Article Image

ಅಧ್ಯಕ್ಷರಾಗಿ ಡಾ. ಪ್ರಸನ್ನಕುಮಾರ ಐತಾಳ್ ಆಯ್ಕೆ

Article Image

ಅಧ್ಯಕ್ಷರಾಗಿ ಡಾ. ಪ್ರಸನ್ನಕುಮಾರ ಐತಾಳ್ ಆಯ್ಕೆ

ಮೂಡುಬಿದ್ರೆಯ ಎಕ್ಸೆಲೆಂಟ್ ಪ.ಪೂ ಕಾಲೇಜಿನಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ ಹಾಗೂ ವಾರ್ಷಿಕ ಸಭೆಯಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಂಗಳೂರು ಶ್ರೀ ಶಾರದಾ ಪ.ಪೂ ಕಾಲೇಜಿನ ಉಪನ್ಯಾಸಕ ರಮೇಶ್ ಆಚಾರ್ಯ, ಉಪಾಧ್ಯಕ್ಷರಾಗಿ ಮಂಗಳೂರು ಎಕ್ಸಪರ್ಟ್ ಪ.ಪೂ ಕಾಲೇಜಿನ ಶ್ರೀನಿವಾಸ ಮಧ್ಯಸ್ಥ, ಮೂಡುಬಿದ್ರೆ ಆಳ್ವಾಸ್ ಪ.ಪೂ ಕಾಲೇಜಿನ ಅಂಬರೀಷ ಚಿಪ್ಲೂಣಕರ, ಸುರತ್ಕಲ್ ಗೋವಿಂದದಾಸ ಪ.ಪೂ ಕಾಲೇಜಿನ ಪೈಕ ವೆಂಕಟರಮಣ ಭಟ್ ಇವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಗಳೂರು ಸೈಂಟ್ ಅಲೋಶಿಯಸ್ ಪ.ಪೂ ಕಾಲೇಜಿನ ಡಾ. ಸುರೇಖಾ ತಂತ್ರಿ, ಜೊತೆ ಕಾರ್ಯದರ್ಶಿಗಳಾಗಿ ಮಂಗಳೂರು ಮ್ಯಾಪ್ಸ್ ಪ.ಪೂ ಕಾಲೇಜಿನ ಶೈಲಜಾ ಹೆಚ್. ಎಸ್., ಮೂಡುಬಿದ್ರೆ ಆಳ್ವಾಸ್ ಪ.ಪೂ ಕಾಲೇಜಿನ ಅನಂತ ಭಟ್, ಕಲ್ಲಡ್ಕದ ಶ್ರೀರಾಮ ಪ.ಪೂ ಕಾಲೇಜಿನ ಮಹೇಂದ್ರ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಮೂಡುಬಿದ್ರೆಯ ಎಕ್ಸಲೆಂಟ್ ಪ.ಪೂ ಕಾಲೇಜಿನ ತೇಜಸ್ವಿ ಭಟ್ ಇವರು ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಮಂಗಳೂರಿನ ಡಾ. ಎನ್.ಎಸ್.ಎ.ಎಂ ಪ.ಪೂ ಕಾಲೇಜಿನ ರವಿಶಂಕರ ಹೆಗಡೆ, ರಾಜ್ಯಮಟ್ಟದ ಸಂಘಕ್ಕೆ ಜಿಲ್ಲಾ ಸಂವಹನ ಪ್ರತಿನಿಧಿಯಾಗಿ ಪುತ್ತೂರಿನ ಸರಕಾರಿ ಪ.ಪೂ ಕಾಲೇಜಿನ ಪ್ರಕಾಶ್ ವಿ.ಕೆ. ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿಯ ಸದಸ್ಯರಾಗಿ ಮಂಗಳೂರು ಬೆಸೆಂಟ್ ಪ.ಪೂ ಕಾಲೇಜಿನ ಅಜಿತಾ, ಮಂಗಳೂರು ಕೆನರಾ ಪ.ಪೂ ಕಾಲೇಜಿನ ಡಾ. ಮಧುಕೇಶ್ವರ ಶಾಸ್ತ್ರಿ, ಮೂಡಬಿದ್ರೆ ಜೈನ್ ಪ.ಪೂ ಕಾಲೇಜಿನ ರಾಮಚಂದ್ರ ಭಟ್, ಅಳಿಕೆ ಸತ್ಯಸಾಯಿ ಲೋಕಸೇವಾ ಪ.ಪೂ ಕಾಲೇಜಿನ ವೆಂಕಟಕೃಷ್ಣ ಶರ್ಮಾ ಇವರು ಆಯ್ಕೆಯಾಗಿದ್ದಾರೆ.

ಸುಲೋಚನಾ ಭಟ್ ನಿಧನ

Article Image

ಸುಲೋಚನಾ ಭಟ್ ನಿಧನ

ಪುತ್ತೂರು, ಆ. 28: ಸ್ವರ್ಣೋದ್ಯಮಿ ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಭಟ್ (71) ಅವರು ಅಲ್ಪಕಾಲದ ಅಸೌಖ್ಯದಿಂದ ಆ. 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ ಮುಳಿಯ ಶ್ಯಾಮ್ ಭಟ್, ಪುತ್ರರಾದ ಮುಳಿಯ ಜುವೆಲ್ಸನ ಸಿಎಂಡಿ ಕೇಶವ ಪ್ರಸಾದ್, ಎಂಡಿ ಕೃಷ್ಣ ನಾರಾಯಣ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಉದ್ಯಮಿಯಾಗಿದ್ದ ಸುಲೋಚನಾ ಅವರು ಲಯನೆಸ್ ಮತ್ತು ರೋಟರಿ ಇನ್ನರ್‌ವೀಲ್ ಕ್ಲಬ್ ಮೂಲಕ ಸಮಾಜಸೇವಕಿಯಾಗಿ ಗುರುತಿಸಿಕೊಂಡಿದ್ದರು. ಮುಳಿಯ ಜುವೆಲ್ಲರ್ಸ್‌ನ ಎಲ್ಲಾ ಶಾಖೆಗಳು ಇಂದು (29 ಆಗಸ್ಟ್ ಶುಕ್ರವಾರ) ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಹಕರು ಗಮನಿಸಬೇಕಾಗಿ ವಿನಂತಿ.

ಧರ್ಮಸ್ಥಳದಲ್ಲಿ ಜ್ಞಾನಪಥ ಮತ್ತು ಜ್ಞಾನರಥ ಕೃತಿಗಳ ಲೋಕಾರ್ಪಣೆ

Article Image

ಧರ್ಮಸ್ಥಳದಲ್ಲಿ ಜ್ಞಾನಪಥ ಮತ್ತು ಜ್ಞಾನರಥ ಕೃತಿಗಳ ಲೋಕಾರ್ಪಣೆ

ಉಜಿರೆ: ನೈತಿಕಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯವಾಗಿದ್ದು ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಕಟಿಸಿದ “ಜ್ಞಾನಪಥ” ಮತ್ತು “ಜ್ಞಾನರಥ” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜ್ಞಾನದೀವಿಗೆಯಾದ ಪುಸ್ತಕಗಳು ಉತ್ತಮ ಹಾಗೂ ಉಪಯುಕ್ತ ಜೀವನ ಸಂಗಾತಿಯಾಗಿದ್ದು, ನೈತಿಕ ಪುಸ್ತಕಗಳಲ್ಲಿರುವ ಲೇಖನಗಳು ಸಾರ್ಥಕ ಬದುಕಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ ಎಂದು ಅವರು ಶ್ಲಾಘಿಸಿ ಅಭಿನಂದಿಸಿದರು. ಶ್ರೀ ಮಂಜುನಾಥ ಚಲನಚಿತ್ರ: ತಾನು ಬಾಲ್ಯದಿಂದಲೂ ಧರ್ಮಸ್ಥಳದ ಪರಮ ಭಕ್ತನಾಗಿದ್ದು ಕೆಲವು ವರ್ಷಗಳ ಹಿಂದೆ ಸುಮಾರು ಮೂರು ತಿಂಗಳು ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಾಸ್ತವ್ಯ ಇದ್ದು, “ಶ್ರೀ ಮಂಜುನಾಥ” ಚಲನಚಿತ್ರ ನಿರ್ಮಾಣ ಮಾಡಿರುವ ಸವಿನೆನಪನ್ನು ಸ್ಮರಿಸಿದರು. ಧರ್ಮಸ್ಥಳಕ್ಕೆ ಬಂದು ಪ್ರಥಮವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು “ಶ್ರೀ ಮಂಜುನಾಥ” ಚಲನಚಿತ್ರ ತಯಾರಿಸುವ ಬಗ್ಗೆ ಅನುಮತಿ ಕೋರಿದಾಗ ಬಹಳ ನಿರೀಕ್ಷೆಯಲ್ಲಿದ್ದ ಅವರಿಗೆ ಆಶ್ಚರ್ಯವಾಯಿತು. ಹೆಗ್ಗಡೆಯವರು ತಕ್ಷಣ ಮಂಜುನಾಥ ದೇವರನ್ನು ವ್ಯಾಪಾರೀಕರಣ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಆದರೂ ದೇವರನ್ನು ಪ್ರಾರ್ಥಿಸಿ ತನ್ನ ದೃಢಸಂಕಲ್ಪ ನೆರವೇರಿಸಲು ಪ್ರಯತ್ನಿಸಿದರು. ಚಲನಚಿತ್ರ ನಿರ್ಮಾಣಕ್ಕೆ ಭಗೀರಥ ಪ್ರಯತ್ನ ಮಾಡಿದರು. ವಿಶೇಷವಾಗಿ ಜೈನಧರ್ಮದ ಬಗ್ಗೆ ವಿಶೇಷ ಗೌರವ, ಆದರ ಹೊಂದಿದ ಅವರು ಆಳವಾದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದರು. ಕನ್ನಡದ ಆದಿಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಏಳು ಕೋಟಿ ರೂ. ವೆಚ್ಛದಲ್ಲಿ ತಯಾರಾದ ಚಲನಚಿತ್ರದಲ್ಲಿ ತಾನು ನಷ್ಟ ಅನುಭವಿಸಬೇಕಾಯಿತು ಎಂದು ಸಿಹಿ-ಕಹಿ ಅನುಭವವನ್ನು ನೆನಪಿಸಿಕೊಂಡರು. ಶುಭಾಶಂಸನೆ ಮಾಡಿದ ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ ಎಚ್.ಡಿ.) ಮನೆಯ ವಾತಾವರಣದಿಂದಲೇ ಉತ್ತಮ ಸಂಸ್ಕಾರ ಮೂಡಿ ಬರಬೇಕು. ಜೀವ ದೊಡ್ಡದಲ್ಲ, ಜೀವನ ದೊಡ್ಡದು. ಮೊದಲು ನಾವು ಯಾರು ಎಂಬುದನ್ನು ಅರಿತುಕೊಂಡು, ನವಚೈತನ್ಯವನ್ನು ಹೊಂದಬೇಕು. ಸಜ್ಜನರ ಸತ್ಸಂಗ ಹಾಗೂ ಉತ್ತಮ ಪುಸ್ತಕಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಸಂಸ್ಕಾರ ಮೂಡಿಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಜನಾಂಗವಾಗಿದ್ದು ಅವರ ಉಜ್ವಲ ಭವಿಷ್ಯ ರೂಪಿಸಲಿಕ್ಕಾಗಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ವಾಮಿ ವಿವೇಕಾನಂದರಂತೆ ಓದಿದ ಪುಸ್ತಕದ ಅನುಭವವನ್ನು ಬದುಕಿನಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ಸಮಾಜದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಲಾಯಿತು. ಶಾರದಾಮಣಿಶೇಖರ್ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಸುಶ್ರಾವ್ಯ ಗಾಯನ ಮತ್ತು ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಧನ್ಯವಾದವಿತ್ತರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

ಸಂಸ್ಕೃತಿ ಪರಂಪರೆಯ ಬೇರು ಸಂಸ್ಕೃತ - ಯುವರಾಜ ಜೈನ್

Article Image

ಸಂಸ್ಕೃತಿ ಪರಂಪರೆಯ ಬೇರು ಸಂಸ್ಕೃತ - ಯುವರಾಜ ಜೈನ್

ನಮ್ಮ ಭಾರತೀಯ ಸಂಸ್ಕೃತಿಯ ಗಾಢವಾದ ಬೇರು ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ನಾಡಿನ ಸಂಸ್ಕೃತಿ, ತತ್ತ್ವ, ಧರ್ಮ, ಸಾಹಿತ್ಯ, ಕಲೆ ಮತ್ತು ಜ್ಞಾನದ ನಿರಂತರ ಪ್ರಕಾಶ. ಇಂದು ನಾವು ಕಾಣುತ್ತಿರುವ ಜೀವನಮೌಲ್ಯಗಳು, ಶಿಷ್ಟಾಚಾರಗಳು, ಶ್ರೀಮಂತ ಕಲೆಗಳು, ಜ್ಞಾನದ ಹರವುಗಳೆಲ್ಲ ಸಂಸ್ಕೃತ ಸಾಹಿತ್ಯದಲ್ಲಿ ನೆಲೆ ನಿಂತಿವೆ. ಸಂಸ್ಕೃತ ಅಧ್ಯಯನ ಮಾಡಿದರೆ ನಾವೇ ನಮ್ಮ ಮೂಲಗಳಿಗೆ ಹತ್ತಿರವಾಗುತ್ತೇವೆ, ಜಗತ್ತಿನೊಂದಿಗೆ ನಿಂತು ಮಾತನಾಡುವ ಶಕ್ತಿಯನ್ನು ಪಡೆಯುತ್ತೇವೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಸಂಸ್ಕೃತ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ  ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು  ಉದ್ಘಾಟಿಸಿ ಮಾತನಾಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ವಾಂಸರು ಮಂಗಳೂರಿನ ವಾಸುದೇವ ಕಾರಂತರು ಮಾತನಾಡುತ್ತ ಗುರು ಎಂದರೆ ಕೇವಲ ಪಾಠ ಹೇಳುವವನು ಮಾತ್ರವಲ್ಲ. ಆತನು ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಜ್ಞಾನವು ಕೇವಲ ಪುಸ್ತಕಗಳಲ್ಲಿ ಸೀಮಿತವಾಗದೆ, ಜೀವನದ ವಿವಿಧ ಕ್ಷೇತ್ರಗಳಲ್ಲಿ ಆಳವಾಗಿ ಅರ್ಥೈಸಿದಾಗ ಮಾತ್ರ ಅದು ಶಿಷ್ಯನಿಗೆ ಮಾರ್ಗದರ್ಶಕವಾಗುತ್ತದೆ. ನಿಜವಾದ ಗುರುವು ಸದಾ ಶಿಷ್ಯನ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಾನೆ. ವಿದ್ಯಾರ್ಥಿಯ ಮನಸ್ಸು ಅನೇಕ ವಿಚಾರಗಳಲ್ಲಿ ಅಲೆದಾಡುವುದು ಸಹಜ. ಇಂತಹ ಸಂದರ್ಭದಲ್ಲಿ ಶಿಷ್ಯನ ವಿಕ್ಷಿಪ್ತ ಮನಸ್ಸನ್ನು ನಿರ್ದಿಷ್ಟ ವಿಷಯದಲ್ಲಿ ನೆಲೆಗೊಳಿಸಿ, ಅಧ್ಯಯನದಲ್ಲಿ ಏಕಾಗ್ರತೆಯನ್ನು ಹುಟ್ಟಿಸುವುದು ಗುರುವಿನ ದೊಡ್ಡ ಹೊಣೆಗಾರಿಕೆ. ಇಂತಹ ಕಾರ್ಯವನ್ನು ನೆರವೇರಿಸಲು ಗುರುವು ಶಾಂತಿ, ಸಹನೆ ಮತ್ತು ತಾಳ್ಮೆಯನ್ನು ಹೊಂದಿರಬೇಕು ಎಂದು ಹಿತವಚನ ನುಡಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಅಂಕ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಡಾ. ಪ್ರಸನ್ನ ಕುಮಾರ್ ಐತಾಳ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ತೇಜಸ್ವೀ ಭಟ್ ನಿರೂಪಿಸಿ ಸಂಘದ ಕಾರ್ಯದರ್ಶೀ ಡಾ. ಮಧುಕೇಶ್ವರ ಶಾಸ್ತ್ರೀ ವಂದಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 79ನೇ ಸ್ವಾತಂತ್ರ‍್ಯ ದಿನಾಚರಣೆ

Article Image

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 79ನೇ ಸ್ವಾತಂತ್ರ‍್ಯ ದಿನಾಚರಣೆ

ಮೂಡುಬಿದಿರೆ: ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ನಿವೃತ್ತ ಅಧಿಕಾರಿ ಲೆ. ಜನರಲ್ ಅರುಣ್ ಅನಂತನಾರಾಯಣ್ ಹೇಳಿದರು. ವಿದ್ಯಾಗಿರಿಯ ಕೆ. ವಿ. ಸುಬ್ಬಣ್ಣ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವತಿಯಿಂದ ನಡೆದ 79ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಸ್ವಾತಂತ್ರ‍್ಯವೆಂದರೆ ಏನನ್ನಾದರೂ ಸಾಧಿಸುವ ಅವಕಾಶ ಎಂದು ಭಾಸವಾಗಬಹುದು, ಆದರೆ ನಮ್ಮ ಹಿರಿಯರು ಸರಿಯಾದ ಶಿಕ್ಷಣ ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕಿದ್ದರು. ನಿಜವಾದ ಸ್ವಾತಂತ್ರ‍್ಯ ಎಂದರೆ ಅಭಿವೃದ್ಧಿ ಪ್ರತಿಯೊಬ್ಬರಿಗೂ ತಲುಪಿದಾಗ ಹಾಗೂ ಪ್ರತಿಯೊಬ್ಬರೂ ಈ ಅಗತ್ಯ ಸೌಲಭ್ಯಗಳನ್ನು ಪಡೆದಾಗ ಸಾಧ್ಯವಾಗುವುದು. ಸ್ವಾತಂತ್ರ‍್ಯ ಹೋರಾಟದಲ್ಲಿ ಹಿರಿಯರು ನೀಡಿದ ತ್ಯಾಗಗಳಿಗೆ ಗೌರವ ಸಲ್ಲಿಸಿದ ಅವರು, “ಆಧುನಿಕ ಭಾರತವನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಮಿಸಲು ಸಾಧ್ಯವಿಲ್ಲ,ಅದಕ್ಕೆ ಸಮೂಹ ಶ್ರಮ ಅಗತ್ಯ. ಶಿಕ್ಷಕರು ಕೇವಲ ವೃತ್ತಿಯಲ್ಲಿಲ್ಲ, ಸೇವೆಯಲ್ಲಿ ಇದ್ದು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತವನ್ನು ಕಟ್ಟುವವರಾಗಿದ್ದಾರೆ ಎಂದರು. ಇಂತಹ ಮೌಲ್ಯಯುತ ಶಿಕ್ಷಣ ಪಡೆದ ವಿಧ್ಯಾರ್ಥಿ ಸಮೂಹದಿಂದ ನವ ಭಾರತದ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ ಆಳ್ವ ಡಾ. ಗ್ರೀಷ್ಮಾ, ಡಾ.ಹನಾ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜ ಹಾಗೂ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್: 222 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

Article Image

ಬೆಳ್ತಂಗಡಿ ರೋಟರಿ ಕ್ಲಬ್: 222 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ತಮಗೆ ದೊರಕುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ಉತ್ತಮ ಸಂಸ್ಕಾರ ಹಾಗೂ ಗುರು-ಹಿರಿಯರಿಗೆ ಗೌರವ, ವಿನಯ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೇನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿ.ಜಿ.ಎಂ. ಪ್ರಶಾಂತ್ ಜೋಶಿ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ರೋಟರಿ ಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಕೇನ್‌ಫಿನ್ ಹೋಮ್ಸ್ ಸಹಯೋಗದಲ್ಲಿ 222 ವಿದ್ಯಾರ್ಥಿಗಳಿಗೆ ಇಪ್ಪತ್ತು ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ವಿದ್ಯಾರ್ಥಿವೇತನದ ಸದುಪಯೋಗ ಪಡೆದು ದೃಢಸಂಕಲ್ಪ ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಿ ವಿದ್ಯಾರ್ಥಿಗಳು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪುಗೊಳ್ಳಬೇಕು. ಮುಂದೆ ತಾವು ಸ್ವಾವಲಂಬಿ ಜೀವನ ನಡೆಸುವಾಗ, ತಾವು ಪಡೆದ ವಿದ್ಯಾರ್ಥಿವೇತನಕ್ಕಿಂತಲೂ ಹೆಚ್ಚಿನ ನೆರವನ್ನು ಇತರರಿಗೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ, ಶುಭಾಶಂಸನೆ ಮಾಡಿ, ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಸದುಪಯೋಗ ಮಾಡಬೇಕು. ಸದಾ ನಗುಮೊಗದಿಒಂದ ಸಂಕಷ್ಟದಲ್ಲಿರುವವರಿಗೆ ಸಕಾಲಿಕ ನೆರವುನೀಡಿ ಅವರು ಸುಖ-ಶಾಂತಿ, ಸಂತೋಷದಿಂದ ಜೀವನ ಮಾಡುವಂತೆ ಸಹಕರಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. ಬೆಂಗಳೂರು ಇಂದಿರಾನಗರ ರೋಟರಿಕ್ಲಬ್‌ನ ಮಾಜಿ ಅಧ್ಯಕ್ಷರಾದ ಸುಪ್ರಿಯಾ ಖಾಂದಾರಿ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಜವಾಬ್ದಾರಿಯುತ ಆದರ್ಶ ನಾಯಕರಾಗಿ ಸಮಾಜ ಸೇವೆ ಮತ್ತು ದೇಶಸೇವೆ ಮಾಡಬೇಕು ಎಂದು ಹೇಳಿದರು. ಕೇನ್‌ಫಿನ್ ಹೋಮ್ಸ್‌ನ ಉಪಪ್ರಬಂಧಕಿ ಚಿತ್ರಾಂಗದ ಸಾರಂಗಿ, ಸುರೇಶ್ ಸಾಲಿಯಾನ್, ಡಾ. ಎ. ಜಯಕುಮಾರ್ ಶೆಟ್ಟಿ, ರೋಟರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಕಾಂತ್ ಕಾಮತ್ ವಿದ್ಯಾರ್ಥಿವೇತನ ಸಮಿತಿ ಅಧ್ಯಕ್ಷ ಅಬೂಬಕ್ಕರ್, ಗೀತಾಪ್ರಭು ಉಪಸ್ಥಿತರಿದ್ದರು. ಮಂಗಳೂರಿನ ಸರ್ವಜ್ಞ ಐ.ಎ.ಎಸ್. ಅಕಾಡೆಮಿಯ ಸುರೇಶ್, ಎಂ.ಎಸ್. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಉಜಿರೆಯ ಡಾ. ದಯಾಕರ್, ಎಂ.ಎಂ. ಧನ್ಯವಾದವಿತ್ತರು. ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

Article Image

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

ಬೆಳ್ತಂಗಡಿ: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಬೆಳ್ತಂಗಡಿ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ಆ.9ರಂದು ಡೈಮಂಡ್ ಫೆಸ್ಟ್ ಗೆ ಚಾಲನೆ ನೀಡಲಾಯಿತು. ಬೆಳ್ತಂಗಡಿ ಮಹಿಳಾ ಉದ್ಯಮಿ ಪ್ರೀತಿ ರತೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಳಿಯ ಸಂಸ್ಥೆಯಲ್ಲಿ ಹೊಸ ಹೊಸ ವಿನ್ಯಾಸದ ಆಭರಣಗಳ ಸಂಗ್ರಹಗಳಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಮುಳಿಯದ ಎಲ್ಲಾ ಕುಶಲಕರ್ಮಿಗಳಿಗೆ ಹಾಟ್ಸ್ ಆಫ್ ಹೇಳಲೇಬೇಕು. ಯಾಕೆಂದರೆ ಪ್ರತಿ ಬಾರಿಯೂ ಬಂದಾಗ ಡಿಸೈನ್ ಗಳು ಬದಲಾವಣೆಗಳು ಆಗುತ್ತಿದ್ದು ಒಂದಕ್ಕೊಂದು ಆಕರ್ಷಣೆಯಾಗಿರುತ್ತದೆ. ಈ ಶ್ರಾವಣ ಮಾಸದ ಶನಿವಾರದಂದು ಪ್ರಾರಂಭ ಮಾಡಿರುವ ಡೈಮಂಡ್ ಫೆಸ್ಟ್ ಮಾರುಕಟ್ಟೆಯಲ್ಲಿ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಇಂದಬೆಟ್ಟು ಗ್ರಾಮ ಆಡಳಿತ ಅಧಿಕಾರಿ ಅಂಕಿತ್ ಜೈನ್ ಮಾತನಾಡಿ, ಮುಳಿಯ ಸಂಸ್ಥೆ ಹಲವಾರು ವರ್ಷಗಳಿಂದ ತನ್ನ ಗ್ರಾಹಕರನ್ನು ಸೆಳೆಯುತ್ತಲೇ ಬಂದಿರುತ್ತದೆ. ನಾನು ಕಳೆದ ಎರಡು ವರ್ಷದಿಂದ ಮುಳಿಯ ಸಂಸ್ಥೆಯ ಗ್ರಾಹಕನಾಗಿದ್ದು, ನಮ್ಮ ನಿರೀಕ್ಷೆಯ ಡಿಸೈನ್ ಗಳು ಇಲ್ಲಿ ದೊರೆಯುತ್ತಿದೆ. ಎಲ್ಲಾ ಸಿಬ್ಬಂದಿಗಳು ವಿನಮ್ರವಾಗಿದ್ದು ಮತ್ತೆ ಮತ್ತೆ ಬರಬೇಕು ಎಂದು ಭಾಸವಾಗುತ್ತದೆ. ಯಾವುದೇ ಹಬ್ಬಗಳ ಸಂಭ್ರಮದಂದು ನಮಗೆ ಮುಳಿಯ ನೆನಪಾಗುತ್ತಿದ್ದು ಡೈಮಂಡ್ ಫೆಸ್ಟ್ ಯಶಸ್ಸಾಗಲಿ ಎಂದು ಶುಭ ಹಾರೈಸಿದರು. ಹಲವು ವಿನ್ಯಾಸದ ವಜ್ರದ ಸಂಗ್ರಹಣೆ: 81 ವರ್ಷಗಳ ಇತಿಹಾಸವಿರುವಂತಹ ಮುಳಿಯ ಸಂಸ್ಥೆ ಸುಂದರ ಅರಮನೆಯ ಕಿರೀಟಕ್ಕೆ ಇಂದು ಮತ್ತೊಂದು ಸಾಧನೆಯ ಗರಿಯ ಜೋಡಿಸುವ ಸಂಭ್ರಮ. ವಜ್ರಗಳ ವಿವಿಧ ವಿನ್ಯಾಸಗಳನ್ನು ಸಂಭ್ರಮಿಸುವ ದಿನ. ಸುಮಾರು 4000 ಸಾವಿರದಿಂದ ಪ್ರಾರಂಭವಾಗುವಂತಹ ವಜ್ರದ ಬೆಲೆಯು ಹಲವು ವಿನ್ಯಾಸ ಮತ್ತು ವೈವಿಧ್ಯತೆಯನ್ನೊಳಗೊಂಡು 1 ಲಕ್ಷದವರೆಗೂ ಮುಂದುವರೆಯುತ್ತದೆ. ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ವಜ್ರದ ಗುಣಮಟ್ಟವನ್ನು ಗ್ರಾಹಕರಿಕೆ ತಿಳಿಸುವಂತಹ ಯಂತ್ರವೂ ಕೂಡ ಮುಳಿಯದಲ್ಲಿದೆ. ಹಲವು ವಿನ್ಯಾಸದ ವಜ್ರದ ಸಂಗ್ರಹಣೆಯ ಹಬ್ಬ ಇಂದಿನಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಗ್ರಾಹಕರು, ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕರು ಲೋಹಿತ್ ಸ್ವಾಗತಿಸಿದರು. ಸಿಬ್ಬಂದಿ ಅಕ್ಷಯ್ ಪ್ರಾರ್ಥಿಸಿ ವಂದಿಸಿದರು. ಸೋನಾಕ್ಷಿ ನಿರೂಪಿಸಿದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನಾಚರಣೆ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನಾಚರಣೆ

ಎಸ್.ಡಿ.ಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಸಡು ಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಬಾಯಿಯ ನೈರ್ಮಲ್ಯ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ಲೇಖಾ ಮತ್ತು ಡಾ. ಆನಂದ್ ತಾವರಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಡಾ. ಸ್ವಾತಿ ಸೆಟ್ಟಿ,ಡಾ ಲೀನಾ ಹಾಗೂ ಇತರ ಶಿಕ್ಷಕ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಿಂಗಳಾದ್ಯಂತ ಹಮ್ಮಿಕೊಂಡಿದ್ದ ಹಲವರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು . ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಪ್ರಭಾವಶೀಲವಾದ ಬಾಯಿಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಾಟಕ ವಿಶೇಷ ಗಮನ ಸೆಳೆಯಿತು. ಆರೋಗ್ಯ ಕಾರ್ಯ ಚಟುವಟಿಕೆಯ ಭಾಗವಾಗಿ ರೋಗಿಗಳಿಗೆ ಓರಲ್ ಹೈಜಿನ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ

Article Image

ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯು ಭಾರತೀಯ ಮಕ್ಕಳ ಶಸ್ತ್ರಚಿಕಿತ್ಸೆ ಸಂಘ, ಕರ್ನಾಟಕ ರಾಜ್ಯ ಅಧ್ಯಾಯದ ಆಶ್ರಯದಲ್ಲಿ ಮಕ್ಕಳ ಶಸ್ತ್ರಚಿಕಿತ್ಸಕರ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಮಕ್ಕಳ ಶಸ್ತ್ರಚಿಕಿತ್ಸಕರು ಭಾಗವಹಿಸಲಿದ್ದಾರೆ. ಸಮ್ಮೇಳನವು ಆಗಸ್ಟ್ 8 ರಿಂದ 10, 2025 ರವರೆಗೆ ನಡೆಯಲಿದೆ. ಆಗಸ್ಟ್ 8 ರಂದು, ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ (Kidney Stone) ಸಂಬಂಧಿಸಿದ ಕಾರ್ಯಾಗಾರವನ್ನು ನಡೆಸಲಾಗುವುದು. ಆಗಸ್ಟ್ 9 ಮತ್ತು 10, 2025 ರಂದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೈದ್ಯರಿಂದ ಅನೇಕ ಭಾಷಣಗಳು ನಡೆಯಲಿವೆ. ಈ ಸಮ್ಮೇಳನವು ಮಕ್ಕಳ ಶಸ್ತ್ರಚಿಕಿತ್ಸಕರಿಗೆ ತನ್ನ ರೋಗಿಗಳಿಗೆ ಚಿಕಿತ್ಸೆ ನೀಡಲು, ಹೆಚ್ಚು ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷರು, ಡಾ| ಅನಿಲ್ ಹಲಗೇರಿ ಬಿ, ಡಾ| ವಿಜಯ್ ಪೂಜಾರ್ ಸಿ ಮತ್ತು ಡಾ| ರಾಜಶಂಕರ್ ಸಂಕಲ್. ಕಾರ್ಯದರ್ಶಿಗಳಾಗಿರುವ, ಡಾ| ಅಕ್ಷಯ್ ಕಲವಂತ್ ಬಿ, ಡಾ| ರವೀಂದ್ರ ಜಿ ಖಾಸ್ನಿಸ್ ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

Article Image

ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ - ಪ್ರೇರಣಾ ದಿವಸ್ 2025

ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಜೊತೆಯಲ್ಲಿ ಜೀವನದ ದಾರಿಯನ್ನು ತೋರಿಸುತ್ತಾರೆ. ದೀಪ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಹಾಗೆ ಶಿಕ್ಷಕರು ಜ್ಞಾನ, ಮೌಲ್ಯ ಹಾಗೂ ಸಂಸ್ಕಾರದ ಮೂಲಕ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸುತ್ತಾರೆ. ಆ ಮೂಲಕ ಸಮಾಜದ ಬೆಳವಣಿಗೆಗೆ ಕಾರಣರಾಗುತ್ತಾರೆ. ಪ್ರಾಚೀನ ಕಾಲದ ಚಾಣಕ್ಯನಾಗಿರಬಹುದು ಅಥವಾ ಆಧುನಿಕ ಕಾಲದ ಸರ್ವಪಳ್ಳಿ ರಾಧಾಕೃಷ್ಣರಿರಬಹುದು, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ನಿರ್ಮಾಣಕ್ಕೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕ ರಾಷ್ಟ್ರ ನಿರ್ಮಾಣದ ಶಿಲ್ಪಿ. ತಂತ್ರಜ್ಞಾನದ ಬೆಳವಣಿಗೆಯ ಈ ಕಾಲ ಘಟ್ಟದಲ್ಲಿ ಶಿಕ್ಷಕರ ಪಾತ್ರ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಮೌಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವ, ವಿದ್ಯಾರ್ಥಿ ಕೇಂದ್ರಿತ, ನವಯುಗದ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಕವೃಂದ ನಮ್ಮದಾಗಬೇಕು ಎಂದು ಆಶಿಸಿದರು. ಹೊಸ ದಿಗಂತ ಪತ್ರಿಕೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿಎಸ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ದೇಶ ಅಥವಾ ಸಮಾಜ ಶಿಕ್ಷಣದಿಂದ ರೂಪಿತವಾಗಬೇಕು. ಸಮಾಜದ ನಡೆ ಶಿಕ್ಷಣದಿಂದ ನಿರ್ಧರಿತವಾಗಬೇಕು. ಸತ್ಯದ ದಾರಿಯಲ್ಲಿ ಮೌಲ್ಯವನ್ನು ಹೆಚ್ಚಿಸುವುದೇ ಶಿಕ್ಷಣ. ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಆಸ್ಥೆಯ, ಅಪರಿಗ್ರಹದಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಸ್ವಾಭಿಮಾನಿ ಸಮಾಜ ನಿರ್ಮಾಣವಾಗಬೇಕೆಂದರೆ ಅಂತಹ ಶಿಕ್ಷಣ ನೀಡಬೇಕು ಎಂದರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್ ಡಾ. ಹೆಚ್ ಎಸ್ ಬಲ್ಲಾಳ್ ಹಾಗೂ ಸರಸ್ವತಿ ಸಮೂಹ ವಿದ್ಯಾಸಂಸ್ಥೆ ಮೇಘಾಲಯದ ಸ್ಥಾಪಕರು ಹಾಗೂ ಸಂವಿಧಾನ ತಜ್ಞ ಡಾ. ಅನಂತಕೃಷ್ಣ ಭಟ್‌ರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸಿಲರ್, ಡಾ ಹೆಚ್ ಎಸ್ ಬಲ್ಲಾಳ, ಈ ತರಹದ ಗುರುತಿಸುವಿಕೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರೆಪಿಸುತ್ತದೆ. ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಇನ್ನೊಬ್ಬರಿಗಾಗಿ ಬದುಕಿದರೆ, ಅದೇ ಶ್ರೇಷ್ಠ ಬದುಕು ಎಂದು ನುಡಿದರು. ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಸಾಧನೆಗಾಗಿ ಅತ್ಯುತ್ತಮ ಆಡಳಿತ ನಿರ್ವಾಹಕ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಪ್ರಾಚರ‍್ಯ ಡಾ ಕುರಿಯನ್ ಹಾಗೂ ಮಂಗಳೂರಿನ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಇವರಿಗೆ ನೀಡಲಾಯಿತು. ಸಂಶೋಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಣಿಪಾಲ್ ಯೂನಿವರ್ಸಿಟಿಯ, ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊ. ಹರೀಶ್ ಜೋಶಿ ಹಾಗೂ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶಾಂತರಾಮ ರೈ ಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕಿ ಡಾ ಸುಭಾಷಿಣಿ ಶ್ರೀವತ್ಸ ಹಾಗೂ ಅಜ್ಜರಕಾಡಿನ ಡಾ ಜಿ ಶಂಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಜೇಂದ್ರ ಪಿ ಇವರಿಗೆ ನೀಡಲಾಯಿತು. ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರೊ. ವಿಜಯಲತಾ ಹಾಗೂ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯಶೋಧರಿಗೆ ನೀಡಿ ಗೌರವಿಸಲಾಯಿತು. ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿಯನ್ನು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಡಾ. ರಾಧಾಕೃಷ್ಣ ಹಾಗೂ ವಿರಾಜಪೇಟೆಯ ಕಾವೇರಿ ಕಾಲೇಜಿನ ತಮ್ಮಯ್ಯರಿಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 2025ನೇ ಸಾಲಿನಲ್ಲಿ ಪಿಹೆಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಮಂಗಳೂರು ವಿವಿಯ ಕುಲಸಚಿವ ಡಾ ಪಿಎಲ್ ಧರ್ಮಾ, ಮುಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್, ಕೆಆರ್‌ಎಂಎಸ್‌ಎಸ್‌ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ. ಕೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ ಮಹಾದೇಶ ಸಿ, ಡಾ ಎಸ್ ಬಿ ಎಂ ಪ್ರಸನ್ನ, ಕೆಆರ್‌ಎಂಎಸ್‌ಎಸ್‌ನ ಮಂಗಳೂರು ವಿಭಾಗದ ಅಧ್ಯಕ್ಷೆ ವಾಣಿ ಯುಎಸ್, ಕಾರ‍್ಯದರ್ಶಿ ರಾಜೇಶ್ ಇದ್ದರು. ಕೆಆರ್‌ಎಂಎಸ್‌ಎಸ್‌ನ ಮಮತಾ ಶೆಟ್ಟಿ ಹಾಗೂ ವೆಂಕಟೇಶ್ ನಾಯಕ್ ಕಾರ‍್ಯಕ್ರಮ ನಿರೂಪಿಸಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

Article Image

ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ಕುರಿತು ವಿಶೇಷ ಉಪನ್ಯಾಸ

ಎಸ್.ಡಿ.ಎಂ. ಬಯೋಮೆಡಿಕಲ್ ಸೈನ್ಸಸ್ ಇನ್‌ಸ್ಟಿಟ್ಯೂಟ್, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳ ರಾಷ್ಟ್ರೀಯ ಸ್ವಯಂ ಸೇವಕ ಘಟಕಗಳು ಜಂಟಿಯಾಗಿ ಜುಲೈ 24, 2025ರಂದು ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಿತು. ಸಹ ಉಪ ಕುಲಪತಿಗಳು (ಆಡಳಿತ) ಶ್ರೀ ವಿ. ಜೀವಂಧರ್ ಕುಮಾರ್ ಮತ್ತು ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ನಗರದ ಸೈಬರ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯಗಳ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಡಾ. ಶಿವರಾಜ್ ಕೆ. ಕಟಕಭಾವಿ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಮಾದಕವಸ್ತು ವಿಭಾಗದ ವೈಜ್ಞಾನಿಕ ಅಧಿಕಾರಿ ಡಾ. ಮಂಜುನಾಥ್ ಸುಣಗಾರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ. ಶಿವರಾಜ್ ಕಟಕಭಾವಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ; ವಿದ್ಯಾರ್ಥಿಗಳು ಶ್ರಮವಹಿಸಿ ಕಲಿಯುವ ಮುಖೇನ ಸಂತೃಪ್ತಿಯನ್ನು ಪಡೆಯಬೇಕು. ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗದೇ ಅದರಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಲ್ಲದೇ ಇಡೀ ಕುಟುಂಬದ ಶಾಂತಿಯನ್ನು ಹಾಳು ಮಾಡುತ್ತದೆ. ವಿಷಕಾರಕವಾದ ಮಾದಕ ವಸ್ತುಗಳ ಸೇವನೆಯಿಂದ ಹಂತ ಹಂತವಾಗಿ ದೇಹದ ಎಲ್ಲಾ ಅಂಗಗಳನ್ನು ಹಾನಿಗೊಳಗಾಗುತ್ತವೆ. ಕ್ಷಣಿಕ ಸಂತೋಷಕ್ಕಾಗಿ ಅಮೂಲ್ಯವಾದ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಶಿಕ್ಷಣ ಮತ್ತು ಇಡೀ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿಕೊಳ್ಳುವ ಯಾವುದೇ ರೀತಿಯ ಅಪರಾಧ ಕೃತ್ಯಗಳ ಬಗ್ಗೆ ನಾವು ಯೋಚಿಸಬಾರದು. ನಾವೆಲ್ಲರೂ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆಯ ಕುರಿತಾದ ಕಾನೂನುಗಳನ್ನು ಅನುಸರಿಸಬೇಕು. ಭಾರತವನ್ನು ಮಾದಕ ವಸ್ತುಗಳ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು. ಆರೋಗ್ಯಕರ ಶೈಕ್ಷಣೀಕ ಪರಿಸರ ಹೊಂದಲು ಆತಂರಿಕ ಮಾದಕ ವಸ್ತು ವಿರೋಧಿ ಸಮಿತಿಯನ್ನು ರಚಿಸಲು ಸಲಹೆ ಮಾಡಲಾಯಿತು. ಡಾ. ಮಂಜುನಾಥ್ ಸುಣಗಾರ ಅವರು ವಿವಿಧ ಮಾದಕ ದ್ರವ್ಯ ವಸ್ತುಗಳ ಪರಿಚಯ, ಸೇವನೆಯ ದುಷ್ಪರಿಣಾಮ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಮುಂಜಾಗೃತಿಯನ್ನು ಮೂಡಿಸಿದರು. ಡಾ. ಶಿವರಾಜ್ ಕಟಕಭಾವಿ ಮತ್ತು ಡಾ. ಮಂಜುನಾಥ್ ಸುಣಗಾರ ಅವರನ್ನು ಎಸ್.ಡಿ.ಎಂ. ಸಂಸ್ಥೆವತಿಯಿಂದ ಗಣ್ಯರು ಸನ್ಮಾನಿಸಿದರು. ಸಂಶೋಧನಾ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಡಾ. ಅಜಯಕುಮಾರ್ ಓಲಿ ಮತ್ತು ಪ್ರಸನ್ನ ದೇಶಪಾಂಡೆ, ಎನ್.ಎನ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ. ರೇಣುಕಾರಾಧ್ಯ ಕೆ. ಮಠ, ಅಧ್ಯಾಪಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಮೇಘನಾ ಹೆಗ್ಡೆ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಮೈಜಾ ಶಿಬಾರಗಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

Article Image

ಸ್ಪಟಿಕ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ

ವಯೋಸಹಜವಾಗಿ ಮೈಗೂಡುವ ಋಣಾತ್ಮಕ ಚಿಂತನೆಗಳನ್ನು ತೊರೆದಾಗ ಮನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಮನಃಶಾಸ್ತ್ರ (ಸ್ನಾತಕೋತ್ತರ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಅವರು ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ ಉದ್ಘಾಟಿಸಿ, ‘ಕಾಲೇಜು ಜೀವನದಲ್ಲಿ ಮಾನಸಿಕ ಆರೋಗ್ಯದ ಪೋಷಣೆ’ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬರಬೇಕು. ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನು ಸ್ವೀಕರಿಸಿ, ತಾಳ್ಮೆಯಿಂದ ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮನಸು ಮತ್ತು ಮೆದುಳಿನ ಸಮತೋಲನ ನಿರ್ವಹಣೆಯಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು. “ಮನಸ್ಸಿನ ದುಗುಡಗಳನ್ನು ನಮಗೆ ಸೂಕ್ತ ಎನಿಸುವ ವ್ಯಕ್ತಿಯ ಜೊತೆ ಹಂಚಿಕೊಂಡಾಗ ಮಾತ್ರ ಅವುಗಳಿಗೆ ಪರಿಹಾರ ಸಾಧ್ಯ. ನಮ್ಮ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕು ಎಂಬುದರ ಬಗ್ಗೆ ನಮಗೆ ಅರಿವಿರಬೇಕು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇದೆ. ಅವುಗಳನ್ನು ಹುಡುಕುವ ತಾಳ್ಮೆ ಮೈಗೂಡಬೇಕು” ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಪ್ರತಿಯೊಂದು ವಿಚಾರಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ನಿಲ್ಲಿಸಿ ತಮ್ಮ ಮೆದುಳಿಗೆ ಕೆಲಸ ಕೊಡಬೇಕು. ಹಾಗಾದಾಗ ಮಾತ್ರ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಯುವಜನತೆ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ವಿಷಯವಾರು ಸಂಘ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮನೋರಂಜನೆಯ ಉದ್ದೇಶಕ್ಕಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಂದರು. ರಸಾಯನಶಾಸ್ತ್ರ ವಿಭಾಗವು ಹಿಂದಿನಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಆ ಯಶಸ್ಸನ್ನು ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿಗಳು ತಯಾರಿಸಿದ ‘ಸ್ಪಟಿಕ’ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ., ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮೌಲ್ಯ ಮತ್ತು ಸಿಂಚನ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಶಾಂತ್ ಸ್ವಾಗತಿಸಿ, ಜೋಷ್ಣಾ ವಂದಿಸಿ, ಅನ್ವಿತಾ ಸೇರಾ ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣವಾಚನ ಪ್ರವಚನ ಉದ್ಘಾಟನೆ

Article Image

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣವಾಚನ ಪ್ರವಚನ ಉದ್ಘಾಟನೆ

ಉಜಿರೆ: ಪುರಾಣ ಅಂದರೆ ಭಗವಂತನ ಕಥೆ. ಪುರಾಣ ವಾಚನ-ಪ್ರವಚನ ಎಂಬುದು ಜ್ಞಾನ ಯಜ್ಞ ಹಾಗೂ ಜ್ಞಾನ ಸತ್ರವಾಗಿದ್ದು ಆಸಕ್ತಿ ಮತ್ತು ತನ್ಮಯತೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಪುರಾಣ ವಾಚನ-ಪ್ರವಚನ ಶ್ರವಣದಿಂದ ಪ್ರತಿಯೊಬ್ಬರ ಮನದಲ್ಲೂ, ಮನೆಯಲ್ಲೂ ಸುಖ, ಶಾಂತಿ-ನೆಮ್ಮದಿ ನೆಲೆಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಡಾ. ಶಾಂತರಾಮ ಪ್ರಭು, ನಿಟ್ಟೂರು ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ 45ನೇ ವರ್ಷದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾಭಾರತ ಕಥೆ ಕೇಳಿ ಕುಷ್ಠ ರೋಗ ನಿವಾರಣೆಯಾಗಿದೆ ಎಂದು ಪುರಾಣದಿಂದ ತಿಳಿದು ಬಂದಿದೆ. ಪುರಾಣ ವಾಚನ-ಪ್ರವಚನವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸುವ ಸತ್ಸಂಗದಿಂದ ಪರಸ್ಪರ ಪ್ರೀತಿ-ವಿಶ್ವಾಸ, ಭ್ರಾತೃತ್ವ, ದಯೆ, ಅನುಕಂಪ ಮೊದಲಾದ ಮಾನವೀಯಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಓದುವ ಹವ್ಯಾಸದಿಂದ ನಮ್ಮ ಜ್ಞಾನಕ್ಷಿತಿಜ ವಿಸ್ತಾರವಾಗುತ್ತದೆ. ಊರಿನವರು ಹಾಗೂ ಧರ್ಮಸ್ಥಳಕ್ಕೆ ಬರುವ ಭಕ್ತರು ಕೂಡಾ ಪುರಾಣ ವಾಚನ-ಪ್ರವಚನದ ಸದುಪಯೋಗ ಪಡೆದು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸುಪ್ರಿಯಾಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ದೇವಳದ ಪಾರುಪತ್ಯಹಾರರಾದ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಪುರಂದರ ಭಟ್, ಉದಯಕುಮಾರ್ ಜೈನ್, ಚಂದ್ರಕಾಂತ್, ಮಹಾವೀರ ಅಜ್ರಿ, ಸಂತೋಷ್, ಭುಜಬಲಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ನಿಶಾಂತ್ ಧನ್ಯವಾದವಿತ್ತರು. ಕುಮಾರವ್ಯಾಸ ವಿರಚಿತ “ಕರ್ಣಾಟ ಭಾರತ ಕಥಾಮಂಜರಿ” ಬಗ್ಗೆ ಗಣಪತಿ ಪದ್ಯಾಣ ವಾಚನಕಾರರಾಗಿ ಹಾಗೂ ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿ ಸಹಕರಿಸಿದರು. ಸೆಪ್ಟೆಂಬರ್ 16ರ ವರೆಗೆ ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 8.00ರ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ.

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ ವಾಚನ-ಪ್ರವಚನ

Article Image

ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ ವಾಚನ-ಪ್ರವಚನ

ಉಜಿರೆ: ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ-ಪ್ರವಚನ ಕಾರ್ಯಕ್ರಮವು ಜುಲೈ 16 ರಿಂದ ಸೆಪ್ಟೆಂಬರ್ 16ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30ರಿಂದ 8 ಗಂಟೆ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರು ಹಾಗೂ ಕಲಾವಿದರಿಂದ ಕುಮಾರವ್ಯಾಸ ವಿರಚಿತ “ಕರ್ಣಾಟ ಭಾರತ ಕಥಾಮಂಜರಿ”ಯ ವಾಚನ-ಪ್ರವಚನ ನಡೆಯುತ್ತದೆ. ಶನಿವಾರ ಮತ್ತು ಭಾನುವಾರಗಳಲ್ಲಿ ಕವಿ ರತ್ನಾಕರವರ್ಣಿಯ ಭರತೇಶವೈಭವ, ಮಂಕುತಿಮ್ಮನ ಕಗ್ಗ, ಶ್ರೀಮದ್ಭಾಗವತ, ಯಶೋಧರಚರಿತೆ, ತೊರವೆರಾಮಾಯಣ, ಮಹಾಭಾರತ, ಸೋಮೇಶ್ವರಶತಕ ಮೊದಲಾದ ವಿವಿಧ ಕಾವ್ಯಗಳ ಆಯ್ದ ಭಾಗಗಳನ್ನು ವಾಚನ-ಪ್ರವಚನಕ್ಕೆ ಬಳಸಲಾಗುವುದು. ಜುಲೈ 16 ರಂದು ಬುಧವಾರ ಮತ್ತು 17 ರಂದು ಗುರುವಾರ ಗಣಪತಿ ಭಟ್ ಪದ್ಯಾಣ ವಾಚನಕಾರರಾಗಿಯೂ, ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿಯೂ ಭಾಗವಹಿಸುವರು. ಉದ್ಘಾಟನಾ ಸಮಾರಂಭ: ಜುಲೈ 16 ರಂದು ಬುಧವಾರ ಸಂಜೆ 5 ಗಂಟೆಗೆ ಯಕ್ಷಗಾನ ಬಯಲಾಟ ಅಕಾಡೆಮಿಯ “ಯಕ್ಷಸಿರಿ” ಪ್ರಶಸ್ತಿ ಪುರಸ್ಕೃತರಾದ ಹಾಗೂ ನಿವೃತ್ತ ಉಪನ್ಯಾಸಕ ಡಾ. ಶಾಂತರಾಮ ಪ್ರಭು ನಿಟ್ಟೂರು ಅವರು ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು ಎಂದು ಸಮಿತಿಯ ಸಂಚಾಲಕರಾದ ಎ.ವಿ. ಶೆಟ್ಟಿ ತಿಳಿಸಿದ್ದಾರೆ.

ಶಿಕ್ಷಕ ಪಾಲಕ ವಿದ್ಯಾರ್ಥಿಗಳ ಸಭೆ 2025

Article Image

ಶಿಕ್ಷಕ ಪಾಲಕ ವಿದ್ಯಾರ್ಥಿಗಳ ಸಭೆ 2025

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ 2025ರ ಶೈಕ್ಷಣಿಕ ಸಾಲಿನ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಕ-ಪಾಲಕ-ವಿದ್ಯಾರ್ಥಿಗಳ ಪ್ರಥಮ ಸಭೆಯನ್ನು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದ ದಿಕ್ಕನ್ನು ತೀರ್ಮಾನಿಸುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿ, ಗುರಿ ಮುಟ್ಟುವೆಡೆಗೆ ಶ್ರಮಿಸಬೇಕು. ಈ ಪ್ರಯಾಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರವು ಬಹಳ ಮಹತ್ವದ್ದಾಗಿದೆ ಎಂದರು. ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುತ್ತಾನೆ. ಹಾಗಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸೂಕ್ತವಲ್ಲ ಎಂದರು. ಮನಸ್ಸಿನ ಸಮತೋಲನ ಅಗತ್ಯ. "ಬಾಲ್ಯಾವಸ್ಥೆಗಿಂತ ಪ್ರೌಢಾವಸ್ಥೆ ವಿಭಿನ್ನ ಮನೋಧರ್ಮದಿಂದ ಕೂಡಿರುತ್ತದೆ. ದೈಹಿಕವಾಗಿ ಶಕ್ತಿಶಾಲಿಯಾದರೂ, ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಅಧ್ಯಯನ ಸಮಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ, ಪ್ರತಿಯೊಂದು ವಿಷಯಕ್ಕೂ ಸಮಾನ ಮಹತ್ವ ನೀಡಿ ಎಂದರು. ಶಿಸ್ತು ಮತ್ತು ಸಮಯದ ಮೌಲ್ಯ ಅರಿಯಿರಿ ಆರೋಗ್ಯದ ವಿಷಯದಲ್ಲೂ ಜಾಗೃತಿ ಅಗತ್ಯ. ಕಳೆದುಹೋದ ಸಮಯ ಮರಳದು. ಆದ್ದರಿಂದ ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ ಮತ್ತು ಶಿಸ್ತುಬದ್ಧ ಜೀವನ ನಡೆಸಿರಿ,” ಎಂದು ಸಲಹೆ ನೀಡಿದರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕಿ ವಿದ್ಯಾ ಇದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ಸಿರಿ ಮಿಲ್ಲೆಟ್ ಕೆಫೆ ಧಾರವಾಡದಲ್ಲಿ ಶುಭಾರಂಭ

Article Image

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ಸಿರಿ ಮಿಲ್ಲೆಟ್ ಕೆಫೆ ಧಾರವಾಡದಲ್ಲಿ ಶುಭಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತೀ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ನೂತನ ಸಿರಿ ಮಿಲ್ಲೆಟ್ ಕೆಫೆ’ಯು ಜು. 04ರಂದು ಶುಭಾರಂಭಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಸಿರಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಪರಮಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಿನೂತನವಾದ ಸಿರಿ ಮಿಲ್ಲೆಟ್ ಕೆಫೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪೂಜ್ಯರು ಯುವ ಪೀಳಿಗೆಗೆ ಆರೋಗ್ಯಕರವಾಗಿ ಜೀವಿಸಲು ಅವಶ್ಯಕವಾಗಿರುವ ಪೌಷ್ಟಿಕಾಂಶಯುಕ್ತ ಆಹಾರೋತ್ಪನ್ನಗಳು ದೊರೆಯಬೇಕು ಎನ್ನುವ ಉದ್ದೇಶದಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಎಸ್.ಡಿ.ಎಂ ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿದೆ. ಇಲ್ಲಿ ಮಧುಮೇಹ, ಬೊಜ್ಜು ನಿವಾರಕ, ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಸಿರಿಧಾನ್ಯ ಉತ್ಪನ್ನಗಳನ್ನು ಬಳಸಿ ಶುಚಿ-ರುಚಿಯಾದ ಆರೊಗ್ಯಕರವಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ದೃಷ್ಟಿಯಿಂದ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯನ್ನು ಆರಂಭಿಸಿದ್ದೇವೆ. ಅಲ್ಲದೆ ಈ ವಿನೂತನ ಸಿರಿ ಮಿಲ್ಲೆಟ್ ಕೆಫೆಯಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲ್ಲೆಟ್ ಕುಕ್ಕೀಸ್, ಮಿಲ್ಲೆಟ್ ರಸ್ಕ್, ಡೋನಟ್, ರಿಬ್ಬನ್ ಪಕೋಡಾ, ನವಣೆ ಲಡ್ಡು, ಬೆಳಗ್ಗಿನ ಉಪಹಾರಕ್ಕೆ ಯೋಗ್ಯವಾಗಿರುವ ಬರಗು ದೋಸೆ, ಮಿಲ್ಲೆಟ್ ಉಪ್ಮ, ಪೋಹ, ವರ್ಮಸಲ್ಲಿ, ಮಧ್ಯಾಹ್ನದ ಭೋಜನಕ್ಕೆ ಸಿರಿಧಾನ್ಯಗಳ ಬಿಸಿಬೇಳೆ ಬಾತ್, ತಾಳಿಪಟ್ಟು, ದಾಲ್ ಕಿಚಡಿ, ಮಿಲ್ಲೆಟ್ ಮೊಸರನ್ನ, ಜೋಳ ರೋಟ್ಟಿ, ಸಂಜೆಗೆ ಸ್ನಾಕ್ಸ್ ಐಟಮ್ ಗಳಾದ ನ್ಯೂಟ್ರಿ ಅಟ್ಟ ಆನಿಯನ್ ಪಕೋಡಾ, ವೆಜ್ ಸ್ಯಾಂಡ್ ವಿಚ್, ಜೋಳ ವಡ ಇತ್ಯಾದಿ ಉತ್ತಮ ಗುಣಮಟ್ಟವುಳ್ಳ ಬಿಸಿ ಬಿಸಿ ಖಾದ್ಯಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಎಲ್ಲರೂ ಸಿರಿ ಮಿಲ್ಲೆಟ್ ಕೆಫೆಗೆ ಭೇಟಿ ನೀಡಿ, ಇಲ್ಲಿ ದೊರೆಯುವ ವಿವಿಧ ಮಿಲ್ಲೆಟ್ ಖಾದ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾರವಾಡ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ್ ದಂಪತಿಗಳು ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧಾರವಾಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಜೀವಂಧರ್ ಕುಮಾರ್, ಹಣಕಾಸು ನಿರ್ದೇಶಕರಾದ ವಿ.ಜಿ.ಪ್ರಭು, ಧಾರವಾಡ ಎಸ್.ಡಿ.ಎಂ ಡೆಂಟಲ್ ಹಾಸ್ಪಿಟಲ್ ಪಿ.ಆರ್.ಒ. ಶ್ರೀ ನಾಗ್ ಕುಮಾರ್, ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿ.ಸಿ.ಒ ಗಣೇಶ್ ಪ್ರಸಾದ್ ಎಸ್ ಕಾಮತ್, ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಮುಖ್ಯ

Article Image

ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಮುಖ್ಯ

ಉಜಿರೆ: ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಬಹುಮುಖ್ಯವಾಗಿದೆ. ಮಹಿಳೆಯರು ಸಮತೋಲನದೊಂದಿಗೆ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಯ ನಿರ್ವಹಣೆ ಮಾಡಿಕೊಳ್ಳಬೇಕು. ಗ್ರಾಹಕರ ಜೊತೆಗೆ ಉತ್ತಮ ರೀತಿಯಲ್ಲಿ ಸೌಜನ್ಯಪೂರ್ವಕವಾಗಿ ಸಂವಹನ ಮಾಡಿ, ಉತ್ತಮವಾದ ಮನೋಭಾವ ಬೆಳಸಿಕೊಳ್ಳಿ. ಸರ್ಕಾರದ ಮತ್ತು ಬ್ಯಾಂಕಿನ ಆರ್ಥಿಕ ಸಹಕಾರ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ ಬಿ.ಪಿ ಹೇಳಿದರು. ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದ ಕಂಪ್ಯೂಟರ್ ಡಿ.ಟಿ.ಪಿ ಮತ್ತು ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ, ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾಧ್ಯಾಯದಿಂದ ಆತ್ಮಕಲ್ಯಾಣ

Article Image

ಸ್ವಾಧ್ಯಾಯದಿಂದ ಆತ್ಮಕಲ್ಯಾಣ

ಉಜಿರೆ: ಜೈನಧರ್ಮ ವಿಶ್ವದ ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆ, ಸತ್ಯ, ಅಪರಿಗ್ರಹ, ಸ್ಯಾದ್ವಾದ ಮೊದಲಾದ ಉದಾತ್ತ ತತ್ವಗಳ ಪಾಲನೆಯಿಂದ ಜೀವನ ಪಾವನವಾಗಿ, ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ರತ್ನತ್ರಯ ಧರ್ಮದ ಪಾಲನೆ ಮತ್ತು ಸ್ವಾಧ್ಯಾಯದಿಂದ ಆತ್ಮಕಲ್ಯಾಣವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಎಂದು ನಿವೃತ್ತ ಶಿಕ್ಷಕ ರಘುಚಂದ್ರ ಚೌಟ ಹೇಳಿದರು. ಅವರು ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ತ್ಯಾಗ, ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉದಾತ್ತ ತತ್ವ, ಸಿದ್ಧಾಂತಗಳನ್ನು ಬದುಕಿನಲ್ಲಿ ನಿತ್ಯವೂ ಪಾಲಿಸುವವರೆಲ್ಲರೂ ಜೈನರಾಗುತ್ತಾರೆ. ಬರೆ ಜಾತಿಜೈನರಾದರೆ ಸಾಲದು, ನೀತಿ ಜೈನರೂ ಆಗಬೇಕು ಎಂದು ಅವರು ಸಲಹೆ ನೀಡಿದರು. ಸಕಲ ಪಾಪಕರ್ಮಗಳ ಕೊಳೆ ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಸಕಲ ಸುಖ-ಭೋಗ ಹಾಗೂ ಬಂಧನಗಳಿಂದ ಮುಕ್ತರಾಗಿ ಮೋಕ್ಷ ಪ್ರಾಪ್ತಿಯೇ ಬದುಕಿನ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಡಾ. ಜಯಕೀರ್ತಿ ಜೈನ್, ಧರ್ಮಸ್ಥಳ, ವಿಶ್ವಾಸ್ ರಾವ್, ಸನ್ಮತ್ ಕುಮಾರ್ ನಾರಾವಿ ಮತ್ತು ವಸಂತ ಸುವರ್ಣ ಉಪಸ್ಥಿತರಿದ್ದರು.

ಅವಲೋಕನ ಅವಾರ್ಡ್ಸ್ : ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿ

Article Image

ಅವಲೋಕನ ಅವಾರ್ಡ್ಸ್ : ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿ

ಬೆಳ್ತಂಗಡಿ : 'ಅವಲೋಕನ' ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಪಿಲಿಕುಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181 ಒಳಪಟ್ಟ ರೋಟರಿ ಕ್ಲಬ್ ಗಳ ಪೈಕಿ 2024 -25 ನೇ ಸಾಲಿನ ವಾರ್ಷಿಕ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿವಿಧ ವಿಭಾಗಗಳಲ್ಲಿ 10 ಪ್ರಶಸ್ತಿಗಳು ಲಭಿಸಿವೆ. RI ಜಿಲ್ಲೆ 3181 ರೋಟರಿ ಕ್ಲಬ್ ಗಳ ಪೈಕಿ ರೋಟರಿ ಕ್ಲಬ್ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರಶಸ್ತಿಗಳು ಈ ಬಾರಿ ದೊರೆತಿದೆ. ಪ್ರಶಸ್ತಿಗಳ ವಿವರ : 1. 3181 ಜಿಲ್ಲೆಯ ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ಡೈಮಂಡ್ ಪ್ಲಸ್ ಪ್ರಶಸ್ತಿ (ಅತ್ಯುನ್ನತ ಗೌರವ) 2. ಕಾರ್ಯೋನ್ಮುಕ ಶ್ರೇಷ್ಠತೆ ಪ್ರಶಸ್ತಿ -ಪ್ರಥಮ ಸ್ಥಾನ 3. ಎಕ್ಸೆಲೆನ್ಸ್ ಇನ್ ಪಬ್ಲಿಕ್ ಇಮೇಜ್‌ - ಪ್ರಥಮ ಸ್ಥಾನ 4. ಆಕ್ಷನ್ ಚಾಂಪಿಯನ್ ಮೆಚ್ಚುಗೆ ಪ್ರಶಸ್ತಿ - ರೋ. ಅನಂತ್ ಭಟ್ ಮತ್ತು ರೋ. ವಿದ್ಯಾಕುಮಾರ್ ಕಾಂಚೋಡುರವರಿಗೆ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರಶಸ್ತಿ. 5. ಸಿಗ್ನಿಫಿಕೆಂಟ್ ಸರ್ವೀಸ್ ಅವಾರ್ಡ್ - ರೋಟರಿ ಕ್ಲಬ್ ಬೆಳ್ತಂಗಡಿ 6. ಸೇವಾ ವಿಭಾಗದ ವೈಯಕ್ತಿಕ ಪ್ರಶಸ್ತಿ : ರೋ. ಶ್ರೀಧರ್ ಕೆ ವಿ 7. TRF ಚಾಂಪಿಯನ್ ಅವಾರ್ಡ್ 8. ಇಂಟರಾಕ್ಟ್ ಕ್ಲಬ್ ಡೈಮಂಡ್ ಪ್ಲಸ್ ಅವಾರ್ಡ್ಸ್-ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ (CBSE) ಉಜಿರೆ. 9. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಇಂಗ್ಲಿಷ್ ಮಾಧ್ಯಮ ಶಾಲೆ, ಉಜಿರೆ 10. ಡೈಮಂಡ್ ಪ್ಲಸ್ ಅವಾರ್ಡ್ - ಎಸ್.ಡಿ.ಎಂ ಅನುದಾನಿತ ಮಾಧ್ಯಮಿಕ ಶಾಲೆ ಉಜಿರೆ ಬೆಳ್ತಂಗಡಿ ರೋಟರಿ ಕ್ಲಬ್ ನ 2024-25 ನೇ ಸಾಲಿನ ಶೈಕ್ಷಣಿಕ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಪ್ರಮುಖ ಸೇವಾ ಕಾರ್ಯಗಳು : ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ನವೀಕರಣ ಕಾರ್ಯಗಳು, 40 ಲಕ್ಷ ಮೊತ್ತದ ಸರಕಾರಿ ಶಾಲಾ ಕಾಲೇಜುಗಳಿಗೆ ಹೊಸ ಶೌಚಾಲಯಗಳ ನಿರ್ಮಾಣ ಕಾರ್ಯ, 25 ಲಕ್ಷಕ್ಕೂ ಅಧಿಕ ಮೊತ್ತದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, 14 ಲಕ್ಷ ಮೊತ್ತದ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, 5 ಲಕ್ಷ ಮೊತ್ತದ ಶಾಲಾ ಕಾಲೇಜುಗಳಿಗೆ ಮೂಲಭೂತ ಪೀಟೋಪಕರಣಗಳ ಕೊಡುಗೆ, ವಿವಿಧ ತರಭೇತಿ ಮತ್ತು ಮಾಹಿತಿ ಕಾರ್ಯಕ್ರಮ, ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಯುತ್ ಕಾರ್ನಿವಲ್ - ವಿವಿಧ ಜಿಲ್ಲಾ ವಿದ್ಯಾರ್ಥಿಗಳ ಜಿಲ್ಲಾ ಸಮ್ಮೇಳನ, 7 ಉಚಿತ ಗ್ರಾಮೀಣ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು, 9 ಬೃಹತ್ ರಕ್ತದಾನ ಶಿಬಿರಗಳ ಮೂಲಕ 1300 ಯುನಿಟ್ ರಕ್ತ ಸಂಗ್ರಹ, 9 ಲಕ್ಷಕ್ಕೂ ಅಧಿಕ ಮೊತ್ತದ ತಾಲೂಕು ಪಶು ಆಸ್ಪತ್ರೆಯ ಕಟ್ಟಡ ನವೀಕರಣ, ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ, ಅಶಕ್ತರಿಗೆ ವೀಲ್ ಚೇರ್, ವಾಕರ್ ಮತ್ತು ವಾಟರ್ ಬೆಡ್ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಸೇರಿದಂತೆ 200ಕ್ಕೂ ಅಧಿಕ ಸಾಮಾಜಿಕ ಕಾರ್ಯಕ್ರಮಗಳು, 2 ಕೋಟಿಗೂ ಹೆಚ್ಚಿನ ಅನುದಾನ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿನಿಯೋಗ ರೋಟರಿ ಕ್ಲಬ್ ಬೆಳ್ತಂಗಡಿಯದ್ದಾಗಿದೆ. ಈ ಎಲ್ಲಾ ಕಾರ್ಯಗಳನ್ನು ಗುರುತಿಸಿ ರೋಟರಿ RI ಜಿಲ್ಲೆ 3181 ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರೋಟರಿ 3181 ಜಿಲ್ಲಾ ಗವರ್ನರ್ ರೋ.ವಿಕ್ರಮ ದತ್ತ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೋ. ಮೊಹಮ್ಮದ್ ವಳವೂರು, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಜಯಕುಮಾರ್ ಶೆಟ್ಟಿ, ರೋ.ಅಳಗಪ್ಪನ್ ರೋ. ದೇವ್ ಆನಂದ್, ಎಲ್ಐ ಜಿಲ್ಲೆ 317 ಜಿಲ್ಲಾ ಗವರ್ನರ್ ಲಯನ್ ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ, ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ರೋ. ಧನಂಜಯ ರಾವ್, ರೋ. ಅನಂತ ಭಟ್, ರೋ. ವಿದ್ಯಾ ಕುಮಾರ್ ಕಾಂಚೋಡು,ರೋ. ಅರುಣ್, ರೋ. ಶ್ರೀಧರ್ ಕೆ.ವಿ, ರೋ. ಪ್ರವೀಣ್ ಗೋರ್ ಸೇರಿದಂತೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರ ಆರ್ಶಿವಾದ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರುಗಳ ಸಹಕಾರದಿಂದ ಈ ವರ್ಷ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಯಿತು. ತಾಲೂಕಿನಲ್ಲಿನ ಬೇರೆ ಬೇರೆ ಅಗತ್ಯತೆಗಳನ್ನು ಅರಿತು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಯೋಜನೆಗೆ ತರಲು ಸಹಕಾರ ನೀಡಿದ ಬೆಳ್ತಂಗಡಿಯ ಅನೇಕ ಸಂಘ - ಸಂಸ್ಥೆಗಳು, ಬೆಂಗಳೂರಿನ ಸಿಎಸ್ಆರ್ ಪಾರ್ಟ್ನರ್ ಕಂಪೆನಿಗಳು ಮತ್ತು ಇಂದಿರಾನಗರ ಕ್ಲಬ್ ಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಬಂದಿರುವ ಈ ಎಲ್ಲಾ ಪ್ರಶಸ್ತಿಗಳು ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರ ಪರಿಶ್ರಮದ ಫಲವಾಗಿದೆ. - ಪೂರನ್ ವರ್ಮ ಅಧ್ಯಕ್ಷರು ರೋಟರಿ ಕ್ಲಬ್, ಬೆಳ್ತಂಗಡಿ .

ಪೃಥ್ವಿ ಜುವೆಲ್ಸ್ ನಲ್ಲಿ ಭರ್ಜರಿ ಆಷಾಢ ಸೇಲ್ಸ್

Article Image

ಪೃಥ್ವಿ ಜುವೆಲ್ಸ್ ನಲ್ಲಿ ಭರ್ಜರಿ ಆಷಾಢ ಸೇಲ್ಸ್

ಬೆಳ್ತಂಗಡಿ: ಕಳೆದ ಏಳೆಂಟು ವರ್ಷಗಳಿಂದ ಚಿನ್ನಾಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ “ಭರ್ಜರಿ ಆಷಾಢ ಸೇಲ್ಸ್” ನಡೆಯುತ್ತಿದೆ. ಜೂ.30ರಂದು ಪ್ರಾರಂಭಗೊಂಡ “ಭರ್ಜರಿ ಆಷಾಢ ಸೇಲ್ಸ್” ನ ರಿಯಾಯಿತಿಗಳ ಕೊಡುಗೆಗಳು ಜು.31 ರವರೆಗೆ ನಡೆಯಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಆರೋಗ್ಯವೇ ಮಹಾಭಾಗ್ಯ ಡಾ.ವಿನಯ್ ಕುಮಾರ್ ಹೆಗ್ಡೆ

Article Image

ಆರೋಗ್ಯವೇ ಮಹಾಭಾಗ್ಯ ಡಾ.ವಿನಯ್ ಕುಮಾರ್ ಹೆಗ್ಡೆ

“ಮನುಷ್ಯನಿಗೆ ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಬೇರಿಲ್ಲ. ದೇಹದ ಪ್ರತಿಯೊಂದು ಅಂಗವೂ ಕೂಡ ಆರೋಗ್ಯ ಪೂರ್ಣವಾಗಿದ್ದಾಗ ಮನುಷ್ಯ ಲವಲವಿಕೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯ. ಹಲ್ಲಿನ ಬಗ್ಗೆಯೂ ಕಾಳಜಿ ಅತೀ ಮುಖ್ಯ, ನಿರ್ಲಕ್ಷ ಸಲ್ಲದು” ಎಂದು ಖ್ಯಾತ ದಂತ ವೈದ್ಯ ಡಾ. ವಿನಯ ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು. ಮೂಡಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ‘ಮಕ್ಕಳು ಬಾಲ್ಯದಲ್ಲಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ದಿನನಿತ್ಯದ ದಂತ ಆರೈಕೆಯು ಬಾಯಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ “ವೈದ್ಯೋ ನಾರಾಯಣೋ ಹರಿ” ಎಂಬ ಉಕ್ತಿಗೆ ಬದ್ಧರಾಗಿದ್ದುಕೊಂಡು ಡಾ. ವಿನಯ ಕುಮಾರ್ ಹೆಗ್ಡೆ ಅವರು ಮೂಡಬಿದಿರೆಯ ಜನತೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರಲ್ಲಿರುವ ಕಾಳಜಿ, ನಿಸ್ವಾರ್ಥ ಸೇವಾ ಮನೋಭಾವ ಮುಂತಾದ ಮಾನವೀಯ ಮೌಲ್ಯಗಳು ಇಂದು ಅವರನ್ನು ವೃದ್ಧ, ತರುಣರೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ನೆಚ್ಚಿನ ವೈದ್ಯರನ್ನಾಗುವಂತೆ ಮಾಡಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ವೈದ್ಯರ ಮಹತ್ವವನ್ನು ಮಕ್ಕಳಿಗೆ ಹೇಳಿ ‘ವೈದ್ಯರ ದಿನಾಚರಣೆ’ ಆಚರಣೆಯ ಅಗತ್ಯತೆಯನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ. ವಿನಯ ಕುಮಾರ್ ಹೆಗ್ಡೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವೈದ್ಯರ ಮಹತ್ವದ ಸಂದೇಶವನ್ನು ಸಾರುವ ಹಲವು ಚಟುವಟಿಕೆಗಳ ಮೂಲಕ ಮಕ್ಕಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯಶೀಲ ಹಾಗೂ ಶಿಕ್ಷಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.

ಕಲೆಯ ಜೊತೆಗೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್

Article Image

ಕಲೆಯ ಜೊತೆಗೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್

ಎಕ್ಸಲೆಂಟ್ ವಿದ್ಯಾ ಸಂಸ್ಥೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ನೀವು ಧನ್ಯರು. ವಿದ್ಯಾರ್ಥಿ ಜೀವನ ಬಾಲ್ಯದ ಸುವರ್ಣ ಯುಗ ಚಿನ್ನಕ್ಕೆ ಬಡಿದಷ್ಟು ಆಕಾರ ಮತ್ತು ಹೆಚ್ಚು ಹೊಳಪು ಬರುತ್ತದೆ. ಕಲಾ ಮಾತೆ ಶಾರದೆ ನಮಗೆ ಒಲಿಯದಿದ್ದರೂ ನಾವೂ ಅದರ ಬೆನ್ನ ಹಿಂದೆ ಸಾಗಬೇಕು. ಎಂದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಹೇಳಿದರು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿ ಮುಂದುವರಿದು ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಮರೆಯಬಾರದು, ನಮ್ಮ ಮನೆಯನ್ನು ಪ್ರೀತಿ ಮಾಡಿದಂತೆ ಶಾಲೆಯನ್ನು ಪ್ರೀತಿ ಮಾಡಬೇಕು. ಶಾಲೆ ವಿದ್ಯಾ ದೇಗುಲ. ಸ್ವಂತ ಉದ್ಯೋಗ ಪಡೆದ ನಂತರ ಹೆತ್ತವರನ್ನು ಗುರುಗಳನ್ನು ಶ್ರದ್ಧೆಯಿಂದ ಸ್ಮರಿಸಬೇಕು. ತಂದೆ ತಾಯಿಯನ್ನು ನೋಡಿಕೊಂಡರೆ ಅವರ ಸಂತೋಷದಷ್ಟು ಆರ್ಶೀವಾದ ಇನ್ನೊಂದಿಲ್ಲ. ಪ್ರಪಂಚವನ್ನು ತೋರಿಸಿಕೊಟ್ಟವರು ಅವರು ಅವರೊಂದಿಗೆ ಪ್ರತಿದಿನ ಮಾತನಾಡಬೇಕು. ಪ್ರತಿಯೊಬ್ಬರಲ್ಲಿಯೂ ನನಗೆ ಎಲ್ಲಾ ಗೊತ್ತಿದೆ ಎಂಬ ಅಹಂಕಾರ ಇರಬಾರದು. ಕಲೆಯ ಜೊತೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ “Golden Book of Record holder” ವಿದ್ವಾನ್ ಯಶವಂತ್ ಎಮ್ ಜಿ ಮಾತನಾಡಿ ದೀಪ ಬೆಳಗಬೇಕಾದರೆ ದೇವರ ಅಸ್ತಿತ್ವ ಅತೀ ಮುಖ್ಯ, ಇಚ್ಛಾ ಶಕ್ತಿ, ದೈವೀಶಕ್ತಿ ಮತ್ತು ಆತ್ಮ ವಿಶ್ವಾಸ ಜೊತೆಗಿದ್ದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಆಶ್ರಯ ಕೊಟ್ಟವರಿಗೆ ಯಾವಾಗಲೂ ನಾವೂ ಕೃತಜ್ಞರಾಗಿರಬೇಕು. ಜೀವನದಲ್ಲಿ ಸಾಧನೆ ಮಾಡಲು ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಮತ್ತು ಸಂಸಾರ ಅತೀ ಮುಖ್ಯ. ಸಾಧನೆ ಮಾಡಲು ಒಂದು ಉತ್ತಮ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಆಗಿದೆ. ಅಧ್ಯಯನ ಮಾಡುವಾಗ ನಾನು ದಡ್ಡ ಬೇರೆಯವರು ಜಾಣರು ಎಂಬ ಮನೋಭಾವ ಬಿಡಿ. ನಾವು ನಮ್ಮ ಮೇಲೆ ಆತ್ಮ ವಿಶ್ವಾಸ ಇಟ್ಟು ಹಂತ ಹಂತವಾಗಿ ಸಾಧನೆಯ ಮೆಟ್ಟಿಲು ಹತ್ತಿ ಅಸಾಧಾರಣೆಯ ಸಾಧನೆ ಮಾಡಬಹುದು. ನಮಗೆ ಸಹಾಯ ಮಾಡಿದವರನ್ನು ಸ್ಮರಿಸದಿದ್ದರೆ ಬದುಕು ವ್ಯರ್ಥ. ಮೊದಲು ಕೆಟ್ಟ ಸಮಯ ಇದ್ದರೆ ಮುಂದೆ ಉತ್ತಮ ಸಮಯ ಬಂದೇ ಬರುತ್ತದೆ. ಕಲೆ ಮತ್ತು ಕಲಾವಿದರನ್ನು ಬೆಳೆಸುವ, ಗೌರವಿಸುವ ಗುಣ ಯುವರಾಜ್ ಸರ್ ಮತ್ತು ರಶ್ಮಿತಾ ಮೇಡಂ ಅವರಲ್ಲಿ ಇದೆ ಎಂದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತಾನಾಡಿ, ಕಲೆಯನ್ನು ಕಟ್ಟಿಕೊಂಡು ಜೀವನ ನಡೆಸಬಹುದು, ಕಲೆ ಹೃದಯವನ್ನು ತಟ್ಟಿದ್ದರೆ ಸರಳತೆ ಮನ ಗೆಲ್ಲುತ್ತದೆ. ಇದರಿಂದ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದು. ಸಾಧಕರ ಜೀವನ ನಮಗೆ ಆದರ್ಶವಾಗಬೇಕು. ಕಲೆಯನ್ನು ಜೀವನ ಪೂರ್ತಿ ಅಳವಡಿಸಿಕೊಂಡರೆ ಬದುಕು ಸುಂದರಮಯವಾಗುತ್ತದೆ. ಕಲೆಗೆ ಎಂತಹ ಕಲ್ಲನ್ನು ಶಿಲೆ ಮಾಡುವ ಸಾಮರ್ಥ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಎಲ್ಲರಿಗೂ ಭಗವಂತ ಏನಾದರೂ ಒಂದು ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಪ್ರತಿಭೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅಂತಹ ಕಲೆಗೆ ಮತ್ತು ಕಲಾವಿದರಿಗೆ ಗೌರವವನ್ನು ನೀಡುತ್ತಾ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಗುರಿಗಳನ್ನು ಇಟ್ಟು ಕೊಳ್ಳುವುದಕ್ಕಿಂತ ಒಂದೇ ಗುರಿಯನ್ನು ಬೇರೆ ಬೇರೆ ರೀತಿಯಲ್ಲಿ ಸಾಧಿಸಿ ತೋರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅರವಿಂದ ಬೋಳಾರ್ ಮತ್ತು ಯಶವಂತ್ ಎಂ.ಜೆ. ಅವರನ್ನು ಸಂಸ್ಥೆಯ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ಶಿಕ್ಷಕರು ಹಾಗೂ ಸಂಸ್ಥೆಗೆ ಹೊಸದಾಗಿ ಈ ವರ್ಷ ದಾಖಲಾದ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾರಾದ ಶಿವಪ್ರಸಾದ್ ಭಟ್ ಮತ್ತು ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರು ಶ್ರೀ ಪ್ರಸಾದ್ ಮತ್ತು ಉಪ ಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಜಯಲಕ್ಷ್ಮಿ, ವಿದ್ಯಾರ್ಥಿನಿ ಅದಿತಿ ನಿರೂಪಿಸಿದರು, ಆಕಾಂಕ್ಷ್ ಜೈನ್ ಸ್ವಾಗತಿಸಿ, ನಕ್ಷತ್ರ ವಂದಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ

ಉಜಿರೆ, ಜೂ.30: ಶಿಕ್ಷಣ ದೊಡ್ಡ ಶಕ್ತಿಯಾಗಿದ್ದು, ಜ್ಞಾನದ ಜೊತೆಗೆ ಕೌಶಲಗಳನ್ನು ಹೊಂದಿ ಸಮಾಜವನ್ನು ಎದುರಿಸುವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಎರಡು ದಿನದ ಪ್ರಶಿಕ್ಷಣ ಕಾರ್ಯಕ್ರಮವನ್ನು ಜೂ.30ರಂದು ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಆಸ್ತಿವಂತರು, ಹಣವಂತರು ಶಕ್ತಿಶಾಲಿ, ಶ್ರೀಮಂತರೆಂದು ಪರಿಗಣಿಸಲ್ಪಟ್ಟಿದ್ದರೆ, ಪ್ರಸ್ತುತ ಕಾಲದಲ್ಲಿ ಜ್ಞಾನವಂತರು ಭೌತಿಕ ಮತ್ತು ಬೌದ್ಧಿಕವಾಗಿ ಶಕ್ತಿಶಾಲಿಗಳು, ಶ್ರೀಮಂತರೆಂದು ಪರಿಗಣಿಸಲ್ಪಡುತ್ತಾರೆ. ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ಆ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಪದವಿ ಶಿಕ್ಷಣವು ಜವಾಬ್ದಾರಿಯುತ ಘಟ್ಟವಾಗಿದ್ದು, ಬೋಧಕರೇ ಎಲ್ಲವನ್ನೂ ಕಲಿಸಬೇಕಾಗಿಲ್ಲ. ವಿದ್ಯಾರ್ಥಿಗಳು ಲಭ್ಯ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಂಡು ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಹಯೋಗ ಮತ್ತು ಸಂವಹನ ಕೌಶಲದ ಮೂಲಕ ನಿಜ ಜೀವನದ ಸಮಸ್ಯೆಗಳನ್ನು ಎದುರಿಸಲು ಶಕ್ತರಾಗಬೇಕು ಎಂದು ಅವರು ಸಲಹೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳವು ಶಿಕ್ಷಣ ಸಂಸ್ಥೆ (ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ) ಮೂಲಕ ಗುಣಮಟ್ಟದ ಶಿಕ್ಷಣ, ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡುತ್ತ ಶಿಕ್ಷಣ ಯಜ್ಞ ನಡೆಸುತ್ತಿದೆ. ದೇಶದ ಸುಮಾರು 1,350 ವಿವಿಗಳ ಅಧೀನದ 50-52 ಸಾವಿರ ಕಾಲೇಜುಗಳಲ್ಲಿ ಉನ್ನತ 100 ಕಾಲೇಜುಗಳ ಪೈಕಿ ಎಸ್.ಡಿ.ಎಂ. ಕಾಲೇಜು ಒಂದೆಂದು ಗುರುತಿಸಲ್ಪಟ್ಟಿದೆ. ಕಡಿಮೆ ಶುಲ್ಕ, ನುರಿತ ಬೋಧಕ ವರ್ಗ, ಪಠ್ಯೇತರ ಚಟುವಟಿಕೆಗೆ ಅವಕಾಶ ಇತ್ಯಾದಿ ವ್ಯವಸ್ಥೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನ, ಬೌದ್ಧಿಕ ವಿಕಸನಕ್ಕೆ ಒತ್ತು ನೀಡುತ್ತಿದೆ ಎಂದರು. ಮುಖ್ಯ ಅತಿಥಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಮಾತನಾಡಿದರು. ಮಾಹಿತಿ ಪೂರಕ್ಕೆ ಸಿಲುಕಿರುವ ಯುವ ಪೀಳಿಗೆ ಅಗತ್ಯವಾದುದನ್ನು ಅರಗಿಸಿಕೊಂಡು ಕಲಿಕೆಯನ್ನು ಒರೆಹಚ್ಚಿ ನೋಡುವ ಪ್ರಯತ್ನ ಮಾಡಬೇಕು ಎಂದರು. ಎಲ್ಲವೂ ತಿಳಿದಿದೆ ಎಂಬ ಅಹಂ ಬಿಟ್ಟು, ಕಲಿಕೆಯತ್ತ ಮನಸ್ಸು ಮಾಡಬೇಕು. ಅಂಧಾನುಕರಣೆ ಬಿಟ್ಟು ಜ್ಞಾನವಂತರನ್ನು ಹಿಂಬಾಲಿಸಬೇಕು. ಸಮಾಜಕ್ಕೆ ಪ್ರಯೋಜನಕಾರಿ ಜ್ಞಾನವಂತರಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಮೌಲ್ಯ ಕಲಿಕೆ ನಮ್ಮ ಆಶಯವಾಗಿದ್ದು, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಪೂರಕವಾದ ವ್ಯವಸ್ಥೆಗಳು ನಮ್ಮಲ್ಲಿವೆ. ಆದರೆ ಅಂತಿಮವಾಗಿ ಪರಿಶ್ರಮವೆಂಬುದು ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅವಕಾಶಗಳನ್ನು ವರವಾಗಿ ಪರಿವರ್ತಿಸಿಕೊಳ್ಳಬೇಕು. ಪೋಷಕರೂ ತಮ್ಮ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ಗಮನ ಇರಿಸಬೇಕು ಎಂದರು. ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಎಸ್. ಎನ್. ಕಾಕತ್ಕರ್, ಕಾಲೇಜಿನ ಉಪ ಪ್ರಾಂಶುಪಾಲೆ ನಂದಕುಮಾರಿ, ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಜಿ. ಆರ್. ಭಟ್ ಉಪಸ್ಥಿತರಿದ್ದರು. ಸುಪ್ರೀತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಶಿಸ್ತುಪಾಲನ ಸಮಿತಿ ಸಂಯೋಜಕ ನಟರಾಜ್ ಎಚ್. ಕೆ. ಸ್ವಾಗತಿಸಿ, ಮುಖ್ಯ ಸಂಯೋಜಕ ಶ್ರೇಯಸ್ ಬಿ. ವಂದಿಸಿದರು. ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.

ಜಾಗೃತಿ ಕಾರ್ಯಕ್ರಮ

Article Image

ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಣಿಕೆ ತಡೆ ದಿನ’ದಂದು ಆಳ್ವಾಸ್ ಹೋಮಿಯೋಪತಿ ಕಾಲೇಜು ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ ಪೋಲೀಸ್ ಠಾಣಾ ಉಪನಿರೀಕ್ಷಕಿ ಪ್ರತಿಭಾ ಮಾತನಾಡಿ, ಮಾದಕ ದ್ರವ್ಯಗಳ ವ್ಯಸನಕ್ಕೆ ಹೆಚ್ಚಾಗಿ ಯುವಕರು ಮತ್ತು ಯುವತಿಯರು ಬಲಿಯಾಗುತ್ತಿದ್ದಾರೆ. ಇವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಇದರಿಂದ ಕೇವಲ ಸೇವಿಸುವವನಿಗೆ ಮಾತ್ರವಲ್ಲ, ಸಮಾಜಕ್ಕೂ ತೊಂದರೆಯಾಗುತ್ತಿದೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಾದ ಕಳ್ಳತನ, ಕೊಲೆ, ಅತ್ಯಾಚಾರ ಇತ್ಯಾದಿಗಳಿಗೆ ತೊಡಗಿರುವ 70% ಆರೋಪಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿರುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪುನರ್ಜನ್ಮ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಆಳ್ವ, ‘2019ರಲ್ಲಿ ಭಾರತದಲ್ಲಿ ನಡೆದ ಸಮೀಕ್ಷೆಯ ಪ್ರಕಾರ 17 ಕೋಟಿ ಮದ್ಯಪಾನ, 5.1 ಕೋಟಿ ಓಪಿಯಂ, 3.2 ಕೋಟಿ ಗಾಂಜಾ ಸೇವಿಸುವವರಿದ್ದು, ಆದರೆ ಕೇವಲ 612 ನೋಂದಾಯಿಸಲ್ಪಟ್ಟ ದುಶ್ಚಟ ನಿವಾರಣಾ ಕೇಂದ್ರಗಳಿವೆ. ಇವುಗಳ ನಡುವೆ ಇರುವ ವ್ಯತ್ಯಾಸ ದುಶ್ಚಟ ನಿವಾರಣಾ ಕೇಂದ್ರಗಳಿಗಿರುವ ಬೇಡಿಕೆಯನ್ನು ತಿಳಿಸುತ್ತದೆ. ಮಾದಕ ದ್ರವ್ಯಗಳ ವ್ಯಸನ ಒಂದು ಸಾಂಕ್ರಾಮಿಕ ರೋಗ. ಅದು ಕೇವಲ ವ್ಯಕ್ತಿಯಲ್ಲಿ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ನಾವೆಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿ, ಮುನ್ನಡೆಯಬೇಕು ಎಂದರು. ಬೆಳ್ತಂಗಡಿ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ನಮ್ಮ ಕಣ್ಣ ಮುಂದಿರುವ ಅತೀ ದೊಡ್ಡ ಶತ್ರು ಮಾದಕ ವಸ್ತುಗಳು. ಮಾನವರು ಸಾಮಾನ್ಯವಾಗಿ ಕೆಟ್ಟ ಚಟಗಳೆಡೆಗೆ ಬೇಗನೆ ಆಕರ್ಷಿತರಾಗುತ್ತಾರೆ. ಶರೀರ ಒಂದು ಕಾರ್ಖಾನೆಯಂತೆ. ದೇಹಕ್ಕೆ ನೀಡುವ ಪದಾರ್ಥಗಳ ಮೇಲೆ ಅದು ವರ್ತಿಸಲಾರಂಭಿಸುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ದೇಹದ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಲಾಗದೆ ಆರೋಗ್ಯ ಹದಗೆಡುತ್ತದೆ, ಮನಸ್ಸೂ ಅಶಾಂತವಾಗುತ್ತದೆ. ದುಶ್ಚಟಗಳಿಗೆ ಒಳಗಾದವರು ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸುಧಾರಿಸುವುದಿಲ್ಲ. ಮನಸ್ಥಿತಿ ಉತ್ತಮವಿದ್ದಲ್ಲಿ ಮಾತ್ರ ಪರಿಸ್ಥಿತಿಯ ಉತ್ತಮವಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ ರೋಷನ್ ಪಿಂಟೋ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಳ್ವಾಸ್ ಪುರ್ನಜನ್ಮದ ಆಪ್ತಸಮಾಲೋಚಕಿ ಸುಮನ್ ಪಿಂಟೋ ಸ್ವಾಗತಿಸಿ, ಬೆನ್ಸನ್ ಡಿಸೋಜ ವಂದಿಸಿ, ಮುಖ್ಯ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ ನಿರೂಪಿಸಿದರು.

ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ಫೋರಮ್‌ನ ಸಮಾರೋಪ ಸಮಾರಂಭ

Article Image

ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ಫೋರಮ್‌ನ ಸಮಾರೋಪ ಸಮಾರಂಭ

ವಿದ್ಯಾಗಿರಿ: ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನಕ್ಕೆ ಕಾಲಿಡುವ ಪ್ರತಿ ವಿದ್ಯಾರ್ಥಿಯೂ ಸಂದರ್ಶನವನ್ನು ಎದುರಿಸುವ ಕಲೆಯನ್ನು ಕರಗತ ಪಡಿಸಿಕೊಂಡಿರಬೇಕು. ಪ್ರತಿ ನಿರ್ಧಾರವನ್ನು ಜಾಗರೂಕತೆಯಿಂದ ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ಸುಲಭ ಸಾಧ್ಯ ಎಂದು ಬನ್ನಡ್ಕ ಎಸ್ ಕೆಎಫ್ ಎಲಿಕ್ಸರ್ ಪ್ರೈವೇಟ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ವಿವೇಕ್ ವಲ್ಲಭ್ ನುಡಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ "ಸಮಾಜಕಾರ್ಯ ಫೋರಮ್‌ನ’ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವೃತ್ತಿ ಬದುಕಿಗೆ ಕಾಲಿಡುವಾಗ ವೃತ್ತಿಪರತೆಯನ್ನು ರೂಡಿಸಿಕೊಳ್ಳುವುದರೊಂದಿಗೆ ಹೊಸ ಉದ್ಯಮಕ್ಕಿಂತ ಸ್ಥಾಪಿತ ಕಂಪನಿಗೆ ಸೇರುವುದು ಉತ್ತಮ. ಪ್ರತಿ ಹಂತದಲ್ಲೂ ಅಲ್ಲಿ ಸಿಗುವ ವೃತ್ತಿಯ ಅನುಭವ ಮತ್ತಷ್ಟು ವೈಯಕ್ತಿಕ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸಮಾಜಕಾರ್ಯ ಎನ್ನುವುದು ಎಂದಿಗೂ ಸಮುದಾಯವನ್ನು ಕಟ್ಟುವ ಮತ್ತು ಅಭಿವೃದ್ಧಿ ಪೋಷಿಸುವ ಕಾರ್ಯದಲ್ಲಿ ತನ್ನೊಂದಿಗೆ ತನ್ನವರನ್ನು ಬೆಳೆಸುವ ಕ್ಷೇತ್ರ. ಹಾಗಾಗಿ ಎಂತಹ ಪರಿಸ್ಥಿಯಲ್ಲಿಯೂ ಮನುಷತ್ವವನ್ನು ಮರೆತು ವರ್ತಿಸದಿರಿ. ನಿಮ್ಮ ಸುತ್ತಮುತ್ತಲಿನ ಸಮುದಾಯದ ಒಳಿತಿಗೆ ಸದಾ ಶ್ರಮಿಸುತ್ತಿರಿ ಎಂದು ಆಳ್ವಾಸ್ (ಸ್ವಾಯತ್ತ ) ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಶುಭ ಹಾರೈಸಿದರು. ಬಳಿಕ, ಅತ್ಯುತ್ತಮ ಸಮಾಜಕಾರ್ಯ ವಿದ್ಯಾರ್ಥಿ ಹಾಗೂ ಸಮುದಾಯ ಶಿಬಿರದ ಅತ್ಯುತ್ತಮ ಶಿಬಿರಾರ್ಥಿ ಪ್ರಶಸ್ತಿಯನ್ನು ಕ್ರಮವಾಗಿ ಲಾವಣ್ಯ ಹಾಗೂ ಮಹೇಶ್‌ಗೆ ನೀಡಿ ಅಭಿನಂದಿಸಲಾಯಿತು. ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ ಮಧುಮಾಲ ಕೆ, ಸಮಾಜಕಾರ್ಯ ಫೋರಮ್ ಸಂಯೋಜಕ ಕೃಷ್ಣಮೂರ್ತಿ ಬಿ, ವಿದ್ಯಾರ್ಥಿ ಸಂಯೋಜಕ ಶ್ರೇಯಸ್, ಫೋರಮ್ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

ಉಜಿರೆ: ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

Article Image

ಉಜಿರೆ: ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಡಿ. ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 22-06-2025ನೇ ಆದಿತ್ಯವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ ನಡೆಯಿತು. ಜನರಲ್ ಸರ್ಜನ್ ಡಾ| ಕಿರಣ್ ಕುಮಾರ್ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಂತ ನಗರದ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯ ಈ ಗ್ರಾಮೀಣ ಆಸ್ಪತ್ರೆಯಲ್ಲಿ ದೊರೆಯುತ್ತದೆ. ಇಲ್ಲಿನ ವೈದ್ಯಕೀಯ ಸೇವೆ ನಗರದ ಆಸ್ಪತ್ರೆಗಳಿಗೆ ಸಮಾನವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡುತ್ತಾ, ಒಳ್ಳೆಯ ಮನಸ್ಸು ಮತ್ತು ಸೇವಾ ಮನೋಭಾವ ಹೊಂದಿರುವ ಅನುಭವಿ ತಜ್ಞ ವೈದ್ಯರ ತಂಡ, ತರಬೇತಿ ಹೊಂದಿದ ನುರಿತ ದಾದಿಯರು ಮತ್ತು ಟೆಕ್ನಿಶಿಯನ್ಸ್ ಇಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇಲ್ಲಿ ನಡೆಸಲಾಗುವ ಉಚಿತ ಶಿಬಿರಗಳ ಮೂಲಕ ಹಲವಾರು ಮಂದಿಯ ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗಿದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಜನರಲ್ ಸರ್ಜನ್ ಡಾ| ಬಾಲಾಜಿ ಪ್ರಭಾಕರನ್ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಶಿಬಿರದಲ್ಲಿ ಸಾಮಾನ್ಯ ಶಸ್ತçಚಿಕಿತ್ಸಾ ತಪಾಸಣೆ, ಹರ್ನಿಯಾ (ಕಿಬ್ಬೊಟ್ಟೆ, ತೊಡೆಸಂದು, ಹೊಕ್ಕಳು) ಕಡಿಮೆ ಮಾಡಬಹುದಾದ ಊತ, ಪಿತ್ತಕೋಶದ ಕಲ್ಲುಗಳು, ಕಿಬ್ಬೊಟ್ಟೆಯ ನೋವು, ಕಾಮಾಲೆ, ಅಪೆಂಡಿಸೈಟಿಸ್ (ಕೆಳಗಿನ ಬಲ ಹೊಟ್ಟೆ ನೋವು), ಮೂಲವ್ಯಾದಿ, ಪಿಸ್ತುಲಾ, ವೃಷಣಗಳ ನೋವು ರಹಿತ ಊತ, ಚರ್ಮದ ಗಾಯಗಳು ಮತ್ತು ಗೆಡ್ಡೆಗಳ ತಪಾಸಣೆ ನಡೆಸಲಾಯಿತು. 75ಕ್ಕಿಂತಲೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.

ಮೂಡುಬಿದಿರೆ: ಯೋಗ ಸಂಗಮ -2025

Article Image

ಮೂಡುಬಿದಿರೆ: ಯೋಗ ಸಂಗಮ -2025

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕಾಲೇಜು, ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ‘ಯೋಗ ಸಂಗಮ -2025’ ಕಾರ‍್ಯಕ್ರಮ ನಡೆಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳ 1500 ವಿದ್ಯಾರ್ಥಿಗಳು ಏಕಕಾಲದಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲನ್ನು ಅನುಸರಿಸಿ 45 ನಿಮಿಷಗಳ ಸಾಮೂಹಿಕ ಯೋಗ ಪ್ರದರ್ಶನವನ್ನು ನೀಡಿದರು. ದೇಶದ ಒಂದು ಲಕ್ಷಕ್ಕೂ ಅಧಿಕ ಭಾಗಗಳಲ್ಲಿ ಈ ಯೋಗ ಸಂಗಮ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಅನಂತ ಕೃಷ್ಣ ಸಿ. ವಿ ಮತ್ತು ತ್ರಿಶಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ನ್ಯಾಚುರೋಪತಿ ವಿಭಾಗದ ಪ್ರಾಂಶುಪಾಲ ಡಾ. ವನಿತಾ ಶೆಟ್ಟಿ, ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ.ಸಜಿತ್ ಎಂ, ಆಳ್ವಾಸ್ ಫಾರ್ಮಸಿ ಕಾಲೇಜಿನ ಪ್ರಾಚರ‍್ಯ ಡಾ.ಮಂಜುನಾಥ ಸೆಟ್ಟಿ, ಆಳ್ವಾಸ್ ದೈಹಿಕ ಶಿಕ್ಷಣ ಸ್ನಾತಕೋತ್ತರ ಕಾಲೇಜಿನ ಡಾ. ಮಧು ಜಿ ಆರ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಉಪ ಪ್ರಾಂಶುಪಾಲೆ ಹಾಗೂ ಯೋಗ ವಿಭಾಗದ ಮುಖ್ಯಸ್ಥ ಡಾ. ವಿದ್ಯಾ ನ್ಯಾಚುರೋಪತಿ ಮತ್ತು ಯೋಗ ವಿಭಾಗದ ಡೀನ್. ಡಾ.ಅರ್ಚನಾ ಇದ್ದರು.

2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅಂಕುರ

Article Image

2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಅಂಕುರ

ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ) ವತಿಯಿಂದ 2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ 'ಅಂಕುರ' ಆಳ್ವಾಸ್ ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಶಿಕ್ಷಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳಿದ್ದ ಮಾತ್ರಕ್ಕೇ ಶ್ರೇಷ್ಠ ವೆನಿಸಿಕೊಳ್ಳಲಾರವು. ಆ ಕಟ್ಟಡಗಳಿಗೆ ಜೀವಕಳೆ ವಿದ್ಯಾರ್ಥಿಗಳಿಂದ ಮಾತ್ರ ತುಂಬಲು ಸಾಧ್ಯ. ಅಂತಹ ವಿದ್ಯಾರ್ಥಿ ಸಮೂಹ ನೀವಾಗಬೇಕು. ಆಳ್ವಾಸ್ ನ ವಿದ್ಯಾರ್ಥಿಗಳೇ ‘ಆಳ್ವಾಸ್ ಬ್ರ್ಯಾಂಡ್’ ಎಂದರು. ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಸೇರುವ ಮೂಲ ಉದ್ದೇಶವನ್ನು ಅರಿಯಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ಸಮಕಾಲೀನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಪ್ರಪಂಚದ ಆಧುನಿಕ ಅಗತ್ಯಗಳಿಗೆ ತಕ್ಕಂತಹ ಜ್ಞಾನ ಮತ್ತು ಕೌಶಲಗಳನ್ನು ಸದಾ ನೀಡುತ್ತಿದೆ. ಸ್ವಾಯತ್ತ ಕಾಲೇಜಿನ ನೆಲೆಯಲ್ಲಿ ನಿತ್ಯ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆ, ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳಿಗೆ ತಕ್ಕಂತೆ ಪಠ್ಯ ಕ್ರಮವನ್ನು ರೂಪಿಸಲಾಗುತ್ತಿದೆ. ಇವು ವಿದ್ಯಾರ್ಥಿಗಳಲ್ಲಿ ವಾಸ್ತವಿಕ ಜ್ಞಾನ, ತಂತ್ರಜ್ಞಾನಾಧಾರಿತ ಕೌಶಲಗಳು, ಸೃಜನಾತ್ಮಕತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಸಾಮರ್ಥ್ಯಗಳನ್ನು ಬೆಳೆಸುತ್ತದೆ ಎಂದರು. ಆಳ್ವಾಸ್ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪದವಿ ಹಂತದಲ್ಲಿ ಪೋಷಕರು ಮಕ್ಕಳ ಬೆಳೆವಣಿಗೆಯನ್ನು ಹತ್ತಿರದಿಂದ ಗಮನಿಸುವ ಕೆಲಸವನ್ನು ಮಾಡಬೇಕು. ಈ ಮೂರು ವರ್ಷ ಬರೀ ಶಿಕ್ಷಣ ಮಾತ್ರವಲ್ಲದೇ ಅದರ ಹೊರತಾಗಿ ಸಾಮರ್ಥ್ಯಗಳ ವೃದ್ಧಿಯತ್ತಾ ಗಮನಕೊಡಬೇಕು. ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಎರಡು ಗಂಟೆಯಾದರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನೊಂದಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿಕೊಂಡು ಕೆಲಸ ಮಾಡಿದಾಗ ಅದ್ಭುತವನ್ನು ಸೃಷ್ಟಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ) ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ . ರವೀಂದ್ರನ್, ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ

Article Image

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರ

ಉಜಿರೆ, ಜೂನ್ 18: ಭಾರತದ ಸಮೃದ್ಧ ಜ್ಞಾನ ಪರಂಪರೆಯ ಹಲವು ವಿಶೇಷತೆಗಳ ಸೊಗಡಿನ ರಕ್ಷಣೆಗೆ ಬೌದ್ಧಿಕ ಆಸ್ತಿ ಹಕ್ಕು ಸಹಾಯಕವಾಗುತ್ತದೆ ಎಂದು ನಿಟ್ಟೆ ಡೀಮ್ಡ್ ಟುಬಿ ಯುನಿವರ್ಸಿಟಿಯ ಎನ್‌ಎಂಎಎಂ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿ ಮಾನವಿಕ ವಿಭಾಗದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಬಿ. ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ‘ಇನ್ನೋವೇಟ್ ಆ್ಯಂಡ್ ಪ್ರೊಟೆಕ್ಟ್: ಪೇಟೆಂಟ್ಸ್, ಟ್ರೇಡ್‌ಮಾರ್ಕ್ಸ್, ಪಬ್ಲಿಷಿಂಗ್ ರೈಟ್ಸ್’ ಕುರಿತು ಬುಧವಾರ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಪಾರಂಪರಿಕ ಜ್ಞಾನ ಅಗಾಧವಾದುದು. ಈ ಜ್ಞಾನದ ಆವರಣದಲ್ಲಿ ಲಭ್ಯವಾಗಿರುವ ಅಪರೂಪದ ಮಾದರಿಗಳನ್ನು ಕದ್ದು ತಮ್ಮದೆಂದು ಪ್ರತಿಪಾದಿಸುವ ಪ್ರಯತ್ನಗಳು ವಿಶ್ವಮಟ್ಟದಲ್ಲಿ ಆಗುತ್ತಿವೆ. ಇಂತಹ ಪ್ರಯತ್ನಗಳನ್ನು ತಡೆದು ಭಾರತದ್ದೇ ಆದ ಪಾರಂಪರಿಕ ಜ್ಞಾನದ ಅಸ್ಮಿತೆಯನ್ನು ಎತ್ತಿಹಿಡಿಯುವುದಕ್ಕೆ ಬೌದ್ಧಿಕ ಆಸ್ತಿ ಹಕ್ಕು ಪೂಕರವಾಗಿರುವುದು ವಿವಿಧ ಪ್ರಕರಣಗಳಲ್ಲಿ ದೃಢವಾಗಿದೆ ಎಂದರು. ಜಪಾನ್ ನಮ್ಮ ಗಾಯಿತ್ರಿ ಮಂತ್ರ ತನ್ನದೆಂದು ಹೇಳಿಕೊಂಡು ಪೇಟೆಂಟ್ ಪಡೆಯಲು ಮುಂದಾಗಿತ್ತು. ಅರಿಷಿಣದ ಚಿಕಿತ್ಸಕ ಗುಣದ ವಿಶೇಷತೆಯನ್ನು ಅರಿತು ಅಮೆರಿಕದವರು ತಮ್ಮದೆಂದು ವಾದಿಸಿ ಪೇಟೆಂಟ್ ಪಡೆಯಲು ಮುಂದಾಗಿದ್ದರು. ಅರೇಬಿಕ್ ಸಾಹಿತ್ಯದಲ್ಲಿ ಉಲ್ಲೇಖಿತ ವಿವರವೊಂದು ಅರಿಷಿಣ ಭಾರತದ್ದು ಎಂಬುದನ್ನು ಸಾಬೀತುಪಡಿಸಿತ್ತು. ಭಾರತದ ಜ್ಞಾನ ಪರಂಪರೆಯ ಒಳಗೆ ಲಭ್ಯವಿರುವ ಇಂತಹ ಹಲವು ಪ್ರಯೋಜನಕಾರಿ ಅಂಶಗಳನ್ನು ಪತ್ತೆ ಹಚ್ಚಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮದನ್ನಾಗಿಸಿಕೊಳ್ಳುವ ಹುನ್ನಾರ ನಡೆಸುತ್ತಿವೆ. ಇಂತಹ ಹುನ್ನಾರಗಳಿಗೆ ತಡೆಯೊಡ್ಡುವ ಏಕೈಕ ಮಾರ್ಗ ಎಂದರೆ ಬೌದ್ಧಿಕ ಆಸ್ತಿ ಹಕ್ಕಿನ ಸಮರ್ಪಕ ಬಳಕೆ ಮತ್ತು ಅನ್ವಯಿಸಿಕೊಳ್ಳುವಿಕೆ ಎಂದು ಅವರು ತಿಳಿಸಿದರು. ಈಗಾಗಲೇ ಭಾರತೀಯ ಜ್ಞಾನ ಪರಂಪರೆಯ ವೈವಿಧ್ಯಮಯ ಅಂಶಗಳನ್ನು ಕಳೆದುಕೊಂಡಿದ್ದೇವೆ. ಇದೀಗ ಎಚ್ಚೆತ್ತುಕೊಳ್ಳುವ ಕಾಲ. ಮುಂಬರುವ ದಿನಗಳಲ್ಲಿ ನಮ್ಮ ಭಾರತೀಯ ಜ್ಞಾನದ ವಿಭಿನ್ನ ಅಂಶಗಳನ್ನು ಗೊತ್ತುಮಾಡಿಕೊಂಡು ಅವುಗಳ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವ ಉಳಿದ ದೇಶಗಳ ಹುನ್ನಾರಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ವಿಶೇಷ ನಿಗಾವಹಿಸಿ ಕಟ್ಟುನಿಟ್ಟಿನ ಹೆಜ್ಜೆಗಳನ್ನಿರಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪಿ ಶೈಕ್ಷಣಿಕ ಕಲಿಕೆಯೊಂದಿಗೆ ಸಂಶೋಧನಾತ್ಮಕ ಹೆಜ್ಜೆಗಳಿಗೂ ಹೆಚ್ಚಿನ ಆದ್ಯತೆ ನೀಡುವ ಟ್ರೆಂಡ್‌ಗೆ ಅನುಗುಣವಾಗಿ ಎಸ್.ಡಿ.ಎಂ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ದೇಶದ ಶೈಕ್ಷಣಿಕ ವಲಯವು ಸಂಶೋಧನೆಯನ್ನು ಪ್ರಧಾನ ಆದ್ಯತೆಯ ಭಾಗವಾಗಿ ಪರಿಗಣಿಸುತ್ತಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಂಶೋಧನೆಯ ಬಹು ಆಯಾಮಗಳನ್ನು ಪರಿಚಯಿಸುವ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ ಎಂದರು. ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಅವರು ಸ್ವಾಗತಿಸಿದರು. ಡಾ. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಘಟಕದ ಸಂಘಟನಾ ಕಾರ್ಯದರ್ಶಿ ಡಾ. ನೆಫಿಸತ್ ವಂದಿಸಿದರು. ಉದ್ಘಾಟನಾ ಸಮಾರಂಭದ ‘ಪೇಟೆಂಟಿಂಗ್ ಟು ಪ್ರೊಟೆಕ್ಟ್ ದ ಇಂಟಲೆಕ್ಚುವಲ್ ಪ್ರಾಪರ್ಟಿ, ಐಪಿ ಮ್ಯಾನೇಜ್‌ಮೆಂಟ್ ಫಾರ್ ಸ್ಟಾರ್ಟ್ಅಪ್ಸ್’ ಕುರಿತು ಡಾ.ರಾಮಕೃಷ್ಣ ಬಿ ವಿಚಾರಗಳನ್ನು ಮಂಡಿಸಿದರು.

ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

Article Image

ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಮೂಡುದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ, ಮೂಡಬಿದಿರೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆಯ ಮೂಲಕ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ದಕ್ಷಿಣ ಕನ್ನಡದ ಜಿಲ್ಲೆಯ 8 ತಾಲೂಕುಗಳಲ್ಲಿ ಮೂಡುಬಿದಿರೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ‍್ಯನಿರ್ವಹಿಸುತ್ತಿದೆ. ಮೂಡುಬಿದಿರೆಯಲ್ಲಿ ಅಸೋಸಿಯೇಶನ್ ನಿರ್ಮಾಣವಾಗುವುದರ ಮೂಲಕ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ, ಹಿಂದಿನ ಕಾಲದಲ್ಲಿ ಹೆಚ್ಚಿನ ಖರ್ಚಿಲ್ಲದೆ ಆಡುತ್ತಿದ್ದ ಆಟ ಕಬಡ್ಡಿ. ಇದೊಂದು ಹಳ್ಳಿಯ ಕ್ರೀಡೆ. ಪ್ರೋಕಬ್ಬಡಿ ಬಂದ ನಂತರ ಇದರ ಖ್ಯಾತಿ ಹಾಗೂ ಆಟಗಾರರಿಗೆ ಮನ್ನಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಲಭಿಸುತ್ತಿದೆ. ಮೂಡುಬಿದಿರೆ ತಾಲೂಕಿನ ನೂತನ ಅಧ್ಯಕ್ಷರು, ಯುವಕರು ಹಾಗೂ ಹಿಡಿದ ಕೆಲಸವನ್ನು ಅಷ್ಟೇ ಆಸ್ಥೆಯಿಂದ ಮಾಡುವವರು. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಖ್ಯಾತಿಗೊಳ್ಳಲಿ ಎಂದು ಆಶಿಸಿದರು. ತಾಲೂಕು ಕಬಡ್ಡಿ ಅಸೋಸಿಯೇಶನ್ ಮಹಾಪೋಷಕರು ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ನಾನೊಬ್ಬ ಕ್ರೀಡಾಪಟುವಿನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ತನ್ನ ತಂದೆ 1926ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು. 1929ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿಯವರೊಂದಿಗೆ ಕ್ರಿಕೆಟ್ ಆಡಿದ್ದರು. ಆ ಹಿನ್ನಲೆಯಿಂದ ನಾನು ಕ್ರೀಡಾಸಚಿವನಾಗಿದ್ದ ಸಂದರ್ಭದಲ್ಲಿ ಕ್ರೀಡಾ ಕ್ಷೇತಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಹಕಾರಿಯಾಯಿತು. ನಾವೆಲ್ಲ ರಾಜಕೀಯವನ್ನು ಬದಿಗಿಟ್ಟು ಕ್ರೀಡಾಪಟುಗಳಿಗೆ ಬೆಂಬಲವನ್ನ ನೀಡುವ ಕೆಲಸ ಮಾಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯವನ್ನ ರೂಪಿಸಿಕೊಳ್ಳಬಹುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಮೂಡಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ನಿಯೋಜಿತ ಅಧ್ಯಕ್ಷ ವಿವೇಕ್ ಆಳ್ವ ಮಾತನಾಡಿ, ನಮ್ಮ ಸಂಸ್ಥೆ ಹಾಗೂ ಸಂಸ್ಥೆಯ ಅಧ್ಯಕ್ಷರು ಕ್ರೀಡೆಗೆ ನೀಡಿದ ಕೊಡುಗೆಯಿಂದ ನನಗೆ ಈ ಗೌರವ ಲಭಿಸಿದೆ. ವಿವಿಧ ಸಂಘ ಸಂಸ್ಥೆಗಳಿಂದ ಉನ್ನತ ಹುದ್ದೆಯ ಅವಕಾಶಗಳು ಬಂದಾಗ ಸದಾ ನಿರಾಕರಿಸುತ್ತಾ ಬಂದ ನಾನು, ಈ ಹುದ್ದೆಯನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದೇನೆ. ದಕ್ಷಿಣ ಕನ್ನಡದಲ್ಲಿ ಕಬಡ್ಡಿಗೆ ವಿಶೇಷ ಸ್ಥಾನವಿದೆ. ಈ ಕ್ರೀಡೆಯ ಮೂಲಕ ಯುವ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಕೆಲಸವನ್ನು ನಾವೆಲ್ಲ ಜೊತೆಯಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ಮೂಡುಬಿದಿರೆಯ 30 ಶಾಲೆಗಳ ವಿದ್ಯಾರ್ಥಿಗಳಿಗೆ ಕಬಡ್ಡಿ ಕ್ಷೇತ್ರಕ್ಕೆ ಬೇಕಾದ ಅಗತ್ಯ ತರಬೇತಿ ಹಾಗೂ ಸೌಲಭ್ಯವನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಶಾಸಕರಾದಿಯಾಗಿ ಎಲ್ಲಾ ಮಹಾಪೋಷಕರು ಸಹಕಾರವನ್ನು ನೀಡುವಂತೆ ಕೋರಿಕೊಂಡರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಮಾಹಾಪೋಷಕರುಗಳಾದ ಶ್ರೀಪತಿ ಭಟ್, ತಿಮ್ಮಯ ಶೆಟ್ಟಿ, ಸುನಿಲ್ ಆಳ್ವ, ನಾರಾಯಣ ಪಿಎಂ, ಪ್ರೇಮನಾಥ ಶೆಟ್ಟಿ, ಅಬುಲಾಲ್, ಸುಚರಿತ ಶೆಟ್ಟಿ, ಸುದರ್ಶನ್ ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಶಿಯೇಶನ್ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಮೂಡಬಿದಿರೆ ತಾಲೂಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಕಾರ್ಯಧ್ಯಕ್ಷ ಪ್ರಮೋದ್ ಸ್ವಾಗತಿಸಿ, ಕಾರ್ಯದರ್ಶಿ ಹಂಸವತಿ ಸಿಎಚ್ ವಂದಿಸಿ, ಸದಸ್ಯ ನವೀನ್ ಅಂಬೂರಿ ನಿರೂಪಿಸಿದರು.

First Previous

Showing 2 of 7 pages

Next Last