Tue, Apr 29, 2025
ರೋಟರಿ ಕ್ಲಬ್ : ಶಿಕ್ಷಕರ ದಿನಾಚರಣೆ
ಬೆಳ್ತಂಗಡಿ: ಸಮಾಜದ ಪ್ರತಿಯೊಬ್ಬ ಸಾಧಕನ ಹಿಂದೆ ಗುರುವೆಂಬ ಶಕ್ತಿಯ ಆದರ್ಶ, ಮಾರ್ಗದರ್ಶನ, ಮತ್ತು ಪ್ರೀತಿಯ ಹಾರೈಕೆ ಇದೆ. ಈ ದೇಶದಲ್ಲಿ ಬೆಳೆದು ಬಂದಂತಹ ಗುರು ಶಿಷ್ಯರ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿ ಬೆಟ್ಟು, ರೊ.ಕೆ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಸಂಭ್ರಮಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಒಬ್ಬ ಗುರು ಸ್ವ ಪ್ರಯತ್ನ ಮತ್ತು ಪ್ರತಿಭೆಯಿಂದ ದೇಶದ ಯಾವುದೇ ಹುದ್ದೆಗೆ ಹೋಗಲು ಸಾಧ್ಯ ಎಂಬುದಕ್ಕೆ ರಾಧಾಕೃಷ್ಣರೇ ನಿದರ್ಶನ. ಆದರೆ ಒಬ್ಬ ಗುರು ತನ್ನ ಶಿಷ್ಯ ಬಳಗ ಉನ್ನತ ಸ್ಥಾನಕ್ಕೆರಿದಾಗ ಮಾತ್ರ ನಿಜವಾದ ಸಂತಸ ಮತ್ತು ಸಂತೃಪ್ತನಾಗುತ್ತಾನೆ. ಕೃಷ್ಣ - ಅರ್ಜುನ, ದ್ರೋಣ - ಏಕಲವ್ಯ ಹಾಗೂ ಪರಮಹಂಸ- ವಿವೇಕಾನಂದರಂತಹ ಗುರುಶಿಷ್ಯರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ, ಭಾರತೀಯ ಗುರು ಪರಂಪರೆಯ ದೃಷ್ಟಿಕೋನ ಮತ್ತು ಪಾಶ್ಚಾತ್ಯ ಗುರು ಸಾಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ರಾಧಾಕೃಷ್ಣರನ್ನು ಶಿಕ್ಷಕರ ಹೆಸರಿನಲ್ಲಿ ಸ್ಮರಿಸುತ್ತಿರುವುದು ದೇಶದ ಶಿಕ್ಷಕ ವರ್ಗಕ್ಕೆ ಸಂದಿರುವ ಗೌರವ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ರೊ. ಪ್ರಕಾಶ್ ಪ್ರಭು, ರೊ. ರಾಘವೇಂದ್ರ ಪಿದಮಲೆ, ಆಶಾ ಪಿದಮಲೆ, ರೊ. ಆದರ್ಶ ಕಾರಂತ್ , ಅಕ್ಷತಾ ಸಿ. ಎಚ್., ಉಮಾ ರಂಜನ್ ರಾವ್ ರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ. ವಿನಯ ಕಿಶೋರ್ ಉಪಸ್ಥಿತರಿದ್ದರು. ರೋಟರಿ ಕ್ಲಬ್ ನಿಕಟ ಪೂರ್ವ ಕಾರ್ಯದರ್ಶಿ ವಿದ್ಯಾ ಕುಮಾರ್, ಶ್ರೀಧರ್ ಕೆ ವಿ, ರೊ. ನಿವೃತ್ತ ಮೆ.ಜ.ಎಮ್ ವೆಂಕಟೇಶ್ವರ ಭಟ್ ಹಾಗೂ ಇತರೆ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಸ್ತುತ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸತೀಶ್ಚಂದ್ರ ಎಸ್. ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ, ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್ , ಕಾರ್ಯದರ್ಶಿ ಡಾ. ವಿನಯ ಕಿಶೋರ್, ರೊ. ನಿವೃತ್ತ ಮೆ.ಜ.ಎಮ್ ವೆಂಕಟೇಶ್ವರ ಭಟ್ ಇದ್ದರು.