ಶ್ರೀ ಸಮ್ಮೇದ ಶಿಖರ್ಜಿಗೆ 150 ದರ್ಶನ ಮಾಡಿದ ಭವ್ಯ ಜೀವಿ ನಂಜುಂಡಪ್ಪ ಕೋಟಿ
Published Date: 05-Sep-2026 Link-Copied
ಶ್ರೀ ಸಮ್ಮೇದ್ ಶಿಖರ್ಜಿ ವರ್ತಮಾನದ 20 ತೀರ್ಥಂಕರರ ಮತ್ತು ಅಸಂಖ್ಯ ಕೇವಲಿಗಳ ನಿರ್ವಾಣ ಭೂಮಿಯಾಗಿದೆ. ಇಂತಹ ತಪೋ ಭೂಮಿಯನ್ನು ದರ್ಶನ ಮಾಡಲು ಜನ್ಮಜನ್ಮಗಳ ಪುಣ್ಯ ಬೇಕಾಗುತ್ತದೆ. ಭವ್ಯ ಜೀವಿಗಳು ಶಿಖರ್ಜಿ ದರ್ಶನ ಮಾಡಲು ಹಾತೊರೆಯುತ್ತಾರೆ. ಬಾರಿ ಬಾರಿ ದರ್ಶನ ಮಾಡಲು ಜೀವ ಹಾತೊರೆಯುತ್ತದೆ. ಸಮ್ಮೇದ ಶಿಖರ್ಜಿಯು ಜಾರ್ಖಂಡ್ ರಾಜ್ಯದಲ್ಲಿದೆ. ಇಂತಹ ಭವ್ಯ ಕ್ಷೇತ್ರವನ್ನು ನಂಜುಂಡಪ್ಪ ಕೋಟಿಯವರು 150 ಸಲ ಮಾಡಿದ್ದಾರೆ. ಇದರಲ್ಲೇನು ವಿಶೇಷ ಹಲವು ಜನ ಹಲವು ಬಾರಿ ದರ್ಶನ ಮಾಡಿದ್ದಾರೆ ಎಂದು ನೀವು ಅಂದುಕೊಳ್ಳುತ್ತೀದ್ದಿರಲ್ವಾ... ಇಲ್ಲೇ ಒಂದು ಗಮನಾರ್ಹ ವಿಚಾರವಿದೆ. ಅದೇನೆಂದರೆ ನಂಜುಂಡಪ್ಪ ಕೋಟಿಯವರು ಜೈನರಲ್ಲ ಅನ್ಯ ಧರ್ಮೀಯರು. ನಂಜುಂಡಪ್ಪ ಕೋಟಿಯವರು ಹಾವೇರಿಯ ಸವಣೂರಿನವರು. ಇವರು ಈವರೆಗೆ 150 ಸಲ ಶಿಖರ್ಜಿ ದರ್ಶನ ಮಾಡಿದ್ದಾರೆ. ಬಸ್ಸು , ರೈಲು, ವಿಮಾನದ ಮೂಲಕ ಅಷ್ಟೇ ಅಲ್ಲ 5 ಸಲ ಪಾದಯಾತ್ರೆಯ ಮೂಲಕವೂ ಶಿಖರ್ಜಿ ಯಾತ್ರೆ ಮಾಡಿದ್ದಾರೆ. 12 ಬಾರಿ ಶಿಖರ್ಜಿ ಪ್ರತಿಕ್ರಮಣ ಮಾಡಿದ್ದಾರೆ. ಕೇವಲ ಶಿಖರ್ಜಿ ಮಾತ್ರವಲ್ಲದೇ ಗಿರಿನಾರ್, ಶ್ರವಣಬೆಳಗೊಳ ಮುಂತಾದ ಕ್ಷೇತ್ರಗಳ ದರ್ಶನವನ್ನೂ ಮಾಡಿದ್ದಾರೆ. ಕೇವಲ ಶಿಖರ್ಜಿ ದರ್ಶನ ಮಾತ್ರ ಅಲ್ಲ ಇವರು ಸ್ವಾಧ್ಯಾಯ ಪ್ರಿಯರೂ ಕೂಡ ಹೌದು. ಇವರೇ ಸ್ವತಃ ಸ್ವಾಧ್ಯಾಯ ಮಾಡುತ್ತಾರೆ / ಮಾಡಿಸುತ್ತಾರೆ. ಸಂಪೂರ್ಣ ಸಸ್ಯಾಹಾರಿಯಾಗಿರುವ ಇವರು ಭಗವಾನ್ ಬಾಹುಬಲಿಯ ಸಂದೇಶ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ಜೈನ ಧರ್ಮದ ಒಂದು ಮಹೋನ್ನತೆಯೆಂದರೆ ನಾಮ ಜೈನರಾಗದೇ ಆಚರಣೆಯಲ್ಲಿ ಜೈನತ್ವವನ್ನು ಅಳವಡಿಸಿಕೊಂಡರೆ ಅವನೇ ನಿಜವಾದ ಜೈನ ಎನ್ನುತ್ತದೆ. ನಂಜುಡಪ್ಪ ಕೋಟಿಯವರಿಗೆ ಶುಭಾಶಯಗಳು. ತಮ್ಮ ಶುಭ ಭಾವನೆ ಉದ್ದೀಪನವಾಗಿ ಮೋಕ್ಷ ಮಾರ್ಗ ಮಗದಷ್ಟೂ ಪ್ರಶಸ್ತವಾಗಲಿ. ನಿರಂಜನ್ ಜೈನ್ ಕುದ್ಯಾಡಿ