ಯಾಗ ಮತ್ತು ಬಲಿದಾನದ ಪ್ರಾಮುಖ್ಯತೆಯನ್ನು ಕಾಣಿಸುತ್ತಾ ಭಾರತಮಾತೆಯ ಮಡಿಲಲ್ಲಿ ಪ್ರಜೆಗಳೆಲ್ಲರೂ ಸೌಹಾರ್ದದಿಂದ ಬದುಕುವ ಸೌಂದರ್ಯವನ್ನು ಕಾಣಿಸುವ ನೃತ್ಯಪ್ರದರ್ಶನ ದೇಶಪ್ರೇಮದ ಸಂದೇಶ ಸಾರಿತು. ಉಜಿರೆಯ ಎಸ್.ಡಿ.ಎಂ. ಪದವಿ, ಪದವಿಪೂರ್ವ ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ, ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು, ಎಸ್.ಡಿ.ಎಂ. ಶಾಲೆ ಮತ್ತು ಪ್ರೌಢಶಾಲೆಗಳು ಸೇರಿದಂತೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್.ಡಿ.ಎಂ. ಶಾಲಾ ಕಾಲೇಜುಗಳ ಎನ್.ಸಿ.ಸಿ.ಯ ಆರ್ಮಿ ಮತ್ತು ನೌಕಾದಳ ಕೆಡೆಟ್‌ಗಳ ಪಥಸಂಚಲನ ಆಕರ್ಷಕವಾಗಿತ್ತು. ರೋವರ್ಸ್ ಮತ್ತು ರೇಂಜರ್ಸ್ನ ಬ್ಯಾಂಡ್‌ನ ತಂಡವು ಸಾಥ್ ನೀಡಿತು. ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ

Article Image

ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ

ಭಾರತ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಮತ್ತು ಆರಾಧನೆಗಳಿಗೆ ಮಹತ್ವ ನೀಡುತ್ತಾ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ಪ್ರತಿಯೋರ್ವರಿಗೂ ಸಂವಿಧಾನದ ಮೂಲಕ ನೀಡುತ್ತಾ ಬಂದಿದೆ. ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಕೆಲವು ಮೂಲಭೂತ ಹಕ್ಕುಗಳನ್ನು ಆನಂದಿಸಲು ಅನುಮತಿಸಲಾಗಿದೆ. ಭಾರತೀಯರಾದ ನಾವು ಭಾರತವನ್ನು ರಾಷ್ಟ್ರವಾಗಿ ಮಾರ್ಗದರ್ಶಿಸುವ ಸಂವಿಧಾನದ ಮೂಲ ತತ್ವಗಳನ್ನು ಹಕ್ಕುಗಳನ್ನು ಗೌರವಿಸುವುದರೊಂದಿಗೆ ದೇಶ ಸೇವೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸರ್ವದಾ ಸಿದ್ಧರಾಗಿರಬೇಕು ನಮ್ಮ ವಿದ್ಯಾಭ್ಯಾಸದ ಚರಮ ಹಾಗೂ ಪರಮ ಲಕ್ಷ್ಯ ದೇಶಸೇವೆಯೇ ಆಗಿರಬೇಕು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಅನುಸಂಧಾನದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ಡಿ.ಜೆ.ಸಿ.ಎನ್ ಜತೆ ನಿರ್ದೇಶಕರಾದ ಜಗದೀಶ್ ಬಲ್ಲಾಳ್ ತಿಳಿಸಿದರು. ಅವರು ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಬಳಿಕ ಮಾತನಾಡಿದ ಅವರು ಬಲಿಷ್ಠ ರಾಷ್ಟ್ರಕ್ಕಾಗಿ ಪ್ರತಿಯೋರ್ವ ವಿದ್ಯಾರ್ಥಿಯು ದೈಹಿಕ , ಬೌದ್ಧಿಕ ಹಾಗೂ ಸಾಂಸ್ಕ್ರತಿಕವಾಗಿ ಬಲಿಷ್ಠವಾಗಿ ತೊಡಗಿಸಿಕೊಳ್ಳಬೇಕು ಅಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ತಾಳ್ಮೆ ಮತ್ತು ಬ್ರಾತೃತ್ವದಿಂದ ಒಟ್ಟಿಗೆ ವಾಸಿಸುವ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ಭಾರತೀಯರಿಗೆ ಈ ದಿನ ಅತ್ಯಂತ ಮಹತ್ವದ ದಿನ. ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದರೊಂದಿಗೆ ರಾಷ್ಟ್ರಭಕ್ತರಾಗೋಣ ಎಂದರು. ಬಳಿಕ ಸಂಸ್ಥೆಯ ಎನ್‌ಸಿಸಿ, ನೇವಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ 2024-25

Article Image

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ 2024-25

ವಿದ್ಯಾಗಿರಿ: ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲದು ಎಂದು ದಕ್ಷಿಣ ಕನ್ನಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಗುರುವಾರ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ಕಲಿಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯೆ ಮತ್ತು ಬುದ್ಧಿಯ ಜೊತೆಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಸುಂದರ ಮನಸನ್ನು ಕಟ್ಟಿಕೊಳ್ಳಲು ಸಾಧ್ಯ. ಅವಕಾಶಗಳ ಸದುಪಯೋಗ ಹಾಗೂ ಸಂಸ್ಕಾರದ ಗುಣವನ್ನು ಬೆಳೆಸಿಕೊಳ್ಳಿ. ದೇಶಪ್ರೇಮ, ರಾಷ್ಟ್ರ ಪ್ರೇಮದೊಂದಿಗೆ ಬದುಕೋಣ, ಆದರೆ ಅನ್ಯ ದೇಶದ ನಡುವೆ ಸಂಘರ್ಷ ಬೇಡ ಎಂದರು. ದೇಶಪ್ರೇಮದ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಿ. ಮನುಷ್ಯ ಬದುಕಲು ನೀರು,ಮಣ್ಣು,ಗಾಳಿ ಅತಿ ಮುಖ್ಯವಾದ ಸಂಪತ್ತು. ಇವುಗಳ ಸಂರಕ್ಷಣೆಯ ಜೊತೆಗೆ ಪ್ರಾಣಿ ಪಕ್ಷಿಗಳ ಬಗ್ಗೆ ಕನಿಕರ ಭಾವ ಹೊಂದಿ ಎಂದರು. ಶಿಸ್ತು, ಸಮಯಪ್ರಜ್ಞೆ, ಸೌಂದರ್ಯ ಪ್ರಜ್ಞೆ, ಸಹಬಾಳ್ವೆ, ಪರೋಪಕಾರ, ಮಾನವೀಯತೆ, ಸೇವಾ ಮನೋಭಾವ, ಸೌಹಾರ್ದತೆ, ಹೋರಾಟ ಮನೋಭಾವ, ವಿನಯತೆ, ಗುರುಹಿರಿಯರಿಗೆ ಗೌರವ ಇವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಸುಂದರ ವ್ಯಕ್ತಿತ್ವ ಸಾಧ್ಯ. ಸಮಯದ ಮಹತ್ವ ಅರಿತವನು ಜಗತ್ತನ್ನೆ ಗೆಲ್ಲಬಲ್ಲ. ದೇಶದ ಸಂಪತ್ತನ್ನು ಕಾಪಾಡುವ ಮನಸ್ಸನ್ನು ವಿದ್ಯಾರ್ಥಿಗಳು ಏಳವೆಯಲ್ಲಿಯೆ ಬೆಳೆಸಿಕೊಳ್ಳಬೇಕು ಎಂದರು. ಇಂತಹ ಹತ್ತು ಹಲವು ಸದ್ಗುಣಗಳನ್ನು ಸ್ಕೌಟ್ಸ್-ಗೈಡ್ಸ್ ಕ್ಯಾಂಪೋರಿ ಮೂಲಕ ಪಡೆಯಲು ಸಾಧ್ಯ ಎಂದರು. ಜಿಲ್ಲಾ ಸ್ಕೌಟ್ ಆಯುಕ್ತ ಮಹಮ್ಮದ್ ತುಂಬೆ, ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ತರಬೇತಿ ಆಯುಕ್ತ ಶಾಂತಾರಾಮ ಪ್ರಭು, ಶಿಬಿರ ನಿರ್ದೇಶಕ ನಾರಾಯಣ್ ನಾಯ್ಕ, ಗೈಡ್ ವಿಭಾಗ ನಾಯಕಿ ತ್ರಿಶಲಾ, ರೋವರ್ ಮತ್ತು ರೇಂಜರ್ ವಿಭಾಗ ನಾಯಕಿ ಡಾ. ಅಪರ್ಣಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ ಇದ್ದರು. ಜಿಲ್ಲೆಯ 13 ಸ್ಥಳೀಯ ಸಂಸ್ಥೆಗಳಿAದ ಸ್ಕೌಟ್-450, ಗೈಡ್-331, ರೋವರ್ಸ್-12, ರೇಂಜರ್ಸ್-33, ಸ್ಕೌಟ್ ಮಾಸ್ಟರ್-33, ಗೈಡ್ ಕ್ಯಾಪ್ಟನ್-25, ರೇಂಜರ್ ಲೀಡರ್-2, ಸ್ವಯಂಸೇವಕರಾಗಿ ರೋವರ್ಸ್-27, ರೇಂಜರ್ಸ್-44, ಸಿಬ್ಬಂದಿ ವರ್ಗದವರು-35 ಸೇರಿದಂತೆ 992 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ನಿರೂಪಿಸಿದರು.ಜಿಲ್ಲಾ ಸಂಘಟನಾ ಆಯುಕ್ತರು ವಸಂತ್ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ. ಕಾಲೇಜಿನಲ್ಲಿ ‘ಪ್ರಮುಕ 2025’ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ

Article Image

ಎಸ್.ಡಿ.ಎಂ. ಕಾಲೇಜಿನಲ್ಲಿ ‘ಪ್ರಮುಕ 2025’ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ

ಉಜಿರೆ, ಜ. 6: ಸ್ಕೌಟ್ಸ್ ಗೈಡ್ಸ್ ನಂತಹ ಪಠ್ಯೇತರ ಚಟುವಟಿಕೆಗಳನ್ನು ಶಿಕ್ಷಣದಲ್ಲಿ ಅತ್ಯಗತ್ಯ ಎಂದು ಪರಿಗಣಿಸಬೇಕು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಸದಸ್ಯರಾದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ (ಸ್ಕೌಟ್ಸ್ ಗೈಡ್ಸ್ ಹಿರಿಯರ ವಿಭಾಗ) ಇಂದು (ಜ. 6) ಆಯೋಜಿಸಿದ ಒಂದು ದಿನದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ ‘ಪ್ರಮುಕ 2025’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಪರೋಪಕಾರಾರ್ಥಂ ಇದಮ್ ಶರೀರಂ’ ಎಂಬ ಸಂಸ್ಕೃತ ಸೂಕ್ತಿಯಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಪಠ್ಯದ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಶಿಕ್ಷಣದಲ್ಲಿ ಅಗತ್ಯ ಎಂದು ಅವರು ಹೇಳಿದರು. “ದೇಶದ ಭವಿಷ್ಯವು ಯುವಪೀಳಿಗೆಯ ಮೇಲೆ ಅವಲಂಬಿತವಾಗಿದ್ದು, ಸ್ಕೌಟ್ಸ್ ಗೈಡ್ಸ್ ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗಿವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯು ಈ ದೆಸೆಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದರು. “ಜೀವನದಲ್ಲಿ ಸವಾಲುಗಳು ಎದುರಾದಾಗ ಮೌಲ್ಯಗಳನ್ನು ಕಳೆದುಕೊಳ್ಳಬೇಡಿ. ಮೌಲ್ಯಗಳು ನಮ್ಮ ಗೌರವ ಹೆಚ್ಚಿಸುತ್ತವೆ. ಕಷ್ಟ ಎದುರಿಸುವ ಧೈರ್ಯ, ಪ್ರಕೃತಿಯೊಂದಿಗೆ ಬೆರೆತು ಸಹಬಾಳ್ವೆ ನಡೆಸಲು ಪ್ರೇರಣೆಯನ್ನು ಸ್ಕೌಟ್ಸ್ ಗೈಡ್ಸ್ ನೀಡಲಿ” ಎಂದರು. ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ವೈಸ್ ಚೇರ್ಮನ್ ಅಶ್ವಿತ್ ಜೈನ್ ಮಾತನಾಡಿದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ, ಅಸಾಮಾನ್ಯ ಸಾಮರ್ಥ್ಯ ಯುವಕರಲ್ಲಿದೆ ಎಂದು ಅವರು ಹೇಳಿದರು. “ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳು ಕೇವಲ ತಂಡದ ಪ್ರತಿನಿಧಿಗಳಲ್ಲ ಬದಲಾಗಿ ತಂಡದ ನಾಯಕರು. ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಹಾಗೂ ಇನ್ನೊಬ್ಬರಿಗೆ ಮಾದರಿಯಾಗುವಂತಹ ವ್ಯಕ್ತಿಗಳು. ಬದಲಾವಣೆಯ ಹರಿಕಾರರು. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ನೀವು ಇತರರಿಗೆ ಮಾದರಿಯಾಗಿದ್ದೀರಿ” ಎಂದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ. ಕ. ಜಿಲ್ಲಾ ಆಯುಕ್ತ (ಸ್ಕೌಟ್ಸ್) ಬಿ. ಎಂ. ತುಂಬೆ ಮಾತನಾಡಿದರು. “ಬಾಲ್ಯವೆಂಬುವುದು ಬಹಳ ಸುಂದರ. ಅದನ್ನು ಸಿಹಿಯಾಗಿಸಿ ಯೌವನವನ್ನು ಆಹ್ವಾನಿಸಿ. ಯೌವನದಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಯಭಾರಿಗಳಾಗಿ” ಎಂದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್. ಮಾತನಾಡಿದರು. ವಿಶ್ವಮಟ್ಟದ ಸಂಸ್ಥೆಯಾಗಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸಲು ಸಹಕರಿಸುತ್ತದೆ ಎಂದರು. ಕಾರ್ಯಕ್ರಮಕ್ಕಾಗಿ ಕಾಲೇಜನ್ನು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಸೇವೆ. ನಿಜವಾದ ರಾಷ್ಟ್ರ ನಿರ್ಮಾಣವೆಂದರೆ ಮನಸ್ಸುಗಳನ್ನು ಕಟ್ಟುವಂತದ್ದು. ಮನುಷ್ಯರು ಯಂತ್ರಗಳಂತಾಗಿ ಸಂವೇದನೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ನಂತಹ ಸಂಸ್ಥೆಗಳು ಅರ್ಥ ಕಂಡುಕೊಳ್ಳುತ್ತವೆ. ಸ್ಕೌಟ್ಸ್ ಗೈಡ್ಸ್ ಯುವಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ, ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದರು. ಕಾರ್ಯಕ್ರಮ ಸಂಯೋಜಕಿ, ರೇಂಜರ್ ಲೀಡರ್ ಗಾನವಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಇಂಡೋನೇಷಿಯನ್ ಭಾಷೆಯಲ್ಲಿ ‘ಪ್ರಮುಕ’ ಎಂದರೆ ಕೆಲಸವನ್ನು ಪ್ರೀತಿಸುವ ಯುವ ಜನರು ಅಥವಾ ಕೆಲಸಕ್ಕೆ ಸಿದ್ಧರಾಗಿರುವ ಯುವ ನಾಗರಿಕರು ಎಂದರ್ಥ. ಈ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ವಿವಿಧ ಸ್ಪರ್ಧೆಗಳ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಹರ್ಷಿಣಿ ಮತ್ತು ದಿಲೀಪ್ ಉಪಸ್ಥಿತರಿದ್ದರು. ರೇಂಜರ್ ನಿತ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಮಾನಸಾ ಅಗ್ನಿಹೋತ್ರಿ, ಭೂಮಿಕಾ ಕೆ.ಎಲ್. ಜೈನ್ ಮತ್ತು ಮೋಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳ ರೋವರ್ಸ್ ರೇಂಜರ್ಸ್, ರೋವರ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಸ್ಥಳೀಯ ಎಸ್.ಡಿ.ಎಂ. ಶಾಲೆಗಳ ಸ್ಕೌಟ್ಸ್ ಗೈಡ್ಸ್, ಕಬ್ ಬುಲ್ ಬುಲ್, ಬನ್ನೀಸ್, ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್ ಪಾಲ್ಗೊಂಡಿದ್ದರು. ಬೆಳಗ್ಗೆ ಕಾಲೇಜು ಒಳಾಂಗಣದಲ್ಲಿ ಸ್ಕೌಟ್ಸ್ ಧ್ವಜಾರೋಹಣ ಹಾಗೂ ಪ್ರಾರ್ಥನೆ ನೆರವೇರಿತು. ಸ್ಕೌಟ್ಸ್ ಗೈಡ್ಸ್ ಶಿಬಿರಗಳಲ್ಲಿರುವ ಸಾಹಸಮಯ ಆಟಗಳ ಮಾದರಿಗಳು, ಟೆಂಟ್, ಮರದ ಮೇಲಿನ ಅಟ್ಟಳಿಗೆ, ಬಿದಿರು ಮತ್ತು ಹಗ್ಗಗಳನ್ನು ಬಳಸಿ ತಯಾರಿಸಿದ ಏಣಿ ಸೇರಿದಂತೆ ಸ್ಕೌಟಿಂಗ್ ಸಂಬಂಧಿತ ವಿವಿಧ ವಸ್ತು, ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಪ್ರಮುಖ-2025: ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವ

Article Image

ಪ್ರಮುಖ-2025: ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವ

ಉಜಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳು ಸೇವೆ ಹಾಗೂ ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಾಲ್ಯದ ಸವಿನೆನಪುಗಳು ಜೀವನವಿಡೀ ನೆನಪಿರುತ್ತವೆ. ವ್ಯಕ್ತಿತ್ವವಿಕಸನವೇ ಶಿಕ್ಷಣದ ಗುರಿಯಾಗಿದ್ದು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸಂಸ್ಕಾರದೊಂದಿಗೆ ವಿದ್ಯಾರ್ಥಿಗಳು ಸಭ್ಯ, ಸುಸಂಸ್ಕೃತ ನಾಗರಿಕರಾಗಲು ಪ್ರೇರಣೆ ನೀಡುತ್ತದೆ ಎಂದರು. ಕೆ.ಪಿ.ಸಿ.ಸಿ. ಕಾರ್ಯದರ್ಶಿ ಅಶ್ವಿತ್‌ಜೈನ್, ಮಹ್ಮದ್‌ತುಂಬೆ, ಮತ್ತು ಪ್ರಸಾದ್‌ಕುಮಾರ್ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಇಂತಹ ಉತ್ಸವಗಳು ಮಾನವೀಯ ಮೌಲ್ಯಗಳ ಉದ್ದೀಪನಕ್ಕೆ ಪ್ರೇರಕವಾಗಿವೆ ಎಂದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು. ರೇಂಜರ್ ಲೀಡರ್ ಗಾನವಿ ಡಿ., ಸ್ವಾಗತಿಸಿದರು. ರೋವರ್ ಲೀಡರ್ ಪ್ರಸಾದ್ ಕುಮಾರ್ ಧನ್ಯವಾದವಿತ್ತರು. ಭೂಮಿಕಾ, ಕೆ.ಎಲ್. ಜೈನ್ ಮತ್ತು ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ

Article Image

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ

ಉಜಿರೆ: “ಪ್ರಚಲಿತ ಆರ್ಥಿಕ ವಿದ್ಯಮಾನದಲ್ಲಿ ಗ್ರಾಮೀಣ ಉದ್ಯಮಶೀಲತೆ” ಎಂಬ ವಿಷಯದ ಬಗ್ಯೆ ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಆಶ್ರಯದಲ್ಲಿ 2025ರ ಜನವರಿ 17 ಮತ್ತು 18ರಂದು ಬಹುಶಿಸ್ತೀಯ ಅಂತಾಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ ಸಮ್ಮೇಳನ ಆಯೋಜಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮತ್ತು ಸಮ್ಮೇಳನದ ಸಂಘಟನಾಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಮಹೇಶ್‌ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪ್ರಾರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾಗೂ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಪ್ರಗತಿ-ಸಾಧನೆಯ ಯಶೋಗಾಥೆಯ ಹಿನ್ನೆಲೆಯಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳು ಗ್ರಾಮೀಣ ಉದ್ಯಮಶೀಲತಾಭಿವೃದ್ಧಿಗಾಗಿ ಬಳಸಿದ ಬಹುಶಿಸ್ತೀಯ ಆರ್ಥಿಕನೀತಿಯ ಹಿನ್ನೆಲೆಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಚರ್ಚೆ, ವಿಚಾರ-ವಿನಿಮಯ ನಡೆಸಲಾಗುವುದು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ : 15-12-2024. ಹೆಸರು ನೋಂದಾವಣೆಗೆ ಕೊನೆಯ ದಿನಾಂಕ: 05-01-2025 ಪ್ರತಿನಿಧಿ ಶುಲ್ಕ: ಉಪನ್ಯಾಸಕರುಗಳಿಗೆ: ರೂ.1,000 ಸಂಶೋಧಕರಿಗೆ: ರೂ. 500. ವಿದ್ಯಾರ್ಥಿಗಳಿಗೆ ರೂ. 300 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಡಾ. ಮಹೇಶ್‌ಕುಮಾರ್ ಶೆಟ್ಟಿ. ಸಂಚಾರಿ ದೂರವಾಣಿ: 9880673174

ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ

ಉಜಿರೆ: ದೇಶದ ಪ್ರತಿಷ್ಠಿತ ಯುಜಿಸಿಯು ನ್ಯಾಕ್ ಸಂಸ್ಥೆ ಮೂಲಕ ನಡೆಸುವ ಗುಣಮಟ್ಟ ಪರೀಕ್ಷೆಯಲ್ಲಿ ಸತತ ನಾಲ್ಕು ಬಾರಿ A++ ಮಾನ್ಯತೆಯೊಂದಿಗೆ ರಾಜ್ಯದ, ದೇಶದ ಹಲವು ಪ್ರಶಸ್ತಿ, ಗೌರವಕ್ಕೆ ಭಾಜನವಾಗಿರುವ ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ಈಚೆಗೆ ಇನ್ನೆರಡು ಪ್ರಶಸ್ತಿಗಳು ಲಭಿಸಿವೆ. ರಾಷ್ಟ್ರಮಟ್ಟದ ‘ಬಿಗಿನಪ್ ರಿಸರ್ಚ್ ಇಂಟಲಿಜೆನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ಉಜಿರೆ ಶ್ರೀ ಧ.ಮಂ. ಕಾಲೇಜನ್ನು ‘ಬೆಸ್ಟ್ ಆ್ಯಂಡ್ ಮೋಸ್ಟ್ ಟ್ರಸ್ಟೆಡ್ ಡಿಗ್ರಿ ಕಾಲೇಜ್ ಆಫ್ ಕರ್ನಾಟಕ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅತ್ಯುತ್ತಮ ಆಡಳಿತ, ಗುಣಾತ್ಮಕ ಶಿಕ್ಷಣ ಹಾಗೂ ಸಾಮಾಜಿಕ ಕೊಡುಗೆಗೆ ನೀಡಲಾಗುವ ಪ್ರಶಸ್ತಿಗೆ ಕಾಲೇಜನ್ನು ಆಯ್ಕೆ ಮಾಡಿದೆ. ಜೊತೆಗೆ, ‘ಶೈಕ್ಷಣಿಕ ಗುಣಮಟ್ಟದಲ್ಲಿ ಉತ್ಕೃಷ್ಟತೆ ಹಾಗೂ ಅದರ ಪರಿಣಾಮಕಾರಿ ಅಳವಡಿಕೆ ಅನುಷ್ಠಾನ’ ವಿಭಾಗದಲ್ಲಿಯೂ ಕಾಲೇಜನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಇಂಡಿಯಾ ಇಲೈಟ್ ಎಜುಕೇಶನ್ ಆ್ಯಂಡ್ ಇನ್ಸ್ಟಿಟ್ಯೂಷನಲ್ ಎಕ್ಸೆಲೆನ್ಸ್ ಅವಾರ್ಡ್ಸ್ ಆ್ಯಂಡ್ ಕಾನ್ಫರೆನ್ಸ್ 2024’ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹಾಗೂ ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ, 450ಕ್ಕೂ ಹೆಚ್ಚು ಅಧಿಕ ರಾಷ್ಟ್ರಮಟ್ಟದ ಸಂಸ್ಥೆಗಳ ಪ್ರತಿನಿಧಿಗಳು, ವಿದ್ವಾಂಸರು, ಶೈಕ್ಷಣಿಕ ತಜ್ಞರು, ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ‍್ಯಕ್ರಮ

Article Image

ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ‍್ಯಕ್ರಮ

ಮೂಡುಬಿದಿರೆ: ಕಾಲೇಜು ಜೀವನವು ವಿದ್ಯಾರ್ಥಿ ಜೀವನದ ಒಂದು ವಿಶಿಷ್ಟವಾದ ಹಂತ. ಇದು ಸಂಪೂರ್ಣವಾಗಿ ತಾರುಣ್ಯವು ಅಲ್ಲದ ಸಂಪೂರ್ಣವಾಗಿ ವಯಸ್ಕರು ಅಲ್ಲದ ಸಮಯ. ಇಲ್ಲಿ ಸಾಕಷ್ಟು ಸವಾಲು ನಮ್ಮ ಮುಂದೆ ಇರುತ್ತದೆ. ನಾವು ಸ್ವಾತಂತ್ರ‍್ಯವನ್ನು ಬಯಸುತ್ತಿರುವಾಗ, ಆರ್ಥಿಕವಾಗಿ ಹೆತ್ತವರ ಮೇಲೆ ಅವಲಂಬಿತರಾಗುತ್ತೇವೆ. ನಮ್ಮ ಮನಸ್ಸು ಹಲವಾರು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಹಂತವಿದು ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಗಳಾದ ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳ 2024-25 ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ರೀತಿಯ ಒತ್ತಡಗಳನ್ನು ಅನುಭವಿಸುತ್ತಾರೆ. ಮೊದಲನೆಯದಾಗಿ ಶೈಕ್ಷಣಿಕ ಒತ್ತಡ, ಎರಡನೆಯದು ಕಾಲೇಜಿನ ನಿಯಮ, ನಿಬಂಧನೆಗಳನ್ನು ಪಾಲಿಸುವ ಒತ್ತಡ, ಮೂರನೆಯದು, ಸಹಪಾಠಿಗಳ ಜೊತೆಗೆ ಹೊಂದಿಕೊಳ್ಳುವ ಒತ್ತಡ. ಈ ರೀತಿಯ ಒತ್ತಡಗಳು ಅಗತ್ಯ. ಆದರೆ ಇವುಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು. ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತದೆ ವಿದ್ಯಾರ್ಥಿಗಳು ತಮ್ಮ ಪ್ರಯಾಣದ ಆರಂಭದಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಇದು ಮನೆಗೀಳಾಗಿರಬಹುದು, ಮೊಬೈಲ್ ಫೋನ್‌ಗಳ ವ್ಯಸನವಾಗಿರಬಹುದು ಅಥವಾ ಕೆಲವು ದುಷ್ಚಟಗಳಲ್ಲಿ ತೊಡಗಿರಬಹುದು. ತಮ್ಮ ಸಮಸ್ಯೆಗಳನ್ನು ಪೋಷಕರು, ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಹಂಚಿದ ಸಮಸ್ಯೆ ಅರ್ಧ ಪರಿಹಾರವಾದಂತಾದರೆ, ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತಾ ಸಾಗುತ್ತದೆ ಎಂದರು. ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಶಾಶ್ವತ ಪರಿಹಾರವೆಂದು ಪರಿಗಣಿಸದಿರಿ ಒತ್ತಡ, ವೈಫಲ್ಯವನ್ನು ಒಪ್ಪಿಕೊಳ್ಳುವುದು ಮತ್ತು ಒಬ್ಬರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದಿರುವುದು ಸಹಜ ವಿದ್ಯಮಾನವೆಂದು ಪರಿಗಣಿಸಬೇಕು. ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೆ ಶಾಶ್ವತ ಪರಿಹಾರವೆಂದು ಪರಿಗಣಿಸುವುದು ದೊಡ್ಡ ತಪ್ಪು ಎಂದು ಕಿವಿಮಾತು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಹನ್ನಾ ಶೆಟ್ಟಿ, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ಸ್ ಕ್ಷೇತ್ರವು ಸಮಾಜಕ್ಕೆ ಸೇವೆ ಒದಗಿಸಲು ಇರುವ ಉತ್ತಮ ಅವಕಾಶ. ಆಳ್ವಾಸ್‌ನಲ್ಲಿ ಲಭಿಸುವ ಉತ್ತಮ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ವೃತ್ತಿಪರತೆಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ.ಶಮಾ ಶೆಟ್ಟಿ, ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್‌ನ ಪ್ರಾಂಶುಪಾಲ ಡಾ.ಶಂಕರ್ ಶೆಟ್ಟಿ, ಆಡಳಿತಾಧಿಕಾರಿ ಹೇಮಂತ್ ಇದ್ದರು. ಉಪಪ್ರಾಂಶುಪಾಲೆ ಶ್ರೀವನಿತಾ ಟಿವೈ ಸ್ವಾಗತಿಸಿ, ಬುಶ್ರಾ ನಿರೂಪಿಸಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವಂದಿಸಿ, ಸುದೇಶ್ ಕಾರ‍್ಯಕ್ರಮದಲ್ಲಿ ಸಹಕರಿಸಿದರು.

First Previous

Showing 3 of 6 pages

Next Last