ಬೋಳಂಬಳ್ಳಿಯಲ್ಲಿ ತೌಳವ ಇಂದ್ರ ಸಮಾಜದ ಬಸದಿ ದರ್ಶನ ಹಾಗೂ ಆಟಿಕೂಟ
Published Date: 12-Aug-2025 Link-Copied
ತೌಳವ ಇಂದ್ರ ಸಮಾಜದ 2025ನೆ ವರ್ಷದ ಕ್ಷೇತ್ರ ದರ್ಶನ ಮತ್ತು ಆಟಿ ಕೂಟ ಇತ್ತೀಚೆಗೆ ಕಂಬದಕೋಣೆಯ ಬೋಳಂಬಳ್ಳಿ ಯ ಶ್ರೀ ಪದ್ಮಾವತಿ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ಬಸದಿಗೆ ಬನ್ನಿ ಘೋಷವಾಕ್ಯದ ಅನುಷ್ಠಾನದ ನಿಟ್ಟಿನಲ್ಲಿ ನಗರದಿಂದ ದೂರವಿರುವ ಊರಿನ ಬಸದಿಗಳ ದರ್ಶನ ಪಡೆದು ಅಲ್ಲಿಯ ಪರಿಸರದಲ್ಲಿ ಕ್ರೀಡಾ ಕೂಟ ಹಾಗೂ ಸಭೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು, ಬಸದಿಗಳನ್ನೂ ಸಂದರ್ಶಿಸುವುದೇ ಇದರ ಮೂಲ ಉದ್ದೇಶ. ಈ ಆಚರಣೆಯೇ "ಕ್ಷೇತ್ರದರ್ಶನ ಹಾಗೂ ಆಟಿ ಕೂಟ"ಕಾರ್ಯಕ್ರಮ. "ಜೈನ ಬ್ರಾಹ್ಮಣರ(ಇಂದ್ರ) ಸಮಾಜ ಬಹಳ ಸಣ್ಣ ಸಮುದಾಯ, ಅದರಲ್ಲೂ ತುಳು ಮಾತಾಡುವ ಇಂದ್ರ ಸಮಾಜ ಎನ್ನುವ ಒಂದು ಸಂಘಟನೆ ಇದೆ ಎಂದು ನನಗೆ ತಿಳಿದಿರಲಿಲ್ಲ, ಈ ಜೈನ ಪುರೋಹಿತ ವರ್ಗ ನಮ್ಮ ಕ್ಷೇತ್ರಕ್ಕೆ ಬಂದದ್ದು ನನಗೆ ಬಹಳ ಸಂತಸವಾಗಿದೆ, ಅವರ ಈ ದಿನದ ಎಲ್ಲಾ ಕಾರ್ಯ ಚಟುವಟಿಕೆಗೆ ಇಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಬಹುದು, ಮೇಲಾಗಿ ಏನಾದರೂ ವ್ಯವಸ್ಥೆ ಬೇಕಿದ್ದಲ್ಲಿ ಸಂತೋಷದಿಂದ ಪೂರೈಸಲು ಕ್ಷೇತ್ರ ಬದ್ಧವಾಗಿದೆ" ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಿ ಕ್ಷೇತ್ರದ ಜ್ಯೋತಿಷ್ಯರೂ, ಧರ್ಮದರ್ಶಿಯೂ ಆದ ಧರ್ಮರಾಜ್ ಜೈನ್ ರವರು ಸಭೆಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಅಕ್ಷಯ ಕುಮಾರ್ ಮಳಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ತೌಳವ ಇಂದ್ರ ಸಂಘಟನೆಯು ಹದಿನೈದು ವರ್ಷಗಳಿಂದ ನಿರಂತರ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು, ಪುರೋಹಿತ ವರ್ಗದವರಿಗೆ ಸ್ವಲ್ಪ ಬಿಡುವುವಿರುವ ಆಟಿ ಮಾಸದಲ್ಲಿ ಇಂಥಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷ ಬಹಳ ಹಿಂದಿನ ಪುರಾತನ ಆಳುಪ ಅರಸರ ಕಾಲದಿಂದಲೂ ಪೂಜೆ ಗೊಳ್ಳುತ್ತಿರುವ ಶ್ರೀ ಪದ್ಮಾವತಿ ದೇವಿ ನೆಲೆಸಿರುವ ಬೋಳಂಬಳ್ಳಿ ಬಸದಿಯ ದರ್ಶನ ಮಾಡಿ, ಸ್ಥಳದಲ್ಲಿಯೇ ಸದಸ್ಯರಿಗೆ ಕೆಲ ಕ್ರೀಡೆಗಳನ್ನು ಏರ್ಪಡಿಸಿ ಕ್ಷೇತ್ರದ ಪ್ರಸಾದ ಸ್ವೀಕರಿಸಲು ನಿರ್ಧರಿಸಲಾಯಿತು" ಎಂದರಲ್ಲದೆ ಅತಿಥಿಗಳನ್ನೂ ಸ್ವಾಗತಿಸಿ ಮುಂದುವರಿದು ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸಿದ ಕ್ಷೇತ್ರದ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಅನಂತರ ಇನ್ನೋರ್ವ ಅತಿಥಿ ಧರ್ಮರಾಜ ಜೈನ್ ರವರ ಪುತ್ರ ಡಾಕ್ಟರ್ ಆಕಾಶ್ ರಾಜ್ ರವರೂ ಮನೋರಂಜನೆಯ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುತ್ತಾ ಸಂಘದ ಚಟುವಟಿಕೆಗಳನ್ನು ಹೊಗಳುತ್ತಾ,ಪುರೋಹಿತರ ಸಂಘಟನೆ ಇಲ್ಲಿಗೆ ಬಂದುದು ನಮ್ಮ ಭಾಗ್ಯ ಎಂದು ತಿಳಿಯುತ್ತೇವೆ ಎಂದರು ಹಾಗು ಮುಂದಕ್ಕೂ ಪ್ರೋತ್ಸಾಹ ನೀಡುವ ಭರವಸೆ ನೀಡಿದರು. ಅನಂತರ ಧರ್ಮರಾಜ ಜೈನ್ ರವರನ್ನು ಶಾಲು, ಹಾರ, ಫಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಹಾಗೂ ಇಂದ್ರ ಸಮಾಜದ ವತಿಯಿಂದ ಕ್ಷೇತ್ರಕ್ಕೆ ದೇಣಿಗೆಯನ್ನು ನೀಡಲಾಯಿತು. ಕ್ಷೇತ್ರದ ವತಿಯಿಂದ ಹಿರಿಯ ಪುರೋಹಿತರಾದ ಪಡೆಂಗಡಿ ಅರುಣಾ ಕುಮಾರ್ ಇಂದ್ರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಂದ್ರ ಸಮಾಜದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎರ್ಮಾಳು ಸುಧೀರ್ ಕುಮಾರ್ ಇಂದ್ರರವರನ್ನೂ ಶಾಲುಹಾಕಿ ಅಭಿನಂದಿಸಲಾಯಿತು. ಉಪಾಧ್ಯಕ್ಷರಾದ ದಿವ್ಯಾವಿರೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ವಾಣಿಶ್ರೀ ಪ್ರಾರ್ಥನೆ ನೆರವೇರಿಸಿದರು. ಕಾರ್ಯದರ್ಶಿ ಅಭಯ ಕುಮಾರ್ ಧನ್ಯವಾದ ಸಮರ್ಪಿಸಿದರು, ಆಹ್ಲಾದ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಸುಜಾತ, ಶ್ರೇಯಶ್ರೀ, ಮೇಘನಾರವರು ಕ್ರೀಡಾ ನಿರ್ಣಾಯಕರಾಗಿ ಸಹಕರಿಸಿದರು. ವಿಜೇತರ ಪಟ್ಟಿಯನ್ನು ಸುಜ್ಞಾನ ಇಂದ್ರ ವಾಚಿಸಿದರು. ಶಾಂತಿ ಮಂತ್ರದೊಡನೆ ಕಾರ್ಯಕ್ರಮಕ್ಕೆ ಮುಕ್ತಾಯ ಮಾಡಿ ಪ್ರವಾಸಿ ತಂಡ ಮೂಡುಬಿದಿರೆಗೆ ಹಿಂದಿರುಗಿತು.