ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ
Published Date: 26-May-2024 Link-Copied
ಉಜಿರೆ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ಇದೇ 30 ರಂದು ಗುರುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ರವರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸೇವೆ, ಸಾಧನೆ ಬಗ್ಗೆ ಅವರು ಧರ್ಮಸ್ಥಳದಲ್ಲಿ ಮಾಹಿತಿ ನೀಡಿದರು. ಮೇ 30 ರಂದು ಗುರುವಾರ ಪೂರ್ವಾಹ್ನ ಹತ್ತು ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು. ಹೇಮಾವತಿ ವೀ. ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಖ್ಯಾತ ಹೃದ್ರೋಗ ತಜ್ಞರಾದ ಬೆಂಗಳೂರಿನ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರೀಯವರು ಮತ್ತು ಚಲನಚಿತ್ರ ನಟಿ ಪದ್ಮಜಾ ರಾವ್ ರವರು ಶುಭಾಶಂಸನೆ ಮಾಡುವರು. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ, ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುರೀಮಾ ಯಶವಂತ್, ಹುಣಸೂರಿನ ಛಾಯಾ ಮತ್ತು ಮೈಸೂರಿನ ಕುಮಾರಿ ಅನನ್ಯಾ ಅವರನ್ನು ಸನ್ಮಾನಿಸಲಾಗುವುದು. ರಾಜ್ಯದಲ್ಲಿರುವ ಜೈನ ಮಹಿಳಾ ಒಕ್ಕೂಟದ ಎಲ್ಲಾ ಶಾಖೆಗಳಿಂದ ಸುಮಾರು ಒಂದು ಸಾವಿರ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದು ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಪದ್ಮಿನಿ ಪದ್ಮರಾಜ್ ರವರು ಮಾಹಿತಿ ನೀಡಿದರು.