ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ


Logo

Published Date: 06-Jul-2026 Link-Copied

ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಸೇವೆಯಲ್ಲಿರುವ ಸಂತೋಷ ಬೇರೆಲ್ಲಿಯೂ ಸಿಗಲಾರದು. ನಮ್ಮೆಲ್ಲಾ ವೈದ್ಯರಲ್ಲಿ ಆ ಸೇವಾ ಮನೋಭಾವವಿದೆ ಎಂದರು. ಅವರು ವೈದ್ಯರ ದಿನಾಚರಣೆಯ ಅಂಗವಾಗಿ ಇಲ್ಲಿನ ವೈದ್ಯರನ್ನು ಸನ್ಮಾನಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈದ್ಯರಿಗೆ ಅವರ ಪರಿವಾರದವರ ಸಹಕಾರ ಇರುವುದರಿಂದ ಮಾತ್ರ ಇಂತಹ ಗ್ರಾಮೀಣ ಪ್ರದೇಶದಲ್ಲಿ ನಮ್ಮ ವೈದ್ಯರು ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಕೇವಲ ವೈದ್ಯಕೀಯ ಸಲಕರಣೆಗಳು ಇದ್ದರೆ ಸಾಲದು ಅದನ್ನು ಸರಿಯಾಗಿ ಬಳಸುವವರ ಮೂಲಕ ರೋಗಿಗಳಿಗೆ ಉಪಯುಕ್ತವಾಗಬೇಕು. ಅಂತಹ ಕೆಲಸ ಈ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ನಗರದ ಹೈಟೆಕ್ ವೈದ್ಯಕೀಯ ಸೇವೆ ಕಡಿಮೆ ಖರ್ಚಿನಲ್ಲಿ ಸಿಗಬೇಕು ಎಂಬ ಉದ್ದೇಶದಿಂದ ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಇಲ್ಲಿನ ವೈದ್ಯಕೀಯ ಸೇವೆಯನ್ನು ಗಮನಿಸಿ ನಗರದ ವೈದ್ಯರು ಅತ್ಯಂತ ಉತ್ಸಾಹದಿಂದ ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿರುವುದು ಖುಷಿ ಕೊಟ್ಟಿದೆ. ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರ ಆಡಳಿತದಿಂದ ಆಸ್ಪತ್ರೆ ಬೆಳೆಯುತ್ತಿದೆ. ಅತೀ ಶೀಘ್ರದಲ್ಲಿ ಎಂ.ಆರ್ ಸ್ಕ್ಯಾನಿಂಗ್ ಸೇವೆ ಇಲ್ಲಿ ದೊರೆಯಲಿದೆ ಎಂದರು. ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ ಗಿಡ ಹೆಮ್ಮರವಾಗಿ ಬೆಳೆಯುವಂತೆ ನಮ್ಮ ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಬೆಳೆಯುತ್ತಿದೆ. ಮರದ ರೆಂಬೆ ಕೊಂಬೆಗಳು ವಿಸ್ತಾರವಾಗುವಂತೆ ಇಲ್ಲಿ ಹೊಸ ಹೊಸ ವಿಭಾಗಗಳು ಕೂಡ ತೆರೆದುಕೊಳ್ಳುತ್ತಿವೆ. ಸೇವಾ ಮನೋಭಾವ ಹೊಂದಿರುವ ಇಲ್ಲಿನ ವೈದ್ಯರು ಕೇವಲ ವೃತ್ತಿಯಿಂದ ಮಾತ್ರ ಅಲ್ಲ ಹೃದಯದಿಂದ ವೈದ್ಯರಾಗಿದ್ದಾರೆ. ವೈದ್ಯರ ಸೇವೆಗೆ ಬೆಲೆ ಕಟ್ಟಲಾಗದು. ಅತ್ಯುತ್ತಮ ಸೇವೆ ನೀಡುತ್ತಿರುವ ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಎಸ್.ಡಿ.ಎಂ ಬ್ರಾಂಡ್‌ಗೆ ಹೊಸ ಗರಿಯಾಗಿ ಶೋಭಿಸುತ್ತಿದೆ. ಇದಕ್ಕೆಲ್ಲ ಕಾರಣ ಎಲ್ಲರ ಶ್ರಮದೊಂದಿಗೆ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರ ಕಠಿಣ ಪರಿಶ್ರಮ ಮತ್ತು ಎಲ್ಲರನ್ನು ಒಗ್ಗೂಡಿ ಕೆಲಸ ಮಾಡಿಸುವ ಚಾಣಾಕ್ಯತೆ ಇದೆ ಎಂದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 2025-26ರ ಸಾಲಿನಲ್ಲಿ 4 ಕೋಟಿಗೂ ಹೆಚ್ಚು ಮೊತ್ತದ ವೈದ್ಯಕೀಯ ಸೇವೆಯನ್ನು ಡಾ. ಹೆಗ್ಗಡೆಯವರ ನಿದೇರ್ಶನದಂತೆ ಉಚಿತವಾಗಿ ನೀಡಲಾಗಿದೆ. 11 ಹಾಸಿಗೆಗಳ ಸುಸಜ್ಜಿತ ಹವಾನಿಯಂತ್ರಿತ ಡಯಾಲಿಸಿಸ್ ಸೆಂಟರ್‌ನಲ್ಲಿ ಉಚಿತ ಡಯಾಲಿಸಿಸ್ ಸೇವೆ ನೀಡುತ್ತಿದ್ದು, 2025-26ರಲ್ಲಿ 1.44 ಕೋಟಿ ಮೊತ್ತದ 9644 ಉಚಿತ ಡಯಾಲಿಸಿಸ್ ಸೇವೆ ನೀಡಲಾಗಿದೆ. 60 ಕ್ಕೂ ಹೆಚ್ಚು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯರು ಇಲ್ಲಿ ಲಭ್ಯವಿದ್ದಾರೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ ಮಾತನಾಡಿ ಎಲ್ಲಾ ವಿಭಾಗಗಳಲ್ಲಿ ತಜ್ಞ ವೈದ್ಯರಿದ್ದು, ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಇಲ್ಲಿ ನೀಡಲಾಗುತ್ತಿದೆ ಎಂದರು. ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹೊರತು ಪಡಿಸಿ ಅತೀ ಹೆಚ್ಚು ಹೆರಿಗೆ ನಡೆಸುವ ಆಸ್ಪತ್ರೆ ನಮ್ಮದಾಗಿದೆ. ಇಲ್ಲಿ 2 ಸುಸಜ್ಜಿತ ಆಪರೇಶನ್ ಥಿಯೇಟರ್ ಇದ್ದು, ದಿನ ಒಂದಕ್ಕೆ 10 ರಿಂದ 15 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಕಳೆದ ವರ್ಷ 40 ಲಕ್ಷ ರೂಪಾಯಿ ಮೌಲ್ಯದ ಲ್ಯಾಪರೋಸ್ಕೋಪಿಕ್ ಯಂತ್ರ ಅಳವಡಿಸಿದ್ದು, ಕಳೆದ ಮೇ ತಿಂಗಳಲ್ಲಿ 100 ಕ್ಕೂ ಹೆಚ್ಚು ಲ್ಯಾಪರೋಸ್ಕೋಪಿಕ್ ಸರ್ಜರಿ ನಡೆಸಲಾಗಿದೆ. ಲೇಸರ್ ಶಸ್ತ್ರಚಿಕಿತ್ಸೆ ಲ್ಯಾಪರೋಸ್ಕೋಪಿಕ್ ಸರ್ಜರಿ, ಎಂಡೋಸ್ಕೋಪಿಕ್ ಸರ್ಜರಿ ಸೇವೆ ಇಲ್ಲಿ ಲಭ್ಯವಿದ್ದು, ನ್ಯೂರೋ ಸರ್ಜರಿ ಸೇವೆ, ಎಮರ್ಜೆನ್ಸಿ ಮೆಡಿಸಿನ್, ಇಬ್ಬರು ಸಾಮಾನ್ಯ ಸರ್ಜರಿ, 5 ಮಂದಿ ಆರ್ಥೋಪೆಡಿಕ್ ಸರ್ಜನ್, ಕಣ್ಣಿನ ಶಸ್ತ್ರಚಿಕಿತ್ಸಾ ತಜ್ಞರು, ಕಿವಿ-ಮೂಗು ಗಂಟಲು ಸರ್ಜನ್, ಇಬ್ಬರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರೊಂದಿಗೆ ನಮ್ಮ ಸರ್ಜರಿ ತಂಡ ಬಲಶಾಲಿಯಾಗಿದೆ. ನೋವು ರಹಿತ ಹೆರಿಗೆ, ಕ್ಲಿಷ್ಟಕರವಾದ ಬೆನ್ನುಮೂಳೆ ಶಸ್ತ್ರಚಿಕಿತ್ಸೆ, ಸೊಂಟ ಮತ್ತು ಮೊಣಕಾಲು ಶಸ್ತ್ರಚಿಕಿತೆ, ಬಾಯಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು. ಬೆನ್ನುಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಶತಾನಂದ ಪ್ರಸಾದ್ ರಾವ್ ಮಾತನಾಡಿ ಡಾ. ಹೆಗ್ಗಡೆರ ಸಹಕಾರದಿಂದ ಈ ಆಸ್ಪತ್ರೆಯಲ್ಲಿ ಸರ್ಜರಿ ಮತ್ತು ಡ್ಯೂರಲ್ ರಿಪೇರ್ ಶಸ್ತ್ರಚಿಕಿತ್ಸೆಯನ್ನು ಯಸಸ್ವಿಯಾಗಿ ನಡೆಸಿದ್ದು, ವಿಶ್ವ ಮಟ್ಟದಲ್ಲಿ ನಮ್ಮ ಆಸ್ಪತ್ರೆ ಗುರುತಿಸಲ್ಪಟ್ಟಿದೆ. ಈ ಹಿಂದೆ ಸರ್ಜರಿ ಮಾಡಿಸಲು ಮಂಗಳೂರಿಗೆ ಹೋಗುತ್ತಿದ್ದ ಜನ ಇವತ್ತಿನ ದಿನಗಳಲ್ಲಿ ಇಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿ ಎಂದು ನಮ್ಮ ವೈದ್ಯರಲ್ಲಿ ವಿನಂತಿ ಮಾಡುತ್ತಿದ್ದಾರೆ ಎಂದರು. ಡಾ| ಉಷಾ ಜಿ. ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ, ಡಾ. ಹೆಗ್ಗಡೆರ ಸಂಸ್ಥೆಯಲ್ಲಿ ವೈದ್ಯ ವೃತ್ತಿ ನಡೆಸಲು ಹೆಮ್ಮೆ ಎನಿಸುತ್ತಿದೆ. ನಂಬಿಕೆ, ವಿಶ್ವಾಸಗಳಿಗೆ ಹೆಸರುವಾಸಿಯಾಗಿರುವ ಎಸ್.ಡಿ.ಎಂ ಸಂಸ್ಥೆಯಲ್ಲಿ ದುಡಿಯುವುದೇ ನಮ್ಮ ಸುಯೋಗ ಎಂದರು. ವೈದ್ಯರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣ ಇದೆ. ವ್ಯವಸ್ಥಾಪಕ ನಿರ್ದೇಶಕರಾದ ಎಂ ಜನಾರ್ದನ್ ಅವರ ಸಹಕಾರ ಮತ್ತು ಉತ್ತಮ ಆಡಳಿತ ನಮಗೆಲ್ಲಾ ಹೊಸ ಸ್ಪೂರ್ತಿಯನ್ನು ನೀಡುತ್ತಿದೆ ಎಂದರು. ಧರ್ಮಸ್ಥಳ ಬೀಡಿನ ಕು| ಮಾನ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಡಾ. ಹೆಗ್ಗಡೆಯವರು ಸನ್ಮಾನಿಸಿದರು. ಜಗನ್ನಾಥ ಎಂ ಮತ್ತು ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img