ರಾಣಿ ಅಬ್ಬಕ್ಕ ರಾಣಿ ಚೆನ್ನಭೈರಾದೇವಿ ನಾಡಿನ ರಕ್ಷಣೆ ಮಾಡಲಿಲ್ಲವೇ
Published Date: 20-Jun-2025 Link-Copied
ನಮ್ಮ ದೇಶದಲ್ಲಿ ಮಕ್ಕಳ ಶಾಲಾ ಪಠ್ಯ ಪುಸ್ತಕಗಳಲ್ಲೂ ಮಕ್ಕಳಿಗೆ ನಿಜವಾದ ಇತಿಹಾಸವನ್ನು ತಿಳಿಸಲಾಗುವುದಿಲ್ಲ. ಪಠ್ಯ ಪುಸ್ತಕ ರಚನೆಯಲ್ಲೂ ರಾಜಕೀಯ ಪಕ್ಷಪಾತವನ್ನು ಮಾಡಲಾಗುತ್ತಿದೆ. ಇಲ್ಲೂ ಕೂಡ ಧರ್ಮ, ಜಾತಿಗಳನ್ನು ನೋಡಲಾಗುತ್ತಿದೆ. ಇದನ್ನು ಉದಾಹರಣೆ ಸಹಿತ ವಿವರಿಸುತ್ತೇನೆ. ಇವತ್ತು ನಮ್ಮ ಮನೆಯ ಮಕ್ಕಳಿಗೆ ಓದಿಸುವಾಗ ಇಂಗ್ಲೀಷ್ ಮೀಡಿಯಂ 5 ನೇ ತರಗತಿಯ ಕನ್ನಡ ಪಠ್ಯ ಪುಸ್ತಕವನ್ನು ಗಮನಿಸುತ್ತಿರುವಾಗ ಈ ವಿಷಯ ತಿಳಿಯಿತು. ನಮ್ಮ ನಾಡಿನ ರಕ್ಷಣೆ ಮಾಡಿದವರ ಪಟ್ಟಿ ಗಮನಿಸಿದೆ. ಕಿತ್ತೂರು ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ, ಟಿಪ್ಪುಸುಲ್ತಾನ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಇಷ್ಟು ಜನರ ಹೆಸರಿದೆ. ಇವರ ಹೆಸರಿನ ಬಗ್ಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಇಲ್ಲಿ ಎಲ್ಲರ ಹೆಸರು ಹೇಳಲೂ ಕೂಡ ಅಸಾಧ್ಯ ಎಂಬುದೂ ಕೂಡ ನನಗೆ ತಿಳಿದಿದೆ. ಇಲ್ಲಿ ಮುಖ್ಯರಾದವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂಬ ವಿಚಾರವೂ ಕೂಡ ಸರಿ ಓಕೆ. ಆದರೆ ಇವರೆಲ್ಲರಿಗಿಂತ ಮೊದಲು ನಮ್ಮ ನಾಡಿನ ರಕ್ಷಣೆಗಾಗಿ ಜೀವವನ್ನೇ ತೆತ್ತ ಇಬ್ಬರು ಪ್ರಮುಖ ಮಹಿಳಾ ಹೋರಾಟಗಾರರಾದ ರಾಣಿ ಅಬ್ಬಕ್ಕ, ರಾಣಿ ಚೆನ್ನಾಭೈರಾದೇವಿಯರ ಹೆಸರು ಇತಿಹಾಸಕಾರರಿಗೆ ನೆನಪು ಆಗಲಿಲ್ಲವೇ. ರಾಣಿ ಅಬ್ಬಕ್ಕಳ ಪರಾಕ್ರಮಕ್ಕೆ ಪೋರ್ಚುಗೀಸರು ಧರಶಾಹಿಯಾಗಿದ್ದರು, ಆಕೆಯ ಪರಾಕ್ರಮವನ್ನು ವಿದೇಶದಿಂದ ಬಂದು ನೋಡಿದ್ದಂತಹ ಪ್ರವಾಸಿಗರೇ ತಮ್ಮ ಲೇಖನದಲ್ಲಿ ರಾಣಿ ಅಬ್ಬಕ್ಕಳನ್ನು ಹಾಡಿ ಹೊಗಳಿದ್ದಾರೆ. ಪೋರ್ಚುಗೀಸರೊಡನೆ ನಿರಂತರವಾಗಿ ಹೋರಾಡಿ ಗೇರುಸೊಪ್ಪೆಯನ್ನು ರಕ್ಷಿಸಿದ ಕಾಳು ಮೆಣಸಿನ ರಾಣಿ ಹಾಗೂ ಇಂಗ್ಲೆಂಡಿನ ರಾಣಿಗೆ ಸರಿಸಮಳು ಎಂದು ವಿದೇಶಿಗರಿಂದ ಬಣ್ಣಿಸಲ್ಪಟ್ಟ ಚೆನ್ನಾಭೈರಾದೇವಿಯನ್ನು ಇತಿಹಾಸಕಾರರು ಮರೆತಿದ್ದಾರೆ. ಮಹಿಳೆಯರಾಗಿದ್ದುಕೊಂಡು ಈ ನಾಡಿನ ರಕ್ಷಣೆಗಾಗಿಯೇ ಪ್ರಾಣತೆತ್ತ ಈ ಮಹಿಳಾ ಮಣಿಗಳನ್ನು ಪಠ್ಯಪುಸ್ತಕ ರಚನಾ ಸಮಿತಿಯವರು ಧರ್ಮದ ಆಧಾರದ ಮೇಲೆ ಪುಸ್ತಕದಿಂದ ಹೊರಗಿಟ್ಟಿರಬೇಕು ಅನಿಸುತ್ತೆ. ಖಂಡಿತವಾಗಿಯೂ ಅನೇಕರು ಈ ನಾಡುನುಡಿಗಾಗಿ ಪ್ರಾಣತೆತ್ತಿದ್ದಾರೆ. ಆದರೆ ಇಲ್ಲಿ ಬೇಕಂತಲೇ ತಾರತಮ್ಯ ಮಾಡಿ ಅಬ್ಬಕ್ಕ ಹಾಗೂ ಚೆನ್ನಾಭೈರಾದೇವಿಯ ಹೆಸರನ್ನು ಇತಿಹಾಸದಿಂದ ಮರೆಮಾಚಬೇಕೆಂಬ ಹುನ್ನಾರ ನಡೆಯುತ್ತಿದೆ ಎಂದು ಭಾಸವಾಗುತ್ತಿದೆ. ಮಹಾವೀರರ ಹೆಸರಿಲ್ಲ ಯಾಕೆ ಹಾಗೆಯೇ ದಾರ್ಶನಿಕರ ಹೆಸರನ್ನೂ ಕೂಡ ಉಲ್ಲೇಖಿಸಲಾಗಿದೆ. ಬುದ್ಧ, ಬಸವ, ಅಲ್ಲಮ, ಗಾಂಧಿ, ಅಂಬೇಡ್ಕರ್ ಹೆಸರನ್ನು ತಿಳಿಯಪಡಿಸಲಾಗಿದೆ. ಇಲ್ಲೂ ಕೂಡ ಕೊಟ್ಟಿರುವ ಹೆಸರಿನ ಬಗ್ಗೆ ಆಕ್ಷೇಪ ಇಲ್ಲ. ಆದರೆ ಜಗತ್ತಿನ ಮಹಾನ್ ದಾರ್ಶನಿಕ, ತ್ಯಾಗ ಅಹಿಂಸೆಯ ಪ್ರತಿಪಾದಕ ಮಹಾವೀರರ ಹೆಸರು ತೆಗೆದುಕೊಂಡಿಲ್ಲ. ಮಹಾವೀರರ ಉಪದೇಶದಂತೆ ನಡೆದರೆ ಈ ಜಗತ್ತು ಶಾಂತಿಯಿಂದ, ನೆಮ್ಮದಿಯಿಂದ ಇರುತ್ತದೆ ಎಂದು ಅನೇಕ ದಾರ್ಶನಿಕರು ಉಲ್ಲೇಖಿಸಿದ್ದಾರೆ. ಬುದ್ಧನಿಗಿಂತಲೂ ಮೊದಲೇ ಮಹಾವೀರರು ಅಹಿಂಸೆಯನ್ನು ಬೋಧಿಸಿದ್ದಾರೆ ಎಂಬುದು ಅತೀ ಬುದ್ಧಿವಂತ ಇತಿಹಾಸಕಾರರಿಗೆ ಗೊತ್ತಿಲ್ಲ ಅನಿಸುತ್ತೆ ಪಾಪ. ಆದರೆ ಈ ಪಠ್ಯಪುಸ್ತಕ ಸಮಿತಿಯವರು ಬೇಕಂತಲೇ ಧರ್ಮಜಾತಿಗಳನ್ನು , ರಾಜಕೀಯ ಮಾಡಿ ನೋಡಿ ಹೆಸರುಗಳನ್ನು ತೆಗೆದುಕೊಂಡಿರುವುದು ಅನಿಸುತ್ತೆ. ಮಕ್ಕಳಿಗೆ ನಿಜವಾದ ಇತಿಹಾಸ ತಿಳಿಸುವಂತಾಗಲಿ ಮಕ್ಕಳನ್ನು ನಿಜವಾದ ಇತಿಹಾಸ ತಿಳಿದುಕೊಳ್ಳುವಲ್ಲಿ ವಂಚನೆ ಮಾಡಲಾಗುತ್ತದೆ. ಮೊದಲಿನಿಂದಲೂ ಬ್ರಿಟಿಷರಿಂದ ಹಿಡಿದು ಈಗಿನವರೆಗೂ ನಿಜವಾದ ಇತಿಹಾಸವನ್ನು ಬಚ್ಚಿಡಲಾಗುತ್ತಿದೆ ಹಾಗೂ ತಿರುಚಲಾಗುತ್ತಿದೆ. ವಿವಾದಿತ ವ್ಯಕ್ತಿಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ನಾಡಿನಲ್ಲಿ ಅರಾಜಕತೆಯನ್ನು ಸೃಷ್ಟಿಸಲಾಗುತ್ತಿದೆ. ಅದರಲ್ಲೂ ಜೈನ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಇರುವ ಪಠ್ಯಪುಸ್ತಕಗಳಿಂದಲೂ ಕೈಬಿಡುತ್ತಿರುವ ವಿಚಾರ ಬೆಳಕಿಗೆ ಬರುತ್ತಿದೆ. ರಾಜಕೀಯ ಪ್ರೇರಿತವಾಗಿ ಡೊಂಬರಾಟ ಆಡುತ್ತಿರುವ ಈ ವ್ಯವಸ್ಥೆಗೆ ನನ್ನ ಧಿಕ್ಕಾರವಿದೆ. ಅದರಲ್ಲೂ ಭಾರತದ ಎಲ್ಲಾ ರಾಜಕೀಯ ಪಕ್ಷಗಳ ಕಪಟ ಹಾಗೂ ನೀಚ ರಾಜಕೀಯಕ್ಕೆ ಧಿಕ್ಕಾರವಿದೆ. ನಿರಂಜನ್ ಜೈನ್ ಕುದ್ಯಾಡಿ