ಹೊಂಬುಜದ ಜೈನ ಮಠಕ್ಕೆ ಕಾಲ್ನಡಿಗೆಯಿಂದ ಶ್ರೀಕ್ಷೇತ್ರ ದರ್ಶನ ಮಾಡುವ ಸಂಕಲ್ಪ ಯಾತ್ರೆ
Published Date: 07-Aug-2025 Link-Copied
ಜನರು ದೇವರಿಗೆ ಭಕ್ತಿ ಸಮರ್ಪಣೆ ಮಾಡಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಕಾಲ್ನಡಿಗೆಯಿಂದ (ಪಾದಯಾತ್ರೆ) ಯಾತ್ರೆಯನ್ನು ಮಾಡುವ ಮೂಲಕ ದೇವರ ದರ್ಶನ ಮಾಡಿ ಧನ್ಯತಾ ಭಾವ ತೋರುವುದೂ ಕೂಡಾ ಒಂದು. ಈ ಪಾದಯಾತ್ರೆಯ ಉದ್ದೇಶ ದೇವರ ದರ್ಶನ ಮಾತ್ರವಲ್ಲ, ಸಾಧನೆ, ಯುವ ಶಕ್ತಿಯ ಉತ್ಸಾಹ, ಯುವಕರ ಸಂಘಟನೆ, ಧರ್ಮಜಾಗ್ರತಿ, ಸಂಸ್ಕೃತಿ ಮತ್ತು ಪರಂಪರೆಯ ಅನಾವರಣ ಕೂಡಾ ಅಡಗಿದೆ ಎನ್ನಬಹುದು ಜೊತೆಗೆ ಒಗ್ಗಟ್ಟಿನ ಪ್ರದರ್ಶನವೂ ಹೌದು. ಈ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾ ಶಿಗ್ಗಾವಿ ತಾಲೂಕ "ಅ ಮ ಕೊಪ್ಪ ಮತ್ತು ದುಂಡಸಿ" ಗ್ರಾಮದ ಜೈನ ಸಮಾಜದ ಯುವಕರು ಪ್ರಶಾಂತ ಬಿಶೆಟ್ಟಿ, ಸಂತೋಷ ಧರಣಪ್ಪನವರ, ಭರತೇಶ ದೀಪಣ್ಣವರ, ಬ್ರಹ್ಮಾನಂದ ಪುಟ್ಟಣ್ಣವರ, ಭರಮಪ್ಪ ದೇ, ಧರನಪ್ಪನವರ, ಧರಣೇಂದ್ರ ಜ ಮನಕಟ್ಟಿ, ಬಾಬು ಭದ್ರಾಪುರ, ಚಂದ್ರು ವೈಗುಡ್ಡಿ ಮುಂತಾದ ಇತರ ಯುವ ಮುಖಂಡರು ಒಂದು ತಂಡವನ್ನು ಕಟ್ಟಿಕೊಂಡು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ದರ್ಶನ ಮಾಡುವ ಸಂಕಲ್ಪ ಮಾಡಿ ಯಾತ್ರೆಗೆ ಸನ್ನದ್ದರಾದರು. ಪ್ರಾರಂಭದಲ್ಲಿ 20 ಜನರಿದ್ದ ಈ ತಂಡದಲ್ಲಿ ಈಗ ನೂರರ ಸಂಖ್ಯೆ ದಾಟಿದೆ. ಈ ತಂಡವು ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಹೊಂಬುಜದ ಶ್ರೀಕ್ಷೇತ್ರದ ಇಷ್ಟಾರ್ಥ ಫಲಪ್ರದಾಯಿನಿ ಮಹಾಮಾತೆ ಪದ್ಮಾವತಿ ಅಮ್ಮನವರ ದರ್ಶನಮಾಡುವ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದು ಈ ತಂಡದ ನಾಲ್ಕನೇ ವರ್ಷದ ಪಾದಯಾತ್ರೆ. ಇದೇ ಆಗಸ್ಟ್ 17 ರಿಂದ 21 ರವರೆಗೆ ಕೈಗೊಂಡಿದ್ದು ಸುಮಾರು 200 ಕೀ ಮೀ ದಾರಿಯನ್ನು 5 ದಿನಗಳಲ್ಲಿ ಕ್ರಮಿಸಿ ಕ್ಷೇತ್ರವನ್ನು ತಲುಪಲಿದ್ದಾರೆ. ಶ್ರಾವಣ ಮಾಸದ ಕೊನೆಯ ಸಂಪತ್ ಶುಕ್ರವಾರ ದಿ 22ರಂದು ದೇವಿ ದರ್ಶನ ಮಾಡಿ ಪೂಜಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಂಕಲ್ಪ ಯಾತ್ರೆಯಲ್ಲಿ ಜಾತ್ಯತೀತವಾಗಿ ಸರ್ವಧರ್ಮದವರು ಕೂಡಾ ಭಾಗೀಗಳಾಗುತ್ತಿರುವದು ವಿಶೇಷವಾಗಿದೆ. ಅತ್ಯಂತ ಶ್ರದ್ದಾ ಭಕ್ತಿಯಿಂದ ದೇವಿ ದರ್ಶನ ಮಾಡಿ ಪಾವನರಾಗಬೇಕೆಂಬ ಉದ್ದೇಶ ಹೊಂದಿದ ಈ ತಂಡದ ಪಾದಯಾತ್ರೆ ಫಲಪ್ರದವಾಗಿ ಯಶಸ್ವಿಯಾಗಲಿ, ಜಗದ್ ರಕ್ಷಕಿ ಮಹಾಮಾತೆಯ ಕೃಪಾಶೀರ್ವಾದ ಎಲ್ಲರ ಮೇಲಿರಲಿ ಹಾಗು ಸಕಲ ಇಷ್ಟಾರ್ಥಗಳು ಈಡೇರಲಿ ಎನ್ನುವ ಆಶಯಗಳೊಂದಿಗೆ ಶುಭ ಹಾರೈಕೆಗಳು ಮತ್ತು ಅಭಿನಂದನೆಗಳು. ವರದಿ: ಶಾಂತರಾಜ ಮಲ್ಲಸಮುದ್ರ