ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನ
Published Date: 22-May-2025 Link-Copied
ಉಜಿರೆ, ಮೇ.21: ಭಯೋತ್ಪಾದನಾ ವಿರೋಧಿ ದಿನಾಚರಣೆಯ ಪ್ರಯುಕ್ತ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಉಗ್ರಗಾಮಿ ಚಟುವಟಿಕೆಗಳ ವಿರುದ್ಧದ ಪ್ರಮಾಣ ವಚನವನ್ನು ಬೋಧಿಸಲಾಯಿತು. ಆಯಾ ತರಗತಿಗಳ ಬೋಧಕರು ಕಾಲೇಜಿನ ಆರಂಭಿಕ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳಿಂದ ಅಹಿಂಸೆ, ಸಹನೆಯೊಂದಿಗೆ ಗುರುತಿಸಿಕೊಳ್ಳುವ ಭಾರತದ ಅಸ್ಮಿತೆಗೆ ಅನುಗುಣವಾಗಿ ದೃಢವಿಶ್ವಾಸದ ಹೆಜ್ಜೆಗಳನ್ನಿರಿಸುವ ಸಂಕಲ್ಪದ ಧ್ವನಿ ಈ ಸಂದರ್ಭದಲ್ಲಿ ವ್ಯಕ್ತವಾಯಿತು. ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ಎದುರಿಸುವ ಪ್ರತಿಜ್ಞೆ ಮೊಳಗಿತು. ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸುವ ಆಕಾಂಕ್ಷೆ ವ್ಯಕ್ತವಾಯಿತು. ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಪಣವನ್ನು ವಿದ್ಯಾರ್ಥಿಗಳು ತೊಟ್ಟರು. ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುವ ನಿರ್ಧಾರಕ್ಕೆ ಅನುಗುಣವಾಗಿ ಈ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪಹಲ್ಗಾಮ್ ಘಟನೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರತವು ಭಯೋತ್ಪಾದನಾ ಕೃತ್ಯಗಳನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸುವ ದೃಷ್ಟಿಯಿಂದ ಯುವಮನಸುಗಳಿಗೆ ಬೋಧಿತವಾದ ಈ ಪ್ರತಿಜ್ಞಾವಿಧಿ ಮಹತ್ವಪೂರ್ಣ ಎನ್ನಿಸಿತು.