Article Image

ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು

Article Image

ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು

ಉಜಿರೆ, ಮಾ.12: ಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ಪಠ್ಯವಲ್ಲ, ಅದು ಅವರ ಸಶಕ್ತೀಕರಣದ ಸಾಧನ. ಪ್ರಸ್ತುತ ಹೆಣ್ಣುಮಕ್ಕಳು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಹೆಣ್ಣು ಶಕ್ತಿಯಾದಾಗ ಸಮಾಜ ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದು (ಮಾ. 12) ಮಹಿಳಾ ಕುಂದುಕೊರತೆ ನಿವಾರಣಾ ಕೋಶ, ಆಂತರಿಕ ದೂರುಗಳ ಸಮಿತಿ, ಮಹಿಳಾ ಅಭಿವೃದ್ಧಿ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. “ಮಹಿಳೆ ಎಂದರೆ ಕೇವಲ ಗೃಹಿಣಿಯಲ್ಲ, ಅವಳು ಧೈರ್ಯ, ಸಾಹಸ, ಛಲದ ಪ್ರತೀಕ. ಎಲ್ಲಿ ಮಹಿಳೆಗೆ ಗೌರವ ಸಿಗುತ್ತದೆಯೋ ಅಲ್ಲಿ ಸಮೃದ್ಧಿ ಲಭಿಸುತ್ತದೆ. ಮಹಿಳೆಯರು ದೇಶದ ಆಸ್ತಿಯಾಗಬೇಕು. ನಮ್ಮ ಯೋಜನೆಗಳಿಂದ ಅನೇಕ ಗ್ರಾಮೀಣ ಮಹಿಳೆಯರು ಪ್ರಗತಿ ಸಾಧಿಸಿದ್ದು ಸಂತಸದಾಯಕ" ಎಂದು ಅವರು ಹೇಳಿದರು. “ನಮ್ಮ ಹಲವು ಯೋಜನೆಗಳಿಂದ ಅನೇಕ ಗ್ರಾಮೀಣ ಮಹಿಳೆಯರು ಪ್ರಗತಿ ಸಾಧಿಸಿದ್ದು, ಜ್ಞಾನ ವಿಕಾಸ, ಗೆಳತಿ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಅನೇಕ ಮನೆಗಳಿಗೆ ಒಳಿತಾಗಿದೆ. ನಮ್ಮ ಯೋಜನೆಗಳಿಂದ ಸಬಲರಾದ ಅನೇಕ ಮಹಿಳೆಯರು ತಮ್ಮ ಸಾಧನೆಗಳನ್ನು ಹಂಚಿಕೊಂಡಾಗ ಅವರ ಕಣ್ಣಲ್ಲಿ ಹೆಮ್ಮೆ ಕಾಣುತ್ತದೆ" ಎಂದರು. ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, "ಮಹಿಳೆಯರ ಸಶಕ್ತೀಕರಣದ ವಿಚಾರ ಬಂದಾಗ ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿ, ರಾಣಿ ಅಬ್ಬಕ್ಕ ಅವರಂತಹ ಹೆಮ್ಮೆಯ ನಾರಿಯರು ನೆನಪಿಗೆ ಬರುತ್ತಾರೆ. ಇವರು ಯಾವುದೇ ಕ್ಷೇತ್ರದಲ್ಲೂ ಮಹಿಳೆಯರು ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಅವರ ಹಾದಿಗಳು ಇಂದಿನ ಮಹಿಳೆಯರಿಗೆ ಆದರ್ಶ ಮತ್ತು ಸ್ಫೂರ್ತಿದಾಯಕ. ಯಾವ ದೇಶದಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಆ ದೇಶ ಸಶಕ್ತವಾಗುತ್ತದೆ"ಎಂದು ಹೇಳಿದರು. "ಮಹಿಳಾಭಿವೃದ್ಧಿಗಾಗಿ ಡಾ. ಹೇಮಾವತಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಅನೇಕ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ" ಎಂದರು. ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, "ದೇಶದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಹೆಮ್ಮೆಯ ವಿಚಾರ. ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬ ಉಕ್ತಿಯಂತೆ, ಮಹಿಳೆಯರು ಇನ್ನಷ್ಟು ಶಿಕ್ಷಣ ಪಡೆಯಬೇಕು ಮತ್ತು ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು. ಈ ಕಾರ್ಯ ಮುಂದುವರಿಯಲು ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಬೇಕಾಗುತ್ತದೆ" ಎಂದರು. ದೇಶದ ಮಹಿಳೆಯರ ಕೊಡುಗೆ ಮತ್ತು ಸಾಧನೆಗಳನ್ನು ನೆನೆಯಲು, ವಿದ್ಯಾರ್ಥಿನಿಯರಿಂದ ಕಿರು ರೂಪಕ ಪ್ರದರ್ಶಶಿಸಲಾಯಿತು. ಮಹಿಳೆ ಮತ್ತು ಹೂಡಿಕೆ: ಭವಿಷ್ಯದ ಬೆಳವಣಿಗೆಯ ಸೇತು ಎಂಬ ವಿಷಯದ ಕುರಿತು ಬೆಂಗಳೂರಿನ ಜನಮನ್ ಫಾರ್ಮಸುಟಿಕಲ್ಸ್ ಪ್ರೈ.ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಅನಿಲಾ ದೀಪಕ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮ ಸಂಚಾಲಕರಾದ ಮಾಲಿನಿ ಅಂಚನ್ ಸ್ವಾಗತಿಸಿ, ಅಕ್ಷತಾ ಜೈನ್ ವಂದಿಸಿದರು. ವಿದ್ಯಾರ್ಥಿನಿಯರಾದ ಪೂರ್ವಿ ಮತ್ತು ತಂಡ ಪ್ರಾರ್ಥಿಸಿದರು. ಮಾನಸ ಅಗ್ನಿಹೋತ್ರಿ, ಹರ್ಷಿನಿ ಹಾಗೂ ಧರಿತ್ರಿ ಭಿಡೆ ನಿರೂಪಿಸಿದರು. ವಾಣಿಜ್ಯ ಕ್ಷೇತ್ರದ ತಜ್ಞರು, ಉದ್ಯಮಿಗಳು, ಮತ್ತು ಅಂತರಸಂಸ್ಥಾ ಪ್ರತಿನಿಧಿಗಳು ಭಾಗವಹಿಸಿ, ಕ್ರಿಯಾಶೀಲತೆಯ ಮಹತ್ವ ಕುರಿತು ಚರ್ಚೆ ನಡೆಸಿದರು. ಚರ್ಚಾ ಕೂಟದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಮತ್ತು ಅಧ್ಯಕ್ಷೆ ಡಾ. ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು. ಚರ್ಚೆಯಲ್ಲಿ ಉಜಿರೆಯ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಟಿ. ಎನ್. ಕೇಶವ, ಸಂಧ್ಯಾ ಫ್ರೆಶ್‌ನ ಸಹಸಂಸ್ಥಾಪಕಿ ಮನೋರಮಾ ಭಟ್ಟ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷೆ ಅರ್ಚನಾ ರಾಜೇಶ್ ಪೈ ಭಾಗವಹಿಸಿದರು. ಮಹಿಳೆ ಮತ್ತು ಹೂಡಿಕೆ ಎಂಬ ವಿಷಯದ ಕುರಿತು ವಿಶೇಷ ಸಂವಾದಾತ್ಮಕ ಚಟುವಟಿಕೆ ನಡೆಯಿತು. ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಜ್ಞಾನ ವಿಕಾಸ ಯೋಜನಾಧಿಕಾರಿ ಸಂಗೀತಾ ಮತ್ತು ಬೆಳ್ತಂಗಡಿ ತಾ.ಪಂ. ಕ್ಲಸ್ಟರ್ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ‘ಎಂಪವರ್ ಎಕ್ಸ್ಪೋ’ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟ ಮಳಿಗೆ ಏರ್ಪಡಿಸಲಾಗಿತ್ತು, ಇದರಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ಡಾ ಹೇಮಾವತಿ ವೀ ಹೆಗ್ಗಡೆ ಉದ್ಘಾಟಿಸಿದರು.

ಉಜಿರೆ ಎಸ್‌.ಡಿ.ಎಂ. ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‘ಮಾಧ್ಯಮ ಪರ್ವ’ ಉತ್ಸವ

Article Image

ಉಜಿರೆ ಎಸ್‌.ಡಿ.ಎಂ. ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‘ಮಾಧ್ಯಮ ಪರ್ವ’ ಉತ್ಸವ

ಉಜಿರೆ: ಯುವ ಪತ್ರಕರ್ತರು ಯಾವುದೇ ಬೆದರಿಕೆಗಳಿಗೆ ಬಗ್ಗದೆ ನಿರ್ಭೀತ ನಡೆಯಿಂದ ವೃತ್ತಿಪರತೆಯಿಂದ ಕಾರ್ಯಪ್ರವೃತ್ತರಾದಾಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಶಿರಾದ ವರ್ಧಮಾನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ, ಶಿಕ್ಷಣ ತಜ್ಞ ಸಂಜಯ್ ಎಸ್. ಗೌಡ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದೊಂದಿಗೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ (ಪದವಿ ಮತ್ತು ಸ್ನಾತಕೋತ್ತರ), ಬಿ.ವೋಕ್ ವಿಭಾಗ (ಡಿಜಿಟಲ್ ಮೀಡಿಯಾ ಆ್ಯಂಡ್ ಫಿಲ್ಮ್ ಮೇಕಿಂಗ್) ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 'ಸಮೂಹ ಮಾಧ್ಯಮ ವೃತ್ತಿಪರತೆ ಮತ್ತು ಸದ್ಯದ ಸವಾಲುಗಳು' ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‘ಮಾಧ್ಯಮ ಪರ್ವ’ ಉತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೇಗವಾಗಿ ಪ್ರಸಾರವಾಗುತ್ತಿವೆ. ಅವುಗಳಲ್ಲಿ ಸತ್ಯ ಮತ್ತು ವಸ್ತುನಿಷ್ಠತೆ ಕಾಯ್ದುಕೊಳ್ಳುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಕಾರ್ಯನಿರ್ವಹಿಸಿದರೆ ಸುದ್ದಿಗಳಲ್ಲಿ ನಿಖರತೆ ಕಾಯ್ದುಕೊಳ್ಳಬಹುದು. ಯುವಜನರ ವ್ಯವಸ್ಥಿತ ಭಾಗವಹಿಸುವಿಕೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೋದ ನಂತರವೂ ಕಾಲೇಜಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಇದು ಪರಸ್ಪರರ ಅಭಿವೃದ್ಧಿಗೆ ಅವಶ್ಯ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾಧ್ಯಮಗಳು ಪ್ರಜಾಪ್ರಭುತ್ವದ ಜೀವಾಳ. ಪತ್ರಕರ್ತರು ಸಮರ್ಪಕವಾಗಿ ಕೆಲಸ ಮಾಡಿದಾಗ ಪ್ರಜಾಪ್ರಭುತ್ವ ಸದೃಢವಾಗಿ ಉಳಿಯುತ್ತದೆ ಎಂದು ಹೇಳಿದರು. ಸರಿಯಾದ ಸಮಯದಲ್ಲಿ ಮಾಹಿತಿ ಮತ್ತು ತರಬೇತಿ ಪಡೆದುಕೊಳ್ಳುವುದರಿಂದ ಆವಶ್ಯಕ ಕೌಶಲ್ಯಗಳನ್ನು ವೃತ್ತಿಬದುಕಿನಲ್ಲಿ ಹೊಂದಬಹುದು. ವಿದ್ಯಾರ್ಥಿಗಳು ಅವಕಾಶಗಳು ಸಿಕ್ಕಿದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಕಾರ್ಯಕ್ರಮದ ಪ್ರಧಾನ ಆಶಯವನ್ನು ಪ್ರಸ್ತುತಪಡಿಸಿ ಮಾತನಾಡಿದರು. ನಂಬಿಕೆ, ವಿಶ್ವಾಸ ಮತ್ತು ನಿರೀಕ್ಷೆಗಳನ್ನು ಸಮಾಜದಲ್ಲಿ ಮೂಡಿಸುವುದು ಮಾಧ್ಯಮಗಳ ಕೆಲಸವಾಗಿದೆ. ಮಾಧ್ಯಮಗಳು ಸಮಾಜದ ನಂಬಿಕೆ ಉಳಿಸಿಕೊಳ್ಳಬೇಕಾದರೆ ದಮನಿತರ ಧ್ವನಿಯಾಗಬೇಕು. ಆಗ ಅವುಗಳ ಅಸ್ತಿತ್ವವೂ ಉಳಿಯುತ್ತದೆ. ಸಾಮಾಜಿಕ ಮಾಧ್ಯಮಗಳ ಕಾರಣದಿಂದ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸವಾಲುಗಳು ಎದುರಾಗಿವೆ. ಇವುಗಳನ್ನು ಎದುರಿಸಬೇಕಾದರೆ ಮಾಧ್ಯಮದ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಆಶಯ ಮತ್ತು ನೈತಿಕತೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದ್ಯ ಪಾಸಿಟಿವ್ ಜರ್ನಲಿಸಂ ವಿಸ್ತರಿಸುವ ಅಗತ್ಯವಿದೆ. ಸುದ್ದಿ ಕೆರಳಿಸುವಂತಿರದೆ, ಶಮನ ನೀಡುವಂತಿರಬೇಕು ಎಂದರು. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ವಿರಾಟ್ ಪದ್ಮನಾಭ ಅವರ 'ಬೆಟ್ಟದ ಹೂವು' ಪುಸ್ತಕ ಇತ್ತೀಚೆಗೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಉದ್ಘಾಟನಾ ಸಮಾರಂಭದ ಕುರಿತು ಪದವಿ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ತಕ್ಷಣಕ್ಕೆ ಸಂಯೋಜಿಸಿದ ‘ಚಿಗುರು’ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆ ಅನಾವರಣಗೊಳಿಸಲಾಯಿತು. ವಿಚಾರ ಸಂಕಿರಣದೊಂದಿಗೆ ಆಯೋಜಿಸಿರುವ ಮಾಧ್ಯಮ ಪರ್ವ ಫೆಸ್ಟ್ ಥೀಮ್ ಸಾಂಗ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಆಯೇಶಾ ಖಾನಂ, ಸಂಜಯ್ ಎಸ್. ಗೌಡ ಮತ್ತು ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ., ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ಪ್ರಬಂಧಕ ಶೇಖರ್ ಮತ್ತು ಉದ್ಯಮಿ ಶ್ರೀನಿವಾಸ ಗಲಗಲಿ ಅವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನೈದಿಲೆ ಮತ್ತು ಸಿಂಚನ ನಿರೂಪಿಸಿದರು. ಸಹನಾ ವಂದಿಸಿದರು.

ಸಾಧಕರ ಸನ್ಮಾನ

Article Image

ಸಾಧಕರ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ಆಶ್ರಯದಲ್ಲಿ ಪ್ರೊ. ಗಣಪತಿ ಕುಳಮರ್ವ, ಬೆಳಾಲು ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಚೊಕ್ಕಾಡಿ ಮತ್ತು ದಾಸಪ್ಪ ಗೌಡ ಕೊಲ್ಲಿ ಇವರ ಸೇವೆ-ಸಾಧನೆಯನ್ನು ಮನ್ನಿಸಿ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆದ ಸಂಘದ ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು. ಹಿರಿಯರನ್ನು ಗೌರವಿಸಿ ಸನ್ಮಾನಿಸಿದ ಪ್ರಜಾವಾಣಿ ಪತ್ರಿಕೆಯ ವರದಿಗಾರ ಆರ್.ಎನ್. ಪೂವಣಿ ಮಾತನಾಡಿ, ಮೂರು ಮಂದಿ ಹಿರಿಯ ಸಾಧಕರ ಸೇವೆ, ಸಾಧನೆ ಕಿರಿಯರಿಗೆ ಪ್ರೇರಕ ಶಕ್ತಿಯಾಗಿ ಸ್ಪೂರ್ತಿಯಾಗಿದೆ. ಅವರ ದಕ್ಷ ಸೇವೆಗೆ ಅಭಿನಂದಿಸಿ ಶುಭ ಹಾರೈಸಿದರು. ಸಂಘದ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ. ಗೂ ಅಧಿಕ ದೇಣಿಗೆ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸೋಮಶೇಖರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಬಿ. ವಿಠಲ ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸರ್ವ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲೆಂದು ಪೂವಣಿ ಅವರು ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಇತೀಚೆಗೆ ನಿಧನರಾದ ನಿವೃತ್ತ ಮುಖ್ಯೋಪಾಧ್ಯಾಯ ಕಾಶ್ಮೀರ್ ಮಿನೇಜಸ್ ಅವರ ಬಗ್ಗೆ ತೆರೆಸಾ ಲೋಬೊ ನುಡಿನಮನ ಸಲ್ಲಿಸಿ, ಬಳಿಕ ಮಿನೆಜಸ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯದರ್ಶಿ ವಿಶ್ವಾಸ ರಾವ್ ಗತ ಸಭೆಯ ವರದಿ ಸಾದರಪಡಿಸಿದರು. ವಸಂತ ಸುವರ್ಣ ಧನ್ಯವಾದವಿತ್ತರು.

ಮುಳಿಯ ಜ್ಯುವೆಲ್ಸ್‌ ನಲ್ಲಿ ಡೈಮಾಂಡ್ ಫೆಸ್ಟ್ ಗೆ ಚಾಲನೆ

Article Image

ಮುಳಿಯ ಜ್ಯುವೆಲ್ಸ್‌ ನಲ್ಲಿ ಡೈಮಾಂಡ್ ಫೆಸ್ಟ್ ಗೆ ಚಾಲನೆ

ಬೆಳ್ತಂಗಡಿ: ಚಿನ್ನಾಭರಣಗಳ ಮೂಲಕ ಬೆಳ್ತಂಗಡಿಗೆ ಮೆರಗು ತಂದ ಸಂಸ್ಥೆ ಮುಳಿಯ. ಗ್ರಾಹಕರಾಗಿ ಬರುತ್ತಿದ್ದ ನಾನು ಇಂದು ಅತಿಥಿಯಾಗಿರುವುದು ಸಂತಸ ತಂದಿದೆ. ಆಭರಣ ಖರೀದಿಗೆಂದು ಚಿಂತಿಸಿದಾಗ ಮನದಲ್ಲಿ ಬರುವುದು ಮುಳಿಯ ಸಂಸ್ಥೆ. ವ್ಯವಹಾರದಲ್ಲಿ ಆತಿಥ್ಯವನ್ನು ಸದಾ ಗ್ರಾಹಕರಿಗೆ ನೀಡುತ್ತಿದ್ದು ಇದರಿಂದ ಸಂಸ್ಥೆ ಜನಮಾನಸದಲ್ಲಿ ನಲ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಮುಂಡಾಜೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ ನಲ್ಲಿ 3ರಂದು ನಡೆದ ಡೈಮಾಂಡ್ ಫೆಸ್ಟ್ ಚಾಲನೆ ಸಮಾರಂಭದಲ್ಲಿ ಮಾತನಾಡಿದರು. ಜೇಸಿಐ ಭಾರತದ ವಲಯ 15 ರ ಉಪಾಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ, 80 ದಶಕದಿಂದ ಜನರೊಂದಿಗೆ ಅವಿನಾಭವ ಸಂಬಂಧವನ್ನು ಉಳಿಸಿಕೊಂಡು ಬಂದಿರುವ ಸಂಸ್ಥೆ ಮುಳಿಯ, ಚಿನ್ನಾಭಾರಣಗಳಲ್ಲಿ ಉತ್ತಮ ಗುಣ ಮಟ್ಟವನ್ನು ನೀಡುತ್ತಾ ಬಂದಿರುವ ಮುಳಿಯ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವ್ಯವಹಾರಕ್ಕೆ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸಂಸ್ಥೆ ಮುಳಿಯ ಎಂದು ಅಭಿಪ್ರಾಯಪಟ್ಟರು. ಮರ‍್ಕೇಟಿಂಗ್ ಕನ್ಸಲ್‌ಟೆಂಟ್ ವೇಣುಶರ್ಮ ಮಾತನಾಡಿ, ಚಿನ್ನಾಭರಣ ಸುರಕ್ಷಿತ ಹೂಡಿಕೆಯ ಉದ್ಯಮವಾಗಿದೆ. ವಿಶಿಷ್ಟ ಹಾಗೂ ವಿನೂತನ ವಜ್ರಾಭರಣಗಳ ಸಂಗ್ರಹಣೆ ಈ ಬಾರಿಯ ಡೈಮಾಂಡ್ ಫೆಸ್ಟ್ ನಲ್ಲಿದೆ. ಜೀವನದ ಮೊದಲ ವಜ್ರಾಭರಣ ಖರೀದಿಯನ್ನು ಮುಳಿಯೊಂದಿಗೆ ಪ್ರಾರಂಭಿಸಿ ಎಂದು ಹೇಳಿದರು. ಕಾರ್ಯನಿರ್ವಾಹಕ ಕಾರ್ಯದರ್ಶಿ ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಹಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಾಖಾ ಪ್ರಬಂಧಕ ಲೋಹಿತ್‌ ಸ್ವಾಗತಿಸಿ, ಸಿಬ್ಬಂದಿ ಅಶ್ವಥ್ ವಂದಿಸಿ, ಕನ್ನಿಕಾ ನಿರೂಪಿಸಿದರು.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Article Image

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ಅಧ್ಯಯನ ವಿಭಾಗ ಮತ್ತು ಪದವಿ ಭೌತಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಮಾರ್ಚ್ 1, 2025 ರಂದು “ಕ್ವಾಂಟಮ್ ಟು ಕಾಸ್ಮೊಸ್” ಉಪನ್ಯಾಸ ಸರಣಿ ಆಯೋಜಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನ 2025 ಅನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಐಐಟಿ ದೆಹಲಿಯಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ. ವಿ. ರವಿಶಂಕರ್ "ಕ್ವಾಂಟಮ್ ಮಾಹಿತಿಗೆ ಆಹ್ವಾನ" ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಕ್ವಾಂಟಮ್ ಮಾಹಿತಿಯ ಪ್ರಾಮುಖ್ಯತೆ, ಪಾತ್ರ ಮತ್ತು ಮುಂದಿನ ದಿನಗಳಲ್ಲಿ ಅದರ ಪರಿಣಾಮಗಳನ್ನು ಕುರಿತಾಗಿ ಅವರು ಚರ್ಚಿಸಿದರು. ಮಣಿಪಾಲ ನೈಸರ್ಗಿಕ ವಿಜ್ಞಾನ ಕೇಂದ್ರ ಮಾಹೆ, ನಿರ್ದೇಶಕ ಡಾ.ಪಿ.ಶ್ರೀಕುಮಾರ್ "ಭಾರತದಲ್ಲಿ ಮುಂಬರುವ ಖಗೋಳಶಾಸ್ತ್ರದ ಪ್ರಮುಖ ಯೋಜನೆಗಳು" ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು. ಅವರು ವೀಕ್ಷಣೆ-ಆಧಾರಿತ ಖಗೋಳಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನೆಯ ಪ್ರಮುಖ ಆಯಾಮಗಳ ಬಗ್ಗೆ ವಿವರಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಎಸ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವಸಂಸ್ಥೆಯು ಈ ವರ್ಷವನ್ನು "ಅಂತಾರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ" ಎಂದು ಘೋಷಿಸಿದೆ ಮತ್ತು ಮುಂಬರುವ ವರ್ಷಗಳಲ್ಲಿ ಭೌತಶಾಸ್ತ್ರವು ಮಹತ್ವದ ಸ್ಥಾನ ಪಡೆಯಲಿದೆ ಎಂದು ಅವರು ಹೇಳಿದರು. ಎಸ್‌ಡಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪೇಕ್ಷಾ ಜೈನ್‌ ಉಪಸ್ಥಿತರಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿಸಲಾಯಿತು.

ಶಿವರಾತ್ರಿ: ಧರ್ಮಸ್ಥಳದಲ್ಲಿ ರಥೋತ್ಸವ

Article Image

ಶಿವರಾತ್ರಿ: ಧರ್ಮಸ್ಥಳದಲ್ಲಿ ರಥೋತ್ಸವ

ಧರ್ಮಸ್ಥಳ: ಶಿವರಾತ್ರಿ ಆಚರಣೆ ಅಂಗವಾಗಿ ಗುರುವಾರ ಬೆಳಗ್ಗಿನ ಜಾವ “ರಥೋತ್ಸವ” ನಡೆಯಿತು. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ .ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು. ನಾಡಿನೆಲ್ಲೆಡೆಯಿಂದ ಬಂದ ಸಾವಿರಾರು ಮಂದಿ ಭಕ್ತರು ರಥೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ

Article Image

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ

ಉಜಿರೆ: ಶಿವರಾತ್ರಿ ಅಂದರೆ ಪವಿತ್ರ ಹಾಗೂ ಮಂಗಳಕರ ರಾತ್ರಿ ಎಂದು ಅರ್ಥ. ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ ಕಳೆದು ಪುಣ್ಯ ಸಂಚಯವಾಗುತ್ತದೆ. ತ್ಯಾಗ ಮತ್ತು ವಿರಕ್ತಿಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಜಪ-ತಪ, ಧ್ಯಾನದೊಂದಿಗೆ ವೃತ ನಿಯಮಗಳ ಪಾಲನೆ ಮಾಡಿದಾಗ ಜೀವನ ಪಾವನವಾಗುತ್ತದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಬುಧವಾರ ಶಿವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಮಾತು ಬಿಡ ಮಂಜುನಾಥ ಎಂಬ ಮಾತು ಪ್ರಚಲಿತವಿದೆ. ನಮ್ಮ ಮಾತು ಮತ್ತು ಕೃತಿಗೆ ಅಂತರವಿರಬಾರದು. ನುಡಿದಂತೆ ನಡೆಯಬೇಕು. ಆಗ ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಎಲ್ಲವೂ ಸುಗಮವಾಗಿ ಜೀವನ ಪಾವನವಾಗುತ್ತದೆ. ಮನದಲ್ಲಿರುವ ಕೆಟ್ಟ ಯೋಚನೆ, ಭಾವನೆಗಳನ್ನು ತ್ಯಜಿಸಿ ಎಲ್ಲರೂ ಸುಖಿಗಳಾಗಿರಲಿ ಎಂಬ ಉದಾತ್ತ ಭಾವನೆಯೊಂದಿಗೆ ಲೋಕಕಲ್ಯಾಣವಾಗಲಿ ಎಂದು ಶುಭ ಚಿಂತನೆ ಮಾಡಬೇಕು. ಆಗ ಕಾಲಕ್ಕೆ ಸರಿಯಾಗಿ ಮಳೆ, ಬೆಳೆ ಆಗಿ ಎಲ್ಲೆಲ್ಲೂ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಬಳಿಕ ಸಾಮೂಹಿಕ ಶಿವ ಪಂಚಾಕ್ಷರಿ ಪಠಣ ಆಹೋ ರಾತ್ರಿ ನಡೆಯಿತು. ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರು ದೇವರಿಗೆ ಶತರುದ್ರಾಭಿಷೇಕ ಮತ್ತು ಸೀಯಾಳ ಅಭಿಷೇಕ ಸೇವೆ ಅರ್ಪಿಸಿ ಧನ್ಯತೆಯನ್ನು ಹೊಂದಿದರು. ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಬೆಂಗಳೂರಿನ ಹನುಮಂತಪ್ಪ ಗುರೂಜಿ ಮತ್ತು ಮರಿಯಪ್ಪ . ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಮತ್ತು ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು ಉಪಸ್ಥಿತರಿದ್ದರು.

ಧರ್ಮಸ್ಥಳ: ಪಾದಯಾತ್ರಿಗಳಿಗೆ ಸನ್ಮಾನ

Article Image

ಧರ್ಮಸ್ಥಳ: ಪಾದಯಾತ್ರಿಗಳಿಗೆ ಸನ್ಮಾನ

ಪರಿಶುದ್ಧವಾದ ಭಕ್ತಿ ಮತ್ತು ದೃಢನಂಬಿಕೆಯಿಂದ ನಮ್ಮ ಎಲ್ಲಾ ಲೌಕಿಕ ಕಷ್ಟಗಳು, ಸಮಸ್ಯೆಗಳು ಪರಿಹಾರವಾಗಿ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶಿವರಾತ್ರಿ ಜಾಗರಣೆಗೆ ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳಿಗೆ ಶುಭಹಾರೈಸಿ, ಆಶೀರ್ವದಿಸಿದರು. ದೇವರಲ್ಲಿ ಭಕ್ತಿ ಮತ್ತು ನಂಬಿಕೆಯಲ್ಲಿ ಯಾವುದೇ ರೀತಿಯ ಭಯ, ಸಂಶಯ ಇರಬಾರದು. ನಾವು ಕೊಂಚ ತಪ್ಪಿದರೂ ದೇವರು ನಮ್ಮ ರಕ್ಷಣೆ ಮಾಡುತ್ತಾರೆ. ನಂಬಿಕೆಗಳು ಮತ್ತು ವಿಶ್ವಾಸದಿಂದ ನಮ್ಮ ದೋಷಗಳ ದಮನವಾಗುತ್ತದೆ. ಭಕ್ತಿಯಲ್ಲಿ ದೈಹಿಕ ಶಕ್ತಿಗಿಂತಲೂ ಮಾನಸಿಕ ಶಕ್ತಿ, ಸಂಕಲ್ಪ ಮಿಗಿಲಾದುದು. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ ಮಾಣಿಕ್ಯವಾಗಬೇಕು. ಎಲ್ಲಗೂ ಸತ್ಯ, ಧರ್ಮ, ನ್ಯಾಯ, ನೀತಿಯ ಮಾರ್ಗದಲ್ಲಿ ನಡೆದಾಗ ಜೀವನ ಪಾವನಾಗುತ್ತದೆ. ನಂಬಿದವರಿಗೆ ಇಂಬು ಕೊಡುವ ಧರ್ಮಸ್ಥಳದಲ್ಲಿ ಸತ್ಯ ಮತ್ತು ನ್ಯಾಯಮಾರ್ಗದಲ್ಲಿ ನಡೆದರೆ ಅವರಿಗೆ ದೇವರ ಪೂರ್ಣ ಅನುಗ್ರಹವಿರುತ್ತದೆ. ತ್ಯಾಗ ಮಾಡುವುದರಿಂದ ನಾವು ಶಾಶ್ವತ ಸುಖ-ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಹೆಗ್ಗಡೆಯವರು ಹೇಳಿ, ಪಾದಯಾತ್ರಿಗಳಿಗೆ ಶುಭ ಹಾರೈಸಿದರು. ಪಾದಯಾತ್ರಿಗಳಿಗೆ ನಿರಂತರ ಪ್ರೇರಣೆ, ಮಾರ್ಗದರ್ಶನ ನೀಡುತ್ತಿರುವ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ಮತ್ತು ಬಳಗದವರನ್ನು ಹೆಗ್ಗಡೆಯವರು ಅಭಿನಂದಿಸಿದರು. ನಾಗಸಾಧು ಧನಂಜಯ ಗಿರಿ ಗುರೂಜಿ, ಧರ್ಮಸ್ಥಳ ಕ್ಷೇತ್ರದ ಬಗ್ಯೆ ಅಪಾರ ಭಕ್ತಿ, ಗೌರವ ವ್ಯಕ್ತಪಡಿಸಿ ಗರ್ಭಗುಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವಾದರೆ, ನಾವು ಹೊರಗೆ ಬಂದು ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಮಾತನಾಡುವ ಮಂಜುನಾಥನ ದರ್ಶನ, ಆಶೀರ್ವಾದ ಪಡೆದು ಪುನೀತರಾಗುತ್ತೇವೆ. ಹೆಗ್ಗಡೆಯವರ ಮೂಲಕ ನಾವು ಶ್ರೀ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದರು. ಸ್ವಚ್ಛತೆಯನ್ನು ಕಾಪಾಡಿ: ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಬಂದವರು ನೇತ್ರಾವತಿ ನದಿಯಲ್ಲಿ ಮಿಂದು ಬಟ್ಟೆ, ಸಾಬೂನು, ತ್ಯಾಜ್ಯಗಳನ್ನು ನೀರಿಗೆ ಹಾಕಿ ಅಪವಿತ್ರ ಮಾಡಬಾರದು. ಇದರಿಂದ ಪಾಪಪ್ರಜ್ಞೆ ಹೆಚ್ಚಾಗುತ್ತದೆ ಎಂದು ಅವರು ಭಕ್ತರಿಗೆ ಎಚ್ಚರಿಕೆ ನೀಡಿದರು. ಶಿವಕ್ಷೇತ್ರ ಯಾವಗಲೂ ಶಾಂತವಾಗಿದ್ದು, ಪವಿತ್ರ ಧರ್ಮಸ್ಥಳವನ್ನು ಹಾಗೂ ನೇತ್ರಾವತಿ ನದಿಯನ್ನು ಸ್ವಚ್ಛವಾಗಿಡಲು ಸಹಕರಿಸಿ. ಧರ್ಮಸ್ಥಳದ ಅನ್ನದಾನ ವಿಶ್ವವಿಖ್ಯಾತವಾಗಿದೆ. ಭಕ್ತರು ಕೂಡಾ ಈ ಪವಿತ್ರ ಕಾಯಕಕ್ಕೆ ದಾನ ನೀಡಬಹುದು ಎಂದರು. ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ ಶುಭ ಹಾರೈಸಿದರು. ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು. ಮರಿಯಪ್ಪ ಸ್ವಾಗತಿಸಿದರು. ಶಶಿಕುಮಾರ ಧನ್ಯವಾದವಿತ್ತರು.

ಮುಳಿಯ ಜುವೆಲ್ಸ್ ನಲ್ಲಿ ನಡೆದಿದ್ದ ಡೈಮಾಂಡ್ ಫೆಸ್ಟ್ ಲಕ್ಕಿ ಕೂಪನ್ ಡ್ರಾ ವಿಜೇತರಿಗೆ ಕಾರ್‌ ಕೀ ಹಸ್ತಾಂತರ

Article Image

ಮುಳಿಯ ಜುವೆಲ್ಸ್ ನಲ್ಲಿ ನಡೆದಿದ್ದ ಡೈಮಾಂಡ್ ಫೆಸ್ಟ್ ಲಕ್ಕಿ ಕೂಪನ್ ಡ್ರಾ ವಿಜೇತರಿಗೆ ಕಾರ್‌ ಕೀ ಹಸ್ತಾಂತರ

ಬೆಳ್ತಂಗಡಿ: ಮುಳಿಯ ಜುವೆಲ್ಸ್ ನಲ್ಲಿ ಕಳೆದ ವರ್ಷ ಆ. 15ರಿಂದ ನವೆಂಬರ್ 30ವರೆಗೆ ನಡೆದಿದ್ದ ಡೈಮಾಂಡ್ ಫೆಸ್ಟ್ ಸಂದರ್ಭದಲ್ಲಿ ನೀಡಲಾಗಿದ್ದ ಲಕ್ಕಿ ಕೂಪನ್ ನಲ್ಲಿ ಡ್ರಾ ವಿಜೇತರರಾದ ಶಿರ್ಲಾಲು ಗ್ರಾಮದ ನಿಸರ್ಗ ಮನೆಯ ಆಶಾ ಹಾಗೂ ಪ್ರಭಾಕರ್ ರವರಿಗೆ ಇಂದು (ಫೆ.25 ) ಕಾರ್ ಕೀಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಶಾಖಾ ಪ್ರಬಂಧಕ ಲೋಹಿತ್‌ ಕುಮಾರ್‌, ಉಪ ಶಾಖಾ ಪ್ರಬಂಧಕಾರಾದ ದಿನೇಶ್ ಮತ್ತು ಮುಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ಕೈ ಎಲೆಕ್ಟ್ರಿಕಲ್ಸ್‌ ಸರ್ವೀಸ್‌ ಮತ್ತು ಪ್ರೈಮ್‌ ಅಸೋಸಿಯೇಟ್ಸ್‌: ಅಳದಂಗಡಿ ಶಾಖೆಯ ಉದ್ಘಾಟನಾ ಸಮಾರಂಭ

Article Image

ಸ್ಕೈ ಎಲೆಕ್ಟ್ರಿಕಲ್ಸ್‌ ಸರ್ವೀಸ್‌ ಮತ್ತು ಪ್ರೈಮ್‌ ಅಸೋಸಿಯೇಟ್ಸ್‌: ಅಳದಂಗಡಿ ಶಾಖೆಯ ಉದ್ಘಾಟನಾ ಸಮಾರಂಭ

ಅಳದಂಗಡಿ: ಇಲ್ಲಿನ ಶ್ರೀ ಸೋಮನಾಥೇಶ್ವರೀ ದೇವಸ್ಥಾನ ಬಳಿಯಿರುವ ಪಾವನಿ ಕಾಂಪ್ಲೆಕ್ಸ್‌ನಲ್ಲಿ ಸ್ಕೈ ಎಲೆಕ್ಟ್ರಿಕಲ್ಸ್‌ ಸರ್ವೀಸ್‌ ಮತ್ತು ಪ್ರೈಮ್‌ ಅಸೋಸಿಯೇಟ್ಸ್‌ ಅಳದಂಗಡಿ ಶಾಖೆಯ ಉದ್ಘಾಟನಾ ಸಮಾರಂಭವು ದಿನಾಂಕ 28-02-2025ನೇ ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಉದ್ಘಾಟನೆ ಹಾಗೂ ಶುಭಾಶೀರ್ವಾದ : ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್‌ ಅಜಿಲರು ಅಳದಂಗಡಿ ಅರಮನೆ ಮುಖ್ಯ ಅತಿಥಿಗಳು : ಶಿವಪ್ರಸಾದ್ ಅಜಿಲರು, ಆಡಳ್ತೇದಾರರು ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಉದ್ಯಮಿಗಳು ಬೆಂಗಳೂರು, ಅಶ್ವಿನ್ ಪಿರೇರಾ ಮೂಡಬಿದ್ರೆ ಐಕ್ಯಾರ್ ಬಿಲ್ಡರ್, ರವಿ ಪ್ರಸಾದ್ ಶೆಟ್ಟಿ ಮೂಡಬಿದ್ರೆ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮಂಗಳೂರು, ಸಂದೀಪ್‌ ಕುಮಾರ್‌ ಅಳದಂಗಡಿ ಮೆಸ್ಕಾಂ ಇಂಜಿನೀಯರ್, ಸರಸ್ವತಿ ಗ್ರಾ.ಪಂ.ಅಧ್ಯಕ್ಷರು ಅಳದಂಗಡಿ, ಪೂರ್ಣಿಮ ಜೆ. ಅಳದಂಗಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯವರು, ಪ್ರವೀಣ್ ಭಟ್, ಮಾಲಕರು ಪಾವನಿ ಕಾಂಪ್ಲೆಕ್ಸ್ ಅಳದಂಗಡಿ. ಸನ್ಮಾನ : ನಿರಂಜನ್ ಜೈನ್, ಜೈನ ಸಮಾಜದ ಧಾರ್ಮಿಕ ಚಿಂತಕರು ಕಾರ್ಯಕ್ರಮ ನಿರೂಪಣೆ : ವಿಜಯ ಕುಮಾರ್ ಜೈನ್ ಆಮಂತ್ರಣ ವಿಶೇಷ ಕಾರ್ಯಕ್ರಮ ವಿದ್ಯುತ್‌ ಇಲಾಖೆಯಲ್ಲಿ ಲೈನ್ ಮ್ಯಾನ್ ವೃತ್ತಿಯಲ್ಲಿ ತೊಡಗಿಕೊಂಡು ಜೀವಪಣಕ್ಕಿಟ್ಟು ಕೆಲಸ ಮಾಡುವ ಎಲ್ಲಾ ಲೈನ್ ಮ್ಯಾನ್‌ಗಳಿಗೆ ಗೌರವ ಸಲ್ಲಿಕೆಯಾಗಲಿದೆ.

ಶಿವರಾತ್ರಿ: ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಾರ್ಯಾಲಯ ಉದ್ಘಾಟನೆ

Article Image

ಶಿವರಾತ್ರಿ: ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಾರ್ಯಾಲಯ ಉದ್ಘಾಟನೆ

ಉಜಿರೆ: ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಾರ್ಯಾಲಯವನ್ನು ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಭಾನುವಾರ ಉದ್ಘಾಟಿಸಿ ಶುಭ ಹಾರೈಸಿದರು. ಪಕ್ಕದಲ್ಲೆ ಉಚಿತ ವೈದ್ಯಕೀಯ ಚಿಕಿತ್ಸಾಕೇಂದ್ರ, ಪಾನೀಯ ವಿತರಣಾ ವ್ಯವಸ್ಥೆ, ಪೊಲೀಸ್ ಸಹಾಯ ಕೇಂದ್ರ ಹಾಗೂ ಮಾಹಿತಿ ಕೇಂದ್ರವಿದೆ. ಅನ್ನಪೂರ್ಣ ಭೋಜನಾಲಯದ ಮುಖ್ಯ ಪ್ರಬಂಧಕ ಸುಬ್ರಹ್ಮಣ್ಯಪ್ರಸಾದ್, ಕಂದಾಯ ವಿಭಾಗದ ಮುಖ್ಯಸ್ಥ ಶುಭಚಂದ್ರರಾಜ್, ಕ್ಷೇತ್ರದ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಪುತ್ತಿಗೆ, ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ

Article Image

ಶ್ರೀ ಕ್ಷೇತ್ರ ಪುತ್ತಿಗೆ, ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ

ಮೂಡುಬಿದಿರೆ: ಶ್ರೀ ಕ್ಷೇತ್ರ ಪುತ್ತಿಗೆ, ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಾಳೆ (ಫೆ.23) ಚೌಟರ ಸೀಮೆಯ ಪ್ರಧಾನ ಶ್ರೀ ಪಂಚಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ, ಆರಾಧಿಸಿಕೊಂಡು ಬರುತ್ತಿರುವ ಶ್ರೀ ನಾಗದೇವರು ಹಾಗೂ ಧರ್ಮದೈವಗಳ ಪುನಃ ಪ್ರತಿಷ್ಠೆಯು ಎಡಪದವು ತಂತ್ರಿವರೇಣ್ಯರುಗಳು ಮತ್ತು ಕುಂಗೂರು ಚಾವಡಿ ಮನೆ ಶಿವಪ್ರಸಾದ್ ಆಚಾರ್ ರವರ ನೇತೃತ್ವದಲ್ಲಿ ಹಾಗೂ ಅರ್ಚಕ - ಋತ್ವಿಜರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂರ್ತೆದಾರರ ಸೇವಾ ಸಹಕಾರಿ ಸಂಘದ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನೆ

Article Image

ಮೂರ್ತೆದಾರರ ಸೇವಾ ಸಹಕಾರಿ ಸಂಘದ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನೆ

ವೇಣೂರು: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಜೀಪ ಮೂಡ ಇದರ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನಾ ಸಮಾರಂಭವು ಫೆ.12 ರಂದು ನಡೆಯಿತು. ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಇವರು ಈ ಸ್ಟಾಂಪಿಂಗ್ ಉದ್ಘಾಟಿಸಿ ಶುಭ ಹಾರೈಸಿದರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೇಣೂರು ಇದರ ಪ್ರಬಂಧಕರಾದ ರಂಜಿತ್ ದೀಪ ಬೆಳಗಿಸಿದರು. ವೇಣೂರು ಜುಮ್ಮಾ ಮಸೀದಿ ಅಧ್ಯಕ್ಷ ಜಕೀಯ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಕೆ ಸಂಜೀವ ಪೂಜಾರಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿ ಇದರ ಸೇವೆಯನ್ನು ಎಲ್ಲ ಗ್ರಾಹಕರು ಪಡೆದುಕೊಂಡು ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಿ ಸಂಘದ ಶ್ರೇಯೋಭಿವೃದ್ಧಿಗಾಗಿ ಸಹಕರಿಸಬೇಕಾಗಿ ವಿನಂತಿಸಿದರು. ವೇಣೂರು ಮೂರ್ತದಾರರ ಅಧ್ಯಕ್ಷ ರಮೇಶ್ ಪೂಜಾರಿ, ವೆಂಕಟರಮಣ ಕೋ ಆಪರೇಟಿವ್ ವೇಣೂರು ಶಾಖಾ ವ್ಯವಸ್ಥಾಪಕ ಗಾಯನ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಸುಂದರ ಪೂಜಾರಿ, ರಮೇಶ್ ಅನ್ನಾಡಿ, ಜಯಶಂಕರ ಕಾನ್ಸ್‌ಲೆ, ಅರುಣ್ ಕುಮಾರ್ ಎಮ್, ಆಶಿಶ್ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ, ಎಜಿಎಂ ಶಿಲ್ಪಾ ಉಪಸ್ಥಿತರಿದ್ದರು. ನಿರ್ದೇಶಕ ಆರುಣ್‌ ಕುಮಾರ್ ಸ್ವಾಗತಿಸಿದರು, ಶಾಖಾ ವ್ಯವಸ್ಥಾಪಕ ವಿಜಯ ಕೆ ವಂದಿಸಿದರು.

ಮುಳಿಯ ಜುವೆಲ್ಸ್ ನ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹ

Article Image

ಮುಳಿಯ ಜುವೆಲ್ಸ್ ನ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹ

ಬೆಳ್ತಂಗಡಿ: ನವೀನತೆ ಹಾಗೂ ಪರಿಶುದ್ದತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜುವೆಲ್ಸ್ ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹವು ಫೆ.15 ರಿಂದ ಫೆ.28ರವರೆಗೆ ನಡೆಯಲಿದೆ. ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯ 15 ದಿನಗಳ ಕಾಲ ನವರತ್ನ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ವಿಶಿಷ್ಠ ರೀತಿಯ ಆಭರಣಗಳಾದ ಉಂಗುರಗಳು, ನವರತ್ನ ಪೆಂಡೆಂಟ್ಸ್ , ನವರತ್ನ ಕಿವಿಯೋಲೆಗಳು, ನವರತ್ನ ಬಳೆಗಳು ಲಭ್ಯವಿದೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

Article Image

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣಪತ್ರ ಬಿಡುಗಡೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲಾ ಇಪ್ಪತ್ತೇಳನೆ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.21 ಮತ್ತು 22ರಂದು ಮಂಗಳೂರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳಸಭಾಂಗಣದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರವನ್ನು ಬುಧವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಯುವರಾಜ ಪೂವಣಿ, ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಮತ್ತು ಸಹಶಿಕ್ಷಕಿ ಸುಮಲತಾ ಉಪಸ್ಥಿತರಿದ್ದರು

ಕದ್ರಿ ವಾರ್ಷಿಕ ಜಾತ್ರ ಮಹೋತ್ಸವ-2025: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ

Article Image

ಕದ್ರಿ ವಾರ್ಷಿಕ ಜಾತ್ರ ಮಹೋತ್ಸವ-2025: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ವೈಭವ

ಮಂಗಳೂರು: ಇತಿಹಾಸ ಪ್ರಸಿದ್ದ ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವದ ಪ್ರಯುಕ್ತ ಮಲ್ಲಿಕಾ ಕಲಾವೃಂದ ಕದ್ರಿ ಆಶ್ರಯದಲ್ಲಿ ಸೋಮವಾರ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷರಾದ ಸುಧಾಕರ ರಾವ್ ಪೇಜಾವರ, ಭಾರತೀಯ ಜೈನ್ ಮಿಲನ್ ಮಂಗಳೂರಿನ ಅಧ್ಯಕ್ಷರಾದ ರತ್ನಾಕರ ಜೈನ್, ಕಲ್ಕೂರ ಪ್ರತಿಷ್ಠಾನ ದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ, ಮಲ್ಲಿಕಾ ಕಲಾವೃಂದ ದ ಕಾರ್ಯದರ್ಶಿ ವಸುದೇವ ರಾವ್ ಕುಡುಪು ಹಾಗೂ ರಿಮಾ ಜಗನ್ನಾಥ್ ಮಾರ್ನಮಿಕಟ್ಟೆ, ಪ್ರಾರ್ಥನಾ ರೋಹಿತ್ ಹೊಸಬೆಟ್ಟು, ಅಶಿಶ್ ಅಂಚನ್ ಮಂಗಳೂರು , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು. ಶ್ರೇಯಾ ದಾಸ್ ನಿರೂಪಿಸಿದರು. ಶ್ರೇಯಾ ಭಟ್ ,ಅಪೇಕ್ಷಾ ಎ ಸಹಕರಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶ

Article Image

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶ

ಉಜಿರೆ: ಧರ್ಮಸ್ಥಳದ ಆಶ್ರಯದಲ್ಲಿ ನಡೆಯುತ್ತಿರುವ ಅನೇಕ ಪವಿತ್ರ ಸೇವಾಕಾರ್ಯಗಳಲ್ಲಿ ಮದ್ಯವ್ಯಸನಿಗಳನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತರನ್ನಾಗಿ ಮಾಡಿ ಆರೋಗ್ಯಪೂರ್ಣ ಸಮಾಜ ರೂಪಿಸುವ ಕಾಯಕ ಅತ್ಯಂತ ಶ್ರೇಷ್ಠ, ಪವಿತ್ರ ಹಾಗೂ ಉತ್ತಮ ಸೇವೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಸ್ಥಳದ ಮೇಲಿನ ಭಕ್ತಿ, ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಜನಜಾಗೃತಿವೇದಿಕೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತನು, ಮನ, ಧನದ ಮೂಲದ ತ್ರಿಕರಣಪೂರ್ವಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದರಿಂದ ಎಲ್ಲರಿಗೂ ಸಮಾಜದಲ್ಲಿ ವಿಶೇಷ ಗೌರವ, ಮಾನ್ಯತೆ ದೊರಕುತ್ತಿದೆ. ವೇದಿಕೆಯ ಕೀರ್ತಿಯೂ ಹೆಚ್ಚಾಗಿದೆ. ವ್ಯಸನಮುಕ್ತರು ಪವಿತ್ರಾತ್ಮರಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿದಾಗ ಅವರಿಗೆ ವಿಶೇಷ ಅನುಗ್ರಹವಾಗುತ್ತದೆ. ಮುಂದೆ ಅವರು ನವಜೀವನ ಸಮಿತಿ ಸದಸ್ಯರಾಗಿ ದೃಢಸಂಕಲ್ಪದಿಂದ ಸುಖ- ಶಾಂತಿ ನೆಮ್ಮದಿಯ ಕೌಟುಂಬಿಕ ಜೀವನ ನಡೆಸುವುದು ತಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡುತ್ತದೆ ಎಂದು ಹೆಗ್ಗಡೆಯವರು ಹೇಳಿದರು. ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶವನ್ನು ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆಯವರು ದೇಶದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದು, ಯುವಜನತೆ ತಮ್ಮ ಬುದ್ಧಿ ಮತ್ತು ವಿವೇಕವನ್ನು ಕಳೆದುಕೊಂಡು ಮದ್ಯ ವ್ಯಸನಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ಇಡೀ ರಾಜ್ಯದಲ್ಲಿ ವಟವೃಕ್ಷದಂತೆ ಹಲವು ಶಾಖೆಗಳೊಂದಿಗೆ ಬೆಳೆದಿರುವ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ಕಾರ್ಯಕರ್ತರ ಜನಹಿತ ಹಾಗೂ ಜನಪರ ಸೇವೆಯಿಂದಾಗಿ ಅನೇಕ ಮಂದಿ ಇಂದು ವ್ಯಸನಮುಕ್ತರಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಲ್ಲರ ಮನೆಗಳಲ್ಲಿ ಹಾಗೂ ಮನಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮದಿರೆಯ ಕಬಂಧಬಾಹುಗಳಲ್ಲಿ ಬಂಧಿತರಾದವರು ಯಾವುದೇ ಸಂಶಯ, ಸಮಸ್ಯೆಗಳಿದ್ದರೂ ಜನಜಾಗೃತಿ ವೇದಿಕೆಯ ಕಾರ್ಯಕರ್ತರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ವಿಶೇಷ ಸೇವೆ, ಸಾಧನೆ ಮಾಡಿ ಪ್ರಶಸ್ತಿ, ಪುರಸ್ಕಾರ ಪಡೆದ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.. ಸತೀಶ್ ಬಳೆಗಾರ ಬರೆದ “ ಕತ್ತಲ ಕುಡುಕರ ಬೆಳಕಿನ ಮಕ್ಕಳು” ಎಂಬ ಕೃತಿಯನ್ನು ಶ್ರದ್ಧಾಅಮಿತ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಧ್ಯಪಾನ ಆಧುನಿಕ ಜೀವನಶೈಲಿಯಾಗಿದೆ ಎಂಬ ಭ್ರಮೆಯ ಆತಂಕವಿದೆ. ಮದ್ಯವ್ಯಸನಿಗಳ ಮಕ್ಕಳ ಬಾಳಿನ ಗೋಳು ವರ್ಣಿಸಲಸದಳವಾಗಿದ್ದು, ಮಕ್ಕಳು ಪೋಷಕರ ಪ್ರೀತಿ, ಭದ್ರತೆ, ರಕ್ಷಣೆಯಿಂದ, ವಂಚಿತರಾಗುತ್ತಾರೆ. ಹಾಗಾಗಿ ಶಾಲಾ-ಕಾಲೇಜುಗಳಲ್ಲಿ “ಸ್ವಾಸ್ಥಸಂಕಲ್ಪ” ಕಾರ್ಯಕ್ರಮದ ಮೂಲಕ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದರು. ಕೊಪ್ಪಳ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ನಟರಾಜ ಬಾದಾಮಿ ಅವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ನೂತನ ರಾಜ್ಯ ಸಂಘಟನೆಯ ನೂತನ ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ರಾಜ್ಯ ಸಂಘಟನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಜಣ್ಣ ಕೊರವಿ ಅವರನ್ನು ಗೌರವಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಆಶಯ ನುಡಿಗಳೊಂದಿಗೆ ಯೋಜನೆಯ ಸೇವೆ, ಸಾಧನೆಯ ಪಕ್ಷಿನೋಟ ವಿವರಿಸಿದರು. ಜನಜಾಗೃತಿ ವೇದಿಕೆ ಟ್ರಸ್ಟ್ನ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರಾಮಸ್ವಾಮಿ ಧನ್ಯವಾದವಿತ್ತರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಗಣೇಶ ಆಚಾರ್ಯ ಮತ್ತು ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು.

ಇಂದಿನಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಳ ಬ್ರಹ್ಮಕಲಶೋತ್ಸವ

Article Image

ಇಂದಿನಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಳ ಬ್ರಹ್ಮಕಲಶೋತ್ಸವ

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಜ. 8ರಿಂದ 20ರವರೆಗೆ ಸೀಮೆಯ ತಂತ್ರಿಗಳಾದ ನಡ್ಡತಾಡಿ ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೋಕ್ತಸರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ತಿಳಿಸಿದ್ದಾರೆ. ಅಜಿಲ ವಂಶಸ್ತರು 12 ಮಾಗಣೆಗೆ 32 ಗ್ರಾಮಗಳನ್ನು ಒಳಗೊಂಡು ಅಳದಂಗಡಿ ಶ್ರೀ ಸೋಮನಾಥೇಶ್ವರಿ, ವೇಣೂರು ಶ್ರೀ ಮಹಾಲಿಂಗೇಶ್ವರ, ಕೇಳ ಪಂಚಲಿಂಗೇಶ್ವರ, ಬರಾಯ ಗೋಪಾಲಕೃಷ್ಣ ದೇವಾಲಯಗಳನ್ನು ಸ್ಥಾಪನೆ ಮಾಡಿದ್ದು ಅಳದಂಗಡಿಯ ಈ ದೇವಾಲಯವು ಅಜಿಲ ಸೀಮೆಗೆ ಸಂಬಂಧಪಟ್ಟ ದೇವಾಲಯವಾಗಿದೆ. ಈ ದೇವಾಲಯದಲ್ಲಿ 2007ರಲ್ಲಿ ಸೀಮೆಯ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು. 12 ವರ್ಷಕ್ಕೆ ಬ್ರಹ್ಮಕಲಶೋತ್ಸವ ಮಾಡಬೇಕಾಗಿದ್ದು ಸೀಮೆಯಲ್ಲಿ ಹಲವು ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ ಇದ್ದುದರಿಂದ ಪ್ರಸಕ್ತ ದೇವಳದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ 18 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಅದರಂತೆ ಅನೇಕ ಜೀರ್ಣೋದ್ದಾರ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಚಿಂತಿಸಲಾಗಿದೆ. ದೇವಳದ ಪ್ರಾಂಗಣ, ಒಳಾಂಗಣದ ನವೀಕರಣ, ಸುತ್ತ ಪ್ರಾಂಗಣದಲ್ಲಿ ಇಂಟರ್‌ಲಾಕ್ ಅಳವಡಿಕೆ, ಪಾಕಶಾಲೆ ನಿರ್ಮಾಣ ಹಾಗೂ ಋತ್ವಿಜರ ಭೋಜನ ಶಾಲೆ, ರಜತ ಪಲ್ಲಕ್ಕಿ ಸಮರ್ಪಣೆ, ಬ್ರಹ್ಮಕಲಶೋತ್ಸವ ಸೇರಿದಂತೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಸೀಮೆಯ ಭಕ್ತರ ಸಹಕಾರದಿಂದ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಕಲಶೋತ್ಸವ ಮತ್ತು ಉಪಸಮಿತಿ ರಚಿಸಲಾಗಿದೆ. ಈ ಬಾರಿ ಬ್ರಹ್ಮಕಲಶೋತ್ಸವದಲ್ಲಿ ದೇವತಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜ. 2ರಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಚಪ್ಪರ ಮುಹೂರ್ತ ನೆರವೇರಿಸಿದ್ದಾರೆ. ಜ. 8ರಂದು ಅಳದಂಗಡಿ ಬಸ್ ನಿಲ್ದಾಣದಿಂದ ಹೊರೆಕಾಣಿಕೆ ಮೆರವಣಿಗೆ ತಾಲೂಕಿನ ಕುಣಿತ ಭಜನಾ ತಂಡಗಳ ಭಜನೆಯೊಂದಿಗೆ ನಡೆಯಲಿದೆ. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ. ಜ. 10ರಂದು ನಡೆಯುವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಜ. 12ರಂದು ಬ್ರಹ್ಮ ಕುಂಭಾಭಿಷೇಕ ಜರುಗಲಿದೆ. ಜ. 14ರಿಂದ 20ರವರೆಗೆ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ 'ಸೇವಾಶ್ರೀ ಪ್ರಶಸ್ತಿ ಪ್ರದಾನ

Article Image

ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ 'ಸೇವಾಶ್ರೀ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಜೆಸಿ ಸಪ್ತಾಹ ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಗೆ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಳಿಯ ಸಂಸ್ಥೆಯ ಮ್ಯಾನೇಜರ್ ಲೋಹಿತ್ ಮತ್ತು ಸಿಬ್ಬಂದಿಗಳು ಪ್ರಶಸ್ತಿ ಸ್ವೀಕರಿಸಿದರು. ರಾಜ್ಯದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆಗಳಲ್ಲೊಂದಾದ ಮುಳಿಯ ಜುವೆಲ್ಸ್ ಪರಿಶುದ್ಧತೆಗೆ ಹೆಸರುವಾಸಿ. ಚಿನ್ನಾಭರಣಗಳ ಉದ್ಯಮದೊಂದಿಗೆ ಸಮಾಜಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಕಲೆ ಹೀಗೆ ಹತ್ತು ಹಲವು ಸ್ತರಗಳಲ್ಲಿ ಸಂಸ್ಥೆಯು ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್ ಡಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಜೆಸಿಐ ವಲಯಾಧ್ಯಕ್ಷ ಗಿರೀಶ್ ಎಸ್.ಪಿ, ಉದ್ಯಮಿ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಜೆಎಸಿ ನಿರ್ದೇಶಕ ಕಿರಣ್ ಕುಮಾರ್ ಶೆಟ್ಟಿ, ವಲಯ ಉಪಾಧ್ಯಕ್ಷ ಶಂಕರ್ ರಾವ್, ಪೂರ್ವಾಧ್ಯಕ್ಷರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಚಿದಾನಂದ ಇಡ್ಯ, ವಸಂತ ಶೆಟ್ಟಿ ಶ್ರದ್ದಾ, ರವೀಂದ್ರ ಶೆಟ್ಟಿ ಸುರಭಿ, ಸುಭಾಶ್ಚಂದ್ರ ಎಂಪಿ, ಅಶೋಕ್ ಕುಮಾರ್ ಬಿಪಿ, ಜೆಸಿ ಸಪ್ತಾಹ ಸಂಯೋಜಕಿ ಹೇಮಾವತಿ, ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್, ರಕ್ಷಿತ್ ಅಂಡಿಂಜೆ, ಶೈಲೇಶ್, ಪೂರ್ವಾಧ್ಯಕ್ಷರು, ಜೆಸಿ ಪದಾಧಿಕಾರಿಗಳು, ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ 2025ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ

Article Image

ಸಿರಿ ಸಂಸ್ಥೆಯ 2025ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ

ಧರ್ಮಸ್ಥಳ : ಸಿರಿ ಸಂಸ್ಥೆಯ ವತಿಯಿಂದ 2025ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ‍್ಯಕ್ರಮವು ಡಿ.23 ರಂದು ಧರ್ಮಸ್ಥಳದ ಬೀಡು ಕಛೇರಿಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಸಿರಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಹೇಮಾವತಿ ವೀ ಹೆಗ್ಗಡೆ ದಂಪತಿಗಳು ಸಿರಿ ಸಂಸ್ಥೆಯ ವತಿಯಿಂದ 2025ನೇ ವರ್ಷದ ನೂತನ ವಾಲ್ ಕ್ಯಾಲೆಂಡರನ್ನು ಮತ್ತು ಟೇಬಲ್ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ದನ್ ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅದೇ ರೀತಿ ಸಿರಿ ಕ್ಯಾಲೆಂಡರ್ ಮುದ್ರಣ ಕಾರ‍್ಯದಲ್ಲಿ ಸಹಕರಿಸಿದ ಮಂಜುಶ್ರೀ ಪ್ರಿಂಟರ್ಸ್ ನ ಶೇಖರ್ ಹಾಗೂ ಸಿರಿ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ಮುಖ್ಯ ನರ‍್ವಹಣಾಧಿಕಾರಿ ಪ್ರಸನ್ನ, ಸಿರಿ ಸಂಸ್ಥೆಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು ಹಾಗೂ ಮಾರುಕಟ್ಟೆ ವಿಭಾಗದ ವಿವಿಧ ವಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಠಿಣ ದುಡಿಮೆ, ಪರಿಶ್ರಮದಿಂದ ಉತ್ಕೃಷ್ಟ ಸಾಧನೆ: ಡಾ| ಹೆಗ್ಗಡೆ

Article Image

ಕಠಿಣ ದುಡಿಮೆ, ಪರಿಶ್ರಮದಿಂದ ಉತ್ಕೃಷ್ಟ ಸಾಧನೆ: ಡಾ| ಹೆಗ್ಗಡೆ

ಉಜಿರೆ: ವಿದ್ಯಾರ್ಥಿಗಳು ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಕಠಿಣ ಪ ರಿಶ್ರಮ , ಸಾಧನೆಯ ಅಧ್ಯಯನದಿಂದ ಯಶಸ್ಸಿನ ಪಥದಲ್ಲಿ ಸಾಗಬಹುದು. ಕ್ರೀಡೆ, ಯೋಗ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಳ್ಳುವುದರಿಂದ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡು ಅಧ್ಯಯನದಲ್ಲಿ ಉತೃಷ್ಟ ಸಾಧನೆ ಮಾಡಲು ಸಾಧ್ಯ. ಪ್ರತಿ ವರ್ಷ ಪ್ರತಿ ಶತ ಫಲಿತಾಂಶದಿಂದ ಸಂಸ್ಥೆಗೆ ಕೀರ್ತಿ ತರುವಂತವರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು. ಅವರು ಡಿ 17ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಅನುಕೂಲತೆ ಕಲ್ಪಿಸಿಕೊಡುತ್ತಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ಇಲ್ಲಿ ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅಮೇರಿಕ ಮುಂತಾದ ಕಡೆಗಳಲ್ಲಿ ಉನ್ನತ ಉದ್ಯೋಗದಲ್ಲಿ ತೊಡಗಿ ಸಂಸ್ಥೆಯ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ . ಕಾಲೇಜಿನಿಂದ ಹೊರಬರುತ್ತಲೇ ಕ್ಯಾಂಪಸ್ ಸೆಲೆಕ್ಷನ್ ನಿಂದ ಉತ್ತಮ ಉದ್ಯೋಗಾವಕಾಶಗಳು ಕಾದಿರುತ್ತವೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಪ್ರತಿ ವರ್ಷ ವಿಶ್ವವಿದ್ಯಾಲಯದ ರ್ಯಾಂಕ್ ಗಳು ವಿದ್ಯಾರ್ಥಿಗಳ ಪಾಲಾಗುತ್ತಿರುವುದು ಹೆಮ್ಮೆಯ ವಿಚಾರ. ಈ ಬಾರಿ ವಿ.ವಿ.ಯ 9ನೇ ರಾಂಕ್ ಪಡೆದ ವಿದ್ಯಾರ್ಥಿ ಹಾಗು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಅವರು ಕಾಲೇಜಿನ ವಿ.ವಿ.ಯ 9ನೇ ರಾಂಕ್ ಪಡೆದ ವಿದ್ಯಾರ್ಥಿ, ಶಿಕ್ಷಣ,ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗು ಮೂವರು ಪಿ ಎಚ್ ಡಿ ಪಡೆದ ಉಪನ್ಯಾಸಕರನ್ನು ಪುರಸ್ಕರಿಸಿ,ಉಜ್ವಲ ಭವಿಷ್ಯ ಹಾಗು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು. ಮಣಿಪಾಲ ಕಾರ್ಮಿಕ್ ಡಿಸೈನ್ ಪ್ರೈ .ಲಿ .ನ ಡೈರೆಕ್ಟರ್ ಮತ್ತು ಚೀಫ್ ಟೆಕ್ನಿಕಲ್ ಆಫೀಸರ್ ಗುರುರಾಜ್ ಬಂಕಾಪುರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್., ಕಾರ್ಯಕ್ರಮ ಸಂಯೋಜಕರಾದ ಮೆಕ್ಯಾನಿಕಲ್ ವಿಭಾಗದ ಡಾ!ಬಸವ, ಸಿವಿಲ್ ವಿಭಾಗದ ಡಾ!ಕೃಷ್ಣಪ್ರಸಾದ್ ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಅಶೋಕಕುಮಾರ್ ಟಿ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಸಂದೀಪ್ ಸ್ವಾಗತಿಸಿ, ಸಿವಿಲ್ ಎಂಜಿನೀಯರಿಂಗ್ ವಿಭಾಗದ ಶ್ರೀನಿಧಿ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು.

ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಯಶಸ್ವಿ ಪಾದಯಾತ್ರೆ

Article Image

ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಯಶಸ್ವಿ ಪಾದಯಾತ್ರೆ

ಉಜಿರೆ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿಂದ ನಿತ್ಯವೂ, ನಿರಂತರವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ತಮಗೆ ಸುಖ-ದುಃಖ ಮತ್ತು ಪಾಪ - ಪುಣ್ಯದ ಭಯ ಹಾಗೂ ಚಿಂತೆ ಇಲ್ಲ. ಎರಡನ್ನೂ ತಾವು ಸಮಾನವಾಗಿ ಸ್ವೀಕರಿಸಿ ಶ್ರೀ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ನಿಶ್ಚಿಂತೆಯಿಂದ ಇರುತ್ತೇನೆ. ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವವೇ ತಮಗೆ ಶ್ರೀರಕ್ಷೆಯಾಗಿದೆ ಎಂದರು. 2025 ರ ಜನವರಿ 7 ಮತ್ತು 8 ರಂದು ಮಾನ್ಯ ಉಪರಾಷ್ಟ್ರಪತಿಗಳನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು ನೂತನ ಸರತಿ ಸಾಲಿನ (ಕ್ಯೂ ಕಾಂಪ್ಲೆಕ್ಸ್) ಕಟ್ಟಡವನ್ನು ಉದ್ಘಾಟಿಸುವರು. ಅಂದು 60 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು. ಉಡುಪಿಯಲ್ಲಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಹಾಗಾಗಿ ತಾವು ಖರೀದಿಸುವ ಅವಶ್ಯಕತೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಚಿಂತೆ ಮಾಡದೆ ತಾವು ಎಲ್ಲವನ್ನೂ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ಸಂತೋಷದಿಂದ ಸೇವಾಕಾರ್ಯಗಳ ಮೂಲಕ ಶ್ರೀ ಸ್ವಾಮಿ ಸೇವೆ ಮಾಡುತ್ತಿರುವುದಾಗಿ ತಿಳಿಸಿದರು. ಲಕ್ಷದೀಪೋತ್ಸವವು ಎಲ್ಲರ ಮನೆಗಳಿಗೂ, ಮನಗಳಿಗೂ ಬೆಳಕನ್ನು ನೀಡಲಿ. ಎಲ್ಲೆಲ್ಲೂ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವುದೇ ಲಕ್ಷದೀಪೋತ್ಸವದ ಉದ್ದೇಶವಾಗಿದೆ. 12 ವರ್ಷಗಳ ಹಿಂದೆ ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆರಂಭಿಸಿದ ಪಾದಯಾತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ಪಾದಯಾತ್ರೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ತಮ್ಮೆಲ್ಲರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳಕ್ಕೆ ಯಾವುದೇ ರೀತಿಯಲ್ಲಿ ಅಪಚಾರ, ಅಪಪ್ರಚಾರವಾದರೂ ಎಲ್ಲರೂ ನ್ಯಾಯಾಲಯದಲ್ಲಿ ಹಾಗೂ ಜನತಾನ್ಯಾಯಾಲಯದಲ್ಲಿ ಹೋರಾಡಲು ತಾವು ಸಿದ್ಧರು ಹಾಗೂ ಬದ್ಧರು ಎಂದು ಅವರು ಭರವಸೆ ನೀಡಿದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಸುಗಮ ಪಾದಯಾತ್ರೆ ಬಗ್ಗೆ ಎಲ್ಲರನ್ನೂ ಶ್ಲಾಘಿಸಿ ಅಭಿನಂದಿಸಿದರು. ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್‌ವರ್ಮ ಉಪಸ್ಥಿತರಿದ್ದರು. ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆ

Article Image

ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆ

United Nations Children’s Emergency Fund (UNICEF) ನ ಹೈದರಾಬಾದ್ ಫೀಲ್ಡ್ ಆಫೀಸ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಮಕ್ಕಳ ಕೇಂದ್ರಿತ ಉಪಕ್ರಮಗಳನ್ನು ಬಲಪಡಿಸಲು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯೋಜನೆಯನ್ನು ರೂಪಿಸಿದೆ. UNICEFನ ಹೈದರಾಬಾದ್ ಫೀಲ್ಡ್ ಆಫೀಸ್ (HFO), ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ರಾಜ್ಯಗಳ ವ್ಯಾಪ್ತಿಯನ್ನು ಹೊಂದಿದೆ. ಫೀಲ್ಡ್ ಆಫೀಸಿನ ಮುಖ್ಯಸ್ಥರಾದ ಡಾ. ಝೆಲಾಲೆಮ್ ಟಫೆಸ್ಸೆಯವರ ನೇತೃತ್ವದ ತಂಡ ಇಂದು ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ-ಕೇಂದ್ರಿತ ಗಂಭೀರ ಸಮಸ್ಯೆಗಳಾದ ಮಕ್ಕಳ ಬಾಲ್ಯದ ಬೆಳವಣಿಗೆ, ಅಪೌಷ್ಟಿಕತೆ, ಬಾಲ್ಯ ವಿವಾಹ ಸಮಸ್ಯೆ ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸುವುದರ ಕುರಿತು ಚರ್ಚಿಸಿದರು. ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಬಹಳ ಮಹತ್ವವಾಗಿದ್ದು, ಅವರನ್ನು ಉತ್ತಮ ಪೋಷಕರನ್ನಾಗಿಸಲು ಮತ್ತು ಮಕ್ಕಳನ್ನು ಸಾಮಾಜಿಕ ಹಾಗೂ ಮತ್ತು ಉತ್ತಮ ವ್ಯಕ್ತಿತ್ವದವರನ್ನಾಗಿಸಲು ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಡಾ.ಟಾಫೆಸ್ಸೆಯವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು (SKDRDP) ಈ ಕಾರ್ಯಕ್ರಮವನ್ನು ಸ್ವೀಕರಿಸಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಿಸಲು ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದೆ. ಈ ಸಹಯೋಗವು SKDRDP ಮತ್ತು UNICEF ನಡುವಿನ ಸಹಭಾಗಿತ್ವದಲ್ಲಿ ‘ನೀರು ಉಳಿಸಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ರಾಜ್ಯದ 14 ಬರಪೀಡಿತ ಜಿಲ್ಲೆಗಳಲ್ಲಿ ಅನುಷ್ಠಾನಿಸಿದೆ. SKDRDPಯು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸುತ್ತಿದೆ. ಸಭೆಯಲ್ಲಿ ಎಸ್‌ಕೆಡಿಆರ್‌ಡಿಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಹಣಕಾಸು ಅಧಿಕಾರಿಯಾದ ಶಾಂತಾರಾಮ ಪೈ, UNICEF HFO ವಾಶ್ ಸ್ಪೆಷಲಿಸ್ಟ್ ವೆಂಕಟೇಶ ಅರಳಿಕಟ್ಟಿ, UNICEF HFO ವಾಶ್ ಮತ್ತು CCES ತಜ್ಞ ಡಾ. ಮಟ್ಪಾಡಿ ಪ್ರಭಾತ್ ಕಲ್ಕೂರ, ವಸಂತ್, ಜಗದೀಶ್ ಹಾಗೂ ನಿಖಿಲೇಶ್ ಇವರು ಉಪಸ್ಥಿತರಿದ್ದರು. ಈ ಸಹಯೋಗವು ಎರಡೂ ಸಂಸ್ಥೆಗಳ ಸಾಂಸ್ಥಿಕ ಸಹಭಾಗಿತ್ವದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ರಾಜ್ಯದ ಮಕ್ಕಳ ಉಜ್ವಲ ಭವಿಷ್ಯವನ್ನು ಬೆಳೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

“ಮಂಜೂಷಾ” ವಸ್ತುಸಂಗ್ರಹಾಲಯ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಮಾನ್ಯತೆ

Article Image

“ಮಂಜೂಷಾ” ವಸ್ತುಸಂಗ್ರಹಾಲಯ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಮಾನ್ಯತೆ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ರೂಪಿಸಿದ ಅಪೂರ್ವ “ಮಂಜೂಷಾ” ವಸ್ತುಸಂಗ್ರಹಾಲಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ವಿಶೇಷ ಮಾನ್ಯತೆಗೆ ಪಾತ್ರವಾಗಿದೆ. ನವದೆಹಲಿಯಲ್ಲಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಅನಿಲ್ ಕುಮಾರ್ ಶರ್ಮ ಹೆಗ್ಗಡೆಯವರ 76ನೆ ಜನ್ಮದಿನಾಚರಣೆ ಶುಭ ಸಂದರ್ಭದಲ್ಲಿ ಕಾರ್ತಿಕ ಸೋಮವಾರ ಶುಭದಿನ ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ಅಭಿನಂದನೆಗಳೊAದಿಗೆ ಪ್ರಮಾಣಪತ್ರವನ್ನು ಸಮರ್ಪಿಸಿದರು. ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ನಮ್ಮ ಭವ್ಯ ಇತಿಹಾಸ, ಕಲೆ, ಸಂಸ್ಕೃತಿಗೆ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಠ ಸೇವೆಯಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. 7500 ತಾಳೆಗರಿ ಹಸ್ತಪ್ರತಿಗಳು, 21,000 ಕಲಾತ್ಮಕ ವಸ್ತುಗಳು, 25,000 ಅಪೂರ್ವ ಪ್ರಾಚೀನ ಗ್ರಂಥಗಳು ಹಾಗೂ ನೂರಕ್ಕೂ ಮಿಕ್ಕಿ ವಿಂಟೇಜ್ ಕಾರುಗಳ ಸಂಗ್ರಹದ ಬಗ್ಯೆ ಹೆಗ್ಗಡೆಯವರನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಕಂಚಿಕಾಮಕೋಟಿ ಸ್ವಾಮೀಜಿ : ಧರ್ಮಸ್ಥಳ ಪುರಪ್ರವೇಶ, ಅನುಗ್ರಹ ಭಾಷಣ

Article Image

ಕಂಚಿಕಾಮಕೋಟಿ ಸ್ವಾಮೀಜಿ : ಧರ್ಮಸ್ಥಳ ಪುರಪ್ರವೇಶ, ಅನುಗ್ರಹ ಭಾಷಣ

ಉಜಿರೆ: ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ಸದಾ ಕಾಪಾಡುತ್ತದೆ. ಧರ್ಮಸ್ಥಳ ಸೌಂದರ್ಯ ನಗರ, ಸಂಸ್ಕೃತಿ ನಗರ ಮತ್ತು ಸೇವಾ ನಗರ. ಧರ್ಮೋ ರಕ್ಷತಿ ರಕ್ಷಿತ:. ಇಡೀ ದೇಶಕ್ಕೆ ಮುಕುಟಪ್ರಾಯವಾದ ಧರ್ಮಸ್ಥಳದಲ್ಲಿ ಅಮೂಲ್ಯ ಆಸ್ತಿಯಾದ ಭಕ್ತಿ, ಸೇವೆ, ಅನುಭವ, ನಾಯಕತ್ವ, ಪ್ರತಿಷ್ಠೆ, ಪ್ರಜ್ಞಾ, ಕೀರ್ತಿ ಎಲ್ಲವೂ ಇದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಒಬ್ಬ ಸಾಧಾರಣ ವ್ಯಕ್ತಿಯಾಗಿ. ಅಸಾಧಾರಣ ಸೇವೆ, ಸಾಧನೆ ಮಾಡಿದ್ದಾರೆ. ಅವರ ದಕ್ಷ ಕಾರ್ಯವೈಖರಿ, ಆದರ್ಶ ನಾಯಕತ್ವ, ಸಾಮಾಜಿಕ ಸೇವಾ ಕಳಕಳಿ ಮತ್ತು ಹೃದಯಶ್ರೀಮಂತಿಕೆಯನ್ನು ಮನ್ನಿಸಿ ಪ್ರಧಾನಿ ನರೇಂದ್ರಮೋದಿಯವರೇ ಹೆಗ್ಗಡಯವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಕರ್ನಾಟಕ ರಾಜ್ಯಕ್ಕೇ ಸಂದ ಗೌರವ ಎಂದು ಕಂಚಿಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು. ಅವರು ಶನಿವಾರ ಧರ್ಮಸ್ಥಳ ಕ್ಷೇತ್ರಕ್ಕೆ ಪುರಪ್ರವೇಶ ಮಾಡಿದಾಗ ಮುಖ್ಯ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದರು, ದಾರಿದ್ರ್ಯಾಂ ನಿರ್ಮೂಲನೆಯೊಂದಿಗೆ ಭಾವದಾರಿದ್ರ್ಯಾಂ ನಿರ್ಮೂಲನವೂ ಆಗಬೇಕು ಎಂದು ಹೇಳಿದ ಸ್ವಾಮೀಜಿ ಹೆಗ್ಗಡೆ ಕುಟುಂಬದವರ ಅವಿಭಕ್ತ ಕುಟುಂಬ ಪದ್ಧತಿಯ ಜೀವನ ಶೈಲಿಯನ್ನು ಶ್ಲಾಘಿಸಿ ಅಭಿನಂದಿಸಿದರು. ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಸೊಗಡನ್ನು ಶ್ಲಾಘಿಸಿದ ಅವರು ವಿದ್ಯೆ, ಕಲೆಗಳು ಮತ್ತು ವಿದ್ವಾಂಸರ ರಕ್ಷಣೆಯಾಗಬೇಕು ಎಂದು ಸಲಹೆ ನೀಡಿದರು. ಕಂಚಿಮಠದಲ್ಲಿ ಕೃಷಿ ಸುಭಿಕ್ಷೆಗಾಗಿ ಪ್ರತಿವರ್ಷ ಮಾಡುವ ಅನ್ನಾಭಿಷೇಕ ಸೇವೆಯನ್ನು ತಾವು ಧರ್ಮಸ್ಥಳದಲ್ಲಿ ಕೂಡಾ ಮಾಡುವುದಾಗಿ ತಿಳಿಸಿದರು. ಅಲ್ಲದೆ ಸೋಮವಾರ ಕಾರ್ತಿಕ ಪೂಜೆ, ದ್ವಾದಶಿ ಪೂಜೆ, ತ್ರಯೋದಶಿ ಪೂಜೆ ಮೊದಲಾದ ವಿಶೇಷ ಸೇವೆಗಳನ್ನು ಮಾಡುವುದಾಗಿ ತಿಳಿಸಿದರು. ಅನ್ನಪೂರ್ಣ ಛತ್ರದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನ ವ್ಯವಸ್ಥೆ ಹೊಂದಿರುವ ಭೋಜನಾಲಯದ ಉದ್ಘಾಟನೆಗೆ ಹೆಗ್ಗಡೆಯವರು ಆಹ್ವಾನಿಸಿದ್ದು ತಾವು ಇದೇ ಸಂದರ್ಭ ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದರು. ಬಹುಮುಖ ಪ್ರತಿಭೆ ಹಾಗೂ ಆದರ್ಶ ವ್ಯಕ್ತಿತ್ವ ಹೊಂದಿದ ಹೆಗ್ಗಡೆಯವರ ಹೃದಯ ಶ್ರೀಮಂತಿಕೆ ಹಾಗೂ ಸೇವಾ ಕಾಳಜಿ ಇಡೀ ದೇಶಕ್ಕೆ ಮಾದರಿಯಾಗಿದೆ. ಇತರರಿಗೂ ಸ್ಫೂರ್ತಿ, ಪ್ರೇರಣೆ ನೀಡುತ್ತವೆ ಎಂದರು. ಸರ್ವರ ಬೌದ್ಧಿಕ, ಆಧ್ಯಾತ್ಮಿಕ ಹಾಗೂ ಸಾರ್ವಕಾಲಿಕ ಭದ್ರತೆ ಮತ್ತು ವಿಕಾಸಕ್ಕಾಗಿ ಅವಕಾಶ ಕಲ್ಪಿಸಿರುವುದು ಹೆಗ್ಗಡೆಯವರಿಗೆ ವಿಶೇಷ ಮಾನ್ಯತೆ ಮತ್ತು ಗೌರವ ದೊರಕುವಂತೆ ಮಾಡಿದೆ. ಸ್ವಾಮೀಜಿಯವರು ಹೆಗ್ಗಡೆಯವರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ವಿಶೇಷವಾಗಿ ಗೌರವಿಸಿ ಆಶೀರ್ವದಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾಯಶೋವರ್ಮ ಮತ್ತು ಪೂರಣ್‌ವರ್ಮ ಉಪಸ್ಥಿತರಿದ್ದರು.

ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರ ಧರ್ಮಸ್ಥಳ ಪುರಪ್ರವೇಶ

Article Image

ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರ ಧರ್ಮಸ್ಥಳ ಪುರಪ್ರವೇಶ

ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ದಿನಾಂಕ: 09-11-2024ರಂದು ಸಂಜೆ ಗಂಟೆ 6.00 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ತಲುಪಿ ಭಕ್ತರೆಲ್ಲರಿಗೂ ಅನುಗ್ರಹ ಭಾಷಣವನ್ನು ಮಾಡಲಿದ್ದಾರೆ. ದಿನಾಂಕ: 09-11-2024 ರಿಂದ 16-11-2024ರ ತನಕ ಕ್ಷೇತ್ರದಲ್ಲಿ ಮೊಕ್ಕಾಂ ಮಾಡಲಿದ್ದಾರೆ. ದಿನಾಂಕ: 14-11-2024 ಗುರುವಾರ ಸಂಜೆ ಗಂಟೆ 5.00ಕ್ಕೆ ಅನ್ನಪೂರ್ಣದ ಮೇಲಂತಸ್ತಿನಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನಾಲಯವನ್ನು ಪೂಜ್ಯ ಸ್ವಾಮೀಜಿಯವರು ಉದ್ಘಾಟಿಸಲಿರುವರು.

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Article Image

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

ಬೆಳ್ತಂಗಡಿ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು, ಅರ್ಥಿಕವಾಗಿ ಬಲಿಷ್ಡರಾಗಬೇಕು ಅದಕ್ಕಾಗಿ ಅವರಿಗೆ ಉದ್ಯೋಗ ಬೇಕು ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಸಿರಿ ಸಂಸ್ಥೆ ಪ್ರಾರಂಭಿಸಿದ್ದು ಇದರಲ್ಲಿ ನೂರಾರು ಉತ್ಪನ್ನಗಳಿದ್ದು ಇದರ ಗುಣಮಟ್ಟದಿಂದ ರಾಜ್ಯಾದ್ಯಂತ ಮನೆಮಾತಾಗಿದೆ ಎಂದು ಉದ್ಯಮಿ ಸಿರಿ ಸಂಸ್ಥೆಯ ಟ್ರಸ್ಟೀ ರಾಜೇಶ್ ಪೈ ಹೇಳಿದರು. ಅವರು ಶನಿವಾರ ಉಜಿರೆ ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿ ಗ್ರಾಹಕರಿಗೆ ಮತ್ತು ಉದ್ದಿಮೆದಾರಿಗೆ ವಿಜಯವಾಣಿ ಈ ವಿಜಯೋತ್ಸವ ಉತ್ತಮ ಯೋಜನೆ. ಇದರ ಮುಖ್ಯಸ್ಥರಾದ ವಿಜಯಸಂಕೇಶ್ವರ್ ರವರು ಸ್ವತಃ ಶ್ರಮಜೀವಿ ಅವರ ವೃತ್ತಿ ಪ್ರಾಮಾಣಿಕತೆ, ಶ್ರಮದಿಂದ ಅವರ ಎಲ್ಲಾ ಉದ್ಯಮಗಳು ಯಶಸ್ವಿಯಾಗಿದ್ದು ಇದು ಇತರ ಉದ್ಯಮಿಗಳಿಗೆ ಆದರ್ಶವಾಗಿದೆ. ಅವರ ವಿಜಯವಾಣಿ ಪತ್ರಿಕೆಯು ಉತ್ತಮ ವರದಿ, ಲೇಖನಗಳಿಂದ ಮನೆಮಾತಾಗಿದ್ದು ಇಡೀ ಕುಟುಂಬ ಓದುವ ಪತ್ರಿಕೆಯಾಗಿದೆ. ಎಲ್ಲರು ಸಿರಿ ಉತ್ಪನ್ನಗಳನ್ನು ಖರೀದಿಸಿ ಕಾರು, ಬೈಕ್ ಸಹಿತ 2500 ಬಹುಮಾನಗಳನ್ನು ಪಡೆಯುವ ಭಾಗ್ಯ ಬರಲಿ ಎಂದರು. ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ, ಲಕ್ಷ್ಮೀ ಗ್ರುಪ್ ನ ಮಾಲಕ ಮೋಹನ್ ಕುಮಾರ್ ಮಾತನಾಡಿ ಯಾವುದೇ ಉತ್ಪನ್ನಗಳು ಗುಣಮಟ್ಟ ಇದ್ದಾಗ ಗ್ರಾಹಕರು ಕೇಳಿ ಪಡೆಯುತ್ತಾರೆ .ಗುಣಮಟ್ಟದ ಉತ್ಪನ್ನಗಳು ಸಿರಿ ಸಂಸ್ಥೆಯಲ್ಲಿದೆ. ಮಹಿಳೆಯರ ಭವಿಷ್ಯದ ದ್ರುಷ್ಡಿಯಿಂದ ಡಾ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಡೆಯವರ ಕನಸಿನ ಸಿರಿ ಸಂಸ್ಥೆ ಬೆಳೆಯುತ್ತಿದ್ದು ಇದರ ಉತ್ಪನ್ನಗಳು ಖರೀದಿಸಿ ವಿಜಯವಾಣಿಯ ಅದ್ರುಷ್ಟ ಬಹುಮಾನ ಗೆಲ್ಲಬಹುದು ಎಂದರು. ಸಿರಿ ಸಿಬ್ಬಂದಿಗಳ ಶ್ರಮದಿಂದ ಸಿರಿ ಸಂಸ್ಥೆ ಬೆಳೆದಿದೆ: ಜನಾರ್ದನ್ ಒಂದು ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಯ ಪ್ರಾಮಾಣಿಕ, ಶ್ರಮದಿಂದ ಇದೆ. ಇದು ಸಿರಿ ಸಂಸ್ಥೆಯ ಬೆಳವಣಿಗೆಗೂ ಸಿಬ್ಬಂದಿಯ ಪ್ರಾಮಾಣಿಕತೆ, ಶ್ರಮ ಕಾರಣ. ಸಿರಿ ಸಂಸ್ಥೆಯ ಬಗ್ಗೆ ಸಂಸ್ಥೆಯ ಅದ್ಯಕ್ಷರಾದ ಶ್ರಿಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಮತ್ತು ಸಿರಿ ಸಂಸ್ಥೆ ಕನಸು ಕಂಡ ಹೇಮಾವತಿ ಹೆಗ್ಗಡೆಯವರು ಅಪಾರ ಪ್ರೀತಿಸುತ್ತಿದ್ದು ಮಹಿಳೆಯರು ಆರ್ಥಿಕವಾಗಿ ಬಲಿಷ್ಟವಾಗಬೇಕು ಎನ್ಬುತ್ತಾರೆ. ಸಿರಿ ಉತ್ಪನ್ನಗಳ ಆದಾಯ ಸಿರಿ ಬೆಳವಣಿಗೆಗೆ ವಿನಿಯೋಗಿಸಲು ಹೇಳಿದ್ದಾರೆ. ಸಿರಿ ಸಂಸ್ಥೆಗೆ ಸುಮಾರು 80 ಕೋಟಿ ವೆಚ್ಚದ ಅತ್ಯಾಕರ್ಷಕ ಕಟ್ಟಡವನ್ನು ಹೆಗ್ಗಡೆಯವರು ಮಂಜೂರುಗೊಳಿಸಿದ್ದು ಉದ್ಘಾಟನಾ ಹಂತದಲ್ಲಿದೆ. ವಿಜಯವಾಣಿ ವಿಜಯೋತ್ಸವದಲ್ಲಿ ಸಿರಿ ಸಂಸ್ಥೆ ಪಾಲುದಾರಿಕೆ ಪಡೆದದ್ದು ಹೆಮ್ಮೆಯಾಗಿದೆ.ಕಳೆದ ವರ್ಷವೂ ಬೈಕ್, ಚಿನ್ನದ ನಾಣ್ಯ ಸಹಿತ ಅನೇಕ ಬಹುಮಾನ ಲಬಿಸಿದೆ. ಈ ಭಾರಿಯೂ ಸಿರಿ ಉತ್ಪನ್ನಗಳು ಖರೀದಿಸಿ ಅದ್ರುಷ್ಡ ಬಹುಮಾನ ಗೆಲ್ಲಿರಿ ಎಂದರು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ 50 ವರ್ಷಾಚನೆಯ ಪ್ರಯುತ್ಕ ಸೇವಾರತ್ನ ಗೌರವ ಪಡೆದ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ರವರನ್ನು ಸಿರಿ ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು. ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕ ಪತ್ರ ವಿಭಾಗದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಪ್ರಸನ್ನ ಸ್ವಾಗತಿಸಿ ಮಾರುಕಟ್ಟೆ ವಿಭಾಗದ ಡಿ.ಜೆ.ಎಂ. ವಿನ್ಸೆಂಟ್ ಲೋಬೋ ವಂ ದಿಸಿದರು.ಗೋದಾಮು ವಿಭಾಗದ ಜಿ.ಎಂ ಜೀವನ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮದ್ ವಾಲ್ಮೀಕಿ ರಾಮಾಯಣ ಶ್ರವಣಸಪ್ತಾಹ ಉದ್ಘಾಟನಾ ಕಾರ್ಯಕ್ರಮ

Article Image

ಶ್ರೀಮದ್ ವಾಲ್ಮೀಕಿ ರಾಮಾಯಣ ಶ್ರವಣಸಪ್ತಾಹ ಉದ್ಘಾಟನಾ ಕಾರ್ಯಕ್ರಮ

ವಿದ್ಯಾಗಿರಿ: ಎಲ್ಲಾದರೂ ಇರಿ, ಹೇಗಾದರೂ ಇರಿ. ಭಾರತೀಯತೀಯತೆ ಎತ್ತಿ ಹಿಡಿಯಿರಿ. ಉತ್ತಮ ಜೀವನ ರೂಪಿಸಿಕೊಳ್ಳಲು ಭಾರತವೇ ಶ್ರೇಷ್ಠ ಎಂದು ಶ್ರೀ ಕ್ಷೇತ್ರ ಕಟೀಲಿನ ವಿದ್ವಾನ್ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ)ಸಂಸ್ಕೃತ ವಿಭಾಗ ಮತ್ತು ಪ್ರಜ್ಞಾ -ಜಿಜ್ಞಾಸಾವೇದಿ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡ 7 ದಿನಗಳ "ಶ್ರೀಮದ್ ವಾಲ್ಮೀಕಿರಾಮಾಯಣ-ಶ್ರವಣಸಪ್ತಾಹ" ಉದ್ಘಾಟಿಸಿ ಅವರು ಮಾತನಾಡಿದರು . ರಾಮಾಯಣ ಎನ್ನುವುದು ರಾಮ, ರಾಮಸ್ಯ, ಅಯಣಂ. ಅಂದರೆ ರಾಮ ನಡೆದ ದಾರಿಯಲ್ಲಿ ಸಾಗುವುದು ಎಂದರ್ಥ. ರಾಮಾಯಣ ಎಂಬ ಪೂಜ್ಯನೀಯ ಕಾವ್ಯವನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಶ್ರೀ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ರಾಮನ ಕಾಲದಲ್ಲಿ ಪ್ರಜಾಪ್ರಭುತ್ವ ಇಲ್ಲದ್ದಿದರೂ ಪ್ರಜೆಗಳು ರಾಮನ ಆದರ್ಶಗಳನ್ನು ಪರಿಪಾಲನೆ ಮಾಡುತ್ತಿದ್ದರು. ಕೇವಲ ರಾಮನ ಹೆಸರನ್ನು ಪೂಜಿಸುವುದಲ್ಲದೆ ರಾಮನ ನಿಜಗುಣ, ಆದರ್ಶಗಳ ಪರಿಪಾಲನೆ ಮಾಡುತ್ತಾ ಜೀವನವನ್ನು ನಡೆಸುವುದು ಅತ್ಯುತ್ತಮ. ಉತ್ತಮವಾದ ಧ್ಯೇಯ ಒಳಗೊಂಡ ರಾಮಾಯಣ ಮಹಾಕಾವ್ಯದ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು. ರಾಮಾಯಣವು ದೀಕ್ಷಾಬದ್ಧತೆಯ ಜೀವನವನ್ನು ಸಾರುವುದರಿಂದ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ರಾಮನು ಏಕಪತ್ನಿ ವೃತಸ್ಥ. ಆ ಮೂಲಕ ದೀಕ್ಷಾಬದ್ಧತೆಯ ಮಾರ್ಗವನ್ನು ನಿದರ್ಶನವಾಗಿ ಜಗತ್ತಿಗೆ ತೋರಿದ್ದು ಸ್ಮರಣೀಯ. ಬದುಕಿನಲ್ಲಿ ದಾನಶೀಲ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ರಾಮ ತಾನು ಉದ್ದಾರವಾಗುವುದರೊಂದಿಗೆ, ವನರಣರನ್ನು ವಾನರರನ್ನಾಗಿಸಿ ಉದ್ಧರಿಸಿದ ಧೀಮಂತ. ಒಂದಲ್ಲ ಒಂದು ರೀತಿಯಲ್ಲಿ ಮಾನವರು ವನರಣರೇ ಆಗಿರುತ್ತಾರೆ. ನಾಗರಿಕ ಜೀವನಕ್ಕೆ ಅರಣ್ಯವೇ ಪ್ರಾಶಸ್ತ್ಯ. ಬದುಕಿನ ಸಂದೇಶವನ್ನು ಸಾರಿ ಹೇಳುವುದೇ ರಾಮಾಯಣ ಎಂದು ತಿಳಿಸಿದರು. ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯು ಇಂಡಸ್ಟ್ರಿಯ ಮಾಲಕ ಕೆ. ಶ್ರೀಪತಿ ಭಟ್ ಮಾತನಾಡಿ, ಭಾರತೀಯ ಪರಂಪರೆ ಒಂದು ಶ್ರೇಷ್ಠ ಪರಂಪರೆ. ರಾಮಾಯಣ, ಮಹಾಭಾರತ ಮತ್ತು ವೇದ, ಪುರಾಣಗಳ ಸಂದೇಶವನ್ನು ಬದುಕಿನಲ್ಲಿ ಪರಿಪಾಲಿಸುವುದು ಆದ್ಯ ಕರ್ತವ್ಯವಾಗಬೇಕು. ಆಳ್ವಾಸ್ ಸಂಸ್ಥೆ ರಾಮಾಯಣದಂತಹ ಕಾವ್ಯವನ್ನು ಶ್ರವಣ ಸಪ್ತಾಹದ ಮೂಲಕ ತಿಳಿಹೇಳುವ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಪ್ರತಿಯೊಬ್ಬ ಪ್ರಜೆಯು ಪ್ರಚಲಿತ ವಿದ್ಯಮಾನ ಅರಿತುಕೊಳ್ಳಬೇಕು. ಮೌಲ್ಯಯುತವಾದ ಜೀವನವನ್ನು ನಡೆಸಲು ಕಲಿಸುವುದೇ ರಾಮಾಯಣದ ತಿರುಳು. ಮುಂದಿನ ದಿನಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸಪ್ತಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದು ಆಶಿಸಿದರು. ಬಳಿಕ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಭಟ್ಟ ಹೇರೂರು ಆದಿಕವಿ ವಾಲ್ಮೀಕಿ ವಿಷಯದ ಕುರಿತು ಉಪನ್ಯಾಸ ನೀಡಿ ,ಕವಿ ಮಾಡಿದ್ದು ಕಾವ್ಯವಾಗುತ್ತದೆ. ಆದರೆ, ಕವಿಯಿಂದ ಹೊರಹೊಮ್ಮಿದೆಲ್ಲವೂ ಕಾವ್ಯವಾಗಲು ಸಾಧ್ಯವಿಲ್ಲ. ರಾಮಾಯಣವು ಶ್ರೀ ವಾಲ್ಮೀಕಿ ಬರೆದಿರುವ ಅದ್ಬುತ ಮಹಾಕಾವ್ಯ. ಇದರಲ್ಲಿನ ತತ್ವಗಳು, ಸತ್ವಗಳನ್ನು ಬದುಕಿನಲ್ಲಿ ಮೈಗೂಡಿಸಬೇಕು ಎಂದರು. ಎಲ್ಲರೂ ವಾಲ್ಮೀಕಿ ಬಗೆಗಿನ ಇತಿಹಾಸದ ಪುಟ ತಿರುವಿ ನೋಡುವುದು ಬಹಳ ಅವಶ್ಯ. ವಾಲ್ಮೀಕಿ ಕುರಿತ ಅನೇಕ ಪುರಾಣಗಳಲ್ಲಿ ದಂತಕಥೆಯಿರುವುದು ಆಶ್ಚರ್ಯ ಸಂಗತಿ. ಅದರ ಕುರಿತು ಆಳವಾಗಿ ತಿಳಿದುಕೊಳ್ಳುವುದು ಹೆಚ್ಚು ಉತ್ತಮ ಎಂದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ‍್ಯಕ್ರಮದ ಉದ್ದೇಶವನ್ನು ವಿವರಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಫಾರ್ಮಸಿಯ ಮುಖ್ಯ ನಿರ್ವಾಹಕಿ ಡಾ ಗ್ರೀಷ್ಮಾ ವಿವೇಕ್ ಆಳ್ವ, ಮೂಡುಬಿದಿರೆ ಎಂಸಿಎಎಸ್ ಬ್ಯಾಂಕ್ ಸಿಇಒ ಚಂದ್ರಶೇಖರ ಎಮ್., ಕಟೀಲಿನ ಸದಾನಂದ ಅಸ್ರಣ್ಣ, ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಯುಎಇ ಮೂಲದ ಉದ್ಯಮಿ ಕೀರ್ತಿ, ಆಳ್ವಾಸ್ ಪದವಿ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಪ್ತಾಹ ವಿದ್ಯಾರ್ಥಿ ಸಂಯೋಜಕ ವೈಶಾಖ್ ರಾಜ್ ಜೈನ್ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರಾವ್ಯ ನಡೆಸಿಕೊಟ್ಟರು.

ಆಳ್ವಾಸ್ ಆಂಗ್ಲ ವಿಭಾಗದ ಗ್ಲಿಸ್ಟನ್ ವೇದಿಕೆ ಉದ್ಘಾಟನೆ ಮತ್ತು ಆಳ್ವಾಸ್ ಇಂಗ್-ಗೈಡ್' ಯೂಟ್ಯೂಬ್ ಚಾನೆಲ್‌ಗೆ ಚಾಲನೆ

Article Image

ಆಳ್ವಾಸ್ ಆಂಗ್ಲ ವಿಭಾಗದ ಗ್ಲಿಸ್ಟನ್ ವೇದಿಕೆ ಉದ್ಘಾಟನೆ ಮತ್ತು ಆಳ್ವಾಸ್ ಇಂಗ್-ಗೈಡ್' ಯೂಟ್ಯೂಬ್ ಚಾನೆಲ್‌ಗೆ ಚಾಲನೆ

ವಿದ್ಯಾಗಿರಿ: ನಾವೀನ್ಯತೆಯು ಜಗತ್ತಿಗೆ ಹೊಸ ವಿಷಯಗಳನ್ನು ಪರಿಚಯಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ವಿಷಯಗಳಲ್ಲಿ ಮಾತ್ರ ನೈಪುಣ್ಯರಾಗದೆ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ‘ಗ್ಲಿಸ್ಟನ್ ಸಾಹಿತ್ಯ ವೇದಿಕೆ' ಮತ್ತು ‘ಇಂಗ್ಲಿಷ್ ಪ್ರಾಕ್ಟಿಸ್ ಸರ್ಟಿಫಿಕೇಟ್ ಕೋರ್ಸ್’ ಹಾಗೂ 'ಆಳ್ವಾಸ್ ಇಂಗ್-ಗೈಡ್' ಯೂಟ್ಯೂಬ್ ಚಾನೆಲ್ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಯನ್ನು ಸುಲಭಗೊಳಿಸಲು ಈ ಚಾನೆಲ್ ಸಹಾಯಕವಾಗಲಿದೆ ಎಂದರು. ನಮ್ಮನ್ನು ನಾವೇ ಸರ್ವ ರೀತಿಯಲ್ಲಿ ಧೃಡಗೊಳಿಸಲು ಸಂವಹನ ಸಹಕಾರಿಯಾಗಿದೆ. ಪರಿಣಾಮಕಾರಿ ಸಂವಹನವು ಭಾಷಾ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಕರ್ಜೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ರಾಜೇಶ್ ಆನಂದ್ ಮಾತನಾಡಿ, ಸಾಹಿತ್ಯ ಮತ್ತು ಭಾಷೆ ಎರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಸಾಹಿತ್ಯವು ಭಾಷಾ ಪರಿಪೂರ್ಣತೆಯನ್ನು ಹೆಚ್ಚಿಸುತ್ತದೆ. ಭಾಷೆಯಿಂದ ಆಲಿಸುವ ಮತ್ತು ಮಾತನಾಡುವ ಕೌಶಲ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ 'ಆಳ್ವಾಸ್ ಇಂಗ್- ಗೈಡ್' ಯೂಟ್ಯೂಬ್ ಚಾನೆಲ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಈ ಭಾಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಸಹಾಯಕಾವಾಗಲಿದೆ ಎಂದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ರಿಜಿಸ್ಟಾçರ್ (ಅಕಾಡೆಮಿಕ್ಸ್) ಡಾ ಟಿ. ಕೆ. ರವೀಂದ್ರನ್, ಪದವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ ಬಿ. ಇದ್ದರು. ವಿದ್ಯಾರ್ಥಿ ವೈಭವ್ ಕಾರ್ಯಕ್ರಮ ನಿರೂಪಿಸಿದರು. ಶಿಶಿರ್ ಶೆಟ್ಟಿ ವಂದಿಸಿದರು.

ಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

Article Image

ಸುವರ್ಣಮಹೋತ್ಸವ ಸಂಭ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ: ಧರ್ಮಸ್ಥಳದಲ್ಲಿ ಸುವರ್ಣ ಪರ್ವ ಉದ್ಘಾಟನೆ

ಉಜಿರೆ: ಸಾಲಿಗ್ರಾಮ ಮಕ್ಕಳ ಮೇಳದ ಬಾಲಕಲಾವಿದರ ಪ್ರತಿಭೆ, ವಾಕ್‌ಚಾತುರ್ಯ, ಪ್ರೌಢ ಅಭಿನಯ, ನಿರರ್ಗಳ ಮಾತುಕತೆ, ಹೃದಯಸ್ಪರ್ಶಿ ಹಾವಭಾವವನ್ನು ಶ್ಲಾಘಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಎಳೆಯ ಕಲಾವಿದರೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಮರ್ಥರು ಹಾಗೂ ಪ್ರಬುದ್ಧರು ಎಂದು ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಪ್ರವಚನಮಂಟಪದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ಕಲಾವಿದರ ಕೊರತೆ ಕಾಡುತ್ತಿರುವಾಗ ಎಳೆಯ ಮಕ್ಕಳೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಲು ಸಾಧ್ಯ. ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನ ಆಯೋಜಿಸಿ ಬಾಲಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. 1975ರ ಅ. 10 ರಂದು ಸಾಲಿಗ್ರಾಮದಲ್ಲಿ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರಹಂದೆ ಅವರ ನೇತೃತ್ವದಲ್ಲಿ ಪ್ರಾರಂಭಿಸಿದ ಮಕ್ಕಳಮೇಳ ಸುವರ್ಣಮಹೋತ್ಸವ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಹಲವು ಬಾರಿ ಎಳೆಯ ಕಲಾವಿದರನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿ ಯಕ್ಷಗಾನ ವೀಕ್ಷಿಸಿ ತಾನು ಹಾಗೂ ಕುಟುಂಬದವರು ಸಂತೋಷ ಪಟ್ಟಿದ್ದೇವೆ ಎಂದು ಹೆಗ್ಗಡೆಯವರು ತಿಳಿಸಿದರು. ಆಶಯಭಾಷಣ ಮಾಡಿದ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ಯಕ್ಷಗಾನ ಎಂಬ ಆರಾಧನಾ ಜಾನಪದ ಕಲೆಗೆ ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ. ಪರಿವರ್ತನೆ ಜಗತ್ತಿನ ನಿಯಮ. ಆದರೆ ಪರಿವರ್ತನೆಯ ಹೆಸರಿನಲ್ಲಿ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದು. ಯಕ್ಷಗಾನದ ಮೂಲಸ್ವರೂಪ, ವೇಷಭೂಷಣ, ಸಂಪ್ರದಾಯ, ಪೌರಾಣಿಕ ಪ್ರಸಂಗಗಳ ಪ್ರದರ್ಶನ ಮೊದಲಾದ ಕ್ರಮಗಳಿಂದ ಧರ್ಮಸ್ಥಳ ಮೇಳವು ಇತರ ಎಲ್ಲಾ ಮೇಳಗಳಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು. ಜನಾರ್ದನಹಂದೆ, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಳೆಯ ಕಲಾವಿದರಿಂದ ಹೂವಿನ ಕೋಲು ಪ್ರದರ್ಶನ ನಡೆಯಿತು. ಇನ್ನು ಒಂದು ವರ್ಷ ಅಂದರೆ, 2025ರ ಅ.10 ರ ವರೆಗೆ ರಾಜ್ಯದೆಲ್ಲೆಡೆ ಯಕ್ಷಗಾನ ಪ್ರದರ್ಶನ, ವಿಚಾರ ಸಂಕಿರಣ, ಕಮ್ಮಟ, ತಾಳಮದ್ದಳೆ, ಶಾಲಾ-ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಪ್ರಕಟಿಸಿದರು. ರಾಘವೇಂದ್ರ ನಾಯರ್ ಸ್ವಾಗತಿಸಿದರು. ಮಕ್ಕಳಮೇಳ ಟ್ರಸ್ಟ್ನ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ ಧನ್ಯವಾದವಿತ್ತರು. ಮಕ್ಕಳಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು.

First Previous

Showing 3 of 6 pages

Next Last