ವಿಶೇಷ ಉಪನ್ಯಾಸ ಕಾರ್ಯಕ್ರಮ
Published Date: 24-Feb-2025 Link-Copied
ಉಜಿರೆ, ಫೆ. 24: ಪರಿಸರ ಸಂಬಂಧಿತ ಮಾಹಿತಿ ಕಲೆಹಾಕುವ ಸಂಯಮ ಮತ್ತು ಸಂಗ್ರಹಿತ ವಿವರಗಳನ್ನು ವಿವೇಚಿಸಿ ಅಭಿವ್ಯಕ್ತಿಸುವ ಪ್ರಯತ್ನಗಳ ಮೂಲಕ ಪರಿಸರ ಪರವಾದ ಕಾಳಜಿಯನ್ನು ಮೂಡಿಸಬಹುದು ಎಂದು ಪರಿಸರ ಚಿಂತಕ, ಲೇಖಕ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ಅವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪರಿಸರ ಕೇಂದ್ರಿತ ಚಿಂತನೆ ಮತ್ತು ಅಭಿವ್ಯಕ್ತಿ’ ಕುರಿತು ಮಾತನಾಡಿದರು. ಗಮನಿಸುವಿಕೆ, ದಾಖಲಿಸಿಕೊಳ್ಳುವಿಕೆ, ಪ್ರಶ್ನಿಸುವಿಕೆ, ಪರಿಚಯಿಸುವಿಕೆ ಆಧಾರಿತ ಬರವಣಿಗೆಯ ಅಭಿವ್ಯಕ್ತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪತ್ರಕರ್ತರಾಗಬಯಸುವವರಿಗೆ ಹೊಸದನ್ನು ಹುಡುಕುವ ಚಿಕಿತ್ಸಕ ಕಣ್ಣು ಇರಬೇಕು. ಸಮಗ್ರ ಜ್ಞಾನದೊಂದಿಗೆ ಇದ್ದರೆ ಮಹತ್ವದ್ದನ್ನು ದಾಟಿಸುವ ಸಂವಹನಕಾರರಾಗಬಹುದು ಎಂದರು. ಯಾರೂ ಗಮನಿಸದೇ ಇರುವ ಸಂಗತಿಯನ್ನು ಬರೆದರೆ ಜನ ಓದುತ್ತಾರೆ. ಪರಿಸರದಲ್ಲಿ ತಿಳಿದುಕೊಳ್ಳಬೇಕಾದ ಅನೇಕ ಕೌತುಕದ ಅಂಶಗಳು ಅಡಗಿವೆ. ಅವುಗಳನ್ನು ತಿಳಿದುಕೊಂಡು ಜನರಿಗೆ ದಾಟಿಸುವ ಕಾಳಜಿ ತೋರಬೇಕು. ಆ ಮೂಲಕ ಪರಿಸರದ ಪರವಾದ ಸಂವಹನದ ವಿನೂತನ ಮಾದರಿಗಳನ್ನು ಸೃಷ್ಟಿಸಬಹುದು ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.