ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ
Published Date: 21-May-2025 Link-Copied
ಕಳೆಂಜ : ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಐಡಿಎ ಪುತ್ತೂರು ಘಟಕ, ಕೆವಿಜಿ ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್ ಸುಳ್ಯ, ಜೆಸಿಐ ಕೊಕ್ಕಡ ಕಪಿಲಾ ಮತ್ತು ಇತರೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆತಡ್ಕದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್ ಮತ್ತು ರೋ. ಡಾ. ರಾಘವೇಂದ್ರ ಪಿದಮಲೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೋ. ಸಂದೇಶ್ ಕುಮಾರ್ ರಾವ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸುಸಜ್ಜಿತವಾದ ಆಸ್ಪತ್ರೆಯ ಸವಲತ್ತುಗಳ ಅಗತ್ಯವಿರುತ್ತದೆ. ರೋಟರಿಯಂತಹ ಸಂಘ ಸಂಸ್ಥೆಗಳು ಹಲವರ ಸಹಕಾರದಿಂದ ಆರೋಗ್ಯದ ಸವಲತ್ತುಗಳನ್ನು ಗ್ರಾಮೀಣ ಭಾಗಕ್ಕೆ ತಲುಪಿಸಿದಾಗ ಅತ್ಯಂತ ಉಪಯುಕ್ತವಾಗುತ್ತದೆ. ಜನರ ಆರೋಗ್ಯ ಜಾಗೃತಿಯ ದೃಷ್ಟಿಕೋನದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಸಾಮಾನ್ಯವಾಗಿ ಆಸ್ಪತ್ರೆ ಮತ್ತು ಡಾಕ್ಟರ್ ಗಳ ಬಳಿಗೆ ಅನಾರೋಗ್ಯಗೊಂಡವರು ತೆರಳುತ್ತಾರೆ ಆದರೆ ಶಿಬಿರದಂತ ಕಾರ್ಯಕ್ರಗಳಲ್ಲಿ ವೈದ್ಯರೇ ಗ್ರಾಮೀಣ ಪ್ರದೇಶದ ಜನರ ಬಳಿಗೆ ಬಂದಿರುವುದು ನಿಜಕ್ಕೂ ಫಲಕಾರಿ. ಇದನ್ನು ಚಿಕಿತ್ಸೆಯ ಅವಶ್ಯಕ ಇರುವವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೋ. ಡಾ. ರಾಘವೇಂದ್ರ ಪಿದಮಲೆ ಅಭಿಪ್ರಾಯ ಪಟ್ಟರು. ಶಿಬಿರದಲ್ಲಿ ಕೆವಿಜಿ ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್ ನ ವೈದ್ಯರು ಸೇರಿದಂತೆ ನುರಿತ ತಜ್ಞರಿಂದ ಉಚಿತ ತಪಾಸಣೆ ಹಾಗು ಅಗತ್ಯವಿದ್ದವರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ 60 ಕ್ಕೂ ಹೆಚ್ಚು ಜನರು ದಂತ ಭರ್ತಿ, ದಂತ ಶುಚಿಗೊಳಿಸುವಿಕೆ, ಹಲ್ಲು ಹೊರತೆಗೆಯುವಿಕೆ, ಕೃತಕ ಹಲ್ಲುಗಳ ಜೋಡಣೆಯಂತಹ ವಿವಿಧ ದಂತ ಚಿಕಿತ್ಸೆಗಳನ್ನು ಪಡೆದರು. ಈ ಸಂದರ್ಭದಲ್ಲಿ ಆನ್. ಡಾ. ದೀಪಾಲಿ ಡೊಂಗ್ರೆ, ರೋ. ಉದಯ ಶಂಕರ್ ಸೇರಿದಂತೆ ಗ್ರಾಮಸ್ಥರು, ಜೆಸಿಐ ಕೊಕ್ಕಡ ಕಪಿಲಾ ಸದಸ್ಯರು ಹಾಗೂ ಶಾಲೆಯ ಆಡಳಿತ ಮಂಡಳಿ ಭಾಗಿಯಾಗಿದ್ದರು. ಶಿಬಿರವನ್ನು ಜೆಸಿಐ ಕೊಕ್ಕಡ ಕಪಿಲಾ ಅಧ್ಯಕ್ಷೆ ಶೋಭಾ ಪಿ ನಿರೂಪಿಸಿ, ವಂದಿಸಿದರು. ಜನರ ಸೇವೆ ಮಾಡುವಂತಹ ಅವಕಾಶವನ್ನು ಮತ್ತು ಜವಾಬ್ದಾರಿಯನ್ನು ಬೆಳ್ತಂಗಡಿ ರೋಟರಿ ಸಂಸ್ಥೆ ನಮಗೆ ನೀಡಿದೆ. ಗ್ರಾಮೀಣ ಜನರ ಆರೋಗ್ಯ ಜಾಗೃತಿಯ ಉದ್ದೇಶದಿಂದ ಹಲವರ ಸಹಕಾರದೊಂದಿಗೆ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು, ಇದರಿಂದ ಎಲ್ಲ ವರ್ಗದ ಜನರು ಉಪಯೋಗ ಪಡೆದುಕೊಂಡಿದ್ದಾರೆ. - ಸಂದೇಶ್ ಕುಮಾರ್ ರಾವ್ ಕಾರ್ಯದರ್ಶಿ ಬೆಳ್ತಂಗಡಿ ರೋಟರಿ ಕ್ಲಬ್