ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ
Published Date: 07-Aug-2025 Link-Copied
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ 46 ವರ್ಷ ಪ್ರಾಯದ ರೋಗಿಯೊಬ್ಬರಿಗೆ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್ ಕೆ., ಮೂಳೆ ಶಸ್ತ್ರಚಿಕಿತ್ಸಾ ವೈದ್ಯರಾದ ಡಾ| ಶತಾನಂದ ಪ್ರಸಾದ್ ರಾವ್ ಮತ್ತು ಅರೆವಳಿಕೆ ತಜ್ಞರಾದ ಡಾ| ಚೈತ್ರಾ ಆರ್. ಇವರ ತಂಡ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸರ್ಜರಿ ಬಳಿಕ ರೋಗಿಯಲ್ಲಿ ಕುತ್ತಿಗೆ ನೋವು ನಿವಾರಣೆಯಾಗಿದೆ ಮತ್ತು ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಸರ್ಜರಿ ನಡೆಸಿದ ಮೂಳೆ ಶಸ್ತ್ರಚಿಕಿತ್ಸಾ ಡಾ| ಶತಾನಂದ ಪ್ರಸಾದ್ ರಾವ್ ತಿಳಿಸಿದ್ದಾರೆ. ಏನಿದು ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ? ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನಲ್ ಸರ್ಜರಿ ಎನ್ನುವುದು ಕುತ್ತಿಗೆಯ ಮೇಲೆ ಪರಿಣಾಮ ಬೀರುವ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಅತೀ ಸಣ್ಣ ಛೇದನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದರಿಂದ ಅತೀ ಕಡಿಮೆ ಅಂಗಾಂಶಗಳ ಹಾನಿ, ಶೀಘ್ರ ಚೇತರಿಕೆ, ಕಡಿಮೆ ನೋವು, ಅತೀ ಕಡಿಮೆ ರಕ್ತದ ನಷ್ಟ ಮತ್ತು ಸೋಂಕಿನ ಅಪಾಯವೂ ಕೂಡ ಕಡಿಮೆಯಾಗಿರುತ್ತದೆ. ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುವುದರೊಂದಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.