ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ಪದಗ್ರಹಣ, ಆಟಿಡೊರ ತಮ್ಮನದ ಲೇಸ್
Published Date: 12-Aug-2025 Link-Copied
ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ವತಿಯಿಂದ ಜೈನ್ ಮಿಲನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಆಟಿಡೂರ ತಮ್ಮನದ ಲೇಸ್ ಕಾರ್ಯಕ್ರಮ ಭಾನುವಾರ ಸಂಜೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಸುಮಾರು 65ಕ್ಕೂ ಅಧಿಕ ಬಗೆಯ ಆಟಿಯ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ಅತಿಥಿಗಳು ಹಾಗೂ ಜೈನಬಾಂಧವರು ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್ ಉದ್ಘಾಟಿಸಿದರು. ಪದಪ್ರದಾನದ ಪೌರೋಹಿತ್ಯವನ್ನು ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಸುದರ್ಶನ ಜೈನ್ ಪಂಜಿಕಲ್ಲು ವಹಿಸಿದ್ದರು. ಅಧ್ಯಕ್ಷತೆಯನ್ನು ಜೈನ್ ಮಿಲನ್ ಬಂಟ್ವಾಳ ಅಧ್ಯಕ್ಷ ಮಧ್ವರಾಜ್ ಜೈನ್ ಪಂಜಾಲು ವಹಿಸಿದ್ದರು. ನೂತನ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಾಜೇಂದ್ರ ಜೈನ್, ಕಾರ್ಯದರ್ಶಿಯಾಗಿ ಜಯಕೀರ್ತಿ ವೈ.ಎಸ್., ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಬಸ್ತಿಪಡ್ಡು, ಉಪಾಧ್ಯಕ್ಷರಾಗಿ ತೇಜ್ ಪಾಲ್ ಜೈನ್, ಡಾ. ಸೀಮಾ ಸುದೀಪ್, ಅರ್ಕಕೀರ್ತಿ ಹೆಗ್ಡೆ, ಹರ್ಷರಾಜ್ ಬಲ್ಲಾಳ್, ವಿನಯಚಂದ್ರ ಜೈನ್, ಜೊತೆ ಕಾರ್ಯದರ್ಶಿಗಳಾಗಿ ಹರ್ಷೇಂದ್ರ ಹೆಗ್ಡೆ, ಸಂಧ್ಯಾ ಸಿದ್ಧಕಟ್ಟೆ, ಚಂದನಾ ಬೃಜೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸನ್ಮತಿ ಜಯಕೀರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಾಂಸ್ ಜೈನ್ ಸಹಿತ ಸಂಚಾಲಕರ ತಂಡ, ಕಾರ್ಯಕಾರಿ ಸಮಿತಿಯ ಅಧಿಕಾರ ಸ್ವೀಕರಿಸಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಡ್ ಉಳಿಪ್ಪಾಡಿ ಮಾತನಾಡಿ, ಜೈನರು ಸಮಾಜದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುವುದರ ಮೂಲಕ ಗೌರವಾನ್ವಿತ ಸ್ಥಾನಮಾನದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಶುಭ ಹಾರೈಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸರ್ವ ಸಮಾಜದ ಪ್ರೀತಿಗೆ ಮಾನ್ಯರಾದ ಜೈನರು ಸಾಮಾಜಿಕವಾಗಿ ಗೌರವಾನ್ವಿತರಾದ ಸ್ಥಾನದಲ್ಲಿದ್ದಾರೆ. ಜೈನ ಆಹಾರ ಪದ್ಧತಿಯಿಂದ ತೊಡಗಿ, ಮುನಿಗಳು ನೀಡಿದ ಸಂದೇಶಗಳು ಪ್ರಸ್ತುತವಾಗಿವೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಅಶೋಕ್ ಜೈನ್ ಮಾತನಾಡಿ, ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬ ಕುರಿತು ವಿವರಿಸಿದರು. ಈ ಸಂದರ್ಭ ಹಿರಿಯರನ್ನು ಗೌರವಿಸಲಾಯಿತು ನೂತನ ಅಧ್ಯಕ್ಷ ರಾಜೇಂದ್ರ ಜೈನ್ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ನಿರ್ದೇಶಕ ಪ್ರಮೋದ್ ಕುಮಾರ್ ವೇಣೂರು ಶುಭ ಹಾರೈಸಿದರು. ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜಯಕೀರ್ತಿ ವೈ.ಎಸ್. ವಂದಿಸಿದರು.