ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶ ನಿವೃತ್ತ ಯೋಧ ಕಾರ್ಗಿಲ್ ವೀರ ನಾಯಕ್ ಲೀಲಾದರ್ ಕಡಂಬೋಡಿ
Published Date: 08-Aug-2025 Link-Copied
ಭಾರತೀಯ ಸೇನೆ ವಿಶ್ವದ ಅತ್ಯಂತ ಶಿಸ್ತಿನ ಮತ್ತು ಶಕ್ತಿಶಾಲಿ ಸೈನ್ಯಗಳಲ್ಲಿ ಒಂದು. ದೇಶದ ರಕ್ಷಣೆಯೊಂದಿಗೆ ಸೇನೆ ತನ್ನ ಸದಸ್ಯರಿಗೆ ವೈವಿಧ್ಯಮಯ ಅವಕಾಶಗಳನ್ನು ವೃತ್ತಿಪರ ಬೆಳವಣಿಗೆ, ಶಿಸ್ತು ಹಾಗೂ ಗೌರವದ ಜೀವನವನ್ನು ಒದಗಿಸುತ್ತದೆ. ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ನಾಯಕ್ ಲೀಲಾದರ್ ಕಡಂಬೋಡಿ ಅವರು ಹೇಳಿದರು. ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜರಗಿದ ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತೀಯ ಸೇನೆಯಲ್ಲಿ ಇರುವಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಕಾರ್ಗಿಲ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಗೇಂದ್ರ ಸಿಂಗ್ ಯಾದವ್ ಅವರ ಹೋರಾಟವನ್ನು ಸ್ಮರಿಸಿದರು. ನಿವೃತ್ತಿಯ ನಂತರವೂ ನಾವೂ ದೈಹಿಕವಾಗಿ ಸದೃಡರಾಗಿದ್ದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೌರವ ಅವಕಾಶಗಳು ಸಿಗುತ್ತವೆ. ಸೈನಿಕರನ್ನು ಗುರುತಿಸುವ ಕಾರ್ಯಕ್ರಮ ಮುಂದೆ ಕೂಡ ಈ ಸಂಸ್ಥೆಯಿಂದ ನಡೆಯಲಿ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸೇನೆಗೆ ಸೇರಿ ಈ ಸಂಸ್ಥೆಯಿಂದ ಗೌರವಿಸುವಂತಾಗಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಎಲ್ಲರಿಗೂ ಭಗವಂತ ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು, ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಭಾರತೀಯ ಸೇನೆ ಕಾರಣ. ಸೇನೆಗೆ ಸೇರಲು ದೈಹಿಕ ಸಾಮರ್ಥ್ಯ ಬಹುಮುಖ್ಯ. ದೇಶ ಸೇವೆಗೆ ಎಲ್ಲರೂ ಸೇರಬೇಕು. ದೇಶ ಕಾಯುವ ಸೈನಿಕರ ಬಗ್ಗೆ ನಮಗೆ ಗೌರವ ಇರಬೇಕು, ಎಲ್ಲರಲ್ಲೂ ದೇಶ ಪ್ರೇಮವನ್ನು ಹುಟ್ಟಿಸಬೇಕು, ಎಂದು ಹೇಳಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ನಾಯಕ್ ಲೀಲಾಧರ ಕಡಂಬೋಡಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ವೇದಿಕೆಯಲ್ಲಿ ದೇಶದ ವೀರಯೋಧರ ಸೇವೆಯನ್ನು ಅವರ ತ್ಯಾಗ ಬಲಿದಾನವನ್ನು ನೃತ್ಯದ ಮೂಲಕ ಬಿಂಬಿಸಲಾಯಿತು. ಭಾರತೀಯ ಧೀರ ಯೋಧ ಮೇಜರ್ ಆಶಾರಾಮ್ ತ್ಯಾಗಿ ಅವರ ಹೋರಾಟದ ದೃಶ್ಯ ರೂಪಕವನ್ನು ಅಭಿನಯಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಎನ್ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತು, ಜವಬ್ದಾರಿ ಹಾಗೂ ರಾಷ್ಟ್ರಭಕ್ತಿ ನೈತಿಕತೆಯ ಮೌಲ್ಯ ಸಾರುವ ಎನ್ಸಿಸಿ ಬ್ಯಾರೆಟ್ಗಳನ್ನು ನೀಡಲಾಯಿತು. ಶಿಸ್ತು, ಶಾರೀರಿಕ ಕ್ಷಮತೆ ಹಾಗೂ ರಾಷ್ಟ್ರಭಕ್ತಿಯ ಅಭಿವ್ಯಕ್ತಿಗಾಗಿ ಎನ್ಸಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಸಂಪತ್ಕುಮಾರ್ ಜೈನ್, ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯರಾದ ಜಯಶೀಲ ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಶಾಶ್ವತ್ ಮತ್ತು ಆರ್ಯನ್ ಶಿಂಧೆ ನಿರೂಪಿಸಿದರು. ದಕ್ಷ ಸ್ವಾಗತಿಸಿ, ಚಾರ್ವಿ ವಂದಿಸಿದರು.