ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ
Published Date: 03-Jul-2026 Link-Copied
ದಿಗಂಬರ ಜೈನ ಸಮಾಜದ ಅತಿದೊಡ್ಡ ನಕ್ಷತ್ರ ಎಂದೇ ಹೆಸರಾಗಿದ್ದ, ವಿಶ್ವ ವಂದನೀಯ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆಯು ಧಾರವಾಡ ಚಿಕ್ಕಮಲ್ಲಿಗವಾಡ ಹೊರವಲಯದ ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಇವರ ನಿವಾಸದಲ್ಲಿ ಪರಮಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಮತ್ತು ಪ.ಪೂ ಮುನಿಶ್ರೀ ಪುರಾಣ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವೈಭವದಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಶ್ರಾವಕ ಶ್ರಾವಕಿಯರಿಂದ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಪೂಜಾ ಅಷ್ಟಕ ಜರುಗಿತು. ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಮತ್ತು ಪರಿವಾರದವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತೀರ್ಥಂಕರರನ್ನು ನಾವು ನೋಡಿಲ್ಲ ಆದರೆ ದೇಶದಾದ್ಯಂತ ಶಾಂತಿ ಅಹಿಂಸೆ ಸಂದೇಶಗಳ ಮೂಲಕ ಧರ್ಮ ಪ್ರಭಾವನೆ ಮಾಡುತ್ತಿರುವ ಕಣ್ಣಿಗೆ ಕಾಣುವ ತೀರ್ಥಂಕರರನ್ನೇ ದಿಗಂಬರ ಮುನಿ ಮಹಾರಾಜರು ಇಂಥ ಮುನಿ ಮಹಾರಾಜರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ತಿಳಿಸಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಕೆ ಜೆ ರಪಾಟಿ, ಎಸ್ ಆರ್ ಮಲ್ಲಸಮುದ್ರ ಮುಂತಾದವರು ಮಾತನಾಡಿದರು. ಪರಮಪೂಜ್ಯ ಮುನಿಶ್ರೀ ಪುರಾಣ ಸಾಗರ ಮಹಾರಾಜರು ತಮ್ಮ ಪ್ರವಚನದಲ್ಲಿ ಆಚಾರ್ಯಶ್ರೀಗಳ ಗುಣಗಾನ ಮಾಡಿ ಸ್ಮರಿಸಿದರು. ಸಾನಿಧ್ಯ ವಹಿಸಿ ಪ್ರವಚನ ದಯಪಾಲಿಸಿದ ಆಚಾರ್ಯ ಶ್ರೀ ಪುಣ್ಯಸಾಗರ ಮಹಾರಾಜರು ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಭಾವಿ ಆಚಾರ್ಯರಾಗಿದ್ದರು ಅವರು ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ದಿಗಂಬರ ಜೈನ ಸರೋವರದ ರಾಜಹಂಸ ಎಂದು ಕರೆಯಲ್ಪಡುತ್ತಿದ್ದರು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿ ಶ್ರೀಮತಿದೇವಿ ಹಾಗೂ ಶ್ರೀ ಮಲ್ಲಪ್ಪಾಜಿಯವರ ಸುಪುತ್ರರಾಗಿ ದಿನಾಂಕ 10-10-1946 ಜನಿಸಿದರು. ಬಾಲ್ಯದಿಂದಲೂ ಆದ್ಯಾತ್ಮದ ಕಡೆ ಒಲವು ಹೊಂದಿದ್ದರು, ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಅನೇಕ ಸ್ಥಳಗಲ್ಲಿ ಸಂಚಾರಿಸುತ್ತ ಧರ್ಮದ ಅಧ್ಯಯನ ಮಾಡಿದರು. ಪೂಜ್ಯ ಜ್ಞಾನ ಸಾಗರ ಮಹಾರಾಜರಿಂದ ದಿನಾಂಕ 30-6-1968 ರಲ್ಲಿ ದಿಗಂಬರ ದೀಕ್ಷೆ ಪಡೆದು ಇಂದಿಗೆ 58 ವರ್ಷ ಮುಗಿದು 59ನೇ ವರ್ಷಕ್ಕೆ ಜೈನ ಮುನಿಯಾದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು. ಆಶ್ಚರ್ಯವೆಂದರೆ ಆಚಾರ್ಯರ ಮೂಕ ಮಾಟಿ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿದೆ. ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇಂಥ ಗುರುವರ್ಯರಿಂದ ನನ್ನನ್ನೂ ಸೇರಿ ಹಲವಾರು ಮುನಿಗಳು ದೀಕ್ಷೆ ಪಡೆದು ಧನ್ಯರಾಗಿದ್ದೇವೆ ಎಂದು ದೀಕ್ಷಾ ಗುರುಗಳನ್ನು ಸ್ಮರಿಸಿದರು. ನಂತರ 59 ದೀಪಗಳಿಂದ ಮಹಾ ಮಂಗಳಾರತಿ ವೈಭವದಿಂದ ನಡೆಯಿತು. ಸಮಾರಂಭದಲ್ಲಿ ಹುಬ್ಬಳ್ಳಿ ನವನಗರ ಧಾರವಾಡ ಮುಮ್ಮಿಗಟ್ಟಿ ಗದಗ ಮುಂತಾದ ಊರುಗಳಿಂದ ಹಲವಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಕುಶಲ ಅವಲಕ್ಕಿ ಅವರು ಪ್ರಾರ್ಥಿಸಿ, ಎಸ್ ಆರ್ ಮಲ್ಲಸಮುದ್ರರವರು ಸ್ವಾಗತಿಸಿ, ನಂದಿನಿ ಗೊಟೂರೆ ಇವರಿಂದ ಮಂಗಳಾಚರಣೆ ನೆರವೇರಿತು. ವರದಿ : ಶಾಂತರಾಜ ಮಲ್ಲಸಮುದ್ರ.