ವಿಜೃಂಭಣೆಯಿಂದ ನೆರವೇರಿದ ಗೌರಿ ಮಾರುಕಟ್ಟೆ ಉತ್ಸವ
Published Date: 20-Nov-2025 Link-Copied
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಐದನೇ ದಿನ ಗೌರಿ ಮಾರುಕಟ್ಟೆ ಉತ್ಸವವು ಲಕ್ಷಾಂತರ ಭಕ್ತ ಸಮ್ಮುಖದಲ್ಲಿ ವಿಜೃಂಭಜಣೆಯಿಂದ ಜರುಗಿತು. ಲಕ್ಷದೀಪೋತ್ಸವದ ಕೊನೇಯ ದಿನ ಗೌರಿ ಮಾರುಕಟ್ಟೆ ಉತ್ಸವವು ನಡೆದಿದ್ದು, ದೇವಸ್ಥಾನದಲ್ಲಿ ಶ್ರೀ ಮಂಜುನಾಥ ದೇವರಿಗೆ ಪೂಜೆಯನ್ನು ಸಲ್ಲಿಸುವುದರೊಂದಿಗೆ ಉತ್ಸವ ಆರಂಭಗೊಂಡಿತು. 16 ಸುತ್ತು ದೇವಳದ ಒಳಾಂಗಣದಲ್ಲಿ ಪ್ರದಕ್ಷಿಣೆಯ ನಂತರ ಹೊರಾಂಗಣಕ್ಕೆ ಉತ್ಸವಮೂರ್ತಿಯನ್ನು ಕರೆತರಲಾಯಿತು. ತದನಂತರ ಉತ್ಸವ ಮೂರ್ತಿಯನ್ನು ಸರ್ವಾಲಂಕೃತವಾದ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು. ಓಲಗ, ಚೆಂಡೆ, ಗೊಂಬೆಗಳ ಕುಣಿತ, ಜಗ್ಗಲಿಗೆ, ಬ್ಯಾಂಡ್ ಸೆಟ್ ,ವೀರಗಾಸೆ, ಡೊಳ್ಳು ಕುಣಿತ ತಮತೆ, ವಾದ್ಯಗಳ ಸೇವೆ ಸಲ್ಲಿಸಲಾಯಿತು. ವಿವಿಧ ವರ್ಣದ ಛತ್ರಿ ಛಾಮರ ದ್ವಜಗಳೊಂದಿಗೆ ರಥಬೀದಿಯಲ್ಲಿ ಸಾವಿರಾರು ಭಕ್ತರ ಉದ್ಘೋಷದೊಂದಿಗೆ ಗೌರಿಮಾರು ಕಟ್ಟೆಗೆ ರಥವನ್ನು ಎಳೆಯಲಾಯಿತು.ಮೂರ್ತಿಯನ್ನು ಗೌರಿಮಾರುಕಟ್ಟೆಯ ಕಟ್ಟೇಯ ಮೇಲೆ ಕುಳ್ಳಿರಿಸಿ ಚತುರ್ವೇದ, ಸಂಗೀತ, ಮೌರ್ಯವಾದ್ಯ, ಸರ್ವವಾದ್ಯಗಳಿಂದ ಸ್ವಾಮಿಗೆ ಅಷ್ಟವಿಧಾನ ಸೇವೆಯನ್ನು ನೆರವೇರಿಸಲಾಯಿತು. ಗೌರಿ ಮಾರುಕಟ್ಟೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ರಥ ಬೀದಿಯ ಮಾರ್ಗವಾಗಿ ದೇವರನ್ನು ದೇವಸ್ಥಾನದ ಬಳಿ ತರಲಾಯಿತು. ದೇವಸಾನ್ದ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವರ ಮೂರ್ತಿಯನ್ನು ದೇವಳದ ಒಳಗೆ ಕರೆದೊಯ್ಯುವುದರೊಂದಿಗೆ ಗೌರಿ ಮಾರುಕಟ್ಟೆ ಉತ್ಸವವು ಸಂಪನ್ನಗೊಂಡಿತ್ತು.